21.2 C
Karnataka
Sunday, September 22, 2024

    ಅತಂತ್ರ ಸ್ಥಿತಿಯಲ್ಲಿ ನಿಸ್ಸಹಾಯಕ ಅನುದಾನರಹಿತ ಶಾಲಾ ಶಿಕ್ಷಕರು

    Must read

    ಕೊವಿಡ್ ಅಟ್ಟಹಾಸದಲ್ಲಿ ಶಾಲಾ – ಕಾಲೇಜುಗಳಿಗೆ ಅನಿಯಮಿತ ರಜೆ ಘೋಷಣೆಯಿಂದ ರಾಜ್ಯಾದ್ಯಂತ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆಡಳಿತ ಮಂಡಳಿಗಳು ಸಂಬಳ ನೀಡದ ಪರಿಣಾಮ ಜೀವನ ನಿರ್ವಹಣೆಗಾಗಿ ಮುಂದೇನು..? ಎಂಬ ಗೊಂದಲದಲ್ಲಿದ್ದಾರೆ.

    ರಾಜ್ಯದಲ್ಲಿ ಶಿಕ್ಷಕ ತರಬೇತಿ ಕೇಂದ್ರಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಪ್ರತಿ ವರ್ಷ ಸಾವಿರಾರು ತರಬೇತಿ ಶಿಕ್ಷಕರು ಪದವಿಯೊಂದಿಗೆ ಉದ್ಯೋಗ ನಿರೀಕ್ಷೆಯಲ್ಲಿ ಹೊರಬರುತ್ತಾರೆ. ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಭರ್ತಿ ಮಾಡುವ ಪ್ರಕ್ರಿಯ ಅನಿಶ್ವಿತ. ಕೆಲವರಿಗೆ ಮಾತ್ರ ಮೆರಿಟ್ ಮೂಲಕ ಉದ್ಯೋಗ ಸಿಗವುದು. ಉಳಿದವರಿಗೆ ಅನುದಾನ ರಹಿತ ಶಾಲೆಗಳೇ ಗತಿ. ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೈ ತುಂಬಾ ಸಂಬಳ ನೀಡುವರು. ಸರ್ಕಾರಿ ಶಿಕ್ಷಕರ ಸಂಬಂಳಕ್ಕೆ ಹೋಲಿಸಿದರೆ ಅರ್ಧದಷ್ಟು ಸಂಬಳ ಬಹುತೇಕ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸಿಗುವುದಿಲ್ಲ.

    ರಾಜ್ಯದಲ್ಲಿ ಸುಮಾರು 23 ಸಾವಿರ ಅನುದಾನ ರಹಿತ ಶಾಲೆಗಳು

    ರಾಜ್ಯದಲ್ಲಿ ಸುಮಾರು 23 ಸಾವಿರ ಅನುದಾನ ರಹಿತ ಶಾಲೆಗಳಿವೆ. ಹಾಗೆಯೇ 4.5 ಲಕ್ಷ ಶಿಕ್ಷಕರು ಉದ್ಯೋಗ ಭರವಸೆ ಇಲ್ಲದೆ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮ. ಪ್ರಶ್ನಿಸುವಂತಿಲ್ಲ. ಬದುಕಿಗೆ ಅನ್ಯ ಮಾರ್ಗವಿಲ್ಲದೇ ದುಡಿಯುವವರೇ. ಹೆಚ್ಚು. ಬಹುಪಾಲು ಶಿಕ್ಷಕರಿಗೆ ಈ ಸಂಬಳವೇ ಜೀವನಾಧಾರ.

    ಅನುದಾನ ರಹಿತ ಬಹುಪಾಲು ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿ ಸಂಬಳ ಕೊಡುವುದಿಲ್ಲ. ಜೂನ್ ತಿಂಗಳಿನಲ್ಲಿ ಶಾಲೆ ಆರಂಭವಾದ ನಂತರ ಸಂಬಳ ನೀಡುವುದು ಪರಿಪಾಠ. ಖಾಸಗಿ ಆಡಳಿತ ಮಂಡಳಿಗಳು ಕೊಟ್ಟಷ್ಟೆ ಸಂಬಳ, ಕೊಡದಿದ್ದರೆ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡಿದರೆ ಕೆಲಸ ಇಲ್ಲ. ಸಾಕಷ್ಟು ನಿರುದ್ಯೋಗಿ ತರಬೇತಿ ಪಡೆದ ಶಿಕ್ಷಕರ ಲಭ್ಯತೆಯ ಸದರವೇ ಖಾಸಗಿ ಆಡಳಿತ ಮಂಡಳಿಗಿರುವ ಅಸ್ತ್ರ.

    ಕೊರೊನಾದ ಭೀತಿಯಲ್ಲಿ ಶಾಲೆಗಳು ಆರಂಭವಾಗುವ ನಿರ್ದಿಷ್ಟ ದಿನ ಯಾರಿಗೂ ಹೇಳಲಾಗುತ್ತಿಲ್ಲ. ಅಲ್ಲಿವರೆಗೂ ಸಂಬಳ ಇಲ್ಲ. ಇತರ ಉಪ ಕಸುಬುಗಳ ಕೌಶಲ್ಯ ತಿಳಿಯದ ಬಹುಪಾಲು ಶಿಕ್ಷಕರಿಗೆ ಮುಂದೇನು ಎಂಬುವ ಯಕ್ಷ ಪ್ರಶ್ನೆ ಕಾಡುತ್ತಿದೆ. ಸಾಕಷ್ಟು ವಂತಿಗೆ ಸ್ವೀಕರಿಸುವ ಖಾಸಗಿ ಶಾಲೆಗಳು ಸಂಬಳ ನೀಡಲು ನಿರಾಕರಿಸಿವೆ. ಇದರಿಂದ ಶಾಲಾ ಆಡಳಿತ ಮಂಡಳಿ ಭೇಟಿ ಮಾಡಿದ ಶಿಕ್ಷಕರು ನಿರೀಕ್ಷಿತ ಭರವಸೆ ಸಿಗದೆ ಅಳುತ್ತಾ ಮನೆ ಸೇರಿದ್ದಾರೆ. 10 ರಿಂದ 15 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರ ಭವಿಷ್ಯವೂ ಕರಾಳವಾಗಿದೆ. ದಶಕಗಳ ಅವಿರತ ಸೇವೆಗೆ ಕನಿಷ್ಠ ಮೌಲ್ಯವೂ ಇಲ್ಲದೆ ಶೋಷಣೆಯಂತಾಗಿದೆ ಎನ್ನುತ್ತಾರೆ ಅವರು.

    ಖಾಸಗಿ ಅನುದಾನ ರಹಿತ ಶಾಲೆಯ ಶಿಕ್ಷಕಿಯೊಬ್ಬರು ಸಂಬಳದಿಂದಲೇ ತಂದೆ-ತಾಯಿ ಹಾಗೂ ಮಗಳನ್ನು ಸಾಕಾಬೇಕಾಗಿದೆ. ಬೇರೆ ಕೆಲಸ ಗೊತ್ತಿಲ್ಲದೆ ಜೀವನವೇ ಕಷ್ಟವಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ.

    ಕೆಲವು ಸಂಸ್ಥೆಗಳಲ್ಲಿ ಕೇವಲ ರೂ.5 ಸಾವಿರ ಸಂಬಳಕ್ಕೆ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಆರ್ಥಿಕ ಸಬಲವಾಗಿರುವ ಸಂಸ್ಥೆಗಳು ಹೆಚ್ಚು ಸಂಬಳ ನೀಡುತ್ತಿವೆ. ಸಾಕಷ್ಟು ವಂತಿಗೆ ಸಂಗ್ರಹಿಸುವ ಖಾಸಗಿ ಆಡಳಿತ ಮಂಡಳಿಗಳು ರಜೆಯಲ್ಲೂ ಶಿಕ್ಷಕರಿಗೆ ಸಂಬಳ ನೀಡಲು ಯೋಜನೆ ರೂಪಿಸಿಕೊಳ್ಳಬೇಕು.

    ಶಾಲಾ ನಿರ್ವಹಣೆಯೇ ಕಷ್ಟ

    ಗ್ರಾಮಾಂತರ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಆಡಳತ ಮಂಡಳಿಗೆ ಶಾಲಾ ನಿರ್ವಹಣೆಯೇ ಕಷ್ಟವಾಗಿದೆ. ಶಾಲಾ ಬಸ್, ವೇತನ, ಮೂಲ ಸೌಕರ್ಯಗಳಿಗೆ ಬಜೆಟ್ ಮಾಡುವ ಲೆಕ್ಕಚಾರದಲ್ಲಿ ಮುಳುಗಿವೆ. ಅಕಾಲಿಕ ಶಾಲಾವಧಿ ಮುಗಿದ ಕಾರಣ ಫೀಸ್ ಸಂಗ್ರಹಣೆ ಆಗದೆ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿವೆ ಎನ್ನುತ್ತಾರೆ ಖಾಸಗಿ ಶಾಲೆಯ ಮುಖ್ಯಸ್ಥ.

    ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕರ ಉದ್ಯೋಗ ಭದ್ರತೆಗೆ ಸರ್ಕಾರ ಸಕ್ರಮ ಯೋಜನೆ ರೂಪಿಸಬೇಕು ಎನ್ನುತ್ತಾರೆ ಶಿಕ್ಷಕ ವೃಂದ.

    ಅನುದಾನ ರಹಿತ ಶಾಲಾ ಶಿಕ್ಷಕರ ಭದ್ರೆತೆಗೆ ಈಚೆಗೆ ನಡೆದ ಖಾಸಗಿ ಸಂಸ್ಥೆಗಳ ಸಭೆಯಲ್ಲಿ ಚಿಂತನೆ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಂತಿಗೆ ಪಡೆಯಲು ಆಗುತ್ತಿಲ್ಲ. ಇದರಿಂದ ನಗರದ ಸೌಲಭ್ಯ ನೀಡಲು ಹೆಣಗಾಡುತ್ತಿವೆ. ಸರ್ಕಾರವೂ ಕೈ ಜೋಡಿಸಿದಲ್ಲಿ ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಲು ಸಿದ್ಧ ಎನ್ನುತ್ತಾರೆ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ.

    ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಂತಿಗೆ ಪಡೆಯಲು ಆಗುತ್ತಿಲ್ಲ. ಇದರಿಂದ ನಗರದ ಸೌಲಭ್ಯ ನೀಡಲು ಹೆಣಗಾಡುತ್ತಿವೆ. ಸರ್ಕಾರವೂ ಕೈ ಜೋಡಿಸಿದಲ್ಲಿ ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಲು ಸಿದ್ಧ –ಶ್ರೀಗುರುಬಸವ ಸ್ವಾಮೀಜಿ. ವಿರಕ್ತಮಠ. ಪಾಂಡೋಮಟ್ಟಿ.

    ಈಚೆಗೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸೂಕ್ತ ಉದ್ಯೋಗ ಭದ್ರತೆ ವಹಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

    ಅತಂತ್ರ ಸ್ಥಿತಿ

    ಎಲ್ಲಾ ಬೆಳವಣಿಗೆ ಗಮನಿಸಿದರೆ ಒಂದೆಡೆ ಆಡಳಿತ ಮಂಡಳಿ ಇನ್ನೊಂದೆಡೆ ಸರ್ಕಾರ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಅತಂತ್ರ ಸ್ಥಿತಿಯಲ್ಲಿಟ್ಟಿರುವುದು ಗೊತ್ತಾಗುತ್ತದೆ.

    ಮನಬಂದಂತೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಾಗ ಶಿಕ್ಷಕರ ವೇತನ ಹಾಗೂ ಭದ್ರತೆ ಬಗ್ಗೆ ನಿಯಮ ರೂಪಿಸಬೇಕು. ಕನಿಷ್ಠ ಜೀವನ ನಿರ್ವಹಣೆ, ಕಾಲಕಾಲಕ್ಕೆ ಭತ್ಯೆಗಳನ್ನು ಹೆಚ್ಚಿಸುವ ವೇತನ ನೀಡಲಾಗುತ್ತಿದೆಯೇ ಪರಿಶೀಲಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳನ್ನೆ ಹೆಚ್ಚು ಆರಂಭಿಸುವ ಮೂಲಕ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕು. ಪಟ್ಟಭದ್ರರ ಓಲೈಕೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವೇ ಬೆಂಬಲ ನೀಡಿದರೆ ಶಿಕ್ಷಕರ ಪಾಡೇನು…?

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    10 COMMENTS

    1. ಸಾವಿರಾರು ಶಿಕ್ಷಕರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ವೀರೇಶ ಪ್ರಸಾದ್ ಅವರ ವರದಿ ಆಳುವವರ ಕಣ್ತೆರುಸುವಂತಿದೆ.

    2. ನಿಜ ವೀರೇಶ್. ಈ ಕರೋನ ಎಲ್ಲರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಅದರಲ್ಲೂ ಅನುದಾನ ರಹಿತ ಶಾಲೆ ಯ ಶಿಕ್ಷಕರ ಪರಿಸ್ಥಿತಿ ತುಂಬಾ ದಯನೀಯ ವಾಗಿದೆ. ಹೀಗೆ ಇದು ಮುಂದುವರೆದರೆ ಎಷ್ಟು ಜನ ಬದುಕು ಕೊನೆಕೊಳ್ಳುತೊ ಆ ದೇವರೇ ಬಲ್ಲ. ಮೊದಲೇ ಸಂಬಳ ಕೊಡಲು ನೂರಾರು ಕಾರಣಗಳನ್ನು ಹುಡುಕುತಿದ್ದ ಆಡಳಿತ ಮಂಡಳಿ ಈಗ ಕರೋನ ದ ಮೇಲೆ ಹಾಕುತ್ತಿದ್ದೆ. ನಿಮ್ಮ ಲೇಖನ ದ ಪ್ರಭಾವ ದಿಂದಲಾದರೂ ಶಿಕ್ಷಕರ ಪರಿಸ್ಥಿತಿ ಸುಧಾರಿಸಲಿ. ಎಲ್ಲ ಶಿಕ್ಷಕ ವೃಂದದ ಪರವಾಗಿ. ನಿಮಗೆ ಧನ್ಯವಾದಗಳು.

    3. ಆರೋಗ್ಯ,ಶಿಕ್ಷಣ ಮತ್ತು ರಕ್ಷಣೆ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಸಿಗಬೇಕು ಮತ್ತು ಸರ್ಕಾರದ ಒಡೆತನದಲ್ಲಿ ಈ ಸಂಸ್ಥೆಗಳು ಇರಬೇಕು. ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಆರೋಗ್ಯ,ಶಿಕ್ಷಣ ಎರಡೂ ಖಾಸಗಿ ಒಡೆತನದಲ್ಲಿರುವುದು ದೌರ್ಭಾಗ್ಯ. ಎರಡೂ ರಂಗಗಳು ವಾಣಿಜ್ಯ ರಂಗಗಳಾಗಿ ಮಾರ್ಪಟ್ಟು ತುಂಬಾ ದಿನಗಳಾದವು.
      ಕರೊನಾ ಎಲ್ಲ ವಾಣಿಜ್ಯ ಸಂಸ್ಥೆಗಳನ್ನು ಬಾಧಿಸಿರುವುದು,ಅವುಗಳ ಭಾಗಗಳಾದ ನೌಕರರ ಮೇಲೆ ಆ ಭಾದೆ ತಟ್ಟಿರುವುದು ನಿಜ. ದೊಡ್ಡ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುತ್ತಿರುವ ನನ್ನ ಡಾಕ್ಟರ್ ಸ್ನೇಹಿತನಿಗೆ(ಅವನು ನ್ಯೂರೋ ಸರ್ಜನ್ ವಿಥ್ ಸೂಪರ್ ಸ್ಪೆಷಾಲಿಟಿ,ಅವನ ಸಂಬಳ 5 ಲಕ್ಷ ತಿಂಗಳಿಗೆ) 4 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಕಾರಣ ಅವರ ವಹಿವಾಟು ಬಂದಾಗಿದೆ ಅಂತ!!

      ಮಾನವೀಯ ನೆಲೆಗಳಲ್ಲಿ ಇಂತಹ ಖಾಸಗಿ ಒಡೆತನ ಗಳು ಅವರ ನೌಕರರನ್ನು ಇಂತಹ ಸಮಯದಲ್ಲಿ ನಡೆಸಿಕೊಳ್ಳಬೇಕು. ಈಗಲೂ ಅವರು ತಮ್ಮ ಸ್ವಂತ ಲಾಭದಲ್ಲಿ ಏನನ್ನೂ ಕಳೆದುಕೊಳ್ಳದ ಹಾಗೆ ಲೆಕ್ಕ ಹಾಕಿ ನಡೆದುಕೊಳ್ಳುತ್ತಿರುವುದು ಅಮಾನವೀಯ ಮತ್ತು ದಂಡಾರ್ಹ.

      ಸರ್ಕಾರಕ್ಕೂ ತೆರಿಗೆಯಿಂದ ಬರಬೇಕಿರುವ ಹಣ ಬರುತ್ತಿಲ್ಲ ಎನ್ನುವುದನ್ನು ಸರ್ಕಾರದ ಮೊರೆ ಹೋಗುವ ಮೊದಲು ನಾವು ಗಮನಿಸಬೇಕು. ಶಿಕ್ಷಕರದ್ದು ನಿಜವಾಗಿಯೂ ಶೋಚನೀಯ ಸ್ಥಿತಿ.

      ಸರ್ಕಾರ skill development programs ಅಡಿಯಲ್ಲಿ 15 ದಿನದಿಂದ 45 ದಿನಗಳ ಕಾಲಾವಧಿಯಲ್ಲಿ ಕೊಡುವ ತರಬೇತಿ ಪಡೆದರೆ ಒಳ್ಳೆಯದು ಅಂತ ನನ್ನ ಅನಿಸಿಕೆ. ಒಂದೇ ವೃತ್ತಿಯನ್ನು 35-40 ವರ್ಷ ಕಾಲ ಮಾಡಿ,ಪಿಂಚಣಿ ತೆಗೆದುಕೊಳ್ಳುವ ಕಾಲ ಇನ್ನು ಇರಲಿಕ್ಕಿಲ್ಲ ಅಂತ ಎಲ್ಲರೂ ಅರಿಯಬೇಕು.

    4. Real story. Unaided school and college teachers are the most neglected lot. They have not been paid salaries since the March lockdown. Government which praises the services of teachers on Teachers’ Day, has to come to the rescue of these teachers .

    5. ಎಲ್ಲ ಶಾಲಾ ಶಿಕ್ಷಕರ ಮನದಾಳದ ಹೇಳಲಾಗದ ಬವಣೆಯನು ವಿ.ಪಿ ಲೇಖನದ ಮೂಲಕ ಅಧಿಕಾರಿಗಳ ಜೊತೆಗೆ ಆಡಳಿತ ನಡೆಸುವವರ ಗಮನ ಸೆಳೆವ ಉತ್ತಮ ಕೆಲಸ ಮಾಡಿರೋದು ಗಮನಾರ್ಹ. ಈಗ ಬದುಕು ನಡೆಸಲು ಸಂಬಳವೇ ಮೂಲಾಧಾರವಾದ ಹಲವಾರು ಸಂಸಾರಗಳು ದಾರಿ ಕಾಣದ ರೀತಿಯಲಿ ಇದಾರೆ. ಆಡಳಿತ ಮಂಡಳಿ ಜಾಣ ಕಿವುಡು ಆಗಿರೋದರಿಂದ ಶಿಕ್ಷಕರ ವಿನಂತಿ ಕೇಳಿಸಿಯೇ ಇಲ್ಲ. ಸರಿಯಾದ ಸಮಯದಲಿ ಸಮಾಜದ ,ಜನರ ತೊಂದರೆ ಆಡಳಿತ ಚುಕಾಣಿ ಹಿಡಿದವರ ಗಮನ ತರೋದು ಉತ್ತಮ ಪತ್ರಕರ್ತ . ಇನಾದರೂ ಇದರ ಕಡೆ ಗಮನ ಹರಿಸಲಿ

    6. ಇದು ಬಹಳ ವಿಷಾದನೀಯ ಸಂಗತಿ ಪಾಪ ಕಷ್ಟ ಪಟ್ಟು ಓದಿರುತ್ತಾರೆ. ಸರ್ಕಾರ ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುವವರಿಗೆ ಸೂಕ್ತ ಪರಿಹಾರ ಕೊಡಬೇಕು. ಪಾಪ ಸಂಸ್ಥೆಯವರು ಏನು ಮಾಡುವುದಕ್ಕೆ ಆಗೋಲ್ಲ.ಗ್ರಾಮೀಣ ಭಾಗದಲ್ಲಿ ಶೂಲ್ಕ ವಸೂಲಾತಿ ಬಹಳ ಕಷ್ಟ. ಜನರ ಜೀವನವೇ ಅಲ್ಲೋಲ ಕಲ್ಲೋಲ ವಾಗಿದೆ ದಯಾಮಾಡಿ ಸರ್ಕಾರ ಮದ್ಯಪ್ರವೇಶಿಸಿ ಸೂಕ್ತ ಪರಿಹಾರ ಕೊಡಬೇಕು .

    LEAVE A REPLY

    Please enter your comment!
    Please enter your name here

    Latest article

    error: Content is protected !!