25.5 C
Karnataka
Tuesday, April 22, 2025
    Home Blog Page 159

    ರಾಜಕೀಯ ಲಾಭಕ್ಕೆ ಜ್ಞಾನವನ್ನು ಒತ್ತೆ ಇಡುವುದು ಎಷ್ಟು ಸರಿ?

    ಅದು 80ರ ದಶಕದ ಮಧ್ಯದ ಭಾರತ. ಇಂದಿರಾಗಾಂಧಿಯ ಹತ್ಯೆಯೊಂದಿಗೆ ಒಂದು ರಾಜಕೀಯ ಪರ್ವವೇ ಮುಗಿದಿದ್ದಂಥಕಾಲ.ಅಲ್ಲಿಗೆ ವಿದೇಶಗಳಲ್ಲಿ ಓದಿ ಬಂದವರಿಗೆ ಫಾರಿನ್ ರಿಟರ್ನ್ಡ್ಅನ್ನುವ ಗೌರವ ಕಡಿಮೆ ಆಗಿದ್ದಂತಹ ಕಾಲ. ಹೋದವರು ಬಾರದೇ ಅಲ್ಲೇ ನೆಲೆಸುತ್ತಿದ್ದುದರಿಂದ, Brain Drain ಎನ್ನುವ ವಿಷಯ ಮುಂದಲೆಗೆ ಬಂದು ಅನೇಕ ಆಯಾಮಗಳಲ್ಲಿ ಚರ್ಚೆ ಆಗುತ್ತಿದ್ದ ಕಾಲ ಘಟ್ಟ.

    ನಾನು ಓದಿದ್ದಂತಹ ತಾಂತ್ರಿಕ ಕಾಲೇಜುಗಳಲ್ಲಿ ಇಂತಹ ಚರ್ಚೆಗೆ ಆಯಾಮಗಳು ಏನೇ ಇದ್ದರೂ ಭಾರತದಲ್ಲಿ ತಾಂತ್ರಿಕ ವಿಷಯಗಳ ಅವಿಷ್ಕರಣೆಗೆ ಬೇಕಾದ ವಾತಾವರಣ,ಲಭ್ಯತೆ ಎರಡೂ ಇಲ್ಲ. ಹಾಗಾಗಿ ವಿದೇಶವೇ ನಮ್ಮ ಮೊದಲ ಆಯ್ಕೆ ಎಂಬಂಥ ಸ್ನೇಹಿತರ ಮಧ್ಯೆ ಇದ್ದ ನನಗೆ ಹಲವಾರು ಬಾರಿ ಆಶ್ಚರ್ಯ ಆಗುತ್ತಿತ್ತು. ಹಾಗೆ ನೋಡಿದರೆ ಅವರ ಅಭಿಪ್ರಾಯವೂ ಸರಿಯೇ,ಆದರೆ ಸರ್ಕಾರ ನಮ್ಮಂಥ ಆಯ್ದ ಮೆದುಳಿಗಳಿಗೆ ಉಚಿತವಾಗಿ ಅಂದಿನ ದಿನಗಳಲ್ಲಿ ಉತ್ಕೃಷ್ಟ ಎನ್ನಬಹುದಾದಂತಹ ಶಿಕ್ಷಣವನ್ನು ಉಚಿತವಾಗಿ, ಸಾರ್ವಜನಿಕರ ತೆರಿಗೆ ಹಣದಿಂದ ಕೊಡುತ್ತಿದ್ದು,ಅಂತಹ ಶಿಕ್ಷಣ ಪಡೆದ ನಾವು ಏನೋ ಕಾರಣ ಹೇಳಿ ಪುರ್ ಅಂತ ವಿದೇಶಕ್ಕೆ ಹಾರುವುದು ಯಾಕೋ ನನ್ನ ಮನಸ್ಸಿಗೆ ಒಗ್ಗದ ವಿಷಯವಾಗಿತ್ತು.

    ಹೀಗೆಯೇ ಸರ್ ಸಿ ವಿ ರಾಮನ್, ಜೇಮ್ಸಶೇಡ್ಜಿ ಟಾಟಾ, ವಿಶ್ವೇಶ್ವರಯ್ಯ,ಅಣು ವಿಜ್ಞಾನಿ ಬಾಬಾ ಮುಂತಾದವರು ಯೋಚಿಸಿ,ವಿದೇಶಕ್ಕೆ ಹೋಗಿದ್ದರೆ ಗತಿ ಏನಾಗ್ತಿತ್ತು ಎನ್ನುವುದು ನನ್ನ ಪ್ರಶ್ನೆಯಾಗಿರುತ್ತಿತ್ತು. ಬುದ್ಧಿವಂತರು ಅಂತ ಸಮಾಜದಲ್ಲಿ ಗುರುತಿಸಿಕೊಂಡವರು ಸ್ವಾರ್ಥಿಗಳಾದರೆ ಸಮಾಜಕ್ಕೆ ತೊಂದರೆ ಆಗುತ್ತೇನೋ ಎನ್ನುವಂತಹ ಸ್ಪಷ್ಟತೆ ಇಲ್ಲದ ಯೋಚನೆಗಳು ಆಗ ನನ್ನನ್ನು ಇಲ್ಲಿಯೇ ಇರಬೇಕಾದ್ದು ನಮ್ಮ ನೈತಿಕ ಕರ್ತವ್ಯದ ಜವಾಬ್ದಾರಿ ಅಂತ ಹೇಳುತ್ತಿದ್ದವು. ನಾವು ಅಲ್ಲಿ ಗಳಿಸುವ ಹಣ ಭಾರತಕ್ಕೆ ಯಾವುದೋ ರೂಪದಲ್ಲಿ ಬರುತ್ತದೆ,ಹಾಗಾಗಿ ಭಾರತದ ಅರ್ಥ ವ್ಯವಸ್ಥೆಗೆ ನಮ್ಮಿಂದ ಸಹಾಯ ಆಗುತ್ತೆ ಅಂತ ಹೇಳುವ ಒಂದು ವಾದ ನನಗೆ ಸಮಂಜಸ ಅನ್ನಿಸುತ್ತಿರಲಿಲ್ಲ. ಆರ್ಥಿಕತೆ ಯ ಸಮಜಾಯಿಷಿ ಎಲ್ಲ ವಿಷಯಗಳಲ್ಲಿ ಸಮರ್ಪಕವಾದ ಉತ್ತರ ಅಲ್ಲ ಅಂತ ಇಂದಿಗೂ ನನ್ನ ಅಭಿಪ್ರಾಯ, ಅದು ಮನೆಯಾಗಲೀ,ದೇಶವಾಗಲಿ.

    ಈ ಮಧ್ಯೆ ಕಂಪ್ಯೂಟರ್ ಪ್ರವೇಶ ಆಗುತ್ತದೆ. ಇಂದಿರಾ ನಂತರ ಬಂದ ರಾಜೀವರು ಈ ಎಲೆಕ್ಟ್ರಾನಿಕ್ ಭೂಮಿಕೆಗೆ ಹೆಚ್ಚು ಒತ್ತು ಕೊಟ್ಟು 21ನೇ  ಶತಮಾನದ ಭಾರತವನ್ನು ಬೇರೆಯದೇ ಆಯಾಮಕ್ಕೆ ಕೊಂಡೊಯ್ಯುತ್ತೇನೆ ಅಂತಿದ್ದರು. ಆಗಾಗ ಔಪಚಾರಿಕವಾಗಿ ಇದರ ವಿಷಯವನ್ನು ನಮ್ಮ ಪ್ರೊಫೆಸರ್ಗ ಗಳು ತರಗತಿಗಳಲ್ಲಿ ಹೇಳುತ್ತಿದ್ದರೂ,ಇದರ ಆಳ,ಅಗಲ ಪರಿಚಯ ಇರಲಿಲ್ಲ. ಆಗಲೇ ನಮ್ಮ ಕೈಗಳಲ್ಲಿ ಇದ್ದ ಎಂಜಿನಿಯರಿಂಗ್ ಕ್ಯಾಲುಕಲೇಟರ್ ಕಡೆ ನೋಡ್ತಾ, ಇದರ ಮುಂದುವರೆದ,ಇದಕ್ಕಿಂತಲೂ ಹೆಚ್ಚಿನ ಕೆಲಸ ಮಾಡುವ ಒಂದು ಸಾಧನ ಅಂತ ತಿಳಿಸಲಾಗುತ್ತಿತ್ತು. ಜೊತೆಗೆ ಅದರದ್ದೇ ಆದ ಭಾಷೆ ಕಲಿಯಬೇಕು,ಅದನ್ನು ಬಳಸಿಕೊಳ್ಳಲು ಅಂತ Basic, Fortron ಎನ್ನುವಂತಹ ಭಾಷೆಗಳನ್ನು ಕಲಿಸುತ್ತಿದ್ದರು.

    ಈ ಮಧ್ಯೆ ಎಡ ಪಂಥೀಯರ ಬ್ಯಾಂಕ್ ನೌಕರರ ಸಂಘಗಳು ನಮಗೆ ಕಂಪ್ಯೂಟರ್ ಬೇಡವೇ ಬೇಡ ಎನ್ನುವ ಬೇಡಿಕೆಯೊಂದಿಗೆ ಧರಣಿ ಮಾಡುತ್ತಿದ್ದರು! ಜಪಾನ್ ನಲ್ಲಿ ಜನಸಂಖ್ಯೆ ಕಡಿಮೆ,ಕೆಲಸ ಜಾಸ್ತಿ ಹಾಗಾಗಿ ಅಲ್ಲಿ ಅವುಗಳ ಆವಶ್ಯಕತೆ ಇದೆ. ಭಾರತದಲ್ಲಿ ಜನಸಂಖ್ಯೆ ತುಂಬಾ ಇದೆ,ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕೆ ಹೊರತು,ಕಸಿಯುವ ಕಂಪ್ಯೂಟರ್ ಬೇಡ ಅನ್ನುವುದು ಅವರ ವಾದ. ಯಾರೋ ಹೇಳಿದ್ದರಂತೆ ಒಂದು ಕಂಪ್ಯೂಟರ್ 100 ಉದ್ಯೋಗಿಗಳ ಕೆಲಸ ಮಾಡುತ್ತೆ ಬ್ಯಾಂಕ್ ನಲ್ಲಿ ಅಂತ.

    ನನ್ನ ಪ್ರೆಶ್ನೆ ಏನು ಅಂದ್ರೆ, ಅದರ ಆಳ,ಅಗಲಗಳು ಇನ್ನೂ ಸರಿಯಾಗಿ ತಿಳಿಯದೇ ಇದ್ದ ವೇಳೆಯಲ್ಲಿ ಇಂಥ ಜನರನ್ನು ತುಂಬಾ ವೇಗವಾಗಿ, ಸಮರ್ಥವಾಗಿ ತಲುಪಬಲ್ಲ ವಾದಗಳಿಗೆ ಯಾರು,ಏಕೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತಾರೆ ಎಂಬುದು! ಇಂತಹ ಬದ್ಧತೆ ಇಲ್ಲದ ಬುದ್ಧಿಜೀವಿಗಳಿಗೆ ನಮ್ಮಲ್ಲಿ ಕಡಿಮೆ ಇಲ್ಲ. ಇವರ ಬಾಲಿಶ ವಾದಕ್ಕೆ ಬೆಲೆ ಇಲ್ಲ ಎನ್ನುವುದು ಗೊತ್ತಾಗಲು ಸಮಯಬೇಕು.ಅಷ್ಟರಲ್ಲಾಗಲೇ ಇವರು ಮತ್ತೊಂದಕ್ಕೆ ರೆಕ್ಕೆ,ಪುಕ್ಕ ಕಟ್ಟುವ ಕೆಲಸದಲ್ಲಿ ಭಾಗಿಯಾಗಿರುತ್ತಾರೆ. ಇವರಿಗೆ ಸಾಮಾಜಿಕ ಬದ್ಧತೆ ಇರುವುದೇ ಇಲ್ಲ.ನೀವು ಹೇಳಿದ್ದು ತಪ್ಪು ಅಂತ ಯಾರೂ ಛಿ ಮಾರಿ ಹಾಕಲ್ಲ,ಇವರು ಇದನ್ನೇ ವೃತ್ತಿ ಮಾಡಿಕೊಂಡು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಾರೆ.

    ಇಂದು ಕಂಪ್ಯೂಟರ್ ಇಲ್ಲದ ಜೀವನವನ್ನು ಊಹಿಸಲು ಸಾಧ್ಯವೇ?! ತುಂಬಾ ಸಮಂಜಸ ಅಂತ ಆಗ ಕಾಣುತ್ತಿದ್ದ ಇವರ ವಾದಕ್ಕೆ ಮನ್ನಣೆ ನೀಡುವ ಸರ್ಕಾರಗಳು ಇದ್ದಿದ್ದರೆ,ಎಂತಹ ದುರಂತ ಆಗ್ತಿತ್ತು?!

    ಇದು ಉದಾಹರಣೆ ಅಷ್ಟೇ. ಆಗ ಇಂತಹುದೆ ಮತ್ತೊಂದು ರಾಷ್ಟವ್ಯಾಪ್ತಿ ಚರ್ಚೆ ಆಗ್ತಿದ್ದ ವಿಷಯ ಇಂದು ಸರ್ದಾರ್ ವಲ್ಲಭಬಾಯಿ ಆಣೆಕಟ್ಟು ಅಂತ ಅನ್ನಿಸಿಕೊಂಡಿರುವ ಗುಜರಾತಿನ ನರ್ಮದಾ ಕಣಿವೆಯ ಪ್ರಾಜೆಕ್ಟ್. ನೆನಪಿರಬಹುದು ಮೇಧಾ ಪಾಟ್ಕರ್ ಎನ್ನುವಂತಹ ಪರಿಸರ ತಜ್ಞೆಯ ನೇತೃತ್ವದಲ್ಲಿ ಮಾನವ ಹಕ್ಕುಗಳ ಹೋರಾಟದವರು ಅಲ್ಲಿನ ನಿವಾಸಿಗಳೊಂದಿಗೆ ಸೇರಿ ದಶಕಗಳ ಕಾಲ ಇನ್ನಿಲ್ಲದಂತೆ ವಿರೋಧಿಸುತ್ತಾರೆ. ಇಂದು ಈ ಅಣೆಕಟ್ಟು 4 ಕೋಟಿ ಜನರ ನೀರಿನ ಸಮಸ್ಯೆ ಮತ್ತು 20 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸುತ್ತಿದೆ ಅಲ್ಲದೆ ನರ್ಮದೆಯ ಪ್ರವಾಹವನ್ನು ನಿಯಂತ್ರಿಸಿದೆ.
    ನಿಮಗೆ ಭಾರತದ ಯಾವುದೇ ಜನೋಪಕಾರಿ ಯೋಜನೆ ತೆಗೆದುಕೊಂಡು ಅದರ ಇತಿಹಾಸ ತಿರುವಿ ನೋಡಿದರೆ ಇಂತಹ ಅವೈಜ್ಞಾನಿಕ,ಅರೆತಿಳಿವಳಿಕೆಯ ವಿರೋಧವನ್ನು ಒಂದು ಗುಂಪು ಬಹಳ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿ ಕಾಣುತ್ತದೆ.

    ಅದರ ರಾಜಕೀಯ ಕಾರಣ ಏನೇ ಇರಲಿ,ಇಲ್ಲಿ ತಂತ್ರಜ್ಞಾನ ಹೊಂದಿದ ಯಾವನೋ ಒಬ್ಬ ಬುದ್ಧಿಜೀವಿ ಇಂಥವರಿಗೆ ಗುರು ಆಗಿರಲೇ ಬೇಕಲ್ಲ,ಅಲ್ಲಿ ನನ್ನ ವಿಚಾರ ಲಹರಿ ನಿಲ್ಲುತ್ತದೆ. ಅದು ಪರಿಸರ ತಜ್ಞ, ಎಂಜಿನಿಯರ್, ಅರಣ್ಯ ತಜ್ಞ ಹೀಗೆ ಬೇರೆ ಬೇರೆ ತಜ್ಞರೂ ಒಳಗೊಂಡಿರಬಹುದು. ನಷ್ಟ ಇಲ್ಲದ ಯಾವ ವ್ಯವಹಾರವೂ ಇಲ್ಲ. ಹಾಗಂತ ಬರೀ ನಷ್ಟದ ಲೆಕ್ಕಾಚಾರ ಹಾಕುತ್ತಾ ,ಲಾಭವನ್ನು ಬೇಕಾಗಿ ಮುಚ್ಚಿಟ್ಟು,ಯಾವುದೋ ಸಂಸ್ಥೆಗಳಿಗೆ,ರಾಜಕೀಯ ಲಾಭಕ್ಕೆ ಇಂತಹ ತಜ್ಞರು ತಮ್ಮ ಜ್ಞಾನವನ್ನು ಒತ್ತೆ ಇಡುವುದು ಎಷ್ಟು ಸರಿ? ಇವರಿಗೆ ಎಲ್ಲರಿಗಿಂತಲೂ ಹೆಚ್ಚಿನ ನೈತಿಕತೆ ಇರಬೇಕಾದ್ದು ಅವಶ್ಯಕ ಹಾಗೂ ಅದನ್ನು ಸಮಾಜ ಬಯಸುವುದು,ಸಮಾಜದ ಹಕ್ಕಲ್ಲವೇ?

    ಅರ್ಧ ದಶಕದಿಂದ ಇಂತಹುದೇ ನರಳಿಕೆಯಲ್ಲಿರುವ  ಭಾರತದ ಒಂದು ಪ್ರಮುಖವಾದ ಯೋಜನೆ ಅಂದರೆ,ಅದು ನದಿ ಜೋಡಣೆ. ಇದರ ಮೂಲ ಉದ್ದೇಶ ಉತ್ತರದ ಬಿಹಾರದ ಕೋಸಿ,ಅಸ್ಸಾಮ್ ನ ಬ್ರಹ್ಮಪುತ್ರ ನದಿಗಳ ಪ್ರವಾಹದ ನೀರನ್ನು ದಕ್ಷಿಣದ ನದಿಗಳಿಗೆ ಹರಿಸಿ, ದಕ್ಷಿಣ ನದಿಗಳ ನೀರಿನ ಕೊರತೆಯನ್ನು ನೀಗಿಸಿ, ಉತ್ತರ ಭಾರತದ ನದಿಗಳ ಪ್ರವಾಹ ನೀರನ್ನು ನಿಯಂತ್ರಿಸುವುದಲ್ಲದೆ ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಭಾರತದ ನೀರಿನ ಕೊರತೆಯಿಂದ ಬಳಲುತ್ತಿರುವ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುವುದು.

    ವರ್ಷ ಇಡೀ ಭಾರತದ ನದಿಗಳು ನೀರಿನಿಂದ ತುಂಬಿ,ಭಾರತದ ಬಂಜರು ಭೂಮಿ ಫಲವತ್ತತೆಯನ್ನು ಹೊಂದಿ,ಅರ್ಧ ಪ್ರಪಂಚಕ್ಕೆ ಅಡುಗೆ ಮನೆಯನ್ನಾಗಿ ಭಾರತವನ್ನು ಪರಿವರ್ತಿಸುವುದು. ಊಹಿಸಿಕೊಂಡರೇ ಪುಳಕವಾಗುತ್ತೆ ಅಲ್ವಾ?

    19ನೇ ಶತಮಾನದ ಅಂತ್ಯದಿಂದಲೇ ಬ್ರಿಟಿಷರಿಂದ ರೂಪಿತಗೊಂಡ ಈ ಯೋಜನೆ ನಮ್ಮಲ್ಲಿ ಇನ್ನೂ ಸಾಕಾರಗೊಂಡಿಲ್ಲ. ಇದಕ್ಕೆ ಆರ್ಥಿಕ ಸಮಸ್ಯೆ ಇಲ್ಲ. ಇರುವುದು ತಜ್ಞರ ತಲೆ,ಬುಡ ಗಳು ಇಲ್ಲದ ಅಭಿಪ್ರಾಯಗಳಲ್ಲಿ. ಈ ಯೋಜನೆ ಜಾರಿಯಾದರೆ,ಯಾವೊಬ್ಬ ಭಾರತೀಯ ಯಾವುದೇ ರಾಜಕಾರಣಿಯ ಹಿಂದೆ ಬಹುಪರಾಕ್ ಹಾಕ್ತಾ ಸುತ್ತಾಡಲ್ಲ,ಅಷ್ಟೊಂದು ಸ್ವಾವಲಂಬಿಯಾಗಿ ಅನ್ನ ದಾತನಾಗುತ್ತಾನೆ. ನಿರ್ಲಕ್ಷಿಸಿರುವ ವ್ಯವಸಾಯದತ್ತ ಯುವಕರು ಬನ್ನಿ ಅಂತ ಕರೆಯುವ ಅವಶ್ಯಕತೆಯೇ ಇಲ್ಲ. ಆತ್ಮ ನಿರ್ಭರ ಭಾರತ ಪ್ರತಿಪಾದನೆಯ ಅದ್ಭುತ ಯೋಜನೆ ಇದು.

    ಇದಕ್ಕಿರುವ ವಿಘ್ನಗಳ ಪಟ್ಟಿಯೇ ತಲೆ ಕೆಡಿಸುತ್ತದೆ. ಅದರಲ್ಲಿಯ ಕೆಲವು ಅಂಶಗಳು,ಸಾಮಾನ್ಯರಿಗೆ ಅರ್ಥ ಆಗುವುವುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಉತ್ತರ ನದಿಗಳ ಹಿಮಾಲಯದ ಹಿಮದಿಂದ ಕೂಡಿದ ನೀರು,ದಕ್ಷಿಣದ ಮಳೆಯಾಧಾರಿತ  ನದಿಗಳ ಜೊತೆ ಬೆರೆತರೆ ಜಲಚರ ಪ್ರಾಣಿಗಳ ಮೇಲೆ ಭಯಂಕರ ಪರಿಣಾಮ ಉಂಟಾಗಿ ಜೈವಿಕ ಸರಪಣಿ ಮೇಲೆ ಪರಿಣಾಮ ಬಿರುತ್ತೆ ಅನ್ನುವ ಅಂಶ ನೋಡಿ. ಇದರಲ್ಲಿ ಯಾವ ತಜ್ಞತೆ ಇಲ್ಲದ ನನಗೆ ಇದು ಯಾಕೋ ಹೆಚ್ಚಿದ ತಜ್ಞತೆಯನ್ನು ಒಳಗೊಂಡಿದೆಯೇನೂ ಅಂತ ಅನುಮಾನ.

    ನಮ್ಮ ಪೂರ್ವಜರು ಉತ್ತರ,ದಕ್ಷಿಣದುದ್ದಕ್ಕೂ ಸಂಚರಿಸಿ ಕಂಡುಕೊಂಡ ಸತ್ಯವನ್ನು ಇಲ್ಲಿ ಹೇಳ್ತೇನೆ ಕೇಳಿ. ನಮ್ಮಲ್ಲಿ ಗಂಗೆ ಪೂಜೆ ಅಂತ ಒಂದು ಪದ್ದತಿ ಇದೆ. ಅದನ್ನು ಮಾಡುವಾಗ ಮಾಡಿಸುವವ ಉತ್ತರ ಭಾರತದ ನದಿಗಳಾದ ಗಂಗೇ ಯಮುನೆ, ದಕ್ಷಿಣ ನದಿಗಳಾದ ಕಾವೇರಿ,ಗೋದಾವರಿಯರ ಜೊತೆ ಸೇರಿಸಿ, ಎಲ್ಲವೂ ಈ ಬಿಂದಿಗೆಯಲ್ಲಿವೆ ಅಂತ ಹೇಳುವ ಮಂತ್ರ ಗಮನಿಸಿದರೆ,ನನಗೆ ಈ ತಜ್ಞರ ಅನಿಸಿಕೆಯಲ್ಲಿ ಹುಳಿ ಕಾಣುತ್ತದೆ. ಕಾಡಿನ ಬೇರು,ಸೊಪ್ಪು,ಕಟ್ಟಿಗೆ ಬಗ್ಗೆ ಸಾವಿರಾರು ಪುಟಗಳ ಜ್ಞಾನವನ್ನು ತಿಳಿಸಿರುವ ನಮ್ಮ ಗ್ರಂಥಗಳು,ಹಾಗೇನಾದ್ರು ಇವರು ಹೇಳಿದ ಹಾಗೆ ನದಿಗಳ ನೀರಿನ ವ್ಯತ್ಯಾಸ ಇದ್ದದ್ದೇ ಆಗಿದ್ದರೆ,ನಮೂದಿಸದೆ ಇರ್ತಿದ್ದರಾ? ಇವರನ್ನು ಓದಿಸಿ,ತಜ್ಞರನ್ನಾಗಿ ಮಾಡಿದ್ದೇ ತಪ್ಪಾಯ್ತೆನೋ ಅನ್ನುವಷ್ಟು ಭಯಂಕರವಾಗಿ ಹೇಳಿಬಿಡ್ತಾರೆ. ಈ ವರದಿ ತಯಾರಿಸುವ ತಜ್ಞರು ಇದ್ದಾರಲ್ಲ ನಮ್ಮ ದೇಶದಲ್ಲಿ ಇವರನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ! ನೀನು ಖಾಸಗಿಯವನು,ಸರ್ಕಾರದಿಂದ ವರದಿ ನೀಡುವ ಪ್ರಮಾಣಪತ್ರ ನಿನಗಿಲ್ಲ ಎನ್ನುವ ಬಾಲಿಶ ಕಾರಣಗಳು ಇನ್ನೂ ಇವೆ ಇಲ್ಲಿ.

    ಅದಕ್ಕೇ ಏನೋ ಇಂದು ಭಯಂಕರ ಮಳೆ ಬರುತ್ತೆ ಅಂತ ಅವರು ಹೇಳಿದ್ರೆ,ಒಂದು ಹನಿಯೂ ಮಳೆ ಬರಲ್ಲ!ಸ್ವತಂತ್ರ ಭಾರತದ ಮೊದಲ ಡ್ಯಾಮ್ ಆದ ಭಕ್ರಾನಂಗಲ್ ನಿಂದ ಹಿಡಿದು, ಮೊನ್ನೆಯ ಕೊಂಕಣ ರೈಲ್ವೇ ಯೋಜನೆಯ ತನಕ ಈ ಪರಿಸರ ತಜ್ಞರ ನಿರಾಕರಣೆಯೊಂದಿಗೇ ಜಾರಿ ಆಗಿರುವುದು. ಅವರ ಅಭಿಪ್ರಾಯ ಪೂರ್ತಿ ತಪ್ಪು ಅಂತ ಹೇಳಲು ಆಗಲ್ಲ,ಆದರೆ ಸಾಧಕ,ಬಾಧಕಗಳನ್ನು ತುಲನೆ ಮಾಡಿ ವರದಿ ತಯಾರಿಸಬೇಕು. 80 ರ ದಶಕದ ಒಡೆದ ಓಜೋನ್ ಪದರು ಈಗ ಸರಿಯಾಗಿದೆಯಂತೆ! ಅಂದ್ರೆ ಆಗಿಗಿಂತ ಈಗ ಪರಿಸರದ ಮೇಲೆ ಹಾನಿ ಕಡಿಮೆ ಆದ ಹಾಗೆ ಆಯ್ತಲ್ಲ? ಆಗಿದೆಯಾ?

    ರಾಜಕೀಯವಾಗಿ,ಅಥವಾ ಬೇರೆ ಕಾರಣಗಳಿಗೆ ತಜ್ಞರ ವರದಿಗಳು ಬಳಕೆ ಆಗುವತ್ತ ಗಮನ ಹರಿಸಿ, ವಿಷಯದ ಜ್ಞಾನಕ್ಕೆ ಅಗೌರವ ತರುವುದನ್ನು ನಿಲ್ಲಿಸಬೇಕು. ಇದರ ಮೊದಲ ಹೆಜ್ಜೆ ತಜ್ಞರಿಂದಲೇ ಆಗಬೇಕು. ಇಲ್ಲವಾದರೆ,ವಿದೇಶಕ್ಕೆ ಹೋದ ತಜ್ಞರೇ ನಮ್ಮ ದೇಶಕ್ಕೆ ಹೆಚ್ಚು ಉಪಕಾರ ಮಾಡಿದ್ದಾರೆ ಅಂತ ಮುಂದಿನ ಪೀಳಿಗೆ ನಮ್ಮನ್ನು ಹಾಸ್ಯ ಮಾಡಬಹುದು.

    ಮಾನ್ಯತೆ ಪಡೆದ ಕಾನೂನು ತಜ್ಞರ ಅಭಿಪ್ರಾಯಗಳೇ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಇವು ಬೇಗ ಸಮಾಜದ ಕಣ್ಣಿಗೆ ಕಾಣುತ್ತವೆ. ಆದರೆ ಕೆಲವು ತಜ್ಞರ ಅಭಿಪ್ರಾಯಗಳು ಯಾರ ಗಮನಕ್ಕೂ ಬಾರದೆ ಬೀರುವ ಪರಿಣಾಮ ತುಂಬಾ ಇರುತ್ತದೆ. ಅಂತಹವರು ಅವರ ಆತ್ಮಸಾಕ್ಷಿಯನ್ನು ಎದುರಿಗಿಟ್ಟುಕೊಂಡು ಕೆಲಸಮಾಡಿ, ತಮ್ಮ ಉನ್ನತಿಗೆ ಕಾರಣವಾದ ಈ ಅಮಾಯಕ ಸಮಾಜಕ್ಕೆ ಋಣ ತೀರಿಸುವ ಕೆಲಸ ಮಾಡಬೇಕು.

    Photo by Chinta Pavan Kumar on Unsplash

    ಹಾರುತಾ ದೂರ ದೂರ ..ಮೇಲೇರುವ ಬಾರಾ ಬಾರಾ

    ಎನ್.ಶೈಲಜಾ ಹಾಸನ

    ಶಾಂತಿಗ್ರಾಮದ  ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಶೈಲಜಾ ಅವರ ಅನೇಕ ಕಾದಂಬರಿಗಳು ನಾಡಿಲ ಪ್ರಮುಖ ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.

    ಚಿಕ್ಕ ವಯಸ್ಸಿನಲ್ಲಿ ವಿಮಾನ ಹಾರುವ ಶಬ್ದ ಕೇಳಿಸಿದಾಕ್ಷಣ ಏನೇ  ಕೆಲಸ ಮಾಡುತ್ತಿದ್ದರೂ ಹೊರಗೆ ಓಡಿ ಬಂದು ಬಿಡುತ್ತಿದ್ದೆವು.ಊಟ ಮಾಡುತ್ತಿರಲಿ ,ಓದುತ್ತಿರಲಿ ,ಬರೆಯುತ್ತಿರಲಿ ಮಲಗಿರಲಿ, ಕೆಲಸ ಮಾಡುತ್ತಿರಲಿ ,ಸ್ನಾನ ಮಾಡುತ್ತಿರಲಿ ,ಕೊನೆಗೆ ಶೌಚ ಗೃಹದಲ್ಲಿ ಇರಲಿ ಅರ್ಧಕ್ಕೆ ನಿಲ್ಲಿಸಿ  ಓಡೋಡಿ ಬಂದು ತಲೆ ಎತ್ತಿ  ಆಕಾಶದಲ್ಲಿ ಚುಕ್ಕೆಯಂತೆ ಕಾಣುತ್ತಿದ್ದ ವಿಮಾನವನ್ನು ಅದು ಮರೆಯಾಗುವ ತನಕ ಪುಳಕದಿಂದ ನೋಡುತ್ತಿದ್ದೆವು. ಅಷ್ಟು ಪುಟಾಣಿ ವಿಮಾನದಲ್ಲಿ ಜನ ಹೇಗೆ ಕೂರುತ್ತಾರೆ ,ಅದನ್ನು ಹೇಗೆ ಹಾರಿಸುತ್ತಾರೆ ಎನುವ ಸಂದೇಹ  ಸದಾ ನನ್ನನ್ನು ಆ ವಯಸ್ಸಿನಲ್ಲಿ ಕಾಡುತ್ತಿದ್ದವು. ಆ ಸಂದೇಹ ಸ್ವಲ್ಪ ದೊಡ್ಡವರಾದ ಮೇಲೆ ನಿವಾರಣೆ ಆಯಿತು.

    ಸಿನಿಮಾಗಳನ್ನು ನೋಡುವಾಗ ವಿಮಾನ ಬಸ್ ಗಿಂತ ದೊಡ್ಡದು .ಆಕಾಶದ ಮೇಲೆ ಮೇಲೆ ಹೋದಾಗ ನಮಗೆ ಚುಕ್ಕೆಯಂತೆ ಕಾಣಿಸುತ್ತದೆ ಅಂತ ಗೊತ್ತಾಯಿತು.  ಆದರೆ  ಹೈಸ್ಕೂಲಿಗೆ ಬರುವ ತನಕ ಈ ವಿಮಾನ ಅದು ಹೇಗೆ ಮೇಲೆ ಹಾರುತ್ತದೆ,ಅದು ಹೇಗೆ ಕೆಳಗೆ ಬೀಳದೆ ಇರುತ್ತದೆ ಅನ್ನುವ  ಸಂದೇಹ ಮಾತ್ರ ನಿವಾರಣೆ ಆಗಿರಲೇ ಇಲ್ಲ. ವಿಮಾನವನ್ನು ದೂರದಿಂದಲೇ ನೋಡಿ ಖುಷಿಪಡುತ್ತಿದ್ದೆ.

    ವಿಮಾನ ಪ್ರಯಾಣ ಮಾಡುವವರು ಜೀವದ ಆಸೆ ಬಿಟ್ಟು ಪ್ರಯಾಣ ಮಾಡಬೇಕು ಅನ್ನುವುದು ಮಾತ್ರ ನನಗೆ ಚೆನ್ನಾಗಿ ಮನದಟ್ಟು ಆಗಿಬಿಟ್ಟಿತ್ತು. ನಾನಂತೂ ಯಾವ ಕಾಲಕ್ಕೂ ಜೀವವನ್ನು ಪಣಕ್ಕಿಡುವ  ವಿಮಾನವನ್ನು ಹತ್ತಲಾರೆ ಅಂತ ಮನದಲ್ಲಿಯೇ ಶಪಥ ಮಾಡಿದ್ದೆ.ಆದರೆ ಅದನ್ನು ಎಲ್ಲರ ಮುಂದೂ ಹೇಳಲಾದೀತೆ. ಹೇಳಿದರೆ ಆಡಿಕೊಂಡು ನಕ್ಕಾರೆಂದು ಯಾರ ಬಳಿಯೂ ಹೇಳಿರಲಿಲ್ಲ.ಆ ಕಾಲದಲ್ಲಿ ಎರಡು ಚಕ್ರದ
     ವಾಹನದಲ್ಲಿಯೇ ಕೂರುವುದು ಕನಸು ಎನಿಸಿಕೊಳ್ಳುತ್ತಿದ್ದಾಗ ವಿಮಾನ ಎರಲಾರೆ ಅಂದರೆ ಕೇಳಿದವರು ಹಾಸ್ಯ ಮಾಡುವುದಿಲ್ಲವೆ. ಹಾಗಾಗಿ ನಾನು ಯಾರಿಗೂ ಹೇಳುವ ಧೈರ್ಯ ಮಾಡಲಿಲ್ಲ.  

    ಕಾಲೇಜಿನಲ್ಲಿ ಓದುವಾಗ ಉತ್ತರ ಭಾರತ ಪ್ರವಾಸಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ರಾಜಧಾನಿ ದೆಹಲಿಯಲ್ಲಿ ಎಲ್ಲರಿಗೂ ವಿಮಾನದಲ್ಲಿ ನಗರ ಪ್ರದಕ್ಷಿಣೆ ಮಾಡಿಸುತ್ತೆವೆ ಎಂದು ನಮ್ಮ ಅಧ್ಯಾಪಕರು ಹೇಳಿದಾಗ ಆತಂಕವಾಗಿತ್ತು. ಆಗ ನನಗೆ  ಹೊಸ ಚಿಂತೆ ಶುರುವಾಗಿತ್ತು. ನಾನು ವಿಮಾನ ಏರಲಾರೆ ಅಂತ ಶಪಥ ಮಾಡಿಬಿಟ್ಟಿದ್ದೆನೆ. ಆದರೆ ಎಲ್ಲರೂ ಹೋಗುವಾಗ ನಾನೊಬ್ಬಳೇ ಬರುವುದಿಲ್ಲ ಅಂತ ಹೇಗೆ ಹೇಳುವುದು.ನನ್ನ ಶಪಥದ ಬಗ್ಗೆಯಾಗಲಿ ವಿಮಾನ ಬಗ್ಗೆ ಇರುವ ಭಯವನ್ನಾಗಲಿ ಹೇಳಲಾದೀತೆ. ಪ್ರವಾಸಕ್ಕೆ ಹೋಗುವುದು ಬೇಡ ಅಂತ ಅಂದುಕೊಂಡಿದ್ದೆ. ಆದರೆ ಗೆಳತಿಯರು ಬಿಡಬೇಕಲ್ಲ.ಅವರ ಬಲವಂತಕ್ಕೆ ಹಾಗೂ ಪ್ರವಾಸ ನನಗೆ ತುಂಬಾ ಇಷ್ಟವಾದ್ದರಿಂದ ಅವಕಾಶ ಮಿಸ್ ಮಾಡಿಕೊಳ್ಳುವ ಮನಸ್ಸಿಲ್ಲದೆ ಹೊರಟಿದ್ದೆ.

    ವಿಮಾನ ಹತ್ತುವ ಸಮಯದಲ್ಲಿ ಏನೋ ಕಾರಣ ಹೇಳಿ ತಪ್ಪಿಸಿ ಕೊಂಡರಾಯಿತು ಅಂತ ಅಂದು ಕೊಂಡಿದ್ದೆ. ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ. ನಮ್ಮ ಪ್ರಾಧ್ಯಾಪಕರು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಯರು ಪ್ರವಾಸಕ್ಕೆ ಬರಲೆಂದು  ವಿಮಾನಯಾನ ಮಾಡಿಸುತ್ತೆವೆ ಎಂದು ಒಂದು ಡೋಸ್ ಕೊಟ್ಟದ್ದರು  ಅಂತ ನಂತರ ಗೊತ್ತಾಗಿ ಸಮಾಧಾನದ ಉಸಿರು ಬಿಟ್ಟಿದ್ದೆ.  ಬೇರೆಯವರಿಗೆಲ್ಲ ಈ ಮೋಸ ಗೊತ್ತಾಗಿ ನಿರಾಶರಾಗಿದ್ದರು ಅಧ್ಯಾಪಕರ ಮೇಲೆ ಕೋಪಗೊಂಡರೂ ಏನೂ ಪ್ರಯೋಜನ ಇಲ್ಲ  ಅಂತ  ಸುಮ್ಮನಾಗಿದ್ದರು.ಪ್ರವಾಸ  ಮಾತ್ರ ತುಂಬಾ ಚೆನ್ನಾಗಿತ್ತು. ಆ ಮಜದಲ್ಲಿ ವಿಮಾನ ಯಾನದ ವಿಚಾರವನ್ನು ಮರೆತು ಬಿಟ್ಟು ಪ್ರವಾಸದ ಖುಷಿಯಲ್ಲಿ ಮುಳುಗಿ ಹೋದರು.

    ನಂತರ ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿ ಮದುವೆಯೂ ಆಯಿತು.  ನನ್ನಂತೆಯೇ ನನ್ನ ಪತಿಗೂ ಪ್ರವಾಸದ ಬಗ್ಗೆ  ಆಸಕ್ತಿ. ಹಾಗಾಗಿ ಪ್ರತಿ ವರ್ಷ ಪ್ರವಾಸಕ್ಕೆ ಹೋಗುವ ಹವ್ಯಾಸ ಶುರುವಾಯಿತು. ಹಾಗೆ ಪ್ರವಾಸಕ್ಕೆ ಮಂಗಳೂರು ಗೆ ಹೋಗಿದ್ದೆವು.ಪ್ರವಾಸ ಮುಗಿಸಿ ವಾಪಸ್ಸು ಬರುವಾಗ ನಮ್ಮ ಟ್ಯಾಕ್ಸಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ನನಗೆ ಅಚ್ಚರಿಯಾಯಿತು. ನನ್ನ ಪತಿ ನಿನ್ನನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೆನೆ ಅಂದಾಗ ಹೌಹಾರಿ ಬಿದ್ದೆದ್ದೆ .

    ವಿಮಾನ ಪ್ರಯಾಣದ ಸರ್ಫ್ರೈಜ್ ಕೊಡಲಿದ್ದ ನನ್ನ ಪತಿಗೆ ನಾನು ವಿಮಾನ ಹತ್ತುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಅವರಿಗೇ ಸರ್ಫ್ರೈಜ್ ಕೊಟ್ಟು ಬಿಟ್ಟೆ. ನಿರಾಸೆಯಿಂದ ಮತ್ತು ಬೇಸರದಿಂದ ವಿಮಾನ ಹಾರುವ ತನಕ ಅಲ್ಲಿದ್ದು ನನ್ನ ಮೇಲೆ ಕೋಪ ಮಾಡಿ ಕೊಂಡು ವಾಪಸ್ ಟ್ಯಾಕ್ಸಿಯಲ್ಲಿ ನನ್ನ ನ್ನು ಕರೆದುಕೊಂಡು ಬಂದಿದ್ದರು.ಆ ಘಟನೆಯಾದ ಮೇಲೇ ಮತ್ತೆ ವಿಮಾನ ಪ್ರಯಾಣದ ಪ್ರಸ್ತಾಪ ಬಂದಿರಲಿಲ್ಲ . ಕೆಲ ವರ್ಷಗಳ ನಂತರ ನನಗೂ ವಿಮಾನ ಪ್ರಯಾಣ ಮಾಡಬೇಕು ಅನ್ನೊ ಸಣ್ಣ ಆಸೆ ಮನದೊಳಗೇ ಮೊಳೆಯುತ್ತಿತ್ತು.ಆದರೆ ಭಯ ಅದನ್ನು ಚಿವುಟಿ ಹಾಕುತ್ತಿತ್ತು.

    ಪ್ರತಿ ವರ್ಷದಂತೆ ಈ ಬಾರಿ ಉತ್ತರ ಭಾರತ ಪ್ರವಾಸ ಹೊರಟಾಗ ಸಮಯ ಕಡಿಮೆ ಆಗುತ್ತದೆ ಆನ್ನೊ ಕಾರಣಕ್ಕೆ ದೆಹಲಿಗೆ ವಿಮಾನದಲ್ಲಿ ಹೋಗಲೇ ಬೇಕಾಯಿತು. ತಪ್ಪಿಸಿ ಕೊಳ್ಳುವ ಅವಕಾಶವನ್ನು ನನಗೆ ಕೊಡದೆ ನನ್ನಪತಿ ಟಿಕೆಟ್ ಬುಕ್ ಮಾಡಿಸಿಯೇ ಬಿಟ್ಟರು. ವಿಧಿ ಇಲ್ಲದೆ  ಧೈರ್ಯ ಮಾಡಿ ಸಿದ್ಧವಾದೆ. ಒಂದು ಕಡೆ ಮೊದಲ ಬಾರಿ ಆಕಾಶದಲ್ಲಿ ಹಾರುವ ರೋಮಾಂಚನ.ಮತ್ತೊಂದು ಕಡೆ ಜೀವ ಭಯ. ಎರಡೂ ಭಾವದಲ್ಲಿ ಬಳಲಿ ಹೋದೆ.  

    ಪ್ರಯಾಣದ ದಿನ ಬಂದೇ ಬಿಟ್ಟಿತು. ಜೀವವನ್ನು ಕೈಲಿ ಹಿಡಿದುಕೊಂಡು  ವಿಮಾನ ನಿಲ್ದಾಣ ತಲುಪಿದೆ. ನನ್ನ ಪತಿ ಅಂತೂ ತುಂಬಾ ಸಡಗರದಿಂದ ಇದ್ದಾರೆ. ನನಗೊ ಎದೆ ಡವ ಡವ ಅನ್ನುತ್ತಿದೆ . ಎಲ್ಲ  ಪ್ರಕ್ರಿಯೆಗಳು ಮುಗಿಸಿ ಹೇಗೊ ವಿಮಾನ ಹತ್ತಿ ಸೀಟಿನ ಮೇಲೆ ಕುಳಿತು ಕೊಂಡೆ.

    ವಿಮಾನ ಹೊರಡುವ ವೇಳೆಯಾಯಿತು.  ಆತಂಕ ಹೆಚ್ಚಾಯಿತು. ಗಗನ ಸಖಿ ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಿ ಕೊಟ್ಟಳು.  ಮೊದಲ ಬಾರಿ ವಿಮಾನ ಮೇಲೇರುವಾಗ ಏನೇನೂ ಆಗುತ್ತದೆ ಅಂತ ಕೇಳಿದ್ದೆ.ತಲೆ ಸುತ್ತು ,ವಾಂತಿ ,ಎದೆಬಡಿತ ತೀವ್ರವಾಗುವಿಕೆ ಹೀಗೇ ಏನೇನೋ ನನಗೂ ಆಗುತ್ತದೆ ಅಂತ ಆತಂಕದಿಂದ ಕಾಯುತ್ತಿದ್ದೆ. ವಿಮಾನ ರನ್ ವೇನಲ್ಲಿ ಓಡುತ್ತಾ ನಿಧಾನವಾಗಿ ಮೇಲೇರ ತೊಡಗಿತು. ನಿಲ್ದಾಣದಲ್ಲಿ ಇದ್ದದ್ದೆಲ್ಲ ಚಿಕ್ಕದಾಗಿ ಕಾಣುತ್ತ ಕೊನೆಗೆ ಏನೂ ಕಾಣದಾಯಿತು.

    ಆಶ್ಚರ್ಯ ,ನನಗೆ ಏನೂ ಆಗಲಿಲ್ಲ. ಹೊಟ್ಟೆ ತೊಳಸೂ ಇಲ್ಲ ,ತಲೆ ಸುತ್ತೂ ಇಲ್ಲ ,ಎದೆ ಬಡಿತದ ತೀವ್ರತೆಯೂ ಇಲ್ಲ. ಯಾವ ಅಹಿತಕರ ಅನುಭವವೂ ಆಗಲಿಲ್ಲ. ಕಿಟಕಿಯ ಹೊರಗೆ ಬರಿ ಮೋಡ ಅಷ್ಟೇ ಕಾಣಿಸುತ್ತಿತ್ತು. ವಿಮಾನ ಒಂಚೂರು ಅಲ್ಲಾಡದ ಹಾಗೆ ಹಾರುತ್ತಿದೆ .ಅಥವಾ ಹಾಗೆ ನನಗೆ ಅನಿಸಿತು. ಸುಮಾರು ನಾಲ್ಕು ಗಂಟೆ ಗೋಡನ್ನಿನಲ್ಲಿ ಕುಳಿತಂತಾಗಿ ಯಾವ ರೋಮಾಂಚನವೂ ನನಗಾಗದೆ ವಿಮಾನ ಪ್ರಯಾಣ ನೀರಸವೆನಿಸಿತು. ಯಾವ ತೊಂದರೆಯೂ ಆಗದೆ ಕ್ಷೇಮವಾಗಿ ನನ್ನ ವಿಮಾನ ಪ್ರಯಾಣ ಮುಗಿದಿತ್ತು.

    Photo by Vincent Camacho on Unsplash

    ಅರಿಷಿಣ ಗಣಪ,ಪರಿಸರ ಗಣಪ, ನೀವೇ ಮಾಡಿದ ಗಣಪ

    ಕೋವಿಡ್ ಮಧ್ಯೆಯೇ ಗಣೇಶ ಚತುರ್ಥಿ ಆಗಮಿಸುತ್ತಿದೆ. ಈ ಬಾರಿ ಯಾವ ಹಬ್ಬದಲ್ಲೂ ಅಂಥ ಸಂಭ್ರಮ ಕಾಣುತ್ತಿಲ್ಲ. ಯುಗಾದಿಯಿಂದ ಆರಂಭವಾದ ಕೋವಿಡ್ ಗದ್ದಲ ಗಣೇಶ ಹಬ್ಬ ಬಂದರೂ ಮುಗಿಯುವಂತೆ ಕಾಣುತ್ತಿಲ್ಲ. ಗಣೇಶ ಹಬ್ಬವೆಂದರೆ ಅದೊಂದು ಸಾರ್ವಜನಿಕ ಉತ್ಸವ.  ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಸಂಭ್ರಮಿಸುವ ಪರಂಪರೆ ಭಾರತೀಯರದ್ದು. ಈ ಬಾರಿ ಸರಕಾರ ಅದಕ್ಕೆ ಕೆಲವು ನಿಯಮಗಳನ್ನು ರೂಪಿಸಿ ಅನುಮತಿ ನೀಡಿದೆ. ಕೋವಿಡ್ ಕಾರಣದಿಂದ ಹೆಚ್ಚು ಜನ ಸೇರಬಾರದೆಂತಲೂ. ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಬೇಡ ಎಂತಲೂ ಹೇಳಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿಗಳನ್ನು ಮನೆ ಮನೆಗಳಲ್ಲೇ ವಿಸರ್ಜಿಸುವಂತೆಯೂ ಸಲಹೆ ನೀಡಿದೆ.

    ಅರಿಷಿಣ ಗಣಪತಿ

    ಪರಿಸರ ನಿಯಂತ್ರಣ ಮಂಡಳಿ ಈ ಬಾರಿ ಅರಿಷಿಣ ಗಣಪತಿಯ ಕಾನ್ಸೆಪ್ಟನ್ನು ಹರಿಯ ಬಿಟ್ಟಿದೆ. ಆದರೆ ಎಲ್ಲರಿಗೂ ಗಣೇಶನ ಆಕಾರ ಮಾಡಲು ಬರಬೇಕಲ್ಲ. ಅರಿಶಿಣ ಜೊತೆ ಒಂದಿಷ್ಟು ಮೈದಾ ಮತ್ತು ಸಕ್ಕರೆ ಸೇರಿಸಿದರೆ  ಮೂರ್ತಿ ಮಾಡಲು ಸುಲಭವಾಗುತ್ತದೆ. ಪರಿಸರ ನಿಯಂತ್ರಣ ಮಂಡಳಿಯ ಈ  ವಿಡಿಯೋ ಗಮನಿಸಿ.

    ಈ ಬಾರಿ ಕೋವಿಡ್ ಕಾರಣದಿಂದ ಪೇಟೆಯಿಂದ ಗಣೇಶನ್ನು ಮನೆಗೆ ತರಲು ಹಲವರು ಹಿಂಜರಿಯುತ್ತಿದ್ದಾರೆ. ಕೆಲವವರಂತೂ ಒಂದು ವಾರ ಮೊದಲೇ ಗಣೇಶನನ್ನು ಮನೆಗೆ ತಂದು ಬಿಟ್ಟಿದ್ದಾರೆ. ಗಣೇಶ ಹಬ್ಬಕ್ಕೆ ತಿಂಗಳ ಮುಂಚೆಯೇ ಬೀದಿ ಬದಿಯಲ್ಲಿ ಕಾಣುತ್ತಿದ್ದ ಗಣೇಶ ಮೂರ್ತಿಗಳೂ ಈ ಬಾರಿ ಕಾಣುತ್ತಿಲ್ಲ. ಅನೇಕರು ಆನ್ ಲೈನ್ ನಲ್ಲಿ ಸಿಗುವ  ಡೂ ಇಟ್ ಯುವರ್ ಸೆಲ್ಫ್ ಕಿಟ್ ಗಳನ್ನು ಮನೆಗೆ ತರಿಸಿಕೊಂಡು ಅದರಿಂದಲೇ ಗಣೇಶನ್ನು ತಯಾರಿಸಿಕೊಳ್ಳುತ್ತಿದ್ದಾರೆ.

    ಮನೆ ಮನೆ ಗಣೇಶಕ್ಕೆ ಬೇಡಿಕೆ

    ಶಿವಕುಮಾರ ಹೊಸಮನಿ

    ಕೋವಿಡ್ ಕಾರಣದಿಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವಗಳ ಸಂಖ್ಯೆ ಕಡಿಮೆಯಾಗಿರುವುದು ಹಾಗೂ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿರುವುದರಿಂದ ಮನೆಯಲ್ಲಿ ಗಣೇಶನ್ನು ಇಟ್ಟು ಪೂಜಿಸುವವರ ಸಂಖ್ಯೆ ಹೆಚ್ಚಾಗಿದೆ  ಎಂದು ಸಮರ್ಪಣಾ ಸಂಸ್ಥೆಯ ಶಿವಕುಮಾರ ಹೊಸಮನಿ ಅಭಿಪ್ರಾಯ ಪಡುತ್ತಾರೆ.

    ಕುಂಬಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರು ಅನೇಕ ವರ್ಷಗಳಿಂದ ಕುಂಬಾರರರನ್ನು  ಬೆಂಗಳೂರಿಗೆ ಕರೆಸಿ ಅವರಿಂದ  ಪರಿಸರ ಗಣೇಶ ಮೂರ್ತಿಗಳನ್ನು ಮಾಡಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ.

    ಸರಕಾರ ಈ ಬಾರಿ ಅರಿಶಿಣ ಗಣಪನನ್ನು ಮನೆಯಲ್ಲೇ ಮಾಡಿ ಪೂಜಿಸಿ ಎನ್ನುತ್ತಿದ್ದಾರೆ. ಅದು ಕೇಳಲು ಚೆನ್ನಾಗಿದೆ. ಆದರೆ ಅನೇಕರು  ಅರಿಶಿಣದಿಂದ ಮೂರ್ತಿ ಮಾಡಲು ಹೋಗಿ ಅದು ರೂಪ ಪಡೆಯದಿದ್ದಾಗ ನಿರಾಶರಾಗಿದ್ದಾರೆ. ಹೀಗಾಗಿ ನಮ್ಮ ಬಳಿ ಬರುತ್ತಿದ್ದಾರೆ. ನಾವು ಮಣ್ಣನಿಂದ ಮಾಡಿದ ಗಣೇಶ ಮೂರ್ತಿಗೆ ಅರಿಷಿಣ ಲೇಪನ ಮಾಡುತ್ತಿದ್ದೇವೆ ಇದು ಕೂಡ ಹಲವರಿಗೆ ಇಷ್ಟವಾಗಿದೆ ಎನ್ನುತ್ತಾರೆ ಅವರು . ಅದೇ ರೀತಿ ಸ್ಚೀಲ್ ಬಟ್ಟಲಿನಲ್ಲಿ ಗಣೇಶನನ್ನು ಮಾಡಿ ಪೂಜಿಸಿ ಅಲ್ಲಿಯೇ ವಿಸರ್ಜಿಸುವ ಕಳೆದ ವರ್ಷದ ಪದ್ಧತಿ ಈ ವರುಷವೂ ಜನಪ್ರಿಯವಾಗಿದೆ ಎನ್ನುತ್ತಾರೆ ಅವರು. ವಿಸರ್ಜಿಸಿದ ನಂತರ ಅದರಲ್ಲೇ ಸಸಿ ಬೆಳೆಯುತ್ತದೆ

    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲೇ ಇಟ್ಟು ಪೂಜಿಸಲು ಬಯಸುವವರ ಸಂಖ್ಯೆ ಹೆಚ್ಚಾಗಿದೆ .ಜೊತೆಗೆ ಕೆಲವು ಆಪರ್ಟ್ಮೆಂಟ್ ಗಳಿಗೆ ಹೋಗಿ ಗಣೇಶ ಮೂರ್ತಿಯನ್ನ ತಯಾರಿಸಿಕೊಡುವ ಕೆಲಸವನ್ನು ಅವರ ತಂಡ ಮಾಡಿದೆ.

    ಗಣಪ ಹೇಗಾದರು ಇರಲಿ ಭಕ್ತಿ ಮುಖ್ಯ

    ಆನಂದ ತೀರ್ಥಾಚಾರ್.

    ಈ ಬಾರಿ ದಾವಣಗೆರೆಯಲ್ಲಿ ದೊಡ್ಡ  ಮೂರ್ತಿಗಳ ಸಂಖ್ಯೆ ಕಡಿಮೆ ಇದೆ .ಆದರೆ ಮನೆ ಮನೆಗಳಲ್ಲಿ ಗಣೇಶ ನ್ನು ಪೂಜಿಸುವ ಪದ್ಧತಿ ಅಬಾಧಿತವಾಗಿ ಮುಂದುವಿರಿಯಲಿದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಸಿ.ಕೆ ಆನಂದ ತೀರ್ಥಾಚಾರ್.

    ಅರಿಷಿಣದಲ್ಲಿ ಮನೆಯಲ್ಲೇ ಮಾಡುವ ಗಣಪತಿ ರೂಪ ಪಡೆಯುವುದು ಕಷ್ಟ. ಅದಕ್ಕೆ ಗಣಪನನ್ನು ಮಾಡುವ ಕಲೆ ಗೊತ್ತಿರಬೇಕು.  ಗೋಮಯಕ್ಕೆ ಗರಿಕೆಯನ್ನು ಸೇರಿಸಿ ಗಣಪನೆಂದು ಪೂಜಿಸುವ ಪದ್ಧತಿ ನಮ್ಮಲ್ಲಿಇದೆ. ‌ಇದನ್ನು ಪೂಗಿ ಗಣಪ ಎಂದು ಕರೆಯುತ್ತಾರೆ . ಇನ್ನೂ ಕೆಲವು ಶುಭ ಕಾರ್ಯಗಳಲ್ಲಿ  ಅಡಿಕೆಯನ್ನೇ ಗಣಪನೆಂದು ಭಾವಿಸುವ ಪದ್ಧತಿ ಇದೆ . ಹೀಗಾಗಿ ಅನಿವಾರ್ಯ  ಸಂದರ್ಭದಲ್ಲಿ ನಿಶ್ಚಿತ ಆಕಾರ ಪಡೆಯದಿದ್ದರೂ ಭಕ್ತಿಯಿಂದ ಪೂಜಿಸಬಹುದು ಎನ್ನುತ್ತಾರೆ ಅವರು.

    ಈ ಬಾರಿಯದು ವಿಶೇಷ ಸಂದರ್ಭ. ಸರಕಾರ ರೂಪಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸುವುದರ ಜೊತೆಗೆ  ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಕೋವಿಡ್ ಬೇಗ ದೂರವಾಗಿ ಎಂದಿನಂತೆ ಎಲ್ಲವೂ ಸಹಜ ಸ್ಥಿತಿಗೆ ಬಹು ಬೇಗ ಮರಳಲಿ ಎಂದು ಆಶಿಸೋಣ.

    ಸೂಳೆಕೆರೆ ವಿದ್ಯುತ್ ಯೋಜನೆ ಪ್ರಸ್ತಾವಕ್ಕೆ ಪರಿಸರವಾದಿಗಳ ವಿರೋಧ

    ಸೂಳೆಕೆರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿನ ತಾಲ್ಲೂಕಿನ ಭೂಪಟದ ಕೇಂದ್ರ ಭಾಗದಲ್ಲಿರುವ ಜಲರಾಶಿಯ ಪ್ರಸಿದ್ಧ ತಾಣ. ಏಷ್ಯಾಖಂಡದಲ್ಲಿಯೇ ಎರಡನೇ ದೊಡ್ಡ ಕೆರೆಯ ಖ್ಯಾತಿ ಪಡೆದ ಸೂಳೆಕೆರೆ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗಿರಿ, ಶಿಖರಗಳಿಂದ ಆವೃತ ಸದಾ ಹಸಿರು ಹೊದ್ದ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಪಾಟ್. ಅಪರೂಪದ ವನರಾಶಿ, ಪ್ರಾಣಿ ಪಕ್ಷಿಗಳ ಮೌನ ಕಣಿವೆ. ಶಾಂತವ್ವೆ ಕಟ್ಟಿಸಿದಳೆಂದು ಹೇಳಲಾಗುವ ಸುಮಾರು 6 ಸಾವಿರ ವಿಸ್ತೀರ್ಣ ಹೊಂದಿದ ತಿಳಿನೀರಿನ ವಿಹಂಗಮ ದೃಶ್ಯ ಕಣ್ಣಿನ ದೃಷ್ಟಿ ಹಾಯುವವರೆಗೆ ಮುದನೀಡುತ್ತದೆ.

    ಎರಡು ಗುಡ್ಡಗಳ ನಡುವೆ ಏರಿ ನಿರ್ಮಿಸುವ ಮೂಲಕ ಸರಳ ತಂತ್ರಜ್ಞಾನದಿಂದ ನೀರು ನಿಲ್ಲಿಸುವ ಮೂಲಕ ಅಪಾರ ಪ್ರಮಾಣದ ನೀರು ಹಿಡಿದಡಲ್ಪಟ್ಟಿದೆ. ನೈಸರ್ಗಿಕ ಜಲಮೂಲ ಹರಿದ್ರಾವತಿ ಹಳ್ಳದೊಂದಿಗೆ ಇತರೆ ಹಳ್ಳಗಳು. ಭ್ರದ್ರಾ ನಾಲೆಯ ನೀರು ಕೆರೆಯಲ್ಲಿ ಸದಾ ನೀರು ತುಂಬಿರಲು ತನ್ನದೇ ಕೊಡುಗೆ ನೀಡುತ್ತಿದೆ. ನೀರಾವರಿ ಸೌಲಭ್ಯಕ್ಕಿಂತ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ನಗರ, ಪಟ್ಟಣ ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆ.

    ನೈಸರ್ಗಿಕ ತಾಣಗಳು ಯಥಾಸ್ಥಿತಿ ಬಿಡದೇ ವಾಣಿಜ್ಯೋದ್ಯಮಕ್ಕೆ ಪರಿವರ್ತಿಸಿ ಲಾಭಗಳಿಸುವ ಕಾರ್ಪೋರೇಟ್ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಿಲುಕಿದ ಪರಿಣಾಮ ಮೂಲ ಸ್ವರೂಪ ಕಳೆದುಕೊಂಡಿವೆ. ಕಾಡುನಾಶ, ಗುಡ್ಡ ನೆಲಸಮ ಮಾಡಿ ಉದ್ಯಮಗಳತ್ತ ವಾಲುವಿಕೆ ದುರಂತಗಳಿಗೆ ದಾರಿ ಮಾಡಿದೆ. ಬೃಹತ್ ಯಂತ್ರಗಳ ಸದ್ದಿಗೆ ಪ್ರಾಣಿ ಪಕ್ಷಿಗಳು ಪಲಾಯನ. ನೈಸರ್ಗಿಕ ಬೀಜ ಪ್ರಸರಣವಿಲ್ಲದೇ ಕಾಡು ನಾಶ. ಅವೈಜ್ಞಾನಿಕ ಯಂತ್ರಾಧಾರಿತ ಉದ್ಯಮಗಳ ಆಕ್ರಮಣದಿಂದ ಪರಿಸರ ಸಮತೋಲನ ಕಳೆದುಕೊಂಡಿದೆ.

    ಇಂದು ಮಳೆಗಾಲ ಬಂತೆಂದರೆ ಆತಂಕ. ಪ್ರವಾಹ, ಗುಡ್ಡ ಕುಸಿತ. ಭೂ ಸವಕಳಿ, ನದಿಯಲ್ಲಿ ಹೂಳು. ಇವೆಲ್ಲಾ ಅಸಮತೋಲನದ ಪರಿಣಾಮವೇ. ತಕ್ಷಣದ ಲಾಭಕ್ಕಾಗಿ ಲಕ್ಷಾಂತರ ವರ್ಷದಿಂದ ನೆಲೆ ಕಂಡುಕೊಂಡಿದ್ದ ಮಳೆಕಾಡು ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡುವ ಹುನ್ನಾರ ನಡೆದಿದೆ. ಹಿಂದೆಯೂ ಇದಕ್ಕಿಂತ ಭರ್ಜರಿ ಮಳೆ ಸುರಿಯುತ್ತಿತ್ತು. ಈಗಿನಂತಹ ಅನಾಹುತಗಳು ಇರಲಿಲ್ಲ. ಕಳೆದ ಬಾರಿ ಕೊಡಗಿನಲ್ಲಾದ ಕುಸಿತ, ಈ ಬಾರಿ ಭಾಗಮಂಡಲದಲ್ಲಿ ಅರ್ಚಕರ ಮನೆ ಗುಡ್ಡ ಕುಸಿತ ಇವುಗಳ ಪ್ರತಿಫಲಗಳೇ. ಕಾಡಿನಲ್ಲಿ ಹೆದ್ದಾರಿ ನಿರ್ಮಾಣ, ವಿದ್ಯುತ್ ಮಾರ್ಗಗಳಿಗೆ ಮರಗಳ ಮಾರಣ ಹೋಮ ನಡೆಯುತ್ತಿದೆ. ಕೊಳವೆ ಬಾವಿಗಳು, ಜೆಸಿಬಿ ಯಂತ್ರದಿಂದ ಗುಡ್ಡದ ಬುಡ ಸಮತಟ್ಟು ಮಾಡುವ ಪ್ರಕ್ರಿಯೆಗಳಿಂದ ಅವಘಡಗಳು ಸಂಭವಿಸುತ್ತಿವೆ. ನೂರಾರು ವರ್ಷ ಬದುಕು ಕಟ್ಟಿಕೊಂಡ ಪರಂಪರಾಗತ ಕುಟುಂಬಗಳ ಹೇಳ ಹೆಸರಿಲ್ಲದಂತೆ ಮಣ್ಣು ಪಾಲಾಗುತ್ತಿವೆ.

    ಜೋಗದಲ್ಲಿಯೂ ದಟ್ಟಡವಿಯಲ್ಲಿ ನೀರೆತ್ತುವ ಮೂಲಕ ವಿದ್ಯುತ್ ಉತ್ಪಾದನೆ ಯೋಜನೆಗೆ ಪರೀಕ್ಷೆ ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿತ್ತು. ತೀವ್ರ ವಿರೋಧದ ನಡುವೆಯೂ ಯಂತ್ರಗಳ ಸದ್ದು ನಡೆಯಿತು. ರಾಜಕಾರಣಿಗಳೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಬಂಡವಾಳಶಾಹಿಗಳ ಹಿತಾಸಕ್ತಿಗೆ ಬೆನ್ನೆಲುಬಾಗಿ ನಿಲ್ಲುವುದು ದೇಶದ ಮಳೆಕಾಡು ಪ್ರದೇಶ ನಿತ್ಯ ಕರಗುತ್ತಿದೆ. ಪ್ರಪಂಚದಲ್ಲಿಯೇ ತೇವಾಂಶಭರಿತ ಭಾರತ ದೇಶದಲ್ಲಿ ಕಾಡಿನ ಪ್ರಮಾಣ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಪರಿಸರ ಸಮತೋಲನಕ್ಕೆ ಶೇ.33 ಮಳೆಕಾಡು ಇರುವುದು ಅಗತ್ಯ. ಕಾಡು ಕಡಿದು ಮರಬೆಳೆಸುವುದು ಕಣ್ಣೆರೊಸುವ ತಂತ್ರ. ವಾಸ್ತವ ನೈಸರ್ಗಿಕವಾಗಿ ಬೆಳೆಯುವ ವೈವಿಧ್ಯಮಯ ಜಾತಿಯ ಗಿಡಮರದ ದಟ್ಟಕಾಡು ಮಳೆ ತರಿಸುವುದು. ಈ ಎಲ್ಲಾ ಅಂಶಗಳನ್ನು ಒತ್ತಿ ಹೇಳುವ ಉದ್ದೇಶ ಸೂಳೆಕೆರೆಯೂ ಹಾಗಾಗದಿರಲಿ ಎಂಬ ಸದಾಶಯ.

    ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಕಂಪನಿಯೊಂದು ನೀಡಿದ ಪ್ರಸ್ತಾವವನನ್ನು ಪರಿಶೀಲಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಕಾಳಜಿಯ ಸಾರ್ವಜನಿಕರಲ್ಲಿ ತಲ್ಲಣ ಉಂಟಾಗಿದೆ. ವಿದ್ಯುತ್ ಉತ್ಪಾದನೆ ಘಟಕ ಕಾರ್ಯಾರಂಭ ಮಾಡಿದಲ್ಲಿ ಸೈಲೆಂಟ್ ವ್ಯಾಲಿಯೆಂದೇ ಗುರುತಿಸಿಕೊಂಡ ಸೂಳೆಕೆರೆ ಗಿಜಿಗುಡುವ ವಾಣಿಜ್ಯ ಪ್ರದೇಶವಾಗಿ ಪರಿವರ್ತಿತಗೊಳ್ಳುವುದು. ಇದರಿಂದ ಇಲ್ಲಿನ ಪರಿಸರಕ್ಕೆ ಹಾನಿ ಖಂಡಿತ. ಈ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಏನಿದು ವಿದ್ಯುತ್ ಉತ್ಪಾದನೆ:ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದು ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಪ್ರಸ್ತಾವ ಸಲ್ಲಿಸಿದೆ. ಪರ್ವ ಜನರೇಷನ್ ಪಂಪ್ ಸ್ಟೊರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ರೂ.1347 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಪ್ರಸ್ತಾವನೆಯಲ್ಲಿದೆ. ಚನ್ನಗಿರಿ ತಾಲ್ಲೂಕಿನ ಸೋಮಶೆಟ್ಟಿ ಹಳ್ಳಿ ಹಾಗೂ ಅರಿಶಿನಘಟ್ಟ ಗ್ರಾಮಗಳಲ್ಲಿ ಯೋಜನೆ ಅನುಷ್ಟಾನಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ. ಸೂಳೆಕೆರೆಯಿಂದ 0.279 ಟಿಎಂಸಿ ನೀರನ್ನು ಎತ್ತರದ ಗುಡ್ಡಕ್ಕೆ ಪಂಪ್ ಮಾಡಲಾಗುವುದು. ಅಲ್ಲಿಂದ ನೀರನ್ನು ಲಿಂಗನಮಕ್ಕಿ ಮಾದರಿಯಲ್ಲಿ ದುಮ್ಮುಕ್ಕಿಸಿ ವಿದ್ಯುತ್ ತಯಾರು ಮಾಡಲು ಪ್ರಸ್ತಾವನೆಯಲ್ಲಿ ಮಂಡಿಸಲಾಗಿದೆ. ಗರಿಷ್ಟ 25 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಗುರಿ ಸೂಚಿಸಲಾಗಿದೆ.

    ಈ ಯೋಜನೆಗೆ 201 ಎಕರೆ ಭೂಮಿ ಅಗತ್ಯವಿದೆ. ಅರಣ್ಯ ಇಲಾಖೆ 137 ಎಕರೆ, ಹಾಗೂ 67 ಎಕರೆ ಖಾಸಗಿ ಜಮೀನು ನೀಡುವಂತೆ ಕಂಪನಿ ಪ್ರಸ್ತಾವನೆಯಲ್ಲಿ ನಮೂದಿಸಿದೆ. ಈ ಪ್ರಸ್ತಾವಣೆ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಲು ಅನುಮೋದನಾ ಸಮಿತಿ ತಿಳಿಸಿದೆ.

    ಯೋಜನೆಗೆ ವಿರೋಧ:ಚನ್ನಗಿರಿ ಕ್ಷೇತ್ರದ ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ನೀರಾವರಿ ಪ್ರದೇಶ, ಕುಡಿಯುವ ನೀರು ಹಾಗೂ ಮೀನುಗಾರರ ಜೀವನದ ಮೂಲ ಸೂಳೆಕೆರೆ. ಯೋಜನೆಗೆ ಅಸ್ತು ನೀಡಿದರೆ ದೊಡ್ಡಮಟ್ಟದಲ್ಲಿ ಪರಿಸರ ಹಾನಿಗೆ ದಾರಿ ಮಾಡಿಕೊಡಲಿದೆ. ಸೂಳೆಕೆರೆ ಗುಡ್ಡದಲ್ಲಿ ಪ್ಲಾಟಿನಂ ಹಾಗೂ ಯುರೇನಿಯಂ ನಿಕ್ಷೇಪ ಇರುವುದರಿಂದ ದುರುದ್ದೇಶದಿಂದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೈಗಾರಿಕಾ ಸಚಿವರಿಗೆ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಮಾಡಿದ್ದೇನೆ. ಅದನ್ನು ಮೀರಿ ಅನುಮತಿ ನೀಡಿದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಶಾಸಕ ಮಾಡಾಳು ವಿರೂಪಾಕ್ಷಪ್ಪ

    ಈ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅರಿಶಿನಘಟ್ಟದ ಬಳಿ ಸ್ಥಳ ಪರಿಶೀಲನೆ ನಡೆಸಿದರು. ಅವರ ಅಭಿಪ್ರಾಯದಲ್ಲಿ ದೇವರು ಕೊಟ್ಟ ಸುಂದ ಕೆರೆ ಸೂಳೆಕೆರೆ. ಇದನ್ನು ನಂಬಿ 4 ರಿಂದ 5 ಲಕ್ಷ ಜನರು ಜೀವನ ನಡೆಯುತ್ತಿದೆ. ಯೋಜನೆಗೆ ಅನುಮತಿ ನೀಡಿದರೆ ತೀವ್ರ ತೊಂದರೆ ಅನುಭವಿಸುವರು. ಪರಿಸರ ಹಾಗೂ ಅರಣ್ಯ ಇಲಾಖೆಗಳಿಂದ ಗುಡ್ಡಗಳ ಮಾಹಿತಿ ಪಡೆದು ನಾಲ್ಕೈದು ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಇರುವವರೆಗೂ ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಇದರಿಂದ ಸುತ್ತಮುತ್ತಲಿನಗ ಗ್ರಾಮಸ್ಥರಲ್ಲಿ ಭರವಸೆ ಮೂಡಿತು.

    ಖಡ್ಗ ಸಂಘದ ಹೋರಾಟ: ಕಳೆದು ಮೂರ್ನಾಲ್ಕು ವರ್ಷದಿಂದ ಸೂಳೆಕೆರೆ ರಕ್ಷಣೆಗೆ ತನು,ಮನ ಧನದಿಂದ ಹೋರಾಟ ನಡೆಸುತ್ತಿರುವ ಖಡ್ಗ ಸಂಘ ಯೋಜನೆ ಪ್ರಸ್ತಾವನೆಗೆ ತೀವ್ರ ಹೋರಾಟ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದೆ.

    ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು

    ಇದೊಂದು ಅವೈಜ್ಞಾನಿಕ ಯೋಜನೆ. ನೀರನ್ನು ಗುಡ್ಡದ ಮೇಲಕ್ಕೆ ಎತ್ತಲು ಎಷ್ಟು ವಿದ್ಯುತ್ ಬೇಕು. ಅಲ್ಲಿಂದ ನೀರು ದುಮ್ಮುಕ್ಕಿಸಿ ಎಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ. ಇದು ಲಾಭಕರ ಅಲ್ಲವೇ ಅಲ್ಲ. ಪರಿಸರಕ್ಕೆ ದೊಡ್ಡ ಹಾನಿ ಸಂಭವಿಸಲಿದೆ. ಇಲ್ಲಿನ ರೈತರ, ಜನರ ಹಾಗೂ ಮೀನುಗಾರರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಯೋಜನೆ ಅನುಷ್ಟಾನಗೊಳ್ಳದಂತೆ ತಡೆಯಲು ಯಾವುದೇ ಹೋರಾಟಕ್ಕೆ ಸಿದ್ದ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

    ಡೇ ಟ್ರೇಡಿಂಗ್‌ ಸುರಕ್ಷಿತವಾಗಿ ನಡೆಸುವುದು ಹೇಗೆ?


    ಷೇರುಪೇಟೆಯ ಹೂಡಿಕೆಯ ಮೂಲ ಉದ್ದೇಶ ಹೂಡಿಕೆ ಮಾಡಿದ ಕಂಪನಿಗಳು ಲಾಭಗಳಿಸಿ ಹಂಚುವ ಕಾರ್ಪೊರೇಟ್‌ ಫಲಗಳನ್ನು ಪಡೆಯುವುದಾಗಿತ್ತು.  ಆದರೆ ಬದಲಾದ ವಿಶ್ಲೇಷಣೆಗಳ ವಿಧದ ಪ್ರಭಾವ, ಕಾಲಾನುಕಾಲಕ್ಕೆ ಹೊರಬರುವ ಕಂಪನಿಗಳ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳ ಸುದ್ಧಿ ಸಮಾಚಾರಗಳ ಕಾರಣ ಕಾರ್ಪೊರೇಟ್‌ ಫಲಗಳಿಗಿಂತ ಷೇರಿನ ಬೆಲೆಗಳ ವೃದ್ಧಿಯತ್ತ ಗಮನಹರಿಸುವಂತಾಗಿದೆ.  ಈ ಬದಲಾವಣೆಯು ಕಂಪನಿಗಳ ಬಗ್ಗೆ ಇರಬಹುದಾದ  Loylty ಯನ್ನು ಹೊರಹಾಕಿ, ಅದರ ಬದಲು ದೊರೆಯಬಹುದಾದ  Royalty ಬಗ್ಗೆ ಚಿಂತಿಸುವಂತೆ ಮಾಡಿದೆ.

    ಷೇರುಪೇಟೆ  ವಿವಿಧ ಸೂಚ್ಯಂಕಗಳು ಪ್ರದರ್ಶಿಸುತ್ತಿರುವ  ಏರಿಕೆಗಳ ಆಧಾರದ ಮೇಲೆ   ಷೇರುಪೇಟೆಗಳು ಮೇಲ್ನೋಟಕ್ಕೆ ಭಾರಿ ಹಣ ಗಳಿಸಲು ಸಾಧ್ಯವಿರುವ ತಾಣ ಎಂಬ ಕಲ್ಪನೆ ಹಲವರಲ್ಲಿ ಮೂಡಿರಲು ಸಾಧ್ಯ.  ಆದರೆ ವಾಸ್ತವ ಸಂಗತಿಯೇ ಬೇರೆ.  ಇಲ್ಲಿ ಹಣ ಸಂಪಾದನೆ ಅತಿ ಸುಲಭ ಎನಿಸಿಕೊಳ್ಳಬೇಕಾದರೆ ಅದಕ್ಕೆ ತಕ್ಕ ಸಿದ್ಧತೆಗಳ ಅಗತ್ಯ. ಡೇ ಟ್ರೇಡಿಂಗ್‌ ನಲ್ಲಿ ವ್ಯವಹರಿಸಲು ಬಹು ಜನರಿಗೆ ಹೆಚ್ಚಿನ ಆಸಕ್ತಿ. ಅದರಂತೆ ಹೆಚ್ಚಿನವರು ಹಣ ಕಳೆದುಕೊಂಡಿರುವುದೂ ಇದೇ ಕಾರಣ.

    ಹೂಡಿಕೆಯ ಹಣ ಸುರಕ್ಷಿತವಾಗಿರಸಬೇಕಾದಲ್ಲಿ ಡೇ ಟ್ರೇಡಿಂಗ್‌ ನಲ್ಲಿ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
    ಡೇ ಟ್ರೇಡಿಂಗ್‌ ನಲ್ಲಿ ಈಗ ಹೆಚ್ಚಿನವರು ತಮ್ಮ ಮಿತಿ ಮೀರಿದ ಸಂಖ್ಯಾ ಗಾತ್ರದ ಷೇರುಗಳನ್ನು ಕೊಳ್ಳುವುದು ಮಾರಾಟಮಾಡುವುದು ಸಾಮಾನ್ಯ. ಹೇಗಿದ್ದರೂ ದಿನದ ಅಂತ್ಯದಲ್ಲಿ ವಹಿವಾಟು ಚುಕ್ತಾ ಆಗುವುದರಿಂದ ಎಷ್ಟು ಲಾಭ ಬಂದರೂ ಸರಿ ಎಂದುಕೊಳ್ಳುವರು.  ಅದರ ಹಿಂದೆ ಅಡಗಿರುವ ಹಾನಿಯಾಗಬಹುದಾದ ಅಂಶವನ್ನು ಗಮನಿಸದೆ ವಹಿವಾಟಿಗೆ ಮುಂದಾಗುವರು,  ಈ ಪ್ರಕ್ರಿಯೆಯಲ್ಲಿ ದಿನದ ಮಧ್ಯೆ ಲಭಿಸುವ ಅವಕಾಶಗಳನ್ನುಉಪಯೋಗಿಸಿಕೊಳ್ಳದೆ,  ವಹಿವಾಟು ಚುಕ್ತಾಮಾಡಲು ಕೊನೆಗಳಿಗೆಯವರೆಗೂ ಕಾಯುವರು, ಕಳೆದುಕೊಳ್ಳುವರು.  

    ಸುರಕ್ಷತೆಗೆ ಯಾವ ಕ್ರಮ ಸರಿ

    ಡೇ ಟ್ರೇಡಿಂಗ್‌ ನಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳಲ್ಲಿ ಅಳವಡಿಸಿಕೊಂಡಲ್ಲಿ ಸುರಕ್ಷತೆಯ ಜಾಲ ನಿರ್ಮಿಸಿಕೊಳ್ಳಬಹುದಾಗಿದೆ.  ಡೇ ಟ್ರೇಡಿಂಗ್‌ ನ ಉದ್ದೇಶದಿಂದ ಖರೀದಿಸುವಾಗ,  ಖರೀದಿಸಿದ ಬೆಲೆಗಿಂತ ಷೇರಿನ ಬೆಲೆ ಇಳಿಕೆ ಕಂಡಲ್ಲಿ ಖರೀದಿಸಿದ ಷೇರುಗಳನ್ನು ಹಣ ಪಾವತಿಸುವುದರೊಂದಿಗೆ ಡೆಲಿವರಿ ತೆಗೆದುಕೊಳ್ಳುವ ಮಟ್ಟಕ್ಕೆ ಸೀಮಿತಗೊಳಿಸಿದಲ್ಲಿ ಬಂಡವಾಳ ಕರಗಿಸುವ ಸಾಧ್ಯತೆ ಮೊಟಕುಗೊಳಿಸಿದಂತಾಗುತ್ತದೆ.   ಹೀಗೆ ಡೆಲಿವರಿ ತೆಗೆದುಕೊಂಡ ಷೇರುಗಳು ಉತ್ತಮ ಗುಣಮಟ್ಟದ್ದಾಗಿರಬೇಕು.  ಈ ಷೇರುಗಳ ಬೆಲೆ ಏರಿಕೆ ಕಂಡಾಗ ಮಾರಾಟ ಮಾಡಿ ಬಂಡವಾಳ ಉಳಿಸಿಕೊಂಡು ಲಾಭಗಳಿಸುವುದು ಸಾಧ್ಯ.ಅಂದರೆ ಗಜಗಾತ್ರದ  ಸಂಖ್ಯೆಯ ಷೇರುಗಳಲ್ಲಿ ವಹಿವಾಟು ನಿರ್ವಹಿಸುವ ಬದಲು, ತಮ್ಮ ಬಂಡವಾಳದ ಸಾಮರ್ಥ್ಯಕ್ಕನುಗಣವಾಗಿ,  ಷೇರುಗಳನ್ನು ಖರೀದಿಸುವುದು ಸೂಕ್ತ,  ಕೇವಲ ಬ್ರೋಕರೇಜ್‌ ಉಳಿಸುವ ಉದ್ದೇಶದಿಂದ ಬಂಡವಾಳ ಕರಗಿಸುವ ಕೃತ್ಯಕ್ಕೆ ಕೈ ಹಾಕುವುದು ಸರಿಯೆನಿಸಲಾರದು.
    ಉದಾಹರಣೆಗೆಈ ಕೆಳಗಿನ ಕಂಪನಿಗಳನ್ನು ಗಮನಿಸಿರಿ:

    ಲುಪಿನ್‌ ಲಿಮಿಟೆಡ್:
    ಶುಕ್ರವಾರದಂದು ಲುಪಿನ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ದಿನದ ಆರಂಭದಲ್ಲಿ ರೂ.932 ರ ಸಮೀಪದಲ್ಲಿದ್ದು  ನಂತರ ಏಕಮುಖವಾಗಿ ಏರಿಕೆ ಕಂಡು ರೂ.1,020 ರವರೆಗೂ ಜಿಗಿಯಿತು.  ನಂತರ ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ ಕುಸಿತದೊಂದಿಗೆ ಈ ಕಂಪನಿಯ ಷೇರಿನ ಬೆಲೆಯು ಗರಿಷ್ಠದಿಂದ ಕುಸಿದು ರೂ.985 ರವರೆಗೂ ಕುಸಿದು ಮತ್ತೆ ಕ್ಷಿಪ್ರಗತಿಯಲ್ಲಿ ಏರಿಕೆಯಿಂದ ರೂ.1,023 ಕ್ಕೆ ಏರಿಕೆ ಕಂಡಿತು.  ಈ ಏರಿಳಿತಗಳ ಜೋಕಾಲಿಯಲ್ಲಿ ಜೀಕುತ್ತಿದ್ದ ಈ ಷೇರಿನ ಬೆಲೆ ಡೇ ಟ್ರೇಡಿಂಗ್‌ ಗೂ ಉತ್ತಮ ಅವಕಾಶ ಒದಗಿಸಿತು.

    ಟಾಟಾ ಸ್ಟೀಲ್‌ ಲಿಮಿಟೆಡ್:

    ಶುಕ್ರವಾರ, 14 ರಂದು ಈ ಕಂಪನಿಯ ಷೇರಿನ ಬೆಲೆ ದಿನದ ಆರಂಭದಲ್ಲಿ ರೂ.409 ರ ಸಮೀಪದಿಂದ ಪುಟಿದೆದ್ದು ರೂ.430 ರವರೆಗೂ ಜಿಗಿತ ಕಂಡಿತು.   ನಂತರ ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ ನ ಇಳಿಕೆಯೊಂದಿಗೆ  ಷೇರಿನ ಬೆಲೆ ರೂ.412 ರ ವರೆಗೂ ಜಾರಿ ರೂ.418 ರ ಸಮೀಪ ಕೊನೆಗೊಂಡಿತು.   ಖರೀದಿಸಿದ ಷೇರಿನ ಬೆಲೆ ದಿನದ  ಮಧ್ಯೆಯೇ ಏರಿಕೆ ಕಂಡಲ್ಲಿ ಲಾಭ ನಗದೀಕರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅವಕಾಶ ವಂಚಿತರಾಗಬಹುದು ಎಂಬುದನ್ನು ಈ ಉದಾಹರಣೆಯುಎತ್ತಿಹಿಡಿದಿದೆ.

    ಲಾರ್ಸನ್ ಅಂಡ್‌ ಟೋಬ್ರೊ ಲಿಮಿಟೆಡ್:
    14 ರಂದು  ಈ ಕಂಪನಿ ಷೇರಿನ ಬೆಲೆಯು ರೂ.998 ರ ಸಮೀಪದಿಂದ ರೂ.1,017ರವರೆಗೂ ಏರಿಕೆ ಕಂಡು ರೂ.994 ಕ್ಕೆ ಇಳಿದು, ನಂತರ ರೂ.1,014 ಕ್ಕೆ ಜಿಗಿದು,  ದಿನದ  ಅಂತಿಮ ಗಂಟೆಯಲ್ಲಿ ರೂ.977 ಕ್ಕೆ ಜಾರಿ ರೂ.982 ರ ಸಮೀಪ ಕೊನೆಗೊಂಡಿದೆ. 

     ಒಂದೇ ದಿನ ಈ ರೀತಿಯ ಭರ್ಜರಿ ಏರಿಳಿತ ಪ್ರದರ್ಶಿಸುವ ಈಗಿನ ಪೇಟೆಯಲ್ಲಿ ಕಡಿಮೆ ಸಂಖ್ಯೆಯ ಷೇರುಗಳಲ್ಲಿ, ಅಪಾಯದ ಅರಿವಿನಿಂದ, ಡೇ ಟ್ರೇಡಿಂಗ್‌ ನಡಸಬಹುದು.  ದಿನದ ಮಧ್ಯೆಯೇ ಲಾಭಗಳಿಕೆಯ ಅವಕಾಶವಿದ್ದಲ್ಲಿ ನಗದೀಕರಿಸಿಕೊಂಡು ಸುರಕ್ಷಿತವಾಗಿರಬಹುದು.  ಇಲ್ಲದಿದ್ದಲ್ಲಿ ಡೆಲಿವರಿ ತೆಗೆದುಕೊಳ್ಳುವ ಹವ್ಯಾಸದಲ್ಲಿದ್ದರೆ ಉತ್ತಮ.  ಕಾರಣ ಅಗ್ರಮಾನ್ಯ ಕಂಪನಿಗಳೂ ಸಹ ಹೆಚ್ಚಿನ ಏರಿಳಿತಗಳಿಂದ ಲಾಭಗಳಿಕೆಯ ಅವಕಾಶಗಳನ್ನು ಸೃಷ್ಠಿಸಿಕೊಡುತ್ತವೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಮೌನದ ಪ್ರೀತಿ ಮಾತಾದಾಗ

    ಅನೇಕ ಹೊಸ ಲೇಖಕರು ಕನ್ನಡಪ್ರೆಸ್. ಕಾಮ್ ನ ಮೇಲೆ ಪ್ರೀತಿ ಇಟ್ಟು ತಮ್ಮ ಬರಹಗಳನ್ನು ಕಳಿಸುತ್ತಿದ್ದಾರೆ. ತಮ್ಮ ಬರಹಗಳು ಫೇಸ್ ಬುಕ್ ಆಚೆಗಿನ ಅನೇಕ ಓದುಗರನ್ನು ಸೇರಬೇಕೆಂಬ ಬಯಕೆ ಅವರದ್ದು . ಹೀಗಾಗಿ ಇಂಥ ಲೇಖನಗಳಿಗೆ ಅವಕಾಶ ನೀಡಲು ಈ ವೇದಿಕೆ ಆರಂಭಿಸುತ್ತಿದ್ದೇವೆ. ಇದು ನಿಮ್ಮದೇ ವೇದಿಕೆ. ನಿಮ್ಮ ಬರಹಗಳನ್ನು [email protected] ಇಲ್ಲಿಗೆ ಇ ಮೇಲ್ ಮಾಡಿ

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    ನೂರಾರು ಬಣ್ಣ ಬಣ್ಣದ ಮನಸ್ಸುಗಳಿಂದ ಕೂಡಿದ ಈ ಜಗತ್ತಲ್ಲಿ ಪ್ರೀತಿಯೆಂಬ ಸಿಂಚನ ಇಲ್ಲದೆ ಇದ್ದರೆ ಏನು ಚೆನ್ನ. ಪ್ರೀತಿಯೆಂದರೆ ಕೇವಲ ಯೌವನಕ್ಕೆ ಮಾತ್ರ ಸೀಮಿತವಲ್ಲ.

    ಪೋಷಕರ ಮಕ್ಕಳ ಪ್ರೀತಿ, ಅಣ್ಣ-ತಂಗಿ ಅಕ್ಕ ತಮ್ಮ, ಸ್ನೇಹಿತರ ನಡುವೆ….. ಹೀಗೆ ಪ್ರತಿಯೊಂದು ಜೀವಿಗಳ ಮನದ ಮೂಲೆಯಲ್ಲಿ ಪ್ರೀತಿಯು ಅವಿತು ಕುಳಿತಿರುತ್ತದೆ. ಹಾಗೆ ನೋಡಿದ್ರೆ ಮೂಕಪ್ರಾಣಿಗಳ ಮಧ್ಯೆಯು ಪ್ರೀತಿಯ ಬಾಂಧವ್ಯ ಇರುತ್ತೆ. ಅವು ಕೂಡ ತನ್ನದೇ ಆದ  ರೀತಿಯಲ್ಲಿ ವ್ಯಕ್ತಪಡಿಸುತ್ತವೆ. ಆದರೆ ಅತೀ ಬುದ್ಧಿಜೀವಿ ಪ್ರಜ್ಞಾವಂತ ಪ್ರಾಣಿ ಎನಿಸಿಕೊಂಡ ಮನುಷ್ಯ ತನ್ನಲ್ಲಿ ಇತರರ ಪರ ಇರುವ ಪ್ರೇಮ ಭಾವನೆಯನ್ನು ಕೇವಲ ಮನಸ್ಸಲ್ಲಿ ಮುಚ್ಚಿಟ್ಟು ವ್ಯಕ್ತಪಡಿಸದೇ ಪ್ರಯತ್ನಿಸದಿದ್ದರೆ ಎಷ್ಟೊ ಸಾರಿ ಸಂಬಂಧಗಳು ಮೂಕಸನ್ನೆಯಲ್ಲಿ ಬತ್ತಿ ಹೋಗುತ್ತವೆ.

    ಎಷ್ಟೋ ಸಾರಿ ಅತೀ ಚಿಕ್ಕ ವಿಷಯಗಳಲ್ಲಿ ವಿಶ್ವಾಸದ ಮಾತುಗಳಿಂದ ಬಂಧಗಳ ಬುಡಗಳು ಗಟ್ಟಿಯಾಗುತ್ತವೆ. ಎಷ್ಟೋ ಕನಸುಗಳಿಗೆ ಹುಮ್ಮಸ್ಸು ನೀಡುತ್ತವೆ. ಮನೆಯ ಎಲ್ಲರನ್ನೂ  ಪ್ರೀತಿಸುವ ಗೃಹಿಣಿಗೆ ತನ್ನ ಪತಿ ಬಂದು ನಿನ್ನ ಮನಸ್ಸು ತುಂಬಾ ಒಳ್ಳೇದು ಅಂತ ಅಂದರೆ ಸಾಕು ಅವಳ ನಗುವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಯಸ್ಸಾದವರ ಜೊತೆ ನಗುನಗುತ್ತ ಏನೇ ಮಾತನಾಡಿದರು ಅವರಿಗೆ ಖುಷಿ. ಹೀಗೆ ಸಹಸ್ರಾರು ಸಂದರ್ಭಗಳಲ್ಲಿ ಮಾತಿನಿಂದ ನಿಮ್ಮ ಭಾವನೆಗಳನ್ನು ಪ್ರೇಮವನ್ನು ಹೇಳಿಕೊಂಡರೆ ನಿಮ್ಮ ಖುಷಿ ದ್ವಿಗುಣವಾಗುವುದಲ್ಲದೆ, ಸಂಬಂಧಗಳು ಚಿರಕಾಲ ಆನಂದದಿಂದ ಇರುತ್ತವೆ.

    ಸಂಕಷ್ಟದ ಸಮಯದಲ್ಲಿ ಸಾಂತ್ವನ ಹಾಗೂ ಪ್ರೀತಿಯಿಂದ ಆಡಿದ ಎರಡು ಮಾತುಗಳು ಎಷ್ಟೋ ಬತ್ತಿಹೋದ ದಣಿದ ಮನಸ್ಸನ್ನು ಪುಳಕಗೊಳಿಸುತ್ತವೆ. ಅದಕ್ಕೆ ‘ಮಧುರವಾದ ಪ್ರೀತಿಯ ಮಾತುಗಳನ್ನು ಹೇಳಿ ನಿಮ್ಮ ನಾಲಿಗೆಯೊಳ್’ ಎಂಬುದು ಒಂದು ಅನಿಸಿಕೆ. 

    Photo by Jasmine Carter from Pexels

    ನಿವೃತ್ತಿ ಜೀವನಕ್ಕೆ ಹೂಡಿಕೆ : ಯಾವುದಕ್ಕೂ ಇರಲಿ ಮತ್ತೊಂದು ಪ್ಲಾನ್

    ಕಥೆ ಹೇಳುವುದು , ಕೇಳುವುದು ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಕಥೆಗಳನ್ನು ಜಗತ್ತಿಗೆ ಹೇಳುವುದೆಂದರೆ ಇನ್ನೂ ಖುಷಿ. ಈ ಕಥೆಗಳಲ್ಲಿ ನಮ್ಮ ಸಾಧನೆ   ಅಡಗಿದೆ ಅಂದರಂತೂ ಅದನ್ನು ವರ್ಣಿಸಿದ್ದೇ ವರ್ಣಿಸಿದ್ದು. ಕೇಳುವವರಿದ್ದರೆ ಹೇಳುವವರಿಗೇನು ಅಲ್ಲವೆ? ಅದೇ ರೀತಿ  ಹಣಕಾಸು ವಿಷಯಕ್ಕೆ ಬಂದರೆ ಹೇಳುವವರ ಉತ್ಸಾಹ ಇನ್ನಷ್ಚು ಹೆಚ್ಚುತ್ತದೆ.  ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಳ್ಳುತ್ತ ತಮ್ಮ ಹೂಡಿಕೆಯ ಕಥೆಗಳನ್ನು ಹೇಳಿದ್ದೇ ಹೇಳಿದ್ದು. ಕೇಳಿದವರು ಅಬ್ಬಾ ಇವರೆಷ್ಟು ಬುದ್ಧಿವಂತರು ಅಂತ ಅಂದು ಕೊಂಡಿದ್ದೇ ಅಂದು ಕೊಂಡಿದ್ದು.

    ನಿಮಗೂ ಇಂಥದ್ದು  ಅನುಭವಕ್ಕೆ ಬಂದೇ ಇರುತ್ತದೆ. ಅವತ್ತು  ಜೆಪಿ ನಗರ ಏನೂ ಇರಲಿಲ್ಲ ಕಂಣ್ರೀ… ನಾನು ಅಲ್ಲಿ ಸೈಟ್ ತಗೊಂಡಾಗ ನನ್ನ ಕಲೀಗ್ಸ್ ಎಲ್ಲಾ ಆ ಕಾಡಲ್ಲಿ ಯಾಕಪ್ಪ ಸೈಟು ತಗೊತೀಯ  ಅಂದ್ರು. ಅದೇನೋ ಗೊತ್ತಿಲ್ಲ ಅವತ್ತು ಬರೇ ನಲವತ್ತು ಸಾವಿರ . 60 × 40 ತಗೊಂಡು ಬಿಟ್ಟೆ . ಬಿಡಿಎ ನೂ ಅಲ್ಲ. ಇವತ್ತು ನೋಡಿ.. ಕೋಟಿ.. ಕೋಟಿ ರೀ ಅಂತ ಈಗಷ್ಟೆ ರಿಟೈರ್ ಆಗಿರುವ ದಿವಾಕರ ಹೇಳುತ್ತಿದ್ದರೆ ಪಕ್ಕದಲ್ಲಿದ್ದ ನಾಗೇಶ, ಮಂಜುನಾಥ, ಸುರೇಶ ಅವರುಗಳು ದಿವಾಕರನ  ದೂರದೃಷ್ಟಿಯನ್ನು ಹೊಗಳಿದ್ದೆ ಹೊಗಳಿದ್ದು.

    ಅದೇ ರೀತಿ ಪಕ್ಕದ್ಮನೆ ಕಮಲಮ್ಮ ತಮ್ಮ ಮದುವೆ ಆದ    ಕೂಡಲೆ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ನ ಚಿನ್ನದ ಅಂಗಡಿಯಲ್ಲಿ  ಚೀಟಿ  ಹಾಕಿದ್ದು ಅದರಿಂದ ವರ್ಷಕ್ಕೊಂದರಂತೆ ಬಂಗಾರ ಕೊಂಡದ್ದನ್ನು ಹೇಳುತ್ತಿದ್ದರೆ… ಕಮಲಮ್ಮನ ಬುದ್ಧಿ ನಮಗೆ ಯಾಕೆ ಬರಲಿಲ್ಲ ಅಂತ ನೆರೆದ ಮಹಿಳೆಯರು ಮರುಗಿದ್ದೇ ಮರುಗಿದ್ದು. ಅವತ್ತು ಚಿನ್ನ ತೊಗೊಂಡಿದ್ದಕ್ಕೆ ಆಯಿತು. ಈಗಿನ ಬೆಲೆಯಲ್ಲಿ ಬಂಗಾರ ಕೊಳ್ಳೋಕೆ ಆಗುತ್ತಾ ಅಂತ ಕಮಲಮ್ಮ ತಮ್ಮ ಬುದ್ಧಿವಂತಿಕೆಗೆ ತಾವೇ ಬೀಗಿದ್ದೇ ಬೀಗಿದ್ದು.

    ಅದೇ ರೀತಿ ಸ್ಟಾಕ್ ಗಳು. ಅವತ್ತು ಇನ್ಫೋಸಿಸ್ ಶೇರು ಕೇಳೋರೇ ಇರಲಿಲ್ಲ. ನನಗೆ ಗೊತ್ತಿತ್ತು ಲಾಂಗ್ ಟೈಮ್ ಗೆ ಇರಲಿ ಅಂತ ಐವತ್ತು ಷೇರು ಹಾಕಿದೆ. ಇವತ್ತು ನೋಡಿ ಆ ಐವತ್ತು ಷೇರು ಎಷ್ಟಾಗಿದೆ ಅಂತ ಶಂಕರಪ್ಪ ಹೇಳುತ್ತಿದ್ದರೆ ಉಳಿದವರು ನಮಗೆ ‌ಅದು ಹೊಳೀಲಿಲ್ಲವಲ್ಲ ಅಂತ ಮರುಗುವವರೆ. ಮಗು ಹುಟ್ಟಿದ ಕೂಡಲೇ ಆರ್ ಡಿ ತೆಗೆದು ಆಕೆಯ ವಿದ್ಯಾಭ್ಯಾಸಕ್ಕೆ ಕೂಡಿಡಲು ಶುರುಮಾಡಿದ ಆನಂದ, ಮನಿ ಬ್ಯಾಕ್ ಪಾಲಿಸಿ ಕೊಂಡ ಅರುಣ್ ಇವರೆಲ್ಲ ಇಂಥದ್ದೇನೂ ಮಾಡದವರ ಕಣ್ಣಲ್ಲಿ ಹೀರೋಗಳು.

    ಹೂಡಿಕೆ ವಿಚಾರಕ್ಕೆ ಬಂದಾಗ ಸಕ್ಸೆಸ್ ಸ್ಟೋರಿಗಳನ್ನು ಹೇಳಿಕೊಳ್ಳುವಾಗಿನ ಆನಂದ ಫೇಲ್ಯೂರ್ ಗಳನ್ನು ಹೇಳಿಕೊಳ್ಳುವಾಗ ಇರುವುದಿಲ್ಲ.  ದಶಕಗಳ ಹಿಂದೆ ನಾವು ಹೆಮ್ಮೆಯಿಂದ ಪ್ರೀಮಿಯಮ್ ಕೊಟ್ಟು ಖರೀದಿಸಿದ ಟೆಲಿಕಾಮ್ ಸ್ಟಾಕ್ ಗಳು ಇವತ್ತು ಅಸಲಿಗೂ ಸಂಚಕಾರ ತಂದಿರುವ ಸಂಗತಿಯನ್ನು ನಾವು ಬಹಿರಂಗ ಪಡಿಸುವುದೇ ಇಲ್ಲ.  ಬಹು ಬೇಡಿಕೆಯ ಐಪಿಒ ಸಿಕ್ಕ ಅದೃಷ್ಟಶಾಲಿ ನಾವೆಂದು ಊರೆಲ್ಲಾ ಹೇಳಿಕೊಂಡು ಬಂದವರು ಆ ಷೇರು ಇವತ್ತು ಮಾರಿದರೆ ಸ್ಟಾಕ್ ಬ್ರೋಕರ್ ಕಮಿಷನ್ ಕೂಡ ಹುಟ್ಟುವುದಿಲ್ಲ ಎನ್ನುವುದನ್ನು ಅಪ್ಪಿ ತಪ್ಪಿಯೂ ಬಾಯಿ ಬಿಡುವುದಿಲ್ಲ. ಯಾರದರೂ ಆ ಬಗ್ಗೆ ಏನಾದರು ಕೇಳಿದರೆ ಓ ಅದಾ ಅಂತ ಏನೋ ವಿವರ ಕೊಟ್ಟು ತಮ್ಮ ತಪ್ಪೇನು ಅದರಲ್ಲಿ ಆಗಿಲ್ಲ ಎನ್ನುವಂತೆ ಇರುತ್ತೇವೆ.

    ಹತ್ತು ವರುಷಗಳ ಹಿಂದೆ ಯಲಹಂಕದ ಹತ್ತಿರ  ಕೊಂಡ ಎರಡು ರೂಮಿನ ಪುಟ್ಟ ಫ್ಲಾಟಿಗೆ ಹೋಗಲು ಆಗದೆ ಇತ್ತ  ಬಾಡಿಗೆಗೆ ಬಿಡೋಣ ಅಂದರೆ ಜನರು ಬರದೆ ಇರುವ ಸಂಗತಿಯನ್ನು ಬಾಯಿ ಬಿಡುವುದಿಲ್ಲ.  ಈಗ ಮಾರಿದರೂ ಅಸಲು ಬಂದೇ ಬರುತ್ತದೆ ಎಂದು ಜಂಭ ಕೊಚ್ಚಿ ಕೊಳ್ಳುತ್ತೇವೆಯೇ ವಿನ: ವಾಸ್ತವ ಸ್ಥಿತಿಯನ್ನು ಮನಸ್ಸು ಒಪ್ಪಿಕೊಳ್ಳುವುದಿಲ್ಲ.

    ಕೆಲವೊಮ್ಮೆ ಕೆಲವರು ಹೂಡಿಕೆ ವಿಚಾರಗಳಿಗೆ ಸಂಬಂಧಿಸಿದಂತೆ ಟೀವಿ  ಶೋಗಳಿಂದ, ವಾಟ್ಸಪ್ ಫಾರ್ವರ್ಡ್ ಗಳಿಂದ ಪ್ರೇರಿತರಾಗಿ ತಮ್ಮದೆ  ಆದ ಥಿಯರಿ ಹೇಳುವುದನ್ನು ಕೇಳಿದಾಗ ನನಗೆ ಅಚ್ಚರಿಯಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಆ ಕ್ಷಣವಷ್ಟೆ ಮುಖ್ಯ ಅನ್ನುವುದನ್ನು ಹಲವರು ಮರತೇ ಬಿಡುತ್ತಾರೆ. ಷೇರು ಒಂದರ ಬೆಲೆ ಕಳೆದ 52 ವಾರಗಳಲ್ಲಿ ಶೇಕಡ 70ರಷ್ಟು ಕುಸಿತ ಆದ  ಬಗ್ಗೆ ತಮ್ಮದೆ ವ್ಯಾಖ್ಯಾನ ನೀಡುವ ಕೆಲವರು ಅದು ಮತ್ತೆ ಏರಲು ಕಾರಣವೇ ಉಳಿದಿಲ್ಲ ಎಂಬುದನ್ನು ಮರೆತು ತಮ್ಮದೇ ವಾದಕ್ಕೆ ಕಟ್ಟು ಬೀಳುತ್ತಾರೆ.

    ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ  ಪ್ರತಿಫಲ ಪಡೆಯುವಲ್ಲಿ ಹೂಡಿಕೆ ದಾರರ ಪಾತ್ರ ಗೌಣ. ತಮ್ಮದಲ್ಲದ ತಪ್ಪಿಗೆ ಬೆಲೆಗಳು ಇಳಿದರೂ ಅವರೇನೂ ಮಾಡುವ ಹಾಗಿಲ್ಲ. ಅಂದರೆ ತಮ್ಮ ಹಣವನ್ನು ನಮ್ಮದು ಎಂದು ಕೊಳ್ಳುತ್ತಲೆ ಇನ್ನೊಬ್ಬರ ಕೈಗೆ ನೀಡುವುದು. ವಾಸ್ತವವಾಗಿ ಇವುಗಳ ಬೆಲೆಯನ್ನು ನಿರ್ಧರಿಸಿರುವವರು ನೀವು ಆಗಿರುವುದೇ ಇಲ್ಲ.  ಹೀಗಾಗಿ ಸಕ್ಸೆಸ್ ಸ್ಟೋರಿಗಳನ್ನು ಕೇಳುವಾಗ ಇದರಲ್ಲಿ ಇವರ ಪಾತ್ರವೇನು ಎಂದು ನನಗೆ ಅನುಮಾನ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಮಾಡಿದ ತ್ಯಾಗ ಪ್ರಮುಖ ಕಾರಣವಾಗಿರುತ್ತದೆಯೇ ಹೊರತು ಅವರು ಯಾವುದೋ ಪಾಲಿಸಿಯಲ್ಲಿ ಹೂಡಿದ್ದಲ್ಲ. ಅದೇ ರೀತಿ ಯಾವದೋ ಸಿಸ್ಟಮ್ಯಾಟಿಕ್ ಹೂಡಿಕೆಯೂ ಅಲ್ಲ.

    ಆದ್ದರಿಂದ ಸಕ್ಸೆಸ್ ಸ್ಟೋರಿಗಳನ್ನಷ್ಟೇ ಕೇಳಿ  ಅದೇ ಹಾದಿಯಲ್ಲಿ ಮುನ್ನುಗ್ಗಬಾರದು. ಯಾವುದೇ ಹೂಡಿಕೆ ಎಲ್ಲಾ ಸಮಯದಲ್ಲೂ ಕೈ ಹಿಡಿಯುವುದಿಲ್ಲ ಎಂಬುದು ಗೊತ್ತಿರಬೇಕು. ಉದಾಹರಣೆಗೆ ಬ್ಯಾಂಕ್ ಬಡ್ಡಿ ದರ ಈ ಪಾಟಿ ಇಳಿಯಬಹದು ಎಂದು ಯಾರು ಊಹಿಸಿದ್ದರು? ನಂಬಿದ ಬ್ಯಾಂಕುಗಳೇ ಕೈ ಕೊಟ್ಟ ಉದಾಹರಣೆಗಳು ಇವೆ.  ಆದ್ದರಿಂದ  ಹೂಡಿಕೆ ಮಾಡಿ, ಆದರೆ ಅದು  ಕೈ ಕೊಟ್ಟಾಗ ಹೆದರದೆ ಪ್ಲಾನ್ ಬಿ ಯತ್ತ ಯೋಚಿಸಿ.

    Photo by Markus Spiske on Unsplash

    ಸ್ವಾತಂತ್ರ್ಯದಿನದಂದು ಮನೆಗೆ ಬಂದ ವಿಶೇಷ ಅತಿಥಿ!

    ಮುಂಜಾನೆ ಎದ್ದು ಬಾಗಿಲು ತೆರೆದಾಗ ಎದುರುಗೊಂಡ ಅಪರೂಪದ ಆ ಅತಿಥಿ ಯಾರು? ಅವರು ಮನೆಯೊಳಗೆ ಸದ್ದಿಲದೇ ಪ್ರವೇಶಿಸಿದ್ದು ಯಾಕಿರಬಹುದು? ಅವರ ಪೂರ್ವಪರವನ್ನು ವಿಚಾರಿಸಿದಾಗ ಸಿಕ್ಕಿದ ಮಾಹಿತಿಯಾದರು ಏನು..?

    ಬೆಳ್ಳಂಬೆಳಿಗ್ಗೆ, ಹೊರಗೆ ಚಿಟಿಪಿಟಿ ಮಳೆ ಹನಿಯುತಿತ್ತು. ಬಾಗಿಲು ತೆರೆದಾಗ ದ್ವಾರದ ಬಳಿ ಅಪರೂಪದ ವಿಶೇಷ ಅತಿಥಿಯೊಬ್ಬರು ಎದುರಾದರು. ಬಾಗಿಲು ತೆರೆಯುತ್ತಿದ್ದಂತ್ತೆ ಸೀದಾ ಮನೆಯೊಳಗೆ ತಮ್ಮ ಪಾದವನ್ನು ಇಟ್ಟರು. ನೋಡೋಣ ಇವರು ಎಲ್ಲಿಗೆ ಹೋಗುತ್ತಾರೆಂದು ಸುಮ್ಮನೆ ಗಮನಿಸುತ್ತಾ ನಿಂತೆ. ಪಕ್ಕದಲ್ಲಿ ನಿಂತಿದ್ದರೂ ಅತಿಥಿಗೆ ನನ್ನ ಕಡೆ ಗಮನವೇ ಇರಲಿಲ್ಲ. ಅವರ ಪಾಡಿಗೆ ಅವರು ನಿಧಾ…….ನವಾಗಿ ಒಳಗೆ ಬರುವುದರಲ್ಲೇ ಇದ್ದರು. ಮನೆಗೆ ವಿಶೇಷ ಅತಿಥಿ ಬಂದಿದ್ದರಿಂದ ಯಾವುದಕ್ಕೂ ಇರಲಿ ಎಂದು ಅಲ್ಲೇ ಇದ್ದ ಮೊಬೈಲ್ ಫೋನ್ ತೆಗೆದುಕೊಂಡು ಒಂದೆರೆಡು ಫೋಟೊ ಕ್ಲಿಕ್ ಮಾಡಿದೆ. ನನ್ನ ಫೋಕಸ್ ಗೆ ಅತಿಥಿ ಒಂದು ಪೋಸ್ ಕೊಡಬಹುದಾ ಅಂದುಕೊಂಡೆ. ಇಲ್ಲ, ಅವರು ಅವರ ಪಾಡಿಗೆ ಸಾಗುವುದರಲ್ಲೇ ಮಗ್ನರಾಗಿದ್ದರು. “ಅಲ್ಲಾ, ಇವರು ಮನೆಯ ಹೊರಗೆ ಅಲ್ಲಿ ಇಲ್ಲಿ ಇರಬೇಕಾದವರು, ಒಳಗೆ ಏಕೆ ಬರುತ್ತಿದ್ದಾರೆಂದು” ಅರ್ಥವಾಗಲಿಲ್ಲ. ರಾತ್ರಿ ಇಡೀ ಮಳೆ ಸುರಿದಿದ್ದರಿಂದ ಹೊರಗೆ ತುಂಬಾ ತಂಡಿ ಇತ್ತು; ಮನೆಯೊಳಗೆ ಸ್ವಲ್ಪ ಹೊತ್ತು ಬೆಚ್ಚಗೆ ಇದ್ದು ಹೋಗೋಣ ಎಂದು ಆಗಮಿಸಿರಹುದೇ? ಕೊರೊನಾ ಹಾವಳಿ ತುಂಬಾ ಮಿತಿಮೀರಿದೆ. ‘ಯಾವುದಕ್ಕೂ ಮನೆ ಒಳಗಡೆ ಸೇಫ್ ಆಗಿ ಇರೋಣ’ ಎಂದು ಬಂದಿರಹುದೇ? ಅಥವಾ, ಇಂದು ಸ್ವಾತಂತ್ರ್ಯ ದಿನಾಚರಣೆ, ಶುಭಾಶಯ ಕೋರಲು ಬಂದಿರಲೂಬಹುದು.!

    ವಿಶೇಷವೊ, ಅಪರೂಪವೋ, ಅತಿಥಿ, ಅತಿಥಿಯೇ; ಸತ್ಕಾರ ಮಾಡಲೇ ಬೇಕು. ಆದರೆ ಅವರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ, ಅವರ ಪಾಡಿಗೆ ಅವರು ಮನೆಯ ಹೊಸ್ತಿಲನ್ನು ದಾಟಿ ಒಳಗೆ ಧಾವಿಸುದರಲ್ಲೇ ಇದ್ದರು. ಬರುವಾಗ ಹಾಗೇ ‘ಕೈ ಬೀಸಿಕೊಂಡು’ ಬರಲಿಲ್ಲ. ಬೆನ್ನ ಮೇಲೆ ತನ್ನ ‘ಮನೆ’ಯನ್ನೇ ಹೊತ್ತು ಬಂದಿದ್ದರು..! ಇದು ಯಾವ ಅತಿಥಿಯಪ್ಪಾ ಮನೆಯನ್ನೇ ಹೊತ್ತು ತಂದಿರುವುದು? ಈ ಕೊರೊನಾ ಜೊತೆ ಕೆಲವು ಕಡೆ ನೆರೆ ಹಾವಳಿಯಿಂದಾಗಿ ಮನೆ ಮಠವೆಲ್ಲಾ ಮುಳುಗುತ್ತಿದೆ. ಅಯ್ಯೋ ಪಾಪಾ, ಮುಳುಗುತ್ತಿರುವ ಮನೆಯನ್ನೇ ಹೊತ್ತು ತಂದರೇ….!?

    ‘ಅತಿಥಿ’ಯನ್ನು ಗೌರವದಿಂದ ಕಳುಹಿಸಿ ಕೊಡಬೇಕಾದುದು ನಮ್ಮ ಧರ್ಮ. ಒಂದು ದಪ್ಪ ಪೇಪರ್ ಪೀಸೊಂದನ್ನು ತೆಗೆದುಕೊಂಡು ಅತಿಥಿಯ ಮೂತಿಯ ಹತ್ತಿರ ಇಟ್ಟೆ. “ತನ್ನನ್ನು ಕರೆದೊಯ್ಯಲು ಪಲ್ಲಕಿ ತಂದಿದ್ದಾರೆ” ಎಂದೆನಿಸಿಕೊಂಡಿತೊ ಏನೋ, ನಿರಾಕರಿಸದೇ ‘ಪಲ್ಲಕಿ’ಯನ್ನು ಹತ್ತಿದರು. ‘ಪಲ್ಲಕಿ’ಯನ್ನು ಅಲಂಕರಿಸಿದ ಮೇಲೆ ಅಂಗಳಕ್ಕೆ ತಂದೆ. ಅವರನ್ನು ನೆಲ್ಲಕ್ಕಿಳಿಸಲು ಒಂದೆರೆಡು ಬಾರಿ ‘ಪಲ್ಲಕಿ’ಯನ್ನು ಕೊಡವಿದೆ. ‘ಪಲ್ಲಕಿ’ಯಿಂದ ಇಳಿಯುವಂತೆ ಕಾಣಲಿಲ್ಲ. ಬದಲಾಗಿ ‘ನಾಚಿಕೆ’ಯಿಂದ ಮುದುಡಿಕೊಂಡು ತನ್ನ ‘ಅರಮನೆ’ಯೊಳಗೆ ಸೇರಿಕೊಂಡು ಅಲ್ಲಿಯೇ ಸ್ಥಬ್ಧವಾದರು. ‘ಪಲ್ಲಕಿ’ಯನ್ನು ಅಲ್ಲಿಯೇ ಅಂಗಳದಲ್ಲಿ ಬಿಟ್ಟುಬಂದೆ. ‘ಅತಿಥಿ ಏನು ಮಾಡುತ್ತಿರಬಹುದು’ ಎಂಬ ಕುತೂಹಲದಲ್ಲಿ ಹದಿನೈದು ನಿಮಿಷ ಬಿಟ್ಟು ಹೋಗಿ ನೋಡಿದೆ. ಆಗಲೇ ‘ಪಲ್ಲಕ್ಕಿ’ಯನ್ನಿಳಿದು ನೆಲದ ಮೇಲೆ ಒಂದು ಟ್ರ್ಯಾಕ್ ಎಳೆಯುತ್ತಾ ಮುಂದೆ ಸಾಗುತ್ತಿದ್ದರು. “ಸಾಕಪ್ಪ ಸಾಕು, ನೀನು ಬೇಡ, ನಿನ್ನ ಮನೆಯೂ ಬೇಡ, ನಿನ್ನ ಪಲ್ಲಕಿಯಂತೂ ಬೇಡವೇ ಬೇಡ, ನಾನು ನನ್ನ ಆವಾಸಸ್ಥಾನದಲ್ಲೇ ಸ್ವತಂತ್ರವಾಗಿ ಬದುಕುವೆ” ಎಂದು ಭಾಸವಾಗುವಂತೆ ಅತಿಥಿಯು ಹಿತ್ತಲ ಕಡೆ ಮುಖ ಮಾಡಿ ತೆವಳುತ್ತಾ ಸಾಗಿದರು.

    ಈ ದಿನ ಮನೆಗೆ ಬಂದಿರುವ ಅತಿಥಿ ಬೇರೆ ಯಾರೂ ಅಲ್ಲ. ನಮ್ಮ ಬಸವ. ಐ ಮೀನ್, ಬಸವನ ಹುಳು. ಮುಂಗಾರು ಶುರುವಾದ ಮೇಲೆ ಪಶ್ಚಿಮ ಘಟ್ಟದ ತಪ್ಪಲಿನ ನಮ್ಮ ಸುತ್ತಲಿನ ಪರಿಸರದಲ್ಲಿ ಆಗಮಿಸುವ ಅತಿಥಿಗಳಲ್ಲಿ ಇವರೂ ಒಬ್ಬರು. ಹಿತ್ತಲಲ್ಲಿ ಇರಬೇಕಾದ ಬಸವನ ಹುಳು ಈ ದಿನ ಬೆಳಿಗ್ಗೆ ದಾರಿ ತಪ್ಪಿ ನಮ್ಮ ಮನೆಯೊಳಗೆ ಬಂದಿರಬೇಕು.

    ಇಂತಿಪ್ಪ ವಿಶೇಷ ಅತಿಥಿಯ ವಿವರಗಳನ್ನು ಕಲೆಹಾಕಲು ಅಂತರ್ಜಾಲದೊಳಗೆ ಇಣುಕಿದಾಗ ಸಿಕ್ಕ ಮಾಹಿತಿಯಲ್ಲಿ ಕೆಲವು ಆಸಕ್ತಿದಾಯಕ ಅಂಶಗಳು ಇಂತಿವೆ.

     ಈ ವರೆಗೆ ಗುರುತಿಸಲ್ಪಟ್ಟ ಸುಮಾರು 1.5 ಲಕ್ಷ ಸಾಗರ, ಸಿಹಿನೀರು ಮತ್ತು ನೆಲ ಮೃದ್ವಂಗಿ ಪ್ರಭೇಧಗಳಲ್ಲಿ ಬಸವನ ಹುಳುಗಳು ಕೂಡ ಸೇರಿವೆ.

     ನೆಲದ ಮೇಲೆ ಜೀವಿಸುವುದರಿಂದ ಇದನ್ನು ಭೂ ಬಸವನ ಎಂಬ ಹೆಸರಿನಿಂದಲೂ ರೆಯಲಾಗುತ್ತದೆ.

     ಇಲಿ, ಹೆಗ್ಗಣ, ಪಕ್ಷಿಗಳು, ಹಾವು ಮತ್ತು ಇತರ ಸರೀಸೃಪಗಳಿಗೆ ಹಾಗೂ ಕೆಲವು ಅಕಶೇರುಕಗಳಿಗೆ ಭೂ ಬಸವನಗಳು ಆಹಾರ. ಈ ಪ್ರಾಣಿಗಳಿಗೆ ಇತರ ಪೋಷಕಾಂಶಗಳ ಜೊತೆಗೆ ಸಮೃದ್ಧವಾಗಿ ಕ್ಯಾಲ್ಸಿಯಂ ಪಡೆಯಲು ಬಸವನಹುಳು ಒಳ್ಳೆಯ ಆಹಾರ.

     ಇವುಗಳು ಉಭಯಲಿಂಗಿ, ಅರ್ಥಾತ್ ಗಂಡು ಮತ್ತು ಹೆಣ್ಣು ಎರಡೂ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿವೆ. ಆದರೆ, ಅವುಗಳು ಸ್ವತಂತ್ರವಾಗಿ ಸಂತಾನೋತ್ಪತ್ತಿ ಮಾಡುವುದು ವಿರಳ. ಒಂದು ಬಸವನ ತನ್ನ ಸಂಗಾತಿಯೊಂದಿಗೆ ಪ್ರಣಯವನ್ನು ಹೂಡುತ್ತದೆ. ನಂತರ ಅವೆರೆಡೂ ಮೊಟ್ಟೆಗಳನ್ನು ಇಡುತ್ತವೆ.

     ಬಸವನ ಹುಳುಗಳು ತಮ್ಮ ಮೃದುವಾದ ದೇಹವನ್ನು ಒಣಗದಂತೆ ನೋಡಿಕೊಳ್ಳಲು ಲೋಳೆಯನ್ನು ಸ್ರವಿಸುತ್ತಾ ಇರುತ್ತವೆ. ಪಾದದಿಂದಲೂ ಲೋಳೆಯನ್ನೂ ಸ್ರವಿಸುತ್ತಾ ತಾನು ನಡೆಯುವ ಹಾದಿ ಎಷ್ಟೇ ಒರಟು ಅಥವಾ ಹರಿತವಾಗಿದ್ದರೂ ಮುಂದೆ ಸಾಗಬಲ್ಲವು.

     ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ಭಾರತದಲ್ಲಿ ಈ ವರೆಗೆ ಸುಮಾರು 1129 ಬಸವನ ಹುಳುವಿನ ಪ್ರಭೇದಗಳನ್ನು ಗುರುತಿಸಲಾಗಿವೆ. ಅವುಗಳಲ್ಲಿ ಹೆಚ್ಚಿನವು ಸ್ಥಳೀಯ ಪ್ರಭೇದಗಳಾಗಿವೆ.

     ಬಸವನ ಹುಳು ತುಂಬಾ ಸಂವೇದನಾಶೀಲ ಪ್ರಾಣಿಯಾಗಿದ್ದು ಹವಾಮಾನ ಮತ್ತು ಪರಿಸರದಲ್ಲಿ ಉಂಟಾಗುವ ಬದಲಾವಣೆಗಳನ್ನು (ವೈಪರೀತ್ಯ) ತಿಳಿಯಲು ಒಂದು ಸೂಚಕವಾಗಿ (Ecological indicator) ಜೀವ-ಪರಿಸರ ವಿಜ್ಞಾನಿಗಳಿಗೆ ನೆರವಾಗುತ್ತವೆ.

     ಭೂ ಬಸವನಗಳಲ್ಲಿ ಕೆಲವು ಪ್ರಭೇದಗಳು, ಡೆರೋಸೆರಸ್ ಲೇವ್, ಲಾವಿಕೌಲಿ ಸಾಲ್ಟ್, ಮ್ಯಾಕೊಕ್ಲೈಮಸ್ ಇಂಡಿಕಾ, ಬೆಳೆಗಳನ್ನು ತಿಂದು ಹಾಳು ಮಾಡುವುದರಿಂದ ಅವುಗಳ ನಿಯಂತ್ರಣ ರೈತರಿಗೆ ಒಂದು ತಲೆನೋವು.

     ಬಸವನವು ಪಾಲಿಫಾಗಸ್ (ಬಹುಭಕ್ಷಕ), ಅಂದರೆ ಅವುಗಳು ನಾನಾ ತರದ ಸಸ್ಯಗಳ ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ, ಹಾಗೆಯೇ ಕೊಳೆಯುತ್ತಿರುವ ಸಾವಯವ ಪದಾರ್ಥಗಳನ್ನೂ ಜೀರ್ಣಿಸುತ್ತವೆ.

     ಭೂ ಬಸವನಗಳು ಆಹಾರ ಜಾಲದಲ್ಲಿ ಒಂದು ಪ್ರಮುಖ ಕೊಂಡಿಯಾಗಿದ್ದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

    Photo by Krzysztof Niewolny on Unsplash

    ಯಾವುದರಿಂದ ಸ್ವಾತಂತ್ರ್ಯ ಇನ್ನೂ ಸಿಗಬೇಕಿದೆ

    ಕೊರೋನಾ ನಡುವೆಯೇ 74ನೇ ಸ್ವಾತಂತ್ರ್ಯ ದಿನದ ಸಂಭ್ರಮದ ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಯಾವುದರಿಂದ ‌ಸ್ವಾತಂತ್ರ್ಯಇನ್ನೂ ಸಿಕ್ಕಿಲ್ಲ ಎಂದು ನೀವು ಭಾವಿಸಿದ್ದೀರಿ ಎಂಬ ಪ್ರಶ್ನೆಯನ್ನು ನಾಡಿನ ಪ್ರಜ್ಞಾವಂತರ ಮುಂದೆ ಕನ್ನಡ ಪ್ರೆಸ್.ಕಾಮ್ ಇಟ್ಟಿತು. ನಮಗೆ ಸಿಕ್ಕ ಸ್ವಾರಸ್ಯಕರ ಉತ್ತರವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.

    ನಾಳೆ ಎನ್ನುವ ಯೋಜನೆಗಳಿಂದ ಮುಕ್ತಿಬೇಕಿದೆ

    ನಂದಿನಿ ಹೆದ್ದುರ್ಗ,ಕವಯಿತ್ರಿ, ಲೇಖಕಿ ಮತ್ತು ಕೃಷಿ ಮಹಿಳೆ

    ದೇಶ ಎಪ್ಪತ್ನಾಲ್ಕನೇ ಸ್ವತಂತ್ರ ದಿವಸ ವನ್ನು ಅತ್ಯಂತ ಸಂಭ್ರಮದಿಂದ ಆಚರಿಸ್ತಿದೆ.
    ಕೆಂಪುಕೋಟೆಯ ಧ್ಜಜಾರೋಹಣವನ್ನು ಮನೆಮನೆಯಲ್ಲೂ ಕಣ್ಣು ತುಂಬಿಕೊಂಡು ಮಾನನೀಯ ಪ್ರಧಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಆಡಿದ ಮಾತು ನಮ್ಮೆಲ್ಲರಲ್ಲೂ ದೇಶಭಕ್ತಿಯ ಭಾವವನ್ನು ಇನ್ನಷ್ಟು ಮತ್ತಷ್ಟು ಉದ್ದೀಪಿಸಿದೆ.

    ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಅದರದ್ದೇ ಆದ ಇತಿಮಿತಿಗಳಿರುತ್ತವೆ.ಅದೆಲ್ಲವನ್ನೂ ಮೀರುವತ್ತ ದೇಶ ದೃಢವಾದ ಹೆಜ್ಜೆ ಇಡುತ್ತಿರುವುದು “ಭಾರತ ಬೆಳಗುತ್ತಿದೆ” ಎನ್ನುವ ಮಾತನ್ನು ಮತ್ತೊಮ್ಮೆ ಮೊಳಗುವಂತೆ ಮಾಡುತ್ತಿದೆ.

    ಇದೆಲ್ಲದರ ಜೊತೆಗೆ ಭ್ರಷ್ಟಾಚಾರ, ನಿರುದ್ಯೋಗ, ಧರ್ಮ ವರ್ಗಗಳ ನಡುವಿನ ಭಿನ್ನಮತ ,ಗಡಿ ವಿವಾದಗಳು, ಪ್ರಾಕೃತಿಕ ವಿಕೋಪ, ರಾಜಕೀಯ ಕುಟಿಲತೆಯಿಂದ ಪ್ರಾಣ_ ಆಸ್ತಿಪಾಸ್ತಿ ನಷ್ಟ ಇವೇ ಮುಂತಾದವುಗಳು ಕೈಮೀರಿ ಸಂಭವಿಸುತ್ತಲೆ ದೇಶದ ಬೆಳವಣಿಗೆಯನ್ನು ಹಿಂಜರಿಸುತ್ತದೆ.
    ಇವುಗಳಲ್ಲಿ ಕೆಲವನ್ನಾದರೂ ಇಚ್ಚಾಶಕ್ತಿಯಿಂದ ಮೀರುವ ಎಲ್ಲ ಸಾಧ್ಯತೆಗಳೂ ಇದೆ. ಮುಖ್ಯ ಬೇಕಿರುವುದು ರಾಷ್ಟ್ರಭಕ್ತಿ. “ತಾಯ್ನಾಡಿನ ರಕ್ಷಣೆ ನಮ್ಮೆಲ್ಲರ ಹೊಣೆ “ಎನ್ನುವ ಮನಸ್ಥಿತಿ.ರಕ್ಷಣೆ ಎನ್ನುವುದಕ್ಕೆ ಯಾವುದೇ ವಿಶೇಷ ಅರ್ಥ ಬೇಕಿಲ್ಲ.
    ದೇಶದ ಪ್ರತಿ ನಾಗರಿಕ ತನ್ನ ಕರ್ತವ್ಯವನ್ನು ಮನಃಪೂರ್ವಕವಾಗಿ ಮಾಡಿದರೆ ಒಳಗಿಂದ ದೇಶ ಬಲಿಷ್ಠವಾಗುತ್ತದೆ.ಆಗ ಮಾತ್ರ ಹೊರಗಿನ ಆಘಾತಗಳನ್ನು ಎದುರಿಸಲು ದೇಶ ಸಮರ್ಥವಾಗುತ್ತದೆ.ಸಶಕ್ತವಾಗುತ್ತದೆ.

    ಬಹುತೇಕ ನಮ್ಮೆಲ್ಲರಿಗೂ ಈ ವಿಚಾರದಲ್ಲಿ ಪ್ರಜ್ಞೆ ಜಾಗ್ರತವಾಗಿದೆ ಎನ್ನುವ ಆಶಯ ನನ್ನದು. ಆದರೂ ಈ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ನಮ್ಮದೇ ವ್ಯಕ್ತಿತ್ವ ಕೆಲವೊಮ್ಮೆ ಅಡೆತಡೆಗಳನ್ನು ಒಡುತ್ತದೆ.

    ನಾನೊಬ್ಬ ಗೃಹಿಣಿ.ತಾಯಿ.ಕೃಷಿ ಮಹಿಳೆ,ಒಂದಷ್ಟು ಸಂಘಸಂಸ್ಥೆಗಳಲ್ಲಿ ಸಕ್ರಿಯಳಾಗಿರುವವಳು.ಅದೆಲ್ಲಕ್ಕೂ ಮಿಗಿಲಾಗಿ ನಾನು ಕವಯಿತ್ರಿ, ಲೇಖಕಿ.ಹೀಗಿದ್ದಾಗ ನನ್ನೊಳಗೆ ಸದಾ ಒಂದು ಎಚ್ಚರದ ನಡೆ ಇರಲೇ ಬೇಕಾಗುತ್ತದೆ.

    ಅದರಲ್ಲೂ ಅಕ್ಷರದ ಸಖ್ಯ ಬೆಳೆಸಿಕೊಂಡವರಿಗೆ ಘಟನೆಗಳನ್ನು ಹೊರಗಿನಿಂದ ಗಮನಿಸಬೇಕಾದ ಅನಿವಾರ್ಯತೆ ಅವಶ್ಯಕತೆ ಎರಡೂ ಅಗತ್ಯವಿದೆ.

    ನನ್ನ ಮಟ್ಟಿಗೆ ನನ್ನ ಮೊದಲ ಬಲಹೀನತೆ ಭಾವನೆಗಳನ್ನು ಅತಿಯಾಗಿ ಬದುಕುವದು.
    ಈ ನನ್ನ ಬಗೆಯಿಂದ ಮುಕ್ತಿ ಬೇಕು ಎನಿಸುತ್ತದೆ. ಯಾವುದೇ ಸಮಯ ಸಂದರ್ಭ,ಘಟನೆ ,ವ್ಯಕ್ತಿ,ವಸ್ತು, ನೆನಪುಗಳೊಂದಿಗೆ ವಿಪರೀತ ಭಾವನಾತ್ಮಕವಾಗಿ ವರ್ತಿಸುವುದು ನನ್ನ ವ್ಯಕ್ತಿತ್ವ.
    ಈ ಬಗೆಯಿಂದಾಗಿ ಬಹಳಷ್ಟು ಬಾರಿ ಮುಕ್ತ ನಿರ್ಧಾರ ತೆಗೆದು ಕೊಳ್ಳಲು,ಧೃಡ ಮನಸ್ಸಿನಿಂದ ಮುಂದಡಿ ಇಡಲು ತಡೆಯಾಗುತ್ತದೆ.
    ಅಪನಂಬಿಕೆ ನನ್ನ ಆತ್ಮವಿಶ್ವಾಸದ ಎದಿರು ಮೇಲುಗೈ ಸಾಧಿಸದಂತೆ ನನ್ನನ್ನು ನಾನು ಮರುರೂಪಿಸಿಕೊಳ್ಳುತ್ತಲೇ ಇರಬೇಕಾಗಿದೆ.

    ಜೊತೆಗೆ ನನ್ನ “ನಾಳೆ ಮಾಡುವ” ಯೋಜನೆಗಳಿಂದ ಮುಕ್ತಿಬೇಕಿದೆ.
    ಅಲಸಿತನ ಮೈಯನ್ನೂ ಮನಸ್ಸನ್ನೂ ಹೊಕ್ಕು ಅಧಿಪತ್ಯ ಸಾಧಿಸುವುದನ್ನು ಮೀರಬೇಕಿದೆ.
    ಮೂಲದಿಂದ ಸದಾ ಚಟುವಟಿಕೆಯಿಂದಿರುವ ನನ್ನ ಮನಸ್ಸು ಕೆಲವೊಮ್ಮೆ ಈ ಯಾವುದೋ ಮೋಹದೊಳಗೆ ಬಂಧಿಯಾಗಿ ದಿನಗಟ್ಟಲೇ ಸಮಯ ಕೊಲ್ಲುತ್ತದೆ. ಮುಖ್ಯ ಈ ಅಲಸಿತನದಿಂದ ನನಗೆ ಮುಕ್ತಿ ಬೇಕಿದೆ.

    ಪಿತೃ ಸಂಸ್ಕ್ರತಿ ಹೇರಿರುವ ಬಹಳಷ್ಟು ಅನಗತ್ಯ ವಿಷಯಗಳನ್ನು ಇನ್ನಿಲ್ಲದಂತೆ ಆವಾಹಿಸಿಕೊಂಡಿರುವ ನಮ್ಮ ಹೆಣ್ಣುಮಕ್ಕಳು ತಮ್ಮೊಳಗಿನ ಶಕ್ತಿಯನ್ನು ಸ್ವಯಂ ಅರಿಯುವ ಅವಶ್ಯಕತೆ ಇದೆ.

    ಅರಿಯುವ ಯತ್ನದಲ್ಲೂ ಅದದೇ ಹಳೆಯ ವಿಚಾರಗಳನ್ನು ಪೊರೆಯುವ ಬಗೆಯಿಂದ ನಮಗೆ ಮುಕ್ತಿಬೇಕಿದೆ.

    ಸ್ವತಂತ್ರ ದಿನದ ಈ ಶುಭ ಸಂದರ್ಭ ನಿಜ ಅರ್ಥದಲ್ಲಿ ಸಂಪನ್ನ ಗೊಳ್ಳಬೇಕೆಂದರೆ ನನ್ನ ಮಟ್ಟಿಗೆ ಈ ಮೂರು ವಿಚಾರಗಳಿಂದ ಮುಕ್ತಿ ಬೇಕಿದೆ.ಸ್ವತಂತ್ರ ಬೇಕಿದೆ.

    ಮತ್ತು ಅದೆಲ್ಲವನ್ನೂ ಕೇವಲ ನಾನೇ ನನ್ನ ಆತ್ಮವಿಶ್ವಾಸದಿಂದ ರೂಢಿಸಿಕೊಳ್ಳಬೇಕಿದೆ.

    ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

    “ಭಾರತ ಮಾತೆ” ಎನ್ನುವಾಗ ಮೈಮನ ಸದಾ ಪುಳಕಗೊಳ್ಳಲಿ.
    ಮಾತೃಪ್ರೇಮ ಸದಾ ಜಾಗೃತವಾಗಿರಲಿ.

    ನಿಜವಾಗಿಯೂ ಬೇಕಿರೋದು ಮಾನಸಿಕ ಸ್ವಾತಂತ್ರ್ಯ

    ಮಂಜುನಾಥ ಬೊಮ್ಮಘಟ್ಟ, ಎಂಜಿನಿಯರ್ ಮತ್ತು ಬರಹಗಾರ

    ಇಂದು ಯಾರಿಗೂ ದೈಹಿಕ ಸ್ವಾತಂತ್ರದ ಕೊರತೆ ಇಲ್ಲ. ಒಂದು ಕಾಲದಲ್ಲಿ ನಮಗೆ ಅದು ತುಂಬಾ ಅವಶ್ಯವಾಗಿತ್ತು. ಈಗ ಯಾರನ್ನು ಯಾರೂ ದೈಹಿಕವಾಗಿ ಹಿಡಿದಿಡಲ್ಲ, ಅದು ಸಾಧ್ಯವೂ ಅಲ್ಲ,ಸಿಂಧುವೂ ಅಲ್ಲ ಬಿಡಿ.

    ಇನ್ನು ಮುಂದುವರೆದ ನಾಗರಿಕತೆಯ ಅಂಗವಾಗಿರುವ ನಮಗೆಲ್ಲರಿಗೂ ನಿಜವಾಗಿಯೂ ಬೇಕಿರೋದು ಮಾನಸಿಕ ಸ್ವಾತಂತ್ರ್ಯ. ಅದೇ ನಿಜವಾದ ಆನಂದ ಕೂಡಾ. ಟ್ಯಾಗೋರರ where mind is free without worries? ಎನ್ನುವ ಕವನದ ಸಾಲುಗಳು ಮಾನಸಿಕ ಸ್ವಾತಂತ್ಯದ ಅನಂದವನ್ನ,ಆವಶ್ಯಕತೆಯನ್ನ ಹೇಳುತ್ತವೆ. ಭೌತಿಕ ಸ್ತರದ ಎಲ್ಲ ಅನಂದಗಳನ್ನು ಇಂದು ಮಾನವ,ಹಿಂದೆಂದಿಗಿಂತಲೂ ಹೆಚ್ಚು ಮತ್ತು ಅನಾಯಾಸವಾಗಿ ಅನುಭವಿಸುತ್ತಿದ್ದಾನೆ. ಇಂದಿನ ಸಾಮಾನ್ಯ ಮನುಷ್ಯ,ಹಿಂದಿನ ರಾಜರುಗಳು ಅನುಭವಿಸಿರಬಹುದಾದಂತಹ ಸುಖ ಅನುಭವಿಸುತ್ತಿದ್ದಾನೆ. ರಾಜನಾದರೊ ಕುದುರೆ ಮೇಲೆ,ರಥದ ಮೇಲೆ ಮೈಯೆಲ್ಲ ನೋವು ಮಾಡಿಕೊಂಡು ಹೋದದ್ದನ್ನೇ ಸುಖ ಎನ್ನುವುದಾದರೆ,ಇಂದು ರಾಜಹಂಸ ಬಸ್ಸುಗಳಲ್ಲಿ ಓಡಾಡುವವರನ್ನು ಏನನ್ನುತ್ತೀರಿ? ಆದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದರೆ ,ಇದು ಪರಮಾನಂದ ಅಲ್ಲ ಅನ್ನುವುದನ್ನು ಸಿದ್ಧಮಾಡುತ್ತದೆ. ಹಾಗಾಗಿ ನಿಜವಾದ ಆನಂದ ಇರುವುದು ಮನಸ್ಸಲ್ಲಿ. ಅದು ಯಾವಾಗಲೂ ನಮ್ಮಲ್ಲಿ ಹುಟ್ಟಿದಾಗಿನಿಂದ ಇರುವ default setting ಎಲ್ಲರಿಗೂ. ನಾವು ಅದನ್ನು ಉಪಯೋಗಿಸಿಕೊಳ್ಳಲು ಕಲಿತಿಲ್ಲ. ಇದಲ್ಲದೆ,ನಾನಾ ಮಾರ್ಗಗಳಲ್ಲಿ ಮನಸ್ಸಿನ ಆನಂದ ಹೊಂದಬಹುದು. ಅದರಲ್ಲಿ ಪ್ರಾಮಾಣಿಕತೆಯ ಜೀವನ ಮಾರ್ಗ ಒಂದು. ಇನ್ನು ವಿಧ,ವಿಧ ಸಾಧನೆಗಳಿಂದ ಈ ಮನಶ್ಯಾoತಿಯ ಉತ್ತುಂಗ ತಲುಪಬಹುದು,ಅದನ್ನು ಬ್ರಹ್ಮಾನಂದ ಅನ್ನುತ್ತಾರೆ ಅಂತ ನಮ್ಮ ಪೂರ್ವಜರು,ಮಾರ್ಗದರ್ಶಕರು ಸಾಧಿಸಿಕೊಂಡು ಹೇಳಿಹೋಗಿದ್ದಾರೆ.

    ಜಾತಿ ಸಂಕೋಲೆಯಿಂದ ಮುಕ್ತಿ

    ವಿ.ಜಯರಾಮ್, ಬಿಜೆಪಿ ಯುವ ನಾಯಕ

    ನಾವು ಎಷ್ಟೇ ಪ್ರಗತಿ ಪರ, ಜಾತ್ಯತೀತ ಮನೋಧರ್ಮದ ಮಾತಾಡಿದರೂ ನಮ್ಮ ನಡತೆ ಮತ್ತು ನೆನಪುಗಳು ಪರಂಪರೆಯ ಜಡ ಧೋರಣೆಗಳಿಂದ ಪ್ರೇರಿತವಾಗಿವೆ. ಇದರಿಂದಲೇ ಜಾತಿ ಮತ್ತು ಬಣ್ಣ ಇವತ್ತಿಗೂ ನಮ್ಮ ಸಾಮಾಜಿಕ ಸ್ಥಾನಮಾನ ಅಳೆಯುವ ಬಹುಮುಖ್ಯ ಮಾನದಂಡವಾಗಿ ಬಳಕೆಯಾಗುತ್ತಿವೆ. ಅಂಬೇಡ್ಕರ್ ಅವರಂಥ ಮಹಾನೀಯರು ತಮ್ಮ ಜೀವನ ಪೂರ್ತಿ ಈ ತಾರತಮ್ಯಗಳನ್ನು ತೊಲಗಿಸಲು ಹೋರಾಡಿದರು. ಆದರೂ ಜಾತಿ ಅನಿಷ್ಠ ತೊಲಗಲಿಲ್ಲ. ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅದು ಇನ್ನಷ್ಟು ಕ್ಲಿಷ್ಟ ಸಂಕೋಲೆಯಾಗಿ ಮಾರ್ಪಡುತ್ತಲೇ ಸಾಗಿರುವುದು ವಿಪರ್ಯಾಸ. ಈ ದುಸ್ಥಿತಿಯ ಬಗ್ಗೆ ನನ್ನಲ್ಲಿ ಕಳವಳದ ಜತೆಗೆ ಕನಿಕರವೂ ಇದೆ.
    ಜಾತಿಯ ಈ ಸಂಕೋಲೆ ಕೊನೆಗೊಳ್ಳದ ಹೊರತು ಸ್ವಾತಂತ್ರ್ಯದ ಪರಿಕಲ್ಪನೆಗೆ ಅರ್ಥ ಇಲ್ಲ. ಹಿಂದುತ್ವದ ಮಾತಿಗೂ ಬೆಲೆ ಇಲ್ಲ. ಹಾಗೆಂದ ಮಾತ್ರಕ್ಕೆ ನಾನು ನಿರಾಶಾವಾದಿಯಲ್ಲ. ಇಂದಲ್ಲ ನಾಳೆ ಅಂಬೇಡ್ಕರ್ ಕನಸಿನ ಮಾನವೀಯವಾದ ಸಮತಾ ಸಮಾಜ ನಿರ್ಮಾಣಗೊಳ್ಳುತ್ತದೆ ಎಂಬ ಆಶಾ ಭಾವನೆ ನನ್ನದು. ಈ ಹಿನ್ನೆಲೆಯಲ್ಲಿ ಜಾತಿ ಸಂಕೋಲೆಯಿಂದ ಮುಕ್ತಿ ದೊರಕುವುದು ಅಥವಾ ಮುಕ್ತಿ ಹೊಂದುವುದು ನನ್ನ ಪಾಲಿಗೆ ನಿಜವಾದ ಸ್ವಾತಂತ್ರ್ಯ.

    ದಮನಗಳಿಂದ ಸ್ವಾತಂತ್ರ್ಯ ಬೇಕು

    ಎಂ.ಪಿ.ಗುರುರಾಜ್. ಹಿರಿಯ ಸಾಹಿತಿ ಹಾಗೂ ರಂಗಕರ್ಮಿ

    ಸ್ವಾತಂತ್ರ್ಯ ಬಂದ ನಂತರ ಸಂವಿಧಾನದಲ್ಲಿ ಭಾರತೀಯ ನಾಗರಿಕರಿಗೆ ಮೂಲಭೂತ ಹಕ್ಕು, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ನೀಡುವ ಮೂಲಕ ರಾಮರಾಜ್ಯದ ಕನಸು ಕಾಣಲಾಗಿದೆ. ಇಂದು ಅದರ ನೆರಳಲ್ಲಿಯೇ ಕಾಣದ ಕೈಗಳ ಕಪಿಮುಷ್ಟಿಯ ಬಿಗಿಹಿಡಿತದಿಂದ ಉಸಿರುಗಟ್ಟಿದ ವಾತಾವರಣ ಇದೆ. ಇವುಗಳಿಂದ ಸ್ವಾತಂತ್ರ್ಯ ಪಡೆಯಲು ಮುಕ್ತ ರಹದಾರಿ ಕಾಣದೆ ಗೊಂದಲದಲ್ಲಿದ್ದೇವೆ.

    ಸರ್ವ ಧರ್ಮಿಯರು ತಮ್ಮ ಹಕ್ಕುಗಳನ್ನು ಪಡೆಯಲು ಸುಲಭ ಮಾರ್ಗಗಳಿರಬೇಕು. ಸಾಮಾನ್ಯರಿಗೆ ಹಕ್ಕುಗಳ ಬಗ್ಗೆ ಮಾತಾಡಲು ಭಯದ ವಾತಾವರಣ ಸೃಷ್ಟಿಸಿಲಾಗಿದೆ. ಪಟ್ಟ ಭದ್ರರ ಕರಿನೆರಳು ಸಮಾಜವನ್ನು ಆವರಿಸುತ್ತಿದೆ. ಅನ್ಯಾಯ, ಭ್ರಷ್ಟಚಾರ, ಅಕ್ರಮಗಳ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತದಂತೆ ವ್ಯವಸ್ಥೆ ಸೃಷ್ಟಯಾಗಿದೆ. ಸಮಾಜ ಘಾತುಕರೇ ಆಯಕಟ್ಟಿನ ಸ್ಥಾನಗಳಲ್ಲಿದ್ದು ದೇಶ ಲೂಟಿ ಮಾಡಿದರೂ ಸುಮ್ಮನಿರುವ ಸ್ಥಿತಿಯಲ್ಲಿದ್ದೇವೆ. ದಟ್ಟ, ನೇರ ಮಾತನಾಡುವು ಸ್ವಾತಂತ್ರ್ಯಬೇಕು. ಮಾತನಾಡುವವರಿಗೆ ಸೂಕ್ತ ರಕ್ಷಣೆ ಬೇಕು. ರಕ್ಷಣೆ ಕೊರತೆಯಿಂದ ಜೀವ ಕೈಯಲ್ಲಿಟ್ಟುಕೊಂಡು ಮಾತನಾಡಬೇಕಾಗಿದೆ.ಪತ್ರಿಕಾ ಸ್ವಾತಂತ್ರ್ಯವೂ ಈಗೀಗ ಕಡಿವಾಣಗೊಳ್ಳುವಂತೆ ತೋಚುತ್ತಿದೆ. ಸಾಕ್ಷ್ಯಧಾರಗಳ ಕೊರತೆಯಿಂದ ಸಮಾಜ ಘಾತಕರ ವಿರುದ್ಧ ಸೆಣಸಾಡುವ ಆತ್ಮವಿಶ್ವಾಸ ಹುಡುಗಿದೆ. ನಿರ್ಭೀಡೆಯಿಂದ ಹೋರಾಟ ನಡೆಸಿ ಸಮಾಜ ತಿದ್ದುವ ಸ್ವಾತಂತ್ರ್ಯ ಬೇಕಾಗಿದೆ. ಕಣ್ಣು ಮುಚ್ಚಿ ಬೆಕ್ಕು ಹಾಲು ಕುಡಿದರೂ ಯಾರು ನೋಡುವುದಿಲ್ಲ ಎನ್ನವಂತೆ ಪಟ್ಟಭದ್ರರು ಸಮಾಜಕ್ಕೆ ತಿಳಿದೇ ಭ್ರಷ್ಟಾಚಾರ ಮಾಡುತ್ತ ಸಾತ್ವಿಕ ಮಾತನಾಡುತ್ತಿದ್ದಾರೆ. ಇಂತಹ ಸೋಗಲಾಡಿತನ ತೊಲಗಬೇಕು ಶ್ರೀ ಸಾಮಾನ್ಯ ಸತ್ಯ ದರ್ಶನ ಮಾಡುವ ಸ್ವಾತಂತ್ರ್ಯ ಬೇಕು.

    ಮೂಲಭೂತ ವಾದದಿಂದ ಸ್ವಾತಂತ್ರ್ಯ

    ಪ್ರಕಾಶ್‌ ರಾವಂದೂರು, ಉದ್ಯಮಿ

    ಯಾವುದೇ ಮೂಲಭೂತ ವಾದದಿಂದ ನಮಗೆ ಮುಕ್ತಿ ಸಿಗಬೇಕು. ಮೂಲಭೂತವಾದ ಹೆಚ್ಚಾದಾಗ ಮಾನವ ಹಕ್ಕುಗಳು ಕಡಿಮೆಯಾಗುತ್ತದೆ. ಇದು ಒಂದು ರೀತಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ. ಹೀಗಾಗಿ, ಯಾವುದೇ ಮೂಲಭೂತವಾಗಿರಲಿ ಅದರಿಂದ ಮುಕ್ತಿ ಸಿಗಬೇಕು. ಭ್ರಷ್ಟಾಚಾರ ಹೆಚ್ಚಾಗಿದೆ. ಈ ಭ್ರಷ್ಟತೆಯಿಂದ ಸ್ವಾತಂತ್ರ್ಯ ಸಿಗಬೇಕು.

    ಭ್ರಷ್ಟತೆಯಿಂದ ಸ್ವಾತಂತ್ರ್ಯ ಸಿಗಬೇಕು

    ಭಾರ್ಗವ್‌ ಎ.ವಿ., ಐಟಿ ಉದ್ಯೋಗಿ

    ಜಾತ್ಯತೀತತೆ ಹೆಸರಿನಲ್ಲಿಜಾತಿ ಮಾಡುವುದು ಹೋಗಬೇಕು. ಜಾತಿ ಬಿಟ್ಟು ಪ್ರತಿಭೆಗೆ ಎಲ್ಲೆಡೆ ಅವಕಾಶ ಇರಬೇಕು. ಜಾತಿ ವ್ಯವಸ್ಥೆಯಿಂದ ನಮಗೆ ಸ್ವತಂತ್ರ ಸಿಗಬೇಕು.

    ಸ್ವಾತಂತ್ರ್ರ್ಯ ಎಂಬ ಆಲೋಚನೆಯಿಂದಲೆ ಸ್ವಾತಂತ್ರ್ಯ

    ಕಿರಣ್ ಮಾಡಾಳು, ಕಲಾವಿದ

    ತಮ್ಮ ಭಾವನೆಯನ್ನು ಈ ಕೆಳಗಿನ ಚಿತ್ರದಿಂದ ಅಭಿವ್ಯಕ್ತಿಸಿರುವ ಕಲಾವಿದ ಕಿರಣ್ ಮಾಡಾಳು ಸ್ವಾತಂತ್ರ್ಯ ಎಂಬ ಆಲೋಚನೆಯಿಂದಲೇ ಮನಸ್ಸಿಗೆ ಸ್ವಾತಂತ್ರ್ಯ ಬೇಕು ಎನ್ನುತ್ತಾರೆ.

    ವರ್ಕ್ ಫ್ರಮ್ ಹೋಂ ನಿಂದ ಸ್ವಾತಂತ್ರ್ಯ ಬೇಕಾಗಿದೆ

     
    ಚಿಕ್ಕವರಾಗಿದ್ದಾಗ ಸ್ವಾತಂತ್ರ್ಯ ದಿನಾಚರಣೆ ಎಂದರೆ ಅದೇನೋ ಸಂಭ್ರಮ.  ರಜಾದಿನ ಮಜಾ ರಮಾಡಬೇಕು ಎಂದಿನಿಸುತ್ತಲೇ ಇರಲಿಲ್ಲ.  ನಮ್ಮ ಊರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ  ಹಿಂದಿನ ದಿನ ಶಾಲೆಯಲ್ಲಿ  ತಳಿರು, ತೋರಣ ಕಟ್ಟಿ,  ಎನ್ ಸಿ ಸಿ, ಸ್ಕೌಟ್ಸ್  ವಿದ್ಯಾರ್ಥಿಗಳು  ಧ್ವಜ ವಂದನೆಗೆ ಬೇಕಾದ ತಾಲೀಮಿನಲ್ಲಿ ನಿರತರಾಗಿದ್ದಾರೆ, ನಾನು ನನ್ನ ತಾಯಿಯ ಹತ್ತಿರ ಭಾಷಣ ಸ್ಪರ್ಧೆಗೆ ಬೇಕಾದ ವಿಷಯಗಳನ್ನು ಸಂಗ್ರಹಿಸಿ  ಬರೆಸಿಕೊಂಡು ಬಾಯಿಪಾಠ ಮಾಡಿ ತಯಾರಾಗುತ್ತಿದ್ದೆ.

     ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಮುಂಜಾನೆ ಇಸ್ತ್ರಿ ಮಾಡಿದ ಶಾಲಾ ಸಮವಸ್ತ್ರ ಧರಿಸಿ, ನಮ್ಮ ನಮ್ಮ ಶಾಲೆಗಳಲ್ಲಿ ಧ್ವಜ ಹಾರಿಸಿ, ನಂತರ  ಡ್ರಮ್ಸ್, ತುತ್ತೂರಿ, ಲೇಜಿಮ್ಸ್  ಹಿಡಿದು, ಊರಿನಲ್ಲೆಲ್ಲಾ ಹಲವಾರು ಟ್ರ್ಯಾಕ್ಟರ್ ಗಳಲ್ಲಿ ವಿವಿಧ ಸ್ವತಂತ್ರ ಸೇನಾನಿಗಳ ವಿವಿಧ ವೇಷಭೂಷಣಗಳನ್ನು ಹಾಕಿಕೊಂಡ ಗೆಳೆಯರೊಡನೆ  ಮೆರವಣಿಗೆ ಮುಖಾಂತರ ಸಾಗುತ್ತಿದ್ದೆವು. ಅನಂತರ ಕಾಲೇಜಿನ ದೊಡ್ಡ ಪ್ರಾಂಗಣದಲ್ಲಿ ಸೇರಿ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಸಂಗಿತ ಮೇಸ್ಟ್ರು ಹೇಳಿ ಕೊಟ್ಟ ಪ್ರಾರ್ಥನಾ ಗೀತೆಯನ್ನು  ಹಾಡುತ್ತಿದ್ದೆವು.  ಬಂದ ಅತಿಥಿ ಗಳ ಭಾಷಣ ಕೇಳುವುದಕ್ಕಿಂತ ನನ್ನ ಹಾಗು ಸಹಪಾಠಿಗಳಲ್ಲಿ ಯಾರು ಚನ್ನಾಗಿ ವಿಷಯ ಪ್ರಸ್ತಾವನೆ ಮಾಡುತ್ತಾರೆ ಯಾರು ಸ್ಪರ್ಧೆಯಲ್ಲಿ ಗೆದ್ದು ಪದಕ ಪಡಿಯುತ್ತಾರೆ ಎನ್ನುವ ಕಾತುರದಲ್ಲಿ ಇರುತ್ತಿದ್ದೆವು.   ನಂತರ ವಿವಿಧ  ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚುವುದು ನಂತರ ವಿವಿಧ  ಶಾಲೆಯಲ್ಲಿ ಓದುವ ಗೆಳೆಯರೆಲ್ಲ ಒಂದೆಡೆ ಸೇರಿ  ಗುಂಪು ಗುಂಪಾಗಿ ಆಟವಾಡುತ್ತಾ ಸಂಭ್ರಮದಿಂದ  ಮನೆ ಸೇರುವ ಹೊತ್ತಿಗೆ ಮಧ್ಯಾಹ್ನ ಮೀರಿರುತ್ತಿತು. ಹೌದು, ಆ ದಿನಗಳೇ ಮೆಲಕು ಹಾಕುವುದೇ ವಿಶೇಷ. 

    ಕಾಲೇಜು ಓದಲು ಊರಿನಿಂದ ಬೆಂಗಳೂರು ಸೇರಿ, ಪದವಿ, ಸ್ನಾತಕೋತ್ತರ ಮುಗಿಸಿ ಐಟಿ ಕೆಲಸ ದಲ್ಲಿ ನಿರತರಾದಮೇಲೆ  ಸ್ವಾತಂತ್ರ್ಯೋತ್ಸವದ   ಅಭಿಮಾನಕ್ಕೆ ಕೊರತೆ ಇಲ್ಲದಿದ್ದರೂ, ಸಂಭ್ರಮ ಕಡಿಮೆಯಾಗಿದೆ ಎಂದೇ ಹೇಳಬಹುದು. 

    ಈಗೀಗ ಅನ್ನಿಸುವುದು, ದೇಶ ಸುರಕ್ಷಿತವಾಗಿ ಮುನ್ನೆಡೆಯುತ್ತಿದ್ದರೂ   ನಮಗೆ ಹಲವಾರು ವಿಷಯಗಳಲ್ಲಿ ಇನ್ನು ಸ್ವತಂತ್ರ ಬೇಕು ಎಂದೆನಿಸುತ್ತಿದೆ.  ಇತ್ತೀಚಿಗೆ ಐಟಿ ಕಂಪೆನಿಗಳಲ್ಲಿ ಸ್ವಾತಂತ್ರ್ಯೋತ್ಸವದ   ಹಿಂದಿನ ದಿನ ಸಾಂಕೇತಿಕವಾಗಿ ನಮ್ಮ ಡೆಸ್ಕ್ ಗಳಲ್ಲಿ ಧ್ವಜ ತ್ರಿವರ್ಣ ರಂಗುಗಳಿಂದ ಅಲಂಕರಿಸಿ happy independence  day  ಎಂದು  ವಾಟ್ಸ್ ಪ್ ಸ್ಟೇಟಸ್ ಹಾಕಿ, ಕೈಕುಲುಕಿದರೂ ಒಂದು ದಿನ ರಜಾ ಸಿಗುವುದರಿಂದ  ದಿನಕ್ಕೆ ಹನ್ನೆರೆಡು ಗಂಟೆ ಮಾಡುವ ಕೆಲಸದಿಂದ ಒಂದು ದಿನ ಮಟ್ಟಿಗಾದರೂ ಯಾವುದೇ ಮೀಟಿಂಗ್ಸ್, ಕಾನ್ಫೆರನ್ಸೆ ಕಾಲ್ ಗಳು ಇಲ್ಲದೆ ಇರುವ  ಸ್ವತಂತ್ರಸಿಗುತ್ತದೆ  ಎಂದು ಕಾಯುವ ಪ್ರಸಂಗ ಬಂದಿದೆ. 

    ಅದರಂತೆ ದಿನ ಬೆಂಗಳೂರಿನ ಅದೇ ವಾಯು ಮಾಲಿನ್ಯದಿಂದ, ಟ್ರಾಫಿಕ್ ನಿಂದ  ಬಿಡುಗಡೆ ಗೊಂಡು ಯಾವುದಾದರೂ  ಹಸಿರು ತುಂಬಿದ ಬೆಟ್ಟ ಗುಡ್ಡ ಸುತ್ತುವ ಸ್ವತಂತ್ರ ಮನಸ್ಸಿಗೆ ಬೇಕನಿಸುತ್ತದೆ.  ಬರುವ ಸಂಬಳದ ಅರ್ಧ ಭಾಗ  ಇಎಂಐ  ಕಟ್ಟುವುದರಿಂದ ಆದಷ್ಟು ಬೇಗ ಅದರಿಂದ ಸ್ವತಂತ್ರ ಬೇಕೆನಿಸುತ್ತದೆ.

      
    ಅದರಂತೆ ಈ ಸಾರಿ ಸ್ವತಂತ್ರ ಇನ್ನು ವಿಚಿತ್ರ,  ಕರೋನ ಹೊರಗೆ  ಕುಣಿಯುತ್ತಿದೆ ಮನೆಯಲ್ಲಿಂದಲೇ ಕೆಲಸ ಮಾಡುತ್ತಾ ಮಾಡುತ್ತಾ ಹೊರ ಪ್ರಪಂಚದ ಬೆಳಕು ಸರಿಯಾಗಿ ನೋಡದಂತೆ ನಮಗೆ ಗೊತ್ತಿಲ್ಲದಂತೆ ನಾವು ಬಂಧಿಯಾಗಿದ್ದೇವೆ.  ಇದರಿಂದ ಬಿಡುಗಡೆ ಹೊಂದಿ ಮುಂಚಿನಂತೆ ಆರಾಮಾಗಿ  ಸುತ್ತಾಡುವ ಸ್ವತಂತ್ರ ಬೇಕಾಗಿದೆ.  ಮಕ್ಕಳಿಗೆ ಮನೆಬಿಟ್ಟು ಪಾರ್ಕ್ ಗಳಲ್ಲಿ  ಆಟವಾಡುವ ಸ್ವಾತಂತ್ರ್ಯ ಬೇಕಾಗಿದೆ.   ಮನೆಯಲ್ಲಿ ಇರುವ ಹೆಂಗಸರಿಗೆ ಮಕ್ಕಳು ಯಾವಾಗ ಶಾಲೆಗೆ ಹೋಗುತ್ತಾರೆ, ಗಂಡಸರು ಯಾವಾಗಾದರೂ ಆಫೀಸ್ ಹೋಗುತ್ತಾರೋ ಕಾಫಿ ತಿಂಡಿ ಮಾಡುವದರಿಂದ ಯಾವಾಗ  ಸ್ವತಂತ್ರ ಸಿಗುತ್ತದೆಯೋ ಎಂದು ಕಾಯುತ್ತಿದ್ದಾರೆ.

     ಏನೆ ಆಗಲಿ ಈಬಾರಿ   ನಮ್ಮ ದೇಶಕ್ಕೆ ಸ್ವಾತಂತ್ರ್ಯ  ತಂದುಕೊಟ್ಟ ಸೇನಾನಿಗಳನ್ನ ನೆನೆಯುತ್ತಾ ನಮ್ಮ ನಮ್ಮ ಮನೆಗಳ ಮಹಡಿ ಮೇಲೆ  ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರ ಗೀತೆ  ಹಾಡಿ, ಸಿಹಿ ತಿಂದು ಸ್ವಾತಂತ್ರ್ಯೋತ್ಸವದ   ಆಚರಿಸೋಣ.   ಮುಂದಿನ ಸ್ವಾತಂತ್ರ್ಯೋತ್ಸವದ   ಹೊತ್ತಿಗೆ ಎಲ್ಲರೂ ಒಟ್ಟಿಗೆ ಕೂಡಿ ಆಚರಿಸುವಂತಾಗಲಿ  ಒಟ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನಲಿಯುವಂತಾಗಲಿ ಎಂದು ಆಶಿಸೋಣ.

    error: Content is protected !!