29.3 C
Karnataka
Sunday, September 22, 2024

    ಹೊಸ ನಾಯಕರ ಆಯ್ಕೆ ಕಾಂಗ್ರೆಸ್ ಗೆ ಸುಲಭದ ಹಾದಿಯಲ್ಲ

    Must read

    ಹೊಸ ಅಧ್ಯಕ್ಷರನ್ನು ಹುಡುಕಿಕೊಳ್ಳುವಂತೆ ಸೋನಿಯಾ ಗಾಂಧೀ ಸೂಚಿಸಿದ್ದಾರೆಂಬ ಸುದ್ದಿ ಆ ಪಕ್ಷದಲ್ಲಿ ಆಂತರಿಕ ತಳಮಳ ಹುಟ್ಟು ಹಾಕಿದೆ.23 ಕಾಂಗ್ರೆಸ್ ನಾಯಕರು ಅಮೂಲಾಗ್ರ ಬದಲಾವಣೆಗೆ ಒತ್ತಾಯಿಸಿ ಬರೆದ ಪತ್ರ ಇದಕ್ಕೆ ಕಾರಣ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಗಾಂಧೀ ಕುಟುಂಬ ಹೊರತು ಪಡಿಸಿ ಉಳಿದವರನ್ನು ಅಧ್ಯಕ್ಷರನ್ನಾಗಿ ಕಾಣುವುದು ಸುಲಭವೆ ಎಂಬುದು ಈಗಿನ ಪ್ರಶ್ನೆ.

    2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕೂಡಲೇ ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿತ್ತು. ಆದರೆ ವಸ್ತುಸ್ಥಿತಿ ಹಾಗಾಗಿರಲಿಲ್ಲ. ನೆಹರು ಕುಟುಂಬದ ಕುಡಿಗಳ ಹಿಂದೆ ಬಿದ್ದಿದ್ದ ಆಪ್ತ ಸಮೂಹ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.

    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಕಾಂಗ್ರೆಸ್ ನಲ್ಲಿ ನಿರ್ವಾತ ವಾತಾವರಣ ನಿರ್ಮಾಣವಾಗಿತ್ತು. ಅದನ್ನು ಸಮರ್ಥವಾಗಿ ತುಂಬಿದವರು ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾಯರು. ಪಕ್ಷಕ್ಕೆ ಒಂದು ರೀತಿಯಲ್ಲಿ ಗೆಲುವನ್ನೇ ತಂದುಕೊಟ್ಟು ಅಲ್ಪ ಮತವಿದ್ದರೂ ಐದು ವರ್ಷ ತುಟಿ ಬಿಚ್ಚದೆ ಆಡಳಿತ ಮಾಡಿದವರು.

    ಹೊಸ ಚಿಂತನೆ
    ಜತೆಗೆ ಜಾಗತೀಕರಣಕ್ಕೆ ಭಾರತವನ್ನು ತೆರೆದುಕೊಳ್ಳುವಂತೆ ಮಾಡಿ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಭಾರತವನ್ನು ಸೃಷ್ಟಿಸುವಲ್ಲಿ ಪಿವಿಎನ್-ಮನಮೋಹನ್ ಸಿಂಗ್ ಜೋಡಿ ಕೆಲಸ ಮಾಡಿತು. ಆದರೆ ಏನು ಲಾಭ ? ಕಾಂಗ್ರೆಸ್ ನ ಹಳೆ ತಲೆಗಳು (ಬೇಕೆಂದೇ ಹಳೆ ಹುಲಿಗಳು ಶಬ್ದ ಬಳಕೆ ಮಾಡಿಲ್ಲ) ಮತ್ತೆ ಲಾಭದ ಲಾಬಿಯನ್ನು ಹುಟ್ಟು ಹಾಕಿದವು. ಹೀಗಾಗಿ ಕಾಂಗ್ರೆಸ್ ಗಾಧಿ ಮತ್ತೆ ನೆಹರು ಕುಟುಂಬಕ್ಕೆ ಒಲಿದು ಬಂತು, ಮತ್ತು ಅದರಲ್ಲಿ ಸೋನಿಯಾ ಗಾಂಧಿಯವರು ತಾವು ಎಷ್ಟು ಸಮರ್ಥರು ಎಂಬುದನ್ನು ಎರಡು ಅವಧಿಯಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರುವ ಮೂಲಕ ತೋರಿಸಿಕೊಟ್ಟರು. ನಾನಾ ಪಕ್ಷಗಳನ್ನು ಒಗ್ಗೂಡಿಸಿಕೊಂಡರೂ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ಎದುರಾಳಿ ಪಕ್ಷಕ್ಕೆ ಎದ್ದೇಳಲು ಸಾಕಷ್ಟು ವರ್ಷಗಳೇ ಬೇಕಾದ ರೀತಿ ಮಾಡಿದರು ಎಂಬುದು ನಿಜ.

    ಈಗಿರುವ ಪ್ರಶ್ನೆ

    ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಹಾಗೂ ಮಾತನಾಡಬಹುದು. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ಧ ಶತಮಾನದಷ್ಟು ಹಳೆಯ ಕಾಂಗ್ರೆಸ್ ನಲ್ಲೇ ಆಂತರಿಕ ಪ್ರಜಾಪ್ರಭುತ್ವ ಇದೆಯಾ ಎಂಬುದು.
    ಮಹಾತ್ಮಾ ಗಾಂಧೀಜಿಯವರ ಮಾತು ಇಲ್ಲಿ ಸ್ಮರಣಾರ್ಹ. “ಪ್ರಜಾತಂತ್ರದ ಸ್ಫೂರ್ತಿ ಎಂಬುದು ಎಲ್ಲಾ ನೀತಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ತಾಂತ್ರಿಕ ವಿಷಯವಲ್ಲ. ಇದು ಎಲ್ಲರಿಗೂ ಮಾತನಾಡುವ ಹಕ್ಕು ಕೊಡುವ ಸ್ವಾತಂತ್ರ್ಯ. ಇದು ಹೃದಯದಲ್ಲಿ ಬದಲಾವಣೆಯನ್ನು ತರುವಂತಹದ್ದಾಗಿರಬೇಕು”.
    ಆದರೆ ಕಾಂಗ್ರೆಸ್ ನಲ್ಲಿ ಈಗ ಅದು ಇದೆಯಾ ? ಇಲ್ಲ ಎಂದೇ ಹೇಳಬೇಕಾಗುತ್ತದೆ.

    ಈಗೇನೋ 23-25 ಹಿರಿಯ ನಾಯಕರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು, ಹೊಸ ಅಧ್ಯಕ್ಷರನ್ನು ಪ್ರಜಾತಂತ್ರ ರೀತಿಯಲ್ಲಿ ಅಂದರೆ ಮತದಾನದ ಮೂಲಕ ಆಯ್ಕೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸುಲಭದ ದಾರಿಯಲ್ಲ

    ಒಂದು ವೇಳೆ, ಇಷ್ಟು ನಾಯಕರ ಮನವಿಗೆ 74 ವರ್ಷ ವಯಸ್ಸಾಗಿರುವ ಸೋನಿಯಾ ಗಾಂಧಿ ಮಣೆ ಹಾಕಿದರೂ, ಹುಟ್ಟಿನಿಂದಲೇ ನೆಹರು ಕುಟುಂಬವನನ್ನು ಓಲೈಸುತ್ತಲೇ ಬದುಕು ಕಟ್ಟಿಕೊಂಡ, ಸಕಲ ಸೌಭಾಗ್ಯ ಅನುಭವಿಸಿದ ಒಂದು ವರ್ಗ ಇದನ್ನು ಒಪ್ಪುತ್ತದೆಯಾ ? ಒಪ್ಪಿದರೂ ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಹೇಗೆ ಹೊಸಕಿ ಹಾಕಬೇಕು ಎಂಬ ತಂತ್ರವನ್ನು ರೂಪಿಸದಿರಲು ಸಾಧ್ಯವಿಲ್ಲವೇ ? ಎಂಬೆಲ್ಲಾ ಪ್ರಶ್ನೆಗಳ ಸರಣಿ ಉದ್ಭವಿಸುತ್ತಲೇ ಹೋಗುತ್ತದೆ.

    ವಂಶಾಡಳಿತದ ಸರಣಿ
    ಇಲ್ಲಿ ಇನ್ನೊಂದು ವಿಷಯ ತುಂಬಾ ಮುಖ್ಯವಾಗುತ್ತದೆ. ಕರ್ನಾಟಕ ಕಾಂಗ್ರೆಸ್ ನ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ಸ್ಥಾಪನೆಗೊಳ್ಳಲು ಎಷ್ಟು ಮೀನ-ಮೇಷ ಎಣಿಸಬೇಕಾಯಿತು ? ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಈ ಮಟ್ಟಕ್ಕೆ ಅವರು ಏರಬೇಕಾದರೆ ಅದಕ್ಕೆ ಪರೋಕ್ಷವಾಗಿ ಸಾಕಷ್ಟು ವಿರೋಧವನ್ನು ಎದುರಿಸಲೇಬೇಕಾಯಿತು. ಕೊನೆಗಂತೂ ಕೆಪಿಸಿಸಿ ಅಧ್ಯಕ್ಷರಾದರು ಬಿಡಿ, ಆದರೆ, ಕಾಂಗ್ರೆಸ್ ನ ಪ್ರತಿಯೊಂದು ಹಂತವನ್ನು ಗಮನಿಸಿದರೂ ಅಲ್ಲಿ ಇರುವುದು ವಂಶಾಡಳಿತ (ಡೈನೆಸ್ಟಿ ಪಾಲಿಟಿಕ್ಸ್) ರಾಜಕೀಯ. ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಜ್ಯೋತಿರಾಧಿತ್ಯ ಸಿಂಧ್ಯಾ ಹೀಗೆ ಪಟ್ಟಿ ಮಾಡಿದರೆ ಎಲ್ಲರೂ ರಾಜಕೀಯ ಹಿನ್ನೆಲೆಯುಳ್ಳ ಅಪ್ಪ-ಅಮ್ಮನನ್ನುಹೊಂದಿದವರೇ ಅಲ್ಲವೇ ?

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!