35 C
Karnataka
Sunday, April 20, 2025
    Home Blog Page 170

    ಚೀನಾ ಆ್ಯಪ್ ಗಳ ಅಸಲಿ ರಹಸ್ಯ

     ಚೀನಾ ನಿರ್ಮಿತ 59 ಮೊಬೈಲ್ ಅಪ್ಲಿಕೇಶನ್ ಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದ ಬೆನ್ನಲ್ಲೇ ಇಂಟರ್ ನೆಟ್ ಒದಗಿಸುವ ಕಂಪೆನಿಗಳು ಈ ಆ್ಯಪ್ ಗಳ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿವೆ. ಈಗಾಗಲೇ ಅಳವಡಿಕೆಯಾಗಿರುವ ಅಪ್ಲಿಕೇಶನ್ ಗಳು ಓಪನ್ ಆಗುವುದಿಲ್ಲ.

    ಈಗಾಗಲೇ ಇನ್ಸ್ಚಾಲ್ ಆಗಿರುವ ಆ್ಯಪ್ ಗಳನ್ನು ತೆರೆಯಲು ಹೋದಾಗ ಕಾಣುವ ನೋಟೀಸ್

    ಟಿಕ್ ಟಾಕ್ , ಹೆಲೋ, ವಿ ಚಾಟ್ ಸೇರಿದಂತೆ ಹಲವು ಆ್ಯಪ್ ಗಳನ್ನು ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುತ್ತವೆ ಎಂಬ ಕಾರಣಕ್ಕೆ ಐಟಿ ಕಾಯ್ದೆ 2009 ರ ಐಟಿ ಕಾಯ್ದೆ ಅನ್ವಯ ನಿಷೇಧಿಸಲಾಗಿದೆ. ಈ ಆ್ಯಪ್ ಗಳು ಹೇಗೆ ಗಂಡಾಂತರಕಾರಿ ಎಂಬುದನ್ನು ಅರಿಯೋಣ. 

    ಹೆಲೋ ಮತ್ತು ಶೇರಿಟ್ ಮತ್ತು ಯುಸಿ ಬ್ರೌಸರ್‌ನಂತಹ ಬ್ರೌಸರ್‌ಗಳು ಸೇರಿದಂತೆ ಚೀನಾದ ಹತ್ತು ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಕನಿಷ್ಠ ಆರು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಮತ್ತು ಮೈಕ್ರೊಫೋನ್ಗಳಿಗೆ ಪ್ರವೇಶವನ್ನು ಒದಗಿಸಲು  ಅನುಮತಿ ಕೊಡಲು ಕೇಳುತ್ತವೆ.  ಅಂತಹ ಪ್ರವೇಶ ಅಗತ್ಯವಿಲ್ಲದಿದ್ದರೂ ಸಹ, ವೈಯಕ್ತಿಕ ಮಾಹಿತಿಗಳನ್ನೂ  ಶೇಖರಿಸುತ್ತಿವೆ ಎಂದು  ಒಂದು ಅಧ್ಯಯನ ಪತ್ತೆ ಮಾಡಿದೆ.

    ಅಸಲಿಗೆ ಈ ಮಾಹಿತಿಯಿಂದ ಚೀನಾಕ್ಕೆೇನು ಉಪಯೋಗ ಎಂಬ ಸಂಗತಿಗಳನ್ನು ಹುಡುಕುತ್ತಾ ಹೋದರೆ ಅದರ ಅಸಲಿ ಆಟ ಗೊತ್ತಾಗುತ್ತದೆ. ಈ ಅಸಲಿ ಆಟ ಗೊತ್ತಿಲ್ಲದ ನಮ್ಮ ಹುಡುಗರು ಟಿಕ್ ಟಾಕ್ ಮಾಡುತ್ತಾ ಕುಣಿದಿದ್ದೇ ಕುಣಿದಿದ್ದು.

        
    ಮೊದಲನೇ ರೀತಿ :  
    ಚೀನೀ ಆ್ಯಪ್ಸ್ ಗಳು  ನಿಮ್ಮ ಮೊಬೈಲ್ ನಲ್ಲಿ  ದಾಖಲಾಗುವ, ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ನಿಮ್ಮ ಕಾಂಟಾಕ್ಟ್ ಡೀಟೇಲ್ಸ್, ನಿಮ್ಮ ಬ್ಯಾಂಕ್ ಅಪ್ಲಿಕೇಶನ್ಸ್ ಗಳ  ಮಾಹಿತಿಗಳನ್ನು ಸಂಗ್ರಹಿಸುತ್ತವೆ. ನೀವು ಯಾವುದಾದರೂ ಸೈಟ್ ಅಥವಾ ಆ್ಯಪ್ ಮೂಲಕ ತರಿಸಿದ ಸಾಮಗ್ರಿಗಳ ಸಾರಾಂಶವನ್ನು ನಿಮಗೆ ಗೊತ್ತಿಲ್ಲದೆ ಪಟ್ಟಿ ಮಾಡಿಕೊಳ್ಳುತ್ತವೆ. ನಿಮ್ಮ ತಿಂಗಳ ಹಣ ಖರ್ಚು ಮಾಡುವ ವಿಧಾನ, ನೀವು ಯಾವ ಯಾವ ಸ್ಥಳಗಳಲ್ಲಿ ಸಂಚಾರ ಮಾಡಿದ್ದೀರಾ?  ಈ ರೀತಿಯ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು  ಅದಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸಿ ಅದನ್ನುಭಾರತಕ್ಕೆ ಶಿಪ್ ಮಾಡುತ್ತದೆ . ಇದರಿಂದ ಚೀನಾ ಉತ್ಪಾದಕರು ಒತ್ತಡವಿಲ್ಲದೆ, ಹೆಚ್ಚಿನ ವಸ್ತುಗಳನ್ನು ತಯಾರಿಸಿ ಕಡಿಮೆ ವೆಚ್ಚದಲ್ಲಿ ಹೆಚ್ಚುಲಾಭ  ಮಾಡಿಕೊಳ್ಳುತ್ತಾರೆ.


    ಎರಡನೇ ರೀತಿ: 
    ಚೀನೀ ಆಪ್ಸ್ ಗಳಲ್ಲಿ  ಸಿಗುವ ಮಾಹಿತಿ ಆಧರಿಸಿ ಸಂಗ್ರಹಿಸುವ ಪರ್ಸನಲ್ ದತ್ತಾಂಶಗಳನ್ನ ಬೇರೆಯವರಿಗೆ ಮಾರಾಟಮಾಡಿ ಅದರಿಂದ ಹಣ ಸಂಗ್ರಹಿಸುವುದು.  ಚೀನೀ ಆಪ್ ಗಳಲ್ಲಿ ಹೆಚ್ಚಿನವು ಮಕ್ಕಳು ಉಪಯೋಗಿಸುವ  ಗೇಮಿಂಗ್ ಆಪ್ಸ್ . ಅದರ ಮುಖಾಂತರ ಮಕ್ಕಳ ಮನಸನ್ನ ಓದಿನಿಂದ ಹೆಚ್ಚು ಹೆಚ್ಚು  ಆಟವಾಡುವ ರೀತಿಯಲ್ಲಿ ಬದಲಿಸುವುದು. ಜೊತೆೆಗೆ
    ಹದಿ ಹರೆಯದವರ ಮಾಹಿತಿ ಪಡೆದು, ಅವರಿಗೆ ಬೇಡವಾಗಿದ್ದರೂ  ವಯಸ್ಕರ ವಿಷಯಗಳನ್ನು ಸೇರಿಸಿ ಅವರು ಉಪಯೋಗಿಸುವ ಆಪ್ ಗಳಲ್ಲಿ ತುರುಕುವುದು. 

    ಇದರ ಪರಿಣಾಮ ಸದ್ಯಕ್ಕೆ ಗೊತ್ತಾಗದಿದ್ದರೂ ಮುಂದೆ ಮಕ್ಕಳ, ಯುವಕರ ಹಾಗು ಪ್ರತಿಯೊಬ್ಬ ಬಳೆಕೆದಾರರ ಮನಸ್ಸಿನ ಮೇಲೆ ಆಗುವ ಪರಿಣಾಮ ಅಗಾಧ. 

    ಚೀನಿ ವಸ್ತುಗಳು ಅಷ್ಟು ಕಡಿಮೆ ಬೆಲೆಗೆ ಸಿಗುವುದಾದರೂ ಯಾಕೆ?  ಹೆಚ್ಚು ಗ್ರಾಹಕರು ಇದ್ದಾಗ ಹೆಚ್ಚು ಉತ್ಪಾದನೆ ಅದರಂತೆ ಹೆಚ್ಚು ಲಾಭ!.  ಈ ಸೂತ್ರದಮೇಲೆ ಚೀನೀ ಸರ್ಕಾರ ಕೆಲಸ ಮಾಡುತ್ತಿದೆ.

    ಬೆಂಗಳೂರಿನ ಬವಣೆ ಉಲ್ಬಣಿಸಲು ಐದು ಕಾರಣ

    ವಿ.ಜಯರಾಮ್

    ಬೆಂಗಳೂರಿಗೆ ಗರ ಬಡಿದಿದೆ. ಸದಾ ಗಿಜಿಗುಡುವ ರಸ್ತೆಗಳು ಈಗ ಬಣಬಣ. ಮಾಲು, ಮಂದಿರ ಮುಚ್ಚಿವೆ. ಶಾಲಾ ಕಾಲೇಜುಗಳಿಗೆ ಬಿದ್ದ ಬೀಗ ತೆರೆದಿಲ್ಲ. ವಿಧಾನಸೌಧ, ಹೈಕೋರ್ಟಿನಂತಹ ಶಕ್ತಿ ಕೇಂದ್ರಗಳೇ ಜನವಿಲ್ಲದೆ ಕಳೆಗುಂದಿ ಹೋಗಿವೆ. ಅಣುಬಾಂಬಿಗೂ ಹೆದರದ ಈ ಮಹಾನಗರದ ಬದುಕು ಅಣುವಿಗಿಂತಲೂ ಕಡೆ ಎನಿಸಿದ, ಕಣ್ಣಿಗೆ ಕಾಣಸಿಗದ ಯಕಃಶ್ಚಿತ್ ಒಂದು ಕ್ಷುದ್ರ ಕ್ರಿಮಿಗೆ ಬೆದರಿ ಬೆಚ್ಚಿ ಕುಳಿತಿದೆ. ಎಲ್ಲವೂ ಖಾಲಿ ಖಾಲಿ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ. ರಸ್ತೆಗಳಲ್ಲಿ ವಾಹನವಿಲ್ಲ. ಮಾರುಕಟ್ಟೆಗಳಲ್ಲಿ ಜನವಿಲ್ಲ. ಮೂರು ತಿಂಗಳಿಂದ ಮರೆಯಾದ ಲವಲವಿಕೆ ಮರಳುವುದು ಯಾವಾಗ ಗೊತ್ತಿಲ್ಲ.
    ಕೋವಿಡ್ ಎಂಬ ಒಂದು ಕ್ರಿಮಿಯ ರೂಪದಲ್ಲಿ ಬಂದೆರಗಿದ ಬವಣೆಗೆ ಬದುಕು ಎಷ್ಟೆಲ್ಲ ಬದಲಾಗಿದೆ?!

    ತಾನು ಅತಿ ಬಲಿಷ್ಠ ಎಂದು ಬೀಗುತ್ತಿದ್ದ ಸರಕಾರವೂ ಹೆಚ್ಚುತ್ತಿರುವ ಪ್ರಕರಣಗಳಿಂದ ತಬ್ಬಿಬ್ಬಾಗಿದೆ. ನಿಜಕ್ಕೂ ಸರಕಾರದ ಕೈಯಿಂದಲೂ ನಿಯಂತ್ರಿಸಲಾಗದ ಸಾಂಕ್ರಾಮಿಕವೇ ಇದು? ಖಂಡಿತ ಇಲ್ಲ. ಖಚಿತ ನಿರ್ಧಾರಗಳೊಂದಿಗೆ ಹೊರಟರೆ ಈ ಕ್ರಿಮಿಯ ಅಟ್ಟಹಾಸ ಕಟ್ಟಿಹಾಕುವುದು ಕಷ್ಟವೇನಲ್ಲ.

    ಇಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನೇ ನೋಡಿ ಏನಾಗಿದೆ?

    ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಿತ್ಯ 1000 ಹೊಸ ಪ್ರಕರಣ ಪತ್ತೆಯಾಗುತ್ತಿವೆ. ಮುಂಬಯಿ ನಗರದ ಛಿದ್ರಗೊಂಡ ಬದುಕಿನ ಕರಾಳ ಚಿತ್ರ ಕಣ್ಣು ಕಟ್ಟುತ್ತಿದೆ. ಯಾಕೆ ಹೀಗಾಗಿದೆ?
    ಈ ಪ್ರಶ್ನೆಯನ್ನು ಕನ್ನಡಪ್ರೆಸ್.ಕಾಂ ಕೆಲವು ದಕ್ಷ ಅಧಿಕಾರಿಗಳ ಮುಂದೆ ಇಟ್ಟಾಗ “ಹೌದು, ಈ ವೈಫಲ್ಯದಲ್ಲಿ ನಮ್ಮ ಅಧಿಕಾರಿ ವರ್ಗದ ಪಾತ್ರ ಢಾಳಾಗಿದೆ” ಎಂದು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.ಸರಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಜಾರಿಗೆ ಬರುವ ಸಮಯದಲ್ಲಿ ಕಠಿಣತೆಯನ್ನು ಕಳೆದುಕೊಳ್ಳುತ್ತಿವೆ.

    1. ಬೆಂಗಳೂರಿನಲ್ಲಿ ಸೋಂಕು ಅಟ್ಟಹಾಸ ಮೇರೆ ಮೀರಲು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳ ಲೋಪ ಮಖ್ಯವಾಗುತ್ತಿದೆ. ಕೆಳವರ್ಗದ ದಕ್ಷತೆ ತೀರಾ ಕಳಪೆಯಾಗಿದೆ. ಇದಕ್ಕೆ ಪಕ್ಕದ ಕೇರಳ ಅಪವಾದ. ಅಲ್ಲಿ ಕೆಳ ವರ್ಗದ ಅಧಿಕಾರಿಗಳ ದಕ್ಷತೆ ಸಮರ್ಥವಾಗಿದೆ. ಆ ಕಾರಣ ಸೋಂಕು ಹೆಚ್ಚು ಆರ್ಭಟಿಸುತ್ತಿಲ್ಲ.ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸೋಂಕು ನಿಯಂತ್ರಣದಲ್ಲಿದೆ.

    2 ಅಂತಾರಾಜ್ಯಗಳಿಂದ ನೇರ ಬೆಂಗಳೂರಿಗೆ ಬರುವ ಜನರ ತಪಾಸಣೆ ವ್ಯವಸ್ಥೆ ತೀರ ಹದಗೆಟ್ಟು ಹೋಗಿದೆ. ಇವರು ಯಾವ ಅಡೆ ತಡೆಯೂ ಇಲ್ಲದೆ ನಗರದ ತಮ್ಮ ಗಮ್ಯ ಸೇರಿಕೊಳ್ಳಬಹುದಾಗಿದೆ. ಇವರಲ್ಲಿ ಇರಬಹುದಾದ ಸೋಂಕಿತರು ಸಮುದಾಯ ಮಟ್ಟಕ್ಕೆ ಸಾಂಕ್ರಾಮಿಕವನ್ನು ಕೊಂಡೊಯ್ಯುತ್ತಿರುವುದು ವರದಿಯಾಗುತ್ತಿದೆ.

    3.ಅತಿ ಸೋಂಕು ಬಾಧಿತ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ನಿತ್ಯ ಲಕ್ಷಾಂತರ ಜನ ಬಂದು ಹೋಗುತ್ತಿದ್ದಾರೆ. ಇವರನ್ನು ಪರೀಕ್ಷೆಗೆ ಒಳಪಡಿಸುವ ಯಾವುದೇ ನಿಯಮ ಜಾರಿಯಲ್ಲಿಲ್ಲ.

    4. ಕೆಲವು ನಿರ್ಬಂಧಗಳು ಇದ್ದರೂ ಅವುಗಳ ಜಾರಿ ಇಲ್ಲವಾಗಿದೆ. ಗಡಿಯಲ್ಲಿ ಸೋಂಕಿತರು ಕೂಡ ನಿರಾಯಾಸವಾಗಿ ನುಸುಳಿ ಬರುತ್ತಿದ್ದಾರೆ. ದುಡ್ಡು, ಗಡಿ ಕಾವಲು ಸಿಬ್ಬಂದಿಯ ಕೈಬಿಸಿ ಮಾಡುತ್ತಿದ್ದು ನಿಯಮಗಳು ಚಿಂದಿಯಾಗಲು ಕಾರಣವಾಗಿದೆ.

    5. ನಾಗರಿಕ ಪ್ರಜ್ಞೆ ಕೊರತೆ ಕೂಡ ಬೆಂಗಳೂರಿನ ಸೋಂಕು ಉಲ್ಬಣಗೊಳ್ಳಲು ಪ್ರಧಾನ ಕಾರಣವಾಗಿದೆ. ಕೆಲಸವಿಲ್ಲದೇ ಅನಗತ್ಯ ಸುತ್ತಾಡುವುದು, ಮೋಜುಮಸ್ತಿ ಗೋಷ್ಠಿಗಳನ್ನು ಸೇರುವುದು, ಸೋಂಕು ಹಾಗೂ ಶುಚಿತ್ವದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

    ಸರಕಾರ ಲಾಕ್ ಡೌನ್ ಸಮಯದಲ್ಲಿದ್ದ ಕಠಿಣ ಕ್ರಮಗಳನ್ನು ಮತ್ತೆ ಅಳವಡಿಸಿದರೆ ಮಾತ್ರ ಸೋಂಕು ನಿಯಂತ್ರಣಕ್ಕೆ ಬರಬಹುದು.

    ಮಳೆಗಾಲದಲ್ಲಿ ಅರಳುವ ರುಚಿ ಮೊಗ್ಗುಗಳು

    ಹೊರಗಡೆ ವರ್ಷಧಾರೆ ಸುರಿಯುತ್ತಿರಬೇಕಾದರೆ ಮನೆಯೊಳಗಡೆ ಬಿಸಿ ಬಿಸಿ ತಿನಿಸುಗಳ ಸಮಾರಾಧನೆ ಶುರುವಾಗುತ್ತದೆ. ಬಿಸಿ ಬಿಸಿ ಕಾಫಿ, ಟೀ, ಕಷಾಯದ ಜೊತೆಗೆ ಕೆಲವು ತಿಂಡಿಗಳ ನೆನಪು ಬೇಡವೆಂದರೂ ಕಾಡುತ್ತದೆ. ಮಳೆಗಾಲದಲ್ಲೇ ತಿನ್ನಬೇಕೆಂದು ಅನಿಸುವ ಈ ತಿಂಡಿಗಳು ಮುಂಗಾರನ್ನು ಹಿತವಾಗಿಸುತ್ತವೆ. ನಗರವಾಸಿಗಳಿಗೂ ಮಳೆಗಾಲದಲ್ಲಿ ಆಪ್ತವೆನಿಸುವ ಈ ತಿನಿಸುಗಳನ್ನು ತಿನ್ನುವಾಗ ಅವರು ತಮ್ಮೂರಿನ ಸವಿನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುತ್ತಾರೆ…

    ಪ್ರಕೃತಿ ಮತ್ತು ಆಹಾರದ ಬೆಸುಗೆ ಎಂದೂ ಬಿಡಿಸಲಾಗದು. ಪ್ರಕೃತಿ ಬದಲಾದಂತೆ ಆಹಾರವೂ ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಯಾಕೆಂದರೆ ಆಯಾ ಋತುಮಾನಕ್ಕೆ ಇಂಥದ್ದೇ ಆಹಾರ ಸೇವಿಸಬೇಕು ಎಂಬುದು ನಿಸರ್ಗದ ನಿಯಮ. ಅದಕ್ಕೆ ತಕ್ಕಂತೆಯೇ ನಮ್ಮ ಆಹಾರ ಕ್ರಮಗಳು ರೂಪುಗೊಂಡಿವೆ. ಈ ಆಹಾರ ನಿಯಮ ಪಾಲಿಸದಿದ್ದರೆ ಆಯಾ ಸೀಸನ್‌ಗೆ ಸಿಗುವ ಕೆಲವು ಪ್ರಕೃತಿದತ್ತ ಆಹಾರಗಳ ಪೋಷಕಾಂಶಗಳಿಂದ ವಂಚಿತರಾಗುತ್ತೇವೆ ಮತ್ತು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.

    ಮಾನ್ಸೂನ್ ರುಚಿಗಳು

    ಬೇಸಿಗೆ ಸೀಸನ್‌ನ ಧಗೆ ಮುಗಿದು ಈಗಷ್ಟೇ ಮಳೆಗಾಲ ಆರಂಭವಾಗಿದೆ. ಆಗಲೇ ಇಳೆಯೆಲ್ಲ ತಂಪಾಗಿದೆ. ಈ ಸೀಸನ್‌ಗೆ ಬೇಸಿಗೆ ಕಾಲದ ಆಹಾರಗಳನ್ನೇ ಸೇವಿಸಲಾಗುವುದಿಲ್ಲ. ಮಳೆಗಾಲ ಶುರುವಾದಾಗಲೇ ನಮಗೆ ಅರಿವಿಲ್ಲದಂತೆಯೇ ನಮ್ಮ ನಾಲಗೆ ರುಚಿ ರುಚಿಯಾದ ತಿನಿಸುಗಳನ್ನು ಬಯಸುತ್ತದೆ. ಜಡಿಮಳೆ ಸುರಿದಾಗ ಮರೆತೇ ಹೋಗಿದ್ದ ಕೆಲವು ತಿಂಡಿ, ತಿನಿಸುಗಳು ನೆನಪಾಗುತ್ತವೆ. ಅವುಗಳನ್ನು ಮಳೆಗಾಲದಲ್ಲಿ ತಿಂದರೇನೇ ರುಚಿ ಜಾಸ್ತಿ. ಹಲಸಿನಕಾಯಿ ಚಿಪ್ಸ್, ಹಪ್ಪಳ, ಕಳಲೆ ಪಲ್ಯ, ಕೆಸುವಿನೆಲೆಯ ಪತ್ರೊಡೆ, ಹೊಳೆ ಮೀನಿನ ಸಾರು, ಮಳೆಗಾಲದಲ್ಲೇ ಚಿಗುರಿಕೊಳ್ಳುವ ತಗ್ಚೆ, ಒಂದೆಲಗ ಮುಂತಾದ ಸೊಪ್ಪುಗಳ ಪಲ್ಯ, ಚಟ್ನಿಗಳು ಮಳೆಗಾಲದಲ್ಲೇ ಅತ್ಯಂತ ಟೇಸ್ಟಿಯೆನಿಸುತ್ತವೆ. ಇವುಗಳನ್ನು ಬೇರೆ ಸೀಸನ್‌ಗಳಲ್ಲಿ ಸವಿದಿದ್ದರೂ ಮಳೆಗಾಲದಲ್ಲಿ ಸಿಗುವ ರುಚಿಯೇ ಬೇರೆ. ಈ ಸಮಯದಲ್ಲಿ ಅದೆಷ್ಟೇ ಬಜ್ಜಿ, ಬೋಂಡಾ ಕರಿದು ತಿಂದರೂ ಹಲಸಿನ ಹಣ್ಣಿನ ಬೀಜಗಳನ್ನು ಸುಟ್ಟು ತಿನ್ನುವುದರಲ್ಲಿ ಇರುವ ಸ್ವಾದ ಬೇರೆ ಯಾವುದರಲ್ಲೂ ಸಿಗಲ್ಲ. ಇದುವೇ ಮಳೆಗಾಲದತಿನಿಸುಗಳ ವಿಶೇಷ.

    ಪ್ರಾದೇಶಿಕ ವೈವಿಧ್ಯ

    ಮಳೆಗಾಲದ ತಿನಿಸುಗಳಲ್ಲೂ ಪ್ರಾದೇಶಿಕ ವೈವಿಧ್ಯವಿದೆ. ಆಯಾ ಪ್ರದೇಶದಲ್ಲಿ ಆ ಸೀಸನ್‌ಗೆ ಸಿಗುವ ಹಣ್ಣು, ತರಕಾರಿಗಳಿಂದ ಮಾಡುವ ಕೆಲವು ವಿಶೇಷ ತಿನಿಸುಗಳು ಅವುಗಳ ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಾರುತ್ತವೆ. ಉದಾಹರಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲ ಬಂತೆಂದರೆ ಪ್ರತಿ ಮನೆಗಳಲ್ಲಿ ಕೆಸುವಿನೆಲೆಯ ಪತ್ರೊಡೆ, ಹಲಸಿನಹಣ್ಣಿ ಕಡುಬು, ಮುಳ್ಕ, ತಗ್ಚೆ ಪಲ್ಯ, ಅರಿಶಿನ ಎಲೆಯ ಕಡುಬು, ಹಲಸಿನ ಹಣ್ಣಿನ ಬೇಯಿಸಿ ಒಣಗಿಸಿದ ಬೀಜ, ಕಾಡು ಅಣಬೆಯ ಪಲ್ಯ, ಅಮಟೆಕಾಯಿ ಉಪ್ಪಿನಕಾಯಿ, ಹುರುಳಿಕಾಳಿನ  ಸಾರು ಇತ್ಯಾದಿಗಳು ಘಮಗುಟ್ಟಿದರೆ, ಉತ್ತರ ಕನ್ನಡದ ಭಾಗಗಳಲ್ಲಿ ಹಲಸಿನ ಚಿಪ್ಸ್, ಹಪ್ಪಳ, ಅಪ್ಪಿ ಪಾಯಸ, ಝುಣಕ ವಡೆ ಕಂಪು ಬೀರುತ್ತವೆ. ಧಾರಾಕಾರ ಮಳೆಯ ಸಮಯದಲ್ಲಿ ಕೈತೋಟ, ಹೊಲ, ಕಾಡುಗಳಲ್ಲಿ ಯಾವುದೇ ಶ್ರಮವಿಲ್ಲದೆ ತಮ್ಮ ಪಾಡಿಗೇ ಬೆಳೆದ ಹಸಿರು ಸೊಪ್ಪು, ತರಕಾರಿ, ಹಣ್ಣುಗಳೇ ಜನರಿಗೆ ಆಧಾರವಾಗುತ್ತವೆ. ಬಿಡದೇ ಸುರಿಯುವ ಮಳೆಗೆ ಹೊರಗಡೆ ಹೋಗಿ ತರಕಾರಿ, ಹಣ್ಣುಗಳನ್ನು ತರುವುದು ಕಷ್ಟವಾಗುವ ಕಾರಣ ಒಂದು ರೀತಿಯಲ್ಲಿ ಪ್ರಕೃತಿಯೇ ಜನರಿಗೆ ದಯಪಾಲಿಸಿರುವ ಆಹಾರಗಳಿವು.

    ಮಳೆಗಾಲದಲ್ಲಿ ತಿನ್ನಲೇಬೇಕಾದ ಅಂಥ ಕೆಲವು ರುಚಿ ವೈವಿಧ್ಯವನ್ನು ಮಾಡುವ ವಿಧಾನ ಇಲ್ಲಿದೆ.

    ಹಲಸಿನ ಹಣ್ಣಿನ ಕಡುಬು

    ಬೇಕಾಗುವ ಸಾಮಗ್ರಿ

    ಚೆನ್ನಾಗಿ ಮಾಗಿರುವ ಹಲಸಿನ ಹಣ್ಣಿನ ತೊಳೆಗಳು-ಎರಡೂವರೆ ಕಪ್, ಬೆಲ್ಲ-ಅರ್ಧ ಕಪ್, ಏಲಕ್ಕಿ ಪುಡಿ-ಅರ್ಧ ಚಮಚ, ತೆಂಗಿನಕಾಯಿ ತುರಿ-೧ ಕಪ್, ಅಕ್ಕಿ-೨ ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸು-ಅರ್ಧ ಚಮಚ, ತೇಗದ ಎಲೆ ಅಥವಾ ಬಾಳೆ ಎಲೆ-೨೦.

    ಮಾಡುವ ವಿಧಾನ

    ಅಕ್ಕಿಯನ್ನು ತೊಳೆದು ನೀರಿನಲ್ಲಿ ಆರು ಗಂಟೆ ನೆನೆಸಿಡಿ. ತೇಗದ ಎಲೆಗಳನ್ನು ಸ್ವಚ್ಛ ಮಾಡಿ ಒರೆಸಿ ಒಣಗಿಸಿ. ಹಲಸಿನ ಹಣ್ಣಿನ ತೊಳೆಗಳ ಬೀಜಗಳನ್ನು ತೆಗೆದು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಕಿ ನುಣ್ಣಗೆ ಅರೆಯಿರಿ. ನಂತರ ತೆಂಗಿನಕಾಯಿ ತುರಿ ಮತ್ತು ಹಲಸಿನ ಹಣ್ಣಿನ ತೊಳೆಗಳನ್ನು ಹಾಕಿ ಮತ್ತೆ ನುಣ್ಣಗೆ ಅರೆಯಿರಿ. ಈ ಹಂತಗಳಲ್ಲಿ ಸ್ವಲ್ಪವೂ ನೀರು ಹಾಕಬಾರದು. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸು ಮತ್ತು ಒಂದು ಚಿಟಿಕೆ ಅರಶಿನ ಹಾಕಿ. ಈ ಒಂದೊಂದು ತೇಗದ ಎಲೆಗೆ ಈ ಮಿಶ್ರಣವನ್ನು ಒಂದೊಂದು ಸೌಟಿನಂತೆ ಹಾಕಿ ಎಲೆಯ ನಾಲ್ಕು ಅಂಚುಗಳನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ಇದರ ಎಲೆಗಳನ್ನು ಬಿಡಿಸಿ ಬಿಸಿ ಬಿಸಿ ಕಡುಬನ್ನು ತುಪ್ಪದ ಜೊತೆಗೆ ತಿನ್ನಿ.

    ಕೆಸುವಿನೆಲೆಯ ತೇಟ್ಲ

    ಬೇಕಾಗುವ ಸಾಮಗ್ರಿ

    ಮಧ್ಯಮ ಗಾತ್ರದ ಕೆಸುವಿನ ಎಲೆ-೨೦, ಉಪ್ಪು-ರುಚಿಗೆ ತಕ್ಕಷ್ಟು, ಮಸಾಲೆಗೆ ಬ್ಯಾಡಗಿ ಮೆಣಸು-೬, ಅರಶಿನ ಪುಡಿ-ಅರ್ಧ ಟೀ ಸ್ಪೂನ್, ಜೀರಿಗೆ-ಅರ್ಧ ಟೀ ಸ್ಪೂನ್, ಬೆಳ್ಳುಳ್ಳಿ-೩ ಎಸಳು, ಮಧ್ಯಮ ಗಾತ್ರದ ಈರುಳ್ಳಿ-೧, ಹುಣಸೆ ಹಣ್ಣು-೧ ನಿಂಬೆ ಗಾತ್ರದ್ದು, ಒಗ್ಗರಣೆಗೆ ಸಾಸಿವೆ-ಕಾಲು ಟೀ ಸ್ಪೂನ್, ಜಜ್ಜಿದ ಬೆಳ್ಳುಳ್ಳಿ-೩, ಎಣ್ಣೆ-ಸ್ವಲ್ಪ.

    ಮಾಡುವ ವಿಧಾನ

    ಹಿಂದಿನ ದಿನ ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ ಒಣಗಿಸಿ. ಮರುದಿನ ಪ್ರತಿ ಎಲೆಯನ್ನು ಉದ್ದಕ್ಕೆ ಸುರುಳಿ ಸುತ್ತಿ ಕೊನೆಗೆ ಒಂದು ಗಂಟು ಹಾಕಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯಿರಿ. ಮಸಾಲೆಯ ನೀರಿನಲ್ಲಿ ಕೆಸುವಿನ ಎಲೆಯ ಗಂಟುಗಳನ್ನು ಐದು ನಿಮಿಷ ಬೇಯಿಸಿ ಆಮೇಲೆ ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಮಂದ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಇದಕ್ಕೆ ಹಲಸಿನ ಬೀಜ ಹಾಕಿ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.

    ತಗ್ಚೆ ಸೊಪ್ಪಿನ ಪಲ್ಯ

    ಬೇಕಾಗುವ ಸಾಮಗ್ರಿ

    ತಗ್ಚೆ ಸೊಪ್ಪು-೧ ಬಟ್ಟಲು, ಬ್ಯಾಡಗಿ ಮೆಣಸು-೫, ಜೀರಿಗೆ-ಅರ್ಧ ಚಮಚ, ಕೊತ್ತಂಬರಿ ಬೀಜ-೧ ಚಮಚ, ಮೆಂತ್ಯೆ ಕಾಳು-ಅರ್ಧ ಚಮಚ, ಅರಶಿನ ಪುಡಿ-ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ-ಅರ್ಧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ-೧ ಕಪ್, ಜಜ್ಜಿದ ಬೆಳ್ಳುಳ್ಳಿ-೩, ಸಾಸಿವೆ-ಅರ್ಧ ಚಮಚ, ಕರಿಬೇವಿನ ಎಲೆ-ಸ್ವಲ್ಪ, ಎಣ್ಣೆ-ಸ್ವಲ್ಪ.

    ಮಾಡುವ ವಿಧಾನ

    ತಗ್ಚೆ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಡಿ. ಮಸಾಲೆ ಸಾಮಗ್ರಿಗಳನ್ನು ಸ್ವಲ್ಪ ಹುರಿದು ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿ. ಇದಕ್ಕೆ ಹುರಿದ ತೆಂಗಿನಕಾಯಿ ತುರಿ ಹಾಕಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಸಿಡಿಸಿ. ಇದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ನಂತರ ತಗ್ಚೆ ಸೊಪ್ಪು ಹಾಕಿ ಚೆನ್ನಾಗಿ ಹುರಿದು ಬಾಡಿಸಿ. ಇದು ಬೆಂದ ಮೇಲೆ ಉಪ್ಪು ಮತ್ತು ಮಸಾಲೆ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಿ.

    ಎಚ್ಚರದಿಂದಿದ್ದರೆ ಷೇರುಪೇಟೆ ನೀಡುವುದು ಸಂಪತ್ತಿನ ಮೂಟೆ

    ಷೇರುಪೇಟೆಯ ಇಂದಿನ ದಿನಗಳಲ್ಲಿ ಯಾವ ನಿಖರವಾದ ನಿಯಮಗಳಿಲ್ಲದೆ ಚಲಿಸುತ್ತಿರುವಂತಿದೆ. ವಹಿವಾಟುದಾರರು ನಡೆಸುವ ಚಟುವಟಿಕೆಯೇ ಅಂತಿಮ ಎಂಬಂತಿದೆ. ಷೇರುಪೇಟೆಗಳು ರಭಸದ ಏರಿಳಿತ ಪ್ರದರ್ಶಿಸುತ್ತಿರುವುದರ ಹಿಂದೆ ಯಾವುದೇ ಪ್ರಮುಖ ಕಾರಣಗಾಳಿಲ್ಲದಂತಿದೆ. ಆಂತರಿಕ ಸಾಧನೆ ಮೀರಿ ಸೂಚ್ಯಂಕಗಳು ಏರಿಕೆ ಕಂಪನಿಗಳ ಸಾಧನೆಗೂ ಷೇರಿನ ದರ ಏರಿಕೆಗೂ ಸಂಬಂಧವಿಲ್ಲದಂತಿದೆ. ಕೆಳಗಿನ ಉದಾಹರಣೆ ಈ ಅಂಶ ದೃಢಪಡಿಸುತ್ತದೆ.

    ಆಂಧ್ರಾ ಪೇಪರ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಗುರುವಾರದಂದು ಸುಮಾರು ೩೬ ರೂಪಾಯಿಗಳಷ್ಠು ಕುಸಿತಕ್ಕೊಳಗಾಯಿತು ಅದಕ್ಕೆ ಕಾರಣ ಕಂಪನಿಯ ಪ್ರವರ್ತಕರು ತಮ್ಮ ಭಾಗಿತ್ವದ ಶೇ.10 ರಷ್ಟನ್ನು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟಮಾಡಲಿರುವ ಅಂಶ ಪ್ರಕಟವಾಗಿದ್ದು. ಅಂದು ರೂ.194 ರ ಸಮೀಪಕ್ಕೆ ಕುಸಿದಿದ್ದ ಷೇರಿನ ಬೆಲೆ ಸೋಮವಾರ ದಿಢೀರನೆ ಶೇ.20 ರಷ್ಟರ ಏರಿಕೆಯಿಂದ ಮಿಂಚಿದೆ. ಅಂದರೆ ಕಂಪನಿಯ ಆಂತರಿಕ ಸಾಧನೆಗೆ ಸಂಬಂಧವಿಲ್ಲದ ಸುದ್ದಿಗೆ ಪೇಟೆ ಪ್ರದರ್ಶಿಸಿದ ರೀತಿ ಫಂಡಮೆಂಟಲ್ಸ ಆಧಾರದ ಹೂಡಿಕೆದಾರರಿಗೆ ಗೊಂದಲಮೂಡಿಸುವುದು ಸಹಜ. ಮೂರೇ ದಿನದಲ್ಲಿ ರೂ.60 ರಷ್ಟರ ಏರಿಕೆ ಕಂಡಿದೆ. ಕೇವಲ ವ್ಯಾಲ್ಯೂ ಪಿಕ್‌ ಅಧಾರದ ಮೇಲೆ ಕೊಂಡವರಿಗೆ ಉತ್ತಮ ಲಾಭದ ಅವಕಾಶ ಪೇಟೆ ಒದಗಿಸಿದೆ ಈ ಸಂದರ್ಭ ಹೇಗೆ ಅವಕಾಶ ಸೃಷ್ಟಿಸಿಕೊಟ್ಟಿದೆ ಎಂದರೆ S B I Mutual Fund ತನ್ನ ವಿವಿಧ ಯೋಜನೆಗಳಡಿಯಲ್ಲಿ ಒಟ್ಟು 31,33,000 ಷೇರುಗಳನ್ನು ಈ ಆಫರ್‌ ಫಾರ್‌ ಸೇಲ್‌ ಮೂಲಕ ಖರೀದಿಸಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ಶೇ.28.07 ರಷ್ಟು ಮಾತ್ರ ವಿಲೇವಾರಿ ವಹಿವಾಟಾಗಿರುವುದು. ಪೇಟೆಯಲ್ಲಿ ನಡೆಯುತ್ತಿರುವ ವಿಲೇವಾರಿ ರಹಿತ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ.

    ಈ ಕಂಪನಿಯ ಇತ್ತೀಚಿನ ವಹಿವಾಟಿನ ರೀತಿ ಈ ಕೆಳಕಂಡಂತಿದೆ.

    ಈ ಷೇರಿನಲ್ಲಿ ಒಂದು ವಾರದ ಹೂಡಿಕೆ ಶೇ.2.7 ರಷ್ಟು ಏರಿಕೆ ಕಂಡಿದೆ.
    ಒಂದು ತಿಂಗಳಲ್ಲಿನ ಹೂಡಿಕೆ ಶೇ.45 ರಷ್ಟು ಏರಿಕೆ ಕಂಡಿದೆ.
    ಆರು ತಿಂಗಳಲ್ಲಿ ಈ ಕಂಪನಿ ಹೂಡಿಕೆ ಶೇ.18.67ರಷ್ಟು ಹಾನಿ ಕಂಡಿದೆ.
    ಒಂದು ವರ್ಷದ ಹೂಡಿಕೆಯು ಶೇ.40.57 ರಷ್ಟು ಹಾನಿ ಕಂಡಿದೆ.

    ಅಂದರೆ ಇತ್ತೀಚಿನ ದಿನಗಳಲ್ಲಿ ಈ ಷೇರು ಹೆಚ್ಚು ಹೆಚ್ಚು ಏರಿಕೆ ಕಂಡಿದೆ ಎಂಬುದು ಗಮನಿಸಬೇಕಾದ ಅಂಶ. 2011 ರ ನಂತರದಲ್ಲಿ ಈ ಕಂಪನಿ ಯಾವುದೇ ಡಿವಿಡೆಂಡ್‌ ನೀಡಿರದ ಈ ಕಂಪನಿ ಎಂತಹ ಮಟ್ಟದ ಲಾಭ ಗಳಿಸಿಕೊಟ್ಟಿದೆ. ಇಂತಹ ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಅಪಾಯದ ಮಾಟ್ಟವನ್ನರಿತು ನಡೆಸುವುದು ಒಳಿತು.

    ಬಂಡವಾಳ ಸುರಕ್ಷತೆಗೆ ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಗಳು ಜೊತೆ ಜೊತೆ ಇರಲೇಬೇಕು

    ಭಾರತದ ಘಾತಕ್ ಕಮಾಂಡೋಗಳಿಗೆ ಬೆದರಿದ ಚೀನಾ

    ವಾಸ್ತವ ಗಡಿ ರೇಖೆಯಲ್ಲಿ ಭಾರತ-ಚೀನಾ ಸಮರ ಸನ್ನದ್ಧತೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಸೇನಾ ಸಂಖ್ಯೆ, ಯುದ್ಧ ವಿಮಾನಗಳು, ಕ್ಷಿಪಣಿ ನಿರೋಧಕ ಪಡೆ ಹೀಗೆ ಈ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ, ಉಭಯ ರಾಷ್ಟ್ರಗಳ ಮಧ್ಯೆ ಈಗಿರುವ ಒಪ್ಪಂದದ ಪ್ರಕಾರ ಬೆಂಕಿಯುಗುಳುವ ಅಸ್ತ್ರಗಳ ಪ್ರಯೋಗ (ಫೈರ್ ಆರ್ಮ್) ಬಳಸುವಂತಿಲ್ಲ. ಅದರ ಕಾರಣದಿಂದಾಗಿಯೇ ಕಳೆದ ಕೆಲ ದಿನಗಳ ಹಿಂದೆ ಮೊಳೆಗಳನ್ನು ಅಳವಡಿಸಿದ ಬಡಿಗೆಗಳಿಂದಲೇ ಉಭಯ ದೇಶಗಳ ಯೋಧರು ಕಾದಾಡಿದ್ದರು. ಚೀನಿಯರಿಗೆ ತಕ್ಕ ಶಾಸ್ತಿ ಮಾಡುತ್ತಲೇ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು.

    ಈಗ ಭಾರತದ ಘಾತಕ್ ತುಕಡಿ ಕಮಾಂಡೋಗಳ ಭಯಕ್ಕೆ ಬಿದ್ದಿರುವ ಚೀನಾ ಸೇನಾ ಪಡೆಯುವ ಟಿಬೆಟ್ ಭಾಗದಲ್ಲಿ ತನ್ನ ಸೇನಾ ಪಡೆಗೆ ತರಬೇತಿ ನೀಡಲು ಕನಿಷ್ಠವೆಂದರೂ 20 ಮಾರ್ಷಲ್ ಆರ್ಟ್ಸ್ ಪರಿಣಿತರನ್ನು ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.

    ಘಾತಕ್ ಕಮಾಂಡೋ

    ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಆರಂಭವಾಗುವ ಮೊದಲೇ ಭಾರತ ತನ್ನ ಘಾತಕ್ ಕಮಾಂಡೋಗಳನ್ನು ಈ ಭಾಗದಲ್ಲಿ ನಿಯೋಜಿಸಿತ್ತು ಎಂದು ಹೇಳಲಾಗುತ್ತಿದೆ. ಕೈ-ಕೈ ಹೋರಾಟದಲ್ಲಿ ಅತಿ ಪರಿಣತಿಯನ್ನು ಈ ಕಮಾಂಡೋಗಳು ಹೊಂದಿದ್ದಾರೆ. ವಿಶೇಷವೆಂದರೆ ಇವರಿಗೆ ಕರ್ನಾಟಕದ ಬೆಳಗಾವಿ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇವರೆಲ್ಲರಿಗೂ 43 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆಯಂತೆ. ಮೈಮೇಲೆ 35 ಕೆ. ಜಿ. ಗೂ ಅಧಿಕ ಭಾರ ಹೊತ್ತು ಸುಮಾರು 40 ಕಿ.ಮೀ. ವಿಶ್ರಾಂತಿ ಇಲ್ಲದೆ ಓಡುವ ತರಬೇತಿಯೂ ಇವರು ಪಡೆಯುತ್ತಾರೆ. ಒಮ್ಮೆ ಇವರ ತರಬೇತಿ ಪೂರ್ಣಗೊಂಡರೆ ಬಳಿಕ ಮರುಭೂಮಿ, ನಾನಾ ಭೌಗೋಳಿಕ ಸನ್ನಿವೇಶಗಳಲ್ಲಿ ಅವರನ್ನು ನಿಯೋಜಿಸಿ ತರಬೇತಿಯನ್ನು ನಿಯಮಿತವಾಗಿ ಮುಂದುವರಿಸಲಾಗುತ್ತದೆ.

    ಹಲವು ಕಮಾಂಡೋಗಳು

    ಪ್ರತಿ ಘಾತಕ್ ಕಮಾಂಡೋ ಯೂನಿಟ್ ನಲ್ಲಿ ಒಬ್ಬ ಹಿರಿಯ ಅಧಿಕಾರಿ ಮತ್ತು 22 ಯೋಧರು ಇರುತ್ತಾರೆ. ಸದ್ಯದ ಮಟ್ಟಿಗೆ ಚೀನಾ ಗಡಿಯಲ್ಲಿ 40-45 ಇಂತಹ ಯೋಧರನ್ನು ನಿಯೋಜನೆ ಮಾಡಲಾಗಿದೆ. ಉಳಿದವರು ಈ ಕಮಾಂಡೋಗಳಿಗೆ ಬ್ಯಾಕ್ ಅಫ್ ಆಗಿ ಹಿನ್ನೆಲೆಯಲ್ಲಿ ಇರುತ್ತಾರೆ.

    ಪ್ರತಿ ಬಾರಿಯೂ ಪದಾತಿ ಯೋಧರ ನೇಮಕ (ಇನ್ ಫ್ಯಾಂಟ್ರಿ)ವಾದಾಗಲೂ ಅವರಲ್ಲಿ ಕನಿಷ್ಠವೆಂದರೂ 40 ಜನರನ್ನು ಅವರ ಆರೋಗ್ಯ, ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ಈ ಪಡೆಗೆ ಸೇರಿಸಲಾಗುತ್ತದೆ. ಬಳಿಕ ಅತಿ ಕಠಿಣ ತರಬೇತಿ ನೀಡಲಾಗುತ್ತದೆ. 

    ಯಾಕೆ ಈ ಕಮಾಂಡೋಗಳು

    ಭಾರತ ಮತ್ತು ಚೀನಾ ನಡುವೆ 1996ರಲ್ಲಿ ಆದ ಒಪ್ಪಂದದ ಪ್ರಕಾರ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬಂದೂಕು, ಸ್ಫೋಟಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಉಭಯ ದೇಶಗಳು ಬಳಕೆ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿಯೇ ಬಡಿಗೆ ಹೊಡೆದಾಟ ಈ ಬಾರಿ ಸಂಭವಿಸಿತ್ತು.

    ಹೆಚ್ಚುತ್ತಿರುವ ಸೋಂಕು; ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಮಾಡಿದ್ದೇ ಮುಳುವಾಯ್ತ

    .ಅಶೋಕ ಹೆಗಡೆ
    ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಏರುತ್ತಿದೆ. ಎರಡು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ ಅವರ ಈ ಕೆಳಗಿನ ಟ್ವೀಟ್ ಇದನ್ನು ದೃಢಪಡಿಸುತ್ತದೆ.

    ವೈದ್ಯಕೀಯ ಶಿಕ್ಷಣ ಸಚಿವರೇನೋ ಎಲ್ಲರಿಗೂ ಚಿಕಿತ್ಸೆ ನೀಡಲು ಸರಕಾರ ಸಜ್ಜಾಗಿದೆ ಎನ್ನುತ್ತಾರೆ. ಆದರೆ ಈ ಕೆಳಗಿನ ಘಟನೆಗಳು ಸರಕಾರದ ಸಿದ್ಧತೆಯನ್ನು ದೃಢೀಕರಿಸುವುದಿಲ್ಲ. ಅನ್ಲಾಕ್ ಆದ ನಂತರ ಸೋಂಕು ಜಾಸ್ತಿ ಆಗಬಹುದು ಎಂಬ ಅರಿವಿದ್ದರೂ ಬಿಬಿಎಂಪಿ ಅದನ್ನು ನಿಭಾಯಿಸಲು ಹೆಣಗಾಡುತ್ತಿರುವುದು ನಿತ್ಯವೂ ಸಾಬೀತಾಗುತ್ತಿದೆ. ಈಗಾಗಲೇ ವರದಿ ಆಗಿರುವ ಈ ಘಟನೆಗಳು ಬಿಬಿಎಂಪಿ ಕೈ ಚೆಲ್ಲಿ ಬಿಟ್ಟಿದೆಯೆ ಎಂಬ ಅನುಮಾನ ಮೂಡಿಸುವಂತೆ ಇದೆ.

    ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ವಿಷಯ ತಲುಪಿಸಿದರು. ಬಿಬಿಎಂಪಿ ಅವರನ್ನು ಕರೆದೊಯ್ಯಲು ಬಂದಿದ್ದು ಎರಡು ದಿನಗಳ ಬಳಿಕ! ಆ ಎರಡು ದಿನದಲ್ಲೇ ಅವರು ನರಕ ನೋಡಿಬಿಟ್ಟರು. ಮನೆಯಮಂದಿ ಜತೆ ಮಾತನಾಡುವುದಿರಲಿ, ಮನೆಯಲ್ಲಿ ಇರುವ ಏಕೈಕ ಟಾಯ್ಲಟ್ ಬಳಸಲೂ ಭಯ.

    ಮತ್ತೊಂದು ಘಟನೆಯಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿ ಆ ವ್ಯಕ್ತಿಗೆ ಮುಂಜಾನೆ ಕರೆ ಮಾಡಿ, ‘ನಿಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿಮ್ಮನ್ನು ಕರೆದೊಯ್ಯಲು ಆಂಬುಲೆನ್ಸ್ ಬರುತ್ತದೆ. ಸರಿಯಾಗಿ ಬೆಳಗ್ಗೆ 10 ಗಂಟೆಗೆ ಎರಡು ಜತೆ ಬಟ್ಟೆ ಜತೆ ಇಂತಹ ಸ್ಥಳಕ್ಕೆ ಬನ್ನಿ,” ಎಂದು ಹೇಳಿದರು. ಲಗೇಜ್ ಸಮೇತ ಅವರು 9.50ಕ್ಕೆ ನಿಗದಿತ ಸ್ಥಳದಲ್ಲಿ ಹಾಜರಿದ್ದರು. ಆದರೆ ಆಂಬುಲೆನ್ಸ್ ಬಂದಿದ್ದು ರಾತ್ರಿ 11 ಗಂಟೆಗೆ! ಮನೆಗೆ ಹೋಗುವಂತಿಲ್ಲ, ಹೋಟೆಲ್-ಬೇಕರಿಗೆ ಹೋಗಿ ಊಟ-ತಿಂಡಿ ಮಾಡುವಂತಿಲ್ಲ. ಅದು ಹೋಗಲಿ, ರಸ್ತೆ ಪಕ್ಕ ಕೂರಲೂ ಭಯ- ತಮ್ಮಿಂದಾಗಿ ಬೇರೆಯವರಿಗೆ ಸೋಂಕು ಅಂಟಿಕೊಂಡರೆ ಎಂಬ ಆತಂಕ!

    ಇನ್ನೊಂದು ಘಟನೆಯಲ್ಲಿ ಬಿಬಿಎಂಪಿ ಹೇಳಿದ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಆಂಬುಲೆನ್ಸ್ ಬಂತು. ಇವರೂ ಹತ್ತಿ ಕುಳಿತರು. ಆದರೆ ಇವರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವುದೇ ಆಂಬುಲೆನ್ಸ್ ಚಾಲಕನಿಗೆ ಗೊತ್ತಿರಲಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿ ಕೊನೆಗೆ ಎಲ್ಲೋ ಒಂದು ಕಡೆ ಹಾಸಿಗೆ ವ್ಯವಸ್ಥೆ ಮಾಡುವಷ್ಟರಲ್ಲಿ ಇವರ ಸ್ಥಿತಿ ಗಂಭೀರವಾಗಿ ನೇರವಾಗಿ ಐಸಿಯುಗೆ ದಾಖಲಿಸಬೇಕಾಗಿ ಬಂತು!

    ಬೆಂಗಳೂರಿನ ಅವ್ಯವಸ್ಥೆಯನ್ನು ಸಾದರಪಡಿಸುವ ಘಟನೆಗಳಿವು. ಇಡೀ ದೇಶದಲ್ಲಿ ಲಾಕ್‌ಡೌನ್ ಇದ್ದಾಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಸೋಂಕು ನಿಯಂತ್ರಣದಲ್ಲಿತ್ತು. ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸ್ಫೋಟಗೊಂಡಿತು. ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಪ್ರಕ್ರಿಯೆ ಜಾರಿಗೊಳಿಸಲು ಮುಂದಾದದ್ದೇ ಇದಕ್ಕೆ ಕಾರಣ. ಈಗ ಹೇಗಾಗಿದೆ ಎಂದರೆ ಯಾರು ಎಲ್ಲಿ ಏಕೆ ಸಂಚಾರ ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.

    ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ

    ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಯೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು ಸೋಂಕು ದೃಢಪಟ್ಟ ಬಳಿಕ ಕನಿಷ್ಠ ಎರಡು ದಿನ ತಡವಾಗುತ್ತಿದೆ. ಇದರಿಂದ ಏನಿಲ್ಲವೆಂದರೂ ಒಬ್ಬ ವ್ಯಕ್ತಿಯಿಂದ ಕಡೇಪಕ್ಷ ಹತ್ತು ಮಂದಿಗಾದರೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸೋಂಕು ಅಂಟಿರುತ್ತದೆ. ಸ್ವತಃ ಸೋಂಕಿತನ ಸ್ಥಿತಿಯೂ ಆಸ್ಪತ್ರೆ ಸೇರುವಷ್ಟರಲ್ಲಿ ಗಂಭೀರವಾಗಿರುತ್ತದೆ. ಮರಣ ಪ್ರಮಾಣ ಹೆಚ್ಚಲು ಇದೂ ಕಾರಣ.
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವಾರ ಹಿಂದೆಯೇ ಭಾನುವಾರದ ಲಾಕ್‌ಡೌನ್ ಪ್ರಸ್ತಾಪ ಮಾಡಿದ್ದರು. ಹಿರಿಯ ಸಚಿವರ ವಿರೋಧದಿಂದ ಅದನ್ನು ಕೈ ಬಿಟ್ಟು, ಈಗ ಪರಿಸ್ಥಿತಿ ಉಲ್ಬಣಿಸಿದ ಬಳಿಕ ಮತ್ತೆ ಮುಂದಿನ ವಾರದಿಂದ ಭಾನುವಾರದ ಲಾಕ್‌ಡೌನ್ ಜಾರಿಗೆ ಮುಂದಾಗಿದ್ದಾರೆ.

    ರಾತ್ರಿ10ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಜಾರಿಯಾಗಿಯೇ ಇಲ್ಲ. ಯಾವ್ಯಾವ ಪ್ರದೇಶಗಳಿಂದ ಸೋಂಕು ಹರಡುತ್ತಿದೆ ಎಂಬುದು ಗೊತ್ತಿದ್ದರೂ ‘ಭಯ’ದಿಂದ ಅಧಿಕಾರಿಗಳು ಅಂತಹ ಪ್ರದೇಶಗಳತ್ತ ಸುಳಿಯುತ್ತಲೇ ಇಲ್ಲ. ಕೆಲವರಿಗೆ ಬಾಯಿಮಾತಿನಲ್ಲಿ ಹೇಳಿದವರಿಗೆ ಅರ್ಥವಾಗುವುದಿಲ್ಲ, ದಂಡ ಪ್ರಯೋಗ ಅನಿವಾರ್ಯ. ಪೊಲೀಸ್ ಬಲದೊಂದಿಗೆ ಅಂತಹ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಜಾರಿಗೆ ಪ್ರಯತ್ನ ಮಾಡಿದ್ದರೆ ಪರಿಸ್ಥಿತಿ ಸ್ವಲ್ಪವಾದರೂ ಹಿಡಿತದಲ್ಲಿರುತ್ತಿತ್ತು.

    ಇನ್ನು ಹಾಸಿಗೆ ವಿಚಾರಕ್ಕೆ ಬರೋಣ. ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಬಹುದೆಂದು ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದರು. ತಪಾಸಣೆಗೆ ವೇಗ ನೀಡುತ್ತಿದ್ದಂತೆಯೇ ಹೆಚ್ಚಿನ ಹಾಸಿಗೆ, ವೈದ್ಯ ಸಿಬ್ಬಂದಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಅದನ್ನೂ ಮಾಡಲಿಲ್ಲ. ಸಾವಿರಾರು ಹಾಸಿಗೆ ಸಾಮರ್ಥ್ಯದ ಕೋಚ್‌ಗಳು ರೆಡಿ ಇವೆ, ಅವುಗಳನ್ನು ಒದಗಿಸಲು ರಾಜ್ಯ ಸರಕಾರದಿಂದ ಮನವಿ ಬಂದಿಲ್ಲ ಎಂದು ರೈಲ್ವೆ ಇಲಾಖೆ ಹಲವು ಸಲ ಮಾಧ್ಯಮಗಳ ಮೂಲಕ ಬಹಿರಂಗ ಹೇಳಿಕೆ ನೀಡಿದರೂ ಅದನ್ನು ಬಳಸಿಕೊಳ್ಳುವ ಗೋಜಿಗೇ ಸರಕಾರ ಹೋಗಲಿಲ್ಲ.

    ಈಗ ರೈಲ್ವೆ ಕೋಚ್, ಸಮುದಾಯ ಭವನ, ಕ್ರೀಡಾಂಗಣ, ಹಾಸ್ಟೆಲ್‌ಗಳ ಪಟ್ಟಿ ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ಇರುವವರನ್ನೂ ಏಕಾಏಕಿ ತೆರವುಗೊಳಿಸಲಾಗುತ್ತಿದೆ. ಇದನ್ನೆಲ್ಲ ನೋಡಿದರೆ ರಾಜ್ಯ ಸರಕಾರ, ಬಿಬಿಎಂಪಿಗಳೇ ನಗರದ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿವೆ ಎಂಬ ಭಾವನೆ ಮೂಡಿದರೆ ತಪ್ಪಲ್ಲ.

    ಹಳ್ಳಿಗಳಲ್ಲೂ ಮಹಾಸ್ಫೋಟ?
    ಬೆಂಗಳೂರು ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳೇ ಎಷ್ಟೋ ವಾಸಿ. ವಲಸಿಗರ ಸಮಸ್ಯೆ ಇದ್ದರೂ ಜಿಲ್ಲಾಡಳಿತಗಳು ಸಮರ್ಥವಾಗಿ ನಿಭಾಯಿಸುತ್ತಿವೆ. ಹಳ್ಳಿಗಳಲ್ಲಿ ಜನರೇ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತಿದ್ದಾರೆ. ಊರಿಗೆ ಯಾರೊಬ್ಬರೂ ಹೊರಗಿನಿಂದ, ಸ್ವತಃ ಮಹಾನಗರಗಳಲ್ಲಿ ಇರುವ ತಮ್ಮೂರಿನ ಜನ ಕೂಡ ಕಾಲಿಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಬೆಂಗಳೂರಿನಿಂದ ಬರುವ ಬಸ್‌ಗಳು ನೇರವಾಗಿ ತಾಲೂಕು ಆಸ್ಪತ್ರೆಗೆ ತೆರಳಿ, ಪ್ರತಿಯೊಬ್ಬರ ಥರ್ಮಲ್ ತಪಾಸಣೆ ಕಡ್ಡಾಯ ಎಂಬ ನಿಯಮ ರೂಪಿಸಿಕೊಂಡಿವೆ. ವಿಶೇಷವಾಗಿ ಗ್ರಾಮ ಪಂಚಾಯಿತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.

    ಕಾಯಂ ನಿವಾಸಿ ಅಲ್ಲದ ಯಾರೇ ಊರಿಗೆ ಯಾರಾದರೂ ತಕ್ಷಣದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಪಂಚಾಯಿತಿಯವರಿಗೆ ಮಾಹಿತಿ ರವಾನೆಯಾಗುವ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಅಲ್ಲಿಯೂ ಎಡವಟ್ಟು ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಗಳ ಅವಧಿ ಮುಗಿದಿದೆ ಎಂಬ ನೆಪ ಹೇಳಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.

    ಸುಗ್ರೀವಾಜ್ಞೆ ಮೂಲಕ ಆರು ತಿಂಗಳು ಪಂಚಾಯಿತಿ ಅವಧಿ ವಿಸ್ತರಿಸಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಈಗ ಆಡಳಿತಾಧಿಕಾರಿಗಳ ಸುಪರ್ದಿಗೆ ಒಪ್ಪಿಸಿ ಮತ್ತೊಂದು ಮಹಾಸ್ಫೋಟಕ್ಕೆ ಮುನ್ನಡಿ ಬರೆದಂತಿದೆ ಸರಕಾರದ ನಡೆ.

    ರಾಜೀವ್ ಫೌಂಡೇಶನ್ನೂ, ಯುಪಿಎ ಸರಕಾರವೂ, ಮೋದಿ ಆಡಳಿತವೂ…

    ನಿಮ್ಮ ವೋಟು ಯಾರಿಗೆ? ಕಾಂಗ್ರೆಸ್ ಗೇ…ಇಂದಿರಾ ಗಾಂಧಿಗೆ….ಹಸು ಕರು ಗುರ್ತಿಗೆ… ಹಾಗೆನ್ನುವ ಘೋಷಣೆಗಳನ್ನು ಕೇಳಿಕೊಂಡೇ ಬೆಳೆದವನು ನಾನು. ಇವುಗಳ ಜೊತೆಯಲ್ಲಿ ಗರೀಬಿ ಹಟವೋ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಉಳುವವನೇ ಭೂಮಿಯ ಒಡೆಯ,ಕೊಟ್ಟ ಸಾಲ ಕೊಡಬೇಡಿ… ಎನ್ನುವ ಘೋಷಣೆಗಳೊಂದಿಗೆ ನಿಮ್ಮ ಓಟು ಯಾರಿಗೆ?…ಹಸ್ತದ ಗುರುತಿಗೆ,ಇಂದಿರಾ ಕಾಂಗ್ರೆಸ್ ಗೆ… ಅನ್ನುವುದನ್ನು ಕೇಳುವಾಗ,ನಾನೂ ಗುಂಪಿನಲ್ಲಿ ಹೋಗಿ ಬೊಬ್ಬೆ ಹೊಡೆಯಬೇಕು ಎನ್ನುವ ಆಸೆ. ಆದರೆ ಅಪ್ಪನ ಭಯ.

    ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಪ್ಪ,ನಾನು ಸರ್ಕಾರಿ ನೌಕರ,ಹಾಗಾಗಿ ನಮ್ಮ ಮನೆಯಲ್ಲಿ ಇದೆಲ್ಲವೂ ನಿಷಿದ್ಧ. ನಾವ್ಯಾರೂ ರಾಜಕೀಯದ ಬಗ್ಗೆ ಮುಕ್ತವಾಗಿ ಮಾತಾಡುವುದು ಅಪರಾಧ ಎಂದೇ ಅಪ್ಪನ ಅಪ್ಪಣೆ! ಎರಡು ದಿನ ತಡವಾಗಿ ಬರುತ್ತಿದ್ದ ದಿನಪತ್ರಿಕೆ ಹಿಡಿದು,ಸಾಯಂಕಾಲ ಕಟ್ಟೆಗೆ ತನ್ನ ಸ್ನೇಹಿತರೊಂದಿಗೆ ಕುಳಿತುಕೊಳ್ಳುತ್ತಿದ್ದ ಅಪ್ಪ ದೇವರಾಜ್ ಅರಸ್ ಹೀಗೆಂದರು,ವೀರೇಂದ್ರ ಪಾಟೀಲರು ಹೀಗೆಂದರು,ಜಾರ್ಜ್ ಫರ್ನಾಂಡಿಸ್,ರಾಮಕೃಷ್ಣ ಹೆಗಡೆ, ಮಧು ದಂಡವತೆ,ರಾಜ್ ನಾರಾಯಣ್,ಜಯಪ್ರಕಾಶ್ ನಾರಾಯಣ್,ಚರಣ್ ಸಿಂಗ್,ಮೊರಾರ್ಜಿ ದೇಸಾಯಿ ಏನಂತ ತಮ್ಮ ಅಭಿಪ್ರಾಯ ಮಂಡಿಸಿದರು ಅಂತ ಬಲು ಸ್ವಾರಸ್ಯವಾಗಿ ಪೇಪರಿನಲ್ಲಿ ಮುದ್ರಿಸಿದ್ದ ವಿಷಯವನ್ನು ಒಬ್ಬೊರಿಂದ ಒಬ್ಬರಿಗೆ ಹೇಳಿಕೊಳ್ಳುತ್ತಿದ್ದರು.

    8-10 ವರ್ಷದವನಿದ್ದ ನನಗೆ ವಿಷಯ ಅರ್ಥ ಆಗದಿದ್ದರೂ, ಅಪ್ಪನಿಗೆ,ಅವರ ಗೆಳೆಯರಿಗೆ ಕಾಂಗ್ರೆಸ್,ಇಂದಿರಾಗಾಂಧಿ ಎಂದರೆ ಒಳ್ಳೆ ಅಭಿಪ್ರಾಯ ಇಲ್ಲ ಅನ್ನುವುದಂತೂ ಸ್ಪಷ್ಟವಾಗುತ್ತಿತ್ತು. ಇಡೀ ಕಾಂಗ್ರೆಸ್ ಬೆಂಬಲಿಗರಿಂದ ತುಂಬಿದ್ದ ನನ್ನೂರಲ್ಲಿ 2 ಅಥವಾ 3 ಮನೆಗಳು ಮಾತ್ರ ವ್ಯತಿರಿಕ್ತವಾಗಿದ್ದವು. ಚುನಾವಣೆ ಮುಗಿದು,ಫಲಿತಾಂಶ ಬಂದ ದಿನ ನಮ್ಮ ಮನೆಯ ಮುಂದೆ ನಡು ರಾತ್ರಿಯವರೆಗೆ ತಪ್ಪಡಿ ಬಡಿಯುತ್ತ,ಹೆಂಡ ಕುಡಿದ ಜನರ ಕುಣಿತವೋ ಕುಣಿತ, ಅಪ್ಪನನ್ನು ಹಂಗಿಸುವ ರೀತಿ!!!…ಮತ್ತೆಲ್ಲವೂ ಸ್ತಬ್ಧ,ಮತ್ತೆ ಚುನಾವಣೆ ಬರುವ ತನಕ.ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಗೆಲ್ಲುತ್ತಿದ್ದುದು. ಅದಕ್ಕೆ ವಿರೋಧವೇ ಇರಲಿಲ್ಲ ಎನ್ನಬಹುದು. ಇದ್ದರೂ ಊರಿಗೆ ಒಂದೋ,ಎರಡೋ ಮನೆಗಳು.

    1975 ರ ತುರ್ತುಪರಿಸ್ಥಿತಿ

    ಹತ್ತು ವರ್ಷವಿದ್ದ ನನಗೆ,1975 ರ ತುರ್ತುಪರಿಸ್ಥಿತಿ ಚೆನ್ನಾಗಿಯೇ ನೆನಪಿದೆ. ಹಲವಾರು ರಾಜಕೀಯ ನಾಯಕರ ಹೆಸರುಗಳು ನನಗೆ ಪರಿಚಯವಾದದ್ದೇ ಆಗ. ಕರಾಳ ದಿನಗಳನ್ನು ಅಪ್ಪ ಭಯಂಕರ ಚಿಂತಿತರಾಗಿ, ಕಾಂಗ್ರೆಸ್ ನಡೆಗೆ,ಇಂದಿರಾಗಾಂಧಿ ಎಡೆಗೆ ಅಸಮಾಧಾನ ಹೊರಹಾಕುತ್ತಿದ್ದರು. ಅಪ್ಪಟ ಗಾಂಧೀ ಪ್ರೇಮಿಯಾಗಿದ್ದ ಅಪ್ಪ, ಗಾಂಧಿ,ಸ್ವತಂತ್ರ ಬಂದ ತಕ್ಷಣ, ಕಾಂಗ್ರೆಸ್ ಹೆಸರಿನ ಪಕ್ಷವನ್ನು ವಿಸರ್ಜಿಸಿ ಬಿಡಿ ಅಂದರೂ ನೆಹರು ಕೇಳಲಿಲ್ಲ ಅಂತ ಆಗಾಗ ಹೇಳುತ್ತಿದ್ದರು. 1977 ರ ತುರ್ತುಪರಿಸ್ಥಿತಿ,ನಂತರ ಪ್ರಥಮ ಕಾಂಗ್ರೆಸ್ಸೇತರ,ಜನತಾ ಪಕ್ಷದ ಮೊರಾರ್ಜಿಯವರ ಸರ್ಕಾರ ರಚನೆ,ಮತ್ತೆ ಆರು ತಿಂಗಳಲ್ಲಿ ಚರಣ್ ಸಿಂಗರ ಪತನ,ಮತ್ತೆ ಚುನಾವಣೆ,ಮತ್ತೆ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ, ಅಪ್ಪ ವಿರೋಧಪಕ್ಷದವರ ಕಚ್ಚಾಟಕ್ಕೆ ಬೇಸತ್ತು,ಸ್ವಲ್ಪದಿನ ರಾಜಕೀಯ ಮಾತಾಡುವುದನ್ನೇ ಬಿಟ್ಟು ಬಿಟ್ಟಿದ್ದರು!

    ರಾಜಕೀಯಕ್ಕೆ ಪ್ರವೇಶ ಇಲ್ಲ ಎನ್ನುವ ಫಲಕ ಇದ್ದ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಪ್ರೌಢ ಶಿಕ್ಷಣಕ್ಕೆ ಸೇರಿದ ನಂತರ ರಾಜಕೀಯ ನನ್ನಿಂದಲೂ ದೂರ ಆಯ್ತು. ರಜೆಗೆ ಊರಿಗೆ ಹೋದಾಗ,ಯಾವುದಾದ್ರು ಚುನಾವಣೆ ಬಂದವು ಅಂದ್ರೆ ಜನತಾಪಕ್ಷದ ನೇಗಿಲು ಹೊತ್ತ ರೈತ ನ ಪರ ಪ್ರಚಾರಕ್ಕೆ ಅಪ್ಪನ ಬೈಗುಳದ ನಡುವೆಯೂ ಊರೂರು ತಿರುಗುತ್ತಿದ್ದೆ. ಆಗ ಅದೆಲ್ಲ ಏನೋ ಖುಷಿಯ ವಿಚಾರ. ಕಾಂಗ್ರೆಸ್ ನವರಿಗೆ ಹಣ ಸಿಕ್ಕಾಪಟ್ಟೆ ಮೇಲಿಂದ ಬರುತ್ತಿತ್ತು. ಜನತಾ ಪಕ್ಷದವರಿಗೆ ಹಣವೇ ಇಲ್ಲ. ಕಾರ್ಯಕರ್ತರೇ ವಂತಿಗೆ ಹಾಕಿಕೊಂಡು ಪ್ರಚಾರ ಮಾಡಬೇಕಾದ ಸ್ಥಿತಿ ಆಗ.

    ಮೌಲ್ಯಾಧಾರಿತ ರಾಜಕೀಯ

    1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ ರಾಜಕೀಯ ಎನ್ನುವ ಹೊಸ ಶಬ್ದದೊಂದಿಗೆ ರಾಜ್ಯವಾಳುವಾಗ, ನಾನು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದೆ. ಅಲ್ಲಿಯ ವಿದ್ಯಾರ್ಥಿ ಜೀವನದಲ್ಲಿ ಬೇರೆ ಯಾವ ವಿಷಯಕ್ಕೂ ಸಮಯವೇ ಇರುತ್ತಿರಲಿಲ್ಲ. ಹೀಗೆ ನನ್ನ ಬಾಲ್ಯದ ರಾಜಕೀಯ ಯಾವಾಗಲೋ ಒಮ್ಮೆ ತವರಿಗೆ ಬಂದ ಹೆಣ್ಣಿನ ಸ್ಥಿತಿಯಂತೆ ಇತ್ತು. ನಂತರ ಯಾಕೋ ರಾಜಕೀಯ ಹೇಸಿಗೆ ಅನ್ನುವಷ್ಟು ಬೇಸರವಾಗಿ ಅದರ ತಂಟೆಗೇ ಹೋಗುವುದನ್ನು ಬಿಟ್ಟುಬಿಟ್ಟಿದ್ದೆ. ಆದರೂ ರಾಜಕೀಯ ಬೆಳವಣಿಗೆಗಳ ಅರಿವು ಇತ್ತು.

    ಬಹಳ ದಿನಗಳ ವರೆಗೆ ನಮ್ಮೂರಲ್ಲಿ ಕಾಂಗ್ರೆಸ್,ಜನತಾ ಪಕ್ಷ(ದಳ) ಇದ್ದವೇ ಹೊರತು ಬಿಜೆಪಿ ಇರಲೇ ಇಲ್ಲ. ಇನ್ನು ರಾಮಕೃಷ್ಣ ಹೆಗಡೆಯಂತಹ ಮೌಲ್ಯಾಧಾರಿತ ನಾಯಕನನ್ನು ಆಗಿನ ಅವರದೇ ಪಕ್ಷದವರು ಅವಮಾನ ಮಾಡಿದ್ದ ರೀತಿ ಬಹಳ ಕಾಲದವರೆಗೆ ನನ್ನಲ್ಲಿ ಬೇಸರ ತರಿಸಿತ್ತು. ರಾಜಕೀಯಕ್ಕೆ ಬೇರೆಯೇ ತೆರನಾದ ವ್ಯಕ್ತಿತ್ವ ಬೇಕೇನೋ ಎನ್ನುವಷ್ಟು ನಿರಾಶೆ ಹೊಂದಿ,ಅದರಿಂದ ದೂರ ಆಗಿದ್ದೆ. ಆಗ ವೃತ್ತ ಪತ್ರಿಕೆಗಳೊಂದೇ ಮಾಧ್ಯಮಗಳಾಗಿದ್ದು,ಈಗಿನಷ್ಟು ಕಳಪೆ,ಅಮೌಲ್ಯಯುತವಾಗಿರಲಿಲ್ಲ. ಸ್ವಲ್ಪ ಮಟ್ಟಿಗೆ ಪ್ರಜಾಪ್ರಭುತ್ವದ ನಾಲ್ಕನೇ ಸ್ಥoಭವಾಗಿ ಕೆಲಸ ಮಾಡಿದ್ದಿದೆ.

    ಕಾರ್ಯಾಂಗ, ಶಾಸಕಾಂಗ ಒಂದು ನಿರ್ದಿಷ್ಟ ಕುಟುಂಬದ ಒಡೆತನದಲ್ಲಿದ್ದಾಗ, ಬಹುತೇಕ ದೇಶವಾಸಿಗಳೂ ಅದಕ್ಕೇ ಬೆಂಬಲವಾಗಿದ್ದಾಗ,ನಿರಂಕುಶ ಆಡಳಿತದ ಎಲ್ಲ ಲಕ್ಷಣಗಳೂ ಬರಿ ಕಣ್ಣಿಗೆ ರಾಚುತ್ತಿದ್ದಾಗ,ತುರ್ತುಪರಿಸ್ಥಿತಿಯಂತಹ ಕರಾಳ ವ್ಯವಸ್ಥೆಯನ್ನು ಸಹಿಸಿಕೊಂಡು,ಪ್ರಜಾಪ್ರಭುತ್ವ ಇಂದು ಜೀವಂತವಾಗಿದೆ ಎಂದರೆ,ಅದರ ಶ್ರೇಯಸ್ಸು,ನ್ಯಾಯಾಂಗ ಮತ್ತು ಪತ್ರಿಕಾ ಮಾಧ್ಯಮಕ್ಕೆ ಸಲ್ಲಬೇಕು. ವಿರೋಧ ಪಕ್ಷಗಳು,ಎಡರಂಗ ಗಳು ಇದ್ದವಾದ್ರೂ,ಯಾವಾಗ ಎಲ್ಲರೂ ಅಧಿಕಾರ,ಹಣಕ್ಕಾಗಿ ಒಂದಾಗಿ, ಜನರನ್ನು, ಪಕ್ಷಗಳ ಸಿದ್ಧಾಂತಗಳನ್ನು ಗಾಳಿಗೆ ತುರಿಬಿಡುತ್ತಾರೋ ಎನ್ನುವಂತಹ ದುಗುಡು ಯಾವಾಗಲೂ ಇರುತ್ತಿತ್ತು. ಕಾಂಗ್ರೆಸ್ ಬಿಟ್ಟರೆ,ಬೇರ್ಯಾರೂ ಸ್ಥಿರ ಸರ್ಕಾರ ಕೊಡಲು ಸಾಧ್ಯವೇ ಇಲ್ಲ ಎನ್ನುವಂತಹ ಅಸಹಾಯಕ ಸ್ಥಿತಿಯಲ್ಲಿ ಕಾಂಗ್ರೆಸ್ಸೇತರರು ಚುನಾವಣೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದಂತಹ ಕಾಲ ಅದು. ಮತದಾನ ಪ್ರತಿಶತ 40-45 ಇರುತ್ತಿತ್ತು ಎಂದ್ರೆ, ಯಾರಾದ್ರೂ ಊಹಿಸಿಕೊಳ್ಳಿ,ಅಂದಿನ ರಾಜಕೀಯವನ್ನು. ಅಂತಹ ರಾಜಕೀಯ ವಾತಾವರಣ,ಇಂದಿರಾ ಮತ್ತು ರಾಜೀವರ ಹತ್ಯೆಗಳಲ್ಲಿ ಪರ್ಯಾವಸನ ವಾಗಬಹುದು ಅಂತ ಯಾರೂ ಊಹಿಸಲು ಸಾಧ್ಯವೇ ಇರಲಿಲ್ಲ.ನಂತರ ಭಾರತದಲ್ಲಿ ಆರ್ಥಿಕ ಸುಧಾರಣೆಗಳಿಗೆ ಅಡಿಪಾಯ ಹಾಕಿದ ನರಸಿಂಹರಾಯರ ಆಡಳಿತವನ್ನು ನೋಡಿ ಆಯಿತು. ಈ ವರ್ಷ ನರಸಿಂಹಾರಾಯರ ಜನ್ಮ ಶತಮಾನೋತ್ಸವ. ತೆಲಾಂಗಣ ಸರಕಾರ ಅದನ್ನು ಆಚರಿಸುತ್ತಿದೆ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೆ ಪಕ್ಷದ ನಾಯಕನೊಬ್ಬನ ಜನ್ನಮ ಶತಮಾನೋತ್ಸವ ಎಂಬುದು ನೆನಪಿದೆಯೋ ಕಾಣೆ.

    ಲಂಚ ಕೊಟ್ಟರೆ,ಭಾರತದಲ್ಲಿ ದೆಹಲಿಯಿಂದ ಹಳ್ಳಿಯವರೆಗೆ ಯಾವ ಸರ್ಕಾರಿ ಕೆಲಸ ಬೇಕಾದ್ರೂ ಮಾಡಿಕೊಳ್ಳಬಹುದು ಎನ್ನುವ ಅಂಶ ಸಾರ್ವತ್ರಿಕವಾಗಿ ಜನರಲ್ಲಿ,ನಾಯಕರಲ್ಲಿ,ಅಧಿಕಾರಿಗಳಲ್ಲಿ ಮನೆ ಮಾಡಿಕೊಂಡು ಬಿಟ್ಟಿತ್ತು. ರಾಜಕೀಯ, ಸರ್ಕಾರ,ನೌಕರಿ ಕೆಲವೇ ಕೆಲವು ಜನಕ್ಕೆ ಬಿಟ್ಟರೆ, ಸಾಮಾನ್ಯ ಜನಗಳಿಗೆ ಎಟುಕದ ಮತ್ತು ಸಂಬಂಧ ಇಲ್ಲದ ವಿಷಯಗಳು ಎನ್ನುವ ಹಣೆ ಪಟ್ಟ ಹೊತ್ತು ಗಾಢವಾದ ನಿದ್ರೆಯಲ್ಲಿ ಸಮಾಜ ಮಲಗಿಬಿಟ್ಟಿತ್ತು. ಆಗ ವಾಜಪೇಯಿ ಬಂದ್ರು. ಜನಗಳಿಗೆ ಏನೋ ಆಸೆ. ಉ ಹುಂ…ಬಹುಮತವಿಲ್ಲದೆ, ಹಲವಾರು ಸಿದ್ಧಾಂತಗಳ ಪಕ್ಷಗಳೊಡನೆ ಅಧಿಕಾರ ನಡೆಸಿದ್ದೇ ಸಾಹಸ ಎಂಬಂತಾಗಿ,ಅಂತಹ ಮುತ್ಸದ್ದಿಯೇ ಇನ್ನು ಏನಿದ್ದರೂ ಸಮ್ಮಿಶ್ರ ಸರ್ಕಾರಗಳ ಕಾಲ, ಏಕ ಪಕ್ಷ ಆಡಳಿತ ಕೊನೆಯಾಗಲಿದೆ ಅಂತ ಹೇಳಿದಾಗ ನಾನಂತೂ ಬಹುವಾಗಿ ನೊಂದಿದ್ದೆ.

    90 ಬಂದವನು ಜವಾನನಾಗಿ,40 ಬಂದವನು ದಿವಾನರಾಗಿದ್ದ ದಿನಗಳನ್ನು ನೋಡಿದ್ದ ನಾನು, 20 ಸೀಟ್ ಪಡೆದ ಪಕ್ಷದವರು ದೆಲ್ಲಿಯ ಗದ್ದುಗೆ ಹಿಡಿದದ್ದೂ ನೋಡಿದೆ. ಇತ್ತೀಚೆಗೆ, 224 ಸೀಟ್ ಗಳ ಕರ್ನಾಟಕ ವಿಧಾನ ಸಭೆಯ ಅತಿರಥ,ಮಹಾರಥರು ತೆಪ್ಪಗೆ ಕುಳಿತು,35-40 ಇದ್ದವರು ಆಡಳಿತ ಮಾಡುವುದನ್ನು ನೋಡಿಯೂ ಆಯ್ತು.

    ನರಸಿಂಹರಾಯರ ಸರಕಾರದಲ್ಲಿ ಸಕ್ರಿಯರಾಗಿದ್ದ ಮನಮೋಹನ ಸಿಂಗ್ ಅವರು ತಾವೇ ಪ್ರಧಾನಿ ಆದಗ ಮಹಾಮೌನಿಯಾದರು. ಅಸಹ್ಯ ಎನ್ನುವಷ್ಟು ಹಗರಣಗಳು ನಡೆದವು. ದಿನವೂ ಹಗರಣ ಕೇಳುತ್ತಿದ್ದ ಜನರು,ಇಷ್ಟೆಲ್ಲಾ ಹಳ್ಳಿಯಿಂದ, ದಿಲ್ಲಿಯವರೆಗೆ, ಚುನಾಯಿತರು ದೇಶವನ್ನು ಕೊಳ್ಳೆ ಹೊಡೆದರೂ ಭಾರತ ಉಸಿರಾಡುತ್ತಿದೆಯಲ್ಲ,ಇನ್ನೆಷ್ಟು ಶ್ರೀಮಂತವಾಗಿರಬೇಕು ನನ್ನ ಭಾರತ ಅಂತ ಅದರಲ್ಲೇ ಶ್ರೇಷ್ಟತೆ ಗುರುತಿಸಿ,ಬೆನ್ನು ತಟ್ಟಿಕೊಳ್ಳುವ ಜನರ ಮಧ್ಯದಿಂದ ಬಂದ ನೋಡಿ ನರೇಂದ್ರ ದಾಮೋದರ ಮೋದಿ. ವಾಜಪೇಯಿ ಯನ್ನೇ ನೋಡಿದ್ದ ಜನ,ಅಡ್ವಾಣಿ,ಸುಷ್ಮಾ ಸ್ವರಾಜ್ ಅಂತಹ ಘಟಾನುಘಟಿಗಳನ್ನು ಹಿಂದಿಕ್ಕಿ ಸಂಸದ್ ಭವನದ ಮೆಟ್ಟಿಲಿಗಳಿಗೆ ತಲೆ ಬಾಗಿ ವಂದಿಸಿ ಮೊದಲ ಬಾರಿಗೇ ಪ್ರಧಾನಿ ಪಟ್ಟ ಏರಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಯತನಕದ ಭಾರತದ ಇತಿಹಾಸದಲ್ಲಿ ಹಗರಣ ರಹಿತ ಸರ್ಕಾರ ಎನ್ನಿಸಿಕೊಂಡು ದಿವಾಳಿ ಭಾರತ ವನ್ನು ಸ್ವಚ್ಛ ಭಾರತ ಅಂತ ಎತ್ತಿ ನಿಲ್ಲಿಸಿದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಿಂದ ಬರೆಯಲ್ಪಡುತ್ತದೆ.

    ರಾಜೀವ್ ಗಾಂಧೀ ಫೌಂಡೇಶನ್ ವಿವಾದ

    2014 ರ ತನಕ ಕಾಂಗ್ರೆಸ್ ಮಾಡಿದ ಅವಾಂತರ …4G ಹಗರಣ, ಕಾಮನ್ವೆಲ್ತ್ ಗೇಮ್ ಹಗರಣ, ಕಲ್ಲಿದ್ದಲು ಹಗರಣ ಎಲ್ಲ ಅವರ ಕಾಲಾವಧಿಯಲ್ಲೇ ಬಯಲಿಗೆ ಬಂದು,ಸರ್ಕಾರದ ಪಾಲುದಾರರೇ ಜೈಲಿನ ಪಾಲಾಗಿದ್ದು ಒಂದೆಡೆ ಆದರೆ, ಯಾರಿಗೂ ಗೊತ್ತಾಗದ ಹಾಗೆ ಖಾಸಗಿ ಒಡೆತನದ ರಾಜೀವ್ ಗಾಂಧೀ ಫೌಂಡೇಶನ್ ಗೆ ಸರಕಾರಿ ಉದ್ಯಮಗಳಿಂದ ದೇಣಿಗೆ ಹೋಗುತ್ತಿತ್ತು ಎಂಬ ಸಂಗತಿ ಬೆಚ್ಚಿ ಬೀಳಿಸಿದೆ.ಸಾರ್ವಜನಿಕರು PMNRF ಗೆ ಕೊಟ್ಟ ಹಣವನ್ನು ರಾಜೀವಗಾಂಧಿ ಫೌಂಡೇಶನ್ ಟ್ರಸ್ಟ್ ಎನ್ನುವ ಖಾಸಗಿ ಸಂಸ್ಥೆಗೆ ವರ್ಗಾಯಿಸಿಕೊಂಡಿದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಚೀನಾದಿಂದಲೂ ಈ ಫೌಂಡೇಶನ್ ಗೆ ಹಣ ಬಂದಿರುವುದು ಈಗ ಮತ್ತೊಂದು ವಿವಾದ.

    ಸಮಾಜವಾದದ ಹಿನ್ನೆಲೆಯಿಂದ,ಜಾತ್ಯಾತೀತರಾಗಿ ಗುರುತಿಸಿಕೊಂಡಿರುವ, ಕಾಂಗ್ರೆಸ್ ನ ವಂಶ ಪಾರಂಪರ್ಯ ನಾಯಕತ್ವ ವನ್ನು ಧಿಕ್ಕರಿಸಿದಂತಹ ದೇವೇಗೌಡರು, 2019 ರ ಚುನಾವಣೆಯಲ್ಲಿ ಸೋತು, ತಮ್ಮ 88ನೇ ತಾರುಣ್ಯದಲ್ಲಿ ಕಾಂಗ್ರೆಸ್ ಸಹಾಯದಿಂದ ರಾಜ್ಯಸಭೆಗೆ ಹೋದ ಮರುದಿನವೇ ಹೇಳ್ತಾರೆ… ಮೋದಿಯವರೇ ದೇಶದಲ್ಲಿ ರಾಷ್ಟ್ರೀಯತೆ ಹೆಚ್ಚಾಗ್ತಿದೆ,ದಯಮಾಡಿ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಿ ಅಂತ!

    ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ 32 ಲಕ್ಷ ಕೋಟಿಗಳಷ್ಟು ಸಾಲ ಪಡೆದು,ದೇಶಬಿಟ್ಟು ಹೋಗಿರುವ ಕಳ್ಳರನ್ನು ಹಿಡಿದು ತರಲು ಮೋದಿ ಶ್ರಮಿಸುತ್ತಿದ್ದರೆ, ಯಾರೊಬ್ಬರೂ ಪ್ರಶಂಸಿವುದು ಇರಲಿ,ಸೌಜನ್ಯದ ಸಹಕಾರವನ್ನೂ ಕೊಡದೆ,ಉಲ್ಟಾ ಇವರು ಮಾಡಿರುವ ತಪ್ಪುಗಳನ್ನೆಲ್ಲ ಮೋದಿ ಮೇಲೆ ಹಾಕಿ ಮಾತಾಡುತ್ತಾರಲ್ಲ,ಇನ್ನೆಂತಹ ಧೈರ್ಯ ಇವರದ್ದು?

    ವಿನಾಶದತ್ತ ಹೊರಟಿದ್ದ ಭಾರತವನ್ನು ರಕ್ಷಿಸಿದ ಕೀರ್ತಿ ಮೋದಿಗೆ ಇತಿಹಾಸ ಸಲ್ಲಿಸುತ್ತದೆ,ಅದರಲ್ಲಿ ಯಾವ ಸಂಶಯವೂ ಬೇಡ. ಅಪರೂಪಕ್ಕೆ ಸಿಕ್ಕ ಇಂತಹ ನಾಯಕನನ್ನು ಗೌರವಿಸಿ,ಅನುಸರಿಸುವುದು,ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಆಗುವುದು ಯಾವಾಗ? ಒಳಿತು,ಕೆಡುಕುಗಳು ಕಣ್ಣ ಮುಂದೆ ಸ್ಪಷ್ಟವಾಗಿ ಇದ್ದರೂ ಪ್ರಜೆಗಳು ಯಾವುದೋ ಮಂಕುಜಾಲದಲ್ಲಿ ಬಿದ್ದ ಹಾಗೆ ವರ್ತಿಸುವುದನ್ನು ಕಂಡಾಗ ತುಂಬಾ ನೋವಾಗುತ್ತದೆ.

    ಆನೆ ನಡೆದಿದ್ದೇ ದಾರಿ, ಪೇಟೆ ಪ್ರದರ್ಶಿಸಿದ್ದೇ ಸರಿ

    ಇಂದಿನ ದಿನಗಳಲ್ಲಿ ಷೇರುಪೇಟೆ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಲೇಬೇಕು ಕಾರಣ ಮಂತ್ರಕ್ಕಿಂತ ಮಾತೇ ಹೆಚ್ಚು ಎಂಬುವ ಪರಿಸ್ಥಿತಿ ಯಲ್ಲಿದ್ದೇವೆ. ಅಂದರೆ ಆಂತರಿಕ ಸಾಧನೆ ಇಲ್ಲದಿದ್ದರೂ ಅಲಂಕಾರಿಕ ಪ್ರಚಾರದಿಂದ ಷೇರಿನ ಬೆಲೆಗಳು ಗಗನಕ್ಕೇರುತ್ತಿವೆ

    ಹೂಡಿಕೆಮಾಡಿದ ಹಣದ ಸುರಕ್ಷತೆಯನ್ನು ಸೂತ್ರವಾಗಿಸಿಕೊಂಡು, ಚಟುವಟಿಕೆ ಜಾಲ ಹರಡಬೇಕಾಗಿದೆ

    ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ. ಕಾರಣ ಹಣಗಳಿಕೆಯೊಂದೇ ಇಂದಿನ ವಹಿವಾಟುದಾರರ ಗುರಿ. ಬೆಲೆ ಏರಿಕೆ ಸ್ಥಿರತೆ ಕಾಣಲು ಕಾರ್ಪೊರೇಟ್ ಸಾಧನೆಗಳು ಬೆಂಬಲಿಸುವ ಮಟ್ಟದಲ್ಲಿಲ್ಲ.

    ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ. ಕಾರಣ ಇಂತಹ ಕಂಪನಿಗಳಲ್ಲಿ ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದ್ದು, ಡೆರಿವೆಟೀವ್ಸ್ ಪೇಟೆಗನುಗುಣವಾಗಿ ಬದಲಾಗುವುದರಿಂದ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಒಂದು ವೇಳೆ ಹೂಡಿಕೆ ಧೀರ್ಘಕಾಲವಾದರೆ ಡಿವಿಡೆಂಡ್ ವಿತರಿಸುವ ಸಾಧ್ಯತೆ ಇರುತ್ತದೆ.

    ಇಂದಿನ ದಿನಗಳಲ್ಲಿ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಸರಳ ಸೂತ್ರಗಳು:

    • ಹೂಡಿಕೆಮಾಡಿದ ಹಣದ ಸುರಕ್ಷತೆಕಡೆ ಹೆಚ್ಚು ಗಮನ ನೀಡಬೇಕು.
    • ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ.
    • ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ.
    • ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಇಂದಿನ ಅಗತ್ಯ.
    • ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ.
    • ಕಾರ್ಪೊರೇಟ್ ಫಲಗಳನ್ನು ವಿತರಿಸುವ ಕಂಪೆನಿಗಳತ್ತ ಹೆಚ್ಚು ಒಲವಿರಲಿ.
    • ಹೂಡಿಕೆ ದೀರ್ಘಕಾಲೀನವಾದರೂ – ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ.
    • ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ

    ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಇಂದಿನ ಅಗತ್ಯ. ಕಾರಣ ರಭಸದ ಏರಿಳಿತಗಳಿದ್ದಲ್ಲಿ ಮಾತ್ರ ವಹಿವಾಟುದಾರರು ಲಾಭ ಗಳಿಸಲು ಸಾಧ್ಯ. ಉದಾಹರಣೆಗೆ ಬಯೋಕಾನ್, ಬಜಾಜ್ ಫೈನಾನ್ಸ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಿಹೆಚ್ಇಎಲ್, ಭಾರತ್ ಪೆಟ್ರೋಲಿಯಂ, ಮುಂತಾದವು ಜೀಕುತ್ತಾ ಪ್ರದರ್ಶಿಸಿದ ಅವಕಾಶಗಳು ಅಪಾರ.

    ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ. ಕಾರಣ ಈ ಕಂಪನಿಗಳು ಕಾರ್ಪೊರೇಟ್ ಫಲಗಳನ್ನು ವಿತರಿಸುವ ಸಾಧ್ಯತೆ ಹೆಚ್ಚು.

    ಅಪಾರವಾದ ಏರಿಳಿತದ ಈ ದಿನಗಳಲ್ಲಿ ಹೂಡಿಕೆ ದೀರ್ಘಕಾಲೀನವಾದರೂ – ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ. ಹಾಗಿದ್ದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸುರಕ್ಷತೆ ಕಾಣಬಹುದು.

    ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ. ಯಾವ ವಿಶ್ಲೇಷಣೆಗಳು ಪರಿಪೂರ್ಣವಾಗಿರದು.

    ನೆನಪಿರಲಿ ಆನೆ ನಡೆದಿದ್ದೇ ದಾರಿ, ಪೇಟೆ ಪ್ರದರ್ಶಿಸಿದ್ದೇ ಸರಿ

    ಚಿತ್ರ ಸೌಜನ್ಯLorenzo from Pexels

    ನಿನ್ನ ನೀ ಪ್ರೀತಿಸು

    ಉದ್ಯೋಗ ಸಿಕ್ಕಿದ್ದು, ನನ್ನ ಪಾಲಿಗೆ ದಕ್ಕಿದ ಪುಣ್ಯವೆಂದೇ ಭಾವಿಸಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿರುತ್ತೇವೆ. ಕ್ರಮೇಣ ಅಲ್ಲಿನ ವ್ಯವಸ್ಥೆಗಳಿಗೆ (ಅದು ಹೇಗೇ ಇದ್ದರೂ) ಹೊಂದಿಕೊಳ್ಳುತ್ತಾ ಬದುಕು ಕಟ್ಟಿಕೊಳ್ಳಲು ಶುರು ಮಾಡಿರುತ್ತೇವೆ. ವರ್ಷ ಕಳೆದಂತೆ ಆ ಸಂಸ್ಥೆಯೊಂದಿಗೆ ಅದೇನೋ ಒಂದು ರೀತಿಯ ಬಂಧ ಇನ್ನಿಲ್ಲದಂತೆ ಬೆಳೆದು ಬಿಟ್ಟಿರುತ್ತದೆ.

    ಏಳೆಂಟು ವರ್ಷ ದುಡಿದರೂ ಒಂದು ಪ್ರೊಮೋಷನ್ ಇರುವುದಿಲ್ಲ, ಹೇಳಿಕೊಳ್ಳುವಂತಹ ಹೈಕ್ ಕೂಡಾ ಸಿಕ್ಕಿರುವುದಿಲ್ಲ, ಅದೆಲ್ಲಾ ನಾಳೆಗೆ ಸರಿ ಹೋಗುತ್ತದೆ ಎನ್ನುವ ನಂಬಿಕೆಯೂ ಅಲ್ಲಿಲ್ಲ. ಆದರೂ ಅಲ್ಲಿಂದ ಸ್ವತಃ ತಾನೇ ಗಟ್ಟಿ ಮನಸ್ಸು ಮಾಡಿ ಎದ್ದು ಹೋಗುವುದಕ್ಕೆ ಮನಸ್ಸು ಮಾಡಿರುವುದಿಲ್ಲ. ಯಾಕಂದರೆ ತಮ್ಮದೇ ಸಂಸ್ಥೆಯೆಂಬಂತೆ ನಿತ್ಯ ದುಡಿಯುತ್ತೇವೆ. ನಿಯತ್ತಿನಿಂದ ಕೆಲಸ ಮಾಡಿರುತ್ತೇವೆ. ಅದುವೇ ಜೀವನ ಎಂಬಂತೆ ಅದೇ ವೃತ್ತಿಯಲ್ಲಿ ಹೊಂದಿಕೊಂಡು ಕೆಲಸ ಮಾಡುತ್ತೇವೆ. ನನಗೆ ಋಣ ಇರುವವರೆಗೂ ಅಲ್ಲಿ ದುಡಿಯುತ್ತೇನೆ ಎನ್ನುವ ನೆಪ ಹೇಳಿಕೊಂಡು ಅಲ್ಲೇ ಇರಲು ಪ್ರಯತ್ನಿಸುತ್ತೇವೆ.

    ಕಂಫರ್ಟ್‍ಝೋನ್

    ಸಂಸ್ಥೆಯೊಂದಿಗೆ ನಿಷ್ಠುರವಾಗಿ ದುಡಿಯುವ ಕೆಲವರಿಗೆ ನಾನು ಇದ್ದಷ್ಟೂ ಸಮಯ ಅಲ್ಲಿ ಯಾವುದೇ ರೀತಿಯ ನನ್ನ ಬೆಳವಣಿಗೆಗೂ ಅವಕಾಶ ಇರುವುದಿಲ್ಲ ಅನ್ನೋದು ಗೊತ್ತು. ಆದರೂ ಅಲ್ಲೇ ಉಳಿಯುತ್ತಾನೆ. ಯಾಕಂದರೆ ಅಲ್ಲಿ ಕೆಲಸ ಮಾಡುವುದರ ಜತೆಗೆ ಅಲ್ಲೊಂದು ಕಂಫರ್ಟ್‍ಝೋನ್ ಸೃಷ್ಟಿಸಿಕೊಂಡುಬಿಟ್ಟಿರುತ್ತೇವೆ.
    ಕಚೇರಿಯಲ್ಲಿನ ವಾತಾವರಣ, ನಮ್ಮ ವೃತ್ತಿ ಬಗೆಗೆ ನಮಗೇ ಇರುವ ಅಪನಂಬಿಕೆ, ಆಫೀಸ್ ಪಾಲಿಟಿಕ್ಸ್, ಹೀಗೆ ಹಲವು ವಿಚಾರಗಳು ಆಗಾಗ್ಗೆ ಮನಸ್ಸಿಗೆ ಬಂದು ಗೊಂದಲ ಸೃಷ್ಟಿಸುತ್ತಿರುತ್ತದೆ. ಇದರ ಫಲಿತಾಂಶ ಕೇವಲ ನಮ್ಮ ಮೇಲೇ ನಮಗೆ ಉಂಟಾಗುವ ಅಪನಂಬಿಕೆ ಮತ್ತು ಖಿನ್ನತೆ.

    ಅದರ ಮಧ್ಯೆ ಒಮ್ಮೆ ಉದ್ಯೋಗ ಕಳೆದುಕೊಂಡ ಮೇಲೆ ಬೇರೆ ದಾರಿ ಇಲ್ಲವೇನೋ ಎಂಬಂತೆ ಕುಸಿದು ಕುಳಿತು ಬಿಡುತ್ತಾನೆ. ಆದರೆ ಜಗತ್ತಿನಲ್ಲಿ ಪರಿಸ್ಥಿತಿ ಖಂಡಿತಾ ಹಾಗಿರುವುದಿಲ್ಲ. ಮಾಡಲು ಮನಸ್ಸಿದ್ದರೆ ಅವಕಾಶಗಳು ಹಲವು. ಬದುಕು ಕಟ್ಟಿಕೊಳ್ಳಲು ನೂರಾರು ದಾರಿ ಇವೆ. ಅದನ್ನು ನಾವೇ ಕಂಡುಕೊಳ್ಳಬೇಕಷ್ಟೇ.ಹಿರಿಯರೊಬ್ಬರು ಹೇಳಿದ ಪ್ರಸಿದ್ಧ ಮಾತು “ನಿಮ್ಮ ಕೆಲಸವನ್ನು ಪ್ರೀತಿಸಿ, ಸಂಸ್ಥೆಯನ್ನಲ್ಲ. ಯಾಕಂದರೆ ಕಂಪನಿ ಯಾವಾಗ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೋ ಗೊತ್ತಿಲ್ಲ’ ಎಂದು. ಸಂಸ್ಥೆ ದೂರ ಮಾಡಿದರೂ ಅದೇ ಕೆಲಸ ನಮ್ಮನ್ನು ಯಾವ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಕೈಹಿಡಿಯುತ್ತದೆ. ಅನುಭವಕ್ಕೆ ಅವಕಾಶಗಳು ಹೆಚ್ಚು. ಗಳಿಸಿದ ಜ್ಞಾನ ಮತ್ತು ಅನುಭವ ನಮಗೆ ಅವಕಾಶಗಳನ್ನು ಹುಡುಕಿಕೊಡುತ್ತದೆ ಎಂಬುದು ಸತ್ಯ.

    ಆತ್ಮಗೌರವ ಇರಲಿ
    ಅದಕ್ಕೂ ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ತನ್ನನ್ನು ತಾನು ಪ್ರೀತಿಸುವುದು ಅಂದರೆ ಆತ್ಮಗೌರವ, ಮನಸ್ಸಿನಲ್ಲಿ ಸಕಾರಾತ್ಮಕ ಭಾವ, ಯಾವುದೇ ಕಂಡೀಶನ್‍ಗಳಿಲ್ಲದೇ ತನ್ನನ್ನು ತಾನು ಮೊದಲು ಒಪ್ಪಿಕೊಳ್ಳುವುದು. ಇದೊಂದು ರೀತಿಯಲ್ಲಿ ಆರೋಗ್ಯಕರ ಚಿಂತನೆ. ಈ ಜಗತ್ತಿನಲ್ಲಿ ಯಾರೂ ಕೂಡಾ ಪರಿಪೂರ್ಣರಲ್ಲ.

    ಪ್ರತಿಯೊಬ್ಬರಲ್ಲೂ ಬಲ ಮತ್ತು ಬಲಹೀನತೆಗಳಿರುತ್ತವೆ. ಅದನ್ನು ನಾವೇ ಸರಿಪಡಿಸಿಕೊಳ್ಳಬೇಕಷ್ಟೇ. ಯಾವಾಗ ನಮ್ಮನ್ನು ನಾವು ಇಷ್ಟಪಡುದಿಲ್ಲವೋ ಅಲ್ಲಿಯವರೆಗೆ ನಾವು ಇತರರ ಬಗ್ಗೆಯೂ ಒಲವು, ಪ್ರೀತಿಯ ಭಾವ, ಒಟ್ಟಿನಲ್ಲಿ ನಮ್ಮದೇ ಜೀವನದ ಬಗ್ಗೆ ಕನಸು ಕಟ್ಟಿಕೊಳ್ಳುವುದಕ್ಕೆ ಸಾಧ್ಯ ಇಲ್ಲ.
    ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದರಿಂದ, ನಮ್ಮೊಳಗಿನ ಕೌಶಲಗಳನ್ನು ಗುರುತಿಸಿಕೊಳ್ಳುವುದರಿಂದ ಮತ್ತಷ್ಟು ಬೆಳವಣಿಗೆ ಸಾಧ್ಯ.

    ಉದಾಹರಣೆಗೆ ಉದ್ಯೋಗ ಕಳೆದುಕೊಂಡಾಗ ಧೃತಿಗೆಡದೆ ನಮ್ಮದೇ ಆಸಕ್ತಿಯ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಲ್ಲಿ ಕೆಲಸ ಮಾಡಲು ಇತರರ ಅಪ್ರೂವಲ್‍ಗಾಗಿ ಕಾಯಬೇಕಿಲ್ಲ. ಅದರಿಂದ ವೈಯಕ್ತಿಕ ಬೆಳವಣಿಗೆ ಸಾಧ್ಯ. ಅದು ನಮ್ಮನ್ನು ಉತ್ತಮ ಸ್ಥಿತಿಯೆಡೆಗೆ ಕರೆದೊಯ್ಯುವ ದಾರಿ ಕೂಡಾ ಅದಾಗಿರುತ್ತದೆ. ಬೆಳವಣಿಗೆಯ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ತೊಂದರೆಗಳನ್ನು ಎದುರಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಂತಹ ಆತ್ಮವಿಶ್ವಾಸ ಮತ್ತು ನಂಬಿಕೆ ಬಹಳ ಮುಖ್ಯ. ಯಾವಾಗ ನಮ್ಮನ್ನು ನಾವು ಪ್ರೀತಿಸಲು ಶುರು ಮಾಡುತ್ತೇವೆಯೋ ಆಗ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಆರೋಗ್ಯವಾಗಿರುತ್ತೇವೆ. ಅದರ ಫಲಿತಾಂಶ ಎಲ್ಲವುಗಳಿಗಿಂತ ವಿಭಿನ್ನವಾಗಿರುತ್ತದೆ.

    ಚಿತ್ರ ಕೃಪೆ : eberhard grossgasteiger from Pexels

    ದಕ್ಷಿಣ ಭಾರತದ ಸುಂದರ ಪುಷ್ಕರಣಿಗೆ ಆಮೆವೇಗದ ಅಭಿವೃದ್ಧಿ

    ಸಂತೇಬೆನ್ನೂರು ದಾವಣಗೆರೆ ಜಿಲ್ಲೆ ಅಡಿಕೆ ನಾಡು ಚನ್ನಗಿರಿ ತಾಲ್ಲೂಕಿನ ಹೋಬಳಿ ಕೇಂದ್ರ. ಇಲ್ಲಿನ ಐತಿಹಾಸಿಕ ಪುಷ್ಕರಣಿಯೊಂದಿಗೆ ಬೆಸೆದುಕೊಂಡಿರುವ ಗ್ರಾಮ ಸದಾ ಚಟುವಟಕೆಯ ತಾಣ.

    ನಾವು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪುಷ್ಕರಣಿ ನಮ್ಮ ನಿತ್ಯದ ನೀರಿನ ಮೂಲ. ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಆಗ ಇರಲಿಲ್ಲ. ಶಿಲ್ಪಕಲೆಯಲ್ಲಿ ಮನಮೋಹಕ ರಚನೆಯಲ್ಲಿ ಯಾರು ಕಟ್ಟಿರಬಹುದು ಎಂಬ ಪ್ರಶ್ನೆ ಆಗಾಗ ತಲೆ ಕೊರೆಯುತ್ತಿತ್ತು. ಗ್ರಾಮದ ಅರ್ಧಭಾಗದ ಜನ ನೀರಿಗಾಗಿ ದಿನ ಬೆಳಿಗ್ಗೆ ಪುಷ್ಕರಣಿಗೆ ಬರಬೇಕು. ಗಡಿಗೆ, ತಾಮ್ರದ ಕೊಡ, ಸೈಕಲ್ ಗಳಲ್ಲಿ ನೀರು ಹೊರುವ ಕಾಯಕ. ದನಕರುಗಳಿಗೆ ನಿರುಣಿಸುವುದು, ಮೈ ತೊಳೆಯುವುದು ಅಲ್ಲೆ. ಸುಮಾರು 30 ರಿಂದ 40 ಮೆಟ್ಟಿಲು ಕೊಡ ಹೊತ್ತು ಏರಬೇಕು. ಅಂದಿನ ಜನರ ಐತಿಹ್ಯ ದೇವರುಗಳು ಒಂದೇ ರಾತ್ರಿಗೆ ಹೊಂಡ ಕಟ್ಟಿದರು. ಯಾರೋ ಬೆಳಗಾಗುವ ವೇಳೆ ನೋಡುವರೆಂದು ಅಪೂರ್ಣಗೊಳಿಸಿದರು ಎಂದು ತಲೆಯಲ್ಲಿ ತುಂಬಿತ್ತು.

    ಪ್ರೌಢಶಾಲೆ, ಕಾಲೇಜು ಓದುವಾಗ ಮನೆಗಿಂತ ಹೆಚ್ಚು ಪುಷ್ಕರಣಿಯಲ್ಲೇ ಓದಲು ಹೋಗುತ್ತಿದ್ದೆವು. ಕಲ್ಲಿನ ಮಂಟಪಗಳ ತಣ್ಣನೆ ಗಾಳಿ, ನೀರಿನಲ್ಲಿ ಮೀನಿನ ಓಡಾಟ, ಪಕ್ಷಿಗಳ ಹಾರಾಟದೊಂದಿಗೆ ರಮ್ಯ ಪರಿಸರವೇ ಓದಿಗೆ ಪ್ರೇರಣೆ ನೀಡುವಂತೆ ಇತ್ತು. ಆಗ ಪ್ರಾಚ್ಯವಸ್ತು ಇಲಾಖೆ ಅಷ್ಟಾಗಿ ಗಮನ ಹರಿಸಿದ್ದಿಲ್ಲ. ಯಾವ ನಿರ್ಭಂಧವೂ ಇಲ್ಲದೇ ಓಡಾಟ ನಡೆದಿತ್ತು. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಗ್ರಾಮದ ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್ ಅವರಿಂದ ನಡೆಯಿತು.

    ಶಾಸನಗಳು, ಮೆಕೆಂಜಿ ಪತ್ರ ಹಾಗೂ ವಿವಿಧ ಮೂಲಗಳಿಂದ 15 ಶತಮಾನದಲ್ಲಿ ನಾಯಕ ವಂಶ ಇಲ್ಲಿ ಆಡಳಿತ ನಡೆಸಿತ್ತು. ತನ್ನ ಸಾಮ್ರಾಜ್ಯ ವಿಸ್ತರಣೆಯೊಂದಿಗೆ ಶ್ರೀಮಂತವಾಗಿ ಉತ್ತುಂಗಕ್ಕೇರಿತ್ತು. ಕೆಂಗ ಹನುಮಪ್ಪ ನಾಯಕ ಪುಷ್ಕರಣಿ ನಿರ್ಮಿಸಲು ಮುಂದಾದರು. ಉತ್ತರ ದಿಕ್ಕಿನಲ್ಲಿ ಕೋಟೆ, ಅರಮನೆ ಇದ್ದವು. ದಕ್ಷಿಣ ದಿಕ್ಕಿನಲ್ಲಿ ಶ್ರೀ ರಾಮ ದೇವರ ದೇಗುಲ ನಿರ್ಮಿಸಲಾಗಿತ್ತು. ಹೊಂದಿಕೊಂಡತೆ ರಾಮತೀರ್ಥ ದೇವರ ವಿವಿಧ ಆರಾಧನೆಗಾಗಿ ನಿರ್ಮಿಸಲಾಗಿತ್ತು. ಅದಕ್ಕಾಗಿ ವಿಶೇಷ ಗ್ರಾನೈಟ್ ಹಾಗೂ ಕಲಾಕೃತಿಗಳಿಂದ ಆಕರ್ಷಣೆ ನೀಡಲಾಗಿತ್ತು.

    ಅಂದೇ ಮಳೆಕೊಯ್ಲು ರೀತಿಯಲ್ಲಿ ಭೂಗರ್ಭದಲ್ಲಿ ಕಲ್ಲಿನ ಕೊಳವೆ ಮೂಲಕ ಜಲಹರಿ ಮಂಟಪದಿಂದ ನೀರು ಸಂಗ್ರಹ ಮಾಡಲು ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. ಇಂದಿಗೂ ಮಳೆಗಾಲದಲ್ಲಿ ಜಲಪಾತದಲ್ಲಿ ನೀರು ಧುಮುಕುವ ನೋಟ ಮನಮೋಹಕ. ಮಧ್ಯದಲ್ಲಿನ ವಸಂತ ಮಂಟಪದ ಕಾಲ ನೈಪುಣ್ಯತೆ ಸಾಕ್ಷಿ ಆಗಿದೆ. ನೀರಿನ ಮೇಲಿನ ರಥದಂತೆ ಆಕರ್ಷಣೀಯವಾಗಿದೆ. ಬಿಜಾಪುರ ಸುಲ್ತಾನರ ದಾಳಿಗೆ ತುತ್ತಾಗಿ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈಗ ಅದು ಮುಸಾಫೀರ್ ಖಾನ ಹೆಸರಿನಲ್ಲಿ ಕಲ್ಲಿನ ಬೃಹತ್ ಕಮಾನುಗಳ ಕಟ್ಟಡ ಪುಷ್ಕರಣಿ ಎದುರಿಗಿದೆ.

    ಖ್ಯಾತ ಸಂಶೋಧಕ ಡಾ.ಚಿದಾನಂದ ಮೂರ್ತಿ ಇಷ್ಟೊಂದು ಸುಂದರ ಪುಷ್ಕರಣಿ ದಕ್ಷಿಣ ಭಾರತದಲ್ಲಿಯೇ ಇಲ್ಲ ಎಂದು ಹೇಳಿದ್ದರು. ಇದು ಧ್ವಜಾಯದಲ್ಲಿದ್ದು, 235 ಅಡಿ ಉದ್ದ, 245 ಅಡಿ ಅಗ ಹಾಗೂ 30 ಅಡಿ ಆಳವಿದೆ. ಸುತ್ತಲೂ 3 ಅಡಿ ಅಗಲ ಹಾಗೂ ಉದ್ದವಿರುವ ಪೌಳಿ ಇದೆ. ನಾಲ್ಕು ದಿಕ್ಕಿನಲ್ಲಿಯೂ ಪ್ರವೇಶ ದ್ವಾರಗಳಿವೆ. ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕಿನ ಪ್ರವೇಶ ದ್ವಾರ ಮಂಟಪಗಳಿವೆ. 12 ಕಲ್ಲಿನ ಕಂಬಗಳ ಆಧಾರದ ಮೇಲೆ 15 ಅಡಿ ಉದ್ದ, 22 ಅಡಿ ಅಗಲದ ವ್ಯಾಸ ಪೀಠದ ಮೇಲೆ ನಿರ್ಮಿಸಿದ್ದಾರೆ. ಕಂಬಗಳಲ್ಲಿ ವಿವಿಧ ದೇವರ ವಿಗ್ರಹ ಕೆತ್ತಲಾಗಿದೆ. ತಳ ಭಾಗ ತಲುಪಲು 52 ಮೆಟ್ಟಿಲುಗಳಿವೆ.

    ನೀರಿನ ಮಧ್ಯದಲ್ಲಿರುವುದು ವಸಂತ ಮಂಟಪ. ಇದಕ್ಕೆ ನಾಲ್ಕು ಅಂತಸ್ತುಗಳಿವೆ. ಹಿಂದೂ ಹಾಗೂ ಇಸ್ಲಾಂ ವಾಸ್ತುಶಿಲ್ಪದಲ್ಲಿ ರಚಿತವಾಗಿದೆ. ಇವುಗಳನ್ನು ಪ್ರವೇಶದ್ವಾರ, ಸುರಂಗ ಮಾರ್ಗ ಮಹಡಿ, ಉಯ್ಯಾಲೆ ಮಹಡಿ, ಗೋಪುರ ಮಹಡಿ ಎಂದು ವಿಂಗಡಿಸಲಾಗಿದೆ. ಗೋಪುರ ಮಹಡಿಯಲ್ಲಿ ಗಾರೆ ಜಾಲರಿ, ಗಂಡಭೇರುಂಡ, ಆನೆ, ಸಿಂಹ, ಶಾರ್ದೂಲ, ನವಿಲು, ಹಂಸ, ನಾಗರ, ಬಳ್ಳಿ ಪ್ರಾಣಿ ಪಕ್ಷಿಗಳ ಸೂಕ್ಷಾತಿಸೂಕ್ಷ್ಮ ಕೆತ್ತನೆಗಳಿವೆ.

    ಕಳೆದ ಎರಡು ದಶಕಗಳಿಂದ ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಇಲಾಖೆ ಪುಷ್ಕರಣಿ ರಕ್ಷಣೆಗೆ ಕ್ರಮ ಕೈಗೊಂಡಿದೆ. ಸುತ್ತಲೂ ತಂತಿ ಬೇಲಿ ಹಾಕಿದೆ. ಶಿಥಿಲಾವಸ್ಥೆ ತಲುಪದಂತೆ ರಕ್ಷಣಾ ನಿರ್ಮಾಣ ನಡೆಸಿದೆ. ಉದ್ಯಾನವನ ನಿರ್ಮಿಸಿದೆ. ಸಿಬ್ಬಂದಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ನಡೆಯದಂತೆ ವೀಕ್ಷಣೆ ನಡೆಸಿದೆ.

    ಈಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಿನಿಮಾ ಚಿತ್ರೀಕರಣ ನಡೆದ ನಂತರ ಪ್ರವಾಸಿಗರ ದಂಡೆ ಬರುತ್ತಿದೆ. ಸುಂದರ ಶಿಲ್ಪಾ ಕಲಾಕೃತಿ ಆಸ್ವಾದಿಸುತ್ತಾ ಕಾಲ ಕಳೆಯುವುದು ನಿತ್ಯದ ಪರಿಪಾಠ. ವಿವಾಹ ಪೂರ್ವ ಫೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಸದಾ ಬ್ಯುಸಿ ಆಗಿರುವ ಈ ಪ್ರವಾಸಿ ತಾಣಕ್ಕೆ ಇನ್ನಷ್ಟು ಸೌಲಭ್ಯಗಳು ಭರದಿಂದ ಆಗಬೇಕಾಗಿದೆ.

    ಪ್ರವೇಶ ದ್ವಾರದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಕೊರೊನಾ ಹಿನ್ನೆಲೆಯಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣೆಯಲ್ಲಿ ಅಲಕ್ಷ್ಯ ಕಂಡು ಬರುತ್ತಿದೆ. ಸಿಸಿ ಕ್ಯಾಮೆರಾ ಅಳವಡಿಸಬೇಕು. ಯಾತ್ರಿ ನಿವಾಸ ನಿರ್ಮಿಸಬೇಕು. ಉದ್ಯಾನವನ ನಿರ್ವಹಣೆ ಸಮರ್ಪಕವಾಗಬೇಕು ಎಂಬುದು ಪ್ರವಾಸಿಗರ ಬೇಡಿಕೆ ಆಗಿದೆ.

    ನಮ್ಮ ಐತಿಹಾಸಿಕ ತಾಣಗಳು ನಮ್ಮ ಸಮೃದ್ಧ ಪರಂಪರೆಯ ದ್ಯೋತಕ. ಶ್ರೀಮಂತ ಸಂಸ್ಕೃತಿಯ ಪ್ರತೀಕ. ಅವುಗಳ ರಕ್ಷಣೆಯಿಂದ ಪರಂಪರೆ ಉಳಿವು ಸಾಧ್ಯ. ಪ್ರವಾಸದ್ಯೋಮ ಇಲಾಖೆ ಇತ್ತ ಗಮನ ಹರಿಸಬೇಕು.

    error: Content is protected !!