25.1 C
Karnataka
Monday, April 21, 2025
    Home Blog Page 166

    ಅತಿವೃಷ್ಟಿ

    ವಿರಾಮದ ಓದಿಗೆ ಉತ್ತಮ ಸಣ್ಣ ಕಥೆಗಳನ್ನು ಪ್ರಕಟಿಸಿ ಎಂಬ ನಮ್ಮ ಓದುಗರ ಒತ್ತಾಸೆಗೆ ಒಪ್ಪಿ ಕಥಾ ಲೋಕ ಎಂಬ ಹೊಸ ವಿಭಾಗ ಆರಂಭಿಸುತ್ತಿದ್ದೇವೆ. ಮುಂಬೈ ಕನ್ನಡತಿ ಅಪರ್ಣಾ ರಾವ್ ಬರೆದ ಅತಿವೃಷ್ಟಿ ಈ ಅಂಕಣದ ಮೊದಲ ಕಥೆ. ಈ ಮಳೆಗಾಲದ ಬೆಚ್ಚನೆಯ ಓದಿಗೆ 2005ರ ಮುಂಬೈ ಮಹಾಮಳೆಯ ಕಥೆ . ಆನ್ ಲೈನ್ ಪತ್ರಿಕೆಗಳಲ್ಲಿ ಇದೇ ಪ್ರಥಮ ಬಾರಿಗೆ animated illustration ಬಳಸಿದ್ದೇವೆ. ಇದನ್ನು ರಚಿಸಿದವರು ನಾಡಿನ ಪ್ರತಿಭಾವಂತ ಕಲಾವಿದ ಕಿರಣ್ ಮಾಡಾಳು. ಇನ್ನು ಓದುವ ಸಂತಸ ನಿಮ್ಮದು.

    2005 ರ ಜುಲೈ 26 !

    ನಿಂತಿದೆ. ಅಲ್ಲಾ.. ಅಸಲಿಗೆ ಅಸಹಾಯಕವಾಗಿ ಮಲಗಿದೆ. ಹೂಂ. ನನ್ನನ್ನು ಯಾರೂ ಕ್ಷಣ ಮಾತ್ರವೂ ನಿಲ್ಲಿಸುವವರಿಲ್ಲ ಎಂದು ಬೀಗುತ್ತಿದ್ದ ಮುಂಬೈ ಯಾವುದೋ ಧೈತ್ಯ ಶಕ್ತಿಗೆ ಡಿಕ್ಕಿ ಹೊಡೆದಂತೆ, ತನ್ನ ಅವಯವಗಳನ್ನೆಲ್ಲಾ ಮುರಿದುಕೊಂಡಂತೆ ಬಿದ್ದಿದೆ. ಸಮುದ್ರ ಯಾವುದೋ ನೆಲ ಯಾವುದೋ ಕಾಣದಂತೆ ಮುಂಬೈಯ ಏಳು ದ್ವೀಪಗಳೂ ಜಲಾವೃತವಾಗಿವೆ. ಕಳೆದ ಎರಡು ದಿನದಿಂದ ಸುರಿದ ಮಳೆಗೆ ಜನಜೀವನವೆಲ್ಲಾ ಇರುವೆಗಳಂತೆ ಹಾದಿ ತಪ್ಪಿ ಚಿಲ್ಲಾಪಿಲ್ಲಿಯಾಗಿ ಓಡುತ್ತಿದ್ದಾರೆ. ದಿನಃ ಪ್ರತಿ ಬದುಕು ಕಟ್ಟಿಕೊಳ್ಳಲು ಎದ್ದು ಶಿಸ್ತಿನಲ್ಲಿ ಓಡುತ್ತಿದ್ದರೋ ಅದನ್ನೆಲ್ಲಾ ಬಿಟ್ಟಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಎತ್ತರದ ಸ್ಥಳ ಹುಡುಕಿ ಓಡುತ್ತಿದ್ದಾರೆ. ಎಲ್ಲಿ ನೋಡಿದರೂ ನೀರು ನೀರು.

    ಹಾಗೆ ನೋಡಿದರೆ ಮುಂಬೈ ಜನರಿಗೆ ಮಳೆಗಾಲದಲ್ಲಿ ಎಲ್ಲಾ ಕಡೆ
    ನೀರು ತುಂಬಿಕೊಳ್ಳುವುದು ಹೊಸದೇನಲ್ಲ. ತಗ್ಗಿನ ಚಾಳ್, ಜೋಪಡಿಗಳಲ್ಲಿ ಜನ ತಮ್ಮ ಕಾಲಿನ ಮಂಡಿಯ ತನಕ ನೀರಲ್ಲಿ ಮುಳುಗಿಸಿಕೊಂಡೇ ಮನೆ ಕೆಲಸ ಮಾಡಿಕೊಳ್ಳುತ್ತಾರೆ. ಎಲ್ಲವನ್ನೂ ಮಂಚ ಟೇಬಲ್ ಮೇಲಿರಿಸಿಕೊಂಡು ಸಾಮಾನ್ಯವೆನ್ನುವಂತೆ ದಿನಚರಿ ನಡೆಸುವವರಿದ್ದಾರೆ. ಮಲಗಲೆಂದೇ ಗುಡಿಸಲುಗಳಲ್ಲೂ ಊಪರ್ ಮಾಲಾ ಕಟ್ಟಿಕೊಂಡಿರುತ್ತಾರೆ.

    ಆದರೆ ..ಇವತ್ತಿನ ನೀರಿನ ರಭಸ ಸಾಮಾನ್ಯದ್ದಾಗಿರಲಿಲ್ಲ. ಅರಿವಿಗೂ ಬರುವ ಮುನ್ನವೇ ಕೂತು ಕೂತಂತೆಯೇ ಕೊಚ್ಚಿಕೊಂಡು ಹೋಗುತ್ತಿರುವಂತದ್ದು. ಆ ರಭಸಕ್ಕೆ ಕಾರು ಲಾರಿಗಳೇ ಕೊಚ್ಚಿ ಹೋಗುತ್ತಿರುವಾಗ ಮನುಷ್ಯನ ಪಾಡೇನು?

    ಮುಂಬೈ ಬದುಕೆಂದರೆ ‘ಟೈಮ್ ಈಸ್ ಮನಿ’ ಎನ್ನುವ ಮಾತು ಉತ್ಪ್ರೇಕ್ಷೆ ಏನಲ್ಲ. ಇಲ್ಲಿ ತುರುಸಿಕೊಳ್ಳಲೂ ಜನರಿಗೆ ಪುರುಸೊತ್ತಿಲ್ಲ. ಲೋಕಲ್ ಟ್ರೈನ್ ಅವಘಡದಲ್ಲಿ ಸತ್ತವನ ಶವ ಸ್ಟ್ರೆಚರ್ ಅಲ್ಲಿ ಸಾಗಿಸುತ್ತಿದ್ದರೂ ಪಕ್ಕದಲ್ಲೇ ಅದನ್ನು ಕಂಡರೂ ‘ಅಯ್ಯೋ ಪಾಪ ‘ ಅನ್ನಲೂ ಪುರುಸೊತ್ತಿಲ್ಲದವರಂತೆ ಜನ ತಮ್ಮ ತಮ್ಮ ಸಮಯದ ಟ್ರೈನ್ ಹಿಡಿಯಲು ಓಡುವವರು. ಯಾವ ಗಂಭೀರ ವಿಷಯವೂ ಮುಂಬೈಯನ್ನು ನಿಲ್ಲಿಸುವುದಿಲ್ಲ ಎನ್ನುವ ಒಣ ಹೆಮ್ಮೆ ಸುಮ್ಮನೆ ಬಂದಿದ್ದೆ?

    ಇವತ್ತೂ ಸಹ ಹವಾಮಾನ ಇಲಾಖೆ ‘ಹೈ ಟೈಡ್” ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಎಚ್ಚರಿಕೆ ಕೊಟ್ಟೇ ಇತ್ತು. ಜನರಿಗೆ ಇದೆಲ್ಲಾ ಯಾವ ಲೆಕ್ಕ. ಮೀನುಗಾರರಿಗೆ ಮಾತ್ರ ಆ ಎಚ್ಚರಿಕೆ ಎಂದುಕೊಂಡು ಎಂದಿನಂತೆ ಅಂದೂ ಎರಡು ದಿನದಿಂದ ಸುರಿಯುತ್ತಿದ್ದ ಮಳೆಗೆ ಹೆದರದೆ ತಮ್ಮ ತಮ್ಮ ಕೆಲಸಕ್ಕೆ ಓಡಿದ್ದರು.

    ಇವರೆಲ್ಲರ ಅಸಡ್ಡೆಗೆ ಸಿಟ್ಟುಗೊಂಡಂತೆ ಸಮುದ್ರ ಮಧ್ಯಾಹ್ನ ಸುಮಾರು ಒಂದೂವರೆ ಹೊತ್ತಿಗೆ ಎತ್ತೆತ್ತರದ ಅಲೆಗಳನ್ನು ಎಬ್ಬಿಸಿ ರುದ್ರ ತಾಂಡವ ಆಡತೊಡಗಿ ಎಗ್ಗಿಲ್ಲದಂತೆ ತನ್ನ ಮಿತಿ ದಾಟಿ ರಸ್ತೆ ರಸ್ತೆಗೂ ಮನೆ ಮನೆಗೂ ನೀರು ನುಗ್ಗತೊಡಗಿತು. ಎಂದಿನಂತೆ ಮಾಮೂಲಿಯಾಗಿ ಮನೆ ಕೆಲಸ ಮಾಡಿಕೊಂಡಿದ್ದವರಿಗೆ ಮುನ್ಸೂಚನೆಯೂ ಕೊಡದಂತೆ ನೀರು ನುಗ್ಗಿತ್ತು. ಮನೆಯೇ ಸಮುದ್ರ ಸೇರಿತೋ .ಸಮುದ್ರವೇ ಮನೆಗೆ ಬಂದಿತೋ ತಿಳಿಯದ ಅಯೋಮಯ. ಮನೆಯಲ್ಲಿದ್ದವರಿಗೆ ತಾನೀಗ ಏನೇನು ಎತ್ತಿಟ್ಟುಕೊಂಡು, ಯಾವ ಸಾಮಾನುಗಳನ್ನು ಕಾಪಾಡಿಕೊಳ್ಳಲಿ ಎಂಬ ವಿವೇಚನೆಗೂ ಸಮಯ ಕೊಡಲಿಲ್ಲ.

    ಯಾರೋ ಕೆಲ ಪುಣ್ಯಾತ್ಮರು ಅದೃಷ್ಟವಶಾತ್ ಮನೆ ಡಾಕ್ಯುಮೆಂಟ್ಸ್ ತೀರಾ ಆವಶ್ಯಕ ಕಾಗದ ಪತ್ರ, ಒಡವೆ ದುಡ್ಡು ಉಳಿಸಿಕೊಂಡವರು ಕೊಂಚ ನೆಮ್ಮದಿಯಿಂದ ಜಾಗ ಸಿಕ್ಕ ಕಡೆ ಸೇರಿಕೊಂಡರು. ಏನೂ ಸಿಗದವರು, ಕೈಲಾಗದವರನ್ನು ಹಾಸಿಗೆ ಹಿಡಿದ ವೃದ್ದರನ್ನು ಬದುಕಿಸಿಕೊಳ್ಳಲು‌ ಸಿಕ್ಕ ಸಿಕ್ಕವರನ್ನು ಸಹಾಯಕ್ಕಾಗಿ ಗೋಗರಿಯುತ್ತಿದ್ದರು. ಇದರಲ್ಲೆಲ್ಲಾ ಅದೃಷ್ಟವಂತರೆಂದರೆ ಬಹು ಮಹಡಿ ಕಟ್ಟಡಗಳಲ್ಲಿ ಹೊರಗೆಲ್ಲೂ ಹೋಗದೆ ಉಳಿದವರು. ಅವರ ಮನೆಗಳಲ್ಲಿ ಅತ್ಯವಶ್ಯಕ ಸಾಮಾನುಗಳು ಏನಿದ್ದವೋ ಅದಷ್ಟೇ ನಿಜವಾದ ಆಸ್ತಿ ಅವರಿಗೂ ಅಂದು. ಅಲ್ಲೂ ವಿದ್ಯುತ್ ಇಲ್ಲ. ಅದಿಲ್ಲದೆ ನೀರೂ ಕೂಡ ಇಲ್ಲ.

    ಈ ಪ್ರವಾಹಕ್ಕೆ ಬಡವ ಬಲ್ಲಿದ ಎಂಬ ಭೇದವಿಲ್ಲವಷ್ಟೇ.‌ ಸಿಲೆಬ್ರಿಟಿಗಳ ಏರಿಯಾ ಅನ್ನಿಸಿಕೊಂಡ ಜುಹು ಬಾಂದ್ರಾ ಪರಿಸರಗಳು ನೀರಲ್ಲೇ ಮುಳುಗೇಳುತ್ತಿದೆ. ಅಲ್ಲಿಯ ಜನಗಳಿಗೆ ಮೊದಲಿನಿಂದಲೂ ಅಂಧೇರಿಯಾಚೆಯ ನಗರವಾಸಿಗಳನ್ನು ಕಂಡರೆ ಒಂದು ರೀತಿ ಅಸಡ್ಡೆ. ‘ ಬಾಪ್ ರೇ. ಉದರ್ ಕೌನ್ ಜಾಯೇಗಾ.. ಅಂಧೇರಿ ಸೇ ಆಗೇ ತೋ ತಬೇಲೇ ಹೀ ಹೈ.. ಆ ಬದಿ ಎಲ್ಲಾ ಹಳ್ಳಿಗರ ಪ್ರದೇಶ’ ಎಂದು ಆಡಿಕೊಳ್ಳುವುದು ಮಾಮೂಲಿನ ವಿಷಯ.

    2005 ರ ಜುಲೈ 26 ನೇ ತಾರೀಖು ಅಂಥವರ ಆ ಗಮಂಡ್ ಅನ್ನೂ ಮುಳುಗಿಸಿತ್ತು. ಇದ್ದದ್ದರಲ್ಲಿ ಗೋರೇಗಾಂವ್ ನ ಒಂದಷ್ಟು ಜಾಗಗಳಲ್ಲಿ ನೀರು ತೀರಾ ಎಲ್ಲವನ್ನೂ ಮುಳುಗಿಸಿರಲಿಲ್ಲ. ತಗ್ಗಿನ ಪ್ರದೇಶದ ಚಾಲಿ ಮನೆಗಳು ಮುಳುಗಿದ್ದು ಬಿಟ್ಟರೆ, ಎಸ್ ವಿ ರೋಡ್ ಬದಿಯ ಎತ್ತರದ ಜಾಗಗಳು ಇದ್ದದ್ದರಲ್ಲಿ ಸುರಕ್ಷಿತವಾಗಿತ್ತು. ಆದರೂ‌ ಅಲ್ಲಿಯೂ ಮಂಡಿಯ ವರೆಗಿನ ನೀರಿನಲ್ಲಿ ಜನ ಪರದಾಡಿ ಸಾಧ್ಯವಾದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದವರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಅದುವರೆಗೂ ಕಂಜೂಸಿತನದಲ್ಲೇ ವ್ಯವಹರಿಸುತ್ತಿದ್ದ ವ್ಯಾಪಾರಿಗಳು ಎನ್ನಿಸಿಕೊಂಡವರೂ ‘ನಾಳೆ’ ಎಂಬುದೇ ಇಲ್ಲವೇನೋ ಎಂಬ ಜ್ಞಾನೋದಯ ಆದಂತೆ ದಯಾವಾನ್ ಗಳಾಗಿ ನೀರಿನ ಬಾಟಲಿಗಳು, ಪ್ಯಾಕ್ ಮಾಡಿದ ಆಹಾರಗಳನ್ನು, ವಡಾ ಪಾವ್ ಸಮೋಸಾಗಳನ್ನು ಆ ಮಳೆಯಲ್ಲಿಯೂ ಜನರನ್ನು ಕರೆ ಕರೆದು ಹಂಚುತ್ತಿದ್ದರು. ಇನ್ನು ಬಿಲ್ಡಿಂಗ್ ಗಳಲ್ಲಿ ಇದ್ದವರೂ ಸಹ ಆಗೊಮ್ಮೆ ಈಗೊಮ್ಮೆ ನೋಡಿದ್ದ ಒಮ್ಮೆಯೂ ಮುಖತಃ ಮಾತನಾಡದವರಿಗೂ ಸಹ ಮನೆಯಲ್ಲಿ ಕರೆದು ಆಶ್ರಯ ನೀಡುವ ದೃಶ್ಯವೂ ಕಾಣುತ್ತಿತ್ತು. ದೇವಸ್ಥಾನ ಶಾಲೆ ಕಾಲೇಜುಗಳು ಮನೆ ಮಠ ಕಳೆದುಕೊಂಡವರಿಗೆ ಆಶ್ರಯ ತಾಣಗಳಾದವು.

    ಎಲ್ಲಕ್ಕಿಂತ ಘೋರ ಎಂದರೆ ‘ಆರೇ’ ಡೈರಿಗೆ ಹಾಲು ಒದಗಿಸುವ ಬೃಹತ್ ತಬೆಲಾ ಸಂಕುಲಗಳಲ್ಲಿ ಕಟ್ಟಿ ಹಾಕಿದ್ದ ಮೂಕ ಎಮ್ಮೆ ಹಸುಗಳು ಈಜಿ ತಪ್ಪಿಸಿಕೊಳ್ಳಲೂ ದಾರಿ ಕಾಣದೆ ಇದ್ದಲ್ಲಿಯೇ ನೀರಿನಲ್ಲಿ ಮುಳುಗಿ ಹೋರಾಡಿ ಮರಣವಪ್ಪಿದ್ದವು.

    ಇದ್ಯಾವುದರ ಅರಿವೇ ಇಲ್ಲದಂತೆ ಹೌಸಿಂಗ್ ಸೊಸೈಟಿಯ ಕಟ್ಟಡಗಳಲ್ಲಿ ಮನೆಯಲ್ಲೇ ಉಳಿದಿದ್ದ ಜನ ಸುತ್ತಲಿನ ಜನರ ದಾರುಣತೆಗೆ ಕರಗಿ ತಮ್ಮಿಂದಾದ ಸಹಾಯ ಮಾಡುತ್ತಿದ್ದರು. ಯಾವ ಜಾತಿ ಯಾವ ಅಂತಸ್ತೂ ಅವತ್ತು ಯಾರಿಗೂ ನೆನಪಾಗುತ್ತಿಲ್ಲ. ಹೀಗೇ ಮುಂದುವರೆದು ನಾವೂ ಮುಳುಗುವ ಪರಿಸ್ಥಿತಿ ಎದುರಾದರೆ, ತಮ್ಮಲ್ಲಿರುವ ವಸ್ತುಗಳೂ ಉಳಿಯುವುದು ಅನುಮಾನ ಎಂದು ಭಾವಿಸಿದ ಜನ ಮಾಡಿದ ಅಡಿಗೆಯನ್ನೋ ಮತ್ತೊಂದನ್ನೋ ಧಾರಾಳವಾಗಿ ಹಂಚಿಕೊಳ್ಳುತ್ತಿದ್ದರು.

    ಹೋಟೆಲ್ ಗಳಿಂದ ತಮ್ಮ ಅಂಗಡಿಗಳಿಂದ ತಿನಿಸು ಸಾಮಾನು ಎತ್ತಿ ಎತ್ತಿ ರಸ್ತೆಯ ಜನರಿಗೆ ಕೊಡಲು ಆರಂಭಿಸಿದ್ದರು. ರಸ್ತೆಯ ಚಾಯ್ ವಾಲಾ ಕೂಡ ವ್ಯಾಪಾರ ಮರೆತು ಸಿಕ್ಕಿದವರಿಗೆಲ್ಲಾ ಚಾಯ್ ಹಂಚುತ್ತಿದ್ದ.

    ಒಟ್ಟಿನಲ್ಲಿ ಗಾಂಧೀಜಿ ಕನಸಿನ ರಾಮರಾಜ್ಯ ಆ ದಿನದ ಮಟ್ಟಿಗಾದರೂ ಹುಟ್ಟಿಕೊಂಡಿತ್ತು.

    ‍* * * * *

    ಪಗರಾವ್ ಬಿಲ್ಡಿಂಗ್ ನ ಕಾಳೆ ಫ್ಯಾಮಿಲಿಯ ಏಕ ಮಾತ್ರ ಪುತ್ರಿ ತೃಪ್ತಿ ಅಂದು ಕಾಲೇಜಿಗೆ ಹೋದವಳು ಸಂಜೆ ಆರಾದರೂ ಮರಳಿರಲಿಲ್ಲ. ಹನ್ನೆರಡೂವರೆಗೆಲ್ಲಾ ಕಾಲೇಜು ಮುಗಿದು ಹೆಚ್ಚೆಂದರೆ ಎರಡರ ಒಳಗೆ ದಿನಾ ಮನೆ ತಲುಪುವವಳು ಅವಳು.. ಕಾಳೆ ದಂಪತಿಗಳಿಗೆ ಮದುವೆ ಆದ ಹದಿನೇಳು ವರ್ಷದ ನಂತರ ಹುಟ್ಟಿದ ಮಗು ಅವಳು. ಟೆಸ್ಟ್ ಟ್ಯೂಬ್ ಬೇಬಿ ಅಂತೆ ಕಂತೆಗಳು ಬೇರೆ.. ಅಂಥಾ ಅವಳ ಅಮ್ಮ ಸುಮನ್ ಅಂದು ನಿಂತಲ್ಲಿ ನಿಲಲಾರದವರಾಗಿದ್ದರು. ಮಗಳು ಮನೆಗೆ ಬಂದಿಲ್ಲ. ಬಹಳ ಕಾಳಜಿಯಿಂದ ಬೆಳೆಸಿದ ಕಾರಣಕ್ಕೋ ಏನೋ ವ್ಯವಹಾರ ಜ್ಞಾನ ಸರಿಯಾಗಿ ಬೆಳೆಯದ ಹುಡುಗಿ. ಮನೆ ಕಾಲೇಜು ಬಿಟ್ಟರೆ ಅಪ್ಪ ಅಮ್ಮನೇ ಅವಳ ಪ್ರಪಂಚ. ಅದೇನೋ.. ಅಕ್ಕ ಪಕ್ಕದವರ ಜೊತೆಯೂ ಬೆರೆಯುವುದು ತೀರಾ ಕಡಿಮೆ. ಅಂತವಳು ಈ ಮಳೆಯಲ್ಲಿ ಎಲ್ಲಿ ಸಿಕ್ಕಿಕೊಂಡಳೋ? ಎಂಬ ಚಿಂತೆ ಅವರಿಗೆ. ಎಲ್ಲೋ ಒಂದು ಕಡೆ‌ ಸುರಕ್ಷಿತ ಅನ್ನುವ ಸುದ್ದಿಯಾದರೂ ಸಿಕ್ಕರೆ ನೆಮ್ಮದಿ. ಹೇಗೆ ತಿಳಿದುಕೊಳ್ಳುವುದು? ಮಗಳಿಗೆ ಮೊಬೈಲ್ ಕೂಡ ಕೊಡಿಸಿಲ್ಲ. ಅನುಕೂಲವಿಲ್ಲವೆಂದೇನಿಲ್ಲ. ತಂದೆ ಸಿಎ. ಪ್ರಕಾಶ ಕಾಳೆಗೆ ಅವೆಲ್ಲಾ ದುಂದು ವೆಚ್ಚ ಅನ್ನುವ ಭಾವನೆ.

    ಪ್ರಕಾಶ್ ಕಾಳೆ ತಮ್ಮ ಮನೆಯ ಹತ್ತಿರದಲ್ಲೇ ಆಫೀಸು ಇಟ್ಟುಕೊಂಡವರು. ಮಧ್ಯ ವಯಸ್ಸು ದಾಟಿರುವ ಹಂತದಲ್ಲಿ ದೂರ ಪಾರ ಬೇಡ ಎಂದು ಫೋರ್ಟಿನಲ್ಲಿದ್ದ ಆಫೀಸ್ ಮುಚ್ಚಿ ಮನೆಗೆ ಹತ್ತಿರವೇ ಮಾಡಿಕೊಂಡಿದ್ದರು. ಅವರ ಶಿಷ್ಯ ವೃಂದವೂ ಸಾಕಷ್ಟಿತ್ತು. ಅಂದೂ ಕೂಡ ಎಂದಿನಂತೆ ಮನೆಗೆ ಬಂದವರಿಗೆ ಮಗಳು ಮನೆಗೆ ಬಂದಿಲ್ಲ ಎನ್ನುವ ವಿಷಯ ತಿಳಿಯುತ್ತಿದ್ದಂತೆ ತಮ್ಮ ಶಿಷ್ಯರನ್ನು ಸ್ಟೇಷನ್ನಿಗೆ ಅಟ್ಟಿದ್ದರು. ಅಲ್ಲಿ ಹೋದವರಿಗೆ ಟ್ರೇನ್ ಓಡಾಟ ಮಳೆಯ ಆರ್ಭಟಕ್ಕೆ ಟಪ್ಪಾಗಿದ್ದು ತಿಳಿದು ವಿಷಯ ಮುಟ್ಟಿಸಿದರು. ಇವರ ಚಡಪಡಿಕೆ ಹೆಚ್ಚಾಯಿತು. ಹಾಳಾದ್ದು ಟಿವಿ ಕೂಡ ಇಲ್ಲ ಏನಾಗುತ್ತಿದೆ ಅನ್ನುವ ನ್ಯೂಸ್‌ ನೋಡಲಿಕ್ಕಾದರೂ. ಕಾಳೆಗೆ ಏನು ಮಾಡಬೇಕು ತೋಚದೆ ಇದ್ದಕ್ಕಿದ್ದಂತೆ ಪ್ಯಾಂಟ್ ತೊಡೆಯವರೆಗೂ ಮಡಚಿ, ಕೊಡೆ ಹಿಡಿದು ಬಿಲ್ಡಿಂಗ್ ಇಂದ ಇಳಿದು ಮುಂದೆ ಹೋಗಿ ರಸ್ತೆ ಕೊನೆಗೆ ನಿಂತು ಆತಂಕದಿಂದ ಸ್ಟೇಷನ್ ರಸ್ತೆಯ ಕಡೆಗೆ ನೋಡುತ್ತಿದ್ದರು.

    ಇತ್ತ ತಾಯಿ ಸುಮನ್ ಗ್ಯಾಲರಿಯಲ್ಲಿ ನಿಂತು ದೂರದಲ್ಲಿ ಕಾಣುವ ಗಂಡನತ್ತಲೇ ದೃಷ್ಟಿ ನೆಟ್ಟಿದ್ದರು. ಮಧ್ಯೆ ಮಧ್ಯೆ ಮುಂಬಾಗಿಲಿಗೆ ಬಂದು ಹೊರಗಿನಿಂದ ಬರುತ್ತಿರುವ ಫ್ಲಾಟಿನ ಇತರರನ್ನು ಲೋಕಲ್ ಟ್ರೇನ್ ಬಗ್ಗೆ ವಿಚಾರಿಸುವರು. ಹಾಗೆ ನೋಡಿದರೆ ಏರಿಯಾ ಬಿಟ್ಟು ಹೊರ ಹೋದವರು ಯಾರೂ ವಾಪಸ್ ಬಂದಿರಲಿಲ್ಲ. ಇಲ್ಲಿ ಓಡಾಡುತ್ತಿದ್ದವರೆಲ್ಲಾ ಅಲ್ಲಲ್ಲಿಯೇ ಸುತ್ತ ಮುತ್ತಲೇ ಇದ್ದವರು. ಒಟ್ಟಿನಲ್ಲಿ ಜನಗಳ ನಡುವೆ ಏನೇನೋ ಊಹಾಪೋಹಗಳು ಒಂದಷ್ಟು. ಬರೀ ಮುಳುಗಿದ ಮನೆಗಳವರ ಬಗ್ಗೆಯೇ ಮಾತು. ಆ ನಡುವೆ ಆಗೊಮ್ಮೆ ಈಗೊಮ್ಮೆ ಫೈರ್ ಬ್ರಿಗೆಡ್ ಆಂಬುಲೆನ್ಸ್ ಸದ್ದು, ತೃಪ್ತಿಯ ಅಮ್ಮನನ್ನು ಮತ್ತಷ್ಟು ಅಧೀರ‌ಗೊಳಿಸುತ್ತಿತ್ತು. ಎಲ್ಲಾ ಕಡೆ ಕತ್ತಲು ಬೇರೆ ಆವರಿಸಿದೆ. ಬೀದೀ ದೀಪಗಳೂ ಇಲ್ಲ. ಮುನ್ನೂರು ಅರವತ್ತು ದಿನವೂ ಜಗಜಗಿಸುವ ಮುಂಬೈ ಜೊತೆಗೆ ಅಂದು ಕಸ್ತಿ ಕಟ್ಟಿ ಕತ್ತಲು ಗೆದ್ದಿದೆ.ಇಷ್ಟರವರೆಗೂ ಕೆಲಸವೇ ಇಲ್ಲದೆ ಬಿದ್ದಿದ್ದ ಕ್ಯಾಂಡಲ್ಗಳಿಗೆ ಅವತ್ತು ಎಲ್ಲಿಲ್ಲದ ಡಿಮಾಂಡ್. ಒಂದೊಂದು ಫ್ಲೋರ್ ನವರೂ ಕ್ಯಾಂಡಲ್ ಹಚ್ಚಿ ಮನೆಗೆ ಬರುವವರ ದಾರಿ ಕಾಯುತ್ತಿದ್ದರು.

    ಸದಾ ಮನೆಯೊಳಗೇ ಅವಿತುಕೊಳ್ಳುವ , ಅಮವಾಸ್ಯೆಗೋ ಪೌರ್ಣಮಿಗೋ ಒಮ್ಮೆ ಮಾತ್ರ ತಮ್ಮದೇ ಬಿಲ್ಡಿಂಗ್ ಜನರನ್ನು ಕಂಡು ‘ಕಶಿ ಹೋ’ ‘ಕೈಸೆ ಹೋ’ ಅನ್ನುತ್ತಲೇ ಕೈ ಬೀಸಿ ಸಾಗಿ ಹೋಗುವ ಜನ ಇವತ್ತು ಮಾತ್ರ ಪುರುಸೊತ್ತೇ ಪುರುಸೊತ್ತಾಗಿರುವವರಂತೆ ಸಿಕ್ಕವರ ಜೊತೆ ಮಾತಿಗಿಳಿದಿದ್ದರು. ಯಾವ ರಸ್ತೆಯಲ್ಲಿ ಎಷ್ಟು ಅಡಿ ನೀರು ತುಂಬಿದೆ ಎಂಬುವುದರ ಬಗ್ಗೆ, ರಸ್ತೆಯಲ್ಲಿ ತೇಲಿ ಬರುತ್ತಿರುವ ಗ್ಯಾಸ್ ಸಿಲಿಂಡರ್, ಪ್ರಾಣಿಯ ಶವ, ಮುಳುಗಿದ ವಾಹನಗಳ ಬಗ್ಗೆ, ಸತ್ತು ಹೋದ ಜನರ ಬಗ್ಗೆ. ದುಡ್ಡು ಕಳೆದುಕೊಂಡವರ ಬಗ್ಗೆ ಎಲ್ಲೆಲ್ಲೂ ಚರ್ಚೆ. ಶ್ರೀಮಂತಿಕೆಯ ಭಾರಿ ಧಿಮಾಕಿನಿಂದ‌ ಯಾರ ಅಗತ್ಯವೂ ಇಲ್ಲವೆಂಬಂತೆ ಇದ್ದ ಜನರೂ ಅಂದು ಒಂದು ಜೊತೆ ಬಟ್ಟೆಯೂ ಇಲ್ಲದೆ ಬೀದಿ ಪಾಲಾದ ಬಗ್ಗೆ ರಂಜನೀಯವಾಗಿ ಕೈ ಬಾಯಿ ತಿರುಗಿಸುತ್ತಾ ಮಾತಾಡಿಕೊಳ್ಳುತ್ತಿದ್ದರು.

    ಬಾಕಿ ಸಮಯದಲ್ಲಾಗಿದ್ದರೆ ತೃಪ್ತಿಯ ಅಮ್ಮನಿಗೆ ಬಹಳಾ ಆಸಕ್ತಿ ಇಂಥಾ ಮಾತುಗಳಲ್ಲಿ. ಅವರ ಮಾತಿನ ಭರಾಟೆ ಎಷ್ಟೆಂದರೆ ಬೇರೆಯವರಿಗೆ ಆಡಲು ಅವಕಾಶವೇ ಕೊಡುತ್ತಿರಲಿಲ್ಲ. ಆಕೆ ಗವರ್ನಮೆಂಟ್ ಶಾಲೆಯ ಪ್ರಾಧ್ಯಾಪಕಿ ಆಗಿದ್ದವರು ತೃಪ್ತಿ ಹುಟ್ಟಿದ ಮೇಲೆ ಕೆಲಸ ಬಿಟ್ಟಿದ್ದರು. ಸದಾ ಮಾತಾಡುವ ವೃತ್ತಿಯಿಂದ ಬಂದವರಾದ್ದರಿಂದ ಮನೆಯಲ್ಲಿ ಸುಮ್ಮನೆ ಕೂರುವುದು ಅವರಿಗೇ ಅಸಾಧ್ಯವಾಗಿತ್ತು. ಮಾತಿಗೆ ಯಾರಾದರು ಸಿಕ್ಕರೆಂದರೆ ಮುಗಿಯಿತು. ಯಾವುದೇ ಕಾರಣಕ್ಕೊ ಬಿಡುತ್ತಿರಲಿಲ್ಲ. ಸಾಮಾನ್ಯವಾಗಿ ಬೇರೆಯವರ ಜೊತೆ ಮಾತನಾಡುವ ವ್ಯವಧಾನ ಇಲ್ಲದವರು ಮುಂಬೈ ಫ್ಲಾಟ್ ಸಂಸ್ಕೃತಿಯ ಜನ. ಇವರನ್ನು ಕಂಡ ಕೂಡಲೇ ತಪ್ಪಿಸಿಕೊಂಡು ಹೋಗುತ್ತಿದ್ದರು.

    ಅದರಲ್ಲೂ ಎದುರು ಮನೆಯ ಶೇಟೆ ಹೆಂಡತಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೇ. ಇವರ ಜೊತೆ ಮಾತಿಗೆ ನಿಂತರೆ ಮುಗಿಯಿತು. ಮನೆಯೇ ಹತ್ತಿ ಉರಿದರೂ ಬಿಡುವ ಹೆಂಗಸಲ್ಲ. ಅತೀ ಮಾತು ಎಂದು ಮೂಗು ಮುರಿದು ಬಾಗಿಲು ಧಡಾರ್ ಅಂತ ಹಾಕುವವರು. ಅಂಥವರು ಇವತ್ತಿನ ಇವರ ತಳಮಳ ಕಂಡು ಕನಿಕರಿಸಿ, ಗಳಿಗೆಗೊಮ್ಮೆ ‘ ತೃಪ್ತಿ ಆಲಿ ಕಾಯ್? ‘ ಅಂತ ಮತ್ತೆ ಮತ್ತೆ ವಿಚಾರಿಸುತ್ತಿದ್ದರು. ‘ಅಜೂನ್ ಆಲಿ ನಾಯ್” ಎಂದು ಇವರು ಸಪ್ಪಗೆ ಉತ್ತರಿಸುತ್ತಿದ್ದರು. ಕಣ್ಣೆಲ್ಲಾ ಬೀದಿಯ ಕಡೆಗೇ. ರಾತ್ರಿ ಒಂಬತ್ತು ಹೊಡೆಯುತ್ತಿದ್ದಂತೆ ಆಕೆಯ ಕಣ್ಣಲ್ಲಿ ಕಂಡೂ ಕಾಣದ ಹಾಗೆ ನೀರು. ಧೃತಿ ಗೆಟ್ಟಿಲ್ಲ ಎಂದು ತೋರಿಸಿಕೊಳ್ಳುವ ವರಸೆ ಮಾತ್ರ ಹೆಡ್ ಮಿಸ್ ನಂತೆ. ಆಕೆ ಮಗಳು ತೃಪ್ತಿಯನ್ನು ಒಬ್ಬಳೇ ಎಲ್ಲೂ ಬಿಟ್ಟವರೇ ಅಲ್ಲ. ಹೆಚ್ಚು ನೆಂಟರೊಂದಿಗೂ ಒಡನಾಟ ಇಲ್ಲದ ಅವರ ಮನೆಗೆ ಬಂದು ಹೋಗುವರೂ ಕಡಿಮೆ. ಬಾರಹ್ವಿ ವರೆಗೂ ಕಾಳೆಯವರು ಜೊತೆಯಲ್ಲಿಯೇ ಹೋಗಿ ಮಗಳನ್ನು ಬಿಟ್ಟು ಬರುತ್ತಿದ್ದರು. ಅವಳು ಒಳ್ಳೆಯ ಅಂಕ ಪಡೆದು ಎಂಜಿನಿಯರಿಂಗ್ ಸೇರಿದ ಮೇಲೆ ಸಾಂತಾಕ್ರೂಜ್ ತನಕ ಹೋಗಿ ಬಿಡೋದು ಕಷ್ಟ ಆಗಿ ಕಡೆಗೆ ಸ್ಟೇಷನ್ ತನಕ ತಲುಪಿಸಿ ಬರುತ್ತಿದ್ದರು. ಅಷ್ಟು ಕಾಳಜಿ ಮಗಳ ಮೇಲೆ. ಅವಳು ಬರುವಾಗ ಹೇಗೂ ಅಂತೂ ಸ್ಟೇಷನ್ ಇಂದ ಏಳು ನಿಮಿಷದ ದಾರಿಯನ್ನು ಒಬ್ಬಳೇ ನೆಡೆದು ಬರುತ್ತಿದ್ದಳು. ಆ ಸಮಯದಲ್ಲಿ ಸುಮನ್ ರಸ್ತೆಯ ಕಡೆ ಕಣ್ಣು ನೆಟ್ಟು ನಿಲ್ಲುತ್ತಿದ್ದರು. ಅಪರೂಪಕ್ಕೆ ಹುಟ್ಟಿದ ಮಗಳು. ಅಂತಹವಳು ಇಂದು ರಾತ್ರಿ ಒಂಬತ್ತಾದರೂ ಮನೆ ಸೇರದಿರುವುದು ತಂದೆ ತಾಯಿಗೆ ಆತಂಕ ತರದಿದ್ದೀತೆ? ಪೋಲಿಸ್ ಸ್ಟೇಷನ್ ಗೂ ಎಡತಾಕಿ ಬಂದದ್ದಾಯ್ತು. ಅವರು ಎಲ್ಲಾ ಟ್ರೈನ್ ಸ್ಥಗಿತವಾದ ಕಾರಣ ಪ್ಯಾಸಂಜರ್ ಗಳೆಲ್ಲಾ ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಸುರಕ್ಷಿತ ಸ್ಥಳ ಹುಡುಕಿಕೊಂಡಿರುವುದಾಗಿಯೂ ವಿಷಯ ತಿಳಿದರೆ ತಿಳಿಸುವುದಾಗಿಯೂ ಹೇಳಿ ಕಳಿಸಿದ್ದರು.

    ಅದೇ ಆತಂಕದಲ್ಲಿ ಒದ್ದಾಡುತ್ತಿರುವಂತೆಯೇ ಮನೆಯ ಲ್ಯಾಂಡ್ ಲೈನ್ ಅಲ್ಲೂ ಜೀವ ಬಂದು ಟ್ರಿನ್ ಗುಟ್ಟಿತ್ತು. ಎದ್ದು ಓಡಿದರು ಸುಮನ್. ಗದ್ದಲದ ನಡುವೆ ತೃಪ್ತಿಯ ಧ್ವನಿ. ಯಾರದ್ದೂ ಮೊಬೈಲ್ ಪಡೆದು ಮಾತಾಡುತ್ತಿರುವುದಾಗಿ ಹೇಳಿ, ತಾನು ಹಳಿಯ ಮಧ್ಯದಲ್ಲಿ ನಿಂತಿರುವ ಟ್ರೈನ್ ಅಲ್ಲೇ ಸಿಕ್ಕಿಕೊಂಡಿರುವುದಾಗಿಯೂ, ಸುತ್ತಲೂ ನೀರು ತುಂಬಿರುವ ಕಾರಣ ಕೆಳಗೆ ಇಳಿಯಲಾಗುತ್ತಿಲ್ಲ. ನೆಲ ಕಾಣುತ್ತಿಲ್ಲ.. ರಾತ್ರಿಯೆಲ್ಲಾ ಸ್ನೇಹಿತೆಯರ ಜೊತೆ ಅಲ್ಲಿಯೇ ಇರಬೇಕಾಗುತ್ತದೆಂದೂ, ಬೆಳಗಿನ ಜಾವ ನೀರು ಇಳಿದ ಮೇಲಷ್ಟೇ ಹೊರ ಬರುವ ಸಾಧ್ಯತೆ ಇದೆ ಎಂದು ಹೇಳಿ ಮುಂದಿನ ಮಾತಿಗೆ ಅವಕಾಶ ಇಲ್ಲದವಳಂತೆ ಫೋನ್ ಇಟ್ಟಿದ್ದಳು.

    ಅಂತೂ ಮಗಳು ಸುರಕ್ಷಿತವಾಗಿ ಇರುವುದು ತಿಳಿದು ಇಬ್ಬರಿಗೂ ಪ್ರಾಣ ಬಂದಂತಾಯ್ತು. ಮೊದಲ ಬಾರಿ ತಾವು ಮಗಳಿಗೆ ಮೊಬೈಲ್ ಕೊಡಿಸದೇ ತಪ್ಪು ಮಾಡಿದೆವು ಅನ್ನಿಸತೊಡಗಿತು. ಇನ್ನೊಬ್ಬರ ಬಳಿ ಸಹಾಯ ಕೇಳಲೂ ಹಿಂಜರಿಯುವ ಮಗಳು ಪಾಪ ಹೇಗಿರಬಹುದು ಎಂದು ನೆನೆದೇ ದುಃಖ ಪಟ್ಟರು. ಅದಕ್ಕೆ ಕಾರಣ ತಾವೇ ಎಂಬುದು ಒಪ್ಪಿಕೊಳ್ಳಲೇ ಬೇಕಿತ್ತು. ಅಕ್ಕ ಪಕ್ಕದವರು ಎಲ್ಲಿಗಾದರೂ ಜೊತೆಗೆ ಕರೆದೊಯ್ಯಲು ಬಯಸಿದರೂ ಕಳಿಸುತ್ತಿರಲಿಲ್ಲ. ವಯಸ್ಸಾದ ಇಬ್ಬರ ನಡುವೆ ಈ ಪುಟ್ಟ ಹುಡುಗಿ ಹೋಗುವುದನ್ನು ನೋಡಿ ಜನ ಆಡಿಕೊಳ್ಳುವವರೂ ಇದ್ದರು. ಆಗೆಲ್ಲಾ ಇಂಥ ಪರಿಸ್ಥಿತಿ ಬರಬಹುದು ಎಂದು ಕನಸಿನಲ್ಲೂ ಊಹಿಸಿದವರಲ್ಲ. ಬೆಳಗಿನವರೆಗೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದರು. ಬೆಳಗಿನ ಐದೂವರೆ ಸುಮಾರಿಗೆ ಮೇಲಿನ ಮನೆಯ ವಿಕಾಸ್ ರಾನಡೆ ದಾದರ್ ನ ಕೆಲಸದ ಸ್ಥಳದಿಂದ ಹಿಂದಿರುಗಿದ್ದ. ಇಪ್ಪತ್ತೆರಡು ಘಂಟೆಗಳ ನಂತರ. ಕಾಳೆ ದಂಪತಿಗಳಿಬ್ಬರೂ ಬಾಗಿಲಲ್ಲೇ ಅವನನ್ನು ನಿಲ್ಲಿಸಿ ಹೊರಗಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದರು. ಅವನಂತೂ ತನ್ನ ಸಾಹಸ ಗಾಥೆಯನ್ನು ವರ್ಣಿಸಿ ಹೇಳಿದ. ತಾನು ಕುತ್ತಿಗೆಯ ತನಕದ ನೀರಿನಲ್ಲಿ ಜನಗಳ ಗುಂಪಿನೊಂದಿಗೆ ರೈಲ್ವೆ ಹಳಿಯ ಮೇಲೆಯೇ ರಾತ್ರಿಯೆಲ್ಲಾ ನಡೆದು ಬಂದು ಈಗ ತಲುಪುತ್ತಿರುವುದಾಗಿಯೂ, ಆ ದಾರಿಯಲ್ಲಿ ಸತ್ತ ಪ್ರಾಣಿ,ವಾಹನಗಳು, ಕಸ ಎಲ್ಲವೂ ತೇಲಿ ಹೋಗುತ್ತಿರುವುದಾಗಿಯೂ, ವಿಧಿ ಇಲ್ಲದೆ ಒಬ್ಬರಿಗೊಬ್ಬರು ಕೈ ಹಿಡಿದು ರೈಲ್ವೆ ಪಟ್ರಿಯ ಮೇಲೆ ಧೈರ್ಯಮಾಡಿ ಬಿದ್ದು ಎದ್ದು ನಡೆದು ಬಂದೆವು ಎಂದು ಹೇಳುತ್ತಿದ್ದ. ಅವನ ವೇಷ ಅವನ ಮಾತಿಗೆ ಪುಷ್ಟಿ ಕೊಡುತ್ತಿತ್ತು. ಮತ್ತೆ ಮಗಳ ಪರಿಸ್ಥಿತಿಯ ಬಗ್ಗೆ ಇವರಿಗೆ ಆತಂಕ.

    ಹಾಗೂ ಹೀಗೂ ಹನ್ನೆರಡರ ಆಸುಪಾಸಿಗೆ ನೀರಿನ ಮಟ್ಟ ಇಳಿದು, ಕಡೆಗೂ ಮಗಳು ತೃಪ್ತಿ ಸುಸ್ತಾಗಿ ಮನೆ ಸೇರಿದಳು. ಅವಳಪ್ಪ ಅಮ್ಮ ಮೈಎಲ್ಲಾ ತಡಕಾಡಿ ಮಗಳಿಗೆ ಹೆಚ್ಚೇನೂ ತೊಂದರೆ ಆಗಿಲ್ಲವೆಂಬುದನ್ನು ಧೃಢಪಡಿಸಿಕೊಂಡು ನೀಳ ಉಸಿರು ಬಿಟ್ಟರು. ತೃಪ್ತಿ ಬಂದದ್ದು ತಿಳಿಯುತ್ತಲೇ ಬಾಗಿಲು ತೆರೆದು ಶೇಟೆ ಮನೆಯವರು ‘ ಆಗಾ! ಆಲಿ ತೃಪ್ತಿ’ ಎಂದು ಹೇಳಿ ಸಂತಸ ಪಟ್ಟರು. ಬಿಲ್ಡಿಂಗಿನ ಎಲ್ಲರೂ ತೃಪ್ತಿಯನ್ನು ವಿಚಾರಿಸುವವರೇ. ಅವಳೂ ಸುಸ್ತಿನಲ್ಲೇ ತಾನು ಪಟ್ಟ ಹಿಂಸೆ ತಡೆ ತಡೆದು ಹೇಳುತ್ತಿದ್ದಳು. ಇಡೀ ರಾತ್ರಿ ಬೆಳಕಿಲ್ಲದ ಲೋಕಲ್ ಟ್ರೈನಲ್ಲಿ ನೀರು ತುಂಬಿ ಅದರಲ್ಲಿಯೇ ಕಾಲು ಇಳಿಬಿಟ್ಟುಕೊಂಡು ಹಿಡಿ ಜಾಗದಲ್ಲಿ ಕೂತಿದ್ದು. ಕುಡಿಯಲು ನೀರೂ ಸಿಗದೇ ಒದ್ದಾಡಿದ್ದು, ಶೌಚಕ್ಕೆ ಹೋಗಲೂ ಅವಕಾಶ ಇಲ್ಲದೆ ನಿಂತಲ್ಲಿಯೇ ಮುಗಿಸಿಕೊಂಡಿದ್ದು, ಪಟ್ಟ ಕಷ್ಟ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದಳು.ಮನೆಗೆ ವಿಷಯ ಮುಟ್ಟಿಸಲು ಲೋಕಲ್ ಟ್ರೈನ್ ನ ಒಳಗಿದ್ದ ಜನರ ಅಲ್ಪ ಸ್ವಲ್ಪ ಚಾರ್ಜ್ ಇದ್ದ ಕೆಲವೇ ಮೊಬೈಲುಗಳು ತಮ್ಮ ಬದುಕಿನ ಕೊಂಡಿಯಾಗಿದ್ದರ ಬಗ್ಗೆ ಹೇಳಿ ಕಡೆಗೆ ಒಳ ಸೇರಿದಳು. ಅದುವರೆಗೂ ಮೂಕವಾಗಿದ್ದ ಸುಮನ್ ವಾಕ್ ಲಹರಿ ತಡೆ ಇಲ್ಲದಂತೆ ಮತ್ತೆ ಮುಂದುವರೆಯಿತು. ಮಗಳು ಹೇಳುತ್ತಿದ್ದ ಪರಿಸ್ಥಿತಿಯ ಗಾಂಭೀರ್ಯ ಇನ್ನೂ ಅವರಿಗೆ ಅರ್ಥವಾದಂತಿರಲಿಲ್ಲ. ಹೋಗುವ ಬರುವರಿಗೆಲ್ಲಾ ಮಗಳ ಕತೆ ಹೇಳುತ್ತಾ ನಿಂತರು.

    ಹೆಂಡತಿಯ ಮಾತಿಗೆ ತಡೆ ಹಾಕಲು ತ್ರಾಣವಿಲ್ಲದ ಪ್ರಕಾಶ್ ಕಾಳೆ ಮಗಳನ್ನು ವಿಚಾರಿಸಿಕೊಳ್ಳಲು ಒಳಗೆ ಹೋದರು.ತೃಪ್ತಿಗೆ ಚೇತರಿಸಿಕೊಳ್ಳಲು ಮೂರ್ನಾಲ್ಕು ದಿನವೇ ಹಿಡಿಯಿತು.

    ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡೆದುಕೊಂಡಿದ್ದ ಮನೆಗಳಿಗೆ ಹಾಗೂ ಹೀಗೂ ಕರೆಂಟ್ ಬಂದು ಟೀವಿ ಫೋನ್ ಕೆಲಸ ಮಾಡತೊಡಗಿತು. ಆಗ ಎಲ್ಲರಿಗೂ ಪ್ರವಾಹದಿಂದಾದ ಅವಘಡಗಳ ಬಗ್ಗೆ ನೋಡಲು ಅರಿಯಲು ಸಿಕ್ಕಿದ್ದು. ಎರಡು ಸಾವಿರ ಜನ ಅವತ್ತೊಂದೇ ದಿನದಲ್ಲಿ ಸಾವನ್ನಪ್ಪಿದ್ದು, ಮೂಕ ಪ್ರಾಣಿಗಳು ಮನುಷ್ಯ ಮಾಡಿದ ತಪ್ಪಿಗೆ ಬಲಿಯಾಗಿದ್ದು, ಲೆಕ್ಕಕ್ಕೆ ಸಿಗದಷ್ಟು ಸರಕಾರೀ ಹಾಗು ನಾಗರಿಕರ ವಾಹನಗಳು ಮುಳುಗಿ ಹಾಳಾಗಿದ್ದು.. ಲಕ್ಷಾಂತರ ಜನ ಮನೆ ಆಸ್ತಿ ಕಳೆದುಕೊಂಡಿದ್ದು.. ಎಲ್ಲವನ್ನೂ ಟೀವಿಯಲ್ಲಿ ನೋಡುತ್ತಾ ನೋಡುತ್ತಾ ತೃಪ್ತಿಯ ತಾಯಿ ಸುಮನ್ ಕಣ್ಣಲ್ಲಿ ಆಗ ಧಾರಾಕಾರ ನೀರು. ಇಂಥಾ ಪರಿಸ್ಥಿತಿಯಲ್ಲೂ ಮಗಳು ನಮಗೆ ಸಿಕ್ಕಳಲ್ಲಾ ಎಂದು ಸಂತೋಷದಿಂದ ಹೋಗಿ ಮಗಳನ್ನು ಅಪ್ಪಿಕೊಂಡಳು. ತಂದೆಯಂತೂ ಅಂದೇ ಮಗಳಿಗೆ ಹೊಸ ಮೊಬೈಲ್ ಖರೀದಿಸಿ ತಂದು ಕೊಟ್ಟರು. ಅದನ್ನು ಕಂಡ ತೃಪ್ತಿಯ ಮುಖದಲ್ಲಿ ಸಾವಿರ ವೋಲ್ಟ್ ಬಲ್ಪಿನ ಹೊಳಪು. ಏನೋ ಬಚ್ಚಿಟ್ಟುಕೊಳ್ಳಲೂ ಆಗದ, ಹೇಳಲೂ ಆಗದ ಸಂತೋಷ. ಪಕ್ಕದ ಮನೆಯ ಮಾಮಿಗೆ ಓಡಿ ಹೋಗಿ ತೋರಿಸಿದಳು. ಅವಳಿಂದಲೇ ಅದನ್ನು ಬಳಸುವ ವಿಧಾನ ಎಲ್ಲಾ ಕೇಳಿ ತಿಳಿದುಕೊಂಡಳು. ಅರುಣಾ ಮಾಮಿಯ ಮುಖದಲ್ಲಿ ಕಿರುನಗು.

    ಮಾರನೆ ದಿನ ಅರುಣಾ ಮಾಮಿ ಬಟ್ಟೆ ಒಣ ಹಾಕಲು ಬಾಲ್ಕನಿಗೆ ಬಂದಾಗ
    ಪಕ್ಕದ ಮನೆಯ ಗ್ಯಾಲೆರಿಯಲ್ಲಿ ಇವಳಿಗೆ ಬೆನ್ನು ಮಾಡಿ ಕೂತಿದ್ದ ತೃಪ್ತಿ ಮೊಬೈಲ್ ಅಲ್ಲಿ ಮಾತಾಡುತ್ತಿದ್ದಳು. ಮಾತು ಮಧ್ಯೆ ಮಧ್ಯೆ ನಗು ಸಂಭ್ರಮ ನಡೆಯುತ್ತಿತ್ತು. ಅವಳ ಮಾತೆಲ್ಲವೂ ಸ್ಪಷ್ಟವಾಗಿ ಕೇಳುತ್ತಿತ್ತು. ‘ತೂ ಕಬ್ ಮಿಲ್ನೇ ವಾಲೇ ಹೋ ಬೋಲೋ. ನಹೀ.. ಮೈ ನಹಿ ಆಯೇಗಿ’. ಮತ್ತೆ ನಗು. ‘ಪತಾ ಚಲೇಗಾನಾ ಘರ್ ಮೆ .. ಉಸ್ ದಿನ್ ತುಮ್ ರಾತ್ ಭರ್ ಟ್ರೈನ್ ಮೇ ಮೇರಾ ಹಾತ್ ಪಕಡ್ಕೆ ಬೈಟೆ ಥೇನಾ.. ಮಾಲೂಮ್ ಪಡ್ನೇ ದೋ ಘರ್ ಮೇ.. ದೋನೋ ಕೊ ಮಾರ್ ಡಾಲೇಂಗೇ. ಬಾತ್ ಕರ್ತಾ ಹೈ ಸಾಲಾ.. ಚಲ್ ಫಟ್ಟು ಕಯೀಕಾ’ ಅಲೆಅಲೆಯಾಗಿ ನಗು.. ‘ ರಖ್ ಅಭಿ ಫೋನ್.. ಸುನ್ ಸುನ್. ಕಲ್ ಮೆ ಪಾರ್ಲಾ ಮೆ ಉತರ್ಕೆ ಫೋನ್ ಕರೆಗೀ. ಉಟಾನಾ ಧ್ಯಾನ್ ಸೆ.. ಸೈಲೆಂಟ್ ಪೆ ಡಾಲ್ಕೆ ಮತ್ ಗೂಮ್.. ಸಮಜಾ? ರಕ್ತೀ ಹ್ಞೂ .. ಚಲ್ ಅಭಿ ಮಮ್ಮಿ ಬುಲಾರಾಹಿ ಹೈ’ ಎಂದೆಲ್ಲಾ ಮಾತನಾಡುತ್ತಾ ಪ್ರೀತಿಯ ರಂಗು ತುಂಬಿದ ನಗುವನ್ನು ನಗುತ್ತಾ ಒಳಗೆ ಹೋದಳು. ಈ ಕೆಸರಿನಲ್ಲಿ ಅರಳುತ್ತಿದ್ದ ಕಮಲವನ್ನು ಕಂಡು ಅರುಣಾ ಮಾಮಿಗೆ ವಿಚಿತ್ರ ಭಾವ.

    ಸಂಜೆ ಸುಮಾರಿಗೆ ಅರುಣಾ ಮಾಮಿ ತೃಪ್ತಿಯ ಮನೆಗೆ ಬೆಲ್ ಮಾಡಿ ಒಳ ಹೋದಳು. ಮಾತಿಗೆ ಒಬ್ಬರು ಸಿಕ್ಕ ಸಂತೋಷದಲ್ಲಿ ಸುಮನಾ ಹಿಗ್ಗಿ ಸ್ವಾಗತಿಸಿದಳು. ಅಲ್ಲೇ ಸೋಫಾ ಮೇಲೆ ಉರುಳಿದ್ದ ತೃಪ್ತಿ ಯಾವುದೋ ಭಾವ ಪ್ರಪಂಚದಲ್ಲಿ ತೇಲಾಡುತಿದ್ದಳು. ಅರುಣಾ ಮಾಮಿ ಅವಳನ್ನು ಎಚ್ಚರಿಸುತ್ತಾ.. ‘ ತೃಪ್ತಿ.. ಸುಭ್ಹೆ ಗ್ಯಾಲರಿ ಕೆ ವಹಾ ತುಮ್ ಫೋನ್ ಪೆ ಕಿಸ್ ಸೆ ಬಾತ್ ಕರ್ ರಹೀ ಥಿ?’ ಅಂದಳು. ತೃಪ್ತಿ ಜಗ್ಗನೆ ಬೆಚ್ಚಿ ಎದ್ದಳು. ಅವಳ ಮುಖದ ತುಂಬಾ ಗಾಭರಿಯೋ ಗಾಭರಿ. ತನ್ನ ಗುಟ್ಟೆಲ್ಲವೂ ಅರುಣಾ ಮಾಮಿಗೆ ತಿಳಿದೇ ಹೋಗಿದೆ. ಅದನ್ನು ಅಮ್ಮನ ಬಳಿ ಇನ್ನೇನು ಹೇಳೇ ಬಿಡುತ್ತಾಳೆ ಎಂಬ ಆತಂಕ. ಅರುಣಾ ಮಾಮಿ ಕೂಡ ಅವಳ ಅಂತರಂಗವನ್ನೇ ಬಗಿಯುವಂತೆ ದೀರ್ಘವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾಳೆ. ತೃಪ್ತಿಗೆ ಈಗ ಹೇಗೆ ಮುಚ್ಚಿಸಲಿ ಇವಳ ಬಾಯನ್ನು ಅಂದುಕೊಳ್ಳುತ್ತಿರುವಾಗಲೇ ಮನೆಯೊಳಗೆ ಪ್ರಕಾಶ್ ಕಾಳೆ ಬಂದರು. ಮನೆಗೆ ಬಂದಿದ್ದ ಅರುಣಾಳನ್ನು ನೋಡಿ ‘ ಕ್ಯಾ ಅರುಣಾ ..ಬಹುತ್ ದಿನ್ ಕೆ ಬಾದ್’ ಅನ್ನುತ್ತಾ ಶೂ ಕಳಚುತ್ತಿದ್ದಂತೆ, ತೃಪ್ತಿ ಮತ್ತಷ್ಟು ಹೆದರಿ ಅರುಣಾ ಮಾಮಿಗೆ ಹಿಂದಿನಿಂದ ಏನೇನೋ ಸನ್ನೆ ಮಾಡಿದಳು. ಇವಳು ಗಮನಿಸಿಯೂ ಗಮನಿಸದಂತೆ ‘ ಕುಚ್ ನಹಿ ಅಂಕಲ್.. ಆಪ್ ಸೆ ಕುಚ್ ಬಾತ್ ಕರ್ನೀ ಥಿ’ ಅನ್ನುತ್ತಿದ್ದಂತೆ, ತೃಪ್ತಿಗೆ ಜ್ಞಾನ ತಪ್ಪುವುದೊಂದು ಬಾಕಿ. ‘ ಅಲ್ಲೇ ಚೇರಿನ ಮೇಲೆ ಕೂತು ‘ಅಚ್ಚಾ.. ಬೋಲ್ನಾ ಅರುಣಾ’ ಅಂದ ಪ್ರಕಾಶ್ ಕಾಳೆಗೆ ಅರುಣಾ ತೃಪ್ತಿಯ ಕಡೆ ನೋಡುತ್ತಲೇ. ‘ ತೃಪ್ತಿ ತೋ..’ ಅನ್ನುತ್ತಿದ್ದಂತೆ, ತೃಪ್ತಿ ಜೋರಾಗಿ ‘ಅರುಣಾ ಮಾಮಿ’ ‘ ಮುಜೆ ಕುಚ್ ಬೋಲ್ನಾ ಥಾ ಆಪಸೇ’ ಎಂದು ಕಿರುಚಿದಳು. ಅವಳಪ್ಪ. ‘ ರುಖ್ ನಾ ತೃಪ್ತಿ .. ಬಾದ್ ಮೆ ಬೋಲೋ’ ಪಹೆಲೇ ಸುನ್ ನೇ ದೋ..’ ಎಂದು ಸಿಡುಕಿದರು. ಮನಸ್ಸಿನಲ್ಲೇ ನಗುತ್ತಾ ಅರುಣಾ.. ‘ ವಹೀ ಅಂಕಲ್.. ತೃಪ್ತಿ ಅಭಿ ಭಗವಾನ್ ಕಿ ದಯಾ ಸೆ ಸಹಿ ಸಲಾಮತ್ ಘರ್ ಪಹುಂಚ್ಗಯಿ ಹೈ.’ ‘ತೋ.. ಆಪ್ ವಹೀ ಖುಷಿ ಮೆ ಕುಚ್ ಪೈಸೆ ದೇದೋನಾ.. ಜೋ ಬೇಘರ್ ಹುಯೇ ಹೈ ಉನಕೋ.. ನಯೇ ಬೆಡ್ ಶೀಟ್ , ಕಪಡಾ,, ಕುಚ್ ಬರ್ತನ್ ದೇನೇಕೇ ಲಿಯೇ. ಹಾಮಾರೆ ಕುಚ್ ಲೋಗ್ ಪೈಸೆ ಇಕ್ಕಟ್ಟಾ ಕರ್ ರಹೇ ಹೈ. ಆಪ್ ಭಿ ಖುಷಿ ಸೆ ಕುಚ್ ಮದತ್ ಕರ್ದೋ’ ಎಂದು ಹೇಳಿ ನಗುತ್ತಾ ತೃಪ್ತಿಯ ಮುಖ ನೋಡಿದಳು. ಇನ್ನೇನು ಮುಗಿದೇ ಹೋಯಿತು ಎನ್ನುವಂತಿದ್ದವಳ ಮುಖದಲ್ಲಿ ಜೀವ ಬಂದಿತು. ಇವಳ ಕಡೆ ನೋಡಿ ದಯನೀಯವಾಗಿ ನಕ್ಕಳು. ಇವಳೂ ಪ್ರತಿಯಾಗಿ ಅಭಯದ ನಗೆ ನಕ್ಕಳು. ಪ್ರಕಾಶ್ ಕಾಳೆ ಒಳಗೆ ಹೋಗಿ ಸಂತೋಷದಿಂದ ಎರಡು ಸಾವಿರ ರುಪಾಯಿ ಚೆಕ್ ತಂದು ಅರುಣಾಳ ಕೈಗಿಟ್ಟರು. ಅರುಣಾ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಹೊರಟಳು. ಮಾತಿಗೆ ಸರಿಯಾಗಿ ಸಿಗದೇ ಹೊರಟದ್ದು ನೋಡಿ ಅಸಮಾಧಾನದಿಂದಲೇ ತೃಪ್ತಿ ತಾಯಿ ಸುಮನ್ ‘ ಇತ್ನಾ ಕ್ಯಾ ಜಲ್ದಿ ಹೈ .. ರುಕೋ ನಾ’ ಅನ್ನುತ್ತಿದ್ದರೂ ತೃಪ್ತಿ ‘ ಜಾನೆ ದೋನಾ ಮಾ.. ಮಾಮಿಕೋ ಕಾಮ್ ಹೈ.ಕ್ಯೂ ಪಕಡ್ ಕೆ ರಕ್ತೀ ಹೋ’ ಅಂದಳು. ಅರುಣಾ ಜೋರಾಗಿ ನಗುತ್ತಾ ಮತ್ತೊಮ್ಮೆ ಬರುವುದಾಗಿ ಹೇಳಿ ಹೊರ ಬಂದಳು. ಬಾಲ್ಕನಿಯಲ್ಲಿ ನಿಂತ ತೃಪ್ತಿಯನ್ನು ಮೋಡದ ಮರೆಯಿಂದ ಬಂದ ಚಂದ್ರ ನೋಡಿ ನಗುತ್ತಿದ್ದ.

    ಕಿರಣ್ ಮಾಡಾಳು

    ಈ ಕಥೆಯೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಈ ಕಿರಣ್ ಫೈನ್ ಆರ್ಟ್ಸ್ ಪದವೀಧರ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.

    ಶ್ರಾವಣ ಬಂತು ನಾಡಿಗೆ

    ಕೋವಿಡ್ ನಡುವೆಯೇ ನಾಡಿಗೆ ಶ್ರಾವಣ ಅಡಿ ಇಟ್ಟಿದೆ. ಶ್ರಾವಣವೆಂದರೆ ಹಬ್ಬಗಳ ಸಾಲಿನ ಆರಂಭ. ಸಹಜವಾಗಿಯೆ ಎಲ್ಲೆಡೆ ಸಡಗರ. ಆದರೆ ಈ ವರುಷ ಈ ಸಂಭ್ರಮಕ್ಕೆ ತುಸು ಕಡಿವಾಣ. ಹಾಗೆಂದ ಮಾತ್ರಕ್ಕೆ ಹಬ್ಬಗಳ ಆಚರಣೆಯನ್ನೇ ಬಿಡಲಾದೀತೆ ಕನ್ನಡಪ್ರೆಸ್.ಕಾಮ್ ನ ಈ ಪಾಡ್ಕಾಸ್ಟ್ ನಲ್ಲಿ ನೆನಪಿನ ಮೆರವಣಿಗೆ ಇದೆ. ಕನ್ನಡ ಕಾವ್ಯ ಗಾಯನವೂ ಇದೆ. ಕೇಳುವ ಸಡಗರ ನಿಮ್ಮದಾಗಲಿ. ಭಾರತಿ ಎಸ್ ಎನ್,ಜಯಶೀಲಾ ಮತ್ತು ಸುಮನ್ ಗಿರಿಧರ ಭಾಗವಹಿಸಿದ್ದಾರೆ. ಶ್ಯಾಮಲಾ ಅವರು ನೀವು ಕೇಳುವ ಹಾಡಿಗೆ ದನಿಯಾಗಿದ್ದಾರೆ .

    ಇದನ್ನೂ ಓದಿ 1.ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ,ಆದರೂ ಭರವಸೆ ಒಂಚೂರು ಮಾಸಿಲ್ಲ

    2.ಆಷಾಢ ಕಳೆದು ಶ್ರಾವಣ ಬಂದೀತವ್ವ…ಅಣ್ಣಾ ಬರಲೇ ಇಲ್ಲ ಕರಿಯಾಕ

    ಆಷಾಢ ಕಳೆದು ಶ್ರಾವಣ ಬಂದೀತವ್ವ.. ಅಣ್ಣಾ ಬರಲೇ ಇಲ್ಲ ಕರಿಯಾಕ

    “ಆಷಾಢಮಾಸ ಬಂದೀತವ್ವ
    ಖಾಸ ಅಣ್ಣ ಬರಲಿಲ್ಲ ಕರಿಯಾಕ..
    ಎಷ್ಟು ನೋಡಾಲಿ ಅಣ್ಣಾನ ದಾರಿ…
    ಸುವ್ವನಾರೀ..ಸುವ್ವಾರೀ…..”


    ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣು ,ಮೊದಲ ಆಷಾಢದಲ್ಲಿ
    ಮತ್ತೆ ತವರಿಗೆ ತೆರಳವಳು.ಆ ಹೆಣ್ಣಿನ ಮನದ ತುಮುಲದ ಸನ್ನಿವೇಶವನ್ನ ನಮ್ಮ ಜನಪದರು ಮನಮುಟ್ಟುವಂತೆ ಬಣ್ಣಿಸಿಬಿಟ್ಟಿದ್ದಾರೆ.

    ಈಗ ಆಷಾಢ ಕಳೆದು ಶ್ರಾವಣಕ್ಕೆ ಕಾಲಿರಿಸಿದ್ದೇವೆ. ಅದೇ ಹೆಣ್ಣಿನ ತುಮುಲವನ್ನ ನಮ್ಮ ಇಡೀ ಸಮಾಜವೇ ಹೊಂದುವ ಸ್ಥಿತಿ ಬಂದಿದೆ ಅನಿಸುತ್ತದೆ. ಕಾರಣ ಬಹಳ ಸ್ಪಷ್ಟ. ಕೋವಿಡ್ ನ ಹಾವಳಿ.ಪರಸ್ಪರ ಒಡನಾಟಕೂಡದು. ಸಾಮಾಜಿಕ ಅಂತರ,ಮುಖ ಕವಚ,ಇತ್ಯಾದಿ ನಡೆವಳಿಕೆ-ನಿಬಂಧನೆಗಳ ಸರಪಳಿ ನಮ್ಮ ದೇಹಕ್ಕೇ ಧರಿಸಿಯಾಗಿದೆ. ವರ್ತಮಾನದಲ್ಲಿ ಪಾಲನೆ ಅನಿವಾರ್ಯ.

    ಒಂದು ಕ್ಷಣ, ಕಳೆದ ವರ್ಷದ ಶ್ರಾವಣದ ಚಿತ್ರ ನೆನಪಿಸಿಕೊಳ್ಳೋಣ
    ಮಂಗಳಗೌರಿ,ವರಮಹಾಲಕ್ಷ್ಮಿ, ನಾಗರ ಪಂಚಮಿ, ಕೃಷ್ಣಾಷ್ಟಮಿ….ಇತ್ಯಾದಿ..ಒಂದೇಎರಡೆ?. ಹಬ್ಬಗಳ ಸಾಲು ಸಾಲು.ಶ್ರಾವಣದ ಅಸ್ತಿತ್ವವೇ ಹಬ್ಬಗಳಾಚರಣೆ, ಮಹತ್ವವನ್ನ ಸಾರುತ್ತದೆ. ಆಷಾಢದಲ್ಲಿ ಮೋಡಮುಸುಕಿದ ವಾತಾವರಣ. ನಂತರವೇ ಶ್ರಾವಣ. ಅಲ್ಲಲ್ಲಿ ಚದುರಿದಂತೆ ಮಳೆ ಶುರುವಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತವೆ. ನದಿಗಳೂ ತುಂಬಿ ಭೋರ್ಗರೆಯುತ್ತವೆ. ಸುತ್ತಲೆಲ್ಲವೂ ವರ್ಷ ಋತುವಿನ ರಿಂಗಣ.

    “ಬಾನ ಕಣ್ಣಿನ ತುಂಬ ನೀರಾಡಿತು ;
    ಮನೆಮನೆಯ ಬಾಗಿಲನು ಮಳೆ ತಟ್ಟಿತು ;
    ಉತ್ತ ಮಣ್ಣಿನ ಕನಸು ಕೆನೆಗಟ್ಟಿತು;
    ಶ್ರಾವಣ ಭಾದ್ರಪದ-ವರ್ಷ ಋತು”

    ಎಂದು ಋತುಪಲ್ಲವ ಕವಿತೆಯಲ್ಲಿ ಕವಿ ಕೆಎಸ್ ನರಸಿಂಹಸ್ವಾಮಿ ಅವರು ಋತುಗಳ ಚಹರೆಯನ್ನ ಕಡೆದಿಟ್ಟಿದ್ದಾರೆ.ಋತುಗಳ ನಡೆ ತಪ್ಪಿಲ್ಲ.ಒಂದಲ್ಲ ಒಂದು ರೀತಿ ನಿಸರ್ಗ ತನ್ನ ಸಹಜ ಪ್ರಕ್ರಿಯೆ ತಾಳಿಕೊಂಡೇ ಸಾಗುತ್ತದೆ.
    ದುರಂತವೆಂದರೆ ಈ ಬಾರಿಯ ನಿಸರ್ಗ ನಮಗೆ ಪ್ರಕೋಪ ತಂದಿದೆ.
    ಅದೂ ನಿಸರ್ಗದ ಮೇಲೆ ಆರೋಪ ಮಾಡುವ ಹಾಗಿಲ್ಲ. ಮನುಜರೇ ಮಾಡಿಕೊಂಡ ಸ್ವಯಂಕೃತಾಪರಾಧ.

    ಕೋವಿಡ್ ನ…ಹಾವಳಿಯಿಂದಾಗಿ ನಮಗೆ ನಾವೇ ಅತ್ಯಂತ ಎಚ್ಚರಿಕೆಯಿಂದ ಹಬ್ಬಗಳನ್ನ ಆಚರಿಸುವ ಹೊಣೆ ನಮ್ಮದಾಗಿದೆ.ಸಾಮಾನ್ಯ ಹಬ್ಬಗಳನ್ನ ಮನೆಮಂದಿ,ನೆರೆಹೊರೆಯವರೂ ಕೂತು ಕಲೆತು ಆಚರಿಸುವ ಪರಿಪಾಠವಿದೆ. ಆದರೆ ಇವತ್ತಿನ ವಿದ್ಯಮಾನ ಅದಕ್ಕೆ ಸಹಕರಿಸುತ್ತಿಲ್ಲ. ಮನೆಮಂದಿ ಮಾತ್ರ
    ಈಗಿನ ಹಬ್ಬಗಳ ಸವಿಯನ್ನ ತಮ್ಮದಾಗಿಸಿಕೊಳ್ಳಬಹುದಾಗಿದೆ.ಏಕೆಂದರೆ ಕುಟುಂಬದ ಸದಸ್ಯರ ಹೊರತಾಗಿ ಬೇರೆಯವರನ್ನ ಆಮಂತ್ರಿಸಿದರೆ ಕೊರೋನ ಸಾಂಕ್ರಾಮಿಕದ ಆತಂಕವನ್ನೂ ಕರೆದುಕೊಂಡಂತಾಗಿಬಿಡುತ್ತದೆ.

    ಆಷಾಡದವರೆಗೂ ನವದಂಪತಿಗಳಾಗಿದ್ದವರು,ಆ಼ಷಾಢಪೂರ್ತ ಬೇರೆಬೇರೆಯಾಗಿಯೇ ಇರಬೇಕೆಂಬ ಸಾಂಪ್ರದಾಯಿಕ ಕಟ್ಟಳೆಯಿದೆ. ಆಷಾಢದಲ್ಲಿ ಅತ್ತೆ ಸೊಸೆ ಒಂದೇಬಾಗಿಲಲ್ಲಿ ಓಡಾಡಬಾರದು ಎಂದೂ ಹೇಳುವುದುಂಟು. ಇದಕ್ಕೆಲ್ಲ ಅಂದಂದಿನ ಕಾಲದ ಅರ್ಥವಿತ್ತು.ಈಗ ಸಾಮಾಜಿಕ ಚಿತ್ರವೇ ಬದಲಾಗಿದೆ. ದುಡಿಯುವ ದಂಪತಿಗಳು ಈ ಸಂಕಲೆಯಿಂದ ಅನಿವಾರ್ಯ ಹೊರ ಬರಬೇಕಾಗುತ್ತದೆ. ಪರಿಸ್ಥಿತಿ ಹಾಗಿದೆ.
    ಪ್ರಸ್ತುತ ಸಣ್ಣಕುಟುಂಬಗಳೇ ಈಗ ಕಾಣಸಿಗುವುದು. ಗಂಡ ಹೆಂಡತಿ,ಒಂದು ಅಥವಾ ಎರಡು ಮಗು. ನಗರವಾಸಿಗಳಾದರಂತೂ ಅವಲಂಬಿತರ ಪಾಡು ದೇವರೇ ಬಲ್ಲ.

    ವರ್ತಮಾನದಲ್ಲಿ ಹಬ್ಬ,ಆಚರಣೆ..ಎಲ್ಲವೂ ಮನಸ್ಸಿನ ಸ್ಥಿತಿ ಎಂದರೆ
    ಅಚ್ಚರಿಯಲ್ಲ.. ಹಿರಿಯರು ಒಂದು ಜಾಣ ಮಾತು ಹೇಳಿದ್ದಾರೆ.
    ಉಂಡಿದ್ದೇ ಉಗಾದಿ ಮಿಂದಿದ್ದೇ ದೀಪಾವಳಿ ಅಂತ.ಈ ಮಾತು
    ಮನಸ್ಸಿನ ವ್ಯಾಪಾರಕ್ಕೆ ಸಂಬಂಧಿಸಿದೆ ಇಂದು ಎಲ್ಲ ಕುಟುಂಬಗಳೂ ಹಬ್ಬ ಅಂದರೆ ಉಂಡು,ಉಟ್ಟು ಖುಷಿ ಪಡಬೇಕೆಂದು ಬಯಸುತ್ತವೆ.
    ಸಾಮಾಜಿಕವಾಗಿ ,ಸಾಂಸ್ಕೃತಿಕವಾಗಿ ನಾವು ಸಮೃದ್ಧರು. ಆರ್ಥಿಕವಾಗಿ
    ಸ್ವಲ್ಪ ಏರುಪೇರಾಗುತ್ತದೆ,ನಿಜ. ಯಾವುದೇ ಆಚರಣೆಗೆ ಮೊದಲು
    ನಮ್ಮ ಸಾಮಾಜಿಕ ಆವರಣ ತಿಳಿಯಾಗಿರಬೇಕು.ಆಗ ಮಾತ್ರ ನಾವು ಆಚರಣೆಗಳಲ್ಲಿ ಪಾಲ್ಗೊಂಡು ಅದರ ಸವಿ ಅನುಭವಿಸಬಹುದು.
    ಇಲ್ಲದಿದ್ದರೆ ಸಡಗರ,ಸಂತಸ ನಮ್ಮಮೈಮನಗಳಲ್ಲಿ ಸುಳಿದಾಡುವುದಿಲ್ಲ.
    ಭೂಕಂಪ, ಪ್ರವಾಹ, ಕ್ಷಾಮ,ಯುದ್ಧ, ಇತ್ಯಾದಿಗಳ ಅನುಭವ ನಮಗೆ ಆಗಿದೆ. ಅವುಗಳಿಗೆ ತುತ್ತಾದ ಸಮುದಾಯದ ಬಗ್ಗೆ ನಾವು ಅನುಕಂಪ ಪಟ್ಟಿದ್ದೇವೆ. ಅಂತಹ ಸಂದರ್ಭಗಳಲ್ಲಿ ನಮಗೆ ಸಾರ್ವಜನಿಕವಾಗಿ ಹಬ್ಬ,ಉತ್ಸವಗಳ
    ಸಡಗರ ಹಿತವೆನಿಸುವುದಿಲ್ಲ.

    ಈಗ ಅಂಥದೇ ನೈಸರ್ಗಿಕ ಪ್ರಕೋಪ ನಮ್ಮನ್ನ ಕಾಡುತ್ತಿದೆ. ನಮ್ಮ ದೇಶದ
    ಯಾವುದೋ ಊರು,ಯಾವುದೋ ಪ್ರದೇಶ,ಯಾರೋ ಒಂದಿಷ್ಟು ಜನ,ಜಾನುವಾರು,ಆಸ್ತಪಾಸ್ತಿ ಹಾನಿ ಮಾಧ್ಯಮಗಳ ಮುಖೇನ ಸುದ್ದಿಯಾಗಿ ತಲುಪುತ್ತಿತ್ತು. ಓದಿ, ವೀಕ್ಷಿಸಿ ತುಟಿಯನುಕಂಪ ವ್ಯಕ್ತಪಡಿಸುತ್ತದ್ದೆವು.

    ಈಗ ಆ ಭಯಾನಕ ಆತಂಕ,ತಲ್ಲಣ ನಮ್ಮ ಮನೆಯಂಗಳದಲ್ಲೇ ಇದೆ.
    ಯಾರಿಗೆ ಹೇಳುವುದು? ಈ ನಡುವೆ ಶ್ರಾವಣ ಶುರುವಾಗಿದೆ.
    ಕವಿ ಬೇಂದ್ರೆ ಅವರು

    “ಬಂತು ಶ್ರಾವಣ ಬಂತು ಕಾಡಿಗೆ, ಬಂತುನಾಡಿಗೆ,ಬಂತು ಬೀಡಿಗೆ…
    ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
    ಕುಣಿದಾವ ಗಾಳಿ| ಭೈರವನ ರೂಪತಾಳಿ…

    ಕವಿ ಕಂಡ ಶ್ರಾವಣ ಆಗ ಆಪ್ಯಾಯಮಾನ. ನಿಸರ್ಗದ ಸೌಂದರ್ಯವನ್ನ ಕಂಡು ಉನ್ಮತ್ತರಾಗಿ ಹಾಡಿದರು.ಆ ಕವಿತೆಯ ಸಾಲಿನಲ್ಲಿ “ರಾವಣಾ.”ಎಂಬ ಪ್ರತಿಮೆಯೂ ಇದೆ. ಕೋವಿಡ್ ವೈರಾಣುವಿನ ಸ್ವಚ್ಛಂದ
    ವಿಹಾರ ನನಗೆ ರಾವಣನ ರೂಪವೇ ಅನಿಸುತ್ತದೆ. ವೈರಾಣು ಪರಿಣಾಮದಲ್ಲಿ ಜ್ಯಾಮಿತಿ ಲೆಕ್ಕಾಚಾರದಂತೆ ಉಲ್ಬಣಿಸುತ್ತಿದೆ. ಸಾವಿರ,ಲಕ್ಷ,ಕೋಟಿ ಜೀವಗಳ ಹನನ ಮಾಡುತ್ತಿದೆ. ರಾವಣನ ಕುಣಿದಾಟ ನಾವು ನೋಡಿಲ್ಲ.ಅವನೊಬ್ಬ ಖಳನಾಯಕ ಕೆಲವರಿಗೆ ಪ್ರತಿನಾಯಕ. ಕವಿತೆ ಓದಿ ಆನಂದಿಸಿದೆ.ಕವಿಯ ಧ್ವನಿ ಅಮರ. ಅದರ ಅನುಭವ ,ಕವಿಸಮಯಕ್ಕೆ ಪ್ರಯಾಣಿಸಲು ಮನಸ್ಸಿಗೆ ಸ್ವಲ್ಪ ಹಿಂಜರಿಕೆ. ಯಾಕೆಂದರೆ ಮನೆಯಂಗಳವೇ ಕ್ವಾರಂಟೈನ್ ಆಗುವ ,ಮನೆಯೊಳಗೇ ಸೀಲ್ ಡೌನ್ ಆಗಿಬಿಡುವ ಸಂದರ್ಭಗಳು,
    ಆ ದುರ್ದಿನಗಳು ಯಾರಿಗೆ ಯಾವಾಗ ಒದಗುವುದೋ ನಮ್ಮರಿವಿಗೆ ಬರುತ್ತಿಲ್ಲ.

    ನಮ್ಮ ಆರೋಗ್ಯ,ನಮ್ಮ ಜಾಗೃತಿ, ವೈದ್ಯಕೀಯ ವಿಜ್ಞಾನದ ಮಾಹಿತಿಗಳನ್ನ ಚಾಚೂ ತಪ್ಪದೇ ಪಾಲಿಸಿ ಮತ್ತೆ ನಮ್ಮ ಸಂಸ್ಕೃತಿ ಆಚರಣೆಗಳ ಮೊದಲಿನ ಸ್ಥಿತಿಯನ್ನ ಕಾಣುವ ಕನಸು ನಮ್ಮದಾಗಿರಲಿ. ಅಂತಹ ಕನಸು ನನಸಾಗಿಸೋಣ. ಸಾಮೂಹಿಕ ಪ್ರಯತ್ನದಿಂದ ಕೋವಿಡ್ ….ತೊಲಗಿಸೋಣ.

    ಸದ್ಯ ಸಾಮಾಜಿಕವಾಗಿ ಶ್ರಾವಣದ ಸಮಯದಲ್ಲಿ ಸೂತಕದ ಛಾಯೆ
    ಆವರಿಸಿದಂತಾಗಿದೆ ಅಂತ ಅಂದರೂ ಅದೊಂದು ಮನಸ್ಸಿನ ಸ್ಥಿತಿ ಅಂದಮೇಲೆ …..ಮುಂದೆ ಏನೂ ಹೊಳೆಯುವುದಿಲ್ಲ. ಆದರೂ…ಕ್ಷೇಮ ಎನ್ನುವ ಅಣ್ಣಇನ್ನೂ ಯಾಕ ಬಂದಿಲ್ಲ.. ಕರಿಯಾಕ…!? ಎನ್ನುವ ಪ್ರಶ್ನೆ
    ಇಡೀ ಜನಪದ ಗೀತೆಯ ಪಲ್ಲವಿಯೇ ಕೇಳುವಂತಾಗಿದೆ ನಮ್ಮ ಸ್ಥಿತಿ.

    ಇದನ್ನೂ ಓದಿ ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ , ಆದರೂ ಭರವಸೆ ಒಂಚೂರು ಮಾಸಿಲ್ಲ

    ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ, ಆದರೂ ಭರವಸೆ ಒಂಚೂರೂ ಮಾಸಿಲ್ಲ

    ರವಿ-ಇಳೆಯರ ಪುರಾತನ ಪ್ರೇಮವ, ಸರಸವ ಕಂಡು ಹೊಟ್ಟೆಕಿಚ್ಚಾಗುವ ಮಳೆರಾಯ ಪ್ರೇಮಿಗಳಿಬ್ಬರನ್ನು ವಿರಹದ ಬೇಗುದಿಯಲ್ಲಿ ಬೇಯುವಂತೆ ಮಾಡಿ ಕೊನೆಗೂ ತಾನೇ ಸುಸ್ತಾಗಿ ತನ್ನಬ್ಬರವ ತಗ್ಗಿಸುವಾಗ ಆಷಾಢ ಮುಗಿಯಲು ಬಂತೆಂದೇ ಅರ್ಥ. ಸಿಡಿಲು ಮಿಂಚಿನಾರ್ಭಟಕೆ ತತ್ತರಿಸಿದ ರವಿಯೂ ಅಳುಕುತ್ತಲೇ ಕಾರ್ಮೋಡದ ಬೆನ್ನಮರೆಯಿಂದ ಇಣುಕಿ ಇಳೆಗೆ ಕಣ್ಮಿಟಕಿಸುವಾಗ ಅವಳಲ್ಲೂ ನಾಚಿಕೆಯ ಹೂಮೊಗ್ಗು. ಶ್ರಾವಣದಲಿ ತನ್ನ ಸೇರಲು ಬರುವ ಇನಿಯನಿಗಾಗಿ ಇಳೆಯ ಅಲಂಕಾರವೇನು ಕಮ್ಮಿಯೇ?

    ತಿಳಿನೀರ ಕೊಳದಲಿ ಮಿಂದು, ಪಾರಿಜಾತದ ಘಮಲಿನ ಅತ್ತರು ಪೂಸಿಕೊಂಡು, ಪಚ್ಚೆ ಹಸಿರಿನ ಸೀರೆ ಕುಪ್ಪಸವ ತೊಟ್ಟು, ಬಣ್ಣಬಣ್ಣದ ಹೂವಿನ ಕಂಠಿಹಾರ, ಮಲ್ಲಿಗೆ-ಸೇವಂತಿಯ ಬೆಂಡೋಲೆ ಧರಿಸಿ, ಚಿಗುರೆಲೆಯ ಡಾಬು, ಕಾಲ್ಗೆಜ್ಜೆ ಧರಿಸಿದ ಅವಳು ಅಬ್ಬಾ! ಭುವನ ಮನಮೋಹಿನಿಯೇ. ಪ್ರಖರ ಬೆಳಕಿಂದ ಛಾಯೆಯನ್ನು ಮಂಕಾಗಿಸಿದ ರವಿಯೂ ಕೂಡ ಇಳೆಯಂತಹ ಪ್ರೇಮಿಕೆ ಮುಂದೆ ತಂಪನೆಯ ಶಿಶಿರ. ಸುದೀರ್ಘ ವಿರಹದಿಂದ ಬಳಲಿದ ಪ್ರೇಮಿಗಳ ಮಿಲನದ ಪ್ರತೀಕವೆಂಬಂತೆ ಮನೆಮನೆಯಲ್ಲೂ, ಮನದಲ್ಲೂ ಹಬ್ಬವೇ ಹಬ್ಬ.

    ಶ್ರಾವಣ ಎಂದೊಡನೇ ನನಗೆ ಮೊದಲು ನೆನಪಾಗುವುದು ನಾ ಕಳೆದ ಬಾಲ್ಯ, ತವರು, ಅಲ್ಲಿನ ಆಚರಣೆ ಹಬ್ಬ ಹರಿದಿನ ಇವೇ. ಶ್ರಾವಣದ ಶುರುವಿನಲ್ಲಿಯೇ ಅಮ್ಮ ‘ಮಂಗಳಗೌರಿ’ ವೃತವನ್ನು ಅದೇಷ್ಟು ಶೃದ್ಧಾಭಕ್ತಿಯಿಂದ ಮಾಡುತ್ತಿದ್ದಳು ಅಂದರೆ, ದೇವಿಯೇ ನಮ್ಮನೆ ಬಾಗಿಲಿಗೆ ಬಂದು ಬಾಗಿನ ತೆಗೆದುಕೊಂಡು ಹೋಗುಬಿಡುವಳೇನೋ ಎಂಬಷ್ಟು ತೀವ್ರವಾಗಿ.

    ಶ್ರಾವಣದ ಮೊದಲ ಮಂಗಳವಾರ ಕಳಶವಿಟ್ಟು, ಅದಕ್ಕೆ ಹಸಿರು ಕುಪ್ಪಸದಿಂದ ಸೀರೆಯುಡಿಸಿ, ತನ್ನ ಆಭರಣಗಳನ್ನು ಹಾಕಿ, ಅರಶಿನ ಲೇಪದ ಮೇಲೆ ಕುಂಕುಮದ ಬೊಟ್ಟಿಟ್ಟು, ಕೊನೆಗೆ ಕಪ್ಪನೆಯ ಬೊಟ್ಟು ಕಾಡಿಗೆಯಿಟ್ಟು ಲಟಕ್ಕೆಂದು ನೆಟಿಕೆ ಮುರಿದಾಗ ದೇವಲೋಕದಲ್ಲಿ ದೇವಿ ಮುದದಿಂದ ನಕ್ಕಿರಲೂಬಹುದು. ಅಮ್ನೋರಿಗೆ ಹೆಸರುಬೇಳೆ ಪಾಯಸವಿಷ್ಟ, ನೆನೆಸಿಟ್ಟ ಕಡಲೆಯಿಷ್ಟ, ಅಂಬೋಡೆ ಇಷ್ಟ ಅಂತೆಲ್ಲ ಅಡುಗೆ ಮಾಡುವಾಗ ಅಮ್ಮನ ಮಮತೆ ಕಾಣಿಸುತ್ತಿತ್ತು ಅವಳಲ್ಲಿ. ನನ್ನ ಕಷ್ಟಕ್ಕೆಲ್ಲಾ ನೀನೇ ಮಡಿಲು ಎಂಬಂತ ಹಾಡನ್ನು ಗುನುಗುತ್ತಾ ತುಪ್ಪದಾರತಿಯೆತ್ತುತ್ತಾ ಕಣ್ತುಂಬಿಕೊಳ್ಳುವಾಗ ಅಲ್ಲೊಬ್ಬ ಅಮಾಯಕ ಮಗಳಿರುತ್ತಿದ್ದಳು. ಕುಂಕುಮದ ದಿನ ಅಚಾನಕ್ ಹಿರಿಮುತ್ತೈದೆ ಬಂದರಂತೂ ಮೊಗವೆಲ್ಲಾ ಹೂವಾಗಿ ಅವರಿಗೆ ಉಡಿ ತುಂಬಿ ಕಾಲಿಗೆ ಬೀಳುವಾಗ ಅಲ್ಲೊಬ್ಬ ಮುಗುದ ಹೆಣ್ಣಿನ ಪ್ರತಿರೂಪವಿರುತ್ತಿತ್ತು. ಹೀಗೇ ಅಮ್ಮನಿಗೆ ಶ್ರಾವಣವೆಂದರೆ ಮಂಗಳಗೌರಿ. ನನಗೋ ಶ್ರಾವಣವೆಂದರೆ ಇವೆಲ್ಲಕ್ಕಿಂತ ಮಿಗಿಲಾದ ಒಂದು ಪುಳಕವಿತ್ತು. ಅದಕ್ಕೆ ಕಾರಣ ಕೃಷ್ಣಾಷ್ಟಮಿ.

    ಅಜ್ಜಿ ಹೇಳುತ್ತಿದ್ದ ಕಥೆ ಕೇಳಿಯೇ ಕೃಷ್ಣನೆಡೆಗೆ ಅವ್ಯಕ್ತ ಭಾವಬಂಧನವೊಂದು ಶುರುವಾಗಿದ್ದು. ಕೃಷ್ಣನೆಂದರೆ ಬಾಲ್ಯಸಖ, ಹರೆಯದ ಬಿಸುಪಿಗೆ ರಂಗು ತುಂಬುದವ, ಹೊಕ್ಕಳಿಗೆ ನವಿಲುಗರಿಯಿಂದ ಕಚಗುಳಿಯಿಟ್ಟು ನವಿರುಕಂಪನವ ತಂದ ಪೋರ. ಕೃಷ್ಣನೆಡೆಗಿನ ಮೋಹವ ಬಣ್ಣಿಸಲು ಪುಟವೇ ಸಾಲದು ನನಗೆ. ಹೀಗೆ ಮನಸಾರೆ ಮೋಹಿಸಿದ, ಪ್ರೇಮಿಸಿದ ಕೃಷ್ಣನೇ ಮಡಿಲಿಗಿಳಿದ ಮೇಲೆ ಕಣ್ಮಿಂಚಲಿ ಕೊಲ್ಲುವವನ ಕಣ್ಣಲ್ಲೀಗ ಮಾದಕತೆಯೆಲ್ಲಾ ಕರಗಿ ಮಮತೆಯೆ ಸೆಲೆ ತುಂಬಿದೆ. ನಡುಬಳಸಿ ಕಚಗುಳಿಯಿಟ್ಟು ನಿಂತಲ್ಲೇ ನೀರಾಗಿಸುವವನ ಬೆರಳುಗಳೀಗ ಮಡಿಲಲ್ಲಿ ಮಲಗಲು ಸೆರಗೆಳೆಯುತ್ತದೆ. ಕೆಂದುಟಿಗಳ ಮಧುವ ಹೀರಿ ಸೊಕ್ಕುವ ಹವಳ್ದುಟಿಗೀಗ ಎದೆಗಡಿಗೆಯ ಹಾಲನ್ನು ಖಾಲಿಯಾಗಿಸುವ ತವಕ. ಕಾಲಕ್ಕೆ ತಕ್ಕಂತೆ ನನ್ನೊಡನೆ ತನ್ನ ಪಾತ್ರವನ್ನೇ ಬದಲಿಸಿ ನನ್ನೊಡನೆ ನೆರಳಾಗಿರುವ ನನ್ನ ಮಗ ಕೃಷ್ಣನ ಜನುಮದಿನ ಅಮ್ಮನಿಗೆ ಹಬ್ಬವಲ್ಲದೇ ಮತ್ತೇನು?

    ನಾಗರಪಂಚಮಿ ಸಮೀಪಿಸುವಾಗಲೋ, ಜಟುಕನ ಪೂಜೆಯ ಸಮಯದಲ್ಲೋ ಹಿರಿ ನಾಗರವೊಂದು ಊರಿನ ಮನೆಯಂಗಳದಲ್ಲೋ, ತುಳಸೀಕಟ್ಟೆಯ ಸುತ್ತಲೋ, ಬಾವಿಯ ಸಮೀಪವೋ ಕಾಣಿಸಿಕೊಂಡು ಮಾಯವಾಗುತ್ತಿದ್ದ. ನನ್ನಮ್ಮ ಅಜ್ಜಿಯರಂತೂ ಅಪರೂಪಕ್ಕೆ ಮನೆಗೆ ಬಂದ ನೆಂಟರಂತೆ ನಾಗರಹಾವನ್ನು ಮಾತನಾಡಿಸುವ ಪರಿ ನನಗೀಗಲೂ ಅಚ್ಚರಿಯೇ.

    ಹಾವಿನ ಬಳಿಯೇ ನಿಂತು ‘ನೋಡು ಮಗಾ, ನೀ ಮಕ್ಳು ಮರಿ ಇಪ್ಪು ಜಾಗ್ದಲ್ಲೆಲ್ಲಾ ಸುಮ್ಸುಮ್ನೆ ತಿರುಗುಲಾಗ. ನಡೆ ನಡೆ ನಿಮ್ಮನೇಗ್ ಹೋಗು ನಡೆ ಈ ಜಾಗೆಲ್ಲಾ ಶುದ್ಧಿಲ್ಲೆ ಮಾರಾಯಾ’ ಎಂದೆಲ್ಲಾ ಹಲಬುತ್ತಿದ್ದರು. ಅವನೂ ಅಮ್ಮನ ಮಾತು ಕೇಳುವ ವಿಧೇಯ ಮಗನಂತೆ ಪಕ್ಕದ ಮನೆಗೆ ತೆರಳುತ್ತಿದ್ದ. ಅಲ್ಲಿಯೂ ಬಾಳೆಗೊನೆ, ಹಣ್ಕಾಯಿ, ಹಾಲಾಭಿಷೇಕದ ಲಂಚ ಪಡೆದು ಮುಂದೆ ತೆರಳುತ್ತಿದ್ದ. ಇದ್ಯಾವುದೂ ಸಾಲದಂತೇ ಹಾವಿನ ಹುತ್ತವಿರುವ ಗುತ್ತಿನ ಜಾಗದ ತನಕ ದೂರ್ವೆ, ಕರ್ಪೂರ ಬೆರೆಸಿದ ಗೋಮಯದ ನೀರು ಸಂಪ್ರೋಕ್ಷಿಸಿ ನಾಗರು ತೆರಳುವ ಜಾಗದಲ್ಲಿ ಮೈಲಿಗೆಯಾಗದಂತೆ ಎ‍‍ಚ್ಚರವಹಿಸುತ್ತಿದ್ದರು. ಇದೇ ಸಮಯದ ಲಾಭ ಪಡೆಯುತ್ತಿದ್ದ ಶತಮಡಿಯ ನನ್ನಜ್ಜಿಯಂತೂ ‘ನಿಂಗಾ ಸಮಾ ಮಡಿ-ಮೈಲಿಗೆ ಮಾಡ್ತ್ರಿಲ್ಲೆ, ಅದ್ಕೆ ಎಚ್ರಿಕೆ ಕೊಡುಲ್ ಬಂದಿದ್ದಾ ನೆನ್ಪ್ಟಕಳಿ’ ಅಂತೆಲ್ಲಾ ಬೆದರಿಸಿ ಮುಂದೆರಡು ವಾರ ಮಡಿಮಡಿಯೆಂದು ತನ್ನ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಳು.

    ಹೀಗೆ ಹಾವಿನ ಕುರಿತು ಭಯಕ್ಕಿಂತ ಹೆಚ್ಚು ಒಲವಿನಿಂದಲೇ ಬೆಳೆದ ನಮಗೆ ನಾಗರಪಂಚಮಿಯೆಂದರೆ ಸಡಗರವೇ. ಆಷಾಢದ ಮಳೆಗೆ ಸೊಂಪಾಗಿ ಬೆಳೆದ ಮದರಂಗಿಯನ್ನು ಕೊಯ್ದು ತಂದು ಆರಿಸಿ, ನುಣ್ಣಗೆ ರುಬ್ಬಿ, ಅದಕ್ಕೆ ಲಿಂಬೆರಸ, ಚಾಕಣ್ಣಿನ ರಸ ಬೆರೆಸಿಡುತ್ತಿದ್ದಳು ಅಮ್ಮ. ಮರುದಿನ ಬೆಳಿಗ್ಗೆ ಮನೆಯವರೆಲ್ಲಾ ಅದನ್ನು ಹಚ್ಚಿಕೊಂಡು, ಕೊನೆಗೆ ಅಪ್ಪನನ್ನೂ ಕಾಡಿಸಿ ಅವರ ಹೆಬ್ಬೆರಳಿಗೆ ಹಚ್ಚಿ ಸಂಭ್ರಮಿಸುವ ಖುಶಿಯೇ ಬೇರೆ. ಎಣ್ಣೆಸ್ನಾನದ ನಂತರ, ಸಣ್ಣಜ್ಜನೊಡನೆ ನಾಗರಕಲ್ಲಿಗೆ ತೆರಳಿ ಹಾಲೆರೆದು, ಹಣ್ಕಾಯಿ ಮಾಡಿಸಿ, ಅಮ್ಮ ಮಾಡಿದ ವಿಶೇಷ ಭೋಜನವುಂಡು ಮಲಗಿದರೆ ಜೊಂಪು ಜೊಂಪು ನಿದ್ರೆಯಲ್ಲೆಲ್ಲಾ ಮದರಂಗಿಯದ್ದೇ ರಂಗು.

    ಇನ್ನು ರಕ್ಷಾಬಂಧನ ಬಂದರಂತೂ ನನಗೂ, ತಂಗಿಗೂ ಒಳಗೊಳಗೇ ಅಳುಕು, ಕಸಿವಿಸಿ, ಸಂಕಟ. ಸ್ವಂತಕ್ಕೆ ಸೋದರರಿಲ್ಲದೇ ಮರುದಿನ ಶಾಲೆಯಲ್ಲಿ ತಮ್ಮ ಸೋದರರು ಕೊಟ್ಟ ಉಡುಗೊರೆಯನ್ನು ತೋರಿಸಿ ತೋರಿಸಿ ಉರಿಸುವ ಹುಳುಕು ಗೆಳತಿಯರ ಮುಂದೆ ನಾವಿಬ್ಬರೂ ಸಪ್ಪೆ ಸಪ್ಪೆ. ಕೊನೆಗೆ ಅಜ್ಜಿಯ ಉಪಾಯದಿಂದ ಚಿಕ್ಕಪ್ಪಂದರಿಗೆ ರಾಖೀ ಕಟ್ಟಿ, ಅವರು ದೊಡ್ಡ ಮನಸು ಮಾಡಿ ಕೊಡುವ ಹತ್ತು ರೂಪಾಯಿಯನ್ನೇ ನೂರು ಎಂಬಷ್ಟು ವೈಭವೀಕರಿಸಿ ಸಂಭ್ರಮಿಸುವುದು ಶುರುವಾದ ಮೇಲೆ ಮನಸು ಸ್ವಲ್ಪ ತಂಪಾಯ್ತು.

    ಈಗಲೂ ನನ್ನ ಒಡನಾಟಕ್ಕೆ ಸಿಗುವ ಪುರುಷರಲ್ಲಿ ನಾನು ಹುಡುಕುವುದು ಶುದ್ಧ ಅಂತಃಕರಣದಿಂದ ನನ್ನನ್ನು ಹಚ್ಚಿಕೊಳ್ಳುವ ಸೋದರ ಮನಸುಗಳನ್ನು. ಇಂದು ಬೆಂಗಳೂರಿನಿಂದ ಹಿಡಿದು ಮಂಗಳೂರಿನ ತನಕ, ಕುಮಟಾದಿಂದ ಶೃಂಗೇರಿಯ ತನಕ ನನ್ನನ್ನು ಮನಸಾ ಗೌರವಿಸುವ, ಅಕ್ಕರೆಯಿಂದ ಕಾಣುವ ಅನೇಕ ಅಣ್ಣ ತಮ್ಮಂದಿರು ನನಗಿದ್ದಾರೆ. ಅವರಲ್ಲಿ ಯಾರು ಬಳಿಯಿರುತ್ತಾರೋ ಅವರಿಗೆ ಆರತಿಯೆತ್ತಿ, ಸಿಹಿ ತಿನಿಸಿ, ರಾಖಿ ಕಟ್ಟುತ್ತೇನೆ. ಅವರು ಕೊಡುವ ಸಣ್ಣಪುಟ್ಟ ಉಡುಗೊರೆಯಿಂದ ಸಿಗುವ ಸುಭದ್ರತೆಯ ಭಾವವನ್ನು ಎದೆಯ ಕಪಾಟಿನಲ್ಲಿ ಕಾಪಿಡುತ್ತೇನೆ. ನನಗೀಗ ಮುಂಚಿನೆಂತೆ ರಕ್ಷಾಬಂಧನವೆಂದರೆ ಬೇಸರವಿಲ್ಲ, ದುಗುಡವೂ ಇಲ್ಲ. ಈಗದೊಂದು ಮುಗುದ್ ಮನಸುಗಳ ಬೆಸೆವ ಭಾವದ ಹಬ್ಬ.

    ಹೀಗೆ ಶ್ರಾವಣವೆಂದರೆ ಶುದ್ಧತೆಯ, ಪ್ರೀತಿಯ, ಮಿಲನದ, ಬೆಸುಗೆಯ, ನಂಬಿಕೆಯ, ವಿವಿಧ ಭಾವಗಳ ಮೇಳೈಸುವಿಕೆಯ ಹಬ್ಬ. ಎಲ್ಲಕ್ಕಿಂತ ಮಿಗಿಲಾಗಿ ಶ್ರಾವಣವೆಂದರೆ ತವರು. ತವರಿಗೆ ತೆರಳಿ ಅಮ್ಮನ ಮಡಿಲಿನ ಬಿಸುಪಲಿ ಮಿಂದೆದ್ದು, ಅವಳ ಮಂಗಳಗೌರಿಯನ್ನು ಕಂಡು ಮಾತಾಡಿಸಿ, ಅವಳ ಪ್ರಸಾದದ ಉಡಿ ತುಂಬಿಸಿಕೊಂಡು, ಅಮ್ಮ ಯಾವ ತರಹದ ಸೀರೆ ಕೊಟ್ಟಿರಬಹುದೆಂಬ ಕಾತುರತೆಯಿಂದ ತೆರೆದು ನೋಡುವ ಬೆರಗಿಲ್ಲ. ಅಪ್ಪ ತಂಗಿಯ ಜೊತೆ ಕೂತು ಪಟ್ಟಾಂಗದ ಲೊಟ್ಟೆ ಹೊಡೆವ ಗಮ್ಮತ್ತಿಲ್ಲ. ಹೀಗಾಗಿ ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ. ಆದರೂ ಭರವಸೆಯೊಂಚೂರೂ ಮಾಸಿಲ್ಲ. ಈ ಸಲದ ಶ್ರಾವಣಕ್ಕೆ ಜಗದಿರುಳು ಕಳೆವ ಶಕ್ತಿಯಿರಲಿ, ನೆಮ್ಮದಿಯ ಬೆಳಕು ಹರಿಯಲಿ, ಎಲ್ಲವೂ ಮುಂಚಿನಂತಾಗಲಿ ಎಂದು ತವರಿನ ಸೆಳೆತದ ಮಗಳೊಬ್ಬಳು ಆಶಿಸುವುದು.

    ಕೆಟ್ಟ ಮುಖದ ಕಾಡುಪಾಪ, ಅಂಧವಿಶ್ವಾಸವೇ ಶಾಪ

    ಕಾಡುಪಾಪ!

    ಪುಟ್ಟದಾದ ಜನರ ಕಣ್ಣಿಗೆ ಕಾಣದೇ ಪೊದೆಗಳಲ್ಲಿ ಅಡಗಿಕೊಂಡಿರುವ ಈ ಪುಟ್ಟ ಪ್ರಾಣಿಯು ಪ್ರಾಣಿಪ್ರಿಯರು, ಛಾಯಾಗ್ರಾಹಕರ ಬಹಳ ಕುತೂಹಲದ ಪ್ರಾಣಿ. ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಸ್ಲೆಂಡರ್ ಲೋರಿಸ್ ಎಂದು ಇಂಗ್ಲಿಷಿನಲ್ಲಿ ಕರೆಸಿಕೊಳ್ಳುವ ಈ ಪ್ರಾಣಿಗಳು ಸುಲಭಕ್ಕೆ ಮನುಷ್ಯರ ದೃಷ್ಟಿಗೆ ಬೀಳುವುದಿಲ್ಲ.

    ದಕ್ಷಿಣ ಭಾರತದಲ್ಲಿ ಈ ಅಪರೂಪದ ಪ್ರಾಣಿಗಳು ಕಾಣುವ ಕೆಲವೇ ಪ್ರದೇಶಗಳಲ್ಲಿ ತುಮಕೂರು ಬಳಿಯ ನಾಗವಲ್ಲಿ ಬಳಿಯ ಗ್ರಾಮಗಳೂ ಸೇರಿವೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಕೆಲವು ಕಡೆ ಕಾಣಸಿಗುತ್ತವೆ. ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಕಾಣುವ ಇವುಗಳು ಈಗಾಗಲೇ ಅಳಿವಿನ ಅಂಚಿನಲ್ಲಿವೆ.

    ತುಮಕೂರು ಜಿಲ್ಲೆ ವೈವಿಧ್ಯಮಯ ಸಸ್ಯಸಂಕುಲ, ಪ್ರಾಣಿಪ್ರಭೇದಕ್ಕೆ ಖ್ಯಾತಿ ಪಡೆದಿದೆ. ಎಷ್ಟೋ ವಿಜ್ಞಾನಿಗಳು, ಪರಿಸರ ಪ್ರೇಮಿಗಳೂ ಇವುಗಳನ್ನು ವೀಕ್ಷಿಸಲು, ಅಧ್ಯಯನ ನಡೆಸಲು ಸಹಜವಾಗಿಯೇ ಇಲ್ಲಿಗೆ ಬರುತ್ತಾರೆ. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಪ್ರಯಾಣಿಸಿದರೆ ದೊರೆಯುವ ನಾಗವಲ್ಲಿ ಗ್ರಾಮದಲ್ಲಿ `ಕಾಡುಪಾಪಗಳ ತಾಣ ನಾಗವಲ್ಲಿ ಗ್ರಾಮಕ್ಕೆ ಸುಸ್ವಾಗತ’ ಎಂಬ ಫಲಕ ಕಾಣುತ್ತದೆ.

    ಇದು ಈ ಪ್ರದೇಶದಲ್ಲಿನ ಈ ವಿಶಿಷ್ಟ ಪ್ರಾಣಿಗಳ ಕುರಿತು ಅರಿವನ್ನು ಮೂಡಿಸಲು ಹಾಕಿದ್ದರೂ ಪ್ರಾರಂಭದಲ್ಲಿ ನಾಗವಲ್ಲಿಯ ಸುತ್ತಮುತ್ತ ಹೆಬ್ಬೂರು, ಬಳ್ಳಗೆರೆ, ದೊಮ್ಮನಕಟ್ಟೆ, ಸೀನಪ್ಪನಹಳ್ಳಿ ಮುಂತಾದ ಊರುಗಳಲ್ಲಿ ರೈತರು ಹೊಲಗಳ ಬದಿಯಲ್ಲಿ ಕಾಡುಪಾಪ ಕಂಡುಬಂದರೆ ಕಷ್ಟಪಟ್ಟು ಹಿಡಿದು ಈ ಬೋರ್ಡ್ ಬರೆಸಿ ಕಾಡುಪಾಪಗಳ ಕುರಿತು ಅಧ್ಯಯನ ನಡೆಸುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವಿ. ಗುಂಡಪ್ಪನವರಲ್ಲಿಗೆ ತರಲು ಪ್ರಾರಂಭಿಸಿದರು. ನಂತರ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಯಿತು.

    ನಾಗವಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿದಂತೆ ರೈತರ ತೋಟ, ಹೊಲ, ತೊರೆ ಹಾಗೂ ಹಳ್ಳಗಳಿವೆ. ಇವುಗಳ ಮಧ್ಯದಲ್ಲಿ ಗಿಡ, ಮರ, ಪೊದೆಗಳನ್ನು ಕಾಣಬಹುದು. ಕಾಡುಪಾಪಗಳು ಇಂತಹ ಕೃಷಿಪ್ರದೇಶದ ಸುತ್ತಮುತ್ತಲಿನಲ್ಲೇ ಕಂಡುಬಂದಿವೆ.

    ಈ ಕೃಷಿಭೂಮಿಗಳಲ್ಲಿ ಸಾಕುಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆಗಳು ಓಡಾಡುವುದು ಸಹಜ. ಇವುಗಳು ಹಾಕುವ ಸಗಣಿ, ಗಂಜಲದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಅದರ ಜೊತೆಗೆ ಕೀಟಗಳೂ ವೃದ್ಧಿಸುತ್ತವೆ. ಈ ಕೀಟಗಳೇ ಕಾಡುಪಾಪಗಳಿಗೆ ಆಹಾರವಾಗುತ್ತವೆ. ತೋಟ, ಗದ್ದೆಗಳಿಗೆ ಹಾಕುವ ಕಾಂಪೋಸ್ಟ್ ಗೊಬ್ಬರದಿಂದಲೂ ಈ ಕೀಟಗಳು ವೃದ್ಧಿಯಾಗುತ್ತವೆ. ಅಲ್ಲದೆ ಬೆಳೆಗಳನ್ನು ತಿನ್ನಲು ಬರುವ ಚಿಟ್ಟೆ, ಪತಂಗ, ಕಂಬಳಿಹುಳುಗಳೂ ಕಾಡುಪಾಪಗಳಿಗೆ ಆಹಾರ. ಇಂತಹ ಬೆಳೆಹಾನಿ ಮಾಡುವ ಕೀಟಗಳನ್ನು ತಿನ್ನುವ ಮೂಲಕ ಕಾಡುಪಾಪಗಳು ಕೀಟ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ.

    ವಿಶೇಷ ಎಂದರೆ ಕೋತಿ, ಅಳಿಲುಗಳ ಹಾಗೆ ಇವು ಬೆಳೆಗಳನ್ನು ನಾಶ ಮಾಡುವುದಿಲ್ಲ. ರೈತರಿಗೆ ಯಾವುದೇ ತೊಂದರೆ ಕೊಡದೆ ಸಾಧ್ಯವಿದ್ದಷ್ಟು ಅವರಿಗೆ ನೆರವಾಗುತ್ತಾ ಬದುಕುತ್ತವೆ. ಅವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಕೃಷಿಭೂಮಿಯ ಪೊದೆಗಳೇ ಆಧಾರ. ಪೊದೆಗಳಲ್ಲಿ ಯಾರಿಗೂ ಕಾಣದಂತೆ ಪ್ರಯಾಣಿಸುತ್ತವೆ.

    ಕೃಷಿಪ್ರದೇಶದಲ್ಲಿರುವ ನೀರಿನ ಮೂಲಗಳು, ಪಂಪ್ಸೆಟ್ ಬಳಿಯ ನೀರಿನ ತೊಟ್ಟಿಗಳು, ಹಳ್ಳಗಳು, ಸಣ್ಣ ಕೆರೆ, ಕಟ್ಟೆಗಳು ಹಾಗೂ ಚೆಕ್ ಡ್ಯಾಂಗಳನ್ನು ಇವುಗಳಿಗೆ ಪ್ರಮುಖ ನೀರಿನ ಮೂಲಗಳಾಗಿವೆ.

    ಇಲ್ಲಿನ ತೆಂಗು, ಅಡಿಕೆ, ಬಾಳೆ, ಮಾವು, ಹೂವು, ತರಕಾರಿ ತೋಟಗಳು ಸಾಕಷ್ಟು ಕೀಟಗಳ ಆವಾಸ ಸ್ಥಾನಗಳಾಗಿವೆ. ಇದರಿಂದ ಕಾಡುಪಾಪಗಳಿಗೆ ಸಾಕಷ್ಟು ಕೀಟಗಳು ದೊರೆಯುತ್ತವೆ. ಇದರಿಂದಲೂ ಕಾಡುಪಾಪಗಳು ಈ ಪ್ರದೇಶದಲ್ಲಿ ಹೆಚ್ಚಾಗಿವೆ ಎಂದರೆ ತಪ್ಪಾಗಲಾರದು.

    ಕಾಡುಪಾಪಗಳ ಮೊದಲ ವೈರಿಗಳೆಂದರೆ ಮಾನವ. ಇದರ ಮಾಂಸಕ್ಕಾಗಿ, ಕಣ್ಣುಗಳಿಗಾಗಿ, ಔಷಧಿಗಾಗಿ ಇವುಗಳನ್ನು ಕೊಲ್ಲುತ್ತಿದ್ದಾನೆ. ಕಾಡುಪಾಪಗಳು ಕಂಡುಬಂದರೆ ಹಾರಿ ಬಂದು ಕಣ್ಣು ಮುಖವನ್ನು ಕುಕ್ಕುತ್ತವೆ. ಕಾಡುಬೆಕ್ಕು, ಪುನಗುಬೆಕ್ಕು, ಗೂಬೆಗಳು, ನರಿಗಳು ಕಾಡುಪಾಪವನ್ನು ಕೊಂದು ತಿನ್ನುತ್ತವೆ.

    ಕಾಡುಪಾಪ ಇಂದು ವಿಪತ್ತಿನಲ್ಲಿದೆ. ಒಂದು ಕಾಲದಲ್ಲಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದಕ್ಕೆ ನೆಲೆ ಇತ್ತು. ಕಾಡುಪಾಪಗಳು ನೈಸರ್ಗಿಕ ಆವಾಸಗಳಲ್ಲಿ ಎಷ್ಟಿವೆ ಎಂಬುದನ್ನು ಕರಾರುವಕ್ಕಾಗಿ ತಿಳಿಯುವುದು ಕಷ್ಟ. ಏಕೆಂದರೆ ಇದರ ಕ್ರಮ ಉದ್ದವಾದ ಕ್ಷೇತ್ರ ಅಧ್ಯಯನ ಅಷ್ಟಕಷ್ಟೆ, ಇದು ಚಿಕ್ಕದಾಗಿದ್ದು, ನಿಶಾಚರಿ ಪ್ರಾಣಿಯಾಗಿದ್ದು ಹೆಚ್ಚಾಗಿ ರಾತ್ರಿ ಸಂಚಾರಿಗಳು, ಅಲ್ಲದೆ ಹೆಚ್ಚಾಗಿ ಒಂಟಿಯಾಗಿರುತ್ತದೆ. ನೈಸರ್ಗಿಕ ಆವಾಸಗಳಲ್ಲಿ ಇದರ ಪರಿಸರ ನಡವಳಿಕೆಗಳ ಬಗ್ಗೆ ಸುದೀರ್ಘವಾಗಿ ಅಧ್ಯಯನಗಳು ನಿಗೂಡವೆಂದೇ ಹೇಳಬಹುದು. ಇದರ ಬಗ್ಗೆ ಪೂರ್ಣವಾದ ಅಧ್ಯಯನ ಆಗಬೇಕಷ್ಟೆ. ಐ.ಯು.ಸಿ.ಎನ್. ಸಂಸ್ಥೆಯವರು ಇದನ್ನು ಕೆಂಪುಪಟ್ಟಿಯಲ್ಲಿ ಸೇರಿಸಿದ್ದಾರೆ.

    ಎಲ್ಲಾ ಕಡೆ ನೈಸರ್ಗಿಕ ಆವಾಸಗಳು ಕ್ಷೀಣಿಸಿ, ಹಲವಾರು ಬದಲಾವಣೆಗಳಾಗಿ, ಕಾಡುಪಾಪಗಳ ಉಳಿವಿಗೆ ಅಸಾಧ್ಯವಾಗುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ಹಳ್ಳಿಗಳು, ಗೋಮಾಳಗಳನ್ನು ಕೃಷಿಗೆ ಬಳಸಿಕೊಳ್ಳುತ್ತಿರುವುದು. ಇದಲ್ಲದೆ ಹೊಲಗಳನ್ನು ನೀರಾವರಿಯನ್ನಾಗಿ ಮಾಡುತ್ತಿರುವುದರಿಂದ ಬದುಗಳಲ್ಲಿದ್ದ ಮರಗಳೆಲ್ಲಾ ಕಣ್ಮರೆಯಾಗುತ್ತಿವೆ. ತೊರೆ, ಹಳ್ಳದ ಸಾಲುಗಳು, ಒತ್ತುವರಿಯಾಗಿ, ಅಲ್ಲಿದ್ದ ಪೊದೆ, ಗಿಡಮರಗಳು ಬಿದಿರು, ಸೀಗೆಮೆಳೆ ಕಣ್ಮರೆಯಾಗುತ್ತಿವೆ. ಇದರಿಂದ ಕಾಡುಪಾಪಗಳ ಬದುಕು ದುಸ್ತರವಾಗುತ್ತಿದೆ.

    ಕ್ಷೀಣಿಸುತ್ತಿರುವ ಈ ಜೀವಸಂತತಿಗೆ ಇಂದು ಮೌಲ್ಯ ಹೆಚ್ಚಿದೆ. ಇದರಿಂದ ಕಾಡುಪಾಪದ ಕಳ್ಳ ಸಾಗಾಣಿಕೆಯೂ ಹೆಚ್ಚಿದೆ. ಮಾಟ ಮಂತ್ರದಲ್ಲಿ ಕಾಡುಪಾಪದ ಕಣ್ಣು ಬಳಸುತ್ತಾರೆ. ಕಣ್ಣಿನ ದೋಷ ಇರುವವರು ಈ ಚಿಕ್ಕ ಪ್ರಾಣಿಯ ಕಣ್ಣು ತಿಂದರೆ ವಾಸಿಯಾಗುತ್ತದೆ ಎಂಬ ಮೂಢ ನಂಬಿಕೆ ಇದೆ. ಕೆಲವು ಪ್ರದೇಶದ ಸ್ಥಳೀಯ ಜನರಲ್ಲಿನ ತಪ್ಪು ಗ್ರಹಿಕೆ ಎಂದರೆ ಕಾಡುಪಾಪದ ದೇಹದ ಎಲ್ಲಾ ಭಾಗಳಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಇನ್ನೂ ಕೆಲವೆಡೆ ಈ ಪ್ರಾಣಿಯ ಕೆಟ್ಟ ಮುಖ ನೋಡಬಾರದು, ಒಳ್ಳೆಯದಾಗುವುದಿಲ್ಲ ಎಂದೆಲ್ಲಾ ಹೇಳುತ್ತಾರೆ. ಈ ಅಂಧವಿಶ್ವಾಸವೇ ಇವುಗಳ ಮೂಲಕ್ಕೆ ಕೊಡಲಿಯಾಗಿದೆ.

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್

    ಕೋವಿಡ್-19 ಮಹಾಮಾರಿಯನ್ನು ಕಟ್ಟಿಹಾಕಲು ಸಮಾರೋಪಾದಿಯಲ್ಲಿ ಭಾರತವು ಸೇರಿದಂತೆ ಜಗತ್ತಿನಾದ್ಯಂತ ಲಸಿಕೆಯ ಸಂಶೋಧನೆಗಳು ನಡೆಯುತ್ತಿದ್ದು, ಸಕಾರಾತ್ಮಕ ಫಲಿತಾಂಶದೊಂದಿಗೆ ಭರವಸೆಯನ್ನು ಮೂಡಿಸಿದೆ. ಲಸಿಕೆ ಅಭಿವೃದ್ಧಿಯ ಹಿಂದಿರುವ ಸೂತ್ರ, ಕಾರ್ಯವಿಧಾನ, ಪ್ರಾಯೋಗಿಕ ಫಲಿತಾಂಶ, ಕ್ಲಿನಿಕಲ್ ಟ್ರಯಲ್ಸ್ ಮುಂತಾದವುಗಳ ಕುರಿತು ಒಂದು ಅವಲೋಕನ.

    ಆಹಾರವನ್ನು ಜೀರ್ಣಿಸಲು ಜೀರ್ಣಾಂಗವ್ಯೂಹ, ಜೀರ್ಣವಾಗದೆ ಉಳಿದ ಕಲ್ಮಶಗಳನ್ನು ಹೊರಹಾಕಲು ವಿಸರ್ಜನಾಂಗವ್ಯೂಹ, ದೇಹದ ಅಂಗಾಂಗಗಳ ನಡುವೆ ಸಂವಹನಕ್ಕಾಗಿ ನರವ್ಯೂಹ, ಪೀಳಿಗೆಯನ್ನು ಮುಂದುವರಿಸಲು ಸಂತಾನೋತ್ಪತ್ತಿವ್ಯೂಹ, ಹೀಗೆ ಪ್ರಾಣಿಗಳ ಜೀವಂತಿಕೆಗೆ ವಿವಿಧ ವ್ಯೂಹಗಳು, ವ್ಯವಸ್ಥೆಗಳು ಇರುವಂತೆ, ದೇಹವನ್ನು ಪ್ರವೇಶಿಸುವ ರೋಗಾಣುಗಳ ವಿರುದ್ಧ ಹೋರಾಡಿ ರಕ್ಷಿಸಲು ಸುಸಜ್ಜಿತವಾದ ಒಂದು ರಕ್ಷಣಾವ್ಯೂಹವಿದೆ. ಆಕ್ರಮಣಕಾರರಿಂದ ದೇಶವನ್ನು ರಕ್ಷಿಸಲು ಇರುವ ಮಿಲಿಟರಿಯಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆ. ಕೋಸ್ಟ್ ಗಾರ್ಡ್, ಮದ್ದುಗುಂಡುಗಳು, ಯುದ್ಧ ವಾಹನಗಳು, ಫಿರಂಗಿ, ಕ್ಷಿಪಣಿ, ವಿಮಾನವಾಹಕ ನೌಕೆ, ಗಸ್ತು ಹಡಗುಗಳು, ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಮುಂತಾದ ವ್ಯವಸ್ಥೆ, ಶಸ್ತ್ರಾಸ್ತ್ರಗಳಿರುವಂತೆಯೇ ದೇಹವನ್ನು ಆಕ್ರಮಿಸುವ ಬ್ಯಾಕ್ಟೀರಿಯಾ, ವೈರಾಣು, ಪ್ರೊಟೊಜೋವಾ, ಶಿಲೀಂಧ್ರಗಳ ವಿರುದ್ಧ ಹೋರಾಡಲು ರಕ್ಷಣಾವ್ಯೂಹದಲ್ಲಿ ನಿಷ್ಕ್ರಿಯ ರೋಗನಿರೋಧಕ ಶಕ್ತಿ, ಸಕ್ರಿಯ ರೋಗನಿರೋಧಕ ಶಕ್ತಿ, ಬಿಳಿ ರಕ್ತ ಕಣಗಳು, ಪ್ರತಿಕಾಯಗಳು (Antibodies), ಪೂರಕ ವ್ಯವಸ್ಥೆ (Complement system), ದುಗ್ಧರಸ ವ್ಯವಸ್ಥೆ (Lymphatic system), ಗುಲ್ಮ (Spleen), ಮೂಳೆ ಮಜ್ಜೆ (Bone marrow), ಥೈಮಸ್, ಬಿ-ಲಿಂಫೋಸೈಟ್ಸ್, ಟಿ-ಲಿಂಫೋಸೈಟ್ಸ್, ಮ್ಯಾಕ್ರೋಫೇಜಗಳು, ಸೈಟೊಕಿನ್ಸ್ ಹೀಗೆ ಬಗೆಬಗೆಯ ಅಂಗಾಂಶ, ಕೋಶ, ಅಣುಗಳ ರೂಪದಲ್ಲಿ ಶಸ್ತಾಸ್ತ್ರಗಳಿವೆ. ಇವುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿ ಸಂಕೀರ್ಣವಾದ ಒಂದು ಸರಪಳಿ ಕ್ರಿಯೆಯ ಮೂಲಕ ದೇಹವನ್ನು ದಾಳಿಮಾಡುವ ಶತ್ರು(ರೋಗಾಣು)ಗಳಿಂದ ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ.

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
    ಜಗತ್ತಿನಾದ್ಯಂತ ಸಮಾರೋಪಾದಿಯಲ್ಲಿ ಒಂದು ಕಡೆ ವಿಜ್ಞಾನಿಗಳು ಕೋವಿಡ್ -19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಸ್ (SARS-CoV-2) ವಿರುದ್ಧ ಔಷಧಿಯನ್ನು ಕಂಡುಹಿಡಿಯಲು ಸಂಶೋಧನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಂಶೋಧಕರು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಲಸಿಕೆ ಮತ್ತು ಔಷಧಿಗೆ ಏನು ವ್ಯತ್ಯಾಸ? ಲಸಿಕೆಯು ರೋಗ ಬರದಂತೆ ತಡೆಗಟ್ಟುವ ಕೆಲಸ ಮಾಡಿದರೆ ಔಷಧಿಗಳು ಬಂದನಂತರ ಗುಣಪಡಿಸುತ್ತವೆ. ‘ಯಾವುದೇ ರೋಗರುಜಿನ ಇರಬಹುದು, ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದೇ ಉತ್ತಮ’.

    ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎಂಬ ಗಾದೆ ರೋಗಾಣು ವಿರುದ್ಧ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ತಾಂತ್ರಿಕತೆಗೆ ಪೂರಕವಾಗಿದೆ. ಅಂದರೆ, ಯಾವ ರೋಗಾಣುವಿನ ಸೋಂಕಿನಿಂದ ಕಾಯಿಲೆ ಉಂಟಾಗುವುದೋ ಅದೇ ರೋಗಾಣುವನ್ನು ಬಳಸಿಕೊಂಡು ಅದರ ವಿರುದ್ಧ ಶಸ್ತ್ರವನ್ನು ಸಜ್ಜುಗೊಳಿಸುವುದು, ಅರ್ಥಾತ್ ಲಸಿಕೆಯನ್ನು ಅಭಿವೃದ್ಧಿ ಪಡಿಸುವುದು. ವೈರಿಯ ವಿರುದ್ಧ ಹರಿತವಾದ ಶಸ್ತ್ರಗಳನ್ನು ತಯಾರಿಟ್ಟುಕೊಂಡು ವೈರಿಯು ಆಕ್ರಮಿಸಿದ ತಕ್ಷಣ ಅದನ್ನು ನಾಶಗೊಳಿಸುವುದು, ಅಂದರೆ ಸೋಂಕು ಉಂಟಾದರೂ ಕಾಯಿಲೆ ಬರದಂತೆ ತಡೆಯುವುದೇ ಇಲ್ಲಿರುವ ಸೂತ್ರ. ಇದರ ಹೆಗ್ಗಳಿಕೆ ನಿಸರ್ಗದ ಕಾರ್ಯವಿಧಾನ ಮತ್ತು ಅದನ್ನು ಅರ್ಥಮಾಡಿಕೊಂಡು ವ್ಯಾಕ್ಸಿನ್ ಎಂಬ ಪರಿಕಲ್ಪನೆ ನೀಡಿದ ವಿಜ್ಞಾನಿಗಳಿಗೆ ಸಲ್ಲುತ್ತದೆ.
    ಲಸಿಕೆಗಳ ಉತ್ಪಾದನೆ ಹಿಂದಿರುವ ರಹಸ್ಯ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನವೇ ಆಗಿದೆ. ಹಾಗಾಗಿ, ಮೊದಲು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಸ್ವಲ್ಪ ಹೊತ್ತು ಗಮನಹರಿಸೋಣ.

    ದೇಹವನ್ನು ಪ್ರವೇಶಿಸುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಅಂದರೆ ಅವುಗಳನ್ನು ಕೊಲ್ಲಲ್ಲು ಅಥವಾ ನಿಷ್ಕ್ರಿಯಗೊಳಿಸಲು ರಕ್ಷಣಾವ್ಯೂಹವು ಪ್ರತಿಕಾಯ (ಆಂಟಿಬಾಡಿ) ಗಳನ್ನು ಅಸ್ತ್ರವನ್ನಾಗಿ ಬಳಸುತ್ತದೆ. ಇಂಗ್ಲೀಷ್ ವರ್ಣಮಾಲೆಯ ‘ವೈ’ ಆಕಾರದ ಈ ಅಸ್ತ್ರಗಳನ್ನು (ಪ್ರತಿಕಾಯಗಳು) ಉತ್ಪತ್ತಿ ಮಾಡುವ ಕೆಲಸ ಬಿ-ಲಿಂಫೋಸೈಟ್ಸ್ (ಬಿ-ಕೋಶಗಳು) ಎಂಬ ಬಿಳಿ ರಕ್ತ ಕಣಗಳದ್ದು. ರಕ್ತದಲ್ಲಿ ಕೋಟ್ಯಂತರ ಬಗೆಯ ಬಿ-ಕೋಶಗಳಿದ್ದು, ಪ್ರತಿಯೊಂದು ಒಂದು ನಿರ್ದಿಷ್ಟ ರೋಗಾಣುವನ್ನು ಗುರುತಿಸಿ, ಅದರ ವಿರುದ್ಧ ನಿಖರವಾದ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ನಿರ್ದಿಷ್ಟವಾದ ಕೀಲಿಯಿಂದ ಮಾತ್ರ ಬೀಗವನ್ನು ಹೇಗೆ ತೆರೆಯಬಹುದೋ ಹಾಗೆಯೇ ಒಂದು ನಿರ್ದಿಷ್ಟವಾದ ಬಿ-ಕೋಶವು ದೇಹವನ್ನು ಪ್ರವೇಶಿಸಿದ ಸೂಕ್ಷ್ಮಜೀವಿಯನ್ನು ಗುರುತಿಸುತ್ತದೆ. ಇದಕ್ಕೆ ಬಿ-ಕೋಶಗಳ ಮೇಲ್ಮೈಯಲ್ಲಿರುವ ರಿಸೆಪ್ಟರ್ (ಗ್ರಾಹಕ)ಗಳು ನೆರವಾಗುತ್ತದೆ. ಸೂಕ್ಶ್ಮಜೀವಿಗಳ ಹೊರಕವಚದಲ್ಲಿರುವ ಪ್ರೊಟೀನ್/ಗ್ಲೈಕೋಪ್ರೋಟೀನ್ (ಪ್ರತಿಜನಕ / ಆಂಟಿಜೆನ್) ಆಕಾರಕ್ಕೆ ಯಾವ ಬಿ-ಕೋಶವು ತನ್ನ ರಿಸೆಪ್ಟರ್ ಗಳ ಮೂಲಕ ನಿಖರವಾಗಿ ಅಂಟಿಕೊಳ್ಳುತ್ತದೆಯೋ ಅದು ಆಯ್ಕೆಯಾಗುತ್ತದೆ. ಆಕ್ರಮಣಕಾರಿಯನ್ನು ನಿಖರವಾಗಿ ಗುರುತಿಸಿ ಆಯ್ಕೆಯಾದ ಬಿ-ಕೋಶವು ತಕ್ಷಣಕ್ಕೆ ಸಕ್ರಿಯವಾಗಿ ತನ್ನಂತೆ ಇರುವ ಲಕ್ಷಾಂತರ ಕೋಶಗಳನ್ನು ಉತ್ಪತ್ತಿ ಮಾಡಲು ವಿಭಜನೆಗೊಳ್ಳುತ್ತದೆ (ಕ್ಲೋನಲ್ ಆಯ್ಕೆ).

    ರಕ್ತದ ಪ್ಲಾಸ್ಮಾದಲ್ಲಿರುವ ಈ ಕೋಶಗಳನ್ನು ಪ್ಲಾಸ್ಮಾ ಬಿ-ಕೋಶಗಳು ಎಂದು ಕರೆಯಲಾಗುವುದು. ಅವುಗಳೆಲ್ಲವೂ ರಾಶಿ ರಾಶಿ ನಿರ್ದಿಷ್ಟ ಪ್ರತಿಕಾಯಗಳನ್ನು ಬಿಡುಗಡೆ ಮಾಡುತ್ತವೆ. ಪ್ರತಿಕಾಯಗಳು ಸೂಕ್ಷ್ಮಜೀವಿಯ ಮೇಲೆ ಮುಗಿಬಿದ್ದು ಅವುಗಳನ್ನು ಕೊಲ್ಲುತ್ತವೆ ಅಥವಾ ನಿಷ್ಕ್ರಿಯಗೊಳಿಸುತ್ತವೆ. ಅಂತಿಮವಾಗಿ, ನಾವು ಕಾಯಿಲೆ ಉಂಟಾಗದಂತೆ ಬಚಾವ್ ಆಗುತ್ತೇವೆ ಅಥವಾ ಬೇಗನೆ ಚೇತರಿಸಿಕೊಳ್ಳುತ್ತೇವೆ.

    ಪ್ಲಾಸ್ಮಾ ಚಿಕಿತ್ಸೆಯ ಹಿನ್ನೆಲೆ

    ಕೋವಿಡ್ -19 ಗೆ ಕೇಳಿಬರುತ್ತಿರುವ ಪ್ಲಾಸ್ಮಾ ಚಿಕಿತ್ಸೆಯ ಹಿನ್ನೆಲೆಯು ಇದೇ ಆಗಿದೆ. ಈಗಾಗಲೇ ಕೋವಿಡ್ -19 ನಿಂದ ಗುಣಮುಖರಾದ ವ್ಯಕ್ತಿಗಳ ರಕ್ತದ ಪ್ಲಾಸ್ಮಾದಲ್ಲಿ ಸಾಕಷ್ಟು ಕೊರೊನಾವೈರಸ್ ವಿರುದ್ಧ ಪ್ರತಿಕಾಯಗಳು, ಪ್ಲಾಸ್ಮಾ ಬಿ-ಕೋಶಗಳು ಶೇಖರಣೆಯಾಗಿದ್ದು ಅವರಿಂದ ಪ್ಲಾಸ್ಮಾವನ್ನು ಸಂಗ್ರಹಿಸಿ ಹೊಸ ಕೋವಿಡ್ -19 ರೋಗಿಗಳಿಗೆ ನೀಡುವುದು. ಆದರೆ, ಇದರಲ್ಲಿಯೂ ಕೆಲವು ಪ್ರತಿಕೂಲ ಪರಿಣಾಮಗಳು ಇದ್ದು, ಸರಿಯಾಗಿ ಪರೀಕ್ಷೆಗೆ ಒಳಪಡಿಸಿಯೇ ಪ್ಲಾಸ್ಮಾ ಥೆರಪಿಯನ್ನು ಬಳಸಿಕೊಳ್ಳಬೇಕು.

    ರಕ್ತದಲ್ಲಿ ಬಿ-ಕೋಶಗಳು ಇರುವಂತೆ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಆಂಟಿಬಾಡಿ ಉತ್ಪತ್ತಿ ಮಾಡಲು ಟಿ-ಕೋಶಗಳೂ ಇವೆ. ಬಿ-ಕೋಶಗಳು ಬ್ಯಾಕ್ಟೀರಿಯಾ ಮತ್ತು ವೈರಾಣು ಎರಡರ ವಿರುದ್ಧವೂ ಪ್ರತಿಕಾಯಗಳನ್ನು ಸ್ರವಿಸಿದರೆ, ಟಿ-ಕೋಶಗಳು ವೈರಾಣುಗಳ ಮೇಲೆ ಇರುವ ಪ್ರತಿಜನಕಗಳನ್ನು ಮಾತ್ರ ಗುರುತಿಸಿ ಅವುಗಳ ವಿರುದ್ಧ ಪ್ರತಿಕಾಯಗಳನ್ನು ಸ್ರವಿಸುತ್ತವೆ. ಈ ಕಾರ್ಯವಿಧಾನಗಳ ಜೊತೆಗೆ, ಇಂಟರ್ಫೆರಾನ್ಸ್ ಎಂಬ ಸಂದೇಶವಾಹಕ ಪ್ರೋಟೀನ್ ಅಣು ಇದ್ದು, ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

    ರೋಗನಿರೋಧಕ ಶಕ್ತಿಯ ಹೋರಾಟ ಇಷ್ಟಕ್ಕೇ ಸೀಮಿತವಾಗಿಲ್ಲ. ಒಂದು ಬ್ಯಾಕ್ಟೀರಿಯಾ ಅಥವಾ ವೈರಾಣುವಿನ ವಿರುದ್ಧ ಹೋರಾಡಲು ಆಯ್ಕೆಯಾದ ಬಿ-ಕೋಶ ಮತ್ತು ಟಿ-ಕೋಶಗಳು ಭವಿಷ್ಯದಲ್ಲಿ ಅದೇ ರೋಗಾಣುವನ್ನು ನೆನಪಿಟ್ಟುಕೊಳ್ಳಲು ಮೆಮೊರಿ ಕೋಶಗಳನ್ನೂ ಉತ್ಪತ್ತಿ ಮಾಡುತ್ತದೆ. ರಕ್ತದಲ್ಲಿ ಶೇಖರಣೆಯಾಗಿರುವ ಮೆಮೊರಿ ಕೋಶಗಳು ದೀರ್ಘಕಾಲದವರೆಗೆ ಇರುತ್ತವೆ. ಒಂದೊಮ್ಮೆ ಭವಿಷ್ಯದಲ್ಲಿ ಅದೇ ರೋಗಾಣುವಿನಿಂದ ಮತ್ತೊಮ್ಮೆ ಸೋಂಕು ಉಂಟಾದರೆ, ತಕ್ಷಣಕ್ಕೆ ಈ ಮೆಮೊರಿ ಕೋಶಗಳು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ತ್ವರಿತಗತಿಯಲ್ಲಿ ಅವುಗಳನ್ನು ಕೊಲ್ಲುತ್ತವೆ. ಎಷ್ಟು ವೇಗವಾಗಿ ಈ ಪ್ರಕ್ರಿಯೆ ನಡೆಯುತ್ತದೆ ಅಂದರೆ, ಸೋಂಕು ಉಂಟಾಗಿದ್ದರೂ ಗಮನಕ್ಕೆ ಬರುವುದಿಲ್ಲ. ಕೊಟ್ಲೆ, ನೀರುಕೊಟ್ಲೆ, ಚಿಕ್ಕಮ್ಮ, ಸೀತಾಳ ಸಿಡುಬು, ಅಮ್ಮ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಚಿಕನ್ಪಾಕ್ಸ್ ವೆರಿಸೆಲ್ಲಾ ಜೋಸ್ಟರ್ (Varicella zoster) ಎಂಬ ವೈರಾಣುವಿನಿಂದ ಹರಡುವ ಅಂಟುರೋಗವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

    ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಈ ಕಾಯಿಲೆಯು ಹೆಚ್ಚಿನ ಸಂದರ್ಭಗಳಲ್ಲಿ ಒಂದು ಸಲ ಉಂಟಾದರೆ ಮತ್ತೊಮ್ಮೆ ಜೀವನದಲ್ಲಿ ಆ ಕಾಯಿಲೆ ಆವರಿಸುವುದಿಲ್ಲ. ಏಕೆಂದರೆ, ಮೊದಲ ಸಲ ಸೋಂಕು ಉಂಟಾದಾಗಲೇ ಆ ವೈರಾಣುವಿನ ವಿರುದ್ಧ ಪ್ರತಿಕಾಯಗಳು ಮತ್ತು ಮೆಮೊರಿ ಕೋಶಗಳು ರಕ್ತದಲ್ಲಿ ಸದಾ ತಯಾರಾಗಿರುತ್ತವೆ.ಲಸಿಕೆಗಳ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್ ಮಾಡುವ ಹಿಂದಿನ ತತ್ವ ಇದೇ ಆಗಿರುತ್ತದೆ. ಯಾವ ರೋಗಾಣುವಿನಿಂದ ಕಾಯಿಲೆ ಬರುತ್ತದೋ ಅವುಗಳನ್ನು ಮೊದಲೇ ದೇಹದೊಳಗೆ ಪರಿಚಯಿಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೂರ್ವ ತಯಾರಿ ಮಾಡಿಟ್ಟಿರುವುದು. ಒಂದೇ ವ್ಯತ್ಯಾಸ ಅಂದರೆ, ಇಲ್ಲಿ ಜೀವಂತ ರೋಗಾಣುಗಳ ಬದಲು ನಿಷ್ಕ್ರಿಯಗೊಳಿಸಿದ ರೋಗಾಣುವನ್ನು ದೇಹದೊಳಗೆ ತೂರಿಸುವುದು. ರೋಗಾಣುವನ್ನು ನಿಷ್ಕ್ರಿಯಗೊಳಿಸಿರುವುದರಿಂದ ಅವುಗಳು ದೇಹದಲ್ಲಿ ದ್ವಿಗುಣಗೊಳ್ಳಲು ಮತ್ತು ಕಾಯಿಲೆಯನ್ನು ಉಂಟುಮಾಡಲು ಸಾಧ್ಯವಿಲ್ಲ.

    ವ್ಯಾಕ್ಸಿನ್ ತಯಾರಿಕೆಗೆ ವಿವಿಧ ವಿಧಾನ

    ಆದರೆ, ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುವ ಅಂಶ (ಪ್ರತಿಜನಕ) ನಿಷ್ಕ್ರಿಯಗೊಳಿಸಿದ ರೋಗಾಣುವಿನಲ್ಲಿರುತ್ತದೆ. ಹಾಗಾಗಿ, ಮೇಲೆ ತಿಳಿಸಿರುವ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಲು ಪ್ರಕ್ರಿಯೆಗಳು ನಡೆದು, ಅದರ ವಿರುದ್ಧ ಪ್ರತಿಕಾಯ ಮತ್ತು ಮೆಮೋರಿ ಕೋಶಗಳು ಸನ್ನದ್ಧವಾಗಿರುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯಲ್ಲಿ, ‘ಮುಂದೆ ಇತರಹದ ಶತ್ರುಗಳು ದೇಹವನ್ನು ಆಕ್ರಮಿಸಬಹುದು, ಯಾವುದಕ್ಕೂ ನೀನು ತಯಾರಾಗಿರು’ ಎಂದು ನಮ್ಮ ಪ್ರತಿರಕ್ಷಣಾ ಶಕ್ತಿಗೆ ಮನವರಿಕೆ ಮಾಡಿಕೊಟ್ಟಂತೆ. ಕೆಲವು ರಾಸಾಯನಿಕ, ಅತಿಯಾದ ಶಾಖ ಅಥವಾ ವಿಕಿರಣಕ್ಕೆ ತೆರೆದಿಟ್ಟು ರೋಗಾಣುಗಳನ್ನು ನಿಷ್ಕ್ರಿಯ/ ಕ್ಷೀಣಗೊಳಿಸಲಾಗುತ್ತದೆ. ಅಥವಾ ಅದರ ಮೇಲಿರುವ ಪ್ರೊಟೀನ್ / ಗ್ಲೈಕೋಪ್ರೋಟೀನ್ ಗಳನ್ನು ಮಾತ್ರ ಪ್ರತಿಜನಕಗಳಾಗಿ ವ್ಯಾಕ್ಸಿನ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಲು ನಿರ್ಜಿವ ಅಥವಾ ನಿಷ್ಕ್ರಿಯಗೊಳಿಸದ ರೋಗಾಣುಗಳು ಅಥವಾ ಅವುಗಳಿಂದ ಪಡೆದ ಪ್ರತಿಜನಕಗಳನ್ನೇ ಲಸಿಕೆಗಳು (ವ್ಯಾಕ್ಸಿನ್) ಎಂದು ಕರೆಯಲಾಗುವುದು.

    ವ್ಯಾಕ್ಸಿನ್ ತಯಾರಿಕೆಗೆ ವಿವಿಧ ವಿಧಾನಗಳಿದ್ದು ಯಾವ ಕಾಯಿಲೆಗೆ ಯಾವ ವಿಧಾನದಲ್ಲಿ ತಯಾರಿಸಿದ ವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುವುದನ್ನು ಪ್ರಾಯೋಗಿಕ ಅಧ್ಯಯನದ ಮೂಲಕ ತಿಳಿಯಲಾಗುತ್ತದೆ. ಭವಿಷ್ಯದಲ್ಲಿ ಬರಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳನ್ನು (ವಾಕ್ಸಿನ್ಸ್) ಬಾಯಿಯ ಮೂಲಕ ಅಥವಾ ಚುಚ್ಚುಮದ್ದು ನೀಡಿ ದೇಹಕ್ಕೆ ಪರಿಚಯಿಸುವುದನ್ನು ವ್ಯಾಕ್ಸಿನೇಷನ್ ಅಥವಾ ಇಮ್ಯುನೈಝೇಷನ್ ಎಂದು ಕರೆಯಲಾಗುತ್ತದೆ.

    ಪೋಲಿಯೊ, ಹೆಪಟೈಟಿಸ್ ಬಿ, ಡಿಫ್ತಿರಿಯಾ, ಟೆಟನಸ್, ರೋಟವೈರಸ್ 2, ದಡಾರ, ಮಂಪ್ಸ್ , ರುಬೆಲ್ಲಾ, ಹ್ಯೂಮನ್ ಪ್ಯಾಪಿಲೋಮ ವೈರಸ್ ಮುಂತಾದ ರೋಗಾಣುಗಳ ವಿರುದ್ಧ ಕಾಲಕಾಲಕ್ಕೆ ಬಾಲ್ಯದಲ್ಲಿ ನೀಡುವ ಲಸಿಕೆಗಳನ್ನು ಇವೇ ಸೂತ್ರದ ಆಧಾರದ ಮೇಲೆ ಉತ್ಪಾದಿಸಲಾಗುತ್ತವೆ. ಭವಿಷ್ಯದಲ್ಲಿ ಸೋಂಕು ಉಂಟಾದರೂ ಆ ರೋಗಾಣುಗಳಿಂದ ಕಾಯಿಲೆಗಳು ಉದ್ಭವವಾಗದಂತೆ ಲಸಿಕೆಗಳು ತಡೆಹಿಡಿಯುತ್ತವೆ. ಲಸಿಕೆಯ ಚುಚ್ಚುಮದ್ದನ್ನು ನೀಡಿದಾಗ ಆ ಸ್ಥಳದಲ್ಲಿ ಸ್ವಲ್ಪ ನೋವು, ಊದಿಕೊಳ್ಳುವುದು, ಕೆಂಪಾಗುವುದು, ಕೆಲವು ಬಾರಿ ಜ್ವರ, ಕಿರಿಕಿರಿ, ಅರೆನಿದ್ರಾವಸ್ಥೆ ಮತ್ತು ದದ್ದು ಸೇರಿದಂತೆ ಅಡ್ಡ ಪರಿಣಾಮಗಳು ಆಗಬಹುದು. ಅವುಗಳು ಹೈಪರ್-ಇಮ್ಯೂನ್ ರಿಯಾಕ್ಷನ್ ಅಥವಾ ಅಲರ್ಜಿ ಪ್ರತಿಕ್ರಿಯೆ ಆಗಿದ್ದು ತಾತ್ಕಾಲಿಕವಾಗಿರುತ್ತದೆ. ಆದರೆ ಲಸಿಕೆಗಳು ತುಂಬಾ ಶುದ್ಧವಾಗಿರಬೇಕು; ಯಾವುದೇ ಸೂಕ್ಷ್ಮಜೀವಿ ಅಥವಾ ಕಲ್ಮಶಗಳಿಂದ ಕಲುಷಿತಗೊಂಡಿರಬಾರದು. ಅಶುದ್ಧವಾಗಿದ್ದರೆ ಅದು ಅಪಾಯಕಾರಿಯಾಗುವ ಸಾಧ್ಯತೆ ಇದೆ.

    ವಿಶ್ವಾದ್ಯಂತ ಕೋವಿಡ್-೧೯ನಿಂದ ಆಗುತ್ತಿರುವ ಸಾವು-ನೋವುಗಳನ್ನು ಪರಿಗಣಿಸಿ ವೈದ್ಯಕೀಯ ತುರ್ತು ನೆಲೆಯಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು 12-18 ತಿಂಗಳುಗಳಲ್ಲಿ ಯಶಸ್ವಿಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ತಜ್ಞರು ಅಂದಾಜಿಸಿದ್ದಾರೆ.

    ಲಸಿಕೆಗಳ ಅಭಿವೃದ್ಧಿ ವೇಗ

    ಕೋವಿಡ್-19 ಗೆ ಔಷಧಿ ಮತ್ತು ಲಸಿಕೆಗಳನ್ನು ವೇಗವಾಗಿ ಅಭಿವೃದ್ಧಿಗೊಳಿಸಲು ಯು. ಎಸ್. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) 18 ಕ್ಕೂ ಹೆಚ್ಚು ಔಷಧೀಯ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಪಡೆದುಕೊಂಡಿದೆ. ಅನೇಕ ರಾಷ್ಟ್ರಗಳ ಫಾರ್ಮಸ್ಯುಟಿಕಲ್ ಕಂಪನಿಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳು ಕೋವಿಡ್-19 ತಡೆಹಿಡಿಯಲು ಈಗಾಗಲೇ ಸುಮಾರು 200 ಲಸಿಕೆಗಳನ್ನು ಉತ್ಪಾದಿಸಲಾಗಿದ್ದು ಪ್ರಾಯೋಗಿಕ ಹಂತದಲ್ಲಿವೆ.

    ಅವುಗಳಲ್ಲಿ ಕೆಲವು (AZD1222 SARS-CoV-2 Vaccine; Pfizer-BioNTech’s BNT162 SARS-CoV-2 Vaccine; ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ SARS-CoV-2 Vaccine) ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಳು ಸಕಾರಾತ್ಮಕ ಫಲಿತಾಂಶ ನೀಡಿದ್ದು, ಕ್ಲಿನಿಕಲ್ (ಹ್ಯೂಮನ್) ಟ್ರಯಲ್ಸ್ ಹಂತದಲ್ಲಿವೆ. ಕೊರೊನಾವೈರಸ್ (SARS-CoV-2 ) ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ ಜಾಗತಿಕ ಓಟಕ್ಕೆ ಸೇರ್ಪಡೆಯಾಗಿರುವ ಭಾರತೀಯ ಸಂಶೋಧಕರು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ.) ಸಹಭಾಗಿತ್ವದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೋವಾಕ್ಸಿನ್ (COVAXIN) ಎಂಬ ಹೆಸರಿನ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೋವಾಕ್ಸಿನ್ ಅನ್ನು ಈಗಾಗಲೇ ಪ್ರಾಣಿಗಳ ಮೇಲೆ ಯಶಸ್ವಿ ಅಧ್ಯಯನ ನಡೆಸಿ, 1,100 ಜನರ ಮೇಲೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲು ಪ್ರಾರಂಭಿಸಲಾಗಿದೆ.

    ಅದೇ ರೀತಿ ಅಹಮದಾಬಾದ್ ಮೂಲದ ಝೆಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಸಂಸ್ಥೆಯು ಕೂಡ SARS-CoV-2 ವಿರುದ್ಧ ಲಸಿಕೆಯೊಂದನ್ನು ಉತ್ಪಾದಿಸಿದ್ದು ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತ ಸರ್ಕಾರದ ಕೇಂದ್ರೀಯ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ ’ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)’ ಇದರಿಂದ ಒಪ್ಪಿಗೆಯನ್ನು ಪಡೆದುಕೊಂಡಿದೆ. ರಷ್ಯಾದ ಸೆವಿನೋವ್ ವಿಶ್ವವಿದ್ಯಾಲಯವು ಸಂಶೋಧಿಸಿದ ಕೋವಿಡ್ -19 ಲಸಿಕೆಯು ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಶುಭ ಸುದ್ದಿ ಇದೀಗ ಸಂಚಲನ ಉಂಟುಮಾಡಿದೆ.

    ದೇಸಿ ಅಥವಾ ವಿದೇಶಿ, ಜಗತ್ತಿನಾದ್ಯಂತ ಪೆಡಂಭೂತವಾಗಿ ಕಾಡುತ್ತಿರುವ ಕರೋನವೈರಸ್ ಅನ್ನು ಕಟ್ಟಿಹಾಕಲು ಔಷಧಿ ಮತ್ತು ಲಸಿಕೆಗಳು ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ತೇರ್ಗಡೆ ಹೊಂದಿ ಆದಷ್ಟು ಬೇಗನೇ ಜನರ ಸೇರಲಿವೆ ಎಂದು ಆಶಾವಾದಿಯಾಗಿರೋಣ. ಅಲ್ಲಿಯ ತನಕ ಕೋವಿಡ್ -19 ಮಹಾಮಾರಿಯ ವಿರುದ್ಧ ನಾವೆಲ್ಲರೂ ವಿಶೇಷ ಜಾಗೃತಿ ವಹಿಸಲೇಬೇಕು.

    ಇನ್ನು ಹೆಚ್ಚಿನ ಓದು : ಕೊರೋನಾ ವ್ಯಾಕ್ಸಿನ್ ತಯಾರಾಗಲು ಇನ್ನೆಷ್ಟು ಸಮಯ ಬೇಕು

    Photo by Miguel Á. Padriñán from Pexels

    ನಂಬಿಕೆಯೇ ದೈವ ಕಣೋ

    ಮರದ ಕೊಂಬೆ ಮೇಲೆ ಕುಳಿತ ಪಕ್ಷಿ ಕೊಂಬೆ ಮುರಿದರೂ ಹೆದರುವುದಿಲ್ಲ. ಏಕೆಂದರೆ ಪಕ್ಷಿ ನಂಬಿರುವುದು ತನ್ನ ರೆಕ್ಕೆಯನ್ನು. ಹಾಗೆಯೇ ನಮ್ಮನ್ನು ನಾವು ನಂಬಬೇಕು, ಬೇರೆಯವರನ್ನಲ್ಲ.

    ಹಾಗೆಯೇ ದೈವ ಶಕ್ತಿಯ ಬಗ್ಗೆ ಒಂದು ಮಾತಿದೆ.
    ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ…
    ನಂಬಿದ ಜನರಿಗೆ ಬೆಂಬಲ ತಾನಾಗಿ
    ಹಂಬಲಿಸಿದ ಫಲ ತುಂಬಿ ಕೊಡುವರ.

    ಅಂದರೆ ಭಗವಂತನನ್ನು ನಂಬಿದವರಿಗೆ ಅವನು ಯಾವತ್ತೂ ಮೋಸ ಮಾಡುವುದಿಲ್ಲ ಎಂದು. ನಂಬಿದ ಭಕ್ತರಿಗೆ ಬೆಂಬಲಿಗನಾಗಿ ನಿಲ್ಲುತ್ತಾನವನು. ಬದುಕಿನಲ್ಲಿ ಅವನೇ ಪ್ರತ್ಯಕ್ಷನಾಗದಿದ್ದರೂ ಮತ್ತಾವುದೋ ರೀತಿಯಲ್ಲಿ ದರ್ಶನ ನೀಡುತ್ತಾನೆ. ದೇವರನ್ನು ನಂಬಿದರೆ ದೇವರು ಪ್ರತ್ಯಕ್ಷನಾಗುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಆ ನಂಬಿಕೆಯೇ ನಮ್ಮನ್ನು ಜೀವನಪೂರ್ತಿ ಕೈ ಹಿಡಿದು ಮುನ್ನಡೆಸುತ್ತದೆ ಎಂಬ ಅಚಲವಾದ ನಂಬಿಕೆ.

    ಕೇವಲ ದೇವರನ್ನಷ್ಟೇ ಅಲ್ಲ, ಬದುಕಿನ ಬಗ್ಗೆ, ಇತರ ವ್ಯಕ್ತಿಗಳ ಬಗ್ಗೆ, ನಾವು ಹೊಂದಿರುವ ಗುರಿಗಳ ಬಗ್ಗೆ ನಂಬಿಕೆ ಇರಲೇಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯ. ಸಾಗರದಷ್ಟು ಸಂಕಷ್ಟಗಳ ನಡುವೆ ನಮ್ಮನ್ನು ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಂಬಿಕೆಯೊಂದೇ.

    ನಂಬಿಕೆ ಎನ್ನುವುದು ಕೇವಲ ಪ್ರಜ್ಞಾಶೂನ್ಯತೆಯನ್ನು ಮೂಡಿಸುವುದಿಲ್ಲ, ಅದು ಪವಾಡವನ್ನೇ ಸೃಷ್ಟಿಸಬಲ್ಲುದು ಎಂದೆಲ್ಲಾ ಹೇಳುತ್ತಾರೆ. ಅದು ಕೂಡಾ ಒಂದು ನಂಬಿಕೆ. ನಂಬಿಕೆ ಅಂದರೆ ವಿಶ್ವಾಸ. ಭರವಸೆ. ಅದು ಇದ್ದಾಗ ಮಾತ್ರ ಗುರಿ ತಲುಪುವುದಕ್ಕೆ ಸಾಧ್ಯ. ನಂಬಿಕೆ ಇರಿಸಿಕೊಂಡಾಗಲೇ ಮಾಡಬೇಕಾದ ಕೆಲಸಕ್ಕೆ ಶ್ರಮ ಹಾಕುತ್ತೇವೆ. ಪ್ರಯತ್ನ ಪಡುತ್ತೇವೆ. ಇಂದಲ್ಲ ನಾಳೆ ಸುಖ ಸಿಗುತ್ತದೆ ಎಂಬ ನಂಬಿಕೆಯನ್ನಿರಿಸಿಕೊಳ್ಳುತ್ತೇವೆ. ನಂಬಿಕೆ ಇಲ್ಲದೆ ಹೋದರೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವುದೇ ಇಲ್ಲ. ಆಗುತ್ತೋ ಇಲ್ಲವೋ ಎನ್ನುವ ಸಂಶಯಯವೇ ಮನೆ ಮಾಡಿದರೆ ಕೆಲಸ ಅಪೂರ್ಣವಾಗುತ್ತದೆ.

    ಮಾಡೋ ಕೆಲಸದಲ್ಲಾಗಲಿ ಅಥವಾ ಒಬ್ಬ ವ್ಯಕ್ತಿಯ ಬಗ್ಗೆಯೇ ಆಗಲಿ ನಮಗಿರುವ ನಂಬಿಕೆಯೇ ಪರಸ್ಪರ ಬಂಧವನ್ನು, ಬಾಂಧವ್ಯವನ್ನು ಬೆಳೆಸುತ್ತದೆ. ಸಂಬಂಧದಲ್ಲಿ ಅದಿಲ್ಲದೇ ಹೋದರೆ ಬಂಧ ಬಂಧನವಾಗುವುದು.. ಇಂದು ನಾಳೆಗಳ ಬಗೆಗಿನ ನಂಬಿಕೆಯೇ ನಮ್ಮನ್ನು ಜೀವನ ಪರ್ಯಂತ ಕೈಹಿಡಿದು ಮುನ್ನಡೆಸುವುದು. ಈ ನಂಬಿಕೆ ಅನ್ನುವುದು ಬರಿಯ ಭಾವನೆಯಷ್ಟೇ ಅಲ್ಲ, ಅದು ಬದುಕಿನ ಆಶಾವಾದವನ್ನು ಮೂಡಿಸುವ ಟಾನಿಕ್ ಇದ್ದಂತೆ.

    ಉದಾಹರಣೆಗೆ ಒಳ್ಳೆಯ ಶಿಕ್ಷಣ ಪಡೆದರೆ ಒಳ್ಳೆಯ ಉದ್ಯೋಗ, ಒಳ್ಳೆಯ ಸಂಬಳ, ದೊರೆಯುತ್ತದೆ ಎಂದು ದೊಡ್ಡವರು ಹೇಳುತ್ತಿರುತ್ತಾರೆ. ಇದನ್ನು ಕೇಳಿಸಿಕೊಂಡ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲು ಶ್ರಮ ಪಡುತ್ತಾರೆ. ಹಣ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಳ್ಳೆಯ ಗೌರವ ಪಡೆದುಕೊಳ್ಳಲು ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ. ಯಾಕೆಂದರೆ ನಾಳೆ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಅವರನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ.

    ಹಾಗೆಯೇ ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗಿ ಅವರು ಬರೆದುಕೊಟ್ಟ ಪ್ರಿಸ್ಕ್ರಿಪ್ಷನ್‍ನ ಮೇಲೆ ನಂಬಿಕೆ ಇರಿಸಿ ಅದನ್ನು ತೋರಿಸಿ ಔಷಧ ತೆಗೆದುಕೊಂಡು ಹೋಗಿ ಸೇವಿಸುತ್ತೇವೆ. ಅದೇ ನಂಬಿಕೆಯಲ್ಲಿ ಕಾಯಿಲೆ ವಾಸಿಯಾಗಿರುತ್ತದೆ.ಹೀಗೆ ಮನುಷ್ಯಕುಲದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದಾದರೆ ಅದು ನಂಬಿಕೆಯಿಂದಲೇ.

    ಅನಿಶ್ಚಿತತೆಗೆ ಭರವಸೆ

    ನಮ್ಮ ಬದುಕಿನ ಅನಿಶ್ಚಿತತೆಗೆ ಯಾರು ಭರವಸೆಯನ್ನು ನೀಡುವುದಕ್ಕೆ ಸಾಧ್ಯ? ನಾಳೆ ಇರುತ್ತದೋ ಇಲ್ಲವೋ ಗೊತ್ತಿಲ್ಲ, ರಾತ್ರಿ ಮಲಗಿದರೆ ಬೆಳಗ್ಗೆ ಏಳುತ್ತೇವೆಯೋ ಅನ್ನುವುದೂ ಗೊತ್ತಿಲ್ಲ, ಆದರೂ ನಾಳೆಯ ಬಗ್ಗೆ ಚಿಂತಿತರಾಗಿ ನಾಳೆಗೆ ಬೇಕಾದ್ದನ್ನೂ ಇವತ್ತೇ ಮಾಡಿ, ಭವಿಷ್ಯದ ಬಗ್ಗೆ ನಂಬಿಕೆ ಇರಿಸಿಕೊಂಡಿರುತ್ತೇವೆ. ಆ ವರ್ತನೆಯೇ ನಮ್ಮನ್ನು ನಾಳೆಗಳ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಸಿದ್ಧರಾಗುವಂತೆ ಮಾಡುತ್ತದೆ. ಅದು ನಮ್ಮಲ್ಲಿರುವ ನಂಬಿಕೆಗಳಿಂದ ಮಾತ್ರ ಸಾಧ್ಯ.

    ವ್ಯಾಯಾಮ ದೇಹವನ್ನು ಸುಸ್ಥಿತಿಯಲ್ಲಿಡುವಂತೆ ನಂಬಿಕೆ ಕೂಡಾ ನಮ್ಮನ್ನು ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ನಂಬಿಕೆಯಿಂದ ಇಚ್ಛಾಶಕ್ತಿಯೂ ವೃದ್ಧಿಸುತ್ತದೆ. ಅದರಿಂದಲೇ ಮನಸ್ಸಿಗೆ ಶಾಂತಿ, ಸಂತೋಷ, ಸುಖ ಹಾಗೂ ಜೀವನದ ಉದ್ದೇಶವನ್ನು ಕಂಡುಕೊಳ್ಳುತ್ತೇವೆ. ದೇವರ ಮೇಲಿನ ನಂಬಿಕೆಗೆ ಜೀವವನ್ನು ರಕ್ಷಿಸುವ ಶಕ್ತಿ ಇರುತ್ತದೆ. ಅದು ಕೇವಲ ಭಾವನೆಯಷ್ಟೇ ಅಲ್ಲ, ಅದೊಂದು ಸೂಪರ್ ಪವರ್. ನಂಬಿಕೆಯ ಶಕ್ತಿಯೇ ಅಂಥದ್ದು. ಅದರಿಂದಲೇ ಜೀವನ ಬದಲಾಗುವುದನ್ನೂ ಗಮನಿಸಿರಬಹುದು.

    ನಂಬಿಕೆಯೇ ದೈವ

    ದೇವರಲ್ಲಿ ನಂಬಿಕೆಯನ್ನಿಡುವುದರಿಂದ ಆಗುವ ಲಾಭಗಳು ಅನೇಕ. ಆಚಾರಗಳಲ್ಲಿ, ವಿಚಾರಗಳಲ್ಲಿ, ಪದ್ಧತಿಗಳಲ್ಲಿ, ಆಚರಣೆಯಲ್ಲಿನ ನಂಬಿಕೆಗಳು ವ್ಯಕ್ತಿಯ ಬದುಕಿಗೆ ದಾರಿದೀಪವಿದ್ದಂತೆ. ದೇವರ ಮೇಲೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಸಂಕಷ್ಟಗಳನ್ನು ಹೇಳಿಕೊಂಡು, ಅವನೇ ನಮ್ಮನ್ನೆಲ್ಲ ಕಾಪಾಡುತ್ತಾನೆ ಎನ್ನುವ ನಂಬಿಕೆ ಆ ಕ್ಷಣಕ್ಕೆ ಶಕ್ತಿ ನೀಡುತ್ತದೆ. ಏನೇ ಬರಲಿ ದೇವರಿದ್ದಾನೆ ಬಿಡು ಎಂಬ ನಂಬಿಕೆ ಇಟ್ಟಿರು ವ ವ ಭವಿಷ್ಯದ ಬಗ್ಗೆ ಚಿಂತಿತನಾಗುವುದಿಲ್ಲ, ಒತ್ತಡವನ್ನು ಕಳೆದುಕೊಳ್ಳುವುದಿಲ್ಲ. ನಂಬಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡರೆ ಚಿಂತೆಗಳೇ ಇಲ್ಲವಾಗುತ್ತದೆ. ಅನಾರೋಗ್ಯಪೀಡಿತರಾಗಿದ್ದರೂ ನಾನು ಬದುಕುತ್ತೇನೆ ಎಂಬ ಸಕಾರಾತ್ಮಕ ನಂಬಿಕೆ ಬೆಳೆಸಿಕೊಂಡರೆ, ಆ ನಂಬಿಕೆಯಿಂದಲೇ ವ್ಯಕ್ತಿ ಕಾಯಿಲೆ ಮುಕ್ತನಾಗುತ್ತಾನೆ. ಹೀಗೆ ನಂಬಿ ಕೆಟ್ಟವರು ಯಾರೂ ಇಲ್ಲ. ನಂಬಿಕೆ ಬೆಳೆಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದಲೂ ತಿಳಿದುಬಂದಿದೆ.

    Photo by Alex Radelich on Unsplash

    ಉಳಿಸಿದ ಹಣ-ಗಳಿಸಿದ ಹಣ; ಹೂಡುವ ಮುನ್ನ ಬುದ್ಧಿ ನಿಮ್ಮ ಕೈಯಲ್ಲಿರಲಿ

    ಉಳಿತಾಯವೇ ಆಪದ್ಧನ, ಇಂದು ಉಳಿಸಿದ ಮೊಬಲಗು ನಾಳಿನ ಜೀವನಕ್ಕೆ ಮೆರಗು, ಮುಂತಾದ ಉಳಿತಾಯದ ನುಡಿಗಳು ಈಗ ಮರೆಯಾಗಿ ಕೇವಲ ಕೆಲವರೇ ಅಳವಡಿಸಿಕೊಳ್ಳುವ ಹಂತದಲ್ಲಿದ್ದೇವೆ. ಈಗಿನ ಯುವ ಪೀಳಿಗೆಯ ಹೆಚ್ಚಿನವರಿಗೆ ಉಳಿತಾಯ ಎಂಬ ಪದದ ಅರ್ಥವೇ ತಿಳಿದಿರಲಾರದು. ಆದರೆ ಕೋವಿಡ್‌ 19 ನ ಈ ಸಂದರ್ಭದಲ್ಲಿ, ಎಲ್ಲಾ ವಲಯದ ಚಟುವಟಿಕೆಗಳು ಸ್ಥಬ್ಧವಾಗಿರುವಾಗ ಸ್ವಲ್ಪಮಟ್ಟಿನ ನೆಮ್ಮದಿ, ಸಮಾಧಾನ ಕಂಡಿರುವವರೆಂದರೆ ಜೀವನದಲ್ಲಿ ಉಳಿತಾಯ ಹವ್ಯಾಸ ಅಳವಡಿಸಿಕೊಂಡಿರುವವರು ಮಾತ್ರ. ಈಗಿನ ವೆಚ್ಚಬಾಕತನದಿಂದ ಹೊರಬಂದು ಉಳಿತಾಯ ಆಧಾರಿತ ಜೀವನಕ್ಕೆ ಪರಿವರ್ತಿತರಾದಲ್ಲಿ ತಕ್ಕಮಟ್ಟಿನ ಸಮಾಧಾನಕ್ಕೆ ಅವಕಾಶವಾಗುದು.

    ಕೋವಿಡ್‌ 19 ಕಾರಣದಿಂದ ವ್ಯವಹಾರಗಳು ಹೆಚ್ಚಿನ ಮಟ್ಟದಲ್ಲಿ ಸ್ಥಗಿತವಾಗಿವೆ, ಇಲ್ಲವೇ ಭಾರಿ ಪ್ರಮಾಣದ ಕುಸಿತಕ್ಕೊಳಗಾಗಿವೆ. ವೃತ್ತಿಗಳಲ್ಲೂ ಬದಲಾವಣೆಗಳಾಗಿವೆ. ನಿವೃತ್ತರು ತಮ್ಮ ಪಿಂಚಣಿಯೊಂದಿಗೆ, ತಮ್ಮ ಖರ್ಚು ವೆಚ್ಚಗಳನ್ನು ತೂಗಿಸಲು ಕೈಲಿರುವ ಹಣವನ್ನು ಹೂಡಿಕೆ ಮಾಡಲು ವಿವಿಧ ರೀತಿಯ ಯೋಜನೆಗಳ ಆನ್ವೇ಼ಷಣೆಯಲ್ಲಿ ತೊಡಗಿರುತ್ತಾರೆ.

    ಇದಕ್ಕೆ ಕಾರಣ ಮುಖ್ಯವಾಗಿ ಬ್ಯಾಂಕ್‌ ಬಡ್ಡಿದರದಲ್ಲಾಗುತ್ತಿರುವ ಭಾರಿ ಇಳಿಕೆ. ಈಗಿನ ವ್ಯವಸ್ಥೆಯಲ್ಲಿ ಸುರಕ್ಷಿತ, ಸುಭದ್ರ ಎಂಬುದು ಕಾಣದಾಗಿದೆ. ಎಲ್ಲವೂ ಅನಿಶ್ಚಿತ ಎಂಬಂತಾಗಿದೆ. ಕೆಲವರು ಸ್ವಲ್ಪಮಟ್ಟಿನ ಹೆಚ್ಚು ಆದಾಯ ಬರಬಹುದೆಂಬ ನಿರೀಕ್ಷೆಯಿಂದ ಕೆಲವು ಸಹಕಾರಿ ಬ್ಯಾಂಕ್‌, ಸಂಘಗಳಲ್ಲಿ ಹೂಡಿಕೆಮಾಡಿರಲೂಬಹುದು. ಇಂತಹ ಹೂಡಿಕೆಯು ಕೆಲವು ಸಂದರ್ಭದಲ್ಲಿ ಹೆಚ್ಚಿನ ಅಪಾಯ ತಂದೊಡ್ಡಿರುವ ಉದಾಹರಣೆಗಳುಂಟು. ವ್ಯವಹಾರ, ವೃತ್ತಿಗಳು ನಿರಾಶಾದಾಯಕವಾಗಿರುವ ಈ ಸಂದರ್ಭದಲ್ಲಿ ನಿಯಂತ್ರಿತವಾಗಿ, ಬುದ್ಧಿ- ಆಲೋಚನೆಗಳ ಮಿಶ್ರಣದೊಂದಿಗೆ ಚಟುವಟಿಕೆ ನಡೆಸಿ ಆದಾಯಗಳಿಸಲು ಷೇರುಪೇಟೆಯೂ ಒಂದು ಸಾಧನ.

    ಸಾಮಾನ್ಯವಾಗಿ ಷೇರುಪೇಟೆ ಎಂದರೆ ಅದು ಜೂಜಾಟ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಷೇರುಪೇಟೆಯು ಶುದ್ಧ ನೀರಿನಂತೆ. ನಾವು ಅದರೊಂದಿಗೆ ಮಿಶ್ರಮಾಡುವ ಶೈಲಿಯನ್ನವಲಂಭಿಸಿದ ಫಲಿತಾಂಶ ಲಭಿಸುತ್ತದೆ. ಷೇರುಪೇಟೆಯಲ್ಲಿ ದೀರ್ಘಕಾಲೀನ, ಅಲ್ಪಕಾಲೀನ ಹೂಡಿಕೆ, ಡೇ ಟ್ರೇಡಿಂಗ್‌, ಡೆರಿವೆಟೀವ್‌ ಟ್ರೇಡಿಂಗ್‌, ಮಾರ್ಜಿನ್‌ ಟ್ರೇಡಿಂಗ್‌, ಫಂಡಮೆಂಟಲ್ಸ್‌ , ಟೆಕ್ನಿಕಲ್ಸ್‌ ಆಧಾರಿತ ಚಟುವಟಿಕೆ ಮುಂತಾದವುಗಳಿವೆ.

    ಸಾಮಾನ್ಯವಾಗಿ ಅಂತರ್ಗತವಾಗಿ ಅಡಕವಾಗಿರುವ ಅಂಶಗಳನ್ನಾಧರಿಸಿ ಹೂಡಿಕೆಮಾಡಿದಲ್ಲಿ ಅದು ಫಂಡಮೆಂಟಲ್ಸ್‌ ವಿಧ, ಧೀರ್ಘಕಾಲೀನ ಹೂಡಿಕೆಗೂ ಸೇರಿ ಅನುಕೂಲಕರವಾಗಿರುತ್ತದೆ. ಟೆಕ್ನಿಕಲ್ಸ್‌ ಆಧಾರಿತವೆಂದರೆ ಅದು ವ್ಯವಹಾರಿಕತೆಯಿಂದ ಕೂಡಿರುತ್ತದೆ. ಪೇಟೆಯಲ್ಲಿ ಷೇರಿನ ದರಗಳು ಕುಸಿತದಲ್ಲಿದ್ದಾಗ, ಫಂಡಮೆಂಟಲ್ಸ್‌ ಅಂಶಗಳಾಧಾರಿತ ಧೀರ್ಘಕಾಲೀನ ಹೂಡಿಕೆಗೆ ಯೋಗ್ಯವಾದ ಸಮಯವಾಗಿರುತ್ತದೆ.

    ಕೆಲವೊಮ್ಮೆ ಕಂಪನಿಗಳು ಘೋಷಿಸುವ ಕಾರ್ಪೊರೇಟ್‌ ಫಲಗಳಾದ ಲಾಭಾಂಶ (Dividend), ಬೋನಸ್‌, ಹಕ್ಕಿನ ಷೇರು ಮುಂತಾದವುಗಳ ಸಂದರ್ಭದಲ್ಲಿ ಅವು ಪ್ರದರ್ಶಿಸುವ ಏರಿಳಿತಗಳ ಅವಕಾಶವನ್ನು ಉಪಯೋಗಿಸಿಕೊಂಡು ಲಾಭ ಮಾಡಿಕೊಳ್ಳಬಹುದು. ಇದು ಅಲ್ಪಕಾಲೀನವೂ ಆಗಿರಬಹುದು.

    ಡೇ ಟ್ರೇಡಿಂಗ್‌ ಅಂದರೆ ಒಂದು ರೀತಿಯ ಜೂಜಾಟವೇ ಸರಿ. ಕಾರಣ ಖರೀದಿಸಿದ ಷೇರುಗಳ ದರ ಹೆಚ್ಚಾಗಲಿ ಅಥವಾ ಕಡಿಮೆಯಾಗಲಿ ಅಂದೇ ಚುಕ್ತಾ ಮಾಡಿ ಲಾಭ ನಷ್ಟಗಳ ಲೆಕ್ಕ ಹಾಕುವ ವಿಧವಿದಾಗಿರುತ್ತದೆ. ಇನ್ನು ಡೆರಿವೆಟಿವ್‌, ಮಾರ್ಜಿನ್‌ ಟ್ರೇಡಿಂಗ್‌ ಗಳು ಸ್ವಲ್ಪ ಹೆಚ್ಚು ಕಡಿಮೆ ಇದೇ ಗುಂಪಿಗೆ ಸೇರಿದವಾಗಿವೆ.

    ಷೇರುಪೇಟೆಯಲ್ಲಿ ಸುರಕ್ಷಿತವಾದ ರೀತಿಯಲ್ಲಿ (ಅಂದರೆ ಎಲ್ಲಾ ವಲಯದಲ್ಲಿದ್ದಂತೆ ಇಲ್ಲಿಯೂ ಅಪಾಯವಿರುತ್ತದೆ) ಸ್ವಂತ ಆಲೋಚನಯಿಂದ ವ್ಯವಹಾರ ಮಾಡಬೇಕು. ಷೇರುಪೇಟೆಯ ಚಟುವಟಿಕೆಗೆ ಮುನ್ನ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸುವುದು ಅಗತ್ಯ.

    • ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದಕ್ಕೆ ಮೌಲೀಕರಣ ಮಾಡುವುದೇ ಷೇರುಪೇಟೆಯ ವೈಶಿಷ್ಟ.
      ಉದಾಹರಣೆಗೆ: ಇತ್ತೀಚೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯು ತನ್ನ ಅಂಗ ಸಂಸ್ಥೆ ಜಿಯೋ ಪ್ಲಾಟ್‌ ಫಾರಂ ನ ಸ್ಟೇಕ್‌ ನ್ನು ಹಲವಾರು ವಿದೇಶಿ ಹೂಡಿಕೆ ಸಂಸ್ಥೆಗಳಿಗೆ ಮಾರಾಟ ಮಾಡಿದ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳಿಂದ ಇನ್ನೂ ಹಣ ಹರಿದುಬಂದಿರುವುದಿಲ್ಲ. ಆದರೂ ಈಗಾಗಲೇ ಈ ಕಾರ್ಯ ನೆರವೇರಿದೆ ಎಂಬಂತೆ ಷೇರಿನ ಬೆಲೆ ಗಗನಕ್ಕೇರಿದೆ.
    • ಕ್ಲಾರಿಯಂಟ್‌ ಕೆಮಿಕಲ್ಸ್‌ ಕಂಪನಿಯು ಪ್ರತಿ ಷೇರಿಗೆ ರೂ.140 ರಂತೆ ಡಿವಿಡೆಂಡ್‌ ಘೋಷಿಸಿದ ನಂತರ ಷೇರಿನ ಬೆಲೆ ರೂ.460 ರ ಸಮೀಪದಿಂದ ರೂ.608 ರ ವರೆಗೂ ಏರಿಕೆಯನ್ನು ಕೇವಲ ಎರಡೇ ದಿನಗಳಲ್ಲಿ ದಾಖಲಿಸಿತು. ಆದರೆ ಡಿವಿಡೆಂಡ್‌ ನಂತರ ಷೇರಿನ ಬೆಲೆ ರೂ.401 ರವರೆಗೂ ಇಳಿಕೆ ಕಂಡಿತು.
    • ಸ್ಮಾಲ್‌ ಕ್ಯಾಪ್‌ ಗಳಲ್ಲಿನ ಹೂಡಿಕೆ ಹೂವಿನಂತೆ ಅಲ್ಪಾಯು, ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆಯು ಡ್ರೈ ಫ್ರೂಟ್‌ ರೀತಿ ದೀರ್ಘಾಯುವಾಗಿರುತ್ತವೆ. ಸ್ಮಾಲ್‌ ಕ್ಯಾಪ್‌ ಷೇರುಗಳು ಅತಿ ಸೂಕ್ಷ್ಮತೆಯಿಂದ ಕೂಡಿರುತ್ತವೆ. ಹಾಗಾಗಿ ಅಪಾಯದ ಮಟ್ಟವೂ ಹೆಚ್ಚಿರುತ್ತದೆ.
    • ಉದಾಹರಣೆಗೆ ಓಮ್ಯಾಕ್ಸ್‌ ಲಿಮಿಟೆಡ್‌, ಷೇರಿನ ಬೆಲೆ ರೂ.222 ರ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿತು. ಆ ಸಂದರ್ಭದಲ್ಲಿ ಕಂಪನಿಯು ತನ್ನ ಬೋರ್ಡ್‌ ಮೀಟಿಂಗ್‌ ನ್ನು 29ನೇ ಜುಲೈಗೆ ಮುಂದೂಡಿದೆ ಎಂಬ ಸುದ್ಧಿಯು ಷೇರಿನ ಬೆಲೆಯನ್ನು ಗರಿಷ್ಠದ ಹಂತದಿಂದ ಜಾರುವಂತೆ ಮಾಡಿ 17 ರಂದು ರೂ.61.85 ರವರೆಗೂ ಕುಸಿದು ವಾರ್ಷಿಕ ಕನಿಷ್ಠ ದಾಖಲಿಸಿ, ದಿನದ ಮಧ್ಯೆಯೇ ಪುಟಿದೆದ್ದು ರೂ.68.35 ರ ದಿನದ ಗರಿಷ್ಠ ತಲುಪಿತು.
    • ಅಲೋಕ್‌ ಇಂಡಸ್ಟ್ರೀಸ್‌ ಷೇರಿನ ಬೆಲೆಯು ಈ ವರ್ಷದ ಜನವರಿಯಲ್ಲಿ ರೂ.3 ರಲ್ಲಿದ್ದು ನಂತರದ ಬೆಳವಣಿಗೆಗಳ ಕಾರಣ ಜುಲೈನಲ್ಲಿ ರೂ.61 ರ ಗರಿಷ್ಠತಲುಪಿ ವಾರ್ಷಿಕ ದಾಖಲಿಸಿತು. ಅದರೆ ಅದಕ್ಕಿಂತ ಮುಖ್ಯವಾಗಿ ಈ ತಿಂಗಳ 10 ರಂದು ಈ ಕಂಪನಿ ಪ್ರದರ್ಶಿಸಿದ ರಭಸದ ಏರಿಳಿತಗಳು ಅಪಾಯದ ಮಟ್ಟವನ್ನು ತಿಳಿಸುತ್ತದೆ. ಅಂದು ದಿನದ ಆರಂಭಿಕ ಕ್ಷಣಗಳಲ್ಲಿ ರೂ.41.10 ರ ದಿನದ ಕನಿಷ್ಠ ಆವರಣಮಿತಿಯಲ್ಲಿತ್ತು. ಕೋಟಿಗಟ್ಟಲೆ ಷೇರುಗಳ ಮಾರಾಟದ ಒತ್ತಡವಿತ್ತು. ಆದರೆ ಸ್ವಲ್ಪ ಸಮಯದ ನಂತರ ಮಾರಾಟದಲ್ಲಿದ್ದ ಎಲ್ಲಾ ಷೇರುಗಳು ಕರಗಿ ಕ್ರಮೇಣ ಖರೀದಿಯ ಒತ್ತಡದಿಂದ ಏರಿಕೆ ಕಂಡು ರೂ.45 ರ ಸಮೀಪದ ಗರಿಷ್ಠ ಆವರಣಮಿತಿ ತಲುಪಿತು. ಅತ್ಯಲ್ಪ ಸಮಯದಲ್ಲಿ ಅದೆಲ್ಲಾ ಕರಗಿ ಮತ್ತೊಮ್ಮೆ ದಿನದ ಕನಿಷ್ಠಕ್ಕೆ ಕುಸಿಯಿತು. ಈ ಷೇರಿನ ದಿನದ ನಡೆಯು ಸಾಮಾನ್ಯ ಹೂಡಿಕೆದಾರರ ಕಲ್ಪನೆ ಮೀರಿದ್ದು.
    • ಆದ್ದರಿಂದ ಇಂತಹ ಕಂಪನಿಗಳಿಂದ ದೂರವಿದ್ದರೆ ಕ್ಷೇಮ.

    ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿಅವಕಾಶಗಳು ಹೇಗೆ ಸೃಷ್ಠಿಯಾಗುತ್ತವೆ ಎಂಬುದಕ್ಕೆ ಈ ವಾರ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಪ್ರದರ್ಶಿಸಿದ ರೀತಿ ಗಮನಿಸಿದಲ್ಲಿ ಅರಿವಾಗುವುದು. ಗುರುವಾರದಂದು ಷೇರಿನ ಬೆಲೆ ರೂ.360 ರ ಸಮೀಪವಿದ್ದು ನಂತರದ ದಿನ ರೂ.447 ರವರೆಗೂ ಏರಿಕೆ ಕಂಡಿದೆ. ಇದಕ್ಕೆ ಕಾರಣವೇನೇ ಇರಲಿ ಇಂತಹ ಏರಿಕೆಯನ್ನು ನಗದೀಕರಿಸಿಕೊಳ್ಳುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಂಪನಿಗಳಾದ ಬಯೋಕಾನ್, ಟೈಟಾನ್‌, ಎಂ ಅಂಡ್‌ ಎಂ, ಟಾಟಾ ಸ್ಟೀಲ್‌, ಹೆಚ್‌ ಸಿ ಎಲ್‌ ಟೆಕ್ನಾಲಜೀಸ್‌, ಭಾರತ್‌ ಫೋರ್ಜ್‌, ಆಕ್ಸಿಸ್‌ ಬ್ಯಾಂಕ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಎಲ್‌ ಐ ಸಿ ಹೌಸಿಂಗ್ ನಂತಹ ಅನೇಕ ಕಂಪನಿಗಳು ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ.

    ಈಗಿನ ಕೋವಿಡ್19‌ ರ ಸಂದರ್ಭದಲ್ಲಿ ಷೇರುಪೇಟೆಯತ್ತ ಹರಿದುಬರುತ್ತಿರುವ ಹಣದ ಪ್ರಭಾವದ ಕಾರಣ ಷೇರಿನ ಬೆಲೆಗಳು ಸಾಧನೆಯಾಧಾರಿತದ ಹೊರಗಿನ ಕಾರಣಗಳಿಂದ ಏರಿಳಿತಗಳು ಪ್ರದರ್ಶಿಸುತ್ತಿರುವ ಕಾರಣ ದೊರೆತಂತಹ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ.

    ಗಮನಿಸಿರಿ: ಷೇರುಗಳು ಡಿಮ್ಯಾಟ್‌ ರೂಪದಲ್ಲಿರುವುದರಿಂದ ಕೇವಲ ಒಂದು ಷೇರನ್ನು ಸಹ ಖರೀದಿಸಬಹುದು. ಆದರೆ ಮಾರಾಟ ಮಾಡುವಾಗ ಒಂದು ಷೇರಾಗಲಿ ಅಥವಾ ಹೆಚ್ಚಾಗಲಿ ಅದಕ್ಕೆ ತಕ್ಕಂತೆ ಚಾರ್ಜನ್ನು ತೆರಬೇಕಾಗುತ್ತದೆ. ಹೊಸದಾಗಿ ಪ್ರವೇಶಿಸುವವರು ಒಂದೇ ಸಲ ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಖರೀದಿಸುವುದಕ್ಕಿಂತ ಪೇಟೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವವರೆಗೂ ಮಿತವಾದ ಸಂಖ್ಯೆಯ ಷೇರುಗಳಲ್ಲಿ ವಹಿವಾಟಿನಿಂದ ಚಟುವಟಿಕೆ ನಡೆಸುವುದು ಉತ್ತಮ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ನಾವೇಕೆ ಎಲ್ಲಾ 64 ವಿದ್ಯೆಗಳನ್ನು ಕಲಿಯಲಿಲ್ಲ

    ಅವನನ್ನು ಮನೆ ಒಳಗೆ ಸೇರಿಸಬೇಡ,ಅವರೊಟ್ಟಿಗೇ ಹೋಗಲಿ,ಅವರ ರೀತಿಯೇ ಊರೂರು ಅಲೆಯುತ್ತ,ಅವರಿವರು ಕೊಟ್ಟಿದ್ದು ತಿನ್ನುತ್ತಾ,ಅವರದ್ದೇ ಹುಡುಗಿಯನ್ನು ಅವರು ಮದುವೆ ಮಾಡುತ್ತಾರೆ,ಮಾಡಿಕೊಳ್ಳಲಿ ಅಂತ ಅಪ್ಪ ರೌದ್ರಾವತಾರ ತಾಳಿ,ಬಯ್ಯುತ್ತಿದ್ದರೆ, ಅವರ ಜೊತೆ ಪಕ್ಕದ ಹಳ್ಳಿಗಳನ್ನು ಸುತ್ತಾಡಿ, ಸುಸ್ತಾಗಿದ್ದ ನಾನು ಅಮ್ಮನಿಂದ ಆಗಲೇ ಒದೆ ತಿಂದು ನಮ್ಮ ಮನೆಯ ಕಟ್ಟೆಯಮೇಲೆ ಹಾಗೇ ನಿದ್ರೆ ಮಾಡಿಬಿಟ್ಟಿದ್ದೆ. ನನಗಾಗ 7-8 ವರ್ಷ ವಯಸ್ಸಿರಬಹುದು. ಇಲ್ಲಿ ಅವರು ಅಂದ್ರೆ ಯಾರು ಅಂತ ನಿಮಗೆ ಅರ್ಥ ಆಗಲಿಲ್ಲ ಅಲ್ಲಾ, ಹೇಳ್ತೀನಿ ಕೇಳಿ.

    ಬಯಲು ಸೀಮೆಯ ಹಳ್ಳಿಯಾದ ನನ್ನೂರು ಸುತ್ತಲಿನ ಐದಾರು ಹಳ್ಳಿಗಳಿಗೆ ಪ್ರಮುಖವಾಗಿತ್ತು. ಹೆಚ್ಚಾಗಿ ರೈತರು, ಗಣಿ ಕಾರ್ಮಿಕರಿದ್ದ ಎಲ್ಲ ಹಳ್ಳಿಗಳಿಗೂ ಶಾಲೆ,ಕಿರಾಣಿ ಸಾಮಾನು,ಬಸ್ಸು ಹತ್ತಿ ಕೂಡ್ಲಿಗಿ,ಸಂಡೂರು ಕಡೆಗೆ ಹೋಗಬೇಕೆಂದರೆ,ನಮ್ಮೂರನ್ನೇ ಆಶ್ರಯಿಸಿ ಬರಬೇಕಿತ್ತು. 70ರ ದಶಕದಲ್ಲಿ. ಇದಲ್ಲದೆ ಋತುಮಾನಗಳಿಗೆ ತಕ್ಕಂತೆ ಯಾವ್ಯಾವುದೋ ಊರುಗಳಿಂದ ಜನ ನಮ್ಮೂರಿಗೆ ಬಂದು ಏರಿ ಮೇಲಿನ ಗಾಳೆಮ್ಮನ ಗುಡಿಯಲ್ಲಿ, ಕೋಡಿ ಬಸವಣ್ಣನ ಗುಡಿಯ ಸುತ್ತ ಬಿಡಾರ ಹೊಡೆದು ತಿಂಗಳುಗಳ ಕಾಲ ಇರುತ್ತಿದ್ದರು. ತಮಿಳುನಾಡಿನ, ತಮಿಳು ಮಾತಾಡುವ ಜನ ಬಾತುಕೋಳಿಗಳನ್ನು ಹಿಂಡು ಗಟ್ಟಲೆ ಅಂದರೆ ಸಾವಿರದ ಲೆಕ್ಕದಲ್ಲಿ ತಂದು,ನಮ್ಮೂರ ಕೆರೆಯ ನೀರಿನಲ್ಲಿ,ಗದ್ದೆಗಳಲ್ಲಿ ಅವುಗಳನ್ನು ಮೇಯಿಸುತ್ತ, ಬಿಡಾರ ಹೊಡೆದು ಕೊಂಡು ಇರುತ್ತಿದ್ದರು.

    ಕಪ್ಪನೆಯ ಧಡೂತಿ ಹೆಂಗಸರು,ಅವರ ಮೂಗಿನ,ಕಿವಿಗಳ ಆಭರಣ,ಅವರ ಹತ್ತಿರ ಬರುತ್ತಿದ್ದ ಬಾತುಕೋಳಿ ಮೊಟ್ಟೆಯ ವಾಸನೆ ಆಗ ನನಗೆ ಏನೋ ಹೊಸ ಅನುಭವದ ವಿಷಯಗಳು. ಮತ್ತೆ ಕೆಲವರು ವೃತ್ತಿ ನಾಟಕ ಕಂಪನಿಯವರು, ಹಗಲು ವೇಷಧಾರಿಯರು, ಹಾವಾಡಿಗರು, ಕರಡಿ ಆಡಿಸುವವರು, ಜೊತೆಗೆ ಜೋಗತಿಯರು ಎನ್ನಿಸಿಕೊಂಡವರ ಒಂದು ತಂಡ ರಾತ್ರಿಯೆಲ್ಲ ಪುರಾಣ ಪ್ರಸಂಗಗಳ ನಾಟಕ ಆಡುತ್ತಿದ್ದರು. ಅವುಗಳಲ್ಲಿ ರೇಣುಕ ಯಲ್ಲಮ್ಮ ನ ನಾಟಕ ಬಹು ಪ್ರಸಿದ್ದಿ. ಬಹುತೇಕ ನಮ್ಮ ಮಹಾಕಾವ್ಯಗಳ ಪರಿಚಯ ಇವರುಗಳ ನಾಟಕ,ಬಯಲಾಟಗಳಿಂದಲೇ ಗ್ರಾಮೀಣ, ಅನಕ್ಷರಸ್ಥ ಜನರಿಗೆ ಆಗಿರುವುದು.

    ಅಪ್ಪ ಬೇಸಿಗೆ ರಜೆಯ ಮಧ್ಯಾಹ್ನದಲ್ಲಿ ರಾಮಾಯಣ,ಮಹಾಭಾರತ ಕಾವ್ಯ ವಾಚನ ನನ್ನ ಮನೆಯ ಕಟ್ಟೆಯಮೇಲೆ ಮಾಡುತ್ತಿದ್ದರೆ, ಶಾನುಭೋಗರ ಶ್ರೀನಿವಾಸ ರಾವ್ ಅವರು ಅವರ ಮನೆಯ ಕಟ್ಟೆಯಮೇಲೆ ಇದನ್ನೇ ಮಾಡುತ್ತಿದ್ದರು.(ವಾಲ್ಮೀಕಿ ರಾಮಾಯಣ,ಗದುಗಿನ ನಾರಾಯಣಪ್ಪನವರ ಗದಾಯುದ್ಧ ಈಗಲೂ ಅಪ್ಪನ ನೆನಪಾಗಿ ನನ್ನಲ್ಲಿ ಇವೆ.ಅವುಗಳ ಪದ್ಯದ ಸಾಲು ನೋಡುತ್ತಿದ್ದರೆ,ಅಪ್ಪನ ಕಂಠದ ಪ್ರಾಸ, ಯಾವ್ಯಾವ ಸಾಲುಗಳನ್ನು ಅಪ್ಪ ಹೇಗೆ ಸುಶ್ರಾವ್ಯವಾಗಿ ಹಾಡಿ, ಅರ್ಥೈಸುತ್ತಿದ್ದರೋ,ಅದು ಕಣ್ಮುಂದೆ ಬರುತ್ತೆ.) ಸಾಯಂಕಾಲಗಳಲ್ಲಿ ಆಗಾಗ ಬೇರೆ ಊರಿಂದ ಬರುತ್ತಿದ್ದವರು ಯಾವುದಾದರೂ ಇವೇ ಮಹಾಕಾವ್ಯಗಳ ಪ್ರಸಂಗ ಕುರಿತ ಹರಿ ಕಥೆ ಹೇಳುತ್ತಿದ್ದರು. ಹಾಗೆ ಬರುವವರಲ್ಲಿ ನನ್ನ ಆಕರ್ಷಣೆಯ ಕೇಂದ್ರ ಆಗಿದ್ದವರು ಒಂದು ಅಲೆಮಾರಿ ಜನಾಂಗ. ಅವರನ್ನು ಜೋಗೇರು, ದೊಂಬರು, ಮೋಡಿ ಮಾಡೋರು, ಕಣ್ಕಟ್ ಮಾಡೋರು ಅಂತ ನಾನಾ ವಿಧವಾಗಿ ಕರೆಯುತ್ತಿದ್ದರು,ನಮ್ಮೂರಲ್ಲಿ.

    ಬಜಾರದ ವೆಂಕಟರಮಣ ಶೆಟ್ರ ಮನೆಮುಂದೆ ಸಾಮಾನ್ಯವಾಗಿ ಇವರೆಲ್ಲರ ಪ್ರದರ್ಶನ ನಡೆಯುತ್ತಿದ್ದವು. ಚಿಕ್ಕ ಹುಡುಗಿ 12-15 ಅಡಿ ಎತ್ತರದಲ್ಲಿ ತಂತಿಯ ಮೇಲೆ ಸೈಕಲ್ ಓಡಿಸುವುದು,ಒಂದು ದೊಡ್ಡ ಬಿದಿರಿನ ಕೋಲು ಅಡ್ಡವಾಗಿ ಕೈಯಲ್ಲಿ ಹಿಡಿದು ಅಡ್ಡಾಡುವುದು, ಕೆಳಗೆ ಮಲಗಿ,ಎದೆಯಮೇಲೆ ಚಪ್ಪಡಿಕಲ್ಲನ್ನು ಅವರಪ್ಪ ಸುತ್ತಿಗೆಯಿಂದ ಹೊಡೆಯುವುದು ಒಂದು ಕಡೆ ಆದರೆ, ಆ ಹುಡುಗಿಯ ಅಪ್ಪ ತನ್ನ ಒಂದು ಕಣ್ಣು ತಾನೇ ಕಿತ್ತುಕೊಂಡು ಅಂಗೈಯಲ್ಲಿಟ್ಟು ಎಲ್ಲರಿಗೂ ತೋರಿಸುತ್ತಿದ್ದುದು ನನ್ನನ್ನು ತಲ್ಲಣಗೊಳಿಸಿತ್ತು!

    ಮಾರನೆಯ ದಿನ ಭಯಂಕರ ವೇಷ ಧರಿಸಿ,ಮನೆ ಮನೆಗೆ ಏನಾದ್ರು ಕೇಳಲು ಬರುವಾಗ ನಾನು ಅವನ ಕಿತ್ತ ಕಣ್ಣನ್ನೇ ನೋಡುತ್ತಾ,ಅವನ ಹಿಂದೆಂದೆ ಹೋಗುತ್ತಿದ್ದೆ,ಶಾಲೆಗೆ ಹೋಗುವದನ್ನು ಮರೆತು. ಅವನ ಹತ್ತಿರ ಒಂದು ಚೀಲ ಇರುತ್ತಿತ್ತು. ಅದರಿಂದ ಹಾವು,ಚೇಳು ಹೊರಗೆ ತೆಗೆದು ಬಜಾರದಲ್ಲಿ ಹಾಸಿದ್ದ ಕಂಬಳಿಯ ಮೇಲೆ ಅಡ್ಡಾಡಲು ಬಿಡುತ್ತಿದ್ದ. ಮತ್ತೆ ಒಳಗೆ ಚೀಲದಲ್ಲಿ ಹಾಕಿಬಿಡುತ್ತಿದ್ದ. ನನಗೆ ಆ ಚೀಲ ನೋಡುವುದೇ ಸಂಭ್ರಮ. ಹಾಗೊಂದು ಸಾರಿ ಅವನಿದ್ದ ಕೋಡಿ ಬಸವಣ್ಣನ ಗುಡಿಯತನಕವೂ ಹೋಗಿ,ಅವನ ಚೀಲದಲ್ಲಿದ್ದ ಗಜ್ಜುಗ,ಕವಡೆ ತಂದು, ಅಮ್ಮನಿಂದ ಹೊಡೆಸಿಕೊಂಡಿದ್ದೆ ಮತ್ತು ಅವುಗಳನ್ನು ದೂರ ಎಸೆದು ಬಿಟ್ಟಿದ್ದಳು . ದುಃಖ ತಡೆಯಲು ಆಗಿರಲಿಲ್ಲ ಆಗ.

    ಅಂತಹುದೇ ಒಂದು ಕುತೂಹಲದಿಂದ ಅವರೊಟ್ಟಿಗೆ ನಮ್ಮೂರ ಪಕ್ಕದ ಜಿಗೇನಹಳ್ಳಿ ಗೆ ಹೋಗಿ ಬಂದಿದ್ದೆ. ಅವತ್ತೇ ಮೊದಲಿಗೆ ಆ ಊರು ನಾನು ನೋಡಿದ್ದು!. ಇಲ್ಲಿ ಅಪ್ಪ,ಅಮ್ಮ ದಿನ ಇಡೀ ಹುಡುಕಿ ಭಯಗೊಂಡು ನಾನು ಸಾಯಂಕಾಲ ಮನೆಗೆ ಬರುತ್ತಿದ್ದಂತೆಯೇ ಮಂಗಳಾರತಿ ಮಾಡಿದ್ದರು. ಹಾಗೆ ನೋಡಿದರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಾಯಿ ತಿರುಗಿದ ಹಾಗೆ (ಇದು ನನ್ನ ಅಮ್ಮನ ಭಾಷೆ) ತಿರುಗುವುದು ನನಗೂ ಹೊಸದಲ್ಲ,ಬೈಯುವುದು ಅವರಿಗೂ ಹೊಸದಲ್ಲ.

    ಬೆಳಿಗ್ಗೆ 6 ಗಂಟೆಗೆ ಅಪ್ಪನ ಜೊತೆ ದೇವಸ್ಥಾನದ ಹೊಂಡಕ್ಕೆ ಸ್ನಾನಕ್ಕೆಂದು ಹೋಗುತ್ತಿದ್ದವನು,ಈಸಲು ಯಾವಾಗ ಕಲೆತೆನೋ ನನಗೇ ನೆನಪಿಲ್ಲ. ಊರ ಮುಂದಿನ ಕೆರೆ ತುಂಬಿ ಕೋಡಿ ಬಿದ್ದಾಗ, ಬೆಳಿಗ್ಗೆನೇ ನೀರಲ್ಲಿ ಆಟ ಆಡ್ತಾ,ಎದುರು ನೀರಿಗೆ ಬರುತ್ತಿದ್ದ ಚಿಕ್ಕ,ಚಿಕ್ಕ ಮೀನುಗಳನ್ನು ಹಿಡಿಯುತ್ತ,ಯಾವಾಗ ಮನೆಗೆ ಹೋಗಿದ್ದೋ ನೆನಪಿಲ್ಲ. ಗಂಟೆ ಮಕ್ಕಳು ಕಾಣದಿದ್ದರೆ ಈಗಿನ ರೀತಿ ಆಗ ತಡಪಡಿಸುತ್ತಿರಲಿಲ್ಲ. ಊರಲ್ಲಿಯ ಯಾರಾದರೊಬ್ಬರು ನಾವೆಲ್ಲ ಎಲ್ಲಿದ್ದೇವೆ ಅಂತ ನಮ್ಮ ಮನೆಗಳಿಗೆ ಹೇಳುತ್ತಿದ್ದರು. ಮನೆಯವರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ,ಸಮಯಕ್ಕೆ ಸರಿಯಾಗಿ ಬಂದು ಊಟ ಮಾಡಿ ಹೋದರೆ. ಹೀಗಿದ್ದುದರಿಂದ ನಾನೇನು ಮಾಡಬಾರದ್ದು ಮಾಡಿದ್ದೇನೆಂದು ಅಪ್ಪ,ಅಮ್ಮ ನನ್ನನ್ನು ಹೀಗೆ ಬೈದು,ಊಟಕ್ಕೆ ಕೊಡದೆ ಹೊರಗೆ ಮಲಗಿಸಿದ್ದಾರಲ್ಲ ಅಂತ ನನ್ನ ಸ್ವಗತ ವಾದ. ಅಪ್ಪನ ಎದುರಿಗೆ ಜೋರಾಗಿ ಕೆಮ್ಮಲೂ ಭಯ ಆಗ. ದುರ್ವಾಸ ಮುನಿಯ ಅಪರಾವತಾರ. ಇಷ್ಟು ಭಯದ ನಡುವೆ ಅವರ ಹಿಂದೆ ಮತ್ತೆ,ಮತ್ತೆ ಹೋಗುತ್ತಿದ್ದೆ ಅಂದರೆ,ಅವರೆಡೆಗಿನ ನನ್ನ ಕುತೂಹಲ ನಿಮಗೆ ತಿಳಿದಿರಬೇಕಲ್ಲ ಈಗ.

    ಸರಿ,ತಡೆಯಲಾಗದ ಕುತೂಹಲಗಳನ್ನು ತಣಿಸುತ್ತಿದ್ದುದೇ ಅಪ್ಪ. ಬೆಳಿಗ್ಗೆ ಹೊಂಡಕ್ಕೆ ಇಬ್ಬರೇ ನಡೆದು ಹೋಗುವಾಗ ನನಗೆ ಅಪ್ಪನ ಸಾನಿಧ್ಯದ ಸನಿಹ ಬಹು ಅಚ್ಚುಮೆಚ್ಚು. ಪಾಠಗಳ ಹೊರತಾದ ಎಲ್ಲ ವಿಷಯಗಳ ಅರಿವು ನನಗಾಗುತ್ತಿದುದೇ ಇಲ್ಲಿ. ಅಪ್ಪ ತನ್ನ ಜೀವಿತಾವಧಿಯ 84 ವರ್ಷಗಳಲ್ಲಿ ಸುಮಾರು 78 ವರ್ಷದ ವರೆಗೆ ಮನೆಯಿಂದ ಒಂದು ಕಿಲೋಮೀಟರ್ ಇರುವ ದೇವಸ್ಥಾನದ ಹೊಂಡದಲ್ಲಿ ದಿನಾ ಬೆಳಿಗ್ಗೆ ಈಜುವುದರೊಂದಿಗೆ ಸ್ನಾನ ಆಗಲೇಬೇಕು. ಅದು ನನಗೂ ಊರಲ್ಲಿರುವಷ್ಟು ದಿನ ಅಭ್ಯಾಸವಾಗಿತ್ತು. ಹಾಗೆ ಒಂದು ದಿನ ಅವನ ಕಣ್ಣು ಹೇಗೆ ಕಿತ್ತುಕೊಂಡು ಎಲ್ಲರಿಗೂ ತೋರಿಸುತ್ತಾನೆ ಅಂತ ಕೇಳಿದಾಗ, ಅವರು ಅದನ್ನು ಸಮ್ಮೋಹನ ವಿದ್ಯೆ ಅಂತಾರೆ, ಅದು ನಮ್ಮ ಪರಂಪರೆಯ 64 ವಿದ್ಯೆಗಳಲ್ಲಿ ಒಂದು,ಅದನ್ನು ಮಾನಸಿಕ ರೋಗಿಗಳ ಸುಧಾರಣೆಗಾಗಿ ಬಳಸುತ್ತಿದ್ದರು,ನಂತರ ಜನರನ್ನು ಮರಳುಮಾಡಿ ಕಳ್ಳತನ ಮಾಡಲೂ ಬಳಸುತ್ತಾರೆ. ತಂತ್ರ,ತಾಂತ್ರಿಕರು ಎನ್ನಿಸಿಕೊಂಡ ಒಂದು ಭಾಗದ ಜನರಿಗೆ ಇದು ಬಹು ಅನಿವಾರ್ಯ ವಿದ್ಯೆ ಅಂತ ಹೇಳಿದ್ದರು. ನನ್ನ ಹಲವಾರು ಪ್ರೆಶ್ನೆಗಳಿಗೆ ಅಪ್ಪ,ಇನ್ನು ಸ್ವಲ್ಪ ದೊಡ್ಡವನಾಗು,ಆಗ ಹೇಳ್ತೀನಿ,ನಿನಗೆ ಅರ್ಥ ಆಗುತ್ತೆ ಈಗ ಆಗಲ್ಲ ಅಂತ ಹೇಳ್ತಾ ಇದ್ದರು ಆಗ. ನಾನು ಬೆಳೆದಂತೆಲ್ಲ ನನ್ನ ಕುತೂಹಲಗಳಿಗೆ ಸಮಯವಿಲ್ಲದಂತೆ ಆಯ್ತೇನೋ ಗೊತ್ತಿಲ್ಲ.

    ಎಂಜಿನಿಯರಿಂಗ್ ಗೆ ಅಂತ ಸುರತ್ಕಲ್ ಕಾಲೇಜಿಗೆ ಬಂದೆ. ಮೊದಲೆರೆಡು ವರ್ಷ ಬೆಳಿಗ್ಗೆ ಬೀಚ್ ನಲ್ಲಿ ಓಟ,ಯೋಗ,ಪ್ರಾಣಾಯಾಮ. ಸಾಯಂಕಾಲ ನಮ್ಮ ಹಾಸ್ಟೆಲ್ ಹಿಂದಿನ ರಸ್ತೆಯಲ್ಲಿ ಓಟ. ಹಾಸ್ಟೆಲ್ ಪಕ್ಕ ಇದ್ದ ಜಿಮ್ ನಲ್ಲಿ ಸಾಮು. ಮಲ್ಲಾಡಿಹಳ್ಳಿಯ ವಾಸನೆಯನ್ನು ಮೊದಲೆರಡು ವರ್ಷ ಉಳಿಸಿಕೊಂಡಿದ್ದೆ. ಅದೇ ಸಮಯದಲ್ಲಿ ಕೇರಳದಿಂದ ಒಬ್ಬ Hypnotist ಬಂದಿದ್ದ. ಅಲ್ಲಿದ್ದ Student Activity Centre (SAC)ಅದು ಸುಮಾರು ಸಾವಿರ ಜನರನ್ನು ಕೂರಿಸಿಕೊಳ್ಳುವ ಹೊರಾಂಗಣ. ಇಲ್ಲಿ ವಿದ್ಯಾರ್ಥಿಗಳಾದ ನಮ್ಮ ಮೇಲೆ ಸಮೂಹ ಸಮ್ಮೋಹನ ಮಾಡುವುದಾಗಿ ಹೇಳಿ, ಒಪ್ಪಿಗೆ ಇದ್ದವರು ವೇದಿಕೆಗೆ ಬನ್ನಿ ಎಂದ. ನನಗೋ ಕುತೂಹಲದ ಸಡಗರ! 20-30 ಗೆಳೆಯರೊಂದಿಗೆ ತುಂಬಿದ್ದ ವೇದಿಕೆ ಮೇಲೆ ನಾನೂ ಹೋದೆ ಸಮ್ಮೋಹನಕ್ಕೆ ಒಳಗಾಗಲು. ಏನಾದ್ರು ಆಗಲಿ ನಾನು ಒಳಗಾಗಾಲೇ ಬಾರದು ಅಂತ ಮನದಲ್ಲಿ ನಿಶ್ಚಯಿಸಿದ್ದೆ. ಅವನು ಹೇಗೆ ಮಾಡ್ತಾನೋ ನೋಡುವ ಅಂದುಕೊಂಡು.

    …..1,2,3….10….ಈಗ ನೀವೆಲ್ಲ ನಾನು ಹೇಳಿದ ಹಾಗೆ ಕೇಳ್ತೀರಿ, ನೀವು 10 ವರ್ಷದ ವಯಸ್ಸಿಗೆ ಹೋಗಿ,2 ವರ್ಷದ ವಯಸ್ಸಿಗೆ ಹೋಗಿ,ಅಮ್ಮನ ಗರ್ಭಕ್ಕೆ ಹೋಗಿ,ಹಿಂದಿನ ಜನ್ಮಕ್ಕೆ ಹೋಗಿ….. ಅವನ ಸೂಚನೆಗಳು ಹೀಗೆ ಸಾಗುತ್ತಿದ್ದವು. ವೇದಿಕೆಯಲ್ಲಿಯ ಕೆಲವು ಗೆಳೆಯರು ಸಮ್ಮೋಹನಕ್ಕೆ ಒಳಗಾದ್ರು ಅಂತ ಅವ ಹೇಳ್ತಿದ್ದ,ಕೆಲವರನ್ನು ಕೆಳಗಿಳಿಸಿ ಕಳಿಸಿಕೊಟ್ಟ. ಪ್ರತಿ ಬಾರಿಯೂ ನನಗೇನೂ ಆಗಿಲ್ಲ,ನಾನು ಇಲ್ಲೇ ಇದ್ದೇನೆ,SAC ನಲ್ಲಿ ನಿಮ್ಮ ಎದುರಿಗೆ ಅಂತ ಅವ ಏನು ಹೇಳಿದರೂ ಕೇಳದೆ ವಾದ ಮಾಡ್ತ ಇದ್ದೆ. ಹತ್ತಿರಬಂದು ನೀನು ಯೋಗ,ಪ್ರಾಣಾಯಾಮ ಮಾಡ್ತಿದೀಯ ಅಂದ…ಹೌದು ಈಗ ಸಾಯಂಕಾಲ ಮುಗಿಸಿ,ಊಟ ಮಾಡಿ ಇಲ್ಲಿಗೆ ಬಂದಿದ್ದೇನೆ ಅಂದೆ. ನಾನು ಅವನು ಸೂಚನೆ ಕೊಟ್ಟಂತೆಲ್ಲ ನಾನು ಅವತ್ತು ಬೆಳಿಗ್ಗೆಯಿಂದ ಕಾಲೇಜಿನಲ್ಲಿ,ಹಾಸ್ಟೆಲ್ ನಲ್ಲಿ ಏನಾಯ್ತು ಅಂತ ನೆನಪಿಸಿಕೊಳ್ತಾ ವಾಸ್ತವತೆಯನ್ನು ಬಿಟ್ಟು ಅವನು ಸೂಚಿಸುತ್ತಿದ್ದ ಬಾಲ್ಯ ಅಮ್ಮನ ಗರ್ಭ ಯಾವುದರ ಕಡೆ ಗಮನ ಕೊಡುತ್ತಿರಲಿಲ್ಲ. Almost ಎಲ್ಲರೂ ವೇದಿಕೆಯಿಂದ ಕೆಳಗಿಳಿದರು. ನಾನು,ಅವನು ಮಾತ್ರ ವೇದಿಕೆಯಲ್ಲಿ. ನೀನು ಸಮ್ಮೋಹನಕ್ಕೆ ಒಳಗಾಗಿದ್ದಿಯ,ನಿನಗೆ ತಿಳಿಯುತ್ತಿಲ್ಲ ಅಂತ ಅವನ ವಾದ. ಇಲ್ಲವೇ ಇಲ್ಲ ಅಂತ ನನ್ನ ವಾದ. ಸರಿ ಸಭಿಕರನ್ನು ಉದ್ದೇಶಿಸಿ ಅವ ಹೇಳಿದ,ಇವನು ಸಮ್ಮೋಹನಕ್ಕೆ ಒಳಗಾಗಿದ್ದಾನೆಂದು ನಾನು ನಿಮಗೆ ತೋರಿಸುತ್ತೇನೆ ನೋಡಿ ಅಂತ ಹೇಳಿ ನನ್ನನ್ನು ಸಭಿಕರಿಗೆ ಬೆನ್ನುಮಾಡಿ ನಿಲ್ಲುವಂತೆ ಹೇಳಿದ. ನಾನೂ ಒಪ್ಪಿ ನಿಂತೆ. ಎರಡೂ ಕಣ್ಣನ್ನು ಕಟ್ಟಿದ. ಸಭಿಕರದ್ದು ಯಾರದ್ದೋ ರೂಮ್ ಕೀಲಿ ತಂದು ನನ್ನ ಮುಖಕ್ಕೆ ಹಿಡಿದ. ಮತ್ತೆ ಸಭಿಕರನ್ನು ಉದ್ದೇಶಿಸಿ ಇವನಿಗೆ ಕಣ್ಣು ಕಟ್ಟಿ ಈ ಕೀಲಿ ಸಭಿಕರಲ್ಲಿ ಎಲ್ಲಿರುತ್ತೋ ಅಲ್ಲಿಂದ ತರುವಂತೆ ಹೇಳ್ತೇನೆ,ನೋಡಿ ಹೇಗೆ ತರ್ತಾನೆ ಅಂದ. ನನಗೋ ಆಶ್ಚರ್ಯ. ಬೆನ್ನು ತಿರುಗಿಸಿಯೇ ನಿಂತಿದ್ದೇನೆ. ಅವ ಕೆಳಗೆ ಹೋಗಿ ಕತ್ತಲಲ್ಲಿ ಎಲ್ಲೋ ಕೀಲಿ ಸಭಿಕರ ಮಧ್ಯೆ ಇಟ್ಟು ಬಂದ. ನನಗೆ 1,2,3….10 ಹೊರಡು ಕೀಲಿ ತೆಗೆದುಕೊಂಡು ಬಾ ಅಂದ…ನಂಗೆ ಎಲ್ಲ ಜ್ಞಾಪಕ ಇದೆ.ಯಾವುದೇ ಅತಿಮಾನುಷ ಶಕ್ತಿ ನನ್ನಲ್ಲಿ ಪ್ರವೇಶಿಸಿಲ್ಲ. ಅವನು ಎರಡು ಮೂರು ಬಾರಿ ನನ್ನನ್ನು ತಿರುಗಿಸಿ ಹೊರಡು ಎಂದ. ಕಣ್ಣಿಗೆ ಬಟ್ಟೆ ಕಟ್ಟಿದ್ದಾನೆ,ನನಗೆ ಎಲ್ಲವೂ ಸ್ಪಷ್ಟ ಕಾಣಿಸುತ್ತಿದೆ. ಯಾರನ್ನೂ ತಾಕದೆ, ಕತ್ತಲೆ ಇದ್ದರೂ ಕೂತಿರುವವರ ಮಧ್ಯೆ ಇರುವ ಜಾಗದಲ್ಲಿ ಅರಾಂ ಆಗಿ ನಡೆದು ಹೋಗುತ್ತಿದ್ದೇನೆ…ಈಗ ನನಗೆ ಒಂದು ಸುಂದರವಾದ ಸುವಾಸನೆ ಬರ್ತಿದೆ. ಆ ಸುವಾಸನೆ ಅರಸಿ ನಾನು ಹೋಗ್ತಿದ್ದೇನೆ. ಸುವಾಸನೆಯ ಕಂಪು ಹೆಚ್ಚಾಗಿ ಇರುವಕಡೆ ಬಂದು ನಿಲ್ಲುತ್ತಿದ್ದೇನೆ. ಕಂಪು ಒಂದು ರೀತಿ ಒಂದೇ ಕಡೆಯಿಂದ ಬರ್ತಿದೆ ಅನ್ನಿಸ್ತಿದೆ. ಕೀಲಿ ಇರುವ ವ್ಯಕ್ತಿಯ ಸರಿಯಾದ ಜೇಬಿಗೆ ಕೈ ಹಾಕಿ ಕೀಲಿ ತೆಗೆದುಕೊಂಡು ಬರ್ತಿದ್ದೇನೆ… ಎಲ್ಲರೂ ಚಪ್ಪಾಳೆ ಹೊಡೀತಿದ್ದಾರೆ. ವೇದಿಕೆಗೆ ಬಂದವನ ಕಣ್ಣು ಬಿಚ್ಚಿ ಕೇಳುತ್ತಾನೆ…ಇವರೆಲ್ಲ ಒಪ್ಪಿದ್ದಾರೆ,ನೀನು ಸಮ್ಮೋಹನಗೆ ಒಳಗಾಗಿದ್ದಿಯ ಅಂತ,ನೀನೂ ಒಪ್ಪುತ್ತಿಯಾ ಅಂತ. ಏನೇಳಲಿ?!

    ಅಂದು ನನಗೆ ಆಶ್ಚರ್ಯ ಆದದ್ದಂತೂ ನಿಜ. ಅವನೇಳಿದ ಹಾಗೆ ನನ್ನನ್ನು ತಾಯಿಯ ಗರ್ಭಕ್ಕೆ,ಹಿಂದಿನ ಜನ್ಮಕ್ಕೆ ಕಳುಹಿಸಲು ಅವನಿಗೆ ಆಗದಿದ್ದರೂ ನನ್ನಿಂದ ಮುಚ್ಚಿದ ಕಣ್ಣುಗಳಿಂದ,ಕತ್ತಲೆಯಲ್ಲಿ ಕೀಲಿ ತರಿಸಿದ್ದಂತೂ ಸತ್ಯ. ಎಂತಹಾ ಮಹಾನ್ ವಿದ್ಯೆ ಅಲ್ಲವಾ ಅನ್ನಿಸಿತು. ಯಾಕೆ ನಮಗೆಲ್ಲ ಇಂತಹ ವಿದ್ಯೆಗಳನ್ನು ಕಲಿಸದೆ ಅವರು ದಾಳಿ ಮಾಡಿದರು,ಇವರು ಇದನ್ನು ಒಡೆದುಹಾಕಿದರು,ಇವರು ಇವರನ್ನು ಮುಟ್ಟಿಸಿಕೊಳ್ಳಲಿಲ್ಲ ಎನ್ನುವಂತಹ ಕೆಲಸಕ್ಕೆ ಬಾರದ ವಿದ್ಯೆ ಕಲಿಸುತ್ತಿದ್ದಾರೆ ಅಂತ ಅನ್ನಿಸಿತು. ಅವತ್ತು ಎಲ್ಲಾ ಆದಾಗ ಆ ಕೇರಳಿಗ ಹೇಳಿದ… You are very strong ಅಂತ. ಅದು ನನ್ನಲ್ಲಿ ಎಂತಹ ಆತ್ಮವಿಶ್ವಾಸಕ್ಕೆ ಕಾರಣ ಆಯ್ತು ಎಂದ್ರೆ ಅಂತಹ ಖುಷಿ ನಾನು ಡಿಗ್ರಿಯನ್ನು Distinction ನಲ್ಲಿ ಪಾಸಾದಾಗಲೂ ಪಡಲಿಲ್ಲ!

    ನಾನು ಚಿಕ್ಕವನಿದ್ದಾಗ ಗೋಲಿ ಆಟದಲ್ಲಿ ಮುಂದು. ಊರವರ ಗೋಲಿಗಳನ್ನು ಗೆದ್ದು ನಿಕ್ಕರ್ರಿನ ಜೇಬಿಗೆ ಹಾಕುತ್ತಿದ್ದರೆ, ಜೇಬುಗಳು ಹರಿದು ಹೋಗುತ್ತಿದ್ದವು. ಸುಮಾರು ಅಡಿಗಳ ದೂರದಲ್ಲಿ ಇರುತ್ತಿದ್ದ ಒಂದು ಗೋಲಿಯನ್ನು, ಒಂದು ರೀತಿಯ ನೋಟದಲ್ಲಿ ನೋಡಿ,ಕೈ ಹಸನಾಗಿಸಿ,ಬೆರಳುಗಳಿಂದ ಗೋಲಿಯನ್ನು ತಿರುಗಿಸುತ್ತಾ,ಮಧ್ಯದ ಬೆರಳನ್ನು ನೆಟ್ಟಗೆ ಮಾಡಿ,ತುದಿಯಲ್ಲಿ ಗೋಲಿ ಇಟ್ಟು, ರಭಸವಾಗಿ ತಳ್ಳಿದ ಗೋಲಿ,ಸರಿಯಾಗಿ ಗುರಿ ಇಟ್ಟ ಗೋಲಿಗೆ ತಾಕುತ್ತಿದ್ದನ್ನು ಊಹಿಸಿಕೊಂಡೇ ಎಷ್ಟೋ ಬಾರಿ ಆಶ್ಚರ್ಯ ಹೊಂದಿದ್ದೇನೆ. ಆ ಕ್ಷಣ ಕಾಲ ಕೇಂದ್ರಿತವಾಗುವ ನಮ್ಮ ನೋಟ,ನಮ್ಮಲ್ಲಿರುವ ಗೋಲಿಗೂ, ಅಡಿಗಳ ಅಂತರದಲ್ಲಿರುವ ಗೋಲಿಗೂ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಾದರೆ, ನಮ್ಮ ಮನಸ್ಸಿಗೂ ಒಂದು ಶಕ್ತಿ ಅಂತ ಇರುವುದು ಸಾಧ್ಯವಲ್ಲವೇ? ಇದೇ ಬಿಲ್ವಿದ್ದೆಯಲ್ಲೂ ಉಪಯೋಗವಾಗಿತ್ತಾ?? ಗೊತ್ತಿಲ್ಲ. ಇಂತಹ ಮಹಾನ್ ವಿದ್ಯೆಗಳ ಅರಿವನ್ನು ಹೊಂದಿದ್ದ ಒಂದು ಪೀಳಿಗೆ ಇಲ್ಲಿ ಸಾವಿರಾರು ವರ್ಷಗಳ ಹಿಂದೆ ಇತ್ತು ಅಂತ ನೆನೆಸಿ ಕೊಂಡರೆ ಯಾಕೋ ಡಾರ್ವಿನ್ ನ ವಿಕಾಸ ವಾದದ ಬಗ್ಗೆ ಒಂದು ಕಡೆ ಅನುಮಾನ ಬರುತ್ತದೆ. ಯಾಕೆಂದರೆ ಅವನ ಪ್ರಕಾರ ಮನಸ್ಸು,ಬುದ್ಧಿ ಶಕ್ತಿ ಈಗಿನ ಪೀಳಿಗೆಯಲ್ಲಿ ಅವರಿಗಿಂತ ಹಲವು ಪಟ್ಟು ಹೆಚ್ಚಿರಬೇಕಿತ್ತು. ಆದರೆ ಹಾಗಾಗಿಲ್ಲ.

    ಆತ್ಮಹತ್ಯೆ ಎನ್ನುವುದು ನಮ್ಮ ಮಹಾಕಾವ್ಯಗಳಲ್ಲಾಗಲಿ,ಪುರಾಣ ಗಳಲ್ಲಾಗಲೀ ಎಲ್ಲಿಯೂ ಇಲ್ಲ. ಆದರೆ ಈಗ ಪ್ರತಿ ವಯಸ್ಕರಲ್ಲೂ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ದುರ್ಬಲ ಮನಸ್ಸಲ್ಲವೇ? ಅಥವಾ ವಿರುದ್ಧವಾಗಿ ಆಂಗ್ಲರು ಹಾಕಿಕೊಟ್ಟ ವಿದ್ಯೆಯ ಮಾರ್ಗದಲ್ಲಿ ನಡೆದು, ತಲೆತಲಾಂತರದಿಂದ ನಮ್ಮಲ್ಲಿ ಅಂತರ್ಗತವಾಗಿ ಬಂದಂತಹ ಶಕ್ತಿಯನ್ನು ಉಪಯೋಗಿಸಿಕೊಳ್ಳದೇ ನಶಿಸಿ ಹೋಯ್ತಾ? ಗೊತ್ತಿಲ್ಲ….ಅಂತೂ ಎಲ್ಲೋ ಎಡವಟ್ಟು ಆಗಿದೆ. ಯಾರನ್ನೋ,ಯಾವುದನ್ನೋ ದೂಷಿಸಲು,ದ್ವೇಷಿಸಲು ಹೋಗಿ,ಮೂರ್ಖರಾದೆವಾ?… ಹಿತ್ತಲ ಗಿಡ ಮದ್ದಲ್ಲ ಎನ್ನುವುದನ್ನು ಅಕ್ಷರಶಃ ಪಾಲಿಸಿಬಿಟ್ಟೆವಾ?

    64 ವಿದ್ಯೆಗಳು

    1.ವೇದ 2. ವೇದಾಂಗ 3.ಇತಿಹಾಸ 4.ಆಗಮ 5.ನ್ಯಾಯ 6.ಕಾವ್ಯ 7.ಅಲಂಕಾರ 8.ನಾಟಕ 9. ಗಾನ 10. ಕವಿತ್ವ 11.ಕಾಮಶಾಸ್ತ್ರ 12.ದೂತನೈಪುಣ್ಯ 13.ದೇಶಭಾಷಾಜ್ಞಾನ 14.ಲಿಪಿಕರ್ಮ 15..ವಾಚನ 16.ಸಮಸ್ತಾವಧಾನ 17.ಸ್ವರಪರೀಕ್ಷಾ 18.ಶಾಸ್ತ್ರಪರೀಕ್ಷಾ 19.ಶಕುನಪರೀಕ್ಷಾ 20.ಸಾಮುದ್ರಿಕಪರೀಕ್ಷಾ 21.ರತ್ನಪರೀಕ್ಷಾ 22. ಸ್ವರ್ಣಪರೀಕ್ಷಾ 23. ಗಜಲಕ್ಷಣ 24.ಅಶ್ವಲಕ್ಷಣ 25. ಮಲ್ಲವಿದ್ಯಾ 26. ಪಾಕಕರ್ಮ 27. ದೋಹಳ 28.ಗಂಧವಾದ 29. ಧಾತುವಾದ 30.ಖನಿವಾದ 31. ರಸವಾದ 32.ಅಗ್ನಿಸ್ತಂಭ 33. ಜಲಸ್ತಂಭ 34. ವಾಯುಸ್ತಂಭ 35. ಖಡ್ಗಸ್ತಂಭ 36.ವಶ್ಯಾ 37. ಆಕರ್ಷಣ 38. ಮೋಹನ 39.ವಿದ್ವೇಷಣ 40.ಉಚ್ಛಾಟನ 41. ಮಾರಣ 42. ಕಾಲವಂಚನ 43. ವಾಣಿಜ್ಯ 44.ಪಶುಪಾಲನ 45. ಕೃಷಿ 46.ಸಮ ಶರ್ಮ 47. ಲಾವುಕಯುದ್ಧ 48. ಮೃಗಯಾ 49.ಪುತಿಕೌಶಲ 50. ದೃಶ್ಯಶರಣ 51. ದ್ಯೂತಕರಣಿ 52.ಚಿತ್ರಲೋಹ 53. ಚೌರ್ಯ 54. ಔಷಧಸಿದ್ಧಿ55. ಮಂತ್ರಸಿದ್ಧಿ56. ಸ್ವರವಂಚನಾ 57.ದೃಷ್ಟಿವಂಚನಾ 58. ಅಂಜನ 59. ಜಲಪ್ಲವನ 60. ವಾಕ್ ಸಿದ್ಧಿ 61.ಘಟಿಕಾಸಿದ್ಧಿ62.ಪಾದುಕಾಸಿದ್ಧಿ 63. ಇಂದ್ರಜಾಲ 64. ಮಹೇಂದ್ರಜಾಲ

    Photo by Pablo Heimplatz on Unsplash

    ಹಳೆ ಹುಲಿಗಳು ಮತ್ತು ಹೊಸಬರು: ಜರ್ಜರಿತವಾಗುತ್ತಿರುವ ಕಾಂಗ್ರೆಸ್

    ಕವಿ ಗೋಪಾಲಕೃಷ್ಣ ಅಡಿಗರ ಕವನದ ಸಾಲೊಂದಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬುದು ಅದು. ಇದು ರಾಜಕೀಯಕ್ಕೂ ಅನ್ವಯವಾಗುತ್ತದೆ. ಅನುಭವ ಹೊಂದಿದ ನಾಯಕರು ಮತ್ತು ಹೊಸ ಚಿಂತನೆ ಹೊಂದಿರುವ ಯುವ ಪೀಳಿಗೆ ಎರಡೂ ಕಲೆತರೆ ಮಾತ್ರ ರಾಜಕೀಯ ಪಕ್ಷವೊಂದು ಉನ್ನತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಆದರೆ ಶತಮಾನಗಳ ಇತಿಹಾಸದ ಹೆಗ್ಗಳಿಕೆ ಹೊಂದಿದ್ದೇವೆ ಎಂದು ಹೆಗಲು ತಟ್ಟಿಕೊಳ್ಳುತ್ತಲೇ ಸಾಗುತ್ತಿರುವ ಕಾಂಗ್ರೆಸ್ ಗೆ ಇದು ಪಥ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಅಲ್ಲಿರುವುದು ಎರಡೇ ವಿಭಾಗ. ಒಂದು ಗಾಂಧಿ ಕುಟುಂಬ, ಇನ್ನೊಂದು ಹಿರಿಯ ನಾಗರಿಕರ ವಿಭಾಗ !

    ಸೋನಿಯಾ ಗಾಂಧೀ ಅವರು ಪಕ್ಷದ ಅಧ್ಯಕ್ಷೆಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ನಾಯಕರನ್ನು ಗಮನಿಸಿ. ಮೋತಿಲಾಲ್ ವೋರಾ (91) ರಾಹುಲ್ ಗಾಂಧೀ (49) ಮನಮೋಹನ ಸಿಂಗ್(86) ಎ ಕೆ ಅಂಟೋನಿ (78) ಆನಂದ್ ಶರ್ಮಾ (69) ಕಪಿಲ್ ಸಿಬಲ್ (71) ಭೂಪೇಂದ್ರ ಹೂಡಾ (71) ಮೊಹಿಸಿನ ಕಿದ್ವಾಯಿ (87) ಜಗದೀಶ್ ಟೈಟ್ಲರ್ (75) ಸಲ್ಮಾನ್ ಖುರ್ಷಿದ್ (77) ಗುಲಾಮ್ ನಭೀ ಆಜಾದ್ (70) ಕೆ. ಸಿ ವೇಣುಗೋಪಾಲ್ (56) ರಾಹುಲ್ ಗಾಂಧೀ ಮತ್ತು ವೇಣುಗೋಪಾಲ್ ಹೊರತು ಪಡಿಸಿದರೆ ಉಳಿದವರೆಲ್ಲರೂ ಹಿರಿಯ ನಾಗರಿಕರು.ಈಗಿನ ಕಾಂಗ್ರೆಸ್ ಪಕ್ಷದ ನಾಯಕರ ವಯಸ್ಸು ಸರಾಸರಿ 70.7

    ಇದರಲ್ಲಿ ಅನೇಕರಿಗೆ ಅನುಭವದಿಂದ ರಾಜಕೀಯ ಚಾಣಕ್ಯತನ ರೂಢಿಸಿಕೊಂಡಿದ್ದರಿಂದ ಸಿಕ್ಕ ಸ್ಥಾನ ಎನ್ನುವ ಬದಲು ಗಾಂಧಿ ಕುಟುಂಬದ ಆಪ್ತ ವರ್ಗಕ್ಕೆ ಸೇರಿದವರು ಎಂಬ ಮಾನದಂಡ ಮಾತ್ರ ಅನ್ವಯವಾಗುತ್ತದೆ. ಇದರಿಂದ ಬೆರಳೆಣಿಕೆಯಷ್ಟು ಯುವ ನಾಯಕರು ಹುಟ್ಟಿಕೊಂಡರೂ, ಹಳೆ ಹುಲಿಗಳು ಮತ್ತು ಹೊಸಬರ ನಡುವಿನ ತಿಕ್ಕಾಟದಿಂದ ಕಾಂಗ್ರೆಸ್ ಜರ್ಜರಿತವಾಗಿದೆ. ಅತ್ತ ಬಿಜೆಪಿ ಹೊಸ ನಾಯಕರನ್ನು ಹುಟ್ಟು ಹಾಕುತ್ತಲೇ ಇದೆ.

    ಹೀಗಾಗಿ ದಶಕದ ಹಿಂದೆಯಷ್ಟು 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಈಗಿನ ಪರಿಸ್ಥಿತಿ ಇರುವ ರಾಜ್ಯಗಳನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ.

    ರಾಜಸ್ತಾನದ ಬೆಳವಣಿಗೆ

    ಸಂಭ್ರಮದ ಕ್ಷಣಗಳ ಸಂಗ್ರಹ ಚಿತ್ರ

    ರಾಜಸ್ತಾನವನ್ನೇ ಬೆಳವಣಿಗೆಯನ್ನೇ ನೋಡಿ ಯುವ ನಾಯಕ ಸಚಿನ್ ಪೈಲೆಟ್ ಸಿಡಿದೆದಿದ್ದಾರೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹೊರಗೆ ತಳ್ಳಲಾಗಿದೆ.ಇವರಿಬ್ಬರೂ ಹೆಚ್ಚಿನ ಅಧಿಕಾರ ಮತ್ತು ಅಧಿಕ ಪ್ರಾತಿನಿಧಿತ್ವ ಕೇಳಿದ್ದು, ಅದಕ್ಕೆ ಹಳೆ ತಲೆಗಳ ಗಡಣ ನಿರಾಕರಿಸಿದ್ದೇ ಕಾರಣ. ಸಚಿನ್ ಪೈಲಟ್ ರಾಜಸ್ತಾನ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕಾಗಿ ಕಳೆದ ಚುನಾವಣೆಯಲ್ಲಿ ಹಗಲಿರುಳು ದುಡಿದಿದ್ದರು. ಆದರೆ ಮುಖ್ಯಮಂತ್ರಿ ಪಟ್ಟ ಕೈತಪ್ಪಿ ಅಶೋಕ್ ಗೆಹ್ಲೋಟ್ ಕೈಸೇರಿತು.

    ಇದು ಇಬ್ಬರ ಕಥೆ ಮಾತ್ರವಲ್ಲ. ಕಾಂಗ್ರೆಸ್ ನ ಹಳೆ ಹುಲಿಗಳು ಸಾಕಷ್ಟು ಯುವ ನಾಯಕರನ್ನು ವ್ಯವಸ್ಥಿತವಾಗಿ ಬದಿಗೆ ತುಳಿಯುತ್ತಲೇ ಬಂದಿದೆ. ಮಿಲಿಂದ್ ದಿಯೋರಾ, ಜತಿನ್ ಪ್ರಸಾದ್ ಮೊದಲಾದವರು ರಾಜಕೀಯ ಭವಿಷ್ಯವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಸಿ ಎಂಬ ಹಿರಿಯ ನಾಯಕ ಶಶಿ ಥರೂರ್ ಮಾತಿಗೆ ಮನ್ನಣೆ ಸಿಗಲಿಲ್ಲ.

    ಕನಿಷ್ಠ ನನಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿ ಎಂಬ ಸಿಂಧಿಯಾ ಮಾತಿಗೆ ಮಣೆ ಹಾಕದ ಕಾಂಗ್ರೆಸ್ ನಾಯಕರು, ಪೈಲಟ್, ಸಿಂಧಿಯಾಗೆ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ, ಯುವ ನಾಯಕರಾಗಿದ್ದರು ಎಂಬುದು ಸುಳ್ಳಲ್ಲ.ಈ ಶಕ್ತಿಗಳಿಗೆ ಬ್ಯಾಕ್ ರೂಮ್ ಮ್ಯಾನೇಜರ್ಸ್ ಎಂದು ಕರೆಯುತ್ತಾರೆ. ಅವರು ಎದುರಿಗೆ ಕಾಣುವುದೇ ಇಲ್ಲ. ಬದಲಾಗಿ ಹೈಕಮಾಂಡ್ ಕಿವಿ ಚುಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

    ಕರ್ನಾಟಕದಲ್ಲಿ

    ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಹೈಕಮಾಂಡ್ ನಿರ್ಧಾರವಾಗಿತ್ತು ಎಂಬುದರಿಂದ ಆರಂಭಿಸಿದರೂ, ಒಂದಿಷ್ಟು ಹಿಂತಿರುಗಿ ನೋಡಿದರೆ, ರೆಸಾರ್ಟ್ ರಾಜಕೀಯದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಡಿ. ಕೆ. ಶಿವಕುಮಾರ್ ಅವರು ಸಿದ್ಧರಾಮಯ್ಯ ಸರಕಾರದಲ್ಲಿ ಸಚಿವ ಸ್ಥಾನ ಪಡೆಯಲು ಹರ ಸಾಹಸ ಪಡೆಯಬೇಕಾಯಿತು. ಹಾಗೆಂದು ಭ್ರಷ್ಟಾಚಾರ ಆರೋಪ ಹೊತ್ತ ಇತರರೂ ಸಚಿವರಾಗಿರಲಿಲ್ಲವೇ ?

    ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಅಷ್ಟೇ. ಖರ್ಗೆ, ಮುನಿಯಪ್ಪ, ಶ್ಯಾಮನೂರು ಶಿವಶಂಕರಪ್ಪ ಮೊದಲಾದವರೇ ಮುಂಚೂಣಿಯಲ್ಲಿ ಟವಲ್ ಹಾಸಿ ಕುಳಿತಿದ್ದರು. ಕೊನೆಗೆ ಅಳೆದೂ ಸುರಿದೂ ಡಿಕೆಶಿಗೆ ಅಧ್ಯಕ್ಷ ಸ್ಥಾನವೇನೋ ಸಿಕ್ಕಿತು.ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಹಿರಿಯರು ಬಿಡುವರೆ ಎಂಬುದು ಈಗಿನ ಪ್ರಶ್ನೆ.

    ಹೀಗೆ ಕಾಂಗ್ರೆಸ್ ತನ್ನ ಹಳೆಯ ಚಿಂತನೆಗಳಿಗೆ ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಹೊಸ ರೂಪ ನೀಡಿ, ಹೊಸ ಯುವ ನಾಯಕರಿಗೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಬರಗಾಲವನ್ನೇ ಎದುರಿಸುವುದರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ ಹೊಸ ಮುಖಗಳ ಪರಿಚಯವಾಗದಿದ್ದರೆ, ಹಳೆ ಮುಖಗಳನ್ನು ನೋಡಿ ನೋಡಿ ರೋಸಿ ಹೋದ ಜನರು ಇನ್ನಷ್ಟು ದೊಡ್ಡ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ.

    error: Content is protected !!