21.5 C
Karnataka
Sunday, September 22, 2024

    new education policy 2021: ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ರೂಪಾಂತರ

    Must read

    BELLARY OCT 28

    ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಅನ್ವಯಿಕತೆಯ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ -Dr.C.N.Ashwatha Narayana-ಹೇಳಿದ್ದಾರೆ.

    ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ-Vijayanagara Sri Krishnadevaraya University- ಮತ್ತು ನಾಸ್ಕಾಂ -NASSCOM-ನಡುವಿನ ಒಡಂಬಡಿಕೆಗೆ ಮತ್ತು ಎನ್ಇಪಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಈ ಕಾರ್ಯಾಗಾರವು ಇಲ್ಲಿನ ಬಳ್ಳಾರಿ ಎಂಜಿನಿಯರಿಂಗ್ ಸಂಸ್ಥೆ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು.

    ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

    ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹುಶಿಸ್ತೀಯ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ನೋಡುತ್ತಿದೆ ಎಂದು ಸಚಿವರು ನುಡಿದರು.

    ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳ ಆಡುಂಬೊಲವಾಗಿದೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಎನ್ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿತನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಅನುಭವನಿಷ್ಠ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

    ಎಂಜಿನಿಯರಿಂಗ್ ನಲ್ಲಿ ಈಗಾಗಲೇ ಆಂತರಿಕ ಮೌಲ್ಯಮಾಪನವನ್ನು ಪ್ರತೀ ವಿಷಯಕ್ಕೆ 50 ಅಂಕಗಳಿಗೆ ಹೆಚ್ಚಿಸಲಾಗಿದೆ. ಪದವಿ ಶಿಕ್ಷಣದಲ್ಲೂ ಇದೇ ವ್ಯವಸ್ಥೆ ಜಾರಿಯಾಗಲಿದೆ. ಇದರನ್ವಯ, 45 ನಿಮಿಷಗಳ ಬೋಧನೆ ಮತ್ತು 15 ನಿಮಿಷಗಳ ಆಂತರಿಕ ಮೌಲ್ಯಮಾಪನ ಎಲ್ಲೆಡೆ ಬರಲಿದೆ. ಇದರ ಜತೆಗೆ ಅತ್ಯುತ್ತಮ ವಿದೇಶೀ ವಿ.ವಿ.ಗಳೊಂದಿಗೆ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

    ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಎಂಎಲ್ ಸಿ ಕೆ.ಸಿ.ಕೊಂಡಯ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ., ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ,  ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಬಿಐಇಟಿ ಅಧ್ಯಕ್ಷ ಯಶವಂತ್ ಭೂಪಾಲ್ ಉಪಸ್ಥಿತರಿದ್ದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!