25.1 C
Karnataka
Wednesday, April 23, 2025
    Home Blog Page 28

    Indian Stock Market: ಐಪಿಒ ಗಳ ಬಗ್ಗೆ ತಿಳಿಯಲೇಬೇಕಾದ ಅಂಶಗಳು

    ಕಂಪನಿಗಳು, ವಿಶೇಷವಾಗಿ ಸ್ಟಾರ್ಟ್‌ ಅಪ್‌, ಯೂನಿಕಾರ್ನ್‌ ಎಂಬ ನಾಮಾಂಕಿತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಪ್ರವರ್ತಕರ ಹೂಡಿಕೆಯಲ್ಲದೆ, ಹೊರಗಡೆಯಿಂದ ಅನೇಕ ಸಂಸ್ಥೆಗಳು ಈ ಸ್ಟಾರ್ಟ್‌ ಅಪ್‌ ಕಂಪನಿಗಳಿಗೆ ಫಂಡಿಂಗ್‌ ಒದಗಿಸುವ ವ್ಯವಸ್ಥೆಯು ಜಾರಿಯಲ್ಲಿದೆ. ಈ ಅಂಶವು ಎಲ್ಲಾ ಹೂಡಿಕೆದಾರರಿಗೂ ತಿಳಿದಿರುವುದಿಲ್ಲ. ಕೇವಲ ಮಾಧ್ಯಮಗಳಲ್ಲಿ ಬಂದಂತಹ ಅಂಶಗಳನ್ನಾಧರಿಸಿ ನಿರ್ಧರಿಸುತ್ತಾರೆ. ಅದೇ ಮಾಧ್ಯಮದಲ್ಲಿ ಅರಿತು ಹೂಡಿಕೆ ಮಾಡಿ ಎಂದು ಹೇಳುವುದನ್ನು ಕಡೆಗಣಿಸುತ್ತಾರೆ.

    ಯಾವುದೇ ಕಂಪನಿಯಲ್ಲಿ ಸಾರ್ವಜನಿಕ ವಿತರಣೆಗೆ ಮುನ್ನ ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಅಥವಾ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಹೂಡಿಕೆ ಮಾಡಿದ್ದಲ್ಲಿ ಅಂತಹ ಕಂಪನಿಗಳು ನಿಗದಿ ಪಡಿಸುವ ಐ ಪಿ ಒ-IPO- ಷೇರುಗಳ ಬೆಲೆ ಅತಿ ಹೆಚ್ಚಾಗಿರುತ್ತವೆ. ಹೆಚ್ಚಿನ ಕಂಪನಿಗಳಲ್ಲಿ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳ ಫಂಡಿಂಗ್‌ ಇದೆ. ಐ ಪಿ ಒ ಗೂ ಮುನ್ನ ಗ್ರೇ ಮಾರ್ಕೆಟ್ ಎಂಬ ಅನಧಿಕೃತ ಪೇಟೆಯಲ್ಲಿ ಪ್ರೀಮಿಯಂ ಹೆಚ್ಚಿದೆ ಎಂಬ ಪ್ರಚಾರ ಸಹ ನಡೆಯುತ್ತಿರುತ್ತದೆ. ಇಂತಹ ಗ್ರೇ ಮಾರ್ಕೆಟ್‌ ದರಗಳಿಗೆ ಮಾನ್ಯತೆ ಇರುವುದಿಲ್ಲ. ಇಂತಹವುಗಳಿಂದ ದೂರವಿದ್ದಲ್ಲಿ ಕ್ಷೇಮ. ಏರಿಕೆ ಮತ್ತು ಇಳಿಕೆಗಳಿಗೆ ಇತಿಮಿತಿಗಳಿರುವುದಿಲ್ಲ. ಅಧಿಕೃತವಾಗಿಯೇ ಅನೇಕ ಅವಕಾಶಗಳು ಲಭ್ಯವಿರುವಾಗ, ಅನಧಿಕೃತ ವ್ಯವಹಾರಿಕ ಚಿಂತನೆ ಏಕೆ?

    ಸಂಪನ್ಮೂಲ ಅಗತ್ಯತೆ ಯಾರಿಗಾಗಿ:

    ಒಟ್ಟಾರೆ ಒಂದು ಕಂಪನಿಯ ಹಿಂದೆ ಅಡಗಿರುವ ಆರ್ಥಿಕ ಸಾಮರ್ಥ್ಯ, ತೊಳಲಾಟ, ಗೊಂದಲ, ಒತ್ತಡಗಳು ಸಂಪೂರ್ಣ ಪಾರದರ್ಶಕವಾಗಿರಲು ಸಾಧ್ಯವಿರಲಾರದು. ಹಿಂದೆ ಇನ್ಫೋಸಿಸ್‌ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು. ಆಗ ಆ ಕಂಪನಿಗೆ ಅಭಿವೃದ್ಧಿಯ ದೃಷ್ಠಿಯಿಂದ, ಸಂಪನ್ಮೂಲದ ಅಗತ್ಯತೆ ಇತ್ತು. ಅದರ ಮೂಲಕ ತನ್ನ ಗುರಿ ಸಾಧನೆಯ ಪ್ರಯತ್ನ ನಡೆಯಬೇಕಿತ್ತು. ಆದರೆ ಈಗ ಕಂಪನಿಯ ಚಟುವಟಿಕೆಗೆ, ಅಭಿವೃದ್ಧಿಗೆ ಸಂಪನ್ಮೂಲದ ಅಗತ್ಯವಿಲ್ಲ. ಕಾರಣ ಕಂಪನಿಯ ಪ್ರವರ್ತಕರು ಮತ್ತು ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಕಂಪನಿಯ ಅಗತ್ಯವಿರುವ ಸಂಪನ್ಮೂಲವನ್ನು ಪೂರೈಸಿ, ಕಂಪನಿಗೆ ಉತ್ತಮ ಬ್ರಾಂಡ್‌ ಇಮೇಜನ್ನು ತಂದುಕೊಂಡ ಮೇಲೆ ಮೌಲ್ಯಾಧಾರಿತ ವಿತರಣೆ ಮಾಡುವ ಬದಲು, ಸ್ವಹಿತವನ್ನೇ ಆಧರಿಸಿ ಅವಕಾಶಗಳ ಲಾಭ ದೊರಕಿಸಿಕೊಳ್ಳಲು ಐ ಪಿ ಒ ವಿತರಣೆಗೆ ಮುಂದಾಗುತ್ತಾರೆ.

    ಐ ಪಿ ಒ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪನ್ಮೂಲವು ಹಲವ ಭಾರಿ ನೇರವಾಗಿ, ಸಂಪೂರ್ಣವಾಗಿ ಪ್ರವರ್ತಕರು, ಮತ್ತು ಫಂಡಿಂಗ್‌ ಮಾಡಿರುವವರ ಖಜಾನೆ ತುಂಬಿಸುವ ರೀತಿ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಹಲವು ಕಂಪನಿಗಳಂತೂ ವಿತರಣೆಯನ್ನು ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮೂಲಕ ಪ್ರವರ್ತಕರ ಮತ್ತು ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳ ಖಜಾನೆಗೆ ಸೇರಿ, ಕಂಪನಿಗೆ ಒಂದು ಬಿಡಿಕಾಸು ಸಿಗುವುದಿಲ್ಲ.

    ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿ ಪರಿವರ್ತನೆ:

    ಕೆಲವು ಕಂಪನಿಗಳು ಐ ಪಿ ಒ ಗಳನ್ನು ಅಧಿಕ ಪ್ರೀಮಿಯಂನಲ್ಲಿ ತೇಲಿಬಿಡುವುದಕ್ಕಾಗಿಯೇ ತಮ್ಮ ಕಂಪನಿಗಳನ್ನು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳಾಗಿ ಪರಿವರ್ತಿಸಿ, ಕೆಲವೇ ತಿಂಗಳಲ್ಲಿ ಐ ಪಿ ಒ ಮೂಲಕ ವಿತರಣೆ ಮಾಡುವರು.

    ಐ ಪಿ ಒ ಗೂ ಮುಂಚೆ ಮುಖಬೆಲೆ ಸೀಳಿಕೆ:

    ಈಚಿನ ದಿನಗಳಲ್ಲಿ ಷೇರುಪೇಟೆಯ ಸೂಚ್ಯಂಕಗಳು ಗಗನದತ್ತ ಚಿಮ್ಮುತ್ತಿರುವುದರ ಪ್ರಚಾರದಿಂದ ಪ್ರೇರಿತರಾಗಿ ಐ ಪಿ ಒ ಎಂದರೆ ಸದಾ ಲಾಭದಾಯಕ ಎಂಬ ವಿಶ್ವಾಸದಿಂದ, ಬೇರೆ ಯಾವುದೇ ಚಿಂತನೆ, ವಿಶ್ಲೇಷಣೆಗಳನ್ನು ಮಾಡದೆ ಅರ್ಜಿ ಸಲ್ಲಿಸುತ್ತಾರೆ. ಕೆಲವು ಕಂಪನಿಗಳು ಅಧಿಕ ಪ್ರೀಮಿಯಂ ನಿಗದಿಪಡಿಸುವುಕ್ಕಾಗಿ ಕೆಲವು ತಿಂಗಳುಗಳ ಮುಂಚೆ ತಮ್ಮ ಷೇರಿನ ಮುಖಬೆಲೆಯನ್ನು ಸೀಳಿರುತ್ತವೆ. ಅಂದರೆ ಉದಾಹರಣೆಗೆ ಮುಖಬೆಲೆ ರೂ.10 ರ ಷೇರನ್ನು ಐಪಿಒ ವಿತರಣೆ ಬೆಲೆ ರೂ. 2000 ಎಂದಾದರೆ, ಕೆಲವು ಕಂಪನಿಗಳು ರೂ.10 ರ ಮುಖಬೆಲೆಯ ಷೇರನ್ನು ರೂ.1 ಅಥವಾ 2 ಕ್ಕೆ ಸೀಳಿಕೆ ಮಾಡಿ ಅದನ್ನೇ ರೂ.2,000 ಎಂದು ವಿತರಣೆ ನಿಗದಿಪಡಿಸುವ ಚಿಂತನೆಯು ಆರ್ಥಿಕ ಸಾಕ್ಷರತಾ ಮಟ್ಟವು ಶೇ.27 ರ ಸಮೀಪವಿದ್ದು, ಹೆಚ್ಚಿನವರು ಷೇರುಪೇಟೆಯ ಚಟುವಟಿಕೆಯ ಅರಿವಿಲ್ಲದೆ ಪ್ರವೇಶಿಸಿರುವ ಸಂದರ್ಭದಲ್ಲಿ ಈ ರೀತಿಯ ಚಿಂತನೆ ಸರಿಯಲ್ಲ.

    ಕಾರ್ಪರೇಟ್‌ ಫಲ ವಿತರಣೆ:

    ಕಂಪನಿಗಳು ಐ ಪಿ ಒ ವಿತರಣೆಗೂ ಮುಂಚೆ ಭಾರಿ ಗಾತ್ರದ ಲಾಭಾಂಶವನ್ನಾಗಲಿ ಅಥವಾ ಅಸಹಜ ಮಟ್ಟದ ಬೋನಸ್‌ ಷೇರು ವಿತರಣೆಯನ್ನು ಮಾಡುವ ಮೂಲಕ ಕಂಪನಿಯಲ್ಲಿರುವ ಮೀಸಲು ನಿಧಿಯನ್ನು ಖಾಲಿ ಮಾಡುವ ಚಿಂತನೆಗಳುಳ್ಳವನ್ನೂ ಈಚಿನ ದಿನಗಳಲ್ಲಿ ಕಂಡಿದ್ದೇವೆ. ಐಪಿಒ ಮೂಲಕ ಪ್ರವೇಶ ಪಡೆದ ಹೂಡಿಕೆದಾರರ ಹಿತಕ್ಕೆ ವಿರುದ್ಧವಾದ ಕ್ರಮವಿದಾಗಿದೆ.

    ಇಂತಹ ಚಿಂತನೆಗಳಿರುವ ಕಂಪನಿಗಳಲ್ಲಿ ಹೂಡಿಕೆ ಅಂದರೆ ಪ್ರಾಫಿಟಬಲ್‌ ಅನ್ನುವುದಕ್ಕಿಂತ ಚಾರಿಟಬಲ್‌ ರೀತಿಯಾಗುತ್ತದೆ. ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ಆ ಕಂಪನಿ ವಿತರಿಸುತ್ತಿರುವ ಬೆಲೆ ಸೂಕ್ತವೆಂದು ದೃಢಪಡಿಸಿಕೊಂಡಲ್ಲಿ, ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Kalatapasvi Rajesh:ಕಲಾತಪಸ್ವಿ ರಾಜೇಶ್ ನಿಧನ

    BENGALURU FEB 19

    ಕನ್ನಡ ಚಿತ್ರರಂಗದ ಹಿರಿಯ ನಟ, ‘ಕಲಾತಪಸ್ವಿ’ ರಾಜೇಶ್ ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷದ ರಾಜೇಶ್ ಅವರನ್ನು ತೀವ್ರ ನಿಗಾ ಘಟಕ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.

    ರಾಜೇಶ್ ಅವರು ಏಪ್ರಿಲ್ 15, 1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.ರಾಜೇಶ್ ಪಿ.ಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಹೈಸ್ಕೂಲಿನ ದಿನಗಳಿಂದಲೇ ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು. ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ ಕಲಾವಿದರ ಬಗ್ಗೆ ಅವರಿಗೆ ತುಂಬು ಅಭಿಮಾನ. ಹೀಗಾಗಿ ಮನೆಯವರಿಗೆ ತಿಳಿಯದಂತೆ ಸುದರ್ಶನ್ ನಾಟಕ ಮಂಡಳಿಯಲ್ಲಿ ಪಾತ್ರವಹಿಸತೊಡಗಿದರು.ಮುಂದೆ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಸ್ಥಾಪಿಸಿದ ರಾಜೇಶ್ ನಾಡಿನೆಲ್ಲೆಡೆ ಪ್ರಸಿದ್ಧ ನಾಟಕಗಳನ್ನಾಡಿದರು.

    ನಾಟಕಗಳಲ್ಲಿನ ಜನಪ್ರಿಯತೆ ರಾಜೇಶರನ್ನು ಚಿತ್ರರಂಗಕ್ಕೂ ಕರೆದು ತಂದಿತು. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

    ಪ್ರಸಿದ್ಧ ನಿರ್ಮಾಪಕ ಬಿ. ಎಸ್. ನಾರಾಯಣ್ ನಿರ್ಮಿಸಿ, ಸಿ.ವಿ. ಶಿವಶಂಕರ್ ಅವರು ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ ರಾಜೇಶ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿತು. ಹೀಗೆ ಸಾಗಿದ ತಮ್ಮ ಚಿತ್ರರಂಗದ ಬದುಕಿನಲ್ಲಿ ರಾಜೇಶ್ ಅವರು150ಕ್ಕೂ ಹೆಚ್ಚು ನಾಯಕ ಪ್ರದಾನ ಪಾತ್ರಗಳು ಮತ್ತು ವೈವಿಧ್ಯಮಯ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

    ‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ರಾಜೇಶ್ ಅವರು ನಾಯಕನಾಗದೆ, ನಾಯಕನ ಅಥವಾ ನಾಯಕಿಯ ಅಣ್ಣನಂತಹ ಪಾತ್ರಗಳಲ್ಲಿ ಅಭಿನಯಿಸಿದಾಗ ಸಹಾ ಅದು ಬಹಳಷ್ಟು ಜನಪ್ರಿಯವಾಗಿದೆ. ‘ಪ್ರತಿಧ್ವನಿ’, ‘ದೇವರಗುಡಿ’, ‘ಬದುಕು ಬಂಗಾರವಾಯ್ತು’ ಚಿತ್ರಗಳಲ್ಲಿ ಅವರು ನಾಯಕನಾಗಿ ಅಭಿನಯಿಸದಿದ್ದರೂ ಬಹಳ ಕಾಲ ನೆನಪಿನಲ್ಲುಳಿಯುತ್ತಾರೆ. ‘ಕರ್ಣ’ ಚಿತ್ರದಲ್ಲಿ ಡಾಕ್ಟರ್ ಆಗಿ ಅಭಿನಯಿಸಿದ ಅವರ ಗಾಂಭೀರ್ಯ ಕೂಡಾ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಪಾತ್ರವೇ ತಾನಾಗಿ ಪರಕಾಯ ಪ್ರವೇಶ ಮಾಡುವಂತಹ ನಟನೊಬ್ಬನ ಪ್ರಧಾನ ಗುಣಗಳಿವು.

    ರಾಜೇಶ್ ಅವರ ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದ್ದು ನಿರಂತರವಾಗಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸುತ್ತಾ ಬಂದರು. ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’, ‘ನಾನೇ ಎಂಬ ಭಾವ ನಾಶವಾಯಿತೋ’, ‘ರವಿವರ್ಮನ ಕುಂಚದ ಕಲೆ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

    ‘ಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ಅವರ ಅಭಿನಯ ಮೇರು ನಟ ಶಿವಾಜಿಗಣೇಶನ್ ಅವರ ಅಭಿನಯವನ್ನು ನೆನಪಿಸುವಂತದ್ದು ಎಂಬುದು ಅಂದಿನ ದಿನಗಳಲ್ಲಿ ಅವರನ್ನು ಕುರಿತ ಮೆಚ್ಚುಗೆಯ ಮಾತಾಗಿತ್ತು. ಶ್ರೀಮಂತವಾದ ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶಗಳು ಕೂಡಿಬಂದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಇಚ್ಛೆ ಹೊಂದಿದ್ದ ರಾಜೇಶ್ ಅಂತಹ ಕರೆಗಳನ್ನು ನಯವಾಗಿ ನಿರಾಕರಿಸಿದ್ದರು.

    ರಾಜೇಶ್ ಅವರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಇವಕ್ಕೆಲ್ಲ ಶಿಖರ ಪ್ರಾಯದಂತೆ ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿದೆ. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ರಾಜೇಶ್ ಅವರ ಅಳಿಯ.

    ನಾನು ಆಗ ಸಿಎಂ ಅಲ್ಲ, ಎಫ್ ಡಿಸಿ ಕೆಲಸ ಮಾಡಿಕೊಂಡಿದ್ದೆ ಎಂದ ಎಚ್.ಡಿ.ಕುಮಾರಸ್ವಾಮಿ

    BENGALURU FEB 19

    ರಾಷ್ಟ್ರಧ್ವಜದ ವಿಷಯದಲ್ಲಿ ನಾನು ಸಚಿವ ಕೆ ಎಸ್ ಈಶ್ವರಪ್ಪ ಅವರ ಪರ ವಕೀಲಿಕೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

    ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಇರುವ ವಿಷಯವನ್ನು ಇದ್ದ ಹಾಗೆ ಹೇಳಿದ್ದೇನೆ. ಈಶ್ವರಪ್ಪ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನೂ ದ್ವಜಕ್ಕೆ ಅಪಮಾನ ಆಗುವಂತಹ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನೇನೂ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ ಎಂದರು.

    ಧ್ವಜದ ಬಗ್ಗೆ ಅಷ್ಟೊಂದು ಹೇಳುವ ಕಾಂಗ್ರೆಸ್ ನಾಯಕರು, ಸದನದ ಬಾವಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತ ಪ್ರತಿಭಟನೆ ಮಾಡಿದರು. ಇದು ರಾಷ್ಟ್ರಧ್ವಜಕ್ಕೆ ನೀಡುವ ಗೌರವವೇ? ಸುಖಾ ಸುಮ್ಮನೆ ಸದನದ ಕಲಾಪ ವ್ಯರ್ಥ ಮಾಡದೇ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿ ಹೋರಾಟ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದರು.

    ಪ್ರತಿಷ್ಠೆಗೆ ಬಿದ್ದು ಮಂತ್ರಿಯ ರಾಜೀನಾಮೆ ಪಡೆಯಲು ಹೊರಟ ಕಾಂಗ್ರೆಸ್ ನಡೆಯನ್ನು ಜನ ಗಮನಿಸುತ್ತಾ ಇದ್ದಾರೆ. ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸದನದಿಂದ ಅಮಾನತು ಮಾಡಿ, ಆ ನಂತರ ಸದನ ನಡೆಸಿ ಎಂದು ಸಭಾಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಕೋವಿಡ್ ಅನಾಹುತ ಸಂದರ್ಭದಲ್ಲಿ ಆಗುತ್ತಿರುವ ಮತ್ತೊಂದು ‘ ರಾಜಕೀಯ ಕೋವಿಡ್ ದುರಂತ ‘ ಇದು. ಈ ವಿನಾಶಕಾರಿ ಕೋವಿಡ್ ಅನ್ನು ಎಲ್ಲಾ ಸೇರಿ ಹರಡಿಸಬೇಡಿ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.

    ನಾವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನಕ್ಕೆ ಬಂದಿದ್ದೆವು. ಆದರೆ ಇವರು ಹಿಜಾಬ್ ಮತ್ತು ಕೇಸರಿ ಶಾಲು ಎಂದು ಕಲಾಪವನ್ನು ಹಾಳು ಮಾಡಿದರು. ಆಮೇಲೆ ಸಚಿವರ ರಾಷ್ಟ್ರಧ್ವಜದ ಹೇಳಿಕೆ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳುಗೆಡವಿದರು. ಇದನ್ನು ಒಪ್ಪಲು ಸಾಧ್ಯವೇ? ತಪ್ಪು ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರು ಈಗ ಬೇರೆ ರಾಗ ಹಾಡುತ್ತಿದ್ದಾರೆ ಎಂದು ಅವರು ಹೇಳಿದರು.

    ಕರಾವಳಿಯ ಒಂದು ಭಾಗದಲ್ಲಿ ಶುರುವಾದ ಹಿಜಾಬ್ ಗೊಂದಲ ಮತ್ತಿತರ ಭಾಗದವರಿಗೆ ಪ್ರೇರೇಪಣೆ ಕೊಟ್ಟಂತೆ ಆಗಿದೆ. ಆ ಪ್ರದೇಶದ ಕೆಲ ಭಾಗದಲ್ಲಿ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ತರಗತಿ ಪ್ರವೇಶ ಮಾಡುವ ಸಮಯದಲ್ಲಿ ಹಿಜಾಬ್ ತೆಗೆದು, ಮನೆಗೆ ಹೋಗುವಾಗ ಮತ್ತೆ ಧರಿಸಿ ಹೋಗುತ್ತಿದ್ದರು.

    ಆರಂಭದಲ್ಲೇ ಚಿವುಟಿ ಹಾಕಬಹುದಾಗಿದ್ದ ವಿವಾದ ಎರಡು ಧರ್ಮದವರ ಸಂಘರ್ಷಕ್ಕೆ ಕಾರಣವಾಗಿದೆ. ಮಕ್ಕಳ ಮನಸ್ಸಲ್ಲಿ ದ್ವೇಷ ಬಿತ್ತಲಾಗಿದೆ. ಕೆಲ ಸಂಘಟನೆಗಳು ಇದನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕಳೆದ ಎರಡು ದಿನಗಳಿಂದ ಎರಡು ಸದನದಲ್ಲಿ ಕಲಾಪಗಳು ಸ್ಥಗಿತಗೊಳಿಸುವ ಹಾಗೆ ಕಾಂಗ್ರೆಸ್ ನಡವಳಿಕೆ ಇದೆ. ಜನರು ಇದನ್ನು ಕ್ಷಮಿಸುವುದಿಲ್ಲ ಎಂದರು ಕುಮಾರಸ್ವಾಮಿ ಅವರು.

    ಮಾಧ್ಯಮಗಳಲ್ಲಿ ಬಂದ ಈಶ್ವರಪ್ಪ ಅವರ ಪ್ರತಿಕ್ರಿಯೆ ಇವತ್ತಿನ ಈ ರೀತಿಯ ಕಲಾಪಗಳಿಗೆ ಕಾರಣವಾಗಿದೆ. ಅದಕ್ಕಿಂತಲೂ ಹೆಚ್ಚಿನ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಆಗಲಿಲ್ಲ. ಕಾರವಾರದ
    ಸಂಸದರೊಬ್ಬರು ಹಿಂದೆ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂಬಂತೆ ಮಾತನಾಡಿದ್ದರು. ಬಿಜೆಪಿಯವರ ಅಜೆಂಡಾಗಳೇ ಈ ರೀತಿ ಇವೆ. ಈ ದೇಶದಲ್ಲಿ ಹಿಂದೂಗಳು ಮಾತ್ರ ಬದುಕಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ‌ ಅವರು. ಇಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡೇ ಚುನಾವಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

    ಕೇಸರಿ ಎಂಬುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಇದೆ. ಅದರ ಬಗ್ಗೆ ನಮಗೂ ಪೂಜ್ಯ ಭಾವನೆ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಕಠಿಣ ಜೀವನಶೈಲಿ ರೂಢಿಸಿಕೊಂಡವರು ಕೇಸರಿ ಧರಿಸುತ್ತಾ ಇದ್ದರು. ಈಗ ಎಲ್ಲರ ಮೈಮೇಲೆ ಕೇಸರಿ ಹಾಕುವ ಕೆಲಸ ನಡೆಯುತ್ತಿದೆ. ಬಿಜೆಪಿ ಅಯೋಧ್ಯ ಮಂದಿರ ಕಟ್ಟುವ ಚಳವಳಿ ಶುರು ಮಾಡಿದಾಗ ಇದನ್ನು ಬಳಸುವುದನ್ನು ಬಿಜೆಪಿ ಶುರು ಮಾಡಿದ್ದರು. ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಬದಲಾವಣೆ ತರಲು ಅವರು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಸರ್ಕಾರದ ಆಡಳಿತದ ವೈಫಲ್ಯ ಮತ್ತಿತರ ವಿಚಾರಗಳು ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಉದ್ಯೋಗ, ಆರ್ಥಿಕ ಪರಿಸ್ಥಿತಿ, ಶಾಲೆಗಳ ಪರಿಸ್ಥಿತಿ ಬಗ್ಗೆ ಚರ್ಚೆ ಆಗಬೇಕಿತ್ತು.

    ಭ್ರಷ್ಟ ಹಗರಣಗಳ ಬಗ್ಗೆ ಚರ್ಚೆ ಮಾಡುವವನಿದ್ದೆ:ನಾನು ಈ ಬಾರಿ ಸದನದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ, ಹಗರಣಗಳ ಬಗ್ಗೆ ಸದನದಲ್ಲಿ ದಾಖಲೆಗಳನ್ನು ಇಡಲು ತಯಾರಿ ಮಾಡಿಕೊಂಡಿದ್ದೆ. ಆದರೆ ಸದನವು ಸರಿಯಾಗಿ ನಡೆಯಲೇ ಇಲ್ಲ. ನೀವು ಕೂಡ 14 ತಿಂಗಳು ಆಡಳಿತ ಮಾಡಿದ್ದಿರಿ. ಆಗ ಸರಿ ಮಾಡಬಹುದಿತ್ತಲ್ಲ ಎಂದು ಯಾರಾದರೂ ಕೇಳಬಹುದು. ಆದರೆ ನಾನು ಆಗ ಸಿಎಂ ಅಲ್ಲ, ಎಫ್ ಡಿಸಿ ಕೆಲಸ ಮಾಡಿಕೊಂಡಿದ್ದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರದಿಂದ ಹೇಳಿದರು.

    Administrative-Reforms -ಆಡಳಿತ ಸುಧಾರಣಾ ಆಯೋಗ-2ರ ಎರಡು ಮತ್ತು ಮೂರನೇ ವರದಿ ಸಲ್ಲಿಕೆ; ಕಡತಗಳ ಹಂತ ಇಳಿಕೆಗೆ ಶಿಫಾರಸ್ಸು

    BENGALURU FEB 18

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಎರಡು ಮತ್ತು ಮೂರನೇ ವರದಿಗಳನ್ನು ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಲ್ಲಿಸಿದರು.

    ವರದಿಯ ಮುಖ್ಯಾಂಶಗಳ ಮಾಹಿತಿ ಪಡೆದ ಮುಖ್ಯಮಂತ್ರಿಗಳು ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಿ, ಕೂಡಲೇ ಜಾರಿಗೊಳಿಸಲು ಸಾಧ್ಯವಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

    ಇಂದು ಸಲ್ಲಿಸಿದ ವರದಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಒಳಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡಿದೆ.

    ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಪ್ರಮುಖ ಶಿಫಾರಸುಗಳು

    1. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿ ಇತ್ಯಾದಿಗಳಲ್ಲಿ ಆಗುವ ಅನುಪಯುಕ್ತ ವೆಚ್ಚಗಳನ್ನು ತಡೆಯುವ ಕುರಿತು ಸಲಹೆ ನೀಡಲು ಅನುಪಯುಕ್ತ ವೆಚ್ಚ ತಡೆ ಕಾರ್ಯಪಡೆಯನ್ನು ರಚಿಸಬಹುದು.
    2. ಭಾರತ ಸರ್ಕಾರವು ತನ್ನ ಸಚಿವಾಲಯಗಳಲ್ಲಿ ಯಾವುದೇ ಕಡತವು ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು ಎಂದು ನಿರ್ಧರಿಸಿರುವಂತೆ ರಾಜ್ಯ ಸರ್ಕಾರವು ಸಹ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
    3.  ಎಲ್ಲ ಇಲಾಖೆಗಳ ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್‌ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು.
    4. ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಚೆ ಕಚೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು   ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಚೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
    5. ಗ್ರಾಮ ಮಟ್ಟದ ಉದ್ಯಮಿಗಳಿಂದ(VLE) ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ರಾಜ್ಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು VLE ಗಳನ್ನು ʼಜನಸೇವಕರಾಗಿʼ ಬಳಸಿಕೊಳ್ಳಬಹುದು.
    6. ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಇಲಾಖೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಮತ್ತು ಜಮೀನಿನ ಮೌಲ್ಯವು ರೂ.5 ಕೋಟಿ ಮೀರದ ಸರ್ಕಾರಿ ಜಮೀನನ್ನು ಪರಿವರ್ತನಾ ಶುಲ್ಕದ ವಿನಾಯಿತಿ ನೀಡಿ ಉಚಿತವಾಗಿ ಮಂಜೂರು ಮಾಡುವ ಹೆಚ್ಚಿನ ಅಧಿಕಾರವನ್ನು ಪ್ರತ್ಯಾಯೋಜಿಸಬಹುದು.
    7. ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು(DPE) ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬಹುದು.
    8. ಭೂಸ್ವಾಧೀನಕ್ಕೆ ಪರಿಹಾರ ಧನದ ಪಾವತಿಯು ಕಾಲಮಿತಿಯದ್ದಾಗಿರಬೇಕು. ಕಾಲಮಿತಿಯಲ್ಲಿ ಪಾವತಿಸದಿದ್ದರೆ ವಿಳಂಬವಾದ ಅವಧಿಗೆ ಅನವಶ್ಯಕಾಗಿ ಹೆಚ್ಚುವರಿ ಪರಿಹಾರ ಧನವನ್ನು ಪಾವತಿಸಬೇಕಾಗುತ್ತದೆ ಹಾಗಾಗಿ ಇದನ್ನು ಭೂ ಕೋರಿಕೆ ಸಂಸ್ಥೆಗಳು ಮತ್ತು ಕಂದಾಯ ಇಲಾಖೆಯು ಸಕಾಲ ಸೇವೆಯಾಗಿ ಅಧಿಸೂಚಿಸಬೇಕು ಮತ್ತು ಪರಿಹಾರ ಧನವನ್ನು ಆಧಾರ್‌ ಬೇಸ್ಡ್‌ ಪಾವತಿ ಮಾಡುವಂತೆ ಪ್ರಕ್ರಿಯೆಗೊಳಿಸಬೇಕು ಇದರಿಂದ ಚೆಕ್‌ ಮೂಲಕ ಪರಿಹಾರ ಧನ ಪಾವತಿಯಲ್ಲಾಗುವ ವಂಚನೆಯನ್ನು ತಡೆಗಟ್ಟಬಹುದು.
    9. ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗದವರ ಕಾರ್ಯನಿರ್ವಹಣೆಯನ್ನುಮೌಲ್ಯಮಾಪನ ಮಾಡುವ ನಮೂನೆಯನ್ನು ಪರಿಷ್ಕರಿಸಿದ್ದು ಅದರಂತೆ ಕ್ರಮವಹಿಸಬಹುದು.      
    10. ಸಾಧನೆ (ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿ) ಇಲಾಖೆಗಳ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿಯನ್ನು ಜಾರಿಗೊಳಿಸಿ ಇಲಾಖೆಗಳ ಮೌಲ್ಯಮಾಪನ ಮಾಡಬಹುದು.
    11. ರಾಷ್ಟ್ರಮಟ್ಟದಲ್ಲಿ ರಾಜ್ಯದ ಸೂಚ್ಯಾಂಕವನ್ನು   ಸುಧಾರಿಸಲು ಬಹು ವಲಯ, ವಲಯ ಸೂಚ್ಯಂಕಗಳ ವಿಶ್ಲೇಷಣೆ, ಸುಧಾರಣೆ, ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲು ಕ್ರಮ ತೆಗೆದುಕೊಳ್ಳಬಹಬುದು ಮತ್ತು ಇವೇ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳ ಶ್ರೇಣಿಗಳನ್ನು ಪ್ರಕಟಿಸುವುದು.
    12. ಅತಿ ಹೆಚ್ಚಿನ ಮೌಲ್ಯದ ಟೆಂಡರ್‌ಗಳನ್ನು ಕರೆಯುವ ಮೊದಲು ಕರಡು ಬಿಡ್‌ ಡ್ಯಾಕ್ಯುಮೆಂಟ್‌ನ್ನು ಇ-ಪ್ರೊಕ್ಯುರ್‌ಮೆಂಟ್‌ ವೆಬ್‌ಸೈಟ್‌ ಮೂಲಕ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬಹುದು. ಆಕ್ಷೇಪಣೆಗಳಿಗೆ ಇಲಾಖೆಗಳು ತಮ್ಮ ನಿರ್ಧಾರಗಳನ್ನು ದಾಖಲಿಸಬೇಕು ನಂತರವೇ ಬಿಡ್‌ ಡ್ಯಾಕ್ಯುಮೆಂಟ್‌ನ್ನು ಅಂತಿಮಗೊಳಿಸಬೇಕು.
    13. ಎಲ್ಲ ಇಲಾಖೆಗಳು ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನಿಯೋಜಿಸಿಕೊಳ್ಳುತ್ತಿದ್ದು, ನಿಯೋಜಿಸಿಕೊಳ್ಳುವಾಗ ಯಾವುದೇ ರೀತಿಯ ಮೀಸಲಾತಿ ಪದ್ದತಿಯನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನಾನುಕೂಲವಾಗುತ್ತಿರುವುದು ಕಂಡುಬಂದಿರುತ್ತದೆ.   ಸರ್ಕಾರವು ಹೊರ ಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅಗತ್ಯ ಪ್ರಾತಿನಿಧ್ಯ ನೀಡಿ ನಿಯೋಜಿಸುವಂತೆ ಸೂಕ್ತ ಆದೇಶವನ್ನು ಹೊರಡಿಸಬಹುದು.
    14. ವಿವಿಧ ಕಚೇರಿಗಳಲ್ಲಿ ಕಾರ್ಯಭಾರದ ಆದಾರದ ಮೇಲೆ ಹುದ್ದೆಗಳ ‍ ಸ್ಥಳಾಂತರ ಮಾಡಬಹುದು. ಉದಾ:  ತಹಶೀಲ್ದಾರ್‌ ಕಚೇರಿಗಳಲ್ಲಿನ ಗ್ರೂಪ್‌-ಸಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಹಾಗೂ ಪೋಲೀಸ್‌ ಕಾನ್ಸ್‌ಟೇಬಲ್‌ಗಳು ಇತ್ಯಾದಿ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆಯ  ಮುಖ್ಯ ಶಿಫಾರಸ್ಸುಗಳು

    1. ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣಾಭಿವೃದ್ಧಿ ರಸ್ತೆ ಅಭಿವೃದ್ಧಿ ಸಂಸ್ಥಯನ್ನು ವಿಲೀನಗೊಳಿಸಬಹುದು.
    2. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಇಂಧನ ಇಲಾಖೆಗೆ ವರ್ಗಾಯಿಸುವುದು ನಂತರ ಇಂಧನ ಇಲಾಖೆಯ ಆಡಳಿತದ ನಿಯಂತ್ರಣದಲ್ಲಿರಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಜೊತೆ ವಿಲೀನ ಮಾಡಬಹುದು.
    3.  ಬಿಬಿಎಂಪಿಯಲ್ಲಿ ಅನಧಿಕೃತ, ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡುಪಟ್ಟು ದಂಡವನ್ನು ಸಂಗ್ರಹಿಸುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಗ್ರಾಮ ಪಂಚಾಯತ್‌ಗಳು ಅಕ್ರಮ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡು ಪಟ್ಟು ದಂಡವನ್ನು ವಿಧಿಸಲು ಅನೂಕೂಲವಾಗುವಂತೆ ಕರ್ನಾಟಕ ಪಂಚಾಯತ್‌ ರಾಜ್‌ ಕಾಯಿದೆ 1993, ಕರ್ನಾಟಕ ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯತ್‌ ಬಜೆಟ್‌ ಮತ್ತು ಲೆಕ್ಕ ಪತ್ರ ನಿಯಮಗಳು) 2006 ಗೆ ತಿದ್ದುಪಡಿ ಮಾಡಬಹುದು.
    4. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ನಗರ ಸ್ಥಳೀಯ ಸಂಸ್ಥಗಳ ಮುಖ್ಯಾಧಿಕಾರಿಗಳನ್ನು ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಪ್ರಾಧಿಕಾರಗಳನ್ನಾಗಿ ಅಧಿಸೂಚಿಸಬೇಕು. ಗ್ರಾಮ ಪಂಚಾಯತ್‌ಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಮಾಜಿಕ ಬದ್ರತಾ ಪಿಂಚಣಿಗಳ ಅರ್ಜಿ ಪಡೆದು  ಶಿಫಾರಸು ಮಾಡುವ ಅಧಿಕಾರ ನೀಡಬಹುದು.
    1. ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್‌ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್‌ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್‌ ಗಳು ಮಾಡಬಹುದು.
    2. ಗ್ರಾಮ ಪಂಚಾಯತ್‌ಗಳ ವಿದ್ಯುತ್‌ ಬಿಲ್‌ ಮತ್ತು ಬಾಕಿಗಳನ್ನು ನಿರ್ವಹಿಸುವುದರ ಕುರಿತಂತೆ ಶಿಫಾರಸುಗಳು. 2021-22 ರಲ್ಲಿ ವಿದ್ಯುತ್‌ ಶುಲ್ಕಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಒಟ್ಟು ವೆಚ್ಚ ರೂ.1725 ಕೋಟಿ ಹಾಗೂ ಎಸ್ಕಾಮ್ಸ್‌ಗಳಿಗೆ ಬರಬೇಕಾದ ಒಟ್ಟು ವಿದ್ಯತ್‌ ಬಿಲ್‌ ಬಾಕಿ ರೂ. 3993 ಕೋಟಿ.

    ನಗರಾಭಿವೃದ್ಧಿ ಇಲಾಖೆ, ಮುಖ್ಯ ಶಿಫಾರಸ್ಸುಗಳು

    1. ಅಪರಾಧಗಳ ಸಂಯೋಜನೆಗಾಗಿ ಕೆಟಿಸಿಪಿ ಕಾಯಿದೆಯ ಸೆಕ್ಷನ್‌ 76 ಎಫ್‌ ಅಡಿಯಲ್ಲಿ ವಿಶೇಷ ಆದೇಶ ನಿಡುವುದರ ಮೂಲಕ ಬಿ-ಖಾತಾ ನಿವೇಶನಗಳನ್ನು ಭೂ ಪರಿವರ್ತನೆ ಶುಲ್ಕ ಹಾಗೂ ದಂಡ, ಯೋಜನಾ ಪ್ರಾಧಿಕಾರಕ್ಕೆ ಕಾಂಪೌಂಡಿಂಗ್‌ ಶುಲ್ಕ, ಕಟ್ಟಡ ಯೋಜನಾ ಮಂಜೂರಾತಿ ಶುಲ್ಕ ಹಾಗೂ ದಂಡ ಇತ್ಯಾದಿಗಳನ್ನು ಪಾವತಿಸಿಕೊಂಡು ಎ-ಖಾತಾಗಳಾಗಿ ಪರಿವರ್ತಿಸಬಹುದು.
    2. ಬಿಎಂಆರ್‌ಡಿಎ ಮತ್ತು ಬಿಡಿಎ ವಿಲೀನಗೊಳಿಸಲು ಬಿಡಿಎ ಕಾಯ್ದೆ ತಿದ್ದುಪಡಿ ಮಾಡಿ ಬಿಡಿಎ ಅನ್ನು ಬಿಎಂಅರ್‌ಡಿಎ ಆಗಿ ಪರಿವರ್ತಿಸಿ ಬಿಡಿಎ ಕಛೇರಿಗೆ ಸ್ಥಳಾಂತರಿಸಬಹುದು.
    3. 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ಭೂ ಮಾಲೀಕರ ಸ್ವಯಂ ಘೋಷಣೆ ಮತ್ತು ಪ್ರಮಾಣೀಕರಣದ ಆದಾರದ ಮೇಲೆ ಆನ್‌ಲೈನ್‌ನಲ್ಲಿಯೇ ಶುಲ್ಕವನ್ನು ಪಾವತಿಸಿಕೊಂಡು ಕಟ್ಟಡ ಯೋಜನೆಗೆ   ತಕ್ಷಣದಲ್ಲಿ ಮಂಜೂರಾತಿ ನೀಡಬಹುದು.
    4. ಬಿಬಿಎಂಪಿ ವ್ಯಾಪ್ತಿಯಲ್ಲಿ, ವಲಯಗಳಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ, ಸಿಟಿ ಕಾರ್ಪೋರೇಷನ್‌ಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಬಹುದು.
    5. ಬಿಬಿಎಂಪಿಯಲ್ಲಿ ಬಿ-ಖಾತಾ, ಗ್ರಾಮ ಪಂಚಾಯತ್‌ಗಳಲ್ಲಿ 11-B ಇರುವಂತೆ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಬಿ-ಖಾತಾಗಳನ್ನು ತೆರೆಯಲು ಬಿಬಿಎಂಪಿ ಕಾಯಿದೆಯ ಮಾದರಿಯಲ್ಲಿ ಕೆಎಂಸಿ ಕಾಯಿದೆ, ಕೆಎಂ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದು.
    6. ಕೆಎಂಸಿ ಕಾಯಿದೆ 1976 ಮತ್ತು ಕೆಎಂ ಕಾಯಿದೆ 1964 ರ ಅಡಿಯಲ್ಲಿ ವಿಧಿಸುವ ವಿವಿಧ ತೆರಿಗೆಗಳು ಮತ್ತು ದಂಡಗಳನ್ನು ಪ್ರಸಕ್ತ ಸಾಲಿಗೆ ಹಣದುಬ್ಬರ ಸೂಚ್ಯಂಕಕ್ಕೆ ಪರಿಷ್ಕರಿಸಬಹುದು. ಉದಾ:  ಕೆಲವು ದರಗಳು 5 ರೂಪಾಯಿಯಿಂದ ವಿಧಿಸಲಾಗುತ್ತಿದೆ.
    7. 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯನ್ವಯ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗ/ಾವಿ ಮುಂತಾದ ಮಹಾನಗರಗಳಿಗೆ ಮಹಾನಗರ ಯೋಜನಾ ಸಮಿತಿ ರಚನೆ ಮಾಡಬಹುದು.
    8. ಬಿಬಿಎಂಪಿಯ ಮುಖ್ಯ ಆಯುಕ್ತರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು   ಮುಖ್ಯ ಆಯುಕ್ತರ ಕೆಲವು ಅಧಿಕಾರಗಳನ್ನು ಉದಾ: 2 ಕೋಟಿವರೆಗಿನ ಬಜೆಟ್‌ ಕಾಮಗಾರಿಗಳ ಅನುಮೋದನೆ, ವಲಯ ವ್ಯಾಪ್ತಿಯಲ್ಲಿ ಅಭಿಯಂತರರುಗಳ, ಸಿಬ್ಬಂದಿಗಳ ಹಾಗೂ ಗ್ರೂಪ್-ಸಿ ನೌಕರರ ವರ್ಗಾವಣೆ ಮುಂತಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ವಲಯ ಆಯುಕ್ತರುಗಳಿಗೆ ನೀಡಬಹುದು.
    9. ಅದೇ ರೀತಿಯಾಗಿ, ಆಯುಕ್ತರು ಬಿಡಿಎ ರವರ ಭೂ ಸ್ವಾಧೀನದ ಅಧಿಕಾರಗಳನ್ನು ಡೆಪ್ಯೂಟಿ ಕಮಿಷನರ್‌ರವರಿಗೆ, ನಿವೇಶನ ಸಂಬಂಧಿತ ಅಧಿಕಾರಗಳನ್ನು ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ, ರಜೆ ನಗದೀಕರಣ, ರಜೆ ಮಂಜೂರಾತಿ, ವೈದ್ಯಕೀಯ ಬಿಲ್‌ ಮಂಜೂರಾತಿ ಇತ್ಯಾದಿಗಳನ್ನು ಕಾರ್ಯದರ್ಶಿಗೆ, 1 ಲಕ್ಷದವರೆಗಿನ ಯುಟಿಲಿಟಿ ಬಿಲ್‌, ಆಕಸ್ಮಿಕ, ಜಾಹೀರಾತು ಬಿಲ್‌ಗಳ ಪಾವತಿಯನ್ನು ವಿಭಾಗ ಮುಖ್ಯಸ್ಥರಿಗೆ ಮುಂತಾದ ಅಧಿಕಾರಗಳ ಪ್ರತ್ಯಾಯೋಜನೆ ಮಾಡಬಹುದು.

    ಇಂಧನ ಇಲಾಖೆಯ ಮುಖ್ಯ ಶಿಫಾರಸುಗಳು

    1. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್‌ಗಳಿಗೆ ವಿದ್ಯುತ್‌ ಶಕ್ತಿ ಸಂಪರ್ಕಕ್ಕೆ ವಾಸ್ತವಿಕ ವೆಚ್ಚ ಸುಮಾರು 1.50 ಲಕ್ಷದಿಂದ ರೂ. 3.5 ಲಕ್ಷಗಳಾಗಿದ್ದು,  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಕೇವಲ ರೂ.50,000 ಗಳನ್ನು ಪಾವತಿಸಲಾಗುತ್ತಿದೆ ಎಂದು ವರದಿಯಾಗಿದೆ. ವಿದ್ಯುತ್‌ ಶಕ್ತಿ ಸಂಪರ್ಕದ  ನೈಜ ವೆಚ್ಚವನ್ನು ಮರುಪಾವತಿಸಲು ಅಥವಾ ನಿರ್ದಿಷ್ಟ ಮೊತ್ತವನ್ನು ಹೆಚ್ಚಿಸಲು ಕ್ರಮವನ್ನು ಪ್ರಾರಂಭಿಸಬಹುದು.
    2. ಸುಮಾರು 75% ರಿಂದ 80% ಹೊಸ ಸಂಪರ್ಕಗಳು 5 KW ಗಿಂತ ಕಡಿಮೆಯಿವೆ. ಅಂತಹ ಸಂಪರ್ಕಗಳಿಗೆ ವಿದ್ಯುತ್ ಮಂಜೂರಾತಿ ನೀಡುವ ಅಧಿಕಾರವನ್ನು ಸಂಬಂಧಪಟ್ಟ ಶಾಖಾಧಿಕಾರಿಗಳಿಗೆ ಪ್ರತ್ಯಾಯೋಜಿಸಬಹುದು.
    3. ಹೆಚ್ಚಿನ ಸಂಖ್ಯೆಯ ಅನುಸ್ಥಾಪನೆಗಳು CEI ಯ ವ್ಯಾಪ್ತಿಯಲ್ಲಿವೆ. ಸಕಾಲ ಅಡಿಯಲ್ಲಿ 18 ಸೇವೆಗಳನ್ನು ಒದಗಿಸುವುದರ ಜೊತೆಗೆ, ಇದು ನಿಯಮಿತವಾಗಿ ವಿದ್ಯುತ್ ಸ್ಥಾಪನೆಗಳನ್ನು ಪರಿಶೀಲಿಸಬೇಕು, ಲಭ್ಯವಿರುವ ಎಲ್ಲಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಸ್ಥೆಗೆ ಸಾಧ್ಯವಾಗದಿರಬಹುದು ಹಾಗಾಗಿ  ಹೊಸ ಹುದ್ದೆಗಳನ್ನು ಮಂಜೂರು ಮಾಡುವುದಕ್ಕಿಂತ ಬದಲಾಗಿ, CEI ಯ ಮೇಲ್ವಿಚಾರಣೆಯ ಅಡಿಯಲ್ಲಿ Chartered Electrical Safety Engineer ಗಳನ್ನು Central Electrical Authority ಮಾರ್ಗಸೂಚಿ ಪ್ರಕಾರ ಅಧಿಕೃತಗೊಳಿಸಲು ಅಧಿಸೂಚನೆ ಹೊರಡಿಸಬಹುದು.

    ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಮುಖ್ಯ ಶಿಫಾರಸ್ಸುಗಳು

    1. ಅರಣ್ಯ ಹಕ್ಕು ಕಾಯಿದೆ, 2006 ರ ನಿಬಂಧನೆಗಳ ಪ್ರಕಾರ, ಬಳಕೆಯ ಹಕ್ಕುಗಳನ್ನು ST, SC, OBC ಮತ್ತು ಇತರರಿಗೆ ಸೇರಿದ ಅರ್ಹ ವ್ಯಕ್ತಿಗಳಿಗೆ ದೃಢಪಡಿಸಲಾಗಿದೆ. ಅವರಿಗೆ ಹಕ್ಕು ಪತ್ರ(ಹಕ್ಕುಗಳ ಪ್ರಮಾಣಪತ್ರ) ಗಳನ್ನು ಸಹ ನೀಡಲಾಗುತ್ತದೆ. ಈ ಹಕ್ಕುಗಳ ವಿವರಗಳನ್ನು RTC ಯ ಇತರ ಹಕ್ಕುಗಳ ಕಾಲಂನಲ್ಲಿ ನಮೂದಿಸಬೇಕು. ಇದಲ್ಲದೆ, ಈ ರೈತರನ್ನು ಬೆಳೆ ಪರಿಹಾರ, ಬೀಜ ಮತ್ತು ಗೊಬ್ಬರ ಸಬ್ಸಿಡಿ, ಬ್ಯಾಂಕ್ ಸಾಲ ಇತ್ಯಾದಿ ಪ್ರೋತ್ಸಾಹಕಗಳಿಗೆ ಅರ್ಹರು ಎಂದು ಘೋಷಿಸಲಾಗಿಲ್ಲ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ಜಂಟಿಯಾಗಿ ಸರ್ಕಾರಿ ಆದೇಶವನ್ನು ಹೊರಡಿಸಿ, ರಾಜ್ಯ ಸರ್ಕಾರ ರೈತರಿಗೆ ನೀಡುವಂತಹ ಎಲ್ಲ ಪ್ರೋತ್ಸಾಹಕಗಳಿಗೆ ಅವರು ಸಹ ಅರ್ಹರು ಎಂದು ಪರಿಗಣಿಸುವಂತೆ ಅನುಷ್ಠಾನ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು.
    2. ವಿದ್ಯಾರ್ಥಿನಿಲಯಗಳಲ್ಲಿ ಮಂಜೂರಾದ ಸಾಮರ್ಥ್ಯಕ್ಕಿಂತ ಶೇ. 50 ಕ್ಕಿಂತ ಕಡಿಮೆ ದಾಖಲಾತಿ ಇರುವ ಸುಮಾರು 103 ವಿದ್ಯಾರ್ಥಿನಿಲಯಗಳನ್ನು ವಿಲೀನಗೊಳಿಸಬಹುದು ಮತ್ತು ಆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳನ್ನು ಹತ್ತಿರದ 93 ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಬಹುದು.
    3. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆ ಆದೇಶ ಮಾಡಬಹುದು ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆಯೂ ಸಹ ಆದೇಶ ಮಾಡಬಹುದು.

    ಒಳಾಡಳಿತ ಇಲಾಖೆಯ ಮುಖ್ಯ ಶಿಫಾರಸ್ಸುಗಳು

    1. ನಾಗರಿಕರು ಪೊಲೀಸ್ ಠಾಣೆಗಳಿಗೆ ಬರಲು ತುಂಬಾ ಸಂಕೋಚ ಪಡುತ್ತಾರೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಇಲಾಖೆಯು 32 ಕ್ಕೂ ಹೆಚ್ಚು ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದೆ ಹಾಗಾಗಿ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ನಾಗರಿಕ ಸೇವೆಗಳ ಸಹಾಯ ಕೇಂದ್ರ ಸ್ಥಾಪಿಸುವುದು ಹಾಗೂ ಪೋಲೀಸ್‌ ಕೈಪಿಡಿಯಲ್ಲಿ ಇದನ್ನು ಸೇರಿಸಬಹುದು.
    2. ಕರ್ನಾಟಕದಲ್ಲಿ ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಗಳಲ್ಲಿ ಶೇಕಡಾವಾರು ಮಹಿಳಾ ಪ್ರಾತಿನಿಧ್ಯವು 8.3% ಆಗಿದೆ (2020 ರಲ್ಲಿ). ಕಾನ್‌ಸ್ಟೆಬಲ್‌ಗಳು ಇತ್ಯಾದಿ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಹುದ್ದೆಗಳನ್ನು ಮೀಸಲಿಡಲು ರಾಜ್ಯವು ಆದೇಶಿಸಿದೆ. ಆದರೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ದಿನಾಂಕ:12.05.2015 ರಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಹ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ, ಸಮತಳವಾಗಿ ಮತ್ತು ಪ್ರತಿ ವರ್ಗದಲ್ಲಿ (ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರರು) 33% ಮೀಸಲಾತಿಯನ್ನು ಅನುಮೋದಿಸಬಹುದು.

    ಅಡಿಗರ  ‘ಸಮಾಜಭೈರವ ಕವಿತೆ’ ಒಂದು ಅನುಸಂಧಾನ

    ಸುಮಾ ವೀಣಾ

    ಸಾಹಿತ್ಯದಲ್ಲಿ  ಮಣ್ಣಿನ ವಾಸನೆಯ ಅಗತ್ಯವನ್ನು ಬಲವಾಗಿ  ಪ್ರತಿಪಾದಿಸಿರುವ ಗೋಪಾಲಕೃಷ್ಣ ಅಡಿಗರು ಹೊಸಗನ್ನಡ ಕಾವ್ಯ ಸಂದರ್ಭದ   ಪ್ರಮುಖ ಅಂತಃಶಕ್ತಿಯಾಗಿದ್ದವರು.  ಕಾವ್ಯವಸ್ತು ಮತ್ತು ರೂಪದಲ್ಲಿ ಕನ್ನಡ ಕಾವ್ಯಕ್ಕೆ ನವ್ಯತೆಯ ಹೊಸ ನೆಲೆಯನ್ನು  ತಂದವರು.  ಸ್ವಾತಂತ್ರ್ಯೋತ್ತರ  ಭಾರತದ   ಸಂಕೀರ್ಣ ಅನುಭವಗಳನ್ನು  ಸಂಕೇತ ಮತ್ತು ಪ್ರತಿಮೆಗಳಲ್ಲಿ  ಬಂಧಿಸಿ  ಅನನ್ಯ ಕಾವ್ಯಾನುಭೂತಿ ನೀಡಿದವರು. ಇವರ ಕಾವ್ಯದ ಪ್ರಮುಖ ಗುಣಗಳು ವಸ್ತು ನಿಷ್ಟತೆ ಹಾಗು ವೈಚಾರಿಕತೆ.

    ನವ್ಯದ ಹರಿಕಾರನಾಗಿದ್ದರೂ   ಗೋಪಾಲಕೃಷ್ಣ ಅಡಿಗರು ಪ್ರಗತಿಶೀಲ ಧೋರಣೆಗೆ ಒಳಗಾಗಿ  ಬರೆದ ಕವನಗಳಲ್ಲಿ ‘ಸಮಾಜ ಭೈರವ’  ಸಮಾಜಕೇಂದ್ರಿತವಾಗಿದೆ. ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಕಟ್ಟುವೆವು ನಾವು’  ಕವನ ಸಂಕಲನದಿಂದ  ‘ಸಮಾಜಭೈರವ’ ಕವಿತೆಯನ್ನು ಆರಿಸಲಾಗಿದೆ. ಸಮಾಧಾನದಿಂದ ಕೂಡಿದ ಸಾಮಯಿಕ ಸಂಕಲ್ಪಗಳು   ಭ್ರಷ್ಟಸಮಾಜಕ್ಕೆ  ಆತ್ಯಂತಿಕ ಮಿತಿಯನ್ನು ತೋರಿಸುವ ಈ ಕವಿತೆಯ  ಪದರೂಪದ ಹೂರಣವಾಗಿದೆ.  ನಾನು, ನನ್ನ ಎಂಬ ಪದಗಳು ಸಾಮಾಜಿಕರನ್ನು ಸಮಷ್ಟಿ ಪ್ರಜ್ಞೆಯಿಂದ ಪ್ರತಿನಿಧಿಸುವ  ಪದಗಳಾಗಿವೆ.   ಪುನರಾವರ್ತಿತವಾಗಿ ಈ ಕವಿತೆಯಲ್ಲಿ ಬರುವ “ನನ್ನ” ಎಂದರೆ ಕೇವಲ ವ್ಯಕ್ತಿಯಲ್ಲ  ಪ್ರತಿಯೊಬ್ಬ  ಸಾಮಾಜಿಕನೂ ಹೌದು!

    ಸಮಾಜ ಭೈರವ

     ‘ಸಮಾಜ ಭೈರವ’  ಪ್ರಸ್ತುತಕ್ಕೂ ಅನ್ವಯವಾಗುವಂಥ ಉತ್ತಮ ಕವಿತೆಗಳಲ್ಲಿ ಒಂದಾಗಿದೆ. ಇಲ್ಲಿ ಅಡಿಗರು ಸಮಾಜವನ್ನು ನಾಶಕರ್ತನಾದ ಭೈರವನಿಗೆ  ಹೋಲಿಸಿರುವುದು ವಿಶಿಷ್ಟವಾಗಿದೆ. ಸಮಾಜ  ಮಾನವನ ಏಳಿಗೆಗೆ ಪೂರಕವಾಗಿರಬೇಕೇ ವಿನಃ ಹೇಳಿಗೆಯಂತೆ ಕೆಲವೊಮ್ಮೆ ಭಯವನ್ನು ತರಿಸಬಾರದು.  ಮನುಷ್ಯ  ಸಾಮಾಜಿಕ ಪ್ರಾಣಿ ಹಾಗು ಸಂಘಜೀವಿ ಅವನ ಸಾಂಘಿಕ ಜೀವನದಲ್ಲಿ  ಅನೂಚಾನವಾಗಿ ರೂಢಿಗೆ ಬಂದ ಕೆಲವು ಸಂಪ್ರದಾಯಗಳು ಕಟ್ಟು ಕಟ್ಟಳೆಗಳು ಇರುವುದು ಸತ್ಯ . ಆದರೆ ಅವುಗಳನ್ನು ಸಾಮಾಜಿಕರ  ಇಚ್ಛೆಯ ವಿರುದ್ಧ ಬಲವಂತವಾಗಿ ಹೇರುವುದು  ತಪ್ಪು . ಆ ಹೇರಿಕೆಯ ಸ್ವರೂಪವನ್ನೇ  ಅಡಿಗರು  ಇಲ್ಲಿ’’ಭೈರವ” ಎಂದಿರುವುದು. ವ್ಯಕ್ತಿ ಸ್ವಾತಂತ್ರ್ಯವನ್ನು , ವ್ಯಕ್ತಿ  ವಿಶಿಷ್ಟತೆಯನ್ನೂ ಪ್ರತಿಪಾದಿಸುವ ಈ ಕವನದ  ಆಶಯವನ್ನು ಸಮಗ್ರವಾಗಿ  ಗ್ರಹಿಸಲು “ಆ ಹೆಸರೇ ಸೇರದೇನು ನಿನ್ನ ಯಶೋಮಾಲೆಗೆ?” ಎಂಬ ಸಾಲಿನೊಡನೆ ಅನ್ವಯಿಸಿಕೊಂಡು   ಅನುಸಂಧಾನಿಸಬೇಕಾಗಿದೆ, ವ್ಯಷ್ಟಿ ವಿಶೇಷಗಳಿಂದ, ಶೇಷಗಳಿಂದಲೇ ಸಮಾಜ ಭೈರವನ   ಅವಿರ್ಭಾವವಾಗಿದೆ. ಸಮಷ್ಟಿ ಅಳಿದರೂ ಸಮಾಜಭೈರವ ಮಾತ್ರ ಶಾಶ್ವತ  ಎಂಬ ಧ್ವನಿ ಇಲ್ಲಿ ಬರುತ್ತದೆ.

     “ನನ್ನ ಮನವ ನನಗೆ ಕೊಡು”   ಇದು ‘ಸಮಾಜಭೈರವ’ ಕವಿತೆಯ ಮೊದಲ ಸಾಲು . “ನನ್ನ”  ಎಂಬ ಪದವನ್ನು ಇಲ್ಲಿ  ಎಲ್ಲಾ ಸಾಮಾಜಿಕರನ್ನು ಒಟ್ಟುಗೂಡಿಸಿಯೇ ಸಮಷ್ಟಿಯ  ಅರ್ಥದಲ್ಲಿ ಸಮಾಜಭೈರವನನ್ನು  ಸಮಷ್ಟಿಯ ವಿನಾಶಕಾರಕ ಶಕ್ತಿ  ಎಂದೇ ಇಲ್ಲಿ  ಅಡಿಗರು ಹೇಳಿದ್ದಾರೆ.    ಆ ಶಕ್ತಿಯಲ್ಲಿ  ಅಂದರೆ ಸಮಾಜಭೈರವನಲ್ಲಿ ಕವಿ ನನಗೆ ಬೇಕಾದದ್ದನ್ನು ನೀನು ಕೊಡು, ನನ್ನ  ಬದುಕಿನ ಹಸೆಯಲ್ಲಿ ನೀನು ಇಣುಕಬೇಡ,  ನನ್ನ  ಈ ಮನೋಭೂಮಿಕೆಯಲ್ಲಿ ಅಂತರ್ಗತವಾಗಿರುವ ನನ್ನ  ಸ್ವಗತಗಳು  ವಾಸ್ತವವಾಗಿಯೂ ಲಹರಿಯಾಗಿಯೂ ಹರಿಯಲಿ ಅದನ್ನು ನಿಯಂತ್ರಿಸಬೇಡ  ನನ್ನ ಅವಕಾಶಗಳಿಗೆ  ನೀನು ನನೆಯಾಗಬೇಡ  ಬಿಟ್ಟುಬಿಡು ದಾರಿಯನ್ನು    ಎಂಬುದನ್ನು,ದೈನ್ಯವಾಗಿ ಹೇಳದೆ ದರ್ಪದಿಂದ  ಆರ್ಭಟಿಸಿಯೂ ಕೇಳದೆ  ನಿಷ್ಟುರವಾಗಿಯೇ ಅದೂ  ಕಟುವಲ್ಲದ ಗಾಂಭೀರ್ಯ ಹಾಗು ಮೃದುಹಾಸದಲ್ಲಿ   ನಗೆ,ಜಗ, ಮನ ಎಂಬ ಮೂರು ಪದಗಳ ಮೂಲಕ ಕೇಳಿರುವುದು ಅವರ ಸೌಧರ್ಮಿಕೆಯನ್ನು ಸೂಚಿಸುತ್ತದೆ.

    ಸಮಾಜದ ಹಿಡಿತ ಇಲ್ಲಿ ಅಡಿಗರಿಗೆ ಬಂಗಾರದ ಸಂಕೋಲೆಯಂತೆ ಕಂಡಿದೆ.  ಆ ಭಾವವನ್ನು   “ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ”  ಎಂಬ ಮಾತಿನ ಮೂಲಕ ಹೇಳಿದ್ದಾರೆ. ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದರು ಎಂಬಂತೆ   ಹೊಗಳಿಯೇ ಬಂಗಾರದ ಸರಪಳಿ ತೊಡಿಸಿ ನನ್ನನ್ನು ಬಂಧಿಯಾಗಿಸಬೇಡ  ನನ್ನ ಭಾವಭಿತ್ತಿಗೆ ನಿನ್ನ  ನಿರ್ಧಾರವನ್ನು  ಹೇರುವುದು ನಿನ್ನ  ಬಟ್ಟೆಯನ್ನು  ನನಗೆ ಬಲವಂತವಾಗಿ ತೊಡಿಸಿದಂತೆ, ಹಾಗಾಗಿ ಬಲವಂತವಾಗಿ  ಯಾವುದನ್ನೂ ಹೇರಿ ನಂತರಾಗುವ ಅವ್ಯವಸ್ಥೆಯನ್ನು ಕಂಡು ಮರುಗುವ ನಿನ್ನ ಮಾತುಗಳು ನನಗೆ ದಯೆ ಎಂಬ ಸಾಲವನ್ನು ಹೊರಿಸಿದಂತೆ.  ನನಗೆ ಆ ಸಾಲದ ಹೊರೆ ಬೇಡ   ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.  ಇಲ್ಲಿ ಅಡಿಗರು ಸಾಮಾಜಿಕರನ್ನು ಸ್ವಹಂ ಇಲ್ಲದ ಸ್ವಾಭಿಮಾನಿಗಳಂತೆ  ಕಂಡಿರುವುದು ವಿಶೇಷ.  ಹಾಡು- ಪಾಡು, ಕತೆ- ವ್ಯಥೆಗಳಲ್ಲಿ  ಮೂಗು ತೂರಿಸುವ  ಸಮಾಜಭೈರವನ  ಅಧಿಕಪ್ರಸಂಗವನ್ನು  ಇಲ್ಲಿ ಧಿಕ್ಕರಿಸಿದ್ದಾರೆ.

    ಸಮಾಜದಲ್ಲಿ ಇರುವ ಮೂಢನಂಬಿಕೆ ಇಲ್ಲಿ ಕವಿಗೆ ಬಿಕ್ಕಟ್ಟು ಅನ್ನಿಸಿದೆ. ಅಂಥ  ಇಕ್ಕಟ್ಟಿನ ಹಂದರವನ್ನು ಆಕರ್ಷಣೀಯವಾಗಿ  ನಯವಾಗಿ ಹೆಣೆಯದಿರು  ಸಾಮಾಜಿಕರನ್ನು ಉಪಾಯದಲ್ಲಿ ಅದರಲ್ಲಿ ಸಿಕ್ಕು ತೊಳಲುವಂತೆ ಮಾಡದಿರು . ಇಹಲೋಕ ಪರಲೋಕವೆಂಬ ಮಾತೇ ಬೇಡ  ನೋಡದ ಪರಲೋಕದ ಆಕಾಂಕ್ಷೆಗೆ  ಇರುವ ಬನದುಕನ್ನು ವ್ಯರ್ಥಮಾಡಬೇಕೆ?  ಇಂಥ ನಯವಾದ  ದಿಗ್ಬಂಧಗಳ ಹೇರಿಕೆಯನ್ನು ನಿಲ್ಲಿಸಿಬಿಡು. ಮೊದಲಿ ಇರುವ ಈ ಲೋಕದ ಬದುಕಲ್ಲಿ ಅವರವರ  ಇಚ್ಛೆಯಂತೆ ಬದುಕಬಿಡು ಎನ್ನುತ್ತಾರೆ.  “ಬಿಟ್ಟು ಬಿಡು ನನ್ನ ಮಾತ್ರ ನನ್ನೆದೆಯ ನಚ್ಚಿಗೆ:”  ಎಂಬಲ್ಲಿ ಸಂಪ್ರದಾಯ ಮತ್ತು ಮೌಢ್ಯತೆಯ ಬಲೆಯಲ್ಲಿ  ಸಮಷ್ಟಿಯನ್ನು ಬಂಧಿಸದಿರು  ಎಂದಿದ್ದಾರೆ. ಈ ಸಾಲುಗಳಲ್ಲಿ ಸ್ವೇಚ್ಛೇ ಇರಬೇಕು ಸ್ಚೇಚ್ಛಾರವಲ್ಲ ಎಂಬ ಸೂಕ್ಷ್ಮವೂ     ಸುಳಿ ಮಿಂಚಿನಂತೆ ಮಾಯವಾಗುತ್ತದೆ.  ಆದ್ದರಿಂದಲೇ “ಎದೆಯ ನಚ್ಚಿಗೆ” ಮೊದಲಾದ ಪದ ಬಳಸುತ್ತಾರೆ.  ಹಾಗೊಂದು ವೇಳೆ ಅವರರಿಗೆ ಸ್ವೇಚ್ಛಾಚಾರದ  ಅಹಂ ಇದ್ದಿದ್ದರೆ  “ಎದೆಯ ಕೆಚ್ಚಿಗೆ” ಎನ್ನುತ್ತಿದ್ದರೇನೋ?….. ಅನುಭವಗಳ  ನೈಜತೆ, ತೀವ್ರತೆ, ಭಾವಗಳ ನಾವೀನ್ಯತೆ,ಶಬ್ದಗಳ ಸೌಂದರ್ಯ ಮತ್ತು ಸಾಮರ್ಥ್ಯದಿಂದ ಅಡಿಗರ ಕವಿತೆಗಳು ಯಾವತ್ತೂ ಕಳೆಗಟ್ಟುತ್ತವೆ.

    ವಿಶ್ವಮಾನವತೆಯೂ ಇಲ್ಲಿದೆ

    ಕುವೆಂಪು ಹೇಳುವ “ವಿಶ್ವಮಾನವತೆಯೂ ಇಲ್ಲಿದೆ. “ಕಟ್ಟುವೆವು ನಾವು ಹೊಸ ನಾಡೊಂದನು” ಎಂಬ ಅವರದೇ ಮಾತಿನಂತೆ ಇಲ್ಲಿ ಮನಸ್ಸು ಅನ್ನುವ ಮಲ್ಲಿಗೆ   ಪಾತಾಳದ ಅಂಚಿನಿಂದ ದಿಗಂತದಾಚೆಗೂ ಮುಳುಗಿ , ತೇಲಿ ವಿಭ್ರಮಿಸಬೇಕು  ತಾರೆಗಳ ಲೋಕವನ್ನೂ ಇಣುಕಾಡಿ   ಸೌಸವ ಬೀರಿ  ಅದರ ಒಳಗುಟ್ಟನ್ನು ಅರಿತುಬರಬೇಕು ಬ  ಎಂಬ ಹಂಬಲವನ್ನು  ಇಲ್ಲಿ ಉತ್ಕಟವಾಗಿ ತೋರಿಸಿದ್ದಾರೆ.   ಅಡಿಗರ ಅಡಿಗಡಿಯ ವಿಶಾಲ ಚಿಂತ ನೆಯನ್ನು ಇಲ್ಲಿ ನೋಡಬಹುದು.  ಆದರ ಇಲ್ಲಿ  ಸಮಾಜಭೈರವ ಅಂಥ ಆಸೆಗಳಿಗೆ  ಆಘಾತವನ್ನು ಉಂಟುಮಾಡುತ್ತಾನೆ ಎಂಬ ವಿಷಾದ ವ್ಯಕ್ತ ಪಡಿಸಿದ್ದಾರೆ. ಇಷ್ಟ್ಟಾದರೂ ಸಮಾಜಭೈರವನ ಬಗ್ಗೆ ಕಿಂಚಿತ್ ದುರಾಲೋಚನೆ ಮಾಡದೆ  ತಾಳ್ಮೆ ವಹಿಸಿ  ಸಮಾಜಿಕರಿಗೂ ವಿವೇಕಯುತರಾಗಬೇಕು ಎನ್ನುತ್ತಾರೆ.  “ನೀರಗುಳ್ಳೆ ಕುಣಿದು ಕುಣಿದು ಒಡೆಯಲಿ” ಎಂಬ ಮಾತು ಓದುಗರನ್ನು ಅರ್ಥಧ್ವನಿಯಲ್ಲಿ ಬಂಧಿಗಳನ್ನಾಗಿಸುತ್ತದೆ.  ಬದುಕು ಮೂರು ನಿಮಿಷವೋ? ನೂರು ವರುಷವೋ ? ಆದರೆ ಬದುಕು ಮಾತ್ರ ಅಮೂಲ್ಯ ಅಂಥ ಬದುಕಿನ  ಸವಿಯನ್ನು ಇಂಚಿಂಚಾಗಿ ಅನುಭವಿಸಬೇಕು. ಬದುಕೆಂಬ ಬಣ್ಣದೋಕುಳಿಯಲ್ಲಿ ನಾನು ಮಿಂದೇಳಬೇಕು ಪ್ರತಿಬಣ್ಣದಲ್ಲೂ  ನಾನು ಹೇಗೆ ಕಾಣಬಲ್ಲೆ ಎಂಬ ಕುತೂಹಲ ಅಡಿಗರಿಗೆ ಇದೆ ಹಾಗಾಗಿ ಅದನ್ನು ನೋಡಿಯೇ ಸಿದ್ಧ ಎಂಬ ಸಂಕಲ್ಪವನ್ನು ಹೊಂದಿದ್ದಾರೆ. . ಅಂದರೆ ಬದುಕಿನ ರಸಘಟ್ಠಗಳನ್ನು  ಅನುಭವಿಸಿಯೇ ಸಿದ್ಧ ಅದಕ್ಕೆ ಸಮಾಜ ಭೈರವ ನೀನು ಕೊಡಲಿ  ಪೆಟ್ಟಾಗದಿರು ಎನ್ನುತ್ತಾರೆ.

      “ಬಂದ ಯಾತ್ರಿ ನಿಲ್ಲಲಾರ”  ಎಂಬ ಪದಗಳ ಮೂಲಕ  ಅಡಿಗರು ಅಧ್ಯಾತ್ಮದ ಹೊಸ್ತಿಲಲ್ಲಿ ನಿಂತು ಇಲ್ಲಿ ಬರುವ ಸಾಮಾಜಿಕರು ಅನ್ನುವ ಬಾವ ಜೀವಿಗಳು ಪ್ರಪಂಚದ ನಿತ್ಯ ವಾಸಿಗಳಲ್ಲ . ತಮ್ಮ ಬಾಳ್ವೆ ಎಂಬ ಯಾತ್ರೆ ಮುಗಿದ ನಂತರ ಇಲ್ಲಿ  ಅರೆಕ್ಷಣವೂ ನಿಲ್ಲರು. ಅಂಥ ನಶ್ವರ ಬದುಕಲ್ಲಿ  ನಿನ್ನದೇನು ತಗಾದೆ ಬುಡು ದಾರಿಬಿಡು ಸಮಾಜ  ಭೈರವ ಮತ್ತೆ ಅಡ್ಡಿ ಮಾಡಬೇಡ ಎನ್ನುತ್ತಾರೆ.ಸಮಾಜ ಶಾಶ್ವತವೇ ವಿನಃ  ಸಾಮಾಜಿಕ  ಅಲ್ಲ ಎನ್ನುತ್ತಾರೆ.

     ಸಾಮಾಜಿಕ ರಾಜಕೀಯ, ಆರ್ಥಿಕ , ಬೌದ್ಧಿಕ, ,  ಕೆಲವೊಮ್ಮೆ ಸಾಂಸ್ಕೃತಿಕ  ಶಕ್ತಿಗಳು  ಮಾನವನನ್ನು  ಶೋಷಣೆಗೆ ಗುರಿ ಮಾಡಬಾರದು.  ಒಂದು ವೇಳೆ ಅದು ಹಿಡಿತಕ್ಕೆ ಬಂದರೆ ಅದು ಸಮಾಜ ಭೈರವನ  ಅಸ್ತ್ತಿತ್ವದ ಪ್ರತೀಕ ಎನ್ನುತ್ತಾರೆ. ನಮ್ಮದು ಹೇಗಿದ್ದರೂ ಪ್ರಜಾಪ್ರಭುತ್ವ ರಾಷ್ಟç ಹಾಗಾಗಿ ವ್ಯಕ್ತಿಗತ ಮಾನ ಸಮ್ಮಾನಕ್ಕೂ ಆದ್ಯತೆ ಇರಲಿ ಎಂಬುದು ಕವಿಯ ಪ್ರಧಾನ ಆಶಯವಾಗಿದೆ

     ಅಣುವಿನಲ್ಲೂ ಆ ಮಹತ್ತು ಬಿತ್ತದಂತೆ ಮಲಗಿದೆ ಅಣುವೆಂದು ನಿರ್ಲಕ್ಷ್ಯ ಬೇಡ  ಅಣುವಿನಲ್ಲೂ ಲೋಕವನ್ನುದ್ಧರಿಸಬಹುದಾದ  ಚೈತನ್ಯ ಶಕ್ತಿ  ಇದ್ದೇ ಇರುತ್ತದೆ. ಅಂಥ ಗೌಣವಾದ ಶಕ್ತಿ  ಗಾಳಿ , ಮಳೆ ಬೆಳಕಿಗೆ ತೆರವಾದರೆ  ಅದರಲ್ಲಿಯೂ ಸಮಷ್ಟಿಗೆ ಉಪಯೋಗವಾದೀತು ಎಂಬ ಸದಾಶಯವನ್ನು ವ್ಯಕ್ತಪಡಿಸಿ  ಅದರ ಶ್ರೇಯಸ್ಸಿನ ಲೆಖ್ಖಣಿಕೆ ನಿನ್ನ ಸಿವುಡಿಗೇ ಬರುತ್ತದೆ  ತತ್ಫಲವಾಗಿ  ಸಮಾಜಭೈರವ ಬಲವಂತ ದಯವಂತ ಅನ್ನುವ ಶ್ರೇಯಸ್ಸು ನಿನಗೇ ಲಭಿಸುತ್ತದೆ  ಎಂಬ ಸಂದೇಶವನ್ನೂ ಕೊಡುತ್ತಾರೆ.

    ಹುಲ್ಲಿಗಿಲ್ಲ, ಕಳ್ಳಿಗಿಲ್ಲ, ಹೂವಿಗೇಕೆ ಸೌಸವ ಎನ್ನಬೇಡ ಭೈರವ   ಎಲ್ಲವನ್ನು ಒಂದೇ ತಕ್ಕಡಿಗಿಟ್ಟು ತೂಗಲೂಬೇಡ  ಮನಸ್ಸು ಅನ್ನುವದು ಅಣುವೂ ಹೌದು ಅನಲವೂ ಹೌದು  ಹಾಗಾಗಿ ತಮಷ್ಟಕ್ಕೆ ತಮ್ಮ ತನವನ್ನು  ತೀರಿಸಿಕೊಂಡೇ ನಯಜವಾಗಿ ಯಾವುದೇ ಕೃತ್ರಿಮತೆ ಇಲ್ಲದಂತೆ ಬದುಕುವ ಅವಕಾಶವಿದೆ ಅದಕ್ಕೆ ಮುಳ್ಳುಗಂಟಿಯಾಗಬೇಡ. ಆ ಮನಸ್ಸೆಂಬ ಹೂವನ್ನು ಪದೇ ಪದೇ ಹಿಂಸಿಸಿ ಕಾಂತಿಯನ್ನು ಮಸುಕು ಮಾಡಬೇಡ ಎಂದು  ಪ್ರತಿಭಟಿಸುತ್ತಾರೆ.

    ಅನುಭವ ಶೂನ್ಯವಾಗಿ ಬಂದ ಮನ ತನುವನ್ನು ಇಲ್ಲಿ ಒಗ್ಗಿಸಿಕೊಂಡು, ಅನುಭವವನ್ನು  ಒಳಗುಮಾಡಿಕೊಂಡು  ಕಡೆಗೊಮ್ಮೆ ಖಾಲಿ ಒಡಲನ್ನು  ಬಿಟ್ಟು ಅನುಭವವನ್ನು ಮಾತ್ರ ಹೊತ್ತು   ನಿರ್ಗಮಿಸುವ ತನಕ ನೀನು ಯಾಜಮಾನ್ಯ ತೋರಿಸಬೇಢ ಸ್ವಚ್ಛಂದಕ್ಕೆ ಬಿಟ್ಟು ಬಿಡು ಎನ್ನುತ್ತಾರೆ. .  ಚಿಂತನಶೀಲತೆ , ಸಂಕೀರ್ಣತೆ ,  ಭ್ರಷ್ಟತೆಯ ಕುರಿತ ಆಕ್ರೋಶ ವಿಡಂಬನೆ,  ಅಡಿಗರ ಈ ಪದ್ಯದ ವಿಶೇಷತೆ. ಕವಿತೆಯನ್ನು ಓದುವಾಗ    ನಿರಾಶೆ ಯಿಂದ  ಅಡಿಗರು ಮೆತ್ತಗಾದರೇನೋ  ಅನ್ನುವಷ್ಟರಲ್ಲಿ ಮರುಸಾಲಿನಲ್ಲಿಯೇ  ಬತ್ತದ ಜೀವನೋತ್ಸಾಹವನ್ನು ತೋರಿಸಿ ಓದುಗನನ್ನೂ ಉತ್ಸಾಹಿಯಾಗಿಸುತ್ತಾರೆ. ಪು.ತಿ.ನರಸಿಂಹಾಚಾರ್  ಅವರು ಅಡಿಗರ  ಕಾವ್ಯವನ್ನು “ಶಬ್ದದೊಳಗಣ ಶಬ್ದದಂತೆ” ಎನ್ನುತ್ತಾರೆ.  ಕಾವ್ಯದ ಆತ್ಮ ಕವನದಲ್ಲಿಯೇ ಹುದುಗಿ ಹೋಗಿರುತ್ತದೆ. ಅರ್ಥಸಹಿತವಾದ  ಪದಸಮೂಹದಿಂದ ಕಾವ್ಯದ ಆತ್ಮವನ್ನು ದರ್ಶಿಸುವ ಕೌಶಲ್ಯ ಮಾಂತ್ರಿಕ ಎನ್ನಬಹುದು.

    ಯಾವುದೇ ಕಟ್ಟು ಪಾಡಿಗೆ ಒಳಗಾಗದೆ  ಬದುಕುವ ಹಂಬಲ ಕವಿಯಲ್ಲಿದೆ.  ಅಪ್ಪಟ ಪ್ರಜಾಪ್ರಭುತ್ವ ವಾದಿಯಾಗಿ ಸ್ವಾತಂತ್ರ್ಯವನ್ನು  ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು ಇಲ್ಲಿ   ನಯವಾಗಿಯೇ ಧಿಕ್ಕರಿಸಿದ್ದಾರೆ ಎನ್ನಬಹುದು. ವೈ ಎನ್ಕೇಯವರು  ಅಡಿಗರ ಪದ್ಯವನ್ನು ಒಮ್ಮೆಓದಿ   “ಅಡಿಗ ಫಾರ್ ಆಲ್ ಅಕೇಷನ್ಸ್” ಎಂದಿದ್ದು ಅಕ್ಷರಶಃ ಸತ್ಯವಾಗಿದೆ. ಹೌದು  ಎಲ್ಲಾ ಸಂದರ್ಭಗಳಿಗೂ ಅಡಿಗರು ಅಡಿಗಡಿಗೆ ಇದ್ದಾರೆ.   ಒಟ್ಟಾರೆಯಾಗಿ  ಗೋಪಾಲಕೃಷ್ಣ ಅಡಿಗರು  ಇಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳಲ್ಲಿ   ಸಮಾಜವನ್ನು ನೋಡಿ ಜವಾಬ್ದಾರಿಯನ್ನು ಓರ್ವ ಕವಿಯಾಗಿ ನಿಭಾಯಿಸಿದ್ದಾರೆ  ಎಂದರೆ ಅತಿಶಯೋಕ್ತಿಯಲ್ಲ. 

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಕೇಂದ್ರ ಸರ್ಕಾರ ಅನುಮೋದನೆ

    CHITRADURGA FEB 16
    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿನ್ನೆ ನಡೆದ ಹೈಪವರ್ ಕಮಿಟಿಯಲ್ಲಿ ಅನುಮೋದನೆ ನೀಡಿದೆ. ರಾಷ್ಟ್ರೀಯ ಯೋಜನೆಯ ನೆರವಿನಿಂದ ರಾಜ್ಯಕ್ಕೆ ಸುಮಾರು ರೂ.12,500 (ಹನ್ನೇರೆಡುವರೆ) ಸಾವಿರ ಕೋಟಿಯ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳುಬಾಳು ಬೃಹನ್ಮಠದ ವತಿಯಿಂದ ಬುಧವಾರ ಗುರುಶಾಂತೇಶ್ವರ ದಾಸೋಹ ಭವನದಲ್ಲಿವ ಆಯೋಜಿಸಿದ್ದ ತರಳುಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದ ಏಕೈಕ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯಕರ್ನಾಟಕದ ನೀರಾವರಿ ಯೋಜನೆಗೆ ತುಂಬಾ ಸಹಕಾರಿಯಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ನೀರನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಜೊತೆಗೆ ಕೆರೆಗಳ ತುಂಬಿಸುವ ಯೋಜನೆಗೆ ಕ್ರಮಕೈಗೊಂಡಿದ್ದೇವೆ. ಹಿಂದಿನ ಸರ್ಕಾರ ಕೆರೆಗಳಿಗೆ ನೀರು ಭರ್ತಿ ಮಾಡುವ ವಿದ್ಯುತ್ ಶುಲ್ಕವನ್ನು ರೈತರೇ ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಸಿರಿಗೆರೆ ಗುರುಗಳು ಹೇಳಿ ಈ ಹಣವನ್ನು ಸರ್ಕಾರದಿಂದಲೇ ಭರಿಸಬೇಕು ಎಂದು ಹೇಳಿದ ತಕ್ಷಣವೇ ಆ ಆದೇಶವನ್ನು ಬದಲಿಸಲಾಗಿದೆ ಎಂದರು.

    ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಅನೇಕ ಅಡ್ಡಿ ಆತಂಕಗಳನ್ನು ಎಲ್ಲ ನಿವಾರಣೆ ಮಾಡಲಾಗಿದೆ. ಅಜ್ಜಂಪುರ ಟನಲ್‍ನಿಂದ ವಿವಿಸಾಗರಕ್ಕೆ ನೀರು ಹರಿಸಲಾಗಿದ್ದು, ವಿವಿಸಾಗರ ನಿರ್ಮಾಣ ಮಾಡಿದಾಗಿನಿಂದ ಎರಡು-ಮೂರು ಬಾರಿ ತುಂಬಿದೆ. ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಈಗಾಗಲೇ ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು. ನಾವುಗಳು ಜನಪರವಾಗಿದ್ದು, ದುಡಿಯುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ದುಡಿಮೆಯೇ ದೊಡ್ಡಪ್ಪ, ಕಾಯಕ ಸಮಾಜ ದೇಶ, ನಾಡು ನಿರ್ಮಾಣ ಮಾಡಿದಾಗ ಅಭಿವೃದ್ಧಿ ಸಾಧ್ಯ. ನವಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಘೋಷಣೆಯಾಗಿದೆ ಎಂದು ಹೇಳಿದರು.

    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸನ್ಮಾನ: ಸೈನಿಕರು ವೀರ ಮರಣ ಹೊಂದಿದ ಬಗ್ಗೆ ವಿವರಣೆ ನೀಡಲಾಗುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಶ್ರೀಮಠದಿಂದ ಸನ್ಮಾನಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾವುಕರಾದರು. ವೀರಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸಿರಿಗೆರೆ ತರಳುಬಾಳು ಬೃಹನ್ಮಠದಿಂದ ಸನ್ಮಾನ ಮಾಡಲಾಯಿತು. ತಲಾ ರೂ.50 ಸಾವಿರ ರೂಪಾಯಿಗಳಂತೆ ಒಟ್ಟು ಒಂಭತ್ತು ಮಂದಿಗೆ ಶ್ರೀಮಠದ ವತಿಯಿಂದ ಚೆಕ್ ವಿತರಿಸಲಾಯಿತು.
    ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಸೈನಿಕರ ಪತ್ನಿಯರು ಕುಂದುಕೊರತೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ನೀಡಿದರು. ಈ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
    ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್, ರೈತರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೇಳಿ ಅರಣ್ಯ ಬದಲಾಗಿ ಕೃಷಿ ಇಲಾಖೆಯನ್ನು ಪಡೆದು ರೈತರ ಸೇವೆ ಮಾಡಲು ಅವಕಾಶ ಪಡೆದೆ. ರೈತರ ಸಮಸ್ಯೆಯನ್ನು ಆಲಿಸಿ, ರೈತರ ಕಣ್ಣೀರು ಒರೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

    ರೈತರ ಮಕ್ಕಳ ಬಿ.ಎಸ್.ಸಿ ಕೃಷಿ ಪದವಿ ವ್ಯಾಸಂಗಕ್ಕಾಗಿ ಶೇ.40 ರಿಂದ ಶೇ.50ಕ್ಕೆ ಸೀಟು ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆ ಸ್ಥಾಪನೆ ಮಾಡಿ ರೈತರ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

    ಜಲ ಸಂರಕ್ಷಣವಾದಿ ಮತ್ತು ಪರಿಸರವಾದಿ ರಾಜೇಂದ್ರ ಸಿಂಗ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೇರಳವಾದ ಸಂಪನ್ಮೂಲವಿದ್ದು, ಅದು ಸಂಪೂರ್ಣವಾಗಿ ಸದುಪಯೋಗವಾಗಬೇಕು. ಕರ್ನಾಟಕ ಒಂದು ಸುಂದರವಾದ ರಾಜ್ಯ. ಇಲ್ಲಿ ವಿಶೇಷವಾಗಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವಂತಹ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು. ಅದರಲ್ಲೂ ನೀರಿನ ಸಂರಕ್ಷಣೆ ಮತ್ತು ಅದರ ಉಪಯೋಗದ ಕುರಿತು ಮಾಹಿತಿಯನ್ನು ಒಳಗೊಂಡ ಪರಿಣಿತರನ್ನು ತಯಾರು ಮಾಡುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಿಂದ ಆರಂಭವಾಗಬೇಕು. ಇದೊಂದು ಅದ್ಭುತವಾದ ಕೆಲಸವಾಗಿದ್ದು, ಇದರು ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಇದು ಮಾದರಿಯಾಗಬೇಕು. ಈ ಹಿಂದೆ ಚನ್ನಗಿರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಕೆರೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಅದು ಅತ್ಯುತ್ತಮವಾದ ಕೆಲಸವಾಗಿದ್ದು, ರಾಜ್ಯ ಸರ್ಕಾರವೇ ಜಲ ವಿಶ್ವವಿದ್ಯಾಲಯವನ್ನು ಆರಂಭ ಮಾಡಬೇಕು ಎಂದು ಮನವಿ ಮಾಡಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ನೇತೃತ್ವದ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‍ನಿರಾಣಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹೊನ್ನಳಿ ಮಾಜಿ ಶಾಸಕ ಶಾಂತನಗೌಡ, ನೀರಾವರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಸಪ್ಪ ಗುಂಗೆ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಸೇರಿದಂತೆ ಮತ್ತಿತರರು ಇದ್ದರು.

    ಪದವಿ ಪರೀಕ್ಷೆ: ಒಂದು ತಿಂಗಳು ಮುಂದೂಡಲು ವಿವಿಗಳಿಗೆ ಸೂಚನೆ

    BENGALURU FEB 16

    ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಪಾಠ-ಪ್ರವಚನಗಳು ಮುಗಿಯದಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರು ವಿ.ವಿ.ಗಳ ಕುಲಸಚಿವರುಗಳಿಗೆ ಸೂಚಿಸಿದ್ದಾರೆ.

    ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕೆಲವು ವಿ.ವಿ.ಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದವು. ಆದರೆ, ಮೇಲೆ ಉಲ್ಲೇಖಿಸಿದ ಕಾರಣಗಳನ್ನು ನೀಡಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪರೀಕ್ಷೆಯನ್ನು ಮುಂದೂಡುವಂತೆ ಕೋರಿದ್ದರು. ಹೀಗಾಗಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನಿಸಿ, ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

    402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ

    BENGALURU FEB 15

    ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗಾಗಿ ಪ್ರಸಾವನೆ ಸಲ್ಲಿಸಲಾಗಿದೆ. ಕೋವಿಡ್‌ ನಿಂದಾಗಿ ಕಳೆದ ಎರಡು ವರ್ಷದಿಂದ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿರಲಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ ಹೇಳಿದರು.

    ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಯನ್ನು ಬಲಪಡಿಸಲು ಇಲಾಖೆ ಕೈಗೊಂಡಿರುವ ಕ್ರಮಗಳೇನು ಎಂದು ವಿಧಾನಪರಿಷತ್‌ ಸದಸ್ಯರಾದ ಭಾರತಿಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೆಕ್ಕ ಪರಿಶೋಧನೆ ವರದಿ ಆಧಾರದ ಮೇಲೆ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಖಾಲಿ ಇರುವ 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

    ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌

    ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಂದ ಠೇವಣಿದಾರರಿಗೆ ವಂಚನೆಯಾಗಿರುವ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂದು ವಿಧಾನಪರಿಷತ್‌ ಸದಸ್ಯರಾದ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತೀಯ ರಿಸರ್ವ್‌ ಬ್ಯಾಂಕ್‌ ಸಲಹೆ ಮೇರೆಗೆ ಹಾಗೂ ಹೈಕೋರ್ಟ್‌ ನಿರ್ದೇಶನದ ಪ್ರಕಾರ ಬ್ಯಾಂಕಿನ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

    24 ನಿರ್ದೇಶಕರು ಮತ್ತು ಅಧ್ಯಕ್ಷರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. 2014-15 ರಿಂದ 2018-19ರವರೆಗಿನ ಲೆಕ್ಕಪತ್ರಗಳನ್ನು ಮರುಲೆಕ್ಕಪರಿಶೋಧನೆಗೆ ಆದೇಶಿಸಲಾಗಿದೆ. ‌ಪ್ರಕರಣದ ಕುರಿತು ಸಿಐಡಿ ತನಿಖೆ ಕೂಡ ನಡೆಯುತ್ತಿದೆ. ಬ್ಯಾಂಕ್‌ ಪುನಶ್ಚೇತನಗೊಳಿಸುವ ಕುರಿತು ಸಹಕಾರ ಇಲಾಖೆ, ಆರ್‌ ಬಿಐ ಅಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ಪರಾಮರ್ಶಿಸುತ್ತಿದ್ದಾರೆ. ಸಾಲ ವಸೂಲಾತಿಗೆ ಕ್ರಮವಹಿಸಲಾಗುತ್ತಿದೆ. ಆರೋಪಿಗಳ ಫೋಟೋವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ. ಠೇವಣಿ ಹಿಂಪಾವತಿ, ಬ್ಯಾಂಕ್‌ ಪುನಶ್ಚೇತನ ಕುರಿತಂತೆ ಫೆಬ್ರವರಿ ಅಂತ್ಯದ ವೇಳೆಗೆ ಠೇವಣಿದಾರರಿಗೆ ವರ್ಚ್ಯುವಲ್‌ ಮೂಲಕ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

    ಎಪಿಎಂಸಿ

    ರಾಜ್ಯದಲ್ಲಿ ಯಾವುದೇ ಎಪಿಎಂಸಿಗಳು ನಷ್ಟದಲ್ಲಿಲ್ಲ ಹಾಗೂ ಎರಡೆರಡು ಎಪಿಎಂಸಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಪ್ರಸ್ತುತ ಸರ್ಕಾರದ ಮುಂದೆ ಇಲ್ಲ ಎಂದು ವಿಧಾಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದರು. 1.50 ರೂ. ಸೆಸ್‌ ಇದ್ದಾಗ ವರ್ಷಕ್ಕೆ 625 ಕೋಟಿ ರೂ. ಹಣ ಸಂಗ್ರವಾಗುತ್ತಿತ್ತು. ಈಗ 130 ರಿಂದ 170 ಕೋಟಿ ರೂ. ಸಂಗ್ರಹವಾಗುತ್ತಿದೆ. ಸೆಸ್‌ ಕಡಿಮೆ ಮಾಡಿದ ಕಾರಣಕ್ಕೆ ಎಪಿಎಂಸಿಗಳು ನಷ್ಟದಲ್ಲಿ ಇಲ್ಲ ಎಂದರು.

    ಸಹಾಯಕ ಪ್ರಾಧ್ಯಾಪಕರ ಹುದ್ದೆ: ಮಾರ್ಚ್ 12ರಿಂದ ಪರೀಕ್ಷೆ

    BENGALURU FEB 15

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಮಾರ್ಚ್ 12ರಿಂದ 16ರವರೆಗೆ ಪರೀಕ್ಷೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶಪತ್ರವನ್ನು ಫೆ.28ರಿಂದ http://kea.kar.nic.on ಜಾಲತಾಣದಲ್ಲಿ ಡೌನ್-ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

    ಈ ಬಗ್ಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದು ಕೆಳಕಂಡಂತಿದೆ:

    ಇದರಂತೆ ಮಾರ್ಚ್ 12ರಂದು ಮಧ್ಯಾಹ್ನ 2.30ರಿಂದ 4.30ರವರೆಗೆ ಸಾಮಾನ್ಯ ಜ್ಞಾನ ಕಡ್ಡಾಯ ಪತ್ರಿಕೆ (50 ಅಂಕ), 13ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಕಡ್ಡಾಯ ಕನ್ನಡ (100 ಅಂಕ), ಮಧ್ಯಾಹ್ನ 2.30ರಿಂದ 4.30ರವರೆಗೆ ಕಡ್ಡಾಯ ಇಂಗ್ಲಿಷ್ (100 ಅಂಕ) ಪರೀಕ್ಷೆ ನಡೆಯಲಿದೆ.

    ಉಳಿದಂತೆ, ತಲಾ 250 ಅಂಕಗಳುಳ್ಳ ಐಚ್ಛಿಕ ವಿಷಯಗಳ ಪರೀಕ್ಷೆ ನಡೆಯಲಿವೆ. ಇದರಂತೆ, ಮಾರ್ಚ್ 14ರಂದು ಬೆಳಿಗ್ಗೆ 10ರಿಂದ 1ರವರೆಗೆ ಕನ್ನಡ, ಉರ್ದು, ಸಸ್ಯಶಾಸ್ತ್ರ, ಭೂಗೋಳ ಮತ್ತು ಫ್ಯಾಷನ್ ಟೆಕ್ನಾಲಜಿ, 14ರ ಮಧ್ಯಾಹ್ನ 2ರಿಂದ 5ರವರೆಗೆ ರಾಜ್ಯಶಾಸ್ತ್ರ, ಮೈಕ್ರೋಬಯಾಲಜಿ ಮತ್ತು ಭೂಗರ್ಭಶಾಸ್ತ್ರ, 15ರಂದು ಬೆಳಿಗ್ಗೆ ಇತಿಹಾಸ, ಕಾಮರ್ಸ್, ಗಣಿತ ಮತ್ತು ಪ್ರಾಣಿಶಾಸ್ತ್ರ, 15ರ ಮಧ್ಯಾಹ್ನ ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲಿಷ್ ಮತ್ತು ಸಮಾಜಕಾರ್ಯ, 16ರಂದು ಬೆಳಿಗ್ಗೆ ಶಿಕ್ಷಣ ಶಾಸ್ತ್ರ, ಹಿಂದಿ, ಕಂಪ್ಯೂಟರ್ ಸೈನ್ಸ್, ಕಾನೂನು ಮತ್ತು ಸ್ಟ್ಯಾಟಿಸ್ಟಿಕ್ಸ್, ಅಂದು ಮಧ್ಯಾಹ್ನ ಮ್ಯಾನೇಜ್ಮೆಂಟ್, ಬಯೋಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

    ಬುಧವಾರದಿಂದ ಡಿಗ್ರಿ ಮತ್ತು ಪಿಯು ಕಾಲೇಜು ಆರಂಭ

    BENGALURU FEB 14

    ಬುಧವಾರ, ಫೆಬ್ರವರಿ 16ರಿಂದ ಪಿಯು ಮತ್ತು ಡಿಗ್ರಿ ಕಾಲೇಜುಗಳನ್ನುು ಆರಂಭಿಸಲು ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ.

    ಸಭೆಯ ನಂತರ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಈ ವಿಷಯ ತಿಳಿಸಿದರು. ಎಲ್ಲೆಲ್ಲಿ ಸಮವಸ್ತ್ರ ಕಡ್ಡಾಯವಾಗಿದಿಯೋ ಅದನ್ನು ಪಾಲಿಸಲಾಗುವುದು. ಹೈಕೋರ್ಟಿನ ಮಧ್ಯಂತರ ಆದೇಶವನ್ನು ಪಾಲಿಸಲಾಗುವುದು ಎಂದು ತಿಳಿಸಿದರು.

    ಹೈ ಕೋರ್ಟ್ ಆದೇಶದಂತೆ ಕಾಲೇಜು ಆಡಳಿತ ಮಂಡಳಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ಜಾರಿಗೆ ತರಲು ಪೋಲೀಸ್ ಇಲಾಖೆ ಸಹಕಾರ ನೀಡಲಿದೆ ಎಂದು ಇಧೇ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಾಂತಿ ಭಂಗವಾಗದಂತೆ ತಮ್ಮ ಇಲಾಖೆ ಶ್ರಮಿಸಲಿದೆ ಎಂದೂ ಹೇಳಿದರು.

    ಬುಧವಾರದಿಂದಲೇ ಪದವಿ, ಎಂಜಿನಿಯರಿಂಗ್ ಕಾಲೇಜುಗಳು ಪುನಾರಂಭ

    ಸಮವಸ್ತ್ರ ವಿವಾದದ ಹಿನ್ನೆಲೆಯಲ್ಲಿ ರಜೆ ನೀಡಲಾಗಿದ್ದ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಸ್ನಾತಕೋತ್ತರ ತರಗತಿಗಳನ್ನು ಬುಧವಾರದಿಂದಲೇ ಪುನಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಹೀಗಾಗಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಲ್ಲೂ ಭೌತಿಕ ತರಗತಿಗಳು ಮತ್ತೆ ಆರಂಭವಾಗಲಿವೆ. ರಜೆ ಹಿನ್ನೆಲೆಯಲ್ಲಿ ಈ ಸಂಸ್ಥೆಗಳಲ್ಲಿ ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

    error: Content is protected !!