ಸ್ವಾತಂತ್ರ್ಯದಿನದಂದು ಮನೆಗೆ ಬಂದ ವಿಶೇಷ ಅತಿಥಿ!

ಮುಂಜಾನೆ ಎದ್ದು ಬಾಗಿಲು ತೆರೆದಾಗ ಎದುರುಗೊಂಡ ಅಪರೂಪದ ಆ ಅತಿಥಿ ಯಾರು? ಅವರು ಮನೆಯೊಳಗೆ ಸದ್ದಿಲದೇ ಪ್ರವೇಶಿಸಿದ್ದು ಯಾಕಿರಬಹುದು? ಅವರ ಪೂರ್ವಪರವನ್ನು ವಿಚಾರಿಸಿದಾಗ ಸಿಕ್ಕಿದ ಮಾಹಿತಿಯಾದರು ಏನು..?

ಬೆಳ್ಳಂಬೆಳಿಗ್ಗೆ, ಹೊರಗೆ ಚಿಟಿಪಿಟಿ ಮಳೆ ಹನಿಯುತಿತ್ತು. ಬಾಗಿಲು ತೆರೆದಾಗ ದ್ವಾರದ ಬಳಿ ಅಪರೂಪದ ವಿಶೇಷ ಅತಿಥಿಯೊಬ್ಬರು ಎದುರಾದರು. ಬಾಗಿಲು ತೆರೆಯುತ್ತಿದ್ದಂತ್ತೆ ಸೀದಾ ಮನೆಯೊಳಗೆ ತಮ್ಮ ಪಾದವನ್ನು ಇಟ್ಟರು. ನೋಡೋಣ ಇವರು ಎಲ್ಲಿಗೆ ಹೋಗುತ್ತಾರೆಂದು ಸುಮ್ಮನೆ ಗಮನಿಸುತ್ತಾ ನಿಂತೆ. ಪಕ್ಕದಲ್ಲಿ ನಿಂತಿದ್ದರೂ ಅತಿಥಿಗೆ ನನ್ನ ಕಡೆ ಗಮನವೇ ಇರಲಿಲ್ಲ. ಅವರ ಪಾಡಿಗೆ ಅವರು ನಿಧಾ…….ನವಾಗಿ ಒಳಗೆ ಬರುವುದರಲ್ಲೇ ಇದ್ದರು. ಮನೆಗೆ ವಿಶೇಷ ಅತಿಥಿ ಬಂದಿದ್ದರಿಂದ ಯಾವುದಕ್ಕೂ ಇರಲಿ ಎಂದು ಅಲ್ಲೇ ಇದ್ದ ಮೊಬೈಲ್ ಫೋನ್ ತೆಗೆದುಕೊಂಡು ಒಂದೆರೆಡು ಫೋಟೊ ಕ್ಲಿಕ್ ಮಾಡಿದೆ. ನನ್ನ ಫೋಕಸ್ ಗೆ ಅತಿಥಿ ಒಂದು ಪೋಸ್ ಕೊಡಬಹುದಾ ಅಂದುಕೊಂಡೆ. ಇಲ್ಲ, ಅವರು ಅವರ ಪಾಡಿಗೆ ಸಾಗುವುದರಲ್ಲೇ ಮಗ್ನರಾಗಿದ್ದರು. “ಅಲ್ಲಾ, ಇವರು ಮನೆಯ ಹೊರಗೆ ಅಲ್ಲಿ ಇಲ್ಲಿ ಇರಬೇಕಾದವರು, ಒಳಗೆ ಏಕೆ ಬರುತ್ತಿದ್ದಾರೆಂದು” ಅರ್ಥವಾಗಲಿಲ್ಲ. ರಾತ್ರಿ ಇಡೀ ಮಳೆ ಸುರಿದಿದ್ದರಿಂದ ಹೊರಗೆ ತುಂಬಾ ತಂಡಿ ಇತ್ತು; ಮನೆಯೊಳಗೆ ಸ್ವಲ್ಪ ಹೊತ್ತು ಬೆಚ್ಚಗೆ ಇದ್ದು ಹೋಗೋಣ ಎಂದು ಆಗಮಿಸಿರಹುದೇ? ಕೊರೊನಾ ಹಾವಳಿ ತುಂಬಾ ಮಿತಿಮೀರಿದೆ. ‘ಯಾವುದಕ್ಕೂ ಮನೆ ಒಳಗಡೆ ಸೇಫ್ ಆಗಿ ಇರೋಣ’ ಎಂದು ಬಂದಿರಹುದೇ? ಅಥವಾ, ಇಂದು ಸ್ವಾತಂತ್ರ್ಯ ದಿನಾಚರಣೆ, ಶುಭಾಶಯ ಕೋರಲು ಬಂದಿರಲೂಬಹುದು.!

ವಿಶೇಷವೊ, ಅಪರೂಪವೋ, ಅತಿಥಿ, ಅತಿಥಿಯೇ; ಸತ್ಕಾರ ಮಾಡಲೇ ಬೇಕು. ಆದರೆ ಅವರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ, ಅವರ ಪಾಡಿಗೆ ಅವರು ಮನೆಯ ಹೊಸ್ತಿಲನ್ನು ದಾಟಿ ಒಳಗೆ ಧಾವಿಸುದರಲ್ಲೇ ಇದ್ದರು. ಬರುವಾಗ ಹಾಗೇ ‘ಕೈ ಬೀಸಿಕೊಂಡು’ ಬರಲಿಲ್ಲ. ಬೆನ್ನ ಮೇಲೆ ತನ್ನ ‘ಮನೆ’ಯನ್ನೇ ಹೊತ್ತು ಬಂದಿದ್ದರು..! ಇದು ಯಾವ ಅತಿಥಿಯಪ್ಪಾ ಮನೆಯನ್ನೇ ಹೊತ್ತು ತಂದಿರುವುದು? ಈ ಕೊರೊನಾ ಜೊತೆ ಕೆಲವು ಕಡೆ ನೆರೆ ಹಾವಳಿಯಿಂದಾಗಿ ಮನೆ ಮಠವೆಲ್ಲಾ ಮುಳುಗುತ್ತಿದೆ. ಅಯ್ಯೋ ಪಾಪಾ, ಮುಳುಗುತ್ತಿರುವ ಮನೆಯನ್ನೇ ಹೊತ್ತು ತಂದರೇ….!?

‘ಅತಿಥಿ’ಯನ್ನು ಗೌರವದಿಂದ ಕಳುಹಿಸಿ ಕೊಡಬೇಕಾದುದು ನಮ್ಮ ಧರ್ಮ. ಒಂದು ದಪ್ಪ ಪೇಪರ್ ಪೀಸೊಂದನ್ನು ತೆಗೆದುಕೊಂಡು ಅತಿಥಿಯ ಮೂತಿಯ ಹತ್ತಿರ ಇಟ್ಟೆ. “ತನ್ನನ್ನು ಕರೆದೊಯ್ಯಲು ಪಲ್ಲಕಿ ತಂದಿದ್ದಾರೆ” ಎಂದೆನಿಸಿಕೊಂಡಿತೊ ಏನೋ, ನಿರಾಕರಿಸದೇ ‘ಪಲ್ಲಕಿ’ಯನ್ನು ಹತ್ತಿದರು. ‘ಪಲ್ಲಕಿ’ಯನ್ನು ಅಲಂಕರಿಸಿದ ಮೇಲೆ ಅಂಗಳಕ್ಕೆ ತಂದೆ. ಅವರನ್ನು ನೆಲ್ಲಕ್ಕಿಳಿಸಲು ಒಂದೆರೆಡು ಬಾರಿ ‘ಪಲ್ಲಕಿ’ಯನ್ನು ಕೊಡವಿದೆ. ‘ಪಲ್ಲಕಿ’ಯಿಂದ ಇಳಿಯುವಂತೆ ಕಾಣಲಿಲ್ಲ. ಬದಲಾಗಿ ‘ನಾಚಿಕೆ’ಯಿಂದ ಮುದುಡಿಕೊಂಡು ತನ್ನ ‘ಅರಮನೆ’ಯೊಳಗೆ ಸೇರಿಕೊಂಡು ಅಲ್ಲಿಯೇ ಸ್ಥಬ್ಧವಾದರು. ‘ಪಲ್ಲಕಿ’ಯನ್ನು ಅಲ್ಲಿಯೇ ಅಂಗಳದಲ್ಲಿ ಬಿಟ್ಟುಬಂದೆ. ‘ಅತಿಥಿ ಏನು ಮಾಡುತ್ತಿರಬಹುದು’ ಎಂಬ ಕುತೂಹಲದಲ್ಲಿ ಹದಿನೈದು ನಿಮಿಷ ಬಿಟ್ಟು ಹೋಗಿ ನೋಡಿದೆ. ಆಗಲೇ ‘ಪಲ್ಲಕ್ಕಿ’ಯನ್ನಿಳಿದು ನೆಲದ ಮೇಲೆ ಒಂದು ಟ್ರ್ಯಾಕ್ ಎಳೆಯುತ್ತಾ ಮುಂದೆ ಸಾಗುತ್ತಿದ್ದರು. “ಸಾಕಪ್ಪ ಸಾಕು, ನೀನು ಬೇಡ, ನಿನ್ನ ಮನೆಯೂ ಬೇಡ, ನಿನ್ನ ಪಲ್ಲಕಿಯಂತೂ ಬೇಡವೇ ಬೇಡ, ನಾನು ನನ್ನ ಆವಾಸಸ್ಥಾನದಲ್ಲೇ ಸ್ವತಂತ್ರವಾಗಿ ಬದುಕುವೆ” ಎಂದು ಭಾಸವಾಗುವಂತೆ ಅತಿಥಿಯು ಹಿತ್ತಲ ಕಡೆ ಮುಖ ಮಾಡಿ ತೆವಳುತ್ತಾ ಸಾಗಿದರು.

ಈ ದಿನ ಮನೆಗೆ ಬಂದಿರುವ ಅತಿಥಿ ಬೇರೆ ಯಾರೂ ಅಲ್ಲ. ನಮ್ಮ ಬಸವ. ಐ ಮೀನ್, ಬಸವನ ಹುಳು. ಮುಂಗಾರು ಶುರುವಾದ ಮೇಲೆ ಪಶ್ಚಿಮ ಘಟ್ಟದ ತಪ್ಪಲಿನ ನಮ್ಮ ಸುತ್ತಲಿನ ಪರಿಸರದಲ್ಲಿ ಆಗಮಿಸುವ ಅತಿಥಿಗಳಲ್ಲಿ ಇವರೂ ಒಬ್ಬರು. ಹಿತ್ತಲಲ್ಲಿ ಇರಬೇಕಾದ ಬಸವನ ಹುಳು ಈ ದಿನ ಬೆಳಿಗ್ಗೆ ದಾರಿ ತಪ್ಪಿ ನಮ್ಮ ಮನೆಯೊಳಗೆ ಬಂದಿರಬೇಕು.

ಇಂತಿಪ್ಪ ವಿಶೇಷ ಅತಿಥಿಯ ವಿವರಗಳನ್ನು ಕಲೆಹಾಕಲು ಅಂತರ್ಜಾಲದೊಳಗೆ ಇಣುಕಿದಾಗ ಸಿಕ್ಕ ಮಾಹಿತಿಯಲ್ಲಿ ಕೆಲವು ಆಸಕ್ತಿದಾಯಕ ಅಂಶಗಳು ಇಂತಿವೆ.

 ಈ ವರೆಗೆ ಗುರುತಿಸಲ್ಪಟ್ಟ ಸುಮಾರು 1.5 ಲಕ್ಷ ಸಾಗರ, ಸಿಹಿನೀರು ಮತ್ತು ನೆಲ ಮೃದ್ವಂಗಿ ಪ್ರಭೇಧಗಳಲ್ಲಿ ಬಸವನ ಹುಳುಗಳು ಕೂಡ ಸೇರಿವೆ.

 ನೆಲದ ಮೇಲೆ ಜೀವಿಸುವುದರಿಂದ ಇದನ್ನು ಭೂ ಬಸವನ ಎಂಬ ಹೆಸರಿನಿಂದಲೂ ರೆಯಲಾಗುತ್ತದೆ.

 ಇಲಿ, ಹೆಗ್ಗಣ, ಪಕ್ಷಿಗಳು, ಹಾವು ಮತ್ತು ಇತರ ಸರೀಸೃಪಗಳಿಗೆ ಹಾಗೂ ಕೆಲವು ಅಕಶೇರುಕಗಳಿಗೆ ಭೂ ಬಸವನಗಳು ಆಹಾರ. ಈ ಪ್ರಾಣಿಗಳಿಗೆ ಇತರ ಪೋಷಕಾಂಶಗಳ ಜೊತೆಗೆ ಸಮೃದ್ಧವಾಗಿ ಕ್ಯಾಲ್ಸಿಯಂ ಪಡೆಯಲು ಬಸವನಹುಳು ಒಳ್ಳೆಯ ಆಹಾರ.

 ಇವುಗಳು ಉಭಯಲಿಂಗಿ, ಅರ್ಥಾತ್ ಗಂಡು ಮತ್ತು ಹೆಣ್ಣು ಎರಡೂ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿವೆ. ಆದರೆ, ಅವುಗಳು ಸ್ವತಂತ್ರವಾಗಿ ಸಂತಾನೋತ್ಪತ್ತಿ ಮಾಡುವುದು ವಿರಳ. ಒಂದು ಬಸವನ ತನ್ನ ಸಂಗಾತಿಯೊಂದಿಗೆ ಪ್ರಣಯವನ್ನು ಹೂಡುತ್ತದೆ. ನಂತರ ಅವೆರೆಡೂ ಮೊಟ್ಟೆಗಳನ್ನು ಇಡುತ್ತವೆ.

 ಬಸವನ ಹುಳುಗಳು ತಮ್ಮ ಮೃದುವಾದ ದೇಹವನ್ನು ಒಣಗದಂತೆ ನೋಡಿಕೊಳ್ಳಲು ಲೋಳೆಯನ್ನು ಸ್ರವಿಸುತ್ತಾ ಇರುತ್ತವೆ. ಪಾದದಿಂದಲೂ ಲೋಳೆಯನ್ನೂ ಸ್ರವಿಸುತ್ತಾ ತಾನು ನಡೆಯುವ ಹಾದಿ ಎಷ್ಟೇ ಒರಟು ಅಥವಾ ಹರಿತವಾಗಿದ್ದರೂ ಮುಂದೆ ಸಾಗಬಲ್ಲವು.

 ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ಭಾರತದಲ್ಲಿ ಈ ವರೆಗೆ ಸುಮಾರು 1129 ಬಸವನ ಹುಳುವಿನ ಪ್ರಭೇದಗಳನ್ನು ಗುರುತಿಸಲಾಗಿವೆ. ಅವುಗಳಲ್ಲಿ ಹೆಚ್ಚಿನವು ಸ್ಥಳೀಯ ಪ್ರಭೇದಗಳಾಗಿವೆ.

 ಬಸವನ ಹುಳು ತುಂಬಾ ಸಂವೇದನಾಶೀಲ ಪ್ರಾಣಿಯಾಗಿದ್ದು ಹವಾಮಾನ ಮತ್ತು ಪರಿಸರದಲ್ಲಿ ಉಂಟಾಗುವ ಬದಲಾವಣೆಗಳನ್ನು (ವೈಪರೀತ್ಯ) ತಿಳಿಯಲು ಒಂದು ಸೂಚಕವಾಗಿ (Ecological indicator) ಜೀವ-ಪರಿಸರ ವಿಜ್ಞಾನಿಗಳಿಗೆ ನೆರವಾಗುತ್ತವೆ.

 ಭೂ ಬಸವನಗಳಲ್ಲಿ ಕೆಲವು ಪ್ರಭೇದಗಳು, ಡೆರೋಸೆರಸ್ ಲೇವ್, ಲಾವಿಕೌಲಿ ಸಾಲ್ಟ್, ಮ್ಯಾಕೊಕ್ಲೈಮಸ್ ಇಂಡಿಕಾ, ಬೆಳೆಗಳನ್ನು ತಿಂದು ಹಾಳು ಮಾಡುವುದರಿಂದ ಅವುಗಳ ನಿಯಂತ್ರಣ ರೈತರಿಗೆ ಒಂದು ತಲೆನೋವು.

 ಬಸವನವು ಪಾಲಿಫಾಗಸ್ (ಬಹುಭಕ್ಷಕ), ಅಂದರೆ ಅವುಗಳು ನಾನಾ ತರದ ಸಸ್ಯಗಳ ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ, ಹಾಗೆಯೇ ಕೊಳೆಯುತ್ತಿರುವ ಸಾವಯವ ಪದಾರ್ಥಗಳನ್ನೂ ಜೀರ್ಣಿಸುತ್ತವೆ.

 ಭೂ ಬಸವನಗಳು ಆಹಾರ ಜಾಲದಲ್ಲಿ ಒಂದು ಪ್ರಮುಖ ಕೊಂಡಿಯಾಗಿದ್ದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

Photo by Krzysztof Niewolny on Unsplash

23 COMMENTS

  1. ಸೊಗಸಾದ,ವಿಶೇಷ ಮಾಹಿತಿಗನ್ನೊಳಗೊಂಡ ಲೇಖನ. ನನಗೆ ಯಾಕೋ ಅದರ ಗಾಂಭೀರ ನಡಿಗೆ, ಮನೆಯೊಳಗಿನ ನಿರ್ಭಯ ಪ್ರವೇಶ, ನೋಡಿದರೆ, ಅದರ ಜಾಗದಲ್ಲಿ ನಾವು ಮನೆಮಾಡಿಕೊಂಡು ಇರುವ ಹಾಗೆ, ಜಾಗದ ಯಜಮಾನ ತನ್ನ ಆಸ್ತಿಯ ನೆನಪಾಗಿ,ವೀಕ್ಷಣೆಗೆ ಬಂದಂತಹ ಅನುಭವ ಆಯ್ತು!

  2. ಅತಿಥಿ ಬಗ್ಗೆ ಅತ್ಯಂತ ಪ್ರೀತಿ ತೋರಿಸಿದ್ದೀರಿ ಜೊತೆಗೆ ನಿಮ್ಮ ಪರಿಸರ ಕಾಳಜಿಯ ಮುಖದ ಪರಿಚಯ ನಿಮ್ಮ ಮನೆ ಅತಿಥಿಯೊಂದಿಗೆ ನೀಡಿರುವುದು ತುಂಬಾ ಚನಾಗಿ ವಿವರಿಸಿದ್ದೀರ ತಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

    • ಮೌಲ್ಯಯುತ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

  3. ಬಸವನಹುಳು ನಮ್ಮ ಬಾಲ್ಯದ ಜೊತೆಗಾರ. ಆಟವಾಡುವಾಗ ಅನೇಕ ಬಾರಿ ಬಸವನಹುಳು ಹಿಡಿದು ಆಂಟೆನಾ ಮುಟ್ಟಿದ್ದು, ಒಳ ಸರಿದಾಗ ತಿರು ತಿರುವಿ ನೋಡಿದ್ದು ನೆನಪಾಗುತ್ತೆ. ನಿಧಾನವಾಗಿ ಚಲಿಸವ ಈ ಜೀವಿ ಅಪಾಯಕ್ಕೆ ಸಿಲುಕಬಾರದು ಎಂದು ಎತ್ತಿ ಹಿಡಿದು ಸುರಕ್ಷತಾ ಜಾಗಕ್ಕೆ ಬಿಡುತ್ತಿದ್ದೆವು. ಪ್ರಶಾಂತ ನಾಯ್ಕ್ ಸರ್ ಅವುಗಳ ವೈಜ್ಞಾನಿಕ ಅಧ್ಯಯನ ವನ್ನು ಲೇಖನದಲ್ಲಿ ಮನಮುಟ್ಟುವಂತೆ ದಾಖಲಿಸಿದ್ದಾರೆ.

  4. ನಮ್ಮ ಬಸವ ಅಂದರೆ ಬಸವನಹುಳು ಎಂದೇ ನಾಮಕರಣ ಮಾಡಿ ಅತಿಥಿಯನ್ನು ಬಹಳ ವಿಶೇಷವಾಗಿ ಸತ್ಕರಿಸಿ, ಅತಿಥಿಯ ವಿಳಾಸ,ಕುಲ, ಗೋತ್ರ, ಜೀವನಶ್ಯೆಲಿ, ಉಪಯುಕ್ತತೆ ಹಾಗೂ ಅನೇಕ ವ್ಯೆಜ್ಞಾನಿಕ ಮಾಹಿತಿಯನ್ನು ಬಹಳ ಸಲೀಸಾಗಿ ಆಡುಭಾಷೆಯಲ್ಲಿ ತಿಳಿಸಿಕೊಟ್ಟಿರುತ್ತಾರೆ. ಪ್ರಶಾಂತ್ ಸರ್ ಜೀವ ವಿಜ್ಞಾನದ ಮಾನವೀಯತೆಯ ಸೂಕ್ಮ ವಿಜ್ಞಾನಿ. ಇದನ್ನು ಇವರ ಪದ ಬಳಕೆಯಲ್ಲಿಯೇ ಕಾಣಬಹುದು.ಪ್ರತಿಯೊಂದರಲ್ಲೂ ಜೀವನ ಪ್ರೀತಿ ಕಾಣುತ್ತಾರೆ. ‘ಅತಿಥಿ ದೇವೋಭವ’ ಎಂಬ ಮಾತಿಗೆ ಪರ್ಯಾಯವಾಗಿದ್ದಾರೆ. ನಿಜ ಜೀವನದಲ್ಲೂ ಇವರು ಅತಿಥಿಗಳನ್ನು ಬಹಳ ಅರ್ಥಪೂರ್ಣವಾಗಿ ಆದರಿಸುತ್ತಾರೆ. ಇವರ ಮನೆಯ ಊಟ ಶುಚಿ-ರುಚಿಗೆ ಹೆಸರುವಾಸಿ.
    ಇನ್ನಷ್ಟು ಜೀವ ವ್ಯೆವಿಧ್ಯ ಅತಿಥಿಗಳು ಇವರ ಮನೆಗೆ ಬರಲಿ ಹಾಗೂ ಮುಂಜಾಗ್ತತೆ ಜೊತೆ ನಮಗೆ ಅವರೆಲ್ಲರ ವಿವರ ಸುಂದರ ಸರಳ ಆಡು ಭಾಷೆಯಲ್ಲಿ ಸಹಜವಾಗಿ ಮೂಡಿ ಬರಲಿ ಎಂದು ಹಾಶಿಸುತ್ತೇನೆ.

    • ಮೌಲ್ಯಯುತ ಪ್ರತಿಕ್ರಿಯೆಗೆ, ಆತ್ಮೀಯತೆಯ ನುಡಿಗಳಿಗೆ ತುಂಬಾ ಧನ್ಯವಾದಗಳು ಮೇಡಂ.

  5. ಸರ್ ನಿಮ್ಮ ಇಂದಿನ ಅತಿಥಿಯ ಬಗ್ಗೆ ಬರೆದ ವಿಚಾರ ಓದಿ ತುಂಬಾನೆ ಖುಷಿಯಾಯಿತು. ಎಲ್ಲವೂ ನಾವು ನೋಡುವ ದೃಷ್ಟಿಯಲ್ಲಿರುವುದು ಅನ್ನುವುದು ಅರಿವಾಯಿತು.
    ನಾವೆಲ್ಲಾ ಸ್ವಾತಂತ್ರೋತ್ಸವ ಮುಗಿಸಿಕೊಂಡು ಬಂದು ಕಾಲೇಜಿನ ಗೇಟಿನ ಪಕ್ಕದಲ್ಲಿ ಒಂದಷ್ಟು ಹೊತ್ತು ಮಾತಾನಾಡುತ್ತಾ ನಿಂತಿದ್ದಾಗ ಇಂತಹುದೇ ದೊಡ್ಡ ಗಾತ್ರದ ಬಸವನ ಹುಳು ತನ್ನ ಚಿಪ್ಪು ಸಮೇತ ರಸ್ತೆ ಬದಿಯಿಂದ ರಸ್ತೆಗೆ ಹೋಗುತ್ತಿದ್ದುದನ್ನು ನಾವೆಲ್ಲರೂ ಗಮನಿಸಿದೆವು. ನಾನದನ್ನು ಇನ್ನು ರಸ್ತೆಗೆ ಹೋಗಿ ವಾಹನದ ಅಡಿಗೆ ಬೀಳದಿರಲೆಂದು ಹತ್ತಿರದ ತೋಡಿಗೆ ಸರಿಸಿದೆ.ಎಲ್ಲರೂ ನನ್ನ ಆ ಕೆಲಸವನ್ನು ಮೆಚ್ಚಿದರು. ಆದರೆ ಆ ಬಗ್ಗೆ ಇಷ್ಟೊಂದು ಬರೆಯಬಹುದೆನ್ನುವುದಾಗಲಿ, ಇಷ್ಟು ಚಂದದ ಅಪರೂಪದ ಪೋಟೋ ತೆಗೆಯಬಹುದೆನ್ನುವ ಆಲೋಚನೆಯಾಗಲಿ ಮನಗೆ ಬರಲೇ ಇಲ್ಲ. ಅದಕ್ಕೇ ಹೇಳುವುದು’ ಎಲ್ಲವೂ ನೋಡುವ ದೃಷ್ಟಿಯಲ್ಲಿದೆ’ ಎಂದು.
    ಅಭಿನಂದನೆಗಳು ಸರ್.

  6. ನಾನಾಗಿದ್ರೆ ಕಸಬರಿಗೆ ತುದೀಗೆ ಹತ್ತಿಸ್ಕೊಂಡು ಹೊರಗೋಗಿ ಕೊಡ್ವಿ ಬರ್ತಿದ್ದೆ.ನೀವೇನ್ ಸ್ವಾಮಿ ಇಶ್ಟೊಂದೆಲ್ಲಾ ಇದ್ರೊಳ್ಗೆ ಕಂಡ್ಕೊಂಡ್ಬಿಟ್ಟೀದೀರಿ.ನಿಮ್ಗೆ ನೋಡೋಕೆ ಲೆನ್ಸು, ಮ್ಯಾಗ್ನಿಫೈಯರ್ರು,ಮೈಕ್ರೋಸ್ಕೋಪು,ಬೈನಾಕುಲರ್ರು,
    ಏನ್ಬೇಕಾದ್ರು ಕೊಂಡ್ಕೊಂಡ್ ಬಿಡ್ತೀರಾ.ನಾವು ಬಡವ್ರು ಸ್ವಾಮಿ.ನೀವ್ ಹೇಳಿದ್ದನ್ಕೇಳಿ ಖುಷಿ ಪಡೋರು.ಅಶ್ಟೇಯ.ನೀವ್ ಹೇಳೋರು.ನಾವ್ ಕೇಳೋರು.ಕೈಮುಗ್ದೆ ಸ್ವಾಮಿ.

    • ಸರ್, ತಮ್ಮ ವಿಭಿನ್ನ ಪ್ರತಿಕ್ರಿಯೆ ಚೆನ್ನಾಗಿದೆ. ಓದಿ ಖುಷಿಯಾಯಿತು

  7. Author naa noduva drasti kona tumba chennagide.. Parisara mathu parisarada noduve badukuva jeevigallannu preethisuva & gavravisuva gunna thumba doddadu .. Parisarada samatholanvu e rithi kaallagi hondiruva vekthigallinda maatra saadhya. Parisaradallina jeevigalla bagge kautuka & kaallagi thorisuva 1 utthama article… Thank you…

  8. ಸ್ವಾತಂತ್ರ್ಯ ದಿನ ಬಸವನ ಹುಳುವಿಗೂ ಸ್ವಾತಂತ್ರ್ಯ ಕೊಟ್ರಿ .ಉತ್ತಮ ಬರಹ ಧನ್ಯವಾದಗಳು ಪ್ರಶಾಂತ್

LEAVE A REPLY

Please enter your comment!
Please enter your name here