29.3 C
Karnataka
Sunday, September 22, 2024

    ಬಿಜೆಪಿಯಲ್ಲಿನ ಬೆಳವಣಿಗೆ ಬೃಹತ್ ನಾಟಕ, ಬಿಎಸ್‍ವೈ ತಂತ್ರಗಾರಿಕೆ ಎಂದ ಸಿದ್ಧರಾಮಯ್ಯ

    Must read

    ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಬೃಹತ್ ನಾಟಕ. ನೀನು ಚಿವುಟಿದಂತೆ ಮಾಡು, ನಾನು ಅತ್ತಂತೆ ಮಾಡು ಎನ್ನುವಂತೆ ಆಗಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.ಬಿಜೆಪಿಯಲ್ಲಿ ನಡೆಯುತ್ತಿರುವ ಎಲ್ಲ ನಾಟಕವೂ ರಾಜ್ಯದ ಜನರಿಗೆ ಗೊತ್ತಾಗಿದೆ. ಹೀಗಾಗಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಯಡಿಯೂರಪ್ಪ ಅವರು ಕಳಪೆ ಮುಖ್ಯಮಂತ್ರಿ. ಅವರನ್ನು ತೆಗೆಯುವ ಕುರಿತು ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ. ಆದರೆ, ಕೊರೊನಾ ಕಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಏನಾಗಬಹುದು, ಮುಂದಿನ ಮುಖ್ಯಮಂತ್ರಿ ಯಾರನ್ನು ಮಾಡಬೇಕು ಎಂಬ ಸಂಶಯ ವರಿಷ್ಠರನ್ನು ಕಾಡುತ್ತಿದೆ.ಯಡಿಯೂರಪ್ಪ ಅವರು ಶಾಸಕರಿಂದ ಸಹಿ ಸಂಗ್ರಹ ಮಾಡಬೇಡಿ ಎಂದಿದ್ದಾರೆ. ರೇಣುಕಾಚಾರ್ಯ 65 ಶಾಸಕರು ಈಗಾಗಲೇ ಸಹಿ ಮಾಡಿದ್ದಾರೆ ಎನ್ನುತ್ತಾರೆ. ಈ ಸಹಿಗೆ ಕಿಮ್ಮತ್ತಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲವೂ ಡ್ರಾಮ ಎನ್ನುವುದು ತಿಳಿಯುವುದಿಲ್ಲವೇ ? ಎಂದು ಸಿದ್ಧರಾಮಯ್ಯ ಕೇಳಿದ್ದಾರೆ.

    ನಾನು ವರಿಷ್ಠರು ಹೇಳಿದ ಕೂಡಲೇ ರಾಜಿನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಅವರ ತಂತ್ರಗಾರಿಕೆಯ ಭಾಗ. ಮತ್ತೊಂದೆಡೆ ರೇಣುಕಾಚಾರ್ಯ ಮೂಲಕ ಅವರೇ ಶಾಸಕರ ಸಹಿ ಸಂಗ್ರಹ ಮಾಡಿಸುತ್ತಿದ್ದಾರೆ. ಒಂದು ಕಡೆ ಬೆದರಿಸುವ ಮತ್ತು ನನಗೆ ಶಕ್ತಿ ಇದೆ ಎಂದು ತೋರಿಸಲು ಹೊರಟಿದ್ದಾರೆ. ಇದು ಸ್ವಾಭಾವಿಕವಾದ ರಾಜಕೀಯ ಬೆಳವಣಿಗೆಗಳು ಏನಲ್ಲ ಎಂದೂ ಸಿದ್ಧರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ತಿಳಿಸಿದರು.

    ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯ :
    ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಸವನಗೌಡ ತುರವೀಹಾಳ ಅವರು ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಮಾಡಿರುವ ದ್ರೋಹವನ್ನು ಜನ ಸಹಿಸಲಿಲ್ಲ. ಅವರ ಬಗ್ಗೆ ಅಸಹ್ಯ ಭಾವನೆ ಉಂಟಾಗಿತ್ತು. ಹೀಗಾಗಿ ಮತದಾರರು ಅವರನ್ನು ಸೋಲಿಸುವ ತೀರ್ಮಾನ ಮಾಡಿದ್ದರು.ನಾನು ಮತ್ತು ಶಿವಕುಮಾರ್ ಪ್ರಚಾರ ಮಾಡಿದ್ದರ ಜೊತೆಗೆ ಸ್ಥಳೀಯ ನಾಯಕರೂ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು. ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ಮತ್ತು ಅನುಕಂಪದ ಅಲೆ ಬಸವನಗೌಡ ಅವರ ಗೆಲುವಿಗೆ ಕಾರಣವಾಯಿತು. ಈ ಮೂಲಕ ಮಸ್ಕಿ ಕ್ಷೇತ್ರದ ಜನ ಪಕ್ಷಾಂತರ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

    ಚುನಾವಣೆಯಾದರೆ ನಮ್ಮದೇ ಗೆಲುವು
    ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾಲಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಾತಾವರಣ ನಿರ್ಮಾಣವಾಗಿದೆೆ. ಬಿಜೆಪಿ ಸರಕಾರ ಎಲ್ಲರ ರಂಗಗಳಲ್ಲಿಯೂ ವಿಫಲವಾಗಿರುವುದೇ ಇದಕ್ಕೆ ಕಾರಣ. ಈ ಸರಕಾರದಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಷಯವನ್ನಂತೂ ಕೇಳುವಂತಿಲ್ಲ.

    ನಮ್ಮ ಶಾಸಕರು ಚುನಾವಣೆ ವೇಳೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ಕಳೆದುಕೊಂಡಿದ್ದಾರೆ. ಅಭಿವೃದ್ಧಿಗೆ ಸರಕಾರದಿಂದ ಅನುದಾನ ಬಿಡುಗಡೆ ಆಗದಿರುವುದೇ ಇದಕ್ಕೆ ಕಾರಣ. ಈಗಲೇ ಚುನಾವಣೆ ಬರಬೇಕು ಎಂದು ನಾವು ಬಯಸುವುದಿಲ್ಲ. ಸರಕಾರ ಉರುಳಿಸುವ ಪ್ರಯತ್ನಕ್ಕೂ ಕೈ ಹಾಕುವುದಿಲ್ಲ ಎಂದರು.


    .

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!