32.7 C
Karnataka
Sunday, April 20, 2025
    Home Blog Page 172

    ಈ ರಾಹು ಕೇತು ಯಾರು

    ಭಾರತೀಯ ಪಂಚಾಂಗದ ಪ್ರಕಾರ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ
    ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ  ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನಗಳಲ್ಲಿ , ಗ್ರಹಣ ಸಂಭವಿಸಲಿದೆ.

    ಗ್ರಹಣ ಸಮಯ : ಜೂನ್ 21, 2020 ರವಿವಾರ   03 ಗಂಟೆ ‌19 ನಿಮಿಷ
    ಸ್ಪರ್ಶ :  ಬೆಳಿಗ್ಗೆ 10-13, ಮಧ್ಯ : ಬೆಳಿಗ್ಗೆ 11-52 ಮೋಕ್ಷ : ಮಧ್ಯಾಹ್ನ 01-32

    ಒಂದಂತೂ ಎಲ್ಲರೂ ಒಪ್ಪುವ ವಿಷಯವೆಂದರೆ, ವೇದಗಳ ಕಾಲದಿಂದಲೂ,  ಸೂರ್ಯ/ಚಂದ್ರ ಗ್ರಹಣಗಳು ಇಷ್ಟೇ ಸಮಯಕ್ಕೆ ಸಂಭವಿಸುತ್ತದೆ  ಹಾಗೂ ಮುಗಿಯುತ್ತದೆ ಎಂದು ಕರಾರುವಕ್ಕಾಗಿ  ಹೇಳುವ ಪಂಚಾಂಗಗಳ  ಹಿಂದೆ ವೈಜ್ಞಾನಿಕ ಲೆಕ್ಕಾಚಾರಗಳು ಇದೆ ಎಂಬುದು ಪಕ್ಕಾ.   

    ಗ್ರಹಣ ಎಂದಕೂಡಲೇ ಕೇವಲ ಕೆಟ್ಟದ್ದು ಸಂಭವಿಸುತ್ತದೆ.  ರಾಹು ಕೇತು ಎಂಬ ರಾಕ್ಷಸರು  ಭೂಮಿಗೆ ಕೆಟ್ಟದ್ದನ್ನ ಮಾಡುತ್ತಾರೆ.   ಅದಕ್ಕೆಇಂಥಹದೇ   ಗ್ರಹಣಾಚರಣೆಗಳನ್ನು ಮಾಡಲೇ ಬೇಕು ಎಂದು  ಇಂದಿಗೂ   ಟಿವಿ  ಗಳಲ್ಲಿ  ಗಂಟೆಗಟ್ಟಲೆ  ಜೋತಿಷ್ಯ  ಕಾರ್ಯಕ್ರಮಗಳಲ್ಲಿ ಪುಕ್ಸಟ್ಟೆ  ಸಲಹೆಗಳನ್ನು ಕೊಡುತ್ತಾ ಭಯದ ವಾತಾವರಣ ಸೃಷ್ಟಿ ಮಾಡಿ  ಮೂಢನಂಬಿಕೆಗಳನ್ನ ಉಳಿಸಿ, ಬೆಳೆಸುತ್ತಿದ್ದಾರೆ. 

     ಗ್ರಹಣ ಸಮಯದಲ್ಲಿ ವೈಜ್ಞಾನಿಕವಾಗಿ ನಭೋಮಂಡಲದಲ್ಲಿ ಆಗುವ ಬದಲಾವಣೆಗಳೇನು? ಹೇಗೆ ಆಗುವ ಬದಲಾವಣೆಯ ಪರಿಣಾಮ ಭೂಮಿಯ ಮೇಲೆ ಏನಾದರು ವ್ಯತ್ಯಾಸವಾಗುತ್ತದೆಯಾ? ಒಂದು ಪಕ್ಷ ಆದರೆ, ಇದರ ಪರಿಣಾಮ ಎಷ್ಟು ದಿನಗಳ ವರೆಗೆ ಇರುಲು ಸಾಧ್ಯ? ನಿಜವಾದ ಗ್ರಹಣಾಚರಣೆಯಲ್ಲಿರುವ ವೈಜ್ಞಾನಿಕ ಹಿನ್ನಲೆ ಏನು ಎಂಬುದನ್ನ ವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿದೆ . 

    ಎಲ್ಲರಿಗೂ ತಿಳಿದಿರುವಂತೆ  ಸೂರ್ಯ, ಭೂಮಿ, ಚಂದಿರನ ಪಥಗಳು ಸಮಾನಾಂತರ ರೇಖೆಯಲ್ಲಿ ಬಂದಾಗ  ಗ್ರಹಣಗಳು ( ನೆರಳು) ಸಂಭವಿಸುತ್ತವೆ.   ಭೂಮಿಯ ನೆರಳು ಚಂದ್ರನಲ್ಲಿ ಬಿದ್ದಾಗ. ಚಂದ್ರ ಗ್ರಹಣ ಚಂದಿರನ ನೆರೆಳು ಭೂಮಿಯಲ್ಲಿ  ಹಾದುಹೋದಾಗ ಸೂರ್ಯಗ್ರಹಣ.  ಇಲ್ಲಿ ವಿಶೇಷವಾಗಿ ತಿಳಿಯಬೇಕಾಗಿದ್ದು  ಕೆಲವೊಮ್ಮೆ ರಾಹುಗ್ರಸ್ತ,  ಮತ್ತೊಮ್ಮೆ ಕೇತುಗ್ರಸ್ತ  ಚಂದ್ರ/ಸೂರ್ಯ ಗ್ರಹಣ ಎನ್ನುವ ಪದಗಳು.   

    ರಾಹು ಹಾಗು ಕೇತು ಯಾರು?   

    ರಾಹು ಕೇತುಗಳಿಗೆ ಯಾಕೆ ಭಾರತೀಯ ಪಂಚಾಂಗದಲ್ಲಿ ಇಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ?   ರಾಹು ಕೇತುಗಳೆರೆಡೂ ಕೇವಲ ಕಾಲ್ಪನಿಕ ಗ್ರಹಗಳು (  ಭೂಮಿ  ಮತ್ತು ಚಂದ್ರನ ಪರಿಧಿಯ ಉತ್ತರದಿಕ್ಕನ್ನು ಸಂಧಿಸುವುದು ರಾಹು,  ದಕ್ಷಿಣ ದಿಕ್ಕನ್ನು ಸಂಧಿಸುವುದು ಕೇತು) ಗ್ರಹಣ ಕಾಲದಲ್ಲಿ ಭೂಮಿಯ ನೆರೆಳು ಉತ್ತರ ದಿಕ್ಕಿನಲ್ಲಿ ಚಂದಿರನಲ್ಲಿ  ಬಿದ್ದರೆ ರಾಹುಗ್ರಸ್ತ, ದಕ್ಷಿಣದಲ್ಲಿ ಬಿದ್ದರೆ ಕೇತುಗ್ರಸ್ತ.  ಅದೇ ರೀತಿ ಭೂಮಿಯ ಚಂದಿರನ ನೆರೆಳು ಯಾವ ದಿಕ್ಕಿನಲ್ಲಿ  ಬೀಳುತ್ತದೋ ಅದರ ಆಧಾರದ ಮೇಲೆ ರಾಹು ಕೇತು ಗ್ರಸ್ತ ಗ್ರಹಣ ಎಂದು ನಿರ್ಧರಿಸುತ್ತಾರೆ.  

    ಗ್ರಹಣಾಚರಣೆಯ ವೈಜ್ಞಾನಿಕ ವಿಶ್ಲೇಷಣೆ. 

    ಒಂದು ವೈಜ್ಞಾನಿಕ ವರದಿಯ ಪ್ರಕಾರ ಸಾಮಾನ್ಯ ಸೂರ್ಯನ ಬೆಳಕು ಮತ್ತು ಗ್ರಹಣ ಹಂತಕ್ಕೆ ಒಡ್ಡಿಕೊಳ್ಳುವ ಸಮಯದಲ್ಲಿ ಸೂರ್ಯನ ಬೆಳಕಿನಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಈ ಅಧ್ಯಯನದ ಸಮಯದಲ್ಲಿ ಬ್ಯಾಕ್ಟೀರಿಯಾದ ವಸಾಹತುಗಳು ಸ್ಮೀಯರ್ ಪರೀಕ್ಷೆ ಮತ್ತು ಸೂಕ್ಷ್ಮತೆಯ ಮಾದರಿಯಲ್ಲಿ ರೂಪ ವಿಜ್ಞಾನದಲ್ಲಿ ವ್ಯತ್ಯಾಸವನ್ನು ತೋರಿಸಿದೆ. ಒಂದು ಶಿಲೀಂಧ್ರ ಪ್ರಭೇದಗಳು ಮತ್ತು ಮೂರು ಬ್ಯಾಕ್ಟೀರಿಯಾದ ಪ್ರತ್ಯೇಕತೆಗಳನ್ನು ಅಧ್ಯಯನ ಮಾಡಲಾಯಿತು.  ಗ್ರಹಣ ಸಮಯದಲ್ಲಿ ಸೂರ್ಯನ ಬೆಳಕಿಗೆ  ಪ್ರಭೇದಗಳು ಒಡ್ಡಿಕೊಳ್ಳುವುದರ ಮೇಲೆ ಅವುಗಳ ರೂಪವಿಜ್ಞಾನದಲ್ಲಿ ಒಂದು ನಿರ್ದಿಷ್ಟ ಬದಲಾವಣೆಯನ್ನು ತೋರಿಸಿದವು.   ಇದರ ಅರ್ಥ ಗ್ರಹಣ ಸಮಯದಲ್ಲಿ ಭೂಮಿಗೆ ಬಡಿಯುವ ಸೂರ್ಯನ ಬೆಳಕಿನಲ್ಲಿ ಆಗುವ ವ್ಯತ್ಯಾಸ  ಜೀವಿಗಳ ಮೇಲೆ ಸೂಕ್ಷ್ಮ ಬದಲಾವಣೆ ತರುತ್ತದೆ ಎಂದು ನಿಖರವಾಗಿ ತಿಳಿಯಬಹುದು.   

    ಈ ಸೂಕ್ಷ್ಮ ಬದಲಾವಣೆ ಮಾನವನ ದೇಹದ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ತಡೆಗಟ್ಟಲು, ಗ್ರಹಣಸಮಯದಲ್ಲಿ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದನ್ನು ತಪ್ಪಿಸಲು ಗ್ರಹಣಾಚರಣೆ ಬಂದಿರಬಹುದು.  

    ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಗ್ರಹಣ ಕಾಲದಲ್ಲಿಕೆಳಗಿನ ಪ್ರಮುಖ ಆಚರಣೆಗಳು ಪಾಲಿಸುತ್ತಾ ಬಂದಿದ್ದಾರೆ. 

    ಸ್ನಾನ : ಗ್ರಹಣ ಪ್ರಾರಂಭ ಮತ್ತು ಮುಗಿದ ಮೇಲೆ ಸ್ನಾನ ಮಾಡಬೇಕು. ವೈಜ್ಞಾನಿಕವಾಗಿ  ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹ ಶುದ್ಧಿ ಜೊತೆಗೆ ಮನಸ್ಸಿನ ಮೇಲೆ ಹೆಚ್ಚು ಹತೋಟಿ ಇಡಲು  ಸಾಧ್ಯ.  ಗ್ರಹಣ ಕಾಲದಲ್ಲಿ ಸೂರ್ಯನ ಬೆಳಕಿನಲ್ಲಿ ಆಗುವ ವ್ಯತ್ಯಾಸ ದೇಹದ ಮೇಲೆ ಹೆಚ್ಚು ಆಗದಿರಲಿ ಎಂದು ಈ ಸ್ನಾನಾಚರಣೆ ಬಂದಿರಲಿಕ್ಕೂ ಸಾಧ್ಯವಿದೆ. 

    ಆಹಾರ ವಿಚಾರ: ಗ್ರಹಣ ಪ್ರಾರಂಭವಾಗುವ ನಾಲ್ಕು ಗಂಟೆಗೆ ಮೊದಲು  ಲಘು ಆಹಾರ  ಗ್ರಹಣಾ ನಂತರ  ಎಂದಿನಂತೆ ಆಹಾರ ಸ್ವೀಕಾರ.  ನಮ್ಮ ಉದರದಲ್ಲಿ ಒಳ್ಳೆಯ ಹಾಗು ಕೆಟ್ಟ ಬ್ಯಾಕ್ಟೀರಿಯಾಗಳು ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.  ಅದರಂತೆ ಗ್ರಹಣದ ಸಮಯದಲ್ಲಿ ಆಹಾರ ಸ್ವೀಕರಿಸಿದರೆ   ಉದರದಲ್ಲಿ ಇರುವ ಆಹಾರದ ಪಚನ ಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು  ಎಂದಿನಂತೆ ಕಾರ್ಯ ನಿರ್ವಹಿಸದೇ ಇದ್ದಾಗ  ದೇಹದ ಆರೋಗ್ಯದ ಮೇಲೆ ಆಗುವ ಪರಿಣಾಮ ತಡೆಯಲು ಹಾಗು ನಾಲ್ಕು ಗಂಟೆ ಮುಂಚೆ ಹೆಚ್ಚು ಆಹಾರ ಸೇವಿಸಿದರೆ  ಹಿಂದಿನ ಕಾಲದಲ್ಲಿ ಬಹಿರ್ದೆಶೆಗೆ ಗ್ರಹಣ ಕಾಲದಲ್ಲಿ ಊರಿನಿಂದ ದೂರ ಹೋಗಿ ಬರಬೇಕಾದ ಸನ್ನಿವೇಶ ತಪ್ಪಿಸಲು ( ಗ್ರಹಣ ಕಾಲದ ಸೂರ್ಯನ ಕಾಸ್ಮಿಕ್ ಕಿರಣಗಳು ತಾಗದಿರಲಿ, ಅಪ್ಪಿ ತಪ್ಪಿ ಬರೆಕಣ್ಣಿನಿಂದ ಸೂರ್ಯನನ್ನು ನೋಡದಿರಲಿ ಎಂಬ ಉದ್ದೇಶ ವಿರಬಹುದು)  ಈ ಆಚರಣೆ ಬಂದಿರಲು ಸಾಧ್ಯವಿದೆ.     

     ಗ್ರಹಣ ಕಾಲದ ಧ್ಯಾನ,ಶಾಂತಿ, ಹೋಮ ಹವನಗಳು:  ಇವು ಕೂಡಾ  ಗುರುತ್ವಾ ವತ್ಯಾಸದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ನಿಗ್ರಹಿಸಲು ಧ್ಯಾನ,  ಪಾಠ, ಪಾರಾಯಣ, ಶಾಂತಿ ಹೋಮದ ನೆಪದಲ್ಲಿ  ಸೂರ್ಯನ ರೇಶ್ಮಿಗೆ ದೇಹ ಒಡ್ಡದಂತೆ ಮನೆಯಲ್ಲಿಯೇ ಇರಲು ಮಾಡಿರುವ ಆಚರಣೆ ಎನ್ನುವುದು ಗೋಚರಿಸುತ್ತದೆ. 

    ದಾನ:  ಇದು ಕೂಡ ಸನಾತನ ಸಂಸ್ಕೃತಿಯಲ್ಲಿ ಯಾವುದೇ ಆಚರಣೆಯಲ್ಲಿ ದಾನ (ಒಬ್ಬರಿಂದ ಇನ್ನೊಬರಿಗೆ  ಅವರ ಜೀವನೋಪಾಯಕ್ಕೆ ಬೇಕಾದ ಪದಾರ್ಥಗಳ ಹಂಚುವಿಕೆ ) ಕೊಡುವುದು  ಒಂದು ವೃತ್ತಿಯನ್ನೇ ನಂಬಿದ ವರ್ಗವನ್ನು ಸಲುಹಲು ಇರುವ ಒಂದು ಸಾಧನವಷ್ಟೇ .   ಮತ್ತೊಬ್ಬರಿಗೆ ಊಟ ಕೊಡಿಸಿದಾಗ ಸಿಗುವ ಆನಂದದ ಸುಖ ಈ ದಾನಪ್ರಕ್ರಿಯೆ ಇಂದ ಬಂದು ಮನುಷ್ಯ ಧನ್ಯತಾ ಭಾವ ಹೊಂದುವ ಸಾಮಾನ್ಯ ಪ್ರಕ್ರಿಯೆ ಹೊರತು ಇದರಲ್ಲಿ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. 

    ಹೀಗೆ ಹಲವಾರು ನಂಬಿಕೆ, ಮೂಢನಂಬಿಕೆಗಳು ಬೆಳೆದುಬಂದಿವೆ.  

    ಮೂಢನಂಬಿಕೆಗೂ ಗ್ರಹಣಾಚರಣೆಗೂ ತುಂಬಾ ವ್ಯತ್ಯಾಸ

    ಮೂಢನಂಬಿಕೆಗೂ ಗ್ರಹಣಾಚರಣೆಗೂ ತುಂಬಾ ವ್ಯತ್ಯಾಸವಿದೆ. ಮೂಢ ನಂಬಿಕೆ ಎಂದರೆ  ಒಂದು ಆಚರಣೆಯ ಬಗ್ಗೆ ಏನೂ ತಿಳಿದುಕೊಳ್ಳದೇ  ಯಾರೋ ಮಾಡುತ್ತಾರೆ ಅದನ್ನ ಅಂಧ ರೀತಿಯಲ್ಲಿ ಅನುಸರಿಸಿ ಆಚರಿಸುವುದು.  ಯಾವುದೇ ವಿಷಯಗಳನ್ನ ಅರಿಯದೆ ಯಾವುದೇ ಆಚರಣೆ ಮಾಡುವುದು ಶುದ್ಧ ತಪ್ಪು.  

    ಈ ವಿಶ್ಲೇಷಣೆಯ  ಉದ್ದೇಶ ಗ್ರಹಣಾಚರಣೆಯನ್ನು ಜನರು ಪಾಲಿಸಲಿ ಎಂಬುವುದಲ್ಲ ಬದಲಾಗಿ ವೈಜ್ಞಾನಿಕವಾಗಿ ಗ್ರಹಣ ಸಂಭವಿಸಿದಾಗ ಪ್ರಕೃತಿಯಲ್ಲಿ ಆಗುವ ಬದಲಾವಣೆ ಹಾಗು ದೇಹದ ಮೇಲೆ ಆಗುವ ಪರಿಣಾಮಗಳ ಸತ್ಯಾಸತ್ಯೆತೆಯ ಬಗ್ಗೆ ಬೆಳಕು ಚಲ್ಲುವುದಾಗಿದೆ.  

    ಗ್ರಹಣ ಸಮಯದಲ್ಲಿ  ನಿಮ್ಮ ದೇಹದ ಸ್ವಾಸ್ಥ್ಯಕ್ಕೆ ಆರೋಗ್ಯಕ್ಕೆ ನಿಮಗೆ ಯಾವುದು  ಉತ್ತಮ ಎಂದು ಎನಿಸುತ್ತದೆಯೋ, ಆ ರೀತಿ ನಿಮ್ಮ ನಿಲುವುಗಳನ್ನು ತೆಗೆದುಕೊಂಡು, ನಮ್ಮ ನಭೋಮಂಡಲದ ನೆರಳು ಬೆಳಕಿನಾಟದ ವಿಸ್ಮಯವನ್ನು ಕಣ್ತುಂಬಿಕೊಳ್ಳಿ.

    ಸೂರ್ಯಗ್ರಹಣ: ಭಯ ಬೇಡ, ಸುರಕ್ಷಿತವಾಗಿ ವೀಕ್ಷಿಸಿ

    ಹರೋನಹಳ್ಳಿ ಸ್ವಾಮಿ

    ನಾಳೆ ಭಾನುವಾರ ಬೆಳಿಗ್ಗೆ (10ಗಂ.12ನಿ.55ಸೆ.)  ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ನಾವು ಪಾರ್ಶ್ವ ಸೂರ್ಯಗ್ರಹಣ ಮಾತ್ರ ನೋಡಬಹುದಾಗಿದೆ. ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ನಮ್ಮ ಚಂದ್ರ ದೀರ್ಘ ವೃತ್ತಾಕಾರದ ಪಥದಲ್ಲಿ ಸುತ್ತುತ್ತಿವೆ. ಕೆಲವು ಬಾರಿ ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಒಂದರ ನೆರಳು ಮತ್ತೊಂದರ ಮೇಲೆ ಬೀಳುವ ಮೂಲಕ ಗ್ರಹಣಗಳು ಸಂಭವಿಸುತ್ತವೆ.

    ಆದರೆ ನಾಳೆ ಚಂದ್ರನ ತೋರಿಕೆಯ ಗಾತ್ರವು ಸೂರ್ಯನ ತೋರುವಿಕೆಯ ಗಾತ್ರಕ್ಕಿಂತ ಕಡಮೆಯಿದ್ದು, ಚಂದ್ರನು ಸೂರ್ಯನ ಪೂರ್ಣ ಮುಖವನ್ನು ಮುಚ್ಚುವುದಿಲ್ಲ. ಬದಲಾಗಿ ಸೂರ್ಯನ ಅಂಚು ಬಳೆಯಾಕಾರದಲ್ಲಿ ಗೋಚರಿಸುವ ದೃಶ್ಯವೇ “ಕಂಕಣ ಸೂರ್ಯಗ್ರಹಣ” (Annular  Solar Eclipse) ಆದರೆ ನಮಗೆ ಆ ದೃಶ್ಯ ಕಾಣುವುದಿಲ್ಲ ಬದಲಾಗಿ, ಸೂರ್ಯನ ಶೇಕಡಾ ನಲವತ್ತು ಭಾಗ ಚಂದ್ರನಿಂದ ಮುಚ್ಚಲ್ಪಟ್ಟ ಪಾರ್ಶ್ವ ಸೂರ್ಯಗ್ರಹಣವನ್ನು  ನೋಡಬಹುದು.



    ಭಾನುವಾರ ಬೆಳಿಗ್ಗೆ 10.17 ಗಂಟೆಗೆ ಆರಂಭವಾಗಿ, ಮಧ್ಯಾಹ್ನ 1 ಗಂಟೆ 31 ನಿಮಿಷ ದವರಿಗೆ ಸುಮಾರು 3 ಗಂಟೆ 19 ನಿಮಿಷಗಳ ಕಾಲ ಗ್ರಹಣ ಜರುಗುತ್ತದೆ.

    ಎಲ್ಲೆಲ್ಲಿ ಗ್ರಹಣ ಗೋಚರ ವಾಗುತ್ತದೆ:- ಆಫ್ರಿಕಾ, ಫೆಸಿಫಿಕ್ ಮತ್ತು ಹಿಂದು ಮಹಾಸಾಗರ, ಪಾಕಿಸ್ತಾನ, ಭಾರತ  ಚೀನಾ, ಒಮಾನ್, ಯೆಮೆನ್ ದೇಶಗಳಲ್ಲಿ ಕಾಣಸಿಗುವುದು.

    ನೋಡುವ ಬಗೆ ಹೇಗೆ:

    1.ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಿಸಬಾರದು.
    2.ಎಕ್ಸ್ ರೇ,  ವೆಲ್ಡಿಂಗ್ ಗ್ಲಾಸ್ ಗಳ ಮೂಲಕವೂ ನೋಡಬಾರದು .

    3.ವೈಜ್ಞಾನಿಕ ಸಂಸ್ಥೆಗಳಿಂದ ದೊರೆಯುವ ಅಧಿಕೃತ “ಸೌರ ಕನ್ನಡಕ” Solar spect’ ನ ಮೂಲಕ ನೋಡಬಹುದು .

    4.ಸೌರ ಕನ್ನಡಕಗಳಿಂದಲೂ ನಿರಂತರವಾಗಿ ನೋಡದೆ,  ಕೆಲ ನಿಮಿಷಗಳ ಬಿಡುವು ನೀಡಿ ಕಣ್ಣಿಗೆ ಆಯಾಸವಾಗದಂತೆ ನೋಡಬೇಕು .

    5.ತೆಳುವಾದ ಕಾರ್ಡ್ ಬೋರ್ಡ್ ನಲ್ಲಿ ಸಣ್ಣ ರಂಧ್ರ ಮಾಡಿ, ಕನ್ನಡಿಯ ಮುಂಭಾಗದಲ್ಲಿಟ್ಟು ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದು .

    6.ಟಿಲಿಸ್ಕೋಪ್ ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು.

    ಹರೋನಹಳ್ಳಿ ಸ್ವಾಮಿ

    7.ಬೈನಾಕುಲರ್ ನಿಂದಲೂ ಸೂರ್ಯನ ನೇರ ವೀಕ್ಷಣೆ  ಮಾಡಬಾರದು. ಬದಲಾಗಿ ಸೂರ್ಯನ ಪ್ರತಿಬಿಂಬವನ್ನು ಮಾತ್ರ ನೋಡಬಹುದು.

    ಗ್ರಹಣ ಭಯವೇ?:  ಖಂಡಿತಾ ಸೂರ್ಯಗ್ರಹಣ, ಚಂದ್ರಗ್ರಹಣಗಳ ಭಯವಲ್ಲ, ಬದಲಾಗಿ ಪ್ರಕೃತಿ ಸಹಜ ನೆರಳು ಬೆಳಕಿನ ಆಟವಷ್ಟೇ. ಅನೇಕರು ಮಾಧ್ಯಮಗಳ ಮೂಲಕ ಗ್ರಹಣದಿಂದ ಅನೇಕರಿಗೆ ತೊಂದರೆ,  ಪ್ರಕೃತಿಯ ಅವಘಡಗಳಾಗುತ್ತವೆಂದು  ಅವೈಜ್ಞಾನಿಕವಾಗಿ ಹೆದರಿಸುತ್ತಾರೆ.  ಆದರೆ ಇದಕ್ಕೆ ಯಾವುದೇ  ಆಧಾರಗಳಿಲ್ಲ . ಸೂರ್ಯಗ್ರಹಣ ನಿಸರ್ಗದ ಅದ್ಭುತ ವಿದ್ಯಮಾನ. ಸುರಕ್ಷಿತವಾಗಿ ವೀಕ್ಷಿಸಿ ಆನಂದಿಸಬೇಕಷ್ಟೆ.


    2020ರ ಗ್ರಹಣಗಳು; ಈ ವರ್ಷ 2 ಸೂರ್ಯ ಗ್ರಹಣಗಳು ಮತ್ತು 4 ಚಂದ್ರಗ್ರಹಣಗಳು ಜರುಗುತ್ತವೆ. ಮುಂದಿನ ಸೂರ್ಯಗ್ರಹಣವು ಡಿಸೆಂಬರ್  14 ರಂದು ಜರುಗುತ್ತದೆ.

    ಜಾತ್ರೆ ಮುಗಿದೇ ಹೋಯಿತೇನೋ ಎಂಬ ದುಗಡದಲ್ಲಿ ಹೊಸ ಸ್ವಾತಂತ್ರ್ಯದ ಕಡೆ ಮುಂಬೈ ಚಿತ್ತ

    ಹೇಳಿ ಕೇಳಿ ಮುಂಬೈ ರಾಣಿ ಒಲಿಯುವುದು ಶ್ರಮಕ್ಕೆ ಮಾತ್ರ. ಇಲ್ಲಿ ಬರುವವರು ಮೊದಲು ವಿನಯವಾಗಿ ಬಂದು ಶ್ರಮ ಪಟ್ಟು ಯಶಸ್ಸು ಸಾಧಿಸಬಹುದೇ ಹೊರತು.. ಕಡಿಮೆ ಸಮಯದಲ್ಲಿ ಸಿಕ್ಕ ಹಣ ಕೀರ್ತಿ ರೆಪ್ಪೆ ಅಲುಗಿಸುವಷ್ಟರಲ್ಲಿ ಕೆಳಗೆ ಬಿದ್ದು ಬದುಕು ಮೂರಾಬಟ್ಟೆಯಾದ ಕತೆಗಳು ಇಲ್ಲಿ ಸಾಕಷ್ಟಿವೆ. ಇಲ್ಲಿನ ಯಶಸ್ಸಿಗೆ ಹತ್ತು ಹಲವು ಮುಖಗಳು. ಕೆಲವು ಕಣ್ಣಿಗೆ ಕಾಣುತ್ತವೆಯಾದರೆ ಕೆಲವು ಕಾಣುವುದಿಲ್ಲ.

    ಎಲ್ಲೂ ಬೇಳೆ ಬೇಯದಿದ್ದರೆ, ಶ್ರಮಿಸುವ ಮನಸ್ಸಿದ್ದರೆ ಮುಂಬಾದೇವಿಗೆ ಶರಣುಹೋಗು ಎನ್ನುವುದು ಹಳಬರ ನಾನ್ನುಡಿ. ಒಮ್ಮೆ ಮುಂಬಾದೇವಿಯ ಪಾದಕ್ಕೆ ಬಿದ್ದು ಮಹಾಲಕ್ಷ್ಮಿಯ ಆಶೀರ್ವಾದ ಪಡೆದ ನಂತರ ನಿನ್ನ ಕೈ ನಿನ್ನ ಬಾಯಿ. ಹೀಗಿರುವಾಗ ಈ ಮಾಯಾ ನಗರಿಗೆ ಬರುವವರಿಗೆ ಕೇವಲ ಬರುವ ದಾರಿ ಕಾಣುತ್ತಿತ್ತೇ ವಿನಾ ಹೋಗುವ ದಾರಿಯಲ್ಲ. ಅವಳೂ ತಾನೆ ಎಷ್ಟೆಂದು ಮಡಿಲು ಹಿಗ್ಗಿಸಿಯಾಳು? ಕಳೆದ ಎರಡು ದಶಕಗಳಲ್ಲಂತೂ ಸಮುದ್ರವನ್ನೂ ಜರುಗಿಸುವ, ಅಲ್ಲಿಯೂ ತನ್ನ ಪ್ರಭುತ್ವ ಸ್ಥಾಪಿಸಿಕೊಳ್ಳುವ ಮನುಷ್ಯನ ಹಪಾಹಪಿತನ ಇಡೀ ಮುಂಬೈಯನ್ನೇ ರೊಚ್ಚಿಗೆಬ್ಬಿಸಿದಂತೆ ಕಾಣುತ್ತಿತ್ತು.

    ರಾತ್ರಿಯಲ್ಲಿ ಜಗಮಗಿಸುವ ಕ್ವೀನ್ ನೆಕ್ಲೆಸ್ ಹಗಲಿನಲ್ಲಿ ಬೇರೆಯೇ ಕತೆ ಹೇಳುತ್ತದೆ. ತೊಂಬತ್ತರ ದಶಕದ ವರೆಗೂ ಶ್ರಮ ಪಟ್ಟು ಕಟ್ಟಿಕೊಂಡ ಬದುಕಿನ ಕಟ್ಟಡಗಳ ನಡುವೆ ಅಲ್ಲಿಂದಾಚೆಗೆ ಏನೇನೋ ಬದಲಾಣೆಗಳಿಗೆ ಚಾಲನೆ ಸಿಕ್ಕಿ ಚಾಲೂಕು ಜನರು ಮುಂಬೈ ಆರ್ಥಿಕ ಜಗತ್ತಿನಲ್ಲಿ ನುಸುಳಿ ಹಣದ ಸೌಧಗಳನ್ನು ಕಟ್ಟತೊಡಗಿದರು. ಈ ನಡುವೆ ಶ್ರಮದ ಬದುಕು ನೆಡೆಸುತ್ತಿದ್ದವರ ವ್ಯವಹಾರ ವ್ಯಾಪಾರ ಸಪ್ಪೆಯಾಗಿ ಕಣ್ಣಿಗೆ ಕಾಣದಂತಾಯಿತು. ಅವರೂ ವಿಧಿ ಇಲ್ಲದೆ ಹಣವಂತರ ತಾಳಕ್ಕೆ ಬೇಕೋ ಬೆಡವೋ ಕುಣಿಯಲೇ ಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

    ಹಾಗೆ ಕಟ್ಟಿದ ಈ ಹಣದ ಸೌಧದ ಅಡಿಪಾಯದಲ್ಲಿ ಶ್ರಮದ ಗಟ್ಟಿತನವಿಲ್ಲದೆ ನಂಬಿಕೆಯ ಭದ್ರತೆ ಇಲ್ಲದೆ ದಶಕದಿಂದೀಚೆಗೆ ಇಂಚಿಂಚಾಗಿ ಕುಸಿಯುತ್ತಿತ್ತು. ಹತ್ತಡಿ ಜಾಗದಲ್ಲಿ ಹತ್ತು ವ್ಯಾಪಾರಗಳು ನೆಡೆಯಲಾರಂಬಿಸಿದ ಪರಿಣಾಮವಾಗಿ ಯಾರಿಗೂ ಹೊಟ್ಟೆ ತುಂಬದ ಪರಿಸ್ಥಿತಿ.

    ಸಣ್ಣ ಪುಟ್ಟ ವ್ಯಾಪಾರಿಗಳೆಲ್ಲಾ ಅವಲಂಬಿಸಿದ್ದ ದೊಡ್ಡ ಕುಳಗಳು ಎಲ್ಲಾ ವ್ಯವಹಾರವನ್ನೂ ಹವಾಲಾ ಮೂಲಕವೇ ಮಾಡುತ್ತಿದ್ದ ಕಾರಣ, ‘ನೋಟ್ ಬಂದಿ’ ಸಮಯದಲ್ಲಿ ಆರ್ಥಿಕ ರಾಜಧಾನಿ ಪಾತಾಳಕ್ಕೆ ಕುಸಿಯುತ್ತಿರುವುದು ಪ್ರತಿಯೊಬ್ಬ ಮುಂಬೈ ವ್ಯಾಪಾರಿಗೂ ನಿಚ್ಛಳವಾಗಿ ಕಾಣುತ್ತಿತ್ತು. ಹೇಗೋ ಹಠದಲ್ಲೇ ಈಜುತ್ತಾ ಬದುಕುತ್ತೇವೆ ಎಂದು ತಾಳ್ಮೆಯಿಂದ ಮುನ್ನೆಡೆದವರಿಗೆ ಭಾರಿ ಹೊಡೆತ ಕೊಟ್ಟಿದ್ದು ಈ ಕೊರೋನಾ.

    ತಪ್ಪು ಮಾಡುವವರು ಯಾರೋ ಅನುಭವಿಸುವರು ಯಾರೋ

    ಇದುವರೆವಿಗೂ ಮುಂಬೈ ನಗರಿ ತನ್ನ ಮೇಲಾದ ಅತ್ಯಾಚಾರ ಸಹಿಸಿ ಸಹಿಸಿ ಇನ್ನು ತಾಳಲಾರೆ ಎಂಬಂತೆ ತಿರುಗಿ ಬಿದ್ದು ಕೊಟ್ಟ ಶಾಪ ಈ ಕೊರೋನಾ ವೈರಸ್ ಎನ್ನುವಂತಾಗಿದೆ. ಈಗ ತಪ್ಪು ಮಾಡುವವರು ಯಾರೋ ಅನುಭವಿಸುವರು ಯಾರೋ.. ಒಟ್ಟಿನಲ್ಲಿ ಸಮುದ್ರವು ಇಲ್ಲಿಯ ಜನರು ಎಸೆದ ತನ್ನೊಡಲೊಳಗಿನ ಕಸವನ್ನು ಅಲೆಗಳ ಸಹಾಯದಿಂದ ಒಮ್ಮೆಗೇ ಮನುಷ್ಯರ ಮುಖದ ಮೇಲೆ ‘ರಪ್ ‘ ಎಂದು ಬಾರಿಸಿದ ಹಾಗಾಗಿದೆ. ಇಡೀ ಮುಂಬೈಗೆ ಮುಂಬೈ ಐಸಿಯು ಹಾಸಿಗೆಯಮೇಲೆ ಬಿದ್ದಿದೆ.

    ಕೊಡುವುದರ ಹತ್ತರಷ್ಟು ಪಡೆವುದೇ ನಿಯಮ ಎಂಬಂತಾಗಿದ್ದ ಮುಂಬೈ ಸಾರ್ವಜನಿಕ ವ್ಯವಸ್ಥೆಗಳು ಅದರಲ್ಲೂ ಮುನಿಸಿಪಾಲಿಟಿ ಆಸ್ಪತ್ರೆಗಳು ಹತಾಶೆಯಿಂದ ಕೈ ಚೆಲ್ಲಿ ಕೂತಿವೆ. ಯಾವುದನ್ನು ಯಾರನ್ನು ನಂಬಿ ಜನ ಬೇರೆ ಬೇರೆ ರಾಜ್ಯಗಳಿಂದ ನುಗ್ಗಿಕೊಂಡು ಬಂದಿದ್ದರೋ ಅವರಿಂದ ಹುಲ್ಲುಕಡ್ಡಿಯ ಆಸರೆಯೂ ಸಿಗದಾಗಿ ಬದುಕು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿದೆ. ಇಡೀ ಪ್ರಕೃತಿಯೇ ಮನುಷ್ಯ ಕುಲವನ್ನು ಜೂಜಿನ ಕಾಯಿಗಳಂತೆ ಆಡಿಸುತ್ತಿದೆ.
    ಲಾಕ್ ಡೌನ್ ಘೋಷಣೆ ಆದ ಮೊದಲ ತಿಂಗಳಿನಲ್ಲಿ ಜನರಿಗೆ ಮುಂದೆ ಬರಬಹುದಾದ ದಿನಗಳ ಬಗ್ಗೆ ಯಾವ ಊಹೆಯೂ ಇರಲಿಲ್ಲ.

    ಒಂದಷ್ಟು ಜನರಿಗಂತೂ ಇದೊಂದು ರೀತಿ ದಿನ ನಿತ್ಯದ ಜಂಜಡಗಳಿಂದ ಬಿಡುವು ಸಿಕ್ಕಿತು ಎಂದು ಸಮಾಧಾನದಿಂದಲೇ‌ ಇರಲು ತೊಡಗಿದರು. ಕೆಲವರಂತೂ ನಾವು ಸಂಸಾರದೊಂದಿಗೆ ಆನಂದಮಯ ದಿನಗಳನ್ನು ಕಳೆಯುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ನಿಲುಮೆ ಹಾಕಿಕೊಂಡರು. ತರಾವರಿ ತಿಂಡಿ ಫೋಟೋಗಳ ಮಹಾಪೂರವೇ ಹರಿದು ಬರುತ್ತಿತ್ತು‌. ಮನೋರಂಜನಾ ಕ್ಷೇತ್ರದವರೂ ತಾವೇನು ಕಡಿಮೆ ಎಂಬಂತೆ ತಾವೂ ಅಡಿಗೆ ಮಾಡಿದೆವೆಂದೂ.. ದೊಡ್ಡ ದೊಡ್ಡ ತಾರೆಯರು ತಾವೂ ಕಸ ಗುಡಿಸಿದೆವೆಂದೂ, ಪಾತ್ರೆ ತೊಳೆದೆವೆಂದು ತಮ್ಮ ಸರಳತೆಯನ್ನು ಸಾಬೀತು ಪಡಿಸುತ್ತಿದ್ದರು. ಜೊತೆ ಜೊತೆಗೆ ಟಿಕ್ ಟಾಕ್ ವೀಡಿಯೋಗಳಂತೂ ‌ಭರ್ಜರಿ ಪ್ರದರ್ಶನ ಕಂಡವು. ಕ್ರಿಕೆಟ್ ದೇವರುಗಳು ಪರಸ್ಪರ ಕಾಲೆಳೆದುಕೊಂಡು ಟ್ವೀಟ್ ಮಾಡಿ ಮನೋರಂಜನೆ ಒದಗಿಸುತ್ತಿದ್ದರು. ಗಾಯಕರು ಸೋಷಿಯಲ್ ಮೀಡಿಯಾ ತುಂಬಾ ಗಾಯನ ಕಾರ್ಯಕ್ರಮ ನೆಡೆಸಿ ಪರಸ್ಪರ ಹುರಿದುಂಬಿಸುತ್ತಿದ್ದರು.

    ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಯ ನಡುವೆಯೇ.. ಮೆಲ್ಲಗೆ ಕೊರೋನಾ ಉಳ್ಳವರನ್ನು ದಾಟಿ ಸಾರ್ವಜನಿಕ ಸೇವೆಗಳಲ್ಲಿ ನಿರತರಾಗಿದ್ದ ಹಲವು ಶ್ರಮಿಕರು, ಸರ್ಕಾರಿ ಕೆಲಸಗಾರರು, ನಮ್ಮ ನಿಮ್ಮಂತವರ ಹೆಗಲೇರಿ ಆಗಿತ್ತು. ಅದರ ಅರಿವು ಆಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಕೆಲವು ಕಡೆ ಸರ್ಕಾರದ ನಿರ್ಲಕ್ಷ ಕಾರಣವಾದರೆ ಮತ್ತೆ ಹಲವೆಡೆ ಜನರ ಮಾಮೂಲಿ ಉಡಾಫೆ ಪ್ರವೃತ್ತಿ ಕಾರಣವಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಕೊರೋನಾ ಬಲಿಪಶುಗಳನ್ನಾಗಿಸುತ್ತಿತ್ತು.

    ಮುಂಬೈ ಜೋಪಡಿಗಳಲ್ಲಿ ಚಾಳ್ ಗಳಲ್ಲಿ ಹಿಡಿಯಷ್ಟು ಜಾಗಗಳಲ್ಲಿ ಜೇನು ಗೂಡಿನ ಹುಳಗಳಂತೆ ವಾಸಿಸುತ್ತಿದ್ದ ಜನರ ಬದುಕಲ್ಲಿ ಈ ಸೋಂಕು ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಒಂದು ಟಾಯ್ಲೆಟ್ ಅನ್ನು ನೂರಾರು ಜನ ಬಳಸ ಬೇಕಾದ ಅನಿವಾರ್ಯತೆಯಲ್ಲಿ ‘ ದೋ ಗಜ್ ಕಿ ದೂರಿ’ ಹಳ್ಳ ಹತ್ತಿತ್ತು. ಆ ಹೊತ್ತಿಗಾಗಲೇ ದಿನಗೂಲಿ ನೌಕರರು ಹಸಿವೆಯಿಂದ ಬೇಸತ್ತಿದ್ದರು. ಅವರ ಆಕ್ರೋಶವನ್ನು ಹೊರ ಹಾಕುವ ವೀಡಿಯೋಗಳು ಹೊರಬಂದಿದ್ದೇ ತಡ.. ತಾಮುಂದು ನಾ ಮುಂದು ಎಂದು ಸಹಾಯಗಳ ಮಹಾ ಪೂರವೇ ಹರಿದು ಬಂತು. ಎಲ್ಲಾ ಸೆಲೆಬ್ರಿಟಿಗಳೂ ತಮ್ಮ ಉದಾರತನ ತೋರಿದರು.

    ಗೋಧಿ ಹಿಟ್ಟಿನ ನಡುವೆ ಐದೈದು ಸಾವಿರ ಇಟ್ಟು ಕೊಟ್ಟ ಸುದ್ದಿ, ಆಂಬ್ಯಲೆನ್ಸ್‌ ಸೇವೆ ಒದಗಿಸಿಕೊಟ್ಟ ಸುದ್ದಿ, ದಿನಸಿ ಹಂಚಿದ ಸುದ್ದಿ, ಮಾಸ್ಕ್ ಸ್ಯಾನಿಟೈಸರ್ ಹಂಚಿದ ಸುದ್ದಿ, ನೇರ ಸರಕಾರಕ್ಕೇ ದೇಣಿಗೆ ನೀಡಿದ ಸುದ್ದಿ ಮತ್ತೆ ಕೆಲವರಿಗೆ ತಮ್ಮ ಖರ್ಚಲ್ಲಿ ವಿಮಾನ ಯಾನ ಯೋಗ ಮಾಡಿಸಿದ್ದು ಹೀಗೆ ಪ್ರಚಾರಕ್ಕೋ ಕಳಕಳಿಗೋ ಎಲ್ಲೆಲ್ಲೂ ಸಹಾಯ ಮಾಡುವಿಕೆ ಉತ್ಸಾಹ ನೋಡಲು ಸಿಕ್ಕವು. ಸಹಾಯ ಮಾಡುವವರ ಅನುಕೂಲಕ್ಕೆ ತಕ್ಕಂತೆ ಸಿಕ್ಕವರಿಗೆ ಸೀರುಂಡೆ ಅನ್ನೋ ಹಾಗಾಯಿತು. ದುಡ್ಡಿನ ಅವಶ್ಯಕತೆ ಇದ್ದ ಕೆಲವು ಜನರು ಕೈಚಾಚಲು ಬಯಸದೆ ಮುಜುಗರದಿಂದ ಒಳಗೇ ಅವಿತು ನೋವು ಪಟ್ಟರು. ಮತ್ತೆ ಕೆಲವರು ಸಹಾಯ ಎಂದು ನೀಡಿದ ದಿನಸಿ ಸಾಮಾನು ತರಕಾರಿಗಳನ್ನು ಸಿಕ್ಕ ಕಡೆ ಎಲ್ಲಾ ಪಡೆದು ದುಡ್ಡಿಗೆ ಮಾರಿಕೊಳ್ಳಲಾರಂಬಿಸಿದರು.

    ಗೋರೆಗಾಂವ್ ನ ಫಿಲ್ಮಿಸ್ಥಾನ್ ಕಾಂಪೌಂಡ್ ನ ಒಳಗೆ ಕಾರ್ಮಿಕರಿಗೆಂದು ಕೊಟ್ಟ ಸಾಮಾನು ಆಹಾರ ಪದಾರ್ಥಗಳು ಬೇಕೆಂದವರಿಗೆ ದುಡ್ಡಿಗೆ ಹಂಚಿಕೆ ಆಗುತ್ತಿತ್ತು. ಈ ಸಂಭ್ರಮಗಳೂ ಕೊನೆಗೊಂಡು ಕಾರ್ಮಿಕರು ಬದುಕಲು ದಾರಿ ಕಾಣದೆ ಬಂದ ಊರಿನತ್ತ ಮುಖ ಮಾಡಿದರು. ಸಿಕ್ಕಿದ್ದನ್ನು ಹೊತ್ತು ಖಾಲಿ ಹೊಟ್ಟೆಯಲ್ಲಿ ಸಾವಿರಾರು ಮೈಲಿ ನೆಡೆದರು. ಅಲ್ಪ ಸ್ವಲ್ಪ ದುಡ್ಡಿದ್ದವರು, ಆಟೋ ಸಿಕ್ಕರೆ ಆಟೋ ಲಾರಿ ಸಿಕ್ಕರೆ ಲಾರಿ ಎಂದು ದುಡ್ಡು ತೆತ್ತು ಊರಿಗೆ ಹೊರಟರು. ಈ ಪರದಾಟದ ಗೌಜು ದಿನದಿಂದ ದಿನಕ್ಕೆ ತಣ್ಣಗಾಗಿ ಈಗ ನಿಜವಾದ ಸಂಘರ್ಷ‌ ಶುರುವಾಗಿದೆ.ಕಡಿಮೆ ಎಂದರೂ ಎರಡು ಮೂರು ಸಾವಿರ ಜೋಬಿಗಿಳಿಸಿ ನೆಮ್ಮದಿಯಿಂದ ಮನೆಗೆ ಹೋಗುತ್ತಿದ್ದ ಆಟೋದವರು ಕುಸಿದು ಕೂತಿದ್ದಾನೆ. ಇ ಎಂ ಐ ಕಟ್ಟಿಸಿಕೊಳ್ಳದ ಗಾಡಿಗಳು ಬೀದಿಗೆ ಬಿದ್ದಿವೆ.

    ಇವುಗಳ ನಡುವೆಯೇ ಕೊರೋನಾ ಪ್ರತಾಪ ಮುಂದುವರೆಸುತ್ತಾ ನೆಡೆದಿದೆ. ಆಸ್ಪತ್ರೆ ಒಳಗೆ ಹೋದವರ ಮುಖ ಮತ್ತೆ ವಾಪಸ್ ನೋಡುವುದೂ ಅಸಾಧ್ಯವೇನೋ ಎನ್ನುವಂತಾಗಿ ಜನ ಕಂಗೆಟ್ಟಿದ್ದಾರೆ.ಗುಣ ಮುಖರಾದವರ ಸುದ್ದಿಗಳು ಬರುತ್ತಿವೆ. ಸಾಗರೋಪಾದಿಯಲ್ಲಿ ಜನ ತಮ್ಮ ತಮ್ಮ ಊರಿನ ಕಡೆಗೆ ಹೊರಟು ಹೋಗಿದ್ದಾರೆ. ಈವರೆಗೂ ಗಳಿಸಿ ಜೋಪಾನ ಮಾಡಿದ್ದ ದುಡ್ಡು ಮುಗಿದು ಹಸಿವಿನಿಂದ ಕಂಗೆಟ್ಟ ಮುಖಗಳು ಎಲ್ಲೆಲ್ಲೂ ಕಾಣುತ್ತಿವೆ.ಎಲ್ಲಿಗೂ ಹೋಗಲಾಗದೆ ಇರಲೂ ಜಾಗವಿಲ್ಲದೆ ಬೀದಿಗೆ ಬಿದ್ದವರ ಬವಣೆ ಟೀವಿಯಲ್ಲಿ ನೋಡಿದ ಜನ ‘ಚ್ಚು ಚ್ಚು’ ಎಂದದ್ದಷ್ಟೇ ಲಭ್ಯ.

    ತಂದೆಯನ್ನು ಸೈಕಲ್ ಮೇಲೆ ಸಾಗಿಸಿದ ಮಗಳು.. ತಾಯಿಯನ್ನು ಬೆನ್ನ ಮೇಲೆ ಹೊತ್ತು ನೆಡೆದ ಮಗ ಎಲ್ಲವನ್ನೂ ಅಚ್ಚರಿಯಿಂದ ಹೀಗೂ ಸಾಧ್ಯವೇ? ಎಂದು ಜನ ವಾರ್ತೆಗಳಲ್ಲಿ ನೋಡಿದರು.ಇವೆಲ್ಲಕ್ಕಿಂತ ಭಿನ್ನವಾದ ಎಲ್ಲರ ಕಣ್ಣಿಗೆ ಕಾಣದ ಮನೆ ಮನೆಗಳ ಜಗತ್ತಿನಲ್ಲಿ ಗಲ್ಲಿ ಗಲ್ಲಿಯೊಳಗೆ ಬೇರೆಯದೇ ಧಾರವಾಹಿಗಳು ನೆಡೆಯುತ್ತಿತ್ತು. ಸೌಹಾರ್ದತೆಗೆ ಸಾಧ್ಯ ಮಾಡಿಕೊಟ್ಟಿದ್ದ ಹೊರಗಿನ ಪ್ರಪಂಚ ಇದ್ದಕ್ಕಿದ್ದಂತೆ ಮುಚ್ಚಿ ಹೋಗಿ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಂಡವು.

    ಎಷ್ಟೋ ಮನೆಗಳಲ್ಲಿ ವೈವಾಹಿಕ ಜೀವನದಲ್ಲಿ ಸೋತವರು ತಾಳ್ಮೆಗೆಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಮಕ್ಕಳಿಗಾಗಿ ನೆಪ ಮಾತ್ರಕ್ಕೆ ಒಂದು ಸೂರಿನಡಿ ಬದುಕುತ್ತಿದ್ದವರು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಬೇಡದವರ ಮುಖ ನೋಡುತ್ತಾ ಅವರ ತಿವಿಯುವ ಮಾತುಗಳನ್ನು ಸಹಿಸುತ್ತಾ ತಮ್ಮ ಮನೋಸ್ವಾಸ್ಥ್ಯವನ್ನೇ ಕಳೆದುಕೊಂಡು ಹಾಳಾದರು. ಅಂತದ್ದೇ ಒಂದು ಸಂದರ್ಭದಲ್ಲಿ ಹೆಂಡತಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನ ಊರೆಲ್ಲಾ ತನ್ನ ಸ್ನೇಹಿತೆಯರು ಪರಿಚಯದವರು
    ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ವಿಶ್ ಮಾಡುವಾಗ, ಗಂಡ ಎನಿಸಿಕೊಂಡವ ಒಂದು ಕೇಕ್ ಕೂಡ ತರದೆ ನಿರ್ಲಕ್ಷ ಮಾಡಿದ, ಅವಮಾನ ಆಯಿತು ಅನ್ನೋ ಕ್ಷುಲ್ಲಕ ಕಾರಣಕ್ಕೆ ನೇಣು ಹಾಕಿಕೊಂಡಳು.
    ಮತ್ತೆ ಸಿನೆಮಾ, ಟೀವಿ ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡು ಡಿಪ್ರೆಷನ್ ಗೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಂಡರು. ಅಂತಹ ಎಷ್ಟು ಸಾವುಗಳಾದವೋ.

    ಇನ್ನು ಕೆಲವು ಕಡೆ ಇದೇ ಸರಿಯಾದ ಸಮಯ ಪೋಸ್ಟ್ ಮಾರ್ಟಂ ಮಾಡಲೂ ಯಾರಿಗೂ ಪುರುಸೊತ್ತಿಲ್ಲ ಎಂಬ ಭಂಡ ಧೈರ್ಯದಲ್ಲಿ ಮಾಡಬಾರದ ಅನ್ಯಾಯಗಳನ್ನು ಮಾಡಿ ಎಷ್ಟೋ ಕೊಲೆಗಳೂ ಆಗಿವೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಳ ಸಿಗದೆ ಪ್ರೈವೇಟ್ ಹಾಸ್ಪಿಟಲ್ ಗೆ ಎಡತಾಕಿದವರನ್ನು ಅವರ ಯೋಗ್ಯತೆಯನ್ನು ಮೀರಿಸುವಷ್ಟು ದುಡ್ಡು ಕಿತ್ತವು.

    ಒಂದೊಮ್ಮೆ ಊರಿನಿಂದ ಬಂದಾಗ ಹಾಡಿ ಹೊಗಳಿ ಉಪಚರಿಸಿ ಮುಂಬೈನವರು ನಮ್ಮ ಕಡೆ ಜನ ಎಂದು ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತಿದ್ದ ಜನರು ಇವತ್ತು ಮುಖ ತಿರುಗಿಸಿದ್ದರು.
    ಮುಂಬೈಯ ತಮ್ಮವರು ತರುವ ದುಡ್ಡಿಗೆ, ಉಡುಗೊರೆಗೆ ಏನು ಸೇವೆ ಬೇಕಿದ್ದರೂ ಮಾಡಲು ಸಿದ್ದವಿದ್ದ ಜನ ಈಗ, ಊರಿಗೇ ಬರಬೇಡಿ ಎಂದು ನಿಷೇಧ ಹೇರಿದರು. ಮುಂಬೈ ಪಾಪಗಳ ಕೂಪ, ರೋಗಗಳ ತವರು ಎಂದರು. ಸಂಬಂಧಿಕರೂ ಇಂಥ ಕಷ್ಟದ ಸ್ಥಿತಿಯಲ್ಲಿ ಮುಖ ಮುರಿಯುವ ಹಾಗೆ ನಮ್ಮಲ್ಲಿಗೆ ಬರಲೇ ಬೇಡಿ ಎಂದು‌ ಬಾಗಿಲು ಮುಚ್ಚಿಬಿಟ್ಟರು.

    ಎಲ್ಲೂ ಹೋಗಲು ಸ್ಥಳವಿರದೆ ಇಲ್ಲೇ ಇದ್ದವರ ಪರಿಸ್ಥಿತಿ ಬೇರೆಯೇ ತರ. ಹೇಗೋ ಸಂಸಾರ ಸಾಗಿಸಲೇ ಬೇಕಿದ್ದ ಅನಿವಾರ್ಯತೆ ಮನೆಗಳಲ್ಲಿ. ಖರ್ಚಿಗೆ ಹಣ ಅಗತ್ಯವಿದ್ದಷ್ಟೂ ಸಿಗದೆ ಕುಟುಂಬದ ಎಲ್ಲರಿಗೂ ಮನೋವ್ಯಥೆ. ಒಡ ಹುಟ್ಟಿದವರೊಡನೆ ಜಗಳ, ದ್ವೇಷ .. ಕೇವಲ ಒಂದೆರಡು ತಿಂಗಳಲ್ಲಿ ಎಷ್ಟೋ ಸಂಬಂಧಗಳು ಬುಡ ಮೇಲಾದವು. ಶಾಲೆಗೆ ಹೋಗದೆ ಮಕ್ಕಳು ಉಡಾಳಾದವು. ಮಕ್ಕಳ ಚೇಷ್ಟೆ ಸಹಿಸಿ ಸಹಿಸಿ ತಂದೆ ತಾಯಂದಿರು ಹೈರಾಣಾದರು. ಕೂಡು ಕುಟುಂಬಗಳಲ್ಲಂತೂ ತಾಳ್ಮೆ ಹದ ತಪ್ಪಿ ಸಣ್ಣ ಪುಟ್ಟ ಇರುಸು ಮುರುಸುಗಳೂ ದೊಡ್ಡದಾಗಿ ಒಳಗೇ ಕುದಿವ ಜ್ವಾಲಾಮುಖಿಯ ಗೂಡುಗಳಾಗಿವೆ.

    ಹೊಸ ಕನಸುಗಳನ್ನು ಕಟ್ಟಿಕೊಂಡು ಹೊಸ ಬದುಕಿಗೆ ಅಡಿ ಇಡಬೇಕಿದ್ದ ಯುವ ಚಿಗುರುಗಳು ಮುದುರಿ ಕೂತಿವೆ. ಕೆಲಸಕ್ಕಾಗಿ ಎದುರು ನೋಡುತ್ತಿದ್ದ ಯುವ ಪೀಳಿಗೆಯವರು ತಿಂಗಳುಗಟ್ಟಲೆ ಮನೆಯಲ್ಲೇ ಬಂಧಿಯಾಗಿ ಮಾನಸಿಕ ಕ್ಷೋಬೆಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲಿ ನೋಡಿದರೂ ಕಲಸಕ್ಕಾಗಿ ಬೇಡಿಕೆ ಇಡುತ್ತಿರುವವರು ಕಾಣಬರುತ್ತಿದ್ದಾರೆ. ಲಕ್ಷಾಂತರ ಸಣ್ಣ ಕೈಗಾರಿಕೆ ಘಟಕಗಳು ಮುಚ್ಚಿ ಹೋಗಿ ಕೆಲಸ ಕಳೆದು ಕೊಂಡ ಜನ ಹತಾಶರಾಗಿದ್ದಾರೆ. ಕೆಲಸದಲ್ಲಿ ಇದ್ದ ಯುವಕರು, ನವ ವಿವಾಹಿತರು ಕೆಲಸದ ಭರವಸೆಯ ಮೇಲೆ ಲೋನ್ ಮಾಡಿದ್ದವರು ಪೂರ್ತಿ ಸಂಬಳ ಸಿಗದೆ ಲೋನ್ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಸೂಚನೆಯೂ ಇಲ್ಲದೆ ಕೆಲಸಗಳಿಂದ ತೆಗೆಯಲ್ಪಟ್ಟಿದ್ದಾರೆ.

    ಬರೀ ಬಣ್ಣದ ಬದುಕನ್ನೇ ಬಿಂಬಿಸುವ ಸಿಮೆಮಾ ರಂಗವೂ ಕೂಡ ನೆಲ ಕಚ್ಚಿದೆ. ಥಿಯೇಟರ್ ಗಳು ಬಿಕೋ ಎನ್ನುತ್ತಿವೆ. ನಿಂತ ಕಾವಲುಗಾರ ತನ್ನ ಸಂಬಳವಾದರೂ ಸಿಕ್ಕೀತೋ ಇಲ್ಲವೊ ಎಂದು ತಳ ಮಳ ಪಡುತ್ತಿದ್ದಾನೆ. ಮಾಲ್ ಗಳಲ್ಲಿ ಹವಾನಿಯಂತ್ರಣ ಇಲ್ಲದೆ ಕೋಟ್ಯಾಂತರ ಬೆಲೆಯ ಸಾಮಾನುಗಳು ಹಾಳಾಗಿವೆ. ಬಾಡಿಗೆಗೆ ಜನ ಬರದೆ ಮನೆಗಳು ಖಾಲಿ ಹೊಡೆಯುತ್ತಿದೆ. ಶುರುವಿನಲ್ಲಿ ಸಹಾಯ ಮಾಡಲು ಮುಂದೆ ಬಂದವರೂ ಸದ್ಧಡಗಿಸಿ ಕೂತಿದ್ದಾರೆ. ರಾವು ಬಡೆದಂತಹ ಶಹರಿನ ಬೀದಿಯಲ್ಲಿ ಆಂಬುಲೆನ್ಸ್ ಸದ್ದುಗಳು ಒಳಗೆ ಅವಿತು ಕೂತವರ ಅಧೀರತೆ ಹೆಚ್ವಿಸುತ್ತಿವೆ. ಲೋಕಲ್ ಟ್ರೈನುಗಳು ಈ ಹಿಂದೆ ಓಡುತ್ತಲೇ ಇರಲಿಲ್ಲವೇನೋ ಎಂಬಂತೆ ನಿಂತಿವೆ. ಬಸ್ಸುಗಳೂ ಕೊರೋನಾ ವಾಹಕವೇನೋ ಎಂಬ ದಿಗಿಲು ಹುಟ್ಟಿಸುತ್ತಿವೆ.

    ಸಕಾರಾತ್ಮಕ ಬದಲಾವಣೆಗಳೂ ಆಗಿವೆ

    ಈ ಎಲ್ಲಾ ಕೆಟ್ಟ ಪರಿಸ್ಥಿತಿಯ ನಡುವೆಯೂ.. ಕೆಲವೇ ಕೆಲವು ಸಕಾರಾತ್ಮಕ ಬದಲಾವಣೆಗಳೂ ಆಗಿವೆ. ಕೊರೊನಾ ಸೋಂಕಿನ ಭಯದಲ್ಲಿ ಜನ ಜವಬ್ಧಾರಿಯುತವಾಗಿ ವರ್ತಿಸುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆ ಕಾರಣದಿಂದ ಎಲ್ಲೆಡೆ ಸ್ವಚ್ಛತೆ ತಾನಾಗಿಯೇ ಪಾಲನೆಯಾಗುತ್ತಿದೆ. ರಸ್ತೆ ನದಿ ಸಮುದ್ರ ಕಾಡುಗಳು ಸ್ವಚ್ಚತೆಯ ಸಡಗರ ಅನುಭವಿಸುತ್ತಿವೆ. ಪ್ರಧಾನಿಗಳು ಕರೆ ಕೊಡುವ ಮೊದಲೇ ಎಷ್ಟೋ ಜನ ತಾವಾಗಿಯೇ ಆತ್ಮ ನಿರ್ಭರತೆಯನ್ನು ಸಾಧಿಸಿದ್ದಾರೆ. ಕೆಲಸದವರು ಬರದ ಕಾರಣ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಬೀದಿ ಬದಿಯ ತಿನಿಸು ತಿನ್ನುವುದು ಬಿಟ್ಟು ಸ್ವತಃ ಆರೋಗ್ಯಕರ ಆಹಾರ ಮನೆಯಲ್ಲಿಯೇ ತಯಾರಿಸಿ‌ ತಿನ್ನಿತ್ತಿದ್ದಾರೆ. ಸ್ವಚ್ಛತೆಯ ಕಡೆ ಗಮನ ಹರಿಸಿ ಆರೋಗ್ಯ ಜೀವನ ಶೈಲಿ ರೂಢಿಸಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ತಾವೇ ಪಾಠ ಹೇಳಿಕೊಡುತ್ತಾ ತಾವೂ ಕಲಿಯುತ್ತಿದ್ದಾರೆ. ಬದುಕಲ್ಲಿ ಹೊಸ ಹೊಸ ಕಲಿಕೆಗಳತ್ತ ಮುಖ ಮಾಡಿದ್ದಾರೆ. ಹೊಸ ಸಾಧ್ಯತೆಗಳ ಕಡೆ ಹುಡುಕಾಟ ನೆಡೆಸಿದ್ದಾರೆ. ಒಂದಷ್ಟು ಜನ ಮನೋ ಸ್ವಾಸ್ಥ್ಯ ದೇಹ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹೊಸ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.ಆಶಾವಾದಿಗಳು ಆನ್ ಲೈನ್ ಮೂಲಕ ತಮಗೆ ಕೊಡಲು ಸಾಧ್ಯವಿರುವ ಸೇವೆ ಒದಗಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ.

    ಸಣ್ಣ ಪ್ರಮಾಣದಲ್ಲಿಯೇ ಸರಿ, ಹಣ ಗಳಿಸಲು ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಹೇಗಾದರೂ ಬೆಳೆಯಲೇ ಬೇಕು ಎನ್ನುವವರು ಕೊರೋನಾಗೂ ಸೆಡ್ಡು ಹೊಡೆದು‌ ಒಂದಲ್ಲಾ ಒಂದು ರೀತಿಯಲ್ಲಿ ಸಕ್ರಿಯರಾಗಿದ್ದಾರೆ.ಈ ವರೆಗೂ ಬಿದಿ ಬಿದಿ ತಿರುಗಿಯೇ ಮಾಡಬೇಕಿದ್ದ ಕೆಲಸಗಳು ಕಂಪ್ಯೂಟರ್ ಮೂಲಕ ಹೊಸ ವ್ಯವಸ್ಥೆಗೆ ತೆರೆದುಕೊಂಡಿವೆ.

    ಆದರೂ ಸ್ಚಚ್ಚಂದವಾಗಿ ಯಾವುದೇ ಭಯವಿಲ್ಲದೆ ಮೊನ್ನೆಯವರೆಗೂ ಬದುಕಿದ್ದ ಬದುಕಿನ ಜಾತ್ರೆ ಮುಗಿದೇ ಹೋಯಿತೇನೋ ಎಂಬ ದುಗಡದಲ್ಲಿ ಹೊಸ ಸ್ವಾತಂತ್ರ್ಯದ ಕಡೆ ಪ್ರತೀ ಮನುಷ್ಯನ ಚಿತ್ತ ನೆಟ್ಟಿದೆ.

    ಅಂಚೆ ಮುಂಚೆಯಂತಿಲ್ಲ

    ಮನೆಯಲ್ಲೋ ಹೊರಗೆ ಗೆಳೆಯರ ಸರ್ಕಲ್ಲಲ್ಲೋ ಎಲ್ಲೋ ಒಂದು ಕಡೆ ಸ್ವಲ್ಪ ಪೋಸ್ಟ್ ಆಫೀಸಲ್ಲಿ ಕೆಲಸ ಇದೆ ಹೋಗ್ಬರ್ತೀನಿ ಅನ್ನೋ ಮಾತು ಕಿವೀಗೆ ಬೀಳ್ತಾನೇ ಇರೋದು.ಊರಿನ ಗಾತ್ರಕ್ಕನುಗುಣವಾಗಿ ಪೋಸ್ಟ್ ಅಫೀಸು ಇರುತ್ತಿತ್ತು.ಅದರ ವಿನ್ಯಾಸವೇ ಮಜ . ಮುಂಭಾಗದಲ್ಲಿ ಸ್ಥಾಪಿತವಾಗಿರ್ತಿದ್ದ ಕೆಂಪು ಬಣ್ಣದ ಪೋಸ್ಟ್ ಬಾಕ್ಸು .ಒಳಗೆ ಹೋಗ್ತಿದ್ದಂತೆ ಅರ್ಧ ಫ್ಯಾಬ್ರಿಕೇಟ್ ಆಗಿರುವಂತಹ ಮರದ ತಡೆಗೋಡೆ. ಅತ್ಲಕಡೆ ಸ್ಟ್ಯಾಂಪು, ಇನ್ಲ್ಯಾಂಡ್ ಲೆಟರ್ರು, ಕಾರ್ಡು ,ಎನ್ವಲಪ್ಪು ಕೊಡುವ ಕೌಂಟರ್ರು . ಪಕ್ಕದಲ್ಲಿ ಸ್ಟೀಲಿನ ಸಣ್ಣ ತಕ್ಕಡಿ ಇಟ್ಟುಕೊಂಡು ಕುಳಿತಿರುವ ಮಹಿಳೆ . ಮನಿಯಾರ್ಡರ್ ಸೆಕ್ಷನ್ .ನಂತರದ್ದು ಮತ್ತು ತುಂಬಾ ಗಂಭೀರವಾದ ವಿಭಾಗ ಅಂದ್ರೆ ಅದು ಟೆಲಿಗ್ರಾಮ್ ಸೆಕ್ಷನ್ .

    ಈ ಕೌಂಟರಿಗೆ ಬರಬೇಕು ಅಂದ್ರೆ ಎಂತಾವ್ರದೂ ಹಾರ್ಟು ಹೊಡ್ಕೊತಾ ಇರೋದು… ಅಂತಾದ್ರಲ್ಲಿ ಒಬ್ಬ ವ್ಯಕ್ತಿ ಒಂದು ರಾಶಿ ಪತ್ರಗಳನ್ನು ಮುಂದೆ ಸುರಿದುಕೊಂಡು ಡಬ್ ಡಬ್ ಅಂತ ಹಾರ್ಟ್ ಬೀಟೇ ನಿಂತೋಗೋ ಥರ ಸೀಲು ಬಡೀತಾ ಕೂತಿರೊವ್ನು . ಹಂಗೇ ಗಮನಿಸಿದ್ರೆ ಒಂದು ಮೂಲೆಯಲ್ಲಿ ಒಂದು ಗೋಂದಿನ ನೀಲಿ ಕಲರಿನ ಡಬ್ಬ ಅದರೊಳಗೆ ಕಡ್ಡಿ ಇರ್ತಿತ್ತು. ಆ ಗೋಡೆ ಮೇಜು ಎಲ್ಲಾ ಗೋಂದಿನ ಕಲೆಗಳಿಂದ ಮಾಸೋಗಿರೋದು .


    ಮತ್ತೆ ಪತ್ರ ಬರೆಯೋದೇ ಚೆಂದ ಇರ್ತಿತ್ತು .ಕಾಗದದ ಮೇಲ್ಬಾಗದ ಮಧ್ದದಲ್ಲಿ ‘ಶ್ರೀ’ ಎಡಭಾಗದಲ್ಲಿ ‘ಕ್ಷೇಮ’ ಬಲಭಾಗದಲ್ಲಿ ದಿನಾಂಕ ಅದಕ್ಕೆ ಹೊಂದಿಕೊಂಡಂತೆ ಕೆಳಗೆ ಊರು ….ತೀರ್ಥರೂಪ ಸಮಾನರಾದ , ಗುರು ಸಮಾನರಾದ , ಸೋದರ ಸಮಾನರಾದ , ಸಣ್ಣವರಿಗೆ ಚಿರಂಜೀವಿ ….ಹೀಗೇ ಶುರುವಾಗಿ ನಾವೆಲ್ಲರೂ ಕ್ಷೇಮ ನೀವುಗಳು ಕ್ಷೇಮವಾಗಿದ್ದೀರೆಂದು ನಂಬಿರುತ್ತೇವೆ . ಪತ್ರ ಬರೆಯುತ್ತಿರುವ ವಿಷಯವೇನೆಂದರೆ ಎಂದು ಪ್ರಮುಖ ವಿಷಯ ಬರೆದು, ಈ ಕಾಗದ ತಲುಪಿದ ಕೋಡಲೇ ಪತ್ರ ಬರೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ , ವಿಶ್ವಾಸಿ , ನಂಬುಗೆಯ , ಹೀಗೆ ಬರೆದು ಎಂಡ್ ಮಾಡಿ , ಗಮ್ಮಿನಿಂದಲೋ , ಅನ್ನದ ಅಗುಳಿನಿಂದಲೋ , ಮುದ್ದೆಯಿಂದಲೋ ಅದನ್ನು ಅಂಟಿಸಿ , ತಲುಪಬೇಕಾದ ವಿಳಾಸವನ್ನು ಪತ್ರದ ಮೇಲೆ ನಮೂದಿಸಿರುವ ಬಾಕ್ಸಿನಲ್ಲಿ ಮರೆಯದೇ ಪಿನ್ ಕೋಡ್ ತುಂಬಿ …..ಏರಿಯಾ ಹತ್ತಿರದಲ್ಲಿ ಹುಣಿಸೇಮರಕ್ಕೋ, ಕೆಇಬಿ ಯವರ ಕಂಬಕ್ಕೋ, ತಾಲ್ಲೂಕು ಆಫೀಸಿನ ಗೋಡೆಗೋ ನೇತಾಕಿರುವ ಪೋಸ್ಟ್ ಬಾಕ್ಸಿಗೆ ಹಾಕುತಿದ್ದೆವು.

    ಕಬ್ಬಿಣದ ಕೆಂಪು ಡಬ್ಬದ ಬಾಯಿಗೆ ಒಂದು ಕಪ್ಪು ರೇಕಿನ ಅಲುಗಾಡುವ ನಾಲಿಗೆ ಇರೋದು ಅದರೊಳಗೆ ಹಾಕಿ…… ಒಳಗೆ ಬಿತ್ತಾ ? ಪೋಸ್ಟ್ ಮ್ಯಾನ್ಗೆ ಸಿಗುತ್ತೊ ಇಲ್ವೋ ? ಅಡ್ರೆಸ್ಸು ಸರಿಯಾಗಿ ಬರ್ದಿದ್ನಾ ? ಅಂಚೆ ಯವರು ಇದನ್ನ ತಲುಪುಸ್ತಾರ ? ಹೀಗೆ ಒಂದಷ್ಟು ಸಂದೇಹಗಳೊಂದಿಗೇ ಹಿಂದಿರುಗುತ್ತಿದ್ದೆವು .

    ನಿಜವಾಗ್ಲೂ ಆಗ ಬದುಕು ಒಂದು ದಡ ಸೇರಲು ಅಂಚೆ ಪ್ರಮುಖ ಕಾರಣ ಆಗಿರ್ತಿತ್ತು .ಕೋಟ್ಯಂತರ ಮಂದಿ ಸರ್ಕಾರಿ ನೌಕರಿಗಳಿಗೆ ಸೇರಲು ಅಂಚೆಯಿಂದ ಬಂದ ಅಪಾಯಿಂಟ್ ಮೆಂಟ್ ಲೆಟರ್ ಗಳು ಕಾರಣ. ಕೋಟ್ಯಂತರ ಜೋಡಿಗಳ ಪ್ರೇಮಪತ್ರಗಳು ಮದುವೆಗಳಾಗಲು ಕಾರಣ.ಕೋಟ್ಯಂತರ ರೂಪಾಯಿ ಮನಿಯಾರ್ಡರ್ ಗಳು ಬದುಕು ನಡೆಯಲು ಕಾರಣ .

    ಪ್ರತಿಯೊಂದು ವ್ಯವಹಾರವೂ ಪತ್ರಗಳ ಮೂಲಕವೇ ಜರುಗುತ್ತಿತ್ತು .ವ್ಯವಹಾರವೇ ಅಂತಲ್ಲ ವಿಶ್ವಾಸಕ್ಕೂ, ಸಂಬಂಧಗಳಿಗೂ ಅಂಚೆ ಕಾರಣವಾಗ್ತಿತ್ತು . ಒಂದೂರಿನ ಗಂಡನ್ನೋ ಹೆಣ್ಣನ್ನೋ ತರಬೇಕು ಅಂದ್ರೆ ಆ ಊರಿನ ಅಂಚೆಯವನ ಹತ್ತಿರ ವಿಚಾರಿಸುತ್ತಿದ್ದರು . ಮನೆಯಲ್ಲಿ ಕಾಗದಗಳ ಸಂಗ್ರಹ ಮಾಡುತ್ತಿದ್ದರು ಬಿಡುವಾಗಿದ್ದಾಗ ಅದನ್ನು ಓದಿ ತಮ್ಮ ನೆನಪಿನಂಗಳಕ್ಕೆ ಜಾರುತ್ತಿದ್ದರು . ಪತ್ರಗಳು ಅಕ್ಷರಗಳಿಂದ ಕೂಡಿರ್ತಿರ್ಲಿಲ್ಲ .ಭಾವನೆಗಳಿಂದ ಕೂಡಿರೋದು. ಪ್ರತಿಯೊಂದು ವಾಕ್ಯದಲ್ಲೂ ಗೌರವ ಆತ್ಮೀಯತೆ ಇರೋದು .ಮನೆಯಲ್ಲಿ ಓದುತ್ತಿದ್ದಂತೆ ಕಣ್ಣಂಚಲಿ ತನಗೆ ತಾನೇ ನೀರು ಜಿನುಗೋದು .

    ಅಂಚೆಯ ಟೆಲಿಗ್ರಾಮ್ ಸೇವೆಯಲ್ಲೂ ಅಷ್ಟೇ ಏನೇ ಸಾವು ಜರುಗಿದ್ದರೂ ಸಹ ಸ್ಟಾರ್ಟ್ ಇಮ್ಮೀಡಿಯಟ್ಲಿ ಅಂತಲೇ ಉಲ್ಲೇಖಿಸೊವ್ರು .ಮೌಲ್ಯಗಳ ಬೆಲೆ ಗೊತ್ತಿತ್ತು ಮತ್ತು ಶಿಸ್ತಿನ ಇಲಾಖೆ ಅದಾಗಿತ್ತು . ಮಕ್ಕಳು ಯುವಕ ಯುವತಿಯರು ಸ್ಟಾಂಪ್ ಕಲೆಕ್ಷನ್ ಮಾಡುವ ಹವ್ಯಾಸ ಹೊಂದಿದ್ದರು . ಆಗ ವಿದೇಶದಿಂದ ಬರೋ ಪತ್ರ ನೋಡಕ್ಕೇ ಅತ್ಯಾಕರ್ಷಕವಾಗಿ ಇರೋದು .ಬಿಳಿಯ ಎನ್ವಲಪ್ ಸುತ್ತಲೂ ಕೆಂಪು ನೀಲಿ ಬಣ್ಣದ ಬಾರ್ಡರ್ ಇರೋದು. ಓಡುತ್ತಿರುವ ಜಗತ್ತಿಗೆ ಹೋಲಿಸಿಕೊಂಡಾಗ ತುಸು ನಿಧಾನವೆನಿಸಿತೊ ಏನೋ ಸ್ಪೀಡ್ ಪೋಸ್ಟನ್ನು ಪರಿಚಯಿಸಿದರು .ಲ್ಯಾಂಡ್ ಲೈನ್ ಫೋನು ಚಾಲ್ತಿಗೆ ಬಂತು ನೋಡಿ …..ಅಂಚೆ ಏಕಾಏಕಿ ತನ್ನ ಚಕ್ರಾಧಿಪತ್ಯವನ್ನು ಬದಿಗಿರಿಸಿ ಸಿಂಹಾಸನದಿಂದ ಕೆಳಗಿಳಿಯಿತು . ನಂತರದ STD ISD ಫೋನು ಬೂತುಗಳು , ಒಂದು ರೂಪಾಯಿಯ ಕಾಯಿನ್ ಬೂತುಗಳು , ಪೇಜರ್ಗಳು , ಮೊಬೈಲುಗಳು , ಖಾಸಗೀ ಕೊರಿಯರ್ ಸಂಸ್ಥೆಗಳು …..ಕಾಗದವನ್ನು ಕಳೆದು ಹಾಕಿದವು .

    ತಲುಪಲು ಮೂರು ದಿನ ಸಮಯ ಕೇಳುತ್ತಿದ್ದ ಸುದ್ದಿ ಈಗ ಮೂರು ಸೆಂಕೆಂಡಿನಲ್ಲಿ ತಲುಪುತ್ತಿದೆ . ಊರಿನವನಾಗಿ , ಮನೆಯವನಾಗಿ , ಸ್ನೇಹಿತನಾಗಿ , ಸಂಬಂಧಿಕನಾಗಿ ಕಾಣುತ್ತಿದ್ದ ಅಂಚೆಯವನು ಇಂದು ಅಪರಿಚಿತರಂತೆ ಕಾಣುತ್ತಿದ್ದಾರೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಭೂಮಿಯತ್ತ ನಿಗಾ ಇಟ್ಟಿವೆಯಾ ಅನ್ಯಲೋಕ ಜೀವಿಗಳು ?

    ಭೂಮಿಗೆ ಹೊರತಾದ, ನಮ್ಮಿಂದಲೂ ಅಂದರೆ ಮನುಷ್ಯರಿಗಿಂತಲೂ ಬುದ್ಧಿವಂತರಾದ ಜೀವಿಗಳು ಇವೆಯಾ ಎಂಬ ಪ್ರಶ್ನೆ ಬಹುಕಾಲದಿಂದಲೇ ಕಾಡುತ್ತಿವೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ನಮ್ಮಿಂದಲೂ ಬುದ್ಧಿವಂತರಾದ, ಹೆಚ್ಚು ನಾಗರಿಕತೆ ಬೆಳವಣಿಗೆ ಹೊಂದಿದ 36ಕ್ಕೂ ಹೆಚ್ಚಿನ ಭೂಮಿಯನ್ನು ಹೋಲುವ ಗ್ರಹಗಳಿದ್ದು, ಅದರಲ್ಲಿ ನಾನಾ ಜೀವಿಗಳು ಜೀವಿಸಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿವೆ.

     ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳ ಕುರಿತು ನಾಟಿಂಗ್ ಹ್ಯಾಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸದಾಗಿ “ಕಾಸ್ಮಿಕ್ ಇವಲ್ಯೂಶನ್” ಎಂಬ ಸಿದ್ಧಾಂತವನ್ನು ಮಂಡಿಸಿದ್ದು, ನಮ್ಮ ಬ್ರಹ್ಮಾಂಡದಲ್ಲೇ ಇಂತಹ ಕನಿಷ್ಠವೆಂದರೂ 36 ಬುದ್ಧಿವಂತ ಜೀವಿಗಳಿವೆ ಎಂದು ಪ್ರತಿಪಾದಿಸಿದ್ದಾರೆ.

    ಈ ಕುರಿತು ಅಧ್ಯಯನ ವರದಿಯು ಆಸ್ಟ್ರೋಫಿಸಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಬೇರೆ ಗ್ರಹಗಳು ಮಾತ್ರವಲ್ಲ ಭೂಮಿಯಲ್ಲೇ ಅಂತಹ ನಮಗೆ ಗೋಚರವಾಗದೆ ಉಳಿದಿರುವ ಜೀವಿಗಳಿರಬಹುದು. ಇದಕ್ಕೆ ಮೆಟಾಲಿಸಿಟಿ ಡಿಸ್ಟ್ರಿಬ್ಯೂಶನ್ ಕಾರಣವಿರಬಹುದು ಎಂದು ತರ್ಕಿಸಿದ್ದಾರೆ.

    ಆದರೆ ಅನ್ಯ ಲೋಕ ನಾಗರಿಕತೆಯು ಎಲ್ಲಿರಬಹುದು ಎಂಬ ಪ್ರಶ್ನೆಗೆ ಇದರಲ್ಲಿ ಉತ್ತರವಿಲ್ಲ. ಆದರೆ, ಭೂಮಿಯಲ್ಲಿ ಮಾನವ ವಿಕಾಸವು ಸುಮಾರು 5 ಶತಕೋಟಿ ವರ್ಷಗಳನ್ನು ತೆಗೆದುಕೊಂಡಿದೆ. ಇದಕ್ಕೆ ಮೊದಲು ಕೂಡ ನಮ್ಮ ರೀತಿಯಲ್ಲೇ ಸೌರ ವ್ಯೂಹಗಳು ಅನೇಕವಿದ್ದು, ಅಲ್ಲಿ ಕೂಡ ಭೂಮಿ ರೀತಿಯ ಗ್ರಹಗಳು ಇದ್ದವು. ಅಲ್ಲಿ ನಮ್ಮಿಂದ ಮೊದಲೇ ವಿಕಾಸ ಆರಂಭವಾಗಿತ್ತು. ಹೀಗಾಗಿ ನಮಗೆ ಹೋಲಿಸಿದರೆ ಅವರು ನೂರಾರು ಪಟ್ಟು ಹೆಚ್ಚು ಬುದ್ಧಿವಂತರಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದೆ.

    ಬಾಯಿ ಬಿಡದ ಅಮೆರಿಕ

    ಅಮೆರಿಕವು ಅನ್ಯಜೀವಿಗಳ ಅಸ್ತಿತ್ವದ ಕುರಿತು ಸಾಕಷ್ಟು ವರ್ಷಗಳಿಂದಲೇ ಸಂಶೋಧನೆ ನಡೆಸುತ್ತಲೇ ಬಂದಿದೆ. ಇದಕ್ಕಾಗಿ ಪ್ರತ್ಯೇಕ ತಂಡವನ್ನೂ ಕೂಡ ರಚಿಸಿದೆ. ಆದರೆ ಅದರ ಪರಿಣಾಮ ಏನು ಎಂಬ ಬಗ್ಗೆ ವಿವರ ಹೊರಗೆ ಬರುತ್ತಿಲ್ಲ. ಅದಕ್ಕೆ ಕಾರಣ ಅದು ಟಾಪ್ ಸೀಕ್ರೇಟ್ ಹಣೆಪಟ್ಟಿ ಕಟ್ಟಿಕೊಂಡಿದೆ. ನೇವಡಾದಲ್ಲಿರುವ ಅಮೆರಿಕ ರಹಸ್ಯ ನೌಕಾಪಡೆ ನೆಲೆಯ ಕುರಿತು ಈ ಬಗ್ಗೆ ಸಂದೇಹಗಳು ಮೂಡಿದ್ದರೂ ಇನ್ನೂ ಯಾವುದೇ ಸ್ಪಷ್ಟ ಚಿತ್ರಣ ಪಡೆಯಲು ಜಗತ್ತಿನ ಯಾವ ರಾಷ್ಟ್ರಗಳಿಗೂ ಸಾಧ್ಯವಾಗಿಲ್ಲ.

    ಸೈಟ್ ನಂ. 51 ಎಂದು ಕರೆಯಲ್ಪಡುವ ಇದನ್ನು 1947ರಲ್ಲಿ ಸ್ಥಾಪಿಸಲಾಯಿತು. ನ್ಯೂ ಮೆಕ್ಸಿಕೋದಲ್ಲಿರುವ ಈ ಪ್ರದೇಶದಲ್ಲಿ ಆಗ ಅಮೆರಿಕದ ವಿಮಾನವೊಂದು ಪತನವಾಯಿತು. ಅದಕ್ಕೆ ಕಾರಣ ಅನ್ಯ ಜೀವಿಗಳ ಬಾಹ್ಯಾಕಾಶ ನೌಕೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ಈಗಲೂ ಆ ನೌಕೆಯ ಅವಕಾಗಳು ಇವೆ. ಅದರ ಸಂಶೋಧನೆ ಸತತವಾಗಿ ನಡೆಯುತ್ತಿರುವುದರಿಂದಲೇ ಅದನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿದೆ.

    ಸಾಂದರ್ಭಿಕ ಚಿತ್ರ : Greg Rakozy on Unsplash

    ಅರ್ಥಪೂರ್ಣ ಕೆಲಸಗಳನ್ನು ಬಿಟ್ಟು ಇಷ್ಟು ದಿನ ನಾವು ಯಾವುದರ ಬೆನ್ನು ಬಿದ್ದು ಓಡುತ್ತಿದ್ದೆವು

    ಲಾಕ್ ಡೌನ್ ಸಮಯದಲ್ಲಿಪ್ರಪಂಚದ ಬಹುತೇಕರ ಮೇಲೆ ಧುತ್ತೆಂದು ಸಮಯದ ಸುರಿಮಳೆಯಾಗಿದೆ. “ಮನೆಯಲ್ಲಿಯೇ ಇರಿ, ಹೊರಬರಬೇಡಿ “ ಎನ್ನುವ ಸರ್ಕಾರದ ಅಣತಿಯ ಜೊತೆ ಎಲ್ಲ ಸಾರ್ವಜನಿಕ ಸಮಾರಂಭಗಳು, ಸಮಾವೇಶಗಳು,ಕೆಲಸ ಕಾರ್ಯಗಳು, ಮದುವೆ-ಮುಂಜಿ,ದೇವರ ಕೆಲಸಗಳು, ಪ್ರವಾಸಗಳು, ಓಡಾಟ ಇತ್ಯಾದಿಗಳು ರದ್ದಾಗಿವೆ.

    ದಿನವೊಂದರಲ್ಲಿ ಎಲ್ಲ ಮನುಷ್ಯರಿಗೆ ದೊರಕುವುದು ಕೇವಲ 24 ಗಂಟೆಗಳು ಮಾತ್ರ.ಈ ಸಮಯದಲ್ಲಿ ಪ್ರತಿಯೊಬ್ಬರು ಮಾಡುವ ಮೂಲಭೂತ ಕೆಲಸಗಳು ಒಂದೇ. ಆದರೆ ಪ್ರತಿಯೊಬ್ಬರ ಸಮಯವೂ ಅತ್ಯಂತ ಭಿನ್ನವಾಗಿ ವಿನಿಯೋಗವಾಗುತ್ತದೆ.ಒಂದಷ್ಟು ಜನರಿಗೆ ದಿನದಲ್ಲಿ ಸಾಕಾಗುವಷ್ಟು ಸಮಯವಿರುತ್ತದೆ, ಇತರರಿಗೆ ಮಾಡಬೇಕು ಅಂದುಕೊಂಡ ಕೆಲಸಗಳನ್ನೆಲ್ಲ ಮಾಡಲು ದಿನವೊಂದರ ಸಮಯ ಸಾಕಾಗುವುದಿಲ್ಲ. ಮತ್ತೆ ಕೆಲವರಿಗೆ ಹಗಲು-ರಾತ್ರಿಗಳನ್ನು ಅರೆ-ಬರೆ ಬೆರೆಸಿದರೂ ಕೆಲಸಗಳು ಹರಿಯುವುದಿಲ್ಲ.ಕೆಲಸ ಮತ್ತು ಮನೆಕೆಲಸಗಳ ನಡುವೆ ವೈಯಕ್ತಿಕ ಆಸಕ್ತಿಗಳಿಗಾಗಿ ಸಮಯವನ್ನು ನೀಡಲಾಗದ ಮತ್ತೊಂದು ಸಮುದಾಯವೂ ಇದೆ.“ಅಯ್ಯೋ.. ಬೇರೆಲ್ಲ ಮಾಡೋಕೆ ಸಮಯವೇ ಇಲ್ಲ “ ಎನ್ನುವ ಅಂಬೋಣ ಅತ್ಯಂತ ಸಾಮಾನ್ಯವಾಗಿ ಈ ಎಲ್ಲರಿಂದ ಕೇಳಿಬರುತ್ತಿತ್ತು. ಇಂತವರಿಗೆಲ್ಲ ಲಾಕ್ ಡೌನ್ ನಲ್ಲಿ ಸಿಕ್ಕ ಅಧಿಕ ಬಿಡುವಿನ ಸಮಯ  ಅತ್ಯಂತ ಸ್ವಾಗತಾರ್ಹವಾದ ವಿಚಾರವಾಯ್ತು.

    ಒಂದಿಷ್ಟು ಸಮಯ ಸಿಕ್ಕರೆ ಅಥವಾ ರಜಾ ಹಾಕಿಕೊಂಡರೆ ಆ ಸಮಯದಲ್ಲಿ ಏನನ್ನಾದರೂ ಮಾಡಲು ಪೂರ್ವ ನಿರ್ಧರಿತ ಯೋಜನೆಗಳನ್ನು ಹಾಕಿಕೊಳ್ಳುವುದೇ ಇದುವರೆಗೆ ಎಲ್ಲರ ಅಭ್ಯಾಸವಾಗಿತ್ತು. ರಜೆಯ ಸಮಯವನ್ನು ಪ್ರವಾಸಕ್ಕೋ ಮತ್ತೊಂದಕ್ಕೋ ಮೀಸಲಿಡುತ್ತಿದ್ದ ಜನರೇ ಹೆಚ್ಚಿದ್ದರು.ಇಂಥವರಿಗೆಲ್ಲ ನಿಜವಾದ ಅರ್ಥದಲ್ಲಿ ’ ಬಿಡುವು ’ ಅಂದರೆ ಏನು ಎಂದು ತಿಳಿದುಕೊಳ್ಳುವ ಅತ್ಯಂತ ವಿರಳ ಅವಕಾಶವನ್ನು ಲಾಕ್ ಡೌನ್ ದೊರಕಿಸಿಕೊಟ್ಚಿತ್ತು.

    ಮುಂದಿನ ದಿನಗಳು ಹೇಗೆ? ಎನ್ನುವ ಚಿಂತೆ

    ಪ್ರಪಂಚದೆಲ್ಲೆಡೆ ಬಹುತೇಕರು ಮನೆಯಲ್ಲೇ ಮಾಡಬಹುದಾದ ಕೆಲಸಗಳಿಗೆ ಉತ್ಸಾಹದಿಂದ ಕೈ ಹಾಕಿದರು. ಸಮಯವನ್ನು ಕುಟುಂಬದ ಜೊತೆ ಬೆರೆಯುತ್ತ, ಪ್ರಪಂಚದ ಬಗ್ಗೆ ಮಾತಾಡುತ್ತ ಕಳೆದರು. ಮಾಧ್ಯಮಗಳ ಪೈಪೋಟಿ ಬಿತ್ತರವನ್ನು ಓದುತ್ತ, ಕೇಳುತ್ತ “ಮುಂದಿನ ದಿನಗಳು ಹೇಗೆ?” ಎನ್ನುವ ಚಿಂತೆ ಮಾಡಿದರು. ಸಾವು ಮತ್ತು  ಆರ್ಥಿಕ ನೋವುಗಳನ್ನು ಹಲವರೊಡನೆ ಫೋನಿನಲ್ಲಿಯೂ ಹರಟಿದರು.ಮನೆ,ಕಪಾಟು, ಬಟ್ಟೆ, ಪುಸ್ತಕ ಇತ್ಯಾದಿ ಸ್ವಚ್ಛಗೊಳಿಸಿದರು. ಕುಂಡದಲ್ಲೋ, ಮನೆಯ ತೋಟದಲ್ಲೋ ಕೈ ಮಣ್ಣಾಗಿಸಿಕೊಂಡು ಮುಗಿಸಿದ್ದರು.  ತರಾವರಿ ಅಡುಗೆಗಳನ್ನು ಮನೆಯವರೆಲ್ಲ  ಕೂಡಿ ಮಾಡಿ, ಒಟ್ಟಿಗೆ ಕುಳಿತು ಉಂಡು ಖುಷಿಪಟ್ಟರು.ದೇಹ ತೂಕದ ನಿಯಂತ್ರಣಕ್ಕಾಗಿಮನೆಯಲ್ಲಿಯೇ ಮಾಡಬಹುದಾದಹೊಸ ವ್ಯಾಯಾಮಗಳನ್ನು ಶುರುಮಾಡಿದರು . ಹೆಚ್ಚಿನ ನಿದ್ದೆಯ ಸುಖವನ್ನೂಅನುಭವಿಸಿದರು..ಟೀವಿ, ಸಿನಿಮಾ, ಪುಸ್ತಕಗಳು ಮತ್ತು ಅಂತರ್ಜಾಲಗಳಲ್ಲಿ ಬಹುಕಾಲ ಕಳೆದರು.

    ಸದಾ ಬರೆಯುವ ಜಯಂತ ಕಾಯ್ಕಿಣಿಯಂತವರು “ ಸದಾ ಬರೆಯುತ್ತಿದ್ದವರಿಗೆ ಇದು ಓದುವ ಕಾಲವಾಗಬಹುದು“” ಎಂದರು. ಥಟ್ಟಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರರು “ ಸದಾ ಓದು,ಬರಹ, ರಿಕಾರ್ಡಿಂಗ್ ಗಳಲ್ಲಿ ತೊಡಗಿರುತ್ತಿದ್ದ ನನಗೆ ಇದೀಗ ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ನೋಡಲುಸಮಯಸಿಕ್ಕಿದೆ“ ಎಂದರು.ಒಟ್ಟಾರೆ, ಎಲ್ಲರ ಸಮಯಗಳು ಹೊಸ ದಿಕ್ಕುಗಳಲ್ಲಿ ಚಲಿಸಿದವು.

    ಇಂಗ್ಲೆಂಡಿನಲ್ಲಿ

    ಇಂಗ್ಲೆಂಡಿನಲ್ಲಿ ಇದೀಗ ಬೇಸಿಗೆಯ ಪ್ರವೇಶವಾಗಿರುವ ಕಾರಣ ಮನೆಯ ಕೈ ತೋಟಗಳಲ್ಲಿ ಜನರು ತೊಡಗಿಕೊಂಡಿದ್ದಾರೆ. ಅದೆಷ್ಟರ ಮಟ್ಟಿಗೆಂದರೆ ಪ್ರತಿ ವರ್ಷಕ್ಕಿಂತ ಮೂರುಪಟ್ಟು ಹೆಚ್ಚಿನತೋಟಗಾರಿಕೆಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೈ ತೋಟ ಮಾಡಲು ಕೊಳ್ಳಬಹುದಾದ ವಸ್ತುಗಳನ್ನು ಮಾರುವ ಇಲ್ಲಿನ ಮಾರುಕಟ್ಟೆ ಜನರ ಬೇಡಿಕೆಯನ್ನು ಪೂರೈಸಲಾಗದೆ ತತ್ತರಿಸಿದೆ.ಬೇಕಿಂಗ್ ನಲ್ಲಿ ಆಸಕ್ತಿಯಿರುವ ಜನರು ಮನೆಯಲ್ಲಿಯೇ ಬ್ರೆಡ್, ಕೇಕ್, ಪಿಜ್ಜಾ, ಸ್ಕೋನ್ ಗಳನ್ನು ಬೇಕ್ ಮಾಡುವ ಕೆಲಸಕ್ಕಿಳಿದಿದ್ದಾರೆ. ಅದೆಷ್ಟರ ಮಟ್ಟಿಗೆಂದರೆ ಬೇಕಿಂಗ್ ನಲ್ಲಿ ಉಪಯೋಗಿಸುವ ಸಾಮಗ್ರಿಗಳು ಇವತ್ತಿಗೂ ದೊರಕದ ಮಟ್ಟದಲ್ಲಿ ಬೇಡಿಕೆಯಲ್ಲಿವೆ.ಇವರಲ್ಲಿ ಬಿಡುವೆಂದರೆ ’ಬೇಕಿಂಗ್ “ ಎನ್ನುವ ಪರ್ಯಾಯ ಕಲ್ಪನೆ ಇದ್ದೀತೇ ಎಂಬ ಸೋಜಿಗವನ್ನೂ ಹುಟ್ಟುಹಾಕಿದೆ.ಅಷ್ಟೇ ಅಲ್ಲದೆ ’ ಸೈಕ್ಲಿಂಗ್ ನಲ್ಲಿ ಪ್ರತಿದಿನ ತೊಡಗಿಕೊಳ್ಳಬೇಕೆಂದು ಹಂಬಲಿಸುತ್ತಿದ್ದ ಜನರು ಅದೆಷ್ಟು ಶರವೇಗದಲ್ಲಿ ಆ ಕಲ್ಪನೆಯನ್ನು ಸಾಕಾರಕ್ಕೆ ತಂದು ಸವಾರಿ ಮಾಡಿದ್ದಾರೆಂದರೆ ಸೈಕಲ್ ಗಳನ್ನು ಖರೀದಿಸಿದರೂಅವು ತಯಾರಾಗಿ ಬರಲು ಬಹುಕಾಲಕಾಯುವಂತಾಗಿದೆ.

    ಒಟ್ಟಾರೆ ಬದುಕು ಏಕತಾನತೆಯಲ್ಲಿ ಓಡುತ್ತಿದ್ದಾಗ ಜನರು ಯಾವುದಕ್ಕೆ ಆದ್ಯತೆ ನೀಡುತ್ತಿದ್ದರೋ ಈಗ ಅವೆಲ್ಲ ತಮ್ಮ ಬೇಜಾರು ಬರಿಸುವ ಓಘವನ್ನು ಮುರಿದು ಬಿಡುವಿನ ಸಮಯಕ್ಕೆ ಹೊಸ ದಿಸೆಗಳನ್ನು ಕಲ್ಪಿಸಿವೆ.

    ಜನರ ಚಟುವಟಿಕೆಗಳು ಈ ಮೊದಲು ಒಂದು ಬಗೆಯ ಒತ್ತಡದಲ್ಲಿ ಕಳೆಯುತ್ತಿದ್ದವೇ? ಅಥವಾ ಮಾರ್ಕೆಟಿಂಗ್ ಹುನ್ನಾರಗಳ ಒತ್ತಡಕ್ಕೆ ಸಿಲುಕಿ ಅವುಗಳ ಸ್ವರೂಪ ಲಬುಕಿಹೋಗಿತ್ತೇ ಎನ್ನುವ ವಿಚಾರಗಳಿಗೆ ಇಂಬುಕೊಟ್ಟಿವೆ. ನಾವೂ ಎಲ್ಲರಂತೆ ಏನೇನೋ ಮಾಡಬೇಕು ಎನ್ನುವ ’ಮೂಷಿಕ ಸ್ಪರ್ಧೆ’ ಗೆ ನಮ್ಮನ್ನು ನಾವು ಒಡ್ಡಿಕೊಂಡು ಚಡಪಡಿಕೆಗೆ ಬಿದ್ದಿದ್ದೆವೇ ಎನ್ನುವ ಬಗ್ಗೆ ಯೋಚಿಸುವಂತೆ ಮಾಡಿದೆ.ತಮ್ಮ ಮನಸ್ಸು ಮತ್ತು ಮನೆಯಲ್ಲಿ ಮಾಡಬಹುದಾದಎಷ್ಟೊಂದು ಅರ್ಥಪೂರ್ಣ ಕೆಲಸಗಳನ್ನು ಬಿಟ್ಟು ಇಷ್ಟು ದಿನ ನಾವು ಯಾವುದರ ಬೆನ್ನು ಬಿದ್ದು ಓಡುತ್ತಿದ್ದೆವು ಎನ್ನುವ ಪ್ರಶ್ನೆಗಳು ಎದ್ದಿವೆ.

    ಥಟ್ಟನೆ ದೊರೆತ ಈ ಅಧಿಕ ಬಿಡುವಿನ ಸಮಯ ಹಲವು ಗೊಂದಲಗಳನ್ನು ಸೃಷ್ಟಿಸಿದೆ ಎನ್ನುವುದು ಕೂಡ ಸುಳ್ಳಲ್ಲ.  ಯಾಕೆಂದರೆ ಬದಲಾವಣೆಗಳು ಕೆಲವರಲ್ಲಿ ಅಸಾಮಾಧಾನಗಳನ್ನು ಸೃಷ್ಟಿಸಬಲ್ಲವು.

    ಉದ್ಯೋಗಸ್ಥ ಮಹಿಳೆಯರ ಗೃಹಬಂಧನ

    ಮೊದ ಮೊದಲಿನ ಆಘಾತದ ನಡುವೆ, ತಟ್ಟನೆ ಸಿಕ್ಕ ಸಮಯದ ಅವಕಾಶವನ್ನು ಉಪಯೋಗಿಸಿಕೊಂಡು ಉಕ್ಕಿ ಹರಿದ ಸೃಜನಸೀಲ ವಾಟ್ಸಾಪ್ ಮೆಸೇಜುಗಳು,ಕವನಗಳು, ಜೋಕುಗಳು ಇದೀಗ ಹಳಸಲಾಗುತ್ತಿವೆ. ಮನೆಯಲ್ಲೇ ಉಳಿದ ಗಂಡ,ಮಕ್ಕಳಿಗೆ ಮಾಡಿ ಹಾಕಿ ಸುಸ್ತಾದ ಗೃಹಿಣಿಯರು ರೋಸಿಹೋಗಿದ್ದಾರೆ. ಕೆಲಸದ ನಡುವೆಯಾದರೂ ಕೆಲ ಹೊತ್ತು ಬಿಡುವು ಸಿಗುತ್ತಿದ್ದ ಉದ್ಯೋಗಸ್ಥ ಮಹಿಳೆಯರು ಗೃಹಬಂಧನದಲ್ಲಿ ನಲುಗಿದ್ದಾರೆ. ಇನ್ನು ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಹೊರಗೇ ಸುತ್ತುತ್ತಿದ್ದ ಗಂಡಸರು, ತರುಣ, ತರುಣಿಯರ ಕಾಲಿಗೆ ಬೇಡಿ ಬಿದ್ದು ದಿಗ್ಭ್ಹ್ರಾಂತಿ ಸ್ಥಿತಿಯಲ್ಲಿದ್ದಾರೆ. ಟಿ.ವಿ. ಯ ರಿಮೋಟಿಗೂ ಮನೆಗಳಲ್ಲಿ ಜಗಳವಾಗುತ್ತಿವೆ.

    ಸದಾ ಕೆಲಸಗಳಲ್ಲೇ ಮುಳುಗಿ ಅರೆಕ್ಷಣ ವ್ಯರ್ಥವಾದರೂ ಚಡಪಡಿಸುತ್ತಿದ್ದ ಮತ್ತೊಂದಷ್ಟು ಜನರಲ್ಲಿ “ಮನೆಯಲ್ಲಿಯೇ ಇರಿ…” ಎಂಬ ಸಾರ್ವಜನಿಕ ಕರೆ ಬಂದಾಗ ಮೊದ ಮೊದಲಿಗೆ ಆಶ್ಚರ್ಯ, ಹೊಸದೊಂದು ಉತ್ಸಾಹ, ಅನಿರೀಕ್ಷಿತ ಘಟನೆ ನಡೆಯುತ್ತಿರುವ ಉದ್ರೇಕವನ್ನು ಸೃಷ್ಟಿಸಿತು.ಅದರ ಹಿಂದೆಯೇ ’ ’ಸಮಯವಿಲ್ಲ ’ ಎನ್ನುವ ಸಮಸ್ಯೆ  ಬಗೆಹರಿದ ಕೂಡಲೇ ಥಟ್ಟನೆ ದೊರೆತ ಅನಿರೀಕ್ಷಿತ ಸಮಯಕ್ಕೆ ಹೊಂದಿಕೊಳ್ಳಲು ಇವರು ಹೆಣಗಿದ್ದೂ ಉಂಟು!

    ಸಮಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುವ ಈ  ಗುಂಪಿನ ಜನರಲ್ಲಿ ತಮ್ಮ ಅಥವಾ ಇತರರ ಸಮಯದ ಬಗ್ಗೆ ಬಹಳ ಗೌರವವಿರುತ್ತದೆ. ಮಾನಸಿಕವಾಗಿ, ಸಮಯ ಎನ್ನುವುದು ಇವರ ಅಧೀನದಲ್ಲಿಲ್ಲದಿದ್ದರೆ ಅಧೀರರಾಗುವ ರೀತಿಯ ಜನರಿವರು. ಸಮಯವನ್ನು ನಿಯಂತ್ರಿಸಲಾಗದಿದ್ದರೆ ಇವರಲ್ಲಿ ಆತಂಕ , ಅಸಮಾಧಾನ, ಕಿರಿ-ಕಿರಿಗಳು ಮೂಡಿ ಒಂದ ಬಗೆಯ ನಿರಾಶೆ ಮತ್ತು ಋಣಾತ್ಮಕ ಭಾವನೆಗಳನ್ನು ಮೂಡಿಸುತ್ತವೆ. ಇವರ ಸಂತೋಷವೆಲ್ಲ ’ಸಮಯ ಯಾನ ’ ದಲ್ಲಿ ತಾವೆಷ್ಟು ಉಪಯಕ್ತ ಅಥವಾ ಉತ್ಪಾದಕ ಕೆಲಸಗಳನ್ನು ಮಾಡಿದೆವು ಎನ್ನುವುದ ಮೇಲೆ ಆಧರಿಸಿರುವ ಕಾರಣ ಉಪಯೋಗವಾಗದೆ ಉರುಳಿಹೋಗುವ ಕ್ಷಣಗಳು ಅವರಲ್ಲಿ ಅಭದ್ರತೆಯನ್ನು ಮೂಡಿಸುತ್ತವೆ.ಒಂದು ರೀತಿಯಲ್ಲಿ, ಕೆಲಸಕ್ಕೆ ದಾಸರಾದ, ಸಮಯಕ್ಕೆ ಕಟ್ಟುಬಿದ್ದ ವ್ಯಸನಿಗಳಿವರು. ಸಮಯ ಮತ್ತು ಕೆಲಸ ಇವರ ಲೆಕ್ಕದಲ್ಲಿ ಯಾವತ್ತೂ ಜಂಟಿ ಪದಗಳು. ಕೆಲಸವಿಲ್ಲದ ಸಮಯ ಇವರಲ್ಲಿ ಸಹಜವಾಗಿಯೇ ಅಸಮಾಧಾನದ ವಿಚಾರವಾಗಿದೆ. ಇಂಥವರಿಗೆ ಲಾಕ್ ಡೌನ್ ಸಮಯ ಹ್ಯಾಬಿಟ್ ಬ್ರೇಕರ್ ( ಹವ್ಯಾಸಗಳನ್ನ ಮುರಿಯುವ ಸಾಧನ) ನಂತೆ ಕೆಲಸ ಮಾಡಿದೆ.

    ಜೊತೆಗೆ ಜೀವನದಲ್ಲಿ ಬ್ಯುಸಿಯಾಗಿರುವುದು ಒಂದು ಬಗೆಯ ಸಾಮಾಜಿಕ  ಘನತೆ ಮತ್ತು ಮಹತ್ವಕ್ಕೆ ತಳುಕುಹಾಕಿಕೊಂಡ ವಿಚಾರ. ಒಂದು ವರ್ಗದ ಜನರಲ್ಲಿ ಇದು  ಫ್ಯಾಶನ್ ಕೂಡ.ಸ್ವಂತ ಉದ್ಯೋಗ ಇರುವವರಿಗೆ ಇದು ಆದಾಯ ಮೂಲದ ಪ್ರಶ್ನೆ. ಮಾಧ್ಯಮಗಳು ಕೂಡ ಅವಿರತ ಕೆಲಸ ಮಾಡುವ ಮತ್ತು ಸಾಧಿಸುವವರನ್ನು ಹೊಗಳುವ ಕಾರಣ ಈ ಕೆಲಸದ ಗಾಣಕ್ಕೆ ಹಲವರು ಆಕರ್ಷಿತರಾಗುವುದೂ ಉಂಟು.ಇಂತಹ ಇನ್ನು ಕೆಲವರು ತಮ್ಮ ಕೈಲಾಗದ ಗುರಿಗಳನ್ನೆಲ್ಲ ಸಿಕ್ಕ ಈ ಸಮಯದಲ್ಲಿ  ಹಾಕಿಕೊಂಡು, ಸಾಧಿಸಲು ಸಾಧ್ಯವಾಗದೆ ಅಪರಾಧೀ  ಮನೋಭಾವದಲ್ಲಿ ಬದುಕಬಹುದು.

    ಹಾಗಂತ ಎಲ್ಲರಿಗೂ ಇವೇ ಗೊಂದಲಗಳಿವೆಯೆಂದು ಹೇಳುತ್ತಿಲ್ಲ. ಮೇಲೆ ಹೇಳಿದಂತೆ ಕೆಲವರು ಸಿಕ್ಕ ಸಮಯದ ಉಪಯೋಗ ಪಡೆದು ಹೊಸ ಯೋಜನೆಗಳಿಗೆ ನಾಂದಿಹಾಡಿದ್ದಾರೆ. ಬಹುದಿನದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತಯಾರಾಗಿದ್ದಾರೆ.ಅಂತರ್ಗತ ಲೋಕದ ಅವಲೋಕನಕ್ಕೂ ಕೈ ಹಾಕಿದ್ದಾರೆ.ಹಳೆಯ ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಸಮಯದ ಜೊತೆ ಮನುಷ್ಯನ ನಂಟು ಹಲವು ಬಗೆಯವಾದರೂ ಅನಿರೀಕ್ಷಿತವಾಗಿ, ಬಲವಂತವಾಗಿ, ಅಸಹಜವಾಗಿ ಜಗತ್ತಿನ ಬಹುತೇಕರಿಗೆ ಒಟ್ಟಿಗೆ ಸಮಯ ದೊರಕಿದರೆ ಅದರ ಪ್ರಯೋಜನ ಬಹಳ ವಿರಲಾರದೇನೋ?-ಎನ್ನುವ ವಾದಗಳೂ ಇವೆ.

    ಮಕ್ಕಳಿಗೆ ಹಲವು ದೊಡ್ಡ ಪರೀಕ್ಷೆಗಳು ರದ್ದಾಗಿ, ಆಟೋಟಗಳು ನಿಂತು ಹೋಗಿ ಆಲಸ್ಯ ಕಾಡಿದೆ. ಅವರಿಗೆ ಗುರಿಯಿಲ್ಲದಂತಾಗಿದೆ. ಸಮಯದ ಪರಿಮಿತಿಯಲ್ಲಿ ನಡೆಸಬೇಕಾದ ಪರೀಕ್ಷೆಯ ತಯಾರಿ, ದೊಡ್ಡ ಪರೀಕ್ಷೆಗಳನ್ನು ಬರೆವ ಅನುಭವ, ಆತಂಕ, ಫಲಿತಾಂಶ, ಸಾಧನೆ ಯಾವುದಕ್ಕೂ ಅವಕಾಶವಿರದ ಈ ವರ್ಷ ಪ್ರಪಂಚದಾದ್ಯಂತ ಒಂದು ತಲೆಮಾರಿನ ಮಕ್ಕಳು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆನ್ ಲೈನ್ ಪಾಠಗಳು ಇತ್ಯಾದಿ ಬಲವಂತದ ’ಹೊಸತು ’ಗಳ ಸವಾಲುಗಳನ್ನು ಎದುರಿಸಿದ್ದಾರೆ.ಜನಸಾಮಾನ್ಯರಿಗೆ ಸಿಕ್ಕಿರುವ ಈ ಅಧಿಕ ಬಿಡುವಿನ ಸಮಯ ನಿಜಕ್ಕೂ ಅವರ ಹಿಡಿತ ಮೀರಿದ ಹಲವು ಫಲಿತಾಂಶಗಳನ್ನು ನೀಡಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿದೆ.

    ಸಮಯದ ಅಭಾವದಿಂದ ಊಟ ಮಾಡುವುದನ್ನು ಕೂಡ ದಿನದಲ್ಲಿ ಮಾಡಬೇಕಾಗಿದ್ದ ’ ಕೆಲಸಗಳ ಪಟ್ಟಿ’ ಯಲ್ಲಿ ಇಟ್ಟುಕೊಂಡು ಕೆಲಸಮಾಡುತ್ತಿದ್ದ ಮಂದಿಗೆ ಸಮಯ ಸಿಕ್ಕಿದೆ. ಆದರೆ ಸಾವು-ನೋವಿನ ಸುದ್ದಿಗಳ ನಡುವೆ ಅವರುತಮ್ಮ ಊಟವನ್ನು ಸಂತಸದಿಂದ ನುಂಗಲಾಗದೆ ಒಂದಷ್ಟು ಮಟ್ಟಿಗೆ ಗಂಟಲಲ್ಲೇ ಸಿಲುಕಿಕೊಂಡಂತೆ ಹೆಣಗುತ್ತಿದ್ದಾರೆ. ಸರ್ಕಾರವೇ ನೀಡುತ್ತಿರುವ ಬಿಟ್ಟಿ ಊಟಕ್ಕೂ ಸೂತಕದ ಕಳೆಯಿರುವಂತೆನಿಸುತ್ತಿದೆ.

    ಬರವಣಿಗೆಯಲ್ಲಿ ತೊಡಗಿಕೊಂಡವರಿಗೆ ಸಮಯ ಸಿಕ್ಕರೂ ಜೀವನದ ಹಲವು ಮಜಲುಗಳಲ್ಲಿ ದೊರೆವ ಪ್ರೇರೇಪಣೆಯಿಲ್ಲದೆ ನಿರುತ್ಸಾಹ ಕಾಡಿದೆ. ಪುಸ್ತಕ ಪ್ರಕಟಣೆ, ಮಾರಾಟ, ವಿತರಣೆ ಎಲ್ಲವೂ ನಿಂತು ಹೋಗಿ, ಯಾವ ಉದ್ದೇಶಕ್ಕೆ ಬರೆಯುವುದು ಎಂಬಂತಾಗಿದೆ. ಹಲವಾರು ಪತ್ರಿಕೆಗಳ ಪ್ರಕಟಣೆಗಳು ನಿಂತುಹೋಗಿದೆ. ಎಲ್ಲ ಕಷ್ಟಗಳ ನಡುವೆ ಹೊರಬರುತ್ತಿರುವ ದಿನ ಪತ್ರಿಕೆ, ಇನ್ನಿತರ ವಾರಪತ್ರಿಕೆಗಳು ಓಡಾಟಗಳ ನಿರ್ಭಂದಗಳ ನಡುವೆಯೇ ತಮ್ಮ ವೃತ್ತಿ ಧರ್ಮವನ್ನು ಎತ್ತಿ ಹಿಡಿಯಲು ಮತ್ತು ಕೆಲಸಗಾರರ ಆರೋಗ್ಯದ ನಡುವಿನ ಗೊಂದಲಗಳಲ್ಲಿ ಏಗುತ್ತಿವೆ. ಅವುಗಳಲ್ಲಿನ ಕಥೆ, ಕವನ, ಪ್ರವಾಸ, ಸಿನಿಮಾ ಇತ್ಯಾದಿ ಬರಹಗಳು ಕೊರಗುತ್ತಿವೆ.

    ಸಿನಿಮಾ, ನಾಟಕ, ಟಿವಿ ಯ ರೆಕಾರ್ಡಿಂಗ್ ಗಳು ನಿಂತು ಹೋಗಿ ದೃಶ್ಯ ಮಾಧ್ಯಮಗಳ ಸೃಜನಶೀಲತೆಗೂ ಧುತ್ತನೆ ಬ್ರೇಕ್ ಬಿದ್ದಿದೆ. ಕಲಾಕಾರರು, ಹಾಡುಗಾರರು, ನೃತ್ಯಪಟುಗಳು, ಶಿಲ್ಪಿಗಳು,ಆಟೋಟಗಾರರು ಎಲ್ಲರೂ ಇದ್ದಕ್ಕಿದ್ದಂತೆ ದೊರೆತ ಈ ಖಾಲಿ  ಸಮಯದಲ್ಲಿ ಕೈ ಚೆಲ್ಲಿ ಕುಳಿತಿದ್ದಾರೆ.ಇನ್ನು ಈ ಎಲ್ಲ ಉದ್ಯಮಗಳಲ್ಲಿ ತೊಡಗಿದ್ದವರ ದುಡಿಮೆ, ಆರ್ಥಿಕ ಸ್ಥಿತಿಗಳ ಬಗ್ಗೆ ಹೇಳುವಂತೆಯೇ ಇಲ್ಲ

    ಸಾಮಾಜಿಕ ಮತ್ತು ಸಮುದಾಯಗಳ ಸಂಪೂರ್ಣ ಪ್ರೇರೇಪಣೆಯಿಲ್ಲದೆ ಸೃಜನಶೀಲತೆ ಪರಿಪೂರ್ಣ ಪ್ರಮಾಣದಲ್ಲಿ ಅರಳುವುದಿಲ್ಲ. ಸೃಜನಶೀಲತೆಗೆ, ಮನುಷ್ಯನ ಸಂತೋಷಕ್ಕೆ ಸಮಯವೊಂದೇ ತೊಡಕಲ್ಲ. ಜೊತೆಗೇ ಸಮಯವೊಂದು ಮಾತ್ರ ಸಿಕ್ಕಿಬಿಟ್ಟರೆ ಸಾಲುವುದೂ ಇಲ್ಲ ಎನ್ನುವ ಹೊಸದೊಂದು ಹೊಳಹನ್ನು ಈ ವಿಚಾರಗಳು ದಟ್ಟಗೊಳಿಸಿದೆ. ಆ ಮಟ್ಟಕ್ಕೆ ನಮ್ಮದು ಸಂಘಜೀವನ. ಅದು ಎಲ್ಲರೂ ಸಹಜವಾದ, ಸಂತೋಷವಾದ ದಿನಚರಿಯನ್ನು ಹೊಂದಲೆಂದು ಆಶಿಸುತ್ತದೆ.

    ಇದೇ ಕಾರಣಕ್ಕೆ ಲಾಕ್ ಡೌನ್ ಸಮಯದ ಎಲ್ಲ ಕೆಲಸಗಳಲ್ಲಿ ಒಂದು ಬಗೆಯ ಅವಿನಾ ಕೊರತೆ ಎದ್ದು ಕಾಣುತ್ತಿದೆ. ಆತಂಕ,ಸಾವು ನೋವಿನ ಸುದ್ದಿಗಳು ಮಾನಸಿಕವಾಗಿ ಉತ್ಸಾಹವನ್ನು ಕಸಿದಿವೆ. ಪಾಶ್ಚಾತ್ಯ ದೇಶಗಳಲ್ಲಿ ಹೆಣಗಳನ್ನು ಸಮಾಧಿ ಮಾಡಲು ಇರುವ ಫ್ಯೂನರೆಲ್ ಸರ್ವಿಸ್ ನ ದಂಧೆ ನಡೆಸುವವರು ಕೂಡ ಮೊತ್ತ ಮೊದಲ ಬಾರಿಗೆ ತಮ್ಮ ಕೆಲಸವನ್ನು ಬಿಸಾಡಿ ಹೊರನಡೆಯಲು ತಯಾರಾದಂತ ಕಾಲವಿದು. ಸಮಾಧಿ ಮಾಡುವಾಗ ಸಾವಿನ ಘನತೆಯನ್ನು ಎತ್ತಿ ಹಿಡಿಯಲಾಗದ, ಶೋಕ ತಪ್ತ ಕುಟುಂಬದವರನ್ನು ಹತ್ತಿರ ಸೇರಿಸಲಾಗದ ನಿಬಂಧನೆಗಳ ಅಡಿಯಲ್ಲಿ ಅವರ ವೃತ್ತಿಧರ್ಮವೂ ಕುಸಿದ ಭಾವ ಮೂಡಿದ್ದು ಕೂಡ ಈ ಕಾಲದಲ್ಲಿ ದಾಖಲಾಯ್ತು.

    ಸೃಜನಶೀಲ ಕೆಲಸಗಳನ್ನು ಪ್ರದರ್ಶಿಸುವ, ಹಂಚಿಕೊಳ್ಳುವ ಅವಕಾಶಗಳ ಕೊರತೆಯಿದ್ದರೆ ಪ್ರೇರಣೆ ನಿಧಾನವಾಗಿ ಬಲಹೀನವಾಗುತ್ತದೆ. ಮುಂದೇನು? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.ಇಡೀ ಪ್ರಪಂಚವೇ ಒತ್ತಟ್ಟಿಗೆ ರಜಾದಲ್ಲಿರುವ ಹೊತ್ತಿನಲ್ಲಿ ಒಂದು ರೀತಿಯಲ್ಲಿ ಮನುಷ್ಯನ ಮಿದುಳು ಅರೆ ಬರೆ  ನಿಶ್ಕ್ರಿಯೆಗೊಂಡಿದೆ.ಇನ್ನೊಂದು ಅರ್ಥದಲ್ಲಿ ಮನುಷ್ಯನಿಗೆ ವರ್ತಮಾನದಲ್ಲಿ ಮಾಡುವ ಕೆಲಸಗಳಿಗೆ ಭವಿಷ್ಯದ ಕೊಂಡಿಯೆಂಬುದರ ಸಖ್ಯ ನಿಖರವಾಗಿರಬೇಕು. ನಿಚ್ಚಳವಾಗಿ ಕಾಣುತ್ತಿರಬೇಕು. ಅದಿಲ್ಲದಿದ್ದರೆ ವರ್ತಮಾನದ ಅರ್ಥವೇ ಮೊಟಕುಗೊಳ್ಳುತ್ತದೆ.

    ಸಮಯ ಸಿಕ್ಕಿರುವಾಗ ಹೆಚ್ಚು ಆರೋಗ್ಯವಂತರಾಗಿ, ಸೃಜನಶೀಲರಾಗಿ ಈ ಘಟ್ಟದಿಂದ ಹೊರಹೊಮ್ಮಲು ಸಾಧ್ಯವಾಗದಿದ್ದರೆ  “ನಮಗೆ ಸಮಯ ಇರಲಿಲ್ಲ “ ಎಂದು ಹೇಳಬೇಡಿ ಎನ್ನುವಂತ ಎಚ್ಚರಿಕೆಯ,ಉತ್ತೇಜಕ,ಬುದ್ದಿವಂತಿಕೆಯ ಮಾತುಗಳು ಸಂದೇಶಗಳಲ್ಲಿ ಹರಿದಾಡುತ್ತಿದ್ದರೂ ಜಗತ್ತನ್ನು ತನ್ನ ಆತಂಕಕಾರೀ ಮುಷ್ಟಿಯಲ್ಲಿ ಹಿಡಿದಿಟ್ಟಿರುವ ವೈರಾಣು ಸಮಸ್ಯೆ ಜನರ ಉತ್ಸಾಹಕ್ಕೆ ಭಾರೀ ಹೊಡೆತ ನೀಡಿದೆ.

    ಹೆಚ್ಚು ಕಾಲ ಬದುಕಿದಂತೆಲ್ಲ ನಮ್ಮ ಜೀವನದ ಕ್ಷಣಗಳ ಮಹತ್ವವೂ ಮನದಟ್ಟಾಗುತ್ತ ಹೋಗುತ್ತದೆ. ಈ ಕಾರಣ ಸಮಯ ಎನ್ನುವುದು ಅವರವರ ವ್ಯಕ್ತಿತ್ವ, ವಯಸ್ಸು, ಧೋರಣೆಗಳು, ಪ್ರಭುದ್ದತೆ, ಹವ್ಯಾಸ ಮತ್ತು  ಬದ್ದತೆಗಳನ್ನು ಅವಲಂಬಿಸುತ್ತದೆ ಅಂದುಕೊಳ್ಳಬಹುದು.ಆದರೆ ಇಂತಹ ಅತ್ಯಮೂಲ್ಯ ಸಮಯ ಕೋವಿಡ್ ಲಾಕ್  ಡೌನಿನ ಕಾಲದಲ್ಲಿ ಹಲವು ಪರ್ಯಾಯ ತುಲನೆಗಳನ್ನು ಸೃಷ್ಟಿಸಿದ್ದಂತೂ ನಿಜ.

    2008 ರ  ಪ್ರಪಂಚ ಮಟ್ಟದ ಆರ್ಥಿಕ ಕುಸಿತ ನಡೆದ ಕಾಲದಲ್ಲಿ ಕೆಲವರಷ್ಟೇ ಕೆಲಸಕ್ಕೆ ಹಿಂತಿರುಗಿದ್ದು. ಬಹಳಷ್ಟು ಉದ್ಯಮಗಳು ಕುಸಿದ ಕಾರಣ ಕೆಲವೇ ಕೆಲವು ಕೆಲಸಗಾರರು ಸಮಯದ ನಿಗಧಿಯಿಲ್ಲದೆ ಅವಿರತ ಕೆಲಸಮಾಡಿದರು. ಇವರಲ್ಲಿ ವಿರಮಿಸುವ ಸಮಯ ಅಂದರೆ ಏನು? ಎನ್ನುವುದರ ಅರ್ಥ ನಿಧಾನವಾಗಿ ಸಂಕುಚಿಸಿತು. ಒಂದು ಮಟ್ಟಕ್ಕೆ ಅದು ’ಪಾಪ ’ ಅಥವಾ  ’ತಪ್ಪು ’ ಎನ್ನುವ  ಭಾವನೆಗಳೂ ಮೂಡಿದ್ದನ್ನು ಅಧ್ಯಯನಗಳು ಧೃಡಪಡಿಸಿದವು. ಅದರ ಹಿಂದೆ ಅವರ ಮನಸ್ಸಿನಲ್ಲಿ ಮೂಡಿದ್ದ ಅಭದ್ರತೆಯ ಅಧೀರತೆಯೇ ಕಾರಣ ಎಂದು ಕೂಡ ತಿಳಿದುಬಂದಿದೆ.

    ಬದುಕು ಮತ್ತೆ ಸಹಜಸ್ಥಿತಿಗೆ ಬಂದರೂ ನಾವು ಬದುಕುವ ರೀತಿಯೇ ಬದಲಾಗಬಹುದಾದ  ’ಭವಿಷ್ಯ ಕಾಲ ’ದ ಬಗ್ಗೆ ’ಭೂತ ’ ದಲ್ಲಿ ಕಂಡರಿಯದ ಮಟ್ಟದಲ್ಲಿ ”ವರ್ತಮಾನದಲ್ಲಿ’ ಆತಂಕಗಳು ಗೂಡುಕಟ್ಟಿವೆ.ಸಮಯವನ್ನೂ ಸಮಯದ ಜೊತೆಯೇ ತುಲನೆ ಮಾಡುವ ಮನುಷ್ಯನ  ಅಭ್ಯಾಸ ಮುಂದುವರೆದಿದೆ.

    Photo by luizclas from Pexels

    ಅಮ್ಮಾ…ಬೋ..ರು ಎನ್ನುವ ಉದ್ಗಾರದಿಂದ ಮಕ್ಕಳನ್ನು ಹೊರತರುವುದು ಹೇಗೆ?

    ಹಲವರ ಮನವಿ, ಕೆಲವರ ವಿರೋಧಗಳ ನಡುವೆ ಅಂತೂ ಇಂತೂ ಆನ್ ಲೈನ್ ತರಗತಿಗಳು ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿವೆ. ಯಾವುದೇ ವಿಷಯದ ಬಗ್ಗೆ ಪರ ಅಥವಾ ವಿರೋಧವಾಗಿ ಮಾತನಾಡುವುದು ಆ ಕ್ಷಣಕ್ಕೆ ಸುಲಭ ಆದರೆ ಒಂದು ನಿರ್ಧಾರಕ್ಕೆ ಬಂದ ಮೇಲೆ ಅದಕ್ಕೊಂದು ಪರ್ಯಾಯ ಪರಿಹಾರವನ್ನು ನೀಡುವುದು ಬಹಳ ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ 1 ರಿಂದ 5ನೇ ತರಗತಿಯವರೆಗೆ ಆನ್ಲೈನ್ ತರಗತಿಯನ್ನು ನಿಲ್ಲಿಸಿ, 6ರಿಂದ 10ನೇ  ತರಗತಿಯ ಮಕ್ಕಳಿಗೆ ಸೂಕ್ತ ಮಾರ್ಗದರ್ಶಿ ನಿಯಮಗಳ ಪ್ರಕಾರ ಮುಂದುವರಿಸಿ ಎಂದು ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಹೊರಬಿದ್ದಿದೆ.

    ಈಗಿರುವುದು ನಿಜವಾದ ಸವಾಲು. ತರಗತಿಗಳೇ ಇಲ್ಲವೆಂದು ಕುಣಿಯುತ್ತಿರುವ ಒಂದರಿಂದ ಐದನೇ ತರಗತಿಯ ಚಿನ್ನಾರಿಗಳು ಹಾಗೂ ಮೂರರಿಂದ ನಾಲ್ಕು ತಾಸುಗಳ ಕಾಲ ಆನ್ ಲೈನ್ ಪಾಠ ಪ್ರವಚನಗಳಲ್ಲಿ ವ್ಯಸ್ತರಾಗುವ ಆರರಿಂದ ಹತ್ತರವರೆಗಿನ ಮಕ್ಕಳು ತಮ್ಮ ಉಳಿದ ಅವಧಿಯನ್ನು ಹೇಗೆ ಕಳೆಯಬೇಕು? ಕೊರೋನಾದ ಕಾಟದಿಂದ ಹೊರಾಂಗಣದ ಆಟಗಳನ್ನಾಡುವಂತಿಲ್ಲ, ಸ್ನೇಹಿತರೊಡನೆ ಬೆರೆಯುವಂತಿಲ್ಲ, ಸಿನೆಮಾ ಥಿಯೇಟರ್ ಗಳಿಲ್ಲ, ಮಾಲ್ ಗಳಿಗೆ  ಹೋಗುವಂತಿಲ್ಲ. ಪೋಷಕರ ಬಾಧ್ಯತೆಗಳು ಹೆಚ್ಚಾಗುವ ಸಂದರ್ಭವಿದು. ಹಾಗೆಯೇ ಮಕ್ಕಳು ಯಾಂತ್ರಿಕ ಓದಿನ ಜೀವನದಿಂದ ಹೊರಬಂದು ತನ್ನ  ಇಷ್ಟದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸದಾವಕಾಶವೂ ಹೌದು. ಅಮ್ಮಾ ಬೋ……….ರು ಎಂಬ  ಉದ್ಗಾರದಿಂದ ಹೊರಬಂದು ಮಕ್ಕಳು ತಮ್ಮ ಏಕತಾನತೆಯ ದಿನಗಳನ್ನು ಹೇಗೆ ಸುಂದರವಾಗಿಸಿಕೊಳ್ಳಬಹುದು ಎಂದು ಯೋಚಿಸೋಣ. .

    ಯೋಗಾಭ್ಯಾಸ ಮತ್ತು ಧ್ಯಾನ

    ಮಕ್ಕಳ ದಿನಚರಿಯನ್ನು ಸೂರ್ಯನಮಸ್ಕಾರ ಯೋಗಾಭ್ಯಾಸ ಮತ್ತು ಪ್ರಾಣಾಯಾಮಗಳಿಂದ ಪ್ರಾರಂಭಿಸುವಂತೆ ಮನೆಯ ಹಿರಿಯರು ಮಾರ್ಗದರ್ಶನ ನೀಡಬೇಕು.
    ಮಗುವಿನ ವಯಸ್ಸಿಗೆ ಅನುಗುಣವಾಗಿ ಇದನ್ನು ನಿರ್ವಹಿಸುವುದರಿಂದ ಮಗುವಿನಲ್ಲಿ ಏಕಾಗ್ರತೆ, ಬದುಕನ್ನು ಎದುರಿಸುವ ಧೈರ್ಯ ಮತ್ತು ಈಗಿನ ಸಂದರ್ಭದಲ್ಲಿ ಅತೀ ಅವಶ್ಯಕವಾದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

    ಒಳಾಂಗಣ, ಜನಪದ ಆಟಗಳು.

    ಚೌಕಾ ಬಾರಾ

    ಮಗು ಮತ್ತು ಮಗುವಿನ ಕ್ರಿಯೇಟಿವಿಟಿಗಳ ನಡುವಿನ ಸೇತುವೆಯೇ ಆಟ. ಒಳಾಂಗಣ ಆಟಗಳಾದ ಚೆಸ್, ಕೇರಂ, ಹಾವು ಏಣಿ ಮುಂತಾದ ಆಟಗಳನ್ನು ಕಲಿಯಲು ಇದು ಸಕಾಲ. ಅಜ್ಜಿ ತಾತಂದಿರು ಎಂದೋ ಆಡಿ ಮರೆತ ಆಟಗಳಾದ ಅಳಿಗುಳಿ ಆಟ, ಕಡ್ಡಿ ಆಟ, ಪಗಡೆ, ಹುಲಿಮನೆ ,ಚೌಕಾಬಾರ ಆಟಗಳಂತಹ ಜನಪದ ಆಟಗಳನ್ನು ತಮ್ಮ ಮೊಮ್ಮಕ್ಕಳಿಗೆ ಕಲಿಸಿ ತಮ್ಮ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕುವುದರಲ್ಲಿರುವ ಸಂತೋಷ ಬೇರೆಲ್ಲಿ?  ಕೌಟುಂಬಿಕ ಬಾಂಧವ್ಯ ವೃದ್ಧಿಯೊಂದಿಗೆ ಮಕ್ಕಳ ಮನಸ್ಸು ಪ್ರಫುಲ್ಲವಾಗುತ್ತದೆ.


    ಹವ್ಯಾಸಗಳು

    ಒಳ್ಳೆಯ ಹವ್ಯಾಸಗಳು ಮಕ್ಕಳಿಗೆ ತಮ್ಮ ಆಂತರಿಕ ಶಕ್ತಿಯನ್ನು ತಾವೇ  ಆವಿಷ್ಕರಿಸುತ್ತ ಆತ್ಮವಿಶ್ವಾಸವನ್ನು ಉನ್ನತೀಕರಿಸಲು ಎನರ್ಜಿ ಬೂಸ್ಟರ್ ಗಳಂತೆ ಕೆಲಸ ಮಾಡುತ್ತವೆ. ಶಾಲಾದಿನಗಳಲ್ಲಿ ಸಮಯಾಭಾವದಿಂದ ತ್ಯಜಿಸಿದ ಹತ್ತುಹಲವು ಹವ್ಯಾಸಗಳನ್ನು ಮತ್ತೆ ಚಿಗುರೊಡೆಸಲು ಈ ಸಮಯ ಸೂಕ್ತವಾಗಿದೆ. ಸಂಗೀತ, ಚಿತ್ರಕಲೆ ,ಓದು, ಕ್ಲೇ ಮಾಡೆಲ್ ಗಳ ತಯಾರಿಕೆ, ಒರಿಗೆಮಿ, ಸಂಗೀತೋಪಕರಣಗಳ ಕಲಿಕೆ ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ಇವೆಲ್ಲ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಇರುವ ಹವ್ಯಾಸಗಳೇ, ವಿಶೇಷ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಿದರೆ ಕೊರೋನ ಕಾಲದ ಅನುಭವವು ಮುಂದಿನ  ಜೀವನಕ್ಕೆ ಸ್ಫೂರ್ತಿದಾಯಕವಾಗಬಹುದು. ಗಾರ್ಡನಿಂಗ್ ನ ಮೂಲಕ ಪರಿಸರ ಪ್ರೇಮ, ರಾತ್ರಿಯಾಗಸದಲ್ಲಿ ಮಿನುಗುವ ನಕ್ಷತ್ರಗಳ ವೀಕ್ಷಣೆ, ಸಪ್ತರ್ಷಿಮಂಡಲದ ಗುರುತಿಸುವಿಕೆ, ಯು ಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಮ್ಯಾಜಿಕ್ ಕಲಿಕೆ, ಕ್ವಿಲ್ಲಿಂಗ್, ಚಿಕ್ಕಚಿಕ್ಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದು, ಜರ್ಮನ್, ಫ್ರೆಂಚ್, ಸ್ಪಾನಿಷ್ ನಂತಹ ಬೇರೆ ಬೇರೆ ಭಾಷೆಗಳನ್ನು ಕಲಿಯುವುದು, ಪಪೆಟ್ ಗಳನ್ನು ತಯಾರಿಸಿ ಕುಣಿಸುವುದು, ಇವೆಲ್ಲ ಮಕ್ಕಳು ಸಮಯವನ್ನು ರಚನಾತ್ಮಕವಾಗಿ ಕಳೆಯುವಂತೆ  ಮಾಡುತ್ತವೆ.

    ನವನವೀನ ಹವ್ಯಾಸ

    ಮಕ್ಕಳ ಅರಿವಿಗೇ ಇಲ್ಲದ ನವನವೀನ ಹವ್ಯಾಸಗಳಿವೆ. ಫ್ಲವರ್ ಪ್ರೆಸ್ಸಿಂಗ್ (flower pressing) ನಿಂದ ಕಲಾಕೃತಿಗಳನ್ನು ತಯಾರಿಸುವುದು, ಉತ್ತಮ ಸಂದೇಶವಿರುವ      5 – 10 ನಿಮಿಷದ ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿ ನಟಿಸಿ ಮೊಬೈಲ್ಗಳ ಮೂಲಕ ಚಿತ್ರೀಕರಣ ಮಾಡುವುದು,  ರೋಬೋಟಿಕ್ಸ್ ಮುಂತಾದ ಸಾಫ್ಟ್ ವೇರ್ ಸ್ಕಿಲ್ ಗಳನ್ನು ಬೆಳೆಸಿಕೊಳ್ಳುವುದು, ಇವೆಲ್ಲ ಮಕ್ಕಳ ಜ್ಞಾನದ ಪರಿಧಿಯನ್ನು ವಿಸ್ತಾರಗೊಳಿಸುತ್ತವೆ.

    ಕಲಿಯುವವನಿಗೆ ಕಲಿಕೆಯ ಮೂಲಗಳು ತಾನೇತಾನಾಗಿ ದೊರೆಯುತ್ತವೆ. 5ನೇ ತರಗತಿಯ ಮಗು ಯು ಟ್ಯೂಬನ್ನು ನೋಡಿ sensor and voice automated sanitiser ನ್ನು ತಯಾರಿಸಬಲ್ಲದಾದರೆ ಮಕ್ಕಳ ಪ್ರತಿಭೆಗೆ ಎಲ್ಲೆಯೇ ಇಲ್ಲ. ಪ್ರೋತ್ಸಾಹಿಸುವವರು ಬೇಕಷ್ಟೆ.

    ಸರ್ಕಾರಿ ಶಾಲೆಗಳ  ಮಕ್ಕಳ ಪಾಡೇನು

    ಮೇಲೆ ತಿಳಿಸಿದ ಹಲವು ಹವ್ಯಾಸಗಳು ಪೋಷಕರ ಸಹಾಯ, ಕೊಂಚ ಹಣ, ಮತ್ತು ಇಂಟರ್ನೆಟ್ ಸೌಲಭ್ಯವನ್ನು ಅವಲಂಬಿಸಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳ ಪೋಷಕರಿಗೆ ತುತ್ತಿನ ಚೀಲ ತುಂಬಿಸುವುದೇ ದೊಡ್ಡ ಸವಾಲಾಗಿರುವಾಗ ಹವ್ಯಾಸಗಳಿಗೆಲ್ಲಿ ಮಹತ್ವ? ಹಾಗಾದರೆ ಇಂತಹ ಮಕ್ಕಳು ಶಾಲೆಯಿಲ್ಲದ ಈ ಸಮಯದಲ್ಲಿ ಬೀದಿ ಬೀದಿ ಸುತ್ತ ಬೇಕೇ? ಇಂತಹ ಸಂದರ್ಭಗಳಲ್ಲಿ ಸಮುದಾಯ ಮತ್ತು ಸರ್ಕಾರದ ನಿಜವಾದ ಬಾಧ್ಯತೆಗಳು ಮುಂಚೂಣಿಗೆ ಬರುತ್ತವೆ.

    ಸರಕಾರೇತರ ಸಂಸ್ಥೆಗಳು (NGO) ಸಮಾಜದ ಉದ್ಧಾರದಲ್ಲಿ  ಆಸಕ್ತಿ ಇರುವ ಸಂಘ ಸಂಸ್ಥೆಗಳು ಬಡ ಮಕ್ಕಳನ್ನು ಗುರುತಿಸಿ ಅವರಿಗೆ  playing kits, ಕ್ಲೇ ಮಾಡೆಲ್ ಗಳು,  ಒರಿಗೆಮಿ ಹಾಳೆಗಳು,  ಮಾದರಿಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಆ ಮಕ್ಕಳನ್ನೂ ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ . ಇದರಿಂದ ಮಕ್ಕಳು ಕೊರೋನಾ ಅವಧಿಯ ನಂತರವೂ ಕಲಿಕೆಯಲ್ಲಿ ಆಸಕ್ತಿಯನ್ನು ಉಳಿಸಿಕೊಳ್ಳುತ್ತಾರೆ.

    ಸರಕಾರವು ಈ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಿದೆ. ಸರಕಾರದ “ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ” (Department of Skill Development and Enterpreneurship and Livelihood)   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ, ಕೌಶಲ್ಯ ಹವ್ಯಾಸಗಳನ್ನು ಉದ್ದೀಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇದಕ್ಕಿಂತ ಸಕಾಲ ಇನ್ನಿಲ್ಲ. ಇದು ಅವರ ಜವಾಬ್ದಾರಿ ಕೂಡ ಆಗಿದೆ.  ಇಲಾಖೆಯು  ಒದಗಿಸುತ್ತಿರುವ ಕೌಶಲ್ಯ ತರಬೇತಿಯನ್ನು ಮಕ್ಕಳಿಗೂ ವಿಸ್ತರಿಸುವ ಹಾಗೂ ತಲುಪಿಸುವ ಕೆಲಸ ಆಗಬೇಕಿದೆ.  ಈ ಇಲಾಖೆಗಳನ್ನು ಸ್ಥಾಪಿಸಿದ ಉದ್ದೇಶವೇ ಮಗುವಿನ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು . “ಕರ್ನಾಟಕ ಕೌಶಲ್ಯ ಮಿಶನ್”(Kaushalkar.com) ನಲ್ಲಿ ಮಕ್ಕಳಿಗೂ ಅವಕಾಶವನ್ನು ನೀಡಿ ತರಗತಿಗಳು ನಡೆಯದ ಈ ಸಮಯದಲ್ಲಿ ಹವ್ಯಾಸಗಳ ಬೆಳವಣಿಗೆಗೆ ಸಹಾಯ ಹಸ್ತ ಚಾಚಬೇಕಿದೆ.

    ಪುಸ್ತಕದ ಬದನೇಕಾಯಿಯನ್ನು ಬಿಟ್ಟು ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಸದವಕಾಶ ಮಕ್ಕಳಿಗೆ ತಾನೇ ತಾನಾಗಿ ಒದಗಿ ಬಂದಿದೆ. ಕೊರೋನಾದ ಶಾಪಗ್ರಸ್ತ ಕಾಲವನ್ನು ಜೀವನಾವಶ್ಯಕ ಅನುಭವಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಪೋಷಕರು, ಸಮುದಾಯ ಮತ್ತು ಸರ್ಕಾರ ಎಲ್ಲರೂ ಸೇರಿ ಮಕ್ಕಳಿಗೆ ಮಾರ್ಗದರ್ಶನ ಮಾಡೋಣ. 

    ಚಿತ್ರಗಳು: ಕಿರಣ ಆರ್ ಮತ್ತು PEXELS ,

    ಶಾಂತಿ ಪ್ರಿಯರು ನಾವು, ಕೆಣಕಿದರೆ ಜೋಕೆ

    ಕೌಶಿಕ್ ಗಟ್ಟಿಗಾರು

    ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಡುಗಿದ್ದಾರೆ. ಕಳೆದ ಬಾರಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಪುಲ್ವಾಮಾ ಸಿಆರ್ ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ 40 ಯೋಧರನ್ನು ಕೊಂದಾಗ ಇದೇ ರೀತಿ ಹೇಳಿಕೆ ನೀಡಿದ್ದರು. ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಎಂಬ ವಿನೂತನ ಯಶಸ್ವಿ ಯುದ್ಧ ತಂತ್ರ ಎಲ್ಲೆಡೆ ಗಮನ ಸೆಳೆದಿತ್ತು.

    ಈಗ ಚೀನಾದ ಸರದಿ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲಾರದು ಎಂದು ಹೇಳಿದ್ದಾರೆ. ನಾವು ಶಾಂತಿ ಪ್ರಿಯರು. ಕೆಣಕಿದರೆ ಜೋಕೆ ಎಂದು ಚೀನಾಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆದರೆ ಈ ಬಾರಿ ಒಂದಿಷ್ಟು ಸಂಯಮ ವಹಿಸಿದಂತಿದೆ. ಸರ್ಜಿಕಲ್ ದಾಳಿ ಏಕಾಏಕಿ ತೆಗೆದುಕೊಂಡ ತೀರ್ಮಾನ ಮತ್ತು ಈ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಮಾಹಿತಿ ಇತ್ತು ಎಂದು ಹೇಳಲಾಗಿದೆ. ಆದರೆ ಈ ಬಾರಿ, ಶುಕ್ರವಾರ ಸರ್ವ ಪಕ್ಷ ಸಭೆ ಕರೆದು ಚರ್ಚಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಹಾಗೆಂದು ಇದರಿಂದಲೇ ಪ್ರಧಾನಿ ಮೋದಿ ಎದೆಗುಂದಿದ್ದಾರೆ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಪಾಕ್ ಮತ್ತು ಚೀನಾ ನಡುವೆ ಇರುವ ಅಗಾಧ ವ್ಯತ್ಯಾಸವೇ ಇದಕ್ಕೆ ಕಾರಣ. ಹೀಗಾಗಿಯೇ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ಸಂಘರ್ಷ ಇನ್ನಷ್ಟು ತೀವ್ರಗೊಳ್ಳಬಾರದು ಎಂಬ ಉದ್ದೇಶದಿಂದಲೇ ವಿಶ್ವಸಂಸ್ಥೆ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹ ಮಾಡಿವೆ ಎಂಬುದು ಇಲ್ಲಿ ಉಲ್ಲೇಖನೀಯ.

    ಚೀನಾದ ತಂತ್ರ

    ಇಲ್ಲಿ ಚೀನಾ ಸೇನಾ ಪಡೆ ನಡೆಸಿದ ಯುದ್ಧ ತಂತ್ರದ ಬಗ್ಗೆ ಗಮನ ನೀಡಲೇಬೇಕಾಗುತ್ತದೆ. ಬಂದೂಕು ಬಳಕೆಯಾಗಿಲ್ಲ. ಆ ಮೂಲಕ ಇದು ಯುದ್ಧವಲ್ಲ ಎಂದು ಜಗತ್ತಿಗೆ ಹೇಳುವ ತಂತ್ರವನ್ನು ಚೀನಾ ಬಳಸಿದೆ. ಕಬ್ಬಿಣದ ರಾಡ್, ದೊಣ್ಣೆಗಳಿಂದ ಭಾರತದ ಯೋಧರ ಮೇಲೆ ಚೀನಾ ಮುಗಿಬಿದ್ದಿದೆ. ನಮ್ಮವರೇನೂ ಹಿಂದೆ ಬಿದ್ದಿಲ್ಲ. ಗರಿಷ್ಠ ಹಾನಿಯನ್ನೇ ಮಾಡಿದ್ದಾರೆ. ಮೂಲಗಳ ಪ್ರಕಾರ 35ಕ್ಕೂ ಹೆಚ್ಚು ಚೀನಾ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ.

    ರಾಷ್ಟ್ರೀಯತೆ ವಿಷಯ ಬಂದಾಗ ಜನತೆ ಒಟ್ಟಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಇದಕ್ಕೆ ತನ್ನ ವೈಫಲ್ಯ, ಸಫಲತೆಗಳನ್ನು ಒಳಗಡೆಯೇ ಬಚ್ಚಿಟ್ಟುಕೊಂಡಿರುವ ಚೀನಾ ಕೂಡ ಹೊರತಲ್ಲ. ಅದಕ್ಕಾಗಿಯೇ ಒಂದೆಡೆ ಕೊರೊನಾ ವೈರಸ್ ಸಮಸ್ಯೆಯ ಭೀಕರತೆ, ಇನ್ನೊಂದೆಡೆ ಹಾಂಗ್ ಕಾಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಹಸ್ಯವಾಗಿ ಸಿದ್ಧಪಡಿಸಿ ಚೀನಾ ಸಂಸತ್ತಿನ ಅನುಮೋದನೆ ಪಡೆದ ರಾಷ್ಟ್ರೀಯ ಭದ್ರತಾ ಕಾನೂನು ಒಂದು ರೀತಿಯಲ್ಲಿ ಚೀನಾದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಿದೆ. ಈ ಮೂಲಕ ರಾಷ್ಟ್ರೀಯತೆಯ ಭಾವನೆಯನ್ನು ಬಡಿದೆಬ್ಬಿಸಿ ಆ ಮೂಲಕ ತನ್ನ ಮೇಲೆ ವೈಯಕ್ತಿಕವಾಗಿ ಕೇಳಿ ಬಂದಿರುವ ಎಲ್ಲಾ ಆರೋಪ ಮತ್ತು ಅಪಾದನೆಗಳನ್ನು ಹತ್ತಿಕ್ಕಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸದಾಗಿ ಹೆಣೆದಿರುವ ಬಲೆಯೇ ಭಾರತ-ಚೀನಾ ನಡುವಿನ ಸಂಘರ್ಷ.

    ಲಡಾಖ್ ನ ಪ್ಯಾಂಗೋಂಗ್ ತ್ಸು ಕಣಿವೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ, ಭಾರತ-ಚೀನಾ ಎರಡೂ ಕಡೆಯಿಂದ ಸೇನಾ ಜಮಾವಣೆ ಆಯಿತು. ಭಾರತದ ಯುದ್ಧ ವಿಮಾನಗಳು ಕೂಡ ಬೆಂಗಳೂರಿನಂತಹ ದೂರದ ಪ್ರದೇಶಗಳಲ್ಲಿ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಿಯೂ ಆಯಿತು. ಉಭಯ ದೇಶಗಳ ಸೇನಾ ಪ್ರಮುಖರ ನಡುವಿನ ಮಾತುಕತೆಯ ಬಳಿಕ ಪರಿಸ್ಥಿತಿ ಏನೋ ತಿಳಿಯಾಯಿತು ಎನ್ನುವಾಗಲೇ ಬರಸಿಡಿಲಿನಂತೆ ಚೀನಾ ಆಕ್ರಮಣಕಾರಿ ಉನ್ಮಾದದ ನೀತಿಯನ್ನು ಅನುಸರಿಸಿದೆ. ನಮ್ಮ ಕಡೆ 20 ಯೋಧರು ಹುತಾತ್ಮರಾದರೆ, ಅವರ 50ಕ್ಕೂ ಹೆಚ್ಚು ಯೋಧರು ಮೃತ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಏನಿದು ವಿವಾದದ ಕೇಂದ್ರ

    ಹಿಂದಿನ ಚೀನಾ ಸಂಘರ್ಷದಿಂದ ಪಾಠ ಕಲಿತಿರುವ ಭಾರತ, ಈ ಆಯಕಟ್ಟಿನ ಪ್ರದೇಶದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿಯೂ ಇದೆ. ಧರ್ಬುಲ್-ಸಯೋಕ್- ಡಿಬಿಒ ಅಂದರೆ ದೌಲತ್ ಬೆಗ್ ಓಲ್ಡಿ ರಸ್ತೆಯೂ ಇವುಗಳ ಪೈಕಿ ಒಂದು. ವಿಶ್ವದ ಅತಿ ಎತ್ತರದ ಅಂದರೆ ಸುಮಾರು 16,600 ಅಡಿ ಎತ್ತರದಲ್ಲಿರುವ ಸೇನಾ ವಿಮಾನ ನಿಲ್ದಾಣ (ಯುದ್ಧ ವಿಮಾನ ಇಳಿಯುವ ಮತ್ತು ಟೇಕಾಫ್ ಮಾಡುವ) ಇದಾಗಿದೆ.

    ಗಡಿ ಭಾಗದ ಅಕಾಯ್ ಚೀನಾದಿಂದ ಕೇವಲ 9 ಕಿ.ಮೀ. ವ್ಯಾಪ್ತಿಯಲ್ಲಿ ಇದು ಇದೆ. ಲೇಹ್ ಅನ್ನು ಅತಿ ಇಳಿದಾದ ಪ್ರದೇಶದಲ್ಲಿ ಮೂಲಕ ಗಡಿ ನಿಯಂತ್ರಣ ರೇಖೆಗೆ ಸೇರಿಸುವ ರಸ್ತೆ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ. ಇದಕ್ಕೆ ಉಪ ರಸ್ತೆಗಳನ್ನು ಕೂಡ ನಿರ್ಮಿಸಲಾಗುತ್ತಿದ್ದು, ಇದರ ಪೈಕಿ ಗಾಲ್ವಾನ್ ನದಿಗೆ ಸೇತುವೆ ನಿರ್ಮಿಸುವ ಯೋಜನೆಯೂ ಜಾರಿಯಲ್ಲಿದೆ. ಈ ರಸ್ತೆಯು ಪೂರ್ಣಗೊಂಡರೆ ಆಗ ಚೀನಾದ ಆಕಾಯ್ ಚೀನಾ (ಪದೇ ಪದೇ ಚೀನಾ ಎತ್ತುತ್ತಿರುವ ಪ್ರಶ್ನೆ)ದ ಮೂಲಕ ಅಲ್ಲಿನ ಕ್ಸಿನಿಯಾಂಗ್-ಟಿಬೆಟ್ ಸಂಪರ್ಕ ರಸ್ತೆಯ ಮೂಲಕ ಚೀನಾ ಸೇನೆಯ ಚಲನವಲನಗಳ ಮೇಲೆ ಭಾರತಕ್ಕೆ ಹದ್ದಿನಕಣ್ಣು ಇಡಲು ಸಾಧ್ಯವಾಗುತ್ತದೆ. ಇನ್ನು ಇದರ ಮೂಲಕವೇ ಚೀನಾ-ಪಾಕ್ ಗಡಿ ಭಾಗದ ಕಾರಕೋರಂ ಕಣಿವೆ ಹೆದ್ದಾರಿಯ ಮೇಲೆಯೂ ಭಾರತ ನಿಗಾ ಇಡಲು ಸಾಧ್ಯವಾಗುತ್ತದೆ.

    ಭಾರತದ ಅವಿಭಾಜ್ಯ ಅಂಗ

    1962ರ ಯುದ್ಧದಲ್ಲಿ ಭಾರತ ಸೋಲು ಕಂಡಿತು. ಈ ಸಂದರ್ಭದಲ್ಲಿ ಚೀನಾ ಲಡಾಕ್ ನ ಪೂರ್ವ ಭಾಗದ 90 ಸಾವಿರ ಚದರ ಕಿ.ಮೀ. ಮತ್ತು ಪಶ್ಚಿಮ ಭಾಗದ 38 ಸಾವಿರ ಚದರ ಕಿ.ಮೀ. ಭಾಗವನ್ನು ಆಕ್ರಮಿಸಿಕೊಂಡಿತು. ಆ ಬಳಿಕ ಚೀನಾ ದೇಶವು ತಾನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಪ್ರದೇಶವನ್ನು ಹೊರತು ಪಡಿಸಿದ ಭಾರತದ ಗಡಿ ಭಾಗವೇ ವಾಸ್ತವ ನಿಯಂತ್ರಣ ರೇಖೆ (ಎಲ್ ಎಸಿ). ಎಲ್ ಎಸಿಯ ಇಕ್ಕಡೆಗಳಲ್ಲಿ ಒಂದೆಡೆ ಭಾರತ, ಇನ್ನೊಂದೆಡೆ ಚೀನಾ ಸೇನಾ ಜಮಾವಣೆ ಅದಕ್ಕೆ ಬೇಕಾದ ಮೂಲ ಸೌಕರ್ಯ (ಬಂಕರ್ ಗಳು)ಗಳನ್ನು ನಿರ್ಮಿಸುತ್ತಲೇ ಬಂದಿದೆ. ಇಲ್ಲಿ ದಿನಂಪ್ರತಿ ಉಭಯ ಸೇನೆಗಳ ಗಸ್ತು ನಡೆಯುತ್ತಲೇ ಇದೆ.

    ಭಾರತ-ಚೀನಾ ಗಡಿ ಭಾಗದಲ್ಲಿರುವ ಗಾಲ್ವಾನ್ ಭಾರತದ ಅವಿಭಾಜ್ಯ ಅಂಗ. ಇದು ನಮ್ಮ ಗಡಿಯಿಂದ ಏಳು ಕಿ.ಮೀ. ಒಳಗಡೆಯಿದೆ. ಇದುವರೆಗೆ ಗಾಲ್ವಾನ್ ಬಗ್ಗೆ ತಕರಾರು ಎತ್ತದ ಚೀನಾ ಈಗ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಳ್ಳುತ್ತಿರುವಂತೆಯೇ ತನ್ನ ಷಡ್ಯಂತ್ರ ಆರಂಭಿಸಿದೆ.

    ರಾಜಕೀಯ ಕಾರಣ

    ಈಗ ಚೀನಾದಲ್ಲಿ ನಾಯಕತ್ವದ ಬದಲಾವಣೆಯ ಮಾತು ಪ್ರಬಲವಾಗುತ್ತಿದೆ. ರಾಜಕೀಯ ನಾಯಕರು ಸಾರ್ವಜನಿಕ ಆರೋಗ್ಯದ ಜತೆ ಆಟವಾಡುತ್ತಿದ್ದಾರೆ. ಯುವ ಜನಾಂಗಕ್ಕೆ ಅಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವೇ ಇಲ್ಲ. ಅಲ್ಲಿಯೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದ್ದ ನಿರ್ಬಂಧಗಳನ್ನು ಜನರು ಧಿಕ್ಕರಿಸಲು ಆರಂಭಿಸಿದ್ದಾರೆ. ಹೀಗಾಗಿ ಏನಾದರೂ ಮಾಡಿ ನಾಗರಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಆಗಲೇಬೇಕಾಗಿದೆ. ಜನರು ನೈಜ ವಿಷಯದ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಮಾಧ್ಯಮಗಳ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಸರಕಾರಿ ಪ್ರಾಯೋಜಿತ ಸುದ್ದಿಗಳ ಬದಲು ಗ್ರೌಂಡ್ ರಿಯಾಲಿಟಿ ಅಂದರೆ ವಾಸ್ತವಾಂಶಗಳನ್ನು ಹೇಳಿ ಎಂಬ ಕೂಗು ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ.

    ಇದರ ಜತೆಗೆ ನಾನಾ ಕಾರಣಗಳು ಕೂಡ ಚೀನಾದ ನಡೆಯ ಹಿಂದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೇದಾಗಿ ಕೊರೊನಾ ವೈರಸ್ ಹರಡುವಿಕೆಯ ಮೂಲದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸುತ್ತಿದೆ. ತಾನೂ ಅಣ್ವಸ್ತ್ರ ಶಕ್ತ, ಅತ್ತ ಭಾರತವೂ ಅಣ್ವಸ್ತ್ರ ಶಕ್ತವಾಗಿರುವುದರಿಂದ ಈ ಸಂದರ್ಭದಲ್ಲಿ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರವನ್ನು ಹೆಣೆಯುವುದರಲ್ಲಿ ಅದು ನರಿ ಬುದ್ಧಿಯನ್ನು ತೋರಿಸುತ್ತಲೇ ಬಂದಿದೆ. ಜತೆಗೆ ಹಾಂಗ್ ಕಾಂಗ್ ಸಮಸ್ಯೆ ಅದಕ್ಕೆ ಮಗ್ಗುಲಿನ ಮುಳ್ಳಾಗಿದೆ. ಚೀನಾದಿಂದ ಹೊರ ಬರುತ್ತಿರುವ ಉದ್ಯಮಗಳಿಗೆ ಭಾರತ ಕೆಂಪುಹಾಸಿನ ಸ್ವಾಗತ ನೀಡುತ್ತಿದೆ. ಇನ್ನು ಸ್ವತಃ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕೂಡ ಪ್ರಜೆಗಳ ಅದರಲ್ಲೂ ಮುಖ್ಯವಾಗಿ ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಮಂಡಳಿಯಾದ ಸಿಪಿಎಂ ಪಾಲಿಟ್ ಬ್ಯೂರೋದ ವಿಚಾರ-ವಿಮರ್ಶೆಗೆ ಒಳ ಪಡುತ್ತಿದ್ದಾರೆ. ಇವುಗಳ ನಡುವೆ ಗಮನವನ್ನು ಬೇರೆಡೆಗೆ ಸೆಳೆಯಲು ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಭಾರತದ ಜತೆ ಜಗಳ. ಆದರೆ ಆಗಿನ ಭಾರತ, ಈಗಿನ ಭಾರತವಲ್ಲ. ಸೇನೆ, ವಿದೇಶಿ ಬೆಂಬಲ ಸೇರಿದಂತೆ ಸಕಲ ಸಂಪನ್ಮೂಲಗಳಿಂದ ಸಜ್ಜಿತವಾಗಿದೆ. ಹೀಗಾಗಿ ಅಷ್ಟು ಸುಲಭವಾಗಿ ಚೀನಾದ ಹೊಸ ತಂತ್ರ ಯಶಸ್ವಿಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಬಹುದಾಗಿದೆ.

    ತಮ್ಮ ಭವಿಷ್ಯಕ್ಕೆ ತಾವೇ ಚಪ್ಪಡಿ ಎಳೆದುಕೊಂಡರೇ ವಿಶ್ವನಾಥ್?


    ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಕೋರ್ ಕಮಿಟಿಯಂತೆಯೇ ಬಿಜೆಪಿ ವರಿಷ್ಠರೂ ಸಮತೋಲನದ ಹೆಜ್ಜೆ ಇರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸು ಮಾಡಿದ್ದ ಮೂವರ ಪೈಕಿ ಅಡಗೂರು ಎಚ್.ವಿಶ್ವನಾಥ್ ಹೊರತುಪಡಿಸಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಕೋರ್ ಕಮಿಟಿ ಶಿಫಾರಸಿನಂತೆ ಚಿಂಚೋಳಿ ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಅವರನ್ನು ಕಣಕ್ಕೆ ಇಳಿಸಿದ್ದರೆ, ಸಾಮಾನ್ಯ ಕಾರ್ಯಕರ್ತನ ಕೋಟಾದಲ್ಲಿ ದಕ್ಷಿಣ ಕನ್ನಡದ ಪ್ರತಾಪ್‌ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಇಲ್ಲಿ ಯಡಿಯೂರಪ್ಪ, ಕೋರ್ ಕಮಿಟಿ, ವರಿಷ್ಠರು ಈ ಮೂವರಲ್ಲಿ ಯಾರಿಗೂ ಅಸಮಾಧಾನವಾಗಿಲ್ಲ, ಯಾರೂ ಸೋತಿಲ್ಲ.
    ನಿಜವಾಗಿ ಸೋತವರು ಎಂದರೆ ವಿಶ್ವನಾಥ್ ಮಾತ್ರ.

    ಒಂದರ್ಥದಲ್ಲಿ ಇಲ್ಲಿಗೆ ವಿಶ್ವನಾಥ್ ಅವರ ರಾಜಕೀಯ ಬದುಕು ಬಹುತೇಕ ಮುಗಿದಂತಾಗಿದೆ.ಹುಣಸೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ದುಡುಕದೇ ಇದ್ದಿದ್ದರೆ ರಾಜಕೀಯ ಪುನರ್ಜನ್ಮ ಪಡೆಯಲು ಅವಕಾಶವಿತ್ತು. ಅಲ್ಲಿ `ಹಳ್ಳಿ ಹಕ್ಕಿ’ಗೆ ಸೋಲು ಖಚಿತ ಎನ್ನುವುದನ್ನು ಗುಪ್ತಚರ ಇಲಾಖೆ ಸ್ಪಷ್ಟವಾಗಿ ತಿಳಿಸಿತ್ತು. ಬಿಜೆಪಿ ಆಂತರಿಕ ವರದಿಯೂ ಅದನ್ನೇ ಹೇಳಿತ್ತು. ಖುದ್ದು ಮುಖ್ಯಮಂತ್ರಿ ಸಹ, `ಅವಸರಪಡಬೇಡಿ. ಸ್ದಲ್ಪ ತಡೆದುಕೊಳ್ಳಿ. ಎಮ್ಮೆಲ್ಸಿ ಮಾಡಿ ಮಂತ್ರಿ ಮಾಡ್ತೀನಿ. ಉಪ ಚುನಾವಣೆಗೆ ಸ್ಪರ್ಧೆ ಬೇಡ’ ಎಂದು ಸಾರಿಸಾರಿ ಹೇಳಿದ್ದರು. ಆದರೂ ವಿಶ್ವನಾಥ್ ಪ್ರತಿಷ್ಠೆಗೆ ಬಿದ್ದು ತಮ್ಮ ಭವಿಷ್ಯಕ್ಕೆ ತಾವೇ ಕಲ್ಲು ಹಾಕಿಕೊಂಡರು.

    ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಆರ್.ಶಂಕರ್ ಸಹ ಸೋಲುತ್ತಾರೆಂಬ ವರದಿ ಇತ್ತು. ಹೀಗಾಗಿ ಅವರಿಗೆ ಆಗ ಟಿಕೆಟ್ ನೀಡದೇ, ಕೊಟ್ಟ ಮಾತಿನಂತೆ ವಿಧಾನ ಪರಿಷತ್‌ಗೆ ಟಿಕೆಟ್ ನೀಡಲಾಗಿದೆ. ವಿಶ್ವನಾಥ್ ಸಹ ಉಪ ಚುನಾವಣೆ ವೇಳೆ ದುಡುಕದೇ ಇದ್ದಿದ್ದರೆ ಈಗ ಶಾಸಕರಾಗಿ ಮಂತ್ರಿಯೂ ಆಗಬಹುದಿತ್ತು. ವಿಶ್ವನಾಥ್ ಪರವಾಗಿ ಅವರೊಂದಿಗೆ ರಾಜೀನಾಮೆ ನೀಡಿದ್ದ ಎಲ್ಲರೂ ವಕಾಲತ್ತು ವಹಿಸಿದ್ದರು. ಪಕ್ಷಕ್ಕೆ ಕರೆತಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಹ ವಿಧಾನ್ ಪರಿಷತ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಟಿಕೆಟ್ ನೀಡದಿದ್ದರೆ ವಿಶ್ವನಾಥ್ ಬಾಯಿ ಮುಚ್ಚಿಸುವುದು ಕಷ್ಟ ಎಂಬ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಲಹೆಯಂತೆ ಕೋರ್ ಕಮಿಟಿ ಸಹ ವಿಶ್ವನಾಥ್ ಹೆಸರನ್ನು ವರಿಷ್ಠರಿಗೆ ರವಾನಿಸಿತ್ತು.

    ಆದರೆ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ವಿಶ್ವನಾಥ್ ಬಗ್ಗೆ ಒಲವು ತೋರಿಸಿಲ್ಲ. ಅದಕ್ಕೆ ಅವರ ಬಾಯಿಬಡುಕತನ, ವಯಸ್ಸು ಮತ್ತು ಅನಾರೋಗ್ಯ ಮೂರೂ ಕಾರಣ ಇರಬಹುದು. ಜತೆಗೆ ಎಂ.ಟಿ.ಬಿ., ಶಂಕರ್, ವಿಶ್ವನಾಥ್ ಮೂವರೂ ಕುರುಬ ಸಮುದಾಯದವರು ಎಂಬ ಕಾರಣವೂ ಇರಬಹುದು. ಸಲಹೆ ಧಿಕ್ಕರಿಸಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಕಾರಣದಿಂದ ಅಂತಿಮವಾಗಿ ವಿಶ್ವನಾಥ್‌ಗೆ ಟಿಕೆಟ್ ನಿರಾಕರಿಸಲಾಗಿದೆ.

    ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂ.ಟಿ.ಬಿ. ನಾಗರಾಜ್ ಸಹ ಸೋತಿಲ್ಲವೆ? ಅವರಿಗೆ ಟಿಕೆಟ್ ನೀಡಿ ವಿಶ್ವನಾಥ್‌ಗೆ ನಿರಾಕರಿಸಿರುವುದು ತಪ್ಪಲ್ಲವೇ ಎಂಬ ಪ್ರಶ್ನೆ ಏಳಬಹುದು. ಇಬ್ಬರ ಪ್ರಕರಣದಲ್ಲಿ ಭಿನ್ನತೆ ಇದೆ. ಎಂ.ಟಿ.ಬಿ. ಗೆಲ್ಲುವ ಸಾಧ್ಯತೆಗಳಿದ್ದವು, ಅವರಿಗೆ ಅಡ್ಡಗಾಲು ಹಾಕಿದ್ದು ಬಿಜೆಪಿ ಸಂಸದರೇ ಆಗಿರುವ ಬಿ.ಎನ್.ಬಚ್ಚೇಗೌಡ ಮತ್ತು ಅವರ ಪುತ್ರ ಶರತ್ ಬಚ್ಚೇಗೌಡ. ಎಂ.ಟಿ.ಬಿ ಸೋಲಿನಲ್ಲಿ ಬಿ.ಎನ್.ಬಚ್ಚೇಗೌಡರ ಕೊಡುಗೆ ದೊಡ್ಡದು. ಅದು ವರಿಷ್ಠರಿಗೂ ಗೊತ್ತು. ಹೀಗಾಗಿಯೇ ಆಗ ಪರೋಕ್ಷವಾಗಿ ಪಕ್ಷದಿಂದಲೇ ಆಗಿರುವ ಅನ್ಯಾಯವನ್ನು ಈಗ ಸರಿಪಡಿಸಿದ್ದಾರೆ.

    ಪಕ್ಷ ಸಂಘಟನೆ, ಸಂಪನ್ಮೂಲದ ವಿಚಾರದಲ್ಲಿ ಸಹ ವಿಶ್ವನಾಥ್, ಎಂ.ಟಿ.ಬಿ. ಅವರನ್ನು ಹೋಲಿಸಲಾಗದು. ಮೈಸೂರು ರಾಜಕಾರಣದ ಒಳಸುಳಿಗಳಿಂದಾಗಿ ಸೋಲು ಖಚಿತವೆಂಬುದು ತಿಳಿದೂ ವಿಶ್ವನಾಥ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಕೈ ಸುಟ್ಟುಕೊಂಡಿದ್ದಾರೆ.

    ವಿಶ್ವನಾಥ್ ಹೊರತುಪಡಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿರುದ್ಧ ಬಂಡೆದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ವಿತ್ವಕ್ಕೆ ಬರಲು ಕಾರಣರಾದ ಬಹುತೇಕ ಎಲ್ಲರಿಗೂ ಈಗ ಸ್ಥಾನಮಾನ ಸಿಕ್ಕಂತಾಗಿದೆ. ಅಲ್ಲಿಗೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡAತಾಗಿದೆ. ಈಗ ಅವರು ನಿರಾಳ. ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನ, ಮಸ್ಕಿಯ ಪ್ರತಾಪ್‌ಗೌಡ ಪಾಟೀಲ್ ಪ್ರಕರಣಗಳು ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಕಾಯುತ್ತಿವೆ.

    ಕಾಂಗ್ರೆಸ್ ಅಚ್ಚರಿಯ ಆಯ್ಕೆ


    ಬಿಜೆಪಿಯಂತೆಯೇ ಕಾಂಗ್ರೆಸ್ ಸಹ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ನಾಲ್ಕು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುತ್ತಿರುವುದು ರಾಜ್ಯ ನಾಯಕರಿಗೆ ಹಲವು ಸಂದೇಶಗಳನ್ನೂ ರವಾನಿಸಿದೆ. ಹರಿಪ್ರಸಾದ್‌ಗೆ ಕೆಲವರ್ಷಗಳಿಂದ ಈಚೆಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಮೂಡಿರುವುದು ಅದಕ್ಕೆ ಕಾರಣ.

    ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಸಮತೋನದ ಹೆಜ್ಜೆ
    ಇರಿಸಬೇಕಿದೆ. ಹೈಕಮಾಂಡ್‌ಗೆ ರಾಜ್ಯದ ವಿದ್ಯಮಾನಗಳ ನಿಖರ ಮಾಹಿತಿ ನೀಡುವ ವಿಶ್ವಾಸಾರ್ಹ ವ್ಯಕ್ತಿಯೊಬ್ಬರು ಬೇಕು ಎಂಬ ಲೆಕ್ಕಾಚಾರವೂ ಇದರ ಹಿಂದೆ ಇರಬಹುದು. ರಾಜ್ಯಸಭೆ ಸದಸ್ಯರಾಗಿದ್ದವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವುದು ಕಾಂಗ್ರೆಸ್‌ನಲ್ಲಿ ಹೊಸತೇನೂ ಅಲ್ಲ. ಕೇಂದ್ರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಹಾಯಕ ಸಚಿವರಾಗಿದ್ದ ಎಂ.ವಿ.ರಾಜಶೇಖರನ್ ಅವರನ್ನೂ ಎಮ್ಮೆಲ್ಸಿ ಮಾಡಲಾಗಿತ್ತು. ಇನ್ನು
    ನಜೀರ್ ಅಹಮದ್‌ಗೆ ಟಿಕೆಟ್ ನೀಡುವ ಮೂಲಕ ಮುಸ್ಲಿಂ ಲಾಬಿಗೆ ಕಡಿವಾಣ ಹಾಕುವುದರ ಜತೆಗೆ ಪಕ್ಷ ಅಲ್ಪಸಂಖ್ಯಾತರ ಪರ ಎಂಬ ಸಂದೇಶವನ್ನೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರವಾನಿಸಿದ್ದಾರೆ.

    ಪಿಒಕೆ : ರಾಜ್‌ನಾಥ್ ಸಿಂಗ್ ಮಾತಿನ ಅಂತರಾರ್ಥವೇನು?

    ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರ ಪಾಕ್ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯೊಂದು ಎಲ್ಲೆಡೆ ಸಂಚಲನ ಮೂಡಿಸಿದೆ. ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಸಚಿವ ಸಿಂಗ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರೆ, ಕಾಶ್ಮೀರದ ಬಹುತೇಕ ಪತ್ರಿಕೆಗಳು ಸಚಿವರಿಗೆ ಶ್ಲಾಘನೆಯ ಸುರಿ ಮಳೆಯನ್ನೇ ಹರಿಸಿದ್ದಾರೆ.

    ಆಗಿದಷ್ಟು ಇಷ್ಟೇ. ಜಮ್ಮು ಜನ ಸಂವಾದ್ ರಾಲಿಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವ ಸಿಂಗ್, ಮೋದಿ ಆಡಳಿತದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಇದನ್ನು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನತೆಯೂ ವೀಕ್ಷಿಸುತ್ತಿದ್ದು, ಸ್ವಲ್ಪ ಕಾಯಿರಿ. ಮುಂದಿನ ದಿನಗಳಲ್ಲಿ ಅವರೇ ಸ್ವಯಂ ಪ್ರೇರಿತವಾಗಿ ಭಾರತದ ಜತೆ ಪುನರ್ ವಿಲೀನಕ್ಕೆ ಹೋರಾಟ ಮಾಡಲು ಮುಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

    ಇಡೀ ವಿಷಯ ನಾವು ಅಂದುಕೊಂಡಷ್ಟು ಸರಳವಲ್ಲ. ಇಂತಹ ಹೇಳಿಕೆ ಇದೇ ಮೊದಲ ಬಾರಿಗೆ ಬಂದಿಲ್ಲ. ಪಾಕ್ ಭಯೋತ್ಪಾದಕರನ್ನು ರವಾನಿಸುವುದನ್ನು ನಿಲ್ಲಿಸದಿದ್ದರೆ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಗತಿಯೇ ಭವಿಷ್ಯದಲ್ಲಿ ಬರಬಹುದು ಎಂದು ಹೇಳಿದ್ದರು. ಇದರ ಬೆನ್ನಹಿಂದೆಯೇ ಪಾಕ್, ಭಾರತದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳನ್ನು ವಶಕ್ಕೆ ಪಡೆದು ಬಳಿಕ, ಅತೀವ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಿದ್ದೂ ಆಯಿತು. ವಾಸ್ತವವಾಗಿ ಅವರಿಬ್ಬರನ್ನು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐನ ಏಜೆಂಟರು ಬೈಕ್ ನಲ್ಲಿ ಫಾಲೋ ಮಾಡಿದ್ದರು. ಈಗ ಆದ ಚಿಕ್ಕ ಅಪಘಾತವನ್ನೇ ನೆಪವಾಗಿಟ್ಟುಕೊಂಡು ಅವರ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

    ಇದೇ ಮೊದಲಲ್ಲ

    ಪಾಕ್ ಕುರಿತ ಬಿಜೆಪಿ ಸರಕಾರದ ಕಠಿಣ ನಿಲುವು ಇದೇ ಮೊದಲ ಬಾರಿಗೆ ವ್ಯಕ್ತವಾಗಿಲ್ಲ. ಅಣ್ವಸ್ತ್ರ ಪ್ರಯೋಗವನ್ನು ನಾವೇ ಮೊದಲ ಬಾರಿಗೆ ಮಾಡುವುದಿಲ್ಲ ಎಂದು ಭಾರತದ ನಿಲುವನ್ನು ಮುಂದಿನ ದಿನಗಳಲ್ಲಿ ಪರಿಷ್ಕರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ಈ ಹಿಂದೆ ರಾಜ್ ನಾಥ್ ಸಿಂಗ್ ನೀಡಿದ್ದರು. ಇನ್ನು ಪುಲ್ವಾಮಾ ಯೋಧರ ಹತ್ಯೆಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅಂತೂ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ರಾಜ್ ನಾಥ್ ಸಿಂಗ್ ಅವರ ಈ ಹೇಳಿಕೆಯನ್ನು ಕೂಡ ಲಘುವಾಗು ಪರಿಗಣಿಸುವುದು ಕಷ್ಟ ಎಂದೇ ಹೇಳಬಹುದು. ಆರ್ಥಿಕವಾಗಿ ಅತೀವ ಸಂಕಷ್ಟದಲ್ಲಿರುವ ಪಾಕಿಸ್ತಾನವಂತೂ ಸದ್ಯ ಪೂರ್ಣ ಪ್ರಮಾಣದ ಒಂದು ದಿನದ ಯುದ್ಧವನ್ನೂ ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ಶೀತಲ ಸಮರವಿಲ್ಲದ ಈ ಕಾಲದಲ್ಲಿ ಅಮೆರಿಕದ ನೆರವು ಕೂಡ ಅದಕ್ಕೆ ದೊರೆಯುವುದಿಲ್ಲ ಎಂಬುದು ಅಷ್ಟೇ ಶತಸ್ಸಿದ್ಧ.

    ಪಿಒಕೆ ಆಸಕ್ತಿದಾಯಕ ವಿಷಯಗಳು

    ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಹಲವಾರು ಆಸಕ್ತಿದಾಯಕ ವಿಷಯಗಳು ತಿಳಿಯುತ್ತವೆ. 1947ರಲ್ಲಿ ಪಾಕಿಸ್ತಾನ ತನ್ನ ಗುಡ್ಡಗಾಡು ಜನರ ಪಡೆಯ ಮೂಲಕ ಪರೋಕ್ಷವಾಗಿ ಸಮರ ಸಾರಿ ಈ ಭಾಗವನ್ನು ಆಕ್ರಮಿಸಿಕೊಂಡಿತು. ಇದು ಎರಡು ಹಂತದ ಆಡಳಿತಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಒಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಇನ್ನೊಂದು ಗಿಲ್ಗಿಟ್-ಬಾಲ್ಟೀಸ್ತಾನ್. ಪಿಒಕೆಯನ್ನು ಪಾಕಿಸ್ತಾನ ಅಜಾದ್ ಕಾಶ್ಮೀರ ಎಂದೇ ಕರೆಯುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯಿದ್ದಾರೆ. ಈ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರೂ, ಪಾಕ್ ಮೂಗಿನ ನೇರದಲ್ಲೇ ಎಲ್ಲವೂ ಅಲ್ಲಿ ನಡೆಯುತ್ತಿವೆ ಎನ್ನುವುದು ಹಗಲಿನಷ್ಟೇ ನಿಚ್ಚಳ.

    ಅಜಾದ್ ಕಾಶ್ಮೀರ (ಗಿಲ್ಗಿಟ್ -ಬಾಲ್ಟಿಸ್ತಾನ್) ಸುಮರು 13,300 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಜನಸಂಖ್ಯೆ ಸುಮಾರು 52 ಲಕ್ಷ ಎಂದು ತಿಳಿಯುತ್ತದೆ. ಇದರ ಭಾಗಗಳು ಪಾಕಿಸ್ತಾನದ ಪಂಜಾಬ್, ಅಫ್ಘಾನಿಸ್ತಾನದ ವಖ್ಹಾನ್ ಕಾರಿಡಾರ್ ಮತ್ತು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದ ಜತೆಗೆ ಕೂಡ ಗಡಿಯನ್ನು ಹಂಚಿಕೊಂಡಿದೆ. 10 ಜಿಲ್ಲೆಗಳು, 33 ತಾಲೂಕು, 182 ಫೆಡರಲ್ ಕೌನ್ಸಿಲ್ ಹೊಂದಿರುವ ಇದರ ರಾಜಧಾನಿ ಮುಝಾಫರಾಬಾದ್.

    1963ರಲ್ಲಿ ಹುಂನ್ಝಾ-ಗಿಲ್ಗಿಟ್ ಭಾಗದ ಸಂಕ್ಸಗಂ ಕಣಿವೆ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ಹಸ್ತಾಂತರಿಸಿದ್ದು, ಈಗ ಇದನ್ನು ಬಿಡುಗಡೆ ಹೊಂದಿದ ಪ್ರದೇಶ ಎಂದು ಘೋಷಿಸಲಾಗಿದೆ.

    ನೆಹರು ಮನಸ್ಸು ಮಾಡಲಿಲ್ಲ

    1947ರ ವಿಭಜನೆಯ ಸಂದರ್ಭದಲ್ಲಿ ಪಶ್ತೂನ್ ಬುಡಕಟ್ಟು ಜನರು ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟಕ್ಕೆ ತಾವು ಬೆಂಬಲ ನೀಡಿದ್ದೆವು ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಆಗ ಅಲ್ಲಿನ ಮಹಾರಾಜರಾಗಿದ್ದ ರಾಜಾ ಹರಿಸಿಂಗ್ ನೆಹರೂ ಸರಕಾರದ ಜತೆಗೆ ಒಪ್ಪಂದ ಮಾಡಿಕೊಂಡು ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂವಹನ ಕ್ಷೇತ್ರಗಳಲ್ಲಿ ಮಾತ್ರ ಭಾರತದ ಹಸ್ತಕ್ಷೇಪಕ್ಕೆ ಅವಕಾಶ ಸಿಗುವಂತಾಯಿತು. ಇದನ್ನು ಹೊರತು ಪಡಿಸಿ ಉಳಿದಂತೆ ಅದೊಂದು ಸ್ವಾಯತ್ತ ರಾಜ್ಯ ಅಂದರೆ ಪರೋಕ್ಷವಾಗಿ ದೇಶವಾಗಿಯೇ ಉಳಿಯಿತು.

    ಪಾಕಿಸ್ತಾನದ ಆಕ್ರಮಣದ ಹಿನ್ನೆಲೆಯಲ್ಲಿ ಆಗ ಪ್ರಧಾನಿಯಾಗಿದ್ದ ನೆಹರು ಮನಸ್ಸು ಮಾಡಿದ್ದರೆ ಪಾಕಿಗಳನ್ನು ಹೊಡೆದಟ್ಟಬಹುದಿತ್ತು. ಆದರೆ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಯ ಬಾಗಿಲಿಗೆ ತಂದು ಬಿಟ್ಟರು. ಆಗಲೋ ಭಾರತ ಯಾವುದೇ ರೀತಿಯ ಒತ್ತಡವನ್ನು ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಅಮೆರಿಕ (ಶೀತಲ ಸಮರ ಕಾಲ) ಪ್ರೇರಿತ ರಾಜಕೀಯದಿಂದಾಗಿ ಕಾಶ್ಮೀರದಲ್ಲಿ ಜನ ಮತಗಣನೆಗೆ ಅದು ಸೂಚಿಸಿತು. ಇದನ್ನೇ ಇಟ್ಟುಕೊಂಡು ಈಗಲೂ ಪಾಕಿಸ್ತಾನ, ಈ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಲೇ ಬಂದಿದೆ.

    ಭಯೋತ್ಪದಕರ ತಾಣ

    ಅಜಾದ್ ಕಾಶ್ಮೀರವನ್ನು ಪಾಕಿಸ್ತಾನ ಯಾವತ್ತೂ ಭಾರತದ ವಿರುದ್ಧದ ಷಡ್ಯಂತ್ರದ ಅಸ್ತ್ರವಾಗಿಯೇ ಬಳಸಿಕೊಂಡು ಬಂದಿದೆ. ಗಡಿಭಾಗವಾಗಿದ್ದರಿಂದ ಅಲ್ಲಿ ಭಯೋತ್ಪಾದಕರ ನೆಲೆಗಳು, ತರಬೇತಿ ಕೇಂದ್ರಗಳನ್ನು ಕೂಡ ನಿರ್ಮಿಸಿದೆ. ನೇರವಾಗಿ ಅಲ್ಲಿಗೆ ಹೋಗಿ ಭಾರತ ಯುದ್ಧ ಮಾಡಿದರೆ ಆಗ ಅದು ಅಂತಾರಾಷ್ಟ್ರೀಯ ವಿಷಯವಾಗಿ ಪರಿಸ್ಥಿತಿ ವಿಷಮಕ್ಕೆ ಹೋಗಬಹುದು ಎಂಬ ಒಂದೇ ಕಾರಣದಿಂದ ಭಾರತ ಕೂಡ ಸುಮ್ಮನಿರುತ್ತಾ ಬಂದಿದೆ. ಯಾಕೆಂದರೆ ಎರಡೂ ದೇಶಗಳು ಅಣ್ವಸ್ತ್ರ ಸಜ್ಜಿತವಾಗಿವೆ. ಆದರೆ, ಭಾರತಕ್ಕೆ ಇರುವ ಅಂತಾರಾಷ್ಟ್ರೀಯ ಮತ್ತು ಮಾನವೀಯ ಬದ್ಧತೆ ಪಾಕಿಸ್ತಾನಕ್ಕೆ ಇಲ್ಲದಿರುವುದು ಇದಕ್ಕೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

    error: Content is protected !!