32.7 C
Karnataka
Sunday, April 20, 2025
    Home Blog Page 169

    ಬೆಳ್ಳಿ, ಚಿನ್ನ ಗಳು ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದು ಎಲ್ಲರ ಗಮನಸೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳಲ್ಲಿಯೂ ಸಹ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವುದು ಎಂದು ಬಿಂಬಿಸಲಾಗುತ್ತಿದ್ದು ಹೂಡಿಕೆದಾರರ ಆಸಕ್ತಿಯನ್ನು ಕೆರಳಿಸುತ್ತಿದೆ. ಇದು ಷೇರುಪೇಟೆಯಲ್ಲಿ ಚಿನ್ನಾಭರಣ ವಲಯದ ಕಂಪನಿಗಳು ಹೆಚ್ಚು ಆಕರ್ಷಣೀಯವೆಂದು ಸಹ ಬಿಂಬಿಸಲಾಗುತ್ತಿದೆ. ಈ ಕಾರಣದಿಂದಾಗಿ ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳೂ ಸಹ ಹೆಚ್ಚು ಲಾಭದಾಯಕವೆಂಬುದು ಕೆಲವರ ಕಲ್ಪನೆ.

    ಈಗಿನ ಚಿನ್ನದ ಬೆಲೆ ಏರಿಕೆಯು ಅದರ ಮೇಲೆ ಸಾಲ ನೀಡುವ ಕಂಪನಿಗಳಿಗೆ ಅನುಕೂಲಕರವೇನಲ್ಲ. ಈ ಕಂಪನಿಗಳು ನೀಡುವ ಸಾಲ ಹೆಚ್ಚು ಒತ್ತಡಕ್ಕೊಳಗಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆ ಗರಿಷ್ಠದಲ್ಲಿರುವ ಈ ಸಂದರ್ಭದಲ್ಲಿ ನೀಡಿದ ಸಾಲ ವಸೂಲಾತಿಯು, ಚಿನ್ನದ ಬೆಲೆ ಕುಸಿತಕ್ಕೊಳಗಾದಾಗ ಸುಲಭವಲ್ಲ. ಚಿನ್ನವಾಗಲಿ, ಬೆಳ್ಳಿಯಾಗಲಿ, ತಮ್ಮ ಬೆಲೆಗಳನ್ನು ಸ್ಥಿರವಾಗಿರಿಸಿಕೊಳ್ಳಲು ಸಾಧ್ಯವಿಲ್ಲ.ಕಮಾಡಿಟೀಸ್ ಮಾರ್ಕೆಟ್‌ ಚಟುವಟಿಕೆ ಆರಂಭವಾದ ಮೇಲೆ ಇವು ಸಹ ಸರಕು ಪೇಟೆಯ ವಹಿವಾಟಿನ ಸರಕಾಗಿದೆ. ಅಂದರೆ ಇಲ್ಲಿಯೂ ಏರಿಳಿತಗಳ ಒತ್ತಡವಿರುತ್ತದೆ. ಇದಕ್ಕೆ ಪೂರಕವಾಗಿ ಹಿಂದಿನ ಘಟನೆಯನ್ನು ತಿಳಿಯಿರಿ.

    2008 ರ ಡಿಸೆಂಬರ್‌ ತಿಂಗಳಲ್ಲಿ ಬೆಳ್ಳಿಯ ಬೆಲೆ ರೂ.18,500 ರಲ್ಲಿತ್ತು. ಅಲ್ಲಿಂದ ಕ್ರಮೇಣವಾಗಿ ಏರಿಕೆಯ ಪಥದಲ್ಲಿ ಚಲಿಸುತ್ತಾ 2011 ರ ಏಪ್ರಿಲ್‌ ನಲ್ಲಿ ರೂ.75 ಸಾವಿರ ರೂಪಾಯಿಗಳನ್ನು ತಲುಪಿತು. ಆ ಸಂದರ್ಭದ ವಿಶ್ಲೇಷಣೆಗಳು ಬೆಳ್ಳಿಯ ದರ ರೂ.1,00,000 ಕ್ಕೆ ತಲುಪುವುದೆಂಬ ಮುನ್ನುಡಿದವು. ಅದಕ್ಕೆ ಪೂರಕವಾಗಿ, ರೂ.75 ಸಾವಿರಕ್ಕೂ ಬೆಳ್ಳಿ ಲಭ್ಯವಿಲ್ಲ ಎಂದು ಕಂದು ಬಣ್ಣದ ದಿನಪತ್ರಿಕೆಗಳು ಸುದ್ಧಿ ಪ್ರಕಟಿಸಿದ್ದವು. ಇದು ಇನ್ನಷ್ಟು ಬೇಡಿಕೆ ಹೆಚ್ಚಿಸಿದವು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಆ ಸಂದರ್ಭವು ಅಕ್ಷಯ ತೃತೀಯ ಆಚರಣೆಯ ಸಮೀಪದ ದಿನವಾಗಿತ್ತು. ವಿಸ್ಮಯವೆಂದರೆ ಮೇ6 ರಂದು ಅಕ್ಷಯ ತೃತೀಯದ ದಿನ ಬೆಳ್ಳಿಯ ಬೆಲೆ ರೂ.53 ಸಾವಿರ ರೂಪಾಯಿಗಳಿಗೆ ಕುಸಿದಿತ್ತು. ನಂತರದ ವರ್ಷಗಳಲ್ಲಿ ಬೆಳ್ಳಿಯ ಬೆಲೆ ರೂ.30 ಸಾವಿರದವರೆಗೂ ಜಾರಿ ಪುನ: ಚೇತರಿಕೆ ಕಂಡಿತು. ಬೆಳ್ಳಿ, ಚಿನ್ನ ಗಳು ಆಂತರಿಕವಾಗಿ ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ.

    ಸುಮಾರು 11 ವರ್ಷಗಳಿಂದಲೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅಸಲು ಹಣವೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದಾಗ ಖರೀದಿಸಿದಲ್ಲಿ ಹೂಡಿಕೆಯ ಹಣ ಸುಭದ್ರವೆನಿಸದಲ್ಲವೇ?

    ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅಂದರೆ ಲೀಸ್ಟೆಡ್‌ ಕಂಪನಿಳಿಗೆ ಸ್ಪರ್ಧಿಯಾಗಿವೆ. ಚಿನ್ನದ ಬೆಲೆ ಇಷ್ಟು ಹೆಚ್ಚಿದ್ದರೂ ಸಹ, ಹಿಂದೆ ತೆಗೆದುಕೊಂಡ ಸಾಲ ಮರುಪಾವತಿಮಾಡಲಾಗದೆ, ವಸೂಲಾಗದ ಸಾಲ ಪ್ರಮಾಣ ಹೆಚ್ಚಾಗಿದ್ದು ಇತ್ತೀಚಿನ ದಿನಪತ್ರಿಕೆಗಳಲ್ಲಿ ಕೆಲವು ಕಂಪನಿಗಳು ಚಿನ್ನದ ಹರಾಜಿನ ಪ್ರಕಟಣೆಗಳನ್ನೂ ಸಹ ನೀಡಿವೆ. ಹಾಗಾಗಿ, ಪೇಟೆಯಲ್ಲಿ ಷೇರಿನಬೆಲೆ ಹೆಚ್ಚಾದಾಗ ಮಾರಾಟ ಮಾಡಿ ಹಣ ಶೇಖರಿಸಿಕೊಳ್ಳುವುದೇ ಒಳಿತು. ಇಂದಿನ ಅಸಹಜ ವಾತಾವರಣದಲ್ಲಿ ಶರ ವೇಗದಲ್ಲಿ ಏರಿಕೆಯಾಗಿರುವುದು ಸ್ಥಿರತೆ ಕಾಣುವುದು ಅತಿ ವಿರಳವೆನಿಸುತ್ತದೆ.

    ನೆನಪಿರಲಿ : ಕಳ್ಳ ಮತ್ತು ಲಾಭ ಸಿಕ್ಕಾಗ ಹಿಡಿಬೇಕು, ಬಿಟ್ಟರೆ ಸಿಗದು.

    ಪ್ರಧಾನಿ ನಿಮು ಭೇಟಿಯಿಂದ ಕಂಗಾಲಾಯಿತೇ ಚೀನಾ?

    ಚಿರಾಗ್ ಆರ್.ಎಚ್.
    ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ನ ನಿಮು ಸೇನಾ ನೆಲೆಗೆ ಭೇಟಿ ಯೋಧರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಪ್ರಧಾನಿ ಭೇಟಿಯನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ, ಚೀನಾ ಆಕ್ಷೇಪಿಸಿದೆ. ಈ ಅನಿರೀಕ್ಷಿತ ಭೇಟಿ ನೆರೆರಾಷ್ಟ್ರಕ್ಕೆ ನೀಡಿರುವ ಸಂದೇಶ ಸ್ಪಷ್ಟ- ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ!

    ತಾಂತ್ರಿಕವಾಗಿ ನಿಮು ಭಾರತದ ವ್ಯೂಹಾತ್ಮಕ ಸೇನಾ ನೆಲೆ. ಪಾಕಿಸ್ತಾನ, ಚೀನಾ ಎರಡೂ ಏಕಕಾಲದಲ್ಲಿ ನಮ್ಮ ಮೇಲೆ ಎರಗಿದರೂ ನಿಮು ನೆಲೆಯಿಂದ ದಾಳಿ ನಡೆಸಬಹುದು. ಸಮುದ್ರ ಮಟ್ಟದಿಂದ ೧೧,೦೦೦ ಅಡಿ ಎತ್ತರದಲ್ಲಿದ್ದರೂ ಏಕಕಾಲದಲ್ಲಿ ನಾಲ್ಕು ಯುದ್ಧ ವಿಮಾನಗಳನ್ನು ಇಲ್ಲಿ ನಿಲುಗಡೆ ಮಾಡಬಹುದು. ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಹೀಗಾಗಿ ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೂ ಮೋದಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

    ಆಗಾಗ ಕಾಲು ಕೆರೆದು ಜಗಳ ಮಾಡುತ್ತ, ತಂಟೆ ಮಾಡುತ್ತ, ಅವಕಾಶ ಸಿಕ್ಕರೆ ಗಡಿ ಆಕ್ರಮಿಸಿಕೊಂಡೇಬಿಡುವ ಮನೋಭಾವವನ್ನು ಬಹಳ ವರ್ಷಗಳಿಂದಲೂ ಚೀನಾ ಪ್ರದರ್ಶಸುತ್ತ ಬಂದಿದೆ. ಆದರೆ ಚೀನಾ ಈ ಬಾರಿ ಎಡವಿರುವುದು ಕೇಂದ್ರ ಸರಕಾರದ ಇಚ್ಛಾಶಕ್ತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ. ಈಗಿರುವ ಸರಕಾರ ಯಾವುದಕ್ಕೂ ಮಣಿಯುವುದಿಲ್ಲ, ಇನ್ನು ಇಲ್ಲಿನ ಪ್ರತಿಪಕ್ಷಗಳಂತೂ ಸೋತು ಸೊರಗಿವೆ ಎಂಬುದನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅರಿತುಕೊಳ್ಳಲೇ ಇಲ್ಲ. ಹೀಗಾಗಿ ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಯೋಧರನ್ನು ಕೆಣಕಿ ಪೆಟ್ಟು ತಿಂದಿದೆ, ಒಳಗೊಳಗೇ ಭುಸುಗುಡುತ್ತಿದೆ.

    ನಿಮು ಸೇನಾನೆಲೆಯಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಪ್ರಧಾನಿಯವರು ಚೀನಾದ ಹೆಸರು ಎತ್ತಲಿಲ್ಲ, ಆದರೆ ವಿಸ್ತರಣಾವಾದದ ಕಾಲ ಮುಗಿಯಿತು ಎನ್ನುವ ಮೂಲಕ ಆ ದೇಶಕ್ಕೇ ಗುರಿ ಇಟ್ಟು ಬಾಣ ಬಿಟ್ಟಿದ್ದಾರೆ. ಅರುಣಾಚಲ, ಜಮ್ಮು-ಕಾಶ್ಮೀರ, ಅಕ್ಸಾಯ್ ಚಿನ್‌ಗಳ ಪರೋಕ್ಷ ಪ್ರಸ್ತಾವ ಅಲ್ಲಿದ್ದು, ಇನ್ನು ನಮ್ಮ ನೆಲಕ್ಕೆ ಕಾಲಿಟ್ಟರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಶ್ರೀಕೃಷ್ಣನ ಸುದರ್ಶನ ಚಕ್ರದ ಉದಾಹರಣೆ ನೀಡುವ ಮೂಲಕ ಗಲ್ವಾನ್‌ನಲ್ಲಿ ಭಾರತೀಯ ಯೋಧರಿಂದ ಚೀನಾ ಸೇನೆಯಲ್ಲಿ ಆಗಿರುವ ಸಾವು-ನೋವನ್ನು ನೆನಪಿಸಿದ್ದಾರೆ, ಜತೆಗೆ ನಮ್ಮ ಸೇನಾ ಸಾಮರ್ಥ್ಯವನ್ನು ನೆನಪು ಮಾಡಿಕೊಟ್ಟಿದ್ದಾರೆ.

    ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. 1962ರ ಯುದ್ಧದಲ್ಲಿ ಭಾರತ ಮನವಿ ಮಾಡಿದ ಬಳಿಕ ಅಮೆರಿಕ ನಮ್ಮ ನೆರವಿಗೆ ಆಗಮಿಸಿತು. ಈ ಬಾರಿ ಹಾಗಲ್ಲ. ನಾವು ಯಾರ ಸಹಾಯವನ್ನೂ ಕೇಳಿಲ್ಲ. ಅಷ್ಟರಲ್ಲಾಗಲೇ ಫ್ರಾನ್ಸ್ ಸೇನಾ ನೆರವು ನೀಡುವ ಭರವಸೆ ನೀಡಿದೆ. ಚೀನಾ ಜತೆ ವಾಣಿಜ್ಯ ಸಮರಕ್ಕಿಳಿದಿರುವ ಅಮೆರಿಕವು ದಕ್ಷಿಣ ಚೀನಾ ಸಮುದ್ರದಲ್ಲಿ ಸಮರ ನೌಕೆಗಳನ್ನೇ ನಿಯೋಜಿಸಿದೆ. ಸಾಗರ ಗಡಿಯಲ್ಲಿ ಚೀನಾದಿಂದ ಕಿರಿಕಿರಿ ಅನುಭವಿಸುತ್ತ ಬಂದಿರುವ ಜಪಾನ್ ಸಹ ತನ್ನ ಬೆಂಬಲ ಭಾರತಕ್ಕೆ ಎಂದು ಸ್ಪಷ್ಟವಾಗಿ ಘೋಷಿಸಿದೆ. ಹಳೆಯ ಮಿತ್ರ ರಷ್ಯಾ ತ್ವರಿತವಾಗಿ ಶಸ್ತ್ರಾಸ್ತ್ರ ಪೂರೈಸುವ ಆಶ್ವಾಸನೆ ನೀಡಿದೆ. ಈಗ ಏಕಾಂಗಿಯಾಗಿರುವುದು ಚೀನಾವೇ ಹೊರತು ಭಾರತ ಅಲ್ಲ.

    ಕೊರೊನಾ ವಿಷಯದಲ್ಲಿ ಚೀನಾ ಮಾಡಿದ ಮೋಸದ ಬಗ್ಗೆ ಹಲವು ದೇಶಗಳಿಗೆ ಅಸಮಾಧಾನವಿದೆ. ಅವಕಾಶ ಸಿಕ್ಕರೆ ಮತ್ತಷ್ಟು ದೇಶಗಳು ಚೀನಾ ವಿರುದ್ಧ ಮುಗಿಬೀಳಲು ಸಿದ್ಧವಾಗಿ ನಿಂತಿವೆ. ಇದನ್ನೆಲ್ಲ ಅರ್ಥ ಮಾಡಿಕೊಂಡ ಬಳಿಕ ಚೀನಾ ತೋರ‍್ಗಾಣಿಕೆಗೆ ಸಂಧಾನದ ಮಾತನಾಡುತ್ತಿದೆ. ಆದರೆ ಚೀನಾವನ್ನು ನಂಬಲು ಯಾರೂ ತಯಾರಿಲ್ಲ.

    ನೇಪಾಳದ ಪಾಠ
    ಚೀನಾವು ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಮತ್ತೊಂದು ಛಾಯಾ ಸಮರಕ್ಕೆ ಯತ್ನಿಸಿತು. ಭಾರತದಿಂದಾಗಿ ಕೊರೊನಾ ಹೆಚ್ಚಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಆರೋಪ ಮಾಡಿದಾಗಲೂ ಸರಕಾರ ಕಟುವಾಗಿ ಪ್ರತಿಕ್ರಿಯಿಸಲಿಲ್ಲ. ಉತ್ತರಾಖಂಡದ ಮೂರು ಭೂಪ್ರದೇಶಗಳನ್ನು ತನ್ನ ನಕ್ಷೆಗೆ ಸೇರಿಸಿಕೊಂಡಾಗ, ಬಿಹಾರದಲ್ಲಿ ನದಿ ದಂಡೆ ದುರಸ್ತಿಗೆ ಅಡ್ಡಿಪಡಿಸಿದಾಗ, ಅಷ್ಟೇ ಏಕೆ ಗಡಿಯಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಸಿದಾಗಲೂ ತುಟಿ ಬಿಚ್ಚಲಿಲ್ಲ. ಬದಲಿಗೆ ನೆರವಿನ ಮಹಾಪೂರವನ್ನೇ ಪುಟ್ಟ ರಾಷ್ಟ್ರಕ್ಕೆ ಹರಿಸಿತು. ‘ಚೀನಾ ಕುಮ್ಮಕ್ಕು ಇರುವುದರಿಂದಲೇ ಭಾರತ ಸುಮ್ಮನಿದೆ’ ಎಂದೇ ಎಲ್ಲರೂ ಭಾವಿಸಿದ್ದರು. ಚೀನಾ ತಾಳಕ್ಕೆ ತಕ್ಕಂತೆ ಕುಣಿದು ಭಾರತದ ವಿರುದ್ಧ ಮುಗಿಬಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಈಗ ಹುದ್ದೆ ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದು ಭಾರತದ ಚಾಣಕ್ಷ ನಡೆ.

    ಭಾರತ ಈಗ ಮೊದಲಿನಂತಿಲ್ಲ. ಇದು ಸದೃಢ, ಸಶಕ್ತ ಭಾರತ. ಇನ್ನೊಮ್ಮೆ ತಂಟೆ ತೆಗೆಯುವ ಮುನ್ನ ಚೀನಾ ಅದನ್ನು ಅರ್ಥ ಮಾಡಿಕೊಳ್ಳಬೇಕು.

    ನಮ್ಮ ಸೋಲಿಗೆ ನಮ್ಮ ಮನಸ್ಥಿತಿಯೇ ಕಾರಣ

    ಎಲ್ಲ ಸಂದರ್ಭಗಳಲ್ಲೂ ಆ ಕ್ಷಣದಿಂದ ಬಚಾವಾಗುವುದೊಂದೇ ಜೀವನದ ಗುರಿಯಾಗಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿರುತ್ತೇವೆ. ಆದರೆ ಜೀವನ ಅಂದರೆ ಅಷ್ಟೇ ಅಲ್ಲ. ಒಂದು ಕ್ಷಣ ಆ ಘಟನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ಆಂತರಿಕ ನೆಮ್ಮದಿಯ ಶೋಧವೂ ಇರಬೇಕು. ಆಂತರಿಕ ನೆಮ್ಮದಿ ಕಂಡುಕೊಂಡಾಗಲೇ ಶಾಶ್ವತ ಸುಖ ಅನುಭವಿಸುವುದಕ್ಕೆ ಸಾಧ್ಯ. ಆಂತರಿಕ ನೆಮ್ಮದಿ ಬೇರೆಲ್ಲೋ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯಿದ್ದರೆ ಮಾತ್ರ ಆಂತರಿಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬಹುದು.

    ಯಾವಾಗ ನಮ್ಮನ್ನು ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆಯೋ ಆಗ ನಾವು ವೈಫಲ್ಯತೆಯ ಹಾದಿಯಲ್ಲಿಯೇ ಸಾಗುತ್ತಿದ್ದೇವೆಯೇನೋ ಅಥವಾ ನಮಗಿಂತ ಮತ್ಯಾರೋ ಉತ್ತಮರಿದ್ದಾರೆ ಅನ್ನುವ ಬೇಸರ ಕಾಡುತ್ತದೆ. ಆಗ ನಮ್ಮ ವೈಫಲ್ಯತೆಗೆ ಪರಿಸ್ಥಿತಿಗಳು ಕಾರಣ ಎಂದುಕೊಳ್ಳುತ್ತೇವೆ. ಆದರೆ ಪರಿಸ್ಥಿತಿಗಳು ಸೋಲಿನ ಮೂಲವಲ್ಲ. ಅವು ನಮ್ಮ ಸೋಲಿಗೆ ಕಾರಣವಲ್ಲ, ನಮ್ಮ ಮನಸ್ಸು. ಯಾವುದೇ ಒಂದು ಸಂದರ್ಭದಲ್ಲಿ ನಾವು ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ.

    ನಡವಳಿಕೆಗಳಿಂದಲೇ ನಿರ್ಧರಿತ

    ಗೆಲುವು ಅಥವಾ ಸೋಲು ಯಾವುದೇ ಆಗಿರಲಿ, ನಮ್ಮ ನಡವಳಿಕೆಗಳಿಂದಲೇ ಅದು ನಿರ್ಧರಿತವಾಗಿರುತ್ತವೆ. ಉದಾಹರಣೆಗೆ ಕ್ರೀಡಾ ಕ್ಷೇತ್ರದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಲೇ ಇರುವ ಕ್ರೀಡಾ ಸಾಧಕರನ್ನು ಕಾಣಬಹುದು. ಕೆಲವೊಮ್ಮೆ ಅವರದೇ ಸಾಧನೆಯನ್ನು ಸ್ವತಃ ಅವರೇ ಮುರಿದು ಮುನ್ನುಗ್ಗುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ತಮ್ಮ ಹಿಂದಿನ ದಾಖಲೆಯನ್ನು ಸೋಲು ಎಂದುಕೊಳ್ಳುವುದಿಲ್ಲ. ಅದು ಅಭಿವೃದ್ಧಿ ಎಂದುಕೊಳ್ಳುತ್ತಾರೆ.

    ಜೀವನದಲ್ಲಿ ಎಲ್ಲವೂ ಇದೆ ಅಂದುಕೊಂಡಾಗ ಅಥವಾ ಕೊರತೆಗಳು ಇಲ್ಲದೇ ಹೋದಾಗ ಅವರಿಗೆ ಸೋಲು ಎಂಬುದು ಕಾಡುವುದಿಲ್ಲ. ಯಾವಾಗ ತಮ್ಮನ್ನು ತಾವು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೋ ಆಗ ತಾನು ಸೋಲಿನ ಟ್ರ್ಯಾಕ್‍ನಲ್ಲಿದ್ದೇನೇನೋ ಎಂದೆಣಿಸುವುದು. ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿಕೊಳ್ಳಬೇಕೇ ವಿನಾ ಅದು ತಮ್ಮ ಶಕ್ತಿಯನ್ನು ಕುಗ್ಗಿಸುವಂತಿರಬಾರದು. ತನ್ನನ್ನು ತಾನು ಬೆಳೆಸಿಕೊಳ್ಳುವುದು ಅಂದರೆ ಆಂತರಿಕ ಪರಿಪೂರ್ಣತೆಯನ್ನು ಕಂಡುಕೊಳ್ಳುವುದು. ಕೆಲವೊಮ್ಮೆ ನಮ್ಮ ಸೋಲಿಗೆ ಸಂದರ್ಭಗಳೇ ಕಾರಣ ಎಂದು ಗೊಣಗಿಕೊಳ್ಳುತ್ತೇವೆ.

    ನಿಜ ಹೇಳಬೇಕೆಂದರೆ ನಮ್ಮ ಸೋಲಿಗೆ ನಮ್ಮ ಮನಸ್ಥಿತಿಯೇ ಕಾರಣವಾಗಿರುತ್ತದೆ. ಸೋಲು ಎಂದುಕೊಂಡರೆ ಅದು ಸೋಲು, ಗೆಲುವು ಅಂದುಕೊಂಡರೆ ಅದು ಗೆಲುವು. ನಮ್ಮ ಮನಸ್ಥಿತಿಯೇ ಎಲ್ಲದಕ್ಕೂ ಕಾರಣ. ನಾವು ಸಕಾರಾತ್ಮಕವಾಗಿದ್ದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮಕತೆಯ ಗೂಡಾಗುತ್ತದೆ. ಮನಸ್ಸೇ ಆಂತರಿಕ ಸ್ವರ್ಗವನ್ನು ಅಥವಾ ನಮ್ಮೊಳಗಿನ ನರಕವನ್ನು ಸೃಷ್ಟಿಸುವುದು.

    ಒಂದು ವಸ್ತುವನ್ನು ಹೇಗೆ ಬಳಸಿಕೊಳ್ಳಬಹುದು ಅಥವಾ ಬಳಸಿಕೊಳ್ಳುತ್ತೇವೆ ಅಥವಾ ಅದರಿಂದಾಗುವ ಫಲಿತಾಂಶ ಏನು ಎಂಬುದಕ್ಕೆ ಒಂದು ಉದಾಹರಣೆಯನ್ನೇ ಗಮನಿಸುವುದಾದರೆ, ಒಂದು ಹರಿತವಾದ ಕತ್ತಿಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಮನಸ್ಸಿನ ಆಲೋಚನಾ ಕ್ರಮದಲ್ಲಿದೆ. ಸರಿಯಾದ ಕ್ರಮದಲ್ಲಿ ಬಳಸಿದ್ದೇ ಆದಲ್ಲಿ ಅದರಿಂದ ಸದುಪಯೋಗವಾಗುವುದು, ಇಲ್ಲವೇ ತಪ್ಪಾಗಿ ಬಳಸಿಕೊಂಡರೆ ಅದರಿಂದ ದುಃಖ ದುಮ್ಮಾನ, ಪಶ್ಚಾತ್ತಾಪಗಳೇ ನಮ್ಮನ್ನಾವರಿಸಿಕೊಳ್ಳಬಹುದು. ಹಾಗಾಗಿ ಮನಸ್ಸನ್ನು ಸರಿಯಾದ ಕ್ರಮದಲ್ಲಿಯೇ ಬಳಸಿಕೊಳ್ಳಬೇಕು. ಸಂದರ್ಭವನ್ನು ಬಳಸಿಕೊಳ್ಳಬಹುದಾದ, ನಿರ್ಣಯಗಳನ್ನು ತೆಗೆದುಕೊಳ್ಳುವ ಆಯ್ಕೆಯೂ ನಮ್ಮ ಆಲೋಚನಾ ಕ್ರಮದಲ್ಲಿರುತ್ತದೆ.

    ಕೆಲವೊಂದು ಸಂದರ್ಭಗಳಲ್ಲಿ ಪ್ರಪಂಚವೇ ತಲೆಯ ಮೇಲೆ ಬಿದ್ದಂಥ ಘಟನೆಗಳು ನಡೆಯುವುದು ಸಹಜ. ಅದು ಜಗತ್ತಿನ ನಿಯಮ. ಆಗ ಅದನ್ನು ಮನಸ್ಸು ನೋವು, ಹತಾಶೆ, ಸಿಟ್ಟಿನಿಂದ ಸ್ವೀಕರಿಸಿದರೆ ಮನಸ್ಸು ಅಪವಿತ್ರಗೊಳ್ಳುವುದು. ಇಲ್ಲದ ನೋವು ಹತಾಶೆಗಳು ಕಾಣಿಸಿಕೊಳ್ಳುವುದು. ಇದು ದೈಹಿಕವಾಗಿ ಘಾಸಿಗೊಳಿಸದೇ ಇದ್ದರೂ ಮನಸ್ಸಿಗೆ ನೋವನ್ನುಂಟು ಮಾಡುವುದು ಸಹಜ. ಅಂದರೆ ಒಂದು ಸಂದರ್ಭವನ್ನು ಮನಸ್ಸು ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ.

    ಕಲಿಕೆಯ ಜಾಣ್ಮೆ

    ಉದಾಹರಣೆಗೆ ಕಚೇರಿಯಲ್ಲಿ ಕೆಲಸ ಮಾಡುವಿರಾದರೆ ಬಾಸ್ ಬೈಯ್ದಾಗ ಅದನ್ನವರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಬಹಳ ಮುಖ್ಯ. ಬಹಳ ಪಶ್ಚಾತ್ತಾಪದಿಂದ, ಹತಾಶೆಯಿಂದ ಸ್ವೀಕರಿಸಿದ್ದೇ ಆದರೆ ಅದರಿಂದ ಆಂತರಿಕ ಖುಷಿ ಇಲ್ಲವಾಗುವುದು. ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಅದನ್ನು ಪ್ರೀತಿಯಿಂದ, ಖುಷಿಯಿಂದ ಸ್ವೀಕರಿಸಿದ್ದೇ ಆದರೆ, ಅದರಿಂದ ಕಲಿಯಬೇಕಾದ ಪಾಠವೂ ಇರುತ್ತದೆ. ಅಂತಹ ಮನಸ್ಥಿತಿಯನ್ನು ಕಲಿತುಕೊಳ್ಳದೇ ಹೋದರೆ ಬದುಕಿನಲ್ಲಿ ಕಲಿಕೆಯ ಜಾಣ್ಮೆಯನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಇಂತಹ ಘಟನೆಗಳು ಜೀವನದಲ್ಲಿ ಸಾಕಷ್ಟು ಬರುತ್ತವೆ. ಅವುಗಳನ್ನು ಸ್ವೀಕರಿಸುವ ಮನೋಭಾವದಲ್ಲಡಗಿದೆ ಆಂತರಿಕ ನೆಮ್ಮದಿ,

    ಚಿತ್ರ ಸೌಜನ್ಯ :Pexels

    ಐಸ್ ನ ಜೊತೆ ಒಂದು ಬಾಂಧವ್ಯ ಇತ್ತು, ಬೆಸುಗೆ ಇತ್ತು, ಜೊತೆಗೆ ಬೇಸಿಗೆ ಇತ್ತು

    ಬೀದಿಯಲ್ಲಿ ಐಸ್ ಐಸ್ ‌….. ಎಂಬ ಕೂಗೋ , ಗಂಟೆಯ ಶಬ್ದವೋ , ರಬ್ಬರ್ ಹಾರನ್ನೋ…. ಕಿವಿಗೆ ಬಿದ್ದರೆ ಸಾಕು ಮನೆಯಿಂದ ಹೊರಗೆ ಓಡಿ ಬರುತ್ತಿದ್ದೆವು. ಮೂರು ಗಾಲಿಯ ಮರದ ಗಾಡಿ ಅದರ ಮೇಲೆ ಮಗುವು ಐಸ್ ಕ್ಯಾಂಡಿ ತಿನ್ನುತ್ತಿರುವ ಚಿತ್ರ . ಮನೆಯವರ ಹತ್ತಿರ ಹಠ ಮಾಡಿ ಬೈಸಿಕೊಂಡು ಕಾಸು ಪಡೆದು ಗಾಡಿಯವನ ಹತ್ತಿರ ಹೋಗಿ ನಿಲ್ಲುತ್ತಿದ್ದೆವು. ಯಾವುದು ಅನ್ನೋ ಮಾತಿಲ್ಲ.ಎಷ್ಟರದ್ದು ಅಂತ ಕೇಳೋವ್ನು . ನಮಗೆ ಆ ಗಾಡಿಯ ಒಳಗಡೆ ನೋಡುವ ಆಸೆ ಆದರೆ ಎಟುಕುತ್ತಿರಲಿಲ್ಲ ಹತ್ತಿ ನೋಡುವಂತೆಯೂ ಇರಲಿಲ್ಲ.

    ಹಳದಿ ಕೆಂಪು ಬಿಳಿ ಹೀಗೆ ಬಣ್ಣ ಹೇಳಿದರೆ ಕೊಡುತ್ತಿದ್ದನು. ನಮ್ ಟೈಂ ಚೆನ್ನಾಗಿದ್ದು ಯಾರಾದ್ರು ದೊಡ್ಡವರು ನಮ್ಮನ್ನ ಎತ್ತಿಕೊಂಡು ಆ ಗಾಡಿಯ ಮರದ ಮುಚ್ಚಳ ಎತ್ತಿ ತೋರಿಸಿದರೆ ಪುಣ್ಯ. ಮ್ಯಾಂಗೊ , ಗ್ರೇಪು , ಶಾವಿಗೆ ಅದನ್ನೇ ನಾವು ಕೊಬ್ಬರಿ ಐಸ್ ಅಂತಿದ್ವಿ.ಒಟ್ನಲ್ಲಿ ಸ್ವರ್ಗವನ್ನೇ ಕಂಡ ಅನುಭವ. ಅದನ್ನ ತಗೊಂಡಿದ್ರೆ ಚೆನ್ನಾಗಿರೋದು ಅನ್ನೊ ಗೊಂದಲದಲ್ಲೇ ತಗೊಂಡಿರೋ ಐಸ್ ಕ್ಯಾಂಡಿಯನ್ನ ತಿಂತಿದ್ವಿ . ಬಾಯಿ ತುಟಿ ಎಲ್ಲಾ ಬಣ್ಣ ಆಗೋಗಿರೋದು .ತಿಂದಾದ್ಮೇಲೂ ಆ ಸಣ್ಣ ಬಿದರಿನ ಕಡ್ಡಿಯನ್ನ ಕಡ್ಕೊಂಡ್ ಇರ್ತಿದ್ವಿ .

    ತಿಂದಿದ್ದೇ ತಡ ಅದೆಲ್ಲಿರೋದೋ ನೆಗಡಿ ! ಮೂಗಿನ ತುದೀಲೇ ಕಾಯ್ತಿತ್ತೇನೋ ಅನ್ನೋ ಥರ ಬಂದ್ಬಿಡೋದು , ಮನೆಯಲ್ಲಿ ಸೊರಕ್ ಸೊರಕ್ ಅಂತ ಶಬ್ದ ಕೇಳಿದ್ ಕೂಡ್ಲೇ ಶುರುವಾಗೋದು ಬೈಗುಳ ‘ ಇನ್ನೊಂದ್ ಸಲ ಐಸ್ ಕ್ಯಾಂಡಿ ಅಂತ ಕೇಳು…ನಿನಗಿದೆ ‘ ಅಂತ ಧಮ್ಕಿ ಹಾಕೋವ್ರು .

    ಒಂದೆರಡು ದಿನಗಳ ನಂತರ ಬರೋದು ‘ ಐಸ್ ಕ್ರೀಂ ‘ ಗಾಡಿ ಅರ್ಧ ಸೈಕಲ್ಲು ಅದಕ್ಕೊಂದಿಕೊಂಡಂತೆಯೇ ಒಂದು ಸ್ಟ್ಯಾಂಡು, ಬಾಕ್ಸು ಎಲ್ಲಾ ಇರೋದು , ಆ ಸ್ಟ್ಯಾಂಡಿನಲ್ಲಿ ಕನಕಾಮ್ರ ಕಲರಿನ ವಿವಿಧ ಸೈಝಿನ ಬಿಸ್ಕತ್ತಿನಿಂದ ತಯಾರಿಸಿದ ಕೋನ್ ಗಳು , ಪಕ್ಕದಲ್ಲಿಯೇ ಬಿಳಿಯ ಕಾಗದದ ಕಪ್ಪುಗಳು . ಆ ಗಾಡಿಯವನ ಕೈಯಲ್ಲಿ ಯಕ್ಹಶ್ಚಿತ್ ಅನ್ನದ ಸೌಟೇ ಇರೋದು.ಅವನು ಬಗ್ಗಿ ಕೆರೆದು ಕೆರೆದು ಬಿಸ್ಕತ್ತಿನ ಕೋನಕ್ಕೆ ಐಸ್ ಕ್ರೀಂ ತುಂಬಿ ಅದರ ಮೇಲೆ ಪಪ್ಪಾಯಿನ ಕೆಂಪು ಕಣಗಳನ್ನು ಇಟ್ಟು ಅದಕ್ಕೊಂದು ಚಿಕ್ಕ ಬಿದಿರಿನ ಚಮಚ ಸಿಕ್ಕಿಸಿ ಕೊಡುತ್ತಿದ್ದ .

    ಅದನ್ನ ಕೈಯಲ್ಲಿ ಹಿಡಿಯುತ್ತಲೇ ನಮ್ಮ ಮನದಲ್ಲೊಂದು ಪ್ರೆಶ್ನೆ ಉದ್ಭವ. ಇದನ್ನ ಯಾವ ರೀತಿ ತಿನ್ನೋಣ ಅಂತ .ಕೋನ್ ಅನ್ನು ಕೆಳಗೆ ತೂತ ಮಾಡಿ ಅಲ್ಲಿಂದ ತಿನ್ನುವುದು , ಬಿಸ್ಕತ್ತನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುವುದು . ಹೀಗೆ ಏನೇನೋ ಅವತಾರ ಮಾಡ್ಕೊಂಡು ಮನಸ್ಸಿನಿಂದ ಅನುಭವಿಸಿ ತಿಂದು ಮುಗುಸ್ತಾ ಇದ್ವಿ .

    ಇದರ ಮಧ್ಯೆ ಇನ್ನೊಂದು ಗಾಡಿ ಬರೋದು ಅದರಲ್ಲಿ ಐಸ್ ನೀರಿನ ಮಧ್ಯೆ ಚೌಕಾಕಾರದ ಉದ್ದನೆಯ ಅಲ್ಯೂಮಿನಿಯಂ ಅಚ್ಚುಗಳು ಅದರ ಮದ್ಯೆ ಕಡ್ಡಿ .ತೆಗೆದರೆ ಅದರಲ್ಲಿ ಕುಲ್ಫಿ, ಎಲ್ಲಾ ಒಂದೇ ಬಣ್ಣದ್ದಾಗಿದ್ರೂ , ಇದರಲ್ಲಿ ಕೋವ ಇರ್ತಿದಿದ್ದು ವಿಶೇಷ , ದುಡ್ಡು ಜಾಸ್ತಿ ಕೊಟ್ಟಂಗೆ ಕೋವಾ ಜಾಸ್ತಿ ಇರೋ ಐಸು ಕೊಡೋವ್ನು .

    ಮತ್ತೊಂದು ಆಕರ್ಷಕವಾದ ಗಾಡಿ ಬರೋದು ಬಣ್ಣ ಬಣ್ಣದ ಶರಬತ್ತು ಬಾಟಲಿಗಳನ್ನು ಸುತ್ತಲೂ ಜೋಡಿಸಿಕೊಂಡು ಮದ್ಯೆ ಐಸ್ ಗಡ್ಡೆಯನ್ನೇ ಕೊಬ್ಬರಿಯಂತೆ ತುರಿದು ಅಲ್ಯೂಮಿನಿಯಂ ಅಚ್ಚಿಗೆ ಸುರಿದು ಕಡ್ಡಿ ಸಿಕ್ಕಿಸಿ ಅದಕ್ಕೆ ಮೂರು ಫ್ಲೇವರಿನ ಬಣ್ಣಗಳನ್ನು ಹಾಕಿ ಕೊಡುತ್ತಿದ್ದ. ತಿನ್ನೋದಕ್ಕಿಂತಲೂ ನೋಡೋದಕ್ಕೇ ಸಕ್ಕತ್ತಾಗಿರೋದು .

    ಮನೆಯಲ್ಲಿ ಐಸ್ ಗಂತಲೇ ಹಠ ಉಪವಾಸ ಮಾಡುತ್ತಿದ್ದೆವು , ಬೈಸಿಕೊಳ್ಳುತ್ತಿದ್ದೆವು .ಐಸ್ ತಿಂದಿದ್ದಕ್ಕಿಂತಲೂ ಒದೆ ತಿಂದಿದ್ದೇ ಹೆಚ್ಚು .
    ಮನೆಗೆ ನೆಂಟರು ಬಂದಾಗ ಬೇಕಂತ್ಲೇ ಕೇಳುತ್ತಿದ್ದೆವು. ಅವರ ಮುಂದೆ ನಮ್ಮನೆಯವರು ಒಳಗೆ ಅಗಾಧವಾದ ಸಿಟ್ಟಿದ್ದರೂ ಮೇಲೆ ನಗುತ್ತಲೇ ತಗೋಳೋ ತಗೋ ಹೋಗು ಅಂತ ಕಾಸು ಕೊಡೋವ್ರು. ನೆಂಟರು ಹೊರಟ ಮೇಲೆ ಆ ಸಿಟ್ಟನ್ನ ಸೇಡು ಥರ ತೀರಿಸ್ಕೊಳೋವ್ರು .

    ಯಾವಾಗಲಾದರೂ ಮನೆಯವರೂ ನಮ್ಮ ಜೊತೆ ಐಸ್ ಕ್ರೀಂ ತಿನ್ನಲು ಗಾಡಿ ಬಳಿ ಬಂದ್ರೆ , ಸ್ಕೂಲಿನ ಹತ್ತಿರ ಟೀಚರ್ಗಳು ಅಪರುಪಕ್ಕೊಮ್ಮೆ ಸ್ಟ್ಯಾಫ್ ರೂಂಗೆ ಐಸ್ ಕ್ಯಾಂಡಿ ತರಿಸಿ ತಿಂದರೆ ನಮಗದೇನೋ ಆನಂದ . ನಮ್ಮ ರೋಲ್ ಮಾಡಲ್ಗಳು ಸಹ ಐಸ್ ಕ್ಯಾಂಡಿ ತಿಂತಾರೆ ಅನ್ನೋ ಫೀಲಿಂಗ್ ಆಗೋದು .

    ‘ಐಸು’…….ತಣ್ಣಗಿನ ಸಿಹಿಸ್ವರ್ಗ. ತಂಪಾದ ನವೊಲ್ಲಾಸ . ಸುಲಭಕ್ಕೆ ಸಿಗದ ಹಿಮಾಮೃತ.ಕನಸಲ್ಲೂ ಕಾಡುತ್ತಿದ್ದ ರಂಗಿನಗಡ್ಡೆ ….ಚಿಲ್ಲರೆ ಹಣ ಕೂಡಿಟ್ಟಿಕೊಂಡು ಕಾದಿದೀವಿ , ಓಡಿದೀವಿ , ಬಿದ್ದಿದೀವಿ , ಕಡಿಮೆ ಬೆಲೆಗೆ ಸಿಗುತ್ತೆ ಅಂತ ಐಸ್ಕ್ಯಾಂಡಿ ಫ್ಯಾಕ್ಟರಿ ಬಳಿ ಅಲೆದಿದೀವಿ . ತಿಂದ್ರೆ ಬೇಗ ಮುಗಿದೋಗುತ್ತೆ ಅಂತ ಸ್ಟೀಲ್ ಗ್ಲಾಸಿನಲ್ಲಿ ಹಾಕಿ ಅಲುಗಾಡಿಸುತ್ತಾ ಆ ಕರಗುವ ನೀರನ್ನು ನಾಲಿಗೆಗೆ ಸುರಿದುಕೊಂಡಿದ್ದೀವಿ .ರಚ್ಚೆ ಹಿಡಿದಿದೀವಿ ಹಾಸಿಗೆ ಹಿಡಿದಿದೀವಿ. ಗಂಟಲು ಕಟ್ಟಿಸಿಕೊಂಡಿದೀವಿ ಸೂಜಿ ಚುಚ್ಚಿಸಿಕೊಂಡಿದೀವಿ. ಬೈಸಿಕೊಂಡು, ಹೊಡೆಸಿಕೊಂಡು , ಕೊಡಿಸಿಕೊಂಡು , ಅದೆಷ್ಟೋ ಬಾರಿ ಕಣ್ಣೀರಿನಜೊತೆಯಲ್ಲೇ ಐಸ್ ಕ್ಯಾಂಡಿ ಮೆಕ್ಕಿದ್ದೇವೆ.

    ಏನೇ ಆದರೂ ಈಗ ಇದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ , ನಮ್ಮಲ್ಲಿಗೆ ಅಂತರಾಷ್ಟ್ರೀಯ ಬ್ರಾಂಡ್ಗಳು ಲಗ್ಗೆ ಇಟ್ಟಿವೆ , ಐಷಾರಾಮಿ ಹವಾನಿಯಂತ್ರಿತ ಮಳಿಗೆಗಳು , ಪಾರ್ಲರ್ಗಳು ತಲೆಎತ್ತಿವೆ , ಎಲ್ಲಾ ರೀತಿಯ ತರಹೇವಾರಿ ಸ್ವಾದದ ಐಸ್ ಕ್ರೀಂಗಳು ದಿನದ ಯಾವುದೇ ಸಮಯದಲ್ಲೂ ಋತುವಿನ ಎಲ್ಲಾ ಕಾಲಗಳಲ್ಲೂ ಸಿಗುತ್ತಿವೆ .ಆರ್ಡರ್ ಮಾಡಿದರೆ ಮನೆಬಾಗಿಲಿಗೇ ತಲುಪಿಸುತ್ತಾರೆ . ಈಗಿನ ಮಕ್ಕಳಿಗೆ ಅದರ ಮೇಲೆ ಅಂತಹ ಆಸೆಯಾಗಲೀ ಪ್ರೀತಿಯಾಗಲಿ ಅಷ್ಟಾಗಿ ಕಾಣುವುದಿಲ್ಲ , ಅವರಿಗದು…..ದುಡ್ಡು ಕೊಟ್ರೆ ಸಿಗುತ್ತೆ ಅನ್ನೋ ತಿನಿಸು ಅಷ್ಟೇ !ಏನೇ ಆಗಲಿ ನಮ್ಮ ಬದುಕಲ್ಲಿ ತಣ್ಣಗೆ ಕರಗಿಹೋಗಿದ್ದು ಎರಡೇ ಒಂದು ಐಸ್ ಕ್ಯಾಂಡಿ ಮತ್ತೊಂದು ಬಾಲ್ಯ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ರಾಜ್ಯ ಕಾಂಗ್ರೆಸ್ ಆಗುವುದೆ ಕೇಡರ್ ಆಧಾರಿತ ಪಕ್ಷ

    ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪದಗ್ರಹಣ ಮಾಡಿದ್ದಾರೆ. ತಮ್ಮದೆ ಶೈಲಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ್, ಕೇಡರ್ ಆಧಾರಿತ ಪಕ್ಷ ಕಟ್ಟುವ ಮಾತಾನಾಡಿದ್ದಾರೆ. ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ್ದಾರೆ. ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗಬಹುದು? ಅವರೇ ಹೇಳಿದಂತೆ ವಿಧಾನ ಸೌಧದ ಮೆಟ್ಟಿಲಿನ ಚಪ್ಪಡಿ ಕಲ್ಲಾಗಿ ಕಾಂಗ್ರೆಸ್ ಪಕ್ಷ ಮೂರನೆ ಮಹಡಿ ತಲುಪಿ ಅಧಿಕಾರ ಹಿಡಿಯುವಂತೆ ಮಾಡಬಲ್ಲರೆ ? ಈ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    ಕೋವಿಡ್ ಮತ್ತು ಮಾನಸಿಕ ಸ್ವಾಸ್ಥ್ಯ ;ಒಂಟಿತನ, ಸಂಕಟ, ಅಭದ್ರತೆಯಿಂದ ಹೊರಬನ್ನಿ

    ಮಾರ್ಚ್ 11 ರಂದು ಕೋವಿಡ್ -19 ಎನ್ನುವ  ಈ ವಿಶ್ವವ್ಯಾಪಿ ಹೊಸವ್ಯಾಧಿ ( ಪ್ಯಾಂಡಮಿಕ್)  ಪ್ರಪಂಚಕ್ಕೆಲ್ಲ ಹರಡುತ್ತಿರುವುದರ ಆಪತ್ತಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಧೃಡಪಡಿಸಿತು.ಇದು ಸಂತೋಷದ ಸುದ್ದಿಯಾಗಿರಲಿಲ್ಲ. ಅಂತೆಯೇ ದುಃಖದ ಹರವನ್ನೂ ದೃಢಪಡಿಸಿರಲಿಲ್ಲ.ಆದರೆ,ಆ ದಿನ ವಿಶ್ವದ ಜನರಿಗೆ ತಮ್ಮ ಜೀವಿತಾವಧಿಯಲ್ಲೇ ಕಂಡು ಕೇಳಿಲ್ಲದ ಒಂದು ಮಹಾ ವಿಪತ್ತಿನ ಮುನ್ಸೂಚನೆಯಂತೂ ದೊರೆಕಿತು.

    ಜಗತ್ತಿನ ಜನರು ಅದಕ್ಕೆ ಎಂದಿನಂತೆ ಸ್ಪಂದಿಸಿದರು. ಮೊದಲಿಗೆ ಆಶ್ಚರ್ಯ, ಉದ್ರೇಕ ಮತ್ತು ನಂಬಲಸಾಧ್ಯವಾದ ಒಂದು ಭಾವ ಅವರಲ್ಲಿ ಹರಿದುಹೋಯ್ತು. ಜೊತೆಗೆ ಕಂಡರಿಯದ ವಿಪತ್ತಿನ ಬಗ್ಗೆ ಅವರಿಗೆ ಭಯವೂ ಆಯ್ತು. ಕಳವಳವೂ ಆಯ್ತು.ಮತ್ತೆ ಕೆಲವರು ಇದನ್ನು ನಂಬಲಿಲ್ಲ.ಅಥವಾ ಸಧ್ಯಕ್ಕೆ ಇದನ್ನು ನಂಬುವ ಅವಶ್ಯಕತೆ ತಮಗಿಲ್ಲ ಎಂದು ತಲೆಕೊಡವಿಕೊಂಡರು.ಭಯವನ್ನು ದೂರವಿಡುವ ತಂತ್ರವನ್ನು ಅನುಸರಿಸಿದರು.

    ಚೈನಾ ಮತ್ತು ಸರಹದ್ದಿನ ದೇಶಗಳನ್ನು ಬಿಟ್ಟರೆ ಈ ಸೋಂಕು ತ್ವರಿತವಾಗಿ ಹರಡಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ. ಹೀಗಾಗಿ ಮೊದ ಮೊದಲಲ್ಲಿ “ಕರೋನಾ ಎನ್ನುವ ಖಾಯಿಲೆ ವಿದೇಶಗಳಲ್ಲಿ ಮಾತ್ರ ಇರುವ ರೋಗ,ತಮ್ಮೂರಿನವರೆಗೆ ಈ ರೋಗ ಬರಲು ಸಾಧ್ಯವಿಲ್ಲ” ಎಂಬ ಧೃಡ ನಂಬಿಕೆಯೇ ಭಾರತದ ಮುಕ್ಕಾಲು ಮೂರು ಜನರಲ್ಲಿ ಹೆಚ್ಚು ಪ್ರಧಾನವಾಗಿತ್ತು.ಕೋವಿಡ್ ಸೋಂಕು ಹರಡುವುದನ್ನು ಮತ್ತು ಸುತ್ತ ಮುತ್ತಲಿನ ಜನ ಸಾಯುತ್ತಿದ್ದುದನ್ನು ನೋಡಿದ್ದ ಜನರನ್ನು ಬಿಟ್ಟರೆ ಪ್ರಪಂಚದ ಮಿಕ್ಕೆಲ್ಲ ಜನರು ಕೂಡ ಹೀಗೆಯೇ ನಂಬಿದ್ದರು.ಪಾಶ್ಚಾತ್ಯ, ಮತ್ತು ಪೌರ್ವಾತ್ಯ ವಿದೇಶಗಳಿಂದ ಈ ಸೋಂಕು ಇಷ್ಟೊಂದು ಕ್ಷಿಪ್ರಗತಿಯಲ್ಲಿ ಹರಡಬಲ್ಲದು ಎನ್ನುವ ಕಲ್ಪನೆ ಜನರಲ್ಲಿ ಖಂಡಿತ ಇರಲಿಲ್ಲ. ಪ್ರಪಂಚವೆಲ್ಲ ಇಷ್ಟೊಂದು ಸಂಕೀರ್ಣವಾಗಿ ಹೆಣೆದುಕೊಂಡಿರುವ ಬಗ್ಗೆ ಅರಿವಿಲ್ಲದ ಅವರ ಈ ಪ್ರತಿಕ್ರಿಯೆ ಅತ್ಯಂತ ಸಹಜವಾಗಿತ್ತು ಕೂಡ.

     ಪ್ಯಾಂಡೆಮಿಕ್ ನ ವಿರಾಟ್ ದರ್ಶನ ಅಥವಾ ಅದರ ವಿರಾಟ್ ಸ್ವರೂಪದ ಅರಿವಾದ ಕ್ಷಣದಿಂದ ಮೊದಲ ಎರಡು ವಾರಗಳವರೆಗೆ ಶೇಕಡ 80 ಜನರ ಮಾನಸಿಕ ಸ್ವಾಸ್ಥ್ಯದ ಮೇಲೆ ಈ ವಿಚಾರ ಒಂದಿಲ್ಲೊಂದು ರೀತಿಯ ಪರಿಣಾಮ ಬೀರುತ್ತದೆ ಎನ್ನುವುದುಈಗಾಗಲೇ ಧೃಡಗೊಂಡಿರುವ ವಿಚಾರ.

    ಯಾವುದೇ ತುರ್ತು ಸಂದರ್ಭ ನಮಗೆ ಎದುರಾದಾಗ ಕಳವಳ ಪಡುವುದು, ಕೈ ಕಾಲು ಆಡದ ಸ್ಥಿತಿಯಲ್ಲಿ ಸ್ಥಂಭೀಭೂತರಾಗುವುದು, ಸ್ವಾರ್ಥದಿಂದ ನಡೆದುಕೊಳ್ಳುವುದು, ಇತರರಿಗೆ ಸಹಾಯ ಮಾಡಲು ಮುಂದಾಗುವುದು, ಮತ್ತು ಏನೂ ತಿಳಿಯದ ಎಡಬಿಡಂಗಿಗಳಂತೆ ಎರ್ರಾ ಬಿರ್ರಿ ನಡೆದುಕೊಳ್ಳುವುದು,ಕಾರಣಯುಕ್ತವಾಗಿ ವರ್ತಿಸುವುದು, ಮನುಷ್ಯ ತೋರುವ ಅತ್ಯಂತ ಸಹಜ ಸ್ಪಂದನೆಗಳು.ಇವೇ ವೈವಿಧ್ಯತೆಗಳನ್ನು ಒಳಗೊಂಡ ವರ್ತನೆಯನ್ನು ಎಲ್ಲ ಸಮುದಾಯಗಳ ಸಮಾಜಗಳು ಪ್ರದರ್ಶಿಸಿದವು.ಈ ವೈಜ್ಞಾನಿಕ ಪ್ರಕ್ರಿಯೆ ಇನ್ನಿತರ ಪ್ಯಾಂಡೆಮಿಕ್ ಅಥವಾ ಯುದ್ಧಗಳಂತಹ ತುರ್ತು ಪರಿಸ್ಥಿತಿಯಲ್ಲೂ ಕಂಡುಬಂದಿರುವ ವಿಚಾರಗಳಾಗಿವೆ.

    ಒಂದು ಪ್ಯಾಂಡೆಮಿಕ್ ನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಮಾನಸಿಕ ಘಾಸಿಗಳಿಗೆ ತುತ್ತಾಗುತ್ತಾರೆ. ಮಕ್ಕಳು, ವಯಸ್ಕರರು, ವಯಸ್ಸಾದವರು, ಗಂಡಸರು, ಹೆಂಗಸರು,ಉದ್ಯೋಗಸ್ಥರು, ನಿರುದ್ಯೋಗಿಗಳು, ಉದ್ಯಮಗಳು ಎಲ್ಲರೂ ಕಷ್ಟಗಳಿಗೆ ಸಿಲುಕುತ್ತಾರೆ. ಆತಂಕದಲ್ಲಿ ಬದುಕುತ್ತಾರೆ. ಅದು ಎಲ್ಲರಿಗೂ ಕಾಣುವಂತಿರಬಹುದು ಅಥವಾ ಸುಪ್ತವಾಗಿರಬಹುದು. ಕೆಲವರದು ಹೆಚ್ಚಿರಬಹುದು ಮತ್ತೆ ಕೆಲವರದು ಕಡಿಮೆಯಿರಬಹುದು.ಕೆಲವರು ಅದನ್ನು ದೊಡ್ಡದು ಮಾಡಬಹುದು ಮತ್ತೆ ಕೆಲವರು ಸುಮ್ಮನಿರಬಹುದು.

    ಶೇಕಡ 80 ವಯಸ್ಕ ಜನರ ಮಾನಸಿಕ ಸ್ವಾಸ್ಥ್ಯ ಇಂತಹ ತುರ್ತು ಸಂದರ್ಭಗಳಲ್ಲಿ ಅಲ್ಪ -ಸ್ವಲ್ಪ ಮಟ್ಟದ ಬಳಲಿಕೆಗೆ ಒಳಗಾಗುತ್ತವೆ.ಆದರೆ ಇವರು ಬಹುಬೇಗ ಚೇತರಿಸಿಕೊಳ್ಳುತ್ತಾರೆ. ಇನ್ನುಳಿದ ಶೇಕಡ 20 ಜನರಲ್ಲಿ ಇಂತಹ ಸಮಯಗಳು ಆರದ ಗಾಯಗಳನ್ನು ಸೃಷ್ಟಿಸಬಲ್ಲವು.

    ಸಂತ್ರಸ್ತರು

    ಉದಾಹರಣೆಗೆ ಕೋವಿಡ್ ನಲ್ಲಿ ಪ್ರಾಣ ಕಳೆದುಕೊಂಡ ಸಂಸಾರಗಳು ಎಲ್ಲರಿಗಿಂತಲೂ ಹೆಚ್ಚು ಘಾಸಿಕೊಂಡಿದ್ದಾರೆ. ಪ್ರಾಣ,ಪ್ರೀತಿ, ಸಂಬಂಧ, ದುಡಿಮೆ, ಭದ್ರತೆ, ಎಲ್ಲವನ್ನು ಕಳೆದುಕೊಂಡು ಬರಿಗೈಯಾಗಿರುವ ಈ ಸಂಸಾರಗಳು ದುಃಖದ ಜೊತೆ ಜೊತೆಗೆ ತಮ್ಮ ಆರೋಗ್ಯ, ತಮ್ಮನ್ನು ನಂಬಿದ ಇತರರ ಆರೋಗ್ಯದ ಕಡೆ ಒತ್ತಟ್ಟಿಗೆ ಗಮನಕೊಡಬೇಕಾದ ಸಂಕಷ್ಟಕರ ಕರ್ತವ್ಯಗಳಲ್ಲಿ ಸಿಲುಕಿ ದಿಗ್ಭ್ರಾಂತರಾಗಿದ್ದಾರೆ.ಜೊತೆಗೆ ಆರ್ಥಿಕ ಜಂಜಾಟಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಯುದ್ದ ಭೂಮಿಗೂ ತಟ್ಟನೆ ಜಾರಿದ್ದಾರೆ. ಹತ್ತಿರವೇ ಇದ್ದು ಸಾಯುತ್ತಿರುವವರ ಬಳಿ ನಿಂತು ಸಾಂತ್ವನ ಹೇಳಲಾಗದ, ಸತ್ತವರ ಮುಂದೆ ನಿಂತು ಅಳಲಾಗದ ಈ  ವಿಚಿತ್ರ ಸಂದರ್ಭ ಮನುಷ್ಯನ ಸಾಮಾನ್ಯ ಮಾನಸಿಕ ಧರ್ಮವನ್ನು ಮೀರಿರುವ ವಿಚಾರವಾಗಿದೆ. ಈ ಕಾರಣ ಹಲವು ತಲೆಮಾರುಗಳು ಈ ಗಾಯಗಳನ್ನು ಭವಿಷ್ಯದಲ್ಲೂ ಬಹುಕಾಲ ಹೊತ್ತೇ ಬದುಕುತ್ತಾರೆ.

    ಒತ್ತಡದಲ್ಲಿ ಕೆಲಸಮಾಡುತ್ತಿರುವ ಜನರು

    ಸಾವಿನ ಭಯದಲ್ಲಿ ಕೆಲಸ ಮಾಡಲೇ ಬೇಕಾದ ಜನರು ಒತ್ತಡಕ್ಕೊಳಗಾಗಿದ್ದಾರೆ.ಅವರ ಅಯ್ಕೆಗಳು ಈ ಸಂದರ್ಭದಲ್ಲಿ  ’ಪ್ರಾಣಕ್ಕೆ ಕಂಟಕ V/S ಮೇಲೇರಲಾಗದ ಆರ್ಥಿಕ ಕಂದಕ’ಗಳ ನಡುವಿನದಾದ್ದರಿಂದ ವಿಧಿಯಿಲ್ಲದೆ ದೇವರ ಮೇಲೆ ಭಾರ ಹಾಕಿ ಕೆಲಸಗಳಿಗೆ ತೆರಳಬೇಕಿದೆ.ಆದರೆ ಈ ದ್ವಂದ್ವ ಅವರ ಮನಸ್ಸನ್ನು ಅರಿವೇ ಇಲ್ಲದ ಮಾನಸಿಕ ಬೇಗುದಿಗಳಿಗೆ, ಒತ್ತಡಗಳಿಗೆ ಸಿಲುಕಿಸಿರುವುದು ನಿಜ.

    ಬದುಕಲು ಸೆಣೆಸುತ್ತಿರುವ ವರ್ಗ

     ಮಾಡಲು ಏನೂ ಇಲ್ಲದೆ ಕೆಲಸ ಕಳೆದುಕೊಂಡು ಆರ್ಥಿಕ ನಷ್ಟದಲ್ಲಿರುವ ಜನರು ಸಂಕಷ್ಟದಲ್ಲಿದ್ದಾರೆ.ಇವರು ಹೊರಗಿನಿಂದ ದೊರೆಯಬಹುದಾದ ನೆರವಿಲ್ಲದೆ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ’ ಸಾವು ’ V/S  ’ಸಾವಿನ ಸಂಭವನೀಯತೆ ’ ಗಳ ನಡುವಿನ ಆಯ್ಕೆಯೇ ಎದುರಾಗಿರುವ ಕಾರಣ ಒಂದು ಬಗಯ ಜಡತ್ವವನ್ನು ಮೈ ಗೂಡಿಸಿಕೊಂಡರೆ ಮಾತ್ರ ಬದುಕಬಲ್ಲ ಸಾಧ್ಯತೆಯನ್ನು ಕಾಣಬಲ್ಲರು.ಇಲ್ಲವೇ ಹಸಿವು, ಖಿನ್ನತೆ, ಆತ್ಮಹತ್ಯೆಗಳ ಸರಣಿಯನ್ನು ಎದುರಿಸುತ್ತಿರುವ ಜನರಿವರು.

     ಸರಳವಾಗಿ ಗುರುತಿಸಿ,ವಿಂಗಡಿಸಬಲ್ಲ ಮೇಲಿನ ಈ ವರ್ಗಗಳನ್ನು ಬಿಟ್ಟು ಬೇರೆ ವರ್ಗದ ಜನಗಳೂ ಇದ್ದಾರೆ.ಇವರಲ್ಲಿ ಕೆಲವರು ಅತ್ಯಂತ  ಕಳವಳಕ್ಕೊಳಗಾದರೂ ಅತ್ಯಂತ ಬೇಗನೆ ಚೇತರಿಸಿಕೊಳ್ಳಬಲ್ಲವರಾಗಿದ್ದಾರೆ. ಇನ್ನು ಕೆಲವರು ನಿಧಾನಕ್ಕೆ ಸಹಜ ಮಾನಸಿಕ ಸ್ಥಿತಿಗೆ ಹಿಂತಿರುಗಬಲ್ಲರು. ಒಂದಿಷ್ಟು ಸಮಯ ಮತ್ತು ಸಮುದಾಯಗಳ ಸಹಾಯ ಸಿಕ್ಕರೆ ಬಹುತೇಕರು ಪೂರ್ತಿ ಗುಣಮುಖರಾಗುತ್ತಾರೆ. ಕೋವಿಡ್ ನಂತಹ ಪ್ಯಾಂಡೆಮಿಕ್ ಗಳನ್ನುಅನುಭವಿಸಿದ ಕೆಲವರಿಗೆ  ಮಾತ್ರ ವೃತ್ತಿಪರರ ಸಹಾಯವಿಲ್ಲದೆ ಈ ಸಾವು-ನೋವುಗಳ ಮಹಾಪೂರದಿಂದ ಹೊರಬರಲು ಸಾಧ್ಯವಾಗುವುದಿಲ್ಲ.ಇಂತವರು ಆತಂಕ (anxiety disorders )ಅಥವಾ ಖಿನ್ನತೆ(depression) ಗಳಿಂದ ನರಳಬಲ್ಲರು. ಮದ್ಯದ ವ್ಯಸನಿ ( Alcohol addiction) ಗಳಾಗಬಹುದು. ಆದೃಷ್ಟಕ್ಕೆಪ್ಯಾಂಡೆಮಿಕ್ ಒಂದರ ನಂತರpost-traumatic stress disorder (PTSD)ಅತ್ಯಂತ ವಿರಳವಾಗಿ ದಾಖಲಾಗಿರುವ ವಿಚಾರ.

    ಒಂಟಿತನ, ವೃದ್ದಾಪ್ಯ, ಮಾನಸಿಕ ರೋಗಿಗಳು.

    ಒಬ್ಬರಿಂದ ಒಬ್ಬರು ದೂರವಿರಬೇಕಾದ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಈ ಕಾಲದಲ್ಲಿ ಮಾನಸಿಕ ಸ್ವಾಸ್ಥ್ಯ ಸದ್ದೇ ಇಲ್ಲದಂತೆ ನಲುಗಿಸುವುದು ಒಂಟಿಯಾಗಿ ಬದುಕುವವರನ್ನು, ಪ್ರೀತಿಸಲು ಮತ್ತೊಂದು ಜೀವ ಇಲ್ಲದವರನ್ನು, ಪ್ರೀತಿಗೆ ಸ್ಥಾನವೇ ಇಲ್ಲದೆ ಹೊಟ್ಟೆಯ ಪಾಡಿಗೆ ಪರದಾಡುವವರನ್ನು, ಈಗಾಗಲೇ ಹಲವು ಮಾನಸಿಕ ಮತ್ತು ದೈಹಿಕ ಖಾಯಿಲೆಗಳಿಂದ ಬಳಲುತ್ತಿರುವವರನ್ನು, ಬೇರೆ ಭಾಷೆ ಮಾತಾಡುವ ವಲಸಿಗರನ್ನು, ಈಗಾಗಲೇ ವ್ಯಸನಗಳಿಂದಲೋ ಅಥವಾ ಖಿನ್ನತೆಯಿಂದಲೋ ಬಳಲುತ್ತಿರುವವರನ್ನು. ನೆಲೆ, ಭದ್ರತೆ ಇಲ್ಲದೆ  ಬದುಕಿನಲ್ಲಿ ನಿರೀಕ್ಷೆಗಳನ್ನು ಕಳೆದುಕೊಂಡಿರುವವರನ್ನು, ಹುಟ್ಟಿನಿಂದಲೇ ಕಲಿಕೆಯ ಪೂರ್ಣ ಬೆಳವಣಿಗೆ ಇರದ ಜನರನ್ನು. ಇವರಲ್ಲಿ ಈಗಾಗಲೇ ಒತ್ತಡಗಳಿರುವ ಕಾರಣ ಪ್ಯಾಂಡೆಮಿಕ್ ಸುಲಭವಾಗಿ  ಎರಡನೇ ಒತ್ತಡವಾಗುತ್ತದೆ.  ತಮ್ಮ ಒತ್ತಡಗಳನ್ನು ಹೇಗೆ  ಹೇಳಿಕೊಳ್ಳಬೇಕೆಂದು ತಿಳಿಯದ, ಸಮಾಜದಲ್ಲಿ ಧ್ವನಿಯಿಲ್ಲದ ಇಂತಹವರಿಗೆ ಎಲ್ಲರಿಗಿಂತ ಹೆಚ್ಚಿನ ಸಹಾಯಗಳು ಬೇಕಾಗುತ್ತವೆ.

    ಮುಂದುವರೆದ ದೇಶಗಳಲ್ಲಿ ಇಂತಹ ಜನರ ಆರೋಗ್ಯದ ಬಗ್ಗೆ ತುರ್ತು ಸಂದರ್ಭಗಳಲ್ಲಿ ಪ್ರಾಮುಖ್ಯತೆಯನ್ನು ನೀಡುವ ಯತ್ನ ನಡೆಯುತ್ತದೆ. ಒಂಟಿತನ ಹೆಚ್ಚಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಒಂಟಿಯಾಗಿ ಬದುಕುತ್ತಿರುವ ವೃದ್ಧರಿಗೆ ಖಿನ್ನತೆ ತಗುಲದಂತೆ ಸಮುದಾಯಗಳು ಶ್ರಮಿಸುತ್ತವೆ. ಒಂಟಿತನದ ಅಸಹಾಯಕತೆಯಲ್ಲಿ ಬದುಕುವ ಇತರರ ಮಾನಸಿಕ ಆರೋಗ್ಯದ ಬಗ್ಗೆ ಸಾಧ್ಯವಿದ್ದಷ್ಟೂ ಗಮನಹರಿಸಲಾಗಿದೆ.

    ಮನೆಯಲ್ಲೇಇದ್ದು ಜನರ ಮಧ್ಯೆ ಒಂಟಿಯಾಗಿರುವ ವೃದ್ಧರೂ ಇದ್ದಾರೆ. ಅವರೆಲ್ಲ ಈ ಕಾಲದಲ್ಲಿ ಬೇಜಾರಿನ ಬವಣೆಯಲ್ಲಿ ಬೇಯುತ್ತಿದ್ದಾರೆ. ಸ್ನೇಹಿತರು, ವಾಕಿಂಗ್, ದೇವಸ್ಥಾನ, ಸಂಬಂಧಿಕರ ಮನೆ, ವ್ಯಾಪಾರ ಎನ್ನುವ ನೆಪದಲ್ಲಿ ದಿನಕ್ಕೆ ಒಂದು ಸಾರಿಯಾದರೂ ಓಡಾಡುತ್ತ ತಮ್ಮ ದೇಹದ ಆರೋಗ್ಯಕ್ಕೆ ಗಮನ ನೀಡಬೇಕಿದ್ದ ಈ ಹಿರಿಯರು ಮೂರು ತಿಂಗಳಿಂದ ಆತಂಕ, ಒಂಟಿತನ ಮತ್ತು ಬೇಜಾರಿನಲ್ಲಿ ಕಳೆಯುತ್ತಿದ್ದಾರೆ. ಇಂತವರು ಖಿನ್ನತೆಗೆ ಜಾರದಂತೆ ಮನೆಯವರು, ನೆರೆ ಹೊರೆಯವರು, ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು ನೋಡಿಕೊಳ್ಳಬೇಕಾದ ಆಅವಶ್ಯಕತೆಯಿದೆ. ದೂರವಾಣಿ ಕರೆಗಳ ಮೂಲಕ ಅವರ ಆಗು-ಹೋಗುಗಳನ್ನು ಪ್ರತಿ-ದಿನ ಕೇಳುವುದು ಲಾಕ್ ಡೌನ್ ಕಾಲದಲ್ಲಿ ಇನ್ನೂ ಅತ್ಯಗತ್ಯವಾಗಿದೆ.

    ಆತಂಕದಲ್ಲಿ ಬದುಕುತ್ತಿರುವ ಜನ

    ಆತಂಕದಲ್ಲಿರುವ ಜನರು ತಾವು ಆತಂಕದಲ್ಲಿದ್ದೇವೆ ಎಂದು ಹೇಳಲಾರರು. ಬಹುಬಾರಿ ಇದು ಅವರ ಅರಿವಿನಲ್ಲಿರುವುದೂ ಇಲ್ಲ. ಆದರೆ ಅವರ ಮಾತಿನಲ್ಲಿ ಭಯ, ಅಸಹಾಯಕತೆ, ತಪ್ಪಿತಸ್ಥ ಭಾವನೆ, ಆತಂಕ,”ಸೋಂಕು ತಗುಲಿಬಿಟ್ಟರೆ “ ಎಂಬ ಅತ್ಯಪಾರ ಕಳವಳ, ಬದುಕಿನ ಬಗ್ಗೆ ಇಲ್ಲದ ಭರವಸೆ, ವಿಶಾದ ತುಂಬಿರುತ್ತದೆ. ಅವರಲ್ಲಿ ತಮ್ಮ ಬಗ್ಗೆ ಗಮನ ಇಲ್ಲದಿರುವುದು, ಗಲಿಬಿಲಿ, ಕುಂದಿದ ಆತ್ಮ ವಿಶ್ವಾಸ, ಕಿರಿ-ಕಿರಿ, ಪ್ಯಾಂಡೆಮಿಕ್ ವಿಚಾರದಲ್ಲಿ ಸಿಕ್ಕಾ ಪಟ್ಟೆ ನಿಗಾ ವಹಿಸುವುದು ಇತ್ಯಾದಿ  ಲಕ್ಷಣಗಳು ಕಂಡು ಬರುತ್ತದೆ. ಇಂಥವರು ನಿದ್ರಾಹೀನತೆ, ಕೈ ಬೆವರುವುದು, ಹಸಿವಿಲ್ಲದಿರುವುದು ಇತ್ಯಾದಿ ದೂರುಗಳನ್ನು ಹೇಳುತ್ತಾರೆ.ಇವೆಲ್ಲ ಅವರ ಮಾನಸಿಕ ಲೋಕದಲ್ಲಿ ಆಗುವ ಏರು-ಪೇರನ್ನು ಹೇಳುತ್ತವೆ.ಭಾರತದ ಹಳ್ಳಿಗಳಲ್ಲಿ ಕೋವಿಡ್ ಕಡಿಮೆಯಿರುವುದು ವರದಾನವೇ ಸರಿ. ಇಲ್ಲದಿದ್ದಲ್ಲಿ ಮಾನಸಿಕ ಪ್ರಪಂಚದ ಸಮಸ್ಯೆಗಳು ಇನ್ನೂ ಹೆಚ್ಚಾಗಿರುತ್ತಿದ್ದವು.

    ದೇವರು, ಆಧ್ಯಾತ್ಮ, ಪಾರಮಾರ್ಥಿಕ ಚಿಂತನೆಗಳು ಕೂಡ  ಒಂಟಿತನದ ಅಸದಳ ಹಿಂಸೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿವೆಯೆನ್ನಬಹುದು.ಆದರೆ ಬೇರೊಬ್ಬ ಮನುಷ್ಯನ ಪ್ರೀತಿ, ಸಂಪರ್ಕ ಮತ್ತು ಸ್ಪರ್ಶಗಳು ಮಾನವರಾದ ನಮಗೆ ಅತ್ಯಗತ್ಯ. ಸ್ಪರ್ಶದಿಂದ ದೂರ ಉಳಿಯಬೇಕಿರುವ ಈ ಕಾಲದಲ್ಲಿ ಸಂಪರ್ಕ ಸೇತುಗಳಾಗಿ ಫೋನ್ ಮತ್ತು ವೀಡಿಯೋ ಕಾಲ್ ಗಳು ವರದಾನವಾಗಿವೆ. ಮನುಷ್ಯನ ವಯಸ್ಸು ಎಷ್ಟೇ ಇರಲಿ ಅವನ ಚಲನ ವಲನಕ್ಕೆ ಕಡಿವಾಣ ಬಿದ್ದರೆ ಆತ ಬೇಗುದಿಗೆ ಬೀಳುತ್ತಾನೆ. ಸಹನೆಯನ್ನು ಕಳೆದುಕೊಂಡು ಪ್ರಾಣವನ್ನೂ ಲೆಕ್ಕಿಸದೆ ಹೊರಬರುತ್ತಾನೆ. ಅವನ ಸ್ವಾತಂತ್ರ್ಯ ಅವನ ಸ್ವತ್ತು. ಇದೇ ಕಾರಣಕ್ಕೆ ಪ್ರಜೆಗಳ ಒಳಿತಿಗೇ ಆದರೂ ಸರಕಾರಗಳು ಅವರನ್ನು ಮನೆಯಲ್ಲೇ ಇರಿಸಲು ಹೆಣಗಬೇಕಾಗಿದೆ.

    ಮನಸ್ಸಾಮಾಜಿಕ ಸಂಭಾವಣೆ

    ಅರ್ಥಮಾಡಿಕೊಳ್ಳುವ, ಹೊಂದಾಣಿಕೊಂಡು ನಿಭಾಯಿಸುವ ಮನಸ್ಸಾಮಾಜಿಕ(Psycho social) ಸಂಭಾವಣೆಯ ಶಕ್ತಿ ಎಲ್ಲರಿಗೂ ಸಮನಾಗಿರುವುದಿಲ್ಲ. ಕಷ್ಟಗಳಿಂದ ಸಂಪೂರ್ಣ ಬಿಡುಗಡೆ ಹೊಂದಲು ಕೆಲವರು ಹೆಣಗುತ್ತಾರೆ. ಇವರ ಮೇಲೆ ಮಾನಸಿಕ ವೈಪರೀತ್ಯಗಳ ಪರಿಣಾಮ ಆಳವಾಗಿ ಆಗುತ್ತದೆ. ಮಿಕ್ಕವರು ಬದುಕಿನಲ್ಲಿ ಬರುವ ಅಡಚಣೆಯನ್ನೇ ಹಾರುಮಣೆಯನ್ನಾಗಿ ಮಾಡಿಕೊಂಡು ಒಂದಷ್ಟು ಗಟ್ಟಿಯಾಗುತ್ತಾರೆ. ಮುಂದಿನ ಸಂದರ್ಭಗಳಿಗೆ ತಯಾರಾಗುತ್ತಾರೆ.

    ವಲಸಿಗರು

    ಅವರವರ ಊರು,ರಾಜ್ಯ, ದೇಶದ ಜನರು ತಮ್ಮದೇ ಸ್ಥಳಗಳಲ್ಲಿದ್ದರೆ, ನಿವಾಸ ಹೊಂದಿದ್ದರೆ ಅದು ಅ ವರಿಗೆ ವರದಾನ.ಆದರೆ ಈ ಜಾಗತಿಕ ಯುಗದಲ್ಲಿ ವಿಶ್ವದ ಜನರು ಒಂದೆಡೆಯಿಂದ ಮತ್ತೊಂದು ಕಡೆ ಹೋಗಿ ಬದುಕುವುದು ಅತ್ಯಂತ ಸಾಮಾನ್ಯವಾದ ವಿಚಾರ. ಈ ವಲಸಿಗರ ಮತ್ತು ಅವೇ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಮಾನಸ ಪ್ರಪಂಚ ಅತ್ಯಂತ ಸೂಕ್ಷ್ಮವೂ, ಶಿಥಿಲವೂ ಆಗಿರುತ್ತದೆ. ಅಧೀರತೆಯೂ ಮನೆ ಮಾಡಿರುತ್ತದೆ. ಪ್ಯಾಂಡೆಮಿಕ್ ನಂತಹ  ವಿಶ್ವವ್ಯಾಪೀ ಸಮಸ್ಯೆಗಳು ಎದುರಾದಾಗ ತಮ್ಮನ್ನು ಮಿಕ್ಕ, ಸ್ಥಳೀಯರು, ಬಹುಸಂಖ್ಯಾತರು ಅವರನ್ನು ದೌರ್ಜನ್ಯಕ್ಕೆ ಒಳಪಡಿಸಿ ಮೂಲೆಗುಂಪಾಗಿಸುತ್ತಾರೆಂಬ ಅಳುಕು ಅವರಲ್ಲಿ ತುಂಬಿರುತ್ತದೆ. ಪರ ರಾಜ್ಯಗಳಲ್ಲಿ ಅಥವಾ ಪರ ಊರುಗಳಲ್ಲಿ ನೆಲೆಸಿದವರಿಗೂ ಇವೇ ಆತಂಕಗಳಿರುತ್ತವೆ. ಎಲ್ಲ ಬಗೆಯ ಸಂಚಾರ ವ್ಯವಸ್ಥೆಗಳು ನಿಂತೇ ಹೋದಾಗ ಈ ಆತಂಕ ಮತ್ತೂ ಹೆಚ್ಚಾಗುತ್ತದೆ. ಗೊತ್ತಿರುವ ಜಾಗ, ಜನರು, ತಮ್ಮದೇ ಮನೆಗಳಿಗೆ ತಲುಪಿದರೆ ಸಾಕು ಎನ್ನುವ ಅವರ ಮನಸ್ಥಿತಿ ಇತ್ತೀಚೆಗೆ ಎಲ್ಲ ವೈರುದ್ಯಗಳ ನಡುವೆಯೂ ಸಂಭವಿಸಿದ ಭಾರತದ ಮಹಾ ವಲಸೆಯಂತಹ ಘಟನೆಗಳಿಗೆ ಕಾರಣವಾಗುತ್ತದೆ.ಇಂತಹ ಸಮಯದಲ್ಲಿ ಅವರಿಗೆ ಇತರರಿಗಿಂತ ಒಂದು ಪಟ್ಟು ಹೆಚ್ಚೇ ಭರವಸೆಯನ್ನು ನೀಡಬೇಕಾಗುತ್ತದೆ.

    ಅವರಿಗೆ ಅತ್ಯಗತ್ಯವಾಗಿ ಬೇಕಾದ ಊಟ, ತಿಂಡಿ, ವಸತಿ, ಶೌಚ ಇತ್ಯಾದಿಗಳನ್ನು ಕಲ್ಪಿಸುವ ಅವಶ್ಯಕತೆಗಳ ಜೊತೆಗೆ ಅವರ ಮೂಲಭೂತ ಸ್ವಾತಂತ್ರ್ಯಗಳೇ ತುಂಡರಿಸಿದ ಭಾವನೆಗಳನ್ನು ನಿವಾರಿಸಿ ವಿಶ್ವಾಸ ತುಂಬಬೇಕಾಗುತ್ತದೆ. ಅವರ ಬುದ್ದಿವಂತಿಕೆಯನ್ನು ಪ್ರಶ್ನಿಸದೆ, ಟೀಕಿಸದೆ ಅವರದೇ ಆದ ನಂಬಿಕೆ, ಧರ್ಮ ಆಚರಣೆಗಳಿಗೂ ನಮ್ಮದೇ ಆಚರಣೆ ಮತ್ತು ನಂಬಿಕೆಗಳಿಗೆ ನೀಡುವಷ್ಟೇ ಗೌರವವನ್ನು ತೋರಿಸುವುದು ಅತ್ಯಗತ್ಯವಾಗುತ್ತದೆ.

    ನಾಗರಿಕ ಪ್ರಪಂಚದಲ್ಲಿ ಈ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲಾಗುತ್ತದೆ. ಉದಾಹರಣೆಗೆ ಯಹೂದಿಯೊಬ್ಬ ಇಂಗ್ಲೆಂಡಿನ ಆಸ್ಪತ್ರೆಯ ವಾರ್ಡಿನಲ್ಲಿ ಕೋವಿಡ್ ನಿಂದ ಸಾಯುತ್ತಿದ್ದು, ತನ್ನ ಧರ್ಮದ ಪ್ರಕಾರ ಬದುಕಿನ ಕೊನೆಯ ಪ್ರಾರ್ಥನೆ ಸಲ್ಲಿಸಬೇಕೆಂದು ಇಚ್ಚಿಸಿದಲ್ಲಿ ಆಸ್ಪತ್ರೆಯವರು ಸಾಯುವವನ ಜೀವದ ಘನತೆಗೆ ಬೆಲೆ ಕೊಡುತ್ತಾರೆ. ಆತ ಸಾಯುವ ಮುನ್ನ ತನ್ನ ನಂಬಿಕೆ, ಧರ್ಮದ ಪ್ರಕಾರ ಕೊನೆಯ ಪ್ರಾರ್ಥನೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಹಿಂದೂ, ಮುಸ್ಲಿಂ, ಯಹೂದಿ, ಸಿಕ್ಕರು, ಕ್ರಿಶ್ಚಿಯನ್ನರ ಪ್ರಕಾರವೇ ಅವರ ಅಂತಿಮ ಪ್ರಾರ್ಥನೆ ಮತ್ತು ಯಾತ್ರೆಗಳು ನಡೆದಿದೆ. ಇದರಿಂದ ಬದುಕುಳಿದ ಅವರ ಕುಟುಂಬಗಳಿಗೆ ಸಾವನ್ನು ನೆಮ್ಮದಿಯಾಗಿ ಒಪ್ಪಿಕೊಳ್ಳಲು ನೆರವಾಗಿದೆ.ಮಾನಸಿಕ ಆಘಾತಗಳು, ಬರೆಗಳು, ಘರ್ಷಣೆಗಳು ಕಡಿಮೆಯಾಗಿವೆ.

    ಒಬ್ಬ ವಲಸಿಗ, ಅಲ್ಪ ಸಂಖ್ಯಾತ, ಹಿಂದೂ ಧರ್ಮದವಳಾಗಿ ವಿದೇಶದ ಈ ಪ್ರಪಂಚದಲ್ಲಿ ಬದುಕುವ ನನ್ನಂತವರಿಗೆ ಇದು ಅತ್ಯಂತ ಮಾನವೀಯ ವಿಚಾರವಾಗಿ ಕಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.ಇಲ್ಲಿ ಕುಳಿತು ನೋಡುವ ನನ್ನ ಕಣ್ಣುಗಳಿಗೆ ಈ ಪ್ಯಾಂಡೆಮಿಕ್ ನ ಸಮಯದಲ್ಲಿಯೂ ಧಾರ್ಮಿಕ ನಂಬಿಕೆಗಳ ಹೆಸರಲ್ಲಿ ಭಾರತದಲ್ಲಿ ನಡೆದ ಕೆಲವುಅನಗತ್ಯ ದಾಳಿಗಳು ಅಮಾನವೀಯವೆನಿಸುತ್ತದೆ. ಅವುಗಳು ಮುರಿದಿರುವ ಹಲವು ನಂಬಿಕೆಯ ಸೇತುವೆಗಳುಮಾನಸಿಕವಾಗಿ ಆಳ ಅಂತರವನ್ನು ಸೃಷ್ಟಿಸುವ ಬಗ್ಗೆ ಖೇದವೆನಿಸುತ್ತದೆ. ಆದರೆ ಜಾತಿ,ಧರ್ಮ, ಇನ್ನಿತರ ಭೇದಗಳನ್ನು ನೋಡದೆ ಎಲ್ಲರ ಹಿತಕ್ಕಾಗಿ ದುಡಿದ, ದಾನಮಾಡಿದ, ಶ್ರಮಪಟ್ಟ ಅಸಂಖ್ಯಾತ ದೊಡ್ಡ ಮನಸ್ಸಿನ ನಾಗರಿಕರನ್ನು ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲಿ ನೋಡುವಾಗ ಮನುಷ್ಯನ ಮಾನಸಿಕ ಪ್ರಪಂಚದ ಸ್ವಾಸ್ಥ್ಯ ರಾಜಕೀಯವನ್ನು,ಧಾರ್ಮಿಕತೆಯನ್ನು ಮೀರಿದ ಉದಾತ್ತ ಗುಣದಿಂದ ತುಂಬಿರುವುದರ ಅರಿವಾಗಿ ಹಿತವೆನ್ನಿಸುತ್ತದೆ.

    ಮಾನಸಿಕ ಸಹಾಯ ಬೇಕಿರುವುದು ಬರೇ ಸಂತ್ರಸ್ತರಿಗೆ ಮಾತ್ರವಲ್ಲ. ಖಿನ್ನತೆ, ಬುದ್ದಿ ಮಾಂದ್ಯತೆ, ಅಂಗವಿಕಲತೆ, ವೃದ್ಧಪ್ಯ, ಅನಾಥರು, ಒಬ್ಬಂಟಿ ಪೋಷಕರಿಗೆ ಎಲ್ಲರಿಗೂ ಬೇಕು. ಜೊತೆಗೆ ಕೋವಿಡ್ ಸಮಸ್ಯೆಯನ್ನು ಮಿತಗೊಳಿಸಲು ಶ್ರಮಿಸುತ್ತಿರುವ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ,ಅಸಂಖ್ಯಾತ ಶವಗಳನ್ನು ಹೂಳುತ್ತಿರುವವರಿಗೆ, ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿರುವವರಿಗೂಬೇಕು.

    ಈ ಕಂಟಕದ ಸಮಯದಲ್ಲಿ ಬದುಕುಳಿಯುವ ತಲೆಮಾರುಗಳಲ್ಲಿ ಹಲವು ಬಗೆಯ ಮಾನಸಿಕ ಕಲೆಗಳು ಸಾಯುವವರೆಗೆ ಉಳಿಯುತ್ತವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಪ್ರತಿಯೊಬ್ಬರೂ ಇನ್ನೊಬ್ಬರ ಒಂಟಿತನಕ್ಕೋ, ಸಂಕಟಗಳಿಗೋ, ಮಾನಸಿಕವಾಗಿ ಸಹಾಯಮಾಡುತ್ತ ಬೆಂಬಲವಾಗಿ ನಿಲ್ಲುವ ಅವಕಾಶವನ್ನಂತೂ ಕಾಣುತ್ತಿದ್ದೇವೆ. ಅವನ್ನು ಉಪಯೋಗಿಸಿಕೊಂಡು ಕೋವಿಡ್ ನಿಂದಷ್ಟೇ ಅಲ್ಲದೆ ಅದರಿಂದ ಉಂಟಾಗುವ ಹಲವು ಮಾನಸಿಕ ಹೊಡೆತಗಳಿಂದ ಬಳಲುವ ದುರ್ಬಲ ಜೀವಗಳನ್ನು ರಕ್ಷಿಸುವ ಹೊಣೆ ಎಲ್ಲ ದೇಶದ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಜನಸಾಮಾನ್ಯರಾದ ನಮ್ಮ ಮೇಲಿದೆ. ಕೋವಿಡ್ ನಿಧಾನಗೊಂಡ ನಂತರವೂ ಆ ಹೊಣೆಭಿನ್ನ ರೂಪಗಳಲ್ಲಿ ಇನ್ನೂ ಬಹುಕಾಲ ಮುಂದುವರೆಯಬೇಕಿದೆ.

    ಚಿತ್ರ ಕೃಪೆ : Lisa Fotios from Pexels

    ಹೂಡುವ ಮೊದಲು ಕಂಪೆನಿಗಳ ಪೂರ್ವಾಪರ ಗೊತ್ತಿರಲಿ

    ಕೋವಿಡ್‌ 19 ರ ಈ ದಿನಗಳಲ್ಲಿ ಎಲ್ಲಾ ವ್ಯವಹಾರಗಳು ಸೊರಗಿ ಹೋಗುತ್ತಿವೆ. ವೃತ್ತಿಗಳಾಗಲಿ, ವೃತ್ತಿಪರರಾಗಲಿ, ದಿನನಿತ್ಯದ ಕಾರ್ಯಸ್ಥರಾಗಲಿ ಎಲ್ಲರೂ ತೊಂದರಗೊಳಪಟ್ಟಿರುವುದು ಜಗಜ್ಜಾಹಿರವಾದ ಅಂಶ. ಈ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಲಭ್ಯವಿರುವ ವಲಯ ಎಂದರೆ ʼ ಷೇರುಪೇಟೆ.
    ಷೇರುಪೇಟೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಅಸ್ಪರ್ಷತಾ ಭಾವನೆ ಹಾಗೂ ಭಯ. ಇದಕ್ಕೆ ಮುಖ್ಯ ಕಾರಣ ಷೇರುಪೇಟೆಯ ಪ್ರಮುಖ ಗುಣ ಊಹೆಗೂ, ಕಲ್ಪನೆಗೂ ಸಿಗದಿರುವುದಾಗಿದೆ. ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಬೇಕಾದರೆ ಕಲ್ಪನಾ ಲೋಕದ ವಿಶ್ಲೇಷಣೆಗಳಿಂದ ಹೊರಬಂದು ಗುಣಮಟ್ಟದ ಕಂಪನಿಗಳ ಬೆಲೆ ಕುಸಿತದಲ್ಲಿದ್ದಾಗ ಅವುಗಳ ಅರ್ಹತೆಯಾಧಾರಿತಗಳನ್ನು ಮಾಪನ ಮಾಡಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಅಪಾಯದ ಮಟ್ಟವನ್ನು ಮಿತಗೊಳಿಸುತ್ತದೆ.

    ಈ ವಲಯದ ಮತ್ತೊಂದು ವಿಶಿಷ್ಟತೆ ಎಂದರೆ ಇಲ್ಲಿ ಬಿದ್ದವರಿಗೊಂದು ಕಲ್ಲು- ಗೆದ್ದವರಿಗೊಂದು ಹಾರ ಎಂಬಂತೆ ಒಂದು ಉತ್ತಮ ಕಂಪನಿ ಷೇರಿನ ಬೆಲೆ ಕುಸಿತದಲ್ಲಿದ್ದಾಗ ವಿವಿಧ ರೀತಿಯ ನಕಾರಾತ್ಮಕ ಚಿಂತನೆಗಳು ವಿಜೃಂಭಿಸುತ್ತವೆ. ಅದೇ ಪೇಟೆ ಏರಿಕೆಯಲ್ಲಿದ್ದಾಗ ಕೊಳ್ಳುವ ಕಾತುರ ಹೆಚ್ಚು. ಇದಕ್ಕೆ ಹಲವಾರು ವಿಶ್ಲೇಷಣೆಗಳು ಪೂರಕ ಪಾತ್ರ ವಹಿಸುತ್ತವೆ. ಈ ರೀತಿಯ ಚಿಂತನೆಗಳಿಂದ ಹೊರಬಂದು ವಿಶ್ಲೇಷಣೆಗಳನ್ನು ಅರ್ಹತೆಯಾಧಾರದ ಮೇಲೆ ನಿರ್ಧರಿಸುವ ಗುಣ ಬೆಳೆಸಿಕೊಂಡಲ್ಲಿ ಷೇರುಪೇಟೆ ಒದಗಿಸುತ್ತದೆ ಸಂಪತ್ತಿನ ಮೂಟೆ.

    ಇತ್ತೀಚೆಗೆ ಕೆಳಮಧ್ಯಮ ಷೇರುಗಳು ಗರಿಷ್ಟಮಟ್ಟದ ಅವರಣ ಮಿತಿ ತಲುಪಿ ಹೂಡಿಕೆದಾರರನ್ನು ಆಕರ್ಷಿಸಿ, ಪ್ರೇರೇಪಿಸುವ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಇಂತಹ ಬೆಳವಣಿಗೆಗಳಿಗೆ ಒಲವು ತೋರದೆ ಮಾನಸಿಕ ಚಿಂತನೆಗಳಿಗೆ ಅವಕಾಶ ನೀಡಿ, ಅರ್ಹತೆಯಾಧಾರಿತ, ಸರಿ-ತಪ್ಪುಗಳನ್ನು ನಿರ್ಧರಿಸುವ ಗುಣ ಬೆಳೆಸಿಕೊಳ್ಳುವುದು ಯಶಸ್ಸಿನ ಸಮೀಪಕ್ಕೆ ತಲುಪಿಸುತ್ತದೆ.

    ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌ ಕಂಪನಿ ಷೇರುಗಳಲ್ಲಿ ವಹಿವಾಟು ನಡೆಸುವಾಗ ಕಂಪನಿಗಳ ಘನತೆ, ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ವಿವಿಧ ಕಾರಣಗಳಿಂದ ಪ್ರೇರಣೆಪಡೆದು ಗರಿಷ್ಠ ಆವರಣ ಮಿತಿ ತಲುಪಿದ ರಿಲಯನ್ಸ್‌ ಇನ್ ಫ್ರಾ, ರಿಲಯನ್ಸ್ ಕ್ಯಾಪಿಟಲ್‌, ರಿಲಯನ್ಸ್‌ ಹೋಂ , ಸಿಂಟೆಕ್ಸ್‌, ಬಾಂಬೆ ರೆಯಾನ್ ನಂತಹ ಕಂಪನಿಗಳ ಬಗ್ಗೆ ಗಮನಿಸುವುದರ ಜೊತೆಗೆ ಸಾಧನೆ ಮಾಡುತ್ತಿರುವ ಸ್ಮಾಲ್ ಕ್ಯಾಪ್ ಕಂಪೆನಿಗಳ ಬಗ್ಗೆಯೂ ಗಮನಿಸಬಹುದು.

    ಉದಾಹರಣೆಗೆ ಕ್ಲಾರಿಯಂಟ್‌ ಕೆಮಿಕಲ್ಸ್‌ ಲಿಮಿಟೆಡ್‌ ಕಂಪನಿ. ಇದು 1958 ರಿಂದ ಲೀಸ್ಟಿಂಗ್‌ ಆಗಿರುವ ಕಂಪನಿ. ಸ್ಪೆಷಾಲಿಟಿ ಕೆಮಿಕಲ್ಸ್‌ ವಲಯದಲ್ಲಿದೆ. ಇದು ಆಕರ್ಷಕ ಡಿವಿಡೆಂಡ್‌ ಜೊತೆಗೆ ಆಂತರಿಕವಾಗಿಯೂ ಉತ್ತಮ ಸಾಧನೆ ಪ್ರದರ್ಶಿಸುತ್ತಿದೆ. ಇದು ಮಾರ್ಚ್‌ ಅಂತ್ಯದ ವರ್ಷದಲ್ಲಿ ರೂ.11 ರ ಡಿವಿಡೆಂಡ್ ಪ್ರಕಟಿಸಿದೆ. ಇದಕ್ಕೆ ಆಗಸ್ಟ್‌ 10 ನಿಗದಿತ ದಿನವಾಗಿದೆ. ಈ ಮಧ್ಯೆ ಈ ಕಂಪನಿ ಷೇರು ಬುಧವಾರದಂದು ಒಂದೇ ದಿನ 65 ರಷ್ಟು ಏರಿಕೆ ಕಂಡಿದೆ. ಒಂದು ವಾರದಲ್ಲಿ ರೂ.107 ಕ್ಕೂ ಹೆಚ್ಚಿನ ಏರಿಕೆ ಪಡೆರುವ ಈ ಷೇರು ಒಂದು ತಿಂಗಳಲ್ಲಿ ರೂ.136 ರಷ್ಟು ಏರಿಕೆ ಕಂಡಿದೆ.

    ಮಾರ್ಚ್‌ ನ ಕುಸಿತದ ಸಮಯದಲ್ಲಿ ರೂ.192 ರ ಸಮೀಪಕ್ಕೆ ಕುಸಿದಿದ್ದ ಈ ಷೇರಿನ ಬೆಲೆ ನಿನ್ನೆ ರೂ.477 ಕ್ಕೆ ಜಿಗಿತ ಕಂಡಿತ್ತು. ಆ ಜಿಗಿತ ಇಂದೂ ಮುಂದುವರೆದು 495 ತಲುಪಿ ಮತ್ತೆ 477 ರ ಆಸು ಪಾಸಿಗೆ ಇಳಿದಿದೆ. ಇದು ಕಂಪನಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದೇ 4 ರಂದು ಸ್ಪೆಷಲ್‌ ಡಿವಿಡೆಂಡ್‌ ಘೋಷಿಸಲು ಆಡಳಿತ ಮಂಡಳಿ ಸಭೆಯು ಪರಿಶೀಲಿಸಲಿದೆ ಎಂಬ ಸುದ್ದಿ ಈ ದಿಢೀರ್ ಏರಿಕೆಗೆ ಕಾರಣವಾಯಿತು.

    Value pick – profit book ಸೂತ್ರದಿಂದ ಘನತೆಯುಳ್ಳ ಕಂಪನಿಗಳನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರ

    ಜಗತ್ತಿನಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದೆ. ವಿರುದ್ಧದ ಹೋರಾಟದಲ್ಲಿ ನಾಡಿನ ವೈದ್ಯ ಪಡೆ ಹಗಲೂ ರಾತ್ರಿ ದುಡಿಯುತ್ತಿದೆ. ಇಂದು ವೈದ್ಯರ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಸರಾಂತ ಆಯುರ್ವೇದ ತಜ್ಞ ಡಾ. ಬಿ. ಗುರುಬಸವರಾಜ ಅವರು ಕನ್ನಡ ಪ್ರೆಸ್.ಕಾಮ್ ನ ಪಾಡ್ಕಾಸ್ಟ್ ನಲ್ಲಿ ಭಾಗವಹಿಸಿದ್ದಾರೆ. ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ನಡೆಸಿಕೊಟ್ಟ ಪಾಡ್ಕಾಸ್ಟ್ ನಲ್ಲಿ ಕೊರೊನಾ ತಡೆಗೆ ಆಯುರ್ವೇದದಲ್ಲಿರುವ ಪರಿಹಾರದ ಬಗ್ಗೆ ಡಾ. ಗುರುಬಸವರಾಜ ಮಾತಾಡಿದ್ದಾರೆ. ಆಲಿಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಸುರಕ್ಷಿತವಾಗಿರಿ.

    ಶಾಂತಲಾದಲ್ಲಿ ಇನ್ನು ಕೇಳಿಸದ ನಮೋ ವೆಂಕಟೇಶ

    ಇತ್ತೀಚಿಗೆ, ಮೈಸೂರಿಗರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದ ಪದ್ಮ(ಪ್ರಭುದೇವ) ಮತ್ತು ಶಾಂತಲಾ ಚಿತ್ರಮಂದಿರಗಳನ್ನು ಮುಚ್ಚುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ಆಘಾತವಾಯಿತು. ನನ್ನ ಮನಃಪಟಲದಲ್ಲಿ ಸಾಲು ಸಾಲು ನೆನಪುಗಳ ಮೆರವಣಿಗೆ.
    ಈ ಎರಡು ಚಿತ್ರಮಂದಿರಗಳ ಜೊತೆಗಿನ ನನ್ನ ನೆನಪುಗಳು ಹಾಗೂ ಅನುಭವಗಳು ಅಚ್ಚಳಿಯದೆ ಉಳಿದಿವೆ. ಇಂದು ವಿಶೇಷವಾಗಿ ಶಾಂತಲ ಚಿತ್ರಮಂದಿರದ ಕುರಿತು ಅನಿಸಿಕೆ, ನೆನಪುಗಳನ್ನು ಹಂಚಿಕೊಳ್ಳಬಯಸುವೆ.

    ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಡಬ್ಬಲ್ ರೋಡ್ ಗೆ ತಾಕಿದಂತಿರುವ ಶಾಂತಲ ಚಿತ್ರಮಂದಿರ ಬಹಳ ಹೆಸರು ವಾಸಿ. ಹಿಂದೆ ಓಂಕಾರ್ ಸೌಂಡ್ ಸಿಸ್ಟಮ್, ಎದುರುಗಡೆ ಸುಬ್ಬರಾಯ ಕೆರೆ.. ಸುಬ್ಬರಾಯ ಕೆರೆಯ ಈಜುಕೊಳ, ದಸರಾ ಸಮಯದ ಕೊಕ್ಕೋ ಮತ್ತು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗಳು.. ಶಾಂತಲಾ ಒಟ್ಟಿಗೆ ಮೇಳೈಸಿವೆ. ಈ ಚಿತ್ರಮಂದಿರದ ವಿಶೇಷ ಅಂದ್ರೆ ಇಲ್ಲಿ ಯಾವಾಗಲೂ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡ್ತಾ ಇದ್ದದ್ದು. ಪ್ರಶಸ್ತಿ ವಿಜೇತ ಗ್ರಹಣ ಇಲ್ಲಿಯೇ ತೆರೆ ಕಂಡಿದ್ದು ಮತ್ತೆ ಆ ಸಿನಿಮಾ ಇಲ್ಲಿ ನೋಡಿದ್ದು ನನ್ನ ಅತ್ಯಂತ ಹಳೆಯ ನೆನಪು. ಶಾಂತಲಾ ಚಿತ್ರಮಂದಿರದ ಆಕರ್ಷಣೆ ಎಂದರೆ ಅದರ ಮ್ಯಾನೇಜರ್.. ಗಿರಿಜಾ ಮೀಸೆಯ ಆ ವ್ಯಕ್ತಿ ಪೊಲೀಸ್ ಅಲ್ಲದಿದ್ದರೂ ಪೊಲೀಸರಿಗಿಂತ ಕಟ್ಟುನಿಟ್ಟು.. ಶಾಂತಲ ಚಿತ್ರಮಂದಿರದಲ್ಲಿ ಎಂದಿಗೂ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಆಗುತ್ತಿರಲಿಲ್ಲ. ಒಬ್ಬರಿಗೆ ಒಂದೇ ಟಿಕೆಟ್ ನೀಡುವ ಪರಿಪಾಠವಿತ್ತು. ಡಾ. ರಾಜಕುಮಾರ್ ಅಭಿನಯದ ಹಲವಾರು ಸಿನಿಮಾಗಳನ್ನು ನಾನು ಅಲ್ಲಿಯೇ ನೋಡಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೊಸಬೆಳಕು, ಕೆರಳಿದಸಿಂಹ ಇತ್ಯಾದಿ. ದಿನವಹಿ ಮೂರು ಆಟ ಕೆರಳಿದ ಸಿಂಹ ಇದ್ದಾಗ ಬೆಳಗಿನ ಆಟ ಸಾಹಸಸಿಂಹ. ಡಾ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ರ ಈ ಚಿತ್ರಗಳಿಗೆ ಸ್ಟಾರ್ ಕಟ್ಟಿದವರು, ಮೆರವಣಿಗೆ ತಂದವರು, ಟಿಕೆಟ್ ಗಾಗಿ ಒದೆ ತಿಂದವರು.. ಇವರನ್ನೆಲ್ಲ ಕಂಡಾಗ ಕಣ್ಣಿಗೆ ಹಬ್ಬ. ರಾಜಕುಮಾರ್ ಚಿತ್ರಕ್ಕೆ ನಗರದ ಬೇರೆ ಬೇರೆ ಕಾರಣಗಳು ಅಭಿಮಾನಿ ಸಂಘದವರು ಸ್ಟಾರ್ ಮೆರವಣಿಗೆ, ಪಟಾಕಿ ಸದ್ದು, ಬ್ಯಾಂಡ್ ಸೆಟ್, ಕುಣಿತಗಳ ಸಮೇತ ಬರುತ್ತಿದ್ದುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.

    ದಸರಾ ಚಲನಚಿತ್ರೋತ್ಸವದಲ್ಲಿ ಒಂದು ರೂಪಾಯಿ, ಎರಡು ರೂಪಾಯಿಗೆ ದಿನಕ್ಕೊಂದು ಪ್ರಖ್ಯಾತ ಚಿತ್ರಗಳ ಪ್ರದರ್ಶನ ನಡೆಯುತ್ತಿದ್ದಾಗ ಮುಗಿಬಿದ್ದು ನೋಡುತ್ತಿದ್ದೆವು. ಶಿವರಾತ್ರಿಯ ತಡರಾತ್ರಿ ಶೋ ಕೂಡಾ ಇಲ್ಲಿ ನಡೆಯುತ್ತಿತ್ತು. ಇವೆಲ್ಲಾ ನೆನಪುಗಳು ವಿಶಿಷ್ಠ.

    ಯಾವುದೇ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಬೇರೆಲ್ಲಾ ಕಡೆ ಇದ್ದಾಗಲೂ ಶಾಂತಲಾದಲ್ಲಿ ಇರಲಿಲ್ಲ. ಪ್ರತಿ ಪ್ರದರ್ಶನಕ್ಕೂ ಒಂದರ್ಧ ಗಂಟೆ ಮೊದಲು ಗೇಟನ್ನು ತೆಗೆದು ಒಳಗೆ ಬಿಡುತ್ತಿದ್ದರು ಅದು ಕೂಡ ಒಂದೇ ಸಾಲಿನಲ್ಲಿ ನಿಲ್ಲಬೇಕೆಂಬ ಕಟ್ಟಳೆ. ಎರಡನೇ ಸಾಲು ರೂಪುಗೊಂಡರೆ ಹೊರಗೆ ಎಳೆದು ಹಾಕುತ್ತಿದ್ದರು. ಚಿತ್ರಮಂದಿರದ ಹೊರಗಿನ ಗದ್ದಲ ಹೇಗೆ ಇದ್ದರೂ ಒಳಗೆ ಮಾತ್ರ ಶಿಸ್ತು ತುಂಬಿತ್ತು. ಇದಕ್ಕೆ ಮುಖ್ಯ ಕಾರಣವೇ ಅಲ್ಲಿನ ಪೊದೆ ಮೀಸೆ ಮ್ಯಾನೇಜರ್.

    ಶಾಂತಲಾ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಪ್ರದರ್ಶನವಾಗುವ ಮೊದಲು ತೆರೆಮೇಲೆ ಏಳುವಾಗ ಘಂಟಸಾಲ ಅವರು ಹಾಡಿದ್ದ ತೆಲುಗಿನ ನಮೋ ವೆಂಕಟೇಶ ಹಾಡು ಹಾಕುವುದು ವಾಡಿಕೆ. ಸಿನಿಮಾ ಆರಂಭವಾಯಿತು ಎಂಬುದಕ್ಕೆ ನಾವೆಲ್ಲ ಬಳಸುತ್ತಿದ್ದುದ್ದೇ ನಮೋ ವೆಂಕಟೇಶ ಶುರುವಾಯಿತು ಎಂಬ ಮಾತನ್ನು.

    ಇಲ್ಲಿ ಅಂಬರೀಷ್ ಅಭಿನಯದ ಅಂತ ಚಿತ್ರ ಬಿಡುಗಡೆಯಾಗಿದ್ದು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಮೊದಲ ಮೂರು ದಿನ ಬಹುತೇಕ ಖಾಲಿ ಇದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದೆ. ಆಗಿನ್ನೂ ಹಲವು ದೃಶ್ಯಗಳು ಕತ್ತರಿ ಪ್ರಯೋಗಕ್ಕೆ ಒಳಗಾಗಿರಲಿಲ್ಲ. ಮೂರನೆಯ ದಿನದಿಂದ ತನ್ನ ಹಸಿಹಸಿ ದೃಶ್ಯಗಳಿಂದ ಇದ್ದಕ್ಕಿದ್ದಂತೆ ಜನಪ್ರಿಯತೆ ಗಳಿಸಿದ ಚಿತ್ರದ ಕೆಲವು ದೃಶ್ಯಗಳಿಗೆಗಳಿಗೆ ಕತ್ತರಿ ಪ್ರಯೋಗವಾಗಿದ್ದು ಜನರಲ್ಲಿ ಕುತೂಹಲ ಹೆಚ್ಚಿಸಿ ಹಿಂದೆಂದೂ ಕಾಣದಷ್ಟು ಜನಸಂದಣಿ ಉಂಟಾಗಿತ್ತು.. ಜನರ ಸರತಿ ಸಾಲು ಚಿತ್ರಮಂದಿರದ ಹಿಂದಿನ ರಸ್ತೆಯನ್ನು ದಾಟಿ ಎಣ್ಣೆ ಗಾಣದವರೆಗೂ ಇರುತ್ತಿದ್ದುದನ್ನು ನೋಡಿ ನಮಗೆ ಒಳಗೊಳಗೆ ಪುಳಕ. ಇಷ್ಟು ಜನ ನೋಡಬೇಕೆಂದು ಒದ್ದಾಡುತ್ತಿರುವ ಚಿತ್ರವನ್ನು ಎಲ್ಲರಿಗಿಂತ ಮೊದಲು ಆರಾಮಾಗಿ ನೋಡಿದ್ದೇವೆ ಅಂತ ಜಂಬ ಪಡುತ್ತಿದ್ದೆವು.ವಿಷ್ಣುವರ್ಧನ್ ಅಭಿನಯದ ಅಡಿಮೈ ಚಂಗಲ್ ಎಂಬ ಪರಭಾಷಾ ಚಿತ್ರವನ್ನು ಕೂಡ ಇಲ್ಲಿ ಬೆಳಗಿನ ಆಟದಲ್ಲಿ ನೋಡಿದ ನೆನಪಿದೆ.

    ಚಿತ್ರಮಂದಿರ ಮನಸ್ಸಿಗೆ ಎಷ್ಟು ಹತ್ತಿರವಾಗಿತ್ತೋ ಅಷ್ಟೇ ಅದನ್ನು ಸಿಹಿ ಮಾಡಿದ್ದು ಎದುರಿನ ಪಾನಿಪುರಿ ಗಾಡಿ, ಪಕ್ಕದ ಸಣ್ಣ ಹೋಟೆಲ್, ಸಮೀಪದ ಜ್ಯೂಸ್ ಅಂಗಡಿಗಳು..

    ಒಟ್ಟಿನಲ್ಲಿ, ನನ್ನ ಬಾಲ್ಯದ ಹಲವು ವರ್ಷಗಳ ಕಾಲದ ಅವಧಿಯಲ್ಲಿ ಮರೆಯಲಾಗದ ನೆನಪುಗಳನ್ನು ಮನದಲ್ಲಿ ಅಚ್ಚು ಹಾಕಿದ ಶಾಂತಲ ಚಿತ್ರಮಂದಿರ ಇದೀಗ ಶಾಶ್ವತವಾಗಿ ಮುಚ್ಚುತ್ತಿರುವುದು ನೋವಿನ ಸಂಗತಿ. ಶಾಂತಲ ಚಿತ್ರಮಂದಿರ ಮೈಸೂರಿಗರ ಮನಗಳಲ್ಲಿ ಸದಾ ಉಳಿಯುತ್ತದೆ. ಮತ್ತೊಮ್ಮೆ ಅಲ್ಲಿನ ತೆರೆ ಮೇಲೆ ಏಳಬಹುದು, ಮತ್ತೊಮ್ಮೆ ನಮೋ ವೆಂಕಟೇಶ ಕೇಳಿಬರಬಹುದು ಎಂಬ ದೂರದ ಆಸೆ ನಮ್ಮೆಲ್ಲರ ಮನದಲ್ಲಿ ಸದಾ ಹಸಿರು.

    ಬೆಂಗಳೂರು ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಅನೇಕ ಥಿಯೇಟರ್ ಗಳು ಬಂದ್ ಆಗಿವೆ.ಅಲ್ಲದೆ ಕರೋನಾ ಕಾರಣದಿಂದ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಚಿಂತೆ ಬೇಡ. ಅಮೆಜಾನ್ ಪ್ರೈಮ್ ಸದಸ್ಯರಾದರೆ ಕನ್ನಡ ಸೇರಿದಂತೆ ವಿಶ್ವದ ಸಿನಿಮಾ ಲೋಕವೇ ನಿಮ್ಮ ಮನೆಯಲ್ಲಿ ತೆರೆದುಕೊಳ್ಳುತ್ತದೆ ಈ ಕೆಳಗಿನ ಲಿಂಕ್ ಒತ್ತಿ ಅಮೆಜಾನ್ ಪ್ರೈಮ್ ವಿಡಿಯೋ ಬಳಗ ಸೇರಿ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ

    ಇಂದಿನ ದಿನಗಳಲ್ಲಿ ಷೇರುಪೇಟೆಯ ಚಟುವಟಿಕೆ ಹೇಗಿದೆ ಎಂದರೆ ಯಾವುದೇ ವಿಧದಲ್ಲಿ ಸಮೀಕರಿಸಲು ಸಾಧ್ಯವಾಗದ ರೀತಿಯಲ್ಲಿರುತ್ತದೆ. ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ಪ್ರಮುಖ ವಿಮಾ ಕಂಪನಿಗಳಾದ ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಮತ್ತು ಎಚ್ ಡಿ ಎಫ್ ಸಿ ಲೈಫ್ ಕಂಪೆನಿಗಳು ನ್ಯಾಶನಲ್‌ ಸ್ಟಾಕ್‌ ಎಕ್ಸ್ ಚೇಂಜ್‌ ನ ನಿಫ್ಟಿ ಯಲ್ಲಿ ಸೇರುವ ಸಾಧ್ಯತೆ ಕಂಡು ಬರುತ್ತಾ ಇದೆ. ಹೀಗೆಂದ ಮಾತ್ರಕ್ಕೆ ಈ ವಿಮಾ ಕಂಪನಿಗಳ ಷೇರುಗಳು ಹೆಚ್ಚಿನ ಅಭಿವೃದ್ದಿಯನ್ನು ಕಾಣುತ್ತವೆ ಎಂದು ನಿರ್ಧರಿಸುವುದು ಸರಿಯಲ್ಲ. ಇದನ್ನು ದೃಢೀಕರಿಸಲು ಈ ಕೆಳಗಿನ ಉದಾಹರಣೆಯತ್ತ ಕಣ್‌ ಹಾಯಿಸಿರಿ.

    2017 ರ ನವೆಂಬರ್‌ ನಲ್ಲಿ ಪ್ರತಿ ಷೇರಿಗೆ ರೂ.800 ರಂತೆ ಆರಂಭಿಕ ಷೇರು ವಿತರಣೆಯನ್ನು ಮಾಡಿದ ಸಾರ್ವಜನಿಕ ವಲಯದ ನ್ಯೂ ಇಂಡಿಯಾ ಅಶುರೆನ್ಸ್ ಕಂಪೆನಿ ಲಿಮಿಟೆಡ್ ಅ ವರ್ಷ ರೂ.8.75 ನ್ನು ಡಿವಿಡೆಂಡ್‌ ಆಗಿ ವಿತರಿಸಿತು. 2018 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರನ್ನು ವಿತರಿಸಿ, ಹೂಡಿಕೆಯ ಮೊತ್ತವನ್ನು ರೂ.400 ಕ್ಕೆ ಇಳಿಸಿತು. ಹಿಂದಿನ ವರ್ಷ ಪ್ರತಿ ಷೇರಿಗೆ ರೂ.1.50 ಯಂತೆ ಡಿವಿಡೆಂಡ್‌ ವಿತರಿಸಿದೆ. ಆದರೆ ಮಾರ್ಚ್‌ ನಲ್ಲಿ ಪೇಟೆ ಕಂಡ ಭಾರಿ ಕುಸಿತದ ಕಾರಣ ಷೇರಿನ ಬೆಲೆ ರೂ.75 ಕ್ಕೆ ಜಾರಿ ಇಂದು ರೂ.116 ರ ಸಮೀಪವಿದೆ. ನಿನ್ನೆ ಕಂಪನಿಯು ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿತು. ಅದರಂತೆ ಕಂಪನಿಯ ಲಾಭ ಗಳಿಕೆ ಹೆಚ್ಚು ಕುಸಿತ ಕಂಡಿದ್ದು ವಾರ್ಷಿಕ ಲಾಭವು ಹಿಂದಿನ ವರ್ಷದ ರೂ.483.04 ಕೋಟಿಗೆ ಬದಲಾಗಿ ಈ ವರ್ಷ ರೂ.126.64ಕೋಟಿ ಗೆ ಇಳಿದಿದೆ. ಲಾಭ ಗಳಿಕೆ ಭಾರಿ ಇಳಿಕೆಯ ಕಾರಣ ಈ ವರ್ಷ ಡಿವಿಡೆಂಡನ್ನು ಘೋಷಿಸಿಲ್ಲ. ಅಂದರೆ IPO ನಲ್ಲಿ ಹೂಡಿದ ರೂ.400 ಹೇಗೆ ಕರಗಿ ರೂ.116 ರ ಸಮೀಪಕ್ಕೆ ಕರಗಿರುವುದರೊಂದಿಗೆ ಮೂರು ವರ್ಷದ ಹೂಡಿಕೆಯೂ ನಿರುಪಯುಕ್ತವಾಗಿದೆ.

    ಇದು ಕೇವಲ ಈ ಕಂಪನಿಯ ಕಥೆಯಲ್ಲ ಇಂತಹ ಅನೇಕ IPO ಗಳ ಪಟ್ಟಿಯೇ ಇದೆ. 2018 ರಲ್ಲಿ HAL ಕಂಪನಿಯ IPO ರೂ.1,215 ರಂತೆ ಮಾಡಿತಾದರೂ ಇದುವರೆಗೂ ವಿತರಣೆ ಬೆಲೆ ತಲುಪಲಾಗಿಲ್ಲ. ಇನ್ನು ಖಾಸಗಿ ವಲಯದ ಕಂಪನಿ ರಿಯಲ್‌ ಎಸ್ಟೇಟ್‌ ಕಂಪನಿಗಳಾದ ಶೋಭಾ ಡೆವಲಪರ್ಸ, ಡಿ ಬಿ ರಿಯಾಲ್ಟಿ, ಅಲ್ಲದೆ ಜೆಟ್‌ ಏರ್ವೇಸ್‌, ಮನ್ ಪಸಂದ್‌ ಬೆವರೇಜಸ್‌, ಪಿ ಎನ್‌ ಬಿ ಹೌಸಿಂಗ್ ಗಳಂತಹ ಕಂಪನಿಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.

    ಇನ್ನು 2010 ರಲ್ಲಿ ಕೋಲ್‌ ಇಂಡಿಯಾ ರೂ.245 ರಂತೆ IPO ಮೂಲಕ ಪೇಟೆ ಪ್ರವೇಶಿಸಿತು. ಆ ಸಮಯದಲ್ಲಿ ಷೇರಿನ ಬೆಲೆ ರೂ.440 ರವರೆಗೂ ಏರಿಕೆ ಕಂಡು ವಿಜೃಂಬಿಸಿತು. ಆನಂತರದಲ್ಲಿ ಷೇರಿನ ಬೆಲೆ ಕುಸಿಯುತ್ತಾ ಜಾರಿದೆ. ಒಂದು ಸಮಾಧಾನಕರ ಅಂಶವೆಂದರೆ ಈ ಕಂಪನಿಯು ಹಲವು ಭಾರಿ ಆಕರ್ಷಕ ಡಿವಿಡೆಂಡ್‌ ವಿತರಿಸಿದೆ.

    ಒಟ್ಟಾರೆ ಹಣ ಹೂಡಿಕೆಗೂ ಮುನ್ನ ಯಾವುದೇ ಪ್ರಚಾರಿಕ ಅಂಶಗಳಿಗೆ ಮಾರುಹೋಗದೆ ಯೋಗ್ಯತೆಯ ಮಾಪನಮಾಡಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ. ಉಳಿಸಿದ ಹಣ – ಗಳಿಸಿದ ಹಣ

    error: Content is protected !!