37 C
Karnataka
Tuesday, April 22, 2025
    Home Blog Page 156

    ಅಭದ್ರತೆ ಬದುಕಿನ ಭಾಗ ಅಲ್ಲವೇ?

    ಕೊರೊನಾ ಎಂಬ ಕಾಯಿಲೆ ಬಂದ ಕಾಲದಿಂದ ಏನೆಲ್ಲಾ ಆಗೋಯ್ತು. ಕಾಲಕಾಲಕ್ಕೆ ಲಾಕ್‍ಡೌನ್ ಆಯ್ತು. ನಿಯಮಗಳು ಜಾರಿಗೆ ಬಂದವು. ಎಂತಹದ್ದೇ ಕಷ್ಟ ಬಂದಾಗ ದೇವರಿದ್ದಾನೆ ಬಿಡು ಎಂದುಕೊಂಡು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರಿಗೆ ಹರಕೆ ಹೊತ್ತು ಮನಸ್ಸಿಗೆ ತುಸು ನೆಮ್ಮದಿ ನೀಡುತ್ತಿದ್ದ ದೇವರ ಗುಡಿಗಳೂ ಬಂದ್ ಆದವು. ದೈವದೆಡೆಗೆ ಅಪಾರ ನಂಬಿಕೆ ಹೊಂದಿದ ಭಕ್ತಗಣಗಳ ಮನದೊಳಗೆ “ದೇವರಿದ್ದಾನಾ ಅಥವಾ ದೇವರೇ ಇದೆಲ್ಲವನ್ನು ಮಾಡಿಸುತ್ತಿದ್ದಾನಾ?’ ಎನ್ನುವ ಸಂಶಯ ಮೂಡಿಸಿದ್ದು ಸುಳ್ಳಲ್ಲ.ದಿನೇ ದಿನೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಹ (ಕೆಲವು ಹೊರತುಪಡಿಸಿ)ಎಲ್ಲವೂ ತೆರವುಗೊಂಡಿದ್ದು ಜನರಿಗೆ ಎಂದಿನಂತೆ ಓಡಾಡಲು ಅವಕಾಶ ಸಿಕ್ಕಿದೆ.

    ಇದೆಲ್ಲವನ್ನು ಗಮನಿಸಿದರೆ ಪರಿಸ್ಥಿತಿ ಒಂದೇ ತೆರನಾಗಿರುವುದಿಲ್ಲ ಎಂಬುದು ಸ್ಪಷ್ಟ.
    ಕೊರೊನಾ ಬಂದಾಗಿನಿಂದ ಹೆಚ್ಚಿನವರ ಬದುಕಿನಲ್ಲಿ ಸಂಕಷ್ಟ. ಮುಂದೇನು, ಬದುಕಿಗೆ ದಾರಿ ಯಾವುದು ಎನ್ನುವ ಅನಿಶ್ಚಿತತೆ ಕಾಡಿದ್ದು ಅಷ್ಟೇ ಸತ್ಯ. ಬದಲಾವಣೆ ಬದುಕಿನ ಭಾಗವೇ. ಬದುಕೆಂಬ ಕಾಲಚಕ್ರದಲ್ಲಿ ಏರಿಳಿತಗಳು ಸಹಜ. ಅದನ್ನು ನಿಖರವಾಗಿ ಹೇಳುವುದು ಸುಲಭ ಸಾಧ್ಯವಿಲ್ಲ. ಯಾಕೆಂದರೆ ಬದುಕಿನ ಲೆಕ್ಕಾಚಾರಗಳು ಗಣಿತದಂತೆ ನಿಖರವಾಗಿಲ್ಲ. ಬುದ್ಧಿವಂತ ಮನುಷ್ಯ ಯಾವಾಗಲೂ ಅನಿಶ್ಚಿತತೆಯಿಂದಲೇ ಕೂಡಿರುತ್ತಾನೆ. ಅನಿಶ್ಚಿತತೆಯಲ್ಲಿ ಉಳಿಯುವುದು ಅಂದರೆ ಅದೊಂದು ರೀತಿಯ ಧೈರ್ಯವೇ ಸರಿ.

    ಮತ್ತೊಂದು ರೀತಿಯಲ್ಲಿ ಹೇಳುವುದಾದರೆ “ಅನಿಶ್ಚಿತತೆಯ”  ಖಚಿತತೆಯನ್ನು ಒಪ್ಪಿಕೊಳ್ಳುವುದು.ಪರಿಸ್ಥಿತಿ ಯಾವುದೇ ಆಗಿರಲಿ, ಅದನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುವ ಜಾಣ್ಮೆ ಬೇಕು.  ವಿಜ್ಞಾನದ ವಿಷಯಗಳಂತೆ ನಿರ್ದಿಷ್ಟ ಕಾರಣ ಮತ್ತು ಪರಿಣಾಮವನ್ನು “ಬದುಕಿನ ಹಾದಿ’ ಒಳಗೊಂಡಿಲ್ಲ. ಜೀವನದಲ್ಲಿ ಬರುವ ಏರಿಳಿತಗಳಿಗೆ ಕಾರಣ ಏನೋ ಇರಬಹುದು, ಹಾಗೆನೇ ಅದರ ಪರಿಣಾಮ ಇನ್ನೇನೋ ಆಗಿರಬಹುದು. ಅಂದರೆ ನಾವು ಎಣಿಸಿದಂತೆ ಇರದು. ನೀರನ್ನು 100 ಡಿಗ್ರಿಯಲ್ಲಿ ಕುದಿಸಿದರೆ ಕ್ರಮೇಣ ಆದು ಆವಿಯಾಗುತ್ತದೆ. ಅದು ವಿಜ್ಞಾನ. ಅದು ಎಲ್ಲರಿಗೂ ತಿಳಿದಿರುವ ವಿಚಾರ. ಮಾತ್ರವಲ್ಲ ಅದು ನಿಶ್ಚಿತ. ಆದರೆ ಜೀವನ ಹಾಗಲ್ಲವಲ್ಲ.

    ಮನುಷ್ಯನಿಗೆ ಕೆಲವೊಮ್ಮೆ ಅಭದ್ರತೆ ಕಾಡುವುದು ಸಹಜ. ಕೆಲವೊಮ್ಮೆ ಆ ಅಭದ್ರತೆಗಳೇ ಮನುಷ್ಯನ ಶಕ್ತಿಯಾಗಿ ಮಾರ್ಪಡಬಹುದು. ಯಾಕಂದರೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕತೆ ಇರುತ್ತದೆ. ತಾನು ಮತ್ತೊಬ್ಬರಂತೆ ಇರಬೇಕು ಎಂದುಕೊಂಡರೆ ಅದರಲ್ಲಿ ಭಿನ್ನತೆ ಏನೂ ಇರದು. ವಿಭಿನ್ನತೆ ಇಲ್ಲದೇ ಇದ್ದರೆ ಜಗತ್ತು ಅತಿ ಸುಂದರವಾಗಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯನಾ? ಇಲ್ಲವಲ್ಲ.

    ಕೆಲವರಿಗೆ ಬದಲಾವಣೆಗೆ ತೆರೆದುಕೊಳ್ಳಲು ಹೆಜ್ಜೆ ಇಡುವುದಕ್ಕೂ ಭಯ. ಯಾಕೆಂದರೆ ಅವರಲ್ಲೊಂದು ಅನಿಶ್ಚಿತತೆಯ ಭಯ ಕಾಡುತ್ತಿರುತ್ತದೆ. ಒಬ್ಬ ವ್ಯಕ್ತಿಯಲ್ಲಿರುವ ಬಲ ಮತ್ತು ಬಲಹೀನತೆಗಳೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತದೆ. ಅವೆರಡೂ ಕೂಡಾ ವ್ಯಕ್ತಿಗೆ ಪೂರಕವೂ ಆಗಿರಬಹುದು, ಮಾರಕವೂ ಆಗಬಹುದು.

    ಅಭದ್ರತೆಯ ಸಾಮಾನ್ಯ ಲಕ್ಷಣಗಳು ಉದಾಹರಣೆಗೆ ನಾಚಿಕೆ. ನಾಚಿಕೆ ಸ್ವಭಾವ ಇರುವವರು ಗೆಳೆಯರನ್ನು ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ಅನುತ್ತೀರ್ಣರಾಗುತ್ತಾರೆ.ನಾಚಿಕೆ ಪಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಯಾವ ಸಂದರ್ಭದಲ್ಲಿ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.

    ಇತರರು ನಮ್ಮನ್ನು ಹೇಗೆ ಗ್ರಹಿಸುತ್ತಾರೆ ಎನ್ನುವ ವಿಚಾರ ಪದೇಪದೆ ಕಾಡುತ್ತಿರುತ್ತದೆ. ಇತರರು ನಮ್ಮ ಬಾಹ್ಯ ನೋಟ, ಮನೆ ಮಕ್ಕಳು, ಗಂಡಹೆಂಡತಿ ಬಗ್ಗೆ ಏನು ಗ್ರಹಿಸುತ್ತಾರೆ, ಯಾವ ರೀತಿಯ ಕಾಮೆಂಟ್ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ.  ಒಟ್ಟಿನಲ್ಲಿ ನಮ್ಮ ಜೀವನ ವಿಧಾನದ ಬಗ್ಗೆ “ಇತರರು ಏನು ಯೋಚಿಸುತ್ತಾರೋ ಏನೋ” ಎನ್ನುವುದೇ ದೊಡ್ಡ ವಿಚಾರವಾಗಿರುತ್ತದೆ. ನಮ್ಮ ಬಲಹೀನತೆಗಳನ್ನು ಬೇರೆಯವರ ಸ್ಟ್ರೆಂಥ್‍ನೊಂದಿಗೆ ಹೋಲಿಸಿಕೊಳ್ಳುವುದೇ ನಮಗೆ ಅಭ್ಯಾಸ ಆಗಿಬಿಟ್ಟಿರುತ್ತದೆ. ಇತರರಿಂದ ಬರುವ ಕಾಮೆಂಟ್‍ಗಳೇ ನಮಗೆ ಮುಖ್ಯವಾಗಿರುತ್ತದೆ. ಆದರೆ ಇತರರ ಅಪಾದನೆಯನ್ನು ಒಪ್ಪಿಕೊಳ್ಳಬೇಕೋ ಅಥವಾ ನಾವೇನು ಎಂಬುದನ್ನು ನಮಗೆ ನಾವೇ ಅರ್ಥ ಮಾಡಿಸಿಕೊಳ್ಳಬೇಕೋ ಎಂಬುದರ ಆಯ್ಕೆ ನಮ್ಮ ಕೈಯಲ್ಲೇ ಇದೆ.

    ಬದುಕಿನಲ್ಲಿ ಅನಿಶ್ಚಿತತೆ ಅನ್ನೊದು ಸತ್ಯ. ಆದಾಗ್ಯೂ ಜೀವನದಲ್ಲಿ ಬದಲಾವಣೆ ಬೇಕಿದ್ದರೆ ಹಲವು ದಿನಗಳವರೆಗೆ ಕಾಯಬೇಕು. ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆ ನಿರೀಕ್ಷಿಸುವುದಕ್ಕೆ ಸಾಧ್ಯ ಇಲ್ಲ. ಅದಕ್ಕೆ ಮುಂದೊಂದು ದಿನ ಹೀಗಾದರೆ ಹೇಗೆ ಎನ್ನುವ ಜಾಗೃತಿ, ಮುಂದಾಲೋಚನೆಯೂ ಇರಬೇಕು.

    Photo by Fabio Comparelli on Unsplash

    ಮ್ಯಾನಿಕ್ಯೂರ್, ಪೆಡಿಕ್ಯೂರ್ ಗಳಿಲ್ಲದ ದಿನಗಳು

    ನೂತನ ಎಮ್. ದೋಶೆಟ್ಚಿ

    80ರ ದಶಕದ ಕೊನೆಯ ಭಾಗ. ನಮ್ಮ ಊರಿನಲ್ಲಿ ಆಗ ಬ್ಯೂಟಿಪಾರ್ಲರ್ ಇರಲಿಲ್ಲ ಎಂದರೆ ನೀವು ನಂಬಲೇಬೇಕು. ಅದು ತಾಲೂಕಿನ ಕೇಂದ್ರವಾಗಿದರೂ ದೊಡ್ಡ ಹಳ್ಳಿಯೇ ಆಗಿತ್ತು.ಆ ಕಾಲದಲ್ಲಿ ನಮ್ಮ ಊರು  ಆಗಷ್ಟೇ ಹೊಸತನಕ್ಕೆ, ಆಧುನಿಕತೆ ಎಂದು ಕರೆಯಲಾಗುತ್ತಿದ್ದ ಬ್ಯೂಟಿ ಪಾರ್ಲರ್ ನಂತಹ ಮುಜುಗರಗಳಿಗೆ ತೆರೆದುಕೊಳ್ಳಲು ಆರಂಭಿಸಿತ್ತು.

    ಬ್ಯೂಟಿ ಪಾರ್ಲರ್ ಎಂದರೆ ಈಗಿನಂತೆ ದೊಡ್ಡ ಬೋರ್ಡ್ ಹಾಕಿ ಆಹ್ವಾನಿಸುವ ಎದೆಗಾರಿಕೆ ಆಗ ಇರಲಿಲ್ಲ.  ಪಾರ್ಲರ್ ನಡೆಸುವವರ ಮನೆಯ ಎದುರಿನ ಕೋಣೆಯನ್ನೇ   ಅದಕ್ಕಾಗಿ ಬಳಸಲಾಗುತ್ತಿತ್ತು. ಅದರೊಳಗೆ ಕದ್ದು ಮುಚ್ಚಿಯೇ ಹೋಗಬೇಕು. ಊರಿನವರು ಯಾರಾದರೂ ನೋಡಿಬಿಟ್ಟರೆ ಎಂಬ ಎದೆಗುದಿ ಬೇರೆ.       

    ಇಂತಿಪ್ಪ ಒಂದು ಪಾರ್ಲರ್ ಕೂಡ ಊರಲ್ಲಿರದ ಕಾಲದಲ್ಲಿ ಮಲೆನಾಡಿನ ಮಳೆಗಾಲದ ಜಲಪಾತದಂತೆ ಇದ್ದ ನನ್ನ  ಉದ್ದನೆಯ, ದಪ್ಪ ಜಡೆ ಬಯಲು ಸೀಮೆಯ ಗಡಸು ನೀರಿಗೆ ಬಿಡು ಬೇಸಿಗೆಯ ಸಣ್ಣ ಝರಿಯಂತೆ ಸೊರಗಿತ್ತು. ಇದ್ದರೆ ಹಾಗೇ ಇರಬಹುದಿತ್ತೇನೋ. ಆದರೆ ನನ್ನೊಳಗೂ ಆಧುನಿಕತೆಯ ಗುಂಗಿ ಹುಳು ಸಣ್ಣಗೆ ಕೊರೆಯಲು ಶುರು ಹಚ್ಚಿಕೊಂಡಿತ್ತು. ಇದಕ್ಕೆ ನಾನೇ ನೇರವಾದ ಕಾರಣವಲ್ಲ.ಓರಗೆಯ ಶಹರದ ಗೆಳತಿಯರು, ಸಹಪಾಠಿಗಳ ಎದುರಿಗೆ ತೀರ ಹಳ್ಳಿಯವಳಂತೆ ಕಾಣುತ್ತಿದ್ದ ನನ್ನನ್ನು ಅವರ ಸಮಕ್ಕೆ ಹೇಗಾದರೂ ಏರಿಸಿಕೊಳ್ಳಬೇಕಿತ್ತು. ಇದಕ್ಕೆ ಇದ್ದ ಹಲವು ದಾರಿಗಳಲ್ಲಿ ಒಂದು ನೇರ ತಲೆಕೂದಲಿಗೇ ಸಾಗಿತು.  ಎರಡೂವರೆ ಅಡಿ ಇದ್ದ ಹೊಳೆಹೊಳೆವ, ನುಣುಪು ಕೂದಲಿಗೆ ಕತ್ತರಿ ಸೇವೆ ಮಾಡಿಸಲು 40 ಕಿಲೋ ಮೀಟರ್ ದೂರದಲ್ಲಿರುವ ಪಕ್ಕದ ಊರಿಗೆ ಅಮ್ಮನೊಂದಿಗೆ ಹೊರಟಿದ್ದು ಒಂದು ಬೇಸಿಗೆ ರಜೆಯಲ್ಲಿ. 

    ಹೊರಟಿದ್ದೇನೋ ಉತ್ಸಾಹದಿಂದಲೇ. ಆದರೆ ನನಗೆ ತೀರಾ ಹೊಸದಾಗಿದ್ದ  ಪಾರ್ಲರ್ ಎಂಬ  ಆ ಆಧುನಿಕತೆಯ ಎದುರು ನಿಂತಾಗ ಆದ ಮುಜುಗರವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಳ ಅಡಿಯಿಟ್ಟಾಗ ಎದುರುಗೊಂಡಿದ್ದು ಪಾರ್ಲರ್ ಒಡತಿ. ಅದುವರೆಗೂ ಕತ್ತರಿಸಿಯೇ ಇರದ ಕೂದಲನ್ನು ಕತ್ತರಿಸಲು ಹೇಳಲು ಯಾವ ಪದಗಳನ್ನು ಬಳಸಬೇಕು ಎಂಬುದೇ ತೋಚದಾಗಿತ್ತು. ವ್ಯವಹಾರದಲ್ಲಿ ಪಳಗಿದ್ದ ಆಕೆ ನನ್ನ ಮುಜುಗರವನ್ನು ತಿಳಿಯಾಗಿಸುತ್ತ ಹತಾರಗಳೊಂದಿಗೆ ಸಿದ್ಧವಾದರು. 

    ಮೊದಲ ಸಲಕ್ಕೇ ನೆಲದ ಮೇಲೆ ಒಂದೂವರೆ ಅಡಿ ಉದ್ದದ ಕಪ್ಪು ಹಾವಿನಂತಿದ್ದ ಕೂದಲ ಸಿಂಬಿ ಕತ್ತರಿಸಿಕೊಂಡು ಬಿದ್ದಾಗ ನನ್ನ  ತಗ್ಗಿಸಿದ ತಲೆ ಇನ್ನಷ್ಟು ಹುದುಗಿ ಹೋಯಿತು. ಏನೋ ಕಳೆದುಕೊಂಡಂತೆ,  ತಪ್ಪು ಮಾಡಿದಂತೆ ಅದೇಕೆ ಭಾಸವಾಯಿತೋ ಕಾಣೆ. ಆಧುನಿಕತೆಯಂತೂ ತಲೆಯ ಮೇಲೂ, ನೆಲದ ಮೇಲೂ ಸೂರೆಗೊಂಡಿತ್ತು. ಪಕ್ಕದಲ್ಲಿ ಅಮ್ಮ ಕಣ್ಣು ಪಿಳುಕಿಸುತ್ತ ಏನನ್ನೂ ಮಾತಾಡಿದೆ, ಓದಲಾಗದ ಭಾವನೆಗಳನ್ನು ಮುಖದ ತುಂಬಾ ಹರವಿಕೊಂಡು ಕುಳಿತಿದ್ದರು.

    ತಲಾ ಹತ್ತು ರೂಪಾಯಿ ಬಸ್ ಚಾರ್ಜ್, ಇಪ್ಪತ್ತು ರೂಪಾಯಿ ‘ತಲೆದಂಡ ‘ ಕೊಟ್ಟು ಹೊರಟಾಗ ತಲೆ ಹಗುರವಾಗಿತ್ತೋ, ಭಾರವಾಗಿತ್ತೋ ಹೇಳಲಾಗದು. ಮನೆಯ ದಾರಿ ತುಮುಲದಲ್ಲೇ ಸಾಗಿತು. ಮನೆ ತಲುಪುತ್ತಿದ್ದಂತೆ ಅಮ್ಮನಿಗೆ  “ನೀವಾದರೂ ಕತ್ತರಿಸಬೇಡ ಎಂದು ಹೇಳಬಹುದಿತ್ತಲ್ಲ. ಅಷ್ಟು ಉದ್ದದ ಕೂದಲು ಕತ್ತರಿಸಿಕೊಂಡು ಕೆಳಗೆ ಬಿದ್ದಿದ್ದನ್ನು ಸುಮ್ಮನೇ ನೋಡುತ್ತಾ ಕುಳಿತು ಬಿಟ್ಟಿರಿ ” ಎಂದು ಸಣ್ಣ ತಗಾದೆಗೆ ಶುರು ಹಚ್ಚಿಕೊಂಡೆ. 

    ಆಧುನಿಕತೆ ಎನ್ನುವುದು ಒಡಲಾಳದ ಇಂಥ ದ್ವಂದ್ವಗಳಿಗೆ ಮುಖಾಮುಖಿಯಾಗುತ್ತ, ತಪ್ಪು-ಒಪ್ಪುಗಳ ತುಮುಲಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಹುಟ್ಟಿದ್ದು. ಮುಂದಿನ  ಕೇವಲ ಅರ್ಧ ದಶಕದಲ್ಲಿ ಬೆನ್ನಿಗಂಟಿದ್ದ ಇಂಥ ಎಲ್ಲ ಬಲಿಯದ ರೆಕ್ಕೆಗಳು ಬಲಿತು ಆಧುನಿಕತೆ  ರಾಕೆಟ್ ವೇಗದಲ್ಲಿ   ಮೇಲೇರಿತು. ಇದರ ಭಾಗವಾಗಿದ್ದ ಪಾರ್ಲರ್ ಗಳು ವ್ಯವಸ್ಥಿತವಾದ ಉದ್ಯಮವಾಗುವಷ್ಟರ ಮಟ್ಟಿಗೆ ಬೆಳೆದವು. ಸೌಂದರ್ಯ ಕೇವಲ ಕನ್ನಡಿಯೆದುರಿನ ಸ್ವ ಆಸ್ವಾದನೆಯಾಗಿ  ಉಳಿಯದೇ ಸಾಗರಗಳಾಚೆ ವಿಸ್ತರಿಸಿದ ಬ್ರಹತ್ ಉದ್ದಿಮೆಯಾಯಿತು. ಇದರ ಅಡಿಯಲ್ಲಿ ಸೌಂದರ್ಯ ವರ್ಧಕಗಳು,  ಮಾಡೆಲಿಂಗ್, ಫ್ಯಾಷನ್ ಷೋ, ಇವೆಂಟ್ ಮ್ಯಾನೇಜ್ಮೆಂಟ್ , ವಸ್ತ್ರ ವಿನ್ಯಾಸ, ಫ್ಯಾಷನ್ ಡಿಸೈನಿಂಗ್ ಮೊದಲಾದ ಹತ್ತು ಹಲವು ಉದ್ದಿಮೆಗಳು ಸೇರಿದವು. ಈ ಇಡಿಯ ಸರಪಳಿಯ ಆರಂಭದ ಕೊಂಡಿಯಾಗಿದ್ದ ಪಾರ್ಲರ್ ಅತ್ಯಂತ ಚಿಕ್ಕ ಘಟಕವಾಗಿ ಉಳಿಯಿತು. ಆದರೆ ತನ್ನ ಮಹತ್ವವನ್ನು ಕಳೆದುಕೊಳ್ಳದೆ ಗಲ್ಲಿ ಗಲ್ಲಿಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ಅಸ್ತಿತ್ವವನ್ನು ಹಾಗೆಯೇ ಉಳಿಸಿಕೊಂಡಿತು. 

    ಮುಜುಗರಗಳನ್ನೆಲ್ಲ ಹೊಡೆದೋಡಿಸಿದ ಪಾರ್ಲರ್

    ಈಗ ದಿನನಿತ್ಯದ ಅಗತ್ಯವಾಗಿ, ಸೌಂದರ್ಯದ ಭಾಷ್ಯವಾಗಿ, ಮಕ್ಕಳು, ಯುವತಿಯರು, ಮುದುಕಿಯರೆನ್ನದೆ ಎಲ್ಲ ವಯೋಮಾನದ, ಎಲ್ಲ ಆರ್ಥಿಕ ಸ್ಥಿತಿಗಳ ಮಹಿಳೆಯರಿಗೆ ಅವರವರ ಅಗತ್ಯ, ಆದ್ಯತೆಗೆ ಅನುಗುಣವಾಗಿ ಒದಗುತ್ತ , ಸಭೆ- ಸಮಾರಂಭ, ಮದುವೆ ಮೊದಲಾದ ಎಲ್ಲ ಸಂದರ್ಭಗಳಲ್ಲೂ ಅನಿವಾರ್ಯವಾಗಿದೆ. ಜೊತೆಗೆ ಆಧುನಿಕತೆಯ ಪರಿಭಾಷೆಯನ್ನು ಬದಲಿಸುತ್ತ ಸಾಗಿದೆ. ಇದಿಲ್ಲದ ಊರುಗಳನ್ನು ಈಗ ಊಹಿಸಿಕೊಳ್ಳುವುದೂ ಕಷ್ಟ. 

    ಮನೆಯ ಹೆಣ್ಣು ಮಕ್ಕಳ ಅಣ್ಣ-ತಮ್ಮಂದಿರು, ಅಪ್ಪ-ಚಿಕ್ಕಪ್ಪಂದಿರು, ಕೊನೆಗೆ ಗಂಡ- ಬಾಯ್ ಫ್ರೆಂಡ್ ಗಳಿಗೆ ಕೂಡ ಪಾರ್ಲರ್ ಎದುರಿಗೆ  ಆಗಾಗ ಕಾಯಬೇಕಾದ ಸಂದರ್ಭಗಳು ಸರ್ವೇ ಸಾಮಾನ್ಯ. ಅಷ್ಟರ ಮಟ್ಟಿಗೆ ಬ್ಯೂಟಿ ಪಾರ್ಲರ್ ಗಳು  ಕ್ರಾಂತಿಯ ಹರಿಕಾರವಾಗಿವೆ.

    ನಾಯಿಕೊಡೆಗಳಂತೆ ಹುಟ್ಟಿಕೊಂಡರೂ  ಸುಭಿಕ್ಷವಾದ ವಹಿವಾಟು, ಪುಷ್ಕಳವಾದ ಆದಾಯದೊಡನೆ ಆರಾಮವಾಗಿದ್ದ   ಇಂಥ ಪಾರ್ಲರ್ ಗಳಿಗೆ ಆಘಾತ ಉಂಟಾಗಿದ್ದು  ಸಧ್ಯದ   ಕೊರೊನಾದಿಂದ. ಲಾಕ್ ಡೌನ್ ಸಂದರ್ಭದಲ್ಲಿ ಇವುಗಳನ್ನು ಮುಚ್ಚಲು ಆದೇಶಿಸಿದಾಗ ಮೊದಲು 15-20 ದಿನಗಳು ತಕ್ಕಮಟ್ಟಿಗೆ  ಸಹಜವಾಗಿಯೇ ಕಳೆದವು. ಆನಂತರ ತಲೆಕೂದಲು ಉದ್ದವಾಗಿತ್ತು. ಹುಬ್ಬು ಬೆಳೆದಿತ್ತು. ಫೇಶಿಯಲ್ ಇಲ್ಲದೇ ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲು ಹೆದರುವಂತಾಗಿತ್ತು. ಇದರ ಕುರಿತ ಜೋಕುಗಳೂ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದವು. ಮ್ಯಾನಿಕ್ಯೂರ್ , ಪೆಡಿಕ್ಯೂರ್ ಗಳಿಲ್ಲದೆ ಕೈ ಕಾಲು ಸುಕ್ಕುಗಟ್ಟಿದಂತೆ ಅನ್ನಿಸಲು ಶುರುವಾಯಿತು. ಮನೆಯಲ್ಲಿ  ಹೆಣ್ಣುಮಕ್ಕಳ ಈ  ಸೈಲೆಂಟ್ ಪೇಚಾಟಗಳು ಗಂಡಸರಿಗೆ, ಹುಡುಗರಿಗೆ ಉಚಿತ ರಿಕ್ರಿಯೇಷನ್ ಆದವು. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವುದು ಮಹಿಳಾ ಸ್ಥಿತಿಯಾದರೆ ಹಾಲು ಕುಡಿದಷ್ಟು ಖುಷಿ ಗಂಡುಗಳಿಗೆ! ಆದರೆ ಈ ಖುಷಿಯೇನು ಬಹಳ ಕಾಲ ಉಳಿಯಲಿಲ್ಲ. ಹುಡುಗರ ತಲೆಗೂದಲು, ಗಡ್ಡ ಉದ್ದವಾಗತೊಡಗಿತು. ತಲೆಗೂದಲೆಂದರೆ ಹುಡುಗಿಯರಿಗಿಂತ ಕೊಂಚ ಹೆಚ್ಚೇ ಕಾಳಜಿ ಮಾಡುವ ಹುಡುಗರು ಫಜೀತಿಗಿಟ್ಟುಕೊಂಡರು. ವಿರಾಟ್ ಕೊಹ್ಲಿಯ ಪತ್ನಿ ಅವನ ಕೂದಲು ಟ್ರಿಮ್ ಮಾಡಿದ್ದನ್ನು ಕಂಡು ಅದೆಷ್ಟು ಜನ ಮರುಗಿದರೋ? ಎಲ್ಲರಿಗೂ ಒಂದೇ ಸಮಾಧಾನ ಎಂದರೆ ಹೊರಗಡೆ ಹೋಗುವಂತಿಲ್ಲ. ಬೇರೆಯವರು ನೋಡುವಂತಿಲ್ಲ. ಮನೆಯಲ್ಲೇ ಇರುವುದರಿಂದ ಹೇಗಿದ್ದರೇನು ಎಂಬ ಅನಿವಾರ್ಯ ಅಸಡ್ಡೆ ಎಲ್ಲ  ಕೊರಗುಗಳಿಂದ ಬಿಡುಗಡೆಗೊಳಿಸಿತು. ಹಾಗಾದರೆ ಇಷ್ಟು ದಿನಗಳ ಒಪ್ಪ-ಓರಣ ಎಲ್ಲ ಬೇರೆಯವರಿಗಾಗಿ . ತನಗಾಗಿ ಅಲ್ಲ!! ಓನಿಡಾ ಟಿವಿ ಹೇಳುತ್ತೆ ನೋಡಿ ‘ ನೇಬರ್ಸ್ ಎನ್ವಿ’ ಅಂತ ಆ ಥರಾ. 

    ಆದರೆ  ಕೊರೊನಾ ವಿಷಯದಲ್ಲಿ  ಇದು  ಅನ್ವಯವಾಗಲಿಲ್ಲ.  ಯಾಕೆಂದರೆ ಈ ಕೊರೊನಾ ಮುಖ ಮೂತಿ ನೋಡದೆ ಎಲ್ಲರಿಗೂ ಮುಸುಕು ಹಾಕಿಸಿ, ತೊಳಿ, ಬಳಿ, ತಿಕ್ಕು ಎಕ್ಸರ್ಸೈಜಿನಲ್ಲಿ ಮನೆಮಂದಿಯನ್ನೆಲ್ಲ ತೊಡಗಿಸಿಬಿಟ್ಟಿತ್ತಲ್ಲ ! ಪಕ್ಕದ ಮನೆಯವರ ಮುಖ ನೋಡುವುದಿರಲಿ ತಮ್ಮ ಮನೆಯ ಅಂಗಳ ದಾಟಲೇ ಭಯಪಡಬೇಕಾದ ಪರಿಸ್ಥಿತಿಯಲ್ಲಿ ಮೇಕಪ್, ಹೇರ್ ಡೈಗಳ ಬಗ್ಗೆ ವಿರಕ್ತಿ ಹುಟ್ಟಿಬಿಟ್ಟಿತ್ತು. ಮನೆಯನ್ನು, ಪಾತ್ರೆ- ಪಡಗಳನ್ನು, ಬಟ್ಟೆಯನ್ನು, ಸೊಪ್ಪು-ತರಕಾರಿಗಳನ್ನು, ಹಣ್ಣುಗಳನ್ನು ತೊಳೆದು, ತೊಳೆದು ಹೈರಾಣಾಗಿದ್ದು ಸಾಲದೇ ಮತ್ತೆ ಹೇರ್ ಡೈ ತೊಳೆಯುವುದಾ? ಇರಲಿ ಬಿಡು ಬಿಳಿ ಕೂದಲು. ಯಾರು ನೋಡುತ್ತಾರೆ ಎಂಬ ವೇದಾಂತಕ್ಕೆ ಎಡೆ ಮಾಡಿಕೊಟ್ಟಿತ್ತು. 

    ಸರಿಯಾದ ಸಮಯಕ್ಕೆ ರಾಮಾಯಣ, ಮಹಾಭಾರತ ಧಾರಾವಾಹಿಗಳ ಪ್ರಸಾರ ಬೇರೆ ಟಿವಿಯಲ್ಲಿ ಶುರುವಾಯ್ತು.  ನಾರುಬಟ್ಟೆಯುಟ್ಟು ಕಾಡಿಗೆ ಹೋಗುವ ರಾಜಕುಮಾರಿ ಸೀತೆಯನ್ನು ಉದ್ದ ಕೂದಲ ಶ್ರೀರಾಮ, ಭೀಷ್ಮ, ಧರ್ಮರಾಯರನ್ನು ನೋಡುವ ದೃಷ್ಟಿಕೋನವೇ ಈಗ ಬದಲಾಗಿತ್ತು.  ಹೆಂಗಸರು ಮನೆಯೆಂಬ ವನವಾಸದಲ್ಲಿ ಶಾಂತಿ ಅರಸಿದರೆ, ಗಂಡಸರು ತಮ್ಮ ಉದ್ದ ತಲೆಕೂದಲನ್ನು ಮುಟ್ಟಿ ಸಮಾಧಾನ ಮಾಡಿಕೊಂಡರು. ಪುರಾಣ ಪುರುಷರ ಉದ್ದ ಕೂದಲು ಅನಾಗರಿಕವಲ್ಲ. ಬದಲಾಗಿ ಕಾಲದ ಅಗತ್ಯ ಎಂಬ ದಿವ್ಯ ಜ್ಞಾನದ ಬಲ್ಬ್ ಇವರ ಜೊಂಪೆ ಕೂದಲಲ್ಲಿ ಹೊತ್ತಿ ಅವರ ಮನವೆಲ್ಲ ಬೆಳಕಾಯಿತು.

     ಒಂದಾನೊಂದು ಕಾಲದಲ್ಲಿ ವಿಸ್ತಾರವಾಗಿ ಹರಡಿದ್ದ ಕಾಡಿನಲ್ಲಿ ಇಂಥ ‘ ನರ ಮನುಸರು’ ಇದ್ದರು. ಈಗ ಅದರ ದುಪ್ಪಟ್ಟು ವಿಶಾಲವಾದ  ಕಾಂಕ್ರೀಟ್ ಕಾಡಿನಲ್ಲಿ ಈ ‘ ನಾಗರಿಕರು’ ಇರುವ ಪ್ರಸಂಗ ಬಂದಿದೆ ಅಷ್ಟೆ ಎಂದು ಹಿಂದಕ್ಕೆಳೆದು  ತಂದು ನಿಲ್ಲಿಸಿರುವ ಕಾಲ ಮುಸಿಮುಸಿ ನಕ್ಕಿದ್ದು ಇವರ್ಯಾರಿಗೂ ಕಾಣಲಿಲ್ಲ.

    Photo by Anastasiia Chepinska on Unsplash

    ವಯಸ್ಸು ಹೊಸದು , ಪ್ರೀತಿ ಹೊಸದು , ಅನುರಾಗ ಹೊಸದು, ಪ್ರತಿಯೊಂದೂ ಹೊಸದು

    ಊರು …..ಊರಿಗೆ ಹೊಂದಿಕೊಂಡಂತಿರುವ ಹಳ್ಳಿ .‌ ಅದರಲ್ಲೊಂದು ಬಾಡಿಗೆ ಮನೆಯ ಹುಡುಗ. ಪ್ರೌಢ ವಯಸ್ಸು. ಪ್ರೀತಿ ಪ್ರೇಮವೆಂಬ ಅವಳಿ ಜವಳಿ ಮನಸ್ಸನ್ನು ಮೆದುಲನ್ನು ಬಾಡಿಗೆ ಪಡೆದುಕೊಂಡಂತಹ ಸಮಯ .

    ಓದು, ತಿಂಡಿ, ಆಟ , ನಿದ್ದೆ , ಸ್ನೇಹ ಎನ್ನುವ ಹೊತ್ತಲ್ಲೇ….ಎದುರು ಮನೆಯಲ್ಲಿ ಒಂದು ಸ್ವಂತ ಮನೆಯ ಹುಡುಗಿ ಸ್ವಭಾವದಲ್ಲೂ ಪ್ರಭಾವದಲ್ಲೂ ಸೌಮ್ಯತೆಯನ್ನು ಮೈ ಗೂಡಿಸಿಕೊಂಡಿದ್ದಂತಹ ಹುಡುಗಿ .‌‌ ಅದಾವ ಘಳಿಗೆಯಲ್ಲಿ ಇಬ್ಬರ ನೋಟ ಬೆರೆಯಿತೋ, ಅವನಿಗರಿವಿಲ್ಲದಂತೆಯೇ ಅವನಿಗೂ ಅವಳಿಗೂ ಪರಿಚಯವಿಲ್ಲದ ಪರಿಚಯ . ತುಂಬಾನೇ ಆಪ್ತವೆನಿಸುವಷ್ಟು ನೋಟ . ಕಣ್ಣಲ್ಲೇ ಗಂಟಗಟ್ಟಲೇ ಮಾತು .ಮನಸ್ಸು ಕೊಡಬೇಕಾ ಪಡೆಯಬೇಕಾ ಎನ್ನುವ ಗೊಂದಲ , ನಗಲೂ ಚೌಕಾಸಿ . ಸ್ಕೂಲು ಮುಗಿಸಿ ಬಿಳೀ ಬಣ್ಣದ ಷರ್ಟು ಕಡುನೀಲಿ ಸ್ಕರ್ಟಿನ ಯೂನಿಫಾರಂ ಧರಿಸಿ BSA SLR ಬೈಸಿಕಲ್ ಮೇಲೆ ಬರುತ್ತಿದ್ದ ಅವಳನ್ನು ನೋಡುತ್ತಿದ್ದರೆ ಇವನಿಗೆ ಸಣ್ಣ ಭಯ , ಬಲು ದೊಡ್ಡ ಖುಷಿ .

    ಕಣ್ಣುಮಿಟಿಕಿಸಿದರೆ ಅವಳು ಮನೆ ಹೊಕ್ಕಿಬಿಡುತ್ತಾಳೆ ಪುನಃ ಹೊರಗೆ ಬರುತ್ತಾಳೋ ಇಲ್ಲವೋ ಎಂಬ ನಿರಾಶೆ . ಯಾರು ನೋಡಿದರೆ ನನಗೇನು ಎಂಬ ತಾತ್ಸಾರ . ಅಕಸ್ಮಾತ್ ನೋಡಿ ಕೇಳಿಬಿಟ್ಟರೆ ಎಂಬ ಭಯ . ಒಟ್ಟಿನಲ್ಲಿ ಹರೆಯದ ಯೌವನದ ಹೊಸ ಪ್ರೀತಿ ಅದು . ಅವಳ ಕಣ್ಣೋಟಕ್ಕೇ ಕಾಯೋ ನಿತ್ಯ ನಿರಂತರ ಕಾಯಕ ಅವನದ್ದಾಗಿತ್ತು .ಆಟ ಆಡುತ್ತಿರುವಾಗ ಊಟ ಮಾಡುತ್ತಿರುವಾಗ ಪಾಠ ಓದುತ್ತಿರುವಾಗ ರಪ್ ಅಂತ ನೆನಪಾಗುತ್ತಿದ್ದಳು . ನೋಡಲು ನೆಪವಾಗುತ್ತಿದ್ದಳು . ಶುದ್ಧ ಪ್ರೀತಿಗೆ ಸಾಕ್ಷಿ ಅವಳು , ಪರಿಶುದ್ಧ ಪ್ರೀತಿಗೆ ಅರ್ಥ ಅವಳು. ಅರ್ಥವಾಗದ ಪ್ರೀತಿಯ ವ್ಯಾಕರಣಕ್ಕೆ ನಿಘಂಟವಳು .

    ಒಂದು ಕ್ಷಣ ಅವಳು ಕಾಣಲಿಲ್ಲವೆಂದರೂ ಕಂಗಾಲಾಗುವಂಥ ಮನಸ್ಥಿತಿ ಅವನದ್ದಾಗಿತ್ತು . ಇಬ್ಬರಿಗೂ ಮೊದ ಮೊದಲಾ ಪ್ರೀತಿ ಎಷ್ಟು ಚೆಂದ ಎನ್ನಿಸುತ್ತಿತ್ತು . ಪ್ರಪಂಚ ದುಂಡಗಿಲ್ಲ ಹೃದಯಾಕಾರದಲ್ಲಿದೆ ಎನ್ನಿಸುವಷ್ಟು ಪರಸ್ಪರ ಆವರಿಸಿಕೊಂಡಿದ್ದರು . ಇಡೀ ದಿನ ತುಟಿಯಾಡಿಸದ ನಾಲಿಗೆಯನ್ನೂ ನಲುಗಾಡಿಸದ ಪಿಸುಮಾತಿನ ಪ್ರೀತಿ ಇಬ್ಬರದ್ದಾಗಿತ್ತು . ಅವಳಿಗೆ ತನ್ನ ಮೇಲೆ ಪ್ರೀತಿ ಇದೆಯಾ ? ಗೊತ್ತಿಲ್ಲ , ಒಮ್ಮೆಯೂ ಅವನು ಕೇಳಿ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ .

     ಅವಳು ತುಂಬಾ ಶ್ರದ್ಧೆಯಿಂದ ಅವನಿಗಾಗಿ ಕಾಯುತ್ತಿದ್ದಳು . ಪದೇ ಪದೇ ನೆಪವೊಡ್ಡಿ ಮನೆ ಅಂಗಳದ ಕೆಲಸಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಳು . ಒಂದು ನೂರು ಪ್ರೆಶ್ನೆಗಳನ್ನು ಮೌನದಲ್ಲೇ ಕೇಳುತ್ತಿದ್ದಳು ಸಾವಿರ ಉತ್ತರಗಳನ್ನು ಕಣ್ಣಲ್ಲೇ ಉತ್ತರಿಸುತ್ತಿದ್ದಳು . ಅವನು ಕಾಣದಿದ್ದಾಗ ವಿಚಲಿತಳಾಗುತ್ತಿದ್ದಳು . ಕಂಡಾಗ ಹರ್ಷಿಸುತ್ತಿದ್ದಳು . ಹಾಗಂತ ಅವಳಿಗೆ ಸಂಬಂಧಗಳ ಬರವಿರಲಿಲ್ಲ .ಒಟ್ಟು ಕುಟುಂಬದ ಭಾಂಧವ್ಯವೇ ಅವಳಿಗಿತ್ತು . ಇಬ್ಬರಿಗೂ…. ಆ ವಯಸ್ಸು ಹೊಸದು , ಪ್ರೀತಿ ಹೊಸದು , ಅನುರಾಗ ಹೊಸದು, ಪ್ರತಿಯೊಂದೂ ಹೊಸದು .

    ಬದುಕು ಒಂದು ಪ್ರಯಾಣ ಅಂತಾರೆ ಅದರಂತೆ ಆ ಪ್ರಯಾಣದಲ್ಲಿ ಅವನ ಜೊತೆ ಪ್ರಯಾಣಿಸಿದ ಹುಡುಗಿಯವಳು . ಅವನೊಂದು ಸ್ಟಾಪಿನಲ್ಲಿ ಇವಳೊಂದು ಸ್ಟಾಪಿನಲ್ಲಿ ಇಳಿದ ಯಾತ್ರಿಕರು ಅವರು

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಪಬ್ಜಿ ಗೇಮ್ ನಿಷೇಧ: ಹೊರಹೋದ ಬಹುದೊಡ್ಡ ಪಿಡುಗು

    ಚೀನಾದ ಅತಿಕ್ರಮಣದ ಕುತಂತ್ರದಿಂದ ಭಾರತಕ್ಕೆ ಬಲುದೊಡ್ಡ ಲಾಭ ಆಗಿದೆ. ಅದುವೇ ಮುಂದಿನ ಪೀಳಿಗೆ ಅಂದರೆ ಮಕ್ಕಳನ್ನು ಹಂತ ಹಂತವಾಗಿ ಕೊಂದು ಹಾಕುವ, ಅವರ ಮಾನಸಿಕತೆಯನ್ನೇ ಹಾಳುಗೆಡವುವ ಪಬ್ಜಿ ಗೇಮ್ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧರಿಸಿರುವುದು. ಇದರೊಂದಿಗೆ ಬಹುದೊಡ್ಡ ಪಿಡುಗು ದೇಶದಿಂದ ಹೊರ ನಡೆದಂತಾಗಿದೆ.

    ಕೊರೊನಾ ಸರಣಿಯ ಸಾರ್ಸ್, ಮಾರ್ಸ್, ಕೋವಿಡ್ -19 ಹೀಗೆ ಎಲ್ಲವೂ ಚೀನಾದ ಕೊಡುಗೆ ಎಂದು ಪರಿಗಣಿತವಾಗಿದೆ. ಜಗತ್ತಿನ ಸ್ವಾಸ್ಥ್ಯ ಕಾಪಾಡುವ ಯಾವುದೇ ಒಂದು ಉತ್ತಮ ಪ್ರಾಡಕ್ಟ್ ಚೀನಾದಿಂದ ಬಂದಿದೆ ಎಂದು ಹೆಸರಿಸಲು ಸಾಧ್ಯವೇ ಇಲ್ಲ. ಇವುಗಳ ಪೈಕಿ ಈಗ ನಿಷೇಧಕ್ಕೆ ಒಳಗಾಗಿರುವ ಪಬ್ಜಿ ಎಂಬ ಗೇಮಿಂಗ್ ಕೂಡ ಸೇರ್ಪಡೆಯಾಗುತ್ತದೆ. ಮಕ್ಕಳ ಮನಸ್ಸನ್ನು ಹಾಳು ಮಾಡಿ ಅವರನ್ನು ಮಾನಸಿಕ ಗುಲಾಮರನ್ನಾಗಿಸುವ ಈ ಮೊಬೈಲ್ ಗೇಮ್ ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಮಾಡಿದೆ ಎಂದರೆ, ಒಮ್ಮೆ ಡೌನ್ ಲೋಡ್ ಮಾಡಿದರೆ ಸಾಕು ಇದೊಂದು ಮಾದಕ ದ್ರವ್ಯದಂತೆ ಕೆಲಸ ಮಾಡುತ್ತದೆ. ಅದೊಂದು ವ್ಯಸನವಾಗಿ (ಅಡಿಕ್ಷನ್) ಕಾರ್ಯ ನಿರ್ವಹಿಸಿ ಮಕ್ಕಳ ಬಾಳನ್ನೇ ಹಾಳು ಮಾಡುತ್ತದೆ.

    ಅಡಿಕ್ಷನ್ ಪ್ರಮಾಣ

    ಇತ್ತೀಚೆಗಷ್ಟೇ ಪಂಜಾಬಿನ 17 ವರ್ಷದ ಹುಡುಗನೊಬ್ಬ ತನ್ನ ಹೆತ್ತವರ ಬ್ಯಾಂಕ್ ಅಕೌಂಟ್ ನಿಂದ 16 ಲಕ್ಷ ರೂ.ಗೆ ಕನ್ನ ಹಾಕಿದ್ದ. ಕೇಳಿದರೆ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಪಾಠಕ್ಕಾಗಿ ಈ ಹಣ ವ್ಯಯ ಮಾಡಿದ್ದೆ ಎಂದು ಸಮಜಾಯಿಸಿಕೊಟ್ಟಿದ್ದ. ಆದರೆ ನಿಜವಾಗಿ ಆತ ಈ ಪಬ್ಜಿ ಗೇಮ್ ನ ಹುಚ್ಚಾಟಕ್ಕೆ ಬಿದ್ದಿದ್ದ. ಅದಕ್ಕಾಗಿ ಬೇಕಾಗುವ ಸಾಮಗ್ರಿಗಳ (ವರ್ಚುವಲ್ ಸಾಮಗ್ರಿಗಳಾದ ಗನ್, ಮದ್ದು ಗುಂಡು ಇತ್ಯಾದಿ) ಖರೀದಿಗಾಗಿ ಈ ಹಣವನ್ನು ವ್ಯಯಿಸಿದ್ದ. ಅವರ ತಂದೆ ಈ ಹಣವನ್ನು ತಮ್ಮ ಆರೋಗ್ಯದ ಸಮಸ್ಯೆಯ ನಿವಾರಣೆಗಾಗಿ ಉಳಿತಾಯ ಮಾಡಿದ್ದರು. ಇದು ಹಣದ ಸಮಸ್ಯೆಯಾದರೆ ಇದನ್ನು ಆಡುತ್ತಾ ಪ್ರಾಣ ಕಳೆದುಕೊಂಡ ಮಕ್ಕಳ ಪ್ರಮಾಣವೂ ಕಡಿಮೆಯೇನಿಲ್ಲ. ಅಧಿಕೃತ ಲೆಕ್ಕಾಚಾರದ ಪ್ರಕಾರ ಇದು 10ನ್ನು ದಾಟಿದ್ದರೆ, ಉಳಿದಂತೆ ಅಜ್ಞಾತವಾಗಿ ಉಳಿದ ಪ್ರಕರಣಗಳಷ್ಟೋ ಗೊತ್ತಿಲ್ಲ. ಇದರ ವ್ಯಸನ ಎಷ್ಟರ ಮಟ್ಟಿಗೆ ಇದೆಯೆಂದರೆ, ಬೆಳಗಾವಿಯಲ್ಲಿ ಈ ಗೇಮ್ ಆಡುತ್ತಿದ್ದ ಬೈಯ್ದ ಅಪ್ಪನ ತಲೆಯನ್ನೇ ಕಡಿದು 21 ವರ್ಷದ ಮಗ ಕೊಲೆ ಮಾಡಿದ್ದು, ವಿಜಯಪುರದಲ್ಲಿ ಇನ್ನೊಬ್ಬ ಹುಡುಗ ಪಬ್ಜಿ ಗೇಮ್ ನಲ್ಲಿ ಸೋತ ಬಳಿಕ ಬಾಜಿಯಂತೆ ನೀರಿಗೆ ಹಾರಿದ ನಿದರ್ಶನಗಳೂ ಇದರಲ್ಲಿ ಸೇರಿದೆ.

    ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ಗೇಮ್ ವ್ಯಸನವನ್ನು ಹೊಂದಿರುವ ಹದಿಹರೆಯದವರ ಸಂಖ್ಯೆ  10ರಿಂದ 15 ಲಕ್ಷ ಎಂದು ಹೇಳಲಾಗುತ್ತಿದೆ.

    ಅಗಾಧ ಮೌಲ್ಯದ ಇಂಡಸ್ಟ್ರಿ

    ಭಾರತದಲ್ಲಿ ಆನ್ ಲೈನ್ ಗೇಮಿಂಗ್ ಕ್ಷೇತ್ರ ಇನ್ನಷ್ಟೇ ಅಂಬೆಗಾಲು ಇಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಮಾರ್ಟ್ ಫೋನ್ ಯಾವಾಗ ಕಾಲಿಟ್ಟಿತೋ ಆ ಕ್ಷಣದಿಂದ ಇದು ಶರವೇಗದಲ್ಲಿ ಮುನ್ನಡೆಯುತ್ತಿದೆ. ಸದ್ಯದ ಮಟ್ಟಿಗೆ 1.4 ಶತ ಕೋಟಿ ಡಾಲರ್ ಮೌಲ್ಯದ ಇದು 2022ರ ಹೊತ್ತಿಗೆ 5 ಶತ ಕೋಟಿ ಡಾಲರ್ ಮೌಲ್ಯದ ಉದ್ಯಮವಾಗಲಿದೆ. 24 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಶೇ. 66 ನಗರ ವಾಸಿಗಳು ಇದರ ವ್ಯಸನ ಹಚ್ಚಿಕೊಂಡಿದ್ದಾರೆ ಎಂದು ಕೆಪಿಎಂಜಿ ವರದಿ ಹೇಳುತ್ತದೆ. ಇದರ ಜತೆಗೆ ಉದ್ಯೋಗಿಗಳು, ಮನೆಯಲ್ಲೇ ಇರುವ ಗೃಹಿಣಿಯರು ಕೂಡ ಸೇರಿದ್ದಾರಂತೆ. ಚೀನಾವು ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು ಕೂಡ ಫೋನ್ ಬಳಕೆಯ ಜತೆಗೆ ಆನ್ ಲೈನ್ ಗೇಮ್ ಪ್ರಮಾಣ ಹೆಚ್ಚಲು ಕಾರಣ ಎಂದು ಅದು ಅಭಿಪ್ರಾಯ ಪಟ್ಟಿದೆ.

    ಹಲವು ದೇಶಗಳಲ್ಲಿ ನಿಷೇಧ

    ಹೀಗೆ ಎಲ್ಲರಿಗೂ ಅನಾಹುತ ಹಂಚುವ ಚೀನಾ ಪಬ್ಜಿ ಗೇಮ್ ನ ಮೇಲೆ ಮೊದಲ ವರ್ಷವೇ ನಿರ್ಬಂಧ ಹೇರಿತ್ತು. ಅಲ್ಲಿ 13 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡುವುದು ಶಿಕ್ಷಾರ್ಹ ಅಪರಾಧ. ಇದಕ್ಕಾಗಿ ಪ್ರತ್ಯೇಕ ಆಪ್ ಕೂಡ ಚೀನಾ ಸಿದ್ಧ ಪಡಿಸಿತ್ತು.  ಡಿಜಿಟಲ್ ಲಾಕ್ ಮೂಲಕ ಇಂತಹ ನಿರ್ಬಂಧವನ್ನು ಸರಿಯಾಗಿ ಜಾರಿಗೆ ತರುವಲ್ಲಿ ಅದು ಯಶಸ್ವಿಯಾಗಿತ್ತು. ಮುಖ ಚಹರೆ ಗುರುತು, ಐಡಿ ಗುರುತು ಮೂಲಕ ಇಂತಹ ನಿರ್ಬಂಧ ಯಶಸ್ವಿಯಾಗಿತ್ತು.

    ಇದರ ಮೇಲೆ ನಿಷೇಧ ಹೇರಿದ ದೇಶಗಳ ಪೈಕಿ ಪಾಕಿಸ್ತಾನ, ಜೋರ್ಡನ್, ಇರಾಕ್ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಇದರ ಅನಾಹುತದ ಅರಿವು ಆದ ಕೂಡಲೇ ಈ ದೇಶಗಳು ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ರಾಜ್ಯಗಳು ಈ ಗೇಮ್ ಮೇಲೆ ನಿಷೇಧ ಹೇರಿದ್ದವು. ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಸಂವಿಧಾನ ನೀಡಿದ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿ ಅದನ್ನು ವಜಾಗೊಳಿಸಿತ್ತು.

    ಕಾನೂನು ಹೋರಾಟ

    ಹಾಗೆಂದು ಭಾರತದಲ್ಲಿ ಈ ಮಾರಕ ಗೇಮ್ ನಿಷೇಧಕ್ಕೆ ಈ ಮೊದಲೇ ಹೋರಾಟ ಆಗಿಲ್ಲವೆಂದೇನಿಲ್ಲ. ಇದರ ನಿಷೇಧಕ್ಕೆ ಆದೇಶ ನೀಡುವಂತೆ ಕೋರಿ ಹಿರಿಯ ವಕೀಲ ಎಚ್ ಸಿ ಅರೋರಾ ಎನ್ನುವವರು ಪಂಜಾಬ್-ಹರಿಯಾಣ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೊಂದು ಮಾದಕ ದ್ರವ್ಯದಂತೆ ವ್ಯಸನಕ್ಕೆ ಒಳಪಡಿಸುವ ಗೇಮ್ ಎಂದವರು ಪ್ರತಿಪಾದಿಸಿದ್ದರು. ಆ ಬಳಿಕ 2019ರಲ್ಲಿ ಅಹಮದಾಬಾದ್, ರಾಜ್ ಕೋಟ್, ಸೂರತ್, ವಡೋದರ ಮತ್ತು ಭಾವನಗರದಲ್ಲಿ ಇದರ ಮೇಲೆ ನಿಷೇಧ ಹೇರಲ್ಪಟ್ಟಿತ್ತು.ಮುಂಬೈ ಹೈಕೋರ್ಟ್ ನಲ್ಲಿ ಕೂಡ ಇಂತಹುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.

    ನಮಗೂ ಕರೋನ ಬಂದು ಹೋಗಿರಬಹುದೇ?

    ತನ್ನ ಇರುವಿನ ಸುಳಿವನ್ನೇ ನೀಡದೆ, ಮನುಷ್ಯರಲ್ಲಿ ಹರಡಬಹುದಾದ ಸೋಂಕು ಉಂಟಾದರೆ ಅದು ನಮಗೆ ಬಂದು ಹೋಗಿರಬಹುದೇ ಎಂಬ ಸಂಶಯವೂ ಜನರಲ್ಲಿರುತ್ತದೆ. ಕೊರೊನಾ ಸೋಂಕು ಕೂಡ ಇಂತಹ ಒಂದು ರಹಸ್ಯ ಸೋಂಕಾಗಿರುವುದು, ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿ ಕಾಣಿಸಿಕೊಳ್ಳುತ್ತಿರುವುದು ಪ್ರತಿದೇಶದಲ್ಲಿ ವರದಿಯಾಗಿರುವ ವಿಚಾರ.ಆದರೆ ಈ ಆರು ತಿಂಗಳಲ್ಲಿ ಬಂದು ಹೋಗಿರುವ ಕೆಮ್ಮು-ಜ್ವರಗಳೆಲ್ಲ ಕೋವಿಡ್ ಸೋಂಕೇ ಅಲ್ಲದಿದ್ದರೂ ತಮಗೆ ಸೋಂಕು ಬಂದುಹೋಗಿರಬಹುದೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಜನರನ್ನು ಸುಪ್ತವಾಗಿ ಕಾಡುತ್ತಿದೆ. ರೋಗ ಲಕ್ಷಣಗಳ ಅಗತ್ಯವಿಲ್ಲದೆಯೂ ಕೋವಿಡ್ ಬರಬಹುದಾದ್ದರಿಂದ ಅಕ್ಷರಶಃ ನಮ್ಮಲ್ಲಿ ಯಾರಿಗೆ ಬೇಕಾದರೂ ಸೋಂಕು ಇರಬಹುದು ಅಥವ ಬಂದುಹೋಗಿರಬಹುದು.

    ಒಂದು ದಿನ ಅಥವಾ ಎರಡು ದಿನಗಳ ಕಾಲ ಬಂದು ಹೋದದ್ದು ಸಣ್ಣ ಜ್ವರ -ಕೆಮ್ಮು ಕೋವಿಡ್ ಆಗಿರಬಹುದೇ? ಕೋವಿಡ್ ಪರೀಕ್ಷೆಗೆ ತೆರಳಲೇ, ಬೇಡವೇ?- ಎಂದು ಯೋಚಿಸುತ್ತಿರುವಾಗಲೇ ಮತ್ತೆ ಪೂರ್ಣ ಆರೋಗ್ಯಕ್ಕೆ ಮರಳಿದ ಲಕ್ಷಾಂತರ ಜನರೂ ಇದ್ದಾರೆ. ಅವರಲ್ಲೂ ಈ ಪ್ರಶ್ನೆಗಳಿವೆ. ಆದರೆ ಹೇಳಲು ಅಪರಾಧಿ ಪ್ರಜ್ಞೆಅವರನ್ನು ಕಾಡುತ್ತಿರಬಹುದು. ತಾವೂ ಈ ಸೋಂಕನ್ನು ಹರಡುವಲ್ಲಿ ಅರಿವೇ ಇಲ್ಲದೆ  ಭಾಗಿಯಾಗಿರಬಹುದೆ ಎನ್ನುವ ಸಂಶಯ ಇವರನ್ನ ಭಾಧಿಸುತ್ತಿರಬಹುದು.

    ಆತ್ಮಸಾಕ್ಷಿಯುಳ್ಳ, ಕರ್ತವ್ಯ ಪ್ರಜ್ಞೆಯಿರುವ ಎಲ್ಲರಲ್ಲೂ ತಾವೊಂದು ಅಂಗಡಿಗೆ ಹೋಗಿ ಬಂದರೂ ಕೋವಿಡ್ ಬಂದಿರಬಹುದೇ ಅಥವಾ ಅದನ್ನು ಹರಡುವಲ್ಲಿ ತಾವೊಂದು ಅಪರಾಧ ಎಸಗಿರಬಹುದೇ ಎನ್ನುವ ವಿಚಿತ್ರ ಅನುಭೂತಿಗಳು ಕಾಡುತ್ತಿರುವ ಅತ್ಯಂತ ವಿರಳವಾದ,ವಿಶೇಷವಾದ ಕಾಲ ಘಟ್ಟವಿದು

    ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕು

    ಭಾರತದಲ್ಲಂತೂ ಮೌನವಾಗಿ ಹರಡಿ ಹಬ್ಬುತ್ತಿರವ ಸೋಂಕಿನ ವರದಿಗಳು ಅಪಾರಮಟ್ಟದಲ್ಲಿವೆ.ಆಗಾಗ ಕೆಮ್ಮೋ ಜ್ವರವೋ ಬರುವುದು ಪುಟ್ಟ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ.ಆದರೆ ಕಳೆದ ತಿಂಗಳುಗಳಲ್ಲಿ ಮಕ್ಕಳಿಗೆ ಬಂದು ಹೋಗಿರಬಹುದೇ? -ಎನ್ನುವ ಅನುಮಾನಗಳು ನಮ್ಮಲ್ಲಿ ತಲೆ ಎತ್ತುತ್ತಿವೆ.ಹಾಗಿರುವಾಗ ಇಂಥಹ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ನೆಮ್ಮದಿಯಲ್ಲವೇ?

    ಮೊದಲಿಗೆ ನಮ್ಮಲ್ಲಿ ಕೊರೊನಾ ಲಕ್ಷಣಗಳಿದ್ದವೇ ಎಂದು ಆಲೋಚಿಸಬೇಕಾಗುತ್ತದೆ.

    ಕೊರೋನಾ ಸೋಂಕಿನ ಲಕ್ಷಣಗಳು

    ಈ ವೇಳೆಗೆ ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ.

    1.ಜ್ವರ ಬರುವುದು

    ದೇಹದ ತಾಪಮಾನವನ್ನು ನೋಡಿಕೊಳ್ಳಲು ಅಳೆಯುವ ಮಾಪಕಗಳನ್ನು ಬಳಸಲೇಬೇಕು ಎಂದೇನಿಲ್ಲ. ಆದರೆ ನಿಮ್ಮ ದೇಹದ ಉಷ್ಣತೆ ಏರಿದಂತಾದರೆ ಅದು ನಿಮಗೆ ತಿಳಿಯುತ್ತದೆ.ಎದೆ ಅಥವಾ ಬೆನ್ನನ್ನು ಮುಟ್ಟಿದರೆ ಅದು ನಿಮ್ಮ ಅನುಭವಕ್ಕೆ ಬರುತ್ತದೆ.

    2. ಹೊಸದಾಗಿ ಶುರುವಾಗುವ ಅವಿರತ ಕೆಮ್ಮು

    ಅಂದರೆ ಗಂಟೆಯೊಂದರಲ್ಲಿ ಬಹಳಷ್ಟು ಕೆಮ್ಮುವುದು ಅಥವಾ ದಿನವೊಂದರಲ್ಲಿ ಮೂರು ಅಥವಾ ಅದಕ್ಕಿನ್ನ ಹೆಚ್ಚು ಬಾರಿ ಅವಿರತ ಕೆಮ್ಮು ಬರುವುದು. ಹಳೆಯ ಗೂರಲು, ಕಫದ ಕೆಮ್ಮು ಇತ್ಯಾದಿ ಇರುವವರು ಅದಕ್ಕಿನ್ನ ಹೆಚ್ಚಿನ ಕೆಮ್ಮು ಬಂದಿತೇ ಎಂದು ಗಮನಿಸಬೇಕಾಗುತ್ತದೆ.

    3. ನಿಮ್ಮ ವಾಸನಾ ಗ್ರಹಿಕೆ ಮತ್ತು ರುಚಿಯ ಗ್ರಹಿಕೆ ಕುಂದುವುದು ಅಥವಾ ಇಲ್ಲವಾಗುವುದು

    ಇದು ಒಂದೆರಡು ದಿನವಿರಬಹುದು ಅಥವಾ ಒಂದು ವಾರವೇ ಇರಬಹುದು.

    ಒಟ್ಟಿನಲ್ಲಿ ಮೇಲಿನ ಮೂರು ಲಕ್ಷಣಗಳಲ್ಲಿ ಎಲ್ಲ ಅಥವಾ ಯಾವುದಾದರೂ ಒಂದಾದರೂ ಇದ್ದರೆ ಅಥವಾ ಬಂದುಹೋಗಿದ್ದರೆ ಅದು ಕೊರೊನಾ ಸೋಂಕನ್ನು ಹೋಲುತ್ತದೆ.

    ಇತರೆ : ಇವಲ್ಲದೆ ಮೈ ಕೈ ನೋವು, ಗಂಟಲು ನೋವು, ತಲೆನೋವು, ವಾಂತಿ-ಬೇಧಿ, ಮೂಗು ಕಟ್ಟುವುದು ಅಥವಾ ಸೋರುವುದು ಮುಂತಾದ ಎಲ್ಲ ಲಕ್ಷಣಗಳನ್ನು ಜನರು ವರದಿಮಾಡಿದ್ದಾರೆ. ಕೆಲವರಲ್ಲಿ ಉಸಿರಾಟದ ತೊಂದರೆಗಳಾಗಿದ್ದರೆ ಇನ್ನು ಹಲವರಲ್ಲಿ ಅತ್ಯಂತ ತೀವ್ರ ನ್ಯೂಮೋನಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಕೆಲವರಲ್ಲಿ ಯಾವುದೇ ಲಕ್ಷಣಗಳನ್ನು ಉಂಟುಮಾಡದ ವೈರಸ್ ಗಳು ಅವರಿಂದ ಸದ್ದಿಲ್ಲದೆ ಇನ್ನೊಬ್ಬರಿಗೆ ನೆಗೆದಿವೆ.

    ಅವರವರ ಲಕ್ಷಣಗಳಿಗನುಸಾರವಾಗಿ ಜನರು ಗುಣಮುಖವಾಗುತ್ತಾರೆ. ಅಂದರೆ ಕಡಿಮೆ ಲಕ್ಷಣಗಳಿರುವವರು ಎರಡು ವಾರಗಳಲ್ಲಿ ಗುಣಮುಖರಾದರೆ ಹೆಚ್ಚಿನ ತೊಂದರೆ ಅನುಭವಿಸುವ ಜನರು ಆರುವಾರಗಳ ಕಾಲ ತೆಗೆದುಕೊಳ್ಳಬಹುದು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾಗುವ ಜನರು ಗುಣಮುಖರಾಗಲು ಮತ್ತೂ ಹೆಚ್ಚಿನಕಾಲ ಬೇಕಾಗಬಹುದು.

    ಮಕ್ಕಳಲ್ಲಿ ಮೇಲಿನ ಎಲ್ಲ ಲಕ್ಷಣಗಳು ಅತ್ಯಂತ  ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಬಹುತೇಕರು ಅತ್ಯಂತ ಬೇಗನೆ ಚೇತರಿಕೆಯನ್ನು ತೋರಿದ್ದಾರೆ.

    ಕೊರೊನಾ ಬಂದು ಹೋಗಿದೆಯೇ ಎಂದು ತಿಳಿಯುವುದು ಹೇಗೆ?

    ಬಹಳಷ್ಟು ಜನರ ಜೊತೆ ಒಡನಾಡಿದ ಜನರಿಗೆ ತಮಗೆ ಕೊರೊನಾ ಬಂದು ಹೋಗಿರಬಹುದೇ ಎನ್ನುವ ಅನುಮಾನವಿರಬಹುದು. ಅಥವಾ ಕೊರೊನಾ ಪರೀಕ್ಷೆಗೆ ಹೆದರಿ ಅದನ್ನು ಮಾಡಿಸಿಕೊಳ್ಳದೆ ಹೋಗಿರಬಹುದು. ಆದರೆ ಆ ಅನುಮಾನವನ್ನು ಬಗೆಹರಿಸಲು ಮತ್ತೊಂದು ಪರೀಕ್ಷೆಯಿದೆ. ಇದನ್ನು  ’ಆಂಟಿಬಾಡಿ ಟೆಸ್ಟ್ ’ ಎನ್ನುತ್ತೇವೆ.

     ’ಆಂಟಿಬಾಡಿ ಪರೀಕ್ಷೆ’ ಹೇಗೆ ನಡೆಯುತ್ತದೆ?

    ಕೊರೊನಾ ಸೋಂಕು ಬಂದು ಹೋಗಿರಬಹುದೇ ಎನ್ನುವುದನ್ನು ತಿಳಿಯಲು ಪರೀಕ್ಷೆಯನ್ನು ಗಂಟಲು ಮತ್ತು ಮೂಗಿನ ದ್ರವದ ಮಾದರಿಯ ಪರೀಕ್ಷೆಯಿಂದ ಮಾಡಿದರೆ ಆಂಟಿಬಾಡಿ ಪರೀಕ್ಷೆಯನ್ನು ರಕ್ತದ ಪರೀಕ್ಷೆಯ ಮೂಲಕ ಮಾಡುತ್ತಾರೆ. ನಮ್ಮ ದೇಹವನ್ನು ಯಾವುದೇ ಪರಜೀವಗಳು ಪ್ರವೇಶಿಸಿದಾಗ ಅವುಗಳನ್ನು ಹತ್ತಿಕ್ಕಲು ನಿರ್ದಿಷ್ಟ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗುತ್ತವೆ

    ನಮ್ಮ ರಕ್ತದಲ್ಲಿ ಕೊರೊನಾ ವೈರಸ್ಸನ್ನು ವಿರೋಧಿಸುವ ಈ ಜೀವನಿರೋಧಕ ಪ್ರೋಟೀನುಗಳು ಕಂಡುಬಂದಲ್ಲಿ ನಮಗೆ ಕೊರೊನಾ ಸೋಂಕು ಬಂದುಹೋಗಿರಬಹುದು ಎಂದು ತಿಳಿಯುತ್ತದೆ. ಆ ಮೂಲಕ ನಮ್ಮ ಶಂಕೆಗಳಿಗೆ ಈ ಪರೀಕ್ಷೆ ಅಂತಿಮ ತೆರೆಯನ್ನು ಎಳೆಯುತ್ತದೆ.

    ಆಂಟಿಬಾಡಿ ಪರೀಕ್ಷೆಯ ಮಿತಿಗಳು

    ಈ ಜೀವ ನಿರೋದಕ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗಿ ಕಾಣಿಸಲು ಕನಿಷ್ಠ1-3 ವಾರಗಳು ಬೇಕಾಗುತ್ತದೆ. ಹಾಗಾಗಿ ಅಕಸ್ಮಾತ್ ನಮಗೆ ಲಕ್ಷಣಗಳೇ ಇಲ್ಲದ ಕೊರೊನಾ ಸೋಂಕು ಆಗ ತಾನೇ ಶುರುವಾಗಿದ್ದರೆ ಈ ಪರೀಕ್ಷೆಯಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ.

    ಆಂಟಿಬಾಡಿ ಫಲಿತಾಂಶಕ್ಕೆ ಬಹಳ ಮಿತಿಗಳಿವೆ. ಅಂದರೆ, ನಿಮಗೆ ಸೋಂಕು ಬಂದು ಹೋಗಿತ್ತೇ ಎಂದು ಇದರಿಂದ ಹೇಳಬಹುದೇ ಹೊರತು ನೀವು ಇನ್ನು ಮುಂದೆ ಮತ್ತೊಮ್ಮೆ ಈ ಸೋಂಕಿಗೆ ತುತ್ತಾಗಬಲ್ಲಿರೇ ಅಥವಾ ಇಲ್ಲವೇ ಎನ್ನುವುದನ್ನು ಹೇಳಲು ಬರುವುದಿಲ್ಲ.ಜೊತೆಗೆ ನೀವು ಮತ್ತೊಬ್ಬರಿಗೆ ಇನ್ನೂ ಸೋಂಕನ್ನು ಹರಡುತ್ತಿರುಬಹುದೇ ಎನ್ನುವುದು ಕೂಡ ತಿಳಿಯುವುದಿಲ್ಲ.

    ಆದ್ದರಿಂದ ಈ ಪರೀಕ್ಷೆಯಲ್ಲಿ ನಿಮಗೆ ಸೋಂಕು ಬಂದು ಹೋಗಿದೆ ಎಂದಾದರೂ ಎಲ್ಲರಂತೆ ಸಾಮಾಜಿಕ ಅಂತರ ಮತ್ತು ಪದೇ ಪದೇ ಕೈ ತೊಳೆಯುವುದನ್ನು ಮುಂದುವರೆಸಬೇಕಾಗುತ್ತದೆ.

    ನನಗೆ ತಿಳಿದ ಒಬ್ಬರಲ್ಲಿ ಒಂದ ವಾರದ ಕಾಲ ವಾಸನಾ ಶಕ್ತಿ ಇಲ್ಲವಾಗಿತ್ತು. ಆದರೆ ಇನ್ನಾವುದೇ ಖಾಯಿಲೆಯ ಲಕ್ಷಣಗಳಿರಲಿಲ್ಲ. ಆಕೆ ತನಗೆ ದೊರೆತ ನಿರ್ದೇಶನದ ಪ್ರಕಾರ ಕೋವಿಡ್ ಟೆಸ್ಟ್ ನ್ನು ಮಾಡಿಸಿಕೊಂಡರು. ಆಕೆಗ ಕೋವಿಡ್ ಇಲ್ಲ ಎಂದು ವರದಿ ಬಂದಾಗ ಆಕೆ ಅದುವರೆಗೆ ತನ್ನನ್ನು ತಾನು ಪ್ರತ್ಯೇಕಿಸಿಕೊಂಡದ್ದು, ಇತರರಿಗೆ ತೊಂದರೆ ಕೊಟ್ಟದ್ದು ಎಲ್ಲ ನೆನೆದು “ ಅಯ್ಯೋ ಸುಮ್ಮ ಸುಮ್ಮನೆ ಹೆದರಿದೆನಲ್ಲ “ ಎಂದು ಅಂದುಕೊಂಡರು. ಆದರೆ ಒಂದು ತಿಂಗಳ ನಂತರ ಆಕೆ ಕೆಲಸಕ್ಕೆ ಮರಳುವ ಕಾಲ ಬಂದಿತು. ಆಗ ಆಂಟಿ ಬಾಡಿ ಟೆಸ್ಟ್ ಮಾಡಿಸಲೇಬೇಕಿತ್ತು. ವರದಿಯಲ್ಲಿ ಅಶ್ಚರ್ಯಕರವಾಗಿ ಆಕೆಗೆ ಕೋವಿಡ್ ಬಂದು ಹೋದ ವರದಿಯಿತ್ತು.

    ಹಾಗಂದರೆ ಏನರ್ಥ?

    ಕಳೆದವಾರದ ಲೇಖನದಲ್ಲಿ ಹೇಳಿದಂತೆ ಕೊರೊನಾ ಪರೀಕ್ಷೆಎಲ್ಲ ಬಾರಿ ನಿಖರವಾದ ಫಲಿತಾಂಶವನ್ನು ನೀಡುವ ಪರೀಕ್ಷೆಯೇನಲ್ಲ.ಪರೀಕ್ಷೆಯಲ್ಲಿ ನಡೆಯಬಹುದಾದ ತಪ್ಪುಗಳು, ದ್ರವ ಮಾದರಿಯ ಪ್ರಮಾಣ, ಪರೀಕ್ಷಾ ವಿಧಾನ, ಪ್ರಯೋಗಾಲಯದ ಗುಣಮಟ್ಟ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷೆ ಯಾವಾಗ ಮಾಡಲಾಯಿತು ಇತ್ಯಾದಿ ಹಲವು ವಿಚಾರಗಳನ್ನು ನಾವು ವಿಷ್ಲೇಶಿಸಬೇಕಾಗುತ್ತದೆ. ಜೊತೆಗೆ ಎಲ್ಲವೂ ಸರಿಯಿದ್ದರೂ ಪ್ರತಿಬಾರಿ ನಿಖರ ಫಲಿತಾಂಶವನ್ನು ನೀಡಲು ಕೊರೊನಾ ಪರೀಕ್ಷೆ ಸಫಲವಾಗದೇ ಹೋಗಬಹುದು.

    ಅದರಂತೆಯೇ ಆಂಟಿಬಾಡಿ ಪರೀಕ್ಷೆಗಳೂ ಕರಾರುವಕ್ಕಾದ ಫಲಿತಾಂಶವನ್ನು ನೀಡುವುದಿಲ್ಲ.ಆಂಟಿಬಾಡಿಗಳಿದ್ದವು ಆದ್ದರಿಂದ ನಿಮಗೆ ಕೊರೊನಾ ಬಂದಿರಬಹುದು ಎನ್ನುವ ಸುಳ್ಳು ಫಲಿತಾಂಶ ಬರುವ ಸಾಧ್ಯತೆಗಳುಅರ್ಧಕ್ಕಿಂತ ಹೆಚ್ಚಿವೆ!ನಿಖರವಾದ ಫಲಿತಾಂಶ ನೀಡುವ ಸಾಧ್ಯತೆಯಿರುವುದು ಕೇವಲ 49 % ಪರೀಕ್ಷೆಗಳಲ್ಲ್ ಮಾತ್ರಎಂದು Infectious Disease Society of Americaಹೇಳಿದೆ.

    ಇನ್ನೂ ನೇರವಾಗಿ ಹೇಳಬೇಕೆಂದರೆ ಕೇವಲ ಅರ್ಧದಷ್ಟು ಕೇಸುಗಳಲ್ಲಿ ಮಾತ್ರ ಕೊರೊನಾ ವಿರುದ್ಧ ಜೀವನಿರೋಧಕ ಕಣಗಳು ನಿಜಕ್ಕೂ ಇದ್ದುದನ್ನು ಧೃಡ ಪಡಿಸುವ ಶಕ್ತಿಯಷ್ಟೇ ಈ ಪರೀಕ್ಷೆಗಿರುವುದು. ಉಳಿದಂತೆ  ಜೀವನಿರೋಧಕ ಕಣಗಳು ಕೊರೊನಾ ವಿರುದ್ಧ ಹುಟ್ಟಿದ್ದೇ ಎಂಬುದನ್ನು ಧೃಡಪಡಿಸುವಲ್ಲಿ ಈ ಪರೀಕ್ಷೆ ಸೋಲುತ್ತದೆ. ಅದರ ಮೇಲೆ,ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಇತ್ತೀಚೆಗಿನ ವರದಿಯ ಪ್ರಕಾರ ಕೋವಿಡ್  ಬಂದು ಹೋಗಿದ್ದರು ಆಂಟಿಬಾಡಿಗಳಿಲ್ಲವೆಂದು ಹೇಳುವ false-negative rateಶೇಕಡ 20%  ರಷ್ಟಿದೆ ಎನ್ನುತ್ತದೆ. ಅಂದರೆ ಇಲ್ಲಿ ಕೂಡ ಈ ಪರೀಕ್ಷೆಯನ್ನು ಯಾವಾಗ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ.ಅಂದರೆ ಈ ಪರೀಕ್ಷೆ ನಡೆವಾಗ ನಿಮ್ಮಲ್ಲಿ ಕೊರೊನಾ ಬಂದು ಹೋಗಿದ್ದ ಗುಮಾನಿಯಿದ್ದರೇನೋ ಪರವಾಗಿಲ್ಲ ಆದರೆ ಕೊರೊನಾ ಲಕ್ಷಣಗಳೇ ಇಲ್ಲದವರನ್ನು ಯಾವಾಗ  ಈ ಪರೀಕ್ಷೆಗ ಒಳಪಡಿಸಬೇಕು? ಎನ್ನುವ ಪ್ರಶ್ನೆಗೆ ತಾರ್ಕಿಕ, ಪ್ರಯೋಗಾತ್ಮಕ   ಉತ್ತರವನ್ನಿನ್ನೂ ಹುಡುಕುತ್ತಿದ್ದಾರೆ.

    ಯಾವ ಪರೀಕ್ಷೆಯೇ ಆದರೂ ಸುಳ್ಳು ಸುಳ್ಳೇ ಸೋಂಕಿಲ್ಲವೆಂದು ಬರುವ ಫಲಿತಾಂಶಗಳು ಸುಳ್ಳು ಸುಳ್ಳೇ ಸೋಂಕಿದೆಯೆಂದು ಬರುವ ಫಲಿತಾಂಶಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಸೋಂಕು ಬಂದಿದ್ದರೂ ಫಲಿತಾಂಶ ಸೋಂಕಿಲ್ಲವೆಂದು ಬರುವ ಕಾರಣ ಜನರು ಕೊರೊನಾ ಸೋಂಕನ್ನು ಸಮಾಜದ ತುಂಬೆಲ್ಲ ಹರಡುತ್ತ ಹೋಗುತ್ತಾರೆ.

    ಹಾಗಾದರೆ ಆಂಟಿ ಬಾಡಿ ಟೆಸ್ಟನ್ನು ಯಾರು ಮತ್ತು ಏಕೆ ಮಾಡಿಸಿಕೊಳ್ಳಬೇಕು?

    ಕೊರೊನಾ ಎನ್ನುವ ಸೋಂಕು ವಿಶ್ವವ್ಯಾಪಿ ಹೊಸವ್ಯಾಧಿ. ಅಂದರೆ ಈ ಕ್ಷಣದಲ್ಲೂ ಈ ಹೊಸಪಿಡುಗಿನ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.ಆ ಕಾರಣ ಈ ವ್ಯಾಧಿಯ ಬಗ್ಗೆ ಮನುಷ್ಯನಿಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಜಾಸ್ತಿ.

    ಈಗಾಗಲೇ ಹಲವು ದೇಶಗಳು ಸಮುದಾಯಮಟ್ಟದಲ್ಲಿ ಆಂಟಿಬಾಡಿ ಪರೀಕ್ಷೆಗಳನ್ನು ಶುರುಮಾಡಿದ್ದಾರೆ. ಮತ್ತೆ ಕೆಲವು ದೇಶಗಳು ಅಗತ್ಯ ಕೆಲಸಗಾರರನ್ನು, ಅಥವಾ ಕೊರೊನಾ ಬಂದುಹೋದವರ ಸಂಪರ್ಕದಲ್ಲಿ ಇದ್ದವರನ್ನು ಅವರ ಮನೆಯವರನ್ನು ಈ ಪರೀಕ್ಷೆಗೆ ಒಳಪಡಿಸುತ್ತಿವೆ.

    ಸೋಂಕು ಬಂದು ಹೋಗಿದ್ದರೂ ಗೊತ್ತಿರದ ಜನರನ್ನು ಗಣಿಸುವುದು ಇದರ ಮುಖ್ಯ ಉದ್ದೇಶ.ಈ ಗಣತಿಯಿಂದ ಅರ್ಧದಷ್ಟು ಸಂಖ್ಯೆಯನ್ನು ಮಾತ್ರವೇ ತೆಗೆದುಕೊಂಡರೂ ಸೋಂಕಿನ ತೀವ್ರತೆಯನ್ನು ಕಂಡು ಹಿಡಿಯಬಹುದು. ಲಕ್ಷಣರಹಿತ ಸೋಂಕಿನ ಮಟ್ಟ ಎಷ್ಟಿರಬಹುದು ಎಂಬುದನ್ನು ಅಳೆಯಬಹುದು.

    ಜೊತೆಗೆ ಕೋವಿಡ್ ಸೋಂಕಿನ ದಟ್ಟ ಲಕ್ಷಣಗಳಿದ್ದೂ ಕೋವಿಡ್ ಪರೀಕ್ಷೆ ಯಲ್ಲಿ ಸೋಂಕು ಇಲ್ಲ ಎಂದು ಫಲಿತಾಂಶ ಬಂದಿರುವ ಜನರಿಗೆ ನಿಜವನ್ನು ತಿಳಿಯಲು ಇರುವ ಇನ್ನೊಂದು ಏಕೈಕ ಮಾರ್ಗವೆಂದರೆ ಈ ಆಂಟಿಬಾಡಿ ಪರೀಕ್ಷೆ.ಆದರೆ ಫಲಿತಾಂಶವನ್ನು ಅನುಮಾನದ ದೃಷ್ಟಿಯಿಂದಲೇ ನೋಡಬೇಕಾದ ಅನಿವಾರ್ಯತೆ ನಮಗಿದೆ.

    ಆದರೆ ಆಂಟಿಬಾಡಿ ಟೆಸ್ಟ್ ಗಳನ್ನು ಕೋವಿಡ್ ಪಾಸ್ ಪೋರ್ಟುಗಳಂತೆ ಬಳಸಿಕೊಳ್ಳುವ ಸಂಸ್ಥೆ ಮತ್ತು ದೇಶಗಳು ಈ ಪರೀಕ್ಷೆಯ ನಿಖರತೆಯನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲಸಕ್ಕೆ ಹಿಂತಿರುಗುವ ಮುನ್ನ ಆಂಟಿಬಾಡಿ ಟೆಸ್ಟ್ ಮಾಡಿಸಿಕೊಂಡು ಅದರಲ್ಲಿ ನಮಗೆ ಕೋವಿಡ್ ಬಂದು ಹೋಗಿದೆ ಎನ್ನುವ ಫಲಿತಾಂಶ ಬಂದಿದ್ದರೆ “ ಇನ್ನು ನಿಮಗೆ ಈ ಸೋಂಕು ಬರುವುದಿಲ್ಲ, ನಿಮ್ಮ ದೇಹದಲ್ಲಿ ಆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಬಂದುಬಿಟ್ಟಿದೆ “ ಎನ್ನುವ ಮಾತುಗಳನ್ನು ಆಡಲಾಗುತ್ತಿದೆ.

    ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಪಾಸಿಟಿವ್ ಇದ್ದಲ್ಲಿ “ ರೋಗಿಯಲ್ಲಿ ಈಗಾಗಲೇ ಕೋವಿಡ್ ವಿರೋಧಕ ಇಮ್ಯೂನಿಟಿ ಇರುವ ಕಾರಣ ಅವರನ್ನು ಇನ್ನು ಮನೆಗೆ ಕಳಿಸಬಹುದು” ಎನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

    ಒಂದು ಆಫೀಸು, ಆಸ್ಪತ್ರೆ ಹೀಗೆ ಗುಂಪಿನಲ್ಲಿ ಕೆಲಸಮಾಡುವ ಸ್ಥಳಗಳಲ್ಲಿ  ಒಬ್ಬರಿಗೋ- ಇಬ್ಬರಿಗೋ ಕೋವಿಡ್ ಲಕ್ಷಣಗಳಿರಬಹುದು. ಅವರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. ಆದರೆ ಅವರಿಂದ ಇತರರಿಗೂ ಕೋವಿಡ್ ಬಂದು ಹೋಗಿದೆಯೇ ಮತ್ತು ಎಂತಹ ಸ್ಥಳಗಳಲ್ಲಿ ಇದು ಗುಂಪಿನ ಎಷ್ಟು ಜನರಿಗೆ ಹರಡಿತು ಎನ್ನುವುದನ್ನು ಕೂಡ ಈ ಪರೀಕ್ಷೆಯಿಂದ ತಿಳಿಯಬಹುದಾಗಿದೆ. ಸೋಂಕು ಬಂದು ಹೋದ ತಿಂಗಳುಗಳ ನಂತರವೂ ಆಂಟಿಬಾಡಿ ಪರೀಕ್ಷೆಯ ಮೂಲಕ ಬಂದಿತ್ತೇ? ಎಂದು ಕಂಡುಹಿಡಿಯುವ ಪ್ರಯತ್ನ ಮಾಡಬಹುದು.

    ಕೊರೊನಾ ಪರೀಕ್ಷೆಯಲ್ಲಿ ಸೋಂಕಿದೆ ಎಂದು ಗೊತ್ತಾಗಿ ಅವರು ಗುಣಮುಖರಾದ ನಂತರ ಅವರ ದೇಹದಲ್ಲಿ ಆಂಟಿಬಾಡಿಗಳಿವೆ ಎಂದು ಆಂಟಿಬಾಡಿ ಪರೀಕ್ಷೆಯ ಮೂಲಕ ತಿಳಿದಲ್ಲಿ ಅವರ ರಕ್ತದ ಪ್ಲಾಸ್ಮಾವನ್ನು ಇತರೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಆ ಮೂಲಕ ಆಂಟಿಬಾಡಿಗಳನ್ನು ಅಂದರೆ ಕೊರೊನಾ ವಿರುದ್ಧ ಹೋರಾಡಬಲ್ಲ ಸೈನಿಕರನ್ನು ನೇರವಾಗಿ ಗುಣಮುಖರಾಗಲು ಶ್ರಮಪಡುತ್ತಿರುವವರ ದೇಹಕ್ಕೆ ವರ್ಗಾಯಿಸಲಾಗುತ್ತಿದೆ. ಹೀಗಾಗಿ ಈ ಪರೀಕ್ಷೆಯ ಫಲಿತಾಂಶಗಳು ಕರಾರುವಕ್ಕಲ್ಲದಿದ್ದರೂ ಬಹಳಷ್ಟು ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದಿದೆ.

    ಆದರೆ ಈ ಪರೀಕ್ಷೆಗಳ ಬಗ್ಗೆ ಬಹಳಷ್ಟು ಅಧ್ಯಯನಗಳು ಈಗಲೂ ಜಾರಿಯಲ್ಲಿವೆ. ಈ ಅಧ್ಯಯನಗಳ ಮೂಲಕ ಇಂತಿಷ್ಟು ಆಂಟಿಬಾಡಿಗಳ ಪ್ರಮಾಣ ಇದ್ದರೆ ವೈರಸ್ಸಿನಿಂದ ರಕ್ಷಣೆ ಪಡೆಯಬಹುದು ಎಂಬುದನ್ನೇನಾದರೂ ಪತ್ತೆ ಹಚ್ಚಿದರೆ ಕೊರೊನಾ ಪರೀಕ್ಷೆ ಮತ್ತು ಆಂಟಿಬಾಡಿ ಪರೀಕ್ಷೆಗಳು ಕೊರೊನಾ ವಿರುದ್ಧದ ಸಮರದಲ್ಲಿ ನಮ್ಮ ಬತ್ತಳಿಕೆಯಲ್ಲಿರುವ ಅತ್ಯಮೂಲ್ಯ ಅಸ್ತ್ರಗಳಾಗುತ್ತವೆ. ಅಲ್ಲಿಯವರೆಗೂ ಆಂಟಿಬಾಡಿ ಪರೀಕ್ಷೆಗಳನ್ನು ನಾವು ಅದರ ಮಿತಿಗಳ ಪರಿಮಿತಿಯಲ್ಲೇ ನೋಡಬೇಕಾಗಿದೆ.

    ಏಕೆಂದರೆ ಸಧ್ಯದ ಆಂಟಿಬಾಡಿ ಟೆಸ್ಟ್ ಗಳು ನೀವು ವೈರಸ್ಸಿನ ಸಂಪರ್ಕಕ್ಕೆ ಬಂದಿದ್ದಿರೇ ಎನ್ನುವುದನ್ನು ಮಾತ್ರ ತಿಳಿಸುತ್ತವೆ. ಆದರೆ ಎಷ್ಟುಕಾಲ ಈ ಆಂಟಿಬಾಡಿಗಳು ಕೊರೊನಾ ಜೊತೆ ಹೋರಾಡಬಲ್ಲವು? ಆಂಟಿಬಾಡಿ ಇದ್ದವರಿಗೆ ಮತ್ತೆ ಇನ್ನೊಂದು ಬಾರಿ ಕೊರೊನಾ ಸೋಂಕು ಬರಬಹುದೇ?  ಎಷ್ಟು ಪ್ರಮಾಣದಲ್ಲಿ ಈ ಆಂಟಿಬಾಡಿಗಳು ಕೊರೊನಾ ವಿದ್ಧ ಫಲಪ್ರದವಾಗಿ ಹೋರಾಡಬಲ್ಲವು?-ಇತ್ಯಾದಿ ಹಲವು ಪ್ರಶ್ನೆಗಳಿಗೆ ಈ ಪರೀಕ್ಷೆಯಿಂದ ಉತ್ತರ ದೊರಕುವುದಿಲ್ಲ.

    ಮುಖ್ಯವಾಗಿ ಇವಿಷ್ಟು ತಿಳಿದಿದ್ದರೆ ಸಾಕು.

    ಆಂಟಿಬಾಡಿ ಪರೀಕ್ಷೆ ಪಾಸಿಟಿವ್ ಬಂದಲ್ಲಿ

    1.  ನಿಮ್ಮ ದೇಹದಲ್ಲಿ ಕೋವಿಡ್-19 ಎನ್ನುವ ವೈರಾಣುವಿನ ವಿರುದ್ಧ ಉತ್ಪತ್ತಿಯಾಗುವ ಪ್ರೋಟೀನುಗಳಿವೆ ಎಂದು ತಿಳಿಯುತ್ತದೆ. ಆದರೆ ಇದು ಕೊರೊನಾ ವೈರಸ್ ಎನ್ನುವ ಫ್ಯಾಮಿಲಿಯ ಇತರೆ ವೈರಸ್ಸುಗಳ ಸಂಪರ್ಕಕ್ಕೆ ಬಂದ ಕಾರಣದಿಂದಲೂ ಇರಬಹುದು. ಸಾಮಾನ್ಯ ಕೆಮ್ಮು-ನೆಗಡಿ ತರುವ ವಿಧದ ವೈರಸ್ಸುಗಳ ಕಾರಣವೂ ನಮ್ಮಲ್ಲಿ ಕೋವಿಡ್-೧೯ ರ ವಿರುದ್ಧ ಹೋರಾಡಬಲ್ಲ ಜೀವನಿರೋಧಕ ಪ್ರೋಟೀನುಗಳು ಉತ್ಪತ್ತಿಯಾಗಬಲ್ಲವು.

    2. ನಮ್ಮ ದೇಹಕ್ಕೆ ಕೋವಿಡ್ -19 ರ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾದ್ದನ್ನು ಖಾತರಿಮಾಡಿಕೊಳ್ಳಬಹುದು. ಆದರೆ, ಎಷ್ಟು ಕಾಲ ಎಷ್ಟು ಮತ್ತು  ರಕ್ಷಣೆ ಸಿಗಬಲ್ಲದು ಎನ್ನುವುದು ಇನ್ನೂ ತಿಳಿದಿಲ್ಲದ ವಿಚಾರ.

    3. ಇನ್ನೂ ಖಾತರಿಬೇಕೆಂದರೆ, ಮತ್ತೊಂದು ವಿಶೇಷ ಆಂಟಿಬಾಡಿ ಪರೀಕ್ಷೆ ಲಭ್ಯವಿದೆ. ಆದರೆ ಎಲ್ಲ ರೀತಿಯ ರಕ್ಷಣಾ ಧಿರಿಸುಗಳನ್ನು ಮುಂದುವರಿಸಲೇ ಬೇಕು.

    ಆಂಟಿಬಾಡಿ ಪರೀಕ್ಷೆ ನೆಗೆಟಿವ್ ಬಂದರೆ

    1.ನಮಗೆ ಕೊರೊನಾ ಫ್ಯಾಮಿಲಿಯ ವೈರಾಣುವಿನ ಸಂಪರ್ಕ ಆಗಿಲ್ಲದಿರಬಹುದು

    2 . ನಿಮ್ಮಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಇನ್ನೂಇರಬಹುದು ಅಥವಾ ಆಗಷ್ಟೆ ಬಂದಿರಬಹುದು

    3.ಮುಂದೆಕೊರೊನಾಸೋಂಕುಬರುವಸಾಧ್ಯತೆಗಳುಇರಬಹುದು

    4. ಏಕೆಂದರೆ, ಕೆಲವರಲ್ಲಿ ತಕ್ಷಣ ಆಂಟಿ ಬಾಡಿಗಳು ಉತ್ಪತ್ತಿಯಾದರೆ ಇನ್ನು ಕೆಲವರಲ್ಲಿ ನಿಧಾನಕ್ಕೆ ಉತ್ಪತ್ತಿಯಾಗಬಹುದು

    ಮೇಲಿನ ಈ ಕಾರಣಗಳಿಗಾಗಿ, ಫಲಿತಾಂಶ ಏನೇ ಆದರೂ ಸ್ವತಃ ನಿಮ್ಮನ್ನು ಮತ್ತು ಇತರರನ್ನು ರಕ್ಷಣೆ ಮಾಡುವುದನ್ನು ಮುಂದುವರೆಸಬೇಕಾಗುತ್ತದೆ.

    Photo by cottonbro from Pexels

    ಮನಸ್ಥಿತಿಗಳ ಬಿರುಕಿನ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು

    ಮಮತಾ ಕುಲಕರ್ಣಿ

    ಭೂಮಿ ಅನ್ನೊ ಪುಟ್ಟ ಸಂಸಾರದಲ್ಲಿ ಎಲ್ಲಾ ಜೀವಿಗಳು ಒಂದಲ್ಲಾ ಒಂದು ಸಂಬಂಧದ ಸರಪಳಿಯಲ್ಲಿ ಸೇರಿಹೊಗಿರುತ್ತವೆ. ಅದರಲ್ಲಿ ಮನಸ್ಥಿತಿಗಳ ಆಧಾರದ ಮೇಲೆ ಒಳ್ಳೆ ಸಂಬಂಧ, ಕೆಟ್ಟ ಸಂಬಂಧ, ಕಾಟಾಚಾರದ ಸಂಬಂಧ ಹೀಗೆ ನಾನಾ ವಿಂಗಡನೆ ಆಗುತ್ತಾ ಹೋಗುತ್ತವೆ.

    ಎಂಜಿನಿಯರಿಂಗ್ ಎಂಬ ವಿಭಾಗದಲ್ಲಿ ಹೇಗೆ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ ಹೀಗೆ ನಾನಾ ರೀತಿಯ ವಿಭಾಗಗಳಿವೆಯೊ, ಹಾಗೆ ಮನುಷ್ಯ ತನ್ನದೆ ಆದ ಪುಟ್ಟ ಪ್ರಪಂಚದಲ್ಲಿ ತಂದೆ,ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ,ಗಂಡ, ಹೆಂಡತಿ,ಮಕ್ಕಳು, ಅಜ್ಜ,ಅಜ್ಜಿ ಹೀಗೆ ನಾನಾ ರೀತಿಯ ರೆಂಬೆ ಕೊಂಬೆಗಳನ್ನ ತನ್ನ ಜೀವನದ ವೃಕ್ಷಕ್ಕೆ ಅಂಟಿಸಿರುತ್ತಾನೆ. ಅವುಗಳ ಜೊತೆ ಸಮಯಕ್ಕೆ ತಕ್ಕಂತೆ ಬೆರೆತು ಹೋಗುತ್ತಾನೆ. ಸುಖ ದುಃಖಗಳಲ್ಲಿ  ಆ ರೆಂಬೆ ಕೊಂಬೆಗಳ ಸಾಂತ್ವನ ಹಾಗೂ ಸೌಹಾರ್ಧದ ಬಲದಿಂದ ತನ್ನ ಜೀವನದ ಕಟ್ಟಡವನ್ನು ಕಟ್ಟುತ್ತಾ ಹೋಗುತ್ತಾನೆ. ಹೀಗಿರುವಾಗ  ಸಂಬಂಧಗಳ ಬಾಂಧವ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹಿಸುವ ಶಕ್ತಿ ಹಾಗೂ ಯುಕ್ತಿಗಳನ್ನು ಕಳೆದುಕೊಳ್ಳುತ್ತಾನೆ. ಮನಸ್ಥಿತಿಗಳ ಬಿರುಕಿನ ಅಥವಾ ಬದಲಾವಣೆಯ ಯುದ್ಧವನ್ನು ಸಾವಧಾನದಿಂದ ಜಯಿಸಬೇಕು. ಇದು ಕೇವಲ ದೊಡ್ಡವರಿಗೆ ಅಥವಾ ಸಣ್ಣವರಿಗೆ ಇಲ್ಲಿ ಅನ್ವಯವಾಗುವ ಹಾಗೆ ಇಲ್ಲ.

    ಭೂಮಿಯ ಮೇಲೆ ಜನಿಸಿದ ಕ್ಷಣದಿಂದ ಪ್ರತಿನಿತ್ಯ ಬದಲಾವಣೆಗಳ ರೂಪವನ್ನು ಹೊಂದುವ ಮಗುವಿನಿಂದ ಹಿರಿಯ ಜೀವಿಗಳವರೆಗೂ ಅನ್ವಯವಾಗುತ್ತದೆ. ಒಂದು ಪುಟ್ಟ ಮಗು ಕೂಡ ತನ್ನ ಇಚ್ಛೆಯಂತೆ ತಿನ್ನಲು ಕುಡಿಯಲು ಬಯಸುತ್ತದೆ. ಬೆಳೆಯುವ ಮಕ್ಕಳು ತಮಗೆ ಇಷ್ಟವಾದ ವಿಷಯವನ್ನು ಮನಸ್ಸಿನಿಂದ ವಿಷಯವನ್ನು ಮನಸ್ಸಿನಿಂದ ಮಾಡುತ್ತಾರೆ. ಆಟವೇ ಆಗಿರಲಿ ಬೇರೆ ಬೇರೆ ವಿಷಯಗಳೇ ಆಗಿರಲಿ.

    ಮದುವೆಯಾದ ಮೇಲೆ ಎಲ್ಲ ಸಂಬಂಧಗಳನ್ನ ತೊರೆದು ಕೇವಲ ತನ್ನ ಹೆಂಡತಿ ತನ್ನ ಗಂಡ ಅಂತ ಬದುಕಿದರೆ ಸಾಕೇ? ಸಂಸಾರದ ಜವಾಬ್ದಾರಿಯತ್ತ ತಮ್ಮ ಕನಸುಗಳನ್ನು, ಕ್ಷಮತೆಯನ್ನು ಗಂಟು ಕಟ್ಟಬೇಕೇ? ವಯಸ್ಸಾದ ಮೇಲೆ ಅವರ ವಿಚಾರಗಳಿಗೆ, ಆಸೆಗಳಿಗೆ ರೆಕ್ಕೆಪುಕ್ಕ ಬೇಡವೇ?

    ಹೀಗೆಲ್ಲ ಯೋಚನೆ ಮಾಡುತ್ತಾ ಹೋದಂತೆ ಭಾಸವಾಗುವುದು ಒಂದು ವಿಚಾರ. ಅದು ಸಂಬಂಧಗಳಲ್ಲಿ ಸ್ವಾತಂತ್ರ್ಯದ ತುಣುಕು. ಅಂದರೆ ಉದಾಹರಣೆಗೆ, ಮಕ್ಕಳೊಂದಿಗೆ ಹೊರಗಡೆ ಹೋದಾಗ ಅವರಿಗೆ ಸ್ವತಂತ್ರವಾಗಿ ತಮಗೆ ಬೇಕಾಗುವ ಹಣ್ಣುಗಳನ್ನು ಆಯ್ಕೆ ಮಾಡಲು ಬಿಡಿ. ಅವರ ಆಯ್ಕೆ ತಪ್ಪಿದ್ದಲ್ಲಿ ತಿದ್ದಿ ಹೇಳುವುದು ನಮ್ಮ ಕೈಯಲ್ಲಿ ಇರುತ್ತೆ. ಆದರೆ ಅವರ ವಯಸ್ಸಿಗೆ ತಕ್ಕಂತೆ ಒಳ್ಳೆಯದು-ಕೆಟ್ಟದ್ದು ಯೋಚನೆ ಮಾಡುವ ಶಕ್ತಿ ಅವರಲ್ಲಿ ಬೆಳೆಯಲು ಸಹಕರಿಸುವುದೇ ಸ್ವಾತಂತ್ರ್ಯದ ಮಾನ್ಯತೆ ಇಲ್ಲಿ. ಯೋಚನಾಶಕ್ತಿ ಜೊತೆ ಸರಿ-ತಪ್ಪುಗಳ ತಿಳಿವಳಿಕೆಯನ್ನು ಗ್ರಹಿಸುವಿಕೆಯೇ ಸ್ವಾತಂತ್ರ್ಯ.

    ಅದೇರೀತಿ ಮದುವೆಯಾದ ಮೇಲೆ ಗಂಡ ಹೆಂಡತಿ ಅವರವರ ಇಷ್ಟ ಕಷ್ಟಗಳಿಗೆ ಮಾನ್ಯತೆ ನೀಡಬೇಕು. ಸ್ವಲ್ಪ ಸಮಯ ತಮ್ಮ ಸಂಬಂಧದ ಜೊತೆ ಅವರ ಸ್ವಂತ ವಿಚಾರ ಹಾಗೂ ಕೆಲಸಗಳನ್ನು, ಹವ್ಯಾಸಗಳನ್ನು ಮಾಡಲು, ಜೊತೆಗಾರರನ್ನು ಭೇಟಿಯಾಗಲು ಸಮಯ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಗಳನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಭರದಲ್ಲಿ ಕಾಲ ಕಳೆದಂತೆ ಬೇಸರದ ಸ್ವರೂಪದಲ್ಲಿ ಕೂಪಮಂಡೂಕದ ತರಹ ಆಗಿ ಹೋಗುವುದು.

    ಹೀಗೆ ಯಾವುದೇ ಸಂಬಂಧಗಳಲ್ಲಿ ಆಗಲಿ ಪ್ರತಿಯೊಬ್ಬರಿಗೂ ಅವರದೇ ಆದ ಸ್ವತಂತ್ರ ವಿಚಾರ ಜೀವನಶೈಲಿಗೆ ಜಾಗ ಬಿಡಲೇಬೇಕು. ಅದರಿಂದ ಕೌಶಲ್ಯದ ಅಭಿವೃದ್ಧಿ ಆಗುವುದಲ್ಲದೆ, ಮಾನಸಿಕವಾಗಿ, ಭಾವನಾತ್ಮಕವಾಗಿ ಮನುಷ್ಯ ಹೆಚ್ಚು ದೃಢವಾಗುತ್ತಾನೆ. ಆದರೆ ಸ್ವಾತಂತ್ರ್ಯದ ದುರುಪಯೋಗ ಮಾತ್ರ ಸಲ್ಲದು.

    Photo by JOSHUA COLEMAN on Unsplash

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    ಶಿಲ್ಪಗಳು ಗೊತ್ತು ಶಿಲ್ಪಿ ಗೊತ್ತಾ

    ಬಳಕೂರು ವಿ. ಎಸ್ . ನಾಯಕ

    ಪ್ರತಿಯೊಬ್ಬರೂ ಕೂಡ ತಮ್ಮ ಜೀವಿತದ ಅವಧಿಯಲ್ಲಿ ಏನನ್ನಾದರೂ ಸಾಧನೆಯನ್ನುಮಾಡಿರುತ್ತಾರೆ .ಅದರಲ್ಲಿ ಕೆಲವೊಂದು ಮಾತ್ರ ನಮ್ಮ ನೆನಪಿನ ಪುಟದಲ್ಲಿರುತ್ತದೆ. ಕವಿ ವಾಣಿಯಂತೆ ನಾವು ಸತ್ತು ಬದುಕಬೇಕು ಎಂದು ಹೇಳುತ್ತಾರೆ ಅಂದರೆ ಸತ್ತ ಮೇಲೂ ನಮ್ಮ ಸಾಧನೆಯ ಕಾರ್ಯ ಎಲ್ಲರ ನೆನಪಿನಲ್ಲಿ  ಚಿರಸ್ಥಾಯಿ ಆಗಬೇಕು ಎಂದುಕೊಳ್ಳುತ್ತಾರೆ .

    ಒಂದು ಕುಟುಂಬದ ವ್ಯವಸ್ಥೆಯ ಅಡಿಯಲ್ಲಿ ಬದುಕುತ್ತಿರುವವರು ಒಬ್ಬರಿಗೊಬ್ಬರು ಅಷ್ಟೊಂದು ಪ್ರಿಯರಾಗಿರುತ್ತಾರೆ.  ಅವರ ಅಕಾಲಿಕ ಸಾವು ಅವರಿಗೆ ಮರೆಯಲು ಸಾಧ್ಯವಿಲ್ಲ. ಆದರೆ ಅವರು ನಮ್ಮೊಂದಿಗೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುವವರಿಗೇನು ಕಡಿಮೆಯಿಲ್ಲ .

    ಹಾಗೆ ಇಲ್ಲಿಯ ಒಂದು ಕುಟುಂಬ ಶ್ರೀನಿವಾಸ ಗುಪ್ತಾ.   ಅವರ ಮಡದಿ ಮಾಧವಿ ಅಕಾಲಿಕ ಮರಣಕ್ಕೆ ಒಳಪಟ್ಟಾಗ ಇಷ್ಟು ವರ್ಷ ನೋಡಿದ ಕಣ್ಣುಗಳಿಂದ ಮರೆಯಲಾರದ ಸ್ಥಿತಿ .ಅವರ ಮಕ್ಕಳಿಗೂ ಕೂಡ ಆಗಾಗ ಅವರ ನೆನಪು ಕಾಡುತ್ತಿತ್ತು. ಹಾಗಾದರೆ ಏನಾದ್ರೂ ಮಾಡಿ ಅವರ ನೆನಪನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಅವರ ಶಿಲ್ಪವನ್ನೋ ಅಥವಾ ಚಿತ್ರವನ್ನೋ  ಬಿಡಿಸಬೇಕೆಂದುಕೊಂಡಿದ್ದರು.

    ಶ್ರೀಧರ ಮೂರ್ತಿ. ಅವರ ಕಲೆಯಲ್ಲಿ ಮೂಡಿ ಬಂದ ಮಾಧವಿ ಅವರ ಶಿಲ್ಪ

    ಆದ್ರೆ ಶಿಲ್ಪದಲ್ಲಿ  ಅಥವಾ ಚಿತ್ರದಲ್ಲಿ ಎಲ್ಲವನ್ನೂ ಚಿತ್ರಿಸಿ ಮೂಡಿಸಬಹುದು ಆದರೆ ಅವರು ನಮ್ಮ ಜೊತೆಯಾಗಿ ಇದ್ದ ಹಾಗೇ ಅನಿಸುವುದಿಲ್ಲ ಎಂಬ ಭಾವನೆ ಅವರಿಗಿತ್ತು.

    ಹೀಗಾಗಿ ಅವರು ಸೂಕ್ತ ಕಲಾವಿದರ ಹುಡುಕಾಟ ನಡೆಸಿದರು. ಆಗ ಅವರ ನೆನಪಿಗೆ ಬಂದದ್ದು ಶ್ರೀ ತೋಂಟದಾರ್ಯ ಸ್ವಾಮೀಜಿಯವರ ಮೂರ್ತಿ ಮಾಡಿದ ಶಿಲ್ಪಿ ಶ್ರೀಧರ ಮೂರ್ತಿ. ಶಿಲ್ಪಿ ಶ್ರೀಧರ್ ಅವರು ಇವರ ಬೇಡಿಕೆ ಆಸಕ್ತಿಯನ್ನು ಗಮನಿಸಿ ಏನನ್ನಾದರೂ ಹೊಸತನದ ಹುಡುಕಾಟದಲ್ಲಿ ಇದ್ದ ಅವರಿಗೆ ಸಿಲಿಕಾನ್ ರಬ್ಬರ್ ಬಳಸಿ ಒಂದು ಸುಂದರವಾದ ಅದೇ ರೀತಿ ಹೋಲುವ ಕಲಾಕೃತಿ ಮಾಡಲು ಆರಂಭಿಸಿದ್ದರು.  ಸುಮಾರು ಹದಿನೈದು ಕಲಾವಿದರ ಶ್ರಮ ಶ್ರೀಧರ ಮೂರ್ತಿಯವರ ನೇತೃತ್ವದಲ್ಲಿ ಸುಮಾರು 4 ತಿಂಗಳುಗಳ ಕಾಲ ಈ ಪ್ರತಿಮೆ ಮಾಡಲು ಬೇಕಾಯಿತು. ಮಾಧವಿಯವರ ಈ ಪ್ರತಿಮೆ ನೋಡಿದರೆ ಸಾಕ್ಷಾತ್ ಮಾಧವಿಯವರೀ ಬಂದು  ಆಸೀನರಾಗಿದ್ದಾರೆ . ಆ ನಗು ಮುಖ, ನೋಟ  ವೇಷಭೂಷಣ ಎಲ್ಲವೂ ಯಾರೂ ಕೂಡ ಶಿಲ್ಪವೆಂದು ತಿಳಿಯಲು ಸಾಧ್ಯವಿಲ್ಲ

    ಮನೆತನವೆಲ್ಲ ಕಲಾವಿದರೇ

    ಶ್ರೀಧರಮೂರ್ತಿಯವರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು .ಖ್ಯಾತ ಶಿಲ್ಪಿ ಶ್ರೀ ಕಾಶೀನಾಥರವರ ಮಗ .ಇವರ ಮನೆತನವೆಲ್ಲ ಕಲಾವಿದರೇ. ಇವರ ಚಿಕ್ಕಪ್ಪ ನಾರಾಯಣ್ ರಾವ್  ಕಾವಟೇಕರ್ ಕೂಡ ಪ್ರಸಿದ್ಧ ಶಿಲ್ಪಿಗಳು.

    ನಾವು ಪ್ರವಾಸಿ ತಾಣಗಳನ್ನು ಭೇಟಿ ಕೊಟ್ಟಾಗ ಅದರಲ್ಲಿಯೂ ಮುರುಡೇಶ್ವರ ನೂರ ಇಪ್ಪತ್ತಮೂರು ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಉತ್ತರ ಕನ್ನಡ ಜಿಲ್ಲೆಗೆ ಮುಕುಟ ಪ್ರಾಯವಿದ್ದಂತೆ. ತಪೋಭಂಗಿಯಲ್ಲಿ ಕುಳಿತಿರುವ ಶಿವನ ಮೂರ್ತಿಯು ಜಗತ್ಪ್ರಸಿದ್ಧವಾಗಿದೆ. ಈ ಮೂರ್ತಿಯ ಕೆಳಭಾಗದಲ್ಲಿ ಒಂದು ಗುಹೆಯಲ್ಲಿ ಭೂ ಕೈಲಾಸದ ಕಥಾವಳಿಯನ್ನು ಸಾರುವ ಶಿಲ್ಪಗಳು ನಿಜಕ್ಕೂ ವಿಭಿನ್ನ ಸಂದೇಶವನ್ನು ಕೊಡುತ್ತದೆ.  ಅದರ ಪಕ್ಕದಲ್ಲಿ ಶ್ರೀಕೃಷ್ಣನ ಗೀತೋಪದೇಶದ ಪ್ರತಿಮೆ ಸಿದ್ಧವಾಗಿದ್ದು ಅದಕ್ಕೆ ಬಂಗಾರದ ವರ್ಣ ಲೇಪನ ಮಾಡಲಾಗಿದೆ .ಇದರ ಜೊತೆಗೆ ವಿಭಿನ್ನ ದೃಶ್ಯಕಾವ್ಯವನ್ನು ನೆನಪು ಮಾಡುವ ಲಂಡನ್ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಡದಲ್ಲಿ albert embankment  ಪ್ರದೇಶದಲ್ಲಿ ನಿರ್ಮಿಸಿರುವ ಬಸವಣ್ಣನವರ ಪ್ರತಿಮೆ ಲೋಕ ಪ್ರಸಿದ್ಧಿಯಾಗಿದೆ. . ಬೆಂಗಳೂರಿನ ಕೆಂಪ್ ಪೋರ್ಟ್ ನಲ್ಲಿ ಇರುವ ಶಿವನ ವಿಗ್ರಹ, 2004ನಲ್ಲಿ ನಿರ್ಮಿಸಿದ ಜಬಲ್ಪುರದ ನೂರು ಅಡಿ ಎತ್ತರದ ಆಂಜನೇಯ ವಿಗ್ರಹ,  ಸೂರತ್ ನಲ್ಲಿ 85 ಅಡಿ ಎತ್ತರದ ಕೈಲಾಸವಾಸಿ ಶಿವನ  ವಿಗ್ರಹ,  ಬಸವಕಲ್ಯಾಣದ ಶಿವನು ಕುಳಿತ ಭಂಗಿಯಲ್ಲಿರುವ ಶಿಲ್ಪಾ . ಕೇಂದ್ರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಿಕ್ಕಿಂನಲ್ಲಿ ಹನ್ನೆರಡು ಜ್ಯೋತಿರ್ಲಿಂಗ ಮಧ್ಯೆ ಇರುವ  ಶಿವನ ವಿಗ್ರಹ , ಗದಗದ ತೋಂಟದಾರ್ಯ ಮಠದ ಆವರಣದಲ್ಲಿ 75 ಅಡಿ ಎತ್ತರದ ಲೋಟಸ್ ದೇವಾಲಯ ,ಬೆಂಗಳೂರಿನ ನೆಲಮಂಗಲದಲ್ಲಿ ಗೀತೋಪದೇಶದ ಕಾಂಕ್ರೀಟ್ ವಿಗ್ರಹ ,ಹೀಗೆ ಬಹಳಷ್ಟು ಕಲಾಲೋಕವನ್ನೇ ಸೃಷ್ಟಿಸಿದ್ದಾರೆ .

    ಈಗ ಬೆಂಗಳೂರಿನಲ್ಲಿ ಬೊಂಬೆಮನೆ ಕಲಾ ಗ್ಯಾಲರಿ ಸ್ಥಾಪಿಸಿ ವಿಭಿನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ ಇವರ ಪ್ರಕಾರ ಯಾವುದೇ  ಕಲಾಕೃತಿ ರಚಿಸುವಾಗ ಮೂಲ ವಿಷಯ ಸರಿಯಾಗಿ ಗ್ರಹಿಸಬೇಕು ಆಗಿದೆ ಮಾತ್ರ ಉತ್ತಮ ಕಲಾಕೃತಿ ಮೂಡಿ ಬರುತ್ತದೆ.  ಸುಮಾರು 30 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ಶ್ರೀಧರ ಅವರಿಗೆ ಹೃದಯಾಂತರಾಳದ ನಮನಗಳು. 

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸಕರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಚೀನಾದ ಗಡಿ ತಂಟೆಗೆ ಅಸಲಿ ಕಾರಣ

    ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯಾವುದೇ ಬಿಕ್ಕಟ್ಟುಗಳಿಗೆ ನಾನಾ ಆಯಾಮಗಳಿರುತ್ತವೆ. ಇವುಗಳ ಪೈಕಿ ಭಾರತ-ಚೀನಾ ನಡುವಿನ ಈಗಿನ ಸಂಘರ್ಷ ಕೂಡ ಸೇರುತ್ತದೆ. ಹಾಗಾದರೆ, ಜಗತ್ತೇ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ (ಮುಖ್ಯವಾಗಿ ಕೋವಿಡ್ -19ನಿಂದ ಆದ ಸಮಸ್ಯೆ) ಯಾಕೆ ಭಾರತದ ಗಡಿಯನ್ನು ಅತಿಕ್ರಮಿಸಲು ಮುಂದಾಯಿತು ?  ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ ಮತ್ತು ಸರಳವಾಗಿ ಹೇಳುವಂತೆಯೂ ಇಲ್ಲ. ಇದಕ್ಕೆ ಸುದೀರ್ಘ ವಿವರಣೆ ಬೇಕಾಗುತ್ತದೆ.

    ಚೀನಾದಲ್ಲಿ ಆಹಾರ ಅಭಾವ

    ಇತ್ತೀಚೆಗಷ್ಟೇ ಅಂದರೆ ಮೇ ತಿಂಗಳಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ “ಅಪರೇಶನ್ ಕ್ಲೀನ್ ಪ್ಲೇಟ್” ಎಂಬ ಯೋಜನೆಯನ್ನು ಘೋಷಿಸಿದ್ದರು. ಆಹಾರವು ವ್ಯರ್ಥ ಮಾಡಬಾರದು ಎಂಬುದು ಇದರ ಹಿಂದಿನ ಉದ್ದೇಶ.

    ಹಿಂದೆ 1949ರಲ್ಲೂ ಚೀನಾ, ಅತಿಯಾದ ಆಹಾರ ಅಭಾವವನ್ನು ಎದುರಿಸಿತ್ತು. ಆಗ ಲಕ್ಷಾಂತರ ಜನರು ಹಸಿವಿನಿಂದಲೇ ಸಾವನ್ನಪ್ಪಿದ್ದರು. ಬಳಿಕ 1962ರಲ್ಲಿ ಮಾವೋ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಆಹಾರ ಸಿಗದೆ ಆಗಲೂ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ತನ್ನ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು, ಮಾವೋ ಭಾರತದ ಗಡಿ ಭಾಗವನ್ನು ಅತಿಕ್ರಮಿಸಿ, ಅತಿಯಾದ ರಾಷ್ಟ್ರೀಯತೆ ಭಾವನೆಯನ್ನು ಚೀನೀಯರಲ್ಲಿ ಕೆರಳಿಸುವ ಅಥವಾ ಪ್ರಚೋದಿಸುವ ಮೂಲಕ ತಮ್ಮ ಪಟ್ಟವನ್ನು ಗಟ್ಟಿ ಮಾಡಿಕೊಂಡರು. ಆದರೆ ಅದಕ್ಕೆ ಬಲಿಪಶುವಾಗಿದ್ದು ಭಾರತ ಎಂಬುದು ಈಗ ಇತಿಹಾಸ.

    ಈಗ ಮತ್ತೆ ಚರಿತ್ರೆ ಮರುಕಳಿಸಿದೆ. ಅಧ್ಯಕ್ಷ ಮಾವೋ ಬದಲು ಜಿನ್ ಪಿಂಗ್ ಅಧಿಕಾರದಲ್ಲಿದ್ದಾರೆ. ಆಂತರಿಕ ಭಿನ್ನಮತ, ವಿದೇಶಗಳ ರಾಜತಾಂತ್ರಿಕ ವೈಫಲ್ಯ ಮತ್ತು ಕಾಡುತ್ತಿರುವ ಬಡತನದಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಭಾರತದ ಗಡಿ ವಿವಾದವನ್ನು ಕೆಣಕುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ತೂಕದ ಮೇಲೆ ಆಹಾರ

    ಇದಕ್ಕೆ ಪುರಾವೆ ಇಲ್ಲದಿಲ್ಲ. ಚೀನಾದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಈಗ ತೂಕ ನೋಡಿ ಆಹಾರ ಒದಗಿಸುತ್ತಿದ್ದಾರಂತೆ. ಒಳಗೆ ನುಗ್ಗಿತ್ತಿದ್ದಂತೆ ಗ್ರಾಹಕರ ತೂಕವನ್ನು ನೋಡಲಾಗುತ್ತದೆ. ಬಳಿಕವಷ್ಟೇ ಅವರಿಗೆ ಸೂಕ್ತವಾದ ಆಹಾರದ ಮೆನು (ಪ್ರತ್ಯೇಕ-ಪ್ರತ್ಯೇಕವಾಗಿ) ಒದಗಿಸಲಾಗುತ್ತದೆ. 88 ಪೌಂಡ್ ಗಳಿಗಿಂತ ಕಡಿಮೆ ತೂಕ ಇರುವವರಿಗೆ ಬೀಫ್ ಮತ್ತು ಮೀನು, 175 ಪೌಂಡ್ ಗಳಿಗಿಂತ ಹೆಚ್ಚುವರಿಗೆ ಪೋರ್ಕ್ ಡಿಶ್ ಮಾತ್ರ ಒದಗಿಸಲಾಗುತ್ತದೆ. ಪ್ರತಿಯೊಂದು ವಿವರವೂ ಆಪ್ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗುತ್ತಲೇ ಇರುತ್ತದೆ.

    ಎನ್ -1, ಎನ್ -2 ಇತ್ಯಾದಿ ಡಿಶ್ ಗಳನ್ನು ಸೂಚಿಸಲಾಗುತ್ತದೆ. ಬೇಕಾದರೆ ತಿನ್ನಬಹುದು. ಇಲ್ಲವಾದರೆ ಬಿಡಬಹುದು. ಆದರೆ ರೆಸ್ಟೋರೆಂಟ್ ಮಾತ್ರ ಸರಕಾರದ ನಿಯಮವನ್ನು ಮೀರುವಂತಿಲ್ಲ. ಎಷ್ಟೆಂದರೂ ಅದು ಚೀನಾ ಅಲ್ಲವೇ ?

    ಚೀನಾದ ಸಮಸ್ಯೆ

    ಚೀನಾಕ್ಕೆ ಆಹಾರ ವಸ್ತು ಪೂರೈಸುವ ಪ್ರಮುಖ ದೇಶಗಳೆಂರೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ. ಆದರೆ ಇವುಗಳ (ಕೃಷಿ ಉತ್ಪನ್ನಗಳು ಸೇರಿದಂತೆ) ಮೇಲೆ ಈಗ ಚೀನಾ, ಶೇ. 80ಕ್ಕೂ ಹೆಚ್ಚು ಆಮದು ಶುಲ್ಕವನ್ನು ವಿಧಿಸಿದೆ. ಇದರಿಂದ ಸಹಜವಾಗಿಯೇ ಆಮದು ಕಡಿಮೆಯಾಗಿ, ಆಹಾರ ಧಾನ್ಯ ಅಥವಾ ವಸ್ತುಗಳ ಕೊರತೆ ಎದುರಾಗಿದೆ.

    ಆಸ್ಟ್ರೇಲಿಯಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಚೀನಾದ ಒಟ್ಟು ಕೃಷಿ ಮತ್ತು ಆಹಾರ ಸಾಮಗ್ರಿಗಳ ಆಮದಿನಲ್ಲಿ ಆಸ್ಟ್ರೇಲಿಯಾದ ಪಾಲು ಶೇ. 60-70. ಇದರ ಜತೆಗೆ ಕೆನಡಾ, ಆರ್ಜೆಂಟೀನಾ, ಫ್ರಾನ್ಸ್ ಮತ್ತು ಉಕ್ರೈನ್ ಮೇಲೆಯೂ ಅದು ಅವಲಂಬಿತವಾಗಿದೆ. ಈಗ ಅವುಗಳು ಹಿಂಜರಿಯುತ್ತಿರುವುದರಿಂದ ತನ್ನ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಭಾರತದ ಗಡಿ ಭಾಗದಲ್ಲಿ ಗದ್ದಲ ಎಬ್ಬಿಸಿ ಆ ಮೂಲಕ ಜನರಲ್ಲಿ ರಾಷ್ಟ್ರಪ್ರೇಮ ಭಾವನೆಯನ್ನು ಉತ್ತೇಜಿಸಿ, ನೈಜ ಸಮಸ್ಯೆಯನ್ನು ಮರೆ ಮಾಚುವ ಕೆಲಸಕ್ಕೆ ಮುಂದಾಗಿದೆ. ಕೋವಿಡ್ -19 ಜತೆಗೆ ಇದು ಸೇರಿಕೊಂಡರೆ ತನ್ನ ಪಟ್ಟ ಅಬಾಧಿತವಾಗುತ್ತದೆ ಎಂಬುದು ಜಿನ್ ಪಿಂಗ್ ಅಭಿಪ್ರಾಯ ಎಂದೇ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

    ಆಹಾರ ಬೆಲೆಯೇರಿಕೆ

    ಚೀನಾದ ಕೃಷಿ ಸಚಿವರ ಮಾತನ್ನೇ ನಂಬಬಹುದಾದರೆ ಆಫ್ರಿಕನ್ ಸ್ವೇನ್ ಫ್ಲೂನಿಂದಾಗಿ ಕನಿಷ್ಠವೆಂದರೂ 100 ದಶಲಕ್ಷ ಹಂದಿಗಳನ್ನು ಕೊಲ್ಲಲಾಗಿದೆ. ಇದರಿಂದಾಗಿ ಜುಲೈನಿಂದ ಆಹಾರ ಸಾಮಗ್ರಿ ಬೆಲೆಯಲ್ಲಿ ಶೇ. 13ರಷ್ಟು ಮತ್ತು  ಹಂದಿ ಮಾಂಸದ ಬೆಲೆ ಶೇ. 85ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಚೀನಾದ ಯಾಂಗ್ಟ್ಝ್ ನದಿಯಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದೆಗೆಡುವಂತೆ ಮಾಡಿದ್ದು, ಲಕ್ಷಾಂತರ ಜನರ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಏನೂ ಬೆಳೆಯಿಲ್ಲದಂತೆ ಆಗಿದೆ.

    ಚೀನಾದ ಅಧಿಕೃತ ಮಾಹಿತಿಯ ಪ್ರಕಾರ ಕಳೆದ ವರ್ಷದ ಜನವರಿ-ಜುಲೈ ಅವಧಿಗೆ ಹೋಲಿಸಿದರೆ ಈ ಬಾರಿ ದವಸ ಧಾನ್ಯಗಳ ಆಮದು ಶೇ. 22.7ರಷ್ಟು ಎರಿಕೆಯಾಗಿದೆ. ಗೋಧಿ ಆಮದು ಶೇ. 197ರಷ್ಟು ಹೆಚ್ಚಳವಾಗಿದೆ. ಜೋಳದ ಆಮದು ಶೇ. 23ರಷ್ಟು ಏರಿಕೆಯಾಗಿದೆ. ಇವೆಲ್ಲವೂ ಚೀನಾದ ಆಡಳಿತವನ್ನು ಕಂಗೆಡಿಸಿದ್ದು, ಜನರ ಗಮನವನ್ನು ಇದರಿಂದ ಬೇರೆಡೆಗೆ ಸೆಳೆಯಲು ಭಾರತದ ಮೇಲೆ ಶಸ್ತ್ರ ಝಳಪಿಸಲು ಮುಂದಾಗಿದೆ ತಜ್ಞರು ವಿಶ್ಲೇಷಿಸುತ್ತಾರೆ.

    ಕೊರೊನಾ ಹೇರ್ಕಟ್

    ಅಂತೂ ಇಂತೂ ಕಲಿಯುಗದ ಒಂದು ಪ್ರಮುಖ ವಿದ್ಯಮಾನವಾದ ಕೊರೊನಾ ಶಕೆಯ ಆರಂಭ ಕಾಲ ಮುಗಿದು ಇದು ಮಧ್ಯಕಾಲವೋ ಅಂತಿಮವೊ ಎಂಬ ಚಿಂತೆಯಲ್ಲಿರುವಾಗಲೇ ಸಲೂನೂ,ಸ್ಪಾ,ಪಾರ್ಲರ್ರುಗಳನ್ನು ತೆರೆಯಬಹುದು ಎನ್ನುವ ಸರ್ಕಾರದಿಂದ ಸುತ್ತೋಲೆ ಬಂದಾಗ ನನಗಂತೂ ಈ ಕೆಳಗಿನ ಸಂಗತಿಗಳು ಇನ್ನು ಮಿಸ್ ಆಗುತ್ತವಲ್ಲ ಅಂಥ ಅನ್ನಿಸಿದ್ದು ಸುಳ್ಳಲ್ಲ.

    ತಮ್ಮ ಪತಿದೇವರಿಗೋ, ಮಗನಿಗೋ, ಸೋದರರಿಗೊ ಹೇರ್ಕಟ್ ಮಾಡುತ್ತಿರುವ ಹೆಂಗೆಳೆಯರ ಅಪರೂಪದ ವಾಟ್ಸ್ ಆಪ್ ಸ್ಟೇಟಸ್ ಗಳನ್ನು ನೋಡುವ ಸೌಭಾಗ್ಯ ಇಲ್ಲದೇ ಹೋದದ್ದು ಮೊದಲ ನಷ್ಟ.

    ‘ಕೊರೊನಾ ಲುಕ್ಸ್’ಎನ್ನುವ ಕ್ಯಾಪ್ಷನ್ ಇಟ್ಟು  ಡಿಪಿಗೆ ಅಪ್ಟೇಡಿಟಿಸಲಾಗುತ್ತಿದ್ದ ಅಡ್ಡಾದಿಡ್ಡಿ ಗಡ್ಡದಾರಿ ಸ್ಪುರದ್ರೂಪಿಗಳನ್ನ  ಮತ್ತೆ ಮತ್ತೆ ಝೂಮಿಸಿ ಇವ ಹಿಂಗ ಚಂದವೋ, ಹಂಗೋ ಅನ್ನುವ ಮಹತ್ವದ ಪ್ರಶ್ನೆಗಳಿಗೆ ನಾವು ಗೆಳತಿಯರು ಚರ್ಚಿಸಿ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ನಿಂತದ್ದು ಎರಡನೇ ನಷ್ಟ.

    ನಮ್ ನಮ್ಮ ತಲೆಗೂದಲು ಉದುರುವುದೇ ಭಾರಿ ಚಿಂತೆಯಾಗಿದ್ದ ಕಾಲವೊಂದಿತ್ತು. ಆ ದುರಿತ ಕಾಲ ಕೊರೊನಾ ಭಾಗ್ಯದಲ್ಲಿ ಕಳೆದು ಹೋಗಿ ಮೂರನೇ ವಾರಕ್ಕೇ ಆರಿಂಚು ಬೆಳೆದ ತಮ್ಮ ಗಡ್ಡ ಮೀಸೆ ,ತಲೆಕೂದಲ ಸಾಮರ್ಥ್ಯ ಕಂಡು ನಿಬ್ಬೆರಗಾಗಿ ಇನ್ನೂ ಕೂದಲು ಉದುರುವ ಸಮಸ್ಯೆಗೆ ಕಾಸು ಖರ್ಚು ಮಾಡಬೇಕಿಲ್ಲ ಎಂದು ನಿಟ್ಟುಸಿರು ಬಿಡುವಾಗಲೇ ಈ ವೃತ್ತಿಯಲ್ಲಿ ಕೈ ತುಂಬಾ ಸಂಪಾದಿಸುತ್ತಿದ್ದವರು ಕಣ್ಕಣ್ಣು ಬಿಡುವಂತಾಗಿದ್ದು‌ ಮೂರನೇ ನಷ್ಟ.ಆದರೆ ಕೊರೊನಾ ಕಾಲದ ಭತ್ಯೆಯಾಗಿ ಈ ವೃತ್ತಿಯಲ್ಲಿನ ಶ್ರಮಿಕರಿಗೂ ತಲಾ ಇಂತಿಷ್ಟು ಎಂಬೊಂದು ಮೊತ್ತ ಸಮಾಜದ ಉಳಿದೆಲ್ಲ ಶ್ರಮಿಕರಂತೆ ಸಿಕ್ಕಿದ್ದು ಸಂತಸದ ಸುದ್ದಿ.

    ಕೊನೆಯದಾಗಿ ಒಂದು ಸಂತಸದ ಸಂಗತಿ.ಹೇಳೇ ಬಿಡ್ತೀನಿ.ಚಿಕ್ಕಂದಿನಲ್ಲಿ ಸದಾ ಅಪ್ಪನ ಮೊಡ್ಡು  ಕತ್ತರಿ ಜೊತೆಗೇ ಆಟವಾಡುತ್ತಾ ಸಿಕ್ಕಿದ ವೇಸ್ಟು ಪದಾರ್ಥಗಳನ್ನೆಲ್ಲಾ ಆ ಮೊಡ್ಡು ಕತ್ತರಿಯಿಂದ ತುಂಡುತುಂಡು ಮಾಡಲು ಯತ್ನಿಸಿ ,ಅಮ್ಮನಿಂದ ಸಾಕಷ್ಟು ಬೈಗುಳಗಳನ್ನೂ ಅದಕ್ಕಾಗಿ ಗಿಟ್ಟಿಸಿಕೊಂಡವಳು ನಾನು.ಯಾವುದನ್ನಾದರೂ ಒಂದು ಶೇಪಲ್ಲಿ ಕತ್ತರಿಸಬೇಕೆನ್ನುವ ನನ್ನ ಅದಮ್ಯ ಆಸೆಗೆ ಯಾರಾದಾದರೂ ಫಲಭರಿತ ಮಂಡೆ ಸಿಕ್ತದಾ ಅಂತ ಹುಡುಕಾಡ್ತಾ ಒಬ್ಬೊಳ್ಳೆ ಹೇರ್ ಸ್ಟೈಲಿಸ್ಟ್ ಆಗಬೇಕು ಎನ್ನುವ ನನ್ನ ಬಯಕೆ ಅಂತೂ ಇಂತೂ ಕೊರೊನಾ ಕಾಲದಲ್ಲಿ ಈಡೇರಿದೆ.

    ಈ ಕೊರೊನಾ ದುರಿತ ಕಾಲದಲ್ಲಿ ಸಲೂನಿನ ಸಹಯೋಗವಿಲ್ಲದೆ ವಿಪರೀತ ಬೆಳೆದ ತನ್ನ ತಲೆಗೂದಲ ಜೊತೆಗೆ ತಲೆಯನ್ನೂ ನೆಚ್ಚಿನ ತಂಗಿಯ ಕೈಗಿಟ್ಟು ನನ್ನಣ್ಣ ನಿರಾಂತಕದಲಿ ಅರೆಗಣ್ಣಾದದ್ದೆ  ತಡ.ನನಗೆ ಮರೆತೇ ಬಿಟ್ಟಿದ್ದ ಹಳೆಯ ಕನಸೊಂದು ಮತ್ತೆ ಸಾಕಾರವಾಗುತ್ತಿರುವ ಸಡಗರವಾಗಿ ಹೋಯಿತು.ಯಾವುದೋ ಸೌಭಾಗ್ಯ ಸಿಕ್ಕಂತಾಗಿ ಅಣ್ಣನ ತಲೆಗೂದಲನ್ನು ಒಮ್ಮೆ ಕೈಯಲ್ಲಿ ಹಾಗೆ ಹೀಗೆ ನೋಡಿ  ಅದರ ಲೆಂತೂ,ಡೆನ್ಸಿಟಿ,ಮೃದುತ್ವವನ್ನು ಪರೀಕ್ಷೆ ಮಾಡಿದೆ.ಹೀಗೆ ಸಲೂನಿನವರು ಮಾಡ್ತಾರೋ ಇಲ್ವೋ ಅದಂತೂ ಗೊತ್ತಿಲ್ಲ. ಆದರೆ ನಾನು ಮಾತ್ರಮಹಾ ಕಸುಬುದಾರಿಣಿಯಂತೆ ಸಿಕ್ಕಿದ ವಿಪುಲ ಕೇಶದ ಮಂಡೆಯನ್ನು ಆಚೀಚೆ ತಿರುಗಿಸಿ  ಸೂಕ್ಷ್ಮವಾಗಿ ಒಮ್ಮೆ ಗಮನಿಸಿ ಕೊಂಡೆ.ಆಮೇಲೆ ಅಣ್ಣನನ್ನು ಕೆಳಗೆ ಕೂರಿಸಿ ನಾನು ಅಂಗಳದ ಒಂದು ಕಟ್ಟೆಯ ಮೇಲೆ ಕುಳಿತು ಅವನ ತಲೆಗೂದಲಿಗೆ ಒಂದಿಷ್ಟು ನೀರು ಪ್ರೋಕ್ಷಿಸಿಕೊಂಡೆ.ಆಮೇಲೆ ಅಣ್ಣನಕೈಗೆ ಕೊಟ್ಟಿದ್ದ ಕನ್ನಡಿಯಲ್ಲಿ ಗಮನಿಸುತ್ತಾ ಒಂದು ಅಗಲ ಹಲ್ಲಿನ ಬಾಚಣಿಗೆಯಿಂದ ಸೈಡಿನ ಕೂದಲನ್ನು ಕತ್ತರಿಸಿದೆ.ಆಹಾ…ಮೊತ್ತ ಮೊದಲ  ಪ್ರಯತ್ನವೇ ಪರ್ಫೆಕ್ಟ್ ಎನಿಸಿ ನಾನಿನ್ನು ಜಗದ ಅತಿ ದೊಡ್ಡ ಕೇಶ ವಿನ್ಯಾಸಕಿ ಆಗೇ ಬಿಟ್ಟೆ ಎನ್ನುವ ಹೆಮ್ಮೆ ಯಲ್ಲಿ ಹಿಂಬದಿಯ ಕೂದಲನ್ನೂ ಹಾಗೇ ಬಾಚಣಿಗೆಯಿಂದ ಮೇಲೆತ್ತಿ ಕತ್ತರಿಸಿದೆ.ಹಾಗೇ ಈ ಬದಿಯದ್ದೂ.

    ಅಣ್ಣ ಹಾಗೇ ಕನ್ನಡಿಯಲ್ಲಿ ಗಮನಿಸುತ್ತಿದ್ದವ ‘ಏನೇ ನೀನು’ ಅಂದಿದ್ದಕ್ಕೆ ನಾನೇನೂ ಕಮ್ಮಿಯಿಲ್ಲದವಳಂತೆ”ಹೆಂಗೆ ನಾವು” ಎಂದೆ.ಮೊದಲಿಗೆ ಮಂಡೆಯ ಸುತ್ತಲಿನ ಕೂದಲನ್ನು ಕತ್ತರಿಸಬೇಕೆಂದು ಯಾವ ಹೇರ್ ಹೋಸ್ಟೆಸ್ ಯೂನಿವರ್ಸಿಟಿಯಲ್ಲೂ ಕಲಿತಿಲ್ಲವಾದರೂ ನಾನು ಮಾತ್ರ ಸುತ್ತಲೂ ಕಲಾಯಿ ಹೊಡೆಯುವವಳಂತೆ ಕತ್ತರಿಸಿ ಆಮೇಲೆ ಮೇಲೆ ಮೇಲೆ ಹೋಗಲಾರಂಬಿಸಿದೆ.ಅದೇನೋ ಗೊತ್ತಿಲ್ಲ.ಬಹಳ ಚೆನ್ನಾಗಿ ಹೇರ್ಕಟ್ ಮಾಡ್ತಿದ್ದೀನಿ ಎನ್ನುವ ಆತ್ಮವಿಶ್ವಾಸವೋ ,ಹುಸಿಜಂಭವೋ ಆಗಲೇ ನನ್ನ ಬೆರಳುಗಳಿಗೆ ಬಂದಾಗಿತ್ತು.ಅಂತೂ ಕತ್ತರಿಸುತ್ತಾ ಹೋದೆ.

    ಅಣ್ಣ ಮಾತ್ರ ಹೇಗೂ ವರ್ಕ್ ಫ್ರಮ್ ಹೋಮ್ ಇದ್ದುದ್ದರ ಜೊತೆಗೆ ಕೊರೊನಾ ಕಾರಣ ದಿಂದಾಗಿ ಯಾವ ಅತಿಥಿ ಅಭ್ಯಾಗತರ ಭೇಟಿಯ ,ಮುಖಾಮುಖಿಯಸಾಧ್ಯತೆಗಳೂ ಮುಚ್ಚಿದ್ದರಿಂದ ತಂಗಿಯ ಕೈಗೆ ತನ್ನ ಕೇಶಭರಿತ ಬುರುಡೆ ಕೊಟ್ಟು ಕುಳಿತು ಬಿಟ್ಟಿದ್ದ.ನಾನು ಆಗಾಗ  ಸ್ಪೆಷಲ್ ಸ್ಕಿಲ್ಲಿನ ಸಲೂನಿನವನ ಥರ ಸೈಡ್ ಎಷ್ಟು ಗಿಡ್ಡ ಇರಬೇಕು ಅಣ್ಣಾ?ಹಿಂದೆ ಇನ್ನೂ ಸ್ವಲ್ಪ ಶಾರ್ಟ್ ‌ಮಾಡಲಾ…ಈಗ ನೋಡ್ಕೋ..ಅಂತೆಲ್ಲಾ ಮಾತಾಡ್ತಾ ಕಚಕಚಕಚ ಕತ್ತರಿ ಆಡಿಸಿ,ಟ್ರಿಮ್ ಮಾಡಿ  ಅಣ್ಣನಿಗೆ ಕಣ್ಣು ಬಿಡಲು ಹೇಳಿದೆ.

    ಸೇಮ್ ಟು ಸೇಮ್ಮ್  ಖಾಲಿ ಬಿಳಿಮಡಿಕೆ ಥರ ಕಾಣ್ತಿತ್ತು ನನ್ನ ಕೈ ಚಳಕಕ್ಕೆ ಸಿಕ್ಕಿದ ಅಣ್ಣನ ಮಂಡೆ. ಕನ್ನಡಿ ಕೊಟ್ಟಾಗ ಒಂಥರ ಮುಖ ಮಾಡಿಕೊಂಡ ಅಣ್ಣ  ದೇವರು ಕೊಟ್ಟ ತಂಗಿ ಮಾಡಿದ ಹೇರ್ಕಟ್ಟನ್ನು  ಅಲ್ಲಗಳಲೆಯೂ ಆಗದೇ ಒಪ್ಪಲೂ ಆಗದೇ ‘ಬೆಳೆಯುತ್ತೆ ಬಿಡು.ಇನ್ನೆರಡು ದಿನದಲ್ಲಿ’ ಅಂತ ಸಮಾಧಾನ ಮಾಡಿಕೊಂಡ.
    ಆದರೆ ..ನನಗೇ ಸ್ಪುರದ್ರೂಪಿ ಅಣ್ಣನ ಚಲುವು ನನ್ನ  ಕೈಚಳಕಕ್ಕೆ ಬಲಿಯಾದ ವಿಚಿತ್ರ ಹೇರ್ಸ್ಟೈಲನ್ನಿಂದಾಗಿಒಂದು ವಾರವಾದರೂ ನೋಡಲಾಗದೇ ‘ಅಣ್ಣಾ…ಟೋಪಿ ಹಾಕಳೋ..ಚೆನ್ನಾಗಿ ಕಾಣ್ತಿಯಾ’ ಅಂತ ಟೋಪಿ ಹಾಕಲು ನೋಡಿದೆ.ಆದರೆ ಅಣ್ಣಾ ಮಾತ್ರ ಸ್ಥಿತಪ್ರಜ್ಞನಂತೆ “ಇಟ್ಸ್ ಓಕೆ ಬಿಡಮ್ಮಾ.ಈಗಾಗಲೇ ನೀ ಹಾಕಿರೋ ಟೋಪಿ ಚೆನ್ನಾಗೇ ಇದೆ.ಇದಕ್ಕೆ ಕೊರೊನಾ ಹೇರ್ಕಟ್ ಅಂತ ಹೊಸ ಹೆಸರಿಡಬಹುದು”ಅಂತ ಜೋರು ನಕ್ಕಿದ್ದು ಮಾತ್ರ ಯಾರ ತಲೆಗೂದಲನ್ನಾರೂ ಒಂದು ಶೇಪಿಗೆ ಕತ್ತರಿಸಬಲ್ಲೆ ಎನ್ನುವ ಕನಸನ್ನು ಈಡೇರಿಸಿದೆ.

    ಕೊರೊನಾ ಭಾಗ್ಯ ಕಾಲದಲ್ಲಿ ಯಾರು ಯಾರೋ ಏನೇನೋ ಸಂಪಾದಿಸಿಕೊಂಡು ತಮ್ಮ ‌ಕಿಸೆಯನ್ನೂ, ಖಾತೆಯನ್ನೂ ತುಂಬಿಸಿಕೊಂಡ ಸಂಗತಿ ಆಗಾಗ ಕಿವಿ ಮೇಲೆ ಬೀಳುತ್ತಲೆ ಇರುವಾಗ ಅಣ್ಣನಿಗೆ ಹೇರ್ಕಟ್ ಮಾಡಿದ ಸಡಗರವನ್ನು ನನಗೆ ಕೊರೊನಾ ಕೊಟ್ಟಿದೆ.ಜೊತೆಗೆ ಅಣ್ಣನಿಗೆ ತನ್ನ ದೇವರು ಕೊಟ್ಟ ತಂಗಿಯ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ದೃಢಪಡಿಸಿ ನನ್ನ ಜವಬ್ದಾರಿಯನ್ನೂ ಹೆಚ್ಚಿಸಿದೆ.ಅದಕ್ಕಾಗಿ…

    ಥ್ಯಾಂಕ್ಯೂ ಕೊರೋನಾ.

    ಟಾಂಕೀಸ್ ಅಣ್ಣಾ…!!

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಚ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ‘ಕಪ್ಪು ಸೈನಿಕರ’ ಅಮೋಘ ಪರಿಸರ ಸೇವೆ

    .

    ಹಸಿ ಕಸದಿಂದ ಲವಣಾಂಶಭರಿತ ಗೊಬ್ಬರವನ್ನು ಉತ್ಪಾದಿಸಲು ಯಾವುದೇ ಯಂತ್ರ, ವಿದ್ಯುತ್, ಇಂಧನ, ಬಂಡವಾಳ ಹೂಡಿಕೆಯ ಅವಶ್ಯಕತೆ ಇಲ್ಲ. ಮನೆಯಲ್ಲೇ ‘ಕಪ್ಪು ಸೈನಿಕರಿಗೆ’ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ಸಾಕು..! ನಿಮ್ಮ ಕೆಲಸ ಸಲೀಸು

    ಹೆಸರಿಗೆ ತಕ್ಕಂತೆ ಆ ಸೈನಿಕರು ನೋಡಲು ಕಪ್ಪು ಬಣ್ಣ. ಆದರೆ ಅವರು ಇತರ ಸೈನಿಕರುಗಳಂತೆ ಗನ್ ಹಿಡಿದು ದೇಶ ಅಥವಾ ದೇಶದ ಗಡಿಯನ್ನು ರಕ್ಷಿಸುವ ಕೆಲಸ ನಿರ್ವಹಿಸುವುದಿಲ್ಲ. ಆದರೆ ದೇಶ, ಗಡಿ, ನಾಡು ಯಾವುದರ ಸೀಮೆಗೂ ಒಳಪಡದೇ ನಿಸರ್ಗದಲ್ಲಿ ಒಂದು ಅಪೂರ್ವವಾದ ಸೇವೆಯನ್ನು ನೀಡುತ್ತಾರೆ. ಆ ಸೇವೆಯು ಪರಿಸರಕ್ಕೆ ಪೂರಕವಾಗಿರುವುದರಿಂದ ಪರಿಸರಸ್ನೇಹಿ ಸೇವೆ ಅಂತ ಹೇಳಬಹುದು.

    ತಮ್ಮದೇ ಅದ ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಈ ಕಪ್ಪು ಸೈನಿಕರು ಸ್ವಚ್ಛಂದವಾಗಿ ಗಾಳಿಯಲ್ಲಿ ಹಾರಾಡಬಲ್ಲರು. ಹಾರಾಡಲು ರೆಕ್ಕೆ ಇರಬೇಕಲ್ಲವೇ? ತಮ್ಮಲ್ಲಿರುವ ಒಂದು ಜೊತೆ ರೆಕ್ಕೆಯ ಸಹಾಯದಿಂದ ಈ ಕಪ್ಪು ಸೈನಿಕರು
    ಗಾಳಿಯಲ್ಲಿ ‘ ಝು೦ಯ್’ ಎಂದು ಹಾರಾಡುವರು. ಇದು ಯಾವ ಸೈನಿಕರಪ್ಪ ರೆಕ್ಕೆ ಬಿಚ್ಚಿ ಗಾಳಿಯಲ್ಲಿ ಹಾರಾಡುವವರು ಎಂದು ಗೊಂದಲಕ್ಕೊಳಗಾಗದಿರಿ. ಇಲ್ಲಿ ನಾವು ಮಾತಾನಾಡುತ್ತಿರುವ ಆ ಸೈನಿಕರು ಮತ್ತ್ಯಾರೂ ಅಲ್ಲ, ಒಂದು ಕೀಟ.

    ‘ಓ , ಕೀಟವಾ…?’ ಎಂದು
    ಮೂಗು ಮುರಿದು ಅಸಡ್ಡೆ ಮಾಡುವ ಕೀಟ ಇದಲ್ಲ. ಅದರ ಸೇವೆ ಮತ್ತು ಅದರಿಂದ ನಮಗಾಗುವ ಪ್ರಯೋಜನಗಳನ್ನು ನೋಡಿ ಒಂದು
    ದೊಡ್ಡ ಸಲಾಮ್ ಹೊಡೆಯಬೇಕಾದ ಕೀಟ ಇದು. ಅದಕ್ಕೆ ಇಂಗ್ಲಿಷ್ ಭಾಷೆಯ ಚೆಂದದ ಹೆಸರು ‘ಬ್ಲಾಕ್ ಸೋಲ್ಜಿಯರ್ ಫ್ಲೈ’;
    ಕನ್ನಡದಲ್ಲಿ ‘ಕಪ್ಪು ಸೈನಿಕ ಕೀಟ’ ಅಥವಾ ‘ಕಪ್ಪು ಸೈನಿಕ ನೊಣ’ ಅಂತ ಹೆಸರಿಸಬಹುದು.

    ನೊಣ ತರವೇ ಕಾಣುವ ಕೀಟ

    ನೋಡಲು ನೊಣ ತರವೇ ಕಾಣುವ ಈ ಕೀಟ
    ಸುಮಾರು ೧.೬ ಸೆಂ. ಮೀ. ಉದ್ದವಿದ್ದು ಗಾತ್ರದಲ್ಲಿ ನೊಣಗಿಂತ ಸ್ವಲ್ಪ ದೊಡ್ಡದಾಗಿದೆ. ೧೭೫೮ ರಲ್ಲಿ ಅಧುನಿಕ ವರ್ಗೀಕರಣಶಾಸ್ತ್ರದ
    (Taxonomy) ಪಿತಾಮಹ ಕಾರ್ಲ್ ಲಿನ್ನೆಯಸ್ ಅವರು ಇದಕ್ಕೆ ನೀಡಿರುವ ವೈಜ್ಞಾನಿಕ ಹೆಸರು ಹರ್ಮೆಶಿಯ ಇಲ್ಯೂಸೆನ್ಸ್ (Hermetia
    illucens).

    ಇತರ ಕೆಲವು ಕೀಟಗಳಂತೆ ಇದು ಯಾವುದೇ ಬೆಳೆಗಳನ್ನು ತಿಂದು ಹಾಳು ಮಾಡುವುದಿಲ್ಲ ಅಥವಾ ನೊಣ, ಸೊಳ್ಳೆಗಳಂತೆ ಯಾವುದೇ
    ಸಾಂಕ್ರಾಮಿಕ ಕಾಯಿಲೆಯನ್ನೂ ಹಬ್ಬುವುದಿಲ್ಲ. ಬ್ಲಾಕ್ ಸೋಲ್ಜಿಯರ್ ಫ್ಲೈ ನಿಸರ್ಗಕ್ಕೆ ಮತ್ತು ಮಾನವನಿಗೆ ಉಪಕಾರ ಮಾಡುವ
    ಒಂದು ಪರೋಪಕಾರಿ ಜೀವಿ.

    ಕಪ್ಪು ಸೈನಿಕ ಕೀಟವು ನಿಸರ್ಗಕ್ಕೆ , ಸಮಾಜಕ್ಕೆ ಹೇಗೆ ಉಪಕಾರ ಮಾಡುತ್ತದೆ ?

    ಜಗತ್ತಿನಾದ್ಯಂತ ಅದರಲ್ಲಿಯೂ ಭಾರತದ ನಗರಗಳಲ್ಲಿ ಇರುವ ಅನೇಕ ಜ್ವಲಂತ ಸಮಸ್ಯೆಗಳಲ್ಲಿ ಒಂದು ತ್ಯಾಜ್ಯ ನಿರ್ವಹಣೆ. ಅರ್ಬನ್ ಇಂಡಿಯಾ
    ವಿಶ್ವದ 3 ನೇ ಅತಿದೊಡ್ಡ ಕಸ ಉತ್ಪಾದಕ ರಾಷ್ಟ್ರವಾಗಿದೆ ಮತ್ತು 2050 ರ ಹೊತ್ತಿಗೆ 436 ಮಿಲಿಯನ್ ಟನ್ಗಳಷ್ಟು ತ್ಯಾಜ್ಯವು
    ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಹೇಳಿದೆ. ತ್ಯಾಜ್ಯ ನಿರ್ವಹಣೆ ಒಂದು ಸಮಸ್ಯೆ ಅನ್ನುವುದರ ಬದಲು ಒಂದು ಸವಾಲು
    ಎಂದು ಪರಿಗಣಿಸಬಹುದು. ಈ ಸವಾಲನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ಕಪ್ಪು ಸೈನಿಕ ಕೀಟವು ನಮಗೆ ಸಹಕರಿಸುತ್ತದೆ.

    ಮೊದಲು ಸಮಸ್ಯೆಯ ಮೂಲವನ್ನು ನೋಡೋಣ. ಕಸ ನಿರ್ವಹಣೆಯಲ್ಲಿ ಮುಖ್ಯ ಸಮಸ್ಯೆ ಇರುವುದು ಹಸಿ ಕಸ ಮತ್ತು ಒಣ
    ಕಸಗಳನ್ನು ಒಟ್ಟಿಗೆ ಹಾಕುವುದು.

    ಹಸಿ ಕಸ ಸಾವಯವ ಅಂಶಗಳಿಂದ ಕೂಡಿರುವುದರಿಂದ ಅದು ಜೈವಿಕ ವಿಘಟನೆಗೆ ಒಳಪಟ್ಟು ಅದರಲ್ಲಿರುವ ಪೋಷಕಾಂಶಗಳು ಮರಳಿ ಮಣ್ಣಿಗೆ ಸೇರುತ್ತವೆ. ಹಣ್ಣು-ತರಕಾರಿ ಸಿಪ್ಪೆಗಳು, ತಿಂದುಳಿದ ಆಹಾರ ಪದಾರ್ಥಗಳು, ಒಡೆದ ಮೊಟ್ಟೆಯ ಚಿಪ್ಪು, ಮೀನು, ಚಿಕನ್, ಮಟನ್ ನಾನ್ ವೆಜ್ ವೇಸ್ಟ್, ಇತ್ತ್ಯಾದಿ ಅಡುಗೆ ಮನೆಯ ಹಸಿ ಕಸಗಳನ್ನು, ಹಾಗೂ ಖಾಲಿಯಾದ
    ಟೂಥ್ ಪೇಸ್ಟ್ ಟ್ಯೂಬ್, ಔಷಧಿ, ಶಾಂಪೂ ಬಾಟಲ್ ಗಳು ಮೊಂಡಾದ ರೇಜರ್, ಒಡೆದು ಹೋದ ಗ್ಲಾಸು, ಪವರ್ ಖಾಲಿಯಾದ
    ಬ್ಯಾಟರಿ ಸೆಲ್, ಹಳೆಯ ಸ್ವಿಚ್, ವಯರ್ ಮುಂತಾದ ಇಲೆಕ್ಟ್ರಾನಿಕ್, ಇಲೆಕ್ಟ್ರಿಕ್ ವೇಸ್ಟ್ (ಇ-ತ್ಯಾಜ್ಯಗಳು), ಚಾಕೊಲೇಟ್ ರಾಪರ್,
    ಪ್ಲಾಸ್ಟಿಕ್ ಕೈಚೀಲ, ಹಾಲಿನ ಪ್ಯಾಕೆಟ್, ಹತ್ತು ಹಲವಾರು ದೈನಂದಿನ ಜೀವನದಲ್ಲಿ ಉತ್ಪತ್ತಿಯಾಗುವ ಗಟ್ಟಿ ಕಸಗಳನ್ನು ಒಂದೇ ಕಸದ
    ಬುಟ್ಟಿಯಲ್ಲಿ ಹಾಕುವುದೇ ಘನ ತ್ಯಾಜ್ಯ ನಿರ್ವಹಣೆಯ ವಿಫಲತೆಗೆ ಮೂಲ ಕಾರಣ.

    ಅವುಗಳನ್ನೆಲ್ಲಾ ಒಂದೇ ಕಸದ ಬುಟ್ಟಿಯಲ್ಲಿ
    ಹಾಕುವ ಬದಲು ಕನಿಷ್ಠ ಪಕ್ಷ ಮನೆಯಲ್ಲಿ ಎರಡು ಕಸದ ಬುಟ್ಟಿಗಳನ್ನು, ಒಂದು ಹಸಿ ಕಸಕ್ಕೆ ಇನ್ನೊಂದು ಒಣ ಕಸಕ್ಕೆ ಬಳಸಿದರೆ, ತ್ಯಾಜ್ಯ
    ನಿರ್ವಹಣೆಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ. ನಾವು ಬಳಸಿ ಎಸೆಯುವ ಪ್ರತಿಯೊಂದು ವಸ್ತುವೂ ಕೂಡ ಮರುಚಕ್ರೀರಣಗೊಳಿಸಬಹುದು. ಹೀಗೆ ಮಾಡಲು ಅದಕ್ಕೆ ನಾವು ಪೂರಕವಾಗಿ ಸ್ಪಂದಿಸಬೇಕು.

    ಏನು ಮಾಡಬೇಕು ?

    ಹಸಿ ಕಸವನ್ನು ರಿ ಸೈಕಲ್ ಮಾಡಲು ಏನು ಮಾಡಬೇಕು ? ನಾವೇನು ಅಂತಹ ದೊಡ್ಡ ಸಾಧನೆ ಮಾಡಬೇಕಾಗಿಲ್ಲ. ಎಲ್ಲವನ್ನು ‘ಕಪ್ಪು ಸೈನಿಕರು’ ಮಾಡುತ್ತಾರೆ. ನಾವು ಮಾಡಬೇಕಾಗಿರುವುದು ಇಷ್ಟೇ. ಹಸಿ ಕಸವನ್ನು ರಸವನ್ನಾಗಿ ಪರಿವರ್ತಿಸುವ ಕಪ್ಪು
    ಸೈನಿಕರುಗಳಿಗೆ ಮನೆಯಲ್ಲೇ ಅಂದರೆ ಮನೆಯ ವರಾಂಡ ಅಥವಾ ಹಿತ್ತಲಲ್ಲೇ ಒಂದು ಸೂಕ್ತ ವ್ಯವಸ್ಥೆ ಮಾಡಿಕೊಡುವುದು.

    ಈ ನಿಟ್ಟಿನಲ್ಲಿ ಒಂದು ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ . ಇದರ ಸಂಚಾಲಕರಾದ ಶ್ರೀ ಸ್ವಾಮೀ ಏಕಗಮ್ಯಾನಂದಜೀ ಮಹಾರಾಜ್ ಅವರು ಹೇಳುವಂತೆ “ಅಡುಗೆ ಮನೆಯ ಕಸದಿಂದ ಲವಣಾಂಶಭರಿತ ಗೊಬ್ಬರವನ್ನು ಉತ್ಪಾದಿಸಲು ಯಾವುದೇ ಯಂತ್ರ, ವಿದ್ಯುತ್, ಇಂಧನ, ಬಂಡವಾಳ ಹೂಡಿಕೆಯ ಅವಶ್ಯಕತೆ ಇಲ್ಲ”. ಬೇಕಿರುವುದು ಮೂರೇ
    ಮೂರು ಮಣ್ಣಿನ ಮಡಿಕೆ ಮತ್ತು ಆ ಮಡಿಕೆಗಳನ್ನು ಒಂದರ ಮೇಲೊಂದು ಇಡಲು ಒಂದು ಅಡಿಯಷ್ಟು ಸ್ಥಳವಕಾಶ, ಜೊತೆಗೆ ಒಂದಿಷ್ಟು ತೆಂಗಿನ ಸಿಪ್ಪೆಯ ನಾರು.

    ಮರಿಹುಳುಗಳು ಅಂದರೆ ಬ್ಲಾಕ್ ಸೋಲ್ಜಿಯರ್ ಬಾಲ್ಯಾವಸ್ಥೆಯಲ್ಲಿ ಹಸಿಕಸವನ್ನು ಆಹಾರವಾಗಿ ತಿಂದು ಸಸ್ಯಗಳ ಬೆಳವಣಿಗೆಗೆ ಮತ್ತು ಅತ್ಯುತ್ತಮ ಇಳುವರಿಗೆ ಪೋಷಕಾಂಶಭರಿತ ಗೊಬ್ಬರವನ್ನು ನೀಡುತ್ತವೆ. ಮಡಿಕೆಯನ್ನು ಬಳಸುವುದರಿಂದ ಇದನ್ನು ‘ಮಡಿಕೆ ಗೊಬ್ಬರ’ ಎಂದು ಪ್ರಚಲಿತವಾಗಿದೆ. ಕಪ್ಪು ಸೈನಿಕ ಕೀಟದ ಮರಿಹುಳುಗಳು (ಮ್ಯಾಗ್ಗೊಟ್) ಅಡುಗೆ ಮನೆಯ ತ್ಯಾಜ್ಯವನ್ನು ತಿಂದು ಗೊಬ್ಬರ
    ಮಾಡುವುದರಿಂದ ಇದನ್ನು ‘ಮ್ಯಾಗ್ಗೊಟ್ ಗೊಬ್ಬರ’ ಅಥವಾ ‘ಗ್ರಬ್ ಕಾಂಪೋಸ್ಟಿಂಗ್’ ಅಂತಲೂ ಕರೆಯುತ್ತಾರೆ.

    ಈ ಗೊಬ್ಬರ ಹೇಗೆ ಮಾಡುವುದು? ಮಡಿಕೆ ಹೇಗಿರಬೇಕು? ಮಣ್ಣಿನ ಮಡಿಕೆಯೇ ಏಕೆ ಬೇಕು? ನಾನ್ ವೆಜ್ ವೇಸ್ಟ್ ಹಾಕಬಹುದೇ? ವಾಸನೆ ಬರುತ್ತದೆಯೇ? ತೆಂಗಿನ ಸಿಪ್ಪೆಯ ನಾರಿನ ಮಹತ್ವ ಏನು? ‘ಕಪ್ಪು ಸೈನಿಕರನ್ನು’ ಹುಡುಕಿಕೊಂಡು ಎಲ್ಲಿಗೆ ಹೋಗಬೇಕು? ಗೊಬ್ಬರದಲ್ಲಿ ಯಾವೆಲ್ಲ ಲವಣಾಂಶಗಳು ಇವೆ? ಇಂಥಹ ಹತ್ತು ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿವೆಯೇ?
    ಹಾಗಿದ್ದರೆ, ಮಡಿಕೆ ಗೊಬ್ಬರ ತಯಾರಿಕೆಯ ಬಗ್ಗೆ ಆಸಕ್ತಿ, ಕುತೂಹಲ ನಿಮ್ಮಲ್ಲಿ ಮೂಡಿದೆ ಅಂತ ಅರ್ಥ.

    ವೆಬ್ – ಕಾರ್ಯಾಗಾರ

    ಈ ಪ್ರಶ್ನೆಗಳಿಗೆ ಉತ್ತರವಾಗಿ ಮಂಗಳೂರು ವಿದ್ಯಾನಿಲಯ, ‘ವಿಜಯ ಬ್ಯಾಂಕ್ ಪೀಠ – ಪರಿಸರ ವಿಜ್ಞಾನ ಮತ್ತು ಪರಿಸರ’ ಇದರ ಅಡಿಯಲ್ಲಿ ರಾಮಕೃಷ್ಣ
    ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಸಹಭಾಗಿತ್ವದೊಂದಿಗೆ ‘ಪರಿಸರ ಸ್ನೇಹಿ ಮಡಿಕೆ ಗೊಬ್ಬರ ತಯಾರಿಕೆ ಹಾಗೂ ವಾಣಿಜ್ಯ ಬೆಳೆಗಳ
    ಕಸಿ ಕಟ್ಟುವಿಕೆ ಮತ್ತು ಕೃಷಿ’ ಕುರಿತು ವೆಬ್ – ಕಾರ್ಯಾಗಾರ ಒಂದನ್ನು ಇತ್ತೀಚೆಗೆ ಮಂಗಳಗಂಗೋತ್ರಿ ಪ್ರೊ. ಯು. ಆರ್. ರಾವ್
    ಸಭಾಂಗಣದಲ್ಲಿ ಆಯೋಜಿಸಲಾಯಿತು.

    “ಪ್ರಕೃತಿಯಲ್ಲಿ ತ್ಯಾಜ್ಯ ಎಂಬುದು ಯಾವುದೂ ಇಲ್ಲ; ಕಸದಿಂದ ರಸ ಎಂಬ ನಾಣ್ಣುಡಿಯಂತೆ
    ಕಸವನ್ನು ಅಮೂಲ್ಯ ಉತ್ಪನ್ನಗಳಾಗಿ ಪರಿವರ್ತಿಸಬಹುದು. ಈ ಹಿನ್ನೆಲೆಯಲ್ಲಿ ಮಡಿಕೆ ಗೊಬ್ಬರವು ವಿಕೇಂದ್ರೀಕೃತ ಸಾವಯವ ತ್ಯಾಜ್ಯ
    ನಿರ್ವಹಣೆಗೆ ಒಂದು ಸುಲಭ ವಿಧಾನವಾಗಿದೆ” ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಾಗಾರದ ಅಧ್ಯಕ್ಷೀಯ ಭಾಷಣದಲ್ಲಿ ಆಡಿದ ಮಾತು ಉಲ್ಲೇಖನೀಯ.

    ಶ್ರೀ ಸ್ವಾಮಿ ಏಕಗಮ್ಯಾನಂದಜೀ ಮಹಾರಾಜ್ ಅವರ ಸಮರ್ಥ ನಾಯಕತ್ವದಲ್ಲಿ ಕಳೆದ 6-7 ವರ್ಷಗಳಿಂದ ರಾಮಕೃಷ್ಣ ಮಿಷನ್
    ಸ್ವಚ್ಛ ಮಂಗಳೂರು ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಮಡಿಕೆ ಗೊಬ್ಬರದ ಬಗ್ಗೆಯೂ ಜನರಲ್ಲಿ
    ಆಸಕ್ತಿಯನ್ನು ಮೂಡಿಸಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದೆ. ಈ ಅಭಿಯಾನದ ಜೊತೆ ಕ್ರಿಯಾಶೀಲ ಯುವಕ ಎಂಜಿನಿಯರಿಂಗ್ ಪದವೀಧರ ಸಚಿನ್ ಶೆಟ್ಟಿ ಅವರು ಕೈಜೋಡಿಸಿದ್ಡಾರೆ.

    ಅವರ ಮಡಿಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯ ವೀಡಿಯೊವನ್ನು ವೀಕ್ಷಿಸಲು ಮತ್ತು ಮೇಲಿನ ಎಲ್ಲಾ ಪ್ರಶ್ನೆಗಳಿಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಉತ್ತರಗಳನ್ನು
    ಪಡೆಯಲು, ಅಂತೆಯೇ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಗಾಟಿಸಿರುವ ಸ್ವಾಮೀಜಿಗಳ ಅನುಭವದ ಹಿತನುಡಿಗಳು, ಹಾಗೂ ಈ
    ಕಾರ್ಯಾಗಾರವನ್ನು ಆಯೋಜಿಸಲು ಬೆನ್ನಲುಬಾಗಿ ನಿಂತು ಪ್ರೋತ್ಸಾಹಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಸ್ಫೂರ್ತಿದಾಯಕ ಮಾತುಗಳನ್ನು ಇಲ್ಲಿ ಆಲಿಸಿ.

    ಪರಿಸರದ ಆಪ್ತ ಸ್ನೇಹಿತ

    ಕಪ್ಪು ಸೈನಿಕರು ಅಡುಗೆ ಮನೆಯ ತ್ಯಾಜ್ಯ ಮಾತ್ರವಲ್ಲ, ಕೃಷಿ ತ್ಯಾಜ್ಯಗಳನ್ನೂ ಗೊಬ್ಬರವನ್ನಾಗಿ ಪರಿವರ್ತಿಸಲು
    ಬಳಸಿಕೊಳ್ಳಬಹುದು. ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಎರೆಹುಳುಗಳನ್ನು ರೈತನ ಮಿತ್ರ ಎಂದು ಕರೆದರೆ, ಹಸಿ ಕಸವನ್ನು ರಸಭರಿತ
    ಗೊಬ್ಬರವನ್ನಾಗಿ ರೂಪಾಂತರಗೊಳಿಸಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಒದಗಿಸುವ ಕಪ್ಪು ಸೈನಿಕ ಕೀಟವನ್ನು ‘ಪರಿಸರದ ಆಪ್ತ ಸ್ನೇಹಿತ’
    ಎಂದು ಕರೆಯಬಹುದು.

    ಚಳಿ, ಮಳೆ, ಗಾಳಿ, ಬಿರುಗಾಳಿ ಯಾವುದಕ್ಕೂ ಎದೆಗುಂದದೇ ತಮ್ಮ ಜೀವ, ಜೀವನವನ್ನೇ ಮುಡಿಪಾಗಿಟ್ಟು ದೇಶದ ಭದ್ರತೆಯನ್ನು
    ಕಾಪಾಡುವ ನಮ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸುವ ಹಾಗೆ ತ್ಯಾಜ್ಯಗಳನ್ನು ಪರಿವರ್ತಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವ, ಪರಿಸರ
    ಸಂರಕ್ಷಣೆಯಲ್ಲಿ ತೊಡಗಿರುವ ನಿಸರ್ಗದ ಕೊಡುಗೆ ‘ಕಪ್ಪು ಸೈನಿಕರಿಗೆ’ ಒಂದು ದೊಡ್ಡ ಸಲಾಂ ಹೊಡೆಯಲೇಬೇಕಲ್ಲವೇ?

    error: Content is protected !!