34.2 C
Karnataka
Monday, April 21, 2025
    Home Blog Page 162

    ಪಲ್ಲಟದ ಹಾದಿಯಲ್ಲಿ ಕಾಫಿ ಉದ್ಯಮ

    ಕೋವಿಡ್ ಕಾರಣಕ್ಕೆ ಜಗತ್ತು ಶತಮಾನದಷ್ಟು ಹಿಂದೆ ಸರಿದಂತೆ ಎನಿಸುತ್ತಿರುವ ಈ ಹೊತ್ತಿನಲ್ಲಿ ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತ ಕಾಣಿಸಿದ್ದರೆ ಕೆಲವು ಕ್ಷೇತ್ರಗಳಂತೂ ಭಾರಿ ಹೊಡೆತ ಅನುಭವಿಸುತ್ತಿವೆ.
    ತತ್ಕಾಲದ ,ಮಧ್ಯಮ ಕಾಲದ ಮತ್ತು ದೀರ್ಘಕಾಲೀನ ಸಮಸ್ಯೆಗಳು ಬೇರೆ ಬೇರೆ ಕ್ಷೇತ್ರಗಳನ್ನು ಭಾದಿಸುತ್ತಿವೆ.ಕೃಷಿ ಮತ್ತು ತೋಟಗಾರಿಕಾ ವಲಯ ಕೂಡ ಇದಕ್ಕೆ ಹೊರತಾಗಿಲ್ಲ.ಹಣ್ಣು ತರಕಾರಿ,ಹೈನೋದ್ಯಮ ,ಪುಷ್ಪೋದ್ಯಮ ತತ್ಕಾಲದ ಸಮಸ್ಯೆಯನ್ನೂ ಅನುಭವಿಸಿದರೆ ಬೇಳೆಕಾಳು,ಆಹಾರಧಾನ್ಯಗಳ ಕೃಷಿ ಸ್ವಲ್ಪ ತಡೆದು ಹೊಡೆತ ಅನುಭವಿಸಿತು.ಇನ್ನೂ ತೋಟಗಾರಿಕೆಯ ಬೆಳೆಗಳು ದೀರ್ಘಕಾಲೀನ ಮತ್ತು ಬಹುದೊಡ್ಡ ಆಘಾತವನ್ನು ಎದುರಿಸಲಿಕ್ಕೆ ತಯಾರಾಗಬೇಕಿದೆ.

    ಅದರಲ್ಲೂ ನಮ್ಮ ಕಾಫಿ ಉದ್ಯಮ ಕೋವಿಡ್ ಕಾರಣಕ್ಕೆ ಒಂದು ಪಲ್ಲಟದ ಹಾದಿಯನ್ನು ಇದಿರು ನೋಡ್ತಿದೆ ಎನ್ನಬಹುದು.ತೊಂಬತ್ತರ ದಶಕದ ಮುಕ್ತ ಮಾರುಕಟ್ಟೆಯ ಪ್ರಭಾವದಿಂದ  ದೊರಕಿದ ಉತ್ತಮ ಬೆಲೆಯಿಂದಾಗಿ ಸಕಲೇಶಪುರ, ಆಲೂರು,ಅರಕಲಗೂಡು,ಚಿಕ್ಕಮಗಳೂರು, ಮಡಿಕೇರಿಯ ಬಹುತೇಕ ಕೃಷಿಭೂಮಿ ಕಾಫಿತೋಟವಾಗಿ ಪರಿವರ್ತನೆಯಾಯ್ತು. ಮತ್ತು ಆ ಪರಿವರ್ತನೆಯ ಪ್ರಕ್ರಿಯೆ ಇಂದಿಗೂ ಕೂಡ ಮುಂದುವರೆದಿದೆ.(ಇದರಿಂದ ಈ ಭಾಗದಲ್ಲಿ ಅರಣ್ಯದ ಶೇಕಡಾವಾರು ಪ್ರಮಾಣ ಬಹಳ ಉತ್ತಮ ಮಟ್ಟದಲ್ಲಿ ಇದೆಯೆಂಬುದು ಒಂದು ಹೆಮ್ಮೆ.)

    ಬೆಲೆ ಕುಸಿತ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ರೋಗ ಕೀಟಗಳ ಬಾಧೆ,ರಸಗೊಬ್ಬರ ಹಾಗು ಸಿಂಪರಣೆಗಳ ಬೆಲೆಯೇರಿಕೆ, ಕಾರ್ಮಿಕರ ತಗ್ಗಿದ ಕೆಲಸದ ಗುಣಮಟ್ಟ ,ಉದ್ಯಮ ಬೇಡುವ ಅತಿಯಾದ ಇನ್ಫ್ರಾಸ್ಟ್ರಕ್ಚರ್  ಇವೆಲ್ಲವೂ ಕಾಫಿ ಉದ್ಯಮ ಎದುರಿಸ್ತಿರುವ ಸಮಸ್ಯೆಗಳ ಪಟ್ಟಿ. ಅದರ ಜೊತೆಗೆ ಕಳೆದ ಎರಡೂವರೆ ದಶಕಗಳಿಂದ ಭಯಾನಕವೆನಿಸುವಂತೆ ಹೆಚ್ಚಿರುವ ಮಾನವ ವನ್ಯ ಜೀವಿ ಸಂಘರ್ಷ.ಅದರಲ್ಲೂ ಕಾಫಿತೋಟಗಳಿಗೆ ಆನೆಯಿಂದಾಗುವ ನಿರಂತರ ಬೆಳೆಹಾನಿ ,ವ್ಯವಸ್ಥೆಯ ಹಾನಿ ಹಾಗೂ ಪ್ರಾಣಹಾನಿ ಬೆಳೆಗಾರರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇನ್ನೀಗ ಕೋವಿಡನ ಆಗಮನ.

    ತೋರಿಕೆಯ ನೆಮ್ಮದಿಗೂ ಸಂಚಕಾರ

    ಇಡೀ ಜಗತ್ತಿಗೆ ಕೋವಿಡ್ ಬಂದಿದೆ.ಬಳಲುತ್ತಿದೆ.ನಮ್ಮದೇನು ವಿಶೇಷ ಅಂತ ಅಂದುಕೊಂಡು ಸಮಾಧಾನ ಮಾಡಿಕೊಂಡರೂ ಕಾಫಿ ಬೆಳೆಗಾರ ತನ್ನ ಎಂದಿನ ತೋರಿಕೆಯ ನೆಮ್ಮದಿಯನ್ನು,ಸಂತೋಷವನ್ನು ಇನ್ನು ತೋರಿಸಿಕೊಳ್ಳುವುದು ತ್ರಾಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
    ಕಳೆದೆರಡು ದಶಕಗಳಿಂದ ಮೇಲೆ ಹೇಳಿದ ಸಮಸ್ಯೆಗಳಿಂದಾಗಿ ಬಹುತೇಕ ಕಾಫಿ ಬೆಳೆಗಾರರ ಮಕ್ಕಳು  ಉನ್ನತ ವಿದ್ಯಾಭ್ಯಾಸ ಪಡೆದು ಉದ್ಯೋಗ ಹಿಡಿದು ಮಹಾನಗರದಲ್ಲೋ,ವಿದೇಶದಲ್ಲೋ ನೆಲೆ ಕಂಡುಕೊಂಡಿದ್ದರು.

    ನಗರಗಳಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡಿ ಮನೆಗೆ ಆದಷ್ಟೂ ಹಣಕಾಸಿನ ನೆರವು ನೀಡುತ್ತಾ ತೋಟವನ್ನು ಅಭಿವೃದ್ಧಿ ಮಾಡಲಿಕ್ಕೆ ನೆರವಾಗ್ತಿದ್ದ  ಯುವಪೀಳಿಗೆಯು ಇನ್ನೊಂದು ದೊಡ್ಡ ಸಮೂಹವೂ ಕೊರೊನಾ ಕಾರಣದಿಂದ ಮನೆಗೆ ಬಂದು‌ ಕುಳಿತಿದೆ. ಇದರಲ್ಲಿ ಅರ್ಧ ಮಂದಿ  ವರ್ಕಫ್ರಮ್ ಹೋಮ್ ಮಾಡ್ತಿದ್ರೆ ಉಳಿದವರು ಕೆಲಸ ಕಳೆದುಕೊಂಡವರೋ,ಆ ಭೀತಿಯಲ್ಲಿರುವವರೋ ಒತ್ತಾಯದ ರಜೆಯಲ್ಲಿರುವವರೋ  ಆಗಿದ್ದಾರೆ.

    ಇಬ್ಬರು ಗಂಡು ಮಕ್ಕಳ ಕುಟುಂಬದಲ್ಲಿ ಒಬ್ಬ ಮಗ ಆಚೆ ದುಡಿಯುತ್ತಿದ್ದರೆ ಇನ್ನೊಬ್ಬನಿಗೆ ಇರುವ ಸಣ್ಣ ತೋಟ ಸಾಕಾಗುತ್ತದೆ ಎಂಬ ಲೆಕ್ಕಾಚಾರ ತಲೆಕೆಳಗಾದ ಆಘಾತದಲ್ಲಿ ತಂದೆತಾಯಂದಿರಿದ್ದರೆ ಇಲ್ಲಿವರೆಗೆ ಎರಡು ದೇಹ ಒಂದು ಜೀವದಂತಿದ್ದ ಅಣ್ಣತಮ್ಮಂದಿರ ನಡುವೆ ದಾಯಾದಿ ಮತ್ಸರ  ಆರಂಭವಾಗುತ್ತಿರುವ ಘಟನೆಗಳು ಅಲ್ಲಲ್ಲಿ ಕಾಣುತ್ತಿವೆ. ಕೊರೊನಾ ಕಾರಣದಿಂದ ಹಳ್ಳಿಗಳು ಹೆಚ್ಚಾಗಿಯೇ ತುಂಬಿಕೊಂಡಿವೆ.ಎಸಿ ಕೋಣೆಯ ಕೆಲಸ ಅಭ್ಯಾಸವಿದ್ದವರೂ ಗಮ್ ಬೂಟು ತೊಟ್ಟು ಹ್ಯಾಟ್ ಧರಿಸಿ ಕೈಯಲ್ಲಿ ಒಂದು ಕತ್ತಿಯೋ ಚಾಕೋ ಹಿಡಿದು ತೋಟಕ್ಕೆ ಹೋಗ್ತಿದ್ರೆ ನೋಡಲಿಕ್ಕೆ ಆಹ್ಲಾದವೆನಿಸ್ತದೆ.

    ಆದರೂ..ಇದಾವುದೂ ಸರಿಯೆನಿಸುವುದಿಲ್ಲ.

    ಕಾಫಿತೋಟದ ಪ್ರಮುಖ ಅದಾಯವಾದ ಕಾಳುಮೆಣಸು ಕಳೆದೆರಡು ವರ್ಷಗಳ ಮಹಾ ಮಳೆಯಿಂದಾಗಿ ರೋಗಕ್ಕೆ ತುತ್ತಾಗಿದೆ.ಕಾಫಿಗೆ ಸಿಗುತ್ತಿರುವ ಬೆಲೆ  ಅದರ ಖರ್ಚು ವೆಚ್ಚ ನಿಭಾಯಿಸಲೇ ಕಷ್ಟವಾಗಿರುವಾಗ ನಗರದಿಂದ ಹಣದ ಹರಿವು ನಿಲ್ಲುವುದು ಪರೋಕ್ಷವಾಗಿ ಅಪಾಯದ ಮುನ್ಸೂಚನೆ.ಇದು ಕಾಫಿಯ ಮೇಲೆ  ಕೋವಿಡ್ ಪರಿಣಾಮದ ಒಂದು ಮುಖ.ಇನ್ನೂ ಕಾಫಿಯ ಬೆಲೆ ಈಗಾಗಲೇ ‌ನೆಲ ಕಚ್ಚಿದೆ.

    ಹೋಟೆಲ್ ,ಮಾಲ್ ,ರೆಸಾರ್ಟ್ ಗಳು ಮುಚ್ಚಿದ ಕಾರಣ ಕಾಫಿಯ ಬಳಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮದುವೆ ಮುಂತಾದ ಅದ್ದೂರಿ  ಕಾರ್ಯಕ್ರಮಗಳು,ಸಭೆ ಸಮಾರಂಭ ಗಳು ಪೂರ್ಣ ಪ್ರಮಾಣದಲ್ಲಿ ನಿಂತು ಹೋದದ್ದರಿಂದ ಕಾಫಿಯ ಆಂತರಿಕ ಬಳಕೆ ಮುಕ್ಕಾಲು ಶೇಕಡಾ ಕ್ಷೀಣಿಸಿದೆ.ನಗರ ಜೀವನದಲ್ಲಿ ಅಚಾನಕ್ಕು ತಗ್ಗಿದ ಕುಟುಂಬದ ಆರ್ಥಿಕತೆಯಿಂದಾಗಿ ಕೂಡ ಕಾಫಿ ಸೇವನೆ ಇಳಿಮುಖವಾಗುತ್ತಿದೆಯಂತೆ.ಕಾಫಿ ಉದ್ಯಮ ಒಂದು ಹಂತಕ್ಕೆ ತನ್ನ ಬೆಲೆಗಾಗಿ ನೆಚ್ಚಿರುವ ಆಂತರಿಕ ಬಳಕೆ ಪ್ರತ್ಯಕ್ಷವಾಗಿ ಇಷ್ಟೆಲ್ಲಾ ಇಳಿಗತಿಯನ್ನು ಕಂಡಿದೆ, ಕಾಣುತ್ತಿದೆ. 
    ಜೊತೆಗೆ ಉತ್ಪಾದನೆ ಮತ್ತು ಬಳಕೆದಾರರ ನಡುವಿನ ಸರಪಳಿ ತುಂಡಾಗಿದ್ದು ಕೂಡ ಕಾಫಿ ಬಳಕೆ ಇಳಿಯಲು ಕಾರಣವಾಗಿದೆ.

    ಕಾಫಿ ಟೂರಿಸಮ್ ಗೂ ಹೊಡೆತ

    ಇದಲ್ಲದೇ ಕಾಫಿ ಟೂರಿಸಮ್ ಎನ್ನುವ ಕಾನ್ಸೆಪ್ಟ ಅಡಿ ಬೆಳೆಗಾರರು ತಮ್ಮ ತೋಟಗಳಲ್ಲಿ  ನಡೆಸುತ್ತಿದ್ದ ರೆಸಾರ್ಟುಗಳು ,ಹೋಮ್ ಸ್ಟೇ ಗಳು ಸಂಪೂರ್ಣವಾಗಿ ಬಂದ್ ಆಗಿ ಹಣದ ಹರಿವಿಗೆ ದೊಡ್ಡ ಅಡಚಣೆ ಮಾಡಿದೆ.ಅಷ್ಟೇ ಅಲ್ಲ.ಈ ಹಾಸ್ಪಿಟಾಲಿಟಿ ಉದ್ಯಮವನ್ನು ಆರಂಭಿಸಲು ಪಡೆದ ಬ್ಯಾಂಕ್ ಸಾಲ ಬಡ್ಡಿ ಚಕ್ರಬಡ್ಡಿಗಳ ಲೆಕ್ಕದಲ್ಲಿ ಬೆಳೆದು ಬೃಹದಾಕಾರ ಪಡೆಯುತ್ತಿದೆ.ಕೊರೊನಾ  ಕಾರಣಕ್ಕೆ ಬ್ಯಾಂಕುಗಳು ಯಾವುದೇ ಬಗೆಯ  ಕನ್ಸಿಷನ್ನ್ ನೀಡುವ ಸುಳಿವನ್ನು ಇಲ್ಲೀವರೆಗೂ ಕೊಟ್ಟಿಲ್ಲ. ಅಲ್ಲಿಯೂ ಅಳಿವು ಉಳಿವಿನ ಸವಾಲು.

    ಇದು ಕಾಫಿಯ ಆಂತರಿಕ ಮಾರುಕಟ್ಟೆಯ ವಿಚಾರವಾದರೆ ಜಾಗತಿಕವಾಗಿ ಮಹಾ ಹೊಡೆತ ಮುಂದಿನ ಒಂದೆರಡು ವರ್ಷದಲ್ಲಿ ಎದುರಾಗಲಿದೆ.
    ಕೋವಿಡ್ ಕಾರಣದಿಂದ ಯುರೋಪ್‌ನ  ಪ್ರಮುಖ ರಾಷ್ಟ್ರಗಳ ಆರ್ಥಿಕ ಹಿನ್ನಡೆ ಬಹುಶ: ಮುಂದಿನ ವರುಷದ ಭಾರತೀಯ ಕಾಫಿಗೆ ಬೇಡಿಕೆ ಕುಸಿಯಲು ಕಾರಣವಾಗಬಹುದು ಎನ್ನುತ್ತಿದ್ದಾರೆ ತಜ್ಞರು.ಇದು ಕಾಫಿ ಉದ್ಯಮದ ಅಧೋಗತಿಗೆ ಕಾರಣವೂ ಆಗಬಹುದು.ಜಾಗತಿಕವಾಗಿ ‌ಕೂಡ ಕಾಫಿಯ ಬೇಡಿಕೆ ಇಳಿಮುಖವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎನ್ನುತ್ತದೆ ವರದಿಯೊಂದು.

    ವಲಸೆ ಕಾರ್ಮಿಕರ ಕೊರತೆ

    ಈ ಎಲ್ಲಾ ಸಮಸ್ಯೆಗಳ ನಡುವೆ ಈ ಸಾಲಿನಲ್ಲಿ ಕಾಫಿ ಕ್ಷೇತ್ರ ಕಾರ್ಮಿಕರ ಕೊರತೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಎದುರಿಸಬೇಕಾಗುತ್ತದೆ.ಬಹುತೇಕ ಕಾಫಿತೋಟಗಳಲ್ಲಿ ಅಸ್ಸಾಂ ಕಡೆಯ ವಲಸೆ ಕಾರ್ಮಿಕರು ಕೆಲಸವನ್ನು ನಿಭಾಯಿಸುತ್ತಿದ್ದರು.ವರ್ಷವಿಡೀ ಕೆಲಸ ಬೇಡುವ ಬೆಳೆ ಕಾಫಿಯಾದ್ದರಿಂದ ಮತ್ತು ಕಾರ್ಮಿಕರೇ ನಿಭಾಯಿಸಬೇಕಾದ ಮುಕ್ಕಾಲು ಕೆಲಸಗಳಿರುವುದರಿಂದ ಕಾರ್ಮಿಕ ಕೊರತೆ ಇದಿರಾದರೆ  ಬೆಳೆಗಾರ ನೆಲ ಕಚ್ಚಿದಂತೆ.

    ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿರುವ ಕಾಫಿ ಬೆಳೆಗಾರ ಸರ್ಕಾರ ಕೊಡಬಹುದಾದ ಎಲ್ಲಾ ಸವಲತ್ತುಗಳನ್ನು ತನ್ನ ಕಾರ್ಮಿಕರಿಗೆ ಮುಫತ್ತಿನಲ್ಲಿ ನೀಡುತ್ತಾನೆ.
    ಕೊರೊನಾ ಕಾರಣದಿಂದ ಈ ಬಾರಿ ಫೆಬ್ರವರಿ ಮಧ್ಯಭಾಗದಲ್ಲಿಯೇ ವಲಸೆ ಕಾರ್ಮಿಕರು ತಮ್ಮ ಊರು ಸೇರಿಕೊಂಡಿದ್ದಾರೆ.ಅವರನ್ನು ಸುರಕ್ಷಿತವಾಗಿ ಊರು ಸೇರಿಸುವ ಕೆಲಸವನ್ನು ಸ್ವತಃ ಬೆಳೆಗಾರರೇ ಮಾಡಿದ್ದಾರೆ.ಆದರೆ..ಕಾಫಿ ಕೊಯ್ಲು ಡಿಸೆಂಬರ ನಿಂದ ಆರಂಭವಾಗುತ್ತದೆ.ಕೊಯ್ಲು ಮತ್ತು ಕೊಯ್ಲೊತ್ತರ ಕೆಲಸಗಳಿಗೆ ಕಾಫಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನುಬೇಡುತ್ತದೆ.ಬಹುಶಃ ಈ ಸಾಲಿನಲ್ಲಿ ಬೆಳೆದ ಬೆಳೆಯನ್ನು ಕಣಕ್ಕೆ ತರುವುದೇ ಹರಸಾಹಸವಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ. ನೋಡೋಣಾ.ಹೋಪ್ ಫಾರ್ ದಿ ಬೆಸ್ಟ್ ಅಂದುಕೊಂಡು ಮುಂದಡಿ ಇಡಲೇ ಬೇಕಿದೆ.  

    ಈ ಎಲ್ಲದರ ನಡುವೆ ಮತ್ತೊಂದು ಪಲ್ಲಟ ವನ್ನು ಕಾಫಿ ನಾಡು ನೋಡುವ ಸಾಕಷ್ಟು ಮುನ್ಸೂಚನೆ ಕಾಣುತ್ತಿದೆ. ಬಹುತೇಕ ನಗರದ ಹಣವಂತರಿಗೆ  ಒಂದು ಸಣ್ಣ ಕಾಫಿತೋಟದ ಒಡೆಯರಾಗುವ ಆಸೆ ಕೋವಿಡನ ದಯೆಯಿಂದ ಗರಿಗೆದರಿದೆ.ಐದು ಎಕರೆ ಒಳಗಿನ ಕಾಫಿ ತೋಟಗಳು ಅತ್ಯುತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿದೆ.ಯಾವಯಾವುದೋ ಕಾರಣಕ್ಕೆ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಬೆಳೆಗಾರ ಅಚಾನಕ್ಕು ಬಂದ ಒಳ್ಳೆಯ ಬೆಲೆಗೆ ತೋಟ ಮಾರಾಟ ಮಾಡಿ ಸಾಲದಿಂದ ಮುಕ್ತನಾಗಲು ಹವಣಿಸ್ತಿದ್ದಾನೆ.ತೋಟಕ್ಕೆ ಉತ್ತಮ ಬೆಲೆ ಬರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆಯಾದರೂ “ಭೂಮಿ‌ ಮಾರಿ ಗೆದ್ದೋರಿಲ್ಲ” ಎನ್ನುವ ಮಾತು ಅಷ್ಟೇ ಸತ್ಯ .ಕಾಫಿ ‘ಕರೆಯೋ ಕಾಮಧೇನು’ಅಲ್ಲದಿದ್ರೂ ತೋಟದ ಒಡೆಯ ಎಂದಿಗೂ ಸ್ಥಿತಿವಂತನೇ.
    ಕೊರೊನಾ ಕಾರಣದಿಂದ ಗ್ರಾಮೀಣ ಭಾಗದ ಬದುಕು ಅದರಲ್ಲೂ ಮಲೆನಾಡಿನ ಕಾಫಿ ನಾಡಿನ ದಿನಚರಿ ಬಹಳ ಬದಲಾಗಿಲ್ಲ.ಕಾಫಿ ತನ್ನ ಕೆಲಸಗಳನ್ನು ಕರಾರುವಕ್ಕಾಗಿ ಕೇಳುವುದರಿಂದ ಬೆಳೆಗಾರ ಮಾಮೂಲಾಗೇ ಇದ್ದಾನೆ.

    ವಲಸೆ ಕಾರ್ಮಿಕರು ಹೋದ ನಂತರದ ಉಳಿದಿರುವ ಸ್ಥಳೀಯ ಕಾರ್ಮಿಕರು ದಿನಕ್ಕೆ ಎರಡ ಕೆಲಸಗಳನ್ನು ಮೀರಿ ಮಾಡುತ್ತಾ ದುಪ್ಪಟ್ಟು ,ಮೂರು ಪಟ್ಟು ಆದಾಯ ಪಡೆಯುತ್ತಿದ್ದಾರೆ.ಸರ್ಕಾರದ ಆಹಾರ ಭಾಗ್ಯ ಯೋಜನೆಯಲ್ಲಿ ಮಾಮುಲಿಗಿಂತ ಹೆಚ್ಚು ಪಡಿತರ ದೊರಕ್ತಿದೆ.ಆ ವರ್ಗ ಎಂದಿಗಿಂತಲೂ ಸುಖವಾಗಿದೆ.ಇರಲಿ. ಸದ್ಯ.ಬಹಳ ಬೇಗಎಲ್ಲವೂ ಇತ್ಯರ್ಥವಾಗಿ, ಕೊರೊನಾ ದೂರಾಗಿ  ಬದುಕು ಸಹಜ ಸ್ಥಿತಿಗೆ ಬರುವುದನ್ನು ಎಲ್ಲರಂತೆ ಕಾಫಿ ಬೆಳೆಗಾರನೂ ಎದುರು ನೋಡ್ತಿದ್ದಾನೆ. ಹದಗೆಟ್ಟ ಪರಿಸ್ಥಿತಿಯಲ್ಲಿ ಯಾವುದಾದರೊಂದು ಬೆಳಕಿನ ಕಿರಣ ಕಾಣಬಹುದಾದ ಸಾಧ್ಯತೆಯನ್ನು ಇಲ್ಲಿನ ಯುವ ಸಮೂಹ ಅರಸುತ್ತಿರುವ ಕುರುಹುಗಳೂ ಅಲ್ಲಲ್ಲಿ ಕಾಣುತ್ತಿವೆ.

    ತನ್ನ ಗತವೈಭವದ ದಿನಗಳು ಕಾಫಿ ಬೆಳೆಗಾರನಿಗೆ ಶೀಘ್ರ ಮರುಕಳಿಸುತ್ತವೆ ಎನ್ನುವ ಆಶಾವಾದವಂತೂ ಇದೆ.

    ಐದು ತಿಂಗಳಿಂದ ಮನೆಯಲ್ಲೇ ಇರುವ ಮಕ್ಕಳನ್ನು ಹೇಗೆ ಸಂಭಾಳಿಸುವುದು

    ಕೋವಿಡ್ ನಿಂದ ಉಳಿದ ದೇಶಗಳೆಲ್ಲ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಾ ಮೊದಲಿನಂತೆಯೇ ನಡೆಯುವ ಹಂತಕ್ಕೆ ನಿಧಾನವಾಗಿ ಬರುತ್ತಿದೆ.ಆದರೆ ಭಾರತದಲ್ಲಿ ಪರಿಸ್ಥಿತಿ ಇನ್ನೂ ಅಷ್ಟೊಂದು ಸುಧಾರಿಸಿಲ್. ಶಾಲೆಗಳು ಇನ್ನು ತೆರೆದಿಲ್ಲ. ಹೀಗಾಗಿ ಐದು ತಿಂಗಳಿನಿಂದ ಆಟವಾಡಲು ಕೂಡ ಮನೆಯಿಂದ ಹೊರಹೋಗದ ಸ್ಥಿತಿ ಇರುವ ಮಕ್ಕಳ ಬಗ್ಗೆ ಸ್ವಲ್ಪ ಯೋಚಿಸಿ. ಬೆಳೆಯುವ ಮಕ್ಕಳು ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಇರಬೇಕು ಎಂದರೆ ಮಕ್ಕಳ ಮಾನಸಿಕ ತೊಳಲಾಟ ಏನಿರಬಹುದು ?. 

    ಕರೋನದಿಂದಾಗಿ ಮಕ್ಕಳೆಲ್ಲ ಮನೆಯಲ್ಲಿಯೇ ಕುಳಿತು ಕನಿಷ್ಠ ಐದು ತಿಂಗಳುಗಳಾಗಿವೆ ಎಂದರೆ ಖೇದವೆನಿಸುತ್ತದೆ. ಹಾಗೆಯೇ ಅವರನ್ನು ಇಡೀ ದಿನ ಸಂಬಾಳಿಸಲು ಪೋಷಕರು ಕೂಡ ಸಾಕಷ್ಟು ಪ್ರಯತ್ನಪಡುತ್ತಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳು ಹಳ್ಳಿಗಳಲ್ಲಿದ್ದರೆ ತೋಟ ,ಕಾಡುಮೇಡು ಸುತ್ತಬಹುದು ,ಅಜ್ಜ ಅಜ್ಜಿಯ ಜೊತೆ ಸಮಯ ಕಳೆಯಬಹುದು ಪ್ರತಿ ಬೇಸಿಗೆ ರಜೆಯನ್ನು ಕಳೆಯುವಂತೆ ಈ ಬಾರಿ ಇನ್ನಷ್ಟು ಮಜವಾಗಿ ಕಳೆಯಬಹುದು. ಆದರೆ ನಗರಗಳ ಅಪಾರ್ಟ್ಮೆಂಟ್ ಗಳಲ್ಲಿ, ಸಣ್ಣ ಸಣ್ಣ ಮನೆಗಳಲ್ಲಿ ಮನೆಯ ಒಳಗೇ ಕುಳಿತು ದಿನವಿಡೀ ಕಳೆಯಬೇಕು ಎಂದಾದಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಿ. ಇದು ಒಂದು ಎರಡು ದಿನವಲ್ಲ ಕಳೆದ ಐದು ತಿಂಗಳಿಂದ ಎಲ್ಲೂ ಹೊರಹೋಗದೇ ಮನೆಯೊಳಗೇ ಇರುವ ಮಕ್ಕಳ ಪರಿಸ್ಥಿತಿ ನಿಜಕ್ಕೂ ಆತಂಕ ತರಿಸುವಂತದ್ದು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ  ಸಹನೆ ಪರೀಕ್ಷಿಸುವ ಸಂದರ್ಭವಾಗಿರಬಹುದು. ಅದರಲ್ಲೂ ತಂದೆತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದಲ್ಲಿ ಅವರ ಪರಿಸ್ಥಿತಿ ಇನ್ನೂ ಕಷ್ಟ. ಹಾಗಾದರೆ ನಮ್ಮ ಮಕ್ಕಳನ್ನು ಹೇಗೆ ದಿನವಿಡೀ ಉಲ್ಲಾಸಿತವಾಗಿ ಇಡಬಹುದು? 

    ಒಂದು ವರ್ಷಅಥವಾ ಎರಡು ವರ್ಷದೊಳಗಿನ ಮಗುವಾಗಿದ್ದಲ್ಲಿ ಈ ಲಾಕ್ಡೌನ್ ಅನುಕೂಲವೇ ಆಗಿರುತ್ತದೆ .ಆದರೆ ಮೂರರಿಂದ ಆರು ವರ್ಷದ ಮಕ್ಕಳಿಗೆ ಮನೆಯಲ್ಲಿಯೇ ಇರುವುದು ಕಷ್ಟದ ಕೆಲಸ. ಆರರ ನಂತರದ ಮಕ್ಕಳಿಗೆ ಶಾಲೆಯಿಂದಲೇ ಆನ್ಲೈನ್ ತರಗತಿಗಳು ನಡೆಯುವುದರಿಂದ ಸ್ವಲ್ಪ ಸಮಯ ಹೋಂ ವರ್ಕ್ ,ತರಗತಿಗಳಿಗೆ ತಯಾರಿ ಹೀಗೆ ಸಮಯ ಸರಿಹೊಂದಬಹುದು.  ಹಾಗಿದ್ದರೆ ನಿಮ್ಮ ಮಗು ಮೂರರಿಂದ ಆರು ವರ್ಷದವರಾದರೆ ಹೀಗೆ ಕೆಲವು ಟಿಪ್ಸ್ ಪಾಲಿಸಿ ನೋಡಿ. 

    ಟೈಮ್ ಟೇಬಲ್ ನಿರ್ಮಿಸಿಕೊಳ್ಳಿ :
    ಮಕ್ಕಳನ್ನು ದಿನವಿಡೀ ಬ್ಯುಸಿಯಾಗಿ ಇಡಲು ಒಂದರ ನಂತರ ಒಂದು ಎಂದು ಮೊದಲೇ ಟೈಂಟೇಬಲ್ ಮಾಡಿಕೊಂಡರೆ ಇಬ್ಬರೂ ಕೆಲಸ ಮಾಡುವ ಪೋಷಕರಿಗೆ ಬಹಳ ಅನುಕೂಲವಾಗುತ್ತದೆ. ಪ್ರತಿದಿನ ಈ ಟೈಮ್ ಟೇಬಲ್ ಜೊತೆ ಇರುವುದರಿಂದ ಮಕ್ಕಳಿಗೂ ಒಂದಲ್ಲ ಒಂದು ಟಾಸ್ಕ್ ಆಯ್ಕೆ ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಸ್ವಲ್ಪ ಸಮಯ ಕಳೆಯಲು ಪ್ರಾರಂಭಿಸುತ್ತಾರೆ.
    ಮನೆ ಕೆಲಸದಲ್ಲಿ ತೊಡಗಿಸಿ:ಎಲ್ಲರೂ ಮನೆಯಲ್ಲಿಯೇ ಇದ್ದು ಕೆಲಸಕ್ಕೂ ಯಾರನ್ನೂ ಕರೆಯುವಂತಿಲ್ಲ ಎನ್ನುವ ಇಂತಹ ಸಂದರ್ಭದಲ್ಲಿ  ಮನೆಯ ಕೆಲಸ ಎಂದಿಗಿಂತ ದುಪ್ಪಟ್ಟು . ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಸಾಕಷ್ಟು ಸಮಯವಿರುತ್ತದೆ , ಮನೆಯಲ್ಲಿ ಮಕ್ಕಳು ಮಾಡಬಹುದಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ.ಉದಾಹರಣೆಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಸರಿಯಾಗಿ ಹಾಸಿಡುವುದು.ವಾಷಿಂಗ್ ಮಷಿನ್ ಗೆ ಕೊಳೆಯಾದ ಬಟ್ಟೆಗಳನ್ನು ತೊಳೆಯಲು ಹಾಕುವುದು, ಬೆಳಗಿನ ತಿಂಡಿ ಊಟಗಳಾದ ತಕ್ಷಣ ಎಲ್ಲಾ ತಟ್ಟೆಗಳನ್ನು ತೆಗೆದುಕೊಂಡು ಹೋಗಿ ಸಿಂಕ್ ಗೆ ಹಾಕುವುದು,ಊಟಕ್ಕೆ ಮೊದಲು ತಟ್ಟೆ , ಲೋಟ ಗಳನ್ನು ತಂದು ತಯಾರುಮಾಡಿಡುವುದು . ಮನೆಯಿಂದಲೇ ಕೆಲಸ ಮಾಡುವ ಅಪ್ಪನಿಗೆ ಅಮ್ಮ ಮಾಡಿಕೊಟ್ಟ ಕಾಫಿ,ಟೀ ಅಥವಾ ಸ್ನಾಕ್ಸ್ ತೆಗೆದುಕೊಂಡು ಹೋಗಿ ನೀಡುವುದು.ಇನ್ನೂ ಆಸಕ್ತಿ ಇದ್ದರೆ ಕಿಟಕಿ ಬಾಗಿಲುಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸುವುದು ಹೀಗೆ ಸ್ವಲ್ಪ ಸಮಯವನ್ನು ಮನೆ ಕೆಲಸದಲ್ಲಿ ಕಳೆಯುವಂತೆ ಮಾಡಿ.ಮಕ್ಕಳಿಗೆ ಅಡುಗೆಯಲ್ಲಿ ಆಸಕ್ತಿಯನ್ನು ಕೂಡ ಬೆಳೆಸಬಹುದು ಸರಳವಾದ ಒಲೆಯನ್ನು,ಚಾಕುವನ್ನು ಬಹಳಸದ ಸುಲಭ ವಿಧಾನದ ,ಚಪಾತಿ ಉಂಡೆಗಳನ್ನು ಮಾಡುವುದು ಇನ್ನಿತರ ಕೆಲಸಗಳಿಗೆ ಕೆಲವು ಸಹಾಯವನ್ನು ಮಕ್ಕಳಿಂದ ಮಾಡಿಸಿಕೊಳ್ಳಿ.ತಾವು ಆಟವಾಡಿದ ಅಥವಾ ತಮ್ಮ ರೂಂ ಅನ್ನು ತಾವೇ ಸೇರಿಸಿ ಇಟ್ಟುಕೊಳ್ಳುವುದು. ಎಲ್ಲವನ್ನೂ ಒಂದೇ ದಿನವಲ್ಲದಿದ್ದರೂ ಒಂದೊಂದು ದಿನ ಒಂದೊಂದು ಟಾಸ್ಕ್ ಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡಬಹುದು.ಹೀಗೆ ಅವರು ಹೇಳಿದ್ದನ್ನೆಲ್ಲ ಮಾಡಿದಾಗ ಪ್ರಶಂಸಿಸಿ ಪ್ರೋತ್ಸಾಹಿಸಲು ಮರೆಯಬೇಡಿ.
    ಆಟವಾಡಲು ಬಿಡಿ :ಮಕ್ಕಳನ್ನು ಸ್ವಲ್ಪ ಹೊತ್ತು ಮನೆಯೊಗಳೇ ಅವರಿಷ್ಟದ ಆಟವಾಡಲು ಬಿಡಿ. ಉದಾಹರಣೆಗೆ ಮೂರರಿಂದ ಆರುವರ್ಷದ ಮಕ್ಕಳಿಗೆ ಪಝಲ್ ಗಳನ್ನು ಮಾಡುವುದರಲ್ಲಿ ಅಥವಾ ಲೆಗೋ ಗಳಲ್ಲಿ ವಿವಿಧ ರೀತಿಯ ಮನೆ ಕಟ್ಟುವುದು,ಮನೆಯಲ್ಲಿಯೇ ಪ್ಲೇ ಡೋವ್ ಮಾಡಿ ಅದರಿಂದ ವಿವಿಧ ರೀತಿಯ ತಮಗಿಷ್ಟವಾದ ಪ್ರಾಣಿ, ಅಥವಾ ಶೇಪ್ ಗಳನ್ನು ಮಾಡುವುದು,ಈ ರೀತಿಯ ಆಟಗಳು ಆಸಕ್ತಿಕರವಾಗಿರುತ್ತವೆ. ಅವರಷ್ಟಕ್ಕೆ ಅವರು ಸುಮಾರು ಅರ್ಧ ಮುಕ್ಕಾಲು ಗಂಟೆ ಸಮಯ ಕಳೆಯಲು ಇದು ಸಹಾಯಮಾಡುತ್ತದೆ. ಹೀಗೆ ಮಾಡುವುದರಿಂದ ಮಕ್ಕಳ ಯೋಚನಾಶಕ್ತಿ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಕೂಡ ಇದು ಸಹಕರಿಸುತ್ತದೆ.ಸಂಜೆಯ ಸಮಯ ಮನೆಯವರೆಲ್ಲರೂ ಕುಳಿತು ಬೋರ್ಡ್ ಗೇಮ್ ಗಳನ್ನಾಡಬಹುದು.ಇದರಿಂದ ಮಕ್ಕಳಿಗೆ ಪೋಷಕರು ತಮ್ಮ ಜೊತೆ ಸಮಯ ಕಳೆಯುತ್ತಿದ್ದಾರೆ ಎಂಬುದು ಸಂತೋಷ ನೀಡುತ್ತದೆ. ಬಹುಶಃ ಈ ರೀತಿ ಪೋಷಕರ ಜೊತೆ ಕಳೆದ ಸಮಯ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಹುದು.  
    ಅಪಾರ್ಟ್ಮೆಂಟ್ ಗಳಲ್ಲಿ ಏನಿಲ್ಲವೆಂದರೂ ಬಾಲ್ಕನಿ ಅಥವಾ ಯುಟಿಲಿಟಿ ಜಾಗ ಇದ್ದೇ ಇರುತ್ತದೆ. ಮಕ್ಕಳನ್ನು ಬೆಳಗಿನ ಎಳೆ ಬಿಸಿಲಿನಲ್ಲಿ ಅಥವಾ ಸಂಜೆಯ ತಂಗಾಳಿ ಬೀಸುವ ಸೂರ್ಯಾಸ್ತದ ಸಮಯದಲ್ಲಿ ಸ್ವಲ್ಪ ಹೊತ್ತು ಅಲ್ಲಿ ಬಿಡಿ. ಹಾಗೆಯೇ ಕೈಗೊಂದು ಪೆನ್ಸಿಲ್ ಪೇಪರ್ ಕೊಟ್ಟು ತಾವು ಹೊರಗೆ ಏನೆಲ್ಲಾ ನೋಡುತ್ತಿದ್ದಾರೆ ಮತ್ತು ಅದು ಯಾವ ಬಣ್ಣದಲ್ಲಿದೆ ಹೀಗೆ ಎಲ್ಲವನ್ನು ಬರೆಯಲು ಹೇಳಿ.ಹಾಗೆ ಬರೆಯಲು ಇನ್ನೂ ಪ್ರಾರಂಭಿಸಿರದ ಮಕ್ಕಳಿಗೆ ಚಿತ್ರ ಬಿಡಿಸುವ ಪ್ರಯತ್ನ ಮಾಡಲು ಹೇಳಬಹುದು. ಇದರಿಂದ ಮಕ್ಕಳು ಏಕಾಗ್ರತೆ,ಪ್ರಕೃತಿಯ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲರಾಗಿ ಯೋಚಿಸುವುದನ್ನು (ಕ್ರಿಯೇಟಿವ್ ಥಿಂಕಿಂಗ್ ) ಬೆಳೆಸಿಕೊಳ್ಳುತ್ತಾರೆ.ಹೊರಗೆ ತಾವು ನೋಡಿದ ಸುಂದರ ದೃಶ್ಯಗಳ ಬಗ್ಗೆ ತಾವೇ ಕಥೆ ಕಟ್ಟಿ ಹೇಳುವಂತೆ ಪ್ರೋತ್ಸಾಹಿಸಿ. ಅಥವಾ ಬೈನಾಕ್ಯೂಲರ್ ಕೊಟ್ಟು ದೂರದ ಪ್ರಕೃತಿ, ಆಕಾಶ, ಹಕ್ಕಿ ಹೀಗೆ ಎಲ್ಲವನ್ನು ನೋಡುತ್ತಾ ಸಮಯ ಕಳೆಯಲು ಸಹಕರಿಸಿ. ರಾತ್ರಿಗಳಲ್ಲಿ ಆಕಾಶ ,ನಕ್ಷತ್ರ ,ಚಂದ್ರ , ಸಪ್ತರ್ಷಿ ಮಂಡಲಗಳನ್ನು ತೋರಿಸಿ ಅಂತರಿಕ್ಷದ  ಬಗ್ಗೆ ತಿಳಿಯುವ ತಿಳಿಯುವ ಕುತೂಹಲ ಹೆಚ್ಚಿಸಿ. ಇದು ಮಗುವಿನ ವಿಕಸನಕ್ಕೂ ಅನುಕೂಲವಾಗುತ್ತದೆ.
      ಚಿತ್ರಕಲೆ  :
    ಮಕ್ಕಳಿಗೆ ಬಣ್ಣ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿ: ದಿನಕ್ಕೊಂದು ಚಿತ್ರ ಬಿಡಿಸುವುದನ್ನು ಹೇಳಿಕೊಡಿ, ಸರಳವಾಗಿ ತಮಗೆ ಸಾಧ್ಯವಾದ ರೀತಿಯಲ್ಲಿ ಹೇಳಿಕೊಟ್ಟ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುವಂತೆ ಮಾಡಿ ಇದರಿಂದ ಮಕ್ಕಳಿಗೆ ಬಣ್ಣಗಳ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಬೆಳೆಯುತ್ತದೆ. ಸಣ್ಣ ಮಕ್ಕಳಿಗೆ ಸ್ಕ್ರಬ್ ಮಾಡುವುದರಿಂದ ಬೆರಳು ಮತ್ತು ಕೈಯ ಮೇಲೆ ಹಿಡಿತ ಸಿಗುತ್ತದೆ ಇದು ಮುಂದೆ ಅವರ ಅಕ್ಷರ ಸುಂದರವಾಗಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು, ಏಕಾಗ್ರತೆಯನ್ನು ಹೆಚ್ಚಿಸಲು ಅಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು  ಕೂಡ ಡ್ರಾಯಿಂಗ್ ಮತ್ತು ಕಲರಿಂಗ್ ಸಹಕರಿಸುತ್ತದೆ. 
    ವಿಶ್ರಾಂತಿಯೂ ಅಷ್ಟೇ ಮುಖ್ಯ :ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ವಿಶ್ರಾಂತಿಸಿಗಲಿ ,ಊಟದ ನಂತರ ಸ್ವಲ್ಪ ಹೊತ್ತು ಮಲಗುವಂತೆ ಪ್ರೋತ್ಸಾಹಿಸಿ ಬೆಳೆಯುವ ಮಕ್ಕಳಿಗೆ ಆಟ ಪಾಠದ ಜೊತೆಗೆ ವಿಶ್ರಾಂತಿ ಕೂಡ ಅಷ್ಟೇ ಅವಶ್ಯಕ. ಮಧ್ಯಾನ್ಹ ಒಂದೆರಡು ಗಂಟೆ ಮಲಗಿದರೆ ಮನಸ್ಸು ಉಲ್ಲಾಸಗೊಂಡು ಉತ್ಸಾಹ ಹೆಚ್ಚುತ್ತದೆ. 
    ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆ ಕೂಡ ಮುಖ್ಯವಾಗುತ್ತದೆ ಸಮಯಕ್ಕೆ ಸರಿಯಾಗಿ ಊಟ,ನಿದ್ದೆ ಇವುಗಳ ಜೊತೆಗೆ ದೈಹಿಕ ಶ್ರಮ ಕೂಡ ಬೇಕು. ಸಂಜೆಯ ಸಮಯವನ್ನು ಕುಟುಂಬ ಸಮೇತ ವ್ಯಾಯಾಮ, ಯೋಗ ಇವುಗಳನ್ನು ಮಾಡಿ ಸಮಯ ಕಳೆಯಿರಿ. ದೈಹಿಕ ವ್ಯಾಯಾಮಗಳು ಮಕ್ಕಳ ರಾತ್ರಿ ನಿದ್ದೆಗೆ ಅನುಕೂಲಮಾಡಿಕೊಡುತ್ತದೆ. 
    ಹಾಗೆಯೆ ಸಂಜೆಯ ಸಮಯದಲ್ಲಿ ಮಕ್ಕಳಿಗೆ ನೀತಿ ಕಥೆಗಳು , ರಾಮಾಯಣ ಮಹಾಭಾರತ ಕಥೆಗಳು ಇವುಗಳನ್ನು ಹೇಳುವುದನ್ನು ರೂಢಿಸಿಕೊಂಡರೆ ಮಕ್ಕಳಲ್ಲಿ ಸಂಸ್ಕೃತಿಯ ತಿಳಿವು ಹೆಚ್ಚುತ್ತದೆ. ಒಂದು ಅಧ್ಯಯನದ ಪ್ರಕಾರ ಮಕ್ಕಳಿಗೆ ಪ್ರತಿದಿನ ಮಲಗುವ ಮೊದಲು ಹೇಳುವ ಕಥೆ ಅವರ ಮನಸ್ಸಿಗೆ ಪರಿಣಾಮವನ್ನು ಬೀರುತ್ತದೆ ಇದು ಅವರ ಬದುಕನ್ನೇ ಬದಲಿಸಬಹುದು. ಹಾಗೆಯೇ ಪ್ರತಿದಿನ ಒತ್ತಡವನ್ನು ಕಡಿಮೆ ಮಾಡಲು,ಶಾಲೆಗೇ ಹೋಗದ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಉಳಿಸಲು  ದಿನದ  ಅರ್ಧ ಗಂಟೆ ಕಥೆ ಓದುವುದು,ಹೇಳುವುದು ಮಾಡಿದಲ್ಲಿ ಅವರಲ್ಲಿ ಯೋಚನಾಶಕ್ತಿ,ತಿಳಿವಳಿಕೆ ಹೆಚ್ಚುತ್ತದೆ.ಅಥವಾ ನಿಮ್ಮ ಮಗುವಿಗೆ ಅಕ್ಷರಗಳನ್ನು ಕೂಡಿಸಿ ಓದಲು ಹುರಿದುಂಬಿಸಿ. ಇವೆಲ್ಲವುಗಳನ್ನು ಒಟ್ಟಿಗೆ ಮಾಡಲು ಮಕ್ಕಳಲ್ಲಿ ಒತ್ತಡಹೇರಬೇಕಾಗಿಲ್ಲ. ಮಕ್ಕಳಿಗೆ ಆಯ್ಕೆಯನ್ನು ಕೊಡಿ. ಉದಾಹರಣೆಗೆ ಚಿತ್ರ ಬಿಡಿಸುತ್ತೀಯಾ ಅಥವಾ ನಿನ್ನ ರೂಮ್ ಅನ್ನು ಸೇರಿಸಿ ಇಟ್ಟುಕೊಳ್ಳುತ್ತೀಯ ? ಹೀಗೆ ಅವರಿಗಿಷ್ಟವಾದುದನ್ನು ಆಯ್ದುಕೊಳ್ಳಲು ಬಿಡಿ.ಈ ಕೊರೋನಾ ಬಂದನಂತರ ಎಲ್ಲವೂ ಆನ್ಲೈನ್ ನಲ್ಲೇ ಆಗಿರುವುದರಿಂದ ಈಗ ಸಂಗೀತ,ಡ್ರಾಯಿಂಗ್, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಇವೆಲ್ಲವುಗಳನ್ನು ಆನ್ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶವಿದೆ.ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಷ್ಟದ ಯಾವುದಾದರೂ ಒಂದು ತರಗತಿಯನ್ನು ವಾರದಲ್ಲೆರಡು ದಿನ ಕಲಿಯಲು ಅವಕಾಶ ಒದಗಿಸಿಕೊಟ್ಟಲ್ಲಿ ಮಕ್ಕಳು ಶಾಲೆಗೆ ಹಿಂತಿರುಗುವಷ್ಟರಲ್ಲಿ ಸಾಕಷ್ಟು ಶಿಕ್ಷಿತರಾಗುವುದರಲ್ಲಿ ಅನುಮಾನವಿಲ್ಲ.ಇವೆಲ್ಲದರ ಜೊತೆಗೆ ಮಕ್ಕಳ ಕುತೂಹಲಕ್ಕೆ ಸಣ್ಣಪುಟ್ಟ ಪ್ರಶ್ನೆಗಳಿಗೆ ಸಹನೆ ಕಳೆದುಕೊಳ್ಳದೆ ತಾಳ್ಮೆಯಿಂದ ಉತ್ತರಿಸುವುದು ಕೂಡ ಅಷ್ಟೇ ಮುಖ್ಯ.ನಾಲ್ಕು ಗೋಡೆಯ ಒಳಗೆ ಕುಳಿತಿರುವ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಈ ಸಮಯದಲ್ಲಿ ಪ್ರೋತ್ಸಾಹ ,ಉತ್ತೇಜನ ಎಲ್ಲವನ್ನು ಪೋಷಕರೇ ನೀಡಬೇಕಾದ ಅನಿವಾರ್ಯತೆ ಇದೆ ಅಲ್ಲವೇ ?

    Photo by Aleks Marinkovic on Unsplash

    ಇಂಗ್ಲಿಷರ ಸ್ಕೂಲೂ, ನಮ್ಮ ಶಾಲೆ ಎಂಬ ಗುಡಿಯೂ…

    ಕೇಳು ಜನಮೇಜಯ ರಾಜ ಧರಿತ್ರೀ ಪಾಲ ……. ಅಂತ ನಮ್ಮ ತಾತ ಬೆಳಗಿನ ಜಾವದ ಒಂದು ಹೊತ್ತಿನಲ್ಲಿ ರಾಗದಲ್ಲಿ ಹಾಡಲು ಶುರು ಮಾಡಿದನೆಂದರೆ, ಓಣಿಯ ಜನರೆಲ್ಲ ರಾಮಜ್ಜನಿಗೆ ರಾತ್ರಿಯೆಲ್ಲಾ ನಿದ್ದೆ ಬಂದಿಲ್ಲ ಬಿಡು ಅಂತ ಮಾತಾಡ್ತಾ ಮತ್ತೆ ಧ್ವನಿ ಕೇಳಿಸದ ಹಾಗೆ ಹೊದಿಕೆ ಹೊದ್ದು,ಮೊಗ್ಗಲು ಬದಲಿಸಿ ಮಲಗುತ್ತಿದ್ದರು. ಹರೆಯದ ಜೋಡಿಗಳನ್ನು ಬಿಟ್ಟರೆ,ಊರೆಲ್ಲ ಮಲಗುತ್ತಿದ್ದುದು ಅವರವರ ಮನೆಯ ಕಟ್ಟೆಗಳ ಮೇಲೆಯೇ…ಅದಕ್ಕೆ ನಮ್ಮ ಕಡೆಯ ಒಣ ಹವೆಯ ವಾತಾವರಣವೂ ಒಂದು ಕಾರಣ. ಓಣಿಗಳೆಂದರೆ ಅಳೆ ದರೆ ಆರು ಅಡಿಗಳು. ನಮ್ಮಜ್ಜಿಗಂತೂ ನಮ್ಮಜ್ಜನಿಂದ ಸಾಕಾಗಿಹೋಗಿತ್ತು ಅಂತ ಮತ್ತೆ ಹೇಳುವುದೇ ಬೇಡ. ಪೌರಾಣಿಕ ಹಿನ್ನೆಲೆಯುಳ್ಳ, ಪಂಪ ಭಾರತದ, ವಾಲ್ಮೀಕಿ ರಾಮಾಯಣದ ಸಾಲುಗಳನ್ನು, ಸೀಸ,ಕಂದ ಪದ್ಯಗಳನ್ನು ಹಳೆಗನ್ನಡಲ್ಲಿರುತ್ತಿದ್ದ ಇನ್ನು ಹಲವಾರು ಪದ್ಯ,ಗದ್ಯಗಳನ್ನು ರಾಗವಾಗಿ ಹಾಡುವುದು ನೋಡಿ,ಮನೆಯವರೂ,ಓಣಿಯವರೂ ಬೇಸರಿಸಿದರೆ ನನಗೆ ಆಶ್ಚರ್ಯ!

    ತಾತಾ ನೀನೆಷ್ಟರ ವರೆಗೆ ಓದಿದ್ದಿಯಾ ಅಂತ ಕೇಳಿದರೆ, ಮೂರನೇ ತರಗತಿ ಅಂತ ಕೈಯ ಮೂರು ಬೆರಳುಗಳನ್ನು ತೋರಿಸುತ್ತಾ ಒಂದು ಥರಾ ನಗುತ್ತಿದ್ದರು. ಆ ನಗು ಹೇಗಿರುತ್ತಿತ್ತು ಅಂದ್ರೆ, ನೀವೆಲ್ಲ ಈಗ ಓದೋ ಹತ್ತಿಪ್ಪತ್ತು ವರ್ಷದ್ದು ಕೆಲಸಕ್ಕೆ ಬಾರದ್ದು ಅನ್ನುವ ರೀತಿಯಲ್ಲಿ ಇರುತ್ತಿತ್ತು. ಇಂಗ್ಲಿಷ್ ಬರ್ತಿರಲಿಲ್ಲ, ಸ್ವಚ್ಚ ಕನ್ನಡ ಓದಲು,ಬರೆಯಲು ಬರುತ್ತಿತ್ತು. ಹಾಗಾಗಿ ಏನೋ ಅಪ್ಪನನ್ನು ನಮ್ಮೂರಿನಿಂದ ಸುಮಾರು 100 ಕಿ.ಮೀ ದೂರ ಇರುವ ಜಗಳೂರಲ್ಲಿ (ಇದೇ ಹತ್ತಿರದ ಹೈಸ್ಕೂಲ್ ಅಂತೆ ಆಗ!) ಆಗ್ಗೇ ಸೈಕಲ್ ಮೇಲೆಯೇ ಕೂಡಿಸಿಕೊಂಡು ಹೋಗಿ  ಮೆಟ್ರಿಕ್ ಮಾಡಿಸಿದ್ದರು.

    ತಾತನ ಬಹು ಇಷ್ಟವಾದ ವಸ್ತುಗಳೆಂದರೆ ಈ ಕೂದಲು ಕತ್ತರಿಸಲು ಮತ್ತು ಗಡ್ಡ ತೆಗೆಯಲು ಬೇಕಾದ ಪರಿಕಗಳ ಒಂದು ಪೆಟ್ಟಿಗೆ ಮತ್ತು ಒಂದು ಹಳೆಯ ಸೈಕಲ್. ಮುಂದೆ ಒಂದು ಕನ್ನಡಿ ಇಟ್ಟುಕೊಂಡು ಕೂದಲು ಕತ್ತರಿಸುತ್ತ ಕುಳಿತ ನನ್ನ ತಾತನನ್ನು ಆಗಾಗ ಮಾತಾಡಿಸುವುದು ನನ್ನ ಬಲು ನೆಚ್ಚಿನ ಹವ್ಯಾಸ ಆಗ. ತನ್ನ ಯವ್ವನದ ದಿನಗಳನ್ನು,ಅಪ್ಪನ ಬಾಲ್ಯದ ದಿನಗಳನ್ನು ತಾತನಿಂದ  ಅಜ್ಜಿಯ ಹತ್ತಿರ ಕುಳಿತು ಕೇಳುವ ಸಂಭ್ರಮವೇ ಮುದ ನೀಡುತ್ತಿತ್ತು. ತಾತನ ಹರಕತ್ತುಗಳಿಂದ ದರಿದ್ರದ ಅಂಚಿಗೆ ಬಂದಿದ್ದ ವಿಷಯ ಅಜ್ಜಿ ಹೇಳುತ್ತಿದ್ದರು ಬಿಟ್ಟರೆ,ತಾತ ಒಂದು ದಿನವೂ ಹೇಳಲಿಲ್ಲ. ಹಾಗೆ ಸೈಕಲ್ ವಿಷಯ ತೆಗೆದುಬಿಟ್ಟರೆ,ತಾತ ನನ್ನ ಜೊತೆ ಹುಡುಗನಾಗಿ  ಸಂಭ್ರಮಿಸುತ್ತ ಹೇಳುವ ಯಶೋಗಾಥೆಗಳು ಒಂದೆರಡಲ್ಲ.

    ಅಯ್ಯೋ ಈ ಮುರುಕಲು ಸೈಕಲ್ಲದು ಏನು ಕೇಳ್ತೀಯಾ ನನ್ನ ಕುದುರೆ ಲಕ್ಷ್ಮಿ ಅದು ಕೇಳು. ಅದನ್ನ ಈಗ ನಿನ್ನಪ್ಪ ಹೊಸಮನೆ ಅಂತ  ಬಸ್ಟ್ಯಾಂಡ್ ಹತ್ತಿರ ಕಟ್ಟಿಸಿಕೊಂಡು ಇದಾನಲ್ಲ,ಅಲ್ಲಿ ನಡುಮನೆಯ ಕಂಬಗಳ ಹತ್ತಿರವೇ ಅದನ್ನು ಹೂಳಿಟ್ಟಿ ರೋದು. ಅದು ಸತ್ತ ನಂತರ ಹುಟ್ಟಿದ ನಿಮ್ಮ ದೊಡ್ಡ ಅತ್ತೆಗೆ(ಗುಡೆಕೋಟೆ ಹನುಮೇಗೌಡರ ಧರ್ಮಪತ್ನಿ) ಅದೇ ಹೆಸರು ಇಟ್ಟಿವಿ. (ನಮ್ಮ ಮನೆಗಳಲ್ಲಿ ದುಡಿದು ಸತ್ತ ಎತ್ತುಗಳಿಗೂ ನಮ್ಮ ಹೊಲಗಳಲ್ಲೇ ಹೂಳಿಟ್ಟಿರುವುದು) ಕೇಳು ಅಂತ ಶುರು ಮಾಡಿದ್ರು ಅಂದ್ರೆ,ನಾನು,ತಾತ ಬೇರೆ ಲೋಕದಲ್ಲಿರುತ್ತಿದ್ದೆವು.

    ಒಂದು ಸಾರಿ ಏನಾಯ್ತು ಅಂದ್ರೆ ಹೂಲೆಪ್ಪನ(ಹುಲಿಕುಂಟೆರಾಯನ) ಜಾತ್ರೆಗೆ ಹೆಂಡದ ಅಂಗಡಿ ಹಾಕಿದ್ವಾ, ಒಬ್ಬ ಬ್ರಿಟಿಷನವನು, ಅಮಾಲ್ಡಾರ ಜಕಾತಿಗೆ ಅಂತ ಬಂದವನು  ಹೆಂಡದ ಗಡಿಗೆಯನ್ನು ಇದು  ತುಂಬಿದ್ಯಾ,ಇದು ಖಾಲಿ ಆಗಿದ್ಯಾ ಅಂತ ಲೆಕ್ಕ ಕೇಳುತ್ತ ಬೂಟಿನ ಕಾಲಿನಿಂದ ತುಂಬಿದ ಗಡಿಗೆಯನ್ನು ತಾಕಿಸಿಬಿಟ್ಟ. ಅದೆಲ್ಲಿತ್ತೋ ಸಿಟ್ಟು ನನಗೆ ನೆತ್ತಿಗೇರಿ, ಗಲ್ಲದಿಂದ ಎದ್ದು ಬಂದವನೇ ಅವನನ್ನು ಕೆಡವಿಕೊಂಡು ನಮ್ಮ ಅಮ್ಮನ್ನ ಬೂಟು ಕಾಲಿನಿಂದ ಒದ್ದೆಯಲ್ಲಲೇ ನಾಯಿ ಅಂತ ಚಪ್ಪಲಿ ಕಾಲಿನಿಂದ ಒದ್ದು ಬಿಟ್ಟೆ. ಜಾತ್ರೆಯ ಜನ ನೋಡ್ತಿದ್ದರು. ಅವನನ್ನು ಬಿಡಿಸಿಕೊಳ್ಳುವವರೇ ಇರಲಿಲ್ಲ. ಅಲ್ಲಿಯ ತನಕ ವಸೂಲಿ ಮಾಡಿದ್ದ ಜಕಾತಿ ದುಡ್ಡು ಅಲ್ಲಿ,ಇಲ್ಲಿ ಬಿತ್ತು. ಅವನಿಗೆ ಜೀವ ಉಳಿದರೆ ಸಾಕು ಅಂತ ಓಡಿ ಹೋದ….ಅಂತ ಮೀಸೆ ಮೇಲೆ ಕೈ ಇಟ್ಟು ಹೇಳುತ್ತಿದ್ದರೆ,ನನಗೆ ಸ್ವಾತಂತ್ರ ವೀರನ ಮುಂದೆ ಕುಳಿತ ಅನುಭವ.

    ಅಷ್ಟರಲ್ಲೇ ಅಜ್ಜಿ ಮುಂದಕ್ಕೆ ಹೇಳು ಅಲ್ಲೇ ನಗಬೇಡ ಅಂದಮೇಲೆ, ಸಾಯಂಕಾಲ ನಿಮ್ಮ ಪಕ್ಕೀರಪ್ಪ ತಾತ ಬಂದು ಸರೀ ಬೈದು,ಊರಲ್ಲಿರಬೇಡ, ಅವರು ಸುಮ್ಮನಿರಲ್ಲ, ನಾನು ಸಂಭಾಳಿಸುತ್ತೇನೆ ಅಂತ ಹೇಳಿದರು. ನಾನು ಗಿಡಗಳ ಮೇಲೆ ಅಂತ ಅಡವಿ ಸುತ್ತುತ್ತಾ ಇದ್ದೆ. ಎರಡು ದಿನ ಆಗಿರಬಹುದು, ಗುಳ್ಳೆ ಲಕ್ಕಮ್ಮನ ಹಳ್ಳದ ಹತ್ತಿರ ಕುದುರೆ ಬಿಟ್ಟುಕೊಂಡು ಹಾಗೇ ಮಲಗಿದ್ದೆ. ಸಾಯಂಕಾಲ ಆಗಿತ್ತು. ಬೇರೆ ಕುದುರೆ ಕೆನೆಯುವುದು ಕೇಳಿ ತಿರುಗಿ ನೋಡಿದೆ. ಒಬ್ಬ ಬ್ರಿಟಿಷಿನವನ ಕುದುರೆ ಹಳ್ಳ ದಾಟದೆ ಒದರುತ್ತಿತ್ತು. ಅವನು ಇಳಿದು ನೀರಲ್ಲಿ ಬರಲು ಒಪ್ಪುತ್ತಿಲ್ಲ,ಕುದುರೆ ದಾಟಲು ಒಪ್ಪುತ್ತಿಲ್ಲ…ನನಗೆ ನೋಡಿ ನಗು ಬಂತು. ನಕ್ಕ ನನ್ನನ್ನು ಕರೆದು, ನಿಂದೋ ಆ ಕುದುರೆ, ನಗ್ತಿಯಲ್ಲ, ಹಾರಿಸು ಈ ಹಳ್ಳವನ್ನ ನೋಡ್ತೀನಿ ಅಂದ. ಲಕ್ಷ್ಮೀ ಅಂದೆ, ಎಗರುತ್ತ ಬಂತು ನೋಡು ನನ್ನ ಕುದುರೆ,ಹಾಗೇ ಎಗರಿ ಕುಳಿತು,ಒಂದುಸಾರಿ ಕಾಲಿನಿಂದ ಅದರ ಹೊಟ್ಟೆ ಭಾಗಕ್ಕೆ ಮೆಲ್ಲಗೆ ಸವರಿ,ಹ ಹಾ ಎಂದೆ. ಹಿಂದಕ್ಕೆ ಎರಡು ಹೆಜ್ಜೆ ಇಟ್ಟ ನನ್ನ ಕುದುರೆ,ಒಮ್ಮೆಲೇ ಕೆನೆಯುತ್ತ ಒಂದೇ ಜಿಗಿತಕ್ಕೆ ಹಳ್ಳವನ್ನ ಜಿಗಿದಾಗ ಆ ಕೆಂಪು ಮೂತಿ ನೋಡಬೇಕಿತ್ತು ಅಂತ ತಾತನ ವಿಜಯದ ನಗೆ ನನ್ನಲ್ಲಿ ಭಯಂಕರ ಕುತೂಹಲ ಹುಟ್ಟಿಸುತ್ತಿತ್ತು. ಆಮೇಲೆ ಅಂದ ನನಗೆ, ಇನ್ನೇನು ಇಳಿದು, ಬೂಟುಕಾಲಿನಲ್ಲಿ ನೀರಲ್ಲಿ ನೆನಸಿಕೊಂಡು ನನ್ನ ಹತ್ತಿರ ಬಂದ. ತೆಗೆದು ಬೀಡಿ ಕೊಟ್ಟೆ. ಸೇದಿಕೊಳ್ತಾ ಏನು ಈ ಕಡೆ ಬರ್ತಿರೋದು ಅಂದೆ. ಬೊಮ್ಮಘಟ್ಟದಲ್ಲಿ ಈಡಿಗರ ಪಕ್ಕಿರಪ್ಪನ ಮಗ ರಾಮಪ್ಪ ಅಂತ ಒಬ್ಬ ಇದ್ದಾನಂತೆ,ಅವನು ನಮ್ಮ ಅಮಾಲ್ಡಾರ ನನ್ನು ಹೊಡೆದು,ಹಣ ಕಿತ್ತುಕೊಂಡಿದ್ದಾನೆ,ಅದರ ವಿಚಾರಣೆಗೆ ಬಂದಿದ್ದೇನೆ ಅಂದುಬಿಡೋದಾ?!! ಅಂತ ನನ್ನ ಮುಂದೆ ಬೀಡಿ ಹಚ್ಚಿದ ನಮ್ಮ ತಾತ.

    ಎರಡು ಧಂ ಎಳೆದು, ನೋಡಪ್ಪಾ,ನೀನ್ಯಾರೋ …ಆದ್ರೆ ಬೊಮ್ಮಘಟ್ಟ ಈಡಿಗರು ಹಾಗೆ ದುಡ್ಡು ಗಿಡ್ಡು ಕಸಕೊಳಲ್ಲ ಬಿಡು,ಅವನು ಸುಳ್ಳು ಹೇಳಿರಬೇಕು ಅಂದೆ. ಸರಿ ಬೊಮ್ಮಘಟ್ಟ ದಾರಿ ಇದೇನಾ ಅಂದ…ಹೂ ಹಿಂಗೆ ಉತ್ತರಕ್ಕೆ ನೆಟ್ಟಗೆ ಹೋಗ್ರಿ ಅಂದೆ. ಬಂದು ನನ್ನ ಕುದುರೆ ನೋಡಿ, ಕೈ ಆಡಿಸಿ ಇಂತಹ ಬಹದ್ದೂರ್ ಕುದುರೆ ಇಟ್ಟಿಯಲ್ಲಾ, ನೀ ಏನು ಮಾಡ್ತಿ ಅಂತ ಕೇಳಿದ. ನಾನು ಈಚಲು ಗಿಡದಿಂದ ಹೆಂಡ ತೆಗೆಸ್ತೀನಿ, ಅಂದೆ. ಶಹಬ್ಬಾಸ್, ನಿನ್ನಂತಹ ಕುದುರೇನ ನಮ್ಮ ಬ್ರಿಟಿಷರ ಕಂಪೆನಿನೂ ನಮ್ಮಂತ ಅಧಿಕಾರಿಗಳಿಗೆ ಕೊಟ್ಟಿಲ್ಲ ನೋಡು, ಸಖತ್ತಾಗಿ ಮೇಯಿಸಿದಿಯ, ನನಗೆ ಖುಷಿ ಆಯ್ತು,ಒಂದು ಸಾರಿ ಸವಾರಿ ಮಾಡ್ಲಾ ಅಂದ…ಏ ಹಂಗೆಲ್ಲ ನನ್ನ ಕುದುರೆ ಬೇರೆ ಯಾವನೂ ಏರಕ್ಕೆ ಬಿಟ್ಟಿಲ್ಲ ಬಿಡ್ರಿ,ನೀವು ಹೋಗ್ರಿ ಬೊಮ್ಮಘಟ್ಟಕ್ಕೆ ಅಂದೆ.

    ಮದ್ರಾಸ್ ಪ್ರಾಂತ್ಯದ, ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮುರು ತಾಲೂಕಿನಲ್ಲಿತ್ತು ನನ್ನೂರು ಆಗ. ಮೊಳಕಾಲ್ಮುರು ಆಗ ಆಡಳಿತ ಕೇಂದ್ರ. ಬ್ರಿಟಿಷರ ಪೊಲೀಸ್,ರೆವೆನ್ಯೂ,ಅಬಕಾರಿ ಎಲ್ಲ ಅಲ್ಲೇ ಇತ್ತಂತೆ. ತಾತನ ಬಾಯಲ್ಲಿ ಚಿತ್ರದುರ್ಗ , ಚಿತ್ಳದುರ್ಗ ಆಗಿರುತ್ತಿತ್ತು. ಹಾಗೆ ಬಂದ ವಿಚಾರಣಾಧಿಕಾರಿಯನ್ನು ಊರ ಶಾನುಭೋಗರನ್ನೊಳಗೊಂಡ ಪಂಚರು ( ಊರ ನ್ಯಾಯಾಧೀಶರು) ಏನೇನೋ ಸಾಬೂಬು ಹೇಳಿ, ಅವನು ಕಳೆದುಕೊಂಡಿದ್ದ ಜಕಾತಿ ಹಣವನ್ನ ನಮ್ಮ ಮುತ್ತಜ್ಜನಿಂದ ಕಟ್ಟಿಸಿಕೊಂಡು ಕಳಿಸಿಕೊಟ್ಟಿದ್ದರಂತೆ, ಪೊಲೀಸ್,ಕೇಸ್ ಅಂತ ಆಗದ ರೀತಿಯಲ್ಲಿ. ನಮ್ಮೂರಲ್ಲಿ ಬಹಳ ದಿನಗಳವರೆಗೆ,ನನ್ನ ನೆನಪಲ್ಲು ಪೊಲೀಸ್,ಕೇಸ್ ಇರುತ್ತಿರಲಿಲ್ಲ. ಊರ ಪ್ರಮುಖರೇ ಎಲ್ಲ ತೀರ್ಮಾನಿಸುತ್ತಿದ್ದರು.

    ಸುತ್ತ ಆರೆಂಟು ಹಳ್ಳಿಗಳಲ್ಲಿ ನಮ್ಮೂರಲ್ಲಿ ಬಹಳ ಹಿಂದಿನಿಂದಲೂ ಓದು,ಬರಹ ಎನ್ನುವುದು ಇದೆ. ಹೀಗೆ ಒಂದು ಸಾರಿ ವಿದ್ಯಾಭ್ಯಾಸದ ವಿಷಯ ಬಂದಾಗ …ಏ ಆಗ ಎಲ್ಲ ಶಾಲೆ ಇಲ್ಲಪ್ಪ…ಐನಾರ ಶಾಲೆ ಇತ್ತು, ನಾವೆಲ್ಲ ಮರಳಲ್ಲಿ ಅಕ್ಷರ ಕಲಿತಿದ್ದು, ನಿಮ್ಮಪ್ಪನ ಕಾಲಕ್ಕೆ ದೊಡ್ಡ ಮೇಷ್ಟ್ರ ಗುರುಕುಲದಂತಹ ಶಾಲೆ ಬಂತು. ಮನೆಯಲ್ಲೇ ಇಟ್ಟುಕೊಂಡು ಓದಿಸಿ, 7ನೇ ಕ್ಲಾಸ್ ಪರೀಕ್ಷೆ ಬರೆಯಲು ಮೊಳಕಾಲ್ಮುರಿಗೆ ಅವರೇ ಹುಡುಗರನ್ನು ಕರೆದುಕೊಂಡು ಹೋಗಿ, ವಾರಗಟ್ಟಲೆ ಅಲ್ಲಿದ್ದು ಪರೀಕ್ಷೆ ಬರೆಯಿಸಿ, ಕರೆತರುತ್ತಿದ್ದರು ಅಂತ ಹೇಳುತ್ತಿದ್ದರು.

    ಆಗ ನಮ್ಮೂರಲ್ಲಿ 7ನೇ ತರಗತಿ ಪಾಸಾದವರು ಭಯಂಕರ ವಿದ್ಯಾವಂತರು, ಹೈಸ್ಕೂಲ್ ಅಂತ ಅನಂತಪುರ,ಹಿಂದೂಪುರ,ಅಪ್ಪನಂತೆ ಜಗಳೂರಿಗೆ ಹೋದವರು ವಿದೇಶಕ್ಕೆ ಹೋಗಿ ಕಲಿತಂತೆ!ಅಂದು ಸಾಯಂಕಾಲ ದೊಡ್ಡ ಮೇಷ್ಟ್ರ   ಮನೆಗೆ ನಾನು  ಏನಾದ್ರು ಸಾಮಾನು ಕೊಡಲು ಹೋದಾಗ ಅವರಿಗೆ ಇನ್ನೂ ಹೆಚ್ಚಿನ ಗೌರವದೊಂದಿಗೆ ನಮಸ್ಕಾರ ಮಾಡಿ ಬರ್ತಿದ್ದೆ…ಏನೋ ನಿಮ್ಮಪ್ಪ ಎರಡು ದಿನ ಆಯ್ತು ಬರ್ಲಿಲ್ಲ, ಬರಲು ಹೇಳು ಅಂತ ಅವರ ಮಡದಿ ಸರೋಜಕ್ಕ ಅವಲಕ್ಕಿ,ಬೆಲ್ಲ ಕೊಡ್ತಿದ್ದರು. ನಾನು ತಿಂತಾ ಇದ್ದರೆ, ಮೇಷ್ಟ್ರು ನಿನ್ನೆ ಹೇಳಿಕೊಟ್ಟಿದ್ದ ರಾಮ ರಾಮಾಯ,ರಾಮ ಭದ್ರಾಯ ವೇದಸೆ….  ಪೂರ್ತಿ ಹೇಳು ಕೇಳ್ತೀನಿ ಅಂತಿದ್ರು. ನಾನು ….. ಪತಯೇನ್ನಮಹಾ  ಅಂತ ಮುಗಿಸಿಬಿಟ್ಟರೆ, ಸರೋಜಕ್ಕನಿಗೆ ಎಲ್ಲಿಲ್ಲದ ಖುಷಿಯಿಂದ ಕುಡಿಯಲು ನೀರು ಕೊಡ್ತಿದ್ದರು.

     ದೊಡ್ಡ ಮೇಷ್ಟ್ರು ಅಂತ ಈಗಲೂ ನಮ್ಮೂರಲ್ಲಿ ಕರೆಯಿಸಿಕೊಳ್ಳುವ ಲಕ್ಷ್ಮೀನಾರಾಯಣಾಚಾರ್ ಗುರುಕುಲವನ್ನಿಟ್ಟುಕೊಂಡು ಜಾತಿ,ಮತಗಳ ಭೇದವಿಲ್ಲದೆ,ಮಕ್ಕಳಿಲ್ಲದ ಅವರು ತನ್ನ ವಿದ್ಯಾರ್ಥಿಗಳನ್ನೇ ಮಕ್ಕಳೆಂದು ಭಾವಿಸಿ ವಿದ್ಯೆಯನ್ನು ಧಾರೆ ಎರೆದವರು. ನನ್ನೂರಲ್ಲಿ ಅವರು ಭಿತ್ತಿದ ಅಕ್ಷರಗಳಿಂದ ನನ್ನನ್ನೂ ಸೇರಿಸಿ ಸಾವಿರ ಸಾವಿರ ಜೀವಿಗಳಿಗೆ ಇಂದಿಗೂ ಅಕ್ಷರ ಸಿಗುತ್ತಿದೆ. ಅಷ್ಟೇ ಅಲ್ಲ, ನಮ್ಮೂರ ಸಂಸ್ಕೃತಿಯೇ ಭಿನ್ನ ಎನ್ನುವ ರೀತಿ ಬುನಾದಿ ಹಾಕಿದ್ದಾರೆ.

    ಅಪ್ಪ ಇವರ ಅತ್ಯಂತ ಪ್ರೀತಿಯ ಶಿಷ್ಯರಲ್ಲಿ ಒಬ್ಬರು. ಸಾಯುವ ತನಕ ಅವರ ಸೇವೆಯನ್ನು ಮಗನಿಗಿಂತಲೂ ಹೆಚ್ಚಾಗಿ ಮಾಡಿ, ನನ್ನ ಒಬ್ಬ ತಮ್ಮನಿಗೆ ಲಕ್ಷೀ ನಾರಾಯಣ ಅಂತ ಹೆಸರಿಸಿ, ಅವರು ಬದುಕಿದ್ದ ಅಷ್ಟೂ ದಿನ ಪಿತೃಮಾಸದಲ್ಲಿ ಪಿಂಡ ಪ್ರಧಾನ ಮಾಡಿದ್ದಾರೆ, ಅವರ ಇಚ್ಛೆಯಂತೆ. ಅಷ್ಟೇ ಅಲ್ಲ,ನನಗೂ ಪಾಲಿಸಲು ಹೇಳಿದ್ದಾರೆ. ಅಪ್ಪನಷ್ಟು ಶ್ರದ್ಧೆಯಿಂದ ಮಾಡಲಾಗಲ್ಲ, ನೆನೆಸಿಕೊಂಡು ಹೊಸಬಟ್ಟೆ ಇಡುತ್ತೇನೆ. ಈಗಲೂ ನಮ್ಮ ಮನೆಯಲ್ಲಿ ಅವರ ಫೋಟೋ ದಿನವೂ ಪೂಜೆಗೊಳ್ಳುತ್ತದೆ.
    ನಾನು ಊರು ಅಂದ ತಕ್ಷಣ ಮುಗಿಯದ ನೆನಪುಗಳಲ್ಲಿ ಕೊಚ್ಚಿಹೋಗಿಬಿಡುತ್ತೇನೆ…

    ಈಗ ಇದೆಲ್ಲ ಏಕೆ ನೆನಪಾಯ್ತು ಅಂದ್ರೆ, ಬ್ರಿಟಿಷರು ನಮ್ಮಲ್ಲಿಯ ಶಿಕ್ಷಣ ಪದ್ದತಿ, ಅದರಲ್ಲಿ ದೇವಾಲಯಗಳ ಪಾತ್ರ ಇವುಗಳ ಬಗ್ಗೆ ಸರ್ ಥಾಮಸ್ ಮನ್ರೋ ಎನ್ನುವ ಮದ್ರಾಸ್ ಪ್ರಾಂತ್ಯದ ಕಲೆಕ್ಟರ್ ನಿಂದ 1826 ರಲ್ಲಿ ಸರ್ವೇ ಮಾಡಿಸಿ ವರದಿ ಕೇಳುತ್ತದೆ. ಆಗ ಸುಮಾರು 1.30 ಕೋಟಿಯಷ್ಟಿದ್ದ ಮದ್ರಾಸ್ ಪ್ರಾಂತ್ಯದ ಜನಸಂಖ್ಯೆಯಲ್ಲಿ, ಸುಮಾರು 28,500 ಅಂದ್ರೆ ಸುಮಾರು ಸಾವಿರಕ್ಕೆ ಒಂದು ಗುರುಕುಲಗಳು,ವಿದ್ಯಾಕೇಂದ್ರಗಳಾಗಿ ಕೆಲಸ ಮಾಡುವ ದೇವಸ್ಥಾನಗಳೂ ಇವೆ. ಇವು ಯಾವ ಸರ್ಕಾರದಿಂದ,ಸಂಘ ಸಂಸ್ಥೆಗಳಿಂದ ನಡೆಯುವುದಿಲ್ಲ,ಬದಲಾಗಿ ದಾನಿಗಳಿಂದ, ಇವಕ್ಕೆ ಅಂತ ಇರುವ ಭೂಮಿಯಿಂದ ನಡೆಯುತ್ತಿವೆ  ಅಂತ ಥಾಮಸ್ ಮನ್ರೋ ಕೊಟ್ಟ ದಿ ಬ್ಯುವಟಿಫುಲ್ ಟ್ರೀ ಅಂತ ಹೆಸರಿಟ್ಟ ವರದಿಯನ್ನು ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಇಂಗ್ಲೆಂಡಿನ ರಾಣಿ ನೋಡಿ ಬೆರಗಾಗಿ ರಹಸ್ಯವಾಗಿ ಇಟ್ಟುಬಿಟ್ಟಿತಂತೆ! 

    ಅದಕ್ಕೇ ಏನೋ ನಾವು ನಮ್ಮೂರಲ್ಲಿ ಶಾಲೆಯನ್ನು ಶಾಲೆ ಗುಡಿ ಅಂತ ಇವತ್ತಿಗೂ ಕರೆಯುತ್ತಿರುವುದು. ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಮಕ್ಕಳನ್ನು ಒಂದು ಗೋದಾಮಿನ ರೀತಿ ಇದ್ದ ಕಟ್ಟಡಗಳಲ್ಲಿ ಇಡುವ ವ್ಯವಸ್ಥೆ ಇದ್ದ ಇಂಗ್ಲೆಂಡ್ ನಲ್ಲಿ ಅವುಗಳನ್ನು school  ಅಂತ ಆಗ ಕರೆಯುತ್ತಿದ್ದರಂತೆ. ನಮ್ಮಲ್ಲಿ ಆಗಲೇ ಗುರುಕುಲಗಳೂ,ದೇವಸ್ಥಾನಗಳೂ ಸಮಾಜದ ಎಲ್ಲ ವರ್ಗದವರಿಗೂ ವಿದ್ಯೆ ಕೊಡುವ ಕೆಲಸದಲ್ಲಿ ತೊಡಗಿದ್ದ ವ್ಯವಸ್ಥೆ ಕಂಡು ಅವರಿಗೆ ಹೇಗಾಗಿರಬೇಡ ಹೇಳಿ?! ತಾತಾ, ನೀನೇಕೆ ಜಾಸ್ತಿ ಓದಲಿಲ್ಲ ಅಂತ ಕೇಳಿದ್ದ ನನ್ನ ಪ್ರೆಶ್ನೆಗೆ ಅಂದು ಕೊಟ್ಟಿದ್ದ ನನ್ನ ತಾತನ ಉತ್ತರ ಏನು ಗೊತ್ತಾ?….ನಾನೇಕೆ ಜಾಸ್ತಿ ಓದಲಿ, ನನ್ನ ಮನೆ ಕಸುಬಾದ ಹೆಂಡದ ವ್ಯವಹಾರ ಮಾಡಲು ಆಗಿನ ಕಡ್ಡಾಯದ ಮೂರನೇ ತರಗತಿಯ ಶಿಕ್ಷಣ ಸಾಕಾಗುತ್ತಿತ್ತು. ಅಷ್ಟರಲ್ಲಿಯೇ ನಾವು ಮನುಷ್ಯರಾಗಿ ಸಮಾಜದಲ್ಲಿ ಬಾಳಲು ಬೇಕಾದ ಜ್ಞಾನ ಸಿಕ್ತಿತ್ತು. ಜ್ಞಾನದಿಂದಲೇ ಬದುಕಬೇಕೆನ್ನುವರು ಮುಂದೆ ಓದುತ್ತಿದ್ದರು…. ಅಂದಿದ್ದರು.

    ಸರ್ ಥಾಮಸ್ ಮನ್ರೋ ವರದಿಯಲ್ಲಿಯೂ ಇದೇ ಅಂಶ ನಮೂದಾಗಿರುವುದು ನನಗೆ ಆಶ್ಚರ್ಯ ತರಿಸಿತು. ಶಾಲೆ ಗಣತಿಯ ಪ್ರತಿಶತ 65 ರಷ್ಟು ಶೂದ್ರರು, ಕಡ್ಡಾಯ ಶಿಕ್ಷಣದ ಮೂರು ವರ್ಷ ಮುಗಿಸಿ,ತಮ್ಮ,ತಮ್ಮ ವೃತ್ತಿಗಳಿಗೆ ತೊಡಗುತ್ತಿದ್ದರು. ಉಳಿದ 35 ಪ್ರತಿಶತ ಮೇಲ್ವರ್ಗ ಎನ್ನಿಸಿಕೊಂಡವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳುತ್ತಿದ್ದರು ಎನ್ನುವ ಅಂಶ ನನ್ನನ್ನು ಈ ಲೇಖನಕ್ಕೆ ಪ್ರೇರೇಪಿಸಿತು.

    ಅಲ್ಲದೆ ಮೊದಲನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿಯವರು ಈ ವಿಷಯ ಇಂಗ್ಲೆಂಡಿನಲ್ಲೇ ಪ್ರಸ್ತಾಪಿಸಿ, ನೀವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ,ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೀರಿ ಎನ್ನುವ ಅಂಶವೂ ಒತ್ತು ನೀಡಿತು.ಇದನ್ನು ನೋಡುವಾಗ ನಮ್ಮ ಶಿಕ್ಷಣದ ವ್ಯವಸ್ಥೆ ಬ್ರಿಟಿಷರಿಗೆ ಹೊಟ್ಟೆಕಿಚ್ಚು ತರಿಸಿತ್ತಾ?ಇದನ್ನೇ ತಮ್ಮ ಒಡೆದು ಆಳುವ ನೀತಿಗೆ ಎಷ್ಟು ಸಮರ್ಥವಾಗಿ ಬಳಸಿಕೊಂಡು ನಮ್ಮನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿದ್ದಾರಲ್ಲ ಅಂತ ವ್ಯಥೆಯೂ ಆಯ್ತು. ಅಷ್ಟೇ ಅಲ್ಲ ವರದಿಯಲ್ಲಿರುವಂತೆ ಸಾಂಸ್ಕೃತಿಕ ಕೇಂದ್ರಗಳೂ,ವಿದ್ಯಾಕೇಂದ್ರಗಳೂ ಆಗಿದ್ದ ನಮ್ಮ ದೇವಾಲಯಗಳಿಗೆ ತಮ್ಮದೇ ಆದ ಊರಿನ 35 ಪ್ರತಿಶತ ಭೂಮಿ, ನಮ್ಮೂರ ಹುಲಿಕುಂಟೆರಾಯನಿಗೂ (ದೇವಸ್ಥಾನ)ಇತ್ತು ಎನ್ನುವ ಅಂಶಕ್ಕೆ ನಾನೇ ಸಾಕ್ಷಿ. 35 ಪ್ರತಿಶತ ಇದ್ದ ತೆರಿಗೆ ವಿನಾಯಿತಿ ದೇವಸ್ಥಾನಗಳ ಭೂಮಿಯನ್ನು ಪ್ರತಿಶತ 5 ಕ್ಕೆ ಇಳಿಸಿದ್ದು ಈ ವ್ಯವಸ್ಥೆಯನ್ನು ಕೊಂದು ಹಾಕಲು ಮಾಡಿದ ಮೊದಲ ಹೆಜ್ಜೆ ಅಂತ ಅನ್ನಿಸ್ತಿದೆ.

    ಬ್ರಿಟನ್ನಿನ ಮಕ್ಕಳು ಗೋದಾಮುಗಳಂತಾ,ತಂದೆ ತಾಯಿಯರ ಕೆಲಸಗಳಿಗೆ ಅಡ್ಡಿ ಬಾರದೇ ಇರಲಿ ಎನ್ನುವ ಉದ್ದೇಶಕ್ಕೆ ಸ್ಕೂಲ್ ನಲ್ಲಿ ಇರುತ್ತಿರಬೇಕಾದಾಗ, ನಮ್ಮ ತಾತಂದಿರು ಗುರುಕುಲಗಳಲ್ಲಿ ವಿದ್ಯಾಭ್ಯಾಸಕ್ಕೆಂದೇ ತೊಡಗಿದ್ದರು ಎನ್ನುವ ಅಂಶ ನನಗಂತೂ ಭಯಂಕರ ಗೌರವ ತರುವಂತಾದ್ದು ಅನ್ನಿಸ್ತಿದೆ….. ಇಂಗ್ಲೆಂಡಿನ  ಮ್ಯೂಜಿಯಂ ನಲ್ಲಿ ಸಿಕ್ಕಿರುವ ಸರ್ ಥಾಮಸ್ ಮನ್ರೋ ತಯಾರಿಸಿ ಕೊಟ್ಟಿದ್ದ, ದಿ ಬ್ಯುಟಿಫುಲ್ ಟ್ರೀ ಎಂಬ ವರದಿಯನ್ನು ಭಾರತ ಸರ್ಕಾರ  ರಾಜ ತಾಂತ್ರಿಕ ಮಾರ್ಗದಿಂದ ಪ್ರತಿಯೊಂದನ್ನು ತರಿಸಿ ನಮಗೆ ತಿಳಿಸುವ ಕೆಲಸ ಮಾಡಬೇಕು ಅನ್ನಿಸುತ್ತದೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ರಾಮಜನ್ಮಭೂಮಿಯ ಆಳದಲ್ಲಿ ತಾಮ್ರ ಶಾಸನ

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಕುರಿತಂತೆ ಭವಿಷ್ಯದಲ್ಲಿ ಯಾವುದೇ ವಿವಾದ ಎದುರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀ ರಾಮಜನ್ಮಭೂಮಿ  ತೀರ್ಥ ಕ್ಷೇತ್ರ ಟ್ರಸ್ಟ್ ಕ್ರಮ ಕೈಗೊಂಡಿದೆ. ಇದರ ಅಂಗವಾಗಿಯೇ ಇಡೀ ವಿಷಯದ ಕುರಿತು ಸಮಗ್ರ ವಿವರ ಇರುವ ತಾಮ್ರ ಫಲಕವನ್ನು ಜನ್ಮಭೂಮಿ ಆವರಣದಲ್ಲಿ ಎರಡು ಸಾವಿರ ಅಡಿಗಳ ಆಳದಲ್ಲಿ ಹುದುಗಿಸಿಡಲು ಅದು ತೀರ್ಮಾನಿಸಿದೆ. ಈ ವಿಷಯವನ್ನು ಟ್ರಸ್ಟ್ ನ ಸದಸ್ಯ ಕಾಮೇಶ್ವರ ಚೌಪಾಲ್ ತಿಳಿಸಿದ್ದಾರೆ.

    ಜನ್ಮಭೂಮಿಯ ಕುರಿತ ಐತಿಹಾಸಿಕ ಅಂಶಗಳು ಈ ತಾಮ್ರದ ಫಲಕದಲ್ಲಿ ಇರಲಿವೆ. ರಾಮ ಜನ್ಮಭೂಮಿ ಕುರಿತ ಸುದೀರ್ಘ ಆಂದೋಲನ, ನ್ಯಾಯಾಲಯದಲ್ಲಿ ನಡೆದ ಹೋರಾಟ, ಸುಪ್ರೀಂ ಕೋರ್ಟ್ ತೀರ್ಪು ಇತ್ಯಾದಿ ವಿವರಗಳನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಉದ್ದೇಶ ಇದರ ಹಿಂದಿದೆ. ಜತೆಗೆ ಮುಂದೇನಾದರೂ ವಿವಾದ ಮತ್ತೆ ಸೃಷ್ಟಿಯಾದರೂ ಅದರ ಪರಿಹಾರಕ್ಕೆ ಈ ತಾಮ್ರ ಶಾಸನ-ಫಲಕ ನೆರವಾಗಲಿದೆ ಎಂದು ಚೌಪಾಲ್ ಹೇಳಿದ್ದಾರೆ. 

    ಭವಿಷ್ಯದಲ್ಲಿ ಯಾರೊಬ್ಬರೂ ಶ್ರೀ ರಾಮ ಮಂದಿರ ನಿರ್ಮಾಣದ ಇತಿಹಾಸವನ್ನು ಅಧ್ಯಯನ ಮಾಡಲು ಇಚ್ಚೆ ಪಟ್ಟರೆ ಆಗ ಶಾಸನದ ಮೂಲಕ ಸಂಪೂರ್ಣ ಮಾಹಿತಿ ಸಿಗಲಿದೆ. ಆ ಮೂಲಕ ಮತ್ತೊಂದು ವಿವಾದ ಸೃಷ್ಟಿಯಾಗುವ ಸಾಧ್ಯತೆಯಿಲ್ಲ ಎಂದವರು ಹೇಳಿದ್ದಾರೆ.

     ಇದೊಂದು ರೀತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದೆ ಬರುವ ಕಂಟಕವನ್ನು ಅಥವಾ ನಿರ್ಮಾಣದ ಬಳಿಕ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮವೆಂದೇ ಪರಿಗಣಿಸಲಾಗುತ್ತಿದೆ. ಮುಂದೆ ವಿವಾದ ಮತ್ತೆ ಭುಗಿಲೆದ್ದರೆ ತಾಮ್ರ ಶಾಸನವೇ ಅತಿ ಮುಖ್ಯ ಸಾಕ್ಷಿಯಾಗಿ ಪರಿಗಣಿತವಾಗಲಿದ್ದು, ಅದನ್ನು ಅವಲಂಬಿಸಿಯೇ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಇದರಲ್ಲಿ ಅಯೋಧ್ಯಾ, ಭಗವಾನ್ ಶ್ರೀರಾಮನ ಕುರಿತ ವಿವರಗಳಿರುತ್ತವೆ. ನಾನಾ ತಜ್ಞರನ್ನು ಸಂಪರ್ಕಿಸಿ ಅವರು ನೀಡುವ ಮಾಹಿತಿಯನ್ನು ಆಧರಿಸಿ, ಅಂತಿಮವಾಗಿ ಕನಿಷ್ಠ ಪದಗಳಲ್ಲಿ ಅದನ್ನು ವಿವರಿಸಲಾಗುತ್ತದೆ. ಸುಮಾರು ನೂರು ವರ್ಷಗಳಿಂದಲೇ ಇಂತಹ ಪ್ರಯತ್ನ ನಡೆದಿದ್ದು, ಈಗ ಮಂದಿರ ನಿರ್ಮಾಣ ಸಾಕಾರವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಾಮ್ರ ಫಲಕದಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗುತ್ತಿದೆ.

    ಮಂತ್ರಾಲಯದಿಂದ ಆರಾಧನೆ ಲೈವ್ ಪ್ರಸಾರ

    ಇಂದು ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 349 ನೇ ಆರಾಧನೆಯ ಸಂಭ್ರಮ. ಕರೆೋನಾ ಕಾರಣದಿಂದ ಕೆಲವೇ ಭಕ್ತರ ಸಮ್ಮುಖದಲ್ಲಿ ಆಚರಣೆ. ಮಂತ್ರಾಲಯ ವಾಹಿನಿಯ ಮೂಲಕ ಅಲ್ಲಿನ ಕಾರ್ಯಕ್ರಮಗಳ ನೇರ ಪ್ರಸಾರ. ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಧನ್ಯರಾಗಿ

    ಆಪತ್ಕಾಲದಲ್ಲಿ ನೆರವಿಗೆ ಬರುವ ಆರೋಗ್ಯ ವಿಮೆ

    ಜೀವನದಲ್ಲಿ ಫೈನಾನ್ಷಿಯಲ್ ಪ್ಲಾನಿಂಗ್ ಎನ್ನುವುದು ತುಂಬಾ ಮುಖ್ಯ. ದುಡಿಯುವ ಸಮಯದಲ್ಲಿ ಇಂಥ ಪ್ಲಾನಿಂಗ್ ಇದ್ದರೆ ದುಡಿಮೆ ಇಲ್ಲದ ಸಮಯದಲ್ಲಿ ಆತಂಕದ ಸ್ಥಿತಿ ಇರುವುದಿಲ್ಲ. ಕನ್ನಡಿಗರಿಗೆ ಹಲವಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸಿಕೊಡುತ್ತಿರುವ ಕನ್ನಡಪ್ರೆಸ್ .ಕಾಮ್ ಪರ್ಸನಲ್ ಫೈನಾನ್ಸ್ ಕುರಿತ ಸರಣಿ ಲೇಖನ ಮಾಲೆ ಆರಂಭಿಸುತ್ತಿದೆ. ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿರುವ ಆರೋಗ್ಯ ವಿಮೆಯ ಮಾಹಿತಿಯೊಂದಿಗೆ ಸರಣಿ ಆರಂಭ.

    ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ತುಂಬಾ ದುಬಾರಿಯಾಗುತ್ತಿದೆ.  ಸರಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದರೂ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ  ತಪ್ಪಿಲ್ಲ. ವಿಶ್ವ ದರ್ಜೆಯ  ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿ ಆರಂಭವಾದ ಮೇಲಂತೂ  ಹುಷಾರು ತಪ್ಪಿದಾಗ ಅಲ್ಲಿ ಚಿಕಿತ್ಸೆ ಪಡೆದರೆ ರೋಗ ಗುಣಮುಖವಾಗಬಹುದೆಂಬ ನಂಬಿಕೆ. ಆದರೆ ಅಲ್ಲಿನ ದುಬಾರಿ ಬಿಲ್ಲು ಅಂಥ ಆಸ್ಪತ್ರೆಗಳತ್ತ ನೋಡದಂತೆ ಮಾಡುತ್ತದೆ. ಹೀಗಾಗಿ ಮಧ್ಯಮ ವರ್ಗದವರು ಮಧ್ಯಮ ದರ್ಜೆಯ ನರ್ಸಿಂಗ್ ಹೋಮ್ ಅಥವಾ ಸರಕಾರಿ ಆಸ್ಪತ್ರೆಯ ಆಸರೆ ಪಡೆಯುತ್ತಾರೆ. ಇಂಥ ಸಮಯದಲ್ಲಿ ಅವರ ನೆರವಿಗೆ ಬರುವುದೇ ಆರೋಗ್ಯ ವಿಮೆ.

    ಪಾಶ್ಚಿಮಾತ್ಯ ದೇಶಗಳಲ್ಲಿ ಆರೋಗ್ಯ ವಿಮೆ ಇಲ್ಲದೆ ಬದುಕು ಸಾಗಿಸುವುದೆ ಕಷ್ಟ. ಅಲ್ಲಿನ ದುಬಾರಿ ವೈದ್ಯಕೀಯ ಬಿಲ್ಲನ್ನು ವಿಮೆ ಇಲ್ಲದೆ ಭರಿಸುವುದು ಮಧ್ಯಮ ವರ್ಗದವರಿಗೆ ಆಸಾಧ್ಯ. ಭಾರತೀಯರಿಗೆ ಆರೋಗ್ಯ ವಿಮೆ ಅಂದರೆ ಹೆಲ್ತ್ ಇನ್ಶುರೆನ್ಸ್ ಬಗ್ಗೆ ಅಷ್ಟಾಗಿ  ಅರಿವಿಲ್ಲ. ಎಂದೋ ಬರಬಹುದಾದ  ರೋಗಕ್ಕೆ ಈಗಲೇ ಏಕೆ ವಿಮೆ ಮಾಡಿಸಬೇಕು. ಬಂದಾಗ ನೋಡಿಕೊಳ್ಳೋಣ ಎಂಬ ಭಾವನೆ. ಆದರೆ ಸಂಕಟ ಬಂದಾಗ ವೆಂಕಟರಮಣನೆ ಗತಿ. ಆಸ್ಪತ್ರೆ ಬಿಲ್ ತುಂಬಲು ಮೇಲೂ ಕೆಳಗೂ ನೋಡಬೇಕಾದ ಪರಿಸ್ಥಿತಿ. ಅಂಥ ಸ್ಥಿತಿ ಬರದಂತೆ ಇರಲು ಈಗಲೇ ವಿಮೆ ಪಡೆದರೆ ಕಷ್ಟ ಕಾಲದಲ್ಲಿ ನೆಮ್ಮದಿಯಿಂದ ಇರಬಹುದು.

    ವಿಮೆ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು

    ಮೊದಲು ನಿಮ್ಮ ಕುಟುಂಬದವರ ಸಂಖ್ಯೆ ,ವಯಸ್ಸು ಮತ್ತು ಅದಕ್ಕೆ ತಗುಲ ಬೇಕಾದ ವಿಮಾ ಕಂತನ್ನು ಲೆಕ್ಕ ಹಾಕಬೇಕು. ವಿಮಾ ಕಂತನ್ನು ನಿಮ್ಮ ಸಂಪಾದನೆಗೆ ತಕ್ಕಂತೆ ನಿರ್ಧರಿಸಿಕೊಳ್ಳಬೇಕು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕಾಯಿಲೆ ಬೀಳುವ ಸಾಧ್ಯತೆ ತೀರಾ ವಿರಳವಾಗಿರುವುದರಿಂದ 2 ಲಕ್ಷ ದಿಂದ 4 ಲಕ್ಷ ರೂಪಾಯಿಯಷ್ಟು ವೆಚ್ಚವನ್ನು ಭರಿಸಲು ಅನುಕೂಲವಾಗುವಂಥ ಪಾಲಿಸಿ ಆಯ್ಕೆ ಮಾಡಿಕೊಳ್ಳಬಹುದು.ಆಗ ಇಡೀ ಕುಟುಂಬದ ವಿಮೆಗೆ ವರ್ಷಕ್ಕೆ 8 ರಿಂದ 10 ಸಾವಿರ ರೂ .ಗಳಷ್ಟು ವಿಮಾ ಕಂತು ಬರಬಹುದು.

    ವಿಮೆ ಹೊಂದುವದರಿಂದ ಲಾಭಗಳು

    1 ಆರೋಗ್ಯವೇ ಭಾಗ್ಯವಾಗುವುದರಿಂದ ದುರದೃಷ್ಟವಶಾತ್ ಆರೋಗ್ಯ ಏರು ಪೇರಾದರೆ ವಿಮೆ ಹೊಂದಿದ್ದರೆ ಉತ್ತಮ ಆಸ್ಪತ್ರೆಯಲ್ಲಿ ಗುಣ ಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯ. ಆಪತ್ತಿನ ಸಂದರ್ಭದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪುತ್ತದೆ.

    2 ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದರೆ ನಗದು ರಹಿತ ಚಿಕಿತ್ಸೆ ದೊರೆಯುತ್ತದೆ. ಹೀಗಾಗಿ ಆಂತಕ ತಪ್ಪುತ್ತದೆ.

    3 ಕೆಲವು ಪಾಲಿಸಿಗಳು ವರ್ಷಕೊಮ್ಮೆ ಉಚಿತ ಆರೋಗ್ಯ ತಪಾಸಣೆಯ ವೆಚ್ಚವನ್ನು ಮರುಪಾವತಿಸುವ ಅವಕಾಶವನ್ನು ಕಲ್ಪಿಸುತ್ತದೆ. ಹೀಗಾಗಿ  ಯಾವುದೆ ಹೆಚ್ಚಿನ  ಖರ್ಚಿಲ್ಲದೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಹೆಲ್ದೀ ಜೀವನ ನಡೆಸಬಹುದು.

    4 ಎಲ್ಲಾ ವಿಮೆ ಗಳಲ್ಲಿರುವುಂತೆ ಇಲ್ಲೂ ನೋ ಕ್ಲೇಮ್ ಬೋನಸ್ ಇರುತ್ತದೆ. ಹೀಗಾಗಿ ಈ ಮೊತ್ತದಿಂದ   ವರ್ಷದಿಂದ ವರ್ಷಕ್ಕೆ ವಿಮೆ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು.

    5 ಕೆಲವು ಪಾಲಿಸಿಗಳು ಆಸ್ಪತ್ರೆಯ ಖರ್ಚಿನ ಜೊತೆ 2000ರೂ ವರೆಗೆ ಡೈಲಿ ಹಾಸ್ಪಿಟಲ್ ಖರ್ಚನ್ನು ನೀಡುತ್ತವೆ.ಇದು ಆಸ್ಪತ್ರೆ ವಾಸದ ಸಮಯದಲ್ಲಿ ಕೆಲವು ಖರ್ಚುಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡುತ್ತವೆ.

    6 ಕೆಲವು ಪಾಲಿಸಿಗಳು ಅಂಗಾಂಗ ಕಸಿಯ ವೆಚ್ಚವನ್ನು ಕೂಡ ಭರಿಸುತ್ತವೆ.

    7  ಇದರ ಜೊತೆಗೆ ನೀವು ಕಟ್ಟುವ ವಿಮಾ ಮೊತ್ತಕ್ಕೆ ತೆರಿಗೆ ವಿನಾಯ್ತಿಯೂ ಇದೆ.

    ಹೀಗಾಗಿ ಸಂಕಟ ಬಂದಾಗ ಆತಂಕ ಪಡುವುದರ ಬದಲು ವಿಮೆ ಹೊಂದುವುದು ಜಾಣತನವಾಗುತ್ತದೆ.

    (ಮುಂದಿನ ಕಂತಿನಲ್ಲಿ ನಾನಾ ಆರೋಗ್ಯ ಪಾಲಿಸಿಗಳ ಬಗ್ಗೆ ಅರಿಯೋಣ)

    ಅಯೋಧ್ಯೆ ಮತ್ತು ಸೋಮನಾಥ ಮಂದಿರಗಳ ಸುತ್ತ

    ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎರಡು ಮಂದಿರ ವಿವಾದಗಳು ಚಾರಿತ್ರಿಕ ಮಹತ್ವ ಪಡೆದಿವೆ. ಒಂದು ಸೋಮನಾಥ ದೇವಾಲಯದ ಪುನರುಜ್ಜೀವನ, ಇನ್ನೊಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ. ಈ ಎರಡನ್ನೂ ದೇಶವ್ಯಾಪಿ ಹಿಂದೂಗಳ ಆಸ್ಮಿತೆಯ ಸಂಕೇತವಾಗಿ ಪ್ರಚುರ ಪಡಿಸಿದ ಇಬ್ಬರು ನಾಯಕರು ಕೂಡ ಉಪ ಪ್ರಧಾನಿಗಳಾಗಿದ್ದವರು ಎಂಬುದು ಇಲ್ಲಿ ವಿಶೇಷ. ಒಬ್ಬರು ಸರ್ದಾರ್ ವಲ್ಲಭಭಾಯಿ ಪಟೇಲ್, ಇನ್ನೊಬ್ಬರು ಎಲ್. ಕೆ. ಅಡ್ವಾಣಿ.

    ಸೋಮನಾಥ ದೇಗುಲ ಪುನರುತ್ಥಾನ ಕಾರ್ಯ ಪೂರ್ಣಗೊಳ್ಳುವ ಮೊದಲೇ ಪಟೇಲ್ ನಿಧನರಾದರು. ಈಗ ರಾಮ ಮಂದಿರಕ್ಕೆ ಶಿಲಾನ್ಯಾಸ ಆಗುತ್ತಿರುವ ಸಂದರ್ಭದಲ್ಲಿ ರಥಯಾತ್ರೆ ಖ್ಯಾತಿಯ ಎಲ್. ಕೆ. ಅಡ್ವಾಣಿ ಒಂದು ರೀತಿಯಲ್ಲಿ ರಾಜಕೀಯ ಸನ್ಯಾಸದಲ್ಲಿದ್ದಾರೆ. ಗುಜರಾತಿನ ಸೌರಾಷ್ಟ್ರ ವಲಯದ ಸೋಮನಾಥ ದೇವಾಲಯ. ಘಜ್ನಿ ಮಹಮ್ಮದ್ ನಿಂದ ಏಳಕ್ಕೂ ಹೆಚ್ಚು ಬಾರಿ ಸೂರೆಗೊಂಡಿತ್ತು. ಸ್ವಾತಂತ್ರ್ಯ ಬಂದ ಬೆನ್ನಲ್ಲೇ ನಡೆದ ರಕ್ತಸಿಕ್ತ ಇತಿಹಾಸ, ಸಹಜವಾಗಿಯೇ ಹಿಂದೂಗಳಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆ ಪರಿಕಲ್ಪನೆಯನ್ನು ಬಲಗೊಳಿಸಿತು. ಆಗ ಅವರ ಮನಸ್ಸಿನಲ್ಲಿ ಬಂದಿದ್ದೇ ಸೋಮನಾಥ ದೇವಾಲಯ.ಇದನ್ನು ಮನಗಂಡ ಸರ್ದಾರ್ ಪಟೇಲರು, ಸೋಮನಾಥ ದೇವಾಲಯ ಪುನರುತ್ಥಾನಕ್ಕೆ ಕಟಿಬದ್ಧರಾಗಿ ನಿಂತರು.

    ಜಾತ್ಯತೀತರೆಂಬ ಕರೆಸಿಕೊಳ್ಳುವ ತವಕದಲ್ಲಿದ್ದ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೇ ಎದುರು ಹಾಕಿಕೊಂಡು ಸೋಮನಾಥ ದೇವಾಲಯವನ್ನು ಪುನರ್ ನಿರ್ಮಿಸಲು ಮುಂದಾದರು. ದೇವಾಲಯವಿದ್ದ ಜುನಾಗಢ ಪ್ರಾಂತ್ಯವನ್ನು ಭಾರತದ ಜತೆಗೆ ವಿಲೀನಗೊಳಿಸುವ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟ ಪಟೇಲ್, 1947 ನವೆಂಬರ್ 9ರಂದು ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸೋಮನಾಥ ದೇವಾಲಯ ಮರು ನಿರ್ಮಾಣ ಮತ್ತು ಜ್ಯೋತಿರ್ಲಿಂಗದ ಮರು ಪ್ರತಿಷ್ಠಾಪನೆಯ ಘೋಷಣೆ ಮಾಡಿದರು.

    ಆಗ ನೆಹರು ಸಂಪುಟ ಸದಸ್ಯರಲ್ಲಿ ಕೆಲವರು ಅದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾತ್ರ ಘೋಷಿಸಬೇಕು ಎಂದು ಸಲಹೆ ನೀಡಿದರಾದರೂ, ಪಟೇಲ್ ದೃಢಮನಸ್ಕರಾಗಿ ದೇವಾಲಯ ಮರು ನಿರ್ಮಾಣ ಶತಸ್ಸಿದ್ಧ ಎಂದು ಹೇಳಿದರು. ಅಂತಿಮವಾಗಿ ನೆಹರು ಸಚಿವ ಸಂಪುಟದ ಅನುಮತಿಯನ್ನೂ ಇದಕ್ಕೆ ಪಡೆಯುವಲ್ಲಿ ಸಮರ್ಥರಾದ ಪಟೇಲ್, ಗಾಂಧೀಜಿಯವರನ್ನೂ ಮನವೊಲಿಸಿರುವುದು ಈಗ ಇತಿಹಾಸ. ಆದರೆ 1950ರಲ್ಲಿ ಪಟೇಲ್ ನಿಧನರಾದರು. ಈ ಹಂತದಲ್ಲಿ ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವವರಿಂದ ಒಂದಿಷ್ಟು ವಿರೋಧ ಎದುರಾಯಿತು. ಆದರೆ, ಪಟೇಲ್ ಕನಸನ್ನು ಕೇಂದ್ರ ಸಚಿವರಾಗಿದ್ದ ಕೆ. ಎಂ. ಮುನ್ಶಿಯವರು ಸಾಕಾರಗೊಳಿಸಲು ದೃಢ ಸಂಕಲ್ಪ ಮಾಡಿ ಅದರಲ್ಲಿ ಯಶಸ್ವಿಯಾದರು.

    ಈಗ ಎಲ್. ಕೆ. ಅಡ್ವಾಣಿಯವರ ವಿಷಯಕ್ಕೆ ಬರೋಣ. ಸೋಮನಾಥ ದೇವಾಲಯದ ಮಾದರಿಯಲ್ಲಿ ಈ ಪ್ರಕರಣವಲ್ಲ. ಬದಲಾಗಿ ನ್ಯಾಯಾಲಯದ ಮೆಟ್ಟಿಲೇರಿದ ವಿವಾದ ಇದು. ಆದಾಗ್ಯೂ, ರಾಮ ರಥಯಾತ್ರೆಯ ಮೂಲಕ ದೇಶಾದ್ಯಂತ ಸಂಚಲನ ಮೂಡಿಸುವಲ್ಲಿ ಎಲ್. ಕೆ. ಅಡ್ವಾಣಿ ಯಶಸ್ವಿಯಾದರು. ಪ್ರಖರ ಭಾಷಣಗಳ ಮೂಲಕ ಜನರಲ್ಲಿ ರಾಮ ಭಕ್ತಿಯನ್ನು ಉದ್ಧೀಪನಗೊಳಿಸಿ ಅವರನ್ನು ರಾಮ ಮಂದಿರ ನಿರ್ಮಾಣದ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡಿದರು. ಈಗೇನೋ ರಾಮ ಮಂದಿರ ನಿರ್ಮಾಣ ಸಾಕಾರವಾಗುತ್ತಿದೆ. ತಮ್ಮ ಮೈ ಲೈಫ್ ಮೈ ನೇಶನ್ ಪುಸ್ತಕದಲ್ಲಿ ಅವರು ಬರೆದಂತೆ ಸೋಮನಾಥ ದೇವಾಲಯದ ಪುನರುತ್ಥಾನದ ರೀತಿಯಲ್ಲೇ ಅಯೋಧ್ಯೆಯು ಹಿಂದೂಗಳ ಆಸ್ಮಿತೆಯ ಬಹುದೊಡ್ಡ ಸಂಕೇತ. ಇದಕ್ಕಾಗಿಯೇ ರಾಮ ರಥಯಾತ್ರೆಯನ್ನು ಸೋಮನಾಥದಿಂದಲೇ ಆರಂಭಿಸಿದೆ. ಆದರೆ ಒಂದು ಕಾಲದ ಫೈರ್ ಬ್ರಾಂಡ್ ನಾಯಕ ಈಗ ಅಧಿಕಾರದಲ್ಲಿದಲ್ಲಿಲ್ಲ.
    

    ಯೋಗಿಗೆ ಒಲಿಯಿತು ಶ್ರೀರಾಮನ ಕೃಪೆ

    ರಾಮ ಜನ್ಮಭೂಮಿ ಇತಿಹಾಸವನ್ನು ಕೆದಕುತ್ತಾ ಹೋದರೆ ಹತ್ತು ಹಲವು ಕುತೂಹಲಕಾರಿ ವಿದ್ಯಮಾನಗಳು ಸಿಗುತ್ತಲೇ ಹೋಗುತ್ತವೆ. ಇವುಗಳ ಪೈಕಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಮ ಮಂದಿರಕ್ಕಿರುವ ಸಂಬಂಧವೂ ಒಂದು.

    ಅಯೋಧ್ಯೆಯಿಂದ ಪೂರ್ವಕ್ಕೆ 137 ಕಿ.ಮೀ. ದೂರದಲ್ಲಿರುವ ಗೋರಖ್ ನಾಥ ಮಠ, ರಾಮಂದಿರ ನಿರ್ಮಾಣಕ್ಕೆ ಬ್ರಿಟಿಷರ ಆಡಳಿತ ಕಾಲದಲ್ಲೇ ಜನರನ್ನು ಸಂಘಟಿಸಲು ಆರಂಭಿಸಿತ್ತು. ಮಠದ ಮೂವರು ಮಹಾಂತರಾದ ದಿಗ್ವಿಜಯ ನಾಥ್, ಅವೈದ್ಯನಾಥ್ ಮತ್ತು ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಮಂದಿರ ನಿರ್ಮಾಣ ಆಂದೋಲನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ ಮಂದಿರಕ್ಕೆ ಶಿಲಾನ್ಯಾಸ. ಇದನ್ನೇ ಶ್ರೀರಾಮ ಕೃಪೆ ಎನ್ನಬಹುದೇ ?

    1935ರಲ್ಲಿ ಗೋರಖ್ ನಾಥ ಮಠದ ಆಗಿನ ಮಹಾಂತರಾಗಿದ್ದ ದಿಗ್ವಿಜಯ ನಾಥ್, ಹಿಂದೂ ಮಹಾಸಭಾವನ್ನು ಸೇರಿ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳನ್ನು ಒಗ್ಗೂಡಿಸಲು ಆರಂಭಿಸಿದ್ದರು. 1949ರಲ್ಲಿ ಆಗ ಬರ್ಲಾಪುರದ ರಾಜನಾಗಿದ್ದ ಪಟೇಶ್ವರಿ ಪ್ರಸಾದ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಸ್ವಯಂ ಸೇವಕರ ನಿಯೋಗದೊಂದಿಗೆ ಭೇಟಿಯಾಗಿದ್ದರು. ಆದೇ ಸಂದರ್ಭದಲ್ಲೇ ಅಖಿಲ ಭಾರತೀಯ ರಾಮ ರಾಜ್ಯ ಪರಿಷತ್ ಪಕ್ಷ ಹುಟ್ಟಿಕೊಂಡಿತು.

    ಅದೇ ವರ್ಷದ ಡಿ. 22-23 ರಾತ್ರಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾನ ವಿಗ್ರಹ ಕಾಣಿಸಿಕೊಂಡಿತು. ಅಂದು ದಿಗ್ವಿಜಯ ನಾಥ್ ಅಯೋಧ್ಯೆಯಲ್ಲೇ ಇದ್ದರು. ರಾಮ ಭಜನೆ ಮಾಡುವಂತೆ ಅವರು ತಮ್ಮೊಂದಿಗೆ ಬಂದಿದ್ದ ನಿಯೋಗ ಸದಸ್ಯರಿಗೆ ನಿರ್ದೇಶನ ನೀಡಿದ್ದರು. 1969ರಲ್ಲಿ ತಾವು ಸಾಯುವವರೆಗೂ ರಾಮ ಜನ್ಮಭೂಮಿ ಆಂದೋಲನ ಕಿಚ್ಚು ಆರದಂತೆ ನೋಡಿಕೊಂಡಿದ್ದರು ದಿಗ್ವಿಜಯ ನಾಥ್.

    ಬಳಿಕ ಮಹಾಂತ ಪಟ್ಟವೇರಿದ ಅವೈದ್ಯನಾಥ್, ಆಂದೋಲನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಶ್ರೀ ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ ಸ್ಥಾಪಿಸುವ ಮೂಲಕ ಹಿಂದೂ ಸಂಘಟನೆಗಳು, ಸಾಧು-ಸಂತರ ಒಕ್ಕೂಟಗಳನ್ನು ಒಂದೇ ವೇದಿಕೆಯಲ್ಲಿ ತಂದರು. ಮಂದಿರ ನಿರ್ಮಾಣಕ್ಕಾಗಿ ಬಿಹಾರದಿಂದ ಅಯೋಧ್ಯೆಗೆ ಬೃಹತ್ ಜಾಥಾವನ್ನು ಕೂಡ ಸಂಘಟಿಸಿದ್ದರು. 1986ರಲ್ಲಿ ವಿವಾದ ಕಟ್ಟಡದ ಬೀಗ ತೆರೆಯಲು ಫೈಜಾಬಾದ್ ಜಿಲ್ಲಾಡಳಿತ ಅನುವು ಮಾಡಿಕೊಟ್ಟ ದಿನವಾದ ಫೆ. 1ರಂದು ಅವೈದ್ಯನಾಥ್ ಕೂಡ ಅಯೋಧ್ಯೆಯಲ್ಲಿ ಹಾಜರಿದ್ದರು. 1989ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ಮಂದಿರದ ಶಿಲಾನ್ಯಾಸದ ಘೋಷಣೆಯನ್ನು ಕೂಡ ಮಾಡಿದವರು ಅವರೇ. ಬಳಿಕ ಉ.ಪ್ರ.ದ ಆಗಿನ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿಯವರ ಮನವಿಯ ಮೇರೆಗೆ ಕಾರ್ಯಕ್ರಮವನ್ನು ಮುಂದೂಡಿದರೂ, ಮುಂದೆ ದೆಹಲಿಯಲ್ಲಿ ಆಗಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರನ್ನು ಭೇಟಿಯಾಗಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಒತ್ತಡ ಹೇರಿದರು.

    ಬಳಿಕದ ಸರದಿ ಯೋಗಿ ಆದಿತ್ಯನಾಥ್ ಅವರದ್ದು. ಅಜಯ್ ಸಿಂಗ್ ಭಿಶ್ಟ್ ಹೆಸರಿನ ಯುವ ಪದವೀಧರ 1992ರಲ್ಲಿ ಗೋರಖನಾಥ ಮಠಕ್ಕೆ ಭೇಟಿ ನೀಡುತ್ತಾನೆ. ಅವೈಧ್ಯನಾಥರ ಜತೆ ನಡೆಸಿದ ಮಾತುಕತೆಯಿಂದ ಪ್ರಭಾವಿತರಾಗಿ ಸನ್ಯಾಸಿಯಾಗಿ ಯೋಗಿ ಆದಿತ್ಯನಾಥ್ ಆಗುತ್ತಾರೆ. ರಾಮ ಮಂದಿರ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಯುವ ಸನ್ಯಾಸಿ, ಸಾಧು-ಸಂತರು, ಹಿಂದೂ ಸಂಘಟನೆಗಳ ಮುಖ್ಯಸ್ಥರ ಜತೆ ನಿರಂತರವಾಗಿ ಸಭೆ ನಡೆಸಿದರು. ಇವರ ಸಾಮರ್ಥ್ಯವನ್ನು ಕಂಡ ಅವೈದ್ಯನಾಥ್ 1996ರಲ್ಲಿ ತನ್ನ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ.

    ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಬಹುತೇಕ ಭಾಗಗಳಲ್ಲಿ ಆಂದೋಲನ ಕಾವು ಕಳೆದುಕೊಳ್ಳಲಾರಂಭಿಸಿತ್ತು. ಇದರ ಸೂಚನೆ ಸಿಕ್ಕ ಯೋಗಿ, 970 ಹಿಂದೂ ಸಂಘಟನೆಗಳು, 10,000 ಸಾಧುಗಳ ಬೃಹತ್ ಸಭೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ನ ಆಗಿನ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಕೂಡ ಇದರಲ್ಲಿ ಭಾಗವಹಿಸಿದ್ದರು. ಬಳಿಕ ರಾಜಕಾರಣ ಪ್ರವೇಶಿಸಿ, ನಾಲ್ಕು ಬಾರಿ ಸಂಸದರಾದರು. ಈ ಮೂಲಕ ಅಯೋಧ್ಯೆ ಆಂದೋಲನಕ್ಕೆ ಹೊಸ ರೂಪ ನೀಡಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.

    ಒಟ್ಟಿನಲ್ಲಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾ ವಿಗ್ರಹ ಪ್ರತ್ಯಕ್ಷವಾಗುವಾಗ ಗೋರಖ್ ನಾಥ ಮಠದ ಆಗಿನ ಮುಖ್ಯಸ್ಥ ಮಹಾಂತ ದಿಗ್ವಿಜಯ ನಾಥ್ ಅಯೋಧ್ಯೆಯಲ್ಲಿದ್ದರೆ, ವಿವಾದ ಸ್ಥಳದ ಗೇಟ್ ತೆರೆಯುವ ಸಂದರ್ಭದಲ್ಲಿ ಅವೈದ್ಯನಾಥ್ ರಾಮ ಜನ್ಮಭೂಮಿಯಲ್ಲಿದ್ದರು. ಈಗ ಶಿಲಾನ್ಯಾಸ ಸಂದರ್ಭದಲ್ಲಿ ಅದೇ ಮಠದ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ !

    ಶಿವಗಂಗೆ ಕೋತಿ ಉಳಿಸುವ ಅಭಿಯಾನ: ಕನ್ನಡಪ್ರೆಸ್ ವರದಿಗೆ ಉತ್ತಮ ಸ್ಪಂದನೆ

    ಕನ್ನಡ ಪ್ರೆಸ್.ಕಾಮ್ ನಲ್ಲಿ ನಿನ್ನೆ ಪ್ರಕಟವಾದ ಶಿವಗಂಗೆ ಕೋತಿ ಉಳಿಸುವ ಟೆಕ್ಕಿಗಳ ಅಭಿಯಾನ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಲವಾರು ಮಂದಿ ತಾವು ಕೂಡ ಈ ಅಭಿಯಾನದ ಭಾಗವಾಗುವುದಕ್ಕೆ ಮುಂದೆ ಬಂದಿದ್ದಾರೆ.

    ಕೋತಿಗಳ ಆಹಾರದ ಕೊರತೆ ನೀಗಿಸಲು ಟೆಕ್ಕಿಗಳ ರಚನಾತ್ಮಕ ಯೋಜನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧನ ಸಹಾಯ ನೀಡಲು ಮುಂದಾಗಿರುವುದು ಶ್ಲಾಘನೀಯ. ವನ್ಯ ಜೀವಿಗಳ ಸಂರಕ್ಷಣೆಗೆ ಕಾಳಜಿ ವಹಿಸಿರುವುದು ಗಮನಾರ್ಹ.

    ಹಲವು ಪರಿಸರ ಪ್ರೇಮಿಗಳು ಹಾಗೂ ಪ್ರಾಣಿ ಪ್ರಿಯರು ವಿವಿಧ ಸ್ಥಳಗಳಿಂದ ಪ್ರೇರಣೆ ನೀಡಿದ್ದಾರೆ. ಅಭಿನಂದನಗಳನ್ನು ಸಲ್ಲಿಸಿದ್ದಾರೆ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ರಘು ಮಾಹಿತಿ ನೀಡಿದರು. ಇದಕ್ಕೆ ಕಾರಣವಾದ ಕನ್ನಡಪ್ರೆಸ್.ಕಾಮ್ ಗೆ ಅವರು ಧನ್ಯವಾದ ತಿಳಿಸಿದರು.

    ಇದನ್ನೂ ಓದಿ : ಕೋತಿ ಉಳಿಸಲು ಟೆಕ್ಕಿಗಳ ಅಭಿಯಾನ

    error: Content is protected !!