19.9 C
Karnataka
Sunday, September 22, 2024

    ರಾಜ್ಯದ ಆಂತರಿಕ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    Must read

    DAVANAGERE SEPT 2

    ರಾಜ್ಯದ ಆಂತರಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ದಾವಣಗೆರೆಯ ಜಿ.ಎಂ.ಐ.ಟಿ ಆವರಣದಲ್ಲಿ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿ.ಎಂ.ಐ.ಟಿ ಕೇಂದ್ರ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟನೆ ನೆರವೇರಿಸಿದರು.

    ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ತನ್ನ ಪಾತ್ರವನ್ನು ವಹಿಸಬೇಕಾಗಿದೆ. ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ತಮ್ಮ ಬೇರುಗಳನ್ನು ಬಿಡಲು ಪ್ರಯತ್ನಿಸಿದಾಗ ನಾವು ಅವರನ್ನು ಸದೆ ಬಡಿದಿದ್ದೇವೆ. ಎನ್.ಐ.ಎ. ಯೊಂದಿಗೆ ಇಲ್ಲಿ ಅಂತಹ ಹಲವಾರು ಸಂಘಟನೆಗಳನ್ನು ಪತ್ತೆ ಹಚ್ಚಿ ಉಗ್ರ ಕ್ರಮ ಕೈಗೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.

    ಕಳೆದ ಬಾರಿ ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚಿಸಿದ್ಪದಂತೆ ಅಪರಾಧ ನಿಯಂತ್ರಣಕ್ಕೆ ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಅಪರಾಧ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗಳ ಸೃಜನೆಯನ್ನು ಗೃಹ ಇಲಾಖೆ ಕೈಗೊಂಡಿದೆ ಎಂದು ತಿಳಿಸಿದರು.

    ಪೊಲೀಸ್ ಶಾಲೆ:ದಾವಣಗೆರೆಯಲ್ಲಿ ಪೊಲೀಸ್ ಶಾಲೆಯನ್ನು ಕೇಂದ್ರ ಗೃಹ ಸಚಿವರು ಉದ್ಘಾಟಿಸಿದ್ದು ಸಂತಸ ತಂದಿದೆ. ಬೆನೊವೆಲೆಂಟ್ ಫಂಡ್‍ನಿಂದ ನಿರ್ಮಿಸಲಾದ ಪೊಲೀಸ್ ಶಾಲೆಯಲ್ಲಿ ಗುಣಮಟ್ಟದ ಹಾಗೂ ಶಿಸ್ತಿನ ಶಿಕ್ಷಣ ಕೂಡಿದ್ದು, ಭಾರತದಲ್ಲಿನ ಮಿಲಿಟರಿ ಶಾಲೆಗಳ ಮಾದರಿಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

    ಗಾಂಧಿ ಭವನ:ಸ್ವಾತಂತ್ರ್ಯದ ಅಮೃತ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ಆಗಬೇಕು ಎಂದ ಮುಖ್ಯಮಂತ್ರಿಗಳು, ಭಾರತದ ಸ್ವಾತಂತ್ರ್ಯದ 100 ವರ್ಷಕ್ಕೆ ಭಾರತ ವಿಶ್ವಮಾನ್ಯ ರಾಷ್ಟ್ರವಾಗಬೇಕು. ದೇಶವನ್ನು ಸುರಕ್ಷಿತ ಹಾಗೂ ಅಭಿವೃದ್ಧಿಗೊಳಿಸುವ ಸಂಕಲ್ಪ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಗಾಂಧಿ ಭವನ ಉದ್ಘಾಟನೆ ಮಾಡಲಾಗಿದೆ. ಮಹಾತ್ಮಾ ಗಾಂಧಿಜೀ ಜನಿಸಿದ ಭೂಮಿಯಿಂದ ಬಂದಿರುವ ಶ್ರೀ ಅಮಿತ್ ಶಾ ಅವರಿಂದಲೇ ಗಾಂಧಿ ಭವನ ಉದ್ಘಾಟನೆಗೊಂಡಿರುವುದು ನಮ್ಮ ಸುಯೋಗ ಎಂದರು.

    ಸ್ವಾತಂತ್ರ್ಯ ಹೋರಾಟಗಾರನ್ನು ಈ ಸಂದರ್ಭದಲ್ಲಿ ಗೌರವಿಸುತ್ತಿರುವುದು ಸ್ತುತ್ಯಾರ್ಹ. 75 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ 14 ಅಮೃತ ಯೋಜನೆಯನ್ನು ಘೋಷಣೆ ಮಾಡಿದ್ದೇನೆ. ಈ ಯೋಜನೆಗಳ ಅನುಷ್ಠಾನಕ್ಕೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದರು.

    ನಮ್ಮದು ಮಾತನಾಡುವ ಸರ್ಕಾರವಲ್ಲ. ಕಾರ್ಯ ಮಾಡುವ ಸರ್ಕಾರ. ರೈತರ ಮಕ್ಕಳಿಗೆ ರೈತ ವಿದ್ಯಾ ನಿಧಿ, 1000 ಕೋಟಿ ರೂ. ವೆಚ್ಚದಲ್ಲಿ ರೈತ ಮಕ್ಕಳಿಗೆ ಪಿಯುಸಿಯಿಂದ ಪಿಜಿ ವರೆಗೂ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಕೇಂದ್ರ ಕೃಷಿ ಸಚಿವರು ಉದ್ಘಾಟಿಸಲಿದ್ದಾರೆ. ಕೆಲವೇ ದಿನಗಳಲ್ಲಿ 20 ಲಕ್ಷ ರೈತ ಮಕ್ಕಳಿಗೆ ಈ ಸೌಲಭ್ಯ ದೊರೆಯಲಿದೆ.

    ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ ಮಾಸಾಶನ ಹೆಚ್ಚಿಸುವ ಮೂಲಕ ನಮ್ಮದು ಬಡವರ ಪರವಾದ ಸರ್ಕಾರ ಎಂದು ನಿರೂಪಿಸಲಾಗಿದೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಆಯವ್ಯಯದಲ್ಲಿ ಘೋಷಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಅವರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

    ಜಿ.ಎಂ.ಐ.ಟಿ ಕೇಂದ್ರ ಗ್ರಂಥಾಲಯ:ಸಂಸದರಾದ ಜಿ.ಎಂ.ಸಿದ್ದೇಶ್ವರ ಅವರು ಪ್ರಗತಿಪರ ನಾಯಕರಾಗಿದ್ದು, ದಾವಣಗೆರೆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ನೀರಾವರಿ ಯೋಜನೆಗಳು, ಕೇಂದ್ರ ಯೋಜನೆಗಳು, ರಸ್ತೆ ,ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಜಿಲ್ಲೆಯಲ್ಲಿ ತರುವ ಮೂಲಕ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿದ್ದಾರೆ. ಜಿಎಂಐಟಿ ಆವರಣದಲ್ಲಿ ಇಂದು ಆಧುನಿಕ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿನೆಗೊಂಡಿದೆ. ಜಿಎಂ ಸಿದ್ದೇಶ್ವರ್ ಅವರಂತಹ ಅತ್ಯಂತ ಕ್ರಿಯಾಶೀಲ ವ್ಯಕ್ತಿಯ ನಾಯಕತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು.

    ವಲ್ಲಭಭಾಯಿ ಪಟೇಲರ ದಿಟ್ಟತನ ಅಮಿತ್ ಷಾ ಅವರಲ್ಲಿ ಕಾಣಬಹುದು:

    ಅಮಿತ್ ಷಾ ಅವರು ದೇಶದ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಹೆಸರು ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ನಮ್ಮ ದೇಶ ವಲ್ಲಭಬಾಯಿ ಪಟೇಲರಲ್ಲಿ ದೇಶದ ಅಖಂಡತೆ ಮತ್ತು ಏಕತೆಗೆ ಕೆಲಸ ಮಾಡಿದರು. ಅವರಲ್ಲಿ ಕಾಣುತ್ತಿದ್ದ ದಿಟ್ಟತನವನ್ನು ಅಮಿತ್ ಷಾ ಅವರಲ್ಲಿ ಕಾಣಬಹುದಾಗಿದೆ. ನಮ್ಮ ನೆರೆಯ ಆಫ್‍ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ಮತ್ತು ಮಕ್ಕಳು ಆತಂಕದಲ್ಲಿದ್ದಾರೆ. ಅಲ್ಲಿ ಉಂಟಾಗಿರುವ ಪರಿಸ್ಥಿತಿ ನಮ್ಮ ದೇಶದಲ್ಲಿ ಆಗಬಾರದು ಎಂದು ಅತ್ಯಂತ ದಿಟ್ಟತನದಿಂದ 370 ವಿಧಿಯನ್ನು ರದ್ದುಗೊಳಿಸಿ ಇಡೀ ರಾಷ್ಟ್ರದ ಅಖಂಡತೆ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!