28.9 C
Karnataka
Saturday, September 21, 2024

    ಅತಿಥಿ ಎಂದಿಗೂ ಆದರಣೀಯ..!

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ‘ಬರಹ’ ನಿಘಂಟಿನ ಪ್ರಕಾರ ‘ಅತಿಥಿ’ಎಂದರೆ ಆಮಂತ್ರಣವನ್ನು ಪಡೆದು ಇಲ್ಲವೆ ಪಡೆಯದೆ ಬಂದ ವ್ಯಕ್ತಿ ಅರ್ಥಾತ್ ಮನೆಯ ಸದಸ್ಯರಲ್ಲದವರೆಂದು. ಅತಿಥಿಯೋ ಇಲ್ಲ ಇನ್ನು ಯಾರೇ ಆದರು ಮನೆಯ ಬಾಗಿಲಿಗೆ ಬಂದ ನಂತರ ಅವರಿಗೆ ಪ್ರೀತಿಯ ಸ್ವಾಗತವನ್ನು ಕೋರಬೇಕು. ಮೇಲುಪಚಾರ,ಮಾತಿನುಪಚಾರ ಎರಡನ್ನೂ ಮಾಡದೆ ಹೃದಯಾಂತರಾಳದಿಂದ ಅವರನ್ನು ಸತ್ಕರಿಸಬೇಕು. ಅದನ್ನೇ ಬಸವಣ್ಣನವರು ಪ್ರಸ್ತುತ ವಚನದ ಮೂಲಕ ಸಾಮಾಜಿಕರಿಗೆ ಮನಮುಟ್ಟುವಂತೆ ಹೇಳಿದ್ದಾರೆ.

    ಏನೀ ಬಂದಿರಿ ಹದುಳಿದ್ದಿರೇ ಎಂದಡೆ
    ನಿಮೈಸಿರಿ ಹಾರಿ ಹೋಹುದೇ?
    ಕುಳ್ಳಿರೆಂದರೆ ನೆಲ ಕುಳಿ ಹೋಹುದೇ?
    ಒಡನೆ ನುಡಿದರೆ ಸಿರ ಹೊಟ್ಟೆ ಒಡೆಯವುದೇ?
    ಕೊಡಲಿಲ್ಲದಿದ್ದೊಡೊಂದು ಗುಣವಿಲ್ಲದಿದ್ದಡೆ
    ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ

    ಯಾವಾಗ ಬಂದಿರಿ ಮನೆಯಲ್ಲೆಲ್ಲಾ ಕ್ಷೇಮವಾಗಿದ್ದೀರ? ಎಂದು ಕೇಳಿ ಬಿಟ್ಟರೆ ನಿಮ್ಮ ಐಸಿರಿ ಏನೂ ಹಾರಿಹೋಗುವುದಿಲ್ಲ. ಮಾತನ್ನೇನು ದುಡ್ಡು ತೆತ್ತು ತರಬೇಕೇ? ಮಾತು ಮನುಷ್ಯನ ಬದುಕಿನ ಎಟುಕಿನಲ್ಲೇ ಇರುತ್ತದೆ. ಶತ್ರುಗಳು ಮನೆಯ ಬಾಗಿಲಿಗೆ ಬಂದರೂ ಅವರನ್ನು ತಿರಸ್ಕರಿಸಬಾರದೆಂಬುದಿದೆ. ನೂರು ಭಿನ್ನಾಭಿಪ್ರಾಯದ ತಡಿಕೆಯಿದ್ದರೂ ಮನೆಗೆ ಬಂದವರನ್ನು ಸದ್ಭಾವದಿಂದ ಸ್ವಾಗತಿಸಬೇಕು, ಸತ್ಕರಿಸಬೇಕು. ತಕ್ಷಣಕ್ಕೆ ನುಡಿದರೆ ಅದರಿಂದ ನೀವು ಕಳೆದುಕೊಳ್ಳುವುದೇನೂ ಇಲ್ಲ!

    ಯೋಚನೆ ಮಾಡಿ ಲೆಕ್ಕಾಚಾರ ಮಾಡಿ ಕೊಂಕು ಮಾತುಗಳನ್ನು ಪೋಣಿಸಿಕೊಂಡು ಒಂದಷ್ಟು ತಯಾರಿ ಮಾಡಿಕೊಂಡು ಮಾತನಾಡುವುದಕ್ಕಿಂತ ಒಡನೆ ನುಡಿದರೆ ನಿಮ್ಮ ಶಿರ ಹೊಟ್ಟೆ ಒಡೆಯುವುದೇ? ಅಂದರೆ ನಿಮಗೆ ದೈಹಿಕವಾಗಿ ಯಾವುದಾದರೂ ತೊಂದರೆಯಾಗುತ್ತದೆಯೇ ಎನ್ನುತ್ತಾರೆ. ಬಂದವರನ್ನು ಕುಳಿತುಕೊಳ್ಳಿ ಎಂದರೆ ಅವರು ಆಸೀನರಾದ ಜಾಗವೇನಾದರೂ ಕುಳಿ ಹೊಗುವುದೇ? ಎನ್ನುತ್ತಾರೆ.

    ಬಂದವರು ಬಡವರೋ ಶ್ರೀಮಂತರೋ ತಿಳಿದು ಸೋಫ ಮೇಲೆ, ಇಲ್ಲ ಖಾಲಿ ಕುರ್ಚಿ ಮೇಲೆ ಕೂರಿಸುವುದು, ಶ್ರೀಮಂತರಾದರೆ ಒಳ್ಳೆಯ ಗುಣಮಟ್ಟದ ಬಿಸ್ಕೆಟ್, ಬೆಳ್ಳಿ ಬಟ್ಟಲ ಕುಂಕುಮ, ಬಡವರಾದರೆ ಸಾದಾರಣ ಬಿಸ್ಕೇಟ್ ಸ್ಟೀಲ್ ಬಟ್ಟಲ ಕುಂಕುಮ ಕೊಡುವವರೂ ಇದ್ದಾರೆ. ತನ್ನಕಡೆಯವರು ಬಂದರೆ ಹೊಗೆಯಾಡುವ ಖಾದ್ಯಗಳ ಸಮರ್ಪಣೆ, ತನ್ನವರಲ್ಲ ಎಂಬ ಭಾವನೆಯಿದ್ದರೆ ತಣ್ಣಗೆ ಕೊರೆಯುವ ತಿಂಡಿಯನ್ನು ನೀಡಿ ಅಪಚಾರ ಮಾಡುವವರೂ ಇದ್ದಾರೆ. ಅತಿಥಿಗಳ ನಡುವಣ ಭೇದನ್ನು ಮಾಡುವವರಿಗೆ ಇಂತಹ ಜನರಿಗೆ ಎಂಟುನೂರು ವರ್ಷಗಳ ಹಿಂದೆಯೇ ನಯವಾಗಿ ಬಸವಣ್ಣನವರು ಕಿವಿ ಹಿಂಡಿದ್ದಾರೆ.
    ದಾನ ಮಾಡುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ ಎಂದಮೇಲೆ ಕೊಡಬೇಕು .

    ಆ ಭಗವಂತ ಕೊಟ್ಟಿದ್ದಾನೆ ಎಂದ ಮೇಲೆ ಅದು ಸತ್ಪಾತ್ರಕ್ಕೆ ಸಲ್ಲಬೇಕಲ್ಲವೇ? ಇಳೆ, ಬೆಳೆ, ಸುಳಿದು ಸೂಸುವ ವಾಯು ಎಲ್ಲ ಭಗವಂತನದ್ದೇ ಆದ ಮೇಲೆ ಸುರಿಯುವ ಮಳೆ ಸುರಿಯದಿದ್ದರೆ, ಬೆಳೆಯುವ ಬೆಳೆ ಬೆಳೆಯದೇ ಇದ್ದರೇ ನಮಗೆಲ್ಲಿರುತ್ತಿತ್ತು ಈ ಸಮೃದ್ಧಿ ಎಂದು ಜೇಡರ ದಾಸಿಮಯ್ಯ ಹೇಳಿಲ್ಲವೇ ಹಾಗೆ.

    ಇಲ್ಲದೇ ಇರುವುದನ್ನು ಹೊಂದಿಸಿ ಕೊಡು ಎಂದು ಭಗವಂತ ಹೇಳಿಲ್ಲ ಇರುವುದನ್ನು ಕೊಡು ಎಂದಿರುವುದು ಇದೇ ಅಕ್ಕನ ಪ್ರಕಾರ ಕೈಗೆ ಶೃಂಗಾರವಾಗಿರುವುದು. ನಾನು, ನನ್ನ ಮನೆ, ನನ್ನ ಕುಟುಂಬ, ನನ್ನ ಹೆಂಡತಿ, ನನ್ನ ಮಕ್ಕಳು ಎಂದು “ನಾನು” ಎನ್ನುವುದನ್ನೇ ವಿಜೃಂಭಿಸಿಕೊಳ್ಳುವುದರ ಬದಲು Think out of the box ಎಂಬಂತೆ ಪೂರ್ವಗ್ರಹ ಪೀಡಿತ ಆಲೋಚನೆಗಳಿಂದ ಹೊರಬಂದು ತಾನೂ ಬದುಕಿ ಇತರರನ್ನು ಬದುಕಗೊಡಿ ಇಲ್ಲವಾದರೆ ಶಿಕ್ಷೆ ಖಂಡಿತಾ ಎಂದು ಎಚ್ಚರಿಸುತ್ತಾರೆ. ಹಾಗಾದಾಗ “ವಸುದೈವ ಕುಟುಂಬಕಂ” ಎಂಬ ತತ್ವ ಸಾಕಾರಗೊಳ್ಳುತ್ತದೆ ಎಂಬ ಬಯಕೆಯನ್ನು ವ್ಯಕ್ತಪಡಿಸಿ, ಯಾರಾದರು ಮನೆಗೆ ಬಂದರೆ ಮಂದಸ್ಮಿತ,ಮಧುರವಾಣಿ,ಮನದಾಳದ ಹಾರೈಕೆ ಇದ್ದರೆ ಅದಷ್ಟೇ ಸಾಕು ಎನ್ನುತ್ತಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!