21.5 C
Karnataka
Saturday, September 21, 2024

    ಕೋವಿಶೀಲ್ಡ್ ಲಸಿಕೆಯ ನಡುವಿನ ಅಂತರ ಹೆಚ್ಚಿಸಲು ಕಾರಣವೇನು?

    Must read

    ಎರಡು ಕೋವಿಶೀಲ್ಡ್ ಡೋಸ್‌ಗಳ ನಡುವಿನ ಅಂತರವನ್ನು 4-6 ವಾರಗಳಿಂದ 12ರಿಂದ 16 ವಾರಗಳಿಗೆ ಹೆಚ್ಚಿಸುವ ನಿರ್ಧಾರದ ಹಿಂದೆ ಅಡೆನೊವೆಕ್ಟರ್ ಲಸಿಕೆಗಳ ವರ್ತನೆ ಕುರಿತಾದ ಮೂಲಭೂತ ವೈಜ್ಞಾನಿಕ ಕಾರಣ ಅಡಗಿದೆ ಎಂದು ಪ್ರತಿರಕ್ಷಣೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಭಾರತ ಕೋವಿಡ್‌-19 ಕಾರ್ಯಪಡೆಯ ಅಧ್ಯಕ್ಷ ಡಾ. ಎನ್.ಕೆ. ಅರೋರಾ ವಿವರಿಸಿದ್ದಾರೆ.

    “ಲಸಿಕೆ ನಡುವಿನ ಅಂತರವು 12 ವಾರಗಳಾಗಿದ್ದಾಗ ಲಸಿಕೆಯ ಪರಿಣಾಮಕಾರಿತ್ವವು 65% – 88% ರಷ್ಟು ಬದಲಾವಣೆಯಾಗುತ್ತದೆ ಎಂಬುದನ್ನು 2021ರ ಏಪ್ರಿಲ್ ಕೊನೆಯ ವಾರದಲ್ಲಿ ಬ್ರಿಎಟನ್‌ನ ಆರೋಗ್ಯ ಇಲಾಖೆಯ ಕಾರ್ಯಕಾರಿ ಸಂಸ್ಥೆಯಾದ ʻಪಬ್ಲಿಕ್ ಹೆಲ್ತ್ ಇಂಗ್ಲೆಂಡ್ʼ ಬಿಡುಗಡೆ ಮಾಡಿದ ದತ್ತಾಂಶವು ತೋರಿಸಿದೆ. ಇದರ ಆಧಾರದ ಮೇಲೆಯೇ ಅವರು ʻಆಲ್ಫಾʼ ರೂಪಾಂತರಿ ವೈರಸ್‌ನಿಂದ ಉಂಟಾದ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ಜಯಿಸಲು ಸಾಧ್ಯವಾಯಿತು. ಲಸಿಕೆಯ ನಡುವಿನ ಅಂತರವನ್ನು 12 ವಾರ ಇರಿಸಿದ್ದರಿಂದಲೇ ಬ್ರಿಟನ್‌ ಇದರಿಂದ ಹೊರಬರಲು ಸಾಧ್ಯವಾಯಿತು. ಅಡೆನೊವೆಕ್ಟರ್ ಲಸಿಕೆಗಳ ನಡುವಿನ ಅಂತರವನ್ನು ಹೆಚ್ಚಿಸಿದಾಗ ಅವು ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ತೋರಿಸಲು ಮೂಲಭೂತ ವೈಜ್ಞಾನಿಕ ಕಾರಣಗಳಿರುವುದರಿಂದ ಇದು ಉತ್ತಮ ಆಲೋಚನೆ ಎಂದು ನಾವು ಸಹ ಭಾವಿಸಿದೆವು. ಆದ್ದರಿಂದ ಮೇ 13ರಂದು ಲಸಿಕೆ ಡೋಸ್‌ಗಳ ನಡುವಿನ ಅಂತರವನ್ನು 12-16ವಾರಗಳಿಗೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.” ಎಂದು ಅವರು ಡಿಡಿ ನ್ಯೂಸ್ ಗೆ ತಿಳಿಸಿದ್ದಾರೆ.

    “ನಾವು ಅತ್ಯಂತ ಮುಕ್ತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಹೊಂದಿದ್ದೇವೆ, ಅಲ್ಲಿ ವೈಜ್ಞಾನಿಕ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೋವಿಡ್ ಕಾರ್ಯಪಡೆಯು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಈ ನಿರ್ಧಾರವನ್ನು ಕೈಗೊಂಡಿತು. ನಂತರ ಈ ವಿಷಯವನ್ನು ʻಎನ್‌ಟಿಎಜಿಐʼ ಸಭೆಯಲ್ಲಿ ಮತ್ತೆ ಚರ್ಚಿಸಿದಾಗಲೂ ಯಾವುದೇ ಭಿನ್ನಾಭಿಪ್ರಾಯ ವ್ಯಕ್ತವಾಗಲಿಲ್ಲ. ಲಸಿಕೆಯ ಡೋಸ್‌ ನಡುವಿನ ಅಂತರವು 12 – 16 ಆಗಿರಬೇಕು ಎಂಬ ಶಿಫಾರಸು ಅಂಗೀಕರಿಸಲಾಯಿತು.” ಎಂದರು.

    ಲಸಿಕೆ ಡೋಸ್‌ಗಳ ನಡುವೆ ನಾಲ್ಕು ವಾರಗಳ ಅಂತರ ಕುರಿತಾದ ಈ ಹಿಂದಿನ ನಿರ್ಧಾರವು ಆಗ ಲಭ್ಯವಿದ್ದ ಬ್ರಿಡ್ಜಿಂಗ್ ಪ್ರಾಯೋಗಿಕ ದತ್ತಾಂಶವನ್ನು ಆಧರಿಸಿತ್ತು ಎಂದು ಡಾ. ಅರೋರಾ ಹೇಳಿದರು. ಎರಡು ಡೋಸ್‌ಗಳ ನಡುವಿನ ಅಂತರದ ಹೆಚ್ಚಳದಿಂದ ಲಸಿಕೆಯ ಪರಿಣಾಮಕಾರಿತ್ವ ಹೆಚ್ಚಾಗುವುದನ್ನು ತೋರಿಸುವ ಅಧ್ಯಯನಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದರು.

    ಆರಂಭಿಕ ಅಧ್ಯಯನಗಳು ಬಹಳ ವೈವಿಧ್ಯಮಯ

    “ಕೋವಿಶೀಲ್ಡ್ ಕುರಿತ ಆರಂಭಿಕ ಅಧ್ಯಯನಗಳು ಬಹಳ ವೈವಿಧ್ಯಮಯವಾಗಿದ್ದವು. ಬ್ರಿಟನ್‌ನಂತ ಕೆಲವು ದೇಶಗಳು ಡಿಸೆಂಬರ್ 2020ರಲ್ಲಿ ಲಸಿಕೆಯನ್ನು ಪರಿಚಯಿಸಿದಾಗ 12 ವಾರಗಳ ಡೋಸ್ ಅಂತರ ಪಾಲಿಸಿದವು. ನಮಗೆ ಈ ದತ್ತಾಂಶವನ್ನು ಗೌಪ್ಯವಾಗಿರಿಸಲಾಗಿತ್ತು. ಹಾಗಾಗಿ ನಾವು ಡೋಸ್‌ಗಳ ನಡುವಿನ ಅಂತರವನ್ನು ನಿರ್ಧರಿಸಲು ನಮ್ಮ ಬ್ರಿಡ್ಜಿಂಗ್ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಅವಲಂಬಿಸಬೇಕಾಯಿತು. ಅದರಂತೆ ನಾಲ್ಕು ವಾರಗಳ ಅಂತರಕ್ಕೆ ನಿರ್ಧರಿಸಿದೆವು. ಅದು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ತೋರಿಸಿತು. ನಂತರ ನಾವು ಹೆಚ್ಚುವರಿ ವೈಜ್ಞಾನಿಕ ಮತ್ತು ಪ್ರಯೋಗಾಲಯದ ದತ್ತಾಂಶವನ್ನು ಆಧರಿಸಿ ಈ ಅಂತರವನ್ನು ಮತ್ತಷ್ಟು ಹೆಚ್ಚಿಸುವುದು ಸೂಕ್ತವೆಂದು ಭಾವಿಸಿದೆವು. ಅದರಂತೆ ಡೋಸ್‌ಗಳ ನಡುವಿನ ಅಂತರವನ್ನು ಆರು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಎಂದು ನಿರ್ಧರಿಸಲಾಯಿತು. ಲಸಿಕೆಯ ಪರಿಣಾಮಕಾರಿತ್ವವು ನಾಲ್ಕು ವಾರಗಳಲ್ಲಿ 57% ಮತ್ತು ಎಂಟು ವಾರಗಳಲ್ಲಿ ಸುಮಾರು 60% ಇರುವುದನ್ನು ಅಧ್ಯಯನಗಳು ತೋರಿಸಿವೆ.” ಎಂದರು.

    ʻಎನ್‌ಟಿಎಜಿಐʼ ಈ ಅಂತರವನ್ನು ಮೊದಲೇ 12 ವಾರಗಳಿಗೆ ಏಕೆ ಹೆಚ್ಚಿಸಲಿಲ್ಲ ಎಂಬುದರ ಬಗ್ಗೆ ಮಾತನಾಡಿದ ಅವರು, “ನಾವು ಬ್ರಿಟನ್‌ನಿಂದ (ಆಸ್ಟ್ರಾಜೆನೆಕಾ ಲಸಿಕೆಯ ಇತರ ಅತಿದೊಡ್ಡ ಬಳಕೆದಾರ) ತಳಮಟ್ಟದ ದತ್ತಾಂಶಕ್ಕಾಗಿ ಕಾಯಲು ನಿರ್ಧರಿಸಿದ್ದೆವು” ಎಂದು ಹೇಳಿದರು.ಕೋವಿಶೀಲ್ಡ್‌ಗೆ ಸಮಾನವಾಗಿರುವ ಆಸ್ಟ್ರಾಜೆನೆಕಾ ಲಸಿಕೆ ವಿಚಾರದಲ್ಲಿ ಕೆನಡಾ, ಶ್ರೀಲಂಕಾ ಮತ್ತು ಇತರ ಕೆಲವು ದೇಶಗಳು 12-16 ವಾರಗಳ ಅಂತರ ಪಾಲಿಸುತ್ತಿವೆ ಎಂದು ಅವರು ಹೇಳಿದರು.

    “ಆಸ್ಟ್ರಾಜೆನೆಕಾ ಲಸಿಕೆಯ ಒಂದು ಡೋಸ್ ಕೇವಲ 33% ರಕ್ಷಣೆಯನ್ನು ನೀಡುತ್ತದೆ ಮತ್ತು ಎರಡು ಡೋಸ್‌ಗಳು ಸುಮಾರು 60% ರಕ್ಷಣೆಯನ್ನು ನೀಡುತ್ತವೆ ಎಂದು ಬ್ರಿಟನ್‌ನಿಂದ ವರದಿಗಳು ಬಂದವು. ನಾವು ಡೋಸೇಜ್ ಅಂತರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡ 2-3 ದಿನಗಳ ನಂತರ ಈ ವರದಿಗಳು ಬಯಲಾದವು. ಮೇ ತಿಂಗಳ ಮಧ್ಯಭಾಗದಿಂದಲೂ ಭಾರತದವು ನಾಲ್ಕು ಅಥವಾ ಎಂಟು ವಾರ ಅಂತರಕ್ಕೆ ಮರಳಬೇಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು,ʼʼ ಎಂದರು.

    ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ನಿರ್ಣಯಿಸಲು ಟ್ರ್ಯಾಕಿಂಗ್ (ನಿಗಾ) ವ್ಯವಸ್ಥೆಯನ್ನು ಸ್ಥಾಪಿಸಲು ಸಹ ನಿರ್ಧರಿಸಲಾಯಿತು ಎಂದು ಅವರು ಹೇಳಿದರು. “ಎನ್‌ಟಿಎಜಿಐ ಈ ನಿರ್ಧಾರವನ್ನು ತೆಗೆದುಕೊಂಡಾಗ, ಲಸಿಕೆ ಕಾರ್ಯಕ್ರಮದ ಪರಿಣಾಮವನ್ನು ಮಾತ್ರವಲ್ಲದೆ, ಲಸಿಕೆಯ ವಿಧ ಮತ್ತು ಡೋಸ್‌ಗಳ ನಡುವಿನ ಅಂತರವನ್ನು ನಿರ್ಣಯಿಸಲು ಹಾಗೂ ಯಾರಾದರೂ ಸಂಪೂರ್ಣವಾಗಿ / ಭಾಗಶಃ ಲಸಿಕೆ ಪಡೆದಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ಲಸಿಕೆ ನಿಗಾ ವೇದಿಕೆಯನ್ನು ಸ್ಥಾಪಿಸಬೇಕೆಂದೂ ನಾವು ತೀರ್ಮಾನಿಸಿದೆವು. ಭಾರತದಲ್ಲಿ ಸುಮಾರು 17 – 18 ಕೋಟಿ ಜನರು ಕೇವಲ ಒಂದು ಡೋಸ್ ಪಡೆದಿರುವುದರಿಂದ ಮತ್ತು 4 ಕೋಟಿ ಜನರು ಮಾತ್ರ ಎರಡು ಡೋಸ್‌ಗಳನ್ನು ಪಡೆದಿರುವುದರಿಂದ ಈ ವಿಷಯ ತುಂಬಾ ಮುಖ್ಯವಾಗಿತ್ತು,ʼʼ ಎಂದರು.

    ಡಾ. ಅರೋರಾ ಅವರು ಭಾಗಶಃ ವರ್ಸಸ್ ಪೂರ್ಣ ಪ್ರತಿರಕ್ಷಣೆಯ ಪರಿಣಾಮಕಾರಿತ್ವವನ್ನು ಹೋಲಿಸಿದ ಚಂಡೀಗಢದ ʻಪಿಜಿಐʼನ ಅಧ್ಯಯನವನ್ನೂ ಉಲ್ಲೇಖಿಸಿದರು. “ಭಾಗಶಃ ಲಸಿಕೆ ಮತ್ತು ಸಂಪೂರ್ಣವಾಗಿ ಲಸಿಕೆ ಪಡೆದ ಇಬ್ಬರಲ್ಲೂ ಪರಿಣಾಮಕಾರಿತ್ವವು 75% ಆಗಿತ್ತು ಎಂದು ಚಂಡೀಗಢದ ಪಿಜಿಐ ಅಧ್ಯಯನವು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ನೀವು ಭಾಗಶಃ ಅಥವಾ ಸಂಪೂರ್ಣವಾಗಿ ಲಸಿಕೆ ಪಡೆದರೂ ಅಲ್ಪಾವಧಿಯಲ್ಲಿ ಅದರ ಪರಿಣಾಮಕಾರಿತ್ವವು ಒಂದೇ ಆಗಿರುತ್ತದೆ ಎಂದು ಅರ್ಥ ಎಂದು ಅರೋರಾ ಹೇಳಿದರು.

    ಸಿಎಂಸಿ ಅಧ್ಯಯನದ ಫಲಿತಾಂಶ

    ವೆಲ್ಲೂರಿನ ʻಸಿಎಂಸಿʼ ಅಧ್ಯಯನದ ಫಲಿತಾಂಶಗಳೂ ಇದೇ ರೀತಿ ಇದ್ದವೆಂದು ಅವರು ಹೇಳಿದರು. “ಕೆಲವು ದಿನಗಳ ಹಿಂದೆ, 2021ರ ಏಪ್ರಿಲ್ ಮತ್ತು ಮೇನಲ್ಲಿ – ಅಂದರೆ ಭಾರತದಲ್ಲಿ ಎರಡನೇ ಅಲೆಯು ತೀವ್ರವಾಗಿ ವ್ಯಾಪಿಸಿದ್ದ ಅವಧಿಯಲ್ಲಿ ತಮಿಳುನಾಡಿನ ವೆಲ್ಲೂರಿನ ಸಿಎಂಸಿ ನಡೆಸಿದ ಮತ್ತೊಂದು ಪ್ರಮುಖ ಅಧ್ಯಯನವು ಮಹತ್ವದ ವಿಷಯವನ್ನು ಬಯಲು ಮಾಡಿದೆ. ಒಂದು ಡೋಸ್‌ ಕೋವಿಶೀಲ್ಡ್‌ ಪಡೆದ ವ್ಯಕ್ತಿಯಲ್ಲಿ ಲಸಿಕೆಯ ಪರಿಣಾಮಕಾರಿತ್ವವು 61% ಮತ್ತು ಎರಡು ಡೋಸ್ ಪಡೆದ ವ್ಯಕ್ತಿಗಳಲ್ಲಿ ಪರಿಣಾಮಕಾರಿತ್ವವು 65% ಆಗಿರುವುದನ್ನು ವರದಿಯು ಬಹಿರಂಗಪಡಿಸಿದೆ. ಅಂದರೆ ಭಾಗಶಃ ಮತ್ತು ಪೂರ್ಣ ಪ್ರತಿರಕ್ಷಣೆಯ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲವೆಂದು ವರದಿ ತೋರಿಸಿದೆ. ಆದರೆ ವಿಶೇಷವಾಗಿ ಈ ಲೆಕ್ಕಾಚಾರಗಳು ಸ್ವಲ್ಪ ಮಟ್ಟಿನ ಅನಿಶ್ಚಿತತೆ ಒಳಗೊಂಡಿರುವುದರಿಂದ ಬಹಳ ಕಡಿಮೆ ವ್ಯತ್ಯಾಸ ಕಂಡುಬಂದಿರಬಹುದು,ʼʼ ಎಂದರು.

    ನಿರಂತರ ಅಧ್ಯಯನಗಳು ಮತ್ತು ಲಸಿಕೆ ಪರಿಣಾಮಕಾರಿತ್ವದ ಮೇಲ್ವಿಚಾರಣೆ

    ʻಪಿಜಿಐʼ ಮತ್ತು ವೆಲ್ಲೂರಿನ ʻಸಿಎಂಸಿʼ ಅಧ್ಯಯನಗಳಲ್ಲದೆ, ದೆಹಲಿಯಲ್ಲಿರುವ ಮತ್ತೆರಡು ವಿಭಿನ್ನ ಸಂಸ್ಥೆಗಳಿಂದ ಇತರ ಎರಡು ಅಧ್ಯಯನಗಳು ಹೊರಬೀಳುತ್ತಿವೆ ಎಂದು ಡಾ. ಅರೋರಾ ಹೇಳಿದರು. “ಒಂದು ಡೋಸ್‌ ಲಸಿಕೆಯಿಂದ ʻಬ್ರೇಕ್‌ಥ್ರೂ ಇನ್‌ಫೆಕ್ಷನ್‌ʼ (ಲಸಿಕೆ ಪಡೆಯುವುದರಿಂದ ಉಂಟಾಗುವ ಸೋಂಕು) ಸುಮಾರು 4% ರಷ್ಟಿದ್ದರೆ, ಎರಡು ಡೋಸ್‌ಗಳಿಂದ ʻಬ್ರೇಕ್‌ಥ್ರೂ ಇನ್‌ಫೆಕ್ಷನ್‌ʼ 5% ರಷ್ಟಿರುತ್ತದೆ. ಮೂಲತಃ ಯಾವುದೇ ರೀತಿಯ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಈ ಎರಡೂ ಅಧ್ಯಯನಗಳು ಹೇಳಿವೆ. ʻಬ್ರೇಕ್‌ಥ್ರೂ ಇನ್‌ಫೆಕ್ಷನ್‌ʼ ಪ್ರಮಾಣ ಶೇ. 1.5% – 2% ಎಂದು ಮತ್ತೊಂದು ಅಧ್ಯಯನವು ತೋರಿಸಿದೆ,ʼʼ ಎಂದು ಅರೋರಾ ಹೇಳಿದರು.

    ಲಸಿಕೆ ಕಾರ್ಯಕ್ರಮದ ವಿವಿಧ ಅಂಶಗಳ ಪರಿಣಾಮವನ್ನು ನಿರ್ಣಯಿಸಲು ಮತ್ತು ವರದಿ ಮಾಡಲು ವಿವಿಧ ಮೂಲಗಳಿಂದ ದತ್ತಾಂಶವನ್ನು ಸಂಯೋಜಿಸಲಾಗುವುದು ಎಂದು ಡಾ. ಅರೋರಾ ಹೇಳಿದರು. ಲಸಿಕೆ ಬಳಿಕ ಪ್ರತಿಕೂಲ ಪರಿಣಾಮಗಳ (ಎಇಎಫ್‌ಐ) ಮೇಲ್ವಿಚಾರಣೆಗಾಗಿ ಭಾರತವು ದೃಢವಾದ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು.

    ಈ ಪ್ರಶ್ನೆಗೆ ಉತ್ತರಿಸಿದ ಡಾ. ಅರೋರಾ, ಸಮುದಾಯದ ಆರೋಗ್ಯ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ವೈಜ್ಞಾನಿಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. “ಕೋವಿಡ್-19 ಮತ್ತು ಲಸಿಕೆ ಬಹಳ ಕ್ರಿಯಾತ್ಮಕವಾಗಿವೆ. ಲಸಿಕೆಗಳ ನಡುವೆ ಕಡಿಮೆ ಅಂತರವು ನಮ್ಮ ಜನರಿಗೆ ಉತ್ತಮ ಎಂದು ಲಸಿಕೆ ನಿಗಾ ವೇದಿಕೆಯಿಂದ ನಾಳೆ ತಿಳಿದುಬಂದರೆ, ಅದರ ಪ್ರಯೋಜನವು ಕೇವಲ ಶೇಕಡ 5 ರಿಂದ 10ರಷ್ಟೇ ಆಗಿದ್ದರೂ ಸಹ, ಸಮಿತಿಯು ವಿವೇಚನೆ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಮತ್ತೊಂದೆಡೆ, ಪ್ರಸ್ತುತ ಕೈಗೊಂಡಿರುವ ನಿರ್ಧಾರವೇ ಉತ್ತಮವಾಗಿದೆ ಎಂದು ಕಂಡುಬಂದರೆ, ನಾವು ಅದನ್ನು ಮುಂದುವರಿಸುತ್ತೇವೆ.” ಎಂದರು. ಅಂತಿಮವಾಗಿ, ನಮ್ಮ ಸಮುದಾಯದ ಆರೋಗ್ಯ ಮತ್ತು ರಕ್ಷಣೆ ಮುಖ್ಯ ಎಂದು ಅವರು ಒತ್ತಿ ಹೇಳಿದರು.

    “ನಮ್ಮೆಲ್ಲಾ ಚರ್ಚೆಗಳು, ಹೊಸ ವೈಜ್ಞಾನಿಕ ಪುರಾವೆಗಳ ಸಂಶೋಧನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಗೂ ಸಮುದಾಯದ ಆರೋಗ್ಯ ಹಾಗೂ ರಕ್ಷಣೆ ಧ್ಯೇಯವೇ ಚಾಲಕ ಶಕ್ತಿಯಾಗಿದೆ,ʼʼ ಎಂದು ಅವರು ಒತ್ತಿ ಹೇಳಿದರು.(ಪಿಐಬಿ ವರದಿ)

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!