35 C
Karnataka
Sunday, April 20, 2025
    Home Blog Page 171

    ಇದು ಆಕಾಶವಾಣಿ ..ನಿಮ್ಮ ಮೆಚ್ಚಿನ ಚಿತ್ರಗೀತೆಗಳು…..

    ಹಿಂದೆಲ್ಲಾ ಕಾರ್ಖಾನೆಗಳ ,ವಾಹನಗಳ, ಜನರ ಶಬ್ಧ ಮಾಲಿನ್ಯವಾಗಲೀ ವಾಯು ಮಾಲಿನ್ಯವಾಗಲಿ ಹೆಚ್ಚಾಗಿ ಇರುತ್ತಿರಲಿಲ್ಲ…. ಹಸಿರು ಭೂಮಿ ಶುಭ್ರ ಆಕಾಶ ಶುದ್ಧ ಗಾಳಿಯ ಮಧ್ಯೆ ನಮ್ಮ ಕಿವಿಗೆ ಕೇಳಿಸುತ್ತಿದ್ದಿದ್ದು ಒಂದೇ ಅದು ರೇಡಿಯೋದ ಸುಶ್ರಾವ್ಯ ತರಂಗಗಳು .

    ಆಕಾಶವಾಣಿ ಅಂದ್ರೆ ಅದೊಂದು ಪ್ರತಿಷ್ಠಿತ ಸಂಸ್ಥೆ , ಅವರನ್ನು ಅವರು ಪರಿಚಯಿಸುತ್ತಿದ್ದಿದ್ದೇ ‘ಬಾನುಲಿ ಕೇಂದ್ರ’ ‘ಆಕಾಶವಾಣಿ ನಿಲಯ’ ಅಂತ ……ಅವರುಗಳ ಮಾತು ಎಷ್ಟು ಆಪ್ತವಾಗಿ ಇರ್ತಿತ್ತು ಅಂದ್ರೆ ಕೇಳುಗರನ್ನ ಅಯಸ್ಕಾಂತದ ಥರ ಸೆಳೆಯೋದು , ಗಮನಾರ್ಹ ಸಂಗತಿ ಏನು ಅಂದ್ರೆ ರೇಡಿಯೋದ ಒಳಗಿನ ತಂತ್ರಜ್ಞಾನದಲ್ಲಿ ‘ಅಯಸ್ಕಾಂತ’ ಪ್ರಮುಖವಾದ ಬಿಡಿಭಾಗ. ಅವರ ಕಾರ್ಯಕ್ರಮಗಳ ರೂಪುರೇಷೆ ಮತ್ತು ಅವರು ಇಡುತ್ತಿದ್ದ ಶೀರ್ಷಿಕೆಗಳೇ ಅದ್ಭುತ , ಸಂಗೀತ ಹಾಡುಗಳಿಗೆ ನಂದನ , ಚಂದನ , ಇಂಚರ , ಬೃಂದಾವನ . ಚರ್ಚೆಗಳಿಗೆ ಚಿಂತನ , ಮಂಥನ .
    ವಾರ್ತೆಗಳಿಗೆ ಪ್ರದೇಶ ಸಮಾಚಾರ , ಪ್ರಸಾರ ಭಾರತಿ , ವಾರ್ತಾ ಭಾರತಿ , ಹವಾಗುಣಕ್ಕೆ ಸಂಬಂಧಿಸಿದಂತೆ ಹವಾಮಾನ ವರದಿ. ದೆಹಲಿಯಿಂದ ಪಾರ್ತೆ ಓದುತ್ತಿದ್ದ ಉಪೇಂದ್ರರಾವ್,ರಂಗರಾವ್ ಪ್ರದೇಶ ಸಮಾಚಾರ ಓದುತ್ತಿದ್ದ ನಾಗಮಣಿ ಎಸ್ ರಾವ್, ಕೆ ಎಸ್ ಪುರುಷೋತ್ತಮ್ ತುಂಬಾನೆ ಫೇಮಸ್ಸು‌ .

    ಶನಿವಾರ ಭಾನುವಾರ ಸೇರಿ ಒಂದೂವರೆ ದಿನ ಚೆನ್ನಾಗಿ ಆಡಿ ಕುಣಿದು ನೆಂದು ಬೆಂದು ಸುಸ್ತಾಗಿ ಮನೆಯವರ ಹತ್ತಿರ ಈ ಮಕ್ಕಳಿಗೆ ರಜ ಯಾಕಾದ್ರೂ ಬರುತ್ತೋ ಅಂತ ಬೈಸಿಕೊಂಡು ಹೊಡೆಸಿಕೊಂಡು…..ಸೋಮವಾರ ಹ್ಯಾಪ್ಮೋರೆಯಲ್ಲಿ ಸ್ಕೂಲ್ ಬ್ಯಾಗ್ ನೇತಾಕ್ಕೊಂಡು , ಧುತ್ತನೆ ನೆನಪಾಗುವ ಹೋಮ್ ವರ್ಕು , ಗಣಿತದ ಮೇಷ್ಟ್ರುನ ನೆನೆಸಿಕೊಂಡು ಶಾಲೆಯ ಕಡೆ ಭಾರದ ಹೆಜ್ಜೆಯಿಡುತ್ತಿದ್ದರೆ , ನಮ್ಮ ಕಿವಿಗೆ ಬೀಳುತ್ತಿದ್ದುದ್ದೇ ‘ ಈಗ ಸಮಯ ಹತ್ತುಗಂಟೆ ಹದಿನೈದು ನಿಮಿಷ ….. ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮ. ಚನ್ನಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮಸ್ಥರಾದ ಕೃಷ್ಣಪ್ಪ , ದೊಡ್ಡಯ್ಯ, ಮುನಿರಾಜು, ರಮೇಶ, ಸುರೇಶ , ನರಸಿಂಹರಾಜು , ಪಾರ್ಥಸಾರಥಿ , ಸರೋಜಮ್ಮ , ಪುಟ್ಟಮ್ಮ , ಲಕ್ಷ್ಮಮ್ಮ , ಶಾರದಮ್ಮ , ಕಾಂತಮ್ಮ ಮತ್ತು ಪುಟಾಣಿಗಳಾದ ಚಂದ್ರ , ವಿಷ್ಣು , ಆಂಜಿ, ಬಾಬು , ನರೇಶ , ಪ್ರಹ್ಲಾದ , ಗೋಪಾಲ , ಶಬ್ಬೀರ , ಮಣಿಕಾಂತ , ಗೌರಿ , ಲಕ್ಷ್ಮಿ ….ಹೀಗೇ ಅವರ ಹೆಸರುಗಳನ್ನೆಲ್ಲಾ ಹೇಳಿ ಅವರ ಕೋರಿಕೆಯ ಮೇರೆಗೆ ಅಂತ ನೆಚ್ಚಿನ ಚಿತ್ರಗೀತೆಯನ್ನು ಪ್ರಸಾರ ಮಾಡುತ್ತಿದ್ದರು, ಅಣ್ಣಾವ್ರ , ಪಿಬಿ ಶ್ರೀನಿವಾಸ್ , ಎಸ್ಪಿ ಬಾಲಸುಬ್ರಹ್ಮಣ್ಯಂ , ಜಾನಕಿ , ಪಿ ಸುಶೀಲ ಇವರುಗಳ ಗಾನಸುಧೆ ಹಾಡಾಭಿಮಾನಿಗಳನ್ನು ರಂಜಿಸುತ್ತಿದ್ದರು .

    ಹೀಗೆ ರೇಡಿಯೋದಲ್ಲಿ ತಮ್ಮ ಹೆಸರು ಬಂದಿದ್ದನ್ನ ಆ ಊರವ್ರು ಏಳು ಹಳ್ಳೀಗೆ ತಿಳಿಸಿ ಸಂಭ್ರಮ ಪಡುತ್ತಿದ್ದರು . ಇಲ್ಲಿ ನಾವು ಶಾಲೆಗೆ ಹೋಗೋವಾಗ ನಮ್ಮ ಅಮ್ಮದೀರು ಅಕ್ಕಪಕ್ಕದ ಮನೆ ಹೆಂಗಸರ ಜೊತೆ ಜಗಲಿಮೇಲೆ ಕೂತ್ಕೊಂಡು ರೇಡಿಯೋ ಕೇಳ್ಕೊಂಡು ಮಾತಾಡ್ಕೊಂಡು….ಅವರೆಕಾಯಿ ತೊಗರೀಕಾಯಿ ಸೊಪ್ಪು ಬಿಡಸ್ಕೊಂಡು ಕೂತಿರ್ತಿದ್ರು , ಅವರನ್ನ ನೋಡಿ ನಾವು….ಇವರಿಗೆ ದಿನಾ ರಜಾನೇ ಅಂತ ಮನಸ್ಸಲ್ಲಿ ಅನ್ಕೊಂಡು ಹೋಗ್ತಿದ್ವಿ .

    ಮಧ್ಯಾಹ್ನ ಊಟಕ್ಕೆ ಬಂದ್ರೂನೂ ಮನೆಗಳಲ್ಲಿ ರೇಡಿಯೋ ಕೇಳಿಸ್ತಾನೇ ಇರೋದು ….ಟೈಲರ್ ಅಂಗಡಿಯಲ್ಲಂತೂ ಮಿಷಿನ್ ಸೌಂಡ್ ನಿಂತ್ರೂ ರೇಡಿಯೋ ಸೌಂಡ್ ನಿಲ್ತಿರ್ಲಿಲ್ಲ . ಏನಕ್ಕೆ ರೇಡಿಯೋನ ಹಿಂಗ್ ಹಚ್ಕೊಂಡಿರೋವ್ರು ಅಂದ್ರೆ ಅದನ್ನ ಕೇಳಿಸ್ಕೊಂಡ್ ಇವರ ಪಾಡಿಗೆ ಇವರು ಕೆಲಸ ಮಾಡ್ತಿರೋವ್ರು ….ಒಂದು ಕಡೆ ಕಿವಿಗೆ ಇಂಪಾಗಿರೋದು ಇನ್ನೊಂದ್ಕಡೆ ಕೆಲಸಾನೂ ಆಗೋದು .

    ಬಾಲ್ಯದಲ್ಲಿ ನಮಗೆ ರೇಡಿಯೋದಲ್ಲಿ ತುಂಬಾ ಕುತೂಹಲ ಮೂಡಿಸಿದ್ದು ಯಾವುದು ಅಂದ್ರೆ ಬ್ಯಾಂಡ್ ಬದಲಿಸಲು ಒಂದು ನಾಬನ್ನು ತಿರುಗಿಸುತ್ತಿದ್ದೆವು ಆಗ ಒಳಗಡೆ ಒಂದು ಕೆಂಪು ಬಣ್ಣದ ಕಡ್ಡಿ ಅತ್ತ ಇತ್ತ ಚಲಿಸುತ್ತಿತ್ತು ಅದು ನೋಡಕ್ ಹೆಂಗಿರೋದು ಅಂದ್ರೆ ನಾವು ಬೇಳೇಸಾರು ಅನ್ನ ಊಟ ಮಾಡಿ ತಟ್ಟೆ ತೊಳಿಯಕ್ಕೆ ಹಾಕ್ದಾಗ ತಟ್ಟೆಯಲ್ಲುಳಿದ ಸುರುಳಿಸುತ್ತಿದ ಟೊಮೋಟೋ ಹೊಟ್ಟಿನಂತಿರೋದು . ರೇಡಿಯೋದಲ್ಲಿ ಬರುತ್ತಿದ್ದ ಕೆಲವೇ ಜಾಹೀರಾತುಗಳು ಮಕ್ಕಳ ಬಾಯಿಪಾಠವಾಗಿತ್ತು .


    ನಿಜಕ್ಕೂ ಆಕಾಶವಾಣಿಯವರು ಉಪಯೋಗಿಸುತ್ತಿದ್ದ ವೇಳೆಯನ್ನು, ಸಿದ್ಧಪಡಿಸುತ್ತಿದ್ದ ವೇಳಾಪಟ್ಟಿಯನ್ನು , ಮನರಂಜನೆಯ ಜೊತೆ ಜೊತೆಗೆ ಪ್ರತಿಯೊಂದನ್ನೂ ಪ್ರತಿ ವರ್ಗಕ್ಕೂ ವಿನಿಯೋಗಿಸುತ್ತಿದ್ದ ರೀತಿಯನ್ನೂ ಕೇಳಿ ಖುಷಿಯಾಗೋದು . ಬೆಳಿಗ್ಗೆ ಆವತ್ತಿನ ಆಗುಹೋಗುಗಳ ‘ಚಿಂತನ’ , ವಾರ್ತೆಗಳು ,ನಿಮ್ಮ ನೆಚ್ಚಿನ ಚಿತ್ರಗೀತೆಗಳು , ಸುಗಮ ಶಾಸ್ತ್ರೀಯ ಕರ್ನಾಟಕ ಹೀಗೆ ಒಂದಿಲ್ಲೊಂದು ಸಂಗೀತ , ಪ್ರಸಿದ್ಧ ನಟ ನಟಿ ನಿರ್ದೇಶಕರುಗಳ ಮುದ್ರಿತ ಸಂದರ್ಶನಗಳು , ನಾಟಕ , ಯಕ್ಷಗಾನ , ಮಧ್ಯಾಹ್ನ ನಮ್ಮ ನಾಡಿನ ‘ಪ್ರದೇಶ ಸಮಾಚಾರ ‘ , ಮೀನುಗಾರರಿಗೆ ಸಹಾಯವಾಗಲಿ ಎಂದು ಹವಾಮಾನ ಮುನ್ಸೂಚನೆ , ಸಂಜೆ ಅನ್ನದಾತರಿಗೇ ಅಂತಲೇ ಕೃಷಿರಂಗ , ವಾಗ್ಮಿಗಳಿಂದ ಅರಳೀಕಟ್ಟೆ , ಪೆಂಪು ಇಂಪು ಎಂಬ ಹಾಸ್ಯ ಅವಧಿ , ರಾತ್ರಿ ಹತ್ತರ ನಂತರ ಭೋಲೇ ಬಿಸರೇ ಗೀತ್ ಎಂಬ ಹಿಂದಿ ಹಾಡುಗಳ ರಸದೌತಣ .

    ಇದಲ್ಲದೇ ಬೋನಸ್ ಎಂಬಂತೆ ಭಾನುವಾರ ಒಂದಿಡೀ ಸಿನಿಮಾದ ಚಿತ್ರಕತೆ , ಅಂತರ್ರಾಷ್ಟ್ರೀಯ ಕ್ರಿಕೆಟ್ ನ ಕಾಮೆಂಟರಿ , ಬಿನಾಕಾ ಗೀತ್ ಮಾಲಾ , ಬಿರು ಬಿಸಿಲಿನ ಮಧ್ಯಾಹ್ನ ಬರುತ್ತಿದ್ದ ‘ಸಿಲೋನ್’ ನಲ್ಲಿ ಅನ್ಯಭಾಷಿಕರ ಕನ್ನಡ ಉಚ್ಚಾರಣೆಯೇ ಕೇಳಕ್ಕೆ ಮಜಾ ಇರೋದು, ಅವರು ಉಪಾಸನೆ ಸಿನಿಮಾವನ್ನು ಉಪ್ಪು ಸಾನೆ ಅಂತ ಹೇಳುತ್ತಿದ್ದರು . ಇದಂ ಸಂಸ್ಕೃತ ವಾರ್ತಾಹ ಎಂದು ಹೇಳಿ ಮುಗಿಯುತ್ತಿದ್ದ ಸಂಸ್ಕೃತ ವಾರ್ತೆಗಳು ……ಒಂದಕ್ಕಿಂತ ಒಂದು ಅದ್ಭುತ ಕಾರ್ಯಕ್ರಮಗಳೇ.

    ಬಿನಾಕ ಗೀತ್ ಮಾಲ್ ನ ಅಮೀನ್ ಸಯಾನಿ

    ಹೀಗೆ ದಶಕಗಳ ಕಾಲ ಮನರಂಜನೆಯೆಂಬ ಮಹಲ್ಲಿಗೆ ಅಡಿಪಾಯ ಹಾಕಿದ್ದು ರೇಡಿಯೋ ಮತ್ತು ಆಕಾಶವಾಣಿ . ಟೀವಿ ಎಂಬ ಮೂರ್ಖರ ಪೆಟ್ಟಿಗೆ ಬಂದು ರೇಡಿಯೋ ಎಂಬ ಮಾಯಾಪೆಟ್ಟಿಗೆಯನ್ನು ಬದಿಗೆ ಸರಿಸಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಎಫ್ ಎಂ ಮೂಲಕ ರೇಡಿಯೋ ಮತ್ತೆ ಚಾಲ್ತಿಗೆ ಬಂದರೂ ರೇಡಿಯೋ ಕೇಳುವ ಆಗಿನ ಮಜಾ ಈಗಿಲ್ಲ.

    ಬದಲಾವಣೆ ಜಗದ ನಿಯಮವೇ ಆದರೂ ಚಲಾವಣೆಯಲ್ಲಿದ್ದಷ್ಟೂ ದಿನ ತನ್ನ ಕೇಳುಗರನ್ನು ತಲೆದೂಗುವಂತೆ ಮಾಡಿದ್ದು ರೇಡಿಯೋ ಎಂಬ ಸಾರ್ಥಕಸಾಧನ,

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಅಅಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೊರೋನಾ ವ್ಯಾಕ್ಸಿನ್ ತಯಾರಾಗಲು ಇನ್ನೆಷ್ಟು ಸಮಯ ಬೇಕು

    ರೋಗಕ್ಕೊಂದು ಚಿಕಿತ್ಸೆ ಇಲ್ಲದಿದ್ದರೆ ಸಮಸ್ಯೆಗೊಂದು ಪರಿಹಾರವಿಲ್ಲದಂತೆಯೇ ಸರಿ. ಇಡೀ ಪ್ರಪಂಚದ ಮೇಲೆ ತನ್ನ ಬಲೆಯನ್ನು ಹಾಸಿ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುವ ಕಾಯಿಲೆಯೊಂದು ತನ್ನನ್ನು ನಿಯಂತ್ರಿಸಬಲ್ಲ ಲಸಿಕೆಯೊಂದರ ಮಾರುಕಟ್ಟೆಯನ್ನು ಹೊತ್ತುಕೊಂಡೇ ಹುಟ್ಟಿರುತ್ತದೆ. ಅದೂ ಅಂತಿಂಥ ಮಾರುಕಟ್ಟೆಯಲ್ಲ. ಇಡೀ ಪ್ರಪಂಚದಲ್ಲಿ ಅತ್ಯಪಾರ ಬೇಡಿಕೆಯಿರುವ ಮಾರುಕಟ್ಟೆಯನ್ನು.

    ಹಾಗಾಗಿ ಕರೋನ ಸೋಂಕಿನ ಶುರುವಾತಿನೊಂದಿಗೇ ಕರೋನ ಲಸಿಕೆಗೂ ಬೇಡಿಕೆ ಹುಟ್ಟಿಕೊಂಡಿತು. ಸ್ಪರ್ಧೆಯೂ ಶುರುವಾಯಿತು. ಲಸಿಕೆಯನ್ನು ಕಂಡುಹಿಡಿಯಲು ಒಂದಷ್ಟು ದೇಶಗಳು ಸ್ಪರ್ಧಿಸಿದರೆ, ಅತ್ಯಂತ ಕಡಿಮೆ ವೆಚ್ಚದಲ್ಲಿ  ಮತ್ತು ಅತ್ಯಂತ ವೇಗವಾಗಿ ಅವುಗಳನ್ನು ತಯಾರಿಸಲು ಉತ್ಪಾದನೆಗೆಂದೇ ಪ್ರಸಿದ್ದವಾದ ದೇಶಗಳು ಒಬ್ಬರ ಮೇಲೊಬ್ಬರು ಮುಗಿಬಿದ್ದು ಸೆಣೆಸುತ್ತಿದ್ದಾರೆ. ಪ್ರಪಂಚದ ಕರೋನ ಸಾವಿನ ಸಂಖ್ಯೆ 483959 ಮೀರಿ ಬೆಳೆಯುತ್ತಿದೆ.9.39 ಮಿಲಿಯನ್ ಗೂ ಹೆಚ್ಚಿನ ಜನ ಸೋಂಕಿತರಾಗಿದ್ದಾರೆ. ಆದರೆ ಇದಕ್ಕೆ ಬೇಕಾದ ಉತ್ತಮ ಗುಣಮಟ್ಟದ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎನ್ನುವ ಪ್ರಶ್ನೆ ಸಧ್ಯಕ್ಕೆ ಇನ್ನೂ ಉಳಿದಿದೆ.

    ವ್ಯಾಕ್ಸಿನ್ ಡೆವೆಲಪ್ ಮೆಂಟ್ ಎನ್ನವುದು ಅಷ್ಟೊಂದು ಸುಲಭದ ಕೆಲಸವೇ?

    ನೂರಾರು ಕಾಯಿಲೆಗಳಿಗೆ ವ್ಯಾಕ್ಸಿನ್ ತಯಾರಿಸಲು ಪ್ರಪಂಚದಲ್ಲಿಸದಾಪ್ರಯತ್ನ ಮತ್ತು ಪ್ರಯೋಗಗಳು ನಡೆಯುತ್ತಲೇ ಇರುತ್ತದೆ.ಇದಕ್ಕೆ ನೂರಾರು ಕೋಟ್ಯಂತರ ರೂಪಾಯಿಗಳ ಹಣವನ್ನು ಹೂಡಬೇಕಾಗುತ್ತದೆ. ಆದರೆ ಯಶಸ್ಸು ಸಿಗುವುದು ಬಹಳ ಕಡಿಮೆ ಬಾರಿ. ಕೊನೆಗೆ ಬೆರಳೆಣಿಕೆಯಷ್ಟೇ  ವ್ಯಾಕ್ಸಿನ್ ಗಳು ಉತ್ಪಾದನೆಯ ಮಟ್ಟದ ಪರವಾನಗಿ ಪಡೆದು ಸಾಮಾನ್ಯ ಜನರಿಗೆ ಲಭ್ಯವಾಗುತ್ತವೆ.ಅಂತಹ ಲಸಿಕೆಗಳು ಒಂದೇ ರೂಪದಲ್ಲಿರುವುದಿಲ್ಲ. ಕಾಲ ಕಳೆದಂತೆಲ್ಲ ಬದಲಾಗುವ ವೈರಾಣುಗಳ ರೂಪಕ್ಕೆ ಹೊಂದುವಂತೆ ಅವುಗಳ ಸ್ವರೂಪವನ್ನೂ ಬದಲು ಮಾಡಲು ಸಾಧ್ಯವಿರಬೇಕಾಗುತ್ತದೆ.ಶ್ರೇಣೀಕೃತ ಉತ್ಪಾದನೆಯನ್ನು ಕಾದಿರಿಸಬೇಕಾಗುತ್ತದೆ.

    ಹಾಗಾಗಿ ಇದು ಸುಲಭವಲ್ಲ. ಪ್ರತಿಬಾರಿ ಲಸಿಕೆಯೊಂದನ್ನು ಕಂಡುಹಿಡಿದಾಗಲೂ ಮನುಕುಲವನ್ನು ಮಾರಣಹೋಮದಿಂದ ರಕ್ಷಿಸಿದ ದೊಡ್ಡ ಸಾಧನೆಯಾಗುತ್ತದೆ..ಜೊತೆಗೆ ಊಹೆಗೂ ನಿಲುಕದಷ್ಟು ಹಣ ಇದರಲ್ಲಿದೆ.ಹಾಗಾಗಿ ರಾಜಕೀಯದ ಜೊತೆ ಪ್ರಪಂಚವೇ ಇದರಲ್ಲಿ ಬೆರೆಯುತ್ತದೆ.

    ಲಸಿಕೆಯನ್ನು ಕಂಡುಹಿಡಿಯುವಾಗ ಸಾಮಾನ್ಯವಾಗಿ ಪ್ರಿ-ಕ್ಲಿನಿಕಲ್ ಮತ್ತು ನಂತರದ ಕ್ಲಿನಿಕಲ್ ಎಂಬ ಘಟ್ಟಗಳಿರುತ್ತವೆ. ಅವುಗಳಲ್ಲಿಯೂ ಹಲವುಹಂತಗಳಿರುತ್ತವೆ.ಪ್ರಿ-ಕ್ಲಿನಿಕಲ್ ಹಂತದಲ್ಲಿ ಇತರ ಹಂತಗಳ ಜೊತೆ ಟೆಸ್ಟ್ ಟ್ಯೂಬ್ ಗಳಲ್ಲಿ ಮತ್ತು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಹಂತಗಳಿವೆ. ಮುಂದಿನ ಹಂತದಲ್ಲಿ ಅದನ್ನು ಕೆಲವೇ ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದರಲ್ಲೂ ಹಲವು ಹಂತಗಳಿದ್ದು ಇದು ಮುಗಿಯಲು ಹಲವು ವರ್ಷಗಳ ಕಾಲ ಬೇಕಾಗುತ್ತದೆ.ಈ ಪ್ರಯೋಗದ ಎಲ್ಲ ಹಂತಗಳಲ್ಲಿಅತ್ಯಂತ ನೈತಿಕವಾದ ಮತ್ತು  ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸಲಾಗುತ್ತದೆ. ಆಯ್ಕೆ ಮಾಡಿದ ಜನರಿಂದ ಮಾಹಿತಿಪೂರ್ಣ ಒಪ್ಪಿಗೆಯನ್ನು (informed consent) ಪಡೆಯಬೇಕಾಗುತ್ತದೆ. ಪ್ರಪಂಚದ ಬಹುತೇಕ ದೇಶಗಳು ಈ ಘಟ್ಟದಲ್ಲಿವೆ.

    ಒಂದೇ ವ್ಯಾಕ್ಸಿನ್ ಎಲ್ಲ ಜನರ ಮೇಲೆ ಕೆಲಸ ಮಾಡುತ್ತದೆಯೇ ಇಲ್ಲವೇ ಎನ್ನುವ ಬಗ್ಗೆಯೂ ಖಾತರಿ ಬೇಕಾಗುತ್ತದೆ. ಹೀಗಾಗಿ ಎರಡನೇ ಘಟ್ಟದಲ್ಲಿ ಕ್ಲಿನಿಕಲ್ ಹಂತದ ಮೊದಲ ಹೆಜ್ಜೆಯಾಗಿ ಕೆಲವೊಮ್ಮೆ (ಉದಾಹರಣೆಗೆ- ಬಡ ದೇಶದ  ಕಾಯಿಲೆಗಳು)  ಹಲವು ದೇಶ ಮತ್ತು ಜನಾಂಗದ ಮೇಲೆ ಇದನ್ನು ಪರೀಕ್ಷಿಸಬೇಕಾಗುತ್ತದೆ.

    ಎರಡನೇ ಹಂತದಲ್ಲಿ ಕೃತಕವಾಗಿ ಸೋಂಕನ್ನು ನೀಡಿ ಈ ಲಸಿಕೆ ಅದಕ್ಕೆ ವಿರುದ್ಧವಾಗಿ  ಕೆಲಸಮಾಡಬಲ್ಲದೇ ಎಂದು ಅಳೆಯಬೇಕಾಗುತ್ತದೆ. ನೂರಾರು ಜನರಲ್ಲಿ ಅದರ ಪರಿಣಾಮಗಳು, ಲಕ್ಷಣಗಳು, ರೋಗ ನಿರೋಧಕ ಶಕ್ತಿ ಇತ್ಯಾದಿಗಳನ್ನು ಅಳೆಯಬೇಕಾಗುತ್ತದೆ. ಇವೆರಡೂ ಹಂತದಲ್ಲಿ ಲಸಿಕೆಯಿಂದ ಅಪಾಯ ಇಲ್ಲ ಎಂದಾದರೆ ಮೂರನೆಯ ಹಂತ ತಲುಪುತ್ತಾರೆ.

    ಮೂರನೇ ಹಂತ ಇನ್ನೂ ದೊಡ್ಡದು.ಈ ಮೂರನೆಯ ಹಂತದಲ್ಲಿ ಸಾವಿರಾರು ಜನರ ಮೇಲೆ ಲಸಿಕೆಯ ಪ್ರಯೋಗ ನಡೆಸಬೇಕಾಗುತ್ತದೆ.ಆದರೆ ಇದನ್ನು ಹಲವು ಜಾಗಗಳಲ್ಲಿ ಮಾಡಬೇಕಾಗುತ್ತದೆ. ಅಲ್ಲಿನ ಜನರಿಗಿರುವ ಹಲವು ಕಾಯಿಲೆಗಳು, ದೇಹ ಪ್ರಕೃತಿ, ಪರಿಸರಗಳಲ್ಲಿ ಇದೇ ಲಸಿಕೆ ಕೆಲಸ ಮಾಡುತ್ತದೆಯೇ ಎಂದು ಅಳೆಯಬೇಕಾಗುತ್ತದೆ.ಅದನ್ನು ದೀರ್ಘಾವಧಿಯಲ್ಲಿ ಮತ್ತೆ ಮತ್ತೆ ಪರೀಕ್ಷೆ ಮಾಡಬೇಕಾಗುತ್ತದೆ. ಲಸಿಕೆ ಈ ನಿಗದಿತ ಸಮಯದಲ್ಲಿ ತನ್ನ ಕಾರ್ಯ ಕ್ಷಮತೆಯನ್ನು ಉಳಿಸಿಕೊಂಡು ಯಾವುದೇ ದುಷ್ಪರಿಣಾಮಗಳಿಂದ ಮುಕ್ತವಾಗಿದ್ದರೆ ಮಾತ್ರ ಅದಕ್ಕೆ ಮಾರಾಟದ ಪರವಾನಗಿ ಸಿಕ್ಕು ಅದು ಸಾರ್ವಜನಿಕರ ಬಳಕೆಗ ಲಭ್ಯವಾಗುತ್ತದೆ.

    ಇದಾದ ನಂತರ ಅದು ಕ್ಲಿನಿಕಲ್ಘಟ್ಟದನಾಲ್ಕನೆಯಹಂತವನ್ನು ಪ್ರವೇಶಿಸುತ್ತದೆ. ಅದನ್ನು post-marketing surveillance ಎಂದು ಕರೆಯುತ್ತಾರೆ. ಅಕಸ್ಮಾತ್ತಾಗಿ  ವಿರಳವಾಗಿ ಆಗಬಹುದಾದ ಕೆಲವು ದುಷ್ಪರಿಣಾಮಗಳನ್ನು ಮತ್ತು ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳುವ ಪರಿಣಾಮಗಳನ್ನು ಈ ಹಂತದಲ್ಲಿ ಅಳೆಯಲಾಗುತ್ತದೆ.ಇದಕ್ಕೆಲ್ಲ ಹಲವು ವರ್ಷಗಳೇ ಬೇಕಾಗುತ್ತದೆ.ಬೆರಳೆಣಿಕೆಯಷ್ಟು  ದೇಶಗಳು ಎರಡನೇ ಘಟ್ಟದ ಮೊದಲ ಹಂತಗಳನ್ನು ತಲುಪಿದ್ದಾರೆ.

    ಕರೋನ ವೈರಸ್ ಅಧಿಕೃತವಾಗಿ ದಾಖಲಾದ್ದು 6 ತಿಂಗಳ ಹಿಂದೆ. ಅವುಗಳಲ್ಲಿಈಗಾಗಲೇMERS-CoV (MERS), SARS-CoV, (SARS), SARS-CoV-2, (COVID-19 )  ಎನ್ನುವ ದೊಡ್ಡ ಪಂಗಡಗಳನ್ನು ಮತ್ತು229E (alpha), NL63 (alpha),OC43 (beta),HKU1 (beta) ಎನ್ನುವ ಉಪಪಂಗಡಗಳನ್ನೂ ಗುರುತಿಸಲಾಗಿದೆ. ಇನ್ನೂ ಹಲವು ಸೂಕ್ಷ್ಮ ಬದಲಾವಣೆಗಳ ಜೊತೆಗೆ ಮತ್ತೂ ಹಲವು ಸ್ವರೂಪದ ಕೋವಿಡ್ ವೈರಸ್ಸುಗಳನ್ನು ವಿಂಗಡಿಸಬಹುದು. ಆದರೆ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿರುವುದು ಮನುಷ್ಯರನ್ನು ಸಾಮಾನ್ಯವಾಗಿ ಕಾಡಿರುವ, SARS-CoV-2, (COVID-19) ಗಾಗಿ.

    ಕೋವಿಡ್-19 ಕ್ಕೆ ಲಸಿಕೆಯನ್ನು ಕಂಡುಹಿಡಿಯಲು ಹಲವು ದೇಶಗಳ ಒಟ್ಟು 80 ಜೈವಿಕ ವಿಜ್ಞಾನ ಸಂಸ್ಥೆಗಳು ಸೆಣೆಸುತ್ತಿವೆ.ಪ್ರತಿ  ಸಂಸ್ಥೆ  ಭಿನ್ನವಾದ ರೀತಿಯಲ್ಲಿ ಕೋವಿಡ್ ವೈರಸ್ಸನ್ನು ನಿಷ್ಪಲಗೊಳಿಸುವ ದಾರಿಗಳನ್ನು ಹುಡುಕುತ್ತಿದ್ದಾರೆ.ಅಂದರೆ ಯಾವ ವಿಧಾನ ಅತ್ಯಂತ ಫಲಪ್ರದ ಎನ್ನುವುದರ ಮೇಲೆ ಲಸಿಕೆಯ ಯಶಸ್ಸು ನಿರ್ಧಾರವಾಗುತ್ತದೆ.

    ಕೋವಿಡ್-19 ರ ಮೇಲೆ ಕೆಲಸ ಮಾಡಬಲ್ಲ ಲಸಿಕೆಯ ಸೃಷ್ಟಿಯನ್ನು ತಯಾರು ಮಾಡಲು  ಎಷ್ಟು ಸಮಯ ಬೇಕಾಗಬಹುದು?

    ಸಧ್ಯಕ್ಕೆ ಇದೊಂದು ಯಕ್ಷಪ್ರಶ್ನೆ. ಪ್ರತಿಯೊಂದು ಸಂಸ್ಥೆಯೂ ತಾವೇ ಮೊದಲು ಕಂಡುಹಿಡಿಯುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ.

    ಈ ವೈರಸ್ಸಿನ ತಳಿವಿಜ್ಞಾನದ  ಅನುಕ್ರಮವನ್ನು ಪ್ರಕಟಿಸಿದ್ದು 11 ಜನವರಿ 2020 ರಲ್ಲಿ. ಇದನ್ನು ಈ ಜೆನೆಟಿಕ್ ಮ್ಯಾಪ್ ಅನ್ನು ಅತ್ಯಂತ ತ್ವರಿತವಾಗಿ ಬರೆದದ್ದು ಚೈನಾ ದೇಶ.ಅಷ್ಟೇ ಅಲ್ಲದೆ ಅದನ್ನು ವಿಶ್ವದ ಇತರೆ ದೇಶಗಳೊಂದಿಗೆ ಹಂಚಿಕೊಂಡಿತು.

    ಇದರಿಂದಾಗಿ ಲಸಿಕೆಯನ್ನು ಸೃಷ್ಟಿಸುವ ಕಾರ್ಯ ತಟ್ಟನೆ ಶುರುವಾಯಿತು. ಅತ್ಯಂತ ಕಟ್ಟು ನಿಟ್ಟಾದ ನಿಯಮಗಳನ್ನು ಪಾಲಿಸುವ ದೇಶಗಳು ಕೂಡ  ಸಾಂಪ್ರದಾಯಿಕವಾದ ಹಲವು ಘಟ್ಟಗಳನ್ನು ಗಾಳಿಗೆ ತೂರಿ ನಾಗಾಲೋಟದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲು ತಯಾರಾದವು. 16ಮಾರ್ಚ್ ವೇಳೆಗಾಗಲೇ ಮನುಷ್ಯನ ಮೇಲೆ ಲಸಿಕೆಯ ಮೊದಲ ಪ್ರಯೋಗ ನಡೆಯಿತು.ಅಂದರೆ, ವರ್ಷವಾದರೂ ಬೇಕಿದ್ದ ಹಂತಗಳನ್ನು ಅತಿಕ್ರಮಿಸಿ ಕೇವಲ 65 ದಿನಗಳಲ್ಲಿ ಈ ಹಂತವನ್ನು ತಲುಪಲಾಯಿತು. ಸಣ್ಣ ಪ್ರಮಾಣದಲ್ಲಿ ಮನುಷ್ಯನ ಮೇಲೆ ಲಸಿಕೆಯನ್ನು ಮೊದಲು ಪ್ರಯೋಗ ಮಾಡಿದ್ದು ಅಮೆರಿಕಾದ ಬೋಸ್ಟನ್ ನಗರದ ಮಾಡರ್ನ ಕಂಪನಿ.ಇದಕ್ಕೆ ಹಣ ಹೂಡಿದ್ದು The Coalition for Epidemic Preparedness Innovations (CEPI).ಇವರೊಡನೆ  ಅಮೆರಿಕಾದ ಇನ್ನೂ ನಾಲ್ಕು ಕಂಪನಿಗಳ ಪೈಪೋಟಿಯಲ್ಲಿವೆ. ಇಂಗ್ಲೆಂಡಿನ ಆಕ್ಸ್ ಫರ್ಡ್ ಕೂಡ ಈ ಹಂತವನ್ನು ತಲುಪಿದೆ. ಬೇರೆಯ ಹಲವು ಸಂಸ್ಥೆಗಳೂ ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಆಸ್ಟ್ರೇಲಿಯ,ರಷಿಯ, ಚೈನ ಮತ್ತು ಇತರೆ ದೇಶಗಳು ಕೂಡ ಸ್ಪರ್ಧಿಸುತ್ತಿವೆ.

    ಶೇಕಡಾವಾರು ಲೆಕ್ಕದಲ್ಲಿ ಲಸಿಕೆ ತಯಾರಿಯ ಚಟುವಟಿಕೆ  ಉತ್ತರ ಅಮೆರಿಕಾದಲ್ಲಿ 46%, ಚೈನಾ, ಆಸ್ಟ್ರೇಲಿಯಾ ಮತ್ತು ಯೂರೋಪಿನಲ್ಲಿ18% ನಷ್ಟಿದೆ.ಇವರೆಲ್ಲ ಸಣ್ಣ ಪ್ರಮಾಣದಲ್ಲಿ ಮನುಷ್ಯರ  ಮೇಲೆ ಪ್ರಯೋಗ ಶುರುಮಾಡಿದ್ದಾರೆ.ಸದ್ಯಕ್ಕೆ19 ದೇಶಗಳು ಮಂಚೂಣಿಯಲ್ಲಿವೆ. ಇವರಲ್ಲಿ ಯಾರೇ ಗೆದ್ದರೂ ಮನಕುಲಕ್ಕಂತೂ ಉಪಯೋಗವಾಗುತ್ತದೆ. ಶಾರ್ಟ್ ಕಟ್ ಹಾದಿಯಲ್ಲಿ ಅತ್ಯಂತ ತ್ವರಿತ ಗತಿಯಲ್ಲಿ ಇವರಲ್ಲಿ ಯಾರಾದರೂ ಯಶಸ್ವಿಯಾದರೆ ಮುಂದಿನ ವರ್ಷದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗಬಹುದೆಂಬ ಆಶಯವಿದೆ.ಆದರೆ ಈ ವರ್ಷವೇ ತಾವಿದನ್ನು ಬಿಡುಗಡೆ ಮಾಡುತ್ತೇವೆಂದು ಹಲವು ಕಂಪನಿಗಳು ಭರವಸೆ ಕೊಡುತ್ತಿವೆ. ಇವುಗಳ ಜೊತೆಗೆ ಕರೋನಾವನ್ನು ಭಾಗಶಃ ತಡೆಗಟ್ಟಲು ನಮ್ಮ ಔಷದಗಳು  ಉಪಯುಕ್ತ ಎನ್ನುವ ತೃತೀಯ ಮಾರುಕಟ್ಟೆಗಳು ಈಗಾಗಲೇ ಹಣ ಮಾಡುತ್ತಿದ್ದಾರೆ.

    ಸಾಂಪ್ರದಾಯಕ ಹಾದಿಯಲ್ಲಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲು ಸುಮಾರು ಹತ್ತು ವರ್ಷಗಳು ಬೇಕು. ತ್ವರಿತವಾಗಿ ಎಂದರೂ ಎಬೋಲ ಲಸಿಕೆಗೆ ಐದು ವರ್ಷಗಳು ಅಗತ್ಯಬಿತ್ತು.(2014-2019) ಆದರೆ ಕರೋನ ವೈರಸ್ಸಿನ ಲಸಿಕೆಯ ತಯಾರಿಕೆಯ ವೇಗ ಪ್ರಪಂಚದ ಎಲ್ಲ ಕಟ್ಟಲೆಗಳನ್ನು ಮುರಿದಿದೆ. ಕರೋನ ಲಸಿಕೆಯ ತಯಾರಿಗೆ ಒಂದರಿಂದ-ಒಂದೂವರೆ ವರ್ಷ ಸಾಕೇ ಎಂಬ ವಿಚಾರ ಎಲ್ಲರ ಹುಬ್ಬೇರಿಸಿದೆ. ಮನುಷ್ಯನ ಇತಿಹಾಸದಲ್ಲೇ ಇಂತಹ ವೇಗ ಹಿಂದೆಂದೂ ದಾಖಲಾಗಿಲ್ಲ.

    ಕೋವಿಡ್ ಲಸಿಕೆಯೊಂದರ ತಯಾರಿಕೆ ಅತ್ಯಂತ ಕಷ್ಟವಾದ್ದು.ಏಕೆಂದರೆ ಸ್ಪರ್ಧೆ ಇರುವುದು ಅಂತರರಾಷ್ಟ್ರೀಯ  ಸಂಸ್ಥೆಗಳ ನಡುವೆ ಮಾತ್ರವಲ್ಲ. ಕೋವಿಡ್-19 ವೈರಸ್ಸಿನ ಜೊತೆಗೆ ಕೂಡ ಸೆಣೆಸಬೇಕಿದೆ. ಕರೋನ ಅಲೆಗಳೋಪಾದಿಯಲ್ಲಿ ಬರುವ ಸೋಂಕು. ಈಗಾಗಲೇ ಹಲವು ದೇಶಗಳು ಎರಡನೆಯ ಅಲೆಯನ್ನು ಎದುರಿಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಕಾಯುವುದಾದರೆ ಈ ವೈರಸ್ಸಿನ ವೇಗದೊಡನೆ ಸೆಣಸಿ ಲಸಿಕೆಯನ್ನು ಕಂಡುಹಿಡಿಯಲು ಸಾದ್ಯವಾಗುವುದಿಲ್ಲ. ಪೂರ್ಣವಾಗುವ ಮುನ್ನವೇ ಪ್ರಯೋಗಕ್ಕೆ ಬೇಕಾದಷ್ಟು ಸೋಂಕಿತ ಜನರನ್ನು ಹೊಂದಿಸುವುದು ದುಸ್ಸಾಧ್ಯವಾಗುತ್ತದೆ.

    ಹಿಂದೆಂದೂ ಇಲ್ಲದ ರೀತಿಯಲ್ಲಿ ಹುಟ್ಟಿಕೊಂಡು ಬೆಳೆಯುತ್ತಿರುವ ಶರ ವೇಗದ ವ್ಯಾಕ್ಸಿನ್ ತಯಾರಿಕೆ ಹೊಸ ಮಾರ್ಗ ದರ್ಶಿಕೆಗಳು ಹಲವರಿಗೆ ಒಗ್ಗಿ ಬರುತ್ತಿಲ್ಲ. ಉಪಯೋಗಿಸಲ್ಪಡುತ್ತಿರುವ ಟೆಕ್ನಾಲಜಿಯೂ ಅತ್ಯಂತ ಹೊಸತು. ಬೇಗನೆ ವ್ಯಾಕ್ಸಿನ್ ತಯಾರುಮಾಡುವ ಒತ್ತಡದಲ್ಲ ಆಗುವ ತಪ್ಪುಗಳು ಜಾಸ್ತಿ ಎನ್ನುವ ಎಚ್ಚರಿಕೆಯ ಗಂಟೆಯನ್ನ ಕಟ್ಟಿಕೊಂಡೇ ವಿಜ್ಞಾನಿಗಳು ಕೆಲಸ ಆರಂಭಿಸಿದ್ದಾರೆ. ಆದರೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಮಾನಿಗಳ ಮೆಚ್ಚುಗೆಗಾಗಿ ಕರೋನ ವ್ಯಾಕ್ಸಿನ್ಖರಾರುವಕ್ಕಾಗಿ ಅಮೆರಿಕಾದ ನವೆಂಬರಿನ ಎಲೆಕ್ಷನ್ ವೇಳೆಗೆ  ತಯಾರಿರುತ್ತದೆ ಎಂದು ಹೇಳಿಕೆ ನೀಡಿದ್ದು ಇದೀಗ ಇತಿಹಾಸದ ಮತ್ತೊಂದು ಹಾಸ್ಯಾಸ್ಪದ ಸಂಗತಿಯಾಗಿ ದಾಖಲಾಗಿದೆ!

    ಅಂತಾರಾಷ್ಟ್ರೀಯ ಸಹಕಾರ, ಪಾಲಿಸಿ ಮೇಕರ್ ಗಳ ನಡುವಿನ ಹೊಂದಾಣಿಕೆ, ಹಣ ಹೂಡುವ ಜನ,ಆಯಾ ದೇಶ ಮತ್ತು ವಿದೇಶಗಳ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಭಿನ್ನ ಸರಕಾರಗಳು ಒತ್ತಟ್ಟಿಗೆ ಬಂದು ಕೆಲಸಮಾಡದಿದ್ದರೆ ಮತ್ತು ಲಸಿಕೆಯೊಂದರ ತಯಾರಿಯಲ್ಲಿ  ನಡೆಯುವ ರಾಜಕೀಯವನ್ನು ದೂರವಿಡದಿದ್ದರೆ ಕರೋನ ವೈರಸ್ ಗೆ ಲಸಿಕೆ ತಯಾರಿಸುವುದು ಸುಲಭವಲ್ಲ ಎನ್ನುವ ವಾಸ್ತವ ಎಲ್ಲರನ್ನೂ ಬಲವಾಗಿ ತಟ್ಟಿದೆ.ಇದೆಷ್ಟು ಕಷ್ಟವನ್ನು ತಂದೊಡ್ಡಿದೆಯೆಂದರೆ ಲಸಿಕೆ ತಯಾರಿಕೆಗೆ ಹೂಡಿದ್ದ ಹಣವೆಲ್ಲ ಪ್ರಯೋಜನಕ್ಕೇ ಬರದೆ ನಷ್ಟವನ್ನು ತಂದೊಡಿದ್ದರೂ ಸ್ಪರ್ಧೆಗೆ ಇಳಿದಿದ್ದ ಹಲವು ಕಂಪನಿಗಳು ಈಗಾಗಲೇ ಸೋಲೊಪ್ಪಿಕೊಂಡು ಹಿಂತೆಗೆದಿದ್ದಾರೆ.ಮನುಷ್ಯರ ಮೇಲಿನ ಪ್ರಯೋಗದ ಹಂತದಲ್ಲಿ ಎಡವುವ ಕುದುರೆಗಳೇ ಅಧಿಕ.ಈ ಕುದುರೆಗಳ ರೇಸಿನಲ್ಲಿ ಎಲ್ಲವೂ ಗುರಿಯವರೆಗೆ ಓಡದಿರುವ ಸಾಧ್ಯತೆಗಳೇ ಹೆಚ್ಚು.

    ಹಾಗಿದ್ದೂ ಇದಕ್ಕಾಗಿ ಸ್ಪರ್ಧೆಯೇ ನಡೆಯುತ್ತಿರುವಾಗ ಇದರಲ್ಲಿ ಎಷ್ಟು ಹಣವಿರಬಹುದು?

    ಅಮೆರಿಕಾದಲ್ಲಿ ಮಂಚೂಣಿಯಲ್ಲಿರುವ ಮಾಡರ್ನ್ ಕಂಪೆನಿ ಎರಡನೇ ಘಟ್ಟವನ್ನು ತಲುಪುತ್ತಿದ್ದಂತೆ ಅದೇ ಕಂಪನಿ ರೇಸಿನಲ್ಲಿ ಗೆಲ್ಲುತ್ತದೆ ಎಂಬಂಥ ಉತ್ಪ್ರೇಕ್ಷಿತ ವಾತಾವರಣ ಸೃಷ್ಟಿಯಾಯ್ತು.ಅದು ತನ್ನ ಪ್ರಗತಿಯನ್ನು ಸಾರ್ವಜನಿಕವಾಗಿ ತಿಳಿಸಿದ ಒಂದೆರೆಡೇ ಗಂಟೆಗಳಲ್ಲಿ  17.6 ಮಿಲಿಯನ್ ಡಾಲರುಗಳಷ್ಟು ಮೊತ್ತದ ಶೇರುಗಳ ಮಾರಾಟವಾಯ್ತು.ಇದುವರೆಗೆ ಈ ಕಂಪನಿ 1.3 ಬಿಲಿಯನ್ ಡಾಲರ್ ಗಳಷ್ಟು ಶೇರುಗಳನ್ನು ಮಾರಿದೆ. ಈ ಕಂಪನಿಯ ಟಾಲ್ ಝ್ಯಾಕ್ ಮತ್ತು ಲಾರೆನ್ಸ್ ಕಿಮ್ ಎಂಬ ಬರೇ ಇಬ್ಬರು ಎಕ್ಸೆಕ್ಯೂಟಿವ್ ಮೆಡಿಕಲ್ ಆಫೀಸರುಗಳು  ಒಟ್ಟು 30 ಮಿಲಿಯನ್ ಮೊತ್ತದ ಶೇರುಗಳನ್ನು ಮಾರಿಕೊಂಡಿದ್ದಾರೆ.

    ಇಂಗ್ಲೆಂಡಿನಲ್ಲಿ ಮಂಚೂಣಿಯಲ್ಲಿರುವ ಆಕ್ಸಫರ್ಡ್ ಗೆ ಸರ್ಕಾರ 43 ಮಿಲಿಯನ್  ಪೌಂಡುಗಳನ್ನು ಹೂಡಿದೆ. ಇದರ  ಫಲಿತಾಂಶದ ಮೇಲೆ ಅಪಾರ ಭರವಸೆಯನ್ನಿಟ್ಟಿರುವ ಭಾರತದ ಉತ್ಪಾದಕ ಕಂಪನಿಯೊಂದು ಲಸಿಕೆಯ ತಯಾರಿ ಪೂರ್ಣವಾಗಿಲ್ಲದಿದ್ದರೂ ಈಗಾಗಲೇ ಲಸಿಕೆಯನ್ನು ಉತ್ಪಾದಿಸಿ ತಯಾರಿಟ್ಟುಕೊಂಡು ಅಧಿಕೃತ ಫಲಿತಾಂಶ ಹೊರಬೀಳಲು ಕಾಯುತ್ತಿದೆ ಎಂಬ ವದಂತಿಯಿದೆ. ಅಕಸ್ಮಾತ್ ಋಣಾತ್ಮಕ ಫಲಿತಾಂಶ ಬಂದರೆ ಅದೆಲ್ಲವನ್ನೂ ನಾಶಪಡಿಸಲು ತಯಾರಿದೆ ಎಂದರೆ ಇದರಲ್ಲಿರುವ ಹಣದ ಕಲ್ಪಿತ ಅಂದಾಜು ಸಿಗಬಹುದು.

     ಇದೇ ತಿಂಗಳ 4-5, ಜೂನ್ ರಂದು ಲಂಡನ್ನಿನಲ್ಲಿ ಇದಕ್ಕಾಗಿ ಒಂದು ಲಸಿಕೆಗಳ ಗ್ಲೋಬಲ್ ಸಮ್ಮಿಟ್ ನಡೆಯಿತು.ಯುನೈಟೆಡ್ ಕಿಂಗ್ಡಮ್ಮಿನ ಪ್ರಧಾನಿ ಬೋರಿಸ್ ಜಾನ್ಸನ್ನನ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ’ವೇಗ ’,’ಗ್ಲೋಬಲ್ ಮಟ್ಟದ ಉತ್ಪಾದನೆ ’ ಮತ್ತು  ’ಇಡೀ ಪ್ರಪಂಚಕ್ಕೆ ಅದರ ಸರಬರಾಜು ’ ಈ ಮೂರು ಅಂಶಗಳನ್ನು ಸಾಧಿಸಲು ಎಲ್ಲ ದೇಶಗಳು ಹಣ ಹೂಡಿ, ಪ್ರಯತ್ನಪಟ್ಟು ಮತ್ತು ಹಂಚಿಕೊಳ್ಳುವುದಕ್ಕೆ ಒಪ್ಪಿ ಒಗ್ಗೂಡಿಕೆಲಸ ಮಾಡಬೇಕೆಂದು ಒತ್ತಾಯ ಹೇರಲಾಯ್ತು.

    ಇಲ್ಲಿ ಸೇರಿದ್ದ ನಾಯಕರು,52 ಸಂಸ್ಥೆಗಳ ಮುಖ್ಯಸ್ಥರು ಅಂತರ ರಾಷ್ಟ್ರೀಯ  ಲಸಿಕೆ ಕಾರ್ಯಕ್ರಮಗಳ ಮುಂದಾಳತ್ವ ವಹಿಸುವ ಗ್ಯಾವಿ ( Gavi, the vaccine alliance) ಎನ್ನುವ ಸಂಸ್ಥೆ ಗೆ 8.8 ಬಿಲಿಯನ್ ಡಾಲರುಗಳನ್ನು ನೀಡಲು ಒಪ್ಪಿವೆ. ಇದರಿಂದ ಮುಂದಿನ ಐದು ವರ್ಷಗಳಲ್ಲ 8 ಮಿಲಿಯನ್ ಜನರ ಬದುಕನ್ನು ಉಳಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

    ಸ್ವಿಟ್ಜ್ ರ್ ಲ್ಯಾಂಡಿನ ಜಿನೀವ ನಗರದಲ್ಲಿ ಮುಖ್ಯ ಕಚೇರಿ ಹೊಂದಿರುವ GAVI (Global Alliance for Vaccines and Immunization)  WHO ಗಿಂತ ಹೆಚ್ಚು ನಂಬಿಕೆಯನ್ನು ಉಳಿಸಿಕೊಂಡ ಸಂಸ್ಥೆಯಾಗಿದೆ. ಇದೇ ಸಮಯದಲ್ಲಿ ಕರೋನದ ಅಬ್ಬರದಲ್ಲಿ ನಿಂತೇ ಹೋಗಿದ್ದ ಇತರೆ ಮಹಾಮಾರಿಗಳ ಲಸಿಕೆ ಕಾರ್ಯಕ್ರಮಕ್ಕೆ ಮತ್ತೆ ಜೀವ ತುಂಬಲು 300 ಮಿಲಿಯನ್ ಡಾಲರ್ ಗಳನ್ನು ಕಾದಿರಿಸಿದೆ.ಇದರಿಂದ ಪ್ರಪಂಚದ 50% ಮಕ್ಕಳಿಗೆ ಒಳಿತಾಗಲಿದೆ.ಜೂನ್ 7ರಂದು ಚೈನಾ ತಾನು ಮೊದಲಿಗೆ ಲಸಿಕೆಯನ್ನು ಕಂಡುಹಿಡಿಯುವುದಾದರೆ ಅದನ್ನು ಪ್ರಪಂಚದ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆಂಬ ಹೇಳಿಕೆ ನೀಡಿತು.

    ಇಷ್ಟೆಲ್ಲ ಪ್ರಯತ್ನಕ್ಕೆ ಮಹತ್ತರ ಕಾರಣಗಳಿವೆ

    2009 ರಲ್ಲಿ H1N1 ಗೆ ಲಸಿಕೆಯೊಂದು ದೊರೆಯುವಂತಾದಾಗ ಪ್ರಪಂಚದ ಸಿರಿವಂತ ದೇಶಗಳು ತಟ್ಟನೆ ಲಸಿಕೆಗಳನ್ನು ಖರೀದಿಸಿಬಿಟ್ಟವು. ಕೊಳ್ಳುವ ಬಲವಿರದ ಬಡ ದೇಶದ ಪ್ರಜೆಗಳಿಗೆ ಇದು ದೊರೆಯುವುದು ಬಹಳ ನಿಧಾನವಾಯಿತು. ಭಾರತಕ್ಕೆ ಇಡೀ ಪ್ರಪಂಚಕ್ಕೆ ಅತಿ ಕಡಿಮೆ ದರದಲ್ಲಿ ಮತ್ತು ಅತಿ ವೇಗವಾಗಿ ಲಸಿಕೆಯನ್ನು ತಯಾರಿಸಿಕೊಡಬಲ್ಲ ಸಾಮರ್ಥ್ಯವಿದೆ. ಅದೇನಾದರೂ ಮೊದಲಿಗೆ ತನ್ನ 1.37 ಬಿಲಿಯನ್ ಪ್ರಜೆಗಳಿಗೆ ಲಸಿಕೆ ಹಾಕುವ ನಿರ್ದಾರ ತೆಗೆದುಕೊಂಡಲ್ಲಿ ಇತರೆ ರಾಷ್ಟ್ರಗಳು ಬಹುಕಾಲ ಕಾಯಬೇಕಾಗುತ್ತದೆ.

    ಲಸಿಕೆಗಳು ಕೋವಿಡ್ ನಂತಹ ಸರ್ವವ್ಯಾಪಿ  ವ್ಯಾಧಿಯ ಮೇಲೆ ಪರಿಣಾಮಕಾರಿಯಾಗಬೇಕೆಂದರೆ ಪ್ರಪಂಚದ ಎಲ್ಲ ಕಡೆ ಆ ವ್ಯಾಕ್ಸಿನ್ ಲಭ್ಯವಾಗಬೇಕು. ಇಲ್ಲದಿದ್ದಲ್ಲಿ ಮತ್ತೆ ಇಂತಹ ಪ್ಯಾಂಡಮಿಕ್ ಹರಡಬಲ್ಲದು. ಈ ಅರಿವನ್ನು ನೀಡುವ ನಿಟ್ಟಿನಲ್ಲಿ ಕೋವಿಡ್ ಜಾಗತಿಕಗೊಂಡಿರುವ ಈ ಲೋಕದ ಹಾದಿಯನ್ನೇ ಬದಲಿಸಿದೆ.ಅದೇ ರೀತಿ ಲಸಿಕೆ ತಯಾರಿಕೆಯ ಎಲ್ಲ ನಿಯಮ ಮತ್ತು ಕಟ್ಟಲೆಗಳನ್ನು ಕೂಡ ಸಾರಾ ಸಗಟಾಗಿ ಮುರಿದಿದೆ.

    H1B ,L1 ಹಾಗೂ ವರ್ಕ್ ಪರ್ಮಿಟ್ ವೀಸಾ ಅಮಾನತು; ಕಮರಿದ ಅಮೆರಿಕಾ ಕನಸು

    ಭಾರತದಲ್ಲಿ  ಎಂಜಿನಿಯರಿಂಗ್  ಓದುವ ವಿದ್ಯಾರ್ಥಿಗಳಿಗೆ  ಇಂಥ ಕನಸುಗಳು ಸಾಮಾನ್ಯವಾಗಿ ಇರುತ್ತವೆ. ಒಂದು  ಓದು ಮುಗಿದ ಮೇಲೆ ಒಳ್ಳೆಯ  ಐಟಿ  ಕಂಪೆನಿಯಲ್ಲಿ ಕೆಲಸ ಮಾಡಬೇಕು. ಎರಡು ಕೆಲಸದ  ಜೊತೆಗೆ ಒಂದು ಸಾರಿ ಅಮೆರಿಕಾಗೆ ಹೋಗಿಬರಬೇಕು. ಅಲ್ಲಿ  ಒಂದೆರೆಡು ವರ್ಷಗಳವರೆಗಾದರೂ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸಬೇಕು. ಆ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಒಂದು ಬಿಡಿಎ ಸೈಟು ಕೊಂಡು  ಸಾಲವಿಲ್ಲದೆ ಸ್ವಂತ ಮನೆ ಮಾಡಬೇಕು.  ಈ ಕನಸುಗಳು  ಕಳೆದ ಮೂರು ದಶಕದಿಂದ ಸಾಧ್ಯವಾಗಿತ್ತು. 

      
    ಅಧ್ಯಕ್ಷ ಟ್ರಂಪ್ ಭಾರತದ ಯುವಕರ ಈ ಕನಸಿಗೆ  ತಮ್ಮ ಒಂದು ಆದೇಶದಿಂದ ತಣ್ಣೀರು ಎರಚಿದ್ದಾರೆ. ಈ ವರ್ಷದ ಡಿಸೆಂಬರ್ ವರೆಗೂ    H1B, L1 ಹಾಗೂ ವರ್ಕ್ ಪರ್ಮಿಟ್  ವಲಸೆ  ಕೆಲಸಗಾರರ ವೀಸಾವನ್ನು ಅಮಾನತ್ತು ಮಾಡಿದ್ದಾರೆ. ಹೀಗಾಗಿ ಭಾರತದ ಮಧ್ಯಮ ವರ್ಗದ ಯುವಕರಿಗೆ ಅಮೆರಿಕಾದಲ್ಲಿ ಕೆಲಸ ಎಂಬುವುದು  ಮುಂದಿನ ಹಲವು ವರ್ಷದವರೆಗೆ ಕನಸಾಗೇ ಉಳಿಯಲಿದೆ. 

    ಕರೋನ ಪರಿಣಾಮ

    ಕರೋನ   ದಿನದಿಂದ ದಿನಕ್ಕೆ ಇಡೀ ಪ್ರಪಂಚದಲ್ಲಿ ವ್ಯಾಪಾರ, ವಹಿವಾಟು, ಪ್ರವಾಸ, ವಸ್ತುಗಳ ಪೂರೈಕೆ  ಸರಪಳಿಯಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ.  ಅಮೆರಿಕಾದಲ್ಲಿ ಸರಿ ಸುಮಾರು 20 ಲಕ್ಷ ಜನರು ಕಳೆದ 3 ತಿಂಗಳಿಂದ ಕೆಲಸವನ್ನು ಕಳೆದುಕೊಂಡಿದ್ದಾರೆ.  ಜೊತೆಗೆ ಅಮೆರಿಕಾದಲ್ಲಿ ಆಫ್ರಿಕನ್ ಅಮೆರಿಕನ್ ತಾರತಮ್ಯದ ಹೋರಾಟ ಭುಗಿಲೆದ್ದಿದೆ.  

    ಹೀಗಾಗಿ ಅಮೆರಿಕಾದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆ ತಂದೊಡ್ಡಿದೆ.    ಆಫ್ರಿಕನ್ ಅಮೆರಿಕನ್ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ  ಅಮೆರಿಕಾದ ಪೌರತ್ವವಿರುವವರಿಗೆ ಮೊದಲ ಕೆಲಸ ಕೊಡಬೇಕೆಂಬ ಆದ್ಯತೆ ಮೇರೆಗೆ, ಅಧ್ಯಕ್ಷ ಟ್ರಂಪ್,  ಈ ವರ್ಷದ ಡಿಸೆಂಬರ್ ವರೆಗೂ    H1B, L1 ಹಾಗು ವರ್ಕ್ ಪರ್ಮಿಟ್  ವಲಸೆ  ಕೆಲಸಗಾರರ ವೀಸಾವನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ. 

      
    ಕರೋನ ಹೀಗೆ ಮುಂದುವರೆದರೆ ಈ ಅಮಾನತು ಇನ್ನು ಹೆಚ್ಚಿನ ಸಮಯ ಮುಂದುವರಿಯುವ ಸಾಧ್ಯತೆಗಳಿವೆ. ಇದರ ಅರ್ಥ ಮತ್ತು ಪರಿಣಾಮ ಏನಾಗಬಹುದು ಎಂಬ ಕುತೂಹಲ H1B  ವೀಸಾದ  ಹೆಚ್ಚಿನ ಪಾಲುದಾರ ದೇಶವಾದ ಭಾರತೀಯರಿಗೆ ಇದ್ದೆ ಇದೆ. 

    H1B ,L1 ವೀಸಾ  ಅಂದರೇನು?

    H1B: ಹದಿನಾರು ವರ್ಷದ ವಿದ್ಯಾಭ್ಯಾಸ  (ಎಂಜಿನಿಯರಿಂಗ್ ನಲ್ಲಿ ಯಾವುದೇ ಪದವಿ) ನಂತರ ಯಾವುದೇ ವಿಷಯದಲ್ಲಿ ಕೌಶಲ್ಯ ಗಳಿಸಿದ  ಕಾರ್ಮಿಕನಿಗೆ/ತಂತ್ರಜ್ಞರಿಗೆ  (ವೈಟ್ ಕಾಲರ್ ಜಾಬ್ ) ಅಮೆರಿಕಾದಲ್ಲಿ ಕೆಲಸ ಮಾಡಲು ಕೊಡುವ ವೀಸಾ.  ಆರು ವರ್ಷದ ಪರಿಮಿತಿ ಹೊಂದಿದ ಈ ವೀಸಾ ಪಡೆದು ಅಮೆರಿಕಾದ ಯಾವುದೇ ಕಂಪೆನಿಗಳಲ್ಲಿ ನೇರವಾಗಿ ಕೆಲಸ ಮಾಡಬಹುದು ಹಾಗೂ ನವೀಕರಿಸಲೂ ಬಹುದು. 

    L1: ಇದು H1B ವೀಸಾ ಕಿಂತ ಸ್ವಲ್ಪ ಭಿನ್ನ,  ಈಗಾಗಲೇ ಭಾರತದಲ್ಲಿ ಇರುವ ಕಂಪೆನಿಗಳಲ್ಲಿ  ಕೆಲಸ ಮಾಡುವ ತಂತ್ರಜ್ಞರು ಅದೇ ಕಂಪನಿಯ ಅಥವಾ ಆ ಕಂಪನಿಯ ಒಡಂಬಡಿಕೆಯಲ್ಲಿ ಹೊಂದಿರುವ  ಅಮೆರಿಕಾದಲ್ಲಿ ಇರುವ ಕಂಪನಿಗೆ  ಕೌಶಲ್ಯ ತುಂಬಿದ ನುರಿತ  ಕೆಲಸ ಮಾಡಲು ಕಳುಹಿಸುವುದು. 

    ಅಮೆರಿಕಾದಲ್ಲಿ ವರ್ಷಕ್ಕೆ ಸರಿ ಸುಮಾರು 65,000  H1B ವೀಸಾವನ್ನು ಲಾಟರಿ ಮೂಲಕ ವಿತರಣೆ ಮಾಡುತ್ತಾರೆ.  ಇದರ ಜೊತೆ L1  ವೀಸಾ ದಡಿಯಲ್ಲಿ ಸುಮಾರು 70 ಸಾವಿರದಷ್ಟು ಜನರು ಭಾರತದಿಂದ ಅಮೆರಿಕಾಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ.   ಅದರಲ್ಲಿ ಭಾರತದ  IT ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್   ಪಾಲೇ ಹೆಚ್ಚು. 


    ಅದರೊಟ್ಟಿಗೆ  ನೇರವಾಗಿ ಕನ್ಸಲ್ಟೆಂನ್ಸಿಗಳ ಮೂಲಕವೂ H1B ಕೆಲಸಕ್ಕೆ ಅರ್ಜಿಹಾಕಿ ಅಮೆರಿಕಾ ಹಾರುವವರ ಸಂಖ್ಯೆಯೂ ಜಾಸ್ತಿಯೇ ಇದೆ. 

    ಇನ್ನು ಮುಂದೆ ಹಲವು ವರ್ಷಗಳ ಕಾಲ ಅಮೆರಿಕಾ ಕೆಲಸದ ಕನಸು ಕನಸಾಗೇ ಉಳಿಯುವ ಸಾಧ್ಯತೆ ಹೆಚ್ಚಿದೆ.  ಆದರೆ ಜಾಗತಿಕ ಗ್ರಾಮ ಎಂಬ ಪರಿಕಲ್ಪನೆಯಲ್ಲಿ  ಪ್ರಪಂಚದಲ್ಲಿ ಯಾವ ಮೂಲೆಯಲ್ಲಿ ಇದ್ದರೂ ಇರುವಲ್ಲಿಯೇ ಕೆಲಸ ಮಾಡುವದಕ್ಕೆ ಹೊಸ ರೂಪ ಸಿಗಲಿದೆ. 

    ಇದರ ಮಧ್ಯ ಒಂದು ಸಮಾಧಾನಕರ ಸಂಗತಿ ಎಂದರೆ, ಈಗಾಗಲೇ  H1B ವೀಸಾ ಹೊಂದಿರುವವರು ಅದರ ಸಿಂಧುತ್ವ ಹೊಂದಿರುವ ವರೆಗೆ ಅಮೆರಿಕಾದಲ್ಲಿ ಕೆಲಸ ಮುಂದುವರಿಸಬಹುದಾಗಿದೆ. 

    ಮುಂದೆ ಏನಾಗಬಹುದು


    1. ಅಮೆರಿಕಾದಲ್ಲಿ ಅಲ್ಲಿಯ ಪೌರತ್ವ ಹೊಂದಿರುವವರಿಗೆ ಹೆಚ್ಚು ಕೆಲಸ ಸಿಗಲಿದೆ.  ಆದರೆ ಕೌಶಲ್ಯ ಭರಿತ ನುರಿತ ತಂತ್ರಜ್ಞರು ಕೆಲವೊಂದು ಕೆಲಸಗಳಿಗೆ ಸಿಗದಿದ್ದಾಗ  ಕಡಿಮೆ ವೆಚ್ಚದಲ್ಲಿ ಐಟಿ ಸೇವೆ ನೀಡುವ ?ದೇಶಗಳಲ್ಲಿ ಪ್ರಮುಖ ವಾದ ಭಾರತಕ್ಕೆ ಆ ಕೆಲಸಗಳು ಹರಿದು ಬರುವ ಸಾಧ್ಯತೆಗಳಿವೆ. 

     
    2. ಹೆಚ್ಚಿನ ಕೌಶಲ್ಯ ಭರಿತ ತಂತ್ರಜ್ಞರು ಅಮೆರಿಕಾದಲ್ಲಿ ಸಿಗದಿದ್ದಾಗ ಹೆಚ್ಚಾಗಿ  ಸಂಶೋಧನೆ ಒಳಪಡುವ ಕೆಲಸಗಳು ಅಮೆರಿಕಾದಿಂದ ಬೇರೆ ಸ್ಥಳಗಳಿಗೆ ರವಾನೆಯಾಗಲಿವೆ.  ಭಾರತದಲ್ಲಿ  ಕೌಶಲ್ಯಭರಿತ  ಮಾನವಶಕ್ತಿ ಸಿಗುವುದರಿಂದ  ವಿಶ್ವದ ಸಂಶೋಧನೆ ಕೆಲಸಗಳಿಗೆ ನಚ್ಚಿನ ತಾಣವಾಗಲಿದೆ.

     
    3. ಈಗಾಗಲೇ ಮನೆಯಿಂದಲೇ  ಕೆಲಸವನ್ನು –WFH- ನಿರ್ವಿಘ್ನವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ , ಭಾರತದ    ಕಂಪನಿಗಳು ಇನ್ನು ಮುಂದೆ ತನ್ನ ಯಾವುದೇ ತಂತ್ರಜ್ಞರನ್ನು ಅಮೆರಿಕಾಗೆ ಕಳುಹಿಸದೇ ಭಾರತದಿಂದಲೇ ತನ್ನ ಎಲ್ಲಾ ಸಾಫ್ಟ್ ವೇರ್  ಡೆವಲಪ್ಮೆಂಟ್ ಕೆಲಸವನ್ನು ವರ್ಚುಯಲ್ಆಗಿ ನಿರ್ವಹಿಸಿ ವಿತರಿಸುವ ಹಾದಿ ತುಳಿಯಲಿವೆ.  ಇದರಿಂದ ಐಟಿ ಕಂಪನಿಗಳಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚು.  ಭಾರತದಿಂದ ಕಳುಹಿಸುವ ಪ್ರತಿಯೊಬ್ಬ ಉದ್ಯೋಗಿಗೆ ಸಂಬಳ, ಭತ್ಯೆ ಎಲ್ಲವನ್ನು ಅಮೆರಿಕನ್ ಡಾಲರ್ ಗಳಲ್ಲಿ ಪಾವತಿಸಬೇಕಾದ ಅನಿವಾರ್ಯತೆ ಇತ್ತು.  ಅದು ತಪ್ಪಲಿದೆ.

     
    4. ಭಾರತದಲ್ಲಿ ಅನುಭವ ಇರುವ ಐಟಿ ತಂತ್ರಜ್ಞರ ಸಂಬಳ ಜಾಸ್ತಿ ಯಾಗುವ ಹಾಗು ಹೆಚ್ಚಿನ ಸೌಲಭ್ಯ ಇಲ್ಲೇ ದೊರೆಯುವ ಸಾಧ್ಯತೆಯಿದೆ.   ಹೆಚ್ಚಿನ ಕೌಶಲ್ಯ  ನುರಿತ ತಂತ್ರಜ್ಞರು ಭಾರತದಲ್ಲಿ ಉಳಿಯುವುದರಿಂದ  ಐಟಿ ಕಂಪನಿಗಳಿಗೆ ಹೆಚ್ಚು ಲಾಭ. ಹೊಸ ಹಾಗೂ ಅನುಭವ ವಿರುವ  ಉದ್ಯೋಗಾಂಕ್ಷಿಗಳಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಡಲಿದೆ.

        
    5. ಈಗಾಗಲೇ H1B  ಹೊಂದಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವವರು H1B  ವೀಸಾದ ಸಿಂಧುತ್ವ ಮುಂದಿನ ಹಲವು ತಿಂಗಳಲ್ಲಿ ಮುಗಿದರೆ ಅದನ್ನು ನವೀಕರಿಸಲಾಗದೆ ಭಾರತಕ್ಕೆ ಹಿಂದಿರುಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. 

     

    ಸೋಂಕು ನಿಯಂತ್ರಣಕ್ಕೆ ಅನಿವಾರ್ಯವಾಗುತ್ತಾ ಮತ್ತೊಂದು ಲಾಕ್‌ಡೌನ್

    ಅಶೋಕ ಹೆಗಡೆ
    ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೆ ಬರಲಿದೆಯೇ? ಹಾಗೊಂದು ಆತಂಕ ಜನರಲ್ಲಿ ಶುರುವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೋವಿಡ್-19 ಸೋಂಕು ಇಂತಹದೊಂದು ಕಳವಳವನ್ನು ಹುಟ್ಟುಹಾಕಿದೆ.

    ದೇಶದಲ್ಲಿ ಮೊದಲ ಕೊರೊನಾ ಸಾವು ಸಂಭವಿಸಿದ್ದೇ ಕರ್ನಾಟಕದಲ್ಲಿ. ಮಾರ್ಚ್ ೧೨ರಂದು ಕಲಬುರಗಿಯ ವೃದ್ಧರೊಬ್ಬರು ಮೃತಪಟ್ಟರು. ತಬ್ಲಿಘಿ ಸಮಾವೇಶದಿಂದ ದೇಶಾದ್ಯಂತ ಸೋಂಕು ವೇಗವಾಗಿ ಹರಡಲು ಆರಂಭವಾಗಿದೆ ಎನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದು ಕೂಡ ಅದೇ ವ್ಯಕ್ತಿಯ ಸಾವು. ಆ ಬಳಿಕ ಎಚ್ಚೆತ್ತ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಹೀಗಾಗಿ ಶುರುವಿನಲ್ಲಿ ರಾಜ್ಯದಲ್ಲಿ ಸೋಂಕು ಪ್ರಸರಣ ತಕ್ಕಮಟ್ಟಿಗೆ ನಿಯಂತ್ರಣದಲ್ಲಿತ್ತು. 4ಟಿ ಸೂತ್ರ (ಟ್ರೇಸ್, ಟೆಸ್ಟ್, ಟ್ರ್ಯಾಕ್ ಅಂಡ್ ಟ್ರೀಟ್‌ಮೆಂಟ್) ಅನುಸರಿಸಿದ ಪರಿಣಾಮವಾಗಿ ರಾಜ್ಯದ ಕ್ರಮ ಕೇಂದ್ರ ಸರಕಾರದ ಮೆಚ್ಚುಗೆಗೂ ಪಾತ್ರವಾಯಿತು.

    ಲಾಕ್‌ಡೌನ್ ತೆರವಾದ ಬಳಿಕ ಚಿತ್ರಣ ಸಂಪೂರ್ಣ ಬದಲಾಗಿದೆ. ಸೋಂಕಿತರ ಸಂಖ್ಯೆ ನಿತ್ಯ ನೂರರ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಂತೂ ಮೂಲೆಮೂಲೆಗಳಿಗೂ ಸೋಂಕು ವ್ಯಾಪಿಸುತ್ತಿದೆ. ಪೊಲೀಸರಿಂದ ವೈದ್ಯರವರೆಗೆ, ಆಟೋ ಚಾಲಕರಿಂದ ಸಚಿವರವರೆಗೆ ಎಲ್ಲರಿಗೂ ಸೋಂಕು ತಾಗಿದೆ.

    ಮಾಹಿತಿ :Karnataka Covid 19 Dashboard

    ಜಿಲ್ಲೆಗಳಲ್ಲಿಯೂ ಚಾಮರಾಜನಗರ ಹೊರತುಪಡಿಸಿ ಬೇರಾವ ಜಿಲ್ಲೆಯೂ ಹಸಿರು ವಲಯದಲ್ಲಿ ಇಲ್ಲ. ಈವರೆಗೆ ಸುರಕ್ಷಿತವಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕಿನ ಭೀತಿ ಶುರುವಾಗಿದೆ. ಈಗ ಯಾವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಈಗ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳೇ ಇಲ್ಲ! ಅಂದರೆ ಯಾವ ನಿಯೋಜಿತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇಲ್ಲ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಜ್ಜಾಗಿಲ್ಲ. ಸೋಂಕಿತರು ಸಹಾಯವಾಣಿಗೆ ಕರೆ ಮಾಡಿ ‘ನನಗೆ ಕೊರೊನಾ ಸೋಂಕು ತಗುಲಿದೆ. ದಯವಿಟ್ಟು ಚಿಕಿತ್ಸೆಗೆ ಕರೆದೊಯ್ಯಿರಿ’ ಎಂದು ಮನವಿ ಮಾಡಿದರೂ ಕರೆದೊಯ್ಯಲು ಬರುವವರಿಲ್ಲ!

    ಹಾಗಿದ್ದರೆ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ಅನಿವಾರ್ಯವೇ?
    ‘ಅನಿವಾರ್ಯ’ ಎಂದು ಹೇಳುತ್ತಿದ್ದಾರೆ ತಜ್ಞರು. ರಾಜ್ಯ ಸರಕಾರಕ್ಕೂ ಅದೇ ವರದಿ ಸಲ್ಲಿಸಿದ್ದಾರೆ. ಭಾಗಶಃ ಲಾಕ್‌ಡೌನ್ ಮಾಡಿ ಎಂಬ ಸಲಹೆ ನೀಡಿದ್ದಾರೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ.

    ವಾಸ್ತವ ಎಂದರೆ ಸಂಪುಟದ ಸದಸ್ಯರಲ್ಲಿಯೇ ಲಾಕ್‌ಡೌನ್ ಜಾರಿ ಕುರಿತು ಭಿನ್ನಾಭಿಪ್ರಾಯವಿದೆ. ‘70 ದಿನ ಲಾಕ್‌ಡೌನ್ ಜಾರಿ ಮಾಡಿದಾಗ ಕೊರೊನಾ ಹೋಯಿತೆ’ ಎಂದು ಹಿರಿಯ ಸಚಿವರೊಬ್ಬರು ಪ್ರಶ್ನಿಸಿದ್ದಾರೆ. ‘ಲಾಕ್‌ಡೌನ್ ಜಾರಿ ಮಾಡಿದರೆ ಆರ್ಥಿಕತೆಗೆ ಹೊಡೆತ ಬೀಳಲಿದೆ’ ಎಂದು ಮತ್ತೊಬ್ಬ ಮಂತ್ರಿ ಹೇಳಿದ್ದಾರೆ. ‘ಜನರ ಜೀವಕ್ಕಿಂತ ಆರ್ಥಿಕತೆ ದೊಡ್ಡದಲ್ಲ. ಭಾಗಶಃ ಲಾಕ್‌ಡೌನ್, ಸೀಲ್‌ಡೌನ್ ಬಿಟ್ಟು ೨೦ ದಿನ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ‘ಜನರಿಗೆ ಉಚಿತ ಚಿಕಿತ್ಸೆ ನೀಡಿ’ ಎಂದು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ಮಾಡಿದ್ದಾರೆ.


    ಸದ್ಯದ ಪರಿಸ್ಥಿತಿ ಗಮನಿಸಿದರೆ ಲಾಕ್‌ಡೌನ್ ಮಾಡದೇ ಬೇರೆ ವಿಧಿ ಇಲ್ಲ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ 11 ದಿನದಲ್ಲಿ ಬಹಳ ಏರಿಕೆ ಕಂಡಿದೆ. ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಜೂನ್ 11ರಂದು 581 ಸೋಂಕಿತರು ಇದ್ದರೆ ಮೃತರ ಸಂಖ್ಯೆ 23ಇತ್ತು. ಅದೇ ಜೂನ್ 21ರಂದು ಸೋಂಕಿತರ ಸಂಖ್ಯೆ 1232ಕ್ಕೆ ಏರಿದ್ದರೆ ಮೃತಪಟ್ಟವರ ಸಂಖ್ಯೆಯೂ ೬೪ಕ್ಕೆ ಏರಿಕೆಯಾಗಿದೆ. ಜೂನ್ ೨೪ರ ವರದಿಯಂತೆ ಬೆಂಗಳೂರು ನಗರದಲ್ಲಿ 1,505 ಮಂದಿ ಸೋಂಕಿತರಿದ್ದರೆ, 73 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಫೆ.24ರಂದು ಒಂದೇ ಪ್ರಕರಣ ಪತ್ತೆಯಾಗಿದ್ದರೆ, ಜೂನ್ ೨೪ರಂದು ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 150 ತಲುಪಿದೆ.

    ರಾಜ್ಯದಲ್ಲಿ ಮೊದಲ 1000 ಪ್ರಕರಣ ದಾಖಲಾಗದು 113 ದಿನ ಬೇಕಾಗಿತ್ತು. ನಂತರ ಕೇವಲ ೩೬ ದಿನಗಳಲ್ಲಿ 8106 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ, ಸಮುದಾಯ ಪ್ರಸರಣದ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಇದಕ್ಕಿಂತ ಆಧಾರ ಬೇಕಿಲ್ಲ.

    ನಿಜ, ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳಲಿದೆ. ಹಾಗಂತ ‘ಜನ ಏನಾದರೂ ಮಾಡಿಕೊಳ್ಳಲಿ’ ಎಂದು ಸರಕಾರ ಸುಮ್ಮನಿರಲೂ ಸಾಧ್ಯವಿಲ್ಲ. ಸೋಂಕು ಕೆಲವೇಕೆಲವು ಜನರ ಕೊಡುಗೆಯೂ ಇದೆ ಎನ್ನುವುದು ನಿಜ. ಅವರಿಗೆ ಲಾಕ್‌ಡೌನ್, ಮಾಸ್ಕ್ ಯಾವುದೂ ಸಂಬಂಧವಿಲ್ಲ. ಹಾಗಂತ ಅವರಿಂದ ಉಳಿದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ.

    ಇದರ ನಡುವೆಯೇ ಗುರುವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಆರಂಭವಾಗುವುದರಿಂದ ಮತ್ತು ಸರಕಾರ ಈ ಪರೀಕ್ಷೆಯನ್ನು ಪ್ರತಿಷ್ಟೆಯ ವಿಷಯವಾಗಿ ತೆಗೆದುಕೊಂಡಿರುವುದರಿಂದ ಲಾಕ್‌ಡೌನ್ ಜಾರಿ ಮಾಡುತ್ತದೆಯಾ? ಜಾರಿ ಮಾಡಿದರೆ ಯಾವ ರೀತಿ ಎಂಬ ಪ್ರಶ್ನೆಗಳು ಮೂಡಿವೆ.

    ಲಾಕ್ ಡೌನ್ ತೆರೆದ ಹೊಸ ಅವಕಾಶಗಳ ಹೆದ್ದಾರಿ

    “ಪ್ರತಿ ಬಿಕ್ಕಟ್ಟೂ ಒಂದು ಅವಕಾಶವನ್ನು ಸೃಷ್ಟಿಸುತ್ತದೆ” ಎಂಬ ಪ್ರಖ್ಯಾತ ಹೇಳಿಕೆ ಇದೆ. ಈ ರೀತಿಯಲ್ಲಿ ಕೋವಿಡ್-19 ಅಸಂಖ್ಯ ಅವಕಾಶಗಳನ್ನು ಸೃಷ್ಟಿಸುತ್ತಿದೆ. ದೇಶಾದ್ಯಂತ ಮೊಬೈಲ್, ಬ್ರಾಡ್ ಬ್ಯಾಂಡ್ ಬಳಕೆದಾರರು ಹೆಚ್ಚಾಗುತ್ತಿದ್ದರೂ ಒಟಿಟಿ ವೇದಿಕೆಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಬಂದೇ ಇರಲಿಲ್ಲ. ದೇಶಾದ್ಯಂತ ಲಾಕ್ ಡೌನ್ ಪ್ರಕಟಣೆಯಾಯಿತು ನೋಡಿ, ಚಿತ್ರರಂಗದ ವರಸೆಯೇ ಬದಲಾಯಿತು. ಹಲವು ಹೊಸ ಅವಕಾಶಗಳ ಹೆದ್ದಾರಿ ತೆರೆಯಿತು.
    ಟೀವಿ ಬಂದಾಗ ಇದ್ದಂತೆಯೇ ಒಂದು ಅನುಮಾನಾಸ್ಪದ ನೋಟ ಒಟಿಟಿಗಳ ಬಗ್ಗೆ ಚಿತ್ರ ನಿರ್ಮಾಪಕರಲ್ಲಿ ಇದ್ದೇ ಇದೆ. ಕೇವಲ ಒಂದೇ ವರ್ಷದ ಹಿಂದೆ ಕನ್ನಡದ ಉದಯೋನ್ಮುಖ ನಟನೊಬ್ಬ ಹೀಗೆ ಒಟಿಟಿ ಪ್ಲಾಟ್ ಫಾರಂಗಳು ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರೆ ಅನುಮಾನದಿಂದ ಬಿಟ್ಟಕಣ್ಣಾಗಿ ನೋಡುತ್ತಿದ್ದ. ಇದು ಗೊತ್ತಿಲ್ಲದ ಜಗತ್ತು ಎಂದು ಕಡೆಗಣಿಸಿದ್ದ. ಈಗ ಒಟಿಟಿ ಭವಿಷ್ಯದ ಚಿತ್ರಗಳ ನಿರ್ಮಾಣ ನಿರ್ಧರಿಸುತ್ತದೆ ಎಂದು ಒಪ್ಪಿಕೊಳ್ಳುತ್ತಿದ್ದಾನೆ.

    ಮಿಲಿಯನೇರ್ ಗಳನ್ನು ಸೃಷ್ಟಿಸಿದ ಯೂ ಟ್ಯೂಬ್

    ಎಲ್ಲ ವಯೋಮಾನದವರಿಗೆ, ಎಲ್ಲ ಬಗೆಯ ವೀಕ್ಷಕರಿಗೆ ಬೇಕಾದ, ಬೇಡವಾದ ವಿಡಿಯೋಗಳನ್ನು ಯೂಟ್ಯೂಬ್ ತುಂಬಿಕೊಂಡು ವಿಡಿಯೋ ಹಾಕಿದ ನಿರ್ಮಾಪಕರಿಗೂ ಆದಾಯ ಹಂಚಿಕೆ ಮಾಡಿಕೊಳ್ಳುತ್ತಿದ್ದರೂ ಯೂಟ್ಯೂಬ್ ಅನ್ನು ಹೆಚ್ಚು ಜನರು ಒಂದು ಲಾಭದಾಯಕ ಉದ್ಯಮ ಎಂದೇನೂ ಪರಿಗಣಿಸುತ್ತಿಲ್ಲ.

    ಮುಖ್ಯವಾಗಿ ಚಿತ್ರ ನಿರ್ಮಾಪಕರು ಯೂಟ್ಯೂಬ್ ನಲ್ಲಿ ಒಂದು ಸಣ್ಣ ಪ್ರಮಾಣದ ಹಣ ಪಡೆಯಬಹುದಷ್ಟೇ ಎಂಬ ನಂಬಿಕೆ ಹೊಂದಿದ್ದಾರೆ. ಯೂಟ್ಯೂಬ್ ಮಿಲಿಯನೇರ್ ಗಳನ್ನು ಸೃಷ್ಟಿಸಿದೆ, ಹಳೆಯ ಸಿನಿಮಾಗಳ ಹಕ್ಕು ಹೊಂದಿದ್ದವರಿಗೆ ಖಜಾನೆ ತುಂಬುತ್ತಿದೆ.

    ಆದರೆ ಉತ್ತಮ ಗುಣಮಟ್ಟದ ಆಯ್ದ ಚಲನಚಿತ್ರಗಳ, ಧಾರಾವಾಹಿಗಳ ಮೂಲಕ ಇಂಟರ್ ನೆಟ್ ಬಳಸುವ ವೀಕ್ಷಕರ ಹೊಸ ಸಮೂಹವನ್ನು ಸೃಷ್ಟಿಸಿದ ಖ್ಯಾತಿ ನೆಟ್ ಫ್ಲಿಕ್ಸ್, ಅಮೆಜಾ಼ನ್ ಮುಂತಾದ ಒಟಿಟಿ ವೇದಿಕೆಗಳಿಗೆ ಸೇರುತ್ತದೆ. ಜನಪ್ರಿಯ ನಾಯಕರ ಚಲನಚಿತ್ರಗಳನ್ನು ಕೋಟಿ ಕೋಟಿ ಕೊಟ್ಟು ಒಟಿಟಿ ಹಕ್ಕುಗಳನ್ನು ಅಮೆಜಾ಼ನ್, ನೆಟ್ ಫ್ಲಿಕ್ಸ್, ಕೊಳ್ಳಲು ಪ್ರಾರಂಭಿಸಿದ ನಂತರ ಅದರ ಖದರೇ ಬದಲಾಗಿ ಹೋಯಿತು.

    ವಿತರಕರನ್ನು ಗೋಗರೆಯಬೇಕಿಲ್ಲ

    ಡಿಜಿಟಲ್ ತಂತ್ರಜ್ಞಾನ, 5ಡಿ ಕ್ಯಾಮರಾಗಳು ಬಂದಾಗ ಐದು ಲಕ್ಷ ರೂ.ಗಳಲ್ಲಿ ಚಲನಚಿತ್ರ ಚಿತ್ರೀಕರಿಸಬಹುದು ಎಂದು ತೋರಿಸಿದ, ಹೊಸ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಕ್ಲೈಮ್ಯಾಕ್ಸ್ ಎಂಬ ಚಿತ್ರವನ್ನು ಯಾವ ಒಟಿಟಿ ಪ್ಲಾಟ್ ಫಾರಂಗೂ ಮಾರಾಟ ಮಾಡದೆ ತನ್ನದೇ http://rgvworld.in/shreyaset ಎಂಬ ಒಟಿಟಿಯಲ್ಲಿ ನೇರ ಬಿಡುಗಡೆ ಮಾಡಿದರು. ಇಲ್ಲಿ ವಿತರಕರ, ಥಿಯೇಟರ್ ಲಾಬಿಯ ಆತಂಕವೇ ಇಲ್ಲ. 100ರೂ. ಪಾವತಿಸಿ ಈ ಚಿತ್ರ ವೀಕ್ಷಿಸಬಹುದಾಗಿತ್ತು. ಭಾರತದಲ್ಲಿಯೇ ಪ್ರಪ್ರಥಮ ಪ್ರಯೋಗದಿಂದ ಮೊದಲ ದಿನವೇ ಮೂರು ಕೋಟಿ ರೂ. ಸಂಗ್ರಹವಾಗಿದೆ ಎಂದು ತಂಡ ಹೇಳಿಕೊಂಡಿದೆ. ಈ ಚಿತ್ರವನ್ನು 12 ಗಂಟೆಗಳಲ್ಲಿ 1,68,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಸ್ವತಃ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

    ಅವರ ಮುಂದಿನ ಚಿತ್ರ “ನೇಕೆಡ್” ಇದೇ ಮಾದರಿಯಲ್ಲಿ ಜೂನ್ 27ರಂದು ಬಿಡುಗಡೆಯಾಗುತ್ತಿದೆ. ಈ ಬಾರಿ ಟಿಕೆಟ್ ದರ 200ರೂ. ತಮ್ಮ ಕಂಟೆಂಟ್ ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದ್ದವರು ಮಾತ್ರ ಇಂತಹ ಪ್ರಯೋಗ ನಡೆಸಬಹುದು. ಸದ್ಯಕ್ಕಂತೂ ಅಮೆಜಾ಼ನ್, ನೆಟ್ ಫ್ಲಿಕ್ಸ್, ಜೀ಼5, ಹಾಟ್ ಸ್ಟಾರ್, ಸನ್ ನೆಕ್ಸ್ಟ್, ಹುಲು, ಮುಬಿ, ಆಹಾ ಇತ್ಯಾದಿ ಅಸಂಖ್ಯ ಒಟಿಟಿ ಪ್ಲಾಟ್ಫಾರಂಗಳು ಬಂದಿವೆ.

    ಒಟಿಟಿ ಪ್ಲಾಟ್ ಫಾರಂಗೆ ಭಾಷೆಯ ಮಿತಿಯಿಲ್ಲ. ಯಾವುದೇ ಭಾಷೆಯ ಚಿತ್ರವನ್ನು ಯಾರು ಬೇಕೆಂದರೂ ವೀಕ್ಷಿಸಬಹುದು. ಅದಕ್ಕೆ ಮನಿ ಹೀಸ್ಟ್ ಎಂಬ ಸ್ಪ್ಯಾನಿಷ್ ಭಾಷೆಯ ಸರಣಿ ವಿಶ್ವವಿಖ್ಯಾತಿ ಪಡೆದದ್ದೇ ಸಾಕ್ಷಿ. ಭಾರತದಲ್ಲೂ ಈ ಸರಣಿ ಯುವಜನರಲ್ಲಿ ಅಪಾರ ಜನಪ್ರಿಯತೆ ಪಡೆದಿದೆ. ವಾಸ್ತವವಾಗಿ ಈ ಸರಣಿ ಸ್ಪ್ಯಾನಿಷ್ ಚಾನೆಲ್ ಆಂಟೆನ್ನಾ 3ಯಲ್ಲಿ ಪ್ರಸಾರವಾಗಿದ್ದರೂ ಸೋಲನ್ನಪ್ಪಿತ್ತು. ನೆಟ್ ಫ್ಲಿಕ್ಸ್ ಈ ಸರಣಿ ಕೊಂಡು ಪ್ರಸಾರ ಮಾಡಿದ ನಂತರ ವಿಶ್ವದ ಅತ್ಯಂತ ಜನಪ್ರಿಯ ಸರಣಿಯಲ್ಲಿ ಒಂದೆನಿಸಿದೆ.
    ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗ, ತೆಲುಗು ಅಥವಾ ತಮಿಳಿನಷ್ಟು ಬೃಹತ್ತಾಗಿ ಬೆಳೆಯಲಿಲ್ಲ. ಆದರೆ ನಮ್ಮ ಸಾಧನೆ ಕಡೆಗಣಿಸುವಂಥದ್ದಲ್ಲ. ಆದರೆ ತೆಲುಗಿನಲ್ಲಿ ಗೀತಾ ಆರ್ಟ್ಸ್ ಈಗಾಗಲೇ “ಆಹಾ” ಎಂಬ ಒಟಿಟಿ ಪ್ರಾರಂಭಿಸಿದೆ. ರವಿಚಂದ್ರನ್ ತಮ್ಮದೇ ಒಟಿಟಿ ಪ್ಲಾಟ್ ಫಾರಂ ಪ್ರಾರಂಭಿಸುತ್ತೇನೆ ಎನ್ನುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಆದರೆ ಅದು ಪ್ರಾರಂಭಗೊಂಡು ಕನ್ನಡ ಚಿತ್ರ ನಿರ್ಮಾಪಕರಿಗೂ ಉತ್ತಮ ಕಂಟೆಂಟ್ ಸೃಷ್ಟಿಸಲು ನೆರವಾದರೆ ಉತ್ತಮ.

    ಜ್ಯೋತಿಕಾ ನಟನೆಯ ತಮಿಳಿನ ಪೊನ್ ಮಗಳ್ ವಂದಳ್’, ಕೀರ್ತಿ ಸುರೇಶ್ ಅಭಿನಯದ ಮೂರು ಭಾಷೆಗಳಪೆಂಗ್ವಿನ್’, ಅಮಿತಾಭ್ ಬಚ್ಚನ್, ಆಯುಷ್ಮಾನ್ ಖುರಾನಾ ನಟನೆಯ `ಗುಲಾಬೊ ಸಿತಾಬೊ’ ನೇರ ಅಮೆಜಾ಼ನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿವೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಮತ್ತು ಲಾ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್ ಸಂಸ್ಥೆಗಳೂ ತಮ್ಮ ಕಠಿಣ ನಿಯಮಗಳನ್ನು ಸಡಿಲಿಸುತ್ತಿವೆ. ಇದು ಚಿತ್ರರಂಗಕ್ಕೆ ಉತ್ತಮ ಬೆಳವಣಿಗೆಯೇ.


    ಒಟಿಟಿ ಸಿನಿಮಾ ಪ್ರವೇಶ ಹೇಗೆ?

    ಅಮೆಜಾ಼ನ್ ಪ್ರೈಮ್ ವಿಡಿಯೊ ಕನ್ನಡ ಸಿನಿಮಾಗಳನ್ನು ಹೊಂದಿದ್ದರೂ ಅವುಗಳ ಪ್ರಮಾಣ ಕಡಿಮೆ ಇದೆ. ಪ್ರೈಮ್ ವಿಡಿಯೊ ತನ್ನಲ್ಲಿ ಸಿನಿಮಾಗಳನ್ನು ಅಪ್ ಲೋಡ್ ಮಾಡಲು ಅವಕಾಶ ನೀಡುತ್ತದೆ. ವೀಕ್ಷಣೆಯ ಆಧಾರದಲ್ಲಿ ಪಾವತಿಸುತ್ತದೆ.ನೆಟ್ ಫ್ಲಿಕ್ಸ್ ತನ್ನಲ್ಲಿ ಸಿನಿಮಾಗಳನ್ನು ನೇರ ಸಲ್ಲಿಸಲಾಗದು. ಅದಕ್ಕಾಗಿ ಲಿಟರರಿ ಏಜೆಂಟರಂತೆಯೇ ಏಜೆಂಟರ ಮೂಲಕ ಸಿನಿಮಾಗಳನ್ನು ಸಲ್ಲಿಸಬೇಕಾಗುತ್ತದೆ.

    ಹಾಟ್ ಸ್ಟಾರ್ ಕಥೆಗಳನ್ನು ಆಹ್ವಾನಿಸುತ್ತಿದೆ. ಹಲವು ಒಟಿಟಿ ಪ್ಲಾಟ್ ಫಾರಂಗಳು ಚಿತ್ರ ನಿರ್ಮಾಪಕರಿಗೆ ಸ್ವತಃ ಚಲನಚಿತ್ರವನ್ನು ಅಪ್ ಲೋಡ್ ಮಾಡಿ ಅವುಗಳ ವೀಕ್ಷಣೆಯಿಂದ ಹಣ ಮಾಡಿಕೊಳ್ಳುವ ಅವಕಾಶ ನೀಡಿವೆ. ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳು, ಧಾರಾವಾಹಿಗಳು ಇಂಟರ್ನೆಟ್ ಬಳಸದ ವೀಕ್ಷಕರಿಗೆ ದೊರೆಯದೇ ಇರುವುದರಿಂದ ಬಹಳಷ್ಟು ನಿರ್ಮಾಪಕರು ಇನ್ನೂ ಈ ಕುರಿತು ನಿರ್ಲಕ್ಷ್ಯದಿಂದ ಇದ್ದಾರೆ ಎನ್ನುವುದು ಸದ್ಯದ ವಾಸ್ತವ.

    ಅನುಕರಿಸಲಾಗದ ಆದರ್ಶದ ಕವಿ ನೀಡಿದ ಜನ್ಮದಿನದ ಕಾಣಿಕೆ

    ಸಾಧಾರಣವಾಗಿ ನಮ್ಮ ಆಪ್ತರ ಜನ್ಮದಿನಕ್ಕೆ ನಾವು ಕಾಣಿಕೆಯನ್ನು ಕೊಟ್ಟು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ . ನಮ್ಮ ಕಾಣಿಕೆ ಅವರಿಗೆ ಉಪಯೋಗಕರವಾಗಲೆಂದು ಹತ್ತಾರು ಕಡೆ ಹುಡುಕಿ, ನೂರಾರು ಬಾರಿ ಯೋಚಿಸಿ ಸೂಕ್ತ ಉಡುಗೊರೆಯನ್ನು ಹುಡುಕಲು ಯತ್ನಿಸುತ್ತೇವೆ . ಆದರೆ ಇಲ್ಲೊಬ್ಬ ಧೀಮಂತ ಕವಿ ಇದ್ದಾರೆ. ಉಳಿದವರು ಕೊಡಬಹುದಾದ ಕಾಣಿಕೆಯನ್ನು ನಿರೀಕ್ಷಿಸದೆ ತಾವು ತಮ್ಮ ಓದುಗರಿಗೆ ಏನು ಕೊಡಬಹುದೆಂದು ಯೋಚಿಸುತ್ತಾರೆ ಅದಕ್ಕಾಗಿ ಶ್ರಮ ಪಡುತ್ತಾರೆ ಓದುತ್ತಾರೆ ಅಧ್ಯಯನ ಮಾಡುತ್ತಾರೆ ಓದಿದ್ದೆಲ್ಲವನ್ನು ಅರಗಿಸಿಕೊಂಡು ಬರಹರೂಪಕ್ಕಿಳಿಸಿ ಪ್ರತಿವರ್ಷ ತಮ್ಮ ಜನ್ಮದಿನದಂದು ಓದುಗರಿಗೆ ಅತ್ಯಮೂಲ್ಯ ಕಾಣಿಕೆಯನ್ನು ನೀಡುತ್ತಾರೆ. ಇದು ಒಂದೋ ಎರಡೋ ವರ್ಷದ ಮಾತಲ್ಲ.. ಪ್ರತಿವರ್ಷದ ವಾಡಿಕೆ. ತಮ್ಮ ಮುಂದಿನ ತಲೆಮಾರಿಗೆ ಹಿಂದಿನವರ ಅಮೂಲ್ಯ ಸಾಹಿತ್ಯವನ್ನು ತಲುಪಿಸಬೇಕೆಂಬುದು ಇಂದು ಹುಟ್ಟು ಹಬ್ಬದ ಸಡಗರದಲ್ಲಿರುವ ಕವಿ ಡಾ. ಎಚ್. ಎಸ್ . ವೆಂಕಟೇಶ ಮೂರ್ತಿ ಅವರ ಹಂಬಲ.

    70ನೆಯ ಜನ್ಮದಿನಕ್ಕೆ ಪಂಪನ ವಿಕ್ರಮಾರ್ಜುನ ವಿಜಯವನ್ನು ಸರಳ ರೂಪದಲ್ಲಿ ಓದುಗನ ಮುಂದಿಟ್ಟಿದ್ದರು. ಜನ್ನನ ಯಶೋಧರ ಚರಿತೆ ಕೂಡ ಇವರ ಕೈಯಲ್ಲಿ ಸರಳವಾಗಿ ಅರಳಿ ಹೊಸ ತಲೆಮಾರಿನ ಓದುಗನನ್ನು ಬೆರಗುಗೊಳಿಸಿದೆ. ಈ ಬಾರಿ ಕರೋನಾ ಲಾಕ್ಡೌನ್ ಆತಂಕ, ಕೊರೊನಾ ಸೃಷ್ಟಿಸಿದ ನೂರು ತಲ್ಲಣಗಳು ಇದ್ದಾಗ್ಯೂ ಅವರು ಎರಡು ಪುಸ್ತಕಗಳನ್ನು ಓದುಗರಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಮೊದಲನೆಯದು ಅವರು ಹಲವು ದಶಕಗಳ ಅಧ್ಯಯನದಿಂದ ಬರೆಯುತ್ತಿರುವ ಕುಮಾರವ್ಯಾಸ ಕಥಾಂತರ. ಒಟ್ಟು 280 ಪುಟಗಳ ಈ ಹೊತ್ತಿಗೆ ಓದುಗನಲ್ಲಿ ರೋಮಾಂಚನ ಹುಟ್ಟಿಸುವುದು ಸುಳ್ಳಲ್ಲ. ಕನ್ನಡ ಸಾಹಿತ್ಯಲೋಕದ ಇತಿಹಾಸದಲ್ಲಿ ಇದೊಂದು ದಾಖಲಿಸಬೇಕಾದ ಕೊಡುಗೆ

    ಸಿದ್ಧಾರ್ಥ ಸೌಮ್ಯ ರಘು ಅಪಾರ ಈ ಮೂವರ ಪರಿಶ್ರಮದಿಂದ ಮತ್ತು ಸಾಹಿತ್ಯ ಪ್ರೀತಿಯಿಂದ ಹೊರಬಂದ ಚುಕ್ಕುಬುಕ್ಕು ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಮೊಟ್ಟಮೊದಲು ಕುಮಾರವ್ಯಾಸ ಕಥಾಂತರ ಹುಟ್ಟಿದ್ದು. ಆಗ ಅದಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರವೇ ಕೃತಿಯನ್ನು ರಚಿಸಲು ಉತ್ಸಾಹ ನೀಡಿತು. ಏಳು ವರ್ಷಗಳ ಅವಧಿಯಲ್ಲಿ 4 ಸಂಪುಟ ಹೊರತಂದ ಎಚ್ಚೆಸ್ವಿ ಮತ್ತು ಅಭಿನವ ಪ್ರಕಾಶನದ ರವಿಯವರಿಗೆ ಕನ್ನಡ ಸಾಹಿತ್ಯಲೋಕ ಚಿರ ಋಣಿ.

    ನಾಲ್ಕು ಸಂಪುಟ ಸಾವಿರದ ನೂರು ಪುಟ

    ನಾಲ್ಕು ಸಂಪುಟಗಳು ಸಾವಿರದ ನೂರು ಪುಟಗಳು ಕುಮಾರವ್ಯಾಸನ ಬಗ್ಗೆ ಇಷ್ಟು ಸುದೀರ್ಘವಾದ ಬರವಣಿಗೆ ಕನ್ನಡದಲ್ಲಿ ಇದೇ ಮೊದಲು. ಇದಕ್ಕಿಂತ ಮೊದಲು ಕೀರ್ತಿನಾಥ ಕುರ್ತಕೋಟಿಯವರು ಸುಮಾರು ಆರುನೂರರಿಂದ ಏಳುನೂರು ಪುಟಗಳಷ್ಟು ಅದ್ಭುತವಾದ ವಿಮರ್ಶಾತ್ಮಕ ಒಳನೋಟವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರು ಹುಟ್ಟು ವಿಮರ್ಶಕರು ಸಿದ್ಧ ಕೃತಿಯ ಬಗ್ಗೆ ಅವರದು ಸೊಗಸಾದ ವಿಶ್ಲೇಷಣೆ . ಆದರೆ ಎಚ್ಚೆಸ್ವಿಯವರ ಹಾದಿಯೇ ಬೇರೆ . ಇದು ಕ್ರಿಯೇಟಿವ್ ಲೇಖಕನ ವಿಮರ್ಶೆ ಬೆರೆತ ಸ್ಪಂದನೆ.

    ಶ್ರೀವನಿತೆಯರಸನೆ ಎಂಬ ಆರಂಭದ ಪದ್ಯದಿಂದ ಹಿಡಿದು ಅಂತ್ಯದವರೆಗೆ ಅಂತ್ಯದವರೆಗಿನ ಓದಿನಲ್ಲಿ ಆ ಪದ್ಯಗಳು ಹೇಗೆ ಮಹಾಕಾವ್ಯವನ್ನು ಸೃಷ್ಟಿಸುತ್ತಿವೆ ಅಥವಾ ಹೇಗೆ ಮಹಾಕಾವ್ಯ ವಾಗುತ್ತಿದೆ ಎಂಬ ಪ್ರಕ್ರಿಯೆಯನ್ನು ಗಮನಿಸುವ, ಆಸ್ವಾದಿಸುವ ದಾರಿಯುಂಟಲ್ಲ ಅದು ಬಹಳ ಮುಖ್ಯವಾದದ್ದು . ಊರು ಸೇರುವವರೆಗೆ ದಾರಿ ಸ್ಪಷ್ಟವಾಗುವುದಿಲ್ಲ . ಗಮ್ಯ ತಲುಪುವುದಕ್ಕಿಂತ ಆ ದಾರಿಯಲ್ಲಿನ ರೋಚಕತೆಯೇ ಪ್ರಮುಖವಾದದು . ಒಮ್ಮೆ ಗುರಿ ತಲುಪದಿದ್ದರೂ ಮಾರ್ಗ ಪ್ರಯಾಣವೇ ರೋಚಕವಾಗಿ ಬಿಡಬಹುದಾದ ಸಂಭ್ರಮ. ಇಲ್ಲಿ ಕೊನೆಯನೆಂದು ಮುಟ್ಟದಿರು ಎಂಬ ಕುವೆಂಪುರವರ ಸಾಲು ನೆನಪಾಗುತ್ತದೆ. ಅದರ ಅರ್ಥ ಇದೇ ಇರಬಹುದೇ ಎಂದು ಯೋಚಿಸುವಂತಾಗುತ್ತದೆ. ಕುಮಾರವ್ಯಾಸನ ವಿಷಯದಲ್ಲಿಯೂ ಈ ಮಾತು ಸತ್ಯ. ಎಷ್ಟು ಆಸ್ವಾದಿಸಿದರೂ ಮತ್ತೆ ಮತ್ತೆ ಆಸ್ವಾದಿಸಬಹುದಾದ ಭಾಷೆಯ ಕವಿ ಕುಮಾರವ್ಯಾಸ. ಇದನ್ನು ಓದುಗನಿಗೆ ತಲುಪಿಸಲಿಕ್ಕಾಗಿ ಎಚ್ಚೆಸ್ವಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.

    ಕನ್ನಡ ಇಂಗ್ಲಿಷ್ ಸಂಸ್ಕೃತದಲ್ಲಿ ಬಂದ ಬಹುತೇಕ ಮಹಾಭಾರತಗಳನ್ನು ಅಧ್ಯಯನ ಮಾಡಿ ಬರೆದ ಕೃತಿ ಕುಮಾರವ್ಯಾಸ ಕಥಾಂತರ . ಅಳಸಿಂಗಾಚಾರ್ಯರ ಅನುವಾದದಿಂದ ಹಿಡಿದು ವ್ಯಾಸಭಾರತದವರೆಗೂ ಅವಲೋಕಿಸಿ ಮಾಡಿದ ತೌಲನಿಕ ಅಧ್ಯಯನ ಇದು. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಮೂರು ಪ್ರಮುಖ ಪುಸ್ತಕಗಳು ಮೊದಲನೆಯ ಮೂಲ ವ್ಯಾಸಭಾರತ . ಎರಡನೆಯದು ಅಳಸಿಂಗಾಚಾರ್ಯರ ಅದ್ಭುತ ಅನುವಾದ. ಲಯದ ವಿಷಯದಲ್ಲಿ ಯಾವುದೇ ಅನುಮಾನ ಬಂದರೂ ಅವರು ಕೈಗೆತ್ತಿಕೊಳ್ಳುತ್ತಿದ್ದುದು ಅರಾಸೇ ಅವರ ಪುಸ್ತಕ . ಅರಾಸೇ ಅವರಿಗಿದ್ದ ಲಯ ಪ್ರಜ್ಞೆ ಸರಿಸಾಟಿ ಇಲ್ಲದ್ದು. ಈ ಮೂರು ಅಥೆಂಟಿಕ್ ಆಧಾರಗಳನ್ನು ಇಟ್ಟುಕೊಂಡು ಅವರು ಬರೆದ ಕುಮಾರವ್ಯಾಸ ಕಥಾಂತರ ಹೇಳುವ ಹೊಳಹುಗಳು ಅರ್ಥಗಳು ಸ್ವಾರಸ್ಯಗಳನ್ನು ಓದಿಯೇ ಅನುಭವಿಸಬೇಕು. ಖ್ಯಾತ ವಿಮರ್ಶಕ ಎಸ್ ಆರ್ ವಿಜಯ ಶಂಕರ್ ರವರ ಬ್ಲರ್ಬ್, ಪುಸ್ತಕದೊಳಗೆ ಕನ್ನಡದ ಅನೇಕ ಮಹನೀಯರ ಸ್ಪಂದನೆಗಳು ಈ ಪುಸ್ತಕದ ಮಹತ್ವವನ್ನು ಕುರಿತು ಹೇಳುತ್ತವೆ.

    ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಕೂತು ಯಾವ ಚಟುವಟಿಕೆಗಳು ಹೊರಗೆ ನಡೆಯುತ್ತಿಲ್ಲವೆಂದು ಬೇಸರಿಸಿ ಸಮಯ ಹೇಗೆ ಕಳೆಯುವುದೆಂದು ಬಹುತೇಕರು ನಿಷ್ಕ್ರಿಯರಾಗಿ ನಿರ್ವಿಣ್ಣರಾಗಿ ಕೂತ ಹೊತ್ತಿನಲ್ಲಿ ಎಚ್ಚೆಸ್ವಿಯವರು ಕುಮಾರವ್ಯಾಸ ಕಥಾಂತರ ವನ್ನು ಬರೆದು ಮುಗಿಸಿದ್ದರು.

    ಎರಡು ಸೊಗಸಾದ ನಾಟಕ

    ಇಷ್ಟೇ ಅಲ್ಲದೆ ಎರಡು ಸೊಗಸಾದ ನಾಟಕಗಳನ್ನು ಈ ಹೊತ್ತಿನಲ್ಲಿ ಸಿದ್ಧಪಡಿಸಿ ನಕ್ಕರು. ಅವರ ಜೀವನದ ಪ್ರಮುಖ ಕಾವ್ಯಗಳೆಲ್ಲ ಒಂದಾದ ಉತ್ತರಾಯಣ ಕಾವ್ಯವನ್ನು ನಾಟಕದ ರೂಪದಲ್ಲಿ ತಂದಿದ್ದಾರೆ . ಪೌರುಷ ಎಂಬ ಪುರಾಣದ ಕಥೆಯೊಂದನ್ನು ಆಧರಿಸಿ ಬರೆದ ನಾಟಕವಂತೂ ಬಹಳ ವಿಶಿಷ್ಟವಾಗಿದೆ. “ಹೆಣ್ಣೆಂದರೆ ಉರಿಯುವ ಆತ್ಮ. “.. ತನ್ನಲ್ಲಿ ತಾಯಿಯನ್ನು ಕಂಡ ಅರ್ಜುನನ ರೀತಿಗೆ ಕೆಂಡವಾಗುವ ಊರ್ವಶಿಯ ಉರಿಗೂ ಹೆಣ್ಣೆಂದರೆ ಕೇವಲ ಆಕಾರ ವಿಶೇಷವಲ್ಲ ಎಂದು ಪುರುಷ ಸಿಂಹ ಅರ್ಜುನನಿಗೆ ಮನದಟ್ಟು ಮಾಡಿಸುವ ಅಗ್ನಿಕನ್ಯೆ ನಿಜವಾದ ಪೌರುಷವತಿ ದ್ರೌಪದಿಯ ಉರಿಗೂ ಇರುವ ವ್ಯತ್ಯಾಸವೇ ಪೌರುಷ.. ನಪುಂಸಕತನವನ್ನು ಆವಾಹಿಸಿಕೊಂಡಾದರೂ ಉಳಿಸಿಕೊಳ್ಳುವ ಪೌರುಷವೇ ನೈಜ ಪೌರುಷ ಎಂಬುದು ಪ್ರಶ್ನಾರ್ಥಕ ಚಿಹ್ನೆಯ ರೂಪದಲ್ಲಿದೆ. .. ಗೊತ್ತಿದ್ದ ಕಾವ್ಯ ಕಥೆಯೊಂದು ನಾಟಕವಾಗಿ ಹೊಸ ರೀತಿಯಲ್ಲಿ ಅರಳಿರುವ ರೀತಿ ಅನನ್ಯ . ಸಂಭಾಷಣೆಗಳು ಕಾವ್ಯದ ಸೊಗಡನ್ನೂ ಬಿಗಿಯನ್ನೂ ಸೊಗಸಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ರಂಗದ ಮೇಲಿನ ಪ್ರಯೋಗಕ್ಕಾಗಿ ಕಾಯುತ್ತಿರುವೆ.

    ಕವಿಯೊಂದಿಗೆ ಲೇಖಕಿ

    ಇದರ ಹಿಂದಿರುವುದು ಅಮಿತ ಶ್ರದ್ಧೆ. ಅವರಿಗೆ ಪಿಹೆಚ್. ಡಿ ಪದವಿ ಬಂದಾಗ ರಾಘವೇಂದ್ರ ಪಾಟೀಲರು ನನ್ನ ತಂದೆ ಎನ್ ಎಸ್ ಚಿದಂಬರ ರಾವ್ ಅವರಿಗೆ ಹೇಳಿದ ಮಾತು ನನಗಿನ್ನೂ ನೆನಪಿದೆ “ಎಚ್ಚೆಸ್ವಿಯವರದ್ದು ಅನುಕರಿಸಲಾಗದ ಆದರ್ಶ”.ಅವರ ತಾಳ್ಮೆ ಅಧ್ಯಯನ ಶಿಸ್ತು ಶ್ರದ್ಧೆ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ.ಇಷ್ಟು ಸೊಗಸಾದ ಕಾಣಿಕೆಗಳನ್ನು ತಮ್ಮ ಜನ್ಮದಿನದಂದು ನಮಗೆ ಕಾಣಿಕೆಯಾಗಿ ಕೊಟ್ಟ ಕವಿಗೆ ನಾವೇನು ಕೊಡಬಲ್ಲೆವು… ಕೇವಲ ಶುಭಾಶಯ ಕೋರುವುದಷ್ಟೇ ನಮಗುಳಿದ ಕೆಲಸ.. ಜನ್ಮದಿನದ ಶುಭಾಶಯ ಮತ್ತು ಧನ್ಯವಾದ ಎಚ್ಚೆಸ್ವಿಯವರಿಗೆ.

    ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ

    ಹಾವ ತುಳಿದೇನೆ ಮಾನಿನಿ, ಹಾವ ತುಳಿದೇನೆ… ಇಡಾ, ಪಿಂಗಳ,ಸುಷುಮ್ನಾ…..ಮೂಲಾ ಧಾರದಿಂದ ….ಆಜ್ನ್ಯಾ ಚಕ್ರದವರೆಗೆ….. ಕುಂಡಲಿನಿ …..ಜಾಗ್ರತೆ ಆದಾಗ….ಹಾವ ತುಳಿದೇನೆ, ಮಾನಿನಿ…..

    ಶಿಶುನಾಳ ಶರೀಫಜ್ಜರ ಗೂಡಾರ್ಥಗಳಲ್ಲಿ ಒಂದಾದ ಹಾವ ತುಳಿದೇನೆ ಗೀತೆಯ ಬರುವ ಸಾಲುಗಳನ್ನು ನಾನು ಮೊದಲು ಕೇಳಿದ್ದು ಪ್ರಾಣಾಯಾಮದಲ್ಲಿ. ಪಿಂಗಳ,ಸುಷುಮ್ನಾ ನಾಡಿಗಳ ಜೊತೆ ಮೂಲಾಧಾರ ಸುಪ್ತವಾಗಿರುವ ಹಾವಿನಂತಹ ಕುಂಡಲಿನಿ ಜಾಗ್ರತವಾದಾಗ ಮನುಷ್ಯ ತುಳಿದ ಹಾವಿನಂತಾಗುತ್ತಾನೆ…. ಎಂದು ನಾನು ಪ್ರಥಮವಾಗಿ ಕೇಳಿದ್ದು ಮಲ್ಲಾಡಿಹಳ್ಳಿಯ ಯೋಗ ಶಿಬಿರದಲ್ಲಿ.

    ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತಿದ್ದ 21 ದಿನಗಳ ಯೋಗ ಶಿಬಿರ ದಲ್ಲಿ ಒಂದೊಂದೇ ಆಸನಗಳನ್ನು ಶಿಬಿರದಲ್ಲಿ ಭೌತಿಕವಾಗಿ ಪೂರ್ವಾಚಾರಿ ಮತ್ಚು ವನಿತಾ ಟೀಚರ್ ಪ್ರದರ್ಶಿಸುತ್ತಿದ್ದರೆ ಇತ್ತ ಅವುಗಳ ಮಹತ್ವವನ್ನು ಹೇಳುತ್ತಾ,ಕೆಂಪು ಮಕಮಲ್ ಬಟ್ಟೆಯ ಜಟ್ಟಿ ಚಡ್ಡಿ ಧರಿಸಿ,ಶಿಬಿರಾರ್ಥಿಗಳ ಮಧ್ಯೆ ಪಾದರಸದಂತೆ ಅಡ್ಡಾಡುತ್ತ,ಆಗಾಗ ನಗಿಸುತ್ತ,ಆಸನಗಳ ಆಳಗಳನ್ನು ಮನದಲ್ಲಿ ಸ್ಥಿರಗೊಳಿಸುತ್ತಿದ್ದರು ನಮ್ಮ ಅಭಿನವ ಧನ್ವಂತರಿ,ಯೋಗಾಚಾರ್ಯ ಶ್ರೀ ರಾಘವೇಂದ್ರ ಸ್ವಾಮೀಜಿ.

    ಪರಮಾತ್ಮನ ಸಾಕ್ಷಾತ್ಕಾರ

    ದೇಹದ ಸುಸ್ಥಿರತೆಗೆ ಲಘು ವ್ಯಾಯಾಮ ಮಾಡಿ ಯೋಗಾಸನಕ್ಕೆ ಅಣಿ ಗೊಳ್ಳಬೇಕು.ಆದಮೇಲೆ ಪ್ರಾಣಾಯಾಮ ಮಾಡಬೇಕು.ಅವರವರ ದೇಹ ಪ್ರಕೃತಿ ಅನುಸರಿಸಿ, ಹೊರಗಿನ ವಾತಾವರಣಕ್ಕೆ ತಕ್ಕಂತೆ ಎಡ, ಬಲ (ಇಡಾ,ಪಿಂಗಳ ಅಥವಾ ಸೂರ್ಯ,ಚಂದ್ರ ನಾಡಿ) ಮೂಗಿನ ಹೊಳ್ಳೆಗಳ ಮುಖಾಂತರ ಉಸಿರು ತೆಗೆದುಕೊಳ್ಳುವುದು, ಹಿಡಿದಿಡುವುದು,ಬಿಡುವುದು…ಈ ಪ್ರಕ್ರಿಯೆಯನ್ನು ಪ್ರಾಣಾಯಾಮ ಎನ್ನುತ್ತಾರೆ. ಈ ಪ್ರಾಣಾಯಾಮದ ಮುಖಾಂತರ ಏಳು ಚಕ್ರಗಳನ್ನು ಜಾಗೃತಗೊಳಿಸಿಕೊಂಡು ಬ್ರಹ್ಮಾನಂದವನ್ನು ಪಡೆಯಬಹುದು.ಇದನ್ನೇ ಪರಮಾತ್ಮನ ಸಾಕ್ಷಾತ್ಕಾರ ಅಂತಾರೆ. ಆತ್ಮವನ್ನು ಪರಮಾತ್ಮನಲ್ಲಿ ಲೀನ ಮಾಡುವ ಹಲವಾರು ಸಾಧನೆಗಳಿಗೆ ಇದೇ ರಾಜಮಾರ್ಗ.ಹೀಗೆ ಸೇರಿಸುವ ವಿಧಾನಕ್ಕೆ ಯೋಗ ಅಂತಾರೆ.ಹಾಗಾಗಿ ಈ ಅಸನಗಳು ಯೋಗಾಸನ ಅಂತ ಅಂತಾರೆ ಎಂದು ಸ್ವಾಮೀಜಿ ಹೇಳುತ್ತಿದ್ದನ್ನು ಕೇಳಿದ ನಮಗೆ ಆ ಕ್ಷಣದಲ್ಲೇ ಸಾಕ್ಷತ್ಕಾರವಾದ ಅನುಭವ.

    ಅಸಂಖ್ಯಾತ ಇರುವ ಆಸನಗಳಲ್ಲಿ,ಅವರವರ ದೇಹ ಪ್ರಕೃತಿಗೆ ಹೊಂದುವ ಆಸನಗಳನ್ನು ಅನುಸರಿಸಿ ಸಾಧನೆಗೆ ತೊಡಗಬೇಕು.ಎಲ್ಲರೂ ಸಾಧಕರಾಗಲು ಆಗದಿದ್ದರೂ,ಉತ್ತಮ ಆರೋಗ್ಯಕ್ಕೆ ಇವುಗಳ ಪಾಲನೆ ಅತೀ ಮುಖ್ಯ. ಬರುವ ದಿನಗಳಲ್ಲಿ ಯೋಗದ ಆವಶ್ಯಕತೆ ಮಾನವನಿಗೆ ಅನಿವಾರ್ಯ ಎನ್ನುವಷ್ಟು ಹತ್ತಿರವಾಗುತ್ತದೆ. ಆರೋಗ್ಯದಿಂದ ಇರುವವರು ರೋಗಗಳು ಬರದೇ ಇರಲು, ರೋಗಿಗಳಾದವರಿಗೆ ಆರೋಗ್ಯವಂತರಾಗಲು ಯೋಗ ಅತೀ ಮುಖ್ಯ ಎಂದು ಯೋಗದ ಮಹತ್ವವನ್ನು ನನ್ನಂಥ ಲಕ್ಷಾಂತರ ಗ್ರಾಮೀಣ ಎಳೆ ಮನಸ್ಸುಗಳ ಅರಿವಿಗೆ,ಆಗಲೇ 90 ದಾಟಿದ್ದ ಶ್ರೀ ಗಳು ಹೇಳುತ್ತಿದ್ದರು.

    ಸ್ವಾಮೀಜಿ ಮತ್ತು ಸೂರ್ ದಾಸರು

    ಆ ಸಮಯದಲ್ಲಿ ನಮಗೆ ಮುದೊಂದು ಅಂತಾರಾಷ್ಟ್ರೀಯ ಯೋಗ ದಿನ ಅಂತ ಜೂನ್ 21ರ ದಿನವನ್ನು ಭಾರತ ಸರ್ಕಾರ ಘೋಷಿಸಿ, ಇಡೀ ವಿಶ್ವಕ್ಕೇ ಯೋಗವನ್ನು ಪರಿಚಯಿಸುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯವಾಗಿತ್ತು.1977 ರಿಂದ 1982 ರ ಐದು ವರ್ಷಗಳ ಅವಧಿಯನ್ನು ಶ್ರೀಗಳ ಸನಿಹದಲ್ಲಿ,ಆಶ್ರಯದಲ್ಲಿ ಕಳೆದದ್ದು ನನ್ನ ಭಾಗ್ಯವೇ ಸೈ. ಆಶ್ರಮದ ಇಂಚಿಂಚು ಜಾಗವನ್ನು ಸ್ವಚ್ಛ ಮಾಡಿರುವ ಹೆಮ್ಮೆ ನನ್ನದು. ಎಷ್ಟೋ ಇಡೀ ಭಾನುವಾರಗಳನ್ನು ಆಶ್ರಮದ ಆಗ್ನೇಯ ಮೂಲೆಯಲ್ಲಿದ್ದ ಔಷಧಾಲಯದಲ್ಲಿ ವಿವಿಧ ಗಿಡಮೂಲಿಕೆಗಳನ್ನು,ಕುಟ್ಟಿ,ಪುಡಿ ಮಾಡಿ ಸೋಮವಾರ ಬರುತ್ತಿದ್ದ ರೋಗಿಗಳಿಗಾಗಿ ವಿವಿಧ ರೀತಿಯ ಔಷಧಗಳನ್ನು ಸೂರದಾಸ್ ಅವರ ಉಸ್ತುವಾರಿಕೆಯಲ್ಲಿ ತಯಾರಿಸಿದ್ದೇನೆ ಅಂತ ಹೇಳಲು ಎದೆಯುಬ್ಬಿ ಬರುತ್ತೆ.

    ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ

    ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ ದ ರೆಕ್ಕೆಗಳ ಛಾವಣಿ ಕೆಲಸಕ್ಕೆ ಸಿಮೆಂಟ್ ಕಾಂಕ್ರೀಟ್ ನ್ನು ಹಗಲು,ರಾತ್ರಿ ಕಬ್ಬಿಣದ ಪುಟ್ಟಿಗಳಲ್ಲಿ ತಲೆಮೇಲೆ ಹೊತ್ತು,ಸಾಲಾಗಿ ನಿಂತ ಗೆಳೆಯರೊಂದಿಗೆ ಹಾಕಿದ ಸಾರ್ಥಕತೆ ನನ್ನದು.

    ತಾಂತ್ರಿಕ ದೋಷದಿಂದ ಒಮ್ಮೆ ಹಾಕಿದ್ದ ಕಾಂಕ್ರೀಟ್ ಬಿದ್ದು, ಮತ್ತೆ ಹಾಕಿ, ತಮಿಳು ಗುತ್ತೇದಾರನ ಮತ್ತು ಸ್ವಾಮಿಗಳ ಜೊತೆಯಲ್ಲಿ ನಿಂತು,ರೆಕ್ಕೆ ನಿಂತದ್ದು ನೋಡಿ ಸಂಭ್ರಮಿಸಿದ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ಹೆಮ್ಮೆ. ಯೋಗಮಂದಿರದ ಕಿಟಕಿಗಳಿಗೆ ನಮ್ಮ ಶಾಲೆಯ ವರ್ಕ್ ಷಾಪ್ ನ ಗುಡ್ಡಪ್ಪ, ಸ್ವಾಮಿಗಳ ಯೋಗದ ಭಂಗಿಗಳನ್ನು ಅಳವಡಿಸುತ್ತಿದ್ದನ್ನು ಆಶ್ಚರ್ಯಭರಿತ ಕಣ್ಣುಗಳಿಂದ ನೋಡಿ ಆನಂದಿಸುತತಿದ್ದ ನನಗೆ ಮತ್ತು ಗೆಳೆಯರಿಗೆ ಹತ್ತಿರ ಬರಬೇಡಿ ಅಂತ ಆತ ಗದರಿಸುತ್ತಿದ್ದನ್ನು ಮರೆತಿಲ್ಲ.

    ಹತ್ತನೇ ತರಗತಿ ಪಾಸಾದವರಿಗೆ ಮತ್ತು ಪಿಯು 2 ಪಾಸಾದವರಿಗೆ ರಜೆಯಲ್ಲಿ ಇರುತ್ತಿದ್ದ ಶ್ರಮದಾನ ಎನ್ನುವ ಐಶ್ಚಿಕ ಶಿಬಿರದಲ್ಲಿ ತಪೋವನದ ಗಿಡಗಳಿಗೆ ಗುಂಡಿ ತೋಡಿ,ನೆಟ್ಟು,ನೀರು ಹಾಕಿದ್ದು ನನ್ನಲ್ಲಿ ಇನ್ನೂ ಹಸಿರಾಗಿದೆ. ಅಲ್ಲಿಯ ಕೋತಿಗಳಿಗೆ, ಜಿಂಕೆಗಳಿಗೆ,ಪಾರಿವಾಳಗಳಿಗೆ ಅನ್ನ-ನೀರನ್ನು ಇಟ್ಟಿದ್ದು,ದೈಹಿಕ ಶಿಕ್ಷಕ ಎಂ. ನಾಗೇಂದ್ಪಪ್ಪ ಅವರ ಜೊತೆ ಚನ್ನಗಿರಿ ಹತ್ತಿರವಿದ್ದ ಅಮ್ಮನಗುಡ್ಡ ಕ್ಕೆ ಸೌದೆ ತರಲು ಟ್ರಾಕ್ಟರ್ ನಲ್ಲಿ ಹೋದದ್ದು, ಆಶ್ರಮದ ಹೊಲದಲ್ಲಿ ಬಿಳೀ ಜೋಳದ ದಂಟನ್ನು ಕೊರೆಯುವ ಬೆಳಗಿನ ಚಳಿಯಲ್ಲಿ ಕಿತ್ತದ್ದು, ಅದನ್ನು ತಂದು ಗುಡ್ಡೇ ಹಾಕಿ,ಕಣ ಮಾಡಿ ರಾತ್ರಿಯೆಲ್ಲಾ ಕಾಯುತ್ತಾ, ಓದಿ ಪಿಯು2 ಪರೀಕ್ಷೆ ಬರೆದದ್ದು,ಹಗಲಿಡೀ ಕೆಲಸ ಮಾಡಿ,ಸಂಜೆ ವ್ಯಾಯಾಮ ಶಾಲೆ ಸೇರಿ,ರಾತ್ರಿ ಇಡೀ ಮಣ್ಣನ್ನು ಹೊದ್ದು ಮಲಗಿದ್ದ ದಿನಗಳು ಮರೆಯದ ನೆನಪಿನ ಘಟ್ಟಗಳು.

    ಶ್ರಮದ,ಶ್ರಮಿಕನ ಬೆಲೆ

    ಶ್ರಮದ,ಶ್ರಮಿಕನ ಬೆಲೆಯನ್ನು ಅರ್ಥಪೂರ್ಣವಾಗಿ ಬಾಲ್ಯದಲ್ಲೇ ಮನದಟ್ಟು ಮಾಡಿದ ಆಶ್ರಮದ ಜೀವನ,ನನ್ನಂತಹ ಲಕ್ಷಾಂತರ ಗ್ರಾಮೀಣ ಹುಡುಗ,ಹುಡುಗಿಯರ ಮನಸ್ಟ್ರೈರ್ಯ ಹೆಚ್ಚಿಸಿ, ಇಂದಿನ ಜೀವನಗಳನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಬಹುಮುಖಿಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ನಮ್ಮ ಸ್ವಾಮೀಜಿಯವರ ಬದ್ಧತೆ,ರೂಪುರೇಷಗಳು, ಮುಂದಿನ ನೂರಾರು ವರ್ಷಗಳವರೆಗೆ ಬರುವ ಜನಾಂಗಕ್ಕೆ ಮಾದರಿಯಾಗಬಲ್ಲದು. ಅಂತಹ ಅನೇಕ ಮುಖಗಳಲ್ಲಿ, ಯೋಗ ಒಂದೇ ಅಷ್ಟೇ.

    ನಿರಂತರ ಪ್ರಾಣಾಯಾಮದಿಂದ ಮೂಲಾಧಾರದಲ್ಲಿ ಸಿಂಬೆ ಸುತ್ತಿಕೊಂಡು ಮಲಗಿರುವ ಹಾವಿನ ತರಹ ಇರುವ ಕುಂಡಲಿನಿ ಶಕ್ತಿ ಜಾಗೃತಗೊಂಡು ಉರ್ಧ್ವಮುಖವಾಗಿ ಚಲಿಸಿ,ಏಳು ಚಕ್ರಗಳನ್ನು ಉದ್ದೀಪನಗೊಳಿಸಿ, ತಲೆಯ ಸುಳಿಯಲ್ಲಿರುವ ಬ್ರಹ್ಮ ರಂಧ್ರದ ಮೂಲಕ ಸಹಸ್ರಾರ ತಲುಪಿದಾಗ ಪಡೆಯುವ ಆನಂದಕ್ಕೆ ಸಮನಾದದ್ದು ಯಾವುದೂ ಇಲ್ಲ.ಇದನ್ನೇ ತಿಳಿದವರು ಬ್ರಹ್ಮಾನಂದ ಎಂದಿದ್ದಾರೆ.ಈ ಸ್ಥಿತಿಯನ್ನು ಪ್ರತಿಯೊಬ್ಬರೂ ಬೇಕಾದಾಗ,ಬೇಕಾದಷ್ಟು ಅನುಭವಿಸುವ ಸಿದ್ಧಿಯನ್ನು ಸಿದ್ಧಿಸಿಕೊಳ್ಳಬಹುದು ಎಂದು ಸ್ವಾಮಿಗಳು ಯೋಗದ ಮಹತ್ವವನ್ನು ಹೇಳುತ್ತಿದ್ದರೆ, ನನಗೆ ಸಾಕ್ಷಾತ್ ಭಗವಂತ ಯೋಗಾಚಾರ್ಯನಾಗಿ ಉಪದೇಶಿಸುತ್ತಿದ್ದಾನೆ ಎನ್ನುವಂತಹ ಅನುಭೂತಿ!

    ಆ ಕುಗ್ರಾಮದಲ್ಲಿ ಗ್ರಾಮೀಣ ಶಿಬಿರಾರ್ಥಿಗಳ ಮುಂದೆ ಅವರಾಡುತ್ತಿದ್ದ ಮಾತುಗಳು,ಭಗವಂತನ ಸನ್ನಿಧಿಗೆ ನೇರವಾಗಿ ಇರುವ ರಾಜಮಾರ್ಗ ಆಗಿದ್ದವು ಎಂದು ನಾನು ಅರಿತು,ಆ ಕುರಿತಾಗಿ ಸ್ವಾಮಿಗಳ ಮುಂದೆ ವಿನಮ್ರನಾಗಿ ನನ್ನ ಸಂದೇಹಗಳನ್ನು ಹೇಳಬೇಕು ಎನ್ನುವಷ್ಟರಲ್ಲಿ ನಮ್ಮಿಂದ ಬಹುದೂರ ಹೊರಟು ಹೋಗಿದ್ದರು ನಮ್ಮ ಸ್ವಾಮಿಗಳು.

    ಆತ್ಮ,ಪರಮಾತ್ಮ ಬಾಹ್ಯ ಇಂದ್ರಿಯಗಳಿಗೆ ತಾಕದ ವಿಷಯಗಳು,ಅವುಗಳನ್ನು ಏನಿದ್ದರೂ ಅನುಭವಿಸಿಯೇ ಸವಿಯಬೇಕು. ಹಾಗೆಯೇ ಇವುಗಳನ್ನು ಒಂದುಮಾಡಲು ಬೇಕಿರುವ ಸಾಧನೆಯೇ ಯೋಗ. ಇದರಲ್ಲೂ ಇಡ, ಪಿಂಗಳ,ಸುಷುಮ್ನಾ ಎನ್ನುವ ನಾಡಿಗಳೂ, ಏಳು ಚಕ್ರಗಳೂ ಯಾವ ಇಂದ್ರಿಯಗಳಿಗೂ ಕಾಣಲಾರವು,ವಿಜ್ಞಾನದ ಯಾವ ಸಾಮಗ್ರಿಗಳಿಗೂ ಕೂಡ. ಇವೆಲ್ಲವನ್ನೂ ಅನುಭವಿಸಿಯೇ ಆನಂದಿಸಬೇಕು ಎನ್ನುವಂತಹ ಅಪರ ಜ್ಞಾನವನ್ನು ಸರಳವಾಗಿ ತಿಳಿಸಿ,ಆತ್ಮಾಭಿಮಾನದ ಶ್ರದ್ಧೆಯನ್ನು ಕಲಿಸಿದ ,ಅಕ್ಷರಶಃ ಜೋಳಿಗೆ ಹಿಡಿದು,ಭಿಕ್ಷೆ ಬೇಡಿ ನಮ್ಮನ್ನೆಲ್ಲ ಸಾಕಿ ಸಲುಹಿದ ಶ್ರೀ ಗಳನ್ನು ಬರೀ ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ,ಅವರ ಪೂರ್ಣ ವಿವರಣೆ ಕೊಡುವ ಏಕ ಶಬ್ದ ಇನ್ನೂ ಯಾವ ಭಾಷೆಯಲ್ಲಿ ಬಂದಿಲ್ಲ.

    ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನನ್ನ ಯೋಗಾಚಾರ್ಯರಿಗೆ ನೆನಪಿನ ಶ್ರದ್ಧಾಂಜಲಿ….

    ಇದನ್ನೂ ಓದಿ: ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು

    ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು

    ಇವತ್ತು ವಿಶ್ವಯೋಗ ದಿನ. ನಮ್ಮ ಪರಂಪರೆಯ ಯೋಗಕ್ಕೆಇಂದು ವಿಶ್ವಮಾನ್ಯತೆ.ಆದರೆ ಇದಾವುದು ಇಲ್ಲದ ದಿನಗಳಲ್ಲಿ ನಮ್ಮ ನಡುವಿನ ಸಂತರೊಬ್ಬರು ಅದನ್ನು ತಪಸ್ಸಿನಂತೆ ಆಚರಿಸಿ ಸಹಸ್ರಾರು ಯೋಗ ಪಟುಗಳನ್ನು ನಾಡಿಗೆ ನೀಡಿದರು. ಅವರೇ ತಿರುಕ ಎಂದು ತಮ್ಮನ್ನು ತಾವೇ ಕರೆದುಕೊಂಡು ಜೋಳಿಗೆಯ ಮೂಲಕ ಪವಾಡವನ್ನೇ ಮಾಡಿದ  ನಮ್ಮ ಮಲ್ಲಾಡಿಹಳ್ಳಿಯ  ಶ್ರೀ ರಾಘವೇಂದ್ರ ಸ್ವಾಮೀಜಿ.

    ಹೆಸರಾಂತ  ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ತಿರುಕರ ಜೋಳಿಗೆಯ ಪವಾಡ ಆಧರಿಸಿ ಚಲನಚಿತ್ರ ಮಾಡುತ್ತಿದ್ದಾರೆ. ಇಂದು ಈ ಚಿತ್ರದ ಹಾಡುಗಳ ಲೋಕಾರ್ಪಣೆಯೂ ಆಗಿದೆ. ಈ ಹಾಡನ್ನು ನೋಡಲೆಂದು ಯೂ ಟ್ಯೂಬ್ ಗೆ ಹೋದಾಗ ಸ್ವಾಮೀಜಿಯವರ ಹಲವು ವಿಡಿಯೋಗಳು ಸಾಲುಗಟ್ಟಿ ಬಂದವು. ಹಾಗೆಯೆ ನನ್ನ ನೆನಪು ನಲುವತ್ತು ನಲವತ್ತೈದು ವರುಷಗಳ ಹಿಂದಕ್ಕೆ ಓಡಿತು. ಬಾಲ್ಯದಲ್ಲಿ ನಾನು ಕಂಡ ತಿರುಕರ ಬಗ್ಗೆ ನಮ್ಮ ಓದುಗರೊಂದಿಗೆ ಹಲವು ಸಂಗತಿಗಳನ್ನು ಹಂಚಿಕೊಳ್ಳಬೇಕೆಂದು ಈ ನಾಲ್ಕು ಸಾಲು.

    ನಮ್ಮೂರು ಸಂತೇಬೆನ್ನೂರು. ಮಲ್ಲಾಡಿಹಳ್ಳಿಗೆ ಬಹಳ ಹತ್ತಿರ. ಪತ್ರಿಕೋದ್ಯಮಕ್ಕೆ ಹಾಗೂ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮೊದಲು ನನ್ನ ಅಪ್ಪ ಸತ್ಯನಾರಾಯಣ ನಾಡಿಗ್ ಆ ಊರಿನಲ್ಲಿ ಕೆಲ ಕಾಲ ಪೋಸ್ಟ್ ಮಾಸ್ಟರ್ ಆಗಿದ್ದರಂತೆ. ಅಲ್ಲದೆ ನಮ್ಮ ತಾಯಿ ರಮಾ ನಾಡಿಗ್ ಅವರ ತಂದೆ ಗುರುರಾವ್ ದೇಶಪಾಂಡೆ ಆಶ್ರಮದಲ್ಲಿ ಆರಂಭವಾದ ಶಿಕ್ಷಕ ತರಬೇತಿ ಶಾಲೆಯ ಮೊದಲ ಪ್ರಿನ್ಸಿಪಾಲ್. ಜೊತೆಗೆ ನಮ್ಮ ಮಾವ ಗೋಪಿನಾಥ ರಾವ್ ದೇಶಪಾಂಡೆ ಕೂಡ ಆಶ್ರಮದ ಹೈಸ್ಕೂಲಿನಲ್ಲಿ ಉದ್ಯೋಗಿ. ಹೀಗಾಗಿ ಬಾಲ್ಯದಲ್ಲೇ ನನಗೆ ಸ್ವಾಮೀಜಿಯವರ ಸಂಪರ್ಕ.

    ನಮ್ಮೂರಿನಿಂದ ಗುರುರಾಜ ಬಸ್ ಹತ್ತಿದರೆ ಮುಕ್ಕಾಲು ಗಂಟೆಗೆ ಅದು ಮಲ್ಲಾಡಿಹಳ್ಳಿ ಸೇರುತಿತ್ತು. ಬಸ್ ಇಳಿದು ಹಿಂಬದಿ ಗೇಟಿನ ಮೂಲಕವೇ ನಾವು ಆಶ್ರಮ ಪ್ರವೇಶ ಮಾಡುತ್ತಿದ್ದದ್ದು. ಆಶ್ರಮಮಕ್ಕೆ ದೊಡ್ಡ ಗೇಟಿನ ಪ್ರವೇಶ ದ್ವಾರವೂ ಇತ್ತು. ಆ ದ್ವಾರದಿಂದ ಹೋಗಬೇಕಾದರೆ ಬಸ್ ನಿಲ್ದಾಣದಿಂದ ಒಂದು ನಾಲ್ಕು ಹೆಜ್ಜೆ ಹೆಚ್ಚು ಹಾಕಬೇಕಿತ್ತು. ಹೀಗಾಗಿ ಈ ಶಾರ್ಟ್ ಕಟ್ . ಪ್ರಧಾನ ದ್ವಾರದಲ್ಲಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ  ಎಂಬ ಫಲಕ ಅದರ ಕೆಳಗೆ ರಾಜಕೀಯಕ್ಕೆ ಪ್ರವೇಶವಿಲ್ಲ ಎಂಬ ಸಬ್ ಟೈಟಲ್. ಸ್ವಾಮೀಜಿ ಅದೇ ರೀತಿ ನಡೆದುಕೊಂಡರೂ ಕೂಡ.

    ಸುಂದರ ಸ್ವಚ್ಛ ಶಿಸ್ತುಬದ್ಧ

    ನಲವತ್ತು –ನಲವತ್ತೈದು ವರುಷಗಳ ಹಿಂದಿನ ಹಳ್ಳಿಗಳನ್ನು ನೆನಪು ಮಾಡಿಕೊಳ್ಳಿ. ಕಿರಿದಾದ ರಸ್ತೆಗಳು. ಪಕ್ಕದಲ್ಲೇ ಕೊಳಚೆ ನೀರಿನ ಮೋರಿ..ಹಸು ಕರುಗಳ ಗಂಜಲ ಸೆಗಣಿ. ಇವು ಸಾಮಾನ್ಯ ದೃಶ್ಯಗಳು.   ಇಂಥ ದಾರಿಗಳನ್ನು ಕ್ರಮಿಸಿ ಆಶ್ರಮ ಪ್ರವೇಶಿಸಿದ ಕೂಡಲೆ ನನಗಂತೂ ಸುಂದರ ಟೌನ್ ಷಿಪ್ ಗೆ ಬಂದ ಅನುಭವ. ನಗರವೊಂದರ ಸುಂದರ ಬಡಾವಣೆ ಕಂಡಂತ ಫೀಲಿಂಗ್.  ಕಸ ಕಡ್ಡಿಗಳೇ ಕಾಣದ  ಆಶ್ರಮದ ಒಳಗಿನ ರಸ್ತೆಗಳು. ಸಾಲು ವಸತಿ ಗೃಹಗಳು, ಸ್ಕೂಲು ಕಾಲೇಜು ಕಟ್ಟಡಗಳು, ಮಕ್ಕಳು ಆಡಲೆಂದು ಮಕ್ಕಳರಾಜ್ಯ …ಹೀಗೆ ಎಲ್ಲವೂ ಸುಂದರ ,ಸ್ವಚ್ಛ ,ಶಿಸ್ತುಬದ್ಧ.

    ಮಲ್ಲಾಡಿಹಳ್ಳಿಗೆ ಹೋದ ದಿನ ಸಂಜೆ ಸ್ವಾಮೀಜಿ ಅವರನ್ನು ಭೇಟಿ ಮಾಡಲೇಬೇಕು. ಸಂಜೆಯ ವೇಳೆಗೆ ಅವರು ತಮ್ಮ ತಪೋವನದಲ್ಲಿರುತ್ತಿದ್ದರು. ಅಲ್ಲಿಗೆ ಹೋಗುವ ಮಾರ್ಗವೂ ಸುಂದರ. ಸ್ವಾಮೀಜಿ ಅನೇಕ ಪ್ರಾಣಿಗಳನ್ನು ಸಾಕಿದ್ದರು. ಅಲ್ಲಿ ಜಿಂಕೆಗಳೂ ಇದ್ದವು. ನವಿಲುಗಳು ಇದ್ದವು. ಹಲವಾರು ಪಕ್ಷಿಗಳೂ ಇದ್ದವು. ಸುತ್ತಲೂ ಹಸಿರು. ಇದನ್ನು ದಾಟಿಕೊಂಡು ಹೋದರೆ ಸ್ವಾಮೀಜಿ ವಾಸಿಸುತ್ತಿದ್ದ ಗಾಂಧೀ ಮಂದಿರ.

    ನಮ್ಮನ್ನು ನೋಡಿದ ಕೂಡಲೆ ಸ್ವಾಮೀಜಿ ಅವರಿಂದ ಮುಗಳು ನಗೆಯ ಸ್ವಾಗತ. ನಾವು ಮೊದಲು ಮಾಡುತ್ತಿದ್ದ ಕೆಲಸ ಅವರ ಕಾಲಿಗೆರುವುದು. ಸ್ವಾಮೀಜಿ ಕೂಡ ಅಷ್ಟೇ ಪ್ರೀತಿಯಿಂದ ನಮ್ಮನ್ನು ಸ್ಪರ್ಶಿಸಿ ತಮ್ಮ ಕಣ್ಣಿಗೆ ಒತ್ತುಕೊಳ್ಳುತ್ತಿದ್ದರು. ನಮ್ಮ ಅಮ್ಮನನ್ನು ಕಂಡರೆ ಅವರು ಪ್ರೀತಿಯಿಂದ  ಕೆಪಿ ರಮಾ ಎಂದು ಹಾಸ್ಯ ಮಾಡುತ್ತಿದ್ದರು. ನಮ್ಮ ಅಮ್ಮ ನೋಡಲು  ತುಂಬಾ ತೆಳ್ಳಗೆ ಇದ್ದುದು ಅವರು ಹಾಗೆ ಕರೆಯಲು ಕಾರಣ. ಕೆಪಿ ಅಂದರೆ ಕಡ್ಡೀ ಪೈಲ್ವಾನ್! ಆಮೇಲೆ  ನಮಗೆ ಹುಡುಗರಿಗೆ ಸ್ವಾಮೀಜಿ ಏನಾದರು ಹಣ್ಣು ಕೊಡಲೇ ಬೇಕು. ಅವರ ಕೈಗೆಟುಕುವಂತೆ ಹಣ್ಣು ಸಿಗದಿದ್ದರೆ  ಹುಡುಕಿ ತಂದು ಕೊಡುತ್ತಿದ್ದರು. ಅಕ್ಕ ಪಕ್ಕದಲ್ಲಿ ನೂರಾರು ಶಿಷ್ಟಕೋಟಿ ಇರುವ ಮಹಾ ಸ್ವಾಮೀಜಿಗಳನ್ನೇ ಹೆಚ್ಚಾಗಿ ಕಂಡಿರುವ ನಮಗೆ ಇಂಥ ಗಾಂಧೀವಾದಿ ಸ್ವಾಮೀಜಿ ಬಹುಶಃ ಇನ್ನೆಲ್ಲಿ ಸಿಗಬೇಕು.? ಒಮ್ಮೊಮ್ಮೆ ಸ್ವಾಮೀಜಿ ಅವರು ಧ್ಯಾನ ಮಾಡುವ ಸ್ಥಳಕ್ಕೂ ನಮಗೆ ಪ್ರವೇಶ ಸಿಗುತ್ತಿತ್ತು. ನೆಲಮಾಳಿಗೆಯಲ್ಲಿದ್ದ ಸ್ಥಳ ಅದು. ಅಲ್ಲಿನ ಆ ವಾತಾವರಣ ಮತ್ತು ಅದರಿಂದ ಸಿಗುತ್ತಿದ್ದ ಪಾಸಿಟವ್ ಎನರ್ಜಿ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

    ಶಿವರಾತ್ರಿ ಸಮಯದಲ್ಲಿ ಆಶ್ರಮದ ವಾರ್ಷಿಕೋತ್ಸವ. ಅಂದು ವ್ಯಾಸಪೀಠದಲ್ಲಿ (ಆಶ್ರಮದ ಆರಂಭದಲ್ಲೇ ಇರುವ ಬಯಲು ಸಭಾಂಗಣ) ಭರ್ಜರಿ ಫಂಕ್ಷನ್. ಮೂರು ದಿನ ಸಾಂಸ್ಕೃತಿಕ ಉತ್ಸವ. ನೂರಾರು ವಿದ್ವಾಂಸರ ಉಪನ್ಯಾಸ. ಈ ದಿನಗಳಲ್ಲಿ ಸ್ವಾಮೀಜಿ ಅವರಿಂದ ಅದ್ಭುತ ಯೋಗಪ್ರದರ್ಶನ. ಅದನ್ನು ನೋಡಲು ಎರಡೂ ಕಣ್ಣು ಸಾಲದು. ಕೊನೆಯಲ್ಲಿ ಸ್ವಾಮೀಜಿ  ಶಿಸ್ತಿನ ಮಹತ್ವವನ್ನು ಆಶ್ರಮದ ವಿದ್ಯಾರ್ಥಿಗಳ ಜೊತೆ ವ್ಯಾಯಾಮದ ಮೂಲಕವೇ ಮನವರಿಕೆ ಮಾಡಿಕೊಡುತ್ತಿದ್ದರು. ಬಾಲ್ಯದಲ್ಲಿ ಇದನ್ನು ನೋಡುವುದೇ ನಮಗೆ ಕೌತುಕ. ಸ್ವಾಮೀಜಿ ನಮಗೆ ಸಿದ್ಧಪುರುಷನಂತೆ ಕಾಣಿಸಿದರು. ಆದರ್ಶ ಪ್ರಾಯರಾದರು. ಸ್ವಾಮೀಜಿ ತಮ್ಮನ್ನು ಎಂದೂ ಸ್ವಾಮೀಜಿ ಎಂದು ಕರೆದುಕೊಳ್ಳಲೇ ಇಲ್ಲ. ಅವರ ಪಾಲಿಗೆ ಅವರು ಬಾ. ರಾಘವೇಂದ್ರ ಅಷ್ಟೇ. (ಬಾ ಎಂದರೆ ಅವರ ಊರು ಬಾರ್ಕೂರು) .ಭಕ್ತರು ಅವರಿಗೆ ಪ್ರೀತಿಯಿಂದ  ಸ್ವಾಮೀಜಿ ಪಟ್ಟ ಕಟ್ಟಿದರು.

    ಹಲವು ಗಿಡಮೂಲಿಕೆಗಳ ಸಂಗಮ

    ಆಶ್ರಮದಲ್ಲೊಂದು ವ್ಯಾಯಮ ಶಾಲೆ ಇತ್ತು. ಆ ಗರುಡಿ ಮನೆಯೇ ವಿಶಿಷ್ಟ. ಅಲ್ಲಿದ್ದ ಕೆಂಪು ಮಣ್ಣು ಆಯುರ್ವೇದದ ಹಲವು ಗಿಡಮೂಲಿಕೆಗಳ ಸಂಗಮ. ಆ ಮಣ್ಣಿನಲ್ಲಿ ಮಿಂದೆದ್ದರೆ ಎಂಥ ರೋಗಗಳೂ ಪರಿಹಾರ.  ಸ್ವಾಮೀಜಿ ಆಶ್ರಮಕ್ಕಾಗಿ ಇಡೀ ವಾರ ಸಂಚಾರದಲ್ಲೇ ಇರುತ್ತಿದ್ದರು. ಆಶ್ರಮ ನಡೆಯಬೇಕೆಂದರೆ ಅವರು ಊರೂರು ಸುತ್ತಿ ಜೋಳಿಗೆ ಹಿಡಿಯಬೇಕು. ಆದರೆ ಭಾನುವಾರ ಸಂಜೆ ಎಲ್ಲಿದ್ದರೂ ಅವರು ಆಶ್ರಮಕ್ಕೆ ಬರಲೇ ಬೇಕು. ಪ್ರತಿ ಸೋಮವಾರ ಅವರು ಆಯುರ್ವೇದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧ ಕೊಡುತ್ತಿದ್ದರು. ಎಂಥ ರೋಗವಿದ್ದರೂ ಸ್ವಾಮೀಜಿ ಕೊಡುವ ಔಷಧಿಗೆ ಅದು ಮಣಿಯಲೇಬೇಕು. ಬೆಳಿಗ್ಗೆ ನಾಲ್ಕಕ್ಕೆ ಆರಂಭವಾಗುವ ಆಸ್ಪತ್ರೆ ಒಮ್ಮೊಮ್ಮೆ ಸಂಜೆ ನಾಲ್ಕರವರೆಗೂ ನಿರಂತರವಾಗಿ ನಡೆದದ್ದು ಉಂಟು. ಎಲ್ಲಾ ರೋಗಿಗಳನ್ನು ನೋಡುವವರೆಗೂ ಸ್ವಾಮೀಜಿ  ಏನನ್ನೂ ಸೇವಿಸುತ್ತಿರಲಿಲ್ಲ.  ರೋಗಿಗಳನ್ನು ನೋಡುವುದು ಮುಗಿದ ಮೇಲೆಯೇ ಅವರ ಆಹಾರ ಸೇವನೆ. ಸ್ವಾಮೀಜಿ ಎಲ್ಲಾ ಔಷಧವನ್ನು ಆ ದಿನದಲ್ಲಿಉಚಿತವಾಗಿ ನೀಡುತ್ತಿದ್ದರು. ಸೇವೆ ಎಂದರೆ ಇದೇ  ಅಲ್ಲವೇ. ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸುವ ಮೊದಲು ಅವರನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಸ್ವಾಮೀಜಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು. ಇಂದು ಆಯುರ್ವೇದವೂ ಬ್ರ್ಯಾಂಡ್ ಆಗಿ  ಹಣದ ದಂಧೆ ಆಗಿರುವುದನ್ನು ಕಂಡಾಗ ನಮ್ಮ ಸ್ವಾಮೀಜಿ ಮತ್ತಷ್ಟು ಎತ್ತರವಾಗಿ ಕಾಣುತ್ತಾರೆ.

    ಯೋಗಕ್ಕಾಗಿಯೇ ಆ ದಿನದಲ್ಲಿ ವಿಶ್ವ ಯೋಗ ಕೇಂದ್ರವನ್ನು ಕಟ್ಟಿದರು. ಅದರ ಉದ್ಘಾಟನಗೆ ವರನಟ ಡಾ. ರಾಜ್ ಕುಮಾರ್ ಬಂದಿದ್ದರು. ನಾನು ರಾಜ್‌ಕುಮಾರರನ್ನು ಮೊದಲು ನೋಡಿದ್ದು ಅಲ್ಲಿಯೇ. ಹಲವಾರು ಗಣ್ಯರನ್ನು ನೋಡುವ ಅವಕಾಶ ಬಾಲ್ಯದಲ್ಲೇ ನಮಗೆ ಸಿಗಲು ಮಲ್ಲಾಡಿಹಳ್ಳಿ ಆಶ್ರಮವೇ ಕಾರಣ. ದೇವರಾಜ ಅರಸು, ಉದಯಕುಮಾರ್, ಬಾಲಕೃಷ್ಣ, ದ.ರಾ ಬೇಂದ್ರೆ, ತರಾಸು ಹೀಗೆ ಹಲವರನ್ನು ನೋಡುವ ಅವಕಾಶ ಕೊಟ್ಟಿದ್ದು ಆಶ್ರಮ.

    ಶಿಸ್ತಿಗೆ ಮತ್ತೊಂದು ಹೆಸರು ಸ್ವಾಮೀಜಿ. ಆಶ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಸೂರ್ಯ ನಮಸ್ಕಾರ ಕಡ್ಡಾಯ. ಶಿಸ್ತು ಪಾಲಿಸದವರು ಶಿಕ್ಷೆ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಒಂದು ಚಡ್ಡಿ ಅದರ ಮೇಲೆ  ಅರ್ಧ ತೋಳಿನ ಜುಬ್ಬ ಇದೇ ಸ್ವಾಮೀಜಿಯವರ ಉಡುಪು. ಹೊಸದಾಗಿ ಆಶ್ರಮಕ್ಕೆ ಬರುವವರು ಸ್ವಾಮೀಜಿ ಅವರ ಬಳಿಯೇ ಸ್ವಾಮೀಜಿ ಅವರು ಎಲ್ಲಿ ಸಿಗುತ್ತಾರೆ ಎಂದು ವಿಚಾರಿಸಿದ್ದು ಉಂಟು.

    ಸ್ವಾಮೀಜಿ ಅವರಿಗೆ ಸರಿ ಸಮವಾಗಿ ಸಾಥ್ ಕೊಟ್ಟಿದ್ದು ಸೂರ್‌ದಾಸ್ ಜೀ . ಅವರು ಕೂಡ ಸ್ವಾಮೀಜಿ ಯಂತೆ ತಮ್ಮ ಜೀವನವನ್ನೇ ಆಶ್ರಮಕ್ಕೆ ಮುಡುಪಾಗಿಟ್ಟವರು. ಊರಿನಲ್ಲಿ ಇದ್ದಾಗ  ಸ್ವಾಮೀಜಿ ಅವರನ್ನು ಆಶ್ರಮದ ಒಳಗೆ ಎಲ್ಲೆಡೆಯೂ ನೀವು ಕಾಣಬಹುದಿತ್ತು. ‌ಅವರು ಆಶ್ರಮದ ಹೊರಗೆ ಕಾಣ ಸಿಗುತ್ತಿದ್ದದ್ದು ಅಪರೂಪ. ಆದರೆ ಸೂರ್‌ದಾಸರು ಹಾಗಲ್ಲ. ಮಲ್ಲಾಡಿಹಳ್ಳಿಯ ಎಲ್ಲೆಡೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು.ನಾರಣಪ್ಪನ ಬೇಕರಿ ಮುಂದೆ ಕಾಡ ಹರಟೆ ಮಾಡುವ ವಿದ್ಯಾರ್ಥಿಗಳಿರಲಿ,ಸ್ನಾನ ಘಟ್ಟದ ಬಳಿ ಟೈಮ್ ವೇಸ್ಟ್ ಮಾಡುವ ಹುಡುಗರಿರಲಿ , ಹಳ್ಳದ ಏರಿಯ ಮೇಲೆ ಟೈಮ್ ಪಾಸ್ ಗೆ ಹೋದವರಾಗಲಿ ಸೂರದಾಸ್‌ಜೀ ಅವರ  ಕಣ್ಣು ತಪ್ಪಿಸಲು ಆಗುತ್ತಿರಲಿಲ್ಲ

    ನಾನು ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದ ಮೇಲೆ ಆಶ್ರಮದ ಸಂಪರ್ಕ ಸ್ವಲ್ಪ ಕಡಿಮೆ ಆಯಿತು. ಇದ್ದಕ್ಕಿದ್ದಂತೆ ಒಂದು ದಿನ ಸ್ವಾಮೀಜಿ ತೀರಿಕೊಂಡ ಸುದ್ದಿ ಬಂತು. ನಾನಾಗ ಕನ್ನಡಪ್ರಭ ಪತ್ರಿಕೆಯಲ್ಲಿ ಪತ್ರಕರ್ತ. ವೈಯ್ಯಾಲಿಕಾವಲ್ ನ ಭಕ್ತರೊಬ್ಬರ ಮನೆಯಲ್ಲಿ ಸ್ವಾಮೀಜಿ ಅವರ ಪಾರ್ಥೀವ ಶರೀರ ಇತ್ತು. ಅಂತಿಮ ದರ್ಶನ ಪಡೆದುಕೊಂಡು ಬಂದೆ. ಇದಾದ ಕೆಲವೇ ವರುಷಗಳಲ್ಲಿ ಸೂರ್‌ದಾಸರು ಕೂಡ ನಮ್ಮನ್ನು ಅಗಲಿದರು.

    ಯಾವುದೇ ಪ್ರಶಸ್ತಿಗೆ, ಆಡಂಬರಕ್ಕೆ, ವಿಶ್ವ ಪ್ರಸಿದ್ಧರಾಗಬೇಕೆಂಬ ಬಯಕೆ ಇಲ್ಲದೆ ಕೇವಲ ಸೇವೆಯ ದೀಕ್ಷೆಯೊಂದಿಗೆ ಬಾಳಿ ಬದುಕಿದ ಪುಣ್ಯಾತ್ಮ ನಮ್ಮ ಸ್ವಾಮೀಜಿ.  ನಿರ್ದೇಶಕ ಪಲ್ಲಕ್ಕಿ ಇಂದು ಬಿಡುಗಡೆ ಮಾಡಿದ ಜೋಳಿಗೆಯ ಪವಾಡಕ್ಕಾಗೆ ಡಾ. ಎಚ್  ಎಸ್ ವಿ ಬರೆದ ಗೀತೆ ಕೇಳಿ  ಸ್ವಾಮೀಜಿ ಮತ್ತೆ ನೆನಪಾದರು.

    ಹೆಚ್ಚಿನ ಮಾಹಿತಿಗಾಗಿ ಜೋಳಿಗೆಯ ಪವಾಡದ ಹಾಡಿನ ಕೊಂಡಿ ಮತ್ತು ಸದ್ಗುರು ಜಗ್ಗಿ ವಾಸುದೇವ್  ಸ್ವಾಮೀಜಿ ಅವರು ಹೇಳಿರುವ ಮಾತುಗಳ ಯೂ ಟ್ಯೂಬ್ ಲಿಂಕ್ ಕೂಡ ಇಲ್ಲಿದೆ.

    ವಿಶ್ವಯೋಗದಿನದಂದು ಕರುನಾಡುಕಂಡ ಈ ಮಹಾನ್ ಯೋಗಿಗೆ ಭಕ್ತಿ ಪೂರ್ವಕ ನಮನ.

    ಇದನ್ನೂ ಓದಿ : ಭಗವಂತ ಎನ್ನಲೆ… ಸಾಕಾಗಲಿಕ್ಕಿಲ್ಲ

    ನಾನು ಕಂಡ ಮೊದಲ ಸಾಹುಕಾರ: ಅಪ್ಪನ ಬಗ್ಗೆ ಮಾಸ್ತಿ ಆಪ್ತ ಬರಹ

    ಕನ್ನಡ ಪ್ರೆಸ್.ಕಾಮ್ ನ ತಮ್ಮ ಮೊದಲ ಅಂಕಣದಲ್ಲಿ ಸಂಭಾಷಣೆಗಾರ ಮಾಸ್ತಿ ಅಪ್ಪನ ಬಗ್ಗೆ ಈ ಆಪ್ತ ಬರಹ ಬರೆದಿದದ್ದರು. ಅಪ್ಪಂದಿರ ದಿನದ ಅಂಗವಾಗಿ ಅದನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ. ನಿಮ್ಮ ಅಪ್ಪನ ಬಗ್ಗೆ ನಿಮ್ಮ ಭಾವನೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

    ಮಾತಾಡಿಸ್ತಿದ್ರು …..ವಿಚಾರಿಸ್ತಿದ್ರು …..ತಮಾಷೆ ಮಾಡ್ತಿದ್ರು …..ನಗಿಸ್ತಿದ್ರು …..ಅವರು ಊಟಕ್ಕೆ ಕೂರ್ತಿದಿದ್ದೇ ಮಕ್ಕಳು ತಿಂದ್ರ ಅಂತ ಕೇಳ್ತಾ , ಅವರು ತಿಂತಾ ನಮ್ಮನ್ನ ಕರೆದು ತಟ್ಟೆಯಲ್ಲಿದ್ದ ತರಕಾರೀನೋ , ಒಂದು ತುತ್ತು ಅನ್ನಾನೋ ತಿನ್ನಿಸ್ತಿದ್ರು . ನಮಗೆ ಮೊದಲು ಹೋಟೆಲ್ಲಿಗೆ ಕರ್ಕೊಂಡು ಹೋಗಿದ್ದವರು , ಮೊದಲ ಡ್ರಾಮಾ ಮೊದಲ ಸಿನಿಮಾ ಮೊದಲ ಸರ್ಕಸ್ ತೋರಿಸಿದ್ದವರು ,ನಮ್ಮ ಮೊದಲ ಹೀರೋ ಅವರು, ಟೂರು ಹೊಡೆಸಿದ್ದವರು ,ಅಟಿಕೆ ಕೊಡಿಸಿದ್ದವರು , ಬಟ್ಟೆ ಹೊಲಿಸಿದ್ದವರು , ನಾವು ಕಂಡ ಮೊದಲ ಸಾಹುಕಾರ ಅಪ್ಪ .

     ಅವರ ಜೇಬಿನಲ್ಲಿ ಸದಾ ದುಡ್ಡಿರುತ್ತಿತ್ತು , ಮನೆಯ ದಿನಸಿಗೇ ಆಗಲಿ ನಮ್ಮ ಮುನಿಸಿಗೇ ಆಗಲಿ ನನ್ ಷರ್ಟ ತಗೊಂಡ್ ಬಾ ಅನ್ನೋವ್ರು ಅದರಿಂದ ದುಡ್ಡು ತೆಗೆದು ಕೊಡೋವ್ರು , ನಮ್ಮ ಮೊದಲ ಪಾಕೆಟ್ ಮೊನಿ ಕೊಟ್ಟವರು , ನಮ್ಮ ಮಣ್ಣಿನ ಹುಂಡಿಗೆ ಹಣ ಹಾಕಿದವರು ಅವರು , ಅಪ್ಪ ನಮ್ಮ ಕಣ್ಣಿಗೆ ಯಾವಾಗಲೂ ಪರ್ಫೆಕ್ಟ್ , ಪಕ್ಕಾ ಜಂಟಲ್ಮನ್, ಯಾವತ್ತೂ ಐರನ್ ಬಟ್ಟೆ ಇಲ್ಲದೇ ಹೊರಗೆ ಹೋಗುತ್ತಿರಲಿಲ್ಲ ಅವರು ಹಾಕುವ ವಾಚು , ಧರಿಸುವ ಚಪ್ಪಲಿ ,ಕಟ್ಟುವ ಬೆಲ್ಟು , ಬರೆಯುವ ಪೆನ್ನು ಪ್ರತಿಯೊಂದು ವಿಶೇಷವಾಗಿ ಇರೋವು , ಅವರು ಮನೆಗೆ ಬೇಗ ಬಂದರೆ ಕೇಳುತ್ತಿದ್ದ ಪ್ರಶ್ನೆ ಮಕ್ಕಳೆಲ್ಲಿ ? ಅವರು ಲೇಟಾಗಿ ಬಂದ್ರೂ ಕೇಳುತ್ತಿದ್ದ ಪ್ರೆಶ್ನೆ ಮಕ್ಕಳು ತಿಂದ್ರ ? ಮಲಗ್ಬಿಟ್ರ ? ನಾವು ಹುಷಾರು ತಪ್ಪಿದಾಗ ಅವರು ಒದ್ದಾಡುತ್ತಿದ್ದರು , ನಮಗೆ ಗಾಯವಾದರೆ ಅವರು ನೋವು ತಿಂತಿದ್ರು .

    ಸಸಿಗಳಂತಿದ್ದ ನಾವು ಗಿಡಗಳಾಗುತ್ತಿದ್ದಂತೆ ಸಣ್ಣದಾಗಿ ಬಗ್ಗಿಸಲು ಶುರು ಮಾಡಿದರು …..ಇದು ತಿನ್ನು, ಇದು ಮಾಡು , ಇದೇ ಓದು , ಹಿಂಗೇ ಇರು , ಇದೇ ಕೋರ್ಸ್ ತಗೋ , ಹೇಳಿದ್ ಮಾತು ಕೇಳು, ಹಂಗೆಲ್ಲಾ ಮಾತಾಡ್ಬೇಡ, ನಿನಗೆ ಅರ್ಥ ಆಗಲ್ಲ, ನಿನಗೆ ಗೊತ್ತಾಗಲ್ಲ …ಹೀಗೆ ಕಿವಿ ಹಿಂಡುವುದು, ಗದರುವುದು ಶುರು ಮಾಡುತ್ತಾರೆ ….ಆಗ ನಮಗೆ ಅಪ್ಪ ಯಾಕೋ ಈ ನಡುವೆ ಸ್ವಲ್ಪ ಸ್ಟ್ರಿಕ್ಟ್ ಆದಂಗ್ ಕಾಣ್ತಾರೆ ಅಂತ ಸ್ವಲ್ಪ ಬೇಸರ ಆಗೋದು , ನಮಗೇನೇ ಬೇಕು ಅಂದ್ರೂ ಅಮ್ಮನ ಮೂಲಕವೇ ಹೇಳುವುದು ಕೇಳುವುದು ಮಾಡತೊಡಗಿದೆವು , ನಮ್ಮ ತಪ್ಪುಗಳಿಗೆ ಅಮ್ಮನನ್ನು ಬೈಯ್ಯುತ್ತಿದ್ದರು , ಎಷ್ಟೋ ಸಾರಿ ವಾದ ಮಾಡುತ್ತಿದ್ದೆವು ಆಗ ಅಮ್ಮ ಬಿಡಿಸಿ ಅವರೆದುರು ನಮ್ಮನ್ನ ಬಯ್ದು ಕಳುಹಿಸುತ್ತಿದ್ದಳು , ಅಪ್ಪನೆದರು ಮಕ್ಕಳು ಬಾಯಿ ಕೊಡುವುದು ಅಮ್ಮನಿಗೂ ಇಷ್ಟವಿರಲಿಲ್ಲ , ಅವರಿಗೆ ಗೊತ್ತು ಅಪ್ಪನ ಬದುಕಿನ ಒದ್ದಾಟ ಗುದ್ದಾಟ ಎಲ್ಲವೂ ಮನೆಗಾಗಿಯೇ ಮಕ್ಕಳಿಗಾಗಿಯೇ ಅಂತ , ಕ್ವಾರ್ಟ್ರೆಸ್ಸು ಬಾಡಿಗೆ ಲೀಸು ಆ ಮನೆ ಈ ಮನೆ ಅಂತೆಲ್ಲಾ ಒದ್ದಾಡಿ ಜಿದ್ದಿಗೆ ಬಿದ್ದು ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸಿ ಹಣ ಹೊಂದಿಸಿ ಸಾಲ ಮಾಡಿ ಸೈಟು ತಗೊಂಡು ಓಡಾಡಿ ನಿಂತು ಒಂದು ಸ್ವಂತ ಮನೆ ಕಟ್ಟಿ , ಅಪ್ಲಿಕೇಷನ್ನು ಸೀಟು ಅಲಾಟ್ಮೆಂಟು ಡೊನೇಷನ್ನು ಎಂಬ ಹತ್ತು ಸಮಸ್ಯೆಗಳ ಮಧ್ಯೆ ಎಜುಕೇಷನ್ನು ಕೊಡಿಸಿ , ಎಂಪ್ಲಾಯ್ಮೆಂಟು ಲಾಸ್ಟ್ ಡೇಟು ಎಕ್ಸಾಮು ಇನ್ಫ್ಲೂಯೆನ್ಸು ವೇಕೆನ್ಸಿ ಅನ್ನೋ ನೂರು ಸ್ಪರ್ಧೆಗಳ ಮಧ್ಯೆ ನೌಕರಿ ಕೊಡಿಸಿ , ಸಂಬಂಧ ಹುಡುಕಿ ವಿಚಾರಿಸಿ ಹಣ ಕೂಡಿಟ್ಟು ಪತ್ರಿಕೆ ಹೊಡಿಸಿ ಚೌಟ್ರಿ ಹುಡುಕಿ ವರೊಪಚಾರ ನಿಶ್ಚಿತಾರ್ಥ ಅಂತ ಮದುವೆ ಮಾಡ್ಸಿ…. ಅಬ್ಬಾ… ಏನ್ ಸ್ಟ್ರಾಂಗ್ ಗುರೂ ನಮ್ಮಪ್ಪ ! ಅಂತ ಅಂದ್ಕೋತಿದ್ವಿ , ಇಲ್ಲ ಬೇರೆ ಯಾರಿಂದಾನೂ ಆಗಲ್ಲ ಅದು ಅಪ್ಪನಿಂದ ಮಾತ್ರ ಸಾಧ್ಯ ….ಅಪ್ಪ ಇದಾರೆ ಅಂದ್ರೆ ಧೈರ್ಯ ಅಪ್ಪ ಇದಾರೆ ಅಂದ್ರೆ ಭಯ ….ಗೌರವ ಸಂಸ್ಕಾರ ಶಿಸ್ತು ಸಾಧನೆ ಪ್ರತಿಯೊಂದಕ್ಕೂ ಉದಾಹರಣೆ ” ಅಪ್ಪ ” ಅನ್ನೋ ಮಟ್ಟಿಗೆ ಆಗಿದ್ದರು .

     ಅವರೂ ಮನುಷ್ಯರೇ ಅವರಲ್ಲೂ ಕೋಪ ಇತ್ತು ಲೋಪ ಇತ್ತು , ದುಡಿದಿದ್ರೂ ದುಡುಕಿದ್ರೂ , ನಮ್ಮನ್ನೆಲ್ಲಾ ಹೆದರಿಸ್ತಿದ್ದ ಗದರಿಸ್ತಿದ್ದ ಅಪ್ಪಾನೂ ಒಮ್ಮೊಮ್ಮೆ ತಪ್ಪು ಮಾಡಿದಾಗ ಅಮ್ಮನಿಗೆ ಹೆದರುತ್ತಿದ್ರು . ಒಂದಾದ ಮೇಲೆ ಇನ್ನೊಂದು , ಇನ್ನೊಂದಾದ ಮೇಲೆ ಮತ್ತೊಂದು ಜವಾಬ್ದಾರಿ ಮುಗಿಸಿ , ಒತ್ತಡ , ಅನಾರೊಗ್ಯಕ್ಕೆ ಸಿಲುಕಿ ಅವರೂ ಬಳಲಿದ್ದರು, ಅವರಿಗೂ ವಯಸ್ಸಾಗಿತ್ತು …. ಮಗುವಿನಿಂದಲೂ ನೋಡ್ಕೊಂಡು ಬರ್ತಿದ್ದ ಅಪ್ಪ ಸಮಯ ಹೋಗ್ತಿದ್ದಂತೇ ನಮ್ಮ ಮುಂದೆಯೇ ಮಗುವಾಗಿಬಿಟ್ಟಿದ್ದರು , ಯಾವ ದೇಹದ ಮೇಲೆ ನಾವು ಕೂತು ಉಪ್ಪು ಮೂಟೆ ಆಡಿದ್ವೋ ಆ ದೇಹ ಮುಪ್ಪಾಗಿತ್ತು , ಯಾವ ಶಕ್ತಿಯುತ ತೋಳಲ್ಲಿ ನಾವು ಬೆಳದಿದ್ವೋ ಆ ತೋಳು ಶಕ್ತಿ ಕಳೆದುಕೊಂಡು ಆಸರೆ ಬಯಸಿ ಹಾಸಿಗೆ ಸೇರಿತ್ತು

    ಬದುಕು ಕಲಿಸಿದ ಅಪ್ಪ ಒಂದು ದಿನ ನಮ್ಮನ್ನು ಬದುಕಲು ಬಿಟ್ಟು ಹೋಗಿಬಿಡುತ್ತಾರೆ . ಯಜಮಾನ ಅನ್ನೋ ಪದಕ್ಕೆ ಸೂಕ್ತ ಅರ್ಥ ಅವರೇ ಅವರನ್ನು ಬಿಟ್ಟರೆ ಆ ಜಾಗ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ . ಪರಿಪೂರ್ಣ ಬದುಕನ್ನು ಅನುಭವಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕರ್ತವ್ಯಗಳನ್ನು ಮುಗಿಸಿ ಹೊರಟಿರುತ್ತಾರೆ , ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿದ ವಿದ್ಯೆ, ತೋರಿಸಿದ ದಾರಿ , ಮೂಡಿಸಿದ ಭರವಸೆ , ಬೆಳೆಸಿದ ರೀತಿ , ಅವರ ಆದರ್ಶಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ ….. ಇವತ್ತು ನಾವು ತಲೆಯೆತ್ತಿ ಬದುಕುತ್ತಿದ್ದೇವೆಂದರೆ ಅದಕ್ಕೆ ಕಾರಣ ” ಅಪ್ಪ ” ಎನ್ನುವ ಆಕಾಶ 

    error: Content is protected !!