26.8 C
Karnataka
Sunday, September 22, 2024

    ಕೆಟ್ಟ ಮುಖದ ಕಾಡುಪಾಪ, ಅಂಧವಿಶ್ವಾಸವೇ ಶಾಪ

    Must read

    ಕಾಡುಪಾಪ!

    ಪುಟ್ಟದಾದ ಜನರ ಕಣ್ಣಿಗೆ ಕಾಣದೇ ಪೊದೆಗಳಲ್ಲಿ ಅಡಗಿಕೊಂಡಿರುವ ಈ ಪುಟ್ಟ ಪ್ರಾಣಿಯು ಪ್ರಾಣಿಪ್ರಿಯರು, ಛಾಯಾಗ್ರಾಹಕರ ಬಹಳ ಕುತೂಹಲದ ಪ್ರಾಣಿ. ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಸ್ಲೆಂಡರ್ ಲೋರಿಸ್ ಎಂದು ಇಂಗ್ಲಿಷಿನಲ್ಲಿ ಕರೆಸಿಕೊಳ್ಳುವ ಈ ಪ್ರಾಣಿಗಳು ಸುಲಭಕ್ಕೆ ಮನುಷ್ಯರ ದೃಷ್ಟಿಗೆ ಬೀಳುವುದಿಲ್ಲ.

    ದಕ್ಷಿಣ ಭಾರತದಲ್ಲಿ ಈ ಅಪರೂಪದ ಪ್ರಾಣಿಗಳು ಕಾಣುವ ಕೆಲವೇ ಪ್ರದೇಶಗಳಲ್ಲಿ ತುಮಕೂರು ಬಳಿಯ ನಾಗವಲ್ಲಿ ಬಳಿಯ ಗ್ರಾಮಗಳೂ ಸೇರಿವೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಕೆಲವು ಕಡೆ ಕಾಣಸಿಗುತ್ತವೆ. ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಕಾಣುವ ಇವುಗಳು ಈಗಾಗಲೇ ಅಳಿವಿನ ಅಂಚಿನಲ್ಲಿವೆ.

    ತುಮಕೂರು ಜಿಲ್ಲೆ ವೈವಿಧ್ಯಮಯ ಸಸ್ಯಸಂಕುಲ, ಪ್ರಾಣಿಪ್ರಭೇದಕ್ಕೆ ಖ್ಯಾತಿ ಪಡೆದಿದೆ. ಎಷ್ಟೋ ವಿಜ್ಞಾನಿಗಳು, ಪರಿಸರ ಪ್ರೇಮಿಗಳೂ ಇವುಗಳನ್ನು ವೀಕ್ಷಿಸಲು, ಅಧ್ಯಯನ ನಡೆಸಲು ಸಹಜವಾಗಿಯೇ ಇಲ್ಲಿಗೆ ಬರುತ್ತಾರೆ. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಪ್ರಯಾಣಿಸಿದರೆ ದೊರೆಯುವ ನಾಗವಲ್ಲಿ ಗ್ರಾಮದಲ್ಲಿ `ಕಾಡುಪಾಪಗಳ ತಾಣ ನಾಗವಲ್ಲಿ ಗ್ರಾಮಕ್ಕೆ ಸುಸ್ವಾಗತ’ ಎಂಬ ಫಲಕ ಕಾಣುತ್ತದೆ.

    ಇದು ಈ ಪ್ರದೇಶದಲ್ಲಿನ ಈ ವಿಶಿಷ್ಟ ಪ್ರಾಣಿಗಳ ಕುರಿತು ಅರಿವನ್ನು ಮೂಡಿಸಲು ಹಾಕಿದ್ದರೂ ಪ್ರಾರಂಭದಲ್ಲಿ ನಾಗವಲ್ಲಿಯ ಸುತ್ತಮುತ್ತ ಹೆಬ್ಬೂರು, ಬಳ್ಳಗೆರೆ, ದೊಮ್ಮನಕಟ್ಟೆ, ಸೀನಪ್ಪನಹಳ್ಳಿ ಮುಂತಾದ ಊರುಗಳಲ್ಲಿ ರೈತರು ಹೊಲಗಳ ಬದಿಯಲ್ಲಿ ಕಾಡುಪಾಪ ಕಂಡುಬಂದರೆ ಕಷ್ಟಪಟ್ಟು ಹಿಡಿದು ಈ ಬೋರ್ಡ್ ಬರೆಸಿ ಕಾಡುಪಾಪಗಳ ಕುರಿತು ಅಧ್ಯಯನ ನಡೆಸುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವಿ. ಗುಂಡಪ್ಪನವರಲ್ಲಿಗೆ ತರಲು ಪ್ರಾರಂಭಿಸಿದರು. ನಂತರ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಯಿತು.

    ನಾಗವಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿದಂತೆ ರೈತರ ತೋಟ, ಹೊಲ, ತೊರೆ ಹಾಗೂ ಹಳ್ಳಗಳಿವೆ. ಇವುಗಳ ಮಧ್ಯದಲ್ಲಿ ಗಿಡ, ಮರ, ಪೊದೆಗಳನ್ನು ಕಾಣಬಹುದು. ಕಾಡುಪಾಪಗಳು ಇಂತಹ ಕೃಷಿಪ್ರದೇಶದ ಸುತ್ತಮುತ್ತಲಿನಲ್ಲೇ ಕಂಡುಬಂದಿವೆ.

    ಈ ಕೃಷಿಭೂಮಿಗಳಲ್ಲಿ ಸಾಕುಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆಗಳು ಓಡಾಡುವುದು ಸಹಜ. ಇವುಗಳು ಹಾಕುವ ಸಗಣಿ, ಗಂಜಲದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಅದರ ಜೊತೆಗೆ ಕೀಟಗಳೂ ವೃದ್ಧಿಸುತ್ತವೆ. ಈ ಕೀಟಗಳೇ ಕಾಡುಪಾಪಗಳಿಗೆ ಆಹಾರವಾಗುತ್ತವೆ. ತೋಟ, ಗದ್ದೆಗಳಿಗೆ ಹಾಕುವ ಕಾಂಪೋಸ್ಟ್ ಗೊಬ್ಬರದಿಂದಲೂ ಈ ಕೀಟಗಳು ವೃದ್ಧಿಯಾಗುತ್ತವೆ. ಅಲ್ಲದೆ ಬೆಳೆಗಳನ್ನು ತಿನ್ನಲು ಬರುವ ಚಿಟ್ಟೆ, ಪತಂಗ, ಕಂಬಳಿಹುಳುಗಳೂ ಕಾಡುಪಾಪಗಳಿಗೆ ಆಹಾರ. ಇಂತಹ ಬೆಳೆಹಾನಿ ಮಾಡುವ ಕೀಟಗಳನ್ನು ತಿನ್ನುವ ಮೂಲಕ ಕಾಡುಪಾಪಗಳು ಕೀಟ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ.

    ವಿಶೇಷ ಎಂದರೆ ಕೋತಿ, ಅಳಿಲುಗಳ ಹಾಗೆ ಇವು ಬೆಳೆಗಳನ್ನು ನಾಶ ಮಾಡುವುದಿಲ್ಲ. ರೈತರಿಗೆ ಯಾವುದೇ ತೊಂದರೆ ಕೊಡದೆ ಸಾಧ್ಯವಿದ್ದಷ್ಟು ಅವರಿಗೆ ನೆರವಾಗುತ್ತಾ ಬದುಕುತ್ತವೆ. ಅವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಕೃಷಿಭೂಮಿಯ ಪೊದೆಗಳೇ ಆಧಾರ. ಪೊದೆಗಳಲ್ಲಿ ಯಾರಿಗೂ ಕಾಣದಂತೆ ಪ್ರಯಾಣಿಸುತ್ತವೆ.

    ಕೃಷಿಪ್ರದೇಶದಲ್ಲಿರುವ ನೀರಿನ ಮೂಲಗಳು, ಪಂಪ್ಸೆಟ್ ಬಳಿಯ ನೀರಿನ ತೊಟ್ಟಿಗಳು, ಹಳ್ಳಗಳು, ಸಣ್ಣ ಕೆರೆ, ಕಟ್ಟೆಗಳು ಹಾಗೂ ಚೆಕ್ ಡ್ಯಾಂಗಳನ್ನು ಇವುಗಳಿಗೆ ಪ್ರಮುಖ ನೀರಿನ ಮೂಲಗಳಾಗಿವೆ.

    ಇಲ್ಲಿನ ತೆಂಗು, ಅಡಿಕೆ, ಬಾಳೆ, ಮಾವು, ಹೂವು, ತರಕಾರಿ ತೋಟಗಳು ಸಾಕಷ್ಟು ಕೀಟಗಳ ಆವಾಸ ಸ್ಥಾನಗಳಾಗಿವೆ. ಇದರಿಂದ ಕಾಡುಪಾಪಗಳಿಗೆ ಸಾಕಷ್ಟು ಕೀಟಗಳು ದೊರೆಯುತ್ತವೆ. ಇದರಿಂದಲೂ ಕಾಡುಪಾಪಗಳು ಈ ಪ್ರದೇಶದಲ್ಲಿ ಹೆಚ್ಚಾಗಿವೆ ಎಂದರೆ ತಪ್ಪಾಗಲಾರದು.

    ಕಾಡುಪಾಪಗಳ ಮೊದಲ ವೈರಿಗಳೆಂದರೆ ಮಾನವ. ಇದರ ಮಾಂಸಕ್ಕಾಗಿ, ಕಣ್ಣುಗಳಿಗಾಗಿ, ಔಷಧಿಗಾಗಿ ಇವುಗಳನ್ನು ಕೊಲ್ಲುತ್ತಿದ್ದಾನೆ. ಕಾಡುಪಾಪಗಳು ಕಂಡುಬಂದರೆ ಹಾರಿ ಬಂದು ಕಣ್ಣು ಮುಖವನ್ನು ಕುಕ್ಕುತ್ತವೆ. ಕಾಡುಬೆಕ್ಕು, ಪುನಗುಬೆಕ್ಕು, ಗೂಬೆಗಳು, ನರಿಗಳು ಕಾಡುಪಾಪವನ್ನು ಕೊಂದು ತಿನ್ನುತ್ತವೆ.

    ಕಾಡುಪಾಪ ಇಂದು ವಿಪತ್ತಿನಲ್ಲಿದೆ. ಒಂದು ಕಾಲದಲ್ಲಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದಕ್ಕೆ ನೆಲೆ ಇತ್ತು. ಕಾಡುಪಾಪಗಳು ನೈಸರ್ಗಿಕ ಆವಾಸಗಳಲ್ಲಿ ಎಷ್ಟಿವೆ ಎಂಬುದನ್ನು ಕರಾರುವಕ್ಕಾಗಿ ತಿಳಿಯುವುದು ಕಷ್ಟ. ಏಕೆಂದರೆ ಇದರ ಕ್ರಮ ಉದ್ದವಾದ ಕ್ಷೇತ್ರ ಅಧ್ಯಯನ ಅಷ್ಟಕಷ್ಟೆ, ಇದು ಚಿಕ್ಕದಾಗಿದ್ದು, ನಿಶಾಚರಿ ಪ್ರಾಣಿಯಾಗಿದ್ದು ಹೆಚ್ಚಾಗಿ ರಾತ್ರಿ ಸಂಚಾರಿಗಳು, ಅಲ್ಲದೆ ಹೆಚ್ಚಾಗಿ ಒಂಟಿಯಾಗಿರುತ್ತದೆ. ನೈಸರ್ಗಿಕ ಆವಾಸಗಳಲ್ಲಿ ಇದರ ಪರಿಸರ ನಡವಳಿಕೆಗಳ ಬಗ್ಗೆ ಸುದೀರ್ಘವಾಗಿ ಅಧ್ಯಯನಗಳು ನಿಗೂಡವೆಂದೇ ಹೇಳಬಹುದು. ಇದರ ಬಗ್ಗೆ ಪೂರ್ಣವಾದ ಅಧ್ಯಯನ ಆಗಬೇಕಷ್ಟೆ. ಐ.ಯು.ಸಿ.ಎನ್. ಸಂಸ್ಥೆಯವರು ಇದನ್ನು ಕೆಂಪುಪಟ್ಟಿಯಲ್ಲಿ ಸೇರಿಸಿದ್ದಾರೆ.

    ಎಲ್ಲಾ ಕಡೆ ನೈಸರ್ಗಿಕ ಆವಾಸಗಳು ಕ್ಷೀಣಿಸಿ, ಹಲವಾರು ಬದಲಾವಣೆಗಳಾಗಿ, ಕಾಡುಪಾಪಗಳ ಉಳಿವಿಗೆ ಅಸಾಧ್ಯವಾಗುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ಹಳ್ಳಿಗಳು, ಗೋಮಾಳಗಳನ್ನು ಕೃಷಿಗೆ ಬಳಸಿಕೊಳ್ಳುತ್ತಿರುವುದು. ಇದಲ್ಲದೆ ಹೊಲಗಳನ್ನು ನೀರಾವರಿಯನ್ನಾಗಿ ಮಾಡುತ್ತಿರುವುದರಿಂದ ಬದುಗಳಲ್ಲಿದ್ದ ಮರಗಳೆಲ್ಲಾ ಕಣ್ಮರೆಯಾಗುತ್ತಿವೆ. ತೊರೆ, ಹಳ್ಳದ ಸಾಲುಗಳು, ಒತ್ತುವರಿಯಾಗಿ, ಅಲ್ಲಿದ್ದ ಪೊದೆ, ಗಿಡಮರಗಳು ಬಿದಿರು, ಸೀಗೆಮೆಳೆ ಕಣ್ಮರೆಯಾಗುತ್ತಿವೆ. ಇದರಿಂದ ಕಾಡುಪಾಪಗಳ ಬದುಕು ದುಸ್ತರವಾಗುತ್ತಿದೆ.

    ಕ್ಷೀಣಿಸುತ್ತಿರುವ ಈ ಜೀವಸಂತತಿಗೆ ಇಂದು ಮೌಲ್ಯ ಹೆಚ್ಚಿದೆ. ಇದರಿಂದ ಕಾಡುಪಾಪದ ಕಳ್ಳ ಸಾಗಾಣಿಕೆಯೂ ಹೆಚ್ಚಿದೆ. ಮಾಟ ಮಂತ್ರದಲ್ಲಿ ಕಾಡುಪಾಪದ ಕಣ್ಣು ಬಳಸುತ್ತಾರೆ. ಕಣ್ಣಿನ ದೋಷ ಇರುವವರು ಈ ಚಿಕ್ಕ ಪ್ರಾಣಿಯ ಕಣ್ಣು ತಿಂದರೆ ವಾಸಿಯಾಗುತ್ತದೆ ಎಂಬ ಮೂಢ ನಂಬಿಕೆ ಇದೆ. ಕೆಲವು ಪ್ರದೇಶದ ಸ್ಥಳೀಯ ಜನರಲ್ಲಿನ ತಪ್ಪು ಗ್ರಹಿಕೆ ಎಂದರೆ ಕಾಡುಪಾಪದ ದೇಹದ ಎಲ್ಲಾ ಭಾಗಳಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಇನ್ನೂ ಕೆಲವೆಡೆ ಈ ಪ್ರಾಣಿಯ ಕೆಟ್ಟ ಮುಖ ನೋಡಬಾರದು, ಒಳ್ಳೆಯದಾಗುವುದಿಲ್ಲ ಎಂದೆಲ್ಲಾ ಹೇಳುತ್ತಾರೆ. ಈ ಅಂಧವಿಶ್ವಾಸವೇ ಇವುಗಳ ಮೂಲಕ್ಕೆ ಕೊಡಲಿಯಾಗಿದೆ.

    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    4 COMMENTS

    1. ಕಾಡುಪಾಪ ಅಪರೂಪದ ಜೀವಿ.ಅವುಗಳ ಆವಾಸ, ಜೀವನ ಕುತೂಹಲಕಾರಿಯಾಗಿ ಬರವಣಿಗೆಯಲ್ಲಿ ಮೂಡಿಬಂದಿದೆ

    2. ಲೇಖಕರು ಕಾಡು ಪಾಪದ ಬಗೆ ಉತ್ತಮವಾಗಿ ಬರೆದಿರುವರು. ಇದು ನಮ್ಮ ಮಲೆನಾಡಿನ ಕಾಡಿನಲಿ ಕಾಣುವ ಹಾರುವ cat ಇರಬಹುದೇ

    3. ಕುತೂಹಲಕಾರಿಯಾದ ಲೇಖನ. ಚೆನ್ನಾಗಿದೆ. ಮೂಢ ನಂಬಿಕೆಗೆ ಇದು ತುತ್ತಾಗುತ್ತಿದೆ ಎಂದು ಬೇಸರವಾಗುತ್ತಿದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!