20.6 C
Karnataka
Sunday, September 22, 2024

    ಕೆಲವರು ಈಗಲೇ ಮುಖ್ಯಮಂತ್ರಿ ಆಗುವುದಾದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ: ಡಿಕೆ ಸುರೇಶ್

    Must read

    ಕಾಂಗ್ರೆಸ್ ಪಕ್ಷದಲ್ಲಿ ಕೂಸು ಹುಟ್ಟುವ ಮುನ್ನವೆ ಕುಲಾವಿ ಅನ್ನವಂಥ ಸ್ಥಿತಿ ನಿರ್ಮಾಣವಾಗಿದೆೆ. ಸಿಎಂ ಹುದ್ದೆ ಯಾರಿಗೆ ಎಂಬುದರ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಇಂದು ಸಂಸದ ಡಿ ಕೆ ಸುರೇಶ್ ಈ ಬಗ್ಗೆ ಮಾತನಾಡಿದ್ದಾರೆ.

    ‘ನಿಜವಾದ ಕಾಂಗ್ರೆಸ್ಸಿಗರು, ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆಯತ್ತ ಗಮನಹರಿಸುತ್ತಾರೆ. ಅವರು ಪಕ್ಷದ ಶಿಸ್ತು ಕಲಿತಿರುತ್ತಾರೆ. ಆದರೆ ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದಿರುವವರು, ಅಧಿಕಾರಕ್ಕೆ ಜೋತು ಬಿದ್ದಿರುವವರು ಹೀಗೆಲ್ಲಾ ಮಾತನಾಡಿ, ಗೊಂದಲ ಸೃಷ್ಟಿಸುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

    ಭವಿಷ್ಯದ ಸಿಎಂ ವಿಚಾರವಾಗಿ ಪಕ್ಷದಲ್ಲಿ ಎದ್ದಿರುವ ಚರ್ಚೆ ಸಂಬಂಧ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು ಹೇಳಿದ್ದಿಷ್ಟು:

    ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಶಿಸ್ತು, ಅಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಪಕ್ಷದ ಹೈಕಮಾಂಡ್ ಗೆ ಸೇರಿದ್ದರು. ವರಿಷ್ಠರು ಅದನ್ನು ನೋಡಿಕೊಳ್ಳುತ್ತಾರೆ.

    ‘ಸಿಎಂ ಸ್ಥಾನದ ಬಗ್ಗೆ ಮಾತನಾಡುತ್ತಿರುವವರಿಗೆ ಒಳ್ಳೆಯದಾಗಲಿ. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲ. ಸಿಎಂ ಸ್ಥಾನ ಖಾಲಿಯೂ ಇಲ್ಲ. ಕಾಂಗ್ರೆಸ್ ನ ಈಗಿನ ಶಾಸಕರು ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. 2023 ಕ್ಕೆ ಚುನಾವಣೆ ಇದೆ. ಚುನಾವಣೆ ಗೆಲ್ಲುವ ಬಗ್ಗೆ ಶಾಸಕರು ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ನಾವು ಭಾವಿಸಿದ್ದೇವೆ. ಕೆಲವರು ಈಗಲೇ ಮುಖ್ಯಮಂತ್ರಿ ಆಗುವುದಾದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದರು.

    ಅದು ಶಾಸಕರ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯವಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, ‘ಅವರು ಅವರ ವೈಯಕ್ತಿಕ ಅಭಿಪ್ರಾಯ ಹೇಳಬಹುದು, ನಾನು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಬಹುದು. ಆದರೆ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕಲ್ಲ, ಅದು ಮುಖ್ಯ’ ಎಂದರು.

    ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಶಾಸಕರ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಸುರೇಶ್ ಅವರು, ‘ಚುನಾವಣೆ ನೇತೃತ್ವದ ಬಗ್ಗೆ ಚರ್ಚೆ ಮಾಡಲು ಸಮಯ ಬಹಳ ದೂರವಿದೆ. ಈಗ ಕರೋನಾ ಇದ್ದು, ಅದನ್ನು ನಿಭಾಯಿಸಲು ಏನು ಮಾಡಬೇಕು ಎಂಬುದನ್ನು ಅವರು ಹೇಳಬೇಕು’ ಎಂದು ತಿಳಿಸಿದರು.

    ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿದರು ಎಂಬಂತೆ, ವಿರೋಧ ಪಕ್ಷದವರು ಸಿಎಂ ಸ್ಥಾನದ ಬಗ್ಗೆ ಮಾತನಾಡುತ್ತಿರಲು ಕಾರಣ ಏನು? ಇದು ಗೊಂದಲ ಸೃಷ್ಟಿಸುವುದಿಲ್ಲವೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅವರು, ‘ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ, ಹೀಗಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ವಿರೋಧ ಪಕ್ಷದ ಶಾಸಕರಂತೆ ಕೆಲಸ ಮಾಡಬೇಕಿದೆ. ಅವರ ಹೇಳಿಕೆಗಳು ಬರೀ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಗೊಂದಲ ಉಂಟು ಮಾಡುತ್ತದೆ. ಕೆಲವರು ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮನಸ್ಥಿತಿ ಉಳ್ಳವರು. ನಿಜವಾದ ಕಾಂಗ್ರೆಸ್ ನಾಯಕರಾರೂ ಈ ರೀತಿ ಮಾತನಾಡುವುದಿಲ್ಲ, ಅನಗತ್ಯ ಭಾವನೆ ವ್ಯಕ್ತಪಡಿಸುವುದಿಲ್ಲ. ಅವರು ಕಾಂಗ್ರೆಸ್ ಶಿಸ್ತನ್ನು ಕಲಿತಿರುತ್ತಾರೆ. ಅಧಿಕಾರಕ್ಕಾಗಿಯೇ ಕಾಂಗ್ರೆಸ್ ಗೆ ಬಂದವರನ್ನು, ಅದಕ್ಕೆ ಜೋತು ಬಿದ್ದವರನ್ನು ಯಾರು, ಏನೂ ಮಾಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

    ಅಶಿಸ್ತು ತೋರಿದವರಿಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಶಿಸ್ತು, ಅಶಿಸ್ತಿನ ವಿಚಾರವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ. ಯಾರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೋ ಅವರು ಅಶಿಸ್ತನ್ನು ಅಭ್ಯಾಸ ಮಾಡಿಕೊಂಡಿದ್ದು, ನಿಜವಾದ ಕಾಂಗ್ರೆಸಿಗರು ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿದ್ದಾರೆ’ ಎಂದರು.

    ಶಾಸಕಾಂಗ ಪಕ್ಷದ ನಾಯಕರು ಇದನ್ನು ನಿಯಂತ್ರಿಸಬೇಹುದಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, ‘ನಾನು ಆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು, ಪಕ್ಷದ ರಾಜ್ಯ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ನೇಮಕವಾಗಿದ್ದಾರೆ. ಅವರಿಬ್ಬರೂ ಅವರವರ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯದಲ್ಲಿರುವವರಿಗೆ ಏನು ಕೆಲಸ? ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕಾದ ಜವಾಬ್ದಾರಿ ಇದೆ. ಕರೋನಾ ಸಮಯದಲ್ಲಿ ಆಡಳಿತ ಪಕ್ಷದ ವೈಫಲ್ಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಸಿಎಂ ಹುದ್ದೆ ಸೇರಿ ಸದ್ಯಕ್ಕೆ ಯಾವುದೇ ಸ್ಥಾನ ಖಾಲಿ ಇಲ್ಲ. ಖಾಲಿ ಆದಾಗ ಯಾರ್ಯಾರು ಚರ್ಚೆಗೆ ಬರುತ್ತಾರೋ ಅವರಿಗೆಲ್ಲ ಆಗ ಸವಾಲು ಮಾಡೋಣ’ ಎಂದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!