34.3 C
Karnataka
Tuesday, April 22, 2025
    Home Blog Page 157

    ಚರಿತ್ರೆಯನ್ನರಿತು ವಹಿವಾಟು ನಡೆಸಿದರಷ್ಟೆ ಫಲ

    ಷೇರುಪೇಟೆಯಲ್ಲಿ ವಿವಿಧ ಇಂಡೆಕ್ಸ್‌ ಗಳು ಏಕಮುಖವಾಗಿ ಏರಿಕೆ ಕಾಣುತ್ತಿರುವುದು ಅನೇಕ ಹೊಸ ಹೂಡಿಕೆದಾರರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.  ವಿಶೇಷವಾಗಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ವಲಯದ ಕಂಪನಿಗಳು ಚಿಗರೊಡೆಯುತ್ತಿರುವುದು ಹೆಚ್ಚಿನವರ ಗಮನವನ್ನಾಕರ್ಷಿಸುತ್ತಿದೆ. ಸೆನ್ಸೆಕ್ಸ್ ನ ರಭಸದ ಏರಿಕೆಯ ಹಿಂದೆ  30 ಕಂಪನಿಗಳಲ್ಲಿ ವಿತ್ತೀಯ ವಲಯದ 9, ನವರತ್ನ ಕಂಪನಿಗಳ ಕೊಡುಗೆ ಅಪಾರ. ಖರೀದಿಸುವ ಕಂಪನಿಗಳ ಚರಿತ್ರೆಯನರಿತು ನಡೆಸುವ ವಹಿವಾಟು ಉತ್ತಮ ಫಲ ನೀಡಬಲ್ಲದು.

    ಕೆಲವು ಕಂಪನಿಗಳ  ವಿವರ ಇಂತಿದೆ:

    ವಾಟೆಕ್‌ ವಾಬಾಗ್‌ ಕಂಪನಿಯ ಷೇರಿನ ಬೆಲೆ ಏಪ್ರಿಲ್‌ ತಿಂಗಳಲ್ಲಿ ರೂ.73 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದ್ದು ಆಗಸ್ಟ್‌ ತಿಂಗಳಲ್ಲಿ ರೂ.235 ಕ್ಕೆ ಏರಿಕೆ ಕಂಡಿರುವುದು, ಅದರಲ್ಲೂ ಒಂದೇ ತಿಂಗಳಲ್ಲಿ ರೂ.115 ರ ಸಮೀಪದಿಂದ ರೂ.235 ಕ್ಕೆ ಜಿಗಿತ ಕಂಡಿರುವುದು ಆಂತರಿಕ ಕಾರಣಗಳಿಗಿಂತ ಹೆಚ್ಚಾಗಿ ಬಾಹ್ಯ ಕಾರಣಗಳು ಕಾರಣ .ಈ ಕಂಪನಿಯ ಷೇರಿನ ಬೆಲೆ 2017 ರಲ್ಲಿ ರೂ.600 ರ ಸಮೀಪವಿದ್ದು ಆಗ ಖರೀದಿಸಿದವರಿಗೆ ಬಂಡವಾಳ ಉಳಿಸಿಕೊಂಡು ಹೊರಬರಬೇಕಾದ ಅವಕಾಶಗಳ ವಂಚಿತರಾಗಿದ್ದಾರೆ ಎಂಬುದು ಅರಿಯಬೇಕು. 

    ಸ್ಟರ್ಲೈಟ್‌ ಟೆಕ್ನಾಲಜೀಸ್ ಕಂಪನಿಯ ಷೇರಿನ ಬೆಲೆ ಒಂದು ತಿಂಗಳಲ್ಲಿ ರೂ.115 ರ ಸಮೀಪದಿಂದ ರೂ.170 ರ ಗಡಿಯನ್ನು ದಾಟಿದೆ, ಈ ಏರಿಕೆಗೆ ಕಂಪನಿಯ ಸಾಧನೆ ಕಾರಣವಾಗಿರದೆ ಕೇವಲ ಹೊರಗಿನ ಪ್ರಚಾರಿಕತೆಯಿಂದ ಏರಿಕೆ ಕಂಡಿದೆ.  ಇದೇ ಷೇರಿನ ಬೆಲೆ ಸೆಪ್ಟೆಂಬರ್‌ 2018 ರಲ್ಲಿ ರೂ.300 ಕ್ಕೂ ಹೆಚ್ಚಿದ್ದು ಈ ವರ್ಷದ ಮಾರ್ಚ್ ನಲ್ಲಿ ರೂ.60 ರ ಸಮೀಪಕ್ಕೆ ಕುಸಿತ ಕಂಡಿದ್ದ ಷೇರು ಇಷ್ಟು ಬೇಗ ನಿಶ್ಷೇಷ್ಟಿತ ವಾತಾವರಣದಲ್ಲಿ ಚಿಗರೊಡೆದಿರುವುದರಿಂದ ಚಟವಟಿಕೆಗೆ ಮುಂಚೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. 

     ನೋಸಿಲ್‌ ಕಂಪನಿ ಷೇರು ಕಳೆದ ಎರಡು ವರ್ಷಗಳ ಹಿಂದೆ ಖರೀದಿಸಿದವರು ಸಧ್ಯ ತಮ್ಮ ಖರೀಸಿದಿಸಿದ ಬೆಲೆ ಹತ್ತಿರ ಬರುತ್ತಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ.  ಆದರೆ ಮಾರ್ಚ್‌ ನಲ್ಲಿ ರೂ.45 ರ ಸಮೀಪದಲ್ಲಿದ್ದ ಈ ಷೇರಿನ ಬೆಲೆ ಈಗ ರೂ.135 ರ ಸಮೀಪದಲ್ಲಿದೆ. 2018 ರ ಅಕ್ಟೋಬರ್‌ ನಲ್ಲಿ ಈ ಷೇರಿನ ಬೆಲೆ ರೂ.160 ರಲ್ಲಿತ್ತು.  ಜೂನ್‌ 2020 ರ ತ್ರೈಮಾಸಿಕ ಸಾಧನೆಯಂತೂ ಈ ಏರಿಕೆಗೆ ಪೂರಕ ಅಂಶವಂತೂ ಅಲ್ಲ.

    ಎಚ್‌ ಎ ಎಲ್‌ ಕಂಪನಿಯ ಷೇರಿನ ಬೆಲೆ ಇತ್ತೀಚೆಗೆ ಹೆಚ್ಚು ಚುರುಕಾದ ಚಟುವಟಿಕೆಭರಿತವಾಗಿದೆ. ಒಂದು ತಿಂಗಳಲ್ಲಿ ರೂ.860 ರ ಸಮೀಪದಿಂದ ರೂ.1,400 ನ್ನು ದಾಟಿ ಈಗ ರೂ.1,010 ರ ಸಮೀಪ ಕೊನೆಗೊಂಡಿದೆ.   2018 ರಲ್ಲಿ ಈ ಕಂಪನಿಯು ರೂ.1,215ರಂತೆ ಆರಂಭಿಕ ವಿತರಣೆ ಮಾಡಿತ್ತು ಎಂಬ ವಿಚಾರ ಓದುಗರು ಗಮನಿಸಬೇಕಾಗಿದೆ.   ಈ ಕಂಪನಿಯ ಷೇರಿನ ವಿಸ್ಮಯಕಾರಿ ಅಂಶವೆಂದರೆ ಎರಡು ವರ್ಷಗಳ ಹಿಂದೆ ಐಪಿಒ ಮೂಲಕ ಖರೀದಿಸಿದವರಿಗೆ ಹೂಡಿಕೆಯ ಹಣ ಪಡೆದುಕೊಳ್ಳಲು ಎರಡು ವರ್ಷ ಕಾಯಬೇಕಾಯಿತು.  ಆದರೆ ಮಾರ್ಚ್‌ – ಏಪ್ರಿಲ್‌ ನಲ್ಲಿ ಖರೀದಿಸಿದವರು ಕೆಲವೇ ತಿಂಗಳಲ್ಲಿ ಎರಡು – ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ.  ಎರಡು ವರ್ಷಗಳ ಹಿಂದೆ ರೂ.1,215 ರಂತೆ ವಿತರಣೆಮಾಡಿದ ಕಂಪನಿ ಈಗ ರೂ.1,000 ದ ಸಮೀಪ ಮರುವಿತರಣೆ ಮಾಡಲು ಹರಸಾಹಸ ಮಾಡುವ ಪರಿಸ್ಥಿತಿ ಬಂದಿದೆ.

    ಮಾರ್ಚ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.755 ರಂತೆ ಐಪಿಒ ಮೂಲಕ ಪೇಟೆ ಪ್ರವೇಶಿಸಿದ ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ಸ್‌ ಸರ್ವಿಸಸ್ ಕಂಪನಿಯ ಷೇರುಗಳು ಲೀಸ್ಟಿಂಗ್‌ ಆದ ಮೇಲೆ ರೂ.500 ರ ಸಮೀಪಕ್ಕೆ ಕುಸಿದಿತ್ತು. ಒಂದು ತಿಂಗಳ ಹಿಂದೆ ರೂ.725 ರ ಸಮೀಪದಲ್ಲಿದ್ದ ಈ ಷೇರಿನ ಬೆಲೆ ಶುಕ್ರವಾರದಂದು ರೂ.845 ರ ಸರ್ವಕಾಲೀನ ಗರಿಷ್ಠಕ್ಕೆ ಏರಿಕೆ ಕಂಡಿದೆ.  
    ಇದೇ ರೀತಿ ಕಂಪನಿಗಳಾದ ಕ್ವೆಸ್‌ ಕಾರ್ಪ್‌,  ಹೆಲ್ತ್‌ ಕೇರ್‌ ಗ್ಲೋಬಲ್‌, ರೇನ್‌ ಇಂಡಸ್ಟ್ರೀಸ್‌,  ಅಪೆಕ್ಸ್‌ ಫ್ರೋಜನ್‌, ಟಾಟಾ ಮೋಟಾರ್ಸ್, ಕೋಲ್‌ ಇಂಡಿಯಾ,    ಎಲ್‌ ಅಂಡ್‌ ಟಿ ಫೈನಾನ್ಸ್‌ ಹೋಲ್ಡಿಂಗ್ಸ್‌,  ಆದಿತ್ಯ ಬಿರ್ಲಾ ಕ್ಯಾಪಿಟಲ್‌,  ನ್ಯೂ ಇಂಡಿಯಾ ಅಶ್ಶುರನ್ಸ್‌, ಜನರಲ್‌  ಇನ್ಶೂರನ್ಸ್‌ ಕಾರ್ಪೊರೇಷನ್‌*, ನಂತಹ ಅನೇಕ ಕಂಪನಿಗಳನ್ನು ಒಂದೆರಡು ವರ್ಷಗಳಲ್ಲಿ ಕೊಂಡವರು ತಮ್ಮ ಅಸಲು ಹಣ ಹಿಂಪಡೆಯಲು ಕಾಯುತ್ತಿದ್ದಾರೆ.  ಆದರೆ ಕೆಲವೇ ತಿಂಗಳಲ್ಲಿ ಹೂಡಿಕೆ ಮಾಡಿದವರಿಗೆ ಅತ್ಯಧಿಕ ಲಾಭ ತಂದುಕೊಟ್ಟಿದೆ. 

     ಇನ್ನು ಕಂಪನಿಗಳಾದ ರಿಲಯನ್ಸ್‌ ಇನ್ ಫ್ರಾ, ರಿಲಯನ್ಸ್‌ ಕ್ಯಾಪಿಟಲ್‌, ಸಿಂಟೆಕ್ಸ್‌ ಇಂಡಸ್ಟ್ರೀಸ್‌, ಸಿಂಟೆಕ್ಸ್‌ ಪ್ಲಾಸ್ಟಿಕ್ಸ್‌, ಎಂ ಎಂಟಿಸಿ, ಗೋವಾ ಕಾರ್ಬನ್‌,  ಯೆಸ್‌ ಬ್ಯಾಂಕ್‌ ನಂತಹ ಕಂಪನಿಗಳ ಷೇರು ಖರೀದಿಸಿದವರು ಒತ್ತಾಯಪೂರ್ವಕವಾಗಿ, ಹೂಡಿಕೆ ಹಣ ಕರಗಿಸಿಕೊಳ್ಳಲು ಇಷ್ಟಪಡದೆ, ಹೂಡಿಕೆಯನ್ನು ಮುಂದುವರೆಸಿಕೊಂಡುಹೋಗುತ್ತಿದ್ದಾರೆ.

    ಬ್ಯಾಂಕಿಂಗ್‌ ವಲಯ ಚುರುಕು

    ಸಧ್ಯ ಬ್ಯಾಂಕಿಂಗ್‌ ವಲಯ ಚುರುಕಾಗಿದೆ.   ಬ್ಯಾಂಕಿಂಗ್‌ ವಲಯದ ಕೆನರಾ ಬ್ಯಾಂಕ್‌ 2014 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲು ನಿರ್ಧರಿಸಿತ್ತು.  ಆದರೆ ಇದುವರೆಗೂ ಅದು ಜಾರಿಗೊಳಿಸಲಿಲ್ಲ.  ಆದರೆ ಪೇಟೆ ಮಾತ್ರ ಷೇರಿನ ಬೆಲೆಯನ್ನು ಮುಖಬೆಲೆ ಸೀಳಿಕೆಯ ನಂತರದ ಮಟ್ಟಕ್ಕೆ ಷೇರಿನಬೆಲೆಯನ್ನು ಇಳಿಸಿದೆ.  ಅಂದರೆ ಆಗ ಸುಮಾರು ರೂ.450-500 ರ ಸಮೀಪವಿದ್ದ ಷೇರು ಈಗ ಸುಮಾರು ರೂ.113 ರ ಸಮೀಪವಿದೆ.

    ಸಾರ್ವಜನಿಕ ವಲಯದ ಷೇರುಗಳು ಇನ್ನೂ ಚುರುಕಾದ ಚಟುವಟಿಕೆಗೆ ಒಳಪಟ್ಟಿಲ್ಲವಾದರೂ, ಇದೇ ರೀತಿ ಪೇಟೆಯೊಳಗಿನ ಹರಿವು ಮುಂದಾದರೆ ಆಂತರಿಕಸಾಧನೆಯಾಧಾರಿತ ಕಂಪನಿಗಳು ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆ ಹೆಚ್ಚು. 

    ಇದಕ್ಕೆ ಉದಾಹರಣೆ ಶುಕ್ರವಾರ ಎನ್ ಎಂಡಿಸಿ ಷೇರು ಪ್ರದರ್ಶಿಸಿದ ಏರಿಕೆಯಾಗಿದೆ.  ಐಒಸಿ, ಹೆಚ್‌ ಪಿ ಸಿ ಎಲ್‌, ಬಿ ಪಿ ಸಿ ಎಲ್‌, ಆರ್‌ ಇ ಸಿ, ಪಿ ಎಫ್‌ ಸಿ, ಗೇಲ್‌, ಬಾಲ್ಮರ್‌ ಲೌರಿ, ಪಿಟಿಸಿ ಇಂಡಿಯಾ, ಬಿ ಇ ಎಲ್‌,  ಹುಡ್ಕೋ* ಗಳಂತಹ  ಕಂಪನಿಗಳು ಹೂಡಿಕೆದಾರರಿಗೆ ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ವಿತರಿಸುವುವಾಗಿದ್ದರೂ, ಅದಕ್ಕೆ ಪೂರಕವಾದ ಬೆಂಬಲ ಇದುವರೆಗೂ ಲಭ್ಯವಾಗಿಲ್ಲ. ಇಂತಹ ಕಂಪನಿಗಳು ದೀರ್ಘಕಾಲೀನ ಹೂಡಿಕೆಗೆ ಆಯ್ಕೆ ಮಾಡಿಕೊಂಡರೂ, ಅನಿರೀಕ್ಷಿತ ಲಾಭ ತಂದುಕೊಟ್ಟಲ್ಲಿ ನಗದೀಕರಿಸಿಕೊಳ್ಳುವುದು ಬಂಡವಾಳ ಸುರಕ್ಷತೆಗೆ ಉತ್ತಮ ಮಾರ್ಗ.

    ಕೇವಲ ಹೃದಯದ ರಾಗಕ್ಕೆ ಮನಸೋಲದೆ, ಮಿದುಳಿನ ಚಿಂತನೆಗೂ ಆದ್ಯತೆ ಈಗಿನ ಅವಶ್ಯಕತೆ.

    ನೆನಪಿಡಿ:  ಷೇರುಪೇಟೆ ಹೂಡಿಕೆ ಈಗಿನ ದಿನಗಳಲ್ಲಿ, ಪ್ರವೇಶ ದೀರ್ಘಕಾಲೀನದ ಉದ್ದೇಶವಾದರೂ, ನಂತರ ವ್ಯವಹಾರಿಕ ದೃಷ್ಠಿಯಿಂದ  ನಿರ್ಧರಿಸಬೇಕು.

    ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಸಾಧನಾ ಜೀವಿಯ ದೀರ್ಘಾಯುಷ್ಯದ ಗುಟ್ಟು

    ಕಳೆದ ವಾರವಷ್ಟೆ 108ಕ್ಕೆ ಅಡಿ ಇಟ್ಟ ಭಾಷಾ ತಜ್ಞ ಪ್ರೊ. ಜಿ ವೆಂಕಟಸುಬ್ಬಯ್ಯ ಅವರೊಂದಿಗಿನ ಒಡನಾಟವನ್ನು ಅವರ ವಿದ್ಯಾರ್ಥಿ, ಲೇಖಕಿ ವೈ.ಕೆ. ಸಂಧ್ಯಾಶರ್ಮಾ ಇಲ್ಲಿ ದಾಖಲಿಸಿದ್ದಾರೆ


    ವೈ.ಕೆ. ಸಂಧ್ಯಾಶರ್ಮಾ

    ಜಿ.ವಿ. ನನ್ನ ವಿದ್ಯಾಗುರುಗಳು ಎಂದು ಹೇಳಿಕೊಳ್ಳಲು ನನಗಂತೂ ತುಂಬಾ  ಹೆಮ್ಮೆ. ಅವರು ನನ್ನ ಅಕ್ಕ-ಅಣ್ಣಂದಿರಿಗೂ ಅರ್ಧ ಶತಮಾನದ ಹಿಂದೆಯೇ ಗುರುಗಳಾಗಿದ್ದರಾದ್ದರಿಂದ ನನಗೆ ಅವರ ಹೆಸರು ಪ್ರಾಥಮಿಕ ತರಗತಿಯಲ್ಲಿದ್ದಾಗಲೇ ಪರಿಚಯ.

    ಬಸವನಗುಡಿಯ ವಿಜಯಾ ಕಾಲೇಜಿನ ಹಿಂದೆಯೇ ನಮ್ಮ ಮನೆ ಹಾಗೂ ಜೀವಿಯವರ ಮನೆಯೂ ಇದ್ದುದರಿಂದ ನಾನಾಗಲೇ ಅವರನ್ನು ನೋಡಿದ್ದೆ ಕೂಡ. ಅದೃಷ್ಟವಷಾತ್ ನಾನು ಪಿ.ಯೂ.ಸಿ.ಗೆ ವಿಜಯಾ ಕಾಲೇಜಿಗೇ ಸೇರಿದಾಗ ನನ್ನ ಕನ್ನಡ ಅಧ್ಯಾಪಕರು ಜೀವಿಯೇ ಆಗಿದ್ದರು. ಪ್ರತಿದಿನ ಅವರು ಶಿಸ್ತಾಗಿ, ಸೂಟು ಧರಿಸಿ ಟಿಪ್ ಟಾಪಾಗಿ ಬೂದುಬಣ್ಣದ ಹೆರಾಲ್ಡ್ ಕಾರಿನಲ್ಲಿ ಬರುತ್ತಿದ್ದರು. ನಡಿಗೆಯಲ್ಲಿ ಗತ್ತು, ಮುಖದಲ್ಲಿ ಮುಗುಳ್ನಗೆ ಅವರ ಕುರುಹುಗಳು.

    ವಯಸ್ಸು ಐವತ್ತೈದು- ಐವತ್ತಾರಿಬಹುದು… ಆದರೂ ಮಹಡಿಯ ಮೇಲಿದ್ದ ಅವರ ಕೋಣೆಗೆ ಹೋಗುವಾಗ ಅವರು ಮೆಟ್ಟಿಲುಗಳನ್ನು ಸರಸರನೆ ಹತ್ತುತ್ತಿದ್ದ ಲವಲವಿಕೆಯ ಬಗೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಪಿ.ಯೂಸಿ.ಯ ಏ-ಬಿ ಸೆಕ್ಷನ್ನುಗಳಿಗೆ ಅವರು ಕಂಬೈನ್ಡ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಸುಮಾರು ನೂರರ ಹತ್ತಿರ ವಿದ್ಯಾರ್ಥಿಗಳ ಸಂಖ್ಯೆ. ಹುಡುಗರೆಲ್ಲ ಬಲಗಡೆ , ಹುಡುಗಿಯರು ಎಡಗಡೆ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಮೇಷ್ಟ್ರು ಸ್ವಲ್ಪ ಸ್ಟ್ರಿಕ್ಟು…ಮೂಗಿನ ತುದಿಯಲ್ಲೇ ಕೋಪ…ಅನವಶ್ಯಕವಾಗಿ ಹುಡುಗ-ಹುಡುಗಿಯರು ಕಾರಿಡಾರಿನಲ್ಲಿ ಅಡ್ಡಡ್ಡ ಮಾತನಾಡುತ್ತ ನಿಂತುಕೊಳ್ಳುವುದು ಅವರಿಗೆ ಹಿಡಿಸುತ್ತಿರಲಿಲ್ಲ. ಅದು ಹಳೇ ಕಾಲ ಅಂತಿಟ್ಟುಕೊಳ್ಳಿ…

    ಕ್ಲಾಸಿನಲ್ಲಿ ಬಂದ ತತ್ ಕ್ಷಣ ಹಾಜರಿ ತೆಗೆದುಕೊಳ್ಳುವಾಗ “ಯಾರೋ ಎಸ್ ಮೇಡಮ್ ” ಎಂದಾಗ ಅವನೋ, ಅವಳೋ ಅವರಿಂದ   ಚೆನ್ನಾಗಿ ಬೈಸಿಕೊಂಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಆದ್ದರಿಂದ ಅವರ ತರಗತಿಯಲ್ಲಿ ಎಲ್ಲರೂ ಗಪ್ ಚುಪ್!!….ಹೆದರಿಕೆಯಿಂದಲ್ಲ, ಅವರು ಪಾಠ ಮಾಡುತ್ತಿದ್ದ ವೈಖರಿ, ಸ್ವಾರಸ್ಯ ಹಾಗಿರುತ್ತಿತ್ತು.  ರಾಘವಾಂಕನ “ಹರಿಶ್ಚಂದ್ರ ಕಾವ್ಯ”ದ ಪದ್ಯಗಳ ಅರ್ಥವನ್ನು ಅವರು ವಿವರಿಸುತ್ತಿದ್ದ ಬಗೆಯೇ ತುಂಬಾ ವಿಶಿಷ್ಟವಾಗಿರುತ್ತಿತ್ತು. ನಾನಂತೂ ಕನ್ನಡದ ಒಂದು ಕ್ಲಾಸನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ವ್ಯಾಕರಣದ ತರಗತಿಯೆಂದರೆ ಇನ್ನೂ ಇಷ್ಟ. ಅವರ ಸ್ಫುಟವಾದ ಕನ್ನಡ ತರಗತಿಯಲ್ಲೇ ನನ್ನ ಮನಸ್ಸಿನಲ್ಲಿದ್ದ ಕನ್ನಡಪ್ರೀತಿ ಇಮ್ಮಡಿಗೊಂಡಿದ್ದು.

    ಪಿಯೂಸಿ ನಂತರ,ನಾನು ಬೆಳಗ್ಗೆ ಕನ್ನಡ ಆನರ್ಸ್ ತರಗತಿಗೆ,ಮಧ್ಯಾಹ್ನ ಬಿ.ಎಸ್ಸಿ.ತರಗತಿಗೆ  ಹಾಜರಾಗುತ್ತಿದ್ದೆ. ವರ್ಷದ ಕಡೆಯಲ್ಲಿ ಒಂದು ಕಡೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಎಂದರು ಆಡಳಿತ ಮಂಡಳಿಯವರು. ಆಗ ನನಗೆ ಮಾರ್ಗದರ್ಶನ ಮಾಡಿದವರೇ ನನ್ನ ಗುರುಗಳಾದ ಜೀವಿಯವರು.”ನೀನು ಕನ್ನಡದಲ್ಲಿ ಅಷ್ಟು ಉತ್ತಮ ಅಂಕಗಳನ್ನು ಗಳಿಸಿದ್ದೀ….ನೀನು ಕನ್ನಡ ಭಾಷೆಯನ್ನೇ ವಿಶೇಷವಾಗಿ ಅಭ್ಯಾಸ ಮಾಡಬೇಕು”-ಎಂದು ನನ್ನ ಬದುಕಿಗೊಂದು ತಿರುವು ನೀಡಿದರು.

    ಸತತ ಮೂರು ವರ್ಷಗಳ ಕಾಲ ಜೀವಿಯವರ ಪಾಠ ಕೇಳುವ ಸೌಭಾಗ್ಯ ನನ್ನದಾಯಿತು. ಕಬ್ಬಿಣದ ಕಡಲೆ ಕೇಶೀರಾಜನ “ಶಬ್ದಮಣಿದರ್ಪಣ” ವ್ಯಾಕರಣವನ್ನು ಸುಲಿದ ಬಾಳೇಹಣ್ಣಿನಂದದಿ , ಮನಂಬುಗುವಂತೆ ಮನಸ್ಸಿನಲ್ಲಿ ಅಚ್ಚು ಒತ್ತಿಸಿದರು. ಬಿಎಂಶ್ರೀ ಅವರು ಭಾವಾನುವಾದ ಮಾಡಿದ “ಇಂಗ್ಲೀಷ್ ಗೀತೆಗಳು” ಪದ್ಯಗಳನ್ನು ಅನುಭವಹೃದ್ಯವನ್ನಾಗಿಸಿದ ಅವರ ಬೋಧನಾರೀತಿ ನನ್ನ ಸ್ಮೃತಿಪಟಲದಲ್ಲಿ ಎಂದೂ ಚಿರಸ್ಥಾಯಿ. ನನ್ನ ಬರವಣಿಗೆಗೂ ಅವರು ಅಷ್ಟೇ ಒತ್ತಾಸೆ ನೀಡುತ್ತಿದ್ದರು. ಸಂಸ್ಕೃತ-ಆಂಗ್ಲ ಭಾಷೆಗಳಲ್ಲೂ ಅಷ್ಟೇ ಪರಿಣತರಾಗಿದ್ದ ಮೇಷ್ಟ್ರು , ನಮಗೆ ಆಂಗ್ಲ ಹಾಗೂ ಸಂಸ್ಕೃತ ಭಾಷೆಗಳ ಕವಿ-ಕಾವ್ಯಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ನಾವು ವಿದ್ಯಾರ್ಥಿಗಳೇ  ಲೇಖನಗಳನ್ನು ಬರೆದು, ಸಂಪಾದಿಸಿ “ಉತ್ಸಾಹ” ಎಂಬ ಪತ್ರಿಕೆಯನ್ನು ಹಲವು ವರ್ಷಗಳು ಪ್ರಕಟಮಾಡಲು ನೆರವು ನೀಡಿ ಪ್ರೋತ್ಸಾಹಿಸಿದ, ಅನನ್ಯ ಅವಕಾಶ ಒದಗಿಸಿದ್ದಕ್ಕೆ ಜೀವಿಯವರಿಗೆ  ನಾವೆಲ್ಲ ಕೃತಜ್ಞರು. 

     ಎಲ್ಲಿ ಹೋದರೂ ನಾನು ಜೀವಿ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ನನಗಿದೆ. ಮುಂದೆ ಕನ್ನಡ ಎಂ.ಎ. ಅಭ್ಯಾಸ ಮಾಡುವಾಗಲೂ ನನಗೆ ಜೀವಿಯವರ ಸಂಪರ್ಕ ಇದ್ದೇ ಇತ್ತು. ನನಗೆ ಭಾಷೆ,ವ್ಯಾಕರಣ ವಿಷಯದಲ್ಲಿ ಏನೇ ಅನುಮಾನ ಬಂದರೂ ಇವತ್ತಿಗೂ ಅವರೊಡನೆ ಚರ್ಚಿಸಿ, ಸಂತೃಪ್ತ ವಿವರಣೆಗಳನ್ನು ಪಡೆದು ಅನುಮಾನಗಳನ್ನು  ಪರಿಹರಿಸಿಕೊಳ್ಳುತ್ತೇನೆ. ಅವರು ಮನದಟ್ಟಾಗುವಂತೆ ನೀಡುತ್ತಿದ್ದ ವಿವರಣೆ-ವ್ಯಾಖ್ಯಾನ ನನಗೆ ಬಹು ಸಮಾಧಾನ ತರುತ್ತಿತ್ತು. ದೂರವಾಣಿಯಲ್ಲೂ ಎಷ್ಟೋ ಬಾರಿ ಸಂಪರ್ಕಿಸಿದ್ದೇನೆ, ನನಗೆ ಮುಜುಗರ, ಹಿಂಜರಿಕೆಗಳಿಲ್ಲ. ಅವರು ನನಗಷ್ಟು ಹತ್ತಿರ ಎಂಬ ಧೈರ್ಯ. ಇನ್ನೂ ಒಂದು ವಿಶೇಷ ಅಂದರೆ “ಗೊರೂರು ಸಾಹಿತ್ಯ ಪ್ರಶಸ್ತಿ ”  ಗುರು-ಶಿಷ್ಯರಾದ ನಮ್ಮಿಬ್ಬರಿಗೂ ಒಂದೇ ವೇದಿಕೆಯಲ್ಲಿ ಪ್ರದಾನವಾಯಿತು. ‘ಉರಿದು ಹೋದ ಕನಸುಗಳು’ ನನ್ನ ಕವನ ಸಂಕಲನವನ್ನು ಗುರುಗಳೇ ಬಿಡುಗಡೆ ಮಾಡಿ ನನಗೆ ಆಶೀರ್ವದಿಸಿದರು.

    ನಾವು ಕನ್ನಡ ಆನರ್ಸ್ ವಿದ್ಯಾರ್ಥಿಗಳೆಲ್ಲ ಒಂದಲ್ಲ ಒಂದು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿ ಅವರ ಒಡನಾಟದಲ್ಲಿ ಸಂತೋಷಪಡುತ್ತಿದ್ದೆವು. ನನಗೆ ಇನ್ನೂ ಒಂದು ಖುಷಿಯ ಸಂಗತಿಯೆಂದರೆ ಜಯನಗರದ ನಂದಾ ಥಿಯೇಟರ್  ಬಳಿಯ ಒಂದೇ ಪಾರ್ಕಿನಲ್ಲಿ ನಾನು ಮತ್ತು ನನ್ನ ಪತಿ  ಅವರ ಜೊತೆ ದಿನಾ ವಾಕ್ ಮಾಡುವ ಸಂದರ್ಭ ಒದಗಿದ್ದು. ಚುಮು ಚುಮು ನಸುಕು. ಡಿಸೆಂಬರ್ ತಿಂಗಳ ಕೊರೆಯುವ ಚಳಿ… ದಿನಾ ಜೀವಿಯವರಿಗಿಂತ ಮುಂಚೆ ನಾನಲ್ಲಿರಬೇಕೆಂದು ನನಗೆ ಆಸೆ. ಸುಮಾರು  ಆರುಗಂಟೆಯ  ಹಿಮಗತ್ತಲಲ್ಲಿ ಪಾರ್ಕು ಪ್ರವೇಶಿಸಿ ಒಂದು ರೌಂಡ್  ಹಾಕಿ ಬರುವಷ್ಟರಲ್ಲಿ, ಜೀವಿಯವರಾಗಲೇ ತಮ್ಮ ಮಾಮೂಲು ಮೂರು ರೌಂಡ್ ಮುಗಿಸಿ ,ಕೈ-ಕಾಲು ಅಲ್ಲಾಡಿಸುತ್ತ ವ್ಯಾಯಾಮ ಮಾಡುತ್ತ ಕಲ್ಲುಬೆಂಚಿನ ಮೇಲೆ ಕುಳಿತಿರುತ್ತಿದ್ದರು. ಅವರ ಚಟುವಟಿಕೆಯ ಚುರುಕು ನಡಿಗೆ ಕಂಡು ನನಗೆ ತುಂಬಾ ನಾಚಿಕೆಯಾಗುತ್ತಿತ್ತು.”ಅವರ ವೇಗದ ನಡಿಗೆಯನ್ನು ನೀನು ಸರಿಗಟ್ಟಲಾರೆ” -ಎಂದು ನಮ್ಮವರು ರೇಗಿಸುತ್ತಿದ್ದರು.

    ಶತಮಾನವನ್ನು ದಾಟಿದ್ದರೂ ‘ಜೀವಿ’ ಯುವಜನತೆಗಿಂತ  ತುಂಬಾ ಚಟುವಟಿಕೆಯ ಜೀವನವನ್ನು ನಡೆಸುತ್ತಿದ್ದಾರೆಂಬ ಸಂಗತಿ ಇತರರಿಗೆ ನಿಜಕ್ಕೂ ಮಾದರಿ. ಅದೂ ಬೆಳಗಿನ ಝಾವ ಈ ವಯಸ್ಸಿನಲ್ಲಿ ಅವರೇ ಕಾಫಿ ಡಿಕಾಕ್ಷನ್ ಗೆ ಹಾಕಿ , ಕಾಫಿ ಮಾಡಿಕೊಂಡು ಕುಡಿದು ಬರುತ್ತಾರೆಂದರೆ ಅವರೆಂಥ “ಬೆಳಗಿನ ಹಕ್ಕಿ” ಎಂದು ನಾವೇ ಊಹಿಸಿಕೊಳ್ಳಬಹುದು. ಇದೇ ಅವರ ದೀರ್ಘಾಯುಷ್ಯದ ಗುಟ್ಟು ಎಂದೂ ಹೇಳಬಹುದು. ವಾಕಿಂಗ್ ಅವರ ಜೀವನಾಡಿ.

    ಸುಮಾರು ಮೂವತ್ತು ವರ್ಷದ ಹುಡುಗನಾಗಿದ್ದಾಗಿನಿಂದ ತಮ್ಮ ಈ ವಾಕಿಂಗ್ ಅಭ್ಯಾಸ, ಅಂದಿನಿಂದ ಇಂದಿನವರೆಗೂ ನಡೆದು ಬರುತ್ತಿದ್ದು,  ಎಂದೂ ತಾವು ವಾಕಿಂಗ್ ನಿಲ್ಲಿಸಿಲ್ಲ ಎಂದು ಅವರು ನುಡಿಯುವಾಗ ಅವರ ಮೊಗದಲ್ಲಿ ಆರೋಗ್ಯದ ಕಳೆ ಮಿಂಚುತ್ತದೆ. ಅವರು ವಾಕಿಂಗ್ ಮುಗಿಸಿ ಕುಳಿತನಂತರ ಅವರ ಸುತ್ತ ಅವರಿಗಿಂತ ಕೊಂಚ ಸಣ್ಣ ವಯಸ್ಸಿನ  ಸ್ನೇಹಿತರ ಒಂದು ದಂಡೇ ಸೇರುತ್ತದೆ. ಅವರೆಲ್ಲ ಸಾಹಿತ್ಯ ಜಗತ್ತಿನಲ್ಲಿ ಪ್ರಖ್ಯಾತರೇ. ನಗುಮೊಗದಿಂದ ಅವರೊಡನೆ ಜೀವಿ ಹರಟುತ್ತಾರೆ,ಅನೇಕ ವಿದ್ಯಮಾನಗಳನ್ನು ಕುರಿತು ಚರ್ಚಿಸುತ್ತಾರೆ.ಇಬ್ಬರೂ ಏನೇನು ಬರೆದಿರಿ, ಹೊಸ ಪುಸ್ತಕ ಬಂತೇ?.. ಇತ್ಯಾದಿ  ನಮ್ಮಿಬ್ಬರನ್ನೂ ವಿಚಾರಿಸಿಕೊಳ್ಳುತ್ತಾರೆ. ಸರಿಯಾಗಿ ಏಳು ಗಂಟೆಗೆ ಮೇಲೆದ್ದು ಎಲ್ಲರಿಗೂ  ಕೈ ಬೀಸಿ ಮನೆಯ ಕಡೆ ನಡೆಯುತ್ತಾರೆ. ಇದು ಅವರ ದಿನನಿತ್ಯದ ಅಭ್ಯಾಸ. ಇದೆಲ್ಲ ಕೊಂಚ ಗತ ಇತಿಹಾಸ…. ಐದಾರು ವರ್ಷಗಳ ಹಿಂದೆ ನಮ್ಮ ಪಾರ್ಕಿಗೆ ಗ್ರಹಣ ಬಡಿಯಿತು. ಪಾರ್ಕಿನ ಅರ್ಧ ಭಾಗ ಕಬಳಿಸಿ ಮೆಟ್ರೋ ಆರಂಭವಾಯಿತು. ಜೀವಿಯವರ ನಡಿಗೆ ಸ್ಥಳ ಬದಲಾಗಿ ನಮ್ಮ ಭೇಟಿ ಅಪರೂಪವಾಗಿದೆಯಾದರೂ ನಾವು ಅವರನ್ನು ನಿತ್ಯ ನೆನೆಯುತ್ತೇವೆ.

    ಅವರು ಈ ವಯಸ್ಸಿನಲ್ಲೂ ದಿನನಿತ್ಯ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಂಡು-ಕೇಳಿ ತುಂಬಾ ಖುಷಿಪಡುತ್ತೇವೆ. ಇಂದವರು  107 ದಾಟಿ 108 ರಲ್ಲಿ ಇತರರಿಗೆ ಅನುಕರಣೀಯರಾಗಿ ಆದರ್ಶದ -ಕ್ರೀಯಾಶೀಲ ಜೀವನವನ್ನು ಕ್ರಮಿಸುತ್ತ ನಾಡಿನ ಭಾಗ್ಯದಂತೆ ಕನ್ನಡನಾಡಿನ ಹೆಮ್ಮೆಯ ಪುತ್ರರಾಗಿ, ಮಾರ್ಗದರ್ಶಕರಾಗಿರುವುದು ಭುವನದ ಹಾಗೂ ನಮ್ಮೆಲ್ಲರ ಭಾಗ್ಯ. ಬರೀ ದೀರ್ಘಾಯಸ್ಸಿದ್ದರೆ ಸಾಲದು. ಇಂಥ ಸಕ್ರಿಯ-ಜೀವಂತಿಕೆಯ ಅನುಕ್ಷಣದ ಸಾರ್ಥಕ ಬದುಕು ನಮ್ಮ ಗುರುಗಳದು ಎಂದು ನೆನೆದಾಗ ಮೈ ರೋಮಾಂಚನಗೊಳ್ಳುತ್ತದೆ. ನಿಜಕ್ಕೂ ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂಥ ಸಾಧಕ ಜೀವನ ಅವರದು….ಹುಟ್ಟಿದ ಹಬ್ಬದ  ಸಂತೋಷದ ಸಂದರ್ಭದಲ್ಲಿ ಮನಸಾ ವಂದಿಸುವೆ.  “ಶ್ರೀ ಗುರುಭ್ಯೋ ನಮಃ ”                                                          

    ವೈ.ಕೆ.ಸಂಧ್ಯಾ ಶರ್ಮ -ಹಿರಿಯ ಸಾಹಿತಿ,ಪತ್ರಕರ್ತೆ, ಕಲಾ ವಿಮರ್ಶಕಿ ಮತ್ತು ರಂಗಕರ್ಮಿ. ಕರ್ನಾಟಕ ವಾರ್ತಾಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನೃತ್ಯ-ನಾಟಕ ವಿಮರ್ಶಕಿ ಆಗಿಯೂ ಪರಿಚಿತ. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಇವರು, ಕಳೆದ 50 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತ ಜನಪ್ರಿಯ ಲೇಖಕಿಯಾಗಿದ್ದಾರೆ. ಇವರು,  ಸುಮಾರು 250 ಸಣ್ಣಕತೆಗಳು, 35 ಕಾದಂಬರಿಗಳು, ನೂರಕ್ಕೂ ಹೆಚ್ಚು ಕವನಗಳು, ಹಾಸ್ಯಬರಹಗಳು,  ನಾಟಕ,  ಜೀವನಚರಿತ್ರೆಯನ್ನು ರಚಿಸಿದ್ದಾರೆ.    ಸಧ್ಯ ಸಂಧ್ಯಾ ಪತ್ರಿಕೆ ಎಂಬ ಅಂತರ್ಜಾಲದ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಇವರು ಯಶಸ್ವಿಯಾಗಿ ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

         

    ನೂತನ ರಾಷ್ಟ್ರೀಯ ಶಿಕ್ಷಣ ನೀತಿ – ಜಾರಿ ಸಮಯದ ಸವಾಲು


    ಹಿಂದಿನ ಲೇಖನದಲ್ಲಿ (ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಇರುವುದಾದರು ಏನು?) ನೂತನ ಶಿಕ್ಷಣ ನೀತಿ – 2020 ರ ಪ್ರಮುಖಾಂಶಗಳ ಬಗ್ಗೆ
    ಅವಲೋಕಿಸಲಾಗಿತ್ತು. ಈ ಲೇಖನದಲ್ಲಿ ಅದರ ಜಾರಿ ಸಮಯದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ.

    ಹೊಸ ಶಿಕ್ಷಣ ನೀತಿಯನ್ನು ಯಾವ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗುವುದು ಎಂಬ ಪ್ರಶ್ನೆ ಹಲವಾರು ಜನರಲ್ಲಿ ಮೂಡಿರುವುದು ಸಹಜ. ಜೊತೆಗೆ ಇಂತಹ ದೊಡ್ಡ ಮಟ್ಟದಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ, ಅದರಲ್ಲೂ ಹೆಚ್ಚು ಜನಸಂಖೈ ಮತ್ತು ದೊಡ್ಡ ಶಿಕ್ಷಣ ಜಾಲವಿರುವ ನಮ್ಮ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಬಯಸುವ
    ನೀತಿಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಸಾಧ್ಯ ಮತ್ತು ಅನುಷ್ಠಾನಕ್ಕೆ ತರುವ ಸಮಯದಲ್ಲಿ
    ಹಲವಾರು ಸಮಸ್ಯೆಗಳು ಉದ್ಬವಿಸಬಹುದು, ಅವುಗಳನ್ನು ಹೇಗೆ ನಿವಾರಣೆ ಮಾಡಬೇಕು ಎಂಬ
    ಆಲೋಚನೆಗಳು ಬರುವುದು ಸರ್ವೇ ಸಾಮಾನ್ಯ.

    ಈ ಲೇಖನದಲ್ಲಿ ಸವಾಲುಗಳ ಬಗ್ಗೆ ಅವಲೋಕಿಸಲು ಪ್ರಯತ್ನಿಸೋಣ. ಮೊಟ್ಟ ಮೊದಲಿಗೆ, ಒಂದು ಅಂಶವನ್ನು ಹೇಳ ಬಯಸುತ್ತೇನೆ. ಯಾವುದೇ ಒಂದು ನೀತಿಯು ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳ್ಳ ಬೇಕಾದರೆ, ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯ.
    ಅದೃಷ್ಟವಶಾತ್, ಈ ನೀತಿಯನ್ನು ಕಾರ್ಯರೂಪಕ್ಕೆ ತರಲು, ಇಂದಿನ ಕೇಂದ್ರ ಸರ್ಕಾರ ಮತ್ತು ನಮ್ಮರಾಜ್ಯ ಸರ್ಕಾರಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಎದ್ದು ಕಾಣುತ್ತಿದೆ.

    ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಾತನಾಡುತ್ತ ‘This policy has the stamp of my political will’ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ನಮ್ಮರಾಜ್ಯದ ಉಪಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ. ಅಶ್ವತ್ಥ
    ನಾರಾಯಣರವರು, ವಿಶ್ವ ವಿದ್ಯಾಲಯದ ಸಮಾರಂಭದಲ್ಲಿ ಮಾತನಾಡುತ್ತಾ, ನೀತಿಯನ್ನು
    ಜಾರಿಗೊಳಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ
    ಎಂಬ ಮಾತನ್ನು ಹೇಳಿದ್ದಾರೆ. ಇದರಿಂದ ರಾಜಕೀಯ ಇಚ್ಛಾಶಕ್ತಿಯಿರುವುದು ದೃಢಪಡುತ್ತದೆ.

    ಈ ವರ್ಷದಿಂದ, ಅಥವಾ ಕೋವಿಡ್ 19 ರಿಂದ ತೊಂದರೆಯಾಗಿರುವ ಕಾರಣ, ಮುಂದಿನ ಶೈಕ್ಷಣಿಕ
    ವರ್ಷದಿಂದ ಹಂತ ಹಂತವಾಗಿ ಹೊಸ ಶಿಕ್ಷಣ ನೀತಿಯು ಜಾರಿಗೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    ಸವಾಲುಗಳು

    1 . ನಮ್ಮ ದೇಶದಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕಾದ
    ವಯೋಮಾನವನ್ನು ಹೊಂದಿರುವ ಯುವ ಜನಸಂಖ್ಯೆ ಸುಮಾರು 35 ಕೋಟಿ. ಅಂದರೆ
    ನೂತನ ಶಿಕ್ಷಣ ನೀತಿಯ ಅನುಷ್ಠಾನವು ಅತಿದೊಡ್ಡ ಮಟ್ಟದಲ್ಲಿ ಪ್ರಪಂಚದ ಬೇರೆ ಯಾವ
    ದೇಶದಲ್ಲೂ ಕಂಡು ಅರಿಯದ ಪ್ರಮಾಣದಲ್ಲಿ ಜಾರಿಗೊಳಿಸ ಬೇಕಾಗಿದೆ. ಇದು ನಿಜವಾಗಿಯೂ
    ದೊಡ್ಡ ಸವಾಲು.

    2. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳನ್ನು ಗಮನಿಸಿದಾಗ, ಶಾಲೆಯಿಂದ ಹೊರಗೆ ಉಳಿದಿರುವ ಸುಮಾರು ಎರಡು ಕೋಟಿ ಮಕ್ಕಳನ್ನು ಮುಂದಿನ 15 ವರ್ಷಗಳಲ್ಲಿ ಮತ್ತೆ
    ಶಾಲೆಗೆ ಬರುವಂತೆ ಮಾಡ ಬೇಕಾಗಿರುವ ಉದ್ದೇಶವನ್ನು ಹೊಂದಿದೆ. ಇದನ್ನು ಜಾರಿಗೊಳಿಸಲು ಸಾವಿರಾರು ಶಾಲೆಗಳನ್ನು ತೆರೆಯ ಬೇಕಾಗುತ್ತದೆ. ಅಥವಾ, ಹೀಗಿರುವ ಶಾಲೆಗಳನ್ನು ವಿಸ್ತರಿಸಿ,ಲಕ್ಷಾಂತರ ಶಿಕ್ಷಕರನ್ನು ನೇಮಕಾತಿ ಮಾಡಬೇಕಾಗುತ್ತದೆ. ಜೊತೆಗೆ, ಮೂಲಭೂತ
    ಸೌಕರ್ಯಗಳನ್ನು ಹೆಚ್ಚಿಸ ಬೇಕಾಗುತ್ತದೆ. ಇಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ತಗಲುವ
    ವೆಚ್ಚವನ್ನು ಅದರಲ್ಲೂ, ಕೋವಿಡ್ 19 ರಿಂದ ಹಣಕಾಸಿನ ವ್ಯವಸ್ಥೆಗೆ ಬಹಳ ದೊಡ್ಡ
    ಪೆಟ್ಟು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು
    ನೋಡ ಬೇಕಾಗಿದೆ.

    3. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ( Early Childhood Care and
    Education ) ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ತಯಾರು
    ಮಾಡಬೇಕಾಗಿದೆ. ಇದು ದೊಡ್ಡ ಸವಾಲು.

    4. ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ಎಲ್ಲಾ ಮಕ್ಕಳು ವೃತ್ತಿ ಪರ ಶಿಕ್ಷಣದ ಅಡಿಯಲ್ಲಿ
    ಯಾವುದಾದರೂ ಒಂದು ಔದ್ಯೋಗಿಕ ಶಿಕ್ಷಣ ತರಬೇತಿಯನ್ನು ಕಡ್ಡಾಯವಾಗಿ
    ಪಡೆಯಬೇಕಾಗಿರುತ್ತದೆ. ಸ್ಥಳೀಯವಾಗಿ ದೊರಕುವ ಪ್ರತಿಭೆಯನ್ನು ಉಪಯೋಗಿಸಿಕೊಂಡರು
    ಸಹ, ಬಹಳ ದೊಡ್ಡ ಮಟ್ಟದಲ್ಲಿ ವೃತ್ತಿ ಪರ ಶಿಕ್ಷಣದ ಶಿಕ್ಷಕರನ್ನು ತಯಾರು ಮಾಡ
    ಬೇಕಾಗಿರುತ್ತದೆ.

    5. ಬೋಧನಾ ಕ್ರಮದಲ್ಲಿ ಸೃಜನಶೀಲತೆ ( Creativity ), ಹೊಸತನ್ನು ಕಂಡು ಹಿಡಿಯುವಿಕೆ (innovation ), ಪರಿಕಲ್ಪನಾ ತಿಳಿವಳಿಕೆ ( Conceptual understanding ), ಇವುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹೊಸ ರೀತಿಯಲ್ಲಿ ಬೋಧನೆ ಮಾಡುವಂತಹ
    ಶಿಕ್ಷಕರನ್ನು, ತರಬೇತಿ ನೀಡಿ ತಯಾರು ಮಾಡುವುದು ದೊಡ್ಡ ಪ್ರಮಾಣದ ಯೋಜನೆ ಎಂದರೆ ತಪ್ಪಾಗಲಾರದು.

    6. ಶಿಕ್ಷಣ ನೀತಿಯಲ್ಲಿ ಕನಿಷ್ಠ 5 ನೇ ತರಗತಿಯವರಿಗೆ, ಮಾತೃ ಭಾಷೆ ಅಥವಾ ಸ್ಥಳೀಯ
    ಭಾಷೆಯು ಬೋಧನಾ ಮಾಧ್ಯಮವಾಗಿರ ಬೇಕೆಂದು ಉದ್ದೇಶಿಸಲಾಗಿದೆ. ಆದರೆ ಈ ಅಂಶದ
    ಬಗ್ಗೆ ಈಗಾಗಲೆ ಕೆಲವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿವೆ. ನಮ್ಮ ದೇಶದಲ್ಲಿ ಇದು ಬಹಳ ಸೂಕ್ಷ್ಮ ರೀತಿಯ ಸಮಸ್ಯೆಯಾದ್ದರಿಂದ, ಬಹಳ ದಕ್ಷತೆಯಿಂದ, ಸವಾಲನ್ನು ಎದುರಿಸ ಬೇಕಾಗಿದೆ.

    7. ರಾಷ್ಟ್ರೀಯ ಮಟ್ಟದ ಪಠ್ಯಕ್ರಮದ ಚೌಕಟ್ಟನ್ನು ತಯಾರಿಸುವಾಗ ವರ್ಗಾವಣೆಗೆ ಒಳಪಡುವ
    ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳ ಆಸಕ್ತಿ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳ ಬೇಕಾಗಿದೆ.

    8. ನೀತಿಯಲ್ಲಿ ಪಾಲಿ, ಪ್ರಾಕೃತ್ ಮತ್ತು ಪರ್ಶಿಯನ್ ಭಾಷೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ಪ್ರಾರಂಭದಲ್ಲಿ ಈ
    ಕಾರ್ಯವನ್ನು ಮೈಸೂರಿನಲ್ಲಿರುವ Central Institute of Indian Languages
    ಇದಕ್ಕೆ ವಹಿಸಬಹುದು.

    9. ಉನ್ನತ ಶಿಕ್ಷಣದಲ್ಲಿ 2035 ರ ವೇಳೆಗೆ ಶೇ 50 ರಷ್ಟು ಸರಾಸರಿ ದಾಖಲಾತಿ ಅನುಪಾತವನ್ನು
    ( ಜಿಇಆರ್ ) ಮುಟ್ಟುವ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ಮುಟ್ಟ ಬೇಕಾದರೆ, ಕನಿಷ್ಠ ಇನ್ನೂ 800 ವಿಶ್ವ ವಿದ್ಯಾಲಯವನ್ನು ಸ್ಥಾಪಿಸ ಬೇಕಾಗಿರುತ್ತದೆ. ಜೊತಗೆ, ಈಗಿರುವ ವಿಶ್ವ ವಿದ್ಯಾಲಯಗಳಲ್ಲಿ ಮೂಲ ಭೂತ ಸೌಕರ್ಯಗಳನ್ನು ಹೆಚ್ಚಿಸಿ ಸಾವಿರಾರು ಪ್ರಾಧ್ಯಾಪಕರನ್ನು ನೇಮಕಾತಿ ಮಾಡಬೇಕಾಗುತ್ತದೆ. ಪ್ರಸ್ತುತ ವಿಶ್ವ ವಿದ್ಯಾಲಯಗಳಲ್ಲಿ ಶೇ.30 ರಷ್ಟು ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಇದು ನಿಜವಾಗಿಯೂ ಬೃಹತ್ ಸವಾಲೇ ಸರಿ.

    10. 2035 ರ ವೇಳೆಗೆ ವಿಶ್ವ ವಿದ್ಯಾಲಯಗಳಿಂದ ಕಾಲೇಜುಗಳು ಸಂಯೋಜನೆ ಪಡೆಯುವ
    ಪದ್ಧತಿ ಇರುವುದಿಲ್ಲ ( No affiliation system ). ಈ ವೇಳೆಗೆ ಪ್ರತಿಯೊಂದು ಮಹಾ
    ವಿದ್ಯಾಲಯವು ಬಹು ಶಿಸ್ತೀಯ ( multi disciplinary ) ಮತ್ತು ದೊಡ್ಡ ಮಟ್ಟದ
    ಕಾಲೇಜಾಗಿ ಬೆಳೆದು ಕನಿಷ್ಠ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು
    ಉದ್ಧೇಶಿಸಲಾಗಿದೆ. ಜೊತೆಗೆ ಪ್ರತಿಯೊಂದು ಕಾಲೇಜು ಪದವಿಗಳನ್ನು ಪ್ರದಾನ ಮಾಡುವ
    ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿ ಬೆಳೆಯ ಬೇಕಾಗುತ್ತದೆ. ತಾತ್ವಿಕವಾಗಿ ಒಳ್ಳೆಯ ವ್ಯವಸ್ಥೆ.
    ಆದರೆ ಈ ವ್ಯವಸ್ಥೆ ಕಾಸ್ಮೋಪಾಲಿಟನ್ ನಗರಗಳಲ್ಲಿ, ಸ್ವಲ್ಲ ಮಟ್ಟಿಗೆ ಜಿಲ್ಲಾ
    ಕೇಂದ್ರಗಳಲ್ಲಿ ಸಾಧ್ಯವಾಗಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದು ಸಾಧ್ಯವೆ? ಎಂಬ
    ಪ್ರಶ್ನೆ ಕಾಡುತ್ತದೆ. ಗ್ರಾಮೀಣ ಪ್ರದೇಶದ ಚಿಕ್ಕ ಕಾಲೇಜುಗಳು ಪದವಿಯನ್ನು ನೀಡಿದರೆ, ಈ
    ಪದವಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳು ಸಿಗುವ ನಂಬಿಕೆಯಾದರು ಏನು. ಈಗ ಗ್ರಾಮೀಣ ಪ್ರದೇಶದಲ್ಲಿರುವ ಕಾಲೇಜುಗಳು, ವಿಶ್ವ ವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಾಗಿದ್ದು ವಿದ್ಯಾರ್ಥಿಗಳು
    ವಿಶ್ವ ವಿದ್ಯಾಲಯಗಳಿಂದ ಪದವಿಗಳನ್ನು ಪಡೆಯುತ್ತಿದ್ದಾರೆ. ನಂತರ ಅವರ ಸ್ವಂತ
    ಪ್ರತಿಭೆಯಿಂದ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಯೋಜನಾ ಪದ್ಧತಿಯನ್ನು
    ಮುಂದುವರಿಸುವುದು ಒಳ್ಳೆಯದು ಎಂಬುವುದು ನನ್ನ ಅಭಿಪ್ರಾಯ.

    11. ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವಂತೆ, ಒಂದು ವೇಳೆ 2035 ರ ವೇಳೆಗೆ ಯಾವುದೇ
    ಶಿಕ್ಷಣ ಸಂಸ್ಥೆಯು ಬಹುಶಿಸ್ತೀಯ ದೊಡ್ಡ ಮಟ್ಟದ ಕಾಲೇಜಾಗಿ ಬೆಳೆಯಲು ಸಾಧ್ಯವಾಗದ
    ಪಕ್ಷದಲ್ಲಿ, ಅಂತಹ ಕಾಲೇಜನ್ನು ವಿಶ್ವ ವಿದ್ಯಾಲಯಕ್ಕೆ ಸೇರಿಸಲಾಗುವುದು. ಅಥವಾ ವಿಶ್ವವಿದ್ಯಾಲಯದ ಘಟಕದ ಕಾಲೇಜಾಗಿ ( constituent college ) ಪರಿವರ್ತನೆ
    ಮಾಡಲಾಗುವುದು. ಈ ವ್ಯವಸ್ಥೆ ಆಡಳಿತಾತ್ಮಕ ದೃಷ್ಟಿಯಿಂದ ಕಷ್ಟ ಸಾಧ್ಯವಾಗಬಹುದು.

    12. ಪದವಿ ಶಿಕ್ಷಣದ ಅವದಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು
    ನೀಡಲಾಗಿದೆ. ಅಂದರೆ 2 ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ, ಡಿಪ್ಲೊಮ
    ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್
    ಕೋರ್ಸ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದು ಉತ್ತಮವಾದ ಕ್ರಮ. ಏಕೆಂದರೆ,
    ಪ್ರಸ್ತುತ ವ್ಯವಸ್ಥೆಯಲ್ಲಿ, ಪದವಿ ಶಿಕ್ಷಣದ ಮಧ್ಯದಲ್ಲಿ ನಿರ್ಗಮಿಸಿದರೆ, ಯಾವ ಸರ್ಟಿಫಿಕೇಟ್
    ಸಿಗುವುದಿಲ್ಲ. ಆದರೆ ಮೇಲೆ ತಿಳಿಸಿರುವ ರೀತಿಯಲ್ಲಿ ಪದವಿ ಶಿಕ್ಷಣದ ಮಧ್ಯದಲ್ಲಿ ನಿರ್ಗಮಿಸಿ ಡಿಪ್ಲೊಮ ಅಥವಾ ಸರ್ಟಿಫಿಕೇಟ್ ಪ್ರಮಾಣ ಪತ್ರವನ್ನು ಪಡೆದವರಿಗೆ
    ಉದ್ಯೋಗಾವಕಾಶಗಳನ್ನು ಸೃಷ್ಠಿಸ ಬೇಕಾಗುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ
    ಅವರನ್ನು ಗುರುತಿಸುವಂತೆ ಪಠ್ಯ ಕ್ರಮವನ್ನು ತಯಾರು ಮಾಡ ಬೇಕಾಗಿದೆ. ಬಹಳ
    ಎಚ್ಚರಿಕೆಯಿಂದ ಹೆಜ್ಜೆ ಇಡ ಬೇಕಾಗಿರುತ್ತದೆ.

    13. ಪ್ರೌಢ ಮತ್ತು ಕಾಲೇಜು ಹಂತಗಳಲ್ಲಿ ಅಧ್ಯಯನಕ್ಕೆ ವಿಷಯಗಳನ್ನು ಆರಿಸಿಕೊಳ್ಳುವ
    ಸಂದರ್ಭದಲ್ಲಿ ಕೆಫೆಟೀರಿಯಾ ವಿಧಾನವನ್ನು ( cafeteria approach ) ಅಳವಡಿಸಲು
    ಉದ್ದೇಶಿಸಲಾಗಿದೆ. ಇದರ ಅರ್ಥ, ನಾವು ಹೋಟೆಲ್‍ಗೆ ಹೋದಾಗ ನಮಗೆ ಬೇಕಾದ ತಿಂಡಿ
    ಪದಾರ್ಥಗಳನ್ನು ಆರಿಸಿಕೊಳ್ಳುವಂತೆ. ಕಲೆ, ವಾಣಿಜ್ಯ, ವಿಜ್ಞಾನ, ಸಮಾಜ ವಿಜ್ಞಾನದ
    ವಿಷಯಗಳು, ಮಾನವೀಯ ಶಾಸ್ತ್ರಕ್ಕೆ ಸಂಬಂಧ ಪಟ್ಟ ವಿಷಯಗಳು, ಇವುಗಳ ನಡುವೆ
    ಈಗಿರುವ ಅಡ್ಡ ಗೋಡೆಗಳನ್ನು ಸರಿಸಿ, ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನು
    ಅಧ್ಯಯನಕ್ಕೆ ಆರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಿಜವಾಗಿಯೂ ಉತ್ತಮ ಪದ್ಧತಿ.
    ಇನ್ನೂ ಮುಂಚೆಯೇ ಈ ಪದ್ಧತಿ ಜಾರಿಗೆ ಬರ ಬೇಕಾಗಿತ್ತು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ
    ಭೌತಶಾಸ್ತ್ರ, ಸಂಗೀತ ಮತ್ತು ಇತಿಹಾಸದ ವಿಷಯಗಳನ್ನು ಆರಿಸಿಕೊಳ್ಳ ಬಹುದು. ಆದರೆ
    ಆಡಳಿತ ಮಂಡಳಿಗಳ ದೃಷ್ಠಿಯಿಂದ ಇದು ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದು. ಅನೇಕ
    ವಿಷಯಗಳಿಗೆ ಸಂಬಂಧ ಪಟ್ಟಂತೆ, ಮೂಲ ಸೌಕರ್ಯ ಮತ್ತು ಶಿಕ್ಷಕರನ್ನು ಒದಗಿಸುವುದು
    ಕಷ್ಟಕರವಾದಂತ ನಿರ್ಧಾರವಾಗಬಹುದು.

    14. ಬಹು ಶಿಸ್ತೀಯ ವಿಧಾನವನ್ನು ( multi disciplinary ) ಅಳವಡಿಸುವಾಗ
    ಮಾನಸಿಕವಾಗಿ ಶಿಕ್ಷಕರಲ್ಲೂ ಸಹ ಸಾಂಸ್ಕೃತಿಕ ಬದಲಾವಣೆ ( cultural shift ) ಬರ
    ಬೇಕಾಗಿರುತ್ತದೆ. ಈ ಪ್ರಕ್ರಿಯೆ 10 – 15 ವರ್ಷಗಳಲ್ಲಿ ಪೂರ್ಣಗೊಳ್ಳ ಬೇಕಾಗಿರುತ್ತದೆ.
    ಪ್ರಾಧ್ಯಾಪಕರಲ್ಲಿ ಇದರ ಬಗ್ಗೆ ನಿರುತ್ಸಾಹ ಉಂಟಾಗುವ ಸಾಧ್ಯತೆಗಳಿವೆ.

    15. ಹಿಂದಿನ ಲೇಖನಕ್ಕೆ ಪ್ರತಿಕ್ರಿಯಿಸಿ, ಕೆಲವರು ಹಾಲಿ ಸೇವೆಯಲ್ಲಿರುವ ಶಿಕ್ಷಕರ ಸ್ಥಿತಿ
    ಅಥವಾ ಸ್ಥಾನಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹಾಲಿ ಸೇವೆಯಲ್ಲಿರುವ ಶಿಕ್ಷಕರ
    ಸೇವೆಯನ್ನು ಅವಶ್ಯಕತೆಗೆ ಅನುಗುಣವಾಗಿ ತರಬೇತಿ ನೀಡಿ, ಅವರುಗಳ ಸೇವೆಯನ್ನು ಹೆಚ್ಚಿನ
    ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಪ್ರಸ್ತುತ ಅಂಗನವಾಡಿ ಕಾರ್ಯ ಕರ್ತೆಯರಲ್ಲಿ ಪಿಯುಸಿ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಹತೆ ಪಡೆದಿರುವವರಿಗೆ ಆರು ತಿಂಗಳ ತರಬೇತಿ,
    ಕಡಿಮೆ ವಿದ್ಯಾರ್ಹತೆ ಪಡೆದಿರುವ ಕಾರ್ಯ ಕರ್ತೆಯರಿಗೆ ಒಂದು ವರ್ಷದ ತರಬೇತಿಯನ್ನು
    ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದಡಿಯಲ್ಲಿ ನೀಡಲಾಗುವುದು. ಪ್ರೌಢ ಶಿಕ್ಷಣ
    ಹಂತದಲ್ಲಿ 9 ರಿಂದ 12 ನೇ ತರಗತಿಯವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಅನುಷ್ಠಾನ
    ಮಾಡಲಾಗುತ್ತದೆ. ಹಾಲಿ ಶಿಕ್ಷಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗುವುದಿಲ್ಲ.

    16. ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ
    ಕಾರ್ಯಕ್ರಮವನ್ನು ಬಹು ಶಿಸ್ತಿನ ವಿದ್ಯಾ ಸಂಸ್ಥೆಗಳಿಗೆ ವರ್ಗಾಯಿಸಲು ಯೋಜಿಸಿರುವುದು
    ನಿಜವಾಗಲೂ ಉತ್ತಮ ಹೆಜ್ಜೆ. ಹಾಲಿ ಬಿ. ಎಡ್ ಕಾಲೇಜುಗಳು ಸಹ ಬಹು ಶಿಸ್ತೀಯ
    ಕಾಲೇಜುಗಳಾಗಿ ಬೆಳೆದು ಪರಿವರ್ತನೆಯಾಗ ಬೇಕೆಂಬ ನಿರ್ಧಾರ ಬಹಳ ಒಳ್ಳೆಯದು. ಇದರಿಂದ
    ಶಿಕ್ಷಕರ ಶಿಕ್ಷಣ ಗುಣಮಟ್ಟ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಎರಡು ವರ್ಷದ ಬಿ. ಎಡ್
    ಕೂಡ ಬಹು ಶಿಸ್ತೀಯ ವಿದ್ಯಾ ಸಂಸ್ಥೆಗಳಿಗೆ ಮಾತ್ರ ನೀಡ ಬೇಕು.

    ನೂತನ ಶಿಕ್ಷಣ ನೀತಿಯಲ್ಲಿ ಹಲವಾರು ಉತ್ತಮ ಸಲಹೆಗಳನ್ನು ನಾವುಗಳು ಕಾಣಬಹುದು. ಉದಾಹರಣೆಗೆ ಮೂರು ವರ್ಷದ ಮಕ್ಕಳ ಶಿಕ್ಷಣವನ್ನು ಮುಖ್ಯವಾಹಿನಿಗೆ ತಂದಿರುವುದು, ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಸ್ವಾಯತ್ತತೆ, ಸಮಾಜದ ಎಲ್ಲಾ ವರ್ಗಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಕೈಗೆಟಕುವಂತೆ ಪ್ರಯತ್ನ, ವೃತ್ತಿ ಪರ ಶಿಕ್ಷಣವನ್ನು ಮುಖ್ಯ ವಾಹಿನಿ ಶಿಕ್ಷಣದ ಜೊತೆಯಲ್ಲಿ ಸಂಯೋಜಿಸಿರುವುದು, ಪಠ್ಯ ಕ್ರಮದಲ್ಲಿ ನಮ್ಮ ದೇಶದ ಎಥೋಸ್, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಒತ್ತು ನೀಡಿರುವುದು, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಗಳಿಗೆ ಒತ್ತು ನೀಡಿರುವುದು.

    ಈ ನೂತನ ಶಿಕ್ಷಣದ ನೀತಿಯು ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಯಶಸ್ವಿಯಾಗಿ ಜಾರಿಗೆ ಬಂದು, ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಲೆಂದು ನಾವೆಲ್ಲರೂ ಆಶಿಸೋಣ.

    Photo by Ian Panelo from Pexels

    ಅಮೆರಿಕಾದ ಮಹಾ ಚುನಾವಣೆಗೆ ಇನ್ನೆರಡೇ ತಿಂಗಳು

    ಅಮೆರಿಕಾದ ಮಹಾಚುನಾವಣೆಗೆ ಇನ್ನೆರಡೇ ತಿಂಗಳು. ಇದುವರೆಗೆ ಕೊರೊನಾ ಸ್ವಲ್ಪ ಕಡಿಮೆಯಾಗಲಿ ಎಂದು ಕಾಯುತ್ತಿದ್ದ ರಾಜಕೀಯ ಪಕ್ಷಗಳ ಸಮಾವೇಶಗಳು ಇದೀಗ ಸುದ್ದಿಮಾಡಲು ದಾಂಗುಡಿಯಿಡುತ್ತಿವೆ. ಪ್ರಪಂಚವೇ ಎದುರುನೋಡುತ್ತಿರುವ ಈ ಮಹಾಚುನಾವಣೆಯ ಮುನ್ನೋಟ ವಿರೋಧ ಪಕ್ಷದ ನಾಯಕ ಜೋ ಬಿಡೆನ್ ಕಡೆಗೆ ವಾಲಿದೆ. ಆದರೆ ನಿಜವಾದ ಚುನಾವಣೆಯಲ್ಲಿ ಏನೂ ಆಗಬಹುದು. ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ ಗೆಲ್ಲುವ ಸಾಧ್ಯತೆ ಟ್ರಂಪ್: ಬಿಡೆನ್ :: 41:49 ಎಂದು ವರದಿಯಾಗಿದೆ.

    ಭಾರತೀಯರ ಒಲವು ಎರಡೂ ಪಕ್ಷಗಳ ಕಡೆಗೆ ತೂಗುತ್ತಿದೆ. ಭಾರತೀಯ ಮೂಲದ ಅಮೆರಿಕನ್ನರು ಸಾಂಪ್ರದಾಯಿಕವಾಗಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿಗಳನ್ನು ಅನುಮೋದಿಸಿದ್ದರು. 2016 ರ ಚುನಾವಣೆಯಲ್ಲಿ ಕೂಡ ಟ್ರಂಪ್ ಗೆ ವೋಟ್ ಮಾಡಿದವರು ಕೇವಲ 16 %  ಮಾತ್ರ.

    ಆದರೆ ಟ್ರಂಪ್ ತಮ್ಮನ್ನು  ಭಾರತದ ಪ್ರಧಾನಿ ಮೋದಿಯ ಜೊತೆಗೆ ಮಿತ್ರನೆಂದು ಗುರುತಿಸಿಕೊಂಡು ಭಾರತದ ಗುಜರಾತಿಗೆ ಭೇಟಿ ನೀಡಿ ಬಂದಿದ್ದು ಅನಂತರ ಮೋದಿ ಅಮೆರಿಕಾದಲಿ ಭಾರತೀಯರು ಕಿಕ್ಕಿರಿದು ನೆರೆದಿದ್ದ ಸಮಾವೇಶದಲ್ಲಿ ಟ್ರಂಪ್  ಜೊತೆ ಕಾಣಿಸಿಕೊಂಡಿದ್ದು ಮೋದಿ ಬೆಂಬಲಿಗ ಭಾರತೀಯರು ಟ್ರಂಪ್ ನನ್ನು ಈ ಚುನಾವಣೆಯಲ್ಲಿ ಹೆಚ್ಚು ಬೆಂಬಲಿಸಬಹುದು ಎನ್ನುವ ಊಹೆಗಳಿವೆ.

    ಡೆಮೊಕ್ರಾಟಿಕ್ ಪಕ್ಷದ ಜೋ ಬಿಡೆನ್ ಭಾರತೀಯ ಮತ್ತು ಜಮೈಕ ಮೂಲದ ಕಮಲಾ ಹ್ಯಾರಿಸ್ ರನ್ನು ಉಪಾಧ್ಯಕ್ಷೆಯ ಸ್ಥಾನಕ್ಕೆ ಆರಿಸಿದ ನಂತರ ಚೆನ್ನೈ ಮೂಲದ ಕಮಲಾ ಭಾರತೀಯರ ನಾರಿಯಾಗಿ ಅಮೆರಿಕಾದ ಪ್ರ-ಪ್ರಥಮ ಮಹಿಳಾ ಉಪಾಧ್ಯಕ್ಷಳಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಬಹುದಾದ ಎಲ್ಲ ಸಾಧ್ಯತೆಗಳು ಪ್ರಕಾಶಮಾನವಾಗಿವೆ. ಕಮಲಾ ಚೆನ್ನೈ ನ ತಮ್ಮ ಬಂಧುಗಳಿಗೆ ದೇವಾಲಯದಲ್ಲಿ ತೆಂಗಿನಕಾಯಿ ಒಡೆದು ಪೂಜೆ ಮಾಡಿಸಲು ಹೇಳಿರುವ ವಿಚಾರಗಳು ಸಂಚಲನೆಗಳನ್ನು ಮೂಡಿಸುತ್ತಿವೆ!

    ಒಟ್ಟಾರೆ ಅಮೆರಿಕಾದಲ್ಲಿರುವ 4.5 ಮಿಲಿಯನ್ ಭಾರತೀಯರು ನಿರ್ಣಾಯಕ ಪಾತ್ರ ವಹಿಸುವ ಚುನಾವಣೆ ಇದಾಗಬಹುದು. ಸೋಲು-ಗೆಲುವು ಅತ್ಯಂತ ಕಡಿಮೆ ವ್ಯತ್ಯಾಸದಲ್ಲಿ ಬದಲಾಗಬಲ್ಲ ಸಾಧ್ಯತೆಗಳಿರುವ ಫೋಟೋ ಫಿನಿಷ್ ಚುನಾವಣೆ ಇದು.

     ವಾಸ್ತವದಲ್ಲಿ ಜಾರ್ಜ್-ಫ್ಲಾಯ್ಡ್ ಹತ್ಯೆ , ದಾಖಲೆ ನಿರುದ್ಯೋಗ, ಕೊರೊನಾ ವೈರಸ್ಸಿನ ಹಾವಳಿ, ಜನಾಂಗೀಯ ವಿಭಜನೆಯ, ಕುಸಿದ ಆರ್ಥಿಕತೆಯ ಮಹತ್ತರ ತಿರುವುಗಳ ನಂತರದ 2020 ರ ಅಮೆರಿಕಾದ ಚುನಾವಣಾ ಕಣ ಭಾವೋದ್ರೇಕಗಳ ಸಮರ ಭೂಮಿಯಾಗಿದೆ.

    ಇದೇ ಕಾರಣಕ್ಕೆ ಜನರಿಗೆ ಭರವಸೆಗಳ ಮಹಾಪೂರವೇ ಹರಿದು ಬರುತ್ತಿವೆ. ಇತ್ತೀಚೆಗೆ ನಡೆದ ಡೆಮಾಕ್ರಟಿಕ್ಸ್ ಮಾವೇಶದಲ್ಲಿ (ಆಗಸ್ಟ್ 17-20)  ಅಮೆರಿಕಾವನ್ನು ಒಗ್ಗೂಡಿಸುವ, ಜನಾಂಗೀಯ ಮತ್ತು ಮತೀಯ ಭೇದಗಳನ್ನು ನಿರ್ನಾಮಗೊಳಿಸುವ ಮತ್ತು  ಉದ್ಯೋಗ ಮತ್ತು ಶಾಂತಿಯ ಭರವಸೆಗಳನ್ನು ಜೋ ಬಿಡೆನ್, ಆತನ ಪತ್ನಿ ಮತ್ತು ಕಮಲಾ ಹ್ಯಾರಿಸ್ ನೀಡಿದ್ದಾರೆ.

    ಅವರನ್ನು ಬೆಂಬಲಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಬಾರಕ್ ಒಬಾಮ ಮತ್ತು ಅವರ ಪತ್ನಿ ಮಿಶಲ್ ಒಬಾಮ, ಟ್ರಂಪ್ ಪ್ರಜಾ ಪ್ರಭತ್ವವನ್ನು ಪೂರ್ಣವಾಗಿ ನಿರ್ನಾಮ ಮಾಡುವುದನ್ನು ತಡೆಯಬೇಕೆಂದಿದ್ದರೆ, ರಕ್ಷಿಸಬೇಕೆಂದಿದ್ದರೆ  ಜೋ ಬಿಡೆನ್ ಗೆ ಮತ ಚಲಾಯಿಸುವ ತುರ್ತು ಅಗತ್ಯವೆಂದು ಬಣ್ಣಿಸಿದ್ದಾರೆ. ಟ್ರಂಪ್ ಆಡಳಿತ ಶೈಲಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಟ್ರಂಪ್ ಸ್ವತಃ ತಮಗೆ ಮತ್ತು  ತಮ್ಮ ಸ್ನೇಹಿತರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾತ್ರ ಮಾಡಿದ್ದಾರೆ ಆದರೆ ಅಮೆರಿಕಾಕ್ಕೆ ಏನೂ ಪ್ರಯೋಜನವಾಗಿಲ್ಲ ಎಂಬುದು ಇವರ ಆಪಾದನೆಯಾಗಿದೆ.

    ಇದೀಗ ನಡೆಯುತ್ತಿರುವ ರಿಪಬ್ಲಿಕನ್ ಸಮಾವೇಶವನ್ನು(ಆಗಸ್ಟ್-24-27)ಕೂಡ ಜನರ ಭಾವೋದ್ವೇಗಗಳನ್ನೇ ಕೇಂದ್ರಬಿಂದುವನ್ನಾಗಿಟ್ಟುಕೊಂಡು ನಡಸಲಾಗುತ್ತಿದೆ. ಮಂಗಳವಾರ  ಮಾತಾಡಿದ ಅಮೆರಿಕಾದ ಪ್ರಥಮ ಮಹಿಳೆ ಮಿಲಾನಿಯ, ತಮ್ಮ ಪತಿ ಎಲ್ಲರಂಥವರಲ್ಲ,  ಬಹಳ ಭಿನ್ನ ಎಂದು ವ್ಯಕ್ತಿತ್ವ ಅವರದ್ದು ಎಂದು ಹೇಳಿದ್ದಾರೆ. ಅನ್ನಿಸಿದ್ದನ್ನು ನೇರ ಮಾತುಗಳಲ್ಲಿ ಹೇಳಿಬಿಡುವ ಪಾರದರ್ಶಕ ವ್ಯಕ್ತಿ ಅವರು ಎಂದು ವಿವರಿಸಿದ್ದಾರೆ. ಆದರೆ ಮಂಗಳವಾರದ ಅವರ ಭಾಷಣದಲ್ಲಿ ಜನಾಂಗೀಯ ಒಡಕುಗಳನ್ನು ಸರಿಪಡಿಸಲು ಟ್ರಂಪ್ ಗೆ ಮತ ಹಾಕಿರೆಂದು ಕೇಳಿದಾಗ ಅಲ್ಲಿ ನೆರೆದಿದ್ದ ಜನರಲ್ಲಿ ಸ್ವಲ್ಪ ಮುಜುಗರ, ಆಶ್ಚರ್ಯ  ಜೊತೆಗೆ ಅವರ ಧೈರ್ಯದ ಬಗ್ಗೆ ಮೆಚ್ಚುಗೆ ಎಲ್ಲವೂ ಕಂಡುಬಂದಿತು.

     ಈ ನಡುವೆ ಅಮೆರಿಕಾದ ಟಿವಿ ಹೋಸ್ಟ್ ಮತ್ತು ಸೆಲೆಬ್ರಿಟಿ ಟೋಮಿ ಲಾರೆನ್ “President Trump is wise like an owl, or as you say in Hindi, wise like an ullu,” (ಭಾರತೀಯರು ಹಿಂದಿ ಭಾಷೆಯಲ್ಲಿ ಹೇಳುವಂತೆ ಅಧ್ಯಕ್ಷ ಟ್ರಂಪ್ ಗೂಬೆಯಂತೆ  ಬುದ್ದಿವಂತ ) ಎಂದು ಅಧ್ಯಕ್ಷ ಟ್ರಂಪ್ ರನ್ನು ಹೊಗಳಲು ಹೋಗಿ ಗೊತ್ತಿಲ್ಲದಂತೆಯೇ ಆಡುಭಾಷೆಯ  ‘ಮಂದಮತಿ ’ ಎನ್ನುವ ಅರ್ಥ ನೀಡಿ ನಗೆಪಾಟಲಿಗೀಡಾಗಿದ್ದಾರೆ. ನಿಜಾರ್ಥದಲ್ಲಿ ಹಿಂದಿಯ ನುಡಿಗಟ್ಟನ್ನ ಭಾಷಾಂತರಿಸುವಾಗ ನಡೆದ ಈ ಅಚಾತುರ್ಯದ ವೀಡೀಯೋ ತುಣುಕು ಮಿಲಿಯನ್ ಗಟ್ಟಳೆ ಹಿಂಬಾಲಕರಿರುವ ಆಕೆಯ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿ ಕೊನೆಗೆ ಆಕೆ ಅದನ್ನು ತೆಗೆದುಹಾಕಿ ಯಾವುದೇ ಮಾಧ್ಯಮದವರ ಕರೆಯನ್ನು ಸ್ವೀಕರಿಸದೆ ಮೌನ ವ್ರತ ಆಚರಿಸಿದ್ದಾಳೆ.

    ಯಾರೂ ಏನೇ ಆದರೂ ಪ್ರಜಾ-ಪ್ರಭುತ್ವದ ಈ ಚುನಾವಣೆಯಲ್ಲಿ ಮತದಾರರು ಕೊನೆಗೆ ಉಲ್ಲೂಗಳಾಗದಿದ್ದರೆ ಸಾಕೆನ್ನುವುದು ಎಲ್ಲ ಹಿತಚಿಂತಕರ ಆಶಯವಾಗಿದೆ.

    .

    ಮರಳಿ ಬಾರದ ಬಾಲ್ಯದ ನೆನಪುಗಳನ್ನು ಮೆಲಕುಹಾಕುವುದು ನಿಜಕ್ಕೂ ಜೀವಾನುಭವ

    ಮನೆಯವರಿಗೆಲ್ಲಾ ಸೇರಿ ಎರಡೇ ಟೂತ್ ಬ್ರಷ್ ಒಂದೇ ಟವಲ್ಲು , ವಾರಕ್ಕೆರಡೇ ದಿನ ಸ್ನಾನ . ನಾವು ಮುಖ ತೊಳ್ಕೊಂಡು ಹಾಲ್ ಗೆ ಬಂದ್ರೆ ಕಣ್ಣಲ್ಲಿ ಗೀಜೇ ಹೋಗಿಲ್ಲ ಅದೇನ್ ಮುಖ ತೊಳ್ದಿದಿಯೋ ಅಂತ ಬಯ್ಯೋವ್ರು . ಬಚ್ಚಲು ಮನೆಯಲ್ಲಿ ಅರ್ಧ ಕಟ್ ಮಾಡಿಟ್ಟಿರೋ ಕೆಂಪಿಟ್ಟಿಗೆ ಮಾದರಿಯ ಲೈಫ್ ಬಾಯ್ ಸೋಪು ವಾರಗಟ್ಟಲೇ ಕರಗ್ತಿರಲಿಲ್ಲ ಅಂದ್ರೆ ಲೆಕ್ಕಾ ಹಾಕಿ ಯಾವ ಮಟ್ಟದಲ್ಲಿ ಶುಚಿತ್ವ ಕಾಪಾಡ್ಕೋತಿದ್ವಿ ಅಂತ.

    ನಮ್ ಅವತಾರ ನೊಡಕ್ಕಾಗದೇ ತಂದೆಯವರೇ ‘ ನಾನು ಮಾಡಿಸ್ತೀನಿ ನಡೀ ಅಂತ ಬಚ್ಚಲಿಗೆ ಕರ್ಕೊಂಡ್ ಹೋಗಿ ಮೈ ಉಜ್ಜೋ ಕಲ್ಲಿನಿಂದ ಮೀನು ಉಜ್ಜೊ ಥರ ಉಜ್ಜವ್ರು , ನೀರಿನೊಂದಿಗೆ ಕಿತ್ತುಬರುತ್ತಿರುವ ಕೊಳೆಯನ್ನು ತೋರಿಸಿ ತೋರಿಸಿ ಉಗಿಯವ್ರು . 

    ರಜೆ ಬಂತು ಅಂದ್ರೆ ಮುಗೀತು ಹಾದೀಲಿ ಬೀದೀಲಿ , ಮನೆ ಕಟ್ಟಕ್ಕೆ ತೋಡಿರೋ ಪಾಯದ ಗುಂಡಿಗಳಲ್ಲಿ , ಸುರಿದಿರುವ ಮರಳು ರಾಶಿಯಲ್ಲಿ , ಇಟ್ಟಿಗೇಲಿ ದಿನವಿಡೀ ಆಡ್ತಾಇದ್ವಿ .ಮಾವಿನಕಾಯಿ , ಸೀಬೇಕಾಯಿ , ನೆಲ್ಲೀ ಕಾಯಿ , ಹುಣಿಸೇ ಹಣ್ಣು , ನೇರಳೆ ಹಣ್ಣು , ಹೀಗೇ ಹೆಸರು ಗೊತ್ತಿರೋ ಕಾಯಿಗಳನ್ನು ಗೊತ್ತಿಲ್ಲದೇ ಇರೋ ಹಣ್ಣುಗಳನ್ನು ಹುಡುಕ್ಕೊಂಡ್ ಹೋಗಿ ತಿಂತಿದ್ವಿ . ಮರದಲ್ಲಿ ಅದ್ಯಾವ್ ಪ್ರಾಣಿ ತಿಂದು ಅರ್ಧಕ್ಕೇ ಬಿಟ್ಟು ಹೋಗಿತ್ತೋ ಏನೋ ನಾವು ಅದನ್ನ ಗಿಣಿ ಕಚ್ಚಿರೋ ಹಣ್ಣು ಅಂತ ಬಯಸಿ ಬಾಯಿಗಾಕ್ಕೊತಿದ್ವಿ . ಗಸಗಸೆ ಹಣ್ಣಿನ ರೀತಿ ಕಾಣುವ ಅಂಟು ಅಂಟಿನ ಕಾಯೊಂದನ್ನು ಗೋಂದು ಕಾಯಿ ಅಂತ ತಿಂದಿದೀವಿ. 

    ಅಕ್ ಪಕ್ಕದ್ ಮನೆಯವರು ಅಂಗಡೀಗ್ ಕಳಿಸಿದ್ರೆ ಚಿಲ್ರೆ ಕಾಸ್ ಸಿಗುತ್ತೆ ಅದರಲ್ಲಿ ತಿಂಡಿ ತಗೋಬಹುದು ಅಂತ… ಕರೆದ್ರೆ ಸಾಕು ಒಂದೇ ಕೂಗಿಗೇ ಓಡ್ತಾ ಇದ್ವಿ. ಪರಿಚಯವೇ ಇಲ್ಲದ ಯಾರೋ ಅಂಗಡಿ ಪೂಜೆ , ಗಾಡಿ ಪೂಜೆ ಮಾಡ್ತಾರೆ ಅಂತ ಬೂದುಗುಂಬಳದಲ್ಲಿ ಚಿಲ್ಲರೆ ಕಾಸು ಕುಂಕುಮ ಸುರಿಯುತ್ತಿದ್ದರೆ ಹೊಡೆಯುವುದನ್ನೇ ಕಾದು ಅದರ ಮೇಲೆ ಬಿದ್ದು ಕಾಂಪಿಟೇಷನ್ನಲ್ಲಿ ಚಿಲ್ಲರೆ ಆಯ್ಕೋತಿದ್ವಿ . ಕಾಯಿ ಹೊಡೆದರೆ ಕಾಯಿಚೂರು ಚಿಪ್ಪು ಆಯ್ಕೊಂಡು ಮಣ್ಣಲ್ಲಿ ಬಿದ್ದಿದ್ರೆ ಉರುಬಿಕೊಂಡು ತಿಂತಿದ್ವಿ . ಸಿಕ್ಕ ಆ ಚಿಲ್ಲರೆಯಲ್ಲಿ ಕಣ್ಣಿಗ್ ಕಾಣಿಸ್ತಿದ್ ತಿಂಡಿ ತಿನ್ಕೊಂಡು ನಿಜವಾದ ಹಬ್ಬ ಆಚರಿಸ್ತಾ ಇದ್ವಿ .

    ಗಣೇಶನ ಕೂರಿಸಿದ ಮನೆಗಳಿಗೆ ಹೋಗಿ ಅಕ್ಷತೆ ಹಾಕಿದರೆ ತಿಂಡಿ ಕೊಡುತ್ತಾರೆಂದು ಮನೆಯಲ್ಲಿ ಗೊತ್ತಾಗದಂತೆ ಹಿಡಿಅಕ್ಕಿ ಕದ್ದು ಅರಿಷಿಣ ಬೆರಸಿ ಅಕ್ಷತೆ ರೆಡಿ ಮಾಡ್ಕೊಂಡು ಮನೆಮನೆಗೆ ಅಲೆಯುತ್ತಿದ್ದೆವು . ಸಕ್ಕರೆಪುಡಿ ಕಡಲೆಹಿಟ್ಟಿನ ಆ ಬಿಳೀ ಕವರಿನ ಪುಡಿ ರುಚಿ ಈಗಲೂ ನಾಲಿಗೆಯಲ್ಲಿಯೇ ಇದೆ . 

    ಇನ್ನು ಕ್ರಿಕೆಟ್ ಆಡಕ್ಕೋದಾಗಂತೂ ಆ ಬಾಲು ಅದೆಷ್ಟ್ ಸಾರಿ ಮೊರಿಗ್ ಬಿದ್ದಿದೀಯೋ , ಚಿಕ್ಕವ್ರು ಅಂತ ನಮ್ ಕೈಯಲ್ಲೇ ಎತ್ತಿಸವ್ರು ಅದನ್ನ ಮೂರು ಸಲ ಪಿಚ್ ಹೊಡೆದು ಆ ಮೇಲೆ ಅವರು ತಗೊಳವ್ರು …. ನಾವು ಅದೇ ಕೈಗಳಲ್ಲೇ ಐಸ್ ಕ್ಯಾಂಡೀನ ಚಪ್ಪರಿಸ್ಕೊಂಡು ತಿಂದಿದೀವಿ. ಕೈ ತೊಳಿಯೋದು ಅಂದ್ರೆ ಅದು ತಿಂದಾದ ಮೇಲೇ ಅನ್ನೋ ಬಲವಾದ ನಂಬಿಕೆ ನಮ್ಮಲ್ಲಿ ಬೇರೂರಿತ್ತು . ಊರಿಗೆ ಕರ್ಕೊಂಡ್ ಹೋಗ್ತಿದ್ರೆ ಕೆಂಪುಬಸ್ಸಿನ ಕಿಟಕಿಯಲ್ಲಿರುವ ಅಷ್ಟೂ ಧೂಳನ್ನು ಸೌತೆಕಾಯಿ ಪಾಪಿನ್ಸ್ ಪೆಪ್ಪರ್ಮೆಂಟ್ ಜೊತೆ ತಿಂದಿದ್ದೇವೆ . 

    ಇಲಿ ಕಾಟಕ್ಕೆ ಬೋನು ತಂದು ಅದರಲ್ಲಿ ಬೋಂಡ ಸಿಕ್ಕಿಸಿದ್ರೆ ಆ ಬೋಂಡಾವನ್ನೂ ಸಹ ಆಸೆಯಿಂದ ನೊಡಿದ್ದೇವೆ .ನಾಕಾಣಿಯ ಕಣ್ಣು ಟ್ಯೂಬಿನಲ್ಲಿ ಮದ್ರಾಸ್ ಐ ಎಂಬ ಕಣ್ಣಿನ ಸೋಂಕನ್ನು ವಾಸಿ ಮಾಡಿಕೊಂಡಿದ್ದೇವೆ . ಸಿಬ್ಜಲ್ ಮಾತ್ರೆಯನ್ನು ಕುಟ್ಟಿ ಒಂದೆರೆಡು ತೊಟ್ಟು ಕೊಬ್ಬರಿಎಣ್ಣೆ ಬೆರೆಸಿ ಮಂಡಿ ಕುಂಡಿಗಳ ಗಾಯ ವಾಸಿ ಮಾಡಿಕೊಂಡಿದ್ದೇವೆ . ಹೊಕ್ಕಳಿಗೆ ಹರೆಳೆಣ್ಣೆಯನ್ನು ಹಾಕಿಸಿಕೊಂಡು ಹೊಟ್ಟೆ ನೋವು ನಿವಾರಿಸಿಕೊಂಡಿದ್ದೇವೆ. ಕಳ್ಳಿ ಹಾಲು ಸುರಿದು ಕಾಲಿಗೆ ಚುಚ್ಚಿದ ಮುಳ್ಳು ಮರುದಿವಸ ಅದಾಗೇ ಹೊರಗೆ ಬರುವಂತೆ ಮಾಡಿದ್ದೇವೆ .

     ಮಳೆಗಾಲದ ಗುಂಡಿಗಳಲ್ಲಿ ನಿಂತಿದ್ದ ನೀರಿನಲ್ಲಿ ಕಡುಗಪ್ಪುಬಣ್ಣದ ಕಪ್ಪೆ ಮರಿಗಳನ್ನು ಮೀನಿನ ಮರಿಗಳೆಂದು ಬೊಗಸೆಯಲ್ಲಿ, ಪ್ಲಾಸ್ಟಿಕ್ ಕವರಿನಲ್ಲಿ ಹಿಡಿದು….ಬಿಟ್ಟು ಮೀನುಗಾರರೆಂಬ ಭ್ರಮೆಯಲ್ಲಿ ಆಡಿದ್ದೇವೆ . ಪಾರ್ಥೇನಿಯಂ ಗಿಡಗಳನ್ನು ಕಿತ್ತು ಅದರಿಂದ ಚಿಟ್ಟೆ ಹಿಡಿಯುತ್ತಿದ್ದೆವು . ಹೆಲಿಕಾಪ್ಟರ್ ಕೀಟಕ್ಕೆ ದಾರ ಕಟ್ಟಿ ಹಾರಾಡಿಸುವುದು . ಜೀರಿಂಬೆಯನ್ನು ಖಾಲಿ ಬೆಂಕಿಪೊಟ್ಟಣದಲ್ಲಿಟ್ಟು ಸಂಶೋಧಿಸುವುದು . ಹೋತಿಕೆತ್ತಕ್ಕೆ ಬೀಡಿ ಸೇದಿಸುವುದು ….ಒಂಥರ ಇದು ಹಿಸ್ಟ್ರಿ ಅನ್ನಿಸಿದರೂ ….ಕೀಟಗಳೊಂದಿಗೆ ಕೆಮಿಸ್ಟ್ರಿ ನಮ್ಮದು.

    ಏನೇ ಆಗಲಿ ಮರಳಿಬಾರದ ಬಾಲ್ಯದ ನೆನಪುಗಳನ್ನು ಮೆಲಕುಹಾಕುವುದು ನಿಜಕ್ಕೂ ಜೀವಾನುಭವ 

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ನಿವೃತ್ತಿ ಎಂದರೆ ನಿಮ್ಮ ಇಷ್ಟದ ಕೆಲಸವನ್ನು ಮಾಡಲು ಸಿಕ್ಕ ಸೆಕೆಂಡ್ ಇನ್ನಿಂಗ್ಸ್

    ಐವತ್ತೆಂಟು-ಅರುವತ್ತು ಎನ್ನುವುದು ಒಂದು ಕಾಲದಲ್ಲಿ  ನಿವೃತ್ತಿಯಾಗುವ ವಯಸ್ಸು. ಆದರೆ ಅದೇ ಮಾತನ್ನು ಈಗ ಹೇಳಲು  ಬರುವುದಿಲ್ಲ. ಒಂದು ಅಂಕಿ ಅಂಶದ ಪ್ರಕಾರ 1950ರ ಆಜೂ ಬಾಜಿನಲ್ಲಿ ಹುಟ್ಟಿದವರು  ತಮ್ಮ ಅರವತ್ತನೇ ವಯಸ್ಸಿಗೆ ನಿವೃತ್ತರಾದರೆ , ಇತ್ತೀಚಿನ ತಲೆಮಾರು ಅಂದರೆ 90ರ ನಂತರ ಹುಟ್ಟಿದವರ ನಿವೃತ್ತಿ ವಯಸ್ಸು 45 ಆಗಿಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣ ವರ್ಕ್ ಲೈಫ್ ಬ್ಯಾಲೆನ್ಸ್. ಹಿಂದೆಲ್ಲಾ 8 ಗಂಟೆ ಕೆಲಸ, ಇನ್ನು 8ಗಂಟೆ ಫ್ಯಾಮಿಲಿ ಸಮಯ. ಕಚೇರಿ ಬಿಟ್ಟು ಮನೆಗೆ ಬಂದ ಮೇಲೆ ಮನೆಯಲ್ಲಿ ಕೆಲಸ ಮಾಡಲು ಲ್ಯಾಪ್ ಟಾಪ್ ಇರಲಿಲ್ಲ, ಇಂಟರ್ ನೆಟ್ಟೂ ಇರಲಿಲ್ಲ. ಆಫೀಸಿನ ಕೆಲಸ  ಆಫೀಸಲ್ಲೇ ಮುಗಿಯಬೇಕು. ಆದರೆ ಈಗ ನೋಡಿ ಹಲವರು ಆಫೀಸಿಗಿಂತ ಮನೆಯಲ್ಲೇ ಹೆಚ್ಚು ಕೆಲಸ ಮಾಡುವ ಸ್ಥಿತಿ ಬಂದಿದೆ . ಈ ಮಧ್ಯೆ ಕೋವಿಡ್ ಬೇರೆ. ಅನೇಕ ಕಂಪನಿಗಳು 45 -50 ವರ್ಷವಾದವರಿಗೆ  ಕಡ್ಡಾಯ ನಿವೃತ್ತಿ ಕೊಟ್ಟು ಬಿಟ್ಟಿವೆ. ಹೀಗಾಗಿ ಈಗ 45 ವರ್ಷ ದಾಟಿತೆಂದರೆ ನಿವೃತ್ತಿ ಅಂಚಿಗೆ ಬಂದರೆಂದು ವ್ಯಾಖ್ಯಾನಿಸಬಹುದು.

    ಕೆಲವರು  ಯಾವಾಗಲೂ ಕೆಟ್ಟದ್ದನ್ನೇ ಯೋಚಿಸುತ್ತಿರುತ್ತಾರೆ. ಅವರಂತೂ ನಿವೃತ್ತಿ ಜೀವನದ ಬಗ್ಗೆ ಯಾವಾಗಲೂ ಆತಂಕಭರಿತರಾಗಿರುತ್ತಾರೆ. ಆದಾಯ ಕಡಿಮೆಯಾಗುತ್ತದೆ, ಆಫೀಸಿಗೆ ಹೋಗುವಂತಿಲ್ಲ, ಇನ್ನು ಜೀವನವೇ ಮುಗಿದು ಹೋಯಿತು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ತಮ್ಮ ಜೀವಿತಾವಧಿಯ ಅರ್ಧವಷ್ಟೇ ಕಳೆದಿದ್ದೇವೆ, ಇನ್ನೂ ಸುದೀರ್ಘ  ಜೀವನ ಇದೆ ಎಂಬುದನ್ನು ಮರೆತೇ ಬಿಡುತ್ತಾರೆ. ಯಾರಾದರು ಎದುರಿಗೆ ಸಿಕ್ಕವರು ಹೇಗಿದ್ದೀರಿ ಎಂದು ಕೇಳಿದರೆ ನಮ್ಮದೇನಿದೆ ಬೋನಸ್ ಪಿರಿಯಡ್ ಅಷ್ಟೇ ಎಂದು ತಾವೇ ಹೇಳಿಕೊಂಡು ಎಲ್ಲಾ ಮುಗಿದೇ ಹೋಯಿತು ಎಂಬಂತೆ ಮುಖ  ಮಾಡುತ್ತಾರೆ.

    ನನ್ನ ವೃತ್ತಿ ಜೀವನವನ್ನೊಮ್ಮೆ ಹಿಂತಿರುಗಿ  ನೋಡಿದರೆ ನನಗೆ ಸಂತೃಪ್ತಿ ಇದೆ. ಕುಟುಂಬಕ್ಕೆ ಹಣಕಾಸು ಮತ್ತು ನೈತಿಕ ಬೆಂಬಲ ನೀಡಿದ ತೃಪ್ತಿ ಇದೆ. ನಾವು ವಿದ್ಯಾಭ್ಯಾಸ ಮುಗಿಸಿದಾಗ  ನಮ್ಮನ್ನು ಯಾರೂ ಮುಂದೇನು ಮಾಡುತ್ತೀಯ ಎಂದು ಕೇಳಲಿಲ್ಲ.  ಕೆಲಸವೊಂದು ಸಿಗಬೇಕು, ಸಂಬಳ ಬರಬೇಕು ,ಅದಷ್ಟೇ ನಮ್ಮ ಮುಂದಿದ್ದ ಗುರಿ. ಹೀಗಾಗಿ ಅನೇಕರು ಆ  ಸಮಯದಲ್ಲಿ ತಮಗೆ ಬಂದದ್ದನ್ನು  ಸ್ವೀಕರಿಸಿದರಷ್ಚೆ. ಈಗಿನ ಹುಡುಗರಂತೆ ಅದೇ ಆಗಬೇಕು, ಹೀಗೆ ಮಾಡಬೇಕು ಎಂದು ಪ್ಲಾನ್ ಮಾಡಿ ಓದಿದವರು ಕಡಿಮೆ.

    ಈಗ ನಿವೃತ್ತಿಯ ನಂತರ ಜೀವನ ಒತ್ತಡದಿಂದ ಮುಕ್ತವಾಗಿದೆ. ಬೆಳಿಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ರೆಡಿಯಾಗಬೇಕಿಲ್ಲ. ಬದುಕಿರುವವರೆಗೂ ದುಡಿಯಬೇಕೆಂಬ  ಧಾವಂತ ಇಲ್ಲ. ನಿವೃತ್ತಿ ಎಂದರೆ  ಹೊಸ ಜೀವನಕ್ಕೆ ನಾಂದಿ. ನಿಮ್ಮ ಇಷ್ಟದ ಕೆಲಸವನ್ನು ಮಾಡಲು ಸಿಕ್ಕ ಸೆಕೆಂಡ್ ಇನ್ನಿಂಗ್ಸ್. ನಿವೃತ್ತಿ ನಿಮ್ಮ ಮುಂದೆ ಹೊಸ ಲೋಕ ತೆರೆದಿಡುತ್ತದೆ. ಇಷ್ಟು ದಿನ ನಾವು ಮಾಡುತ್ತಿದ್ದ ಕೆಲಸಕ್ಕಿಂತ ಪ್ರಪಂಚ ಎಷ್ಟು ಹೊಸತನದಿಂದ ಕೂಡಿದೆ  ಎಂಬುದು ಅರಿವಾಗುವುದು ಈಗಲೇ. ನಿವೃತ್ತಿ ಹೊಂದುವುದು ಎಂದರೆ ಇದುವರೆವಿಗೂ ನಾವು ಮಾಡುತ್ತಿದ್ದ  ಕೆಲಸದಿಂದ  ಬಿಡುಗಡೆ ಹೊಂದುವುದು. ಟಾರ್ಗೆಟ್ ಗಳ ಒತ್ತಡವಿಲ್ಲ. ಬಾಸ್ ನ ಪ್ಲೀಸ್ ಮಾಡುವ ಅನಿವಾರ್ಯತೆ ಇಲ್ಲ. ಗೊತ್ತು ಗುರಿ ಇಲ್ಲದ ಮೀಟಿಂಗ್ ನಲ್ಲಿ ಬಾಸ್ ಹೇಳುವುದಕ್ಕೆಲ್ಲಾ ಹೂಂ ಅನ್ನುವ ಜರೂರತ್ತೂ ಇರುವುದಿಲ್ಲ. ವಾಹ್ ಎಂತ ಗುಡ್ ಫೀಲಿಂಗ್. 

    ರಿಟೈರ್ ಆದ ಮೇಲೆ ನೀವು ಏನೆಲ್ಲಾ ಆಗಬಹುದು. ಫ್ರೀ ಲಾನ್ಸ್ ರ್ ಆಗಬಹುದು , ಸಂಗೀತಗಾರನಾಗಬಹುದು, ಹೊಸದನ್ನು ಕಲಿಯಬಹುದು, ಮನೆಯಿಂದಲೇ ಆಪರೇಟ್ ಮಾಡುವ ಸಕ್ಸೆಸ್ ಫುಲ್ ಯೂ ಟ್ಯೂಬರ್ ಆಗಬಹುದು,  ನಿಮ್ಮ ಇಷ್ಟದ ಎನ್ ಜಿ ಓ ದಲ್ಲಿ ಸ್ವಯಂ ಸೇವಕರಾಗಬಹುದು, ಯಾವುದಾದರೂ ಧಾರ್ಮಿಕ ಸಂಸ್ಥೆಗಳಲ್ಲಿ  ಭಕ್ತಾದಿಗಳಿಗೆ ಮಧ್ಯಾಹ್ನದ ಊಟ  ಬಡಿಸಬಹುದು….ಹೀಗೆ ನಿಮ್ಮ ಮನಸ್ಸಿಗೆ ಸಂತಸ ತರುವ ಏನಾದರು ಮಾಡಬಹುದು.

    ಆದರೆ ನಿವೃತ್ತರಾದಮೇಲೆ ಕೆಲವು ಬದಲಾವಣೆಗಳು ಅಗತ್ಯ. ಅದಕ್ಕೆ ತಕ್ಕಂತೆ ಮನಸ್ಥಿತಿಯನ್ನು ಹೊಂದಿಸಿಕೊಳ್ಳಬೇಕು. ಮೊದಲಿನಂತೆ ಉಡುಗೆ ತೊಡುಗೆಯ ಅಗತ್ಯ ಬೀಳುವುದಿಲ್ಲ. ಕೋಟು ತೊಡಬೇಕು,ಟೈ ಹಾಕಬೇಕು,ಫಾರ್ಮಲ್, ಕ್ಯಾಸುಯಲ್ ಎಂಬ ಗೊಂದಲ ಇರುವುದಿಲ್ಲ. ಈ ಕರೋನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್  ಮಾಡುತ್ತಿರುವ ಅನೇಕರಿಗೆ ಇದು ಅನುಭವಕ್ಕೆ ಬಂದಿರಲಿಕ್ಕೂ ಬೇಕು. ಇಷ್ಟೊಂದು ಬಟ್ಟೆ ಬರೆಯಾದರು ಏಕೆ ಬೇಕು ಎಂದು ಹಲವರಿಗೆ ಅನ್ನಿಸಿರಲಿಕ್ಕೂ ಸಾಕು. ನಿಮ್ಮ ಅಂತಸ್ತು , ಹುದ್ದೆಗೆ ಅಗತ್ಯವಾದ ಉಡುಗೆ ತೊಡುಗೆಗಳು ಈಗ  ಬೇಕಾಗುವುದಿಲ್ಲ.  ಹಾಗೇಯೆ ನಿಮ್ಮ  ಉನ್ನತ ಸ್ಥಾನದಿಂದಾಗಿ ನಿಮ್ಮನ್ನ ಸುತ್ತುವರಿಯುತ್ತಿದ್ದ ಮಂದಿಯೂ ಈಗ ಕಾಣುವುದಿಲ್ಲ. ನಿಮಗೆ ಈಗ ಸಿಗುವವರೇ ನಿಮ್ಮ ನಿಜವಾದ ಸ್ನೇಹಿತರು. ಅವರೊಂದಿಗೆ ವಾಕಿಂಗ್ ಹೋಗಿ ,ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ.
    ಹಾಗೆ ಊಟ ತಿಂಡಿಗೂ ಕೊರತೆ ಮಾಡಿಕೊಳ್ಳಬೇಡಿ.  ನಿದ್ರೆ ಜಾಸ್ತಿ ಬಂದರೆ ಆರಾಮಾಗಿ ಮಾಡಿ. ಬೆಳಿಗ್ಗೆ ಬೇಗ ಎದ್ದು ಓಡಬೇಕಾದ ಜರೂರತ್ತಂತೂ ಇರುವುದಿಲ್ಲ. ನಾಲಿಗೆಗೆ ಹಿತವಾಗುವ, ಆರೋಗ್ಯಕ್ಕೆ ಪೂರಕವಾದ ಹೊಸ ರುಚಿಗಳನ್ನು ಟ್ರೈ ಮಾಡಿ ಅಥವಾ ಯೂ ಟ್ಯೂಬ್ ನೋಡಿ ನೀವೇ ಮಾಡಿ ನೋಡಿ.

    ನಿವೃತ್ತ ರಾಗುವ ಮುನ್ನ ಅಥವಾ ಹಾಲಿ ಮಾಡುತ್ತಿರುವ ಉದ್ಯೋಗದಿಂದ ಹೊರಬರುವ ಮುನ್ನ ನೀವು  ಕೆಲವು ಜವಾಬ್ದಾರಿಗಳನ್ನು  ಮುಗಿಸಲೇಬೇಕು. ನಿಮ್ಮ ಹೂಡಿಕೆ ಇರಲಿ, ಆಸ್ತಿ ಇರಲಿ, ನಿಮ್ಮ ಮುಂದಿನ ಜೀವನಕ್ಕೆ ಬೇಕಾದಷ್ಟು ಇಟ್ಟುಕೊಂಡು ಹೆಚ್ಚೆನಿಸಿದ್ದನ್ನು ನಿಮ್ಮ ಪ್ರೀತಿಪಾತ್ರರಿಗೆ ಕಾನೂನು ಬದ್ಧವಾಗಿ ವರ್ಗಾಯಿಸಿಬಿಡಿ. ಜೀವನ ಸರಳವಾಗಿರಲಿ. ನಿಮ್ಮ ಉಳಿತಾಯದಿಂದ ಒಮ್ಮೊಮ್ಮೆ ಹೆಚ್ಚು ಖರ್ಚು ಮಾಡಬೇಕಾಗಿ ಬಂದರೆ ಚಿಂತೆ ಮಾಡಬೇಡಿ, ನೀವು ಕೂಡಿಟ್ಟ ಹಣ ನಿಮ್ಮ ಜೀವನ ಅನುಭವಿಸಲೆಂದೇ ಇರುವುದು ಎಂಬುದನ್ನು ಮರೆಯದಿರಿ. ದೊಡ್ಡ ಬಂಗಲೆಯಲ್ಲಿ ಇದ್ದರೆ ಅದನ್ನು ಬಿಟ್ಟು ನಿರ್ವಹಿಸಲು  ಸೂಕ್ತವಾಗುವ ಸಣ್ಣ ಮನೆಗೆ ಹೋಗಬಹುದು. ಈ ಸಮಯದಲ್ಲಿ ನನ್ನ ಗೆಳೆಯರೊಬ್ಬರ ಉದಾಹರಣೆ ಹೇಳಲೇಬೇಕು. ಮನೆ, ಒಡವೆ ಆಸ್ತಿ ಅಂತ 20 ಕೋಟಿ ರೂ .ಗಳ ಆಸ್ತಿ ಮಾಡಿದರು. ಯಾರಿಗಾಗೋ ಗೊತ್ತಿಲ್ಲ.ಅವರ ಮಕ್ಕಳೋ ಮೂರು ದಶಕಗಳ ಹಿಂದೆಯೇ ಫಾರಿನ್ ನಲ್ಲಿ ಸೆಟ್ಲ್ ಆದವರು. ಅವರಿಗೆ ಈ ಆಸ್ತಿ ಬೇಕಾಗಿಯೇ ಇಲ್ಲ, ಇಲ್ಲಿಗೆ ವಾಪಸ್ಸು ಬರುವವರೂ ಅಲ್ಲ. ಅವರೇ ಬೇಕಾದಷ್ಟು ಸಂಪಾದಿಸಿರುತ್ತಾರೆ. ಇಂಥ ಸ್ಥಿತಿಯಲ್ಲಿ ಹೆಚ್ಚು ಆಸ್ತಿ ಮಾಡಿ ಉಪಯೋಗವಾದರು ಏನು?

    ನಿವೃತ್ತಿ ಸಮಯದಲ್ಲಿ ಆಸ್ತಿ ಕೊಂಡು ಯಾವ ಉಪಯೋಗವೂ ಆಗುವುದಿಲ್ಲ. ಹೀಗಾಗಿ ಈ ವಯಸ್ಸಿನಲ್ಲಿ ಒಳ್ಳೆಯ ಕೆಲಸಕ್ಕೆ ದಾನ ಮಾಡುವುದಿದ್ದರೆ ಮಾಡಿ ಬಿಡಿ. ಈ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಬರೆ, ಹೊಸ ಗ್ಯಾಜೆಟ್ , ಆಭರಣಗಳು, ಆಸ್ತಿ ಪಾಸ್ತಿಗಳಿಗಿಂತ ಸಂಗೀತ  ಕೇಳುವುದು, ಪ್ರವಾಸ ಹೋಗುವುದು, ಒಳ್ಳೆಯ ತಿನಿಸು ಸೇವಿಸುವುದು, ಹಳೆಯ ಗೆಳೆಯರ ಒಡನಾಟ, ಮನೆಯವರೊಡನೆ ಸಮಯ ಕಳೆಯುವುದು, ಅವರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದರಲ್ಲಿ  ಹೆಚ್ಚಿನ ಸಂತಸ ಸಿಗುತ್ತದೆ. 

    ಆರೋಗ್ಯವಂತೂ ಮುಖ್ಯ ಅದನ್ನಂತೂ ಚೆನ್ನಾಗಿ ನೋಡಿಕೊಳ್ಳಲೇ ಬೇಕು. ಕೆಲಸದ ಜಂಜಾಟವಿಲ್ಲದೆ , ದುಡಿಯಲೇಬೇಕೆಂಬ ಹಪಾ ಹಪಿ ಇಲ್ಲದೆ ಇದ್ದಾಗ ಅದು ಸಹಜವಾಗಿ ಚೆನ್ನಾಗಿಯೇ ಇರುತ್ತದೆ. 

    ಒಟ್ಟಿನಲ್ಲಿ ಸಂತೋಷವಾಗಿರಿ, ಖುಷಿ ಖುಷಿಯಾಗಿರಿ. 

    Photo by Jeremy Bishop on Unsplash

    ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೇ?

    ಪ್ರತಿದಿನ ಅತಿಹೆಚ್ಚಿನ ಸೋಂಕಿತರನ್ನು ವರದಿಮಾಡುತ್ತಿರುವ ದೇಶಗಳಲ್ಲಿ ದಿನವೊಂದರಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕನ್ನು ವರದಿ ಮಾಡಿರುವ ಭಾರತ ಇಡೀ ವಿಶ್ವದಲ್ಲೇಅಗ್ರ ಸ್ಥಾನವನ್ನುಪಡೆದಿದೆ. ಅಮೆರಿಕಾ ಮತ್ತು ಬ್ರೆಜಿಲ್ ದೇಶಗಳನ್ನೂ ಹಿಂದಕ್ಕೆ ಹಾಕಿದೆ.

    ಆದರೆ ಭಾರತದಲ್ಲಿ ಅಥವಾ ಇಡೀ ಪ್ರಪಂಚದಲ್ಲಿ ಇದುವರೆಗೆ ವರದಿಯಾಗಿರುವಜನರಿಗಷ್ಟೇ ಸೋಂಕು ಬಂದು ಹೋಗಿದೆಯೇ? ಖಂಡಿತ ಇಲ್ಲ.ಈ ಸಂಖ್ಯೆ ಅದಕ್ಕಿಂತ ಬಹಳ ದೊಡ್ಡದಿದೆ ಎಂಬುದು ಎಲ್ಲರ ಸುಲಭ ಊಹೆ. ಯಾಕೆಂದರೆ ಶಂಕಿತರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿಲ್ಲ. ಪರೀಕ್ಷೆಗಳು ಮೊದಲೆಲ್ಲ ಬಹಳ ಕಡಿಮೆ ಸಂಖ್ಯೆಯಲ್ಲಿ ನಡೆದದ್ದು ಒಂದು ಕಾರಣವಾದರೆ, ಕ್ವಾರಂಟೈನ್ ಇತ್ಯಾದಿ ಭಯಗಳು ಇನ್ನೊಂದು ಕಡೆ ಜನರನ್ನು ಕಾಡಿದ್ದು ನಿಜ.ಇದರ ನಡುವೆ ಸೋಂಕು ಬಂದಿರುವ ಎಲ್ಲರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿರುವುದು  ಪರೀಕ್ಷೆ ಮಾಡಿಸಿಕೊಳ್ಳದಿರಲು ಮತ್ತೊಂದು ದೊಡ್ಡ ಕಾರಣವಾಗಿದೆ.

    ಒಂದು ದೇಶದ ಪ್ರತಿ ಪ್ರಜೆಗೆ ಕೋವಿಡ್ ಪರೀಕ್ಷೆ ನಡೆಯದಿದ್ದರೆ ನಿಖರ ಸಂಖ್ಯೆ ತಿಳಿಯುವುದೂ ಇಲ್ಲ. ಆದರೆ ಅದು ಸಾಧ್ಯವಾಗದ ಮಾತು. ದಿನಕ್ಕೆ ಹತ್ತು ಲಕ್ಷ ಪರೀಕ್ಷೆಗಳನ್ನು ಮಾಡಿದರೂ ಅದು ಭಾರತದ ಜನಸಂಖ್ಯೆಗೆ ಕಡಿಮೆ ಎನ್ನುವ ಬಲವಾದ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಕೋವಿಡ್ ಪರೀಕ್ಷೆಗಳ ಮತ್ತೊಂದು ವಿಲಕ್ಷಣ ವಿಚಾರವೆಂದರೆ ಅದುಈ ತಪಾಸಣೆಗಳ ಅತ್ಯಂತ  ಸೂಕ್ಷ್ಮ ಸ್ವಭಾವ. ಅಂದರೆ, ಈ ಪರೀಕ್ಷೆಯಿಂದ ಕೋವಿಡ್ ಇದೆ ಎಂದು ಗೊತ್ತಾದವರಲ್ಲಿ ಮತ್ತೊಂದು ದಿನ ಇದೇ ಪರೀಕ್ಷೆಯನ್ನು ಮಾಡಿದಾಗ ಸೋಂಕು ಇಲ್ಲ ಎನ್ನುವ ಫಲಿತಾಂಶ ಬಂದಿದೆ. ಇಲ್ಲ ಎಂದವರಲ್ಲಿ ನಂತರ ಸೋಂಕು ಇದೆ ಎನ್ನುವ ವಿಚಾರಗಳು ಪತ್ತೆಯಾಗಿವೆ. ಇದರ ಜೊತೆ ಪರೀಕ್ಷೆಗೆ ಬಂದ ಮಾದರಿಯ ಪ್ರಮಾಣ ಸಾಕಷ್ಟಿಲ್ಲ, ಮಾದರಿಯನ್ನು ತೆಗೆದ ಕ್ರಮದಲ್ಲಿ ಲೋಪವಿದೆ ಎಂದು ಫಲಿತಾಂಶ ಸಿಕ್ಕ ಸಾವಿರಾರು ಪರೀಕ್ಷೆಗಳು ಯಾವುದೇ ಫಲಿತಾಂಶ ನೀಡದೆ ವ್ಯರ್ಥವಾಗಿವೆ.

    ಹೀಗಿದ್ದೂ ನಾವು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆ? ಕೋವಿಡ್ ಪರೀಕ್ಷೆಯ ವಿಧಾನಗಳದ್ದು  ಯಾಕಿಷ್ಟು ನವಿರು ಸ್ವಭಾವ?ಕೋವಿಡ್ ಪರೀಕ್ಷೆಗಳು ಹೇಗೆ ನಡೆಯುತ್ತವೆ?

    ಕೋವಿಡ್ ಪರೀಕ್ಷೆಯ ಹಿನ್ನೆಲೆಯೇನು?

    ಕೋವಿಡ್ ಸೋಂಕನ್ನು ವಿಶ್ವವ್ಯಾಪಿ ಹೊಸವ್ಯಾಧಿಯೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಹಿನ್ನೆಲೆಯಲ್ಲೇ ಸೋಂಕಿತರನ್ನು ಪತ್ತೆ ಹಚ್ಚಲು ತ್ವರಿತವಾಗಿ ಪರೀಕ್ಷಾ ವಿಧಾನಗಳ ಅಗತ್ಯ ಕಂಡಿತು. ಈ ಪರೀಕ್ಷೆ ಸುಲಭವಾಗಿರಬೇಕಿತ್ತು, ಹೆಚ್ಚು ಹಣ ಹೂಡಿಕೆ ಬೇಡದಂತಿರಬೇಕಿತ್ತು ಮತ್ತು ಈ ಪರೀಕ್ಷೆಯಿಂದ ಅತ್ಯಂತ ತ್ವರಿತವಾಗಿ ಸೋಂಕನ್ನು ಕಂಡುಹಿಡಿಯಲು ಸಾಧ್ಯವಿರಬೇಕಿತ್ತು.

    ಈ ಮಾಪನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮನುಕುಲ ಈ ಹಿಂದೆ ಇನ್ಫ್ಲುಯೆಂಜಾದಂತಹ ಪಿಡುಗನ್ನು ಪತ್ತೆಹಚ್ಚಿ ಅದನ್ನು ಹತ್ತಿಕ್ಕುವಲ್ಲಿ ಬಳಸುತ್ತಿದ್ದ ಮಾದರಿಯ ಟೆಸ್ಟ್ ಕಿಟ್ ಗಳನ್ನು ತಯಾರಿಸಬೇಕಾಯ್ತು. ಅದು ಬಡ ಮತ್ತು ಶ್ರೀಮಂತ ದೇಶಗಳೆರಡರಲ್ಲೂ ಅಗ್ಗದರದಲ್ಲಿ ಲಭ್ಯವಾಗಬೇಕಾಯ್ತು. ವೇಗವಾಗಿ ಸೋಂಕು ಹರಡುತ್ತಿದ್ದ ದೇಶಗಳು ನಾಗಾಲೋಟದಲ್ಲಿ ಈ ಟೆಸ್ಟ್ ಕಿಟ್ ಗಳ ಉತ್ಪಾದನೆ ಅಥವಾ ಖರೀದಿಗಿಳಿದವು. ಸೋಂಕು ನಿಧಾನವಾಗಿ ಹಬ್ಬಿದ ದೇಶಗಳಿಗೆ ಇವುಗಳನ್ನು ಉತ್ಪಾದಿಸಲು ಸ್ವಲ್ಪ ಸಮಯ ಸಿಕ್ಕಿತು.

    ಕೊರೊನಾ ಪರೀಕ್ಷೆಯ ಕಿಟ್ ಗಳನ್ನು ಬಳಸಿದ ನಂತರ ಅವುಗಳ ಪರೀಕ್ಷೆ ನಡೆಸಲು ದೊಡ್ಡ ದೊಡ್ಡ ನಗರಗಳಲ್ಲಿ ಹುಟ್ಟಿಕೊಂಡ ಪರೀಕ್ಷಾ ಕೇಂದ್ರಗಳು ಮತ್ತು ಲ್ಯಾಬೊರೇಟರಿಗಳನ್ನು ನಿಧಾನವಾಗಿ ಪ್ರತಿ ನಗರ, ಕೇಂದ್ರಗಳಿಗೆ ವಿಸ್ತರಿಸಬೇಕಾಯ್ತು. ಇಲ್ಲದಿದ್ದಲ್ಲಿ ಒಂದು ಕಡೆ ಪಡೆದ ಮೂಗು ಮತ್ತು  ಗಂಟಲು ದ್ರವಗಳ ಶೇಖರಣೆ,ಸಾಗಣೆ ಮತ್ತು ಗುಣಮಟ್ಟದ ಪರೀಕ್ಷೆಗಳಲ್ಲಿ ಅವು ಮತ್ತೊಂದು ಕಡೆ ಹೋಗಿ ಬರುವಷ್ಟರಲ್ಲಿ ಗಂಭೀರ ಲೋಪವಾಗುವ ಸಾಧ್ಯತೆಗಳಿದ್ದವು. ಈ ಪರೀಕ್ಷೆಯ ಫಲಿತಾಂಶಗಳು ತ್ವರಿತವಾಗಿ ಹೊರಬಿದ್ದು ಜನರನ್ನು ತಲುಪದಿದ್ದಲ್ಲಿ ಅವರು ತಮಗೆ ಸೋಂಕಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯದೆ ಡೋಲಾಯನಮಾನದ ಸ್ಥಿತಿಯಲ್ಲಿರಬೇಕಾಗಿತ್ತು.ಹೀಗಾಗಿ ಕೋವಿಡ್ ಪರೀಕ್ಷೆಗಳ ಅನುಕೂಲವನ್ನು ಸೃಷ್ಟಿಸುವಲ್ಲಿ ಪ್ರತಿದೇಶಗಳು ತೆಗೆದುಕೊಂಡ ಕ್ರಮಗಳು ಅಷ್ಟಿಷ್ಟಲ್ಲ.

    ಕೋವಿಡ್ ಪರೀಕ್ಷೆ ಹೇಗೆ ನಡೆಯುತ್ತದೆ?

    ಪರೀಕ್ಷೆಗೆ ಮುನ್ನ ನಿಮ್ಮ ಕೈಗಳನ್ನು ಸ್ಯಾನಿಟೈಸರ್ ಬಳಸಿ ಶುದ್ದಗೊಳಿಸಕೊಳ್ಳಬೇಕು. ಇದರಿಂದ ನಿಮ್ಮ ಕೈಯಿಂದ ಬರಬಹುದಾದ ಕಲ್ಮಶಗಳು ಟೆಸ್ಟ್ ಕಿಟ್ ನ್ನು ಪ್ರವೇಶಿಸವುದನ್ನು ತಡೆಯಬಹುದು.ಕೈಗಳಿಗೆ ಶುದ್ಧವಾದ ಕೈಗವುಸಗಳನ್ನು ತೊಟ್ಟುಕೊಳ್ಳಬೇಕು.ಟಿಶ್ಶೂ ಅಥವಾ ಬಿಸಾಡಬಹುದಾದ ಬಟ್ಟೆಯನ್ನು ಬಳಸಿಮೂಗನ್ನು ಲಘುವಾಗಿ ಸೀದಿ ಹೆಚ್ಚಿನ ಸ್ಲೇಷ್ಮವಿದ್ದಲ್ಲಿ ಅದನ್ನು ನಿವಾರಿಸಕೊಳ್ಳಬೇಕು.

    ನಿಮಗೆ ಕೊಟ್ಟ ಕಿಟ್ ನ್ನು ಬಳಸಿನೀವೇ ಮಾದರಿ ದ್ರವವನ್ನು ತೆಗೆದುಕೊಡಬಹುದು. ಇದು ಸಾಧ್ಯವಿಲ್ಲದ ದೇಶಗಳಲ್ಲಿ ತ್ವರಿತವಾಗಿ ಮಾದರಿಗಳನ್ನು ಸಂಗ್ರಹಿಸಲು ಪರೀಕ್ಷೆಯ ಮಾದರಿಗಳನ್ನು ಸಂಗ್ರಹ ಮಾಡಿಕೊಳ್ಳುವವರೇ ನಿಮ್ಮ ಮೂಗು-ಗಂಟಲಿನ ದ್ರವವನ್ನು ತೆಗೆದುಕೊಳ್ಳಬಹುದು.

    ಗಂಟಲಿನ ಒಳಭಾಗದ ಎರಡೂ ಕಡೆ ಇಣುಕುವ ಟಾನ್ಸಿಲ್ಸ್ ಗ್ರಂಥಿಯ ಅಂಗಾಂಶದ ಮೇಲೆ ಚೆನ್ನಾಗಿ  ಅಂದರೆ ಹತ್ತು  ಸೆಕೆಂಡುಗಳ ಕಾಲಮೆತ್ತಗಿನ ತುದಿಯಿರುವ ಪರೀಕ್ಷೆಯ  ಕಡ್ಡಿಯನ್ನು ಬಳಸಿಎರಡರ ಮೇಲೂ ತೀಡಬೇಕು.ಕೆಲವರಿಗೆ ಟಾನ್ಸಿಲ್ಸ್ ತೆಗೆಯುವ ಶಸ್ತ್ರ ಚಿಕಿತ್ಸೆ ಆಗಿದ್ದಲ್ಲಿ ಅವರು ಟಾನ್ಸಿಲ್ಸ್ ಇದ್ದ ಜಾಗದಲ್ಲಿ ತೀಡಿದರೂ ಸಾಕು. ನಂತರ ಹಲ್ಲು, ನಾಲಿಗೆ ಯಾವುದಕ್ಕೂ ತಗುಲಿಸದಂತೆ ತೀಡುವ ಕಡ್ಡಿಯನ್ನು ಹೊರತೆಗೆಯಬೇಕು. ಇದೇ ತುದಿಯನ್ನು ಯಾವುದಾದರೂ ಒಂದು ಮೂಗಿನ ಹೊರಳೆಯಲ್ಲಿ ಒಂದಿಂಚು ಒಳಹೊಗಿಸಿ 10-15 ಸೆಕೆಂಡುಗಳ ಕಾಲ ಚೆನ್ನಾಗಿ ದುಂಡಗೆ  ತಿರುಗಿಸಬೇಕು.

    ಮೂಗು ನತ್ತು ಧರಿಸಿರುವವರು ಇನ್ನೊಂದು ಹೊರಳೆಯನ್ನು ಬಳಸಬಹದು. ತೀಡುವ ಕಡ್ಡಿ ಒಂದಿಂಚು  ಒಳಹೋದ ನಂತರ ಮೂಗಿನಲ್ಲಿ ಸಾಧಾರಣವಾಗಿ ತಡೆಯೊಂದು ಸಿಕ್ಕುತ್ತದೆ. ಅದಕ್ಕಿಂತ ಹೆಚ್ಚು ಒಳಹೊಗಲು ಯತ್ನಿಸಿದರೆ ನೋವಾಗುತ್ತದೆ. ಈ ಹಂತಕ್ಕಿಂತ ಒಳಕ್ಕೆ ಕಡ್ಡಿಯನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.

    ಜಾಗರೂಕವಾಗಿ ಕಡ್ಡಿಯನ್ನು ಹೊರತೆಗೆದು ಅದನ್ನು ನಿಮ್ಮ  ಹೆಸರು, ವಿಳಾಸ ಅಥವಾ ಗುರುತಿನ ಸಂಖ್ಯೆಯನ್ನು ಅಂಟಿಸಿಕೊಟ್ಟಿರುವ ನಳಿಕೆಯಲ್ಲಿ ಸೀಲ್ ಮಾಡಿ ಪರೀಕ್ಷೆಗೆ  ಕಳಿಸಬೇಕು.

    ಕೋವಿಡ್ ಪರೀಕ್ಷೆಯ ಫಲಿತಾಂಶಗಳಲ್ಲಿ ಆಗಬಹುದಾದ ಲೋಪಗಳು

    ನಾವೇ ಇದನ್ನು ಮಾಡುವಾಗ ಜತನದಿಂದ ಮತ್ತು ಕಾಳಜಿಯಿಂದ ಮಾಡಿ ಮಾದರಿಯನ್ನು ಕಳಿಸಿಕೊಡಬೇಕು.

    ಬೇರೆಯವರು ಬೆಳಗ್ಗಿನಿಂದ ಸಂಜೆಯ ತನಕ  ಜನರ ಗಂಟಲು-ಮೂಗಿನ ದ್ರವವನ್ನು ಸಂಗ್ರಹಿಸುತ್ತಿದ್ದಲ್ಲಿ ಅವರು ನಾನಾ ರೀತಿ ವರ್ತಿಸುವ ಜನರೊಂದಿಗೆ ಸಹನೆಯಿಂದಿರಬೇಕಾಗುತ್ತದೆ. ಇಂಥವರಿಗೆ ಅತ್ಯುತ್ತಮ ರಕ್ಷಣಾ ಉಡುಪುಗಳನ್ನು ನೀಡುವುದು ಕೂಡ ಅತ್ಯಗತ್ಯ. ಇಲ್ಲದಿದ್ದಲ್ಲಿ ಹತ್ತಿರಕ್ಕೆ ಬಂದು ಬಾಯಿ ತೆಗೆದು ಮುಖದ ನೇರಕ್ಕೆ ಉಸಿರು ಬಿಡುತ್ತ ನಿಲ್ಲುವ ಜನರಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುವಲ್ಲಿ ಹಲವು ತಪ್ಪುಗಳನ್ನು ಮಾಡಬಹುದು.

    ನಮ್ಮ ಮೂಗು -ಗಂಟಲಿನ ಒಳಭಾಗಗಳು ಒಣಗಿದ್ದರೆ ಹೆಚ್ಚಿನ  ದ್ರವ ಮಾದರಿ ದೊರೆಯದೆ ಪರೀಕ್ಷೆ ನಡೆಸಲು ಸಾದ್ಯವಾಗದಿರಬಹುದು. ಬೇಕಾದ ಜಾಗವನ್ನು ತಲುಪಿ ತೀಡದಿದ್ದರೆ ಅದರಿಂದಲೂ ಮಾದರಿ ದೊರೆಯದೆ ಹೋಗಬಹುದು.

    ಹೆದರಿಕೊಂಡು ತೀಡುವ ಕಡ್ಡಿಯನ್ನು ಅಂಗಾಂಶಗಳ ಸಂಪರ್ಕಕ್ಕೆ ತರದಿದ್ದರೆ ಅಥವಾ ತರಲು ಅನುವು ಮಾಡಿಕೊಡದಿದ್ದರೆ ಆಗಲೂ ಫಲಿತಾಂಶಗಳು ನಿರ್ಣಾಯಕವಾಗದೇ  ತಪ್ಪು ಫಲಿತಾಂಶ ಬರಬಹುದು.ಹೀಗೆ ಹಲವಾರು ಮನುಷ್ಯ ಸಹಜ ತಪ್ಪುಗಳ ಕಾರಣಗಳಿಂದ ಪರೀಕ್ಷೆಯ ಫಲಿತಾಂಶದಲ್ಲಿ ವ್ಯತ್ಯಾಸ ಕಂಡು ಬರಬಹುದು.

    ಪರೀಕ್ಷೆ ನಡೆಯುವ ಪ್ರಯೋಗಾಲಯ ಅಥವಾ ಲ್ಯಾಬುಗಳು  ಎರಡನೇ ಶ್ರೇಣಿ ಅಥವಾ ಮೂರನೇ ಶ್ರೇಣಿಯ ನಿಯಂತ್ರಣವಿರುವ ಕಟ್ಟಡ ಸೌಲಭ್ಯಗಳನ್ನು ಹೊಂದಿರಬೇಕು. ಹೊರಗಿನದ್ದಕ್ಕೆ ಹೋಲಿಸಿದರೆ ಪ್ರಯೋಗಾಲಯದ ಒಳಗಿನ ಗಾಳಿಯ ಒತ್ತಡ  ಋಣಾತ್ಮಕವಾಗಿರುವಂತಹ ಅನುಕೂಲಗಳಿರಬೇಕು ಇಲ್ಲದಿದ್ದರೆ ಫಲಿತಾಂಶಗಳಲ್ಲಿ ಲೋಪಗಳು ಕಾಣಿಸಬಹುದು

    ಮೂಗು ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲು ಸಾಧ್ಯವಾಗದಿದ್ದಲ್ಲಿ ಮನುಷ್ಯರ ಉಗುಳಿನಿಂದ ಸೋಂಕಿನ ಪತ್ತೆ ಮಾಡಬಹುದು.ಉಗುಳಿನ ಮಾದರಿಯನ್ನು ಸಂಗ್ರಹಿಸುವುದು ಮೂಗು ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸುವ ವಿಧಾನಕ್ಕಿಂತ ಸುಲಭವಾದರೂ ಪರೀಕ್ಷೆ ಮಾಡಲು ಗಂಟಲು-ಮೂಗಿನ ದ್ರವಗಳನ್ನೇ ಹೆಚ್ಚು ನಂಬಲರ್ಹ ಎನ್ನಲಾಗಿದೆ.

    ಈ ಟೆಸ್ಟ್ ಕಿಟ್ ಗಳು ಆಯಾ ದೇಶದ ಗುಣಮಟ್ಟ ಮಾಪನಗಳಲ್ಲಿ ಉತ್ತೀರ್ಣರಾದ ನಂತರವೇ ಸಾರ್ವಜನಿಕರ ಬಳಕೆಗೆ  ಮಾರುಕಟ್ಟೆಗೆ ಬರುತ್ತವೆ. ಪ್ರತಿದೇಶದಲ್ಲೂ ಇವುಗಳ ಔದ್ಯಮಿಕ ಮಟ್ಟದಲ್ಲಿ ಇವುಗಳ ಬಳಕಯಾಗುತ್ತಿದೆ. ಅಲ್ಲಲ್ಲಿ ನಕಲಿ ಟೆಸ್ಟ್ ಕಿಟ್ ಗಳ ದಂಧೆ ಶುರುವಾದದ್ದು ಮತ್ತು ಆ ಮೂಲಕ ರೋಗವನ್ನು ಪತ್ತೆ ಮಾಡುವಲ್ಲಿ ಸೋತದ್ದು ಕೂಡ ನಡೆಯಿತು. ಕೆಲವು ದುಷ್ಕರ್ಮಿಗಳ ಅನೈತಿಕ ವ್ಯವಹಾರಗಳಿಂದ ನಕಲಿ ಕಿಟ್ ಗಳು ಅಸಲಿ ಕಿಟ್ ಗಳೊಡನೆ ಬೆರೆತು ವಿವಾದಾತ್ಮಕ ಫಲತಾಂಶಗಳನ್ನು ದೊರಕಿಸಿರಬಹುದು.ಇಂತಿಷ್ಟು ಹಣ ಕೊಟ್ಟರೆ ಕೋವಿಡ್ ನೆಗೆಟಿವ್ -ಎನ್ನುವ ಪ್ರಮಾಣ ಪತ್ರ ನೀಡುತ್ತ ಸಿಕ್ಕಿಹಾಕಿಕೊಂಡ ಲ್ಯಾಬ್ ಅಥವಾ ಪರೀಕ್ಷಾಲಯಗಳ ಬಗ್ಗೆಯೂ ವರದಿಗಳು ಬಂದವು.

    ಇದೆನ್ನೆಲ್ಲ ಹತ್ತಿಕ್ಕಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಗಳು ದುಡಿಯುತ್ತಿರುವಾಗಲೇ ಈಗಾಗಲೇ ಜಾರಿಯಲ್ಲಿರುವ ಕೋವಿಡ್ ಪರೀಕ್ಷೆಯ ಗುಣಮಟ್ಟ ಮತ್ತು ಕಾರ್ಯ ಕ್ಷಮತೆಯ ಮಾಪನಗಳೂ ನಡೆಯುತ್ತಿವೆ. ಅದಕ್ಕಾಗಿ ಹಲವಾರು ಅಧ್ಯಯನಗಳನ್ನು ಪ್ರಪಂಚದ ಹಲವೆಡೆ ಹಮ್ಮಿಕೊಳ್ಳಲಾಗಿದೆ.

    ಕೋವಿಡ್ ಪರೀಕ್ಷೆಯ ಉದ್ದೇಶಗಳೇನು?

    ಈ ಪರೀಕ್ಷೆಯ ಉದ್ದೇಶ ನಮ್ಮ ಗಂಟಲು-ಮೂಗು ದ್ರವ ಮತ್ತು ಎಂಜಲಿನ ಮಿಶ್ರಣವನ್ನು ಸಂಗ್ರಹಿಸುವುದು. ಈ ಸಂಗ್ರಹದಲ್ಲಿ ಕೋವಿಡ್ -19 ಎನ್ನುವ ವೈರಸ್ಸು ಇದೆಯೇ ಎಂದು ಪತ್ತೆ ಹಚ್ಚುವುದು.ಸೋಂಕಿತರನ್ನು ಗುರುತಿಸಿದ ನಂತರ ಅವರ ಸಂಪರ್ಕಕ್ಕೆ ಬಂದವರನ್ನು ಕಂಡುಹಿಡಿಯುವುದು. ಸೋಂಕಿತರನ್ನು ಆರೋಗ್ಯವಂತರಿಂದ ಬೇರ್ಪಡಿಸಿ ಸೋಂಕು ಹರಡದಂತೆ ರಕ್ಷಿಸುವುದು. ಸೋಂಕು ಇರುವವರಿಗೆ ಲಭ್ಯವಿರುವ ಚಿಕಿತ್ಸೆ ನೀಡುವುದು. ಇಲ್ಲವೆಂದಾದವರಿಗೆ ಧೈರ್ಯ ನೀಡುವುದು. ದೇಶವೊಂದನ್ನು ಮುಚ್ಚುವುದು ಅಥವಾ ಪ್ರಯಾಣಕ್ಕಾಗಿ ತೆರೆಯುವುದು ಇತ್ಯಾದಿ ಮಹತ್ವದ ನಿರ್ಧಾರಗಳನ್ನೆಲ್ಲ ಈ ಕೋವಿಡ್ ಪರೀಕ್ಷೆಯ ಆಧಾರದ ಮೇಲೇ ನಡೆಯುತ್ತಿರುವ ಕಾಲವಿದು.

    ಆದರೆ ಈ ಪರೀಕ್ಷೆ ನಿಜಕ್ಕೂ ಕರಾರುವಕ್ಕಾದ ನಿರ್ಣಯವನ್ನು ಕೊಡುತ್ತದೆಯೇ? ಇಲ್ಲವೆಂದಾದರೆ ಪ್ರಪಂಚವೇ ಇದನ್ನು ನಂಬಿ ನಡೆಯುತ್ತಿರುವುದು ಎಂತಹ ವಿಪರ್ಯಾಸವಲ್ಲವೇ?

    ಸರಿಯಾದ ಕ್ರಮದಲ್ಲಿ ಮಾದರಿಯನ್ನು ಸಂಗ್ರಹಿಸಿ ಕಳಿಸಿದರೂ ಪರೀಕ್ಷೆಯಫಲಿತಾಂಶಗಳಲ್ಲಿ    ವ್ಯತ್ಯಾಸ ಉಂಟಾಗುತ್ತಿರುವುದು ಕೂಡ ವರದಿಯಾಗಿದೆ. ಇದು ಹೇಗೆ?

    ಮುಖ್ಯ ವ್ಯತ್ಯಾಸ ಬರುವುದು ಸಂಗ್ರಹವಾದ ಮಾದರಿ ದ್ರವದಲ್ಲಿ. ಒಂದು ಅಧ್ಯಯನದ ಪ್ರಕಾರ ವೈರಸ್ಸಿನ  RNA ದ ಪ್ರಮಾಣ ಮೂಗಿನಿಂದ ತೆಗೆದ ದ್ರವದಲ್ಲಿ ಹೆಚ್ಚು ಕಾಣಸಿಕ್ಕಿತು ಆದರೆ ಗಂಟಲಿನಿಂದ ಪಡೆದ ದ್ರವದಲ್ಲಿ ಈ ಮಟ್ಟ ಅಷ್ಟಾಗಿ ಇರಲಿಲ್ಲ. ಆದರೆ ಈ ಅಧ್ಯಯನದಲ್ಲಿ ಕೇವಲ 12 ಜನರು ಭಾಗವಹಿಸಿದ್ದರು. ವಿಸ್ತೃತ ಮಟ್ಟದಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಮೂಗು ಮತ್ತು ಗಂಟಲಿನ ದ್ರವದ ಮಾದರಿಗಳಲ್ಲಿ ಈ ವ್ಯತ್ಯಾಸ ಕಂಡುಬರಲಿಲ್ಲ.

    ಆದರೆ ಧೃಡವಾದ ಫಲಿತಾಂಶಗಳು ದೊರಕ್ಕಿದ್ದು ಮೂಗು ಮತ್ತು ಗಂಟಲಿನ ದ್ರವಗಳೆರಡೂ ಇರುವ ಮಾದರಿಗಳಿಂದ. ಇದೇ ಮಾದರಿಯ ಪರೀಕ್ಷೆಗಳನ್ನು ಬಹುತೇಕ ದೇಶಗಳು ಅಳವಡಿಸಕೊಂಡವು.

    ಕೋವಿಡ್ ಟೆಸ್ಟ್ ಕಿಟ್ ಗಳು ರೋಗವನ್ನು ಪತ್ತೆ ಹಚ್ಚುವಲ್ಲಿ ಅಥವಾ ಇಲ್ಲವೆಂದು ನಿರ್ಣಯಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಈ ಕಿಟ್ ಗಳ ಗುಣಮಟ್ಟ ಅತ್ಯಂತ ಮುಖ್ಯವಾಗುತ್ತದೆ. ಹೀಗಾಗಿ ಅವು ಪ್ರತಿದೇಶದ ಅತ್ಯುನ್ನತ ಔಷದ ಮಂಡಳಿಗಳಿಂದ ಮಾನ್ಯತೆ ಪಡೆದು ನಂತರ ಮಾರುಕಟ್ಟೆಗೆ ಬರುತ್ತವೆ.Test  sensitivity ಅಂದರೆ  ವೈರಾಣು ಅತ್ಯಲ್ಪ ಪ್ರಮಾಣದಲ್ಲಿದ್ದರೂ ಅದನ್ನು ಈ ಕಿಟ್ ಗಳು ಕಂಡುಹಿಡಿಯಬೇಕು.  Test specificity ಅಂದರೆ ಕೋವಿಡ್ -19 ನ್ನು ಬಿಟ್ಟರೆ ಇನ್ಯಾವುದೇ ವೈರಾಣುಗಳಿದ್ದರೆ ಫಲಿತಾಂಶ ಪಾಸಿಟಿವ್ ಎಂದು ಬರಬಾರದು. ಇವೆರಡು ಗುಣಗಳಲ್ಲಿ ಯಾವುದರಲ್ಲಿ ಲೋಪವಾದರೂ ಫಲಿತಾಂಶಗಳು ಮನುಷ್ಯರಿಗೆ ಮಾರಕವಾಗುತ್ತವೆ.

    ಕೋವಿಡ್ ಪರೀಕ್ಷೆಯಿಂದ ಲಾಭಗಳೇನು?

    ಯಾವುದೇ ಪರೀಕ್ಷೆಯ ಉದ್ದೇಶ  ರೋಗವನ್ನು ಪತ್ತೆಹಚ್ಚುವುದು.ಆ ಮೂಲಕ ಸೋಂಕಿತರನ್ನು ಆರೋಗ್ಯವಂತರಿಂದ ದೂರವಿಡುವುದು, ಈಗಾಗಲೇ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ ನಲ್ಲಿರಲು ಆದೇಶಿಸಿ, ಪರೀಕ್ಷೆಗೆ ಒಳಪಡಿಸುವುದು, ಸೋಂಕಿತ ವ್ಯಕ್ತಿಗೆ ಅಗತ್ಯವಾದಲ್ಲಿ ಸಂಬಂಧಿತ ಚಿಕಿತ್ಸೆಯನ್ನು ನೀಡುವುದು.ಆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವುದು ಇತ್ಯಾದಿ ಉತ್ತಮ ಉದ್ದೇಶಗಳಿವೆ.ಹಾಗಾಗಿ ಕೋವಿಡ್ ಪರೀಕ್ಷೆ ಅತ್ಯಗತ್ಯವಾಗಿ ಬೇಕು. ಅದರಲ್ಲೂ ವಯಸ್ಸಾದವರು, ಇತರೆ ಖಾಯಿಲೆಗಳಿರುವವರು ಮತ್ತು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರಲ್ಲಿ ಸೋಂಕನ್ನು ಮುಂಚಿತವಾಗಿಯೇ ಕಂಡುಹಿಡಿಯುವ ಮೂಲಕ ಅವರ ಜೀವಗಳನ್ನು ಉಳಿಸುವುದು ಸಾಧ್ಯವಾಗುತ್ತದೆ.

    ಇವೆಲ್ಲದರ ಜೊತೆ ಒಂದು ಪ್ಯಾಂಡೆಮಿಕ್ ನ ಶುರುವಾತು, ಹರಡುವಿಕೆ, ವೇಗ, ನಿಯಂತ್ರಣ, ಎರಡನೇ ಅಥವಾ ಮೂರನೆ ಅಲೆಗಳು ಇತ್ಯಾದಿಗಳ ಅಧ್ಯಯನಕ್ಕೂ ಕೋವಿಡ್ ಪರೀಕ್ಷೆ ಅಗತ್ಯವಾಗಿ ಬೇಕಾಗುತ್ತದೆ.

    ಒಂದು ದೇಶ ಇನ್ನೊಂದು ದೇಶದ ಪ್ರಜೆಗಳಿಗೆ ತಮ್ಮ ಬಾಗಿಲುಗಳನ್ನು ತೆರೆಯಬಹುದೇ, ಆರ್ಥಿಕ ಚಟುವಟಿಕಗಳನ್ನು ಆರಂಭಿಸಬಹುದೇ ಇತ್ಯಾದಿ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೂಡ ಕೋವಿಡ್ ಪರೀಕ್ಷೆಗಳು ಅತ್ಯಗತ್ಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಆದರೆ ಪರೀಕ್ಷೆ ಕರಾರುವಕ್ಕಾದ ಮಾಹಿತಿ ನೀಡುವಲ್ಲಿ ವಿಫಲವಾದರೆ ಆ ಮೂಲಕ ಸರಣಿ ತಪ್ಪುಗಳಿಗೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ.

    ಕೋವಿಡ್ ಪರೀಕ್ಷೆಯ ಮಿತಿಗಳು

    ಕೋವಿಡ್ ಪರೀಕ್ಷೆಯೆನ್ನುವುದು ಪ್ರತಿಶತ ಕರಾರುವಕ್ಕಾದ ಪರೀಕ್ಷೆಯೇನಲ್ಲ. ಇದರಲ್ಲಿ ಮಾದರಿಯನ್ನು ಸಂಗ್ರಹಿಸುವಾಗ, ಶೇಖರಿಸವಾಗ, ಪರೀಕ್ಷಿಸುವಾಗ ಮತ್ತು ವರದಿನೀಡುವಾಗ ಹಲವಾರು ದೋಷಗಳಾಗಬಹುದು.

    ಅದರಲ್ಲೂ ತ್ವರಿತವಾಗಿ ಫಲಿತಾಂಶ ನೀಡಬಹುದಾದ (Rapid ಟೆಸ್ಟ್) ಅಂದರೆ ಕೇಲವ ಅರ್ಧಗಂಟೆಯಲ್ಲಿ ಫಲಿತಾಂಶ ನೀಡಲು ಸಾಧ್ಯವಿರುವ ವಿಧಾನಗಳಿಂದ ಪರೀಕ್ಷೆಗಳ ಗುಣ ಮಟ್ಟದಲ್ಲೂ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಬೇರೊಂದು ದೇಶದಿಂದ ಬರುವ ಪ್ರಯಾಣಿಕರ ಪರೀಕ್ಷೆಯನ್ನು ಏರ್ ಪೋರ್ಟಿನಲ್ಲೇ ಮಾಡಿದರೆನ್ನಿ. ಆಗ ಅವರ ದೇಹದಲ್ಲಿ ವೈರಾಣುಗಳು ಮೂಗು-ಗಂಟಲು ದ್ರವದಲ್ಲಿ ಅಂದುಕೊಂಡ ಪ್ರಮಾಣದಲ್ಲಿ ಇಲ್ಲದಿರಬಹುದು. ಹಾಗಾಗಿ ನೆಗೆಟಿವ್ ಬರುವ ಟೆಸ್ಟ್ ಮೂರು ದಿನಗಳ ನಂತರ ಪಾಸಿಟಿವ್ ಆಗಬಹುದು. ಆದರೆ ಆ ಜನರು ತಾವು ಕೋವಿಡ್ ಸೋಂಕಿತರಲ್ಲ ಎಂದು ಆ ವೇಳೆಗೆ ಊರೆಲ್ಲ ಓಡಾಡಿರಬಹುದು.ಈ ಕಾರಣ ಪರದೇಶದ ಪ್ರಯಾಣ ಮಾಡಿಬಂದ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿಟ್ಟ ನಂತ72 ಗಂಟೆಗಳಲ್ಲಿ ಮತ್ತೆ ಪರೀಕ್ಷಿಸಬೇಕು ಎನ್ನುವ ಎಚ್ಚರಿಕೆಗಳನ್ನು ಅಧ್ಯಯನಕಾರರು ನೀಡಿದ್ದಾರೆ.Point of testing ಅಥವಾ ಯಾವ ಹಂತದಲ್ಲಿ ಪರೀಕ್ಷೆ ನಡೆಯಿತು ಎನ್ನುವುದುಇದೇ ಕಾರಣಕ್ಕೆ ಅತ್ಯಂತ ಮುಖ್ಯವಾಗುತ್ತದೆ.

    ಗಂಟಲು-ಮೂಗಿನ ದ್ರವದ ಕೋವಿಡ್ ಪರೀಕ್ಷೆಯಿಂದವೈರಸ್ಸಿನ ಆರ್. ಎನ್.ಎ ಅಥವಾ ಪ್ರೋಟೀನಿನ ಕುರುಹು ಆ ವ್ಯಕ್ತಿಯಲ್ಲಿದೆಯೇ ಎಂದು ಹೇಳಲು ಸಾಧ್ಯವಾಗುತ್ತದೆ. ಆದರೆ ವೈರಲ್ ಲೋಡ್, ಟಾಕ್ಸಿಸಿಟಿ ಇತ್ಯಾದಗಳ ಮಾಹಿತಿಗಳಿಗಾಗಿ ಹೆಚ್ಚಿನ ಪರೀಕ್ಷೆಗಳು ಬೇಕಾಗುತ್ತವೆ.ವೈರಸ್ಸು ನಮ್ಮ ದೇಹಕ್ಕೆ ಪ್ರವೇಶ ಕೊಟ್ಟು ಹೋಗಿರಬಹುದೇ ಎನ್ನುವ ಆಂಟಿಬಾಡಿ ಪರೀಕ್ಷೆ ಕೂಡ ಲೋಪಗಳಿಂದ ಕೂಡಿದೆ.ಆ ಬಗ್ಗೆ ಮುಂದೆ ಬರೆಯುತ್ತೇನೆ.

    ಕೋವಿಡ್ ಟೆಸ್ಟ್ ಗಳು ಮತ್ತು ವಿವಾದಗಳು

    ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಂಜನಗೂಡಿನಲ್ಲಿ  ಡಾ.ನಾಗೇಂದ್ರ ಎನ್ನುವ ಸರ್ಕಾರಿ ವೈದ್ಯರ ಮೇಲೆ ದಿನಕ್ಕೆ ಇಂತಿಷ್ಟು ಟೆಸ್ಟ್ ಗಳನ್ನು ನಡೆಸಬೇಕೆಂಬ ಒತ್ತಡ ಇದ್ದಿತು, ಆದರೆ ಸೌಲಭ್ಯ ಇರಲಿಲ್ಲ ಎಂಬ ಆಪಾದನೆಗಳು ಕೇಳಿಬಂದವು. ಅದರ ಸತ್ಯಾ ಸತ್ಯತೆಗಳನ್ನು ಪ್ರಶ್ನಿಸದೆಯೂ ಹೇಳಬಹುದಾದರೆ, ಪ್ರತಿ ದೇಶದ ಮೇಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ನಡೆಸಬೇಕಾದ ಒತ್ತಡವಿದೆ. ವಿರೋಧ ಪಕ್ಷಗಳು, ವಿಶ್ವ ಆರೋಗ್ಯ  ಸಂಸ್ಥೆಗಳು, ಪಾಲಿಸಿ ಮೇಕರ್ ಗಳು ಸಂಖ್ಯೆಯನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈ ಗೊಳ್ಳಲು ಕೋವಿಡ್ ಮಂಡಳಿಯ ಕೆಲಸಗಾರರ ಮೇಲೆ ಒತ್ತಡ ಹೇರುತ್ತಿರುವುದು ಸುಳ್ಳಲ್ಲ.

     ಆದರೆ ಕೋವಿಡ್ ಪರೀಕ್ಷೆಯ ಫಲಿತಾಂಶದ ಗುಣಮಟ್ಟದ ಮೇಲೆ ದೊಡ್ಡ ಕಪ್ಪು ಛಾಯೆಯಿದೆ.ಇದು ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಗಳಿವೆ. ಏಕೆಂದರೆ ಸರಿಯಾದ ಫಲಿತಾಂಶ ನೀಡದ ಪಾಸಿಟಿವ್ ಪರೀಕ್ಷೆಗಳಿಂದ ಸುಮ್ಮ ಸುಮ್ಮನೆ ಜನಸಾಮಾನ್ಯರು ಕ್ವಾರಂಟೈನ್ ಗೆ ಒಳಗಾದರೆ, ಸುಳ್ಳು ಸುಳ್ಳೆ ನೆಗೆಟಿವ್ ಟೆಸ್ಟ್ ಗಳಿಂದ ಮತ್ತಷ್ಟು ಸೋಂಕು ಮತ್ತು ಸಾವುಗಳು ಸಂಭವಿಸಿ ಇಡೀ ದೇಶಗಳೇ ನಲುಗಬಲ್ಲವು.

    ಉದಾಹರಣೆಗೆ, ಚೈನಾ ದೇಶದಲ್ಲಿ  ಕೋವಿಡ್ ನೆಗೆಟಿವ್ ಎಂದು ಫಲಿತಾಂಶ ಬಂದಿದ್ದ 213 ಜನ  ನಾನಾ ಕಾರಣಗಳಿಂದ ಆಸ್ಪತ್ರೆಗೆ ದಾಖಲಾದರು. ಇವರಲ್ಲಿ 37 ಜನ ಮಾರಣಾಂತಿಕ ಚಿಂತಾಜನಕ ಸ್ಥಿತಿಯನ್ನು ತಲುಪಿದ್ದರು. ಇದರಿಂದ ಎಚ್ಚೆತ್ತ ಒಂದು ಅಧ್ಯಯನಕಾರರ ತಂಡ 927 ಶಂಕಿತ ಆದರೆ ಈಗಾಗಲೇ ನೆಗೆಟಿವ್ ಎಂಬ ಫಲಿತಾಂಶ ಬಂದಿದ್ದ ಜನರ ಮೇಲೆ ಅಧ್ಯಯನ  ನಡೆಸಿ ಅವರ ಗಂಟಲು ಮತ್ತು ಮೂಗಿನ ದ್ರವಗಳನ್ನು ಬೇರೆ ಬೇರೆ ರೀತಿ ಪರೀಕ್ಷಿಸಿದಾಗ ಅವರಲ್ಲಿ ಶೇಕಡಾ3-29 ರಷ್ಟು ಜನರಲ್ಲಿ ಕೋವಿಡ್ ಇದ್ದದ್ದು ಧೃಡವಾಯ್ತು.ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕು ಎನ್ನುವ ಕರೆಗೆ ಬಲ ದೊರಕಿತು.

    ಇಡೀ ಕೋವಿಡ್ ಅಧ್ಯಾಯ ಒಂದು ರೀತಿಯಲ್ಲಿ  ಕಾಲದ ಜೊತೆಗಿನ ಸ್ಪರ್ಧೆಯ ರೀತಿಯಲ್ಲಿ ಸಾಗುತ್ತಿರುವುದು ಕೂಡ ಮತ್ತೊಂದು ದೊಡ್ಡ ಕಾರಣ.

     ಇವೆಲ್ಲದರ ಜೊತೆ ಪ್ಯಾಂಡೆಮಿಕ್ ಶುರುವಾಗಿ 8 ತಿಂಗಳುಗಳೇ ಕಳೆದಿದ್ದರೂ,ಯಾವುದೇ ಲಕ್ಷಣಗಳಿಲ್ಲದ ರೀತಿಯ ಕೋವಿಡ್ ಸೋಂಕಿತರನ್ನು ಹೇಗೆ ಪತ್ತೆ ಹಚ್ಚುವುದು?- ಎನ್ನುವುದು ಮಾತ್ರ ಇನ್ನೂ ಒಂದು ಯಕ್ಷಪ್ರಶ್ನೆಯಾಗೇ ಉಳಿದಿದೆ. ಉತ್ತರ ಸಿಗದಿದ್ದಲ್ಲಿ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುವುದಿಲ್ಲ.ಸೋಂಕು ಹರಡುವುದನ್ನೂ ತಡೆಯಲಾಗುವುದಿಲ್ಲ.

     ಮನುಷ್ಯರ ಮೂಲಕ ಜರುಗಬಲ್ಲ, ತಡೆಯಬಲ್ಲ ಎಲ್ಲ ತಪ್ಪುಗಳನ್ನು ಹತೋಟಿಯಲ್ಲಿಟ್ಟು, ಉತ್ತಮ ಪ್ರಯೋಗಾಲಯದ ವ್ಯವಸ್ಥೆಗಳನ್ನು  ಕಲ್ಪಿಸಿ, ಉತ್ತಮ ಟೆಸ್ಟ್ ಕಿಟ್ ಗಳನ್ನು ಬಳಸುವುದರ ಜೊತೆ   ಟೆಸ್ಟ್ ಫಲಿತಾಂಶ ಏನೇ ಆಗಿದ್ದರೂ ಪಾಲಿಸಬೇಕಾದ ನಿಯಮಗಳು ಒಂದೇ ಆಗಿವೆ. ಅಂದರೆ ಟೆಸ್ಟ್ ಪಾಸಿಟಿವ್ ಆಗಿರಲಿ ,ನೆಗೆಟಿವ್ ಆಗಿರಲಿ, ನಮ್ಮಲ್ಲಿ ಲಕ್ಷಣಗಳಿರಲಿ, ಇಲ್ಲದಿರಲಿ ಒಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾದುಕೊಳ್ಳುವುದು, ಮಾಸ್ಕ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಇತ್ಯಾದಿಗಳನ್ನು ಇದೇ ಕಾರಣಕ್ಕೆ ಮುಂದುವರೆಸಬೇಕಾದ ಜರೂರು ಅಗತ್ಯ ಮಾತ್ರ ಹಾಗೇ ಉಳಿದಿದೆ.ಇದೊಂದೇ ಸಧ್ಯಕ್ಕಿರುವ ಸರಳ ಉಪಾಯ.

    ಹಿರಿಯ ಮಿತ್ರ ಶೇಷನಾರಾಯಣ

    ಶೇಷನಾರಾಯಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಾದಂಬರಿ, ಸಣ್ಣ ಕಥೆ , ಅನುವಾದ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಪ್ರತಿಭಾವಂತ. ಆದರೆ ವಿಮರ್ಶಕರಿಂದ ಅವರ ಸಾಹಿತ್ಯಕ್ಕೆ ದೊರಕಬೇಕಾದ ಮನ್ನಣೆ ಸಿಗಲಿಲ್ಲ.ಕಳೆದ ವರ್ಷ ಇದೇ ಆಗಸ್ಟ್ ತಿಂಗಳಲ್ಲಿ ನಮ್ಮಿಂದ ದೂರವಾದ ಶೇಷನಾರಾಯಣ ಅವರನ್ನು ಅವರ ಬಹುಕಾಲದ ಗೆಳೆಯ ಸಾಹಿತಿ ಈಶ್ವರಚಂದ್ರ ಇಲ್ಲಿ ನೆನಪಿಸಿಕೊಂಡಿದ್ದಾರೆ.

    ಈಶ್ವರಚಂದ್ರ

    ನಾನು ಶೇಷನಾರಾಯಣ ಅವರನ್ನು ನೋಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬಿಎಂಶ್ರೀ ಅಚ್ಚುಕೂಟದಲ್ಲಿ. ಅವರು ಅಲ್ಲಿ ಮ್ಯಾನೇಜರಾಗಿದ್ದರು. ಆ ವೇಳೆಗೆ ನಾನು ಅವರ ‘ಮೊಲ್ಲೆ ಮಲ್ಲಿಗೆ’ ಕಥಾ ಸಂಕಲನವನ್ನು ಓದಿ ಮೆಚ್ಚಿಕೊಂಡಿದ್ದೆ. ನನ್ನ ಒಂದು ಕಥಾಸಂಕಲನವನ್ನು ಮುದ್ರಿಸಲು ಸಾಧ್ಯವೇ ಎಂದು ವಿಚಾರಿಸಲು ಹೋಗಿದ್ದೆ. ಅಲ್ಲಿ ಕನ್ನಡ ನಿಘಂಟುವಿನ ಕೆಲಸ ಭರದಿಂದ ನಡೆಯುತ್ತಿತ್ತು. ಹೊರಗಿನ ಕೆಲಸಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ.

    ಅಲ್ಲದೆ ಲೇಖಕನೊಬ್ಬ ಸ್ವಂತ ಹಣದಿಂದ ಪುಸ್ತಕ ಪ್ರಕಟಿಸಿ ಕೈ ಸುಟ್ಟುಕೊಳ್ಳುವುದು ಸೂಕ್ತವಲ್ಲ , ಯಾರಾದರೂ ಪ್ರಕಾಶಕರನ್ನು ಹಿಡಿಯಿರಿ ಎಂದು ಅವರು ಸಲಹೆ ಕೊಟ್ಟರು. ಹೀಗೆ ಪ್ರಾರಂಭವಾದ ನಮ್ಮ ಸ್ನೇಹ ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಅವಿರತವಾಗಿ ಮುಂದುವರಿಯಿತು. ಅವರು ವಿಕಾಸ ಮುದ್ರಣ ಎಂಬ ದೊಡ್ಡ ಮುದ್ರಣಾಲಯವನ್ನು ಸ್ಥಾಪಿಸಿದರು. ಅದು ಲೇಖಕರು ಸೇರುವ ಒಂದು ತಾಣವೇ ಆಯಿತು .ನಾವು ಕೆಲವು ಸ್ನೇಹಿತರು ಸೇರಿ ಆರಂಭಿಸಿದ ಅಭಿರುಚಿ ಪ್ರಕಾಶನದ ಕೆಲವು ಪುಸ್ತಕಗಳನ್ನು ಅವರು ಅಚ್ಚುಕಟ್ಟಾಗಿ ಮುದ್ರಿಸಿದರು. ಉತ್ತಮ ಮುದ್ರಣಕ್ಕೆ ಅವರ ಮುದ್ರಣಾಲಯ ಪ್ರಸಿದ್ಧವಾಯಿತು. ಎಲ್ಲಾ ಕಡೆಯಿಂದ ಲೇಖಕರು ಬಂದು ತಮ್ಮ ಪುಸ್ತಕಗಳನ್ನು ಅಲ್ಲಿ ಮುದ್ರಿಸಲು ಕೊಟ್ಟರು. ಕೆಲವರು ಹಣ ಕೊಡಲಿಲ್ಲ. ಸಾಲ ಬೆಳೆಯಿತು. ಅದು ‘ ಮನೆಹಾಳ ಬಡ್ಡಿಯ ಸಾಲ ‘ ಎಂದು ಶೇಷನಾರಾಯಣ ಹೇಳುತ್ತಿದ್ದರು. ಅವರು ವ್ಯವಹಾರ ಕುಶಲಿಯಲ್ಲದ ಭೋಳೆ ಮನುಷ್ಯ. ಎಲ್ಲರನ್ನೂ ನಂಬುತ್ತಿದ್ದರು ಅದರಿಂದ ನಷ್ಟ ಅನುಭವಿಸುವಂತಾಯಿತು. ಅನಿವಾರ್ಯವಾಗಿ ಮುದ್ರಣಾಲಯವನ್ನು ಮುಚ್ಚಿದರು.

    ಶೇಷನಾರಾಯಣ ಅವರದು ಆರಂಭದಿಂದಲೂ ಕಷ್ಟದ ಜೀವನ. ಜಲ್ಲಿಕಲ್ಲಿನ ಮೇಲೆ ಪೇಪರ್ ಹಾಸಿಕೊಂಡು ಮಲಗುತ್ತಿದ್ದ ದಿನಗಳನ್ನು ಆಗಾಗ ನೆನೆಯುತ್ತಿದ್ದರು. ಹಿರಿಯ ಪತ್ರಕರ್ತರೊಡನೆ ಮತ್ತು ಮುದ್ರಣಾಲಯಗಳಲ್ಲಿ ಕೆಲಸಮಾಡಿ ಗಳಿಸಿದ ಅನುಭವದಿಂದ ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿದರೂ ಅದೃಷ್ಟ ಅವರಿಗೆ ಒಲಿಯಲಿಲ್ಲ.

    ಶೇಷನಾರಾಯಣ ಆಗಾಗ ನಮ್ಮ ಮನೆಗೆ ಭೇಟಿ ಕೊಡುತ್ತಿದ್ದರು. ಹಾಗೆ ಬಂದಾಗಲೆಲ್ಲ ತಮ್ಮ ಹೊಸ ಪುಸ್ತಕವೊಂದನ್ನು ನನಗೆ ಕೊಡುತ್ತಿದ್ದರು. ‘ ಶ್ರೀ ಈಶ್ವರಚಂದ್ರ ಅವರಿಗೆ, ವಿಶ್ವಾಸದಿಂದ, ಶೇನಾ ‘ ಎಂದು ತಮ್ಮ ವಿಶಿಷ್ಟ ಶೈಲಿಯ ಅಕ್ಷರದಲ್ಲಿ ಬರೆದಿರುತ್ತಿದ್ದರು. ಅವರು ಮೂಲತಃ ಕಾದಂಬರಿಕಾರರು. ಹದಿನೇಳು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ‘ಬೀಸು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ‘ಅಯೋಧ್ಯೆಯಲ್ಲಿ ರಾಮನಿಲ್ಲ’ ಅವರ ವಿಶಿಷ್ಟವಾದ ರಾಜಕೀಯ ಕಾದಂಬರಿ. ಪ್ರಾಣಿಗಳನ್ನು ಪಾತ್ರಗಳನ್ನಾಗಿ ಮಾಡಿಕೊಂಡು ಅವರು ಕಥೆ, ಕಾದಂಬರಿಗಳನ್ನು ರಚಿಸಿರುವುದುಂಟು. ಅವರು ಆರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ವಿಭೀಷಣ’ ನಾಟಕವಾದರೆ, ‘ಬಾಲಮುರಳಿ’ ಮಕ್ಕಳ ಪುಸ್ತಕ. ಒಬ್ಬ ಮುದ್ರಕನಾಗಿ ಸಾಹಿತಿಗಳ ಒಡನಾಟದಲ್ಲಿ ಆದ ಅನುಭವಗಳನ್ನು ‘ಛಾಪಕನ ಛಾಪು’ ಕೃತಿಯಲ್ಲಿ ನಿರೂಪಿಸಿದ್ದಾರೆ.

    ‘ಕಾವೇರಿ : ಒಂದು ಚಿಮ್ಮು ಒಂದು ಹೊರಳು’ ಎಂಬ ಅವರ ಕೃತಿ ಕಾವೇರಿ ಜಲವಿವಾದದ ಸಂಪೂರ್ಣ ಚಿತ್ರವನ್ನು ನೀಡುತ್ತದೆ. ಈ ಪುಸ್ತಕವನ್ನು ಅವರೇ ತಮಿಳಿಗೆ ಅನುವಾದ ಮಾಡಿ ತಮಿಳರ ಕೆಂಗಣ್ಣಿಗೆ ಗುರಿಯಾಗಿರುವುದೂ ಉಂಟು.

    ಶೇಷನಾರಾಯಣ ಉತ್ತಮ ಅನುವಾದಕರೂ ಹೌದು. ಸುಮಾರು ಹತ್ತು ಕೃತಿಗಳನ್ನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ . ಅವುಗಳಲ್ಲಿ ‘ಪಾರ್ಥಿಬನ ಕನಸು’, ‘ಒಂದು ಕಡಲ ತೀರದ ಗ್ರಾಮದಲ್ಲಿ’ ಮುಖ್ಯವಾದವು. ‘ಹದಿನೆಂಟನೆಯ ಅಕ್ಷರೇಖೆ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ. ಅವರು ಮಾಸ್ತಿಯವರ ಸಣ್ಣಕಥೆಗಳನ್ನು ‘ಮಾಸ್ತಿ ಸಿರು ಕತೈಗಳ್’ ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಎಸ್ ಎಲ್ ಭೈರಪ್ಪ ಅವರ ದಾಟು ಕಾದಂಬರಿಯನ್ನು ‘ತಾಂಡು’ ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಗಳ ನಡುವಣ ಸೇತುವಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತಮಿಳರು ಅವರನ್ನು ಸನ್ಮಾನಿಸಿದ್ದಾರೆ.

    ಕರ್ನಾಟಕದಲ್ಲಿ ವಿಮರ್ಶಕರು ಶೇಷನಾರಾಯಣರಿಗೆ ನ್ಯಾಯ ಸಲ್ಲಿಸಲಿಲ್ಲ. ರಾಜ್ಯೋತ್ಸವ ಪ್ರಶಸ್ತಿಯನ್ನು ಕೊನೆಯ ಕ್ಷಣದಲ್ಲಿ ಎರಡನೆಯ ಪಟ್ಟಿಯಲ್ಲಿ ಪ್ರಕಟಿಸಿದ ಕಾರಣದಿಂದ ಅವರು ಪ್ರಶಸ್ತಿ ಪ್ರದಾನ
    ಸಮಾರಂಭಕ್ಕೆ ಹೋಗಲಿಲ್ಲ. ಅನಂತರ ಮನೆಯಲ್ಲಿಯೇ ಅವರಿಗೆ ಸನ್ಮಾನ ಮಾಡಿದರು. ಸರ್ಕಾರದಿಂದ ಬರುತ್ತಿದ್ದ ವೃಧ್ಧಾಪ್ಯ ವೇತನ ಕೂಡ ಇದ್ದಕ್ಕಿದ್ದಂತೆ ನಿಂತು ಹೋಯಿತು. ಅವರು ಯಾರನ್ನೂ ಯಾಚಿಸಲಿಲ್ಲ . ಎಲ್ಲ ನೋವುಗಳನ್ನು ನುಂಗಿಕೊಂಡು ನಗುತ್ತಿದ್ದರು. ಅವರನ್ನು ನೆನೆದಾಗ ಆ ನಗುವಿನ ಚಿತ್ರವೇ ಮನಸ್ಸಿನಲ್ಲಿ ಮೂಡುತ್ತದೆ.

    ಶೇಷನಾರಾಯಣ ಅವರು ತಮ್ಮ ಕೊನೆಯ ಕೆಲವು ವರ್ಷಗಳನ್ನು ಪತ್ನಿ ಶ್ರೀಮತಿ ಸುಭದ್ರ ಮತ್ತು ನಾಲ್ಕು ಮಕ್ಕಳೊಡನೆ ಲಕ್ಕಪ್ಪಾ ಲೇಔಟಿನ ಸಿಂಗಾಪುರ ಬಡಾವಣೆಯಲ್ಲಿ ನೆಮ್ಮದಿಯಿಂದ ಕಳೆದರು. ಮಕ್ಕಳು ಅವರನ್ನ ಕಾಳಜಿಯಿಂದ ನೋಡಿಕೊಂಡರು. ಅಕ್ಕಪಕ್ಕದ ರಸ್ತೆಗಳಲ್ಲಿ ಮಕ್ಕಳು ಕಟ್ಟಿದ ನಾಲ್ಕೂ ಮನೆಗಳಿಗೆ ಓಡಾಡಿಕೊಂಡು ಗೆಲುವಿನಿಂದಲೇ ಇದ್ದರು. ದಿನಾಂಕ 07.08.2019 ರಂದು ತಮ್ಮ 92ನೇ ವಯಸ್ಸಿನಲ್ಲಿ ತೀರಿಕೊಂಡರು. ಇದೀಗ ಒಂದು ವರ್ಷ ಕಳೆದಿದೆ ಪ್ರಥಮ ಪುಣ್ಯತಿಥಿಯಂದು ಈ ಹಿರಿಯ ಮಿತ್ರರನ್ನು ನೆನೆಯುತ್ತಾ ಹಿಂದಿನ ಸ್ನೇಹ ಪ್ರಸಂಗಗಳೆಲ್ಲ ಸ್ಮೃತಿಪಟಲದಲ್ಲಿ ಹಾದುಹೋಗುತ್ತವೆ.

    ನಂದಿ ಬೆಟ್ಟದಲ್ಲಿ ಹುಚ್ಚು ಸಾಹಸ

    ನಮ್ಮ ವೇದಿಕೆ ಅಂಕಣಕ್ಕೆ ಹಲವಾರು ಲೇಖನಗಳು ಹರಿದು ಬರುತ್ತಿವೆ. ಹುಡುಗು ಬುದ್ಧಿ ಎಂಥ ಅವಾಂತರಗಳ ಮಾಡಿಸಬಲ್ಲದು ಎಂಬುದಕ್ಕೆ ಈ ಲೇಖನದ ಘಟನೆ ಒಂದು ಉದಾಹರಣೆ. ಈ ಲೇಖನವನ್ನು ಕಳುಹಿಸಿದ ದಾವಣಗೆರೆಯ ಮಮತಾ ವೀರಯ್ಯ ಹೀಗೆ ಬರೆಯುತ್ತಾರೆ…..ಇದು ನನ್ನ ತಾತ ಜಿ. ಚಂದ್ರಯ್ಯ ಬರೆದ ಲೇಖನ. ತಮ್ಮ 90 ರ ವಯಸ್ಸಿನಲ್ಲಿ ನಿನ್ನೆ ಅವರ ವ್ಯಾಸಂಗ ಬದುಕಿನಲ್ಲಿ ನಲ್ಲಿ ನಡೆದ ಒಂದು ಘಟನೆ ಬರೆದಿದ್ದಾರೆ . 13 ವರ್ಷಗಳ ಹಿಂದೆ ಗ್ಯಾಂಗ್ರಿನ್ ಗೆ ತುತ್ತಾಗಿ ತಮ್ಮ ಒಂದು ಕಾಲು ಕಳೆದುಕೊಂಡಿದ್ದಾರೆ. ಇಂದಿಗೂ ಬತ್ತದ ಸಾಹಿತ್ಯ ಪ್ರೇಮ .ಇವರು ಮೂಲತಃ ಚನ್ನಗಿರಿ ತಾಲ್ಲೂಕಿನ ಸೋಮಲಾಪುರದವರು ಕಳೆದ 35 ವರ್ಷಗಳಿಂದ ಕುಟುಂಬದವರೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದಾರೆ. ಇವರನ್ನು ಪರಿಚಯಿಸಬೇಕೆಂದು ಮನ ಮಿಡಿಯಿತು. ಇವರ ಬರಹ ಓದಿ ಪ್ರತಿಕ್ರಿಯಿಸಿ ನಮ್ಮ ಬಾಲ್ಯದ ಇಂತಹ ಸಾಹಸವನ್ನು ಮೆಲುಕುಹಾಕೋಣ.

    ಜಿ. ಚಂದ್ರಯ್ಯ

    ಇದು ನಡೆದು ಇಂದಿಗೆ 64 ವರ್ಷಗಳಾಯಿತು, 1956ನೇ ಇಸವಿ. ನನಗೆ ಆಗ ಸುಮಾರು 25 ವರ್ಷ. ಬೆಂಗಳೂರಿನ ಗೌರ್ನಮೆಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ವರ್ಷದ ಅವಧಿ. ಕಾಲೇಜಿನಿಂದ ನಂದಿಬೆಟ್ಟದ ಹತ್ತಿರ ಸರ್ವೆ ಕ್ಯಾಂಪ್ ಹಾಕಿದ್ದರು. ನಾವುಗಳು ಸುಮಾರು ನೂರು ಹುಡುಗರಿದ್ದೆವು. ನಂದಿಬೆಟ್ಟದ ಹತ್ತಿರ ಇರುವ ಭೋಗನಂದೀಶ್ವರ ದೇವಾಲಯದಲ್ಲಿ ನಮ್ಮ ಕ್ಯಾಂಪ್ ಇತ್ತು. ಅದರ ಪಡಸಾಲೆಯಲ್ಲಿ ನಾವು ಮಲಗುತ್ತಿದ್ದೆವು.

    ಒಂದು ದಿನ ನಾನೂ ಸೇರಿ ಕೆಲವು ಹುಡುಗರು ನಂದಿಬೆಟ್ಟವನ್ನು ಬಂಡೆಯ ಮೇಲಿಂದಲೇ ಹತ್ತಬೇಕೆಂದು ತೀರ್ಮಾನಿಸಿದೆವು. ನಾವೆಲ್ಲರೂ 22ರಿಂದ 25 ವರ್ಷದೊಳಗಿದ್ದೆವು. ನಮಗೆ ಆಗ ಯಾವ ಟ್ರೆಕಿಂಗ್ ಆಗಲೀ ಬೆಟ್ಟ ಹತ್ತುವ ಟ್ರೈನಿಂಗ್ ಆಗಲೀ ಇರಲಿಲ್ಲ. ಏನೋ ಹುಮ್ಮಸ್ಸು – ಹುಡುಗುತನ.

    ಸುಮಾರು 25-30 ಹುಡುಗರು ಬೆಟ್ಟ ಹತ್ತಲು ಸಾಯಂಕಾಲ ನಾಲ್ಕು ಘಂಟೆಗೆ ಹೊರೆಟೆವು. ಬೆಟ್ಟದ ತಳದಿಂದ  ಸುಮಾರು 5000 ಸಾವಿರ ಅಡಿ ಎತ್ತರ ಪೂರ್ತಿ ಬಂಡೆಗಳು.ಸುಮಾರು ಹುಡುಗರು ಅರ್ಧಕ್ಕಿಂತ ಕಡಿಮೆ ಎತ್ತರದಲ್ಲೇ ಆಗುವುದಿಲ್ಲ ಎಂದು ಇಳಿದುಹೋದರು. ಎತ್ತರವಾದಂಗೆ ಬಂಡೆ ಬಹಳ ಸ್ಟೀಪ್ ಆಗುತ್ತಾ ಹೋಯಿತು. ಇನ್ನೂ ಕೆಲವರು ಸ್ವಲ್ಪ ಹತ್ತಿ ಅವರೂ ಇಳಿದುಹೋದರು. ಕೊನೆಗೆ ಎಂಟು ಜನ ಮಾತ್ರ ಉಳಿದುಕೊಂಡೆವು.

    ಹತ್ತಲೇ ಬೇಕೆಂದು ನಮ್ಮ ತೀರ್ಮಾನ. ಮೇಲೆ ಹತ್ತುವುದು ಕಷ್ಟವಾದರೂ ಕೆಳಗಿಳಿಯುವುದು ಇನ್ನೂ ಅಪಾಯವಾಗಿತ್ತು. ತುಂಬಾ ಇಳಿಜಾರು. ಬಂಡೆ ಮೇಲೆ ತೆವಳುತ್ತಾ ಮೇಲೇರಿದೆವು. ಆಗ ಸ್ವಲ್ಪ ಸಣ್ಣದಾಗಿ ಮಳೆ ಬಂತು. ಬಂಡೆ ಜಾರಲಿಕ್ಕೆ ಶುರುವಾಯಿತು. ನಾವಿನ್ನು ಬೆಟ್ಟದ ಕೆಳಗೆ ಬೀಳುತ್ತೇವೆಂದು ತಿಳಿದು ನಮ್ಮ ಕೊನೆ ಇವತ್ತೇ ಎಂದೆನಿಸಿತು. ಒಂದು ಕಡ್ಡಿ ಸಿಕ್ಕರೂ ಆಸರೆಗೆ ಹಿಡಿದುಕೊಳ್ಳಬೇಕೆಂಬ ಮನಸ್ಸು. ಹಾಗೇ ಬಂಡೆಮೇಲೆ ಮಲಗಿ ತೆವಳುತ್ತಾ ಮೆಲ್ಲಮೆಲ್ಲನೆ ಮೇಲೇರುತ್ತಾ ಹೋದೆವು. ನಮ್ಮಕಥೆ ಮುಗಿಯಿತು ಎಂದು ಹೆದರಿಕೆಯಾಯಿತು. ಏನೋ ಹುಚ್ಚು ಧೈರ್ಯ ಮಾಡಿದೆವು.  ಮರಣವೇ ಸಿದ್ಧ ಎಂದಮೇಲೆ ಹೆದರಿಕೆ ಏಕೆ? 

    ಆಗಲೇ ಕತ್ತಲಾಯಿತು. ಕೊನೆಗೆ  ಬಂದಾಗ ಸುಮಾರು 8-9 ಅಡಿಯ ಕಲ್ಲಿನ ಗೋಡೆಯ ಬುಡಕ್ಕೆ ಬಂದೆವು.ಒಬ್ಬರು ನಿಂತು ಇನ್ನೊಬ್ಬರು ಅವರ ಸಪೋರ್ಟ್ ಇಂದ ಕಲ್ಲಿನ ಸಂಧಿ ಹಿಡಿದುಕೊಂಡು ಮೂರು ಜನ ಮೇಲೆ ಹತ್ತಿದೆವು. ಬಂಡೆಯ ಆಚೆಕಡೆ ಧುಮಕಿ ಹತ್ತಿರವೇ ಇದ್ದ ಹೋಟೆಲ್ಗೆ ಹೋಗಿ ಹೇಳಿದೆವು.ಅವರಲ್ಲಿ ಕೆಲವರು ಲಾಟೀನು ಹಿಡಿದು  ಹಗ್ಗ ತಂದು ಉಳಿದ ಐವರನ್ನು ಮೇಲಕ್ಕೆ ಎಳೆದರು. 
    ಏನಾದರೂ ಹಾವುಗಳದ್ದರೆ ನಿಮ್ಮ ಗತಿ ಏನಾಗುತ್ತಿತ್ತು  ಅಂತ ಹೇಳಿ ನಮ್ಮ ಹುಚ್ಚು ಸಾಹಸಕ್ಕೆ ಚೆನ್ನಾಗಿ ಬೈದರು.ಆಮೇಲೆ ಅಲ್ಲೇ ಹೋಟೆಲಿನಲ್ಲಿ ಊಟ ಮಾಡಿದೆವು. ಒಂದು ರೂಪಾಯಿಗೆ ಫುಲ್ ಊಟ, ಅನ್ನ, ಸಾರು, ಪಲ್ಯ ಹಪ್ಪಳ ಮತ್ತು ಮಜ್ಜಿಗೆ. ನಂತರ ರಸ್ತೆಯ ಮೂಲಕ ಕೆಳಗೆ ಬಂದೆವು. ಕೆಳಗೆ ಇದ್ದ ಎಲ್ಲರಿಗೂ ಗಾಬರಿಯಾಗಿತ್ತು. ನಮ್ಮ ಲೆಕ್ಚರರ್ಸ್ ಬಾಯಿಗೆ ಬಂದ ಹಾಗೆ ಬೈದರು. ನಾವು ಸುಮ್ಮನೆ ಬೈಸಿಕೊಂಡು ನಿಂತಿದ್ದೆವು.

    ಮೊದಲು ಹತ್ತಿದ ಮೂವರಲ್ಲಿ ನಾನು , ಕೃಷ್ಣಪ್ಪ ಮತ್ತು ಮೂರನೇ ಹೆಸರು ಮರೆತುಹೋಗಿದೆ, ಬಹುಶಃ ಬಸವರಾಜು ಇರಬೇಕು. ಈ ಸುದ್ದಿಯನ್ನು ಕೇಳಿದವರೆಲ್ಲಾ ಇದುವರೆಗು ಯಾರೂ ಬಂಡೆಯ ಕಡೆಯಿಂದ ಮೇಲೇರಿದ್ದನ್ನು ಕೇಳೇಯಿಲ್ಲ ಎಂದರು. ಪಕ್ಕದಲ್ಲೇ ಟಿಪ್ಪು ಡ್ರಾಪ್ ಇತ್ತು. ಅನೇಕರು ನಂಬಲೇ ಇಲ್ಲ.

    ಬೆಟ್ಟ ಹತ್ತುವ ಟ್ರೈನಿಂಗ್ ಏನೂ ಇಲ್ಲದೇ, ಯಾವ ಸಲಕರಣೆಯೂ ಇಲ್ಲದೇ ನಾವು ಹತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ಮೈ ಝಂ ಎನಿಸುತ್ತದೆ. ಮರಣ ಗ್ಯಾರಂಟಿ ಎಂದು ತಿಳಿದುಕೊಂಡಮೇಲೆ ಒಂದು ಹುಚ್ಚು ಧೈರ್ಯ ಬರುತ್ತದೆ. 
    ಏಕೋ ನೆನೆಪು ಬಂತು, ಬರೆದು ಇಡಬೇಕೆಂದು ಮನಸ್ಸು ಮಾಡಿದೆ.

    Photo by Sebin Thomas on Unsplash

    ರಾಜ್ಯ ಸಭೆಗೆ ಖರ್ಗೆ ಆಯ್ಕೆಯೇ ಕಾಂಗ್ರೆಸ್ ಭಿನ್ನಮತಕ್ಕೆ ಕಾರಣವಾಯಿತೇ ?


    ಕಾಂಗ್ರೆಸ್ ಏನೇ ಸಮಜಾಯಿಸಿ ಕೊಟ್ಟುಕೊಳ್ಳಲಿ, ಆದರೆ ಪಕ್ಷದೊಳಗೆ ಭಿನ್ನಮತ ಉಲ್ಭಣಿಸಿರುವುದಂತೂ ಸತ್ಯ. ಕಾಂಗ್ರೆಸ್ ನ ಒಳಗೆ ಭಿನ್ನಮತ ಭುಗಿಲೇಳಲು ಕಾರಣಗಳಾದರೂ ಏನು ? ಕೇವಲ ನಾಯಕತ್ವ ಬದಲಾವಣೆಯ ಆಗ್ರಹವೇ ? ಅಥವಾ ಇನ್ನೇನಾದರೂ ಅಘೋಷಿತ ಅಂಶಗಳು ಇವೆಯೇ ? ಹೌದು, ಈ ಪ್ರಶ್ನೆ ಏಳಲು ಸಾಕಷ್ಟು ಕಾರಣಗಳಿವೆ.

    ರಾಜ್ಯಸಭೆ ಚುನಾವಣೆ

    ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆಗೆ ಸ್ಥಾನ ಕಲ್ಪಿಸಲಾಯಿತು. ಸ್ಥಳೀಯ ನಾಯಕರಿಗೂ ಗೊತ್ತಿಲ್ಲದ ರೀತಿಯಲ್ಲಿ ಏಕಾಏಕಿ ಖರ್ಗೆಯವರ ಅಭ್ಯರ್ಥಿತನವನ್ನು ಘೋಷಿಸಿ ಟಿಕೆಟ್ ನೀಡಲಾಯಿತು. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸೀಟು ಕಾಂಗ್ರೆಸ್ ಗೆ ದಕ್ಕಿತು. ಇನ್ನೊಂದು ನಮ್ಮವರೇ ಆದ ಮಾಜಿ ಪ್ರಧಾನಿ ದೇವೇಗೌಡರಿಗೆ ಲಭಿಸಿತು ಬಿಡಿ.

    ಆದರೆ 2014 ಮತ್ತು 2019ರ ನಡುವೆ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ (ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಇಲ್ಲದಿದ್ದರೂ) ಸಮರ್ಥವಾಗಿ ತನ್ನ ವಾಗ್ಝರಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯನ್ನು ತಬ್ಬಿಬ್ಬು ಮಾಡಿದವರು ಖರ್ಗೆ. ಆದರೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಹೀಗಾಗಿ ಲೋಕಸಭೆಯಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ನ್ನು ಪ್ರಬಲವಾಗಿ ಸಮರ್ಥಿಸಿಕೊಂಡು ಬಿಜೆಪಿಯ ವಾಕ್ಚಾತುರ್ಯದ ಯುದ್ಧದಲ್ಲಿ ಸಮದಂಡಿಯಾಗಿ ನಿಲ್ಲುವ ನಾಯಕರು ಇಲ್ಲ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಸದ್ಯದ ಮಟ್ಟಿಗಂತೂ ಇಲ್ಲ. ಮುಂದಿನ ಜೂನ್ ವೇಳೆಗೆ ಅದೇನಾದರೂ ಸಾಧನೆಯಾಗಬಹುದೇನೋ ?

    ಹೀಗಾಗಿ ರಾಜ್ಯಸಭೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಪ್ರತಿನಿಧಿಸುವ, ಪ್ರತಿತಂತ್ರ ರೂಪಿಸುವ, ಮಾತಿನ ಓಘದ ಮೂಲಕ ಬಿಜೆಪಿಯನ್ನು ಕಟ್ಟಿಹಾಕುವ ನಾಯಕರು ಬೇಕಾಗಿತ್ತು. ಇದಕ್ಕಾಗಿಯೇ ಏಕಾಏಕಿ ಖರ್ಗೆ ಅವರನ್ನು ಕಾಂಗ್ರೆಸ್ ರಾಜ್ಯಸಭೆಗೆ ಆಯ್ಕೆ ಮಾಡಿತು. ಇದಕ್ಕಾಗಿ ಸಿದ್ಧರಾಮಯ್ಯ ಸೇರಿದಂತೆ ಯಾವ ನಾಯಕರ ಮಾತನ್ನೂ ಆಲಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.

    ಆತಂಕದ ಕಿಡಿ

    ಖರ್ಗೆ ಆಯ್ಕೆಯಾಗುವ ಮೊದಲು ಗಾಂಧಿ ಕುಟುಂಬದ ನಿಷ್ಠಾವಂತ ರಾಜೀವ್ ಗೌಡ ಹೆಸರು ಕೇಳಿ ಬರುತ್ತಿತ್ತು. ಐಐಎಂನ ಮಾಜಿ ಪ್ರೊಫೆಸರ್ ಆಗಿದ್ದ ಗೌಡ, ರಾಹುಲ್ ಗಾಂಧಿಯವರಿಗೆ ತೀರಾ ನಿಕಟವರ್ತಿಯಾಗಿದ್ದರು. ಆದಾಗ್ಯೂ, ಖರ್ಗೆಯ ಅಭ್ಯರ್ಥಿತನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿತ್ತು. ಇದುವೇ ಕಾಂಗ್ರೆಸ್ ಒಳಗಿನ ನಾಯಕತ್ವ ಬದಲಾವಣೆಯ ಭಿನ್ನಮತಕ್ಕೆ ಮೂಲ ಕಾರಣವಾಯಿತೇ ?

    ಯಾಕೆಂದರೆ, ಖರ್ಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಿದ್ದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಒಂದು ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಯಾವಾಗ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೋ ಆಗ, ಸಹಜವಾಗಿಯೇ ಕಾಂಗ್ರೆಸ್ ರಾಜ್ಯಸಭೆಯಲ್ಲಾದರೂ ಸಮರ್ಥ ಪ್ರತಿಪಕ್ಷ ನಾಯಕನ ಹುಡುಕಾಟದಲ್ಲಿತ್ತು. ಆಗ ಸಿಕ್ಕಿದವರೇ ಖರ್ಗೆ.

    ಸಹಿ ಸಂಗ್ರಹ ಅಭಿಯಾನ

    ಮಲ್ಲಿಕಾರ್ಜುನ ಖರ್ಗೆಯವರು ಯಾವಾಗ ರಾಜ್ಯಸಭೆಗೆ ಆಯ್ಕೆಯಾದರೋ ಆಗ, ತಮ್ಮ ಪಟ್ಟ ಅಲುಗಾಡುತ್ತಿರುವ ವಾಸನೆಯನ್ನು ಗುಲಾಂ ನಬಿ ಆಜಾದ್ ಗ್ರಹಿಸಿದರು ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ, ನಾಯಕತ್ವದ ಬದಲಾವಣೆಯ ಆಗ್ರಹವನ್ನು ಮಾಡಿ ಪತ್ರ ಬರೆದವರ ಪೈಕಿ ಆಜಾದ್ ಅವರೇ ಮುಖ್ಯ ಭೂಮಿಕೆಯಲ್ಲಿದ್ದರು. ಉಳಿದವರು ಅವರನ್ನು ಅನುಸರಿಸಿದರು ಅಷ್ಟೇ. ಅದಕ್ಕಾಗಿಯೇ ರಾಹುಲ್ ಗಾಂಧಿ ಅವರು ಬಿಜೆಪಿಯ ಷಡ್ಯಂತ್ರದ ಅಂಗವಾಗಿ ಈ ಪತ್ರವನ್ನು ಬರೆಯಲಾಗಿದೆ ಮತ್ತು ಅದನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಲಾಗಿದೆ ಎಂದು ಪರೋಕ್ಷವಾಗಿ ಆಜಾದ್ ಮೇಲೆ ಕಿಡಿ ಕಾರಿದ್ದು.

    ಆಜಾದ್ ಆತಂಕ

    ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆ ಸದಸ್ಯತ್ವ ಮುಂದಿನ ವರ್ಷದ ಫೆಬ್ರವರಿಗೆ ಅಂತ್ಯವಾಗುತ್ತದೆ. ಆ ಬಳಿಕ ಮುಂದೇನು ? ಸದ್ಯ, ನಾಮ್ ಕೇ ವಾಸ್ತೆ ಅಧಿವೇಶನ ನಡೆಯಬಹುದಷ್ಟೇ. ಆದರೆ ಮುಂದಿನ ದಿನಗಳಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಆ ಸಂದರ್ಭದಲ್ಲೇ ಆಜಾದ್ ಅವರ ಸದಸ್ಯತ್ವ ಅವಧಿ ಕೊನೆಗೊಳ್ಳುತ್ತದೆ. ಆಗ ಸಹಜವಾಗಿಯೇ ಖರ್ಗೆ, ಪ್ರತಿಪಕ್ಷದ ನಾಯಕನಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಅದೇ ರೀತಿ ಮತ್ತೊಂದು ಅವಧಿಗೆ ಆಜಾದ್ ಗೆ ಅವಕಾಶ ಸಿಗುತ್ತದೆಯೋ ಎಂಬುದು ಸ್ಪಷ್ಟವಿಲ್ಲ.

    ಹೀಗಾಗಿಯೇ ಅಧಿಕಾರವಿಲ್ಲದಿದ್ದರೆ ಹಪಹಪಿಗೆ ಬೀಳುವ ಹಳೆಯ ಹುಲಿಗಳು ಮತ್ತೆ ಕಣಕ್ಕಿಳಿದಿದ್ದಾರೆ ಎಂದೇ ವಿಶ್ಲೇಷಿಸಬೇಕಾಗುತ್ತದೆ.
    ಸೋನಿಯಾ ಗಾಂಧಿ ಅವರು ಈ ತಿಂಗಳ ಆರಂಭದಲ್ಲಿ ಪಕ್ಷದ ರಾಜ್ಯಸಭಾ ಸದಸ್ಯರ ಸಭೆ ನಡೆಸಿದ್ದರು. ಬಳಿಕ ಮುಖ್ಯವಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಯುವ 24 ಗಂಟೆಗಳ ಮೊದಲು ಸಹಿ ಸಂಗ್ರಹ ಅಭಿಯಾನದ ಪತ್ರಗಳು ಸೋರಿಕೆಯಾಗಿದವು !

    ಇಲ್ಲಿ ಮತ್ತೊಂದು ವಿಷಯವನ್ನು ಉಲ್ಲೇಖಿಸಲೇಬೇಕು. ದಕ್ಷಿಣ ಭಾರತ (ಮಹಾರಾಷ್ಟ್ರ ಬಿಟ್ಟು) ಕಾಂಗ್ರೆಸ್ ನಲ್ಲಿ ಉನ್ನತ ಸ್ಥಾನ ಪಡೆದವರೇ ಕಡಿಮೆ ಅಥವಾ ಇಲ್ಲವೆಂದೇ ಹೇಳಬಹುದು. ಉತ್ತರ ಭಾರತದ ಲಾಬಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆಯಾ ?

    error: Content is protected !!