ಇಂದಿನಿಂದ ನಾಡಹಬ್ಬ. ಒಂಭತ್ತು ದಿನಗಳ ನವರಾತ್ರಿ ಆರಂಭ. ಮನೆ ಮನೆಗಳಲ್ಲೂ ಹಬ್ಬದ ಸಡಗರ. ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ.
ಈ ಒಂಭತ್ತು ದಿನಗಳು ಪೌರಾಣಿಕವಾಗಿ , ಐತಿಹಾಸಿಕವಾಗಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ಗಮಕ ವ್ಯಾಖ್ಯಾನದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಕರ್ನಾಟಕ ಕಲಾಶ್ರೀ ಸತ್ಯವತಿ ರಾಮನಾಥ ಅವರು ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ನವರಾತ್ರಿ ಆಚರಣೆಯ ಹಿಂದಿನ ಉದ್ದೇಶವನ್ನು ವಿವರವಾಗಿ ಚರ್ಚಿಸಿದ್ದಾರೆ. ಈ ಕೆಳಗಿನ ಲಿಂಕ್ ಮೂಲಕ ಆ ವಿಡಿಯೋ ನೋಡಬಹುದು. ಇದರ ಜೊತೆಗೆ ಲತಾ ಶ್ರೀಕಾಂತ್ ಮತ್ತು ನಯನಾ ಶ್ರೀಕಾಂತ್ ಅವರು ಹಾಡಿರುವ ಹಾಡುಗಳು ದಸರಾ ಸಂಭ್ರಮ ಹೆಚ್ಚಿಸಿವೆ.
ಇದರ ಜೊತಗೆ ಆ ಒಂಭತ್ತು ದಿನವೂ ಕನ್ನಡಪ್ರೆಸ್ ಯೂ ಟ್ಯೂಬ್ ಚಾನಲ್ ನಲ್ಲಿ ದಸರಾ ಸಂಗೀತೋತ್ಸವ ನಡೆಯುತ್ತಿದೆ. ನಮ್ಮ ಚಾನಲ್ ಗೆ ಸಬ್ ಸ್ಕ್ರೈಬ್ ಆಗುವ ಮೂಲಕ ವೀಕ್ಷಿಸ ಬಹುದಾಗಿದೆ.
ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.
ವೇದಿಕೆ ಸಿದ್ಧತೆ, ಗಣ್ಯರು, ಅಧಿಕಾರಿಗಳು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದಸರಾದ ಎಲ್ಲಾ ಸಿದ್ಧತೆ ಅಂತಿಮವಾಗಿದೆ. ರಾಷ್ಟ್ರಪತಿ ಕಚೇರಿಯಿಂದ ಬಂದ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.
ವೇದಿಕೆ ಮೇಲೆ ರಾಷ್ಟ್ರಪತಿಗಳು ಸೇರಿದಂತೆ 13 ಗಣ್ಯರು ಇರಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳು, ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ವೇದಿಕೆಗೆ ಆಗಮಿಸಿ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಬುಡಕಟ್ಟು ಸಮುದಾಯವರನ್ನು ಭೇಟಿ ಮಾಡಿ ಹುಬ್ಬಳ್ಳಿಗೆ ತೆರಳಲಿದ್ದಾರೆ ಎಂದು ಹೇಳಿದರು.
ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂರ್ವಸಿದ್ಧತೆ ಪರಿಶೀಲಿಸಿದರು.
ಬುಡಕಟ್ಟು ಜನರ ಭೇಟಿ, ರಾಷ್ಟ್ರಪತಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗದಿಂದ ಬುಡಕಟ್ಟು ಸಮುದಾಯದ 14 ಜನರು ಆಗಮಿಸಲಿದ್ದಾರೆ ಎಂದು ಹೇಳಿದರು.
ರಾಷ್ಟ್ರಪತಿಗಳೊಂದಿಗೆ ವೇದಿಕೆ ಹಂಚಿಕೊಳ್ಳಬಾರದೆಂದು ಆಪ್ ಪತ್ರ ಬರೆದಿರುವ ವಿಚಾರ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಅನಾವಶ್ಯಕವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಅದನ್ನು ರಾಜಕೀಯವಾಗಿ ಎದುರಿಸುತ್ತೇನೆ ಎಂದರು.
ನಾವು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವರ್ಕ್ ಆರ್ಡರ್ ನೀಡಿದ್ದಾರೆ. ಇದರಲ್ಲಿ ನಮ್ಮ ಪಾತ್ರ ಇಲ್ಲ, ಯಾವುದೇ ವ್ಯವಹಾರ ಇಲ್ಲ. ಕಡತಗಳು ಅಧ್ಯಕ್ಷರಿಗೆ ಬರಲ್ಲ ಮತ್ತು ಯಾವ ಕಡತಕ್ಕೂ ಸಹಿ ಕೂಡ ಹಾಕಿಲ್ಲ. ಹಣಕಾಸಿನ ಯಾವುದೇ ವ್ಯವಹಾರ ಮಾಡಿಲ್ಲ. ರಾಜಕೀಯವಾಗಿ ಮಾಡಿದ್ದಾರೆ, ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಆರೋಗ್ಯ ಚೇತರಿಕೆಯಾಗಿದೆ. ಎರಡು, ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಅವರು ಮನೆಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರು ಶೀಘ್ರ ಗುಣಮುಖರಾಗಲಿ, ಅವರ ಮಾರ್ಗದರ್ಶನ ಹಾಗೂ ಜನಸೇವೆಯ ಭಾಗ್ಯ ಮತ್ತೆ ದೊರಕುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ರಾಜ್ಯದ ಹಿರಿಯ ನಾಯಕ ಎಸ್ ಎಂ ಕೃಷ್ಣ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಿರಂತರ ಚಿಕಿತ್ಸೆಯಿಂದ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ. ರಾಜ್ಯದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಷ್ಟ್ರಪತಿಗಳಿಂದ ನಾಳೆ ದಸರಾ ಉದ್ಘಾಟನೆ
ನಾಳೆಯ ದಸರಾ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆಮ ಅವರಿಂದ ಚಾಮುಂಡೇಶ್ವರಿ ದೇವಿ ಪೂಜೆ ಮತ್ತು ದಸರಾ ಉದ್ಘಾಟನೆ ನಡೆಯಲಿದೆ. ರಾಜ್ಯದಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಷೇರುಪೇಟೆ ಹೂಡಿಕೆ ಎಂದರೆ ಹೆಚ್ಚಿನವರಿಗೆ ಬಹು ಆಕರ್ಷಣೀಯವಾಗಿರುತ್ತದೆ. ಕಾರಣ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಹಣ ಸಂಪಾದಿಸಬಹುದೆಂಬ ಭ್ರಮೆ. ಷೇರುಪೇಟೆಯು ಸಧ್ಯದ ಮಟ್ಟಿಗೆ ಹೇಳಬೇಕಾದರೆ ಅದು ಒಂದು ರೀತಿಯ ಬ್ರಾಂತುಲೋಕವಾಗಿದೆ. ಕಾರಣ ಹೆಚ್ಚಿನ ಬೆಳವಣಿಗೆಗಳು ಸಾಮಾನ್ಯರ ಕಲ್ಪನೆಗೂ ಎಟುಕದ ರೀತಿಯಲ್ಲಿರುತ್ತವೆ. ಆದರೂ ಇಲ್ಲಿ ಸ್ವಲ್ಪಮಟ್ಟಿನ ಸಾಮಾನ್ಯ ಜ್ಞಾನವನ್ನು ಬಳಸಿ ಅಧ್ಯಯನಾಧಾರಿತವಾಗಿ ಚಟುವಟಿಕೆ ನಡೆಸಿದಲ್ಲಿ ಯಶಸ್ಸು ಕಾಣಬಹುದಾಗಿದೆ.
ಷೇರುಪೇಟೆಯ ನಿಯಂತ್ರಕರಾದ ʼ ಸೆಬಿ ʼ ಹೇಳುವಂತೆ ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು, ಅದೇ ಯಶಸ್ಸಿನ ಮೂಲ ಮಂತ್ರ. ಕೇವಲ ಕೆಲವು ದಿನಗಳು, ತಿಂಗಳು ಹೂಡಿಕೆ ಮಾಡಲಿರುವುದಕ್ಕೆ ಇಷ್ಟೆಲ್ಲಾ ಯೋಚನೆ ಏಕೆ? ಎಂದು ನಿರ್ಲಕ್ಷಿಸುವಂತಿಲ್ಲ. ಕಾರಣ, ಹೂಡಿಕೆ ಮಾಡಲಿರುವ ಕಂಪನಿಯ ಬಗ್ಗೆ ಅರಿಯದೆ ನಾವು ನಿರ್ಧರಿಸಿದರೆ ಯಾವ ರೀತಿಯ ಗೊಂದಲದ ಪರಿಸ್ಥಿತಿ ಉಂಟಾಗಬಹುದೆಂಬುದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಪಕಾಲೀನ ಹೂಡಿಕೆ ಎಂದು ನಿರ್ಧರಿಸಿದರೂ ಕೆಲವೊಮ್ಮೆ ವರ್ಷಗಟ್ಟಲೆ ಹೂಡಿಕೆ ಮುಂದುವರೆಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಕೆಲವೊಮ್ಮೆ ಕಂಪನಿ ರೋಗಗ್ರಸ್ಥವಾಗಿ ಲಿಸ್ಟಿಂಗ್ ನಿಂದ ನಿರ್ಗಮಿಸಿದರೆ ಶಾಶ್ವತ ಹೂಡಿಕೆದಾರರಾಗಬೇಕಾಗಬಹುದು.
ಒಂದು ಮನೆಯನ್ನು ಖರೀದಿಸುವಾಗ ಅದು ಇರುವ ಸ್ಥಳ, ವಾತಾವರಣ, ಮಾರಾಟಗಾರರ ಮಾಲಿಕತ್ವ ದಾಖಲೆಗಳು, ಕಟ್ಟಡದ ಗುಣಮಟ್ಟ, ಕಟ್ಟಡಕ್ಕೆ ಹಾಕಿರುವ ಬುನಾದಿ, ಎಲ್ಲಕ್ಕೂ ಮಿಗಿಲಾಗಿ ಆ ಮನೆಯನ್ನು ಯಾವ ಗಾತ್ರದ ನಿವೇಶನದಲ್ಲಿ ಕಟ್ಟಲಾಗಿದೆ, ಮುಂತಾದವುಗಳನ್ನು ಪರಿಶೀಲಿಸುತ್ತೇವೆ. ಅದರಂತೆಯೇ ಒಂದು ಷೇರು ಖರೀದಿಗೆ ಮುನ್ನ ಆ ಕಂಪನಿಯ ಯೋಗ್ಯತಾ ಮಟ್ಟವನ್ನು ಮಾಪನಮಾಡಿ ನಿರ್ಧರಿಸುವುದು ಅತ್ಯವಶ್ಯಕ. ಆರಂಭದಲ್ಲಿ ಕೇವಲ ಪೇಟೆಯ ಬೆಲೆಯೊಂದೇ ಮುಖ್ಯವಲ್ಲ ಖರೀದಿಸುವ ಷೇರಿನ ಮುಖಬೆಲೆ ಏನು ಅದಕ್ಕನುಗುಣವಾಗಿ ಷೇರಿನ ಬೆಲೆಯನ್ನು ಮಾಪನ ಮಾಡಬೇಕು. ನಂತರ ಇತರೆ ಮಾನದಂಡಗಳಾದ ಕಂಪನಿಯ ಸಾಧನೆ, ಚಟುವಟಿಕೆಯ ವಲಯ, ಆ ವಲಯಕ್ಕಿರುವ ಭವಿಷ್ಯ, ಕಂಪನಿಯ ಆಡಳಿತ ಮಂಡಳಿಯ ಗುಣಮಟ್ಟ, ಅವರು ಹೂಡಿಕೆದಾರಿ ಸ್ನೇಹ ಚಿಂತನಾ ಮನಸ್ಕರೇ ಮುಂತಾದವುಗಳನ್ನರಿಯಬೇಕು. ಏನೂ ಅರಿಯದೆ ಕೇವಲ ಅಲಂಕಾರಿಕ ಪ್ರಚಾರ, ವಿಚಾರಗಳ ಮೇಲೆ ನಿರ್ಧರಿಸಿದಲ್ಲಿ ಅಪಾಯಕ್ಕೆ ಆಹ್ವಾನವಿತಂತೆ. ಹೂಡಿಕೆ ಮಾಡುವಾಗ ಕಂಪನಿಗಳ ಆಂತರಿಕ ಸದೃಢ ಗುಣಗಳ ಬಗ್ಗೆ ತಿಳಿವಳಿಕೆ ಅತ್ಯವಶ್ಯ. ಕಂಪನಿಗಳು ಉತ್ಪಾದನಾ ವಲಯದಲ್ಲಿದ್ದು, ಉತ್ತಮ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿರುವುದು ಉತ್ತಮ.
ಕೆಲವು ನಿದರ್ಶನಗಳನ್ನು ಪರಿಶೀಲಿಸೋಣ:
1. 2015: ಯು ಪಿ ಹೋಟೆಲ್ಸ್ ಲಿಮಿಟೆಡ್ ಕಂಪನಿಯು 2001 ರಲ್ಲಿ ಬಾಂಬೆ ಸ್ಟಾಕ್ಎಕ್ಸ್ಚೇಂಜ್ ನಲ್ಲಿ ವಹಿವಾಟಿಗೆ ಲಿಸ್ಟಿಂಗ್ ಮಾಡಿಕೊಂಡಿತು. ಈ ಕಂಪನಿಯು 2011 ರಲ್ಲಿ ಪ್ರತಿ ಷೇರಿಗೆ ರೂ.10 ರಂತೆ, 2012 ಮತ್ತು 2013 ರಲ್ಲಿ ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ. ಕಾರಣಾಂತರಗಳಿಂದ 2015 ರಲ್ಲಿ ಕಂಪನಿಯ ಷೇರುಗಳನ್ನು ವಹಿವಾಟಿನಿಂದ ಅಮಾನತುಗೊಳಿಸುವ ಮೂಲಕ ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡಿತು. ಆದರೆ ಸುಮಾರು 7 ವರ್ಷಗಳ ನಂತರ ಕಂಪನಿಯು ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಈ ವರ್ಷದ ಮಾರ್ಚ್ ನಲ್ಲಿ ಲಿಸ್ಟಿಂಗ್ ಮಾಡಿಕೊಂಡು ವಹಿವಾಟಾಗಲು ಆರಂಭಿಸಲಾಯಿತು. 60 ವರ್ಷಗಳ ಇತಿಹಾಸವುಳ್ಳ ಈ ಕಂಪನಿ ಈಗ ರೂ.500 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಸಂಪೂರ್ಣ ನಶಿಸಿ ಹೋಗಿದ್ದ ಮೌಲ್ಯವು ಪುಟಿದೆದ್ದು ಉತ್ತಮ ಲಾಭ ಗಳಿಸಿಕೊಟ್ಟಿರುವುದು ಕಂಪನಿಯಲ್ಲಡಗಿರುವ ಆಂತರಿಕ ಸ್ವತ್ತು ಮತ್ತು ಆಡಳಿತ ಮಂಡಳಿಯ ಚಿಂತನೆಯಾಗಿದೆ.
2. 2001 : ಬರೋಡಾ ರೆಯಾನ್ ಕಾರ್ಪೊರೇಷನ್ ಲಿಮಿಟೆಡ್ಕಂಪನಿಯು 2001 ರಿಂದಲೂ ಕಾರಣಾಂತರಗಳಿಂದ ಅಮಾನತುಗೊಂಡಿದ್ದು, ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡು ಪೂರ್ತಿಯಾಗಿ ನಶಿಸಿದೆ ಎಂದು ಭಾವಿಸಿದ್ದರೆ 20 ವರ್ಷಗಳ ನಂತರ ಈ ವರ್ಷ ಜೂನ್1 ರಿಂದ ಅಮಾನತ್ತನ್ನು ತೆರವುಗೊಳಿಸಿಕೊಂಡು ಪುನ: ಲೀಸ್ಟಿಂಗ್ ಮಾಡಿಕೊಂಡಿತು. ಆರಂಭದ ದಿನ ರೂ.4.42 ರಲ್ಲಿದ್ದ ಷೇರಿನ ದರವು ರೂ.160 ಕ್ಕೆ ಕೇವಲ ಮೂರೇ ತಿಂಗಳ ಅಂತರದಲ್ಲಿ ಪುಟಿದೆದ್ದಿರುವ ನಿದರ್ಶನವು ಷೇರುಪೇಟೆಯ ವಿಸ್ಮಯಕಾರಿ ಗುಣ.
3. ಹಿಂದೂಸ್ಥಾನ್ಫುಡ್ಸ್ ಲಿಮಿಟೆಡ್1997 ರಲ್ಲಿ ಅಮಾನತುಗೊಂಡಿತ್ತು. 2012 ರಲ್ಲಿ ಆ ಕಂಪನಿಯು ಮತ್ತೊಮ್ಮೆ ವಹಿವಾಟಿಗೆ ಬಿಡುಗಡೆಯಾಯಿತು. ಜುಲೈ 2022 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಿದೆ. ಈಗಲೂ ರೂ.460 ರ ಸಮೀಪದಲ್ಲಿ ವಹಿವಾಟಾಗುತ್ತಿದೆ.
4. , ಆರ್ಟೆಕ್ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು 2001 ರಲ್ಲಿ ಅಮಾನತುಗೊಂಡಿತ್ತು. 2012 ರಲ್ಲಿ ಅಮಾನತನ್ನು ತೆರವುಗೊಳಿಸಿಕೊಂಡು ಪುನ: ವಹಿವಾಟಿಗೆ ಬಿಡುಗಡೆಯಾಯಿತು. 2015 ರಲ್ಲಿ ಕಂಪನಿ ಹೆಸರನ್ನು ಆರ್ಟೆಕ್ಪವರ್ ಅಂಡ್ ಟ್ರೇಡಿಂಗ್ ಲಿಮಿಟೆಡ್ಎಂದು ಬದಲಿಸಿಕೊಂಡಿತು. 2020 ರಲ್ಲಿ ಮತ್ತೆ ವಹಿವಾಟಿನಿಂದ ಅಮಾನತುಗೊಂಡಿತು.
5. ನೈಲೋಫಿಲ್ಸ್ ಲಿಮಿಟೆಡ್ ಕಂಪನಿಯು 2002 ರಿಂದಲೂ ವಿಧಿಸಿದ್ದ ಅಮಾನತನ್ನು 2012 ರಲ್ಲಿ ತೆರವುಗೊಳಿಸಿಕೊಂಡು ಪೇಟೆಯನ್ನು ಮರು ಪವೇಶಿಸಿತು. ಈ ಕಂಪನಿಯ ಹೆಸರನ್ನು ಆರ್ವ್ ಇನ್ಫ್ರಾಟೆಲ್ ಲಿಮಿಟೆಡ್ ಎಂದು 2016 ರಲ್ಲಿ ಬದಲಾಯಿಸಿಕೊಂಡಿತು. 6. ಐ ಎಫ್ಎಂ ಇಂಪೆಕ್ಸ್ ಗ್ಲೋಬಲ್ ಲಿಮಿಟೆಡ್ ಕಂಪನಿಯ ಮೇಲೆ 2002 ರಲ್ಲಿ ವಿಧಿಸಿದ್ದ ಅಮಾನತು ತೆರವುಗೊಳಿಸಿಕೊಂಡು 2012 ರಲ್ಲಿ ರಿಲೀಸ್ಟಿಂಗ್ ಮಾಡಿಕೊಂಡಿತು. ಈ ಕಂಪನಿ ತನ್ನ ಹೆಸರನ್ನು 2018 ರಲ್ಲಿ ಎನ್ ಎಂ ಎಸ್ ರಿಸೋರ್ಸಸ್ಗ್ಲೋಬಲ್ ಲಿಮಿಟೆಡ್ಎಂದು ಬದಲಿಸಿಕೊಂಡಿದೆ.
7. 2005 ರಲ್ಲಿ ಅಮಾನತುಗೊಂಡಿದ್ದ ಕಂಪನಿಯಾದ ಸೀಕ್ವೆಲ್ ಇ ರೂಟರ್ಸ್ ಲಿಮಿಟೆಡ್, 2012 ರಲ್ಲಿ ಎಲ್ಲಾ ನ್ಯೂನ್ಯತೆಗಳನ್ನು ತೆರವುಗೊಳಿಸಿಕೊಂಡು ರಿಲೀಸ್ಟ್ ಮಾಡಿಕೊಂಡಿತು. ಈ ಕಂಪನಿ 2017 ರಲ್ಲಿ ತನ್ನ ಹೆಸರನ್ನು ಕ್ರಾಫ್ಟನ್ಡೆವೆಲಪರ್ಸ್ಲಿಮಿಟೆಡ್( KKRRAFTON Developers Ltd) ಎಂದು ಬದಲಿಸಿಕೊಂಡು ವಹಿವಾಟಾಗುತ್ತಿತ್ತು, ಸೆಪ್ಟೆಂಬರ್2022 ರಲ್ಲಿ ಕಂಪನಿಯು ಷೇರುವಿನಿಮಯ ಕೇಂದ್ರಕ್ಕ ಪಾವತಿಸ ಬೇಕಾದ ಲೀಸ್ಟಿಂಗ್ಫೀಸ್ಪಾವತಿಸಲು ಅಸಮರ್ಥವಾದ ಕಾರಣ ಅಮಾನತುಗೊಳಿಸಲಾಯಿತು.
8. 1983 ರಿಂದಲೂ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲೀಸ್ಟಿಂಗ್ ಮಾಡಿಕೊಂಡು ಹಲವಾರು ವರ್ಷ ಆಕರ್ಷಣೀಯ ಮಟ್ಟದಲ್ಲಿ ವಿಜೃಂಭಿಸಿದ ಓಸ್ವಾಲ್ ಆಗ್ರೋ ಮಿಲ್ಸ್ ನ ಪ್ರವರ್ತಕರಾದ ಅಭಯ್ ಓಸ್ವಾಲ್ ರವರ ಓಸ್ವಾಲ್ ಗ್ರೀನ್ ಟೆಕ್ ( ಹಿಂದೆ ಈ ಕಂಪನಿ ಹೆಸರು ಬಿಂದಾಲ್ ಆಗ್ರೋ ಲಿಮಿಟೆಡ್ ಎಂದಿತ್ತು) ಕಂಪನಿಯು 2011 ರಲ್ಲಿ 14.17% ರಷ್ಟು ಭಾಗಿತ್ವವನ್ನು ಎನ್ ಡಿ ಟಿ ವಿ ಕಂಪನಿಯಲ್ಲಿ ರೂ.24.4 ಕೋಟಿ ಹೂಡಿಕೆಯ ಮೂಲಕ ಪಡೆದುಕೊಂಡಿದ್ದರು. 2016 ರಲ್ಲಿ 9.75% ಭಾಗಿತ್ವವನ್ನು ರೂ.51 ಕೋಟಿಗೆ ಮಾರಾಟಮಾಡಿದರು. ಉಳಿದ 4.42% ಭಾಗಿತ್ವವನ್ನು ಶೀಘ್ರವೇ ಮಾರಾಟಮಾಡುವುದಾಗಿ ಕಂಪನಿ ತಿಳಿಸಿತ್ತು.
ಈ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು, ಹಲವಾರು ಬಾರಿ ಅಸಹಜಮಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಷೇರುಪೇಟೆ ಬಗ್ಗೆ ಮಾಹಿತಿ ಇಲ್ಲದೆ, ಇತ್ತೀಚೆಗೆ ಪೇಟೆ ಪ್ರವೇಶಿಸುತ್ತಿರುವವರ ಸಂಖ್ಯೆಯು ಅತಿ ಹೆಚ್ಚಾಗುತ್ತಿದೆ. ಕಳೆದ ಎರಡು ತಿಂಗಳುಗಳಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಅಂಕಿ ಅಂಶಗಳ ಪ್ರಕಾರ, ಸುಮಾರು 46 ಲಕ್ಷ ಹೊಸ ಹೂಡಿಕೆದಾರರು ಪೇಟೆ ಪ್ರವೇಶಿಸಿದ್ದಾರೆ, ಅದಕ್ಕನುಗುಣವಾಗಿ ಹೂಡಿಕೆಗೆ ಲಭ್ಯವಿರುವ ಕಂಪನಿಗಳ ಸಂಖ್ಯೆ ಏರಿಕೆ ಕಂಡಿಲ್ಲ. ಈ ಹೂಡಿಕೆದಾರರ ದಟ್ಟಣೆಯೂ ಸಹ ಈ ರೀತಿಯ ಅಸಹಜಮಯ ಏರಿಳಿತಗಳಿಗೆ ಕಾರಣವಾಗಿ, ಪೇಟೆಯನ್ನು ಬೇಗ ಬೇಗ ಡ್ರಾ- ಬೇಗ ಬೇಗ ಬಹುಮಾನ ಎಂಬುವ ಪರಿಸ್ಥಿತಿಗೆ ತಳ್ಳಿದೆ. ಆದರೆ ಹೂಡಿಕೆ ಎಂದು ಪರಿಶೀಲಿಸಿದಾಗ VALUE PICK – PRAFIT BOOK ಸುಲಭ ಸಮೀಕರಣವು RTMM ( real time market movement ) ಪದ್ಧತಿ ಮೂಲಕ ಸ್ವಲ್ಪ ಮಟ್ಟಿನ ಯಶಸ್ಸು ತಂದು ಕೊಡಬಹುದಾಗಿದೆ.
Disclaimer: ಇದುಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ನವರಾತ್ರಿ-dasara- ಬಂತೆಂದರೆ ಮನೆ ಮನೆಯಲ್ಲಿ ಗೊಂಬೆ -doll festival-ಕೂಡಿಸುವ ಸಂಭ್ರಮ. ಹಳೇ ಮೈಸೂರು ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಒಂದೊಂದು ಮನೆಯಲ್ಲೂ ನೂರಾರು ಗೊಂಬೆಗಳು. ಮಹಾಭಾರತ, ರಾಮಾಯಣ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ ಎಲ್ಲವೂ ಗೊಂಬೆ ರೂಪದಲ್ಲಿ ಜೀವ ತಾಳುವುದುಂಟು.
ಎಲ್ಲರೂ ಎಲ್ಲರ ಮನೆಯ ಗೊಂಬೆ ಹಬ್ಬವನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ವೇದಿಕೆ ಕಲ್ಪಿಸಿದೆ. ನಿಮ್ಮ ಮನೆಯಲ್ಲಿ ಕೂಡಿಸಿರುವ ಗೊಂಬೆಗಳ ಫೋಟೋವನ್ನು ಕೆಳಗಿನ ನಂಬರಿಗೆ ವಾಟ್ಸಾಪ್ ಮಾಡಿ ಅಥವಾ ಇ ಮೇಲ್ ಮಾಡಿ. ನಾವದನ್ನು ಸುಂದರ ಆಲ್ಬಂ ಮಾಡಿ ಪ್ರಕಟಿಸುತ್ತೇವೆ. ಆ ಮೂಲಕ ನಿಮ್ಮ ಮನೆಯ ಗೊಂಬೆ ಅಲಂಕಾರ ಎಲ್ಲರ ಮನೆ ಮನವನ್ನು ಮುಟ್ಟುತ್ತದೆ. ವಾಟ್ಸಪ್ ನಂಬರ್ 7483010618 ಇ ಮೇಲ್ [email protected]
ವೃತಿಪರ ಕೋರ್ಸ್ ಗಳ ಸಿಇಟಿ RANKINGಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ RANKING ಪಟ್ಟಿಯನ್ನು ಇದೇ 29ರಂದು ಬಿಡುಗಡೆ ಮಾಡಲಾಗುವುದು. ಜತೆಗೆ ಅಕ್ಟೋಬರ್ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾತನಾಡಿರುವ ಅವರು, ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ನ್ಯಾಯಾಲಯವು ಸಮಿತಿ ಕೊಟ್ಟ ವರದಿಯನ್ನು ಪುರಸ್ಕರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಇಂಗ್ಲೆಂಡಿನ ರಾಣಿ ಎರಡನೇ ಎಲಿಜೆಬೆತ್ ರಿಗೆ ಈ ಆಧುನಿಕ ಕಾಲದಲ್ಲಿಯೂ ಅತಿ ಪುರಾತನ ರೀತಿಯ ಶಾಸ್ತ್ರ- ಸಂಪ್ರದಾಯ, ಮತ್ತು ರಾಜ ಮರ್ಯಾದೆಗಳೊಡನೆ ಅದ್ದೂರಿಯಾದ ಅಂತಿಮ ಸಂಸ್ಕಾರ ನಿನ್ನೆ ಲಂಡನ್ನಿನಲ್ಲಿ ನಡೆಯಿತು. 8 ನೇ ತಾರೀಖು ಸೆಪ್ಟಂಬರಿನಲ್ಲಿ ಆಕೆ ವಿಧಿವಶರಾಗಿ 10 ದಿನಗಳು ಕಳೆದಿದ್ದವಾದರೂ, ಇಷ್ಟೂ ದಿನಗಳ ಕಾಲ ಆಕೆಯ ಅಂತ್ಯಕ್ರಿಯೆಗಾಗಿ ಅದ್ದೂರಿ ಮತ್ತು ಅತ್ಯಂತ ಶಿಸ್ತಿನ ತಯಾರಿಗಳು, ವಿಧಿಗಳು ನಡೆಯುತ್ತಿದ್ದವು.
ಈ ಹತ್ತೂ ದಿನಗಳ ಕಾಲ ಯುನೈಟೆಡ್ ಕಿಂಗ್ಡಮ್ಮಿನ ಜನತೆ ಆಕೆಗೆ ಗೌರವದ ಮಹಾಪೂರವನ್ನೇ ಹರಿಸಿದ್ದರು. ಸ್ಕಾಟ್ಲೆಂಡಿನ ರಾಜಧಾನಿ ಎಡಿನ್ಬರೋದಲ್ಲಿ ಮತ್ತು ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ಜನರು ಮೈಲುಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಆಕೆಗೆ ಅಂತಿಮ ಗೌರವ ಸಲ್ಲಿಸಿದ್ದರು.“
ಎಪ್ಪತ್ತು ವರ್ಷ ನಿಸ್ವಾರ್ಥವಾಗಿ ದೇಶಕ್ಕಾಗಿ ಬದುಕಿದ ಆಕೆಗೆ ಅಂತಿಮ ಗೌರವ ಸಲ್ಲಿಸಲು ನಾವು ಇಷ್ಟು ಮಾಡುವುದೇನೂ ದೊಡ್ಡದಲ್ಲ “- ಎಂಬ ನಂಬಿಕೆಯನ್ನು ಹೊತ್ತ ಜನರು ಹಗಲೂ, ರಾತ್ರಿಯೆನ್ನದೆ ಸರತಿಯಲ್ಲಿ ನಿಂತರು. ಕಡು ಚಳಿ, ಮಳೆ, ಬಿಸಿಲು ಯಾವೊಂದೂ ಲೆಕ್ಕವಿಲ್ಲದೆ ಬೆಳೆದ ಈ ಸಾಲು ಒಂದು ಸಂದರ್ಭದಲ್ಲಿ 10 ಮೈಲಿ ( 16 ಕಿ.ಮೀ.)ಗೂ ಹೆಚ್ಚು ಉದ್ದಕ್ಕಿತ್ತು. ರಾಣಿಯ ಮುಖವನ್ನು ನೋಡಲು ಅವಕಾಶವಿಲ್ಲದಿದ್ದರೂ ಆಕೆಯ ಶವಪೆಟ್ಟಿಗೆಯನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡು, ಒಮ್ಮೆ ಅಂತಿಮವಾಗಿ ನಮಸ್ಕರಿಸಲು ಇವರು ಕೆಲವೊಮ್ಮೆ 24 ಗಂಟೆಗೂ ಹೆಚ್ಚು ಕಾಲ ಈ ಸರತಿಯಲ್ಲಿ ನಡೆದು ಬಂದಿದ್ದರು. ಭಾನುವಾರ ರಾತ್ರಿ 10.44 ಗಂಟೆಗೆ ಇನ್ನೂ ಸರತಿ ಸೇರಿಕೊಳ್ಳಲು ಆಗಮಿಸುತ್ತಿದ್ದ ಜನರನ್ನು ನಯವಾಗಿ ತಡೆದು ನಿಲ್ಲಿಸಲಾಯಿತು. ಏಕೆಂದರೆ ಆಗಾಗಲೇ ಸರತಿಯಲ್ಲಿದ್ದವರು ವೆಸ್ಟ ಮಿನಿಷ್ಟರ್ ಹಾಲನ್ನು ತಲುಪಲು ಸೋಮವಾರ ಬೆಳಗಿನ 6.30 ಗಂಟೆಯಾಗುತ್ತಿತ್ತು.
ಅಲ್ಲಿಂದ ಮುಂದಕ್ಕೆ ಅಂತಿಮ ದಿನದ ಕಾರ್ಯಕ್ರಮ ಶುರುಮಾಡಬೇಕಿತ್ತು.
ಸೋಮವಾರವನ್ನು, ರಾಣಿಯ ಅಂತಿಮ ಶವ ಯಾತ್ರೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ ರಜೆಯೆಂದು ಘೋಷಿಸಲಾಗಿತ್ತು. ಹಾಗೆಂದು ಇದು ಹೇರಿಕೆಯಾಗಿರಲಿಲ್ಲ. ಖಾಸಗೀ ವ್ಯಾಪಾರದವರು ಅವರಿಗೆ ಬೇಕಿದ್ದಲ್ಲಿ ಕೆಲಸ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಇಡೀ ದೇಶ ಸೋಮವಾರ ಈ ಅಂತಿಮ ಯಾತ್ರೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿತು.
ಕಳೆದ ಹತ್ತು ದಿನಗಳಿಂದ ಇಂಗ್ಲೆಂಡಿನ ರಾಣಿ ಎರಡನೇ ಎಲಿಝಬೆತ್ ಗೆ , ಅವರ ಸಂಸಾರದವರು, ಅರಮನೆಯವರು, ಇಡೀ ದೇಶದ ಪ್ರಜೆಗಳು ಮತ್ತು ಪ್ರಪಂಚದ ಎಲ್ಲ ನಾಯಕರುಗಳು ನಾನಾ ರೀತಿಯಲ್ಲಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಅದಕ್ಕಾಗಿ ಲಂಡನ್ನಿಗೆ ಬಂದಿಳಿದ ಜನರ ಸಂಖ್ಯೆ ಅಗಾಧವಾಗಿತ್ತು. ಈ ಕಾರಣ ನಡೆದ ಸಿದ್ಧತೆಗಳೂ ಬೃಹತ್ ಮಟ್ಟದ ಕಾರ್ಯಾಚರಣೆಗಳಾಗಿದ್ದವು. ಅಂತಿಮ ಯಾತ್ರೆಯ ಮೆರವಣಿಗೆ ನೋಡಲು ಬಂದವರಿಗಾಗಿ ಅಭೂತಪೂರ್ವ ಸಿದ್ಧತೆಗಳನ್ನು ನಡೆಸಲಾಗಿತ್ತು.
ಸ್ಥಿರವಾಗಿ ನಿಂತ ಪ್ರತಿ ಕಂಬ, ಪೆಟ್ಟಿಗೆ ಮತ್ತು ವಸ್ತುಗಳನ್ನು ಪೂರ್ಣವಾಗಿ ಬಿಚ್ಚಿ ಸ್ಪೋಟಕ ವಸ್ತುಗಳಿಗಾಗಿ ತಡಕಿ ಅವನ್ನು ಮತ್ತೆ ಜೋಡಿಸಲಾಗಿತ್ತು ಆಯಕಟ್ಟಿನ ಜಾಗಗಳ ತಾರಸಿಗಳಿಂದ ಬೈನಾಕ್ಯಲರ್ ಹಿಡಿದ ಪೋಲೀಸರು ಅಂಗುಲಂಗುಲವನ್ನೂ ತಮ್ಮ ಕಣ್ಣುಗಳಿಂದಲೇ ಸ್ಕಾನ್ ಮಾಡಿದ್ಧರು. ಶ್ವಾನಪಡೆ, ಅಶ್ವಪಡೆಯ ಪೋಲೀಸರು ಸಂದು -ಗೊಂದುಗಳ ಕೂಲಂಕಷ ಪರೀಕ್ಷೆಯನ್ನು ಮಾಡಲಾಯಿತು. ಸಿ.ಸಿ. ಟಿ.ವಿ ಕ್ಯಾಮರಾಗಳ ಮೂಲಕ ಇಡೀ ಲಂಡನ್ನಿನ ಪ್ರತಿ ಹಾದಿಯನ್ನೂ ಕುಳಿತು ನೋಡಬಹುದಾದ ವ್ಯವಸ್ಥೆಗಳನ್ನು ಚುರುಕುಗೊಳಿಸಲಾಗಿತ್ತು. ಪ್ರಪಂಚದ ನಾನಾ ಭಾಗಗಳಿಂದ ಮತ್ತು ದೇಶದ ಎಲ್ಲೆಡೆಗಳಿಂದ ಬಂದಿಳಿದ ಜನರಲ್ಲಿ ಅವರು ಕೇಳಬಹುದಾದ, ಕಾಣಬಹುದಾದ ಯಾವುದೇ ಸಂಶಯಾಸ್ಪದ ವಿಷಯಗಳನ್ನು ತಕ್ಷಣವೇ ಪೋಲೀಸರಿಗೆ ತಿಳಿಸಲು ಟೀವಿ ಮತ್ತಿತರ ಮಾಧ್ಯಮಗಳ ಮೂಲಕ ವಿನಂತಿಸಿಕೊಳ್ಳಲಾಯಿತು.. ಚರಿತ್ರೆಯಲ್ಲಿ ಇನ್ಯಾವತ್ತೂ ಆಗದಂತಹ ಬಿಗಿ ಭದ್ರತೆಗಳ ಎಚ್ಚರಿಕೆಗಳನ್ನು ಲಂಡನ್ನಿನಲ್ಲಿ ನಡೆಸಲಾಯಿತು. . ಅದಕ್ಕಾಗಿ ದೇಶದ ಪ್ರತಿ ಪೋಲೀಸು ತುಕಡಿಗಳಿಂದ ಆಫೀಸರುಗಳು ಲಂಡನ್ನಿಗೆ ಬಂದಿಳಿದಿದ್ದರು. ಹತ್ತು ಸಾವಿರ ಜನ ಪೋಲೀಸರು ಒತ್ತಟ್ಟಿಗೆ ಒಂದು ಕಾರ್ಯಕ್ರಮದ ಬಗ್ಗೆ ಈ ಬೃಹತ್ ಮಟ್ಟದ ಎಚ್ಚರಿಕೆ ವಹಿಸಿರುವುದು ಬ್ರಿಟಿಷರ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ದಾಖಲಾಗಿರುವುದು.
ಈ ವಿಧಿಗಳಲ್ಲಿ ಭಾಗಿಗಳಾಗಲು ಪ್ರಪಂಚದ ನಾನಾ ದೇಶಗಳ ಸರ್ವೋಚ್ಚ ನಾಯಕರುಗಳು ಲಂಡನ್ನಿಗೆ ಬಂದಿಳಿದಿದ್ದರು. ಅಮೆರಿಕಾ, ಕೆನಡಾ, ಭಾರತ, ಘಾನ, ಬಾರ್ಬಡೋಸ್ ಜೋರ್ಡನ್, ಬ್ರೆಝಿಲ್, ಫಿಜಿ, ಫ್ರಾನ್ಸ್, ಹಾಂಗ್-ಕಾಂಗ್, ಜರ್ಮನಿ, ಇಟಲಿ,ನ್ಯೂಝಿಲ್ಯಾಂಡ್, ಆಷ್ಟ್ರೇಲಿಯ, ಸೌದಿಯ ದೊರೆಯಾದಿಯಾಗಿ ಎಲ್ಲರೂ ಅಂತ್ಯಕ್ರಿಯೆಯ ಅಂತಿಮ ಸಂಸ್ಕಾರಕ್ಕೆ ಬಂದಿಳಿದಾಗ ಲಂಡನ್ ನಗರ ಅತ್ಯಂತ ಕಾಳಜಿ ವಹಿಸಿ ಮೇಲಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.
(ಪ್ರಪಂಚದ ಎಲ್ಲ ದೇಶಗಳಿಗೆ ರಾಣಿಯ ಅಂತ್ಯಕ್ರಿಯೆಗೆ ಬರುವಂತೆ ಆಮಂತ್ರಣಗಳು ಹೋದರೂ, ಸಿರಿಯಾ, ವೆನೆಝುಯೆಲ,ಆಪ್ಘಾನಿಸ್ತಾನ, ರಷಿಯಾ, ಮತ್ತು ಬೆಲರೂಸ್ ಗಳನ್ನು ಹೊರತುಪಡಿಸಲಾಗಿತ್ತು. ಚೈನಾದ ಪ್ರತಿನಿಧಿಗಳು ಮತ್ತು ಸೌದಿಯ ದೊರೆಯ ಉಪಸ್ಥಿತಿಗಳನ್ನು ಇಲ್ಲಿನ ಹಲವರು ವಿರೋಧಿಸಿದ್ದರು)
ಜೊತೆಗೆ ರಾಣಿಯ ಮರಿಮೊಮ್ಮಕ್ಕಳುಗಳ ಸಮೇತ ಇಡೀ ಕುಟುಂಬ ಮೆರವಣಿಗೆಯಲ್ಲಿ ನಡೆದು ಹೋದ ಕಾರಣ, ಮೆರವಣಿಗೆ ನಡೆದ ರಸ್ತೆಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು.
ಲಕ್ಷಕ್ಕೂ ಹೆಚು ಜನರು ಈ ಅಂತಿಮ ಯಾತ್ರೆಯನ್ನು ಸ್ವತಃ ವೀಕ್ಷಿಸಲು ಲಂಡನ್ನಿಗೆ ಬಂದಿಳಿದಿದ್ದರು. ಈ ಕಾರಣ ಆದಷ್ಟೂ ಇದ್ದಲ್ಲೇ ವೀಕ್ಷಿಸಲು ಜನರಿಗೆ ಸರ್ಕಾರ ವಿನಂತಿಸಿಕೊಂಡಿತ್ತು. ಅದಕ್ಕೆ ಅನುಕೂಲವಾಗುವಂತೆ 125 ವೀಕ್ಷಣಾ ಮಂದಿರಗಳಲ್ಲಿ ಅಂತಿಮ ಯಾತ್ರೆಯ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚ್ ಮತ್ತು ಕ್ಯಾಥಿಡ್ರಲ್ ಗಳಲ್ಲಿ ಮತ್ತು ಟೀವಿ ಚಾನಲ್ಲುಗಳಲ್ಲಿ ಅದಕ್ಕೆಂದೇ 24 ತಾಸುಗಳ ಪ್ರಸಾರವನ್ನು ನೀಡಲಾಯಿತು
ಪ್ರಪಂಚದ ಎಲ್ಲ ಮಾಧ್ಯಮಗಳೂ ರಾಣಿಯ ಅಂತಿಮ ಯಾತ್ರೆಯ ಅಭೂತಪೂರ್ವ ದೃಶ್ಯಗಳನ್ನು ಪ್ರಸಾರ ಮಾಡಿದರು. ಹಾಗಾಗಿ ವಿಶ್ವದ ಬಿಲಿಯನ್ನು ಗಟ್ಟಳೆ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.ಎನ್ನಲಾಗಿದೆ.
ರಾಣಿಯ ಶವಯಾತ್ರೆ ರಾಜ ಚಾರ್ಲ್ಸ ರ ನೇತೃತ್ವದಲ್ಲಿ ವೆಸ್ಟ್ ಮಿನ್ಸ್ಟರ್ ಹಾಲ್ ನಿಂದ (ಹೌಸಸ್ ಆಫ್ ಪಾರ್ಲಿಮೆಂಟ್) ಹೊರಟಿತು. 123 ವರ್ಷ ಹಳೆಯದಾದ ಗನ್ ಹೊರುವ ಬಂಡಿಯನ್ನೇ ರಥವನ್ನಾಗಿ ಮಾಡಲಾಗಿತ್ತು. ರಾಯಲ್ ನೇವಿಯ 98 ಯೋಧರು ಇದನ್ನು ಶಿಸ್ತಿನ ನಡಿಗೆಯಲ್ಲಿ ಕೊಂಡೊಯ್ದರು. ಈ ರಥದ ಹಿಂದೆ ರಾಣಿಯ ಕುಟುಂಬದ ಸದಸ್ಯರು ನಡೆದು ಬಂದರು. ಸಾವಿರಾರು ಮಿಲಿಟರಿ ಸೈನಿಕರು ತಮ್ಮ ವಿವಿಧ ವರ್ಣಗಳ ಪೋಷಾಕು ಧರಿಸಿ ಅದರ ಜೊತೆ ಪಥ ಸಂಚಲನೆ ಮಾಡಿದರು. ಆ ದೃಶ್ಯಗಳು ವರ್ಣರಂಜಿತವಾಗಿದ್ದವು. ,ಅತ್ಯಂತ ಶಿಸ್ತು ಮತ್ತು ಸಂಯಮಗಳ ಕವಾಯತುಗಳನ್ನು ಒಳಗೊಂಡಿದ್ದವು. ವಾದ್ಯಕ್ಕೆ ಸರಿಯಾದ ಹೆಜ್ಜೆ ಜೋಡಿಸಿ ನಡೆದ ಈ ಮೆರವಣಿಗೆ ಹಲವಾರು ಪ್ರಮುಖ ರಸ್ತೆಗಳಲ್ಲಿ ಹಾದು ಹೋಯಿತು.
ರಾಣಿಯ ಶವಪೆಟ್ಟಿಗೆಯನ್ನು ವೆಸ್ಟ್ ಮಿನ್ಸ್ಟರ್ ಅಬ್ಬಿಗೆಗೆ ತರಲಾಯಿತು. ಇಲ್ಲಿ ದೇಶದ ಪ್ರಧಾನಿಯಾದಿಯಾಗಿ ಎಲ್ಲ ಗಣ್ಯರು, ಕಾಮನ್ ವೆಲ್ತ್ ದೇಶಗಳ ಮತ್ತು ಪ್ರಪಂಚದ ಹಲವು ದೇಶಗಳ ನಾಯಕರು ರಾಣಿಗೆ ನಮನ ಸಲ್ಲಿಸಿದರು. 100 ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಒಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು ಇಂಗ್ಲೆಂಡಿನ ಅರಸೊತ್ತಿಗೆಯ ಪ್ರಭಾವದ ಶಕ್ತಿಯ ಪ್ರತೀಕವಾಗಿತ್ತು. ಸಮಾಜದ ವಿವಿಧ ಸ್ತರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಲವಾರು ಜನರು, ಆರೋಗ್ಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಆಹ್ವಾನಿತ ಜನಸಾಮಾನ್ಯರು ಕೂಡ ಈ ಸಂದರ್ಭದಲ್ಲಿ ಗೌರವದಿಂದ ಭಾಗವಹಿಸಿದ್ದರು.
ಸುಮಾರು 2000 ಜನರು ಹನ್ನೆರಡು ಗಂಟೆಯ ವೇಳೆಗೆ ರಾಷ್ರೆಗೀತೆಯನ್ನು ಹಾಡಿ ನಮನಗಳನ್ನು ಸಲ್ಲಿಸಿದ ನಂತರ, ಇಡೀ ರಾಜಮನೆತನ ಮಂದಿ, ಮುಂದಿನ ಯಾತ್ರೆಗೆ ಸೇರಿದರು.ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಸಹೋದರಿ ಮತ್ತಿತರ ಪರಿವಾರದವರೆಲ್ಲ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಕಮಾನಿನೆಡೆಗೆ ಮೆರವಣಿಗೆಯ ಭಾಗವಾಗಿ ಹಒರಟರು. ಕಾಮನ್ ವೆಲ್ತ್ ದೇಶದ ಮತ್ತಿತರ ಹಲವು ದೇಶಗಳ ಸೈನಿಕ ತುಕಡಿಗಳು ಕೂಡ ಭಾಗವಹಿಸಿ ಗೌರವ ಸಲ್ಲಿಸಿದವು.
ರಾಣಿ ಎಲಿಝೆಬೆತ್ ರ ಕುದುರೆ ಮತ್ತು ನಾಯಿಗಳ ಮೇಲಿನ ಪ್ರೀತಿಯೂ ಬಹಳ ಪ್ರಸಿದ್ದವೇ ಹೀಗಾಗಿ. ಆಕೆಯ ಕುದುರೆ ಎಮ್ಮಾ ಮತ್ತು ನಾಯಿಗಳಾದ ಸ್ಯಾಂಡಿ ಮತ್ತು ಮಿಕ್ ಗಳಿಗೂ ಈ ಅಂತಿಮ ಯಾತ್ರೆಯನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.
ರಾಯಲ್ ನೇವಿಯವರು ಎಳೆದು ನಡೆದ ರಥದ ಪಥಚಲನೆಯ ಶಿಸ್ತು ಮತ್ತು ಶಿಷ್ಟಾಚಾರಗಳು ರಾಜಮನೆತನದ ರೀತಿ ರಿವಾಜುಗಳು ಅದನ್ನು ವೀಕ್ಷಿಸಿದವರ ಮನದಲ್ಲಿ ಅಳಿಯದ ನೆನಪುಗಳನ್ನು ಬರೆದವು. ಆ ನಂತರ ರಾಣಿಯ ಶವಪೆಟ್ಟಿಗೆಯನ್ನು ಶವಯಾತ್ರೆಯ ಕಾರಿಗೆ (funeral hearse) ಗೆ ಹಸ್ತಾಂತರಿಸಲಾಯಿತು. ಇಲ್ಲಿಂದ ರಾಣಿಯನ್ನು ಆಕೆ ಹುಟ್ಟಿ ಬೆಳೆದ ನಯನ ಮನೋಹರ ವಿಂಡ್ಸರ್ ಕ್ಯಾಸಲ್ ಗೆ ತರಲಾಯಿತು. ದಾರಿಯುದ್ದಕ್ಕೂ ಈ ದೃಶ್ಯವನ್ನು ನೋಡಲು ನಿಂತ ಜನರು ರಾಣಿಯ ಕಾರಿಗೆ ಹೂಗಳನ್ನು ಎಸೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ವಿಂಡ್ಸರ್ ಕ್ಯಾಸೆಲ್ಲಿನಲ್ಲಿರುವ ಸೇಂಟ್ ಜಾರ್ಜ್ನ ಚಾಪೆಲ್ಲಿಗೆ ತಲುಪಿದ ನಂತರ ಇದುವರೆಗೆ ಪ್ರಪಂಚಕ್ಕೆಲ್ಲ ಪ್ರಸಾರವಾದ ರಾಣಿಯ ಅಂತಿಮ ಕ್ರಿಯೆಗಳನ್ನು ಆಕೆಯ ಸಂಸಾರದ ಖಾಸಗೀ ಅಂತ್ಯ ಸಂಸ್ಕಾರಕ್ಕೆ ಒಪ್ಪಿಸಲಾಯಿತು.
ಸೇಂಟ್ ಜಾರ್ಜ್ ಚಾಪೆಲ್ಲಿನಲ್ಲಿ ಅಕೆಯ ಪತಿ ಫಿಲಿಪ್ ಮತ್ತು ಆಕೆಯ ತಂದೆ ತಾಯಿಯರ ಮತ್ತು ಸಹೋದರಿಯ ಸಮಾಧಿಯೂ ಇರುವ ಕಾರಣ ಅಲ್ಲಿಯೇ ರಾಣಿಯ ಸಮಾಧಿ ಕಾರ್ಯಕ್ರಮ ನಡೆಯಿತು.
ರಾತ್ರಿಯ 7.30 ಗಂಟೆ (ಭಾರತದ 11.30 ) ರ ವೇಳೆಗೆ ಶುರುವಾದ ಅಂತಿಮ ಸಂಸ್ಕಾರದ ಕೊನೆಯ ಘಟ್ಟದ ನಂತರ ಆಕೆಯ ಸಮಾಧಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.
ಹತ್ತು ದಿನಗಳ ಹಿಂದೆಯೇ ರಾಣಿ ವಿಧಿವಶರಾಗಿದ್ದರೂ, ಆಕೆ ಇನ್ನೂ ತಮ್ಮ ನಡುವೆಯೇ ಇರುವರೆಂಬ ಯಾವದೋ ಒಂದು ಭಾವಕೋಶ ತಟ್ಟನೆ ಬರಿದಾದ ಆ ಕ್ಷಣದಲ್ಲಿ ಜನರ ದುಃಖದ ಕಟ್ಟೆಯೊಡೆದಿತ್ತು.
ಇಂತವರಿಗೆ ಸಮಾಧಾನ ಕೊಡಲು ಅಲ್ಲಲ್ಲಿ ಅಳವಡಿಸಿದ್ದ ತೆರೆಗಳ ಮೇಲೆ ಆಕೆಯ ಬದುಕಿನ ತುಣುಕುಗಳ ಪ್ರಸಾರ ಶುರುವಾಯಿತು. ಇವೆಲ್ಲದರ ನಡುವೆ ಅರಸೊತ್ತಿಗೆಯನ್ನು ವಿರೋಧಿಸುವ ಅಲ್ಪ ಸಂಖ್ಯಾತ ಜನರ ಕೂಗು ಅತ್ಯಂತ ಕ್ಷೀಣವಾಗಿದ್ದು ಆಶ್ಚರ್ಯವೆನಿಸಲಿಲ್ಲ.
ಎರಡು ಯುದ್ಧಗಳು, ಆಂತರಿಕ ಕಲಹಗಳು, ವಿಭಜನೆಗಳು, ಆಗಾಗ ಕದಡಿದ ಶಾಂತಿ ಈ ಎಲ್ಲ ಸಂದರ್ಭಗಳಲ್ಲಿ ಇಡೀ ದೇಶವನ್ನು ಇಡಿಯಾಗಿ ಹಿಡಿದಿಡಲು ಸಮರ್ಥಳಾಗಿದ್ದ ರಾಣಿಯೊಬ್ಬಳ ಕಾಲ ನಿನ್ನೆಗೆ ನಿಜಕ್ಕೂ ಮುಗಿದಿತ್ತು. ಆದರೆ, ಸಾವಿನಲ್ಲೂ ತನ್ನ ಸಾಮ್ರಾಜ್ಯವನ್ನು ಒತ್ತಟ್ಟಿಗೆ ತರುವಲ್ಲಿ ಆಕೆ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದಳು.
ವ್ಯಕ್ತಿಯಾಗಿ ಆಕೆ ಬೆಳೆದದ್ದು ರಾಜಮನೆತನದಲ್ಲಿ, ಬದುಕಿದ್ದು ರಾಣಿಯಾಗಿ. ಸಾವಿನಲ್ಲಿಯೂ ಕೂಡ ಸಂಯುಕ್ತ ರಾಷ್ಟ್ರದ ಕಣ್ಮಣಿಯಾಗಿಯೇ ಆಕೆ ಮೆರೆದರು. ಮುಂದೆಯೂ ಹಾಗೆಯೇ ಉಳಿದುಕೊಳ್ಳುವರು ಎನ್ನುವುದರಲ್ಲಿ ಸಂಶಯವಿಲ್ಲ.
ಯುವಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲಗಳನ್ನು ಕಲಿಸಿದರಷ್ಟೆ ಸ್ವಾವಲಂಬಿ ಭಾರತ ಕಟ್ಟಲು ಸಾಧ್ಯವಾಗುತ್ತದೆ. ಸದ್ಯ 150 ಐಟಿಐಗಳನ್ನು ಮೇಲ್ದರ್ಜೆಗೇರಿಸಿದ್ದು, ಇನ್ನೂ 30 ಸರ್ಕಾರಿ ಐಟಿಐಗಳನ್ನು ಈ ವರ್ಷ ಉನ್ನತೀಕರಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಪೀಣ್ಯದಲ್ಲಿರುವ ಸರಕಾರಿ ಐಟಿಐನಲ್ಲಿ ಶನಿವಾರ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರ ಸೂಚನೆಯಂತೆ ‘ವಿಶ್ವಕರ್ಮ ದಿನ’ವಾದ ಶನಿವಾರ ದೇಶದ ಎಲ್ಲಾ 14 ಸಾವಿರ ಐಟಿಐಗಳಲ್ಲಿ ಘಟಿಕೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.
ಸರಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಿದೆ. ಜತೆಗೆ, ಇಂಗ್ಲಿಷ್ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ನುಡಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ವರ್ಷದಿಂದ 5000 ಕೋಟಿ ರೂ.ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲಬುರ್ಗಿ ಎನ್ ವಿ ಮೈದಾನ ಸಾರ್ವಜನಿಕ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಇಂದು ಮಾತನಾಡುತ್ತಿದ್ದರು.
ಈ ಭಾಗದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕಲ್ಯಾಣ ಕರ್ನಾಟಕವನ್ನು ಮುಖ್ಯ ವಾಹಿನಿಗೆ ಸೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರ ಅಭಿವೃದ್ಧಿಗೆ ನಾವು ಸಂಕಲ್ಪ ಮಾಡಿದ್ದೇವೆ. ಹಲವಾರು ಜನರು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ ನಾವು ನಿರಂತರವಾಗಿ ಕೆಲಸ ಮಾಡುವ ಮೂಲಕ ಈ ಭಾಗದ ಸಂಪೂರ್ಣ ಅಭಿವೃದ್ದಿ ಮಾಡಲಾಗುವುದು ಎಂದರು.
ಜನಸಮಸ್ಯೆಗಳೊಂದಿಗೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕೂ, ಅದರೊಂದಿಗೆ ವಾಸ ಮಾಡುವುದಕ್ಕೂ ವ್ಯತ್ಯಾಸವಿದೆ. ಸಮಸ್ಯೆಗಳ ಪರಿಹಾರ ಜನರ ನಡುವೆಯೇ ಇದೆ. ಜನರ ಮಧ್ಯ್ರ್ ಓಡಾಡಿ, ಸಮಸ್ಯೆ ಗೆ ಪರಿಹಾರ ಕಂಡುಕೊಂಡು ಅದರ ಅನುಷ್ಠಾನ ಮಾಡಬೇಕು. ಅದೇ ನಿಜವಾದ ಜನಪರ ಸರ್ಕಾರ ಎಂದರು.
ಬದಲಾವಣೆಯ ಕಾಲ ಇದೀಗ ಬದಲಾವಣೆಯ ಕಾಲ ಬಂದಿದೆ. ಜನಜಾಗೃತರಾಗಿದ್ದಾರೆ. ಈ ಭಾಗದಲ್ಲಿ ಎಲ್ಲಾ ವರ್ಗದ ಜನ ವಾಸಿಸುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರಿಗೂ ಮನೆ, ಗ್ರಾಮಗಳಿಗೆ ರಸ್ತೆ ಸಂಪರ್ಕ, ಶಾಲೆಗಳು, ಆಸ್ಪತ್ರೆ ಗಳನ್ನು ಒಡಗಿಸಿದಾಗ ಆರೋಗ್ಯ ಕರ, ವಿಶ್ವಾಸಯುತ ಜೀವನ ನಡೆಸಲು ಸಾಧ್ಯ. ನಮ್ಮ ಸರ್ಕಾರ ಈ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಂಕಲ್ಪ ಮಾಡಿದೆ. ಕಳೆದ ಸೆಪ್ಟೆಂಬರ್ 17 ರಂದು 3000 ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದಂತೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಒದಗಿಸಲಾಗಿದೆ. ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ಇದು ಜನಪರ ಸರ್ಕಾರ ಎಂದು ತಿಳಿಸಿದರು.
ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು
ಕಲ್ಯಾಣ ಕರ್ನಾಟಕದ ಉದ್ದಗಲಕ್ಕೂ 2100 ಶಾಲಾ ಕೊಠಡಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಕರ್ನಾಟಕ ಉದಾಯವಾದ ಮೇಲೆ ಇಷ್ಟು ಶಾಲಾ ಕೊಠಡಿಗಳು ನಿರ್ಮಾಣ ವಾಗಿರಲಿಲ್ಲ. ರಾಜ್ಯದಲ್ಲಿ ಒಟ್ಟು 8000 ಕೊಠಡಿ ಕಟ್ಟಲಾಗುತ್ತಿದೆ. ಮುಂದಿನ ಆಗಸ್ಟ್ 15 ರೊಳಗೆ ಶೇ 100 ರಷ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಆದೇಶಿಸಲಾಗಿದೆ. 2500 ಅಂಗನವಾಡಿಗಳಿಗೆ ಮಂಜೂರಾತಿ ನೀಡಿ, ಚಾಲನೆ ನೀಡಲಾಗಿದೆ. ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಸಶಕ್ತೀಕರಣವನ್ನು ಮಾಡಲಾಗುತ್ತಿದೆ.
ಸರ್ಕಾರಿ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಾಡುವ ಮೂಲಕ ಈ ಭಾಗದ ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು. ರಾಜ್ಯದ ಬೇರೆ ಭಾಗಗಳು ಅಭಿವೃದ್ದಿ ಆಗುತ್ತಿರುವಂತೆಯೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲಾಗುವುದು. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡುವುದು ನಮ್ಮ ಘೋಷವಾಕ್ಯ ಹಾಗೂ ಗುರಿ. ಈ ಭಾಗದ ಅಭಿವೃದ್ದಿಯೊಂದಿಗೆ ಜನರನ್ನು ಪಾಲುದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಅನುದಾನ ನೀಡಿ 1000 ಗ್ರಾಮಗಳ ಸ್ತ್ರೀ ಶಕ್ತಿ ಸಂಘಕ್ಕೆ 1.50 ಲಕ್ಷ ಅನುದಾನ ನೀಡಿ ಸ್ವಯಂ ಉದ್ಯೋಗ ನೀಡಲು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವ ಸಂಘಗಳ ಮೂಲಕ ಪ್ರತಿ ಗ್ರಾಮದಲ್ಲಿ ಯುವಕರ ಸಂಘಟನೆ ಮಾಡಲಾಗುವುದು. ನೀರಾವರಿ ಯೋಜನೆಯಡಿ ನಾರಾಯಣಪುರ ಬಲದಂಡೆ ಯೋಜನೆ ಅಡಿಯಲ್ಲಿ ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗ 3000 ಕೋಟಿ ಒಡಗಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಈಗ ಅದನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. 5000 ಶಿಕ್ಷಕರ ನೇಮಕಾತಿ ಯನ್ನು ಮುಂದಿನ ಮಾರ್ಚ್ ಒಳಗೆ ಮಾಡಲಾಗುವುದು. 11000 ಶಿಕ್ಷಕರ ನೇಮಕ ಮಾಡುವ ಬದ್ಧತೆ ನಮ್ಮದು. ವ್ಯವಸ್ಥೆಯಲ್ಲಿ ನಂಬಿಕೆ ಪುನರ್ ಸ್ಥಾಪನೆಗೆ ಬದ್ಧತೆಯಿಂದ ಕೆಲಸ ಮಾಡಲಾಗುವುದು.
ಬೀದರ್ ಜಿಲ್ಲೆಗೆ ನೀರು ಕೊಡುವ ಕಾಗಿಣಾ ಯೋಜನೆ, ಕಲ್ಯಾಣ ಕರ್ನಾಟಕದಲ್ಲಿ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಕ್ರಾಂತಿಪುರುಷ ಬಸವಣ್ಣನವರ ಹೋರಾಟದ ನಾಡು ಇದು. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಅನುಭವ ಮಂಟಪ ಸ್ಥಾಪನೆಗೆ ಚಾಲನೆ ನೀಡಿದ್ದಾರೆ. ಜಗತ್ತಿನ ಮೊದಲ ಪಾರ್ಲಿಮೆಂಟು ಅನುಭವ ಮಂಟಪವನ್ನು ಸ್ಥಾಪಿಸಿ ಜಗತ್ತಿಗೆ ಶರಣರು ಸಾರಿದ ಸಂದೇಶವನ್ನು ಸಾರುವ ಕೆಲಸವನ್ನು ಮಾಡಲಾಗುವುದು ಎಂದರು.
ರಾಯಚೂರಿಗೆ ಒಂದು ಉನ್ನತ ಮಟ್ಟದ ಮೈದ್ಯಕೀಯ ಸಂಸ್ಥೆ: ಕಲಬುರ್ಗಿಯಲ್ಲಿ ಟೆಕ್ಸ್ಟೈಲ್ ಪಾರ್ಕ್ ರಾಯಚೂರಿನ ಜನರು ಏಮ್ಸ್ ಬಗ್ಗೆ ಕನಸು ಕಂಡಿದ್ದಾರೆ. ರಾಯಚೂರಿಗೆ ಒಂದು ಉನ್ನತ ಮಟ್ಟದ ಮೈದ್ಯಕೀಯ ಸಂಸ್ಥೆ ಸ್ಥಾಪಿಸಲಾಗುವುದು. ಕಲಬುರ್ಗಿಯಲ್ಲಿ ಸ್ಥಾಪಿಸುವ ಜಯದೇವ ಆಸ್ಪತ್ರೆಯನ್ನು ಪ್ರಧಾನಿಯವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.
ಗುಳೇ ಹೋಗುವುದನ್ನು ತಪ್ಪಿಸಲಾಗುವುದು ಈ ಭಾಗದಲ್ಲಿ ಗುಳೆ ಹೋಗುವುದು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಗುಳೆ ಹೋಗುವುದನ್ನು ತಡೆಯಲಾಗುವುದು. ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಕೈಗಾರಿಕೆಗಳನ್ನು ಸ್ಥಾಪಿಸಲಾಗುವ ಕೆಲಸ ಮಾಡಲಾಗುವುದು ಎಂದರು. ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಿದ್ದೇವೆ. ಜನರ ಕೈಗೆ ಉದ್ಯೋಗ ದೊರೆತಲ್ಲಿ ಗುಳೇ ಹೋಗುವುದನ್ನು ತಡೆಯಬಹುದು ಎಂದರು.
ಒಂದು ವೃತ್ತಿಯನ್ನು ಆರಿಸಿಕೊಂಡಾಗ ಅದಕ್ಕೆ ನ್ಯಾಯ ಸಮ್ಮತವಾದ ರೀತಿಯಲ್ಲಿ ನಿರ್ವಹಿಸಬೇಕು. ಕೆಲವು ವೃತ್ತಿಗಳಲ್ಲಿ ಕಾರ್ಯದ ಒತ್ತಡಗಳಿಂದ ವೃತ್ತಿಗೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗಲಿ, ಅರಿವು ಮೂಡಿಸಿಕೊಳ್ಳುವುದಕ್ಕಾಗಲಿ ಸಮಯಾವಕಾಶವೇ ಇರದ ರೀತಿಯಲ್ಲಿರುತ್ತದೆ. ಮತ್ತೆ ಕೆಲವರಿಗೆ ಆಸಕ್ತಿಯೂ ಇರಲಾರದು.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿಯವರು ಹೆಚ್ಚಿನ ಒತ್ತಡದಲ್ಲಿರುವುದು ಸಹಜವಾಗಿದೆ. ಕಾರಣ ಸಾರ್ವಜನಿಕರಲ್ಲಿ ಉಂಟಾಗುತ್ತಿರುವ ಹೊಸ ಹೊಸ ಆರೋಗ್ಯದ ತೊಂದರೆಗಳು.
ಕರೋನ ನಂತರದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತಿರುವಾಗಲೇ, ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಜನಜೀವನದ ಆರೋಗ್ಯದಲ್ಲಿ ವಿಶೇಷವಾಗಿ ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಏರುಪೇರುಗಳುಂಟಾಗುತ್ತಿದೆ. ಈ ಎಲ್ಲದರ ನಡುವೆ ವೈದ್ಯರಿಗೆ ಸಮಯದ ಅಭಾವವಿರಬಹುದು. ಈ ಮಧ್ಯೆ ಇಷ್ಟು ಬಿಡುವಿಲ್ಲದ ಒತ್ತಡದಲ್ಲಿ ಅವರ ವೈಯಕ್ತಿಕ ಆರ್ಥಿಕ ನಿರ್ವಹಣೆಯು ಸುಲಭ ಸಾಧ್ಯವಿಲ್ಲ. ಇಂತಹವರಿಗೆ ಸೂಕ್ತವಾದ ವಿಧ ಎಂದರೆ ಷೇರುಪೇಟೆಯ ಹೂಡಿಕೆ.
ಷೇರುಪೇಟೆಯ ಹೂಡಿಕೆಗೆ ಅಗಾಧ ಹಣ ಬೇಕಾಗಬಹುದೆಂಬ ಕಲ್ಪನೆ ಹೆಚ್ಚಿನವರಲ್ಲಿರುತ್ತದೆ. ಆದರೆ ಪರಿಸ್ಥಿತಿ ಬದಲಾಗಿದೆ. ಷೇರುಗಳನ್ನು ಅಭೌತಿಕ ರೂಪ ಅಂದರೆ ಡಿಮ್ಯಾಟ್ ರೂಪದಲ್ಲಿ ಹೊಂದಬಹುದಾದ ಕಾರಣ ಹೂಡಿಕೆಯನ್ನು ಅತ್ಯಲ್ಪ ಪ್ರಮಾಣದಲ್ಲಾರಂಭಿಸಿ, ನಂತರ ಸೂಕ್ತವೆನಿಸಿದಲ್ಲಿ ಮತ್ತಷ್ಟು ಸೇರಿಸಿಕೊಳ್ಳುತ್ತಾ ಬೆಳೆಸಬಹುದು.
ವೈದ್ಯರು ತಮ್ಮ ರೋಗಿಗಳಿಗೆ ಅವರ ತೊಂದರೆ, ಕಾಯಿಲೆಗಳಿಗನುಗುಣವಾಗಿ ಸೂಕ್ತವಾದ ಔಷಧಿಗಳನ್ನು ಸೂಚಿಸುತ್ತಾರೆ. ಅವರು ಸೂಚಿಸುವ ಔಷದಿಗಳು ಮತ್ತು ಅವನ್ನು ಉತ್ಪಾದಿಸುವ ಕಂಪನಿಗಳ ಬಗ್ಗೆ ಅವರಿಗೆ ನಂಬಿಕೆ ಇರುತ್ತದೆ. ಆ ಕಂಪನಿಗಳ ಗುಣಮಟ್ಟದ ಬಗ್ಗೆಯೂ ಖಾತ್ರಿ ಇರುತ್ತದೆ. ಹೇಗಿದ್ದರೂ ಅವರು ಸೂಚಿಸುವ ಔಷದಿಗಳನ್ನು ಉತ್ಪಾದಿಸುವ ಕಂಪನಿಗಳ ಬಗ್ಗೆ ಮತ್ತು ಅವು ಉತ್ಪಾದಿಸುವ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ತಿಳಿದಿರುತ್ತಾರೆ, ಅಂತಹ ಕಂಪನಿಗಳ ಸುತ್ತ ಆಗುತ್ತಿರುವ ಘಟನಾವಳಿಗಳ ಬಗ್ಗೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಕಂಪನಿಗಳ ಉತ್ಪನ್ನಕ್ಕೆ ದೊರೆಯುವ ಮನ್ನಣೆ, ತಿರಸ್ಕಾರ, ಪುರಸ್ಕಾರ, ನಿಷೇದ, ಪ್ರತಿಸ್ವರ್ಧಿತ್ವ ಮುಂತಾದ ವಿಚಾರಗಳನ್ನೂ ತಿಳಿದುಕೊಂಡಲ್ಲಿ ಅವರ ವೃತ್ತಿಗೆ ಪೂರಕವಾಗುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲಾ ಅಂಶಗಳನ್ನು ಅವರ ಜೀವನದಲ್ಲಿ ಜಾರಿಗೊಳಿಸಲು ಸುಲಭವಾದ ಮಾರ್ಗವೆಂದರೆ ಷೇರುಪೇಟೆ.
ಔಷಧಿ ವಲಯದ ಪ್ರಮುಖ ಕಂಪನಿಗಳಾದ ಸಿಪ್ಲಾ, ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್, ದಿವೀಸ್ ಲ್ಯಾಬೊರೇಟರೀಸ್, ಗ್ಲಾಕ್ಸೋ, ಸನೋಫಿ, ಫೈಜರ್, ಸನ್ ಫಾರ್ಮ, ಗ್ಲೆನ್ ಮಾರ್ಕ್ ಫಾರ್ಮ, ವೊಕಾರ್ಡ್, ಲುಪಿನ್, ಲೌರಸ್ ಲ್ಯಾಬ್, ನ್ಯಾಟ್ಕೋ ಫಾರ್ಮ ದಂತಹ ಅನೇಕ ಪ್ರಮುಖ ಕಂಪನಿಗಳು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡು ದಿನ ನಿತ್ಯ ಷೇರಿನ ಬೆಲೆಗಳಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿರುತ್ತವೆ. ಒಮ್ಮೊಮ್ಮೆ ಕಂಪನಿಯು ಉತ್ತಮವಾದ ಸಾಧನೆ ಪ್ರದರ್ಶಿಸಿದ್ದರೂ, ವೈವಿಧ್ಯಮಯ ಕಾರಣಗಳಿಂದ ಷೇರಿನ ಬೆಲೆಗಳು ಕುಸಿತ ಕಾಣಬಹುದು ಅಂತಹ ಸಂದರ್ಭದಲ್ಲಿ ಕಂಪನಿಗಳ ಯೋಗ್ಯತಾ ಮಟ್ಟವನ್ನರಿತು ಹೆಚ್ಚಿನ ಹಣ ಹೂಡಲು ಪ್ರಯತ್ನಿಸಬಹುದಾಗಿದೆ. ಹಾಗೆಯೇ ಬಾಹ್ಯ ಕಾರಣಗಳಿಂದಾಗಿ ಕೆಲವು ಬಾರಿ ಅನಿರೀಕ್ಷಿತ ಮಟ್ಟದ ಏರಿಕೆಯನ್ನೂ ಸಹ ಪ್ರದರ್ಶಿಸಬಹುದು, ಅಂತಹ ಸಂದರ್ಭವನ್ನು ಬಳಸಿಕೊಂಡು ಸ್ವಲ್ಪ ಪ್ರಮಾಣದಲ್ಲಾಗಲಿ ಅಥವಾ ಪೂರ್ಣವಾಗಿ ಮಾರಾಟಮಾಡಿ ಲಾಭ ಗಳಿಸಬಹುದಾಗಿದೆ.
ಔಷಧಿ ಕಂಪನಿಗಳು, ವಿಶೇಷವಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳನ್ನು ಬೆಳೆಸಿಕೊಂಡಿರುವಂತಹ ಕಂಪನಿಗಳು ಹೆಚ್ಚು ಹೆಚ್ಚು ಸೂಕ್ಷ್ಮತೆಯನ್ನು ಬೆಳೆಸಿಕೊಂಡಿರುತ್ತವೆ. ಅದಕ್ಕೆ ಮುಖ್ಯ ಪ್ರಭಾವಿ ಅಂಶ ಎಂದರೆ ಅಮೇರಿಕಾದ ʼ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ʼ ( )ಸಂಸ್ಥೆ ಕೈಗೊಳ್ಳಬಹುದಾದ ಕ್ರಮಗಳಾಗಿವೆ. ಕೆಲವೊಮ್ಮೆ ಎಫ್ ಡಿ ಎ ಇನ್ಸ್ಪೆಕ್ಷನ್ ಆರಂಭಿಸಿದೆ ಎಂದರೆ ಸಾಕು ಆ ಕಂಪನಿಯ ಷೇರುಗಳು ಒತ್ತಡ ಎದುರಿಸುವ ಸಾಧ್ಯತೆ ಇದೆ. ಅಂತಹ ಇಳಿಕೆಯ ಸಮಯ ಹಲವಾರು ಬಾರಿ ಹೂಡಿಕೆಗೆ ಅವಕಾಶಗಳನ್ನು ಸೃಷ್ಠಿಸುತ್ತದೆ. ಈ ಹಿಂದೆ ಈ ಯು ಎಸ್ ಎಫ್ ಡಿ ಎ ಕ್ರಮದಿಂದ ಅಗಾಧವಾದ ಕುಸಿತಕ್ಕೊಳಗಾದ ಕಂಪನಿಗಳಲ್ಲಿ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್, ಹಿಂದಿನ ರಾನ್ ಬಾಕ್ಸಿ ಲ್ಯಾಬೊರೇಟರೀಸ್, ಸನ್ ಫಾರ್ಮ, ಗ್ಲೆನ್ ಮಾರ್ಕ್ ಫಾರ್ಮ, ಝೈಡಸ್ ಲೈಫ್ ಸೈನ್ಸಸ್, ಲುಪಿನ್ , ಅರವಿಂದೋ ಫಾರ್ಮ, ಅಲೆಂಬಿಕ್ ಫಾರ್ಮ ದಂತಹ ಅನೇಕ ಕಂಪನಿಗಳು ಸೇರಿವೆ.
ದಿವೀಸ್ ಲ್ಯಾಬೊರೇಟರೀಸ್ ಕಂಪನಿಯು 2009 ರಲ್ಲಿ, 2015 ರಲ್ಲಿ 1:1 ಅನುಪಾತದ ಬೋನಸ್ ನೀಡಿದ್ದಲ್ಲದೆ, ನಿರಂತರವಾಗಿ ಆಕರ್ಷಣೀಯ ಪ್ರಮಾಣದ ಲಾಭಾಂಶಗಳನ್ನು ವಿತರಿಸುತ್ತಿರುವ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ 2015 ರಲ್ಲಿ ರೂ.2,480 ರ ಗರಿಷ್ಠದಲ್ಲಿತ್ತು. 2016 ರಲ್ಲಿ ರೂ.1,380 ರಲ್ಲಿತ್ತು. 2017 ರಲ್ಲಿ ಯು ಎಸ್ ಎಫ್ ಡಿ ಎ ವಾರ್ನಿಂಗ್ ಪತ್ರದ ಕಾರಣ ಷೇರಿನ ಬೆಲೆಯು ರೂ.534 ರವರೆಗೂ ಕುಸಿಯಿತು. ಸುದೀರ್ಘ ಸಮಯದ ನಂತರ ಅಂದರೆ 2019 ರಲ್ಲಿ ಷೇರಿನ ಬೆಲೆ ರೂ.1,860 ನ್ನು ದಾಟಿತು, 2020 ರಲ್ಲಿ ಷೇರಿನ ಬೆಲೆ ರೂ.3,850 ನ್ನು ದಾಟಿತು. ಈ ವರ್ಷ ಷೇರಿನ ಬೆಲೆ ರೂ.4,700 ರ ಗರಿಷ್ಠಕ್ಕೂ ಜಿಗಿತ ಕಂಡು ಸಧ್ಯ ರೂ.3,570 ರ ಸಮೀಪವಿದೆ. ಈ ನಿದರ್ಶನವು ವ್ಯಾಲ್ಯು ಪಿಕ್ ಗೆ ಆಯ್ಕೆ ಯಾವಾಗ ಮಾಡಿಕೊಂಡರೆ ಸೂಕ್ತ ಎಂಬುದನ್ನು ಮತ್ತು ಒಂದು ಉತ್ತಮ ಕಂಪನಿ ಯಾವ ರೀತಿ ಷೇರುದಾರರಿಗೆ ಲಾಭ ತಂದುಕೊಡಬಹುದೆಂಬುದನ್ನೂ ಸಹ ತಿಳಿಸುತ್ತದೆ. ಗಮನವಿರಲಿ ಈ ಕಂಪನಿಯ ಷೇರಿನ ಬೆಲೆಯು 2007 ರಲ್ಲಿ ರೂ.7,000 ದ ಗಡಿ ದಾಟಿ ಬೆಳೆದಿತ್ತು ಹಾಗೆಯೇ 2009 ರಲ್ಲಿ ರೂ.455 ರ ಸಮೀಪಕ್ಕೂ ಕುಸಿದಿತ್ತು.
ಹಲವು ಬಾರಿ ಒಂದು ಕಂಪನಿಯ ಉತ್ಪನ್ನವು ನಿಗದಿಪಡಿಸಿದ ಮಾನದಂಡಗಳಿಗನುಗುಣವಾಗಿರದೆ, ಸ್ವಲ್ಪ ಕೆಳಮಟ್ಟದ್ದಾಗಿದ್ದಲ್ಲಿ ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ ಗುಣಮಟ್ಟ ಕಾಪಾಡಿಕೊಂಡು, ಸ್ಫರ್ಧಾತ್ಮಕ ವ್ಯವಹಾರದಲ್ಲಿ ತನ್ನ ಉಳಿವಿಗಾಗಿ, ಸಾಧನೆಗಾಗಿ ನೀತಿಪಾಲನಾ ಮಟ್ಟವನ್ನು ಉನ್ನತ ಸ್ಥಿತಿಯಲ್ಲಿರಿಸುವುದು ಅಗ್ರಮಾನ್ಯ ಕಂಪನಿಗಳಿಗೆ ಅತ್ಯಗತ್ಯವಾಗಿದೆ. ಕಳೆದ ಏಪ್ರಿಲ್ ನಲ್ಲಿ ಅರಂವಿಂದೋ ಫಾರ್ಮ ಮತ್ತು ಸನ್ ಫಾರ್ಮಾ ಕಂಪನಿಗಳು ತಮ್ಮ ಉತ್ಪನ್ನವನ್ನು ಹಿಂದಕ್ಕೆ ( ರಿಕಾಲ್) ಪಡೆದುಕೊಂಡಿದೆ. ಆಗಷ್ಟ್ ತಿಂಗಳಲ್ಲಿ ಫೈಜರ್ ಕಂಪನಿಯು ತನ್ನ ಉತ್ಪಾದನೆಯನ್ನು ಸ್ವಯಂ ನಿರ್ಧಾರದಿಂದ ಹಿಂದಕ್ಕೆ ಪಡೆದುಕೊಂಡಿದೆ.
ಕೇವಲ ಅಮೇರಿಕಾದಲ್ಲಿ ಮಾತ್ರವಲ್ಲದೆ ಇತರೆ ಹೆಚ್ಚಿನ ದೇಶಗಳು ಔಷಧಿ ನಿಯಂತ್ರಕ ಸಂಸ್ಥೆ ಹೊಂದಿವೆ. ಕೆಲವು ಇಂತಿವೆ.
ಕಳೆದ ಒಂದು ವರ್ಷದಲ್ಲಿ ಹಲವು ಫಾರ್ಮಾ ಕಂಪನಿಗಳಲ್ಲುಂಟಾದ ಷೇರಿನ ದರಗಳ ಬದಲಾವಣೆಗಳು:
ಕಂಪನಿ ಹೆಸರು
ಸಧ್ಯದ ಪೇಟೆ ದರ
ವಾರ್ಷಿಕ ಗರಿಷ್ಠ
ವಾರ್ಷಿಕ ಕನಿಷ್ಠ
ಸಿಪ್ಲಾ
1,033
1,083
850
ದಿವೀಸ್ ಲ್ಯಾಬ್
3,574
5,425
3,366
ಡಾಕ್ಟರ್ ರೆಡ್ಡೀಸ್
4,082
5,078
3,655
ಲುಪಿನ್
632
985
583
ಫೈಜರ್
4,191
6,036
4,056
ಗ್ಲಾಕ್ಸೋ
1,431
1,917
1,372
ಸನೋಫಿ
6,055
8,428
6,000
ಗ್ಲೆನ್ ಮಾರ್ಕ್ ಫಾರ್ಮ
372
551
349
ಝೈಡಸ್ ಲೈಫ್
360
572
319
ನ್ಯಾಟ್ಕೋ ಫಾರ್ಮ
611
973
600
ವೊಕಾರ್ಡ್
257
492
201
ಗಮನಿಸಬೇಕು: ಮೇಲೆ ತೋರಿಸಿದ ಕಂಪನಿಗಳಲ್ಲಿ ಒಂದೊಂದು ಕಂಪನಿ ಒಂದೊಂದು ತರಹದ ಮುಖಬೆಲೆ ಹೊಂದಿರುವುದರಿಂದ ಹೋಲಿಕೆ ಮಾಡುವಾಗ ಅದನ್ನು ಸಮತೋಗಿ ನಿರ್ಧರಿಸಿರಿ. ಲಾಭಾಂಶವನ್ನು ಶೇಕಡಾವಾರು ನಿರ್ಧರಿಸಲು ಷೇರಿನ ಮುಖಬೆಲೆ ಮುಖ್ಯ.
ಹೀಗೆ ಅನೇಕ ಕಂಪನಿಗಳು ಹತ್ತಾರು ಅವಕಾಶಗಳನ್ನು ಸೃಷ್ಠಿಸಿಕೊಡುತ್ತವೆ. ಅವಶ್ಯಕತೆ ಇದ್ದಾಗ ಸುಲಭಾವಾಗಿ ಅಂದಿನ ಪೇಟೆಯ ದರದಲ್ಲಿ ಮಾರಾಟ ಮಾಡಿ ನಗದೀಕರಿಸಿಕೊಳ್ಳಬಹುದಾಗಿದೆ. ಹೂಡಿಕೆಯಾಗಿ ಮುಂದುವರೆಸಿಕೊಂಡು ಹೋದಲ್ಲಿ ಆಕರ್ಷಣೀಯ ಮಟ್ಟದ ಲಾಭಾಂಶ ಮುಂತಾದ ಕಾರ್ಪೊರೇಟ್ ಫಲಗಳನ್ನು ಪಡೆದುಕೊಳ್ಳಬಹುದು.
Disclaimer: ಇದುಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.