21.5 C
Karnataka
Saturday, September 21, 2024

    Blood Dontation Camp: ಮಂಗಳೂರು ವಿಶ್ವವಿದ್ಯಾನಿಲಯದಿಂದ ರಕ್ತದಾನ ಶಿಬಿರ

    Must read

    MANGALURU FEB 24

    ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ಮತ್ತು  ʼಮಂಗಳ ಯೋಜನೆʼ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ – 7ನೇ ಬೆಟಾಲಿಯನ್  (ಅಸೈಗೋಳಿ) ಜಂಟಿ ಸಹಭಾಗಿತ್ವದಲ್ಲಿ ಮಂಗಳಗಂಗೋತ್ರಿಯ   ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ  ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿ,  “ಹೃದಯದಲ್ಲಿ ಪ್ರೀತಿ ಭಾವಗಳು ತುಂಬಿಕೊಂಡಾಗ ದ್ವೇಷಗಳು ದೂರವಾಗಿ ಮಾನವೀಯ ಮೌಲ್ಯಗಳು  ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ರಕ್ತಕ್ಕೆ ಜಾತಿ ಮತ ಬೇಧವಿಲ್ಲ. ರಕ್ತದಾನ ಬಹಳ ಶ್ರೇಷ್ಠವಾದುದು. ಅದರಲ್ಲೂ  ದಾನದ ಹಿಂದಿರುವ ಪ್ರೀತಿ ಬಹಳ  ಪ್ರಮುಖವಾದುದು. ವಿಶ್ವವಿದ್ಯಾನಿಲಯ ಹಾಗೂ  ಸಂಘ ಸಂಸ್ಥೆಗಳು ಸೇರಿಕೊಂಡು ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು  ಆಯೋಜನೆ‌ ಮಾಡಿರುವುದು ಶ್ಲಾಘನೀಯ.    ಮಂಗಳೂರು ವಿಶ್ವವಿದ್ಯಾನಿಲಯವು ಶಿಕ್ಷಣದ ಜೊತಗೆ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು, ‘ರಕ್ತದಾನದಂತಹ ಮಹಾನ್ ಕಾರ್ಯ ಬೇರೊಂದಿಲ್ಲ. ಇದು ಜಾತಿ‌ಮತ ಧರ್ಮವನ್ನು ಮೀರಿ ನಿಂತಿದೆ.  ರಕ್ತ ಸಿಗದೇ ಯಾರೂ ಮರಣಿಸಬಾರದು. ಹಾಗೆಯೇ ರಕ್ತದಾನ ಮಾಡದೇ ಯಾರೂ ಇಹ ತ್ಯಜಿಸಬಾರದು. ರಕ್ತದಾನದ ಬಗ್ಗೆ ಸಮಾಜದಲ್ಲಿರುವ ಅಪನಂಬಿಕೆಯನ್ನು ದೂರಗೊಳಿಸಬೇಕಿದೆ ಎಂದರು.ಶಸ್ತ್ರಚಿಕಿತ್ಸೆ, ಅಪಘಾತ, ಆಘಾತ, ಕೆಲವು ಅನುವಂಶಿಕ ಕಾಯಿಲೆಗಳು, ಕ್ಯಾನ್ಸರ್ ಹೀಗೆ ಹಲವಾರು ಸಂಧರ್ಭಗಳಲ್ಲಿ ರಕ್ತವು ತುರ್ತಾಗಿ ಬೇಕಿದ್ದು, ರೋಗಿಗಳನ್ನು ಉಳಿಸಲು ದಾನಿಗಳು ನೀಡುವ ರಕ್ತವು ಅಮೂಲ್ಯವಾದದ್ದು. ಎಷ್ಟೋ ಸಂದರ್ಭಗಳಲ್ಲಿ ರಕ್ತವು ಸಮಯಕ್ಕೆ ಸರಿಯಾಗಿ ಸಿಗದೇ ಆಸ್ಪತ್ರೆಯಲ್ಲಿ ರೋಗಿಗಳು ಮರಣ ಹೊಂದುವ ಸ್ಥಿತಿ ನಿರ್ಮಾಣವಾಗುತ್ತದೆ. ಆದುದರಿಂದ ರಕ್ತದಾನ ಶಿಬಿರಗಳಲ್ಲಿ ಅಥವಾ ರಕ್ತ ನಿಧಿಯಲ್ಲಿ ನಿಯಮಿತವಾಗಿ ರಕ್ತವನ್ನು ದಾನ ಮಾಡುವುದರಿಂದ ಎಷ್ಟೋ ಜನರ ಪ್ರಾಣವನ್ನು ಉಳಿಸಬಹುದು. ನಮ್ಮ ದೇಶದಲ್ಲಿ ಅನೇಕ ಜನರು ಮುಖ್ಯವಾಗಿ ಯುವಜನತೆಯು ರಕ್ತದಾನ ಮಹಾಕಾರ್ಯದಲ್ಲಿ ಭಾಗಿಯಾಗಿ ರಕ್ತವನ್ನು ನೀಡುವುದು ಪ್ರಶಂಶನೀಯ ಎಂದರು.

    ಆದಾಗ್ಯೂ ಕೂಡ ಇನ್ನು ಎಷ್ಟೋ ಆರೋಗ್ಯವಂತ ಜನರು ರಕ್ತದಾನದಲ್ಲಿ ಭಾಗಿಯಾಗಲು ಭಯ ಅಥವಾ ತಪ್ಪು ನಂಬಿಕೆಗಳಿಂದ ಹಿಂಜರಿಯುತ್ತಾರೆ. ಇದಕ್ಕೆ ಮುಖ್ಯ ಕಾರಣ ರಕ್ತದಾನದ ಬಗ್ಗೆ ಪರಿಪೂರ್ಣ ಜ್ಞಾನದ ಕೊರತೆ ಇರುವುದು. ರಕ್ತ ಮತ್ತು ರಕ್ತದಾನದ ಮಹತ್ವದ ಬಗ್ಗೆ ಸಾಮಾನ್ಯ ಜನರಲ್ಲಿ ಜ್ಞಾನವನ್ನು ಪಸರಿಸಿವುದು ಮತ್ತು
    ಆ ಮೂಲಕ ಜನಜಾಗೃತಿಯನ್ನು ಉಂಟುಮಾಡಿ ಅವರಲ್ಲಿ ರಕ್ತದಾನಕ್ಕೆ ಹುರಿದುಂಬಿಸುವುದೂ ಕೂಡ ಮುಖ್ಯವಾದದ್ದು. ಈ ಹಿನ್ನೆಲೆಯಲ್ಲಿ, ಈಗಾಗಲೇ ರಕ್ತದಾನ ಶಿಬಿರವನ್ನು ಆಯೋಜಿಸಿ ಅನುಭವ ಇರುವ ; ‘ರಕ್ತದಾನ ಮಹಾದಾನ – ವೈಜ್ಜಾನಿಕ ಮಾಹಿತಿ’  ಎಂಬ ಕೈಪಿಡಿಯನ್ನು ಹೊರತರುತ್ತಿರುವುದು ಒಂದು ಶ್ಲಾಘನೀಯ ಕೆಲಸ ಎಂದರು.

    ಈ ಕೈಪಿಡಿಯಲ್ಲಿ ರಕ್ತದಾನ ನಡೆದು ಬಂದು ಕಿರು ಇತಿಹಾಸ, ರಕ್ತ ದಾನಿಗಳಿಗೆ ಇರಬೇಕಾದ ಅರ್ಹತೆಗಳು, ಯಾರೆಲ್ಲ ಮತ್ತು ಯಾವ ಸಂದರ್ಭದಲ್ಲಿ ರಕ್ತದಾನ ಮಾಡಲಾಗದು , ರಕ್ತದ ಕಾರ್ಯಚಟುವಟಿಕೆಗಳು, ರಕ್ತದ ಘಟಕಗಳು, ಅವುಗಳ ಸಂಗ್ರಹ ವಿಧಾನ ಮತ್ತು ಶೇಖರಣೆ, ರಕ್ತದಾನದ ಬಗ್ಗೆ ಇರುವ ತಪ್ಪು ನಂಬಿಕೆಗಳು, ರಕ್ತದಾನದಿಂದ ದಾನಿಗಳಿಗೆ ಆಗುವ ಪ್ರಯೋಜನಗಳು, ರಕ್ತದಾನದ ಮೊದಲು, ರಕ್ತದಾನದ ದಿನ ಮತ್ತು ರಕ್ತದಾನದ ನಂತರ ದಾನಿಗಳು ವಹಿಸಬೇಕಾದ ಎಚ್ಚರ, ಮುಂತಾದವುಗಳ ಬಗ್ಗೆ ವಿವಿಧ ಸಂಪನ್ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಸರಳವಾಗಿ ನೀಡಿದ್ದಾರೆ. ಈ ಕೈಪಿಡಿಯು ಉಚಿತವಾಗಿ ಹಂಚುತ್ತಿದ್ದು ಇದರಲ್ಲಿರುವ ಮಾಹಿತಿಯು ಜನರಲ್ಲಿ ರಕ್ತದಾನದ ಬಗ್ಗೆ ಜ್ಞಾನದ ಜೊತೆಗೆ ಇನ್ನಷ್ಟೂ ಪ್ರೇರಣೆ ನೀಡುತ್ತದೆ ಎಂದು ಆಶಿಸುತ್ತೇನೆ. ಬನ್ನಿ ರಕ್ತದಾನ ಮಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ’  ಎಂದು ಹೇಳಿದರು.

     ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯವು ಹತ್ತು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು ಗಡಿನಾಡಿನ ಶಾಲೆ ಸೇರಿದಂತೆ ಇನ್ನೂ ಐದು ಶಾಲೆ ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.

     ಇದೇ ವೇಳೆ  ಮಂಗಳೂರು ವಿವಿಯ ಕುಲಪತಿ  ಪ್ರೊ. ಪಿ.ಎಸ್ .ಯಡಪಡಿತ್ತಾಯ ಅವರು  ವಿಶ್ವವಿದ್ಯಾನಿಲಯದ ರಕ್ತದಾನಿಗಳ ವೆಬ್ ಪೋರ್ಟಲ್ ಬಿಡುಗಡೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಅವರು ಪ್ರಶಾಂತ್ ನಾಯ್ಕ್ ಅವರ ಸಂಕಲನದ  ʼರಕ್ತದಾನ ಮಹಾದಾನ- ವೈಜ್ಞಾನಿಕ ಮಾಹಿತಿʼ ಎಂಬ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ  7 ನೇ ಬೆಟಾಲಿಯನ್ನ ಕಮಾಂಡೆಂಟ್ ಬಿ ಎಂ ಪ್ರಸಾದ್, ಮಂಗಳೂರು ರೆಡ್ ಕ್ರಾಸ್ ಸೊಸೈಟಿಯ ಡಾ. ಜೆ ಎನ್ ಭಟ್,  ಅತಿಥಿಗಳಾಗಿ ಭಾಗವಹಿಸಿದ್ದರು.

    ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗೋವಿಂದರಾಜು ಅವರು ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಸೊಸೈಟಿ, ಮಂಗಳಗಂಗೋತ್ರಿ ಘಟಕದ  ಕಾರ್ಯಕ್ರಮ ಅಧಿಕಾರಿ ಡಾ. ಪರಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮಂಗಳ ಯೋಜನೆ ಸಂಯೋಜಕರಾದ ಪ್ರೊ.ಪ್ರಶಾಂತ್ ನಾಯ್ಕ   ವಂದಿಸಿದರು. ಸಂಶೋಧನಾರ್ಥಿ ಚಂದನಾ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿವಿಯ ಯುವ ರೆಡ್ ಕ್ರಾಸ್ ಸೊಸೈಟಿಯ  ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಮುಂತಾದವರು ಉಪಸ್ಥಿತರಿದ್ದರು.  
     ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳದ ಸೌಜನ್ಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!