21.5 C
Karnataka
Sunday, September 22, 2024

    ಬಿಜೆಪಿ ಎದುರಿಸಲು ಅಗ್ರೆಸಿವ್ ಆಗುವಂತೆ ರಕ್ಷಾ ರಾಮಯ್ಯಗೆ ಸಿದ್ಧರಾಮಯ್ಯ ಸಲಹೆ

    Must read

    BENGALURU AUG 13

    ಭಾರತೀಯ ಜನತಾ ಪಾರ್ಟಿ ಸ್ಥಾಪನೆಯಾದದ್ದು 1980 ರಲ್ಲಿ. ಈ ಪಕ್ಷದ ಯಾವೊಬ್ಬ ನಾಯಕನೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರದಲ್ಲಿ ಪಾಲ್ಗೊಂಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಇತಿಹಾಸ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನಾನು ಕಾಂಗ್ರೆಸಿಗ ಎಂಬುದೇ ನಾವು, ನೀವು ಹೆಮ್ಮೆಪಡಬೇಕಾದ ಸಂಗತಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

    ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವರು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

    ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುವುದರಲ್ಲಿ ಪ್ರವೀಣರು. ಜನರಿಗೆ ಸತ್ಯದ ಅರಿವಾದ್ರೆ ಬಿಜೆಪಿ ಜೊತೆ ಯಾರೂ ಹೋಗಲ್ಲ, ಪಕ್ಷದ ಹಿಂಬಾಲಕರು ಕಡಿಮೆಯಾಗ್ತಾರೆ ಅಂತ ಭಯ. ಸಿ.ಟಿ ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇವರು ಇತಿಹಾಸ ಓದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಕಾರಣ ಇತಿಹಾಸದ ಕನಿಷ್ಠ ಜ್ಞಾನ ಇದ್ದರೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಹಗುರಾಗಿ ಮಾತನಾಡುತ್ತಾ ಇರಲಿಲ್ಲ.

    ನಮಗೆ ದೇಶಪ್ರೇಮದ ಪಾಠ ಮಾಡುವ ಬಿಜೆಪಿಯವರು ಎಂದಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಮಾಡಿದ್ರಾ? ಮೊಘಲರು, ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು ಇದೇ ಆರ್.ಎಸ್.ಎಸ್ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರಲ್ಲವೇ? ಟಿಪ್ಪುವಿನ‌ ಆಸ್ಥಾನದಲ್ಲಿ ದಿವಾನರಾಗಿದ್ದವರು ಪೂರ್ಣಯ್ಯನವರಲ್ಲವೇ? ಟಿಪ್ಪು ಜಯಂತಿಗೆ ವಿರೋಧ ಮಾಡೋರು ಪೂರ್ಣಯ್ಯನನ್ನು, ಕೃಷ್ಣಸ್ವಾಮಿಯನ್ನು ಏಕೆ ವಿರೋಧ ಮಾಡಲ್ಲ? ಅವರೆಲ್ಲ ನಮ್ಮವರು ಎಂಬ ಭಾವನೆಯೇ? ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

    ರಕ್ಷಾ ರಾಮಯ್ಯ ಸಜ್ಜನ, ಸಂಭಾವಿತ ನಾಯಕ. ಆದರೆ ಕೋಮುವಾದಿಗಳನ್ನು ಖಂಡಿಸುವಾಗ ಅಗ್ರೆಸಿವ್ ಆಗಿರಬೇಕಾಗುತ್ತದೆ. ಬಿಜೆಪಿಯವರು ಢೋಂಗಿಗಳು. ಇಂತಹಾ ಮೋಸಗಾರರು, ಸುಳ್ಳು ಹೇಳುವವರು ಭಾರತದ ರಾಜಕಾರಣದಲ್ಲಿ ಬೇರಾರು ಇಲ್ಲ. ಮೋದಿ ಮೋದಿ ಎಂದು ಕುಣಿಯುತ್ತಿದ್ದ ಯುವಜನತೆ ಇಂದು ಮೋದಿಯವರ ಆಡಳಿತದಿಂದ ಭ್ರಮನಿರಸನರಾಗಿದ್ದಾರೆ. ಹಿಂದೆ ನಾವು ಹೋದ ಕಡೆ ಕೆಲವರು ಮೋದಿ ಮೋದಿ ಎಂದು ಕೂಗುತ್ತಿದ್ದರು, ಈಗ ಅವರೆಲ್ಲಾ ಎಲ್ಲೋದ್ರಪ್ಪಾ? ಏನಾಯ್ತಪ್ಪ ಅವರ ಕತೆ? ಎಂದು ಕೇಳಿದರು.

    ಕರ್ನಾಟಕಕ್ಕೆ ಹದಿನೈದನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ರೂ. 5,495 ಕೋಟಿ ವಿಶೇಷ ಅನುದಾನವನ್ನು ತಿರಸ್ಕರಿಸಿದವರು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು. ಇಂಥವರನ್ನು ನಮ್ಮ ರಾಜ್ಯದಿಂದ ಆಯ್ಕೆ ಮಾಡಿರುವುದು ಕನ್ನಡಿಗರ ತಪ್ಪೇ?

    ಬಿಜೆಪಿ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ದೇಶಕ್ಕಾಗಿ ತ್ಯಾಗ ಬಲಿದಾನಗೈದಿಲ್ಲ. ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯದ ಫಲಾನುಭವಿಗಳಾಗಿ, ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಇಂದು ಅಧಿಕಾರದಲ್ಲಿದ್ದಾರೆ. ಆದರೆ ನಮ್ಮ ಸಂವಿಧಾನದ ಬಗ್ಗೆಯೂ ಬಿಜೆಪಿಯವರಿಗೆ ಗೌರವವಿಲ್ಲ. ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು ಎಂದು ಬಾಬಾ ಸಾಹೇಬರು ಹೇಳಿದ್ದರು. ಹಾಗಾಗಿ ಪ್ರತಿಯೊಬ್ಬರು ದೇಶದ ಇತಿಹಾಸ, ಗಾಂಧಿ, ನೆಹರು, ವಲ್ಲಭಭಾಯ್ ಪಟೇಲ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸುಭಾಷ್ ಚಂದ್ರ ಬೋಸ್ ಯಾರು ಎಂದು ತಿಳಿದುಕೊಳ್ಳಬೇಕು. ಬಿಜೆಪಿಯವರು ಜನರಿಗೆ ಸುಳ್ಳು ಹೇಳಿದರೆ ನಾವು ನಮ್ಮ ಇತಿಹಾಸದ ಬಗ್ಗೆ ಸತ್ಯ ಹೇಳೋಣ. ನಮ್ಮ ಯುವಕರು ಈ ಕೆಲಸ ಮಾಡಬೇಕು ಆಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ. ಕೇವಲ ಭಾಷಣದಿಂದ ಭಾರತ ನಿರ್ಮಾಣ ಸಾಧ್ಯವಿಲ್ಲ.

    ರಕ್ಷಾ ರಾಮಯ್ಯ ನಾಯಕತ್ವದಲ್ಲಿ ಯುವಕರನ್ನು, ವಿದ್ಯಾರ್ಥಿಗಳನ್ನು, ಹಿಂದುಳಿದವರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು, ಆದಿವಾಸಿಗಳನ್ನು ಸೇರಿಸಿಕೊಂಡು ಹೊಸ ಪಡೆಯನ್ನು ಕಟ್ಟಬೇಕು ಎಂದು ಸಲಹೆ ನೀಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!