21.5 C
Karnataka
Sunday, September 22, 2024

    ರಾಷ್ಟ್ರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ; ಸಲ್ಲದ ಸಂಶಯ ಬೇಡವೆಂದ ಉನ್ನತ ಶಿಕ್ಷಣ ಸಚಿವ

    Must read

    BENGALURU SEPT 8

    ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆ ರಾಜ್ಯಾದ್ಯಂತ ಬಿಡುವಿಲ್ಲದ ಕಾರ್ಯಕ್ರಮ, ವಿಚಾರ ಸಂಕಿರಣ, ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳುತ್ತಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಬೆಂಗಳೂರಿನಲ್ಲಿ ಎರಡು ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡು ಶಿಕ್ಷಣ ನೀತಿ ಜಾರಿ ಬಗ್ಗೆ ಚರ್ಚಿಸಿದರು.

    ನಗರದ ಟಿ.ಜಾನ್ ಕಾಲೇಜು ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು; ಮುಖ್ಯವಾಗಿ ಶಿಕ್ಷಣ ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳ ಜತೆ ಸಂವಾದ, ಚರ್ಚೆ ನಡೆಸಿದರು.

    ಶಿಕ್ಷಣ ನೀತಿ ಏತಕ್ಕೆ? ಇದರ ಪರಿಣಾಮಗಳೇನು? ದೇಶಕ್ಕೆ ಇದರ ಉಪಯೋಗ ಹೇಗೆ? ಇತ್ಯಾದಿ ಅಂಶಗಳ ಬಗ್ಗೆ ವಿವರಣಾತ್ಮಕವಾಗಿ ಮಾತನಾಡಿದರಲ್ಲದೆ, ನೀತಿಯ ಬಗ್ಗೆ ಇದ್ದ ಅನುಮಾನ, ಸಂಶಯಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಿದರು.

    ಯಾರ ವಿರುದ್ಧವೂ ಅಲ್ಲ, ಯಾವ ಸಂಶಯಕ್ಕೂ ಎಡೆಮಾಡಿ ಕೊಡದ, ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತವಾದದ್ದೇ ನೂತನ ಶಿಕ್ಷಣ ನೀತಿ. ಇಂಥ ನೀತಿಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿ ಯಾರೂ ಹಳಿತಪ್ಪಿಸಬಾರದು. ʼಇದು ರಾಷ್ಟ್ರ ನಿರ್ಮಾಣಕ್ಕಾಗಿ ರೂಪಿತವಾದ ರಾಷ್ಟ್ರೀಯ ಶಿಕ್ಷಣ ನೀತಿʼ ಎಂದು ಸಚಿವರು ಮನವಿ ಮಾಡಿದರು.

    ಅಭಿವೃದ್ಧಿಯ ದಿಕ್ಸೂಚಿ:

    ಬೆಂಗಳೂರಿನ ಟಿ.ಜಾನ್ ಕಾಲೇಜ್ʼನಲ್ಲಿಂದು ಹಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು; “ರಾಷ್ಟ್ರೀಯ ಶಿಕ್ಷಣ ನೀತಿಯು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಮಗ್ರ ಅಭಿವೃದ್ಧಿಗೆ ಸ್ಪಷ್ಟ ದಿಕ್ಸೂಚಿ ಆಗಿದೆ” ಎಂದು ಪ್ರತಿಪಾದಿಸಿದರು.

    ಹೊಸ ಶಿಕ್ಷಣ ನೀತಿ ಭಾರತದ ಮುನ್ನಡೆಯ ದಿಕ್ಸೂಚಿ. ಶಿಕ್ಷಣ ನೀತಿಯ ಭವಿಷ್ಯದ ಭಾರತದ ಅಡಿಪಾಯ. ಹೀಗಾಗಿ ಶಿಕ್ಷಣ ನೀತಿ ಜಾರಿಯ ಪ್ರಕ್ರಿಯೆ ರಾಜ್ಯ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ನುಡಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯ ಅಗತ್ಯ, ನಮ್ಮ ರಾಜ್ಯದ ಅಗತ್ಯ ಮತ್ತು ಸಮಾಜದ ಅಗತ್ಯ ಎಂಬುದರಲ್ಲಿ ಎರಡು ಮಾತೇ ಇಲ್ಲ. ಭಾರತ ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಹಾಗಾದರೆ, ಅಭಿವೃದ್ಧಿ ಹೊಂದಿದ ದೇಶ ಆಗುವುದು ಯಾವಾಗ? ಅದಕ್ಕೆ ಉತ್ತರ ಈ ಶಿಕ್ಷಣ ನೀತಿಯಲ್ಲಿದೆ” ಎಂದು ಸಚಿವರು ಹೇಳಿದರು.

    ಉತ್ಪಾದನೆ, ಕೈಗಾರಿಕೆ, ಕೃಷಿ, ತಂತ್ರಜ್ಞಾನ, ಆವಿಷ್ಕಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಬಹುದೊಡ್ಡ ಬದಲಾವಣೆ ಕಾಣುತ್ತಿದೆ. ಒಮ್ಮೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ, ಇದರ ವೇಗ ಮತ್ತಷ್ಟು ಹೆಚ್ಚಿ ಆಮೂಲಾಗ್ರ ಬದಲಾವಣೆ, ಅಭಿವೃದ್ಧಿಗೆ ಬೃಹತ್ ಬದಲಾವಣೆ ಕಂಡು ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ವೃತ್ತಿಪರ ಮತ್ತು ಕೌಶಲ್ಯಪರ ಶಿಕ್ಷಣ ನೀತಿ

    ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಏರ್ಪಡಿಸಿದ್ದ ಎನ್ಇಪಿ ಜಾರಿ ಕಾರ್ಯಾಗಾರದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು; ಎಲ್ಲ ಕ್ಷೇತ್ರಗಳಲ್ಲೂ ಈಗ ವೃತ್ತಿಪರತೆ ಇರುವ ಕುಶಲ ಮಾನವ ಸಂಪನ್ಮೂಲದ ಅಗತ್ಯವಿದೆ. ಈ ಬೇಡಿಕೆಗೆ ತಕ್ಕಂತೆ ಹೊಸ ಶಿಕ್ಷಣ ನೀತಿ ಅಪಾರ ಕೊಡುಗೆ ನೀಡಲಿದೆ ಎಂದರು.

    ಶಿಕ್ಷಣ ನೀತಿ ಜಾರಿ ಪ್ರಕ್ರಿಯೆಯಲ್ಲಿ ಶಿಕ್ಷಕರು, ಅಧ್ಯಾಪಕರ ಪಾತ್ರ ಬಹಳ ದೊಡ್ಡದು. ಎಲ್ಲಿಯೂ ನೀತಿ ಉದ್ದೇಶಕ್ಕೆ ಭಂಗ ಬಾರದಂತೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಇಡೀ ನೀತಿಯನ್ನು ಎಲ್ಲರೂ ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

    ಟಿ ಜಾನ್ ಕಾಲೇಜು ಕಾರ್ಯಕ್ರಮದಲ್ಲಿ ಟಿ ಜಾನ್ ಕಾಲೇಜಿನ ಅಧ್ಯಕ್ಷ ಡಾ.ಥಾಮಸ್ ಟಿ.ಜಾನ್, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶ್ರೀನಿವಾಸಯ್ಯ ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಲವಾರ್, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ.ರಘು ಅಕಮಂಚಿ ಹಾಜರಿದ್ದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!