28.9 C
Karnataka
Saturday, September 21, 2024

    ಮನುಷ್ಯನ ಬಾಳು ಯಾವತ್ತಿಗೂ ಹುಲ್ಲುಗರಿಕೆಯ ತುದಿಯ ಮೇಲಿನ ನೀರಿನ ಹನಿ

    Must read


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಮಾನಸವಾಳೆಂಬುದು ಪನಿಪುಲ್- ಕನ್ನಡದ ಮೊದಲ ಗದ್ಯ ಕೃತಿ ‘ವಡ್ಡಾರಾಧನೆ’ಯಲ್ಲಿ ಬರುವ ಮಾತು.   ಹೊಸಗನ್ನಡದಲ್ಲಿ ಇದರರ್ಥ ಮನುಷ್ಯನ ಬಾಳು ಯಾವತ್ತಿಗೂ ಹುಲ್ಲುಗರಿಕೆಯ ತುದಿಯ ಮೇಲಿನ   ನೀರಿನ ಹನಿಯಂತೆ ಎಂದು.  ಹಾಗಾಗಿ ಮನುಷ್ಯ ಎಂದಿಗೂ ನಶ್ವರ!  ಶಾಶ್ವತವಲ್ಲವೆಂದರ್ಥ ಅಲ್ಲವೇ!.

     “ಜಾತಸ್ಯ ಹಿ ಧ್ರುವೋ  ಮೃತ್ಯುಃ  ಧ್ರುವಂ ಜನ್ಮ ಮತಸ್ಯ ಚ |”  ಅಂದರೆ  ಎಲ್ಲೆಲ್ಲಿ ಜೀವವಿದೆಯೋ  ಅಲ್ಲಿ ಮೃತ್ಯು ಕೂಡ   ಖಚಿತವಾಗಿರುತ್ತದೆ.  ಮನುಷ್ಯ ಮಾತ್ರವಲ್ಲದೆ  ಸಕಲ ಜೀವಿಗಳೂ ಹುಟ್ಟಿದ ಮೇಲೆ ಸಾವಿಗೆ ಶರಣಾಗಲೇಬೇಕು.   ದೇಹ ರೂಪಿ ಈ ಬದುಕಿನಲ್ಲಿ ಅನೇಕ ಕಷ್ಟಕೋಟಲೆಗಳು,ಅಪಸವ್ಯಗಳು ,ವ್ಯಾಧಿಗಳು  ಭಾಧಿಸುತ್ತವೆ  ಇಂಥ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ  ನನ್ನ ಶರೀರ, ನನ್ನಕಡೆಯವರು ಮಾತ್ರ, ಅಧಿಕಾರ ನನ್ನದೆ ಎಂದು  ಪ್ರತಿಕ್ಷಣದಲ್ಲಿ “ನನ್ನ” ಎಂಬ ಪದವನ್ನು ಸಮರ್ಥಿಸಿಕೊಳ್ಳುವುದು  ಹೆಡ್ಡತನ.  ಹಾಗೊಂದು ವೇಳೆ ಇವುಗಳೆ ಆದ್ಯತೆ ಎನ್ನುವುದಾದರೆ ಅದು ದುರಹಂಕಾರದ ಪರಮಾವಧಿಯೇ ಸರಿ!. 

    ಹುಟ್ಟಿನ ನಂತರ ಸಾವು ಬರುವಂತೆ ಬದುಕಿಗೆ ವ್ಯಾಮೋಹಗಳು ಆವರಿಸಿಕೊಂಡ ನಂತರ ಪ್ರಾಯಶ್ಚಿತ್ತ  ಆಗಲೇಬೇಕು.   “ಹುಟ್ಟಿದ್ದೇವೆ! ಸಾಯುತ್ತೇವೆ!” ಅನ್ನುವುದೂ  ಪ್ರತಿಷ್ಟೆಯೇ ಸರಿ! ಆದರೆ ಬದುಕಿರುವಾಗ  ನಮ್ಮೀ ದೇಹದಿಂದ  ಉಪಕಾರವಾಗದೇ ಇದ್ದರೂ ಅಪಕಾರವಾಗದೇ ಇರುವಂತೆ, ಸನ್ಮಾನವಾಗದಿದ್ದರೂ ಅವಮಾನವಾಗದಂತೆ ಎಚ್ಚರವಹಿಸುವುದು ಮನುಷ್ಯನ ನಿಜವಾದ ಗುಣ . ಇಲ್ಲವಾದರೆ ಮನುಷ್ಯ ಮಾತುಬಾರದ ವಿವೇಚನಾ ಶಕ್ತಿ ಇಲ್ಲದ ಪ್ರಾಣಿಗಳಿಗೆ ಯಕಃಶ್ಚಿತ್ ಜಂತುಗಳಿಗೆ ಸಮ.

    ಸ್ವಾರ್ಥಪರಚಿಂತನೆ,ಅರ್ಥವೇ ಮುಖ್ಯವೆಂದರೆ ಅದು ವ್ಯರ್ಥ ಬದುಕು. ಹುಟ್ಟಿದ ಪ್ರತಿಯೊಂದು ಜೀವಿಯೂ ಹಸಿವು,ನಿದ್ದೆ ನೀರಡಿಕೆಗಳನ್ನು ನೀಗಿಸುಕೊಳ್ಳುತ್ತವೆ ಆದರೆ ವಿವೇಕಯುತನಾದ ಮನುಷ್ಯ ಜ್ಞಾನ ಎಂಬ ಹಸಿವನ್ನು ತಣಿಸಿಕೊಳ್ಳಬೇಕು.  ನಾವೇನೇ  ಲಾಗಹಾಕಿದರೂ, ಕಸರತ್ತುಗಳನ್ನು ಮಾಡಿದರೂ ಈ  ಜಗತ್ತಿನಲ್ಲಿ ಶಾಶ್ವತವಾಗಿರಲು ಸಾಧ್ಯವಿಲ್ಲ. “ಕೋಟೆ ಕಟ್ಟಿ ಮೆರೆದವರೆಲ್ಲಾ ಏನೇನಾದರು ” ಎಂಬ ಮಾತೂ ಇದೆಯಲ್ಲ. ಜೀವ ಕ್ಷಣಿಕ ಅಗೋಚರವಾದದ್ದು, ಹುಲ್ಲುಕಡ್ಡಿಯ ಮೇಲೆ ನಿಂತ  ನೀರ ಹನಿಯ ಹಾಗೆ ಯಾವಕ್ಷಣವಾದರೂ  ಜಾರಬಹುದು  ಹಾಗೆ ಮನುಷ್ಯನ ಬದುಕೂ. “ಈಗ ಸೌಖ್ಯವಾಗಿದ್ದಾರೆ” ಎಂದು ಕೊಂಡವರು ಮರುಕ್ಷಣವೇ ಉಸಿರು ಚೆಲ್ಲಬಹುದು!ಇನ್ನೆಲ್ಲೋ ಏಳದಂತೆ ಬೀಳಬಹುದು!

    ಗ್ಯಾರಂಟಿ,ವಾರಂಟಿ  ಎರಡೂ ಇಲ್ಲದ ಬದುಕಿನಲ್ಲಿ  ಉತ್ತಮ ಸಂಸ್ಕಾರವಿರಲಿ,ಸಜ್ಜನಿಕೆಯಿರಲಿ,ಸೌಧರ್ಮಿಕೆಯಿರಲಿ. “ಹುಟ್ಟಿದ ಮೇಲೆ ಸಾಯುತ್ತೇವೆ” ಎಂಬ ಸತ್ಯ ಗೊತ್ತಿದ್ದರೂ ಕೃತ್ರಿಮತೆಯಿಂದ ಪ್ರತಿಕ್ಷಣ ಸಾಯುವುದಕ್ಕಿಂತ  ಸಜ್ಜನಿಕೆಯಿಂದ ನಡೆದುಕೊಂಡು ಅಳಿದ ಮೇಲೂ ಬದುಕೋಣ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!