20.6 C
Karnataka
Sunday, September 22, 2024

    ‘ಕಪ್ಪು ಸೈನಿಕರ’ ಅಮೋಘ ಪರಿಸರ ಸೇವೆ

    Must read

    .

    ಹಸಿ ಕಸದಿಂದ ಲವಣಾಂಶಭರಿತ ಗೊಬ್ಬರವನ್ನು ಉತ್ಪಾದಿಸಲು ಯಾವುದೇ ಯಂತ್ರ, ವಿದ್ಯುತ್, ಇಂಧನ, ಬಂಡವಾಳ ಹೂಡಿಕೆಯ ಅವಶ್ಯಕತೆ ಇಲ್ಲ. ಮನೆಯಲ್ಲೇ ‘ಕಪ್ಪು ಸೈನಿಕರಿಗೆ’ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ಸಾಕು..! ನಿಮ್ಮ ಕೆಲಸ ಸಲೀಸು

    ಹೆಸರಿಗೆ ತಕ್ಕಂತೆ ಆ ಸೈನಿಕರು ನೋಡಲು ಕಪ್ಪು ಬಣ್ಣ. ಆದರೆ ಅವರು ಇತರ ಸೈನಿಕರುಗಳಂತೆ ಗನ್ ಹಿಡಿದು ದೇಶ ಅಥವಾ ದೇಶದ ಗಡಿಯನ್ನು ರಕ್ಷಿಸುವ ಕೆಲಸ ನಿರ್ವಹಿಸುವುದಿಲ್ಲ. ಆದರೆ ದೇಶ, ಗಡಿ, ನಾಡು ಯಾವುದರ ಸೀಮೆಗೂ ಒಳಪಡದೇ ನಿಸರ್ಗದಲ್ಲಿ ಒಂದು ಅಪೂರ್ವವಾದ ಸೇವೆಯನ್ನು ನೀಡುತ್ತಾರೆ. ಆ ಸೇವೆಯು ಪರಿಸರಕ್ಕೆ ಪೂರಕವಾಗಿರುವುದರಿಂದ ಪರಿಸರಸ್ನೇಹಿ ಸೇವೆ ಅಂತ ಹೇಳಬಹುದು.

    ತಮ್ಮದೇ ಅದ ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಈ ಕಪ್ಪು ಸೈನಿಕರು ಸ್ವಚ್ಛಂದವಾಗಿ ಗಾಳಿಯಲ್ಲಿ ಹಾರಾಡಬಲ್ಲರು. ಹಾರಾಡಲು ರೆಕ್ಕೆ ಇರಬೇಕಲ್ಲವೇ? ತಮ್ಮಲ್ಲಿರುವ ಒಂದು ಜೊತೆ ರೆಕ್ಕೆಯ ಸಹಾಯದಿಂದ ಈ ಕಪ್ಪು ಸೈನಿಕರು
    ಗಾಳಿಯಲ್ಲಿ ‘ ಝು೦ಯ್’ ಎಂದು ಹಾರಾಡುವರು. ಇದು ಯಾವ ಸೈನಿಕರಪ್ಪ ರೆಕ್ಕೆ ಬಿಚ್ಚಿ ಗಾಳಿಯಲ್ಲಿ ಹಾರಾಡುವವರು ಎಂದು ಗೊಂದಲಕ್ಕೊಳಗಾಗದಿರಿ. ಇಲ್ಲಿ ನಾವು ಮಾತಾನಾಡುತ್ತಿರುವ ಆ ಸೈನಿಕರು ಮತ್ತ್ಯಾರೂ ಅಲ್ಲ, ಒಂದು ಕೀಟ.

    ‘ಓ , ಕೀಟವಾ…?’ ಎಂದು
    ಮೂಗು ಮುರಿದು ಅಸಡ್ಡೆ ಮಾಡುವ ಕೀಟ ಇದಲ್ಲ. ಅದರ ಸೇವೆ ಮತ್ತು ಅದರಿಂದ ನಮಗಾಗುವ ಪ್ರಯೋಜನಗಳನ್ನು ನೋಡಿ ಒಂದು
    ದೊಡ್ಡ ಸಲಾಮ್ ಹೊಡೆಯಬೇಕಾದ ಕೀಟ ಇದು. ಅದಕ್ಕೆ ಇಂಗ್ಲಿಷ್ ಭಾಷೆಯ ಚೆಂದದ ಹೆಸರು ‘ಬ್ಲಾಕ್ ಸೋಲ್ಜಿಯರ್ ಫ್ಲೈ’;
    ಕನ್ನಡದಲ್ಲಿ ‘ಕಪ್ಪು ಸೈನಿಕ ಕೀಟ’ ಅಥವಾ ‘ಕಪ್ಪು ಸೈನಿಕ ನೊಣ’ ಅಂತ ಹೆಸರಿಸಬಹುದು.

    ನೊಣ ತರವೇ ಕಾಣುವ ಕೀಟ

    ನೋಡಲು ನೊಣ ತರವೇ ಕಾಣುವ ಈ ಕೀಟ
    ಸುಮಾರು ೧.೬ ಸೆಂ. ಮೀ. ಉದ್ದವಿದ್ದು ಗಾತ್ರದಲ್ಲಿ ನೊಣಗಿಂತ ಸ್ವಲ್ಪ ದೊಡ್ಡದಾಗಿದೆ. ೧೭೫೮ ರಲ್ಲಿ ಅಧುನಿಕ ವರ್ಗೀಕರಣಶಾಸ್ತ್ರದ
    (Taxonomy) ಪಿತಾಮಹ ಕಾರ್ಲ್ ಲಿನ್ನೆಯಸ್ ಅವರು ಇದಕ್ಕೆ ನೀಡಿರುವ ವೈಜ್ಞಾನಿಕ ಹೆಸರು ಹರ್ಮೆಶಿಯ ಇಲ್ಯೂಸೆನ್ಸ್ (Hermetia
    illucens).

    ಇತರ ಕೆಲವು ಕೀಟಗಳಂತೆ ಇದು ಯಾವುದೇ ಬೆಳೆಗಳನ್ನು ತಿಂದು ಹಾಳು ಮಾಡುವುದಿಲ್ಲ ಅಥವಾ ನೊಣ, ಸೊಳ್ಳೆಗಳಂತೆ ಯಾವುದೇ
    ಸಾಂಕ್ರಾಮಿಕ ಕಾಯಿಲೆಯನ್ನೂ ಹಬ್ಬುವುದಿಲ್ಲ. ಬ್ಲಾಕ್ ಸೋಲ್ಜಿಯರ್ ಫ್ಲೈ ನಿಸರ್ಗಕ್ಕೆ ಮತ್ತು ಮಾನವನಿಗೆ ಉಪಕಾರ ಮಾಡುವ
    ಒಂದು ಪರೋಪಕಾರಿ ಜೀವಿ.

    ಕಪ್ಪು ಸೈನಿಕ ಕೀಟವು ನಿಸರ್ಗಕ್ಕೆ , ಸಮಾಜಕ್ಕೆ ಹೇಗೆ ಉಪಕಾರ ಮಾಡುತ್ತದೆ ?

    ಜಗತ್ತಿನಾದ್ಯಂತ ಅದರಲ್ಲಿಯೂ ಭಾರತದ ನಗರಗಳಲ್ಲಿ ಇರುವ ಅನೇಕ ಜ್ವಲಂತ ಸಮಸ್ಯೆಗಳಲ್ಲಿ ಒಂದು ತ್ಯಾಜ್ಯ ನಿರ್ವಹಣೆ. ಅರ್ಬನ್ ಇಂಡಿಯಾ
    ವಿಶ್ವದ 3 ನೇ ಅತಿದೊಡ್ಡ ಕಸ ಉತ್ಪಾದಕ ರಾಷ್ಟ್ರವಾಗಿದೆ ಮತ್ತು 2050 ರ ಹೊತ್ತಿಗೆ 436 ಮಿಲಿಯನ್ ಟನ್ಗಳಷ್ಟು ತ್ಯಾಜ್ಯವು
    ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಹೇಳಿದೆ. ತ್ಯಾಜ್ಯ ನಿರ್ವಹಣೆ ಒಂದು ಸಮಸ್ಯೆ ಅನ್ನುವುದರ ಬದಲು ಒಂದು ಸವಾಲು
    ಎಂದು ಪರಿಗಣಿಸಬಹುದು. ಈ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ಕಪ್ಪು ಸೈನಿಕ ಕೀಟವು ನಮಗೆ ಸಹಕರಿಸುತ್ತದೆ.

    ಮೊದಲು ಸಮಸ್ಯೆಯ ಮೂಲವನ್ನು ನೋಡೋಣ. ಕಸ ನಿರ್ವಹಣೆಯಲ್ಲಿ ಮುಖ್ಯ ಸಮಸ್ಯೆ ಇರುವುದು ಹಸಿ ಕಸ ಮತ್ತು ಒಣ
    ಕಸಗಳನ್ನು ಒಟ್ಟಿಗೆ ಹಾಕುವುದು.

    ಹಸಿ ಕಸ ಸಾವಯವ ಅಂಶಗಳಿಂದ ಕೂಡಿರುವುದರಿಂದ ಅದು ಜೈವಿಕ ವಿಘಟನೆಗೆ ಒಳಪಟ್ಟು ಅದರಲ್ಲಿರುವ ಪೋಷಕಾಂಶಗಳು ಮರಳಿ ಮಣ್ಣಿಗೆ ಸೇರುತ್ತವೆ. ಹಣ್ಣು-ತರಕಾರಿ ಸಿಪ್ಪೆಗಳು, ತಿಂದುಳಿದ ಆಹಾರ ಪದಾರ್ಥಗಳು, ಒಡೆದ ಮೊಟ್ಟೆಯ ಚಿಪ್ಪು, ಮೀನು, ಚಿಕನ್, ಮಟನ್ ನಾನ್ ವೆಜ್ ವೇಸ್ಟ್, ಇತ್ತ್ಯಾದಿ ಅಡುಗೆ ಮನೆಯ ಹಸಿ ಕಸಗಳನ್ನು, ಹಾಗೂ ಖಾಲಿಯಾದ
    ಟೂಥ್ ಪೇಸ್ಟ್ ಟ್ಯೂಬ್, ಔಷಧಿ, ಶಾಂಪೂ ಬಾಟಲ್ ಗಳು ಮೊಂಡಾದ ರೇಜರ್, ಒಡೆದು ಹೋದ ಗ್ಲಾಸು, ಪವರ್ ಖಾಲಿಯಾದ
    ಬ್ಯಾಟರಿ ಸೆಲ್, ಹಳೆಯ ಸ್ವಿಚ್, ವಯರ್ ಮುಂತಾದ ಇಲೆಕ್ಟ್ರಾನಿಕ್, ಇಲೆಕ್ಟ್ರಿಕ್ ವೇಸ್ಟ್ (ಇ-ತ್ಯಾಜ್ಯಗಳು), ಚಾಕೊಲೇಟ್ ರಾಪರ್,
    ಪ್ಲಾಸ್ಟಿಕ್ ಕೈಚೀಲ, ಹಾಲಿನ ಪ್ಯಾಕೆಟ್, ಹತ್ತು ಹಲವಾರು ದೈನಂದಿನ ಜೀವನದಲ್ಲಿ ಉತ್ಪತ್ತಿಯಾಗುವ ಗಟ್ಟಿ ಕಸಗಳನ್ನು ಒಂದೇ ಕಸದ
    ಬುಟ್ಟಿಯಲ್ಲಿ ಹಾಕುವುದೇ ಘನ ತ್ಯಾಜ್ಯ ನಿರ್ವಹಣೆಯ ವಿಫಲತೆಗೆ ಮೂಲ ಕಾರಣ.

    ಅವುಗಳನ್ನೆಲ್ಲಾ ಒಂದೇ ಕಸದ ಬುಟ್ಟಿಯಲ್ಲಿ
    ಹಾಕುವ ಬದಲು ಕನಿಷ್ಠ ಪಕ್ಷ ಮನೆಯಲ್ಲಿ ಎರಡು ಕಸದ ಬುಟ್ಟಿಗಳನ್ನು, ಒಂದು ಹಸಿ ಕಸಕ್ಕೆ ಇನ್ನೊಂದು ಒಣ ಕಸಕ್ಕೆ ಬಳಸಿದರೆ, ತ್ಯಾಜ್ಯ
    ನಿರ್ವಹಣೆಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ. ನಾವು ಬಳಸಿ ಎಸೆಯುವ ಪ್ರತಿಯೊಂದು ವಸ್ತುವೂ ಕೂಡ ಮರುಚಕ್ರೀರಣಗೊಳಿಸಬಹುದು. ಹೀಗೆ ಮಾಡಲು ಅದಕ್ಕೆ ನಾವು ಪೂರಕವಾಗಿ ಸ್ಪಂದಿಸಬೇಕು.

    ಏನು ಮಾಡಬೇಕು ?

    ಹಸಿ ಕಸವನ್ನು ರಿ ಸೈಕಲ್ ಮಾಡಲು ಏನು ಮಾಡಬೇಕು ? ನಾವೇನು ಅಂತಹ ದೊಡ್ಡ ಸಾಧನೆ ಮಾಡಬೇಕಾಗಿಲ್ಲ. ಎಲ್ಲವನ್ನು ‘ಕಪ್ಪು ಸೈನಿಕರು’ ಮಾಡುತ್ತಾರೆ. ನಾವು ಮಾಡಬೇಕಾಗಿರುವುದು ಇಷ್ಟೇ. ಹಸಿ ಕಸವನ್ನು ರಸವನ್ನಾಗಿ ಪರಿವರ್ತಿಸುವ ಕಪ್ಪು
    ಸೈನಿಕರುಗಳಿಗೆ ಮನೆಯಲ್ಲೇ ಅಂದರೆ ಮನೆಯ ವರಾಂಡ ಅಥವಾ ಹಿತ್ತಲಲ್ಲೇ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಡುವುದು.

    ಈ ನಿಟ್ಟಿನಲ್ಲಿ ಒಂದು ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ . ಇದರ ಸಂಚಾಲಕರಾದ ಶ್ರೀ ಸ್ವಾಮೀ ಏಕಗಮ್ಯಾನಂದಜೀ ಮಹಾರಾಜ್ ಅವರು ಹೇಳುವಂತೆ “ಅಡುಗೆ ಮನೆಯ ಕಸದಿಂದ ಲವಣಾಂಶಭರಿತ ಗೊಬ್ಬರವನ್ನು ಉತ್ಪಾದಿಸಲು ಯಾವುದೇ ಯಂತ್ರ, ವಿದ್ಯುತ್, ಇಂಧನ, ಬಂಡವಾಳ ಹೂಡಿಕೆಯ ಅವಶ್ಯಕತೆ ಇಲ್ಲ”. ಬೇಕಿರುವುದು ಮೂರೇ
    ಮೂರು ಮಣ್ಣಿನ ಮಡಿಕೆ ಮತ್ತು ಆ ಮಡಿಕೆಗಳನ್ನು ಒಂದರ ಮೇಲೊಂದು ಇಡಲು ಒಂದು ಅಡಿಯಷ್ಟು ಸ್ಥಳವಕಾಶ, ಜೊತೆಗೆ ಒಂದಿಷ್ಟು ತೆಂಗಿನ ಸಿಪ್ಪೆಯ ನಾರು.

    ಮರಿಹುಳುಗಳು ಅಂದರೆ ಬ್ಲಾಕ್ ಸೋಲ್ಜಿಯರ್ ಬಾಲ್ಯಾವಸ್ಥೆಯಲ್ಲಿ ಹಸಿಕಸವನ್ನು ಆಹಾರವಾಗಿ ತಿಂದು ಸಸ್ಯಗಳ ಬೆಳವಣಿಗೆಗೆ ಮತ್ತು ಅತ್ಯುತ್ತಮ ಇಳುವರಿಗೆ ಪೋಷಕಾಂಶಭರಿತ ಗೊಬ್ಬರವನ್ನು ನೀಡುತ್ತವೆ. ಮಡಿಕೆಯನ್ನು ಬಳಸುವುದರಿಂದ ಇದನ್ನು ‘ಮಡಿಕೆ ಗೊಬ್ಬರ’ ಎಂದು ಪ್ರಚಲಿತವಾಗಿದೆ. ಕಪ್ಪು ಸೈನಿಕ ಕೀಟದ ಮರಿಹುಳುಗಳು (ಮ್ಯಾಗ್ಗೊಟ್) ಅಡುಗೆ ಮನೆಯ ತ್ಯಾಜ್ಯವನ್ನು ತಿಂದು ಗೊಬ್ಬರ
    ಮಾಡುವುದರಿಂದ ಇದನ್ನು ‘ಮ್ಯಾಗ್ಗೊಟ್ ಗೊಬ್ಬರ’ ಅಥವಾ ‘ಗ್ರಬ್ ಕಾಂಪೋಸ್ಟಿಂಗ್’ ಅಂತಲೂ ಕರೆಯುತ್ತಾರೆ.

    ಈ ಗೊಬ್ಬರ ಹೇಗೆ ಮಾಡುವುದು? ಮಡಿಕೆ ಹೇಗಿರಬೇಕು? ಮಣ್ಣಿನ ಮಡಿಕೆಯೇ ಏಕೆ ಬೇಕು? ನಾನ್ ವೆಜ್ ವೇಸ್ಟ್ ಹಾಕಬಹುದೇ? ವಾಸನೆ ಬರುತ್ತದೆಯೇ? ತೆಂಗಿನ ಸಿಪ್ಪೆಯ ನಾರಿನ ಮಹತ್ವ ಏನು? ‘ಕಪ್ಪು ಸೈನಿಕರನ್ನು’ ಹುಡುಕಿಕೊಂಡು ಎಲ್ಲಿಗೆ ಹೋಗಬೇಕು? ಗೊಬ್ಬರದಲ್ಲಿ ಯಾವೆಲ್ಲ ಲವಣಾಂಶಗಳು ಇವೆ? ಇಂಥಹ ಹತ್ತು ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿವೆಯೇ?
    ಹಾಗಿದ್ದರೆ, ಮಡಿಕೆ ಗೊಬ್ಬರ ತಯಾರಿಕೆಯ ಬಗ್ಗೆ ಆಸಕ್ತಿ, ಕುತೂಹಲ ನಿಮ್ಮಲ್ಲಿ ಮೂಡಿದೆ ಅಂತ ಅರ್ಥ.

    ವೆಬ್ – ಕಾರ್ಯಾಗಾರ

    ಈ ಪ್ರಶ್ನೆಗಳಿಗೆ ಉತ್ತರವಾಗಿ ಮಂಗಳೂರು ವಿದ್ಯಾನಿಲಯ, ‘ವಿಜಯ ಬ್ಯಾಂಕ್ ಪೀಠ – ಪರಿಸರ ವಿಜ್ಞಾನ ಮತ್ತು ಪರಿಸರ’ ಇದರ ಅಡಿಯಲ್ಲಿ ರಾಮಕೃಷ್ಣ
    ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಸಹಭಾಗಿತ್ವದೊಂದಿಗೆ ‘ಪರಿಸರ ಸ್ನೇಹಿ ಮಡಿಕೆ ಗೊಬ್ಬರ ತಯಾರಿಕೆ ಹಾಗೂ ವಾಣಿಜ್ಯ ಬೆಳೆಗಳ
    ಕಸಿ ಕಟ್ಟುವಿಕೆ ಮತ್ತು ಕೃಷಿ’ ಕುರಿತು ವೆಬ್ – ಕಾರ್ಯಾಗಾರ ಒಂದನ್ನು ಇತ್ತೀಚೆಗೆ ಮಂಗಳಗಂಗೋತ್ರಿ ಪ್ರೊ. ಯು. ಆರ್. ರಾವ್
    ಸಭಾಂಗಣದಲ್ಲಿ ಆಯೋಜಿಸಲಾಯಿತು.

    “ಪ್ರಕೃತಿಯಲ್ಲಿ ತ್ಯಾಜ್ಯ ಎಂಬುದು ಯಾವುದೂ ಇಲ್ಲ; ಕಸದಿಂದ ರಸ ಎಂಬ ನಾಣ್ಣುಡಿಯಂತೆ
    ಕಸವನ್ನು ಅಮೂಲ್ಯ ಉತ್ಪನ್ನಗಳಾಗಿ ಪರಿವರ್ತಿಸಬಹುದು. ಈ ಹಿನ್ನೆಲೆಯಲ್ಲಿ ಮಡಿಕೆ ಗೊಬ್ಬರವು ವಿಕೇಂದ್ರೀಕೃತ ಸಾವಯವ ತ್ಯಾಜ್ಯ
    ನಿರ್ವಹಣೆಗೆ ಒಂದು ಸುಲಭ ವಿಧಾನವಾಗಿದೆ” ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಾಗಾರದ ಅಧ್ಯಕ್ಷೀಯ ಭಾಷಣದಲ್ಲಿ ಆಡಿದ ಮಾತು ಉಲ್ಲೇಖನೀಯ.

    ಶ್ರೀ ಸ್ವಾಮಿ ಏಕಗಮ್ಯಾನಂದಜೀ ಮಹಾರಾಜ್ ಅವರ ಸಮರ್ಥ ನಾಯಕತ್ವದಲ್ಲಿ ಕಳೆದ 6-7 ವರ್ಷಗಳಿಂದ ರಾಮಕೃಷ್ಣ ಮಿಷನ್
    ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಮಡಿಕೆ ಗೊಬ್ಬರದ ಬಗ್ಗೆಯೂ ಜನರಲ್ಲಿ
    ಆಸಕ್ತಿಯನ್ನು ಮೂಡಿಸಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದೆ. ಈ ಅಭಿಯಾನದ ಜೊತೆ ಕ್ರಿಯಾಶೀಲ ಯುವಕ ಎಂಜಿನಿಯರಿಂಗ್ ಪದವೀಧರ ಸಚಿನ್ ಶೆಟ್ಟಿ ಅವರು ಕೈಜೋಡಿಸಿದ್ಡಾರೆ.

    ಅವರ ಮಡಿಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯ ವೀಡಿಯೊವನ್ನು ವೀಕ್ಷಿಸಲು ಮತ್ತು ಮೇಲಿನ ಎಲ್ಲಾ ಪ್ರಶ್ನೆಗಳಿಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಉತ್ತರಗಳನ್ನು
    ಪಡೆಯಲು, ಅಂತೆಯೇ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಗಾಟಿಸಿರುವ ಸ್ವಾಮೀಜಿಗಳ ಅನುಭವದ ಹಿತನುಡಿಗಳು, ಹಾಗೂ ಈ
    ಕಾರ್ಯಾಗಾರವನ್ನು ಆಯೋಜಿಸಲು ಬೆನ್ನಲುಬಾಗಿ ನಿಂತು ಪ್ರೋತ್ಸಾಹಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಸ್ಫೂರ್ತಿದಾಯಕ ಮಾತುಗಳನ್ನು ಇಲ್ಲಿ ಆಲಿಸಿ.

    ಪರಿಸರದ ಆಪ್ತ ಸ್ನೇಹಿತ

    ಕಪ್ಪು ಸೈನಿಕರು ಅಡುಗೆ ಮನೆಯ ತ್ಯಾಜ್ಯ ಮಾತ್ರವಲ್ಲ, ಕೃಷಿ ತ್ಯಾಜ್ಯಗಳನ್ನೂ ಗೊಬ್ಬರವನ್ನಾಗಿ ಪರಿವರ್ತಿಸಲು
    ಬಳಸಿಕೊಳ್ಳಬಹುದು. ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಎರೆಹುಳುಗಳನ್ನು ರೈತನ ಮಿತ್ರ ಎಂದು ಕರೆದರೆ, ಹಸಿ ಕಸವನ್ನು ರಸಭರಿತ
    ಗೊಬ್ಬರವನ್ನಾಗಿ ರೂಪಾಂತರಗೊಳಿಸಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಒದಗಿಸುವ ಕಪ್ಪು ಸೈನಿಕ ಕೀಟವನ್ನು ‘ಪರಿಸರದ ಆಪ್ತ ಸ್ನೇಹಿತ’
    ಎಂದು ಕರೆಯಬಹುದು.

    ಚಳಿ, ಮಳೆ, ಗಾಳಿ, ಬಿರುಗಾಳಿ ಯಾವುದಕ್ಕೂ ಎದೆಗುಂದದೇ ತಮ್ಮ ಜೀವ, ಜೀವನವನ್ನೇ ಮುಡಿಪಾಗಿಟ್ಟು ದೇಶದ ಭದ್ರತೆಯನ್ನು
    ಕಾಪಾಡುವ ನಮ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸುವ ಹಾಗೆ ತ್ಯಾಜ್ಯಗಳನ್ನು ಪರಿವರ್ತಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವ, ಪರಿಸರ
    ಸಂರಕ್ಷಣೆಯಲ್ಲಿ ತೊಡಗಿರುವ ನಿಸರ್ಗದ ಕೊಡುಗೆ ‘ಕಪ್ಪು ಸೈನಿಕರಿಗೆ’ ಒಂದು ದೊಡ್ಡ ಸಲಾಂ ಹೊಡೆಯಲೇಬೇಕಲ್ಲವೇ?

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    19 COMMENTS

    1. Congratulations, article come out very well, organic help to environment and reduce pollution as well as increase soil ferility. It is veryuseful for progressive farmers.

    2. Your article on Black soldiers is interesting that can play a great role in converting household wastes into a valuable organic fertilizer

    3. ಒಳ್ಳೆಯ ಮಾಹಿತಿ. ಹಸಿ ಕಸವನ್ನು ಕಪ್ಪು ಸೈನಿಕರ ಸಹಾಯದಿಂದ ಯಾವ ರೀತಿಯಲ್ಲಿ ರಸವನ್ನಾಗಿ ಪರಿವರ್ತಿಸಿ ಗೊಬ್ಬರದ ರೀತಿ ಉಪಯೋಗಿಸಬಹುದು ಎಂಬುದನ್ನು ವಿಡಿಯೋ ದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಅದೇ ರೀತಿ ಈ ಲೇಖನದಲ್ಲಿ ಅದರ ಬಗೆಗಿನ ಮಾಹಿತಿಯು ಕೂಡಾ ಉಪಯುಕ್ತವಾಗಿದೆ. ಇದುವರೆಗೂ ಅರಿಯದ ವಿಷಯ ತಿಳಿಸಿಕ್ಕೊಟ್ಟದ್ದಕ್ಕೆ ಧನ್ಯವಾದಗಳು.

    4. ನಾವೆಲ್ಲಾ ನಮ್ಮ ನಮ್ಮ ಸ್ವಾರ್ಥದ ಕಾರ್ಯದಲ್ಲಿ ನಿರತರಾಗಿರುವಾಗ ಯಾರ ಹಂಗು,ಅಹಂಕಾರವಿಲ್ಲದೆ ತನ್ನ ಕರ್ತವ್ಯವನ್ನು ಮರೆಯದೆ ಪರಿಸರ ರಕ್ಷಣೆಯಲ್ಲಿ
      ತನ್ನನ್ನ ತಾನೇ ತೊಡಗಿಸಿಕೊಂಡಿರುವ ನೈಸರ್ಗಿಕ ಮಿತ್ರ ಕಪ್ಪು ಸೈನಿಕರು(ಮರಿ ಹುಳುಗಳು) ಬಗ್ಗೆ ನಮಗೆ ತಿಳಿಯದಿರದಷ್ಟು ಅರ್ಥಪೂರ್ಣ ಮಾಹಿತಿ ನೀಡಿದ್ದೀರಿ.
      ಧನ್ಯವಾದಗಳು ಪ್ರಶಾಂತ.

    5. ಪ್ರತಿಕ್ರಯಿಸಿರುವ ಎಲ್ಲಾ ಓದುಗ ಬಂಧುಗಳಿಗೆ ಕೃತಜ್ಞತೆಗಳು.

    6. Very good programme.mangalore university is connecting itself to the socio economic needs of the society and also responding to the environmental issues.dr.prashant naik and others are doing such a good job under the leadership of VC.very good article .congrats.

    7. ನಿಜವಾಗಿಯೂ ಸ್ವಚ್ಛ ಭಾರತ ಶ್ರೇಷ್ಠ ಭಾರತ ಅಂತ ಪೋಸ್ಟ್ ಹಾಕಿಕೊಳ್ಳುವವರು ತನ್ನ ಸ್ವಂತ ಮನೆಯಲ್ಲಿ ಕಸವನ್ನು ಏನು ಮಾಡುತ್ತಿದ್ದಾರೆ ಎಂಬುದನ್ನು ಚಿಂತನೆ ಮಾಡುವುದರೊಂದಿಗೆ.
      …. ಅವಲೋಕನ ಮಾಡಿದಾಗ… ಏನೋ ಒಂದಿಷ್ಟು ತಪ್ಪುಗಳು ತಿಳಿದು ಮಾಡ್ತೆವಲ್ಲ… ಅನ್ನಿಸುತ್ತೆ ಅಲ್ವೇ… ಅದಕ್ಕೆ ಸೂಕ್ತ ಪರಿಹಾರ ಈ ಲೇಖನ ದಲ್ಲಿದೆ… ಓದೋಣ… ಅಭಿನಂದನೆಗಳು..🙏🙏🙏ಪ್ರೊ. ಪ್ರಶಾಂತ್ ಅವರಿಗೆ ಸುಲಭ ಕನ್ನಡದಲ್ಲಿ ವಿವರಿಸಿದ್ದೀರಿ… ಓದಿ ಖುಷಿ ಆಯಿತು 🙏🙏

    8. ನಾವುಗಳು ಪ್ರತಿನಿತ್ಯ ಮಾಡುವ ಸಣ್ಣ ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಂಡು, ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಿಕೊಂಡು, ಮಡಿಕೆ ಗೊಬ್ಬರ ಮಾಡುವ ಮೂಲಕ ಕಪ್ಪು ಸೈನಿಕರಿಂದ ಇಡೀ ನಮ್ಮ ಪರಿಸರಕ್ಕೆ ಮಾನವ ಕುಲಕ್ಕೆ , ಜೀವಸಂಕುಲಕ್ಕೆ ಆಗುವಂತಹ ಅಮೂಲ್ಯವಾದ ಉಪಯುಕ್ತತೆಯನ್ನು ಅತ್ಯಂತ ಸರಳ ಭಾಷೆಯಲ್ಲಿ ಚಿಕ್ಕ ಮಕ್ಕಳಿಗೂ ಅರ್ಥವಾಗುವಂತೆ ವಿವರಿಸಿದ್ದೀರಿ ಡಾಕ್ಟರ್ ಪ್ರಶಾಂತ ನಾಯಕ್ ತಮಗೆ ಹೃತ್ಪೂರ್ವಕ ಧನ್ಯವಾದಗಳು ,ತಮ್ಮ ಸ್ವಚ್ಛ ಪರಿಸರ ಅಭಿಯಾನ ಹೀಗೆ ಮುಂದುವರಿಯಲಿ. ನಮಸ್ಕಾರಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!