25.1 C
Karnataka
Saturday, April 19, 2025
    Home Blog Page 175

    ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿಗೆ ಕಿಮ್ಮತ್ತು ಕೊಡದ ಬಿಜೆಪಿ ಹೈಕಮಾಂಡ್

    ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ `ಲಾಬಿ’ಗೆ ಅವಕಾಶವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.ಪ್ರಭಾವಿ ಮುಖಂಡ ಪ್ರಭಾಕರ ಕೋರೆ ಮತ್ತು ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಟಿಕೆಟ್ ಖಚಿತ ಎಂಬ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ರಾಯಚೂರಿನ ಅಶೋಕ ಗಸ್ತಿ
    ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡಿದೆ.

    ಗಸ್ತಿ ಬಳ್ಳಾರಿ ವಿಭಾಗದ ಪ್ರಭಾರಿಯಾಗಿದ್ದರೆ, ಕಡಾಡಿ ಬೆಳಗಾವಿ ವಿಭಾಗದ ಪ್ರಭಾರಿಯಾಗಿ ಪಕ್ಷ ಸಂಘಟನೆಯ ಹೊಣೆ ನಿರ್ವಹಿಸುತ್ತಿದ್ದರು. ಇಬ್ಬರೂ ಅಧಿಕಾರಕ್ಕೆ ಹಪಹಪಿಸದೇ, ಎಲೆ ಮರೆಯ ಕಾಯಿಯಂತೆ ತಮ್ಮ
    ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಪ್ರಭಾಕರ ಕೋರೆ ಅವರಿಗೆ ಟಿಕೆಟ್ ನೀಡಿದ್ದರೆ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಸಿಗಲಿಲ್ಲವೆಂದು ಶಾಸಕ ಉಮೇಶ್ ಕತ್ತಿ ಮುನಿಸಿಕೊಳ್ಳುವ ಅಪಾಯವಿತ್ತು. ಪ್ರಕಾಶ್ ಶೆಟ್ಟಿಯವರನ್ನು ಕಣಕ್ಕೆ ಇಳಿಸಿದ್ದರೆ ಬೇರೆಯೇ ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ
    ಅಳೆದು ತೂಗಿ ಗಸ್ತಿ, ಕಡಾಡಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

    ರಾಜ್ಯ ಬಿಜೆಪಿಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಇಬ್ಬರ ಹೆಸರೂ ಇರಲಿಲ್ಲ. ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ, ಲಾಬಿಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ. ಅಲ್ಲದೇ ದೇಶದ ಪ್ರತಿ ಬ್ಲಾಕ್‌ನಿಂದಲೂ ತಮ್ಮದೇ ಮೂಲಗಳಿಂದ ಮಾಹಿತಿ ತರಿಸಿಕೊಳ್ಳುವ ಸಾಮರ್ಥ್ಯವಿದೆ ಎಂಬ ಎಚ್ಚರಿಕೆಯನ್ನು ಈ ಇಬ್ಬರ ಮೂಲಕ ರಾಜ್ಯಮಟ್ಟದ `ನಾಯಕ’ರುಗಳಿಗೂ ನೀಡಿದ್ದಾರೆ. ಜತೆಗೆ, ಮುಂಬಯಿ ಕರ್ನಾಟಕ,ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಪ್ರಾದೇಶಿಕ ಸಮತೋಲನವನ್ನೂ
    ಸಾಧಿಸಿದ್ದಾರೆ. ಇದರೊಂದಿಗೆ ಒಂದೊಮ್ಮೆ ಕೋರೆ-ಕತ್ತಿ ಅಸಮಾಧಾನಗೊಂಡರೆ ಅದರ ಪರಿಣಾಮ ಪಕ್ಷದ ಮೇಲೆ ಬೀರದಂತೆಯೂ ಜಾಣ್ಮೆಯ ನಡೆ ಇರಿಸಿದ್ದಾರೆ. ಈ ಆಯ್ಕೆ ಕುರಿತು ಯಾರೂ
    ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಂತೆಯೇ ಇಲ್ಲ!

    ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಧುರೀಣರಿಂದ ಮಾತ್ರವೇ ಇಂತಹ ದಿಟ್ಟತನದ ನಿರ್ಧಾರ ಸಾಧ್ಯ.ಕಾಂಗ್ರೆಸ್‌ನಲ್ಲಿ ಕೂಡ ಈ ಸಲ ಹೈಕಮಾಂಡ್ ರಾಜ್ಯ ನಾಯಕರನ್ನು ವಿಶ್ವಾಸಕ್ಕೆತೆಗೆದುಕೊಳ್ಳದೇ ಏಕಾಏಕಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅಂತಿಮಗೊಳಿಸಿದೆ
    ಎನ್ನುವುದು ಗಮನಾರ್ಹ.

    ಇನ್ನು ಬಿಜೆಪಿಯು ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸದೇ ಇರುವಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಹಾದಿಸುಗಮಗೊಳಿಸಿದೆ. ಇಲ್ಲಿಯೂ ಖರ್ಗೆ, ಗೌಡರಂತಹ ಹಿರಿಯ ನಾಯಕರನ್ನು ನಾವು ಗೌರವಿಸುತ್ತೇವೆ ಎಂಬ ಸಂದೇಶ ಕಳುಹಿಸುವ ಪ್ರಯತ್ನವನ್ನು ಮೋದಿ, ಶಾ ಮಾಡಿರುವುದು ಸ್ಪಷ್ಟ.

    ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

    ಇಂದು ನಿಧನರಾದ ಚಿರಂಜೀವಿ ಸರ್ಜಾ ಬಗ್ಗೆ ಅವರ ಬಾಲ್ಯದ ಗೆಳೆಯ ಕನ್ನಡಕ್ಕಾಗಿ ಒಂದನ್ನು ಒತ್ತಿ ಮತ್ತು ದಯವಿಟ್ಟು ಗಮನಿಸಿ ಸಿನಿಮಾ ಖ್ಯಾತಿಯ ಅವಿನಾಶ್ ಷಟಮರ್ಶನ ಅವರ ಆಪ್ತ ಬರಹ

    ಚಿರು ಅಂದರೆ ಅವನ ಮುಗ್ಧತೆಗೇ ಫೇಮಸ್! ಇವತ್ತು ಅವನು ಇಲ್ಲ ಅನ್ನುವ ಸುದ್ದಿಯನ್ನು ನನ್ನ ಬುದ್ಧಿ ಒಪ್ಪದೇ ಇರುವಷ್ಟು ಮಂಕು ಕವಿದಿದೆ.
    ಸರಳ, ಸಂಯಮ, ಸ್ನೇಹ ಎಲ್ಲದರಲ್ಲೂ ಅವನು ಧಾರಾಳಿ…

    ಅವಿನಾಶ್ ಷಟಮರ್ಶನ

    ನಾನು ಚಿಕ್ಕ ಹುಡುಗ ಇದ್ದಾಗ ಶಾಲೆಗೆ ರಜಾ ಬಂದರೆ, ಬೆಂಗಳೂರಿಗೆ ಬರ್ತಿದ್ದೆ. ಬೆಂಗಳೂರು ಅಂದರೆ, ಪನ್ನಗನ ಮನೆ. ನನಗೆ ಚೆನ್ನಾಗಿ ನೆನಪಿದೆ ಚಿರು ಹತ್ತಿರ ಪಲ್ಸರ್ 150 ಇತ್ತು. ಕಾದ ಅವನ ಗಾಡಿ ಸೈಲೆನ್ಸರ್ ಗೆ ನಾನು ಕಾಲು ಕೊಟ್ಟು ಸುಟ್ಟು ಕೊಂಡಿದ್ದೆ. ಇದನ್ನು ಗೇಲಿ ಮಾಡಿಕೊಂಡು ಎಲ್ಲರೂ ನಗ್ತಿದ್ದಾಗ ಚಿರು ಅಯ್ಯೋ ಪಾಪ ಅಂತ ಅನುಕಂಪ ತೋರಿಸಿದ್ದ. ಅವನ ಅಂತಃಕರಣ ಮೆರೆದಿದ್ದ!

    ನನಗೆ ಬಹಳ ಮರೆವು ಇದೆ ಅಂದುಕೊಂಡಿದ್ದೆ ಆದರೆ ನಿನ್ನ ಅಗಲಿಕೆ ನನ್ನ ನೆನಪಿನ ತೀವ್ರತೆಯನ್ನ ತೋರಿಸ್ತಾ ಇದೆ.

    ಮೊದಲ ಪಿಯು ನಲ್ಲಿ ಇದ್ದಾಗ ಚಿರು ಹೋಗ್ತಿದ್ದ ಜಿಮ್ ಗೆ ನಾನೂ ಹೋಗ್ತಿದ್ದೆ. ಧ್ರುವನೂ ಅಲ್ಲೇ ಜಿಮ್ ಮಾಡ್ತಾ ಇದ್ದದ್ದು.ಜಿಮ್ ನಲ್ಲೂ ಅಷ್ಟೇ ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿವಳಿಕೆ ತುಂಬಿದ ಮೊದಲಿಗ ಚಿರು ಅಂತ ಹೇಳಬಹುದು!

    ಅವನು ಸಿನಿಮಾ ಮಾಡೋಕಿಂತ ಮೊದಲು ನಾನು ಅವನನ್ನ ಹೇಗೆ ನೋಡಿದ್ದೆ ಅದೇ ನಗು ಮುಖ, ಅದೇ ಪ್ರಸನ್ನತೆ ಹ್ಯಾಪಿ ನ್ಯೂ ಯಿಯರ್ ಸಿನಿಮಾ ಆಡಿಯೋ ಲಾಂಚ್ ನಲ್ಲೂ ನೋಡಿದ್ದೆ. ನಾನು ಅವನನ್ನ ಕಡೆಯದಾಗಿ ನೋಡಿದ್ದು ಅಲ್ಲೇ…..

    ನಿನ್ನಲ್ಲಿದ್ದ ಎಷ್ಟೋ ಗುಣಗಳು ನನಗೆ ಹಿಡಿಸಿತ್ತು ಅನ್ನೋದೇ ನನಗೆ ಗೊತ್ತಿರಲಿಲ್ಲ.ನಿಜ ಹೇಳಬೇಕಂದರೆ ಇವತ್ತು ಬೆಳಗ್ಗೆ ಟೀವಿಯಲ್ಲಿ ನಿನ್ನ ಹಾಡು ನೋಡಿದೆ ಕಣೋ… ನನ್ನ ಹಾಡೇ ನಾನು ನೋಡಲ್ಲ, ಟಿ.ವಿ ನೋಡೋದೇ ಇಲ್ಲ….

    ನಿನ್ನ ಇಚ್ಛೆಯನ್ನ ನಿಮ್ಮ ಕುಟುಂಬ, ಸ್ನೇಹಿತರು, ನಿನ್ನ ಪರಿವಾರವರು ಪೂರ್ಣಗೊಳಿಸುವ ಸಾಮರ್ಥ್ಯ ನೀನೇ ಕೊಟ್ಟು ಎಲ್ಲರಿಗೂ ವಿದಾಯ ಹೇಳಬೇಕು.

    ಕೊನೆಯದಾಗಿ, ನಿನ್ನ ಮಡದಿಯ ಪರವಾಗಿ ನಾನಲ್ಲ ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ.

    ಇದನ್ನೂ ಓದಿ:ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು

    ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು ಚಿರಂಜೀವಿ

    ಕೊರೊನಾ ದಾಳಿಯಿಂದ ಈಗಾಗಲೇ ತತ್ತರಿಸಿರುವ ಸಿನಿಮಾ ರಂಗಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ. ಅತೀ ಚಿಕ್ಕ ವಯಸ್ಸಿನಲ್ಲೇ ಚಿರಂಜೀವಿ ಸರ್ಜಾ, ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ರವಿವಾರ ಮಧ್ಯಾಹ್ನ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿ ಆಗದೇ ಬಾರದ ಲೋಕಕ್ಕೆ ತೆರಳಿದ್ದಾರೆ. ಜತೆಗೆ ಕಳೆದೆರಡು ತಿಂಗಳಿಂದ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎನ್ನಲಾಗುತ್ತಿದೆ.

    2009 ರಲ್ಲಿ ವಾಯು ಪುತ್ರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಇವರು, ಈವರೆಗೂ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮ ಐ ಲವ್ ಯೂ, ಚಂದ್ರಲೇಖ, ಗಂಡೆದೆ, ಆಟಗಾರ, ವಾಯುಪುತ್ರ ಇವರ ಸೂಪರ್ ಹಿಟ್ ಚಿತ್ರಗಳು. ಕೊನೆಯದಾಗಿ ಇವರ ಶಿವಾರ್ಜುನ ಸಿನಿಮಾ ರಿಲೀಸ್ ಆಗಿತ್ತು. ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ.


    ಕನ್ನಡ ಸಿನಿಮಾ ರಂಗಕ್ಕೆ ಸರ್ಜಾ ಕುಟುಂಬದ ಕೊಡುಗೆ ಅಪಾರ. ಇವರ ಸೋದರ ಮಾವ ಕಿಶೋರ್ ಸರ್ಜಾ ಇವರನ್ನು ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಲಾಂಚ್ ಮಾಡಿದ್ದರು. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಇವರ ಬೆನ್ನೆಲುಬಾಗಿ ನಿಂತಿದ್ದರು. ಸಹೋದರ ಧ್ರುವ ಸರ್ಜಾ ಕೂಡ ಸಹೋದರ ಅನೇಕ ಸಿನಿಮಾಗಳಿಗೆ ಸಾಥ್ ನೀಡಿದ್ದರು.
    ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದು, ಈ ಜೋಡಿ 2018ರಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.


    ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ, ಸಂಸದೆ ಸುಮಲತಾ ಅಂಬರೀಶ್, ನಟರಾದ ಕಿಚ್ಚ ಸುದೀಪ್, ದರ್ಶನ್, ಗಣೇಶ್, ಶಿವರಾಜ್ ಕುಮಾರ್, ಪುನೀತ್, ನಿರ್ದೇಶಕ ಚೈತನ್ಯ ಸೇರಿದಂತೆ ಸಿನಿಮಾ ರಂಗದ ಅನೇಕ ಗಣ್ಯರು ಚಿರು ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    ನಟಿ ಸುಮಲತಾ ಅಂಬರೀಶ್ ತಮ್ಮ ಕುಟುಂಬದ ಜತೆಗಿನ ಚಿರು ಒಡನಾಟವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂಓದಿ : ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

    ಶಾಲೆಯೂ ಬೇಡ, ಆನ್ಲೈನ್ ತರಗತಿಗಳೂ ಬೇಡ, ಇನ್ನೂ ಸ್ವಲ್ಪ ದಿನ ಸುಮ್ಮನಿದ್ದು ಬಿಡಿ

    ಕೋವಿಡ್-19 ಇಲ್ಲವೇ ಇಲ್ಲ ಅಂದರೆ ಶೂನ್ಯಕ್ಕೆ ಇಳಿದ 21 ದಿನಗಳ ಬಳಿಕವಷ್ಟೇ ಶಾಲೆಗಳನ್ನು ಮತ್ತೆ ತೆರೆಯಿರಿ ಎಂಬುದು ಬಹುತೇಕ ಹೆತ್ತವರ ಒಕ್ಕೊರಲ ಅಭಿಪ್ರಾಯವಾಗಿದೆ. ವೈರಸ್ ಹಾವಳಿಯ ಬಳಿಕ ಈ ಕುರಿತು ಸಮೀಕ್ಷೆ ನಡೆಸಿದ ಲೋಕಲ್ ಸರ್ಕಲ್ಸ್ (LocalCircles) ನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಇದು ಆಡಳಿತ, ಸಾರ್ವಜನಿಕ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಒಳಗೊಂಡ ವೇದಿಕೆಯಾಗಿದೆ. 220 ಜಿಲ್ಲೆಗಳ ಸುಮಾರು 18,000 ಜನರ ಅಭಿಪ್ರಾಯವನ್ನು ಇದರಲ್ಲಿ ಸಂಗ್ರಹಿಸಲಾಗಿದೆ.

    ತಮ್ಮ ರಾಜ್ಯ ಅಥವಾ ಜಿಲ್ಲೆಯಲ್ಲಿ ಕೋವಿಡ್-19 ಶೂನ್ಯ ಪ್ರಮಾಣಕ್ಕೆ ಇಳಿದ ಬಳಿಕವೇ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಅಥವಾ ಶಾಲೆಯ ಅಡಳಿತ ಮಂಡಳಿ ಅಥವಾ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶೇ. 73ರಷ್ಟು ಹೆತ್ತವರು ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಶೇ. 16ರಷ್ಟು ಜನರು ಮಾತ್ರ ಹೊಸ ಪ್ರಕರಣ ವರದಿಯಾಗದಿದ್ದರೆ ಆಗ ಶಾಲೆಯನ್ನು ತೆರೆಯಬಹುದು ಎಂದು ಹೇಳಿದ್ದಾರೆ. ಕೆಲವರಂತೂ ಕೋವಿಡ್-19 ಪ್ರತಿಬಂಧಕ ಲಸಿಕೆ ಸಿದ್ಧವಾದ ಬಳಿಕವೇ ಮಕ್ಕಳಿಗೆ ಅಡ್ಮಿಷನ್ ಮಾಡಬೇಕು ಎಂದು ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಲೇಬೇಕಾಗಿದೆ. ಮುಖ್ಯವಾಗಿ ಯಾವುದೇ ಶಾಲೆಯಿರಲಿ ಅಂದರೆ ಲಕ್ಷಾಂತರ ಡೊನೇಷನ್ ಕೊಟ್ಟು ಮಕ್ಕಳನ್ನು ಸೇರಿಸುವ ಅಥವಾ ಕಡಿಮೆ ದುಡ್ಡಿನ ಸರಕಾರಿ ಶಾಲೆಯಿರಲಿ ಅಲ್ಲಿ ನೈರ್ಮಲ್ಯವನ್ನು ಎಷ್ಟು ನಿರ್ವಹಣೆ ಮಾಡುತ್ತಾರೆ ? ಸುಮಾರು ಎಂಟು ಗಂಟೆಗಳ ಕಾಲ ಶಾಲೆಯಲ್ಲಿ ಕಳೆಯುವ ಮಕ್ಕಳು ಶೌಚಾಲಯಕ್ಕೆ ಹೋಗುವ ಅಗತ್ಯವಿದ್ದೇ ಇದೆ. ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಬೆಳಗ್ಗೆ ಏಳು-ಎಂಟು ಗಂಟೆಗೆ ಮನ ಬಿಡುವ ಮಕ್ಕಳು ಏನು ಮಾಡಬೇಕು ? ಇರುವ ಬೆರಳೆಣಿಕೆಯಷ್ಟು ಹೌಸ್ ಕೀಪಿಂಗ್ ಸಿಬ್ಬಂದಿ ಎಷ್ಟು ಬಾರಿ ಟಾಯ್ಲೆಟ್ ಕ್ಲೀನಿಂಗ್ ಮಾಡಬಹುದು ? ಅದು ಬಿಡಿ, ಮಕ್ಕಳು ನಾನಾ ಊರಿನಿಂದ ಬಂದಿರುತ್ತಾರೆ. ಅವರ ಸೋಶಿಯಲ್ ಡಿಸ್ಟನ್ಸ್ ಹೇಗೆ ನಿರ್ವಹಣೆ ಮಾಡಬಹುದು ? ಮಕ್ಕಳಂತೂ ಕೇವಲ ಮಾರ್ಕ್ ಮಾಡಿದಲ್ಲೇ ಉಳಿಯುವ ಜಾಯಮಾನ ತೋರಿಸುವ ಸಾಧ್ಯತೆ ತೀರಾ ಕಡಿಮೆ ಎಂದರೆ ತಪ್ಪಾಗಲ್ಲ. ಇಂತಹುದರಲ್ಲಿ ನಾವು ಸೋಶಿಯಲ್ ಡಿಸ್ಟೆಂನ್ಸಿಂಗ್ ಮಾಡಿ ಮಕ್ಕಳನ್ನು ಶಾಲೆಗೆ ಅಡ್ಮಿಟ್ ಮಾಡುತ್ತೇವೆ ಹಾಗೂ ಅವರಿಗೆ ಕಲಿಸುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಕಾರ್ಯ ಸಾಧು ಎನ್ನುವುದನ್ನು ಕೂಡ ಯೋಚನೆ ಮಾಡಬೇಕಾಗುತ್ತದೆ ಎಂದು ಬೆಂಗಳೂರಿನ ಶ್ರೀನಗರದಲ್ಲಿ ವಾಸಿಸುತ್ತಿರುವ ಎಂಟನೇ ತರಗತಿಯ ಮಂದಾರನ ತಾಯಿ ಸುಮಿತ್ರಾ ದೊಡ್ಡಮನಿ ಅಭಿಪ್ರಾಯ ಪಟ್ಟರು.

    ಮಾಸ್ಕ್ ವಿಚಾರ

    ಮಾಸ್ಕ್ ಧರಿಸಿಕೊಳ್ಳುವುದು ನಮ್ಮನ್ನು ನಾವು ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳುವುದಕ್ಕಷ್ಟೇ ಸೀಮಿತ. ಬೇರೆಯವರು ಸೀನಿದರೆ, ಕೆಮ್ಮಿದರೆ ಆಗ ಹೊರ ಬರುವ ವೈರಸ್ ನಿಂದ ಇದು ರಕ್ಷಣೆ ನೀಡುತ್ತದೆ. ಆದರೆ ಈ ಮಾಸ್ಕ್ ಹಾಕಿಕೊಳ್ಳುವ ಕಾನ್ಸೆಪ್ಟ್ ಕೂಡ ಈಗ ಬದಲಾಗಿದೆ. ಇತ್ತೀಚೆಗಷ್ಟೇ ಮಾಸ್ಕ್ ಹಾಕಿಕೊಂಡಿಲ್ಲ ಎಂದು ವ್ಯಕ್ತಿಯೊಬ್ಬನಿಗೆ ಥಳಿಸಿದ ಘಟನೆಯೂ ಇದಕ್ಕೆ ನಿದರ್ಶನ. ಹಾಗಿದ್ದರೆ ಮಕ್ಕಳು ಶಾಲೆಗೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕು, ಸ್ಯಾನಿಟೈಸರ್ ತೆಗೆದುಕೊಂಡು ಹೋಗಬೇಕು ಎಂದಾದರೆ ಅದಕ್ಕೆ ಆಗುವ ವೆಚ್ಚವನ್ನು ಯಾರು ಭರಿಸಬೇಕು ? (ಸಾಮಾನ್ಯವಾಗಿ ಮಾಸ್ಕ್ ತೆಗೆದುಕೊಳ್ಳುವವರು ಒಂದು ದಿನ ಖರೀದಿಸಿ ಅದನ್ನು ತಿಂಗಳುಗಟ್ಟಲೆ ಬಳಸುತ್ತಿದ್ದಾರೆ. ಆದರೆ ಮಾಸ್ಕ್ ನ ಅವಧಿಯೆಷ್ಟು ಎಂಬುದು ಬಹುತೇಕರಿಗೆ ತಿಳಿದಿಲ್ಲ.

    ಸರಿ, ಮಾಸ್ಕ್, ಸ್ಯಾನಿಟೈಸರ್ ನಮ್ಮ ಮಕ್ಕಳ ಆರೋಗ್ಯಕ್ಕಾಗಿ ಖರೀದಿಸೋಣ. ಆದರೆ, ಉಳಿದ ಮಕ್ಕಳು ಅಂದರೆ ಅವರ ಹೆತ್ತವರು ಅದೇ ನೀತಿ ಅನುಸರಿಸುತ್ತಾರೆಯೇ ? ಅಥವಾ ಎರಡು ದಿನಕ್ಕೊಮ್ಮೆ 20-30 ರೂ. ಬೆಲೆಯ ಮಾಸ್ಕ್ ಮತ್ತು 50-90 ರೂ. ಸ್ಯಾನಿಟೈಸರ್ ಖರೀದಿಸುವ ಸಾಮರ್ಥ್ಯ ಅವರಲ್ಲಿದೆಯೇ? ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಇನ್ನು ವಾಹನ ವಿಚಾರಕ್ಕೆ ಬಂದರೂ ಅಲ್ಲಿ ಕೂಡ ಒಂದು ವ್ಯಾನ್ ನಲ್ಲಿ ಸೋಶಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡಿ ಮಕ್ಕಳನ್ನು ಕರೆದೊಯ್ಯಲು ಸಾಧ್ಯವೇ, ಸಾಧ್ಯ ಎನ್ನುವುದಾದರೆ ಆಗ ಒನ್ -ಟು-ಡಬಲ್ ಶುಲ್ಕವನ್ನು ವಸೂಲಿ ಮಾಡದೆ ಶಾಲೆಗಳು ಬಿಡುತ್ತವೆಯೇ ? ಇಷ್ಟೆಲ್ಲಾ ಆದರೂ ಕೊನೆಗೆ ತಮ್ಮದ್ದಲ್ಲದ ಕಾರಣದಿಂದ ಕೊರೊನಾ ವೈರಸ್ ಮಕ್ಕಳಿಗೆ ವಕ್ಕರಿಸಿದರೆ ಆ ಮೂಲಕ ಅವರ ಹೆತ್ತವರಿಗೆ ಕೂಡ ಆಕ್ರಮಿಸಿದರೆ ಯಾರು ಹೊಣೆ ?

    ಆದ್ದರಿಂದ ಶಿಕ್ಷಣ ವರ್ಷವನ್ನು ಇನ್ನು ಕೆಲದಿನ ಮುಂದಕ್ಕೆ ಹಾಕುವುದರ ಜೊತೆ ಸಿಲಬಸ್ ಕಡಿಮೆ ಮಾಡುವುದೇ ಸದ್ಯಕ್ಕೆ ಇರುವ ಉಪಾಯ. 10ನೇ ತರಗತಿ ಮೇಲ್ಮಟ್ಟ ಮಕ್ಕಳಿಗೆ ಮಾತ್ರ ಪರ್ಯಾಯವಾಗಿ ಆನ್ ಲೈನ್ ಪಾಠ ಪ್ರವಚನದ ಬಗ್ಗೆ ಯೋಚಿಸ ಬಹುದು.

    ಸಚಿವರ ಹೇಳಿಕೆ

    ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೂನ್ 10ರಿಂದ ಆಯಾ ಶಾಲೆಗಳಲ್ಲಿ ಪೋಷಕರಸಭೆ ನಡೆಯಲಿದೆ.ಅವರ ಅಭಿಪ್ರಾಯ ಪಡೆದೇ ಶಾಲೆಗಳ ಪುನಾರಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

    ಪ್ರತಿಕ್ರಿಯಿಸಿ:  ಶಾಲಾ ಪುನರಾರಂಭದ ಬಗ್ಗೆ ನಿಮಗೇನಿಸುತ್ತದೆ ಎಂಬುದನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಅದನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವ ಕೆಲಸವನ್ನು kannadapress.com ಮಾಡುತ್ತದೆ.

    ದಾವೂದ್ ಸಾವಿನ ಸುದ್ದಿ ಹಿಂದೆ ಖಯಾಲಿ ಗ್ಯಾಂಗ್

    ಮೋಸ್ಟ್ ವಾಂಟೆಡ್‌ ದಾವೂದ್ ಅಲಿಯಾಸ್ ದಾವೂದ್ ಇಬ್ರಾಹಿಂ ಕಸ್ಕರ್ ಎಂಬ ಪುರಾತನ ಪಾತಕಿ ಈಗ ಸಾವಿನ ಬೆಡ್ ಮೇಲೆ ಮಲಗಿದ್ದಾನೆ. ಅವನ ಜತೆಗೆ ಪತ್ನಿ ಜುಬೀನಾ ಜರೀನ್ ಅಲಿಯಾಸ್ ಮೆಹಜಬೀನ್ ಶೇಖ್ ಕೂಡ ಹಾಸಿಗೆ ಹಿಡಿದಿದ್ದಾಳೆ.ಇನ್ನೇನು ಈಗಲೋ ಆಗಲೋ ಇಹಲೋಕ ತ್ಯಜಿಸಬಹುದು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಮಡಿದ 257 ಜನರ ಆತ್ಮಗಳಿಗೆ ಅಂತಿಮ ಶಾಂತಿ ಸಿಕ್ಕಬಹುದು ಎನ್ನುವ ಸುದ್ದಿಗಳು ಮತ್ತೊಮ್ಮೆ ಹರಿದಾಡತೊಡಗಿವೆ.

    ದಾವೂದ್ ಸತ್ತರೆ ಮುಕ್ಕಾಲು ಪಾಲು ಭಾರತ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಆದರೆ ಪಾಪಿ ಚಿರಾಯು. ಸಮುದ್ರಕ್ಕಿಳಿದರೂ ಅವನು ಸಾಯುವುದಿಲ್ಲ. ಬದಲಿಗೆ ಇವನ ಪಾಪಕ್ಕೆ ಬೆದರಿ ಸಮುದ್ರವೇ ಮೊಳಕಾಲಿಗೆ ಇಳಿದು ಹೋಗುತ್ತದೆ. ಯಾಕೆಂದರೆ ಹಿಂದೆ ಇವನ ಬಗ್ಗೆ ಇಂತಹ ಹತ್ತಾರು ಸಾವಿನ ಊಹಾಪೋಹಗಳು ಹುಟ್ಟಿದ್ದವು. ಹುಟ್ಟಿದಷ್ಟೇ ವೇಗದಲ್ಲಿ ಸತ್ತಿದ್ದವು ಕೂಡ. ಈ ಬಾರಿಯೂ ಅದಕ್ಕಿಂತ ಭಿನ್ನ ಸುದ್ದಿ ಕೇಳುವ ಸಾಧ್ಯತೆ ಇಲ್ಲ. ಇದು ನಿಜಕ್ಕೂ ಬೇಸರದ ಸಂಗತಿ.

    ಆಗಿದ್ದೇನು?:

    ದಾವೂದ್ ಮತ್ತು ಅವನ ಹೆಂಡತಿ ಜುಬೀನಾಳಿಗೆ ಕೊರೊನಾ ವೈರಾಣು ಸೋಂಕು ಅಂಟಿದೆ. ಕರಾಚಿಯ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂರಲು ಹಿಡಿದು ಇಬ್ರಾಹಿಂ ಕೆಮ್ಮಿಕೆಮ್ಮಿ ಸುಸ್ತಾಗಿದ್ದಾನೆ. ವೆಂಟಿಲೇಟರ್ ಸಪೋರ್ಟ್ ಸದ್ಯ ಅವನ ಪ್ರಾಣ ಕಾಯ್ದಿದೆ. ಆದರೂ ನೋ ಚಾನ್ಸ್. ಉಳಿಯೋದಿಲ್ಲ.  ಇಬ್ಬರ ಸ್ಥಿತಿಯೂ ಸೀರಿಯಸ್.

    ಅವನನ್ನು ರೆಕ್ಕೆಯಲ್ಲಿಟ್ಟು ಸುಮಾರು ಮೂವತ್ತು ವರ್ಷಗಳಿಂದ ಸಲುಹಿದ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕಂಗಾಲಾಗಿದೆ ಎನ್ನುವಂತಹ ಭಾರತ ಬಾಯಿ ಚಪ್ಪರಿಸುವ ರಸಗವಳದ ಸುದ್ದಿಗಳು ಒಂದೊಂದಾಗಿ ಹೊರಬೀಳುತ್ತಲೇ ಇವೆ. ಆದರೆ ವಾಸ್ತವ ಹಾಗಿಲ್ಲ. ಭಾರತದ ನಿರೀಕ್ಷೆಯ ದಿನಗಳು ಮುಗಿದ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ, ಖುದ್ದು ದಾವೂದನ ಸೋದರ ಅನೀಸ್ ಇಬ್ರಾಹಿಂ ನೀಡಿದ ಸ್ಪಷ್ಟನೆ ವರದಿಯಾಗಿದೆ. ಅವನು ಹೇಳುವ ಪ್ರಕಾರ, ದಾವೂದ್ ಮತ್ತು ಅವನ ಹೆಂಡತಿಗೆ ಕೊರೊನಾ ಅಂಟಿಯೇ ಇಲ್ಲ. ಕರಾಚಿಯ ವಿಲಾಸಿ ಕ್ಲಿಪ್ಟನ್ ಬಡಾವಣೆಯ ತನ್ನ ಅರಮನೆಯಿಂದ ಕಳೆದ ಒಂದು ವರ್ಷದಿಂದ ಒಮ್ಮೆಯೂ ಅವನು ಹೊರಬಂದಿಲ್ಲವಂತೆ. ಕೊರೊನಾಕ್ಕಿಂತ ಮೊದಲೇ ಕಾಡಲಾರಂಭಿಸಿದ ಸಾವಿನ ಭೀತಿ ಕಟ್ಟಿಹಾಕಿದೆ.

    ಅಷ್ಟಕ್ಕೂ ಅವನಿಗೆ ಸೋಂಕು ಅಂಟುವ ಸಾಧ್ಯತೆ ಇದ್ದೀತಾದರೂ ಹೇಗೆ? ಪರಿಸ್ಥಿತಿ ನಾರ್ಮಲ್ ಇರುವಾಗಲೇ ಅಪರಿಚಿತರನ್ನು ಅಥವಾ ಆಪ್ತರನ್ನು ಹತ್ತಿರ ಬಿಟ್ಟುಕೊಳ್ಳದವ ಈಗ ಕೊರೊನಾ ಕಂಪನ ಎದ್ದಿರುವಾಗ ಕ್ರಿಮಿಯನ್ನು ಕೂಡ ಹತ್ತಿರ ಬಿಟ್ಟುಕೊಳ್ಳಲಾರ. ಅಂಥವನಿಗೆ ಕೋವಿಡ್ ಕ್ರಿಮಿ ಅಂಟುವ ಸಾಧ್ಯತೆ ಇಲ್ಲ. ಇದು ಸಿಂಪಲ್ ಕಾಮನ್ ಸೆನ್ಸ್. ಹಾಗಾದರೆ ಪಾತಕಿಯ ಸೋಂಕು ಸುದ್ದಿ ಹರಡಿದ್ದು ಯಾಕೆ?

    ಹೌದು, ಇಂತಹ ಲಡಾಸ್ ಸುದ್ದಿಗಳನ್ನು ಸೃಷ್ಟಿಸುವುದಕ್ಕಾಗಿಯೇ ಅವನ ಸುತ್ತ ಒಂದು ಖಯಾಲಿ ಗ್ಯಾಂಗ್ ಇದೆ. ಇಲ್ಲದ ಇಂತಹ ಸುದ್ದಿಯನ್ನು ಹುಟ್ಟು ಹಾಕಿ, ಅದಕ್ಕೆ ಭಾರತದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ ಆಲಿಸಿ ಆನಂದಿಸುವುದು ಇದರ ದರಿದ್ರ ಚಟ.

    1955ರ ಒಂದು ಅಮಾವಾಸ್ಯೆಯ ರಾತ್ರಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸಣ್ಣಹಳ್ಳಿಯೊಂದರಲ್ಲಿ ಹುಟ್ಟಿದ ದಾವೂದ್, ಡೋಂಗ್ರಿ ಏರಿಯಾಕ್ಕೆ ಬಂದು ಡಾನ್ ಎನಿಸಿಕೊಂಡು ದೇಶ ವಿದೇಶಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡ. ನಂತರ ಬಾಬ್ರಿ ಮಸೀದಿ ಧ್ವಂಸದ ಬಳಿಕ 1993ರಲ್ಲಿ ಇಡೀ ಬಾಂಬೆಗೆ ಬಾಂಬ್ ಇಟ್ಟು ವಿಕೃತಿ ಮೆರೆದ. ಜೀವ ಉಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಪಲಾಯನ ಮಾಡಿದ.  ಹೈಸ್ಕೂಲ್ ಡ್ರಾಪ್ ಔಟ್ ಆಗಿ ಅಡ್ನಾಡಿ ಕೆಲಸಗಳಿಗೆ ಇಳಿದ ದಿನದಿಂದಲೂ ಅವನ ಸುತ್ತ ಇಂತಹ ಸುಳ್ಳುಪಿಳ್ಳು ಸುದ್ದಿಗಳು ರಾಶಿರಾಶಿ ಹುಟ್ಟುತ್ತಲೇ ಬಂದಿವೆ.

    ಅವನಿಗೀಗ ವಯಸ್ಸಾಗಿದೆ. ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಭೂಗತ ಜಗತ್ತಿನ ಮೇಲೆ ಹಿಂದಿನ ಹಿಡಿತ ಉಳಿದಿಲ್ಲ. ಇರುವ ಒಬ್ಬ ಮಗ ಮೋಯಿನ್, ಇಂಗ್ಲೆಂಡಿನ ಬಿಳಿ ಹೆಂಡ್ತಿ ಬಿಟ್ಟು ಸನ್ಯಾಸಿ (ಮೌಲಾನಾ) ಆಗಿದ್ದಾನೆ. ಮೂರನೇ ಮಗಳು ಸತ್ತು ದಶಕಗಳು ಸಂದಿವೆ. ಉಳಿದಿಬ್ಬರು ಹೆಣ್ಣುಮಕ್ಕಳ ಪೈಕಿ ಎರಡನೆಯವಳು ಅಮೆರಿಕದ ಗಂಡನ ಜತೆ ಸೆಟ್ಲ್ ಆಗಿದ್ದಾಳೆ. ಮೊದಲನೆ ಮಗಳು ಮೆಹರಿನ್ ಮಾತ್ರ ಪಾಕ್ ತಂಡದ ಮಾಜಿ ಕ್ರಿಕೆಟರ್ ಮಿಯಾಂದಾದ್ ಮಗ ಜುನೈದ್ ಜತೆ ಮದುವೆಯಾಗಿ ಕರಾಚಿ ಮತ್ತು ದುಬೈ ನಡುವೆ ಓಡಾಡಿಕೊಂಡು ಪಾತಕಿಗೆ ಅಷ್ಟಿಷ್ಟು ಸಮಾಧಾನ ತಂದಿದ್ದಾರೆ. ಇದರ ಮಧ್ಯೆ ತಮ್ಮ ಅನೀಶ್ ನ ತಲೆನೋವು ಹೆಚ್ಚಿದೆ. ಇವನಿಗೆ ಅಣ್ಣನ ಉತ್ತರಾಧಿಕಾರಿಯಾಗುವ ಹುಚ್ಚು ತಲೆಗೇರಿದೆ. ಇದರಿಂದಲೂ ದಾವೂದ್ ನ ರೋಗ ಮತ್ತು ಖಾಯಿಲೆ ಸುದ್ದಿಗಳ ಹೆಚ್ಚಾಗಿವೆ.

    2016ರಲ್ಲಿ ದಾವೂದ್ ಸಾಯುತ್ತಿರುವ ಸುದ್ದಿ ಹರಡಿತ್ತು. ಗ್ಯಾಂಗ್ರಿನ್ ಆಗಿ ಕಾಲು ಕಟ್ ಮಾಡಲಾಗಿದೆ. ಹೆಚ್ಚು ಕಾಲ ಬದುಕಲಾರ ಎನ್ನುವ ಸುದ್ದಿ ಹರಡಿದ್ದವು. ಕೆಲ ತಿಂಗಳ ಬಳಿಕ ಅದು ಸುಳ್ಳಾಯಿತು. ಮಾರನೇ ವರ್ಷ ಡಿಪ್ರೆಷನ್ ಸುದ್ದಿ ಹರಡಿತು. ಹಾಸಿಗೆ ಬಿಟ್ಟು ಏಳಲಾಗುತ್ತಿಲ್ಲ. ಸಾವಿನ ಹೊಸ್ತಿಲಲ್ಲಿದ್ದಾನೆ ಎನ್ನುವ ಊಹಾಪೋಹ. ಇಂತಹ ಹತ್ತಾರು ಸುದ್ದಿಗಳು ಹುಟ್ಟಿ ಸತ್ತು ಹೋಗಿವೆ. ಆದರೆ ಪಾಪಿ ಮಾತ್ರ ಚಿರಾಯು.

    ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ

    ಬೆಂಗಳೂರು ವಿಜಯನಗರದ ಶ್ರೀಧರ್ ತಿಂಗಳಿಗೊಮ್ಮೆಯಾದರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಬರಲೇ ಬೇಕು. ಆಗಲೇ ಅವರಿಗೆ ಸಮಾಧಾನ. ಇದು ಇಂದು ನಿನ್ನೆಯ ಅಭ್ಯಾಸವಲ್ಲ. ಹಲವಾರು ವರ್ಷಗಳಿದ ಅವರು ಇದನ್ನು ತಪ್ಪಿಸಿದವರಲ್ಲ.  ಶ್ರೀಧರ್ ಒಬ್ಬರೇ ಅಲ್ಲ ಇಂಥ ಹಲವಾರು ಭಕ್ತರು  ಇದ್ದಾರೆ.ಕೆಲವರು ತಿಂಗಳಿಗೊಮ್ಮೆ, ಇನ್ನು ಹಲವರು ವಾರಕ್ಕೊಮ್ಮೆ ಹೋಗಿ ದರ್ಶನ ಪಡೆದುಕೊಂಡು ಬರಲೇ ಬೇಕೆಂಬ ನಿಯಮ ಹಾಕಿಕೊಂಡಿದ್ದಾರೆ.

    ತಿಮ್ಮಪ್ಪನೂ ಹಾಗೆ.  ಭಕ್ತರನ್ನು ಪ್ರೀತಿಯಿಂದ ಬರಮಾಡಿಕೊಂಡು ಇಷ್ಟಾರ್ಥ ಈಡೇರಿಸುವ ಕರುಣಾಮಯಿ. ಹಾಗಾಗಿಯೇ ಭಕ್ತರಲ್ಲಿ ಗೋವಿಂದನ ಬಗ್ಗೆ ಅಪಾರ ಪ್ರೀತಿ. ಇಂಥ ತಿಮ್ಮಪ್ಪನಂಥ ತಿಮ್ಮಪ್ಪನನ್ನೇ ಕೋರೋನಾ ಭಕ್ತರಿಂದ ದೂರ ಮಾಡಿತ್ತು.  ಇತಿಹಾಸದಲ್ಲೇ ಮೊದಲ ಬಾರಿಗೆ  80  ದಿನಗಳಿಂದ   ಭಕ್ತರಿಂದ ದೂರವಾಗಿದ್ದ ವೆಂಕಣರಮಣ ನಾಳೆ ಸೋಮವಾರದಿಂದ ಮತ್ತೆ ದರ್ಶನ ಭಾಗ್ಯ ಕರುಣಿಸಲಿದ್ದಾನೆ. ಏಳು ಕೊಂಡಲವಾಡ, ಗೋವಿಂದ ಗೋವಿಂದ ಎಂಬ ನಾಮ ಸ್ಮರಣೆ ಮತ್ತೆ ಕೇಳಿಬರಲಿದೆ.

    ಕೊರೋನಾ ಮುಂಚಿನ  ದಿನಗಳಲ್ಲಿ ಪ್ರತಿನಿತ್ಯ ಸರಾಸರಿ 75000 ದಿಂದ ಒಂದು ಲಕ್ಷ  ಭಕ್ತರು ದೇವಾಲಯಕ್ಕೆ ಭೇಟಿ ಕೊಡುತ್ತಿದ್ದರು. ಗಂಟೆಗಟ್ಟಲೆ  ಪರಮಾತ್ಮನ ದರ್ಶನಕ್ಕೆ ಕಾದು ಕುಳಿತಿರುತ್ತಿದ್ದರು. ಧರ್ಮ ದರ್ಶನ, ವಿಐಪಿ ದರ್ಶನ, ಬ್ರೇಕ್ ಅಪ್ ದರ್ಶನ ಹೀಗೆ ಅವರ ಭಕ್ತಿಭಾವಕ್ಕೆ ತಕ್ಕಂತೆ ದರ್ಶನಗಳು. ತಿಪ್ಪಪ್ಪನ ಹುಂಡಿಗೆ ಸರಾಸರಿ ನಿತ್ಯ 3.18 ಕೋಟಿ ಅಂದರೆ ಪ್ರತಿ ಸೆಕೆಂಡಿಗೆ ರೂ 368.38 ಸಂಗ್ರಹವಾಗುತ್ತಿತ್ತು. ಇದಲ್ಲದೆ ಬೆಟ್ಟದ ಮೇಲಿನ ಹೊಟೇಲ್ ಗಳು,  ಅಂಗಡಿಗಳು,  ಪ್ರವಾಸಿ ವಾಹನಗಳು ,ಬೀದಿ ಬದಿ ವ್ಯಾಪಾರಿಗಳು ಎಲ್ಲವೂ ಭಕ್ತರನ್ನೇ ಅವಲಂಬಿಸಿದ್ದವು.  ಕೊರೊನಾದಿಂದಾಗಿ ಅವರೆಲ್ಲರಿಗೂ  ಗೋವಿಂದನ ಭಜನೆ ಮಾಡುವುದಲ್ಲದೆ ಬೇರೆ ಏನೂ ಉಳಿದಿರಲಿಲ್ಲ. ಟಿಟಿಡಿ ಮೇ 21ರಂದು 400 ಕೋಟಿ ರೂ.ಗಳಷ್ಟು ನಷ್ಟವಾಗಿದ್ದರೂ ತನ್ನ 8000 ಕಾಯಂ ನೌಕರರು ಸೇರಿದಂತೆ 23000 ನೌಕರರಿಗೆ ಯಾವುದೇ ರೀತಿಯ ವೇತನ ಕಡಿತ ಮಾಡುವುದಿಲ್ಲ ಎಂದು ಪ್ರಕಟಿಸಿತು.

    ಬಾಗಿಲನು ತೆರೆದ ಏಳು ಬೆಟ್ಟಗಳ ಒಡೆಯ

    ಇದೀಗ ಸೋಮವಾರದಿಂದ ದರ್ಶನ ಆರಂಭವಾಗಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಟಿಟಿಡಿ ನೌಕರರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಚಿತವಾಗಿ ಬುಕ್ ಮಾಡಿದ ನೌಕರರು ಮತ್ತು ಅವರ ಕುಟುಂಬದವರಿಗೆ ಇದೇ 8 ಮತ್ತು 9ರಂದು ದರ್ಶನಕ್ಕೆ ಅವಕಾಶ. ಅದರಲ್ಲೂ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇಲ್ಲ. ಜೂನ್ 10 ರಂದು ಸ್ಥಳೀಯರಿಗೆ , 11ರಿಂದ ಸರ್ವ ಭಕ್ತರಿಗೂ ಅವಕಾಶ.

    ಕಂಟೈನ್ಮೆಂಟ್ ಪ್ರದೇಶದವರನ್ನು ಹೊರತು ಪಡಿಸಿ ಉಳಿದವರಿಗೆ ಅವಕಾಶ. ಪ್ರತಿದಿನ ಬೆಳಿಗ್ಗೆ 6-30 ರಿಂದ ಸಂಜೆ 7.30ರವರೆಗೆ ಮಾತ್ರ ದರ್ಶನ . ಗಂಟೆಗೆ 300 ಜನರಿಗೆ ಅವಕಾಶ. ಪ್ರತಿ ಭಕ್ತರಿಗೂ ಹರ್ಬಲ್ ಸ್ಯಾನಿಟೈಸರ್ ಕೊಡಲಾಗುವುದು. ದೇಹದ ಉಷ್ಣತೆ ಚೆಕ್ ಮಾಡಲಾಗುವುದು. ಕೋವಿಡ್ ಸುರಕ್ಷತಾ  ಕ್ರಮಗಳ ಪ್ರಕಟಣೆ ಸದಾ ಕಾಲವೂ ಇರುತ್ತದೆ. ಕೋವಿಡ್ ನಿಯಮಗಳ ಪಾಲನೆ ಕಡ್ಡಾಯ. ವಸತಿ ಗೃಹಗಳನ್ನು ದಿನ ಬಿಟ್ಟು ದಿನದ ಆಧಾರದಲ್ಲಿ ಕೊಡಲಾಗುವುದು. ಒಂದು ರೂಮಿನಲ್ಲಿ ಇಬ್ಬರು ಭಕ್ತರಿಗೆ ಮಾತ್ರ ಅವಕಾಶ. ಅವರೂ 24 ಗಂಟೆ ಮಾತ್ರ ಇರಬಹುದು. ಮದುವೆಗೆ ಕೋವಿಡ್ ನಿಯಮಗಳ ಪ್ರಕಾರ ಮಾತ್ರ ಅನುಮತಿ.

    ಮುಂದಿದೆ ಸವಾಲು

    ಕೆಲವೇ ಗಂಟೆಗಳನ್ನು ಹೊರತು ಪಡಿಸಿ  ದಿನದ 24ಗಂಟೆಯೂ ಭಕ್ತರಿಗೆ ದರ್ಶನ ನೀಡುತ್ತಿದ್ದ ತಿಮ್ಮಪ್ಪನ ದರ್ಶನಕ್ಕೆ ಈಗ ಸಮಯ (ಬೆಳಿಗ್ಗೆ 6.30ರಿಂದ ರಾತ್ರಿ 7.30)  ನಿಗದಿಯಾಗಿರುವುದರಿಂದ  ಸಾಗರದಂತೆ ಹರಿದು ಬರುವ ಭಕ್ತರನ್ನು ನಿಯಂತ್ರಿಸಿ ಅವರಿಗೆಲ್ಲಾ ಸಮಯ  ನಿಗದಿ ಮಾಡುವುದು ದೊಡ್ಡ ಸವಾಲು.  ತಿರುಪತಿಯ ಸರತಿಯ ಸಾಲಿನ ಪದ್ಧತಿ ವಿಶ್ವದಲ್ಲೇ ಹೆಸರು ವಾಸಿ. ಆದರೆ ಈಗ   ಕೋವಿಡ್ ಕಾರಣದಿಂದ ಅಂತರವನ್ನು ಕಾಯ್ದುಕೊಳ್ಳಬೇಕು.  ದೇವರ ಮುಂದೆ ಭಕ್ತಿ ಪರವಶರಾಗುವ ಭಕ್ತರನ್ನು  ಮುಂದೆ  ಕಳಿಸುವುದು  ದೊಡ್ಡ ಸವಾಲು.  ಸಾಮಾನ್ಯ ದಿನಗಳಲ್ಲಿ ಭಗವಂತನ ಮುಂದೆ ನಿಂತಿದ್ದ ಭಕ್ತರನ್ನು ಜರಗಂಡಿ ಎಂದು ಬೆನ್ನು ಹಿಡಿದು ತಳ್ಳಬೇಕಾದ ಸ್ಥಿತಿ ಇತ್ತು, ಈಗ  ಇದು ಸವಾಲಿನ ಕೆಲಸವೇ ಸರಿ ಎನ್ನುತ್ತಾರೆ ದೇವಾಲಯದಲ್ಲಿ  ಈ ಹಿಂದೆ ಸ್ವಯಂ ಸೇವಕಿಯಾಗಿ ಕೆಲಸಮಾಡಿದ್ದ ಶಾಂತಾ ಪ್ರಕಾಶ್ . ಹೀಗಾಗಿ ಟಿಟಿಡಿ ಸಿಬ್ಬಂದಿಗೆ ಸುರಕ್ಷತಾ ಕಿಟ್ ಗಳನ್ನು ನೀಡಬೇಕಾಗುತ್ತದೆ. ಅದನ್ನು ಸಮರ್ಪಕ ಸಂಖ್ಯೆಯಲ್ಲಿ ನೀಡಬೇಕಾದ ಹೊಣೆ ಟಿಟಿಡಿ ಮೇಲಿದೆ,

    ವಿಐಪಿ ಭಕ್ತರು!

    ತಿಮ್ಮಪ್ಪನಿಗೂ ದೇಶದ ವಿಐಪಿಗಳಿಗೂ ಅವಿನಾಭಾವ ಸಂಬಂಧ.  ಅವರೆಲ್ಲರೂ ಬಂದಾಗ ಗಂಟೆಗಟ್ಟಲೇ ಸಾಮಾನ್ಯ ಭಕ್ತರು ಸರತಿಯಲ್ಲೇ ನಿದ್ದೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈಗ  ನಿರ್ದಿಷ್ಟ ಅವಧಿಯ ದರ್ಶನ ಇರುವುದರಿಂದ ಇದನ್ನು ಟಿಟಿಡಿ ಹೇಗೆ ಹ್ಯಾಂಡಲ್ ಮಾಡುತ್ತದೆ ಎಂಬುದನ್ನು  ಕಾದು ನೋಡಬೇಕು. ದರ್ಶನ ಆರಂಭವಾಗುತ್ತಿದ್ದಂತೆ ಈ ದಂಡು ತಿರುಮಲಕ್ಕೆ ಆಗಮಿಸುವುದು  ಖಂಡಿತಾ. ಇವರಿಗೆಲ್ಲಾ ಕಡ್ಡಾಯವಾಗಿ ಸಮಯ ನಿಗದಿ ಮಾಡಲೇಬೇಕು. ಇವರ ಕಾರಣದಿಂದ ಸಾಮಾನ್ಯ ಭಕ್ತರು ದರ್ಶನದಿಂದ ವಂಚಿತರಾಗಬಾರದು.

    ಅಂತಾರಾಜ್ಯ ಭಕ್ತರು

    ತಿರುಮಲಕ್ಕೆ ಬರುವ ಭಕ್ತರಲ್ಲಿ ಅಂತಾರಾಜ್ಯ   ಪ್ರಯಾಣಿಕರು ಅಧಿಕ. ಇದನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆನ್ ಲೈನ್ ನಲ್ಲಿ ದರ್ಶನಕ್ಕೆ ಅವಕಾಶ ಸಿಕ್ಕ ಮಾತ್ರಕ್ಕೆ ಅದು ಆಂಧ್ರಪ್ರದೇಶ ಪ್ರವೇಶಿಸಲು ಸಿಕ್ಕ ರಹದಾರಿ ಎಂದು ಭಾವಿಸಬಾರದು. ಅಂತಾರಾಜ್ಯ ಪ್ರವಾಸಕ್ಕೆ ಇರುವ ಕೋವಿಡ್ ನಿಯಾಮವಳಿಗಳೇ ಅನ್ವಯವಾಗುತ್ತದೆ. ಈ ಬಗ್ಗೆ ಭಕ್ತಾದಿಗಳು ಮೊದಲೇ ಪ್ರಯಾಣಕ್ಕೆ ಅನುಮತಿ ಪಡೆಯಬೇಕು ಎಂದು ಟಿಟಿಡಿ ಸ್ಫಷ್ಟ ಪಡಿಸಿದೆ. (ಚಿತ್ರ ಕೃಪೆ :ಟಿಟಿಡಿ )

    ಬಂಧನ ಸಾಕಿನ್ನು, ಬಿಡುಗಡೆಯೂ ಬೇಕು

    ಕಣ್ಣಿಗೆ ಕಾಣದ ವೈರಸ್ ಒಂದು  ಇಡೀ ವಿಶ್ವವನ್ನೇ ಹೈರಾಣಾಗಿಸಿದೆ. ಕೇವಲ ಒಂದೆರಡು ತಿಂಗಳ ಲಾಕ್ ಡೌನ್ ಮನುಷ್ಯನ ಬದುಕಿಗೆ ತಂದಿಟ್ಟ ತಾಪತ್ರಯಗಳು ಅಷ್ಟಿಷ್ಟಲ್ಲ ಕೊರೋನಾ ಕಾಲದ ಲಾಕ್ ಡೌನ್ ನ  ಆರಂಭದ ದಿನಗಳು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಿದೆ. ಅಬ್ಬಾ… ಇಷ್ಟು ಕಾಲ ಮಕ್ಕಳು, ಸತಿಪತಿ ಒಂದಾಗಿ ಒಟ್ಟಿಗೇ ಸಮಯ ಕಳೆದದ್ದು ಇದೇ ಮೊದಲೇನೋ ಎಂಬಂತೆ ಸಂಭ್ರಮಿಸಿದವರು ಇದ್ದಾರೆ.

    ನಗರ ಜೀವನದಲ್ಲಿ ಪತಿ ಪತ್ನಿ ಇಬ್ಬರೂ ಹೊರಗೆ ಹೋಗಿ ದುಡಿಯುವ ವವರೆ. ಹಾಗಾಗಿ ಇಬ್ಬರ ನಡುವೆ ಮನೆ ಕೆಲಸ, ಮಕ್ಕಳ ಕೆಲಸ ಎಲ್ಲವೂ ಹಂಚಿಕೆಯಾಗಿ ಹೊಂದಾಣಿಕಯೇ ಜೀವನ  ಎಂಬಂತಾಗಿತ್ತು.ಕೊರೋನಾ ಕಿರಿಕಿರಿಯಿಂದ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಂ. ಹಂಚಿಕೆಯಾಗಿದ್ದ ಕೆಲಸ ಮನೇಲಿ ಇದ್ದೇವೆಲ್ಲ ಆಮೇಲೆ ಮಾಡಿದರಾಯಿತು ಎನ್ನುವ ಭಾವ. ಸ್ವಲ್ಪ ಹೊತ್ತಿನ ನಂತರ ನೀನು ಮಾಡು, ನೀನು ಮಾಡು. ಕೊನೆಗೆ ನೀನೇ ಮಾಡು ಎನ್ನುವ ಸಣ್ಣ ಸಣ್ಣ ಸಂಘರ್ಷ ಗಳು ಶುರುವಾಗುತ್ತವೆ.

    ಕೊರೋನಾ ತಂದ ಬಿರುಕು

    ಇದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪತಿ ಪತ್ನಿಯ ಸಂಬಂಧದಲ್ಲಿ ಬದಲಾವಣೆ. ಪ್ರತಿದಿನದ ಸಣ್ಣ ಪುಟ್ಟ ವೈಮನಸ್ಸು ಸಂಸಾರದಲ್ಲಿ ದೊಡ್ಡ ಬಿರುಕು ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ  ಭಾರತ ಮತ್ತು ಚೈನಾದಲ್ಲಿ ಕೌಟುಂಬಿಕ ಕಲಹದ ಕಾರಣ ಕೊಟ್ಟು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಿದೆ .

     ಮತ್ತೊಂದು ಕಡೆ, ಉದ್ಯಾನಗಳಲ್ಲಿ, ಕಾಫಿ ಡೇ, ಮಾಲ್, ಸಿನಿಮಾ ಅಂತೆಲ್ಲ ಕೈ ಕೈ ಹಿಡಿದು ಸುತ್ತಾಡುವ ಕನಸು ಕಂಡಿದ್ದ ಮನಸುಗಳಿಗೆ ಕೊರೋನಾ ತಣ್ಣೀರೆರಚಿದೆ. ಇದರಿಂದಾಗಿ ಹೆಚ್ಚಿನ ಜನರು ಆನ್ಲೈನ್ ಡೇಟಿಂಗ್ ಮಾಡುತ್ತಿರುವುದು ಕೂಡಾ ಇತ್ತೀಚಿನ ಟ್ರೆಂಡ್ ಆಗಿದೆ. ಹೆಚ್ಚಿನವರಿಗೆ ಕೊರೋನಾ ಕಾಟ ಸಂಪೂರ್ಣ ಮುಗಿದರೆ ಸಾಕು, ಯಾವಾಗ ಒಮ್ಮೆ ಹೊರಗೆ ಹೋಗುತ್ತೇನೆ ಎಂದು ಕಾಯುವಂತಾಗಿದೆ.ಯಾಕೆಂದರೆ ಸಂಬಂಧ ಹೇಗೇ ಇರಲಿ, ಅದೆಷ್ಟೇ ಚೆನ್ನಾಗಿರಲಿ ಪ್ರತಿಯೊಬ್ಬರೂ ಕೂಡಾ ಒಂದಷ್ಟು ಹೊತ್ತು ಏಕಾಂತವನ್ನು ಬಯಸುತ್ತಾರೆ .ಮಾತ್ರವಲ್ಲ ಸಂಬಂಧದಲ್ಲಿ ಸಣ್ಣದೊಂದು ಸ್ಪೇಸ್, ಪ್ರೈವಸಿ ಇರಲೇಬೇಕು.

    ದೂರದಲ್ಲೇ ಇರಲಿ

    ಸಂಸಾರದಲ್ಲಿ ವ್ಯಕ್ತಿಯ ಬೆಲೆ ತಿಳಿಯುವುದು ದೂರ ದೂರ ಇದ್ದಾಗಲೇ. 24×7  ಜತೆಗೇ ಇರುವುದು ಅಂದ್ರೆ ಕಿರಿ ಕಿರಿ ಅನ್ನಿಸದೇ ಇರಲಾರದು. ಒಂದು  ಮಾತಿದೆ. ಚಿಕ್ಕ ಮಗುವನ್ನು ಬಿಗಿಯಾಗಿ ಅಪ್ಪಿ ಒಂದಷ್ಟು ಹೊತ್ತು ಎತ್ತಿಕೊಳ್ಳಿ. ಅದು ಸ್ವಲ್ಪ ಹೊತ್ತಲ್ಲೇ ಜಾರಿ ಇಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತದೆ. ಅದೇ ಮಗುವನ್ನು ಸ್ವಲ್ಪ ಹೊತ್ತು ಎತ್ತಿ ಮುದ್ದಾಡಿ ಅದರ ಪಾಡಿಗೆ ಬಿಟ್ಟು ಬಿಡಿ. ಮತ್ತೆ ಅದಾಗಿಯೇ ನಮ್ಮೆಡೆಗೆ ಖುಷಿಯಿಂದ ಅರಸಿ ಬರುತ್ತದೆ. ಹಾಗೆಯೇ ಪ್ರತಿಯೊಬ್ಬರಿಗೂ ಒಂದಷ್ಟು ಹೊತ್ತು ಸ್ವಾತಂತ್ರ್ಯ ಬೇಕು.

    ದೂರ ಇದ್ದಾಗ  ಪರಸ್ಪರ ಕೊಡುವ ಮಹತ್ವ ಒಟ್ಟಿಗೇ ಇದ್ದಾಗ ಕೊಡುವುದು ಕಡಿಮೆ. ಒಟ್ಟಿಗೇ ಇರ್ತಿವಲ್ಲ ಅನ್ನೋ ಭಾವ. ದೂರ ಇದ್ದಾಗ ವಿಡಿಯೋ ಕಾಲ್, ಚಾಟಿಂಗ್, ಎಲ್ಲವನ್ನೂ ಹಂಚಿಕೊಳ್ಳುವ ಆ ಸಮಯ ಕ್ವಾಲಿಟಿ ಟೈಮ್ ಆಗಿರುತ್ತದೆ.

    ದೂರದಲ್ಲಿ ಇದ್ದಾಗ ಬರುತ್ತಿದ್ದ ಫೋನ್ ಕಾಲ್, ಮೆಸೇಜ್, ಕೆಲ್ಸಕ್ಕೆ ಹೊರಟಾಗ ಮಾಡುವ ವಿಷ್…. ಇವೆಲ್ಲವೂ ಈ ಸಂದರ್ಭದಲ್ಲಿ ಮಿಸ್ ಆಗಿರುತ್ತದೆ. ಅಂದರೆ ಜತೆಗಿದ್ದಾಗ ಇದ್ಯಾವುದೂ ಇರುವುದಿಲ್ಲ. ಹೆಚ್ಚು ಸಮಯ ಜತೆಗಿದ್ದಷ್ಟು ನಮ್ಮೆಡೆಗೆ ಒಂದು ಅಸಡ್ಡೆ ಗುಡ್ಡೆ ಹಾಕಿಕೊಂಡು ಕುಳಿತು ಬಿಡುತ್ತದೆ. ದೂರ ಇದ್ದಷ್ಟು ಹೊತ್ತು ನಮ್ಮನ್ನು ಕಾಯುವಂತೆ, ಕಾಡುವಂತೆ, ಪ್ರೀತಿಯ ಜಗಳ ಮಾಡುವಂತೆ ಮಾಡುತ್ತದೆ. ಯಾರೇ ಆದರೂ ಸರಿ ಪದೇ ಪದೆ ಗಮನಿಸುತ್ತಿರುತ್ತಾರೆ ಅಂತನಿಸಿದರೆ ಕಿರಿ ಕಿರಿಯಗುವುದು ಸಹಜ. ಹಾಗಾಗಿ  ಆತನ ಅಥವಾ ಆಕೆಯ ಅನುಪಸ್ಥಿತಿಯನ್ನು ಅನುಭವಿಸಲು ಒಂಚೂರು ಸ್ಪೇಸ್ ಕೊಟ್ಟು ಕೊಳ್ಳಬೇಕು.

    ಕೌಟುಂಬಿಕ ಕಲಹಗಳು ಹೆಚ್ಚ

    ಕೋರೋನಾದಿಂದ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ.  ನ್ಯಾಷನಲ್ ಲೀಗಲ್ ಸರ್ವೀಸ್ ಅಥಾರಿಟಿ  NALSA ಮಾಡಿದ ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ಕಳೆದ 2 ತಿಂಗಳುಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ.

    ಲಾಕ್ ಡೌನ್ ಸಮಯದಲ್ಲಿ ವೃತ್ತಿ, ಸಾಮಾಜಿಕ ಬದುಕಿನಲ್ಲಾದ ಬದಲಾವಣೆ ತರುವ ಚಿಂತೆ, ಒತ್ತಡಗಳನ್ನೂ ತನ್ನವರ ಮೇಲೇ ತೋರ್ಪಡಿಸುವುದರಿಂದ   ಕಲಹ ಜಾಸ್ತಿ.

    ಸುಷ್ಮಸಿಂಧು, ಮನಃಶಾಸ್ತ್ರಜ್ಞೆ

    ಉತ್ತರಖಂಡ ದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಹರಿಯಾಣ, ದೆಹಲಿ 3ನೆ ಸ್ಥಾನದಲ್ಲಿದೆ. ಬೇರೆ ಬೇರೆ ರಾಜ್ಯಗಳ ಕಾನೂನು ಸೇವಾ ಕೇಂದ್ರದಿಂದ ಪಡೆದುಕೊಂಡ ಮಾಹಿತಿಯನ್ನಾಧರಿಸಿ ಈ ವರದಿಯನ್ನು ಬಿಡುಗಡೆ ಮಾಡಿತ್ತು.ತೆಲಂಗಾಣದಲ್ಲಿ ಕೂಡಾ ಇಂಥ ಪ್ರಕರಣಗಳು ಹೆಚ್ಚಿವೆ.

    ರಾಷ್ಟೀಯ ಮಹಿಳಾ ಆಯೋಗಕ್ಕೆ ಬಂದಿರುವ ದೂರುಗಳನ್ನು ಗಮನಿಸಿದರೆ ಕರ್ನಾಟಕ ದಲ್ಲೂ ಕೌಟುಂಬಿಕ ದೌರ್ಜನ್ಯ ವರದಿಗಳು ಹೆಚ್ಚಾಗಿರುವುದನ್ನು ಗಮನಿಸಬಹುದು.

    ಮಾರ್ಚ್ 1ರಿಂದ ಏಪ್ರಿಲ್ 22 ರವರೆಗಿನ ವರದಿ ಪ್ರಕಾರ ಬೆಂಗಳೂರು ನಲ್ಲಿ 40, ಬೆಳಗಾವಿ 11, ಮಂಡ್ಯ 10, ಕಲ್ಬುರ್ಗಿ 10, ರಾಮನಗರ 9, ರಾಯಚೂರು ನಲ್ಲಿ 9 ಪ್ರಕರಣಗಳು ದಾಖಲಾಗಿವೆ.

    ನಮ್ಮಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ

    ಇಟಲಿ ಯಲ್ಲಿ ಶೇ.30 ರಷ್ಟು ಡಿವೋರ್ಸ್ ಕೇಸ್ ಗಳು ಹೆಚ್ಚಾಗಿವೆ ಎಂದು ‘ದ ಟೆಲಿಗ್ರಾಫ್ ‘ ವರದಿ ಮಾಡಿತ್ತು. ಚೀನಾ, ಸೌದಿ ಅರೇಬಿಯಾದಲ್ಲೂ ಶೇ.40 ರಷ್ಟು ಪ್ರಕರಣಗಳು ಹೆಚ್ಚಿವೆ.

    ಯುರೋಪಿನಲ್ಲಿ ಶೇ. 60 ರಷ್ಟು ಪ್ರಕರಣಗಳು ಹೆಚ್ಚಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಕಚೇರಿ ಇತ್ತೀಚೆಗೆ ಮಾಹಿತಿ ನೀಡಿತ್ತು. ಲಾಕ್ ಡೌನ್ ಮುಂದುವರಿದ ರೆ ಮುಂದಿನ 6 ತಿಂಗಳುಗಳಲ್ಲಿ ವಿಶ್ವದಾದ್ಯಂತ 31 ಮಿಲಿಯನ್ ಗೂ ಅಧಿಕ ಪ್ರಕರಣಗಳು ದಾಖಲಾಗುವ ಆತಂಕ ವ್ಯಕ್ತಪಡಿಸಿದೆ.

    ಕೂಸು ಬಡವಾಗದಿರಲಿ

    * ಮನೆಯಲ್ಲಿ ಇಡೀ ದಿನ ಜತೆಗೇ ಕಳೆಯುವುದ್ರಿಂದ ಪರಸ್ಪರ ಅರ್ಗುಮೆಂಟ್ ಆಗುತ್ತಲೇ ಇರುತ್ತದೆ. ಇಬ್ಬರ ನಡುವೆ ನಡೆಯುವ ವಾಗ್ವಾದ ವನ್ನು ಗೌರವಯುತವಾಗಿ ಬಗೆಹರಿಸಿಕೊಳ್ಳಬೇಕು.

    *ಇಬ್ಬರ ಜಗಳದಿಂದ ಕೂಸು ಬಡವಾಯಿತು ಅಂತಾರೆ. ಅದಷ್ಟೇ ಅಲ್ಲ ಇಬ್ಬರ ನಡುವೆ ನಡೆಯುವ ನಾನು  ಸರಿ ನೀನು ತಪ್ಪು ಎನ್ನುವ ವಾದದಿಂದ ಕೊನೆಗೆ ಉಳಿಯುವುದು : ಪರಸ್ಪರ ತಪ್ಪು ತಿಳಿಯುವುದು, ನೋವು, ಬೇಸರ, ಹತಾಶೆ ಅಷ್ಟೆ.

    * ಜತೆಗೇ ಒಂದಷ್ಟು ಹೊತ್ತುಸಮಯ ಮೀಸಲಿಡುವುದು, ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಳ್ಳುವುದು, ಒಪ್ಪಿಕೊಳ್ಳುವುದು ಕೂಡಾ ಇಂಪಾರ್ಟೆಂಟ್.

    ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಮ್ಮ ಅಂತರಾಳವ/ ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯು ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ//

    ಕವಿ ಎಚ್ ಎಸ್ ವೆಂಕ ಟೇಶಮೂರ್ತಿ ಅವರ ಈ ಭಾವಗೀತೆ ಯನ್ನು ಸಂಸಾರವೆಂಬ  ಕಡಲಿನ ದೋಣಿಗೂ ಹೋಲಿಕೆ ಮಾಡಿಕೊಳ್ಳಬಹುದೇನೋ?

    ಫೋಟೋ ಕೃಪೆ : Jasmine Carter from Pexels

    ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಯಾರು?

    ರಾಜ್ಯಸಭಾ ಚುನಾವಣೆಯ ಕಾವು ಏರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಘೋಷಣೆಯಾಗಿದೆ.ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ಬಿಜೆಪಿ, ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಡ್ಡ ಮತದಾನಕ್ಕೆ ಪ್ರೋತ್ಸಾಹ ನೀಡುವುದೆ ಎಂಬ ಕುತೂಹಲವೂ ಸೃಷ್ಟಿಯಾಗಿದೆ . ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

    ಇದನ್ನೂ ಓದಿ: ಖರ್ಗೆಗೆ ಸಿಕ್ಕಿತು ಕಾಂಗ್ರೆಸ್ ಟಿಕೆಟ್ : ಮೂರನೇ ಸ್ಥಾನ ಗೆಲ್ಲುವುದೆ ಬಿಜೆಪಿ?

    ಖರ್ಗೆಗೆ ಸಿಕ್ಕಿತು ಕಾಂಗ್ರೆಸ್ ಟಿಕೆಟ್ : ಮೂರನೇ ಸ್ಥಾನ ಗೆಲ್ಲುವುದೆ ಬಿಜೆಪಿ?

    ಅಶೋಕ ಹೆಗಡೆ
    ಕೊರೊನಾ ಪ್ರಕರಣಗಳು ಒಂದೇಸಮನೆ ಏರುತ್ತಿವೆ. ಕೊರೊನಾ ಜತೆ ಜೀವನ ನಡೆಸುವುದು ಅನಿವಾರ್ಯ ಎನ್ನುವುದನ್ನು ಮನವರಿಕೆ ಮಾಡಿಕೊಂಡಿರುವ ಜನರು ನಿಧಾನಕ್ಕೆ ಎಂದಿನ ಜೀವನಶೈಲಿಗೆ ಮರಳುತ್ತಿದ್ದಾರೆ. ಇದೇವೇಳೆ ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಎದುರಾಗಿವೆ. ರಾಜಕೀಯ ಪಕ್ಷಗಳೂ ಕೊರೊನಾ ವಿಚಾರವನ್ನು ಮೆಲ್ಲಗೆ ಪಕ್ಕಕ್ಕೆ ಸರಿಸಿ ಚುನಾವಣೆಯತ್ತ ಗಮನ ಕೇಂದ್ರೀಕರಿಸಿವೆ.ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ರಾಜ್ಯಸಭೆಗೆ ಜೂನ್ ೧೯ರಂದು ಚುನಾವಣೆ ನಡೆಯಲಿದೆ. ಸದ್ಯ ಎಲ್ಲ ಪಕ್ಷಗಳೂ ರಾಜ್ಯಸಭೆ ಚುನಾವಣೆ ವಿಚಾರದಲ್ಲಿಯೇ ಹೆಚ್ಚು ತಲೆ ಕೆಡಿಸಿಕೊಂಡಿವೆ.
    ಚುನಾವಣೆಯ ಮೊದಲ ಬಿಸಿ ಎದುರಾಗಿರುವುದು ಬಿಜೆಪಿಗೆ. ಸಂಖ್ಯಾಬಲದ ಆಧಾರದಲ್ಲಿ ಎರಡು ಸ್ಥಾನ ನಿರಾಯಾಸವಾಗಿ ಗೆಲ್ಲಬಹುದು. ಅದರಲ್ಲಿ ಬೆಳಗಾವಿಯ ಪ್ರಭಾಕರ ಕೋರೆ ಆಯ್ಕೆ ಬಹುತೇಕ ಖಚಿತವಾಗಿದೆ. ಪಕ್ಷದ ಸಂಪನ್ಮೂಲದ ದೃಷ್ಟಿಯಿಂದ ಕೋರೆಯಂತಹವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಶಾಸಕ ಉಮೇಶ ಕತ್ತಿ ತಮ್ಮ ಸಹೋದರ ರಮೇಶ ಕತ್ತಿಗಾಗಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದಂತೆ ಅವರ ಅಂತರಂಗದಲ್ಲಿ ತಾವು ಮಂತ್ರಿಯಾಗಬೇಕೆಂಬ ಬಯಕೆ ಇತ್ತು. ಎರಡೂ ಗುರಿ ಇಟ್ಟರೆ ಒಂದಾದರೂ ತಾಗಲಿ ಎನ್ನುವುದು ಅವರ ನಡೆಯಾಗಿತ್ತು. ‘ನಿನ್ನನ್ನು ಮಂತ್ರಿ ಮಾಡ್ತೀನಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅಲ್ಲಿಗೆ ಕತ್ತಿ ಸಮಾಧಾನಗೊಂಡಿದ್ದಾರೆ.
    ಎರಡನೇ ಸ್ಥಾನಕ್ಕೆ ತೇಜಸ್ವಿನಿ ಅನಂತಕುಮಾರ್, ಸುಧಾಮೂರ್ತಿ, ಆರ್ಥಿಕ ತಜ್ಞ ಕೆ.ವಿ.ಕಾಮತ್ ಹೆಸರುಗಳನ್ನು ಬಿಜೆಪಿ ರಾಜ್ಯ ನಾಯಕರು ತೇಲಿ ಬಿಟ್ಟಿದ್ದಾರೆ. ಇದರ ನಡುವೆ ಪಕ್ಷದಲ್ಲಿ ರಾಜ್ಯದ ಉಸ್ತುವಾರಿಯಾಗಿರುವ ಆಂಧ್ರಪ್ರದೇಶದ ವಿ.ಮುರಳೀಧರರಾವ್ ಸಹ ಟಿಕೆಟ್ ಕಸರತ್ತು ನಡೆಸಿದ್ದಾರೆ ಎಂಬ ವದಂತಿ ಇದೆ. ಅನಿರೀಕ್ಷಿತ ಹೆಸರುಗಳ್ನು ತೇಲಿಬಿಡುವುದು ಬಿಜೆಪಿ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರವಾಗಿದೆ.

    ತೇಜಸ್ವಿನಿ ಅನಂತಕುಮಾರ್ ಸಮರ್ಥ ನಾಯಕಿ, ಉತ್ತಮ ವಾಗ್ಮಿ. ಕಳೆದ ಲೋಕಸಭೆ ಚುನಾವಣೆ ವೇಳೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಿ ದಿ.ಅನಂತಕುಮಾರ್ ಅವರಿಗೆ ಗೌರವ ಸಲ್ಲಿಸಲು ಇದು ಸರಿಯಾದ ಸಮಯ. ಸುಧಾಮೂರ್ತಿ ಅವರನ್ನು ಕಣಕ್ಕೆ ಇಳಿಸಿದರೆ ಪಕ್ಷಕ್ಕೆ ಗೌರವ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬದಲು ಬ್ರಿಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಅವರಿಗೆ ಆ ಹೊಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂಬ ಸುದ್ದಿ ಕೆಲತಿಂಗಳುಗಳಿಂದ ಹರಿದಾಡುತ್ತಲೇ ಇದೆ. ಹೀಗೆ ಮೂವರ ಹೆಸರಿನ ಹಿಂದೆಯೂ ಒಂದೊಂದು ಕಾರಣಗಳಿವೆ. ಮೂವರೂ ಸಮರ್ಥರೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಎರಡನೇ ಸ್ಥಾನಕ್ಕೆ ಪಕ್ಷದ ಇತರರು ಲಾಬಿ ನಡೆಸಬಾರದು ಎಂಬ ಉದ್ದೇಶದಿಂದ ಮುರಳೀಧರ ರಾವ್ ಹೆಸರು ಗಾಳಿಗೆ ಬಂದಿರಬಹುದು. ಬಿಜೆಪಿಯ ನಡೆ ಗಮನಿಸಿದರೆ ಈ ನಾಲ್ವರನ್ನೂ ಬಿಟ್ಟು ಐದನೇ ವ್ಯಕ್ತಿಯನ್ನು ಕಣಕ್ಕೆ ಇಳಿಸಿದರೆ ಅಚ್ಚರಿ ಇಲ್ಲ.


    ಖರ್ಗೆಗೆ ಒಲಿದ ಕಾಂಗ್ರೆಸ್ ಟಿಕೆಟ್

    ಕಾಂಗ್ರೆಸ್‌ನಲ್ಲಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೆಸರು ಕೇಳಿಬಂದಿತ್ತು. ಸದ್ಯದ ಸ್ಥಿತಿಯಲ್ಲಿ ರಾಜ್ಯಸಭೆಯಲ್ಲಿ ಸರಕಾರದ ವಿರುದ್ಧ ಗಟ್ಟಿ ಧ್ವನಿಯಲ್ಗಲಿ ಮಾತನಾಡುವ ವ್ಯಕ್ತಿಗಳ ಅಗತ್ಯ ಕಾಂಗ್ರೆಸ್‌ಗೆ ಇದೆ. ಆ ದೃಷ್ಟಿಯಿಂದ ನೋಡಿದರೆ ಖರ್ಗೆ ಸೂಕ್ತ ಆಯ್ಕೆ. ಹೀಗಾಗಿಯೇ ಅವರ ಹೆಸರು ಘೋಷಣೆ ಆಗಿದೆ. ಆದರೆ ಹಾಲಿ ಸಂಸದರಾಗಿದ್ದರೂ ಮುದ್ದಹನುಮೇಗೌಡರಿಗೆ ಮೈತ್ರಿ ಕಾರಣದಿಂದ ಕಳೆದ ಲೋಕಸಭೆ ಟಿಕೆಟ್ ನಿರಾಕರಿಸಲಾಗಿತ್ತು. ಆಗ, ಅವಕಾಶ ಸಿಕ್ಕಾಗ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು.ಆದರೆ ಅವರು ಈಗ ಏನು ಮಾಡುತ್ತಾರೆ ಎಂಬುದು ಪ್ರಶ್ನೆ.


    ಜೆಡಿಎಸ್‌ಗೆ ಸ್ವತಂತ್ರವಾಗಿ ಗೆಲ್ಲಲು ಸಂಖ್ಯಾಬಲದ ಕೊರತೆ ಇದೆ. ಕೊಟ್ಟು-ಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರೇ ಅಭ್ಯರ್ಥಿಯಾಗಬಹುದು. ವಿಧಾನ ಪರಿಷತ್‌ನಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್ಚುವರಿ ಮತಗಳಿಂದ ದೇವೇಗೌಡರನ್ನು ಗೆಲ್ಲಿಸುವ ಸೂತ್ರ ಸಿದ್ಧವಾಗುತ್ತಿದೆ. ಅದು ಅಂತಿಮಗೊಂಡರೆ ಗೌಡರ ಆಯ್ಕೆ ಖಚಿತ. ಆರಂಭದಲ್ಲಿ, ‘ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡೋಣ. ಕುಟುಂಬ ರಾಜಕಾರಣದ ಅಪವಾದ ಬೇಡ’ ಎಂದು ಗೌಡರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಕೊನೆಗೆ ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಲು ಅನುಭವಿಗಳು ಬೇಕು ಎಂದು ಕಾಂಗ್ರೆಸ್ ಮತ್ತು ಇತರ ಮಿತ್ತ್ರ ಪಕ್ಷಗಳು ಒತ್ತಡ ಹಾಕಿದ್ದರಿಂದ ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು ಎಂಬ ಸಮಜಾಯಿಷಿ ನೀಡುತ್ತಾರೆ.

    ಅಂದಹಾಗೆ ಸ್ವತಂತ್ರವಾಗಿ ಒಂದು ಸ್ಥಾನ ಗೆಲ್ಲುವ ಸಾಮರ್ಥ್ಯ ಇದ್ದಾಗ ಜೆಡಿಎಸ್ ರಾಜ್ಯಸಭೆ ಚುನಾವಣೆಯನ್ನು ಪಕ್ಕಾ ವ್ಯಾಪಾರವಾಗಿ ಮಾಡಿಕೊಂಡಿರುವ ಉದಾಹರಣೆಯೂ ಇದೆ.
    ಆದರೆ, ಬಿಜೆಪಿಗೆ ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಗುಜರಾತ್‌ನಲ್ಲಿ ಮಾಡಿರುವಂತೆ ಕೊನೆಕ್ಷಣದಲ್ಲಿ ‘ಆಪರೇಷನ್’ ಅಥವಾ ಅಡ್ಡ ಮತದಾನಕ್ಕೆ ರಹಸ್ಯ ಕಾರ್ಯಾಚರಣೆ ನಡೆಸಿದರೂ ಆಶ್ಚರ್ಯವಿಲ್ಲ. ಆಗ ಕಾಂಗ್ರೆಸ್-ಜೆಡಿಎಸ್ ಲೆಕ್ಕಾಚಾರ ತಲೆ ಕೆಳಗಾಗುತ್ತದೆ. ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ೧೧೭, ಕಾಂಗ್ರೆಸ್ ೬೮, ಜೆಡಿಎಸ್ ೩೪ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರರು ಹಾಗೂ ಒಬ್ಬ ಬಿಎಸ್ಪಿ ಶಾಸಕರಿದ್ದಾರೆ. ಈ ಮೂವರು ಬಿಜೆಪಿ ಬೆಂಬಲಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ೪೫ ಮತ ಬೇಕು. ಅಂದರೆ ಬಿಜೆಪಿ ಬಳಿ ಇಬ್ಬರನ್ನು ಗೆಲ್ಲಿಸಿಕೊಂಡು ೨೭ ಹೆಚ್ಚುವರಿ ಮತಗಳು ಉಳಿಯುತ್ತವೆ. ಮೂವರು ಪಕ್ಷೇತರರನ್ನೂ ಸೇರಿಸಿಕೊಂಡರೆ ಮತಗಳ ಸಂಖ್ಯೆ ೩೦ ಆಗುತ್ತದೆ. ಕಾಂಗ್ರೆಸ್ ಬಳಿ ೨೩ ಹೆಚ್ಚುವರಿ ಮತಗಳಿರುತ್ತವೆ. ಬಿಜೆಪಿಗೆ ಹೆಚ್ಚುವರಿಯಾಗಿ ಬೇಕಾಗುವುದು ೧೫ ಮತಗಳು ಮಾತ್ರ. ಹೀಗಾಗಿ ಅಡ್ಡಮತದಾನ ಮಾಡಿಸಲು ಬಿಜೆಪಿ ಮುಂದಾದರೂ ಅಚ್ಚರಿ ಪಡಬೇಕಿಲ್ಲ.

    ಕೊರೊನಾ ವೈರಸ್‌ಗಿಂತಲೂ ಅವರನ್ನು ವ್ಯವಸ್ಥೆ ಹೈರಾಣು ಮಾಡಿತ್ತು

    ಕೊರೊನಾ ಭಾರತದಲ್ಲಿನ್ನು ರಣಕೇಕೆ ಹಾಕಿರಲಿಲ್ಲ. ಸೋಷಿಯಲ್ ಮೀಡಿಯಾ ಆದಿಯಾಗಿ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಕೊರೊನಾ ಪೀಡಿತ ವಿದೇಶಿ ವಿಡಿಯೋಗಳು ಹರಿದಾಡುತ್ತಿದ್ದವು. ರಸ್ತೆ ರಸ್ತೆಯಲ್ಲೇ ಹೆಣವಾಗುವ ದೃಶ್ಯ ನಿಜಕ್ಕೂ ಆತಂಕ ಸೃಷ್ಟಿ ಮಾಡಿತ್ತು. ಬೆಂಕಿ ಸ್ಪರ್ಶಿಸಿದ ಹುಳದ ರೀತಿಯಲ್ಲಿ ಮನುಷ್ಯರು ಒದ್ದಾಡುವ ದೃಶ್ಯ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು.

    ಭಾರತಕ್ಕೂ ಆ ವೈರಸ್ ಕಾಲಿಟ್ಟಿತು. ಮೊದಲ ಬಲಿ ಕರ್ನಾಟಕದಲ್ಲೇ ಆಯಿತು. ಸುದ್ದಿಗಳ ಅಬ್ಬರವೂ ಜೋರು. ಲಾಕ್‌ಡೌನ್, ಸೀಲ್ಡ್‌ಡೌನ್ ಆರ್ಭಟ. ಪೊಲೀಸರ ಅತಿರೇಕದ ವರ್ತನೆ. ಸರಕಾರಕ್ಕೆ ಸರಕಾರವೇ ತಬ್ಬಿಬ್ಬಾದ ಸನ್ನಿವೇಶ. ಸುಶಿಕ್ಷಿತರ ನಡೆ ಒಂದಡೆಯಾದರೆ, ಅಸುಶಿಕ್ಷಿತರ ಪಾಡು ಹೇಳತೀರದು. ಸಡನ್ನಾಗಿ ನೆನಪಾಗಿದ್ದು ನನ್ನ ನೆಲ. ಆ ಜನರು.

    ನೀವು ಏನೇ ಹೇಳಿ ಉತ್ತರ ಕರ್ನಾಟಕದ ಜನರು ಶಾಪಗ್ರಸ್ತರು. ಬರಗಾಲಕ್ಕೆ ಬಸವಳಿದವರು. ಬದುಕು ಕಟ್ಟಿಕೊಳ್ಳಲು ಪಟ್ಟಣ ಸೇರಿದವರು. ಹನಿ ನೀರಿಗೂ ಪರಿತಪಿಸುತ್ತಿರುವವರು. ಕಾಲಿಗೆ ಚಕ್ರಕಟ್ಟಿಕೊಂಡು ಕೆಲಸಕ್ಕೆ ನಿಲ್ಲುವವರು. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ನೆರೆರಾಜ್ಯಕ್ಕೂ ಗುಳೆ ಹೋದವರು. ಲಾಕ್‌ಡೌನ್ ಮತ್ತು ಕೊರೊನಾ ವೈರಸ್ ಇವರನ್ನು ಹೇಗೆಲ್ಲ ಕಾಡಿರಬಹುದು ಎಂಬ ನೋವು ನನ್ನೊಳಗೆ. ಹೊರಟೇ ಬಿಟ್ಟೆ. ಬರೋಬ್ಬರಿ ಎರಡೂವರೆ ಸಾವಿರ ಕಿಲೋ ಮೀಟರ್.

    ದಾರಿಯುದ್ದಕ್ಕೂ ಕಾಲ್ನಡಿಗೆ

    ಬೆಂಗಳೂರಿನಿಂದ ಹೊರಟ ನನಗೆ ದಾರಿಯುದ್ದಕ್ಕೂ ಕಂಡಿದ್ದು ಕೂಲಿ ಕಾರ್ಮಿಕರು. ಕಂಕುಳಲ್ಲಿ ಪುಟ್ಟ ಪುಟ್ಟ ಮಕ್ಕಳು. ತಲೆಯ ಮೇಲೆ ಹೆಣಭಾರದಂತಹ ಚೀಲ. ನಡೆದು, ನಡೆದು ಸೋತ ಕಾಲುಗಳು. ಹರಿದ ಚಪ್ಪಲಿಗಳು. ಉಟ್ಟ ಅರಿವೆಯ ಕಳಚಿ ಎರಡ್ಮೂರು ದಿನವಾಗಿರಬೇಕು, ಬೆವರಿಗೆ ಬಟ್ಟೆಯೂ ಸೆಟೆದು ನಿಂತಿದ್ದವು.

    ಅವರು ನಡೆದುಕೊಂಡೇ ಹೋಗುತ್ತಿದ್ದರು. ಅದು ಅತಿಂಥ ಬಿಸಿಲಲ್ಲ. ಮೈಯೊಳಗಿನ ಚರ್ಮವೇ ಸುಟ್ಟು ಹೋಗುವ ನಡಿಗೆ. ಬ್ರ್ಯಾಂಡೆಡ್ ಶೂ ಹಾಕಿಕೊಂಡು, ತಣ್ಣನೇ ನೀರು ಕುಡಿದುಕೊಂಡು ಪಾದಯಾತ್ರೆ ಮಾಡಿದ್ದನ್ನು ಕಂಡಿದ್ದೇನೆ. ಆದರೆ, ಇವರ ಪಾದದಡಿ ಹರಿದ ಚಪ್ಪಲಿಯೂ ಇರಲಿಲ್ಲ. ಅದೆಷ್ಟು ದೂರ ಸಾಗಬೇಕಿತ್ತೋ ಏನೋ? ಸುಸ್ತಾಗಿ ಡಾಂಬರ್ ರಸ್ತೆಯ ಮೇಲೆ ಕೂತಿದ್ದರು. ಹತ್ತಿರಕ್ಕೆ ಹೋದೆ.

    “ನೀವು ಸರಕಾರದೋರಾ? ನಮ್ ಪಾಡಿಗೆ ನಮ್ನ ಬಿಟ್‌ಬಿಡಿ.. ಹೇಗೋ ಮನೆ ಸೇರ‍್ಕೋತೀವಿ” ಅಂದರು.

    ಆಗಲೇ ಬೆಂಗಳೂರಿನಿಂದ ನೂರಾರು ಕಿಲೋ ಮೀಟರ್ ಅವರು ನಡೆದು ಬಂದಿದ್ದರು. ಅಲ್ಲಲ್ಲಿ ಹಾಕಲಾಗಿದ್ದ ಚೆಕ್‌ಪೋಸ್ಟ್ ಕಣ್ಣಿಗೂ ಬೀಳದೇ ಅವರು ಊರನ್ನು ಸೇರುವ ಆತುರದಲ್ಲಿದ್ದರು. ಕುಡಿಯೋಕೆ ನೀರುಕೊಟ್ಟೆ. ಬಿಸ್ಕೆಟ್ ನೀಡಿದೆ. ಅವರು ಮುಟ್ಟಲೇ ಇಲ್ಲ.

    ಹಸಿವಾಗಿಲ್ಲವಾ

    ?…………………

    ಬೆಂಗಳೂರಲ್ಲಿ ಏನ್ ಕೆಲ್ಸ ಮಾಡ್ಕೊಂಡಿದ್ರಿ?

    ……………….

    ಸರಿ, ಈಗ ಎಲ್ಲಿ ಹೋಗ್ತಿದ್ದೀರಿ?..

    ………………

    ಅವರಿಂದ ಯಾವ ಉತ್ತರವೂ ಬರಲಿಲ್ಲ. ನನ್ನ ಕಾರಿಗೆ ಕೆಂಪು ಅಕ್ಷರದಲ್ಲಿ ಪ್ರೆಸ್ ಅಂತ ಬರೆದಿದ್ದನ್ನು ನೋಡಿದ್ದ ಅವರು, ನಾನು ಪೊಲೀಸ್ ಅಂದುಕೊಂಡಿರಬೇಕು ಅನ್ನಿಸಿತು. ನಾನು ಉತ್ತರ ಕರ್ನಾಟಕದೋನು.. ಆ ಕಡೆ ಹೊರಟಿದ್ದೆ. ಸುಮ್ನೆ ನಿಮ್ಮನ್ನ ವಿಚಾರಿಸ್ತಿದ್ದೀನಿ ಅಂದೆ. ಅವರಿಗೂ ನನ್ನ ಮೇಲೆ ನಂಬಿಕೆ ಬಂತು. ನಮ್ಮ ವ್ಯವಸ್ಥೆ ಅವರನ್ನು ಇಷ್ಟೊಂದು ಹೆದರಿಸಿತ್ತು.

    ಶಿಬಿರಗಳ ದುರವಸ್ಥೆ

    ವಲಸೆ ಕಾರ್ಮಿಕರಿಗಾಗಿಯೇ ಸರಕಾರಗಳು ಶಿಬಿರಗಳನ್ನು ತೆರೆದಿದ್ದರು. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಅವ್ಯವಸ್ಥೆಯೇ ಅವರನ್ನು ಮತ್ತಷ್ಟು ದುಗುಡಕ್ಕೆ ತಳ್ಳಿತ್ತು.

    ಉಪವಾಸ ನಡೆದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಬಳ್ಳಾರಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದ ಮಹಿಳೆಯೊಬ್ಬರ ಸಮಾಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು.ಸರಕಾರಿ ಶಿಬಿರಗಳ ಬಗ್ಗೆ ಅವರಿಗೆ ನಂಬುಗೆ ಬಂದಂತೆ ಕಾಣಲಿಲ್ಲ ಹೀಗಾಗಿ ಚೆಕ್‌ಪೋಸ್ಟ್ ತಪ್ಪಿಸಿಕೊಂಡು ಕೆಲವರು ಹೊರಟಿದ್ದರು.

    “ಅದೇನೋ ಸರಕಾರದೋರು ನಮ್ಮನ್ನ ಕೂಡಿ ಹಾಕ್ತಾರಂತರೀ.. ತಿನ್ನಾಕ ಉಣ್ಣಾಕ ಹುಳದ ಅನ್ನ ನೀಡ್ಯಾರಂತ.. ಅಲ್ಲಿರೋರು ಮಂದಿ ಅಪರಿಚಿತರು. ಅವರ ಜೋಡಿ ಇದ್ದು, ರೋಗ ತರಿಸ್ಕೊಳ್ಳೊಕ್ಕಿಂತ, ನಮ್ಮೂರಿಗೆ ಹೋಗೋದು ಛಲೋ ಅನಿಸ್ತ್ರಿ.. ಅದಕ್ಕ ಹೊಂಟಿವಿ” ಹೀಗಂತ ಅಂದವರೆ ಹೆಚ್ಚು.

    ಬದುಕನ್ನು ರಸ್ತೆಗೆ ಚೆಲ್ಲಿ

    ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆಯೇ ಎಲ್ಲರ ಬದುಕು ತಾತ್ಕಾಲಿಕವಾಗಿ ನಿಂತೇ ಹೋಯಿತು. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ ಆಗುವುದಿಲ್ಲ ಎಂದು ಸರಕಾರ ಹೇಳಿದ್ದರೂ, ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಲ್ಲಿ ತರಕಾರಿಗಳನ್ನು ರಸ್ತೆಗೆ ಚೆಲ್ಲಿದ ದೃಶ್ಯಗಳು ಕಂಡುಬಂದವು. ದುಬಾರಿಯ ಉಳ್ಳಾಗಡ್ಡಿ ರಸ್ತೆಗೆ ಬಂದು ಬಿದ್ದಿತ್ತು. ಹಾಲು ಕೆಟ್ಟಿತ್ತು. ಇದು ಮತ್ತೊಂದು ರೀತಿಯ ಸಂಕಟ. ಬಹುತೇಕ ಕಡೆ ಇಂತಹ ದೃಶ್ಯಗಳು ಸಾಮಾನ್ಯವಾಗಿತ್ತು.

    ತಣ್ಣಗೆ ಮಲಗಿದ್ದವು ಹಳ್ಳಿಗಳು

    ಪ್ರತಿ ಹಳ್ಳಿಯಲ್ಲೂ ಸೂತಕದ ಛಾಯೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ಮನೆಗೆಲಸ ಮಾಡಿಕೊಂಡು ಒಂಭತ್ತು ಗಂಟೆಗೆ ಹೊಲ ಸೇರುತ್ತಿದ್ದವರು, ಮನೆಯಲ್ಲಿ ತಣ್ಣಗೆ ಕೂತಿದ್ದಾರೆ. ಹೊಲದಲ್ಲಿ ಬೆಳೆ ಹಾಳಾಗುತ್ತಿದೆ ಎನ್ನುವ ನೋವು ರೈತನದ್ದು. ಮಾರಲು ಬಂದ ಬೆಳೆಗೆ ಬೆಲೆ ಸಿಗಲಿಲ್ಲ ಎನ್ನುವ ಸಂಕಟವೂ ಜತೆಗಿತ್ತು. ಒಬ್ಬೊಬ್ಬರದ್ದು ಒಂದೊಂದು ಕಥೆ. ಕೊರೊನಾ ವೈರಸ್ ಅವರನ್ನು ಬಾಧಿಸಿದ್ದಕ್ಕಿಂತ ನಮ್ಮ ವ್ಯವಸ್ಥೆ ಅವರನ್ನು ಹೈರಾಣು ಮಾಡಿತ್ತು.

    ಈಗಿನ ಸ್ಥಿತಿ

    ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆಯೇ ಅಲ್ಲಿನ ಸ್ಥಿತಿ ಗತಿ ಕೂಡ ಬದಲಾಗಿದೆ. ರೈತ ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಯುವಕರು ಮತ್ತೆ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಜತೆ ಬದುಕುವ ಅನಿವಾರ್ಯದ ಜತೆಗೆ ಬಡತನದ ಜತೆ ಅವರು ಗುದ್ದಾಡಬೇಕಿದೆ. ಉಳ್ಳವರಿಗೆ ಏನೆಲ್ಲ ಉಂಟು, ಉಳುವವರಿಗೆ ಏನುಂಟು?

    ಕರೋನಾ ಕರುಣಾಜನಕ ಕಥೆಗಳು

    ಕೊರೊನಾ ಪುಸ್ತಕ

    ಕೊರೊನಾದಿಂದ ಜೀವ ಕಳೆದುಕೊಂಡವರಿಗಿಂತ ಜೀವನ ಕಳೆದುಕೊಂಡವರೇ ಹೆಚ್ಚು. ಸರಕಾರದ ಆದೇಶ ಏನೇ ಇದ್ದರೂ, ಅದನ್ನು ಅಮಾನವೀಯವಾಗಿ ಜಾರಿಗೆ ತರಲಾಯಿತು. ಪರಿಣಾಮ ಕೆಲವರು ಪ್ರಾಣ ಕಳೆದುಕೊಂಡರು.

    ಡಾ. ಶರಣು ಹುಲ್ಲೂರು

    ಅನೇಕರು ಬೀದಿಗೆ ಬಿದ್ದರು. ಈ ಸಮಾಜ ಈ ವೈರಸ್ ಅನ್ನು ಮತ್ತೊಂದು ಬಗೆಯಲ್ಲಿ ಸ್ವೀಕರಿಸಿತು. ಹಾಗಾಗಿ ನಾಗರೀಕ ಸಮಾಜದಲ್ಲಿ ತಲೆತಗ್ಗಿಸುವಂತಹ ಘಟನೆಗಳು ಜರುಗಿದವು. ಇಂತಹ ಅನೇಕ ಸತ್ಯ ಘಟನೆಗಳ ಕಥಾ ಸ್ಪರ್ಶವೆ ಡಾ. ಶರಣು ಹುಲ್ಲೂರು ಬರೆದ ಕರೋನಾ ಕರುಣಾಜನಕ ಕಥೆಗಳು ಪುಸ್ತಕ.
    ಇಲ್ಲಿ ಕಲ್ಪನೆಗಿಂತ ವಾಸ್ತವತೆ ಮಾತಾಡಿದೆ… ಶೀಘ್ರದಲ್ಲೇ ಪುಸ್ತಕ ಲೋಕಾರ್ಪಣೆ ಆಗಲಿದೆ.

    error: Content is protected !!