19.9 C
Karnataka
Sunday, September 22, 2024

    ಸುರಕ್ಷಿತ ವಾತಾವರಣದಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಸಿದ್ಧತೆ

    Must read

    ‘ಮಹಾಮಾರಿ ಕರೋನಾ ಓಡಿಸೋಣ… ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಓದಿಸೋಣ..’ ಎಂಬ ಧ್ಯೇಯದೊಂದಿಗೆ ಸುರಕ್ಷಿತ ವಾತಾವರಣದಲ್ಲಿ ಜ. 1ರಿಂದ ಶಾಲೆಗಳನ್ನು ಆರಂಭಿಸಲು ವಿವಿಧ  ಇಲಾಖೆಗಳ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಕೋವಿಡ್ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಮಾರ್ಗದರ್ಶನದೊಂದಿಗೆ ಶಾಲೆಗಳು ಆರಂಭಿಸುವ ಸಂಬಂಧದಲ್ಲಿ ಬುಧವಾರ ಬೆಳಗ್ಗೆ ರಾಜ್ಯದ ಎಲ್ಲ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಡಿಡಿಪಿಐ ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿ ಅವರಿಂದ ಸಲಹೆಗಳನ್ನು ಪಡೆದುಕೊಂಡು ಮಾತನಾಡಿದ ಅವರು, ಎಷ್ಟೇ ಮಕ್ಕಳು ಶಾಲೆಗೆ ಬರಲಿ ಅವರು ಸುರಕ್ಷಿತವಾಗಿರುವಂತೆ ಎಲ್ಲ ಉಪಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಗಳು ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

    ಸಮಾಜದಲ್ಲಿ ಭರವಸೆ ಮೂಡಲಿ:

    ಎಲ್ಲಕ್ಕಿಂತ ಮೊದಲು ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳು ಸುರಕ್ಷಿತ ವಾತಾವರಣದಲ್ಲಿ ಆರಂಭಗೊಂಡು ತರಗತಿಗಳು ಸಾಮಾಜಿಕ ಅಂತರದಲ್ಲಿ ನಡೆಯುತ್ತವೆ ಎಂಬ ಕುರಿತು ಪೋಷಕರಲ್ಲಿ ಮತ್ತು ಸಮಾಜದಲ್ಲಿ ಭರವಸೆ ಮೂಡಿಸುವ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.
    ಡಿ. 24ರ ಗುರುವಾರ ಬೆಳಗ್ಗೆ ಆಯಾ ಜಿಲ್ಲಾ ಡಿಡಿಪಿಐ ಮತ್ತು ಡಿಡಿಪಿಯುಗಳು ತಮ್ಮ ವ್ಯಾಪ್ತಿಯ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಮತ್ತು ಪಿಯು ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ 10 ಮತ್ತು 12ನೇ ತರಗತಿಗಳ ಮತ್ತು 6ರಿಂದ 9ನೇ ತರಗತಿಗಳ ವಿದ್ಯಾಗಮ ತರಗತಿಗಳನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಮತ್ತು ಎಸ್ಒಪಿಗಳನ್ನು ಪಾಲಿಸುವ ಸಂಬಂಧದಲ್ಲಿ  ಮಾರ್ಗದರ್ಶನ ನೀಡಲಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಶಾಲಾರಂಭ ಪ್ರತಿಷ್ಠೆಯ ವಿಷಯವಲ್ಲ:

    ಶಾಲಾರಂಭ ಸರ್ಕಾರಕ್ಕೆ ಬದ್ಧತೆಯ ವಿಷಯ ಮಾತ್ರವೇ ಆಗಿದ್ದು, ಅದು ಪ್ರತಿಷ್ಠೆಯ ವಿಷಯವಾಗಿಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವರು, ಇನ್ನೊಂದು ವಾರದಲ್ಲಿ ಶಾಲಾ ತರಗತಿಗಳ ಪಿರಿಯಡ್ ಸಮಯ, ಪಠ್ಯಕ್ರಮ ನಿಗದಿ ಮಾಡಲಾಗುತ್ತದೆ ಮತ್ತು 10 ಮತ್ತು 12ನೇ ತರಗತಿಗಳ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು  ತಿಳಿಸಿದರು.

    ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿರುವ ಪ್ರಮಾಣಿತ ಮಾರ್ಗದರ್ಶಿ ಸೂತ್ರಗಳು-ಎಸ್ಒಪಿಗಳು ಈಗಾಗಲೇ ಫೋನ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳನ್ನು ತಲುಪಿವೆ. ಮೂರ್ನಾಲ್ಕು ದಿನಗಳಲ್ಲಿ ಎಸ್ಒಪಿಗಳನ್ನು ಎಲ್ಲ ಕ್ಲಸ್ಟರ್ಗಳಿಗೆ ತಲುಪಿಸಲಾಗುವುದು ಎಂದು ಹೇಳಿದ ಸಚಿವರು, ಶಾಲೆಗೆ ಎಷ್ಟೇ ಮಕ್ಕಳು ಬರುತ್ತಾರೆಂಬುದಕ್ಕಿಂತ ಬಂದ ಮಕ್ಕಳಲ್ಲಿ ಸುರಕ್ಷತೆಯಲ್ಲಿ ತರಗತಿಗಳು  ನಡೆಯುತ್ತವೆಂಬ ಸಕಾರಾತ್ಮಕ ಭಾವನೆಯೊಂದಿಗೆ ಆತ್ಮವಿಶ್ವಾಸ  ಮೂಡುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

    ಶಾಲಾ ಸಂಚಿತ ನಿಧಿಯಲ್ಲಿ ಸೋಪ್ ,ಥರ್ಮಲ್ ಸ್ಕಾನರ್ ಖರೀದಿಗೆ ಅವಕಾಶ-ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಅಗತ್ಯ:

    ಹೊಸ ವರ್ಷದ ದಿನ ಹೊಸ ಭರವಸೆಯೊಂದಿಗೆ ಶಾಲೆಗಳತ್ತ ಬರುತ್ತಿರುವ ಮಕ್ಕಳನ್ನು ಆಹ್ಲಾದಕರ ವಾತಾವರಣದಲ್ಲಿ ಸ್ವಾಗತ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಶಾಲಾ ಸಂಚಿತ ನಿಧಿ ಖಾತೆಯಲ್ಲಿರುವ ಹಣವನ್ನು ಮಕ್ಕಳಿಗೆ ಅಗತ್ಯವಾದ ಸೋಪು, ಥರ್ಮಲ್ ಸ್ಕ್ಯಾನರ್ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಬಳಸಲು ಅಗತ್ಯ ಸುತ್ತೋಲೆ ಹೊರಡಿಸಬೇಕೆಂದು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು. ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, 55 ವರ್ಷ ಮೀರಿದ ಶಿಕ್ಷಕರು ಫೇಸ್ ಮಾಸ್ಕ್ನೊಂದಿಗೆ ಫೇಸ್ ಶೀಲ್ಡ್ ಬಳಸುವುದು ಕ್ಷೇಮ. ಹಾಗೆಯೇ ಶಿಕ್ಷಕರು ಮಕ್ಕಳ ಹಿತದೃಷ್ಟಿಯಿಂದ ಶಾಲೆ ಆರಂಭವಾಗುವ 72 ಗಂಟೆಗಳ ಮೊದಲು ಆರ್ಟಿಪಿಸಿಆರ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗೆಟೀವ್ ವರದಿಯೊಂದಿಗೆ ಬರಲು ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

    ಕಠಿಣ ಮೇಲ್ವಿಚಾರಣೆ-ಕಣ್ಗಾವಲು:

    ಶೌಚಾಲಯ ಸ್ವಚ್ಛತೆ, ಪ್ರತಿ ಶಾಲೆಯಲ್ಲಿ ಒಂದು ಪ್ರತ್ಯೇಕ ಕೊಠಡಿ ಮೀಸಲು, ಪ್ರತಿದಿನವೂ ಒಬ್ಬ ಮಾರ್ಗದರ್ಶಿ ಶಿಕ್ಷಕರು ಮಕ್ಕಳ ಆರೋಗ್ಯದ ಕಣ್ಗಾವಲು ಮಾಡುವುದು, ಮಕ್ಕಳು ಬಂದಾಗ ಮತ್ತು ಹೋಗುವಾಗ ಕೈತೊಳೆಯುವುದು, ಮಕ್ಕಳು ಗುಂಪುಗೂಡದಂತೆ ಗಮನಿಸುವರು. ಕೆಮ್ಮು, ಜ್ವರ ಮತ್ತು ಕೋವಿಡ್ ಲಕ್ಷಣಗಳಿರುವ ವಿದ್ಯಾಗಳನ್ನು ಮಾರ್ಗದರ್ಶಿ ಶಿಕ್ಷಕರು ತಕ್ಷಣವೇ ಅವರನ್ನು ಪ್ರತ್ಯೇಕಿಸಿ ಆರೋಗ್ಯ ತಪಾಸಣೆ, ಕ್ವಾರಂಟೈನ್ ನಂತಹ ಕ್ರಮಗಳನ್ನು ಕೈಗೊಳ್ಳುವರು.

    ತಮ್ಮ ವ್ಯಾಪ್ತಿಯ ಯಾವುದೇ ಸಂಟನೆಗಳು, ಸಂಸಂಸ್ಥೆಗಳು, ದಾನಿಗಳು ಮಾಸ್ಕ್, ಸ್ಯಾನಿಟೈಜರ್, ಸಾಬೂನು ನೀಡಲು ಮುಂದರೆ ಬಂದರೆ ಶಾಲೆಗಳು ಪಡೆದುಕೊಳ್ಳಬಹುದು. ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ಶಾಲಾ ಪರಿಸರ ಮತ್ತು ಶೌಚಾಲಯಗಳ ಸ್ವಚ್ಛತೆಗೆ ಗಮನ ಹರಿಸಲಿವೆ. ಈ ಕುರಿತು ಆಯಾ ಇಲಾಖೆಗಳು ಸೂಕ್ತ ಆದೇಶ ನೀಡಿವೆ. ಸಿಇಒಗಳು ಪ್ರತಿದಿನ ಸಂಜೆ ಶಾಲೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸೇರಿದಂತೆ ಆಯಾ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುರೇಶ್ ಕುಮಾರ್ ಸಲಹೆ ನೀಡಿದರು.

    ತಾವು ಸುರಕ್ಷಿತ ವಾತಾವರಣದಲ್ಲಿದ್ದು, ಶಿಕ್ಷಕರು ನಮ್ಮ ಆರೋಗ್ಯ ಮತ್ತು ಹಿತರಕ್ಷಣೆಗೆ ಪೂರಕವಾಗಿ ಗಮನಿಸುತ್ತಿದ್ದಾರೆಂಬ ಭಾವನೆ ಮೂಡುವಂತೆ ಶಾಲೆಗಳ ವಾತಾವರಣ ರೂಪಿಸಬೇಕು ಎಂದರು. ವಿದ್ಯಾಗಮ ತರಗತಿಗಳಿಗೆ ಮಕ್ಕಳು ತಮ್ಮದೇ ಶಾಲೆಗೆ ಬರಬೇಕೆಂಬ ಕಡ್ಡಾಯವೇನಿಲ್ಲ, ತಮ್ಮ ಸನಿಹದ ಶಾಲೆಗಳಲ್ಲಿ ನಡೆಯುವ ತರಗತಿಗಳಿಗೆ ಹಾಜರಾಗಬಹುದು.
    ಎಸ್ ಎಸ್ ಎಲ್ ಸಿ ಮಕ್ಕಳು ಪರೀಕ್ಷೆ ಬರೆದಾಗ ಅವರು ತೋರಿದ ಶಿಸ್ತು ಮತ್ತು ಅಚ್ಚುಕಟ್ಟುತನ ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು ಎಂದು ಪತ್ರಿಕೆಗಳು ಸಂಪಾದಕೀಯ ಬರಿದದ್ದನ್ನು ಸ್ಮರಿಸಿದ ಸಚಿವರು ಅದೆಲ್ಲವೂ ಜಿಲ್ಲೆಯ ಎಲ್ಲ ಅಧಿಕಾರಿಗಳು ಕೈಗೊಂಡ ಕ್ರಮಗಳು ಮತ್ತು ತೋರಿದ ಉತ್ಸಾಹದಿಂದಲೇ ಸಾಧ್ಯವಾಯಿತು.  ಶಾಲಾರಂಭ ಮಕ್ಕಳ ಹಿತದೃಷ್ಟಿ ಮತ್ತು ಭವಿಷ್ಯದ ಪ್ರಶ್ನೆಯಾಗಿರುವುದರಿಂದ ಈ ಸಂದರ್ಭದಲ್ಲೂ ಸಹ ನಮ್ಮ ಜಿಲ್ಲಾ ಅಧಿಕಾರಿಗಳ ಸಹಾಯ, ಸಹಕಾರ, ಉತ್ಸಾಹಗಳು ಅಷ್ಟೇ ಪ್ರಮುಖವಾಗಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೋವಿಡ್ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆ-ಅತಿಥಿ ಶಿಕ್ಷಕರು/ಉಪನ್ಯಾಸಕರ ನೇಮಕ: 

    ಇನ್ನೇನು ಶಾಲೆಗಳು ಆರಂಭವಾಗುತ್ತಿರುವುದರಿಂದ ಬೆಂಗಳೂರು ನಗರ ಸೇರಿದಂತೆ ಯಾವುದಾದರೂ ಜಿಲ್ಲೆಗಳಲ್ಲಿ ಶಾಲಾ ಶಿಕ್ಷಕರು ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದರೆ ತಕ್ಷಣವೇ ಅವರನ್ನು ಕೋವಿಡ್ ಕರ್ತವ್ಯದಿಂದ ಮುಕ್ತಗೊಳಿಸುವಂತೆ ಸಂಬಂಧಿಸಿದವರಿಗೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದರು. ದೂರದರ್ಶನ ಚಂದನಾ ವಾಹಿನಿಯಲ್ಲಿ ಪ್ರಸಾರವಾಗುವ ಸಂವೇದಾ  ತರಗತಿಗಳು ತರಗತಿ ವೇಳೆ ಹೊರತು ಪಡಿಸಿ ಬಿತ್ತರವಾಗುವಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. 
                                        
    ಪಿಯುಸಿ ಮತ್ತು 10ನೇ ತರಗತಿಗಳಿಗೆ  ಅಗತ್ಯವಿರುವ ಕಡೆಗಳಲ್ಲಿ ಅತಿ ಶಿಕ್ಷಕರು/ಉಪನ್ಯಾಸಕರನ್ನು ನೇಮಿಸಿಕೊಳ್ಳಬಹುದಾಗಿದೆ. ಮುಂದೆ ಉಳಿದ ತರಗತಿಗಳು ಆರಂಭವಾದ ನಂತರ ಆ ತರಗತಿಳ ಬೋಧನೆಗೂ ಅತಿ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು. ಆಯಾ ಇಲಾಖೆಗಳು ವಿದ್ಯಾರ್ಥಿನಿಲಯಗಳು ಆರಂಭವಾಗಲಿದ್ದು, ಆ ಇಲಾಖೆಗಳು ನೀಡಿರುವ ನಿಯಮಗಳಂತೆ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಅವರು ವಿವರಿಸಿದರು.
    ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಲೆಗಳಿಗೆ ಹೊರ ರಾಜ್ಯದ ವಿದ್ಯಾರ್ಥಿಗಳು ಹಾಜರಾಗುತ್ತಿರುವುದರ ಹಿನ್ನೆಲೆಯಲ್ಲಿ ಶಾಲಾ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಸಂಬಂಧದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು) ಮತ್ತು ಜಿಪಂ ಸಿಇಒ (ಉಪಾಧ್ಯಕ್ಷರು) ನೇತೃತ್ವದ ಸಮಿತಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.

    ಉತ್ತಮ ಸಲಹೆಗಳ ವಿನಿಮಯ:

    ವಿಡಿಯೋ ಕಾನ್ಫೆರೆನ್ಸ್ನಲ್ಲಿ ವಿವಿಧ ಜಿಲ್ಲೆಗಳ ಸಿಇಒಗಳ ಸಲಹೆಗಳನ್ನು ಗಮನಿಸಿದ ಸಚಿವರು ಉತ್ತಮ ಸಲಹೆಗಳನ್ನು ಉಳಿದ ಜಿಲ್ಲೆಗಳವರು ಅನುಸರಿಸಲು ಕ್ರಮ ವಹಿಸಬೇಕೆಂದು ತಿಳಿಸಿದ ಸಚಿವರು, ಒಟ್ಟಾರೆ ಶಾಲೆಗಳಿಂದ ಶಾಲಾ ಸುರಕ್ಷಿತ ವಾತಾವರಣದ ಕುರಿತು ಸಕಾರಾತ್ಮಕ ಸಂದೇಶ ಬಿತ್ತರವಾಗುವಂತೆ ಎಲ್ಲರೂ ಗಮನಿಸಬೇಕಿದೆ. ಶಾಲೆಗೆ ಮಕ್ಕಳು ಹಾಜರಾಗುವುದು ಕಡ್ಡಾಯವಲ್ಲವಾದ್ದರಿಂದ ಮಕ್ಕಳ   ಹಾಜರಾತಿಗಿಂತ ಸುರಕ್ಷತೆಯತ್ತ ಗಮನ ಹರಿಸುವುದು ಅತ್ಯಂತ ಪ್ರಮುಖವಾದುದು ಎಂದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್, ಎಸ್.ಎಸ್.ಕೆ.  ಎಸ್ಪಿಡಿ ದೀಪಾ ಚೋಳನ್ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!