29.3 C
Karnataka
Sunday, September 22, 2024

    ಬದಲಾವಣೆ ಬಗ್ಗೆ ಚಿಂತಿಸದೇ, ನೀವೇ ಬದಲಾವಣೆ ತನ್ನಿ : ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸಲಹೆ

    Must read

    BENGALURU DEC 31

    ಜನಸ್ಪಂದನೆಯ ದೃಷ್ಟಿಯಿಂದ ನಮ್ಮ ಸರ್ಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಜಿಲ್ಲೆಗಳಲ್ಲಿ ಉತ್ತಮ ಆಡಳಿತವನ್ನು ನೀಡಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ, ಬದಲಾವಣೆ ಬಗ್ಗೆ ಚಿಂತಿಸದೇ, ನೀವೇ ಬದಲಾವಣೆ ತನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

    ಇಂದು ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ:ಸರ್ಕಾರ ಜನರ ಸಮಸ್ಯೆಗಳಿಗೆ ಧಾವಿಸುವ ಮೂಲಕ ತನ್ನ ಜೀವಂತಿಕೆಯನ್ನು ಮೆರೆಯುತ್ತದೆ. ಅಕಾಲಿಕ ಮಳೆಯಿಂದುಂಟಾದ ಬೆಳೆಹಾನಿಗೆ ಪರಿಹಾರ ಆ್ಯಪ್ ಮೂಲಕ 48 ಗಂಟೆಯೊಳಗೆ ಬೆಳೆ ಪರಿಹಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಕ್ಷಮತೆಯಿಂದ ಶೇ.83 ರಷ್ಟು ಪರಿಹಾರ ರೈತರಿಗೆ ನೀಡಲು ಸಾಧ್ಯವಾಗಿದೆ. ಸಂಕಷ್ಟಗಳು, ರಾಜ್ಯ ಸರ್ಕಾರದ ತೀರ್ಮಾನ ಹಾಗೂ ಜಿಲ್ಲಾಡಳಿತದ ಕ್ರಿಯಾಶೀಲತೆಯಿಂದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ ನೀಡಿರುವು ಗಣನೀಯ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಿ, ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕು. ಕೋವಿಡ್‍ನ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯಂತ ಜಾಗರೂಕತೆ ಹಾಗೂ ಕ್ರಿಯಾಶೀಲತೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

    ಬಾಕಿ ಇರುವ ನ್ಯಾಯಾಲಯ ಪ್ರಕರಣಗಳು :5 ವರ್ಷಗಳಿಂದ ಬಾಕಿ ಇರುವ ಜಮೀನು ವ್ಯಾಜ್ಯ ಹಾಗೂ ನ್ಯಾಯಾಲಯ ಪ್ರಕರಣಗಳು ರೈತರ ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸುತ್ತದೆ. ತಹಶೀಲ್ದಾರ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿಯಿರುವ ಕೋರ್ಟ್ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಇದಕ್ಕೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ನಿಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಒಟ್ಟಾರೆ ಕನಿಷ್ಟ ಒಂದು ವರ್ಷದೊಳಗೆ ಎಲ್ಲಾ ನ್ಯಾಯಾಲಯ ಪ್ರಕರಣಗಳು ವಿಲೇವಾರಿ ಆಗಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

    ವಾಲುಗಳಿಗೆ ಸಕಾರಾತ್ಮಕ ಪರಿಹಾರ :ಗೋಮಾಳ, ಬಗರಹುಕಂ, ಡೀಮ್ಡ್ ಅರಣ್ಯ ಪ್ರದೇಶಗಳ ವ್ಯಾಜ್ಯಗಳಿಗೆ ಕಾನೂನು ಪರಿಹಾರ ನೀಡಬೇಕು. ಇದರಿಂದಾಗಿ ಜನರು ಅನಿಶ್ಚಿತತೆಯ ಬದುಕು ಬದುಕುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ನಿಶ್ಚಿತವಾದ, ಸ್ಪಷ್ಟವಾದ ಆಡಳಿತ, ಗೊಂದಲಗಳಿಲ್ಲದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಸವಾಲುಗಳಿಗೆ ಸ್ಪಷ್ಟತೆಯಿಂದ ಸಕಾರಾತ್ಮಕವಾದ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದರು.

    ಸಹಾನುಭೂತಿಯಿಂದ ಬಡವರ ಕೆಲಸ

    ಉತ್ತಮ ಸ್ಪಂದನೆ ಹಾಗೂ ಸಕಾರಾತ್ಮಕ ಮನೋಭಾವದಿಂದ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು. ಅಧಿಕಾರಕ್ಕೆ ಹೊಣೆಗಾರಿಕೆ ಇರುತ್ತದೆ. ಜಿಲ್ಲೆಗಳಲ್ಲಿ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಪ್ರತಿ ತಿಂಗಳು ತಪ್ಪದೇ ವರದಿ ಮಾಡಬೇಕು ಎಂದು ಸೂಚಿಸಿದರು.

    ಬಡವರ ಕೆಲಸವನ್ನು ಸಹಾನುಭೂತಿಯಿಂದ ಮಾಡಬೇಕು. ಎಸ್‍ಸಿ, ಎಸ್ ಟಿ, ಓಬಿಸಿ ಹಾಗೂ ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದ ಉತ್ತಮ ಕಾರ್ಯಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಂದು , ಜಿಲ್ಲೆಯಲ್ಲಿ ನಿಮ್ಮದೇ ಹೆಜ್ಜೆಗುರುತುಗಳನ್ನು ಮೂಡಿಸಿ ಎಂದು ತಿಳಿಸಿದರು. ನಿಮ್ಮ ಎಲ್ಲ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲ ಇರುತ್ತದೆ. ಆದರೆ ದುರುದ್ದೇಶಪೂರಿತ ನಡೆ, ನಡವಳಿಕೆಗೆ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

    ಜಿಲ್ಲಾಧಿಕಾರಿಗಳು ಕೇವಲ, ಸರ್ಕಾರದ ಅಥವಾ ಸಚಿವಾಲಯದ ಪ್ರತಿನಿಧಿಗಳಷ್ಟೇ ಅಲ್ಲ. ತಳಹಂತದ ವ್ಯವಸ್ಥೆ, ಜನತೆ, ಅವರಸಮಸ್ಯೆಯ ಭಾಗವಾಗಿಯೂ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮುಖ್ಯಸ್ಥರ ಹೊಣೆಯೊಂದಿಗೆ ತಳಹಂತದ ಜನರ ಸೇವೆಯ ಜವಾಬ್ದಾರಿಯೂ ನಿಮ್ಮದಾಗಿದೆ ಎಂದು ತಿಳಿಸಿದರು.

    ನಿಮಗೆ ಹೆಚ್ಚಿನ ವಿವೇಚನಾ ಅಧಿಕಾರವಿದ್ದು, ಜವಾಬ್ದಾರಿಯೂ ಹೆಚ್ಚಿದೆ. ಬಡವರ ಹಿತಕ್ಕಾಗಿ ನಿಮ್ಮ ವಿವೇಚನಾಧಿಕಾರವನ್ನು ಬಳಸಿ. ಅಧಿಕಾರ ನಿಮ್ಮನ್ನು ವಿನಮ್ರರನ್ನಾಗಿಸಬೇಕು. ನ್ಯಾಯಾಲಯ ವಿಷಯಗಳಲ್ಲಿ ನಿಮ್ಮ ವಿವೇಚನೆಯನ್ನು ಕಾನೂನು ಪ್ರಕಾರ ಬಳಸುವಂತೆ ತಿಳಿಸಿದರು.

    ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿ, ತಹಸೀಲ್ದಾರರ ಪಾತ್ರವನ್ನು ಹಾಗೂ ಕಾರ್ಯನಿರ್ವಹಣೆಯನ್ನು ಅರಿತು ಕಾರ್ಯ ಹಂಚಿಕೆ ಮಾಡಿದರೆ, ಜಿಲ್ಲಾಧಿಕಾರಿಗಳ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

    ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಅವರು, ಜಿಲ್ಲೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ತಪ್ಪದೇ ನಡೆಯಬೇಕು. ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಒತ್ತುವರಿ ತೆರವು ಕಾರ್ಯಕ್ಕಾಗಿ ಮೀಸಲಿಡಬೇಕು. ಬಡವರ ಪರ ಕೆಲಸ ಮಾಡುವಾಗ ನಕಾರಾತ್ಮಕ ಚಿಂತನೆ ಬೇಡ ಎಂದು ತಿಳಿಸಿದರು.

    ಜನವರಿ 26 ರಂದು ಜನರ ಬಾಗಿಲಿಗೆ ಸರ್ಕಾರ ಸವಲತ್ತು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರೈತರ ಮನೆಬಾಗಿಲಿಗೆ ದಾಖಲಾತಿಗಳನ್ನು ನೀಡುವ ವಿನೂತನ ಕಾರ್ಯಕ್ರಮವಾಗಿದೆ. ಜಿಲ್ಲಾಧಿಕಾರಿಗಳು ಒಂದು ದಿನದ ಅವಧಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ರೈತರ ದಾಖಲಾತಿಗಳನ್ನು ಅವರ ಮನೆಬಾಗಿಲಿಗೆ ನೀಡುವ ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು.

    ಗ್ರಾಮವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಗಳನ್ನು ಮುಂದುವರಿಸಬೇಕು. ಜಿಲ್ಲಾಧಿಕಾರಿಗಳಿಗೆ ಹಲವು ಯೋಜನೆಗಳಲ್ಲಿ ಸೂಚಿಸಿರುವ ಗುರಿಗಳನ್ನು ತಲುಪಬೇಕು ಎಂದು ತಿಳಿಸಿ , ಬೆಳೆಪರಿಹಾರ ವಿತರಿಸುವಲ್ಲಿ ಜಿಲ್ಲಾಡಳಿತ ತೋರಿದ ದಕ್ಷತೆಯನ್ನು ಕಂದಾಯ ಸಚಿವರು ಪ್ರಶಂಸಿಸಿದರು

    ಸಭೆಯಲ್ಲಿ ಸಚಿವ ಸಂಪುಟದ ಇತರ ಸದಸ್ಯರು, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!