26.8 C
Karnataka
Sunday, September 22, 2024

    ಅಬುಧಾಬಿ ಆಸ್ಪತ್ರೆಯಲ್ಲಿ ಚಿಂತಾಮಣಿಯ ವೈದ್ಯನಿಗೆ ಉದ್ಯೋಗ; ವರ್ಷಕ್ಕೆ 1 ಕೋಟಿ ರೂ. ಪ್ಯಾಕೇಜ್

    Must read

    ವಿದೇಶಗಳ ಬೇಡಿಕೆಗೆ ಅನುಗುಣವಾಗಿ ಕುಶಲ ಮಾನವ ಸಂಪನ್ಮೂಲವನ್ನು ಒದಗಿಸುವ ಮೊದಲ ಹೆಜ್ಜೆಯಾಗಿ ರಾಜ್ಯದ ಯುವ ತಜ್ಞ ವೈದ್ಯರೊಬ್ಬರಿಗೆ ಅಬುಧಾಬಿಯಲ್ಲಿ ಅತ್ಯುತ್ತಮ ಆಫರ್‌ ಸಿಕ್ಕಿದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

    ಹೊಸದಾಗಿ ಸ್ಥಾಪನೆ ಮಾಡಿರುವ ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಶ್ವಾಸಕೋಶ ತಜ್ಞರಾದ ಡಾ.ಗಂಗಿರೆಡ್ಡಿ ಅವರಿಗೆ ಯುಎಇಯಲ್ಲಿರುವ ಪ್ರತಿಷ್ಠಿತ ರೆಸ್ಪಾನ್ಸ್‌ ಪ್ಲಸ್‌ ಮೆಡಿಕಲ್‌ ಆಸ್ಪತ್ರೆ (Response Plus Medical-RPM) ಯಲ್ಲಿ ವಿಶೇಷ ತಜ್ಞವೈದ್ಯರ ಹುದ್ದೆಗೆ ನೇಮಕವಾಗಿದ್ದು, ಅವರಿಗೆ ವಾರ್ಷಿಕ 1 ಕೋಟಿ ರೂ. ಪ್ಯಾಕೇಜ್‌ ನೀಡಲಾಗಿದೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದವರು ಎಂದು ಡಿಸಿಎಂ ಮಾಹಿತಿ ನೀಡಿದರು.

    ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಬೆಂಗಳೂರಿನಲ್ಲಿ ಗುರುವಾರದಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್‌ ಅವರಿಂದ ಡಾ.ಗಂಗಿರೆಡ್ಡಿ ಅವರು ಪಡೆದುಕೊಂಡಿದ್ದಾರೆ. ರೆಡ್ಡಿ ಅವರಿಂದ ವೀಸಾ, ವಿಮಾನ ಪ್ರಯಾಣ, ವಿಮೆ, ವಸತಿ ಇತ್ಯಾದಿಗಳ ಯಾವುದೇ ಸೇವಾ ಶುಲ್ಕವನ್ನು ಪಡೆಯದೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ ಡಾ.ಗಂಗಿರೆಡ್ಡಿ ಅವರಿಗೆ ಅಭಿನಂದನೆಗಳು. ಅವರ ಉತ್ತಮ ಕಾರ್ಯನಿರ್ವಹಣೆಯಿಂದ ರಾಜ್ಯದ ಇನ್ನಷ್ಟು ವೈದ್ಯರಿಗೆ ಆ ದೇಶಗಳಲ್ಲಿ ಉದ್ಯೋಗ ಸಿಗಲಿ ಎಂದು ಡಾ.ಅಶ್ವತ್ಥನಾರಾಯಣ ಹಾರೈಸಿದರು.

    ಈಗಷ್ಟೇ ಕೋವಿಡ್‌-19 ಎರಡನೇ ಅಲೆಯ ಲಾಕ್‌ಡೌನ್‌ ಮುಗಿದಿದ್ದು, ವಿದೇಶಗಳಿಗೆ ರಾಜ್ಯದ ಕುಶಲ ಮಾನವ ಸಂಪನ್ಮೂಲನವನ್ನು ಒದಗಿಸುವ ಪ್ರಕ್ರಿಯೆಯನ್ನು ಪುನಾ ಆರಂಭಿಸಲಾಗಿದೆ. ಬೇಡಿಕೆಗೆ ತಕ್ಕಂತೆ ವೈದ್ಯರು, ನರ್ಸುಗಳು ಸೇರಿದಂತೆ ಇತರೆ ಯಾವುದೇ ಕ್ಷೇತ್ರಕ್ಕೆ ಸಿಬ್ಬಂದಿ ಇದ್ದರೂ ಕೌಶಲ್ಯಾಭಿವೃದ್ಧಿ ನಿಗಮದ ಅಡಿಯಲ್ಲಿ ಸ್ಥಾಪಿಸಲಾಗಿರುವ ವಲಸೆ ಕೇಂದ್ರದ ಮೂಲಕ ಕಳಿಸಲಾಗುವುದು. ಯಾವುದೇ ಖಾಸಗಿ ಏಜೆನ್ಸಿಗಳನ್ನು ನಂಬಿಕೊಂಡು ಯಾರೂ ಮೋಸ ಹೋಗುವುದು ಬೇಡ ಎಂದು ಡಿಸಿಎಂ ಹೇಳಿದರು.

    ಕೌಶಲ್ಯಾಭಿವೃದ್ಧಿ‌ ನಿಗಮದ ವ್ಯವಸ್ಥಾಪಕ ‌ನಿರ್ದೇಶಕ ಅಶ್ವಿನ್ ಗೌಡ ಅವರ ಶ್ರಮದಿಂದಾಗಿ ಈ ಪ್ರಯತ್ನ ಯಶಸ್ವಿಯಾಗಿದ್ದು ಮತ್ತಷ್ಟು ಜನರಿಗೆ ಇದರ ಉಪಯೋಗ ಆಗುವ ಹಾಗೆ ಮಾಡಲಾಗುವುದು ಎಂದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!