21.2 C
Karnataka
Sunday, September 22, 2024

    ಕುಸುಮಾ ಬಸ್,ಮೀರಾಲಾಂ ಟಾಕೀಸ್ ಮತ್ತು ರಾಜ್ಕುಮಾರ್ ಸಿನಿಮಾ

    Must read

    ಪೀರಾ,ಹೂವಿನ ಹಾರ ತರೋದು ಮರ್ತೋಯ್ತು, ನಾಳೆ ಅವನಿಗೊಂದು ಹಾರ ಹಾಕ್ರೋ ಅಂತ ನಮ್ಮ ಬಸಪ್ಪ ಮೇಷ್ಟ್ರು ಉಸಿರು ಬಿಗಿ ಹಿಡಿದು ಕುಳಿತಿದ್ದ , ಕಿಕ್ಕಿರಿದ, ಮಂದ ಬೆಳಕಿನ ಬಸ್ಸಿನ ಮಧ್ಯದಿಂದ ಗಟ್ಟಿಯಾಗಿ ಹೇಳಿದರು ಅಂದ್ರೆ,ಕೂಡ್ಲಿಗಿ ಕಡೆ ಹೊರಟಿದ್ದ ಕುಸುಮಾ ಬಸ್ಸು, ಸೊವೇನಹಳ್ಳಿ ದಾಟಿ ಗುಡ್ಡೇ ಗುನ್ನಳ್ಳಿ(ಅಮರ ದೇವರ ಗುಡ್ಡ) ಮಧ್ಯೆ ಇದ್ದ ದಿನ್ನೆಯನ್ನು ಸಲೀಸಾಗಿ ಏರಿದೆ ಎಂದು ಅರ್ಥ. ಮೇಲೆ,ಒಳಗೆ,ಹಿಂಬದಿಯ ಏಣಿ ಮೇಲೆ,ಎಲ್ಲೆಂದರಲ್ಲಿ ಸುಮಾರು 70-80 ಜನರಿಂದ ತುಂಬಿದ್ದ ರಾತ್ರಿಯ ನಮ್ಮೂರಿನಿಂದ ಕೂಡ್ಲಿಗಿಗೆ ಕುಸುಮಾ ಬಸ್ಸಲ್ಲಿ ಆಗುತ್ತಿದ್ದ ಪಯಣ ಬಲು ರೋಚಕ ಮತ್ತು ಆನಂದ ಭರಿತ.

    ಕುಸುಮಾ ಬಸ್ ಈಗ ಹೀಗಿದೆ

    ನಮ್ಮೂರ ಪಕ್ಕದ ಚೋರನೂರಿನಿಂದ ಸಂಡೂರಿನ ಲೋಹಾದ್ರಿ ಬೆಟ್ಟದ ತಪ್ಪಲಿನ ರುದ್ರ ರಮಣೀಯ ಹಾದಿಯಲ್ಲಿ ಬಳ್ಳಾರಿಗೆ ಹೋಗುವ ಕುಸುಮಾ ಬಸ್ಸು,ಬಳ್ಳಾರಿಯಲ್ಲಿದ್ದ,ಈಗಲೂ ಇರುವ ಕುಸುಮಾ ಟ್ರಾವೆಲ್ಸ್ ಒಡೆತನದ್ದು. ಮಧ್ಯಾಹ್ನ 3 ಘಂಟೆಗೆ ಬಳ್ಳಾರಿಯ ಮೋತಿ ಸರ್ಕಲ್ ನಿಂದ ಬಿಡುತ್ತಿದ್ದ ಈ ಬಸ್ಸು ನಮ್ಮೂರನ್ನು ಸಾಯಂಕಾಲ 5.30 ರ ಹೊತ್ತಿಗೆ ತಲುಪಿ, 5 ಕಿ.ಮೀ ದೂರದಲ್ಲಿದ್ದ ಚೋರನೂರನ್ನು 6 ಕ್ಕೆ ಮುಟ್ಟಿ ಅಲ್ಲೇ ಹಾಲ್ಟ್. ಮತ್ತೆ ಬೆಳಿಗ್ಗೆ 6.30 ಕ್ಕೆ ಚೋರನೂರು ಬಿಟ್ಟು, 7 ರ ಹೊತ್ತಿಗೆ ನಮ್ಮೂರು ತಲುಪಿ 10 ರ ಸುಮಾರು ಬಳ್ಳಾರಿ ತಲುಪುತ್ತಿತ್ತು. ಬೆಳಿಗ್ಗೆ,ಸಾಯಂಕಾಲ ಕೆರೆಯ ಏರಿ ಮೇಲಿನ ಇದರ ಶಿಳ್ಳೆ ನಮ್ಮೂರ ದಿನಚರಿಗಳಲ್ಲಿ ಬಹು ಮುಖ್ಯವಾದ ಅಂಶ. ಬೆಳಿಗ್ಗೆ ಕುಸುಮಾ ಬಸ್ಸು ಹೋಯ್ತು,ಇನ್ನೂ ಎದ್ದಿಲ್ಲಾ …ಎನ್ನುವ ಅಮ್ಮಂದಿರ ತಗಾದೆಯಿಂದ, ಸಾಯಂಕಾಲ ಕುಸುಮಾ ಬಸ್ಸು ಹೋಯ್ತು, ಇನ್ನೂ ಇವ ಶಾಲೆಯಿಂದ ಏಕೆ ಬರಲಿಲ್ಲ ಎನ್ನುವ ತನಕ ಅದರ ನಂಟು. ಅದರ ಡ್ರೈವರ್ ಚೋರನೂರಿನವನೆ ಆದ ಪೀರ ಅಂತೂ ದಾರಿಯುದ್ಧದ ಹಳ್ಳಿಗಳ ಮನೆ ಮಗ.

    ಇದರಲ್ಲಿ ಬರೀ ಮನುಷ್ಯರು ಮಾತ್ರ ಪಯಣಿಸುತ್ತಿದ್ದರು ಅಂತ ಏನಾದ್ರು ನೀವು ಅಂದುಕೊಂಡರೆ ನಾವೆಲ್ಲ ನಕ್ಕು ಬಿಡ್ತೀವಿ ನೋಡ್ರಿ. ಇದರಲ್ಲಿ ಕುರಿ,ಕೋಳಿ, ಹುಲ್ಲಿನ ಮೆದೆ ಹೊತ್ತವರು, ಅಂಗಡಿಯ ಶೆಟ್ಟರ ಸಾಮಗ್ರಿಗಳು, ಬಟ್ಟೆ ಅಂಗಡಿಯವರ ಹೊಸಬಟ್ಟೆಗಳ ಮೂಟೆಗಳು ಇತ್ಯಾದಿ ಇರುತ್ತಿದ್ದವು. ಬಳ್ಳಾರಿಗೆ ಸಮೀಪದ ರಾಂಪುರ ಈ ಮಾರ್ಗದ ಎಲ್ಲ ಹಳ್ಳಿಗಳ ಕೇಂದ್ರ ಸ್ಥಾನ. ಹಾಗಾಗಿ,ಬಳ್ಳಾರಿ,ರಾಂಪುರಗಳ ಎಲ್ಲ ಸಾಮಾನುಗಳನ್ನು ಹೊತ್ತು,ನಮ್ಮಲ್ಲಿಯ ಕುರಿ,ಕೋಳಿಗಳನ್ನು, ಆರೋಗ್ಯ ತಪಾಸಣೆಗೆ,ಆಸ್ಪತ್ರೆಗಳಿಗೆ ಹೋಗುವ ರೋಗಿಗಳನ್ನು,ಬಳ್ಳಾರಿಯಲ್ಲಿ ಐಟಿಐ ಓದುವ ಹುಡುಗರ ರೊಟ್ಟಿ,ಅನ್ನದ ಗಂಟುಗಳನ್ನು ಅಲ್ಲಿಗೆ ತಲುಪಿಸುವ ರಾಯಭಾರಿ ನಮ್ಮ ಕುಸುಮಾ ಬಸ್ಸು.

    ಇದು ಅಡ್ಡಾಡುವ ಮಾರ್ಗ ಬಲು ಭೀಕರ ಅನ್ನುವಂಥಾದ್ದು. ಪೀರ ನನ್ನು ಬಿಟ್ಟರೆ ಮತ್ತಾರು ಆ ರಸ್ತೆಯಲ್ಲಿ ಬಸ್ಸು ಓಡಿಸಲು ಅಸಮರ್ಥರು ಎಂದೇ ಎಲ್ಲರ ಭಾವನೆ. ಒಂದು ದಿನ ಪೀರ ರಜಾ ಹಾಕಿದರೆ,ಕುಸುಮಾ ಬಸ್ಸೇ ಬರದಿದ್ದರೆ, ಅದು ಮತ್ತೆ ಬರುವ ತನಕ ಅದರದ್ದೇ ಮಾತು,ಅಷ್ಟು ಹಾಸು ಹೊಕ್ಕಾಗಿತ್ತು ನಮ್ಮ ಹಳ್ಳಿಗಳಿಗೆ ಕುಸುಮಾ ಬಸ್ಸಿನ ನಂಟು.

    ಸ್ವಾಮಿಹಳ್ಳಿ ಶಾಲೆಯಲ್ಲಿ ಮೇಷ್ಟ್ರು ಆಗಿದ್ದ ನಮ್ಮೂರ ಬಸಪ್ಪ ಮೇಸ್ಟ್ರು, ಇದರ ಕಾಯಂ ಪ್ರಯಾಣಿಕರು. ಪೀರನ ಇವರ ಸಂಬಂಧ ಮತ್ತೆ ಹೇಳಬೇಕಿಲ್ಲ ಅಲ್ಲ… ಹಾಗಾಗಿ ಆಗಾಗ ಕೂಡ್ಲಿಗಿಯ ಮೀರಾಲಾಂ ಟಾಕಿಸಿನಲ್ಲಿ ಯಾವುದಾದ್ರು ಒಳ್ಳೆಯ ಕನ್ನಡ ಪಿಚ್ಚರ್ ಬಂದ್ರೆ ಎಲ್ಲರೂ ಈ ಪೀರನ ಮತ್ತು ಬಸಪ್ಪ ಮೇಷ್ಟ್ರ ಕಡೆ ಆಸೆ ಕಣ್ಣುಗಳಿಂದ ನೋಡ್ತಾ, ಬಸ್ಸು ಬಿಡ್ತಾರೆನೋ ಅಂತ ದಿನಗಟ್ಟಲೆ ನಿರೀಕ್ಷೆ. ಪೀರ ನೈಟ್ ಹಾಲ್ಟ್ ಗಾಡಿಯನ್ನು ತನ್ನ ಯಜಮಾನನಿಗೆ ಗೊತ್ತಾಗದ ಹಾಗೆ ನಮ್ಮೂರವರನ್ನು ತುಂಬಿಕೊಂಡು ಕೂಡ್ಲಿಗಿ ಮೀರಲಾಮ್ ತಾಕಿಸಿಗೆ ಸೆಕೆಂಡ್ ಷೋ ಪಿಚ್ಚರಿಗೆ ಕರೆದುಕೊಂಡು ಹೋಗಿ,ರಾತ್ರಿಯೇ ಮರಳುವುದು ಮತ್ತೆ ಬೆಳಿಗ್ಗೆ ಎದ್ದು ಯಥಾರೀತಿ ತನ್ನ ಬಳ್ಳಾರಿಯ ಪಯಣಕ್ಕೆ ಸಿದ್ಧನಾಗುವುದು. ಇದಕ್ಕೆ ಹೊರಡುವ ಎಲ್ಲರೂ ಸೇರಿ ಡೀಸಲ್ ಹಾಕಿಸೋದು,ಪೀರನಿಗೆ ಹತ್ತೋ,ಇಪ್ಪತ್ತೋ ಕೈಗಿಡುವುದು. ಪೀರ ಕೇಳ್ತಿರಲಿಲ್ಲ ಬಿಡಿ,ಅದು ಬೇರೆ ವಿಷಯ. ಇದರ ಉಸ್ತುವಾರಿಕೆ ನಮ್ಮ ಬಸಪ್ಪ ಮಾಸ್ತರದ್ದು. ಊರಿಗೆ ಊರೇ ಹೊರಟು ಬಿಡುತ್ತಿತ್ತು,ಯಾರಿಗೂ ಬೇಸರ ಮಾಡದೆ,ನಮ್ಮ ಮೇಷ್ಟ್ರು,ಪೀರ ಎಲ್ಲರನ್ನು ನಕ್ಕೋತ ಎಲ್ಲೆಲ್ಲಿ ನೀವು ಕೂತ್ಕೋಬಹುದೋ,ನಿಂತ್ಕೋಬಹುದೋ ಅಲ್ಲೆಲ್ಲ ಹೋಗಿ ಅಂತಿದ್ದರು. ಆಗ ಇವರಿಬ್ಬರೂ ಸಾಕ್ಷಾತ್ ದೇವರ ಸ್ವರೂಪಗಳು.

    ಇಂತಹ ಸುವರ್ಣಾವಕಾಶವನ್ನು ಯಾರಾದ್ರೂ ಕಳಕೊಳ್ತಾರ ಅನ್ನೋಷ್ಟು ಸಂಭ್ರಮ ಮನೆಮಾಡಿದ್ದ ಸಮಯದಲ್ಲಿ, ನಮ್ಮ ಮನೆಯಲ್ಲಿ ಅಪ್ಪನ ಆಕ್ಷೇಪಣೆ. ಹೊಟೇಲಲ್ಲಿ ಬಿಡಿ,ದೂರ ಆಯ್ತು, ಮನೆಯಲ್ಲಿ ಸಹಾ ಚಾ,ಕಾಫಿ ನಿಷಿದ್ಧ. ಸಿನೆಮಾ ಅಂದ್ರೆ ಉರಿದು ಬೀಳ್ತಿದ್ದರು. ಬದಲಿಗೆ ಅದರದ್ದೇ ಕಥೆಯ ಪುಸ್ತಕ ಓದಿ ಅನ್ನುವ ಭಾರೀ ನಿರಾಶೆಯ ಉಪದೇಶ. ಅಮ್ಮ ನನ್ನನ್ನು,ನಾನು ಅಮ್ಮನನ್ನು ಅರ್ಥವಾಗದ ಭಾಷೆಯಲ್ಲಿ,ಕಣ್ಣುಗಳಲ್ಲೇ ಮಾತಾಡ್ತಾ ಅಪ್ಪನ ರುದ್ರಾವತಾರದ ಮುಂದೆ ಅಪರಾಧಿ ಮನೋಭಾವನೆಯಲ್ಲಿ ನಿಲ್ಲೋದು. ಕೊನೆಗೆ ಸಾಯಂಕಾಲ ಕುಸುಮಾ ಬಸ್ಸು ಬರುವ ಹೊತ್ತಿಗೆ, ಉರಲ್ಲಿಯ ಸಂಭ್ರಮ ನೋಡಿಯೋ ಏನೋ… ಏನೇ ನಿನಗಂತೂ ಬುದ್ಧಿ ಇಲ್ಲ,ಇವನನ್ನೂ ಕರ್ಕೊಂಡು ಹೋಗ್ತೀನಿ ಅಂತಿಯಲ್ಲ… ಅಂತ ಬೈಯುತ್ತ 10ರ ಎರಡು ನೋಟನ್ನು ಅಮ್ಮನಿಗೆ ಕೊಡ್ತಿದ್ದರು. ನನಗೂ, ಅಮ್ಮನಿಗೂ ಸ್ವರ್ಗ ಮೂರು ಗೇಣು.

    ಅಪ್ಪ,ಬೀಚಪ್ಪ ಮಾಸ್ಟ್ರು,ಗುರುಮೂರ್ತಿ ಮೇಷ್ಟ್ರ ಮತ್ತು ಕೆಲವು ಆಗ್ಗೆ ಹಿರಿಯರು ಅನ್ನಿಸಿಕೊಂಡಿದ್ದ ದೇವೇಂದ್ರಪ್ಪ,ಮಲ್ಲೇಶಪ್ಪ ಶೆಟ್ಟಿ,ಕೃಷ್ಟಣ್ಣ ಶೆಟ್ಟಿ ಅನ್ನುವ ಗಾಂಧಿವಾದಿಗಳು,ನಮ್ಮೂರ ಬುದ್ಧಿಜೀವಿಗಳ ಹೊರತಾಗಿ ಎಲ್ಲ ಹೆಣ್ಣು,ಗಂಡು,ಮಕ್ಕಳು ತಯಾರಾಗಿ ರಾತ್ರಿ 8ಕ್ಕೆ ಎಲ್ಲರನ್ನು ಕೊಂಡು ಹೋಗಲು ಬರ್ತಿದ್ದ ಕುಸುಮಾ ಬಸ್ಸನ್ನು ಕಾಯುವುದಿತ್ತಲ್ಲ, ಆ ಸಂಭ್ರಮ ವರ್ಣಿಸಲು ಆಗ್ತಿಲ್ಲ. ನೀನೂ ಹೊರಟ್ಯಾ,ನೀನೂ ಹೊರಟ್ಯಾ ಅಂತ ಅಮ್ಮಂದಿರು ಆಶ್ಚರ್ಯಭರಿತರಾಗಿ ಕೇಳಿಕೊಳ್ತಾ ಇದ್ದರೆ, ಹುಡುಗರಾದ ನಾವು ನೋಡುವ ಸಿನೆಮಾದ ವಿಶ್ಲೇಕಕರಾಗಿ ಬಹಳ ಹೊತ್ತು ಆಗಿರುತ್ತಿತ್ತು.

    ಎಲ್ಲರ ಮನೆಗಳ ಬೈದವರೂ ನಮ್ಮನ್ನು ಬಸ್ಸು ಹತ್ತಿಸಲು ನೆರೆದಿರುತ್ತಿದ್ದರು,ನಾವೆಲ್ಲ ಬೇರೆ ಗ್ರಹಗಳಿಗೆ ಭೇಟಿ ನೀಡ್ತಿದ್ದೀವೇನೋ ಎನ್ನುವಂತಹ ಆತಂಕ ಕೆಲವರಿಗಾದ್ರೆ,ಮತ್ತೆ ಕೆಲವರಿಗೆ ಎಂತಹದೋ ಕುತೂಹಲ. ಈ ಮಧ್ಯ ಅಪ್ಪ….ಏ ಬಸಪ್ಪಾ, ನಾಳೆ ಸ್ಕೂಲ್ ಇಲ್ಲೆನು ನಿನಗೆ ಅಂದ್ರೆ, ಶಾಂತಮ್ಮ, ಮಂಜು ಹೊರಟರಿಲ್ಲೋ, ನಿನಗೆ ಅರ್ಥ ಆಗಲ್ಲ, ಇವನು ಮಂಜು ಇದಾನೆ ನೋಡು ಇವನನ್ನೂ ಹಾಳು ಮಾಡಬೇಡ ನಿನ್ನ ಜೊತೆ ಇಟ್ಕೊಂಡು, ನೀನು ಮಗನ್ನ ಕರ್ಕೊಂಡು ಬಸ್ಸು ಹತ್ತಮ್ಮ…..ಅನ್ನುವಾಗ ಎಲ್ಲರೂ ಘೊಳ್ ಅಂತ ನಗೋದು. ನನಗಂತೂ ಬಸಪ್ಪ ಮೇಷ್ಟ್ರು ಹೀರೊ,ಅಪ್ಪ ವಿಲ್ಲನ್.

    ಅಪ್ಪನನ್ನು ಕಿಚಾಯಿಸುವಲ್ಲಿ ಯಾವಾಗಲೂ ಮುಂದಿರುತ್ತಿದ್ದ ಐನೋರ ಸಿದ್ಲಿಂಗಣ್ಣ, self declared conductor ಆಗಿ …ಅಪ್ಪನನ್ನು ಉದ್ದೇಶಿಸಿ, ಅಣ್ಣಾ,ಬಸ್ಸು ಹೊರಡಬೇಕು,ದಾರಿ ಗೊತ್ತಲ್ಲ ಹೆಂಗೈತೆ ಅಂತ,ಮೊನ್ನೆ ಮಳೆಗೆ ಇನ್ನೂ ಅದ್ವಾನ ಆಗೇತಿ, ನೀನು ಸ್ವಲ್ಪ side ಗೆ ಬಂದ್ರೆ, ಪೀರ start ಮಾಡ್ತಾನೆ ಅಂದು….right, right ಅಂತಿದ್ದರು….ಅವನಜ್ಜಿ ಈಗಿನ flight take off ಆಗೋದು ಇದರ ಮುಂದೆ ಏನೂ ಅಲ್ಲ ಬಿಡಿ.

    ಸುಮಾರು 20 ಕಿ. ಮೀ ದೂರದ ಕೂಡ್ಲಿಗಿ ಪಯಣ ರೋಮಾಂಚನಕಾರಿ. ಇನ್ನು ಕುಳಿತವರ ಸಂಭ್ರಮ ಮುಗಿದಿರುತ್ತಿರಲಿಲ್ಲ, ಬಸ್ ಗೊಲ್ಲರಹಟ್ಟಿ ದಿನ್ನೆ ಏರುವ ಸೌಂಡ್ ನಿಂದ ಪೀರ ಎಲ್ಲರನ್ನು ಸುಮ್ಮನಾಗಿಸುತ್ತಿದ್ದ. ಎಲ್ಲರದ್ದೂ ಒಂದೇ ಪ್ರಾರ್ಥನೆ ದೇವರಿಗೆ…ಸರಿಯಾದ ಸಮಯಕ್ಕೆ ಕೂಡ್ಲಿಗಿಯ ಮಿರಲಾಮ್ ಟಾಕಿಸಿನ ಅಂಗಳದಲ್ಲಿ ನಮ್ಮ ಬಸ್ಸು ನಿಲ್ಲಬೇಕು. ಬರುವಾಗ ಏನಾದ್ರು ಆಗಲಿ,ಮತ್ತೆ ನೋಡುವ…ಹಾಗೆ ಬರ್ತಿದ್ದ ಕೊನೆಯ ದಿಬ್ಬವೇ ಈ ಸೊವೇನಹಳ್ಳಿ,ಗುಡ್ಡಗುನ್ನಳ್ಳಿಯ ನಡುವಿನದು. ಸಂತೋಷಕ್ಕೆ ಬಸಪ್ಪ ಮೇಷ್ಟ್ರು ಪೀರನಿಗೆ ಹಾರ ಹಾಕೋಣ ಅಂದ್ರೆ,ಎಲ್ಲರೂ ಗಟ್ಟಿಯಾಗಿ ಚಪ್ಪಾಳೆ ಹೊಡೆದು ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದರು.

    ಹೀಗೆ ನೋಡಿದ್ದ ಸಿನಿಮಾಗಳೇ ಭಕ್ತ ಕುಂಬಾರ, ಕರುಳಿನ ಕರೆ, ಬಂಗಾರದ ಮನುಷ್ಯ,ಸತೀ ಸಕ್ಕೂಬಾಯಿ ಮುಂತಾದವು. 45 ವರ್ಷಗಳ ಹಿಂದೆ ನೋಡಿದ್ದ ಈ ಸಿನೆಮಾಗಳ ಪಾತ್ರಗಳು,ಪಾತ್ರಧಾರಿಗಳು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇವೆ. ಅವರ್ಯಾರೂ ಅಭಿನಯಿಸುತ್ತಿದ್ದಾರೆ ಅಂತ ನಮಗೆ ಅನ್ನಿಸಿದ್ದೇ ಇಲ್ಲ. ಅಷ್ಟು ಸಹಜ ನಟನೆ,ನಮ್ಮ ಪರಿಸರದ ಸೀನ್ ಗಳು, ನಮ್ಮ ಸುತ್ತಲಿನ,ನಮ್ಮವೇ ಏನೋ ಎನ್ನುವಂತಹ ಕಥಾವಸ್ತುಗಳು,ನಮ್ಮ ಊರುಗಳಲ್ಲಿ, ಮನೆಗಳ ಅಂಗಳದಲ್ಲಿ,ಪಡಸಾಲೆಯಲ್ಲಿ,ಅಡುಗೆಮನೆಯಲ್ಲಿ ಆಗುವಂತಹ ನೈಜ ಘಟನೆಗಳು ಪರದೆಯ ಮೇಲೆ ಮೂಡುವಾಗ ತದೇಕ ಚಿತ್ತರಾಗಿ ವೀಕ್ಷಿಸಿ,ಅತ್ತು,ಸಿಟ್ಟುಮಾಡಿಕೊಂಡು, ಕೆಲವು ಖಳ ಪಾತ್ರಗಳನ್ನು ಇನ್ನಿಲ್ಲದ ನಮ್ಮವೇ ಗ್ರಾಮಾಂತರ ಬೈಗುಳಲ್ಲಿ ಬೈಯುತ್ತ, ಆನಂದಿಸಿದ ಆನಂದ ಈಗೇಕೆ ಮರೆಯಾಯ್ತು?ಬಂಗಾರದ ಮನುಷ್ಯದಲ್ಲಿಯ ರಾಜೀವಪ್ಪ ನಮ್ಮೂರಲ್ಲಿ ಹಲವರಿಗೆ ಒಂದು ಕಾಲ ಘಟ್ಟದ ತನಕ ಮಾದರಿ ಆಗಿದ್ದ. ನಮ್ಮವೇ ಬಯಲುಸೀಮೆಯ ಹೊಲದ ಮಾಡರಿಯಲ್ಲಿದ್ದ ಕಲ್ಲುಗಳನ್ನು ಹೊಡೆದು,ಹಸನು ಮಾಡಿಕೊಂಡು ಉತ್ತಿ,ಬೆಳೆದ ರಾಜಕುಮಾರ ಎಷ್ಟೋ ಜನರ ಬಾಳನ್ನು ಹಸನು ಮಾಡಲು ಪ್ರೇರಕ ಆಗಿದ್ದರು. ಭಕ್ತ ಕುಂಬಾರದಲ್ಲಿನ ಲೀಲಾವತಿಯನ್ನು ನೋಡಿ ರಾಜಕುಮಾರ ಕೈ ಕಡಿದುಕೊಂಡಾಗ ಮರುಗದ ಹೆಂಗಳೆಯರೇ ಟಾಕಿಸಿನಲ್ಲಿ ಇರುತ್ತಿರಲಿಲ್ಲ. ಅಂತಹ ತನ್ಮಯತೆಯಿಂದ ಸವಿಯುತ್ತಿದ್ದ ಮನಸ್ಸುಗಳು ಏನಾದವು? ನೋಡಿದ ಪ್ರತಿ ಸಿನೆಮಾದ ಅಭಿನೇತ್ರಿಯೇ ನಮ್ಮ ಮುಂದಿನ ಬಾಳ ಸಂಗಾತಿ ಆಗಬೇಕು ಅಂತ ಬಯಸುತ್ತಿದ್ದ ಮನಸ್ಸುಗಳ ಅಮಾಯಕತೆ ಈಗೇಕೆ ಮರೆಯಾಗಿದೆ? ಎರಡು ರೇಖೆಗಳ ಗೀತಾ,ಸರಿತಾ ರ ನಾ ಮುಂದು,ತಾ ಮುಂದು ಎನ್ನುವ ಅಭಿನಯಕ್ಕೆ ಮನಸೋತ ಉರಲ್ಲಿಯ ಇಬ್ಬರ ಹೆಂಡಿರ ಮುದ್ದಿನ ಗಂಡಂದಿರನ್ನು ತಿಂಗಳುಗಳ ಕಾಲ ಕಂಡ ಕಂಡಲ್ಲಿ ರೇಗಿಸಿದ್ದ ಮನಸ್ಸುಗಳು ಎಲ್ಲಿ ಹೋದವು? ಅದೇನು ಕಾಲದ ಮಹಿಮೆಯೇನೋ,ಈ ಲಾಕ್ಡೌನ್ ಸಮಯದಲ್ಲಿ ಬೇಸರ ನಿಗುವುದಕ್ಕೆಂದು ನಿನ್ನೆ ನೋಡಿದ 3-4 ಚಿತ್ರಗಳ ಒಂದೂ ಪಾತ್ರ,ಸನ್ನಿವೇಶ ನನ್ನಲ್ಲೇ ಉಳಿಯುತ್ತಿಲ್ಲ….ಏಕೆ ಹೀಗೆ?

    ಅಂದಿಗಿಂತಲೂ ಇಂದು ಉತ್ತಮ ತಂತ್ರಜ್ಞಾನ, ಹೊರದೇಶದ ಚಿತ್ರೀಕರಣ, ಚೆಲುವ ಚೆಲುವೆಯರ ಕಥೆಗಳು ಆಗಿನ ರೀತಿ ಇಡೀ ಒಂದು ಕಾಲಘಟ್ಟದ ಮನಸ್ಸುಗಳನ್ನು ಸೆರೆಹಿಡಿದ ಹಾಗೆ ಸೆರೆಹಿಡಿಯುವಲ್ಲಿ ವಿಫಲವಾಗುತ್ತಿರುವುದಾದ್ರು ಏಕೆ?! ರುಚಿಯನ್ನು ಸವಿಯುವ ರುಚಿಗ್ರಂಥಿಗಳೇ ನಮ್ಮಿಂದ ಕಾಣೆಯಾದವಾ ಅಥವಾ ರುಚಿ ಹೆಚ್ಚಾಗಿ ವಾಕರಿಕೆ ಬಂತಾ?

    ಇದೆಲ್ಲವೂ ನನ್ನ ತಪ್ಪು ಗ್ರಹಿಕೆಯಾಗಿ ಈಗಿನ ಮಕ್ಕಳು ಇದನ್ನು enjoy ಮಾಡ್ತಿದ್ದಾರಾ? ಯಾಕೆಂದ್ರೆ, ಬಾಲ್ಯ ಎಂತಹ ಪರಿಸ್ಥಿತಿ,ಸನ್ನಿವೇಶಗಳಲ್ಲೂ ಸುಂದರ ಆಗಿರುತ್ತಂತೆ. ಅದು ಮರುಭೂಮಿಯ ಬಾಲ್ಯವಾಗಲಿ,ಸಮೃದ್ಧ ಹಸುರಿನ ಮಲೆನಾಡ ಬಾಲ್ಯವೇ ಆಗಿರಲಿ, ನನ್ನಂತಹ ಒರಟು ಬಯಲುಸೀಮೆಯ ಬಾಲ್ಯವೇ ಆಗಿರಲಿ, ಬಾಲ್ಯ,ಬಾಲ್ಯದ ರುಚಿಯ ಸ್ವಾದ ಚಿರಸ್ಮರಣೀಯವಂತೆ.
    ಏನೋ ಗೊತ್ತಿಲ್ಲ……

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    19 COMMENTS

    1. ಸಿನಿಮಾ ಅಂದ್ರೆ ಬಯಲುಸೀಮೆ ಅನುಭವಗಳೇ ವೈವಿಧ್ಯಮಯ. ಅಂದಿನ ಡ್ರೈವರ್ ಮಕ್ಕಳ ಅಚ್ಚರಿ. ಮತ್ತೊಮ್ಮೆ ನೆನಪಿನ ಅಂಗಳಕ್ಕೆ ತಂದ ಮಂಜುಗೆ ಥ್ಯಾಂಕ್ಸ್.

    2. ಬಾಲ್ಯ ಎಂತಹ ಪರಿಸ್ಥಿತಿ,ಸನ್ನಿವೇಶಗಳಲ್ಲೂ ಸುಂದರ ಆಗಿರುತ್ತಂತೆ. ಎನ್ನುವ ಸಮಾಧಾನದೊಂದಿಗೆ ವಾಸ್ಥವಕ್ಕೆ ಬಂದು ನಿಟ್ಟುಸಿರು ಬಿಟ್ಟಂತಿದೆ………🙌👌

    3. ಹಳ್ಳಿಯ ಅಂದಿನ ಸೊಬಗು ಇಂದು ಕಾಣುತ್ತಿಲ್ಲ,ಆ ಒಗ್ಗಟ್ಟು ಕೂಡ ಕಾಣೆಯಾಗಿದೆ ದುಷ್ಟ ಇದ್ರೆ ಒಬ್ಬ ಅಥವಾ ಇಬ್ರು ಇರ್ತಾ ಇದ್ರು .ಅಂದಿನ ಖುಷಿಯನ್ನು ತುಂಬಾ ಸೊಗಸಾಗಿ ವರ್ಣಿಸಿರುವ ಈ ನಿಮ್ಮ ಬರವಣಿಗೆ ಮನಸ್ಸನ್ನು ಉಲ್ಲಾಸ ಗೊಳಿಸಿತಲ್ಲದೆ ಹಳೆಯ ನೆನಪುಗಳನ್ನು ಕೆದಕಿದಂತಿತ್ತು

    4. ಸೊಗಸಾದ ಲೇಖನ. Malladihally ಯಿಂದ ದುರ್ಗಕೆ ಹೋಗುತಿದ್ದ ಉದಯ Bus ದಾವಣಗೆರೆಗೆ ಹೋಗುವಾಗಿನ ಗುರುರಾಜ ಬಸ್ .Dummi ಸಿನಿಮಾ ಟೆಂಟ್. ನಮ್ಮದೇ ಮುಗ್ದ ಕಲ್ಪನೆ ಎಲ್ಲವೂ ನೆನಪು ಮಾಡಿತು ಬಿ.ಎಮ್ ಲೇಖನ

    5. ಅಬ್ಬಾ ಎಂಥ ಅದ್ಭುತವಾದ ಬರವಣಿಗೆ. ಲೇಖನ ಓದುತ್ತಾ ಇದ್ದರೆ. ನಿನ್ನ ನೆನಪಿನ ಶಕ್ತಿ ಯನ್ನು ಕಂಡು ಬೆರಗಾದೆ. ಬಸ್ಸಿನಲ್ಲಿ ಪ್ರಯಾಣ . ಅಲ್ಲಿ ನಡೆಯುತಿದ್ದ ಸನ್ನಿವೇಶ. ಮತ್ತು ಟಾಕೀಸ್ ನಲ್ಲಿ ಸಿನಿಮಾ ನೋಡುತಿದ್ದ ರೀತಿ. ಎಲ್ಲವನ್ನು ತುಂಬಾ ಮನಮೋಹಕ ವಾಗಿ ವರ್ಣಿಸಿರುವೆ. Bm. ನಿನಗೆ ನೀನೆ ಸಾಟಿ. “”ಆಡು ಮುಟ್ಟದ ಸೊಪ್ಪಿಲ್ಲ “”. ಎನ್ನುವ ಗಾದೆ ನೆನಪು ಆಗುತ್ತೆ. ನಿನ್ನ ಕಾರ್ಯ ಕ್ಷೇತ್ರ ವೇ ಬೇರೆ. ಆದರೂ. ನೀನು ಕಣ್ಣಾಡಿಸದ ವಿಷಯವೇ ಇಲ್ಲಾ. ಅಭಿನಂದನೆಗಳು. ಇನ್ನಷ್ಟು ಲೇಖನ ನಗಳು ಬರಲಿ

    6. Nicely written👌👍

      You are very correct, childhood is the eye opener to the world, hence it is so sweet and wonderful💐💐🙏🙏

    7. ಹಳ್ಳಿಯಿಂದ ಪೇಟೆಗೆ ಓದಲಿಕ್ಕೆ ಬರ್ತಿದ್ದ ಅಂದಿನ ಎಲ್ಲರಿಗೂ ಅವತ್ತಿನ ಬಸ್ಸಿನ ( ಈಗಿನವರು ಅನ್ನುವಂತೆ ಡಕೋಟ ಬಸ್) ಡ್ರೈವರ್, ಕಂಡಕ್ಟರ್, ಕ್ಲೀನರ್ ಇವರೆಲ್ಲ ಮನೆ ಸದಸ್ಯರು ಎನ್ನುವ ಭಾವನೆ, ನನಗೂ ಜ್ಞಾಪಕ ಬಂದು ಬಸವೇಶ್ವರ ಬಸ್ಸಿನ ರಾಮಣ್ಣ,ಶಿವಣ್ಣ ಹನುಮಂತಪ್ಪ,ಕಲ್ಯನಡುರ್ಗ ಎಂಜಿ ಬಸ್ಸಿನ ಸುಬ್ಬಣ್ಣ ತಾತ,ಇಲಾಹಿ ಬಸ್ಸಿನ ಸಾವಕಾರ ಎಲ್ಲರೂ ಸ್ಮೃತಿ ಪಟಲದಲ್ಲಿ ಹಾದು ಹೋದರು.ಒಳ್ಳೆ ಲೇಖನ ಕೊಟ್ಟಿರಿ ಮಂಜುನಾಥ್ ಸಾರ್,R.Huliraj advocate ಬಳ್ಳಾರಿ

    8. ಮಂಜು, ನಿನ್ನ ಬಾಲ್ಯದ ಸವಿನೆನಪುಗಳೊಂದಿಗೆ ಬರವಣಿಗೆಯ ಉತ್ತುಂಗ ಶಿಖರಕ್ಕೇರುತ್ತಿರುವ ನೀನು, ನಮ್ಮಲ್ಲೂ ಸಹ ಬಾಲ್ಯದ ಸವಿನೆನಪುಗಳು ಗರಿಗೆದರಿ ಪುಳಕಿತರಾಗುವಂತೆ ಬರೆದಿದ್ದೀಯ. ನಮ್ಮೂರಿನ ವೆಂಕಟೇಶ ಟೂರಿಂಗ್ ಸಿನಿಮಾ ಚಿತ್ರಮಂದಿರದಲ್ಲಿ ನಮಗೆ ಬಾಲ್ಯದಲ್ಲಿ ಆದ ಅನುಭವಗಳ ಬಗ್ಗೆ ಸವಿನೆನಪಿನ ಲೇಖನವು, ನನ್ನ ಬಾಲ್ಯದ ಕುಚಿಕು ಗಳೆಯ ವೀರೇಶ್ ಪ್ರಸಾದ ನ ಬರವಣಿಗೆಯಲ್ಲಿ ಹೊರಬಂದರೆ ತುಂಬಾ ಸ್ವಾರಸ್ಯಕರವಾಗಿರುತ್ತದೆಂದು ನನ್ನ ಅನಿಸಿಕೆ. 👍

    9. ಕದ್ದು ಮುಚ್ಚಿ ಫಿಲ್ಮ್ ನೋಡಿ ಚಿತ್ರ ದುರ್ಗ ದಿಂದ ವಾಪಸ್ಸು ಬರುತ್ತಿದ್ದೆವು ಹೆದರಿಕೆ ಯಿಂದ ನಿಮ್ಮ ಲೇಖನ ಓದಿ ಹಳೆಯ ದೆಲ್ಲಾ ನೆನಪಾಯಿತು ನಿಮ್ಮ ಬರವಣಿಗೆ ಶೈಲಿ ನನಗಂತೂ ತುಂಬಾ ಇಷ್ಟ ಅಭಿನಂದನೆಗಳು ಇನ್ನಷ್ಟು ಲೇಖನಗಳು ನಿಮ್ಮ ಕೈಯಲ್ಲಿ ಮೂಡಿ ಬರಲೆಂದು ಹಾಶಿಸುತ್ತೇನೆ

    10. Manju
      Thumba thumba chennagide.
      Bombatagi ide
      Beechi baravanigena nenupu madusuthade👏👏👍

    11. Anna nimma baravanige tumba chnnagide adrallu nimma nenapugalu prathiyaobbara hesaru prati ghatanegalu tumba sundaravagi barediddiri….
      Nanu saha kusuma Bus nalli hogi luggege tandiro nenpu agi santhosha aitu
      Khushi aitu

    12. “…ಆಗಿನ ರೀತಿ ಇಡೀ ಒಂದು ಕಾಲಘಟ್ಟದ ಮನಸ್ಸುಗಳನ್ನು ಸೆರೆಹಿಡಿದ ಹಾಗೆ ಸೆರೆಹಿಡಿಯುವಲ್ಲಿ ವಿಫಲವಾಗುತ್ತಿರುವುದು…”
      ಅಕ್ಷರಶಃ ಸತ್ಯ!!
      ಮತ್ತೆ ಮತ್ತೆ ಓದಲು ಸೆಳೆಯುವಂತ ಬರೆಹ!👌👌👌

    13. “…ಆಗಿನ ರೀತಿ ಇಡೀ ಒಂದು ಕಾಲಘಟ್ಟದ ಮನಸ್ಸುಗಳನ್ನು ಸೆರೆಹಿಡಿದ ಹಾಗೆ ಸೆರೆಹಿಡಿಯುವಲ್ಲಿ ವಿಫಲವಾಗುತ್ತಿರುವುದು…”
      ಅಕ್ಷರಶಃ ಸತ್ಯ!!
      ಮತ್ತೆ ಮತ್ತೆ ಓದಲು ಸೆಳೆಯುವಂತ ಬರೆಹ!👌👌👌

    14. ಲೇಖನ ತುಂಬಾ *ರಸವತ್ತಾಗಿ* ಮೂಡಿ ಬಂದಿದೆ.

      ಅಂದಿನ ಗ್ರಾಮ ಜೀವನವನ್ನು ಕಣ್ಣು ಮುಂದೆ ಕಾಣುವಂತೆ ಚಿತ್ರಿಸಿದ್ದೀರಿ…

      Just Fantastic journey of the village life of our childhood….

      Have a great time sir.
      🙏🙏🌹🌸

    15. Super sir… ನಿಮ್ಮ ಲೇಖನಗಳನ್ನ ಓದುವುದೇ ದೊಡ್ಡ ಖುಷಿ

    16. Very interesting and nicely composed. Your memory is excellent sir

    LEAVE A REPLY

    Please enter your comment!
    Please enter your name here

    Latest article

    error: Content is protected !!