26.8 C
Karnataka
Sunday, September 22, 2024

    ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ವಿಜ್ಞಾನ ವಿಷಯಗಳ ಬಗ್ಗೆ ಬರೆದ ಸುಧೀಂದ್ರ ಹಾಲ್ದೊಡ್ಡೇರಿ

    Must read


    20 ವರ್ಷಗಳ ಕಾಲ ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ ಕೆಲಸ ಮಾಡಿದ, ಆತ್ಮೀಯ ಒಡನಾಟ ಹೊಂದಿದ್ದ ಕನ್ನಡದ ಕಟ್ಟಾಳು ರಾ.ನಂ.ಚಂದ್ರಶೇಖರ ಅವರು ಶುಕ್ರವಾರ (ಜುಲೈ 2) ಅಗಲಿದ ತಮ್ಮ ಚಿರಕಾಲದ ಗೆಳೆಯನನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.


    ರಾ. ನಂ. ಚಂದ್ರಶೇಖರ

    ನ್ನಡದ ಪ್ರಸಿದ್ಧ ವಿಜ್ಞಾನ ಲೇಖಕ ʼಸುಧೀಂದ್ರ ಹಾಲ್ದೊಡ್ಡೇರಿʼ ಎಂದೇ ಪ್ರಸಿದ್ಧರಾಗಿದ್ದ ಎಚ್.ಎನ್. ಸುಧೀಂದ್ರ ಪತ್ರಕರ್ತರಾಗಿ ದೊಡ್ಡ ಹೆಸರಾಗಿದ್ದ ಎಚ್.ಆರ್.ನಾಗೇಶರಾವ್ (ಸುದ್ದಿಮನೆ ನಾಗೇಶರಾವ್)-ಎಚ್.ಎನ್.ಪ್ರೇಮಾ ದಂಪತಿಯ ಹಿರಿಯ ಪುತ್ರ. ಮದ್ರಾಸಿನ ಐ.ಐ.ಟಿ.ಯಿಂದ ಥರ್ಮಲ್ ಟರ್ಬೋ ಮೆಷಿನ್ಸ್ ವಿಷಯದಲ್ಲಿ ಎಂ.ಟೆಕ್. ಪದವಿಗಳನ್ನು ಪಡೆದಿದ್ದ ಸುಧೀಂದ್ರ ಅವರು ವಿಜ್ಞಾನಿಯಾಗಿ, ವಿಜ್ಞಾನ ಬರಹಗಾರರಾಗಿ ಕನ್ನಡ ನಾಡು-ನುಡಿಗೆ ನೀಡಿದ ಕಾಣಿಕೆ ಅನನ್ಯ-ಅಪೂರ್ವ.

    ವೃತ್ತಿಯಿಂದ ವಿಜ್ಞಾನಿಯಾಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಅವರು, ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ವಿಜ್ಞಾನ ಬರಹಗಾರರಾಗಿ 2001ರಿಂದ ʼವಿಜಯ ಕರ್ನಾಟಕ’ದಲ್ಲಿ ಸತತವಾಗಿ 18 ವರ್ಷ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಬರೆದ ʼನೆಟ್ ನೋಟ’ ಅಂಕಣ ಭಾರತೀಯ ಭಾಷೆಗಳಲ್ಲಿ ಅಳಿಸಲಾಗದ ದಾಖಲೆ. 2500ಕ್ಕೂ ಹೆಚ್ಚಿನ ಸಂಖ್ಯೆಯ ವಿಜ್ಞಾನ ಲೇಖನಗಳನ್ನು ಕನ್ನಡದ ಬಹುತೇಕ ಎಲ್ಲ ಪತ್ರಿಕೆ/ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದ ಸುಧೀಂದ್ರ ಅವರು ಬಹುದೊಡ್ಡ ವಿಜ್ಞಾನಿಯಾಗಿದ್ದರು. ʼಡೆಕ್ಕನ್ ಹೆರಾಲ್ಡ್’ ಪತ್ರಿಕೆ ಸೇರಿದಂತೆ ಕೆಲವು ವೃತ್ತಿ ಸಂಬಂಧಿತ ಟ್ರೇಡ್ ಮ್ಯಾಗಝಿನ್‍ಗಳಿಗೆ ತಂತ್ರಜ್ಞಾನ ವಿಷಯಗಳ ಬಗ್ಗೆ ಇಂಗ್ಲಿಷ್‍ನಲ್ಲೂ ಲೇಖನಗಳನ್ನು ಬರೆದಿದ್ದಾರೆ. ʼಇಂಟರ್‍ನೆಟ್ ಎಂಬ ಮಾಯಾಜಾಲ’, ʼಬೆಳಕಿಂಡಿ’, ʼಮಕ್ಕಳಿಗಾಗಿ ಕಂಪ್ಯೂಟರ್ʼ, `ಕಂಪ್ಯೂಟರ್ ಎಲ್ಲಿಂದ ಎಲ್ಲಿಯವರೆಗೆ’, ʼಸದ್ದು, ಸಂಶೋಧನೆ ನಡೆಯುತ್ತಿದೆ!’, ʼಬಾಹ್ಯಾಕಾಶ ವೆಂಬ ಬೆರಗಿನಂಗಳ’ ಪುಸ್ತಕಗಳನ್ನು ರಚಿಸಿದ್ದಾರೆ. ಇಷ್ಟೆಲ್ಲ ಬರೆದ ಅವರು ಬಹು ಪ್ರತಿಷ್ಠಿತ ರಕ್ಷಣಾ ಸಂಸ್ಥೆ ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು.

    ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ವೈಜ್ಞಾನಿಕ ಸಹಾಯಕರಾಗಿ (1985-86). ಆ ಎರಡು ವರ್ಷಗಳ ಅವಧಿಯಲ್ಲಿ ಅವರು ಪೃಥ್ವಿ ಕ್ಷಿಪಣಿಯ ರಾಕೆಟ್ ಮೋಟಾರ್ ಕೇಸಿಂಗ್‍ನ ಸಾಮರ್ಥ್ಯ ವಿಶ್ಲೇಷಣಾ ವಿಷಯದಲ್ಲಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರದ ʼರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ (ಡಿ.ಆರ್.ಡಿ.ಒ.) ವಿಜ್ಞಾನಿಯಾಗಿ 1986ರಲ್ಲಿ ಆಯ್ಕೆಯಾದಾಗ ಅವರು ನೇಮಕಗೊಂಡಿದ್ದು ಎಚ್.ಎ.ಎಲ್.ನ ಸಿ.ಆರ್.ಇ. ಕಚೇರಿಗೆ. ಎಚ್‌ಎಎಲ್‍ನಲ್ಲಿ ಅವರು ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಹಲವು ನೆಲೆಗಳಲ್ಲಿ ಕೆಲಸ ಮಾಡಿದ್ದರು. ಹೆಲಿಕಾಪ್ಟರ್ ವಿಭಾಗದ ಚೀತಾ, ಚೇತಕ್ ಹೆಲಿಕಾಪ್ಟರ್‌ಗಳು ಸಿಯಾಚಿನ್ ಸೇರಿದಂತೆ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಾಗಿನ ಸಮಸ್ಯೆಗಳ ನಿವಾರಣೆಗೆಂದು ವಾಯುಪಡೆ ರೂಪಿಸಿದ್ದ ತಾಂತ್ರಿಕ ತನಿಖಾ ಸಮಿತಿಯ ಸದಸ್ಯರಾಗಿ ದೊಡ್ಡ ಕೊಡುಗೆ ನೀಡಿದ್ದರು. ಜತೆಗೆ ʼಸ್ವದೇಶಿ ಜೆಟ್ ಟ್ರೇನರ್ ವಿಮಾನ’, ʼಹಾಕ್ ಅಡ್ವಾನ್ಸ್‍ಡ್ ಜೆಟ್ ಟ್ರೇನರ್ ವಿಮಾನ’, `ಹಿಂದೂಸ್ತಾನ್ ಟರ್ಬೋ ಟ್ರೇನರ್ ವಿಮಾನ’ಗಳ ವಾಯುಪಡೆಯ ತಾಂತ್ರಿಕ ಪರಿಶೀಲನಾ ಸಮಿತಿಗಳ ಸದಸ್ಯರಾಗಿದ್ದರು. 2008ರಲ್ಲಿ ಎಚ್.ಎ.ಎಲ್‍ನ ಎ.ಆರ್.ಡಿ.ಸಿ. ವಿಭಾಗದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಇಂಧನ ಪೂರೈಕೆ ವ್ಯವಸ್ಥೆ ಮತ್ತು ಪ್ರೊಪಲ್ಷನ್ ಸಮೂಹದ ಮುಖ್ಯಸ್ಥರಾಗಿ ಎಲ್.ಸಿ.ಎ. ಮತ್ತು ಐ.ಜೆ.ಟಿ. ವಿಮಾನಗಳ ಯಾಂತ್ರಿಕ ವ್ಯವಸ್ಥೆಗಳ ವಿನ್ಯಾಸ, ಮೊದಲ ಮಾದರಿ ತಯಾರಿಕೆ, ವಿಮಾನ/ಎಂಜಿನ್‍ಗಳಲ್ಲಿ ಅಳವಡಿಕೆ, ಪರೀಕ್ಷೆ, ಹಾರಾಟ ದೃಢೀಕರಣ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಎಚ್.ಎ.ಎಲ್ ತಯಾರಿಸಿದ ಹಲವು ಯುದ್ಧ ವಿಮಾನಗಳ ಪ್ರಮಾಣೀಕರಣಕ್ಕೆ ಅಗತ್ಯವಾದ ಪರೀಕ್ಷೆಗಳನ್ನು ಆಯೋಜಿಸುವುದರಲ್ಲೂ ತಮ್ಮ ಕಾಣಿಕೆ ನೀಡಿದ್ದಾರೆ.

    ಸ್ವಯಂ ನಿವೃತ್ತಿ ಪಡೆದ ನಂತರ ಜೈನ್ ಹಾಗೂ ಅಲಯನ್ಸ್ ವಿಶ್ವವಿದ್ಯಾಲಯಗಳಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಇವರು ಕೆಲಸ ಮಾಡಿದರು. ನಂತರ ‘ಕ್ವೆಸ್ಟ್ ಗ್ಲೋಬಲ್ ಎಂಜಿನಿಯರಿಂಗ್’ ಕಂಪನಿಯ ರೋಲ್ಸ್-ರಾಯ್ಸ್ ಆಫ್-ಶೋರ್ ಡೆವಲಪ್‍ಮೆಂಟ್ ಸೆಂಟರ್‌ನಲ್ಲಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಹಲವು ಖಾಸಗಿ ವೈಮಾಂತರಿಕ್ಷ ಕಂಪನಿಗಳಿಗೆ ಸಲಹೆಗಾರರಾಗಿದ್ದಾರೆ. ವೃತ್ತಿ ಸಂಬಂಧಿತ ಕಾರ್ಯಗಳಿಗಾಗಿ ಎರಡು ಬಾರಿ ಅಮೆರಿಕ, ಒಮ್ಮೆ ಬ್ರೆಜಿಲ್, ರಷ್ಯ ಹಾಗೂ ಜರ್ಮನಿ ದೇಶಗಳಿಗೆ ಭೇಟಿ ಇತ್ತಿದ್ದಾರೆ. ದೇಶದ ಆಯಕಟ್ಟಿನ ವಾಯುನೆಲೆಗಳಲ್ಲಿ ವಿಮಾನ / ಹೆಲಿಕಾಪ್ಟರ್ ಪರೀಕ್ಷಾರ್ಥ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.

    ವೃತ್ತಿ-ಪ್ರವೃತ್ತಿ ಎರಡರಲ್ಲೂ ಮಾನ್ಯತೆ ಪಡೆದ ಸಾಧಕ

    ವೈಮಾನಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗೆ 1999ರಲ್ಲಿ ʼಡಿ.ಆರ್.ಡಿ.ಒ. ಪುರಸ್ಕಾರ’, 2002ರ ‘ರಾಷ್ಟ್ರೀಯ ವಿಜ್ಞಾನ ದಿನದ ಪದಕ’, 2004 ಮತ್ತು 2005ರಲ್ಲಿ ಸತತವಾಗಿ `ಡಿ.ಆರ್.ಡಿ.ಒ. ಉತ್ತಮ ಕಾರ್ಯಪಡೆ ಪ್ರಶಸ್ತಿ’ಗಳನ್ನು ಪಡೆದಿದ್ದರು.

    ವಿಜ್ಞಾನ ಸಾರಸ್ವತ ಲೋಕಕ್ಕೆ ಅವರು ನೀಡಿರುವ ಕೊಡುಗೆಗಾಗಿ ʼಕನ್ನಡ ವಿಜ್ಞಾನ ಪರಿಷತ್ತು ರಜತೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ʼವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ’ಯ ಶ್ರೇಷ್ಠ ವಿಜ್ಞಾನ ಸಂವಹನಾಕಾರ ಪ್ರಶಸ್ತಿ’ ಹಾಗೂ ʼಕರ್ನಾಟಕ ಕಾರ್ಮಿಕ ಲೋಕ’ದ ಪುರಸ್ಕಾರಗಳು ದೊರೆತಿವೆ. ಅವರ ಕಣ್ಮರೆಯಾದ ದಿನ ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಅನುಪಮ ನಿರಂಜನ ಹೆಸರಿನಲ್ಲಿ ನೀಡುವ ʼಅತ್ಯತ್ತಮ ವಿಜ್ಞಾನ ಲೇಖಕʼ ಪ್ರಶಸ್ತಿ ಬಂದಿದೆ.

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕ್ಯಾಡೆಮಿಯ ಸದಸ್ಯರಾಗಿ ಸುಧೀಂದ್ರ ಅವರು ಅನೇಕ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಕ್ಯಾಡೆಮಿಕ್ ಕೌನ್ಸಿಲ್ ಮತ್ತು ʼಬೋರ್ಡ್ ಆಫ್ ಸ್ಟಡೀಸ್’ನ ಸದಸ್ಯರಾಗಿ, ಶಾಲಾ-ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡುವುದರ ಜತೆಗೆ ಆಕಾಶವಾಣಿ, ಎಫ್.ಎಂ.ರೇಡಿಯೊ, ದೂರದರ್ಶನ, ಖಾಸಗಿ ಟಿವಿ ಚಾನೆಲ್‍ಗಳ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರು ಸಲ್ಲಿಸಿದ ಸೇವೆ ಸಾರ್ಥಕವಾದ್ದು.

    ಸುಧೀಂದ್ರ ಅವರ ಕುಟುಂಬದಲ್ಲಿ ಎಲ್ಲರೂ ಕಲಾಪ್ರೇಮಿಗಳು. ತಂದೆ ನಾಗೇಶರಾಯರು ಪತ್ರಕರ್ತರು, ಹಾಸ್ಯ ಲೇಖಕರು ತಾಯಿ ಪ್ರೇಮಾ ಹಾಗೂ ಮಡದಿ ಎಂ.ವಿ.ಸೌಮ್ಯ ಸುಮಾ ರಂಗೋಲಿ, ಚಿತ್ತಾರಗಳಲ್ಲಿ ಪರಿಣಿತರು, ಕಿರಿಯ ಮಗಳು ಮಾಧುರ್ಯ ಸುಧೀಂದ್ರ ಚಿತ್ರಕಲೆ, ಪೇಂಟಿಂಗ್ ಹಾಗೂ ಕಾರ್ಟೂನ್‍ಗಳ ರಚನೆಯಲ್ಲಿ ಆಸಕ್ತರು. ಇತ್ತ ಹಿರಿಯ ಮಗಳು ಮೇಘನಾ ಸುಧೀಂದ್ರ ಬರಹಗಾರಳಾಗಿ-ಅಂಕಣಕಾರಳಾಗಿ ಗುರುತಿಸಿಕೊಂಡಿದ್ದಾರೆ. ʼಜಯನಗರದ ಹುಡುಗಿ’ ಇತರೆ ಪುಸ್ತಕಗಳು ಈಗಾಗಲೇ ಪ್ರಕಟವಾಗಿದೆ. (ಲೇಖನ ಕೃಪೆ: cknewsnow.com)

    ಇದನ್ನು ಓದಿ : ಸುಧೀಂದ್ರ ಹಾಲ್ದೊಡ್ಡೇರಿ ನಿಧನ

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!