32.6 C
Karnataka
Wednesday, April 23, 2025
    Home Blog Page 30

    JIVA WATER:ನೀವು ಸೇವಿಸುವ ನೀರಿನಲ್ಲಿ ಜೀವ ಇದೆಯೇ ? ನೀರಿಗೆ ಜೀವ ತುಂಬುವ ಜೀವ

    ಬಳ್ಳಾರಿಯ ವಿಕ್ರಮ್ ಕೊಳ್ಳೆಗಾಲ ಅರುವತ್ತು ರಾಸುಗಳ  ವಾಸವಿ ಡೈರಿ ಫಾರಂನ ಒಡೆಯ. ಪ್ರತಿ ನಿತ್ಯ ಬಳ್ಳಾರಿ ಪಟ್ಟಣದ ನೂರಾರು ಮನೆಗಳಿಗೆ ಹಾಲು ಪೂರೈಸುವುದರ ಜೊತೆಗೆ ಕರ್ನಾಟಕ ಹಾಲು ಒಕ್ಕೂಟಕ್ಕೂ ಹಾಲು ಪೂರೈಕೆ ಮಾಡುತ್ತಾರೆ.ಇದೇ ಬಳ್ಳಾರಿಯಲ್ಲಿ ಜವಳಿ ಉದ್ಯಮ ನಡೆಸುತ್ತಿರುವ ಪಶುಪತಿಗೂ ವಿಕ್ರಮ್ ಗೂ  ರೌಂಡ್ ಟೇಬಲ್ ಮೂಲಕ ಗೆಳೆತನ.

    ಒಂದು ದಿನ ಹೀಗೆ ಮಾತನಾಡುತ್ತಿರುವಾಗ ಪಶುಪತಿ ತಮಗೆ ಗೊತ್ತಾದ ಒಂದು ಉಪಕರಣದ ಬಗ್ಗೆ ಹೇಳುತ್ತಾರೆ. ಅದು ಒಂದು ಸರಳ ಸಾಧನ.  ಹೆಸರು ಜೀವ-JIVA. ನೀರಿಗೆ ಶಕ್ತಿ ತುಂಬುವ ಈ ಉಪಕರಣದ ಬಗ್ಗೆ ಅವರು ಹೇಳುತ್ತಲೆ ವಿಕ್ರಮ್ ಗೂ ಆಸಕ್ತಿ ಬೆಳೆಯುತ್ತದೆ.  ಅದರ ಬಗ್ಗೆ ಹೆಚ್ಚಿನ ವಿವರ ಪಡೆಯುತ್ತಾರೆ. ತಮ್ಮ ಫಾರಮ್ ಗೂ ಅದನ್ನು ಅಳವಡಿಸಿಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ ಅದರ ಫಲಿತಾಂಶವೂ ಅವರಿಗೆ ಗೊತ್ತಾಗುತ್ತದೆ. ಹಾಲಿನ ಸಂಗ್ರಹದಲ್ಲಿ 10 ರಿಂದ 15 ಪರ್ಸೆಂಟ್ ಇಂಪ್ರೂವ್ ಆಗುತ್ತದೆ. ರಾಸುಗಳು ನೀರನ್ನು ಹೆಚ್ಚು ಸೇವಿಸಲೂ ಆರಂಭಿಸುತ್ತವೆ. ಜೀವ ಮೂಲಕ ಹರಿದ ನೀರು ಕುಡಿದ ರಾಸುಗಳ ಆರೋಗ್ಯವೂ ಸುಧಾರಿಸುತ್ತದೆ.( ಈ ವಿಡಿಯೋ ನೋಡಿ)

    ಕೊಳ್ಳೆಗಾಲ ವಿಕ್ರಮ್ ಅವರ ಅನುಭವ

    ತಮಗಿಂತ ತಮ್ಮ ಫಾರಂನಲ್ಲಿ ಕೆಲಸ ಮಾಡುವ  ನೌಕರರೇ ಇದರ ಬಗ್ಗೆ ಚೆನ್ನಾಗಿ ವಿವರಿಸಬಲ್ಲರು ಎನ್ನುತ್ತಾರೆ ವಿಕ್ರಮ್ . ಈಗ ನೌಕರರು  ಜೀವ ನೀರಿನಿಂದಲೇ ಅಡುಗೆ ಮಾಡುತ್ತಿದ್ದಾರೆ. ಈ ನೀರನ್ನು ಬಳಸುವದರಿಂದ ಅಡುಗೆ ಬೇಗ ಆಗುವುದರ ಜೊತಗೆ ರುಚಿ ಮತ್ತು ಪೌಷ್ಠಿಕವಾಗಿಯೂ ಇರುತ್ತದೆಯಂತೆ.

    ಇವರ ಫಾರಂ ನಲ್ಲಿ ಕಳೆದ  ಹದಿನೈದು ದಿನದ ಹಿಂದೆ ಜೀವ ಸಾಧನ ಅಳವಡಿಸಿರುವ ಪಂಪ್ ಸೆಟ್ ಕೊಟ್ಟು ಹೋಯಿತು. ಹೀಗಾಗಿ ರಾಸುಗಳಿಗೆ ಹಿಂದಿನ ರೀತಿಯ  ಮಾಮೂಲಿ ನೀರನ್ನೇ ಬಳಸಬೇಕಾಯಿತು.   ರಾಸುಗಳು ಈಗ ಆ ನೀರನ್ನೇ ಕುಡಿಯುತ್ತಿರುವುದರಿಂದ ಹಾಲಿನ ಇಳುವರಿ ಕಡಿಮೆಯಾಗಿದೆ. ಇದು ಜೀವ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು ಎಂದು ವಿಕ್ರಮ್ ಹೇಳುತ್ತಾರೆ. ಜೀವ ನೀರಿನ ಬಳಕೆಯ ನಂತರ ಗರ್ಭಧರಿಸದ ನಾಲ್ಕೈದು ರಾಸು ಗರ್ಭ ಧರಿಸಿವೆ. ಇದಕ್ಕೆ ಜೀವ ನೀರಿನ ಬಳಕೆ ಅವುಗಳ ಆರೋಗ್ಯದ ಮೇಲೆ ಬೀರಿದ ಪರಿಣಾಮವೇ ಕಾರಣ ಎಂದು ಖಚಿತವಾಗಿ ಹೇಳುತ್ತಾರೆ ವಿಕ್ರಮ್.

    ನಾವು ಜೀವವನ್ನು ರೈತರಿಗೆ ಕೊಡುವಾಗ ಅದರಿಂದ ಇಳುವರಿ ಹೆಚ್ಚಾಗುತ್ತದೆ.ರಾಸುಗಳು ಹೆಚ್ಚು ಹಾಲು ಕೊಡುತ್ತವೆ ಎಂದು ಹೇಳುವುದೇ ಇಲ್ಲ.  ಜೀವವನ್ನು ಅಳವಡಿಸಿಕೊಂಡು ನೀರನ್ನು ಪಡೆದು ಅದನ್ನು ಭೂಮಿಗೆ ಹಾಯಿಸಿದರೆ ಅದರ ಫಲವತ್ತತೆ ಉತ್ತಮವಾಗುತ್ತದೆ. ಹೀಗಾಗಿ ಸಹಜವಾಗಿಯೆ ಇಳುವರಿ ಹೆಚ್ಚಾಗುತ್ತದೆ.  ಜೊತೆಗೆ ಈ ನೀರನ್ನು ಸೇವಿಸುವ ರಾಸುಗಳ ಆರೋಗ್ಯ ಉತ್ತಮವಾಗಿ ಹಾಲು ಹೆಚ್ಚು ಕೊಡುತ್ತವೆ ಎನ್ನುತ್ತಾರೆ ಪಶುಪತಿ. ಪಶುಪತಿ ತಮ್ಮ ಜವಳಿ ಉದ್ಯಮದ ಜೊತೆ ಜೊತೆಗೆ ಬ್ರಾಂಡ್- ಅಂಬಾಸಿಡರ್ ಆಗಿ ಜೀವದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

    ಪಶುಪತಿ ತಮ್ಮ ಮನೆಯಲ್ಲೂ ಈ ಜೀವ  ಅಳಡಿಸಿಕೊಂಡಿದ್ದಾರೆ . ಅದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಅವರ ಆರೋಗ್ಯ ಈಗ ಮತ್ತಷ್ಟು ಉತ್ತಮವಾಗಿದೆ.

    ಹಾಗಿದ್ದ ಮೇಲೆ ಏನಿದು ಜೀವ? ತಿಳಿಯೋಣ ಬನ್ನಿ

    ಜೀವ-JIVA- ಎನ್ನುವುದು ಒಂದು ವಿಶಿಷ್ಟ ಸರಳ ಸಾಧನ. ಅಮೆರಿಕಾದಲ್ಲಿ ನೆಲೆಸಿರುವ ನಮ್ಮ ಕೊಡಗಿನ ವಿಜ್ಞಾನಿ ಡಾ. ಕೃಷ್ಣ ಮಾದಪ್ಪ ಅವರ ಸಂಶೋಧನೆಯ ಫಲ. ನೀರನ್ನು ಹಿಡಿದಿಡದೆ ಅದನ್ನು ಸ್ವತಂತ್ರವಾಗಿ ಹರಿಯಬಿಟ್ಟಾಗ ಅದರಲ್ಲಿ ಶಕ್ತಿ ಸಂಚಯವಾಗುತ್ತದೆ ಎಂಬ ಸರಳ ಭೌತಶಾಸ್ತ್ರದ ನಿಯಮದ ಅನ್ವಯ ಸಿದ್ಧಗೊಂಡ  ಸಾಧನ. ಹಲವು ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಜಯಿಸಿ ಇದೀಗ ವಾಣಿಜ್ಯ ಉತ್ಪಾದನೆಗೆ ಸಿದ್ಧವಾಗಿರುವ  ಜಲಕ್ಕೆ ಜೀವ ತುಂಬುವ  ಸಾಧನ.(ವಿಡಿಯೋದಲ್ಲಿ ಡಾ. ಕೃಷ್ಣ ಮಾದಪ್ಪ ಅವರೇ ವಿವರಿಸಿದ್ದಾರೆ- ನೋಡಿ)

    ಇದನ್ನು ಈಗ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವ ವಿ. ಶ್ರೀನಿವಾಸನ್ ಅವರ  ಪ್ರಕಾರ ಜಲಕ್ಕೆ ಜೀವ ತುಂಬುವ ಈ ಸಾಧನ ಒಂದು ಕ್ರಾಂತಿಕಾರಿ ಆವಿಷ್ಕಾರ. ಈ ಸಾಧನ ಕೆಲಸ ಮಾಡುವ ಬಗ್ಗೆ ಅವರು ಒಂದು ಸೊಗಸಾದ ಉದಾಹರಣೆ ಕೊಡುತ್ತಾರೆ.  ಯಾವುದೇ ಜೀವಿಯನ್ನು ಹಿಡಿದಿಟ್ಟರೆ ಅವರಲ್ಲಿರುವ ಎನರ್ಜಿ ಕಳೆದು ಹೋಗುತ್ತದೆ.  ಮನುಷ್ಯನನ್ನೇ ನೋಡಿ. ಅವನನ್ನು ಒಂದು ಕೋಣೆಯಲ್ಲಿ ಬಂದಿ ಯಾಗಿಟ್ಟರೆ ಅವನಲ್ಲಿರುವ ಶಕ್ತಿಯೆಲ್ಲಾ ಕಡಿಮೆಯಾಗಿ ಮಂಕು ಬಡಿದವನಂತೆ ಆಗಿ ಬಿಡುತ್ತಾನೆ. ನೀರು ಕೂಡ ಹಾಗೆ . ಅದನ್ನು ಹಿಡಿದಿಟ್ಟಷ್ಟು ಅದರಲ್ಲಿರವ ಜೀವ ಶಕ್ತಿ ಕುಂದುತ್ತಾ ಬರುತ್ತದೆ.

    ನಾವೀಗ ನೀರನ್ನು ಅಣೆಕಟ್ಟುಗಳಲ್ಲಿ, ಮನೆಯ ಮೇಲಿನ ಓವರ್ ಹೆಡ್ ಟ್ಯಾಂಕುಗಳಲ್ಲಿ,  ದೊಡ್ಡದಾದ ಜಲ ಸಂಗ್ರಹಾರದಲ್ಲಿ ಶೇಖರಿಸಿ ಇಡುತ್ತಿದ್ದೇವೆ. ಹೀಗಾಗಿ ನೀರಿನ ಸ್ವಾಭಾವಿಕ ಶಕ್ತಿ ಕುಂದುತ್ತಾ ಬರುತ್ತದೆ.  ಈ ನೀರಿಗೆ ಒಂದಷ್ಟು ಶಕ್ತಿ ತುಂಬಿದರೆ ಅದು ಪವಾಡಗಳನ್ನು ಮಾಡಬಹಲ್ಲದು. ಹರಿವ ನದಿಯಲ್ಲಿ ಇರುವ ನೀರಿಗೆ ಇರುವ ಶಕ್ತಿ ಜಲಾಶಯದಲ್ಲಿ ಸಂಗ್ರಹಿಸಿಟ್ಟ ನೀರಿಗೆ ಇರುವುದಿಲ್ಲ. ಜೀವದಲ್ಲಿ ಹಾದು ಬಂದ ನೀರು ನದಿಯ ನೀರಿನ ಶಕ್ತಿ ಪಡೆಯುತ್ತದೆ ಎಂದು ಹೇಳುತ್ತಾರೆ ಶ್ರೀನಿವಾಸ್.

    ಮೂರು ಹಂತದಲ್ಲಿ ನೀರಿಗೆ ಜೀವ

    ಜೀವ ಸಾಧನ ಮೂರು ಹಂತದಲ್ಲಿ ಕೆಲಸ ಮಾಡುತ್ತದೆ. ವಿಡಿಯೋದಲ್ಲಿ ನೀವು ನೋಡುತ್ತಿರುವ ಹಾಗೆ ಇದೆಂದು ಸರಳ ಪೈಪಿನ ರೀತಿ ಕಾಣುತ್ತದೆ. ಸ್ಟೈನ್ ಲೆಸ್ ಸ್ಟೀಲ್ ನಿಂದ ತಯಾರಿಸಲಾಗಿದೆ. ಆದರೆ ಅದರಲ್ಲಿ ವಿಜ್ಞಾನಿ ಕೃಷ್ಣ ಅವರು ರೂಪಿಸಿರುವ ಭೌತಿಕ ಸಂರಚನೆ ಇದೆ.  ಮೊದಲು ಶಕ್ತಿ ಕಳೆದುಕೊಂಡು ಅಘಾತಕ್ಕೆ ಒಳಗಾಗಿರುವ  ನೀರು ಬಯೋ ಸೆನ್ಸರ್ ಮೂಲಕ ಈ ಕೊಳವೆ ರೀತಿಯ ಉಪಕರಣದಲ್ಲಿ ಹರಿಯುತ್ತದೆ.  2ನೇ ಹಂತದಲ್ಲಿ ನೀರಿಗೆ ಶಕ್ತಿ ತುಂಬುವ ಎಲೆಕ್ಟ್ರಾನ್ ಗಳನ್ನು ಸಕ್ರಿಯಗೊಳಿಸಲಾಗುತ್ತದೆ.  ಇಲ್ಲಿಂದ  ಮುಂದಕ್ಕೆ ಧಾವಿಸುವ   ನೀರು ತನ್ನ ಮೂಲ  ಶಕ್ತಿಯನ್ನು ಪುನಃ ಗಳಿಸಿಕೊಂಡು ಮುಂದುವರಿಯುತ್ತದೆ.ಯಾವುದೇ ರಸಾಯನಿಕವೂ ಇಲ್ಲ. ವಿದ್ಯುತ್ ಸಂಪರ್ಕವೂ ಬೇಕಾಗಿಲ್ಲ. ಭೌತ ಶಾಸ್ತ್ರದ ಸರಳ ಲೆಕ್ಕಾಚಾರದ ಮೇಲೆ ಇದು ಕೆಲಸ ಮಾಡುತ್ತದೆ.

    ರಾಸಾಯನಿಕಗಳಿಂದ ಬರಡಾದ ಭೂಮಿಗೆ ಜೀವ ಸಂಚಯ

    ನಾವು ಬೇಕೋ ಬೇಡವೋ ಎಲ್ಲ ಕಡೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಭೂಮಿಗಂತೂ ಅದೆಷ್ಟೋ ರಾಸಾಯನಿಕ ತುಂಬಿದ್ದೀವೋ ಗೊತ್ತಿಲ್ಲ. ಮೊದಲು ಆ ಭೂಮಿ ಸಹಜವಾಗಿ ಫಲವತ್ತವಾಗಬೇಕು. ಅದಕ್ಕೆ ಶಕ್ತಿ ತುಂಬಿದ ನೀರು ಬೇಕು. ಆ ಕೆಲಸ ಇಲ್ಲಿ ಆಗುತ್ತಿದೆ ಎನ್ನುತ್ತಾರೆ  ಶ್ರೀನಿವಾಸ್.

    ಹಾಗೆ ನೋಡಿದರೆ ಇದೇನು ಮಿರಾಕಲ್ ಅಲ್ಲ. ಸಹಜ ವಿಜ್ಞಾನ. ನಾವು ರೈತರಿಗೂ ಅದನ್ನೇ ಹೇಳುತ್ತೇವೆ.  ಜೀವ ಜಲ ಹಾಯಿಸಿದ ಕೂಡಲೇ ಇಳುವರಿಯ ಲೆಕ್ಕ ಹಾಕಬೇಡಿ.  ಈ ನೀರಿನಿಂದ ಮೊದಲು ನಿಮ್ಮ ಭೂಮಿಯನ್ನು ಸಹಜವಾಗಿ ಫಲವತ್ತವಾಗಿ ಮಾಡಿ. ಮುಂದಿನ ದಿನಗಳ್ಲಿ  ಅದರ ಲಾಭ  ನಿಮಗೇ  ಗೊತ್ತಾಗುತ್ತದೆ ಎನ್ನುತ್ತಾರೆ  ಶ್ರೀನಿವಾಸ್. ಮೊದಲು ಹೇಳಿದ ಡೈರಿ ಫಾರಂ ನಲ್ಲೂ ಇದೇ ತತ್ವ ಅಳವಡಿಸಲಾಗಿದೆ. ಅಲ್ಲಿ ಈ ನೀರಿನಿಂದ ರಾಸುಗಳ ಆರೋಗ್ಯ ಸುಧಾರಿಸಿತು.  ಆರೋಗ್ಯವಂತ  ರಾಸು ಸಮೃದ್ಧ ಹಾಲು ನೀಡಿತು.

    ಇದನ್ನು ಕಂಡು ಹಿಡಿದಿರುವ ಕೃಷ್ಣ ಅವರೂ ಇದನ್ನೇ ಹೇಳುತ್ತಾರೆ.  ಶುದ್ಧ ಶಕ್ತಿ ತುಂಬಿದ ನೀರಿನಿಂದ   ಭೂಮಿಗೆ ಜೀವ ಬಂದರೆ ಭೂ ತಾಯಿ ರೈತರನ್ನು ಖಂಡಿತಾ ಕೈ ಬಿಡುವುದಿಲ್ಲ. ವಾಸನೆ ಇಲ್ಲದ. ಬಣ್ಣವಿಲ್ಲದ  ಆಕಾರವಿಲ್ಲದ ನೀರು ಶುದ್ಧವೇನೋ ಹೌದು ಅದರಲ್ಲಿ ಶಕ್ತಿ ಇದೆಯೇ ಎಂಬುದು ಮುಖ್ಯ. ಜೀವ ಶುದ್ಧ ನೀರಿಗೆ ಜೀವ ತುಂಬುತ್ತದೆ.

    ಜಾಗತಿಕ ವಿಜ್ಞಾನಿ ಕೃಷ್ಣ

    ಡಾ.ಕೃಷ್ಣ ಮಾದಪ್ಪ ಜಾಗತಿಕ ನೀರಿನ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರಾಗಿದ್ದು ಹಲವಾರು ದಶಕಗಳಿಂದ ನೀರಿನ ವರ್ತನೆಯನ್ನು ಸಂಶೋಧಿಸುತ್ತಾ ಬಂದಿದ್ದಾರೆ. 25 ವರ್ಷಗಳಿಗೂ ಮೀರಿದ ಅವರ ಸಂಶೋಧನೆಯಲ್ಲಿ ನೀರಿಗೆ ಜೀವವಿದೆ. ಅದು ಮಾನವರ ದುರ್ಬಳಕೆಯಿಂದ ಮತ್ತು ಕಾಲದ ಬದಲಾವಣೆಗಳಿಂದ ಹಾನಿಗೊಳಗಾಗಿದೆ ಮತ್ತು ಕ್ಷೀಣಿಸಿದೆ ಎಂದು ವೈಜ್ಞಾನಿಕವಾಗಿ ತೋರಿಸಿದ್ದಾರೆ.

    ಅವರ ಸಂಶೋಧನೆಯ ಫಲಿತಾಂಶವೇ ‘ಜೀವ’.ಇದು ಕ್ರಾಂತಿಕಾರಕ ನೀರಿನ ರಚನೆಯ ಡಿವೈಸ್ ಆಗಿದ್ದು ಅದು ನಾವು ಬಳಸುವ ನೀರಿಗೆ ಜೀವದ ಶಕ್ತಿಗಳನ್ನು ಮರಳಿ ತರುತ್ತದೆ. ನಮ್ಮ ಕೊಡಗಿನವರೇ  ಆದ  ಡಾ.ಕೃಷ್ಣ ಮಾದಪ್ಪ ಅವರು ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್  ಎಂಜಿನಿಯರ್ . ನಿಸರ್ಗದ ಥರ್ಮೋಡೈನಮಿಕ್ಸ್ ಮತ್ತು ಕ್ವಾಂಟಂ ಆಯಾಮದಿಂದ ಸ್ಫೂರ್ತಿ ಪಡೆದ ಅವರು ಕಳೆದ 25 ವರ್ಷಗಳಿಗೂ ಮೇಲ್ಪಟ್ಟು ಜೈವಿಕ-ಶಕ್ತಿಯ ವಿಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಇದರಿಂದ ಅವರು ನೀರಿನ ಸಮೀಕರಣಗಳಿಗೆ ಹೊರತಾದ ವರ್ತನೆಯನ್ನು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಆಧಾರದ ಮೇಲೆ ಕಂಡುಕೊಂಡಿದ್ದಾರೆ. ನಮ್ಮ ವೇದಗಳಲ್ಲಿ ಅಡಕವಾಗಿರುವ  ಜಲ ಶಕ್ತಿಯ ಮಹತ್ವನ್ನು ಅವರು ಅರಿತಿದ್ದಾರೆ.  ಬೆಡೋಯಿನ್ ಆದಿವಾಸಿಗಳೊಂದಿಗೂ ಜೀವಿಸಿ ನೀರಿನ  ಅಂತಃ ಶಕ್ತಿಯನ್ನು ಅರಿತಿದ್ದಾರೆ.

    ಕೃಷ್ಣ ಅವರು ಯುಎಸ್‌ಎಯ ಎಸೆನ್ಸ್ ಆಫ್ ಲೈಫ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡಾ ಆಗಿದ್ದಾರೆ ಹಾಗೂ ಯುಎಸ್‌ಎಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸ್ಪಿರಿಚುಯಾಲಿಟಿ ಅಂಡ್ ಸಸ್ಟೇನಬಿಲಿಟಿಯ  ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿದ್ದಾರೆ. ಅವರು ಸೈಕೊನ್ಯೂರೊಬಿಕ್ಸ್ ಅಥವಾ ‘ಬೆಳಕಿನ ವಿಜ್ಞಾನ’ ಮತ್ತು ಯೋಗದಲ್ಲಿ ಪಿಎಚ್.ಡಿ ಹೊಂದಿದ್ದಾರೆ. ಡಾ.ಕೃಷ್ಣ ಮಾದಪ್ಪ ಅವರಿಗೆ ಅರ್ಜೆಂಟೀನಾದ ರೋರಿಕ್  ಟ್ರೀಟಿಯು ಗ್ಲೋಬಲ್ ಅಂಬಾಸಡರ್ ಆಫ್ ಪೀಸ್ ಪುರಸ್ಕಾರ ನೀಡಿ ಗೌರವಿಸಿದೆ.

    ಕೃಷ್ಣರಿಗೆ ಜೊತೆಯಾದ ಶ್ರೀನಿವಾಸ

    ಸಂಶೋಧನೆಯೊಂದರ ಫಲ ಜನಸಾಮಾನ್ಯರಿಗೆ ತಲುಪಿದಗಾಲೇ ಅದಕ್ಕೆ ಯಶಸ್ಸು ಮತ್ತು ಸಾರ್ಥಕತೆ. ಈ ಸಮಯದಲ್ಲಿ ಕೃಷ್ಣ ಅವರಿಗೆ ಶ್ರೀನಿವಾಸ್ ಜೊತೆಯಾದರು. ಹಾಗೆ ನೋಡಿದರೆ ಕೃಷ್ಣ ಅವರಿಗೂ ಶ್ರೀನಿವಾಸ್ ಅವರಿಗೂ ಅಂಥ ಪರಿಚಯವೇನು ಇರಲಿಲ್ಲ. ಸಮಾರಂಭವೊಂದರಲ್ಲಿ ಕೃಷ್ಣ ಅವರನ್ನು ಭೇಟಿಯಾದ ಶ್ರೀನಿವಾಸ್ ಅವರ ಸಂಶೋಧನೆ ವಿವರ ಕೇಳಿದ ಕೂಡಲೇ ಪ್ರಭಾವಿತರಾದರು. ಹೌದಲ್ಲ ನಾವು ನೀರನ್ನು ಎಷ್ಟೊಂದು ವೀಕ್ ಮಾಡಿ ಬಿಟ್ಟಿದ್ದೀವಲ್ಲ  ಎಂದು ಅವರಿಗೂ ಅನ್ನಿಸುತು .ಇದು ಸಾಮಾನ್ಯರಲ್ಲಿ ಸಾಮಾನ್ಯರಿಗೆ ತಲುಪಿದಾಗಲೆ ಅದಕ್ಕೊಂದು ಅರ್ಥ ಎಂಬುದನ್ನು ಮನಗಂಡರು.  ಉದ್ಯಮಿಯಾಗಿದ್ದ ಅವರಿಗೆ ಇದನ್ನು ಎಲ್ಲರಿಗೂ ತಲುಪಿಸುವ ಕನಸು ಚಿಗರೊಡೆಯಿತು . ಇದರ  ಫಲವೇ   ಫೋರ್ಥ್ ಫೇಸ್ ವಾಟರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಉದಯ.

    ಶ್ರೀನಿವಾಸನ್ ಕೈಗಾರಿಕೋದ್ಯಮಿ, ಸಲಹೆಗಾರ, ಮಾರ್ಗದರ್ಶಿ ಮತ್ತು ಹಲವು ಸ್ಟಾರ್ಟಪ್‌ಗಳ ಹೂಡಿಕೆದಾರರಾಗಿ 30 ವರ್ಷಗಳ ಅನುಭವ ಹೊಂದಿದ್ದಾರೆ.ಅವರು ಒಇಎಂಗಳಿಗೆ ಆಟೊಮೊಟಿವ್ ಡಯಲ್‌ಗಳನ್ನು ಉತ್ಪಾದಿಸುವ ಜಾಗತಿಕ ಉದ್ಯಮ ಎಸ್‌ಜೆಎಸ್ ಸಂಸ್ಥಾಪಕ ನಿರ್ದೇಶಕರಾಗಿ ತಮ್ಮ ವೃತ್ತಿ  ಪ್ರಯಾಣ ಪ್ರಾರಂಭಿಸಿದವರು. ಈ ಕಂಪನಿ ಇತ್ತೀಚೆಗೆ ಭಾರತದ ಷೇರುಪೇಟೆಯಲ್ಲಿ ಲಿಸ್ಟ್ ಕೂಡ ಆಗಿದೆ.ಭಾರತದ ಹಲವು ಸ್ಟಾರ್ಟಪ್‌ಗಳು ಜಾಗತಿಕವಾಗಿ ದೊಡ್ಡ ಸಾಧನೆ ಮಾಡುವಲ್ಲಿ ಇವರ ಪಾತ್ರ ಹಿರಿದು.

    ಇದೀಗ ತಮ್ಮ ಅನುಭದ ಆಧಾರದ ಮೇಲೆ ಜೀವವನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಗುರಿ ಹೊಂದಿರುವ ಶ್ರೀನಿವಾಸ್ ಜೀವ ಜಲವನ್ನು ಹಲವು ಪರೀಕ್ಷೆಗಳಿಗೂ ಒಡ್ಡಿದ್ದಾರೆ. ಮಾಮೂಲಿ ಬಾಟಲ್ ನೀರಿಗೂ ಜೀವ ತುಂಬಿದ ನೀರಿಗೂ ಇರುವ ವ್ಯತ್ಯಾಸ ಕಂಡುಕೊಂಡಿದ್ದಾರೆ.

    ನಾವು ಭೂಮಿಯನ್ನು ಸಾಕಷ್ಟು ಹಾಳು ಮಾಡಿ ಈಗ ಸಾವಯವದ ಮಂತ್ರ ಜಪಿಸುತ್ತಿದ್ದೇವೆ. ಭೂಮಿ ಫಲವತ್ತಾದರೆ ತಾನೆ ಸಾವಯವ ಕೃಷಿಯ ಫಲ ಎನ್ನುವ ಶ್ರೀನಿವಾಸ್ ಮೊದಲು ಭೂಮಿಗೆ ಶಕ್ತಿ ತುಂಬಿ ಎನ್ನುತ್ತಾರೆ. ಇದು ಸಾಧ್ಯವಾಗಬೇಕಾದರೆ ಭೂ ತಾಯಿಗೆ ಜೀವ ಇರುವ ನೀರು ಬೇಕು ಎನ್ನುತ್ತಾರೆ.

    ಜೀವ ನೀರಿನಿಂದ ಗಟ್ಟಿಯಾದ ಬೇರುಗಳು

    ಈಗಾಗಲೇ ಕರ್ನಾಟಕ, ಆಂಧ್ರ, ತಮಿಳು ನಾಡಿನಲ್ಲಿ ಜೀವ ಜಲ ದ ಪ್ರಯೋಗ ನಡೆದಿದೆ. ಉತ್ತಮ ಫಲಿತಾಂಶವೂ ವ್ಯಕ್ತವಾಗುತ್ತಿದೆ. ಈ  ಮೇಲಿನ ಚಿತ್ರ ಗಮನಿಸಿದರೆ  ಜೀವ  ನೀರನ್ನು ಉಪಯೋಗಿಸಿದ ಭೂಮಿಯಲ್ಲಿ ಬೆಳದ ಸಸ್ಯದ ಬೇರುಗಳು ಗಟ್ಟಿಯಾಗಿರುವುದನ್ನು ಗಮನಿಸಬಹುದಾಗಿದೆ.

    ಯಾಮಿ-ವಿಪಾಸ – ಜಾಹ್ನವಿ- ದಿಹಂಗ

    ನಾಲ್ಕುವಿಧದಲ್ಲಿ ಜೀವ ಸಾಧನವನ್ನು ಸಿದ್ಧಪಡಿಸಲಾಗಿದೆ. ಇವುಗಳಿಗೆ ಭಾರತದ ಪುರಾತನ ನದಿಗಳ ಹೆಸರನ್ನೇ ಇಟ್ಟಿರುವುದು ಮತ್ತೊಂದು ವಿಶೇಷ.

    ಯಾಮಿ ಹೆಸರಿನ ಸಾಧನ ಗೃಹ ಬಳಕೆಗೆ ಬಳಸಬಹುದಾಗಿದೆ.ಮನೆಯಲ್ಲೇ ಇರುವ ತೋಟ, ಮನೆಯ ಓವರ್ ಹೆಡ್ ಟ್ಯಾಂಕಿಗೆ ಇದನ್ನು ಅಳವಡಿಸಬಹದು. ಈ ವಿಡಿಯೋ ನೋಡಿ.

    ವಿಪಾಸ ಗಂಟೆಗೆ 9000 ಲೀಟರ್ ನೀರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಪುಟ್ಟ ಫಾರಂಗಳು, ಪೌಲ್ಟ್ರಿ, ಡೇರಿಗೆಳಿಗೆ ಬಳಸಬಹದು.

    ಜಾಹ್ನವಿ ಹೆಸರಿನ ಸಾಧನ ಗಂಟೆಗೆ 30 000 ಲೀಟರ್ ನೀರು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು ದೊಡ್ಡ ತೋಟಗಳಿೆಗೆ ಅನುಕೂಲ .

    ದಿಹಂಗಾ ಹೆವಿ ಡ್ಯೂಟಿ ವಾಟರ್ ಸ್ಟ್ರಕ್ಚರಿಂಗ್ ಸಾಧನವಾಗಿದ್ದ 50000 ಲೀಟರ್ ನೀರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚು ನೀರು ಅಗತ್ಯ ಇರುವ ಭೂಮಿಗೆ ಬಳಸ ಬಹುದಾಗಿದೆ.

    ಬಳ್ಳಾರಿಯಲ್ಲಿ ಕಂಡ ಯಶಸ್ಸಿನ ಕಥೆ

    ಕರ್ನಾಟಕದ ಬಳ್ಳಾರಿಯಲ್ಲಿ40 ಸಾಧನಗಳನ್ನು ಕಳೆದ ಹಲವು ತಿಂಗಳಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಶೇಕಡ 75ರಷ್ಟು ಕೃಷಿ ಭೂಮಿಗಳಿಗೆ ಅಳವಡಿಸಲಾಗಿದೆ.ಶೇ.23ರಷ್ಟು ಮನೆಗಳಲ್ಲಿ(ತಾರಸಿ ಮತ್ತು ಹರ್ಬ್ ಗಾರ್ಡನ್‌ಗಳು) ಮತ್ತು ಶೇ.2ರಷ್ಟು ಡೈರಿ ಫಾರ್ಮ್‌ಗಳಲ್ಲಿ ಅಳವಡಿಸಲಾಗಿದೆ.ಈ ವಿಡಿಯೋದಲ್ಲಿ ಶ್ರೀನಿವಾಸ್ ಅಲ್ಲಿನ ಸಾಧನೆ ಬಣ್ಣಿಸಿದ್ದಾರೆ.

    ನಾಲ್ಕು ಎಕರೆಗಳಷ್ಟು ಭತ್ತದ ಗದ್ದೆಯಿಂದ ಈ ವರ್ಷ 185 ಚೀಲಗಳಷ್ಟು ಭತ್ತ ದೊರೆತಿದ್ದು ಕಳೆದ ವರ್ಷ 160 ಚೀಲಗಳು ಮಾತ್ರ ದೊರೆತಿತ್ತು. ಭತ್ತದ ಮೊಳಕೆಯಲ್ಲಿ ಶೇ.60ರಷ್ಟು ಹೆಚ್ಚಳ ದೊರೆತಿದೆ ಎಂದು ಹೇಳುತ್ತಾರೆ ಶ್ರೀನಿವಾಸ್.

    ಜೀವ ಪೋಷಕಾಂಶ ಪಡೆದ ಟೊಮ್ಯಾಟೊಗಳ ಪೌಷ್ಠಿಕತೆಯ ಅಂಶ ಬ್ರಿಕ್ಸ್ ಮೌಲ್ಯ· 3.5-5ರಿಂದ 9-13ಕ್ಕೆ ಹೆಚ್ಚಾಗಿದೆ. ಈ ವರ್ಷ ಅಸಹಜ ಮಳೆ ಮತ್ತು ಪ್ರವಾಹ ಬಂದಿದ್ದರೂ ಜೀವ ನೀರು ಪಡೆದ ಬೆಳೆಗಳು ಗಟ್ಟಿ ಬೇರುಗಳನ್ನು ಹೊಂದಿದ್ದು ಪೂರ್ಣ ಹಾಳಾಗುವುದನ್ನು ತಡೆದಿವೆ. ಡೈರಿ ಫಾರ್ಮ್ ಗಳು- ಹಿಂದೆ 6 ಲೀಟರ್ ಹಾಲು ಕೊಡುತ್ತಿದ್ದ ಎಮ್ಮೆಗಳು ಜೀವ· ನೀರು ನೀಡಿದ ನಂತರ ಎಲ್ಲ ಮೇವು ಇತ್ಯಾದಿ ಅದೇ ರೀತಿಯಲ್ಲಿದ್ದರೂ 7ಲೀಟರ್ ಹಾಲು ನೀಡಿವೆ. ಅವುಗಳ ಗರ್ಭ ಕಟ್ಟುವಿಕೆಯೂ ಸುಧಾರಿಸಿದೆ

    ಜೀವ ಜಲ

    ಕೃಷ್ಣ ಮಾದಪ್ಪ ಅವರ ಸಂಶೋದನೆ ಜೀವ ಜಲಕ್ಕೆ ನಿಜವಾಗಿಯೂ ಜೀವ ತುಂಬುತ್ತಿರುವುದು ಗೊತ್ತಾಗುತ್ತಿದೆ. ಹೆಚ್ಚು ಹೆಚ್ಚು ಜನರನ್ನು ಇದು ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಮತ್ತು ಶ್ರೀನಿವಾಸ್ ಈಗ ಕಾರ್ಯ ತತ್ಪರರಾಗಿದ್ದಾರೆ. ಬಳಕೆ ಹೆಚ್ಚಿದಷ್ಟು ಇದರ ಫಲಿತಾಂಶ ಮತ್ತಷ್ಟು ನಿಖರವಾಗುತ್ತದೆ.

    ಜೀವ ಎಲ್ಲಿ ಸಿಗುತ್ತದೆ, ಬಳಕೆ ಹೇಗೆ ಇತ್ಯಾದಿ ಮಾಹಿತಿ ಅಗತ್ಯ ವಿದ್ದಲ್ಲಿ 9945949043 ಈ ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಪಡೆಯಬಹುದು ಎಂದು ಜೀವ ವಕ್ತಾರರು ತಿಳಿಸಿದ್ದಾರೆ.

    .

    ಖಿನ್ನತೆ ಗೊಂದು ಕೊನೆ ಇರಲಿ

    ಹಿ೦ದಿ ಚಲನಚಿತ್ರ ದಿಲ್ ಹಿ ದಿಲ್ ಮೆ (ತಮಿಳಿನ ಕಾದಲಾರ್ ದಿನ೦) ನಲ್ಲಿ ಸೋನಾಲಿ ಬೇಂದ್ರೆ ಅವರೊಂದಿಗೆ ಅಭಿನಹಿಸಿದ್ದ ಹೀರೋ ಕುನಾಲ್ ಸಿ೦ಗ್ . ಈ ಚಿತ್ರದಲ್ಲಿ ಹಳ್ಳಿಯಿಂದ ಬಂದ ಒಂದು ಯುವ ಪ್ರತಿಭೆ ಮುಂಬೈನ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿಯನ್ನು ತೆಗೆದುಕೊಂಡು ತನ್ನ ಪ್ರೀತಿಯನ್ನು ಪಡೆದಂತಹ ಯುವಕನ ಚಲನಚಿತ್ರ.

    ಆ ಕಾಲದಲ್ಲಿ ಅವನ ರೂಪ ಅಭಿನಯ ಮತ್ತು ಹೇರ್ ಸ್ಟೈಲ್ಗಳಿಗೆ ಮೆಚ್ಚದವರಿಲ್ಲ. ನಾನು ಕುನಾಲ್ ಸಿ೦ಗ್ ಮತ್ತು ಸೋನಾಲಿ ಬೇ೦ದ್ರೆ ರ ದೊಡ್ಡ ಅಭಿಮಾನಿ.

    ಕಳೆದ ವರ್ಷ(2019) ನನ್ನ ಸಂಶೋಧನೆಯ ವಿಚಾರವಾಗಿ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದಾಗ ಅದೇ ಕಾದಲಾರ್ ದಿನ೦ ಚಲನಚಿತ್ರವನ್ನು SRS ಬಸ್ ನಲ್ಲಿ ಹಾಕಿದ್ದರು. ಬಾಲ್ಯದಲ್ಲಿ ನೋಡಿದ್ದ ಚಲನಚಿತ್ರವನ್ನು ನೆನಪಿಸಿಕೊಂಡು, ಆ ಹೀರೋ ಕುನಾಲ್ ಸಿಂಗ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಆಘಾತಕಾರಿ ಘಟನೆಯೊಂದು ತಿಳಿಯಿತು.

    ಫೆಬ್ರವರಿ 7, 2008 (ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ) ತನ್ನ ಮೂವತ್ತು ನೇ ವರ್ಷಕ್ಕೆ ಕುನಾಲ್ ಸಿಂಗ್ ಅವರು ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಸಂಸಾರ ಹಾಗೂ ಪ್ರೇಮ ವೈಫಲ್ಯ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ವಿಷಯ ತಿಳಿದು ಆಘಾತವಾಯಿತು.

    ಒಂದು ಚಲನ ಚಿತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮಿಂಚಿದ ಯುವಕನ ನಿಜ ಜೀವನದ ದಾರುಣ ಕಥೆ ವ್ಯಥೆ ಬೇಸರವೆನಿಸಿತು. ಒಂದು ಕಾಲಘಟ್ಟದಲ್ಲಿ ಅತ್ಯುನ್ನತವಾದ ಹಂತಕ್ಕೆ ಹೋದ ಹೀರೋ ಖಿನ್ನತೆ ಇ೦ದ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ.

    ಈ ಖಿನ್ನತೆ ಗೊಂದು ಕೊನೆ ಇರಲಿ. ಜೀವನ ವಿಶಾಲವಾಗಿದೆ ಏಳು ಬೀಳುಗಳನ್ನೆಲ್ಲಾ ಸಮನಾಗಿ ಸ್ವೀಕರಿಸೋಣ.

    ಮಿಸ್ ಯು ಕುನಾಲ್ ಸಿಂಗ್

    ಕಲ್ಯಾಣ ಕರ್ನಾಟಕಕ್ಕೆ 5030 ಕೋಟಿ ರೂ. ಅನುದಾನಕ್ಕೆ ಮನವಿ

    NEW DELHI FEB 7

    ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಡಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 5030 ಕೋಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

    ಇತ್ತೀಚೆಗೆ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಚರ್ಚಿಸಿದಂತೆ, ಆಂಧ್ರ ಪ್ರದೇಶ ರಾಜ್ಯವು ತನ್ನ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಿತ್ತು. ಅಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ದೇಶದಲ್ಲಿಯೇ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿ ಸೇರಿವೆ. 371(ಜೆ) ವಿಧಿಯನ್ವಯ ಸಂವಿಧಾನ ತಿದ್ದುಪಡಿಯ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲಾಗಿದೆ. ಆದರೆ ಈ ಭಾಗವು ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿರುವುದರಿಂದ ವಿಶೇಷ ಗಮನ ನೀಡುವ ಅಗತ್ಯವಿದೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿಯೂ ಈ ಜಿಲ್ಲೆಗಳು ಹಿಂದುಳಿದಿರುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಡಿ 5030 ಕೋಟಿ ರೂ. ಅನುದಾನ ಒದಗಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.


    ಜಿ.ಎಸ್.ಟಿ. ಪರಿಹಾರ ಅವಧಿ ವಿಸ್ತರಣೆಗೆ ಮುಖ್ಯಮಂತ್ರಿ ಮನವಿ

    ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಜಿಎಸ್ ಟಿ ಪರಿಹಾರವನ್ನು 2024-25ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು.

    ಎರಡು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಇಂದು ಹಣಕಾಸು ಸಚಿವರನ್ನು ಭೇಟಿಯಾಗಿ, 2022ರ ಮಾರ್ಚ್ ಗೆ ಜಿ.ಎಸ್.ಟಿ. ಪರಿಹಾರದ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ ಕೋವಿಡ್ 19 ರಿಂದಾಗಿ ರಾಜ್ಯ ಸರ್ಕಾರಗಳು ಸಂಪನ್ಮೂಲ ಕ್ರೋಢೀಕರಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಿ.ಎಸ್.ಟಿ. ಪರಿಹಾರದ ಅವಧಿ ವಿಸ್ತರಿಸುವ ಮೂಲಕ ರಾಜ್ಯ ಸರ್ಕಾರಗಳ ಸಂಕಷ್ಟ ಬಗೆಹರಿಸುವಂತೆ ಮನವಿ ಮಾಡಿದರು.

    ಕಳೆದ ಎರಡು ವರ್ಷಗಳಲ್ಲಿ ಸಾಲದ ಮೂಲಕ ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರ ಒದಗಿಸಿದಂತೆ, ಮುಂದಿನ ಮೂರು ವರ್ಷಗಳೂ ಇದೇ ಕ್ರಮ ಅನುಸರಿಸುವಂತೆ ಹಾಗೂ ಜಿ.ಎಸ್.ಟಿ. ಸೆಸ್ ಸಂಗ್ರಹದಿಂದ ಈ ಸಾಲ ಮರುಪಾವತಿ ಮಾಡಬಹುದು ಎಂದು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ.

    ಮಾರ್ಗೋಸಾ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆಉಬ್ಬು: ಬಿಬಿಎಂಪಿ ಎಂಜಿನಿಯರ್ ಗಳಿಗೆ ಸಚಿವರಿಂದ ತೀವ್ರ ತರಾಟೆ

    BENGALURU FEB 8

    ಮಲ್ಲೇಶ್ವರದ ಮಾರ್ಗೋಸಾ ರಸ್ತೆಯ 15ನೇ ಅಡ್ಡರಸ್ತೆಯ ಸಿಗ್ನಲ್ ಬಳಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಹಾಕಿರುವ ಬಿಬಿಎಂಪಿ ಅಧಿಕಾರಿಗಳನ್ನು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, `ಮಾರ್ಗೋಸಾ ರಸ್ತೆಯ ವೀಣಾ ಸ್ಟೋರ್ಸ್ ಜಂಕ್ಷನ್ ಸಮೀಪ ಹಾಕಿರುವ ರಸ್ತೆ ಉಬ್ಬು ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ರಸ್ತೆ ನಿರ್ಮಾಣದ ನಿಯಮಗಳಿಗೆ ತದ್ವಿರುದ್ಧವಾಗಿ ಮಾಡಿರುವ ಈ ರಸ್ತೆ ಉಬ್ಬಿನಿಂದಾಗಿ ಇಲ್ಲಿ ಹಲವು ಅಪಘಾತಗಳಾಗಿವೆ. ಇದನ್ನು ತ್ವರಿತವಾಗಿ ಸರಿಪಡಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಬೃಹತ್ ರಸ್ತೆಗಳ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರವೀಣ್ ಅವರಿಗೆ ಎಚ್ಚರಿಕೆ ನೀಡಿದರು.

    `ಈ ರಸ್ತೆ ಉಬ್ಬಿಗೆ ಬಿಳಿ ಬಣ್ಣದ ಪಟ್ಟೆಗಳನ್ನಾಗಲಿ, ರಾತ್ರಿ ಹೊತ್ತು ಈ ಉಬ್ಬು ಇರುವುದು ಗೊತ್ತಾಗುವಂತೆ ರೇಡಿಯಂ ಫಲಕಗಳನ್ನಾಗಲಿ ಅಳವಡಿಸಿಲ್ಲ. ಜೊತೆಗೆ, ಸಿಗ್ನಲ್ ಸಮೀಪದಲ್ಲೇ ಇದನ್ನು ಹಾಕಲಾಗಿದೆ. ಇಲ್ಲಿ ಅಪಘಾತಗಳು ಸಂಭವಿಸಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರೂ ಅಧಿಕಾರಿಯಾದ ನೀವು ಸ್ಥಳಕ್ಕೆ ಭೇಟಿ ನೀಡದೆ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದೀರಿ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಬಿಬಿಎಂಪಿ ಅಧಿಕಾರಿಗಳು ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ಬಿಡಬೇಕು’ ಎಂದು ಅವರು ಹರಿಹಾಯ್ದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡವು ಸಬೂಬು ಹೇಳಲು ಮುಂದಾಯಿತು. ಇದನ್ನು ಒಪ್ಪದ ಸಚಿವರು, ದಿನವೂ ಹತ್ತಾರು ಸಾವಿರ ವಾಹನಗಳು ಚಲಿಸುವ ನಿಬಿಡ ರಸ್ತೆಯಾಗಿರುವ ಮಾರ್ಗೋಸಾ ರಸ್ತೆಯಲ್ಲಿ ಇತ್ತೀಚೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲೇ ಯೋಜನೆ ಪ್ರಕಾರ ವೈಜ್ಞಾನಿಕ ರಸ್ತೆ ಉಬ್ಬು ಹಾಕಬೇಕಿತ್ತು. ಆ ಕೆಲಸ ಮಾಡದ ಕಾರಣಕ್ಕೆ ಹಲವು ವಾಹನ ಸವಾರರು ರಾತ್ರಿ ವೇಳೆ ಬೀಳುತ್ತಿದ್ದಾರೆ. ಈ ರೀತಿ ಇನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯ ಈ ರೀತಿಯ ಕಪ್ಪು ಸ್ಥಳಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

    ಈ ರಸ್ತೆ ಉಬ್ಬಿನ ಸಮೀಪ ಇತ್ತೀಚೆಗೆ ಹಲವು ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಾರ್ವಜನಿಕರು ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದಿದ್ದರು. ಇದಾದಮೇಲೆ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಇದರ ಜತೆಗೆ, ಸ್ಥಳಕ್ಕೆ ಭೇಟಿ ನೀಡದೆ ಕರ್ತವ್ಯಲೋಪ ಎಸಗಿರುವ ಎಂಜಿನಿಯರ್ ಪ್ರವೀಣ್ ಅವರನ್ನೂ ಸಚಿವರು ತರಾಟೆಗೆ ಕೂಡ ಎಚ್ಚರಿಕೆ ನೀಡಿದರು.

    ಮಲ್ಲೇಶ್ವರಂ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಜಯಶಂಕರ್, ಬಾಲಾಜಿ, ಸಹಾಯಕ ಎಂಜಿನಿಯರ್ ಮಾರ್ಕಂಡಯ್ಯ ಇದ್ದರು.

    ಬಯಕೆಗಳಿಲ್ಲದ ಬದುಕು ಬರಡೇ ಸರಿ

    ಸುಮಾವೀಣಾ

    ಬಯಕೆಗೆ ಬಡವರಿಲ್ಲ- ರುದ್ರಭಟ್ಟನ   ‘ಜಗನ್ನಾಥ ವಿಜಯ’ದಲ್ಲಿ ಬರುವ ಮಾತಿದು. ಬಯಕೆ ಎಂದರೆ  ಬೇಡಿಕೆಗಳು,ಆವಶ್ಯಕತೆಗಳು ಎಂದಾಗುತ್ತವೆ. ಬಯಸಿದ್ದೆಲ್ಲಾ ಸಿಗುವುದು ಸಿಗದೆ ಇರುವುದು ಬೇರೆಯ ವಿಚಾರ ಆದರೆ ಬಯಸುವುದರಲ್ಲಿ ತಪ್ಪಿಲ್ಲ.

    ತೊಟ್ಟಿಲ ಮಗುವಿನಿಂದ   ಮುಪ್ಪಿನವರವರೆಗೆ ಬಯಕೆಗಳು ನಿರೀಕ್ಷೆಗಳು  ಇದ್ದೇ ಇರುತ್ತವೆ.ಸಹಜವಾದ ಬಯಕೆಗಳು ಬದುಕನ್ನು ಸುಂದರವಾಗಿಸುತ್ತವೆ  ಅಸಹಜ ಬಯಕೆಗಳು ಮುಗ್ಗರಿಸುವಂತೆ ಮಾಡುತ್ತವೆ.  

    ಬಯಕೆಗೆ ಬಡವರಿಲ್ಲ ಎಂಬುದೊಂದು ಬಡತನಕ್ಕೆ ಸಂಬಂಧಿಸಿದ ನಾಣ್ಣುಡಿ  ಎನ್ನಬಹುದು.  ಆಕಾಶವನ್ನು ನೋಡಲು ನೂಕು ನುಗ್ಗಲೇ ? ನಾವು  ಎಲ್ಲಿ ನಿಂತರೂ ಆಕಾಶವನ್ನು ವೀಕ್ಷಿಸಬಹುದು.  ಹಾಗೆಯೇ ಬಯಕೆಯನ್ನು ಹೊಂದಲು  ಶ್ರೀಮಂತರಾಗಿರಬೇಕು ಬಡವರಾಗಿರಬೇಕು ಎನ್ನುವ ಕಟ್ಟುಪಾಡಿಲ್ಲ. ಈ ಬಯಕೆಗಳು ಸೀಮಾತೀತ,ವರ್ಗಾತೀತ.

     ‘ಬಯಕೆ’ ಎನ್ನುವುದು ಧನಾತ್ಮಕತೆಯ ಸಂಕೇತ ಎನ್ನಬಹುದು.  ಉದಾಹರಣೆಗೆ ವಿದ್ಯಾರ್ಥಿಯೊಬ್ಬ   ಉತ್ತಮ  ಅಂಕಗಳನ್ನು ಪಡೆದು  ಉತ್ತಮ ಗಳಿಕೆಹೊಂದಬೇಕು ಎಂದಾದಲ್ಲಿ ಅದಕ್ಕೆ ಪೂರಕವಾಗಿ ಆತ  ಪ್ರಯತ್ನ ಮಾಡಲೇಬೇಕಾಗುತ್ತದೆ.  ಅಂದರೆ ಬಯಕೆ ಈಡೇರಲು  ಶ್ರಮವನ್ನು  ಅಪೇಕ್ಷಿಸುತ್ತದೆ ಎಂದಾಯಿತು ಅಲ್ಲವೆ. ಅರ್ಥಾತ್ ಶ್ರಮ ನಮಗೆ ಬಯಸಿಒದ್ದನ್ನು ಕೊಡಬಹುದು ಎಂದಾಯಿತಲ್ಲವೆ?

     ಬಯಕೆಯೇ ಬದುಕು ಎಂಬಂತೆ  ಬಯಕೆಗಳು ಬದುಕುವ ಆಸೆಯನ್ನು ಜೀವಂತವಾಗಿರಿಸುತ್ತವೆ.  ಈ ಆಸೆಗಳು ನಮ್ಮನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಬಹುದು.  ಬಯಕೆ ಹೊಂದಲು ನಿರ್ಬಂಧಗಳೆನ್ನುವ ಟ್ರಾಫಿಕ್ ಜಾಮನ್ನು ಧಾಟಬೇಕಿಲ್ಲ,  ಮುಂಗಡ ಚೀಟಿಯನ್ನೇನು ನಾವು ಪಡೆಯಬೇಕಿಲ್ಲ.  ಬಯಕೆಗಳಿಲ್ಲದ ಬದುಕು ಬರಡೇ ಸರಿ!  ನಮಗನ್ನಿಸಿದ್ದನ್ನು ಆಶಿಸಿ  ಈಡೇರಿಸಿಕೊಳ್ಳಬಹುದಾದ  ಬಯಕೆಗಳು ಬದುಕಿಗೆ ಅಮೃತ ಸಿಂಚನಗಳು.  

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಏರಿಳಿತಗಳ ಪೇಟೆಯಲ್ಲಿ ಅರಿತು ಹೂಡಿಕೆ ಮಾಡಿ – ಅನುಸರಿಸಬೇಡಿ

    ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್ ನ ಹೆಗ್ಗುರುತಾದ ಸೆನ್ಸೆಕ್ಸ್‌ ದಿನನಿತ್ಯವೂ ಏರಿಳಿತಗಳನ್ನು ಪ್ರದರ್ಶಿಸುತ್ತಿದ್ದು, ಸೆನ್ಸೆಕ್ಸ್‌ ನಲ್ಲಿರುವ 30 ಕಂಪನಿಗಳು ಚಕ್ರಾಕರಾದಲ್ಲಿ ಚಲಿಸಿ ಎರಡು ದಿನ ಏರಿಕೆ ಕಂಡರೆ, ಮತ್ತೆರಡು/ ಮೂರು ದಿನ ಇಳಿಕೆ ಕಾಣುವ ರೀತಿ ಮ್ಯೂಸಿಕಲ್ ಚೇರ್‌ ಆಟದಂತೆ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ.

    ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ವಲಯದ ಕಂಪನಿಗಳು, ಅವುಗಳಲ್ಲಿ ಕೆಲವು ಉತ್ತಮವಾದ, ಆಕರ್ಷಣೀಯ ಫಲಿತಾಂಶಗಳನ್ನು ಪ್ರಕಟಿಸಿದರೂ ಸಹ ಏರಿಕೆಯ ಹಂತವನ್ನು ಸ್ಥಿರಗೊಳಿಸಿಕೊಳ್ಳಲು ಅಸಮರ್ಥವಾಗಿದ್ದು ಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.

    ಹಿಂದಿನವಾರದಲ್ಲಿ ಅಮೇರಿಕಾದ ಫೇಸ್‌ ಬುಕ್‌ ಕಂಪನಿಯ ಕಳಪೆ ಸಾಧನೆಯ ಕಾರಣ ಭಾರಿ ಮಾರಾಟದ ಒತ್ತಡಕ್ಕೊಳಗಾಗಿ ಷೇರಿನಬೆಲೆ ಭರ್ಜರಿ ದಾಖಲೆಯ ಕುಸಿತ ಕಂಡಿದೆ. ಇದಕ್ಕೆ ಆ ಕಂಪನಿಯು ನೀಡಿದ ಸಮಜಾಯಿಶಿ ಎಂದರೆ ʼ ಭಾರತದಲ್ಲಿ ಬಳಕೆದಾರರ ಬೆಂಬಲದ ಕೊರತೆಯ ಕಾರಣ ಕಂಪನಿ ಏಳ್ಗೆ ಕಾಣಲು ವಿಫಲವಾಗಿದೆʼ ಎಂದಿದೆ. ಅಂದರೆ ಒಂದು ವಿದೇಶಿ ಕಂಪನಿಯ ಏಳ್ಗೆಗೆ ಭಾರತೀಯರ ಕೊಡುಗೆ ಯಾವ ಮಟ್ಟದಲ್ಲಿದೆ ಎಂಬುದರ ಅರಿವಾಗುತ್ತದೆ.

    ಭಾರತೀಯ ಷೇರುಪೇಟೆಗಳಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜನವರಿ 12 ರಿಂದಲೂ ನಿರಂತರವಾಗಿ ಮಾರಾಟಮಾಡುತ್ತಿವೆ. ಜನವರಿ 12 ರಿಂದಲೂ ಏಕಮುಖವಾಗಿ ಮಾರಾಟದ ಹಾದಿಯಲ್ಲಿ ರೂ.46,498 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೂ, ಸೆನ್ಸೆಕ್ಸ್‌ ಮಾತ್ರ 3,184 ಪಾಯಿಂಟುಗಳಷ್ಠು ಮಾತ್ರ ಕುಸಿದಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.277.22 ಲಕ್ಷ ಕೋಟಿಯಿಂದ ರೂ.267.71 ಲಕ್ಷ ಕೋಟಿಗೆ ಇಳಿದಿದೆ. ಆದರೆ 2020 ರ ಫೆಬ್ರವರಿ 20 ರಿಂದ ಮಾರ್ಚ್‌ 26 ರವರೆಗೂ ವಿದೇಶಿ ವಿತ್ತೀಯ ಸಂಸ್ಥೆಗಳು ಸುಮಾರು ರೂ.70 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಸೆನ್ಸೆಕ್ಸ್‌ ನಲ್ಲಿ 11,354 ಪಾಯಿಂಟುಗಳ ಇಳಿಕೆಯನ್ನುಂಟುಮಾಡಿದ್ದವು. ಆದರೆ ಈ ಬಾರಿ ರೂ.46,498 ಕೋಟಿ ಮೌಲ್ಯದ ಷೇರು ಮಾರಾಟಮಾಡಿದರೂ ಕೇವಲ 3,184 ಪಾಯಿಂಟುಗಳ ಕುಸಿತ ಕಂಡಿದೆ.

    ವಾರಾಂತ್ಯದ ಆರಂಭದ ಹೊತ್ತಿನ ಸೆನ್ಸೆಕ್ಸ್

    ಈ ರೀತಿಯ ತಾರಾತಮ್ಯಕ್ಕೆ ಮುಖ್ಯ ಕಾರಣ ನಮ್ಮ ದೇಶದ ಆಂತರಿಕ ಶಕ್ತಿ. ಅದು ಜನಸಾಮಾನ್ಯರು ಷೇರುಪೇಟೆಯತ್ತ ಗಮನಹರಿಸಿರುವುದಾಗಿದೆ. ಹಿಂದಿನ ವರ್ಷ ಅಂದರೆ 08 ನೇ ಫೆಬ್ರವರಿ 2021 ರಂದು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರ ಸಂಖ್ಯೆಯು 5.92 ಕೋಟಿ ಇತ್ತು. ಈ ವರ್ಷ ಫೆಬ್ರವರಿ 4 ರಂದು ಈ ಸಂಖ್ಯೆಯು 9.59 ಕೋಟಿಗೆ ಏರಿಕೆ ಕಂಡಿದೆ. ಸುಮಾರು ಶೇ.64ರಷ್ಠು ಭಾಗವಹಿಸುವವರ ಸಂಖ್ಯೆಯು ಹೆಚ್ಚಾಗಿದೆ. ಈ ಹೊಸ ಹೂಡಿಕೆದಾರರ ಪ್ರವೇಶದಿಂದ ಪೇಟೆಯತ್ತ ಹರಿದುಬರುತ್ತಿರುವ ಹಣದ ಹೊಳೆಯೊಂದಿಗೆ ಮ್ಯೂಚುಯಲ್‌ ಫಂಡ್‌ ಗಳ ಮೂಲಕ ಪ್ರತಿ ತಿಂಗಳೂ, ಈಕ್ವಿಟಿ ಆಧಾರಿತ ಎಸ್‌ ಐ ಪಿ ಹೂಡಿಕೆಯ ಸುಮಾರು ರೂ.25,000 ಕೋಟಿ ಸಂಗ್ರಹವಾಗುತ್ತಿರುವ ಹಣವೂ ಸಹ ಪೇಟೆಯತ್ತ ಹರಿದುಬರುತ್ತಿರುವುದು, ಉತ್ತಮ, ಅಗ್ರಮಾನ್ಯ ಕಂಪನಿಗಳಿಗೆ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ.

    ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಿದೇಶಿ ವಿತ್ತೀಯ ಸಂಸ್ಥೆಗಳು ಹೆಚ್ಚು ಮಾರಾಟಮಾಡುತ್ತಿದ್ದರೂ ಸಹ ಆಂತರಿಕವಾಗಿ ಬರುತ್ತಿರುವ ಹಣದ ಹೊಳೆಯು ಎಲ್ಲವನ್ನೂ ಹೀರಿಕೊಳ್ಳುತ್ತಿರುವುದರಿಂದ ಷೇರುಪೇಟೆಯ ಮೇಲೆ ಹೆಚ್ಚು ಪ್ರಭಾವಿಯಾಗುತ್ತಿಲ್ಲ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಎಂದರೆ 141 ದೇಶಗಳ ಗ್ಲೋಬಲ್‌ ಕಾಂಪಿಟೇಟಿವ್‌ ಇಂಡೆಕ್ಸ್‌ ನಲ್ಲಿ ಭಾರತದ ಮಾರ್ಕೆಟ್‌ ಸೈಜ್‌ – 3, ಇದು ಇಂದು ಸಕಾರಾತ್ಮಕವಾಗಿ ಪರಿಣಮಿಸಿದೆ. ದೇಶದ ಜನಸಂಖ್ಯೆ 140 ಕೋಟಿಯಲ್ಲಿ ಕೇವಲ 9.59 ಕೋಟಿ ಜನರು ಮಾತ್ರ ಷೇರುಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವ ಕಾರಣ ಈ ರೀತಿಯ ಸ್ಥಿರತೆ ಕಾಣುತ್ತಿದ್ದೇವೆ. ಇದು ದ್ವಿಗುಣಗೊಂಡಲ್ಲಿ ಯಾವ ಪ್ರಮಾಣದ ಬೇಡಿಕೆ ಉಂಟಾಗಿ ಅಸ್ಥಿರತೆಗೆ ಕಾರಣವಾಗಬಹುದೇ, ಕಾದು ನೋಡಬೇಕಾಗಿದೆ.

    ಈ ವಾತಾವರಣವನ್ನು ಇತ್ತೀಚೆಗೆ ಬರುತ್ತಿರುವ ಹೊಸಪೀಳಿಗೆ ಸ್ಟಾರ್ಟ್‌ ಅಪ್‌ ಗಳು ಜನಸಾಮಾನ್ಯರನ್ನು ಆಕರ್ಷಿಸಿ ಅವರಿಗೆ ತಮ್ಮ ಷೇರುಗಳನ್ನು ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿ, ಅವರಲ್ಲಿ ಐಪಿಒ ಎಂದರೆ ತಾತ್ಸಾರ ಭಾವನೆಯನ್ನು ಬಿತ್ತುತ್ತಿವೆ.

    ಈ ದಿಶೆಯಲ್ಲಿ ಐ ಪಿ ಒ ಗಳು ತೇಲಿಬಿಟ್ಟಾಗ ಗಮನಿಸಲೇಬೇಕಾದಂತಹ ಹಲವು ಅಂಶಗಳು ಇಂತಿವೆ.

    • ಐ ಪಿ ಒ ಮೂಲಕ ವಿತರಿಸಲಾಗುತ್ತಿರುವ ಷೇರುಗಳ ಮುಖಬೆಲೆ ಏನು? ಅದು ರೂ.1 ಅಥವಾ 2 ಆದರೆ ವಿತರಣಾ ಸಂದರ್ಭಕ್ಕೂ ಮುಂಚಿನ ದಿನಗಳಲ್ಲಿ ಮುಖಬೆಲೆ ಸೀಳಲಾಗಿದೆಯೇ? ಹೌದೆಂದಾದರೆ ಆ ಕಂಪನಿಯ ಉದ್ದೇಶವೇನೆಂಬುದರ ಅರಿವಾಗುತ್ತದೆ.
    • ಆ ಕಂಪನಿಯು ಐಪಿಒ ಗೂ ಮುಂಚಿನ ದಿನಗಳಲ್ಲಿ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿದೆಯೇ? ಹೌದೆಂದಾದರೆ ಕಂಪನಿ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಣೆಯ ದೃಷ್ಟಿಯಿಂದಲೇ ಈ ಕ್ರಮಕ್ಕೆ ಮುಂದಾಗಿದೆ ಎಂದಾಗುವುದು.
    • ಐ ಪಿ ಒ ಗೂ ಮುಂಚೆ ಕಂಪನಿಯು ಯಾವ ರೀತಿಯ ಕಾರ್ಪೊರೇಟ್‌ ಫಲಗಳನ್ನು ವಿತರಿಸಿಕೊಂಡಿದೆ, ವಿಶೇಷವಾಗಿ ಅದು ವಿತರಿಸಿದ ಬೋನಸ್‌ ಷೇರಿನ ಪ್ರಮಾಣವೇನು? ಕಾರಣ ಆಗಸ್ಟ್‌ 2021 ರಲ್ಲಿ ವಿತರಿಸಿದ ವಿಜಯ್‌ ಡಯಾಗ್ನಾಸ್ಟಿಕ್ಸ್‌ ಕಂಪನಿಯು ಮೇ 2021 ರಲ್ಲಿ ಪ್ರತಿ 4 ಷೇರುಗಳಿಗೆ 5 ರಂತೆ ಬೋನಸ್‌ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.531 ರಂತೆ ಐಪಿಒ ನಲ್ಲಿ ಷೇರು ವಿತರಿಸಿದೆ. ಝೊಮಾಟೋ ಕಂಪನಿಯು ಜುಲೈ 2021 ರಲ್ಲಿ ಪ್ರತಿ 1 ಷೇರಿಗೆ 6,691 ಷೇರುಗಳ ಅನುಪಾತದಲ್ಲಿ ಬೋನಸ್‌ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.76 ರಂತೆ ಷೇರು ವಿತರಿಸಿದೆ. ಅಂದರೆ ಕಂಪನಿಯ ಖಜಾನೆಯಲ್ಲಿರುವ ʼರಸʼವನ್ನು ಹೀರಿಕೊಂಡು ನಂತರ ಸಿಪ್ಪೆಯಂತಹ ಸಪ್ಪೆಯ ಭಾಗವನ್ನು ಸಾರ್ವಜನಿಕರಿಗೆ ಹಂಚುವುದು ಯಾವ ನ್ಯಾಯ?
    • ಕಂಪನಿಯ ಪ್ರವರ್ತಕರಿಗೆ ಬಿದ್ದ ಷೇರಿನ ಬೆಲೆ ಏನು? ಮತ್ತು ಆ ಷೇರುಗಳನ್ನು ವಿತರಿಸುತ್ತಿರುವ ಪ್ರೀಮಿಯಂ ಏನು? ಇವುಗಳ ವ್ಯತ್ಯಾಸ ಭಾರಿ ಪ್ರಮಾಣದಲ್ಲಿದ್ದಲ್ಲಿ ಅಂತಹ ಕಂಪನಿಗಳಿಂದ ದೂರ ಉಳಿವುದೇ ಲೇಸು.
    • ಕಂಪನಿಗಳು ಹೊಸ ಷೇರುಗಳನ್ನು ಮತ್ತು ಪ್ರವರ್ತಕರಾದಿಯಾಗಿರುವವರ ಷೇರುಗಳನ್ನು ಮಾರಾಟಮಾಡುತ್ತಿರುವ ಪ್ರಮಾಣವನ್ನೂ ಸಹ ಗಮನಿಸಬೇಕು. ಕೆಲವು ಕಂಪನಿಗಳು ಕೇವಲ ಆಫರ್‌ ಫಾರ್‌ ಸೇಲ್‌ ಮೂಲಕ ಮಾತ್ರ ಷೇರು ವಿತರಿಸುವುವು. ವಿತರಿಸುವ ಪ್ರೀಮಿಯಂ ಸಹ ಅತಿ ಹೆಚ್ಚಾಗಿದ್ದು ಸಂಗ್ರಹವಾದ ಸಂಪೂರ್ಣ ಸಂಪನ್ಮೂಲವು ಪ್ರವರ್ತಕರ ಕಿಸೆಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ರೀತಿಯ ಪ್ರಯೋಜನವಿರಲಾರದು. ಹಾಗಾಗಿ ಇಂತಹ ಕಂಪನಿಗಳಿಗೆ ಐಪಿಒ ಮೂಲಕ ಚಂದಾದಾರರಾಗುವುದಕ್ಕಿಂತ, ಆ ಕಂಪನಿಯ ಷೇರುಗಳು ಲೀಸ್ಟಿಂಗ್‌ ಆದ ಮೇಲೆ ಆಕರ್ಷಕ ಹೂಡಿಕೆ ಎನಿಸಿದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಪೇಟೆಯಲ್ಲಿ ಪರ್ಯಾಯ ಹೂಡಿಕೆ ಆನ್ವೇಷಣೆ ಮಾಡಬಹುದು. ಉದಾಹರಣೆಗೆ ವೇದಾಂತ ಫ್ಯಾಶನ್ಸ್‌ ಕಂಪನಿ ವಿತರಿಸುತ್ತಿರುವ ರೂ.1 ರ ಮುಖಬೆಲೆಯ ಷೇರಿಗೆ ರೂ.866 ಎಂದು ನಿಗದಿಪಡಿಸಿದ್ದು, ಸಂಗ್ರಹಣೆಯಾದ ಸಂಪೂರ್ಣ ರೂ.3,149 ಕೋಟಿ ಹಣವೂ ಪ್ರವರ್ತಕರ ಕಿಟ್ಟಿಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ಪ್ರಯೋಜನವೂ ಇರುವುದಿಲ್ಲ.

    ಈ ಅಂಶಗಳು ಕೇವಲ ಮಾರ್ಗದರ್ಶನಕ್ಕಾಗಿ, ಹೊಸ ಹೂಡಿಕೆದಾರರ ಮಾಹಿತಿಗಾಗಿ ನೀಡಲಾಗಿದ್ದು, ಅಂತಿಮವಾಗಿ ಹೂಡಿಕೆದಾರರೇ ನಿರ್ಧರಿಸಬೇಕು. ಅರಿತು ಹೂಡಿಕೆ ಮಾಡಿ – ಅನುಸರಿಸಬೇಡಿ.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Lata Mangeshkar :ಸೌಜನ್ಯ, ಸರಳತೆ ಮತ್ತು  ಸವಿನಯದ ಪ್ರತಿರೂಪ

    ಎಂಟು ದಶಕಗಳಿಂದ ಭಾರತೀಯರಿಗೆ ಸುಮಧುರ ಗಾಯನವನ್ನು ನೀಡಿದ ಗಾನ ಕೋಗಿಲೆ ಇಂದು ಹಾಡು ನಿಲ್ಲಿಸಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತೀಯ ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ. ಕೇಳುಗರಿಗೆ ಮತ್ತು ನೋಡುವವರಿಗೆ  ಬಾಲಿವುಡ್ ನಟಿಯರೇ ಹಾಡುತ್ತಿರಬಹುದೆಂಬ  ಭ್ರಮೆ ಹುಟ್ಟಿಸುವಂತಹ ಧ್ವನಿ ಅವರದು.  ಅಷ್ಟೊಂದು ವೈವಿಧ್ಯತೆಯಲ್ಲಿ ಹಾಡುವ ಲತಾಜೀಗೆ ಮತ್ತೊಬ್ಬರು ಸಾಟಿ ಇಲ್ಲ.

    ಸವಿನಯದ ಪ್ರತಿರೂಪ

    ಸೌಜನ್ಯ, ಸರಳತೆ ಮತ್ತು  ಸವಿನಯದ ಪ್ರತಿರೂಪವೇ ಲತಾ ಮಂಗೇಶ್ಕರ್. ಸದಾ ಬಿಳಿಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಈ ಸ್ವರ ಸಂಗೀತದ ಗಾನಕೋಗಿಲೆ, ಬಹಳ ಸಂಕೋಚದ ಸ್ವಭಾವದವರು.

    ಹಾಗೆಂದು ಜೀವನವೇನು ಸುಖದಲ್ಲಿ ಶುರುವಾಗಲಿಲ್ಲ.ತಂದೆ ದೀನಾನಾಥ್ ಅವರ  ಅಕಾಲಿಕ ಮರಣ ದಿಂದಾಗಿ 12 ವರ್ಷದ ಲತಾಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಸಾಕುವ ಜವಾಬ್ದಾರಿ ಹೆಗಲೇರಿ ಹೇಗಾದರೂ ಕಷ್ಟಪಟ್ಟು ಸಂಪಾದಿಸಲೇ ಬೇಕಾದ  ಪರಿಸ್ಥಿತಿ ಎದುರಾಯಿತು.

    ತಂದೆಯಿಂದ  ಶಾಸ್ತ್ರೀಯ ಸಂಗೀತದ ಪಾಠ
    ಮನೆಯವರೆಲ್ಲರಿಗೂ ಆಗಿತ್ತು.   ಜೀವನದ ದಾರಿಗೆ ಮತ್ತೇನು ಗೊತ್ತಿಲ್ಲದ ಲತಾ ಮರಾಠಿ ನಾಟಕದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಹಾಡುತ್ತಿದ್ದರು.ಈ ರೀತಿ ಸಣ್ಣ ಝರಿಯಾಗಿ ಶುರುವಾದದ್ದು ಇಂದು 25000ಕ್ಕೂ ಹೆಚ್ಚಿನ ಹಾಡುಗಳನ್ನು 36 ಭಾಷೆಗಳಲ್ಲಿ ಹಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ  ಹಿನ್ನೆಲೆ ಗಾಯಕಿ ಎಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಇದೆ.

    ಇವರು ಹಾಡಿದ ಚಾಂದಿನಿ ಚಿತ್ರದ ಮೇರೆ ಹಾಥೋ  ಮೆ ನೌ ನೌ ಚೂಡಿಯಾ  ಹೆ ಹಾಗೂ ಹಮ್ ಆಪ್ ಕೆ ಹೈ ಕೌನ್ ನ ದೀದೀ ತೇರಾ ದೇವರ್ ದೀವಾನಾ ಹಾಡುಗಳು ಎಷ್ಟು ಫೇಮಸ್ ಎಂದರೆ ಆ ಕಾಲದಲ್ಲಿ ಮದುವೆ ಮನೆಗಳಲ್ಲಿ ಈ ಹಾಡುಗಳು ಇರಲೇ ಬೇಕಿತ್ತು. ಉದಯೋನ್ಮುಖ ಗಾಯಕಿ ಪ್ರಿಯಾಂಕ ಪದಕಿ ಆ ಸಾಲನ್ನು ಇಲ್ಲಿ ನೆನಪಿಸಿದ್ದಾರೆ.

    ಒಮ್ಮೆ  ಹಾಡುವಾಗ ಲತಾಗೆ ನಟ ದಿಲೀಪ್ ಕುಮಾರ್ ಹೇಳಿದರಂತೆ ನಿಮ್ಮ ಹಿಂದಿ  ಉಚ್ಛಾರಣೆಯಲ್ಲಿ  ಮರಾಠಿ ಭಾಷೆಯ ಛಾಯೆ ಎದ್ದು ಕಾಣುತ್ತದೆ ಎಂದು. ಅಷ್ಟಕ್ಕೆ ಲತಾರವರು ಉರ್ದು ಮತ್ತು ಹಿಂದಿಯನ್ನು ಕಲಿತು ಎಲ್ಲರಿಗೂ ನಾನೂ ಸರಿಯಾದ ಹಿಂದಿಯಲ್ಲಿ  ಹಾಡಬಲ್ಲೆ ಎಂದು  ತೋರಿಸಿದರಂತೆ. ಹಿಂದುಸ್ಥಾನಿ ಸಂಗೀತವನ್ನು ಹಲವಾರು ಗುರುಗಳಿಂದ ಕಲಿತಿದ್ದಾರೆ.

    ನಮ್ಮ ದೇಶದ ಎಲ್ಲಾ ಭಾಗದಲ್ಲಿ  ಲತಾ ಅವರ ಅಭಿಮಾನಿಗಳಿದ್ದಾರೆ. .ಇಂದಿಗೂ ವಯಸ್ಸಾದವರೇ ಆಗಲಿ ಯುವಕರೇ ಆಗಲಿ  ಲತಾ ಹಾಡನ್ನು  ಕೇಳಿ ಸಂತೋಷಪಡುತ್ತಾರೆ. ನಮ್ಮ ದೇಶ ಒಂದೇ ಅಲ್ಲ ಪರದೇಶಗಳಲ್ಲಿರುವ ಭಾರತೀಯರನ್ನೂ ಭಾವನಾತ್ಮಕವಾಗಿ ಒಂದುಗೂಡಿಸುವುದರಲ್ಲಿ ಲತಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. 


    ಲಾಂಗ್ ಡ್ರೈವ್ ಹೋಗಬೇಕಾದರೆ ಮೊದಲು ಲತಾ ಹಾಡಿರುವ ಹಾಡುಗಳ ಪೆನ್ ಡ್ರೈವ್  ಅನ್ನು ತಮ್ಮ ಕಾರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಆಗ  ಎಲ್ಲರಿಗೂ ತಾಯಿನಾಡು ಭಾರತದೊಡನೆ ಸಂಪರ್ಕದಲ್ಲಿರುವೆವೇನೋ ಎಂಬಂತೆ  ಭಾಸವಾಗುತ್ತಿತ್ತಂತೆ. ಈಗ ಬಿಡಿ ಯಾವ ಹಾಡು ಬೇಕಾದರೂ ಆನ್ಲೈನ್ ನಲ್ಲಿ  ಸಿಗುತ್ತದೆ. ನನಗೆ ಈಗ  ಓ ಕೌನ್ ಥೀ ಚಿತ್ರದ ಲಗ್ ಜಾ ಗಲೆ ಹಾಡು ನೆನಪಿಗೆ ಬರುತ್ತಿದೆ. ಪ್ರಿಯಾಂಕ ಆ ಗೀತೆಯನ್ನು ಇಲ್ಲಿ ಗುಣ ಗುಣಸಿದ್ದಾರೆ.

    1962 ರಲ್ಲಿ ಭಾರತದೊಡನೆ ಚೀನಾ ಯುದ್ಧ ಮಾಡಿದ ಸಂದರ್ಭ. 1963ರ ಗಣರಾಜ್ಯೋತ್ಸವದಂದು ಲತಾಜಿ ನಮ್ಮ ಯೋಧರ ಬಲಿದಾನದ ಸ್ಮರಣಾರ್ಥ  ‘ಎ ಮೇರೆ ವತನ ಕೆ ಲೋಗೋ ಜ಼ರ  ಆಂಖೋ ಮೆ ಭರಲೋ ಪಾನಿ‘ ಎಂಬ ಹಾಡನ್ನು  ಹಾಡಿದರು.   ಆಗ ಅಲ್ಲಿ ಸೇರಿದ್ದ ಎಲ್ಲರ ಹಾಗೂ  ಪ್ರಧಾನಮಂತ್ರಿಗಳಾಗಿದ್ದ ನೆಹರೂ ಅವರ ಕಣ್ಣಲ್ಲಿ  ಸಹ ನೀರು ಬಂತಂತೆ.  ಈಗಲೂ ಆ ಹಾಡನ್ನು ಕೇಳಿದರೆ ಮೈ ಝುಮ್  ಎನ್ನುತ್ತದೆ. ಒಮ್ಮೆ ಕೇಳೋಣ ಬನ್ನಿ ಆ ಹಾಡಿನ ಎರಡು ಸಾಲುಗಳನ್ನು.

    ಆಲ್ಬರ್ಟ್ ಹಾಲ್ ಲಂಡನ್ನಲ್ಲಿ ಪ್ರಪ್ರಥಮ ಕನ್ಸರ್ಟ್ ಕೊಟ್ಟ ಶ್ರೇಯಸ್ಸು ಲತಾ ಮಂಗೇಶ್ವರ್ ಅವರ ಮುಡಿಗೇರಿದೆ. ಅಲ್ಲಿ ನೆಲೆಸಿದ್ದ 6000 ಪಾಕಿಸ್ತಾನಿಗಳು ಕನ್ಸರ್ಟ್ ಗೆ ಬಂದಿದ್ದರಂತೆ ! 1974ರಲ್ಲಿ ನಡೆದ ಈ ಉತ್ಸವಕ್ಕೆ ಕೆನಡಾ,ಅಮೇರಿಕಾ ಹಾಗೂ ಪ್ಯಾರಿಸ್ ನಿಂದ ಜನಗಳು ಬಂದಿದ್ದರಂತೆ. ಪ್ರಖ್ಯಾತಿ ಎಂದರೆ ಹೀಗೆ ಇರಬೇಕಲ್ಲವೇ?

    ಸಂಗೀತದಲ್ಲಿ ಮಾಡಿರುವ ಅದ್ವಿತೀಯ ಸೇವೆಗಾಗಿ ಭಾರತ ತನ್ನ  ಪ್ರಜೆಗಳಿಗೆ ಕೊಡುವ ಸರ್ವಶ್ರೇಷ್ಠ  ಭಾರತರತ್ನ  ಪ್ರಶಸ್ತಿಯನ್ನು ಲತಾಜಿ ಅವರಿಗೆ  2001ರಲ್ಲಿ ನಮ್ಮ ಘನ ಸರ್ಕಾರ ಕೊಟ್ಟು ಗೌರವಿಸಿದೆ. ಇದಕ್ಕೆ ಮೊದಲು ಎಂಎಸ್ ಸುಬ್ಬಲಕ್ಷ್ಮಿ ಯವರಿಗೆ 1998ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿತ್ತು.

    ಇವರ ಜೀವನ ಚರಿತ್ರೆಯನ್ನು ಹಲವಾರು ಲೇಖಕರು ಬರೆದಿದ್ದಾರೆ. ಮನೆಗೆ ಬರುವ ಅತಿಥಿಗಳನ್ನು ಬಹಳ ಆದರದಿಂದ ಸ್ವಾಗತಿಸುತ್ತಾರೆ.  ಇವರನ್ನು  ನೈಟಿಂಗೇಲ್ ಆಫ್ ಬಾಲಿವುಡ್ ಅಂತ ಸಹ ಕರೆಯುತ್ತಾರೆ. ಲತಾಜೀಯವರಿಗೆ ಸ್ವಲ್ಪವೂ ಹಮ್ಮು-ಬಿಮ್ಮುಗಳಿಲ್ಲ. ಯಾವಾಗಲೂ ಕಲಿಯುತ್ತಲೇ ಇರಬೇಕೆಂದು ಹೇಳುವ ಲತಾಜೀಯವರ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷ . ಸಂಗೀತ ನಿರ್ದೇಶಕರುಗಳು ಹೇಳುವ ಹಾಗೆ  ಭಾವನಾತ್ಮಕವಾಗಿ ಹಾಡುತ್ತಿದ್ದರು ಹಾಗೂ ಉಪಾಧ್ಯಾಯರು ಹೇಳಿದಂತೆ ಕಲಿಯುವ  ವಿದ್ಯಾರ್ಥಿನಿಯೂ  ಆಗುತ್ತಿದ್ದರಂತೆ. ಅವರ ಹಾಡುಗಳಲ್ಲಿ  ನಾನು  ಯಾವಾಗಲೂ ಗುನುಗುವ ಹಾಡು ಆಜ್ ಫಿರ್ ಜೀನೇ ಕಿ ತಮನ್ನಾ ಹೆ

    ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸ್ವತ:  ಹಾಡುಗಳ ನಿರ್ದೇಶನವನ್ನೂ ಮಾಡಿದ್ದಾರೆ.

    ಆಕೆಯ ಖ್ಯಾತಿ ಮುಗಿಲೆತ್ತರವಾದಾಗ ಎಲ್ಲರೂ ಸಂಗೀತ ಕೋಗಿಲೆಯ ಸಂಪರ್ಕವನ್ನು ಬಯಸುತ್ತಿದ್ದರು.1999ರಲ್ಲಿ ಪರ್ಫ್ಯೂಮ್ ಒಂದಕ್ಕೆ ಲತಾ ಪರ್ಫ್ಯೂಮ್ ಎಂದು ನಾಮಕರಣ ಮಾಡಿದರು.  ರಾಜ್ಯಸಭೆಯ ಮೆಂಬರ್ ಆಗಿ ನೇಮಕಗೊಂಡಿದ್ದರು. ಅನಾರೋಗ್ಯದ ಕಾರಣ  2005 ರಲ್ಲಿ ನಿವೃತ್ತಿ ಪಡೆದರು.ಪುಣೆಯಲ್ಲಿ ಅವರ ತಂದೆಯ ಹೆಸರಿನಲ್ಲಿ ದೀನನಾಥ ಮಂಗೇಶ್ಕರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್  ನಡೆಸುತ್ತಿದ್ದಾರೆ.

    ಇವರು ಸೋದರ  ಹೃದಯನಾಥ್ ರೊಡನೆ ಕ್ರಿಕೆಟ್ ಆಡುತ್ತಿದ್ದರಂತೆ. ಬಹುಶ: ಇವರ ಕ್ರಿಕೆಟ್ ಮೇಲಿನ ಅಭಿಮಾನಕ್ಕೆ ಪರೋಕ್ಷವಾಗಿ ಇದು ಕಾರಣವಿರಬಹುದು. ಸಚಿನ್ ತೆಂಡೂಲ್ಕರ್ ಅವರ ಮೇಲೆ ಇವರಿಗೆ ಮಗನಂತೆ ವಿಶ್ವಾಸ. 

    ಮಹಾನ್ ಗಾಯಕಿಗೆ ಹೃದಯ ತುಂಬಿದ ಶ್ರದ್ದಾಂಜಲಿ ಸಲ್ಲಿಸೋಣ.

    .

    ಇಲ್ಲಿರುವ ಹಾಡುಗಳನ್ನು ನಮ್ಮಓದುಗರಿಗಾಗಿ ಹಾಡಿದ್ದು ಪ್ರಿಯಾಂಕ ಪದಕಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿರುವ ಪ್ರಿಯಾಂಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ.

    .

    ಹಾಡು ಮುಗಿಸಿದ ಗಾನ ಕೋಗಿಲೆ

    MUMBAI FEB 6

    ಕೆಲ ದಿನಗಳಿಂದ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್(28 ಸೆಪ್ಟೆಂಬರ್ 1929- 6 ಫೆಬ್ರವರಿ2022) ಚಿಕಿತ್ಸೆ ಫಲಿಸದೆ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

    ಭಾರತದ ನೈಂಟಿಗೇಲ್ ಎಂದೇ ಕರೆಸಿಕೊಳ್ಳುತ್ತಿದ್ದ ಲತಾಜೀ 13 ನೇ ವಯಸ್ಸಿಗೆ ಹಾಡಲು ಆರಂಭಿಸಿದ್ದರು. ಇದುವರೆವಿಗೂ ಸುಮಾರು 50000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

    ಕನ್ನಡದಲ್ಲೂ ಹಾಡಿದ್ದ ಲತಾಜೀ

    1967ರಲ್ಲಿ ಬಿಡುಗಡೆಯಾದ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ.

    ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ತಾಯಿಯನ್ನು ‘ಮಾಯಿ,’ ಎಂದೇ ಎಲ್ಲರೂ ಕರೆಯುತ್ತಿದ್ದರು. ತಾಯಿಯ ತವರಿನ ಹೆಸರು ಸೇವಂತಾ. ದೀನಾನಾಥರದು ಎರಡನೆಯ ಮದುವೆ. ಮೊದಲ ಮದುವೆ, ‘ನರ್ಮದಾ’ ಜೊತೆ. ಆಕೆಯ ಮರಣದ ನಂತರ ತಂಗಿ ಶೇವಂತಾರ ಜೊತೆಗೆ ಮದುವೆಯಾಯಿತು. ಈಕೆಯ ಹೆಸರನ್ನು ‘ಶುದ್ಧಮತಿ’ ಎಂದು ಹೆಸರಿಟ್ಟರು. ‘ಬಲವಂತ್ ಸಂಗೀತ್ ಮಂಡಳಿ’ ಎಂಬ ಸಂಸ್ಥೆಯನ್ನು ದೀನಾನಾಥ್ ಅವರು ನಡೆಸುತ್ತಿದ್ದರು. ದೀನಾನಾಥ್ ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಕೆಲವು ಕಾರಣಗಳಿಂದ ಕಂಪೆನಿ ಮುಚ್ಚಿತು. ದಂಪತಿಗಳಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಗಂಡುಮಗ. ದೀನಾನಾಥ್ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಹೇಳುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಎಳೆಯ ವಯಸ್ಸಿನ ಲತಾ ತಿದ್ದುವುದನ್ನು ಗಮನಿಸಿದ ದೀನಾನಾಥ್ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದನ್ನು ಮನಗಂಡರು. ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತಪಾಠ ಪ್ರಾರಂಭಿಸಿದರು.

    ಲತಾ ಅವರ ಮೊದಲ ಹೆಸರು “ಹೇಮಾ” ಎಂದು. ಹೇಮಾಳ ಬಹುಮುಖಪ್ರತಿಭೆಯನ್ನು ತಂದೆ ಗುರುತಿಸಿ, ಒಮ್ಮೊಮ್ಮೆ ‘ಹೃದಯಾ’, ‘ಟಾಟಾಬಾಬಾ,’ ಎನ್ನುತ್ತಿದ್ದರು. “ಭಾವ್ ಬಂಧನ್” ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು. ತಾವು ತುಂಬಾ ತುಂಟತನ ಮಾಡುತ್ತಿದ್ದೆ ಎಂದು ಲತಾ ನೆನಪಿಸಿಕೊಂಡಿದ್ದಾರೆ. ಒಮ್ಮೆ ಮನೆಯವರು ಏನನ್ನೋ ತರಲು ಕಿರಾಣಿ ಅಂಗಡಿಗೆ ಕಳಿಸಿದರು. ಲತಾ ಹತ್ತಿರ ಒಂದು ಸವಕಲು ನಾಣ್ಯ ಇತ್ತು. ಅದನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ಅಂಗಡಿಯವನಿಗೆ “ಇಗೋ ನಿನ್ನ ದುಡ್ಡಿನ ಪೆಟ್ಟಿಗೆಯಲ್ಲಿ ನಾಣ್ಯ ಹಾಕುತ್ತಿದ್ದೇನೆ, ನನಗೆ ಪದಾರ್ಥ ಕೊಡು,” ಎಂದು ಅಂಗಡಿಯವನಿಗೆ ಟೋಪಿ ಹಾಕಿದರಂತೆ. ಮನೆಗೆ ಬಂದು ತಮ್ಮ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಾಗ ತಂದೆಯಿಂದ ಚೆನ್ನಾಗಿ ಬೈಸಿಕೊಂಡು ಮತ್ತೆ ಅಂಗಡಿಗೆ ಹೋಗಿ ಕ್ಷಮಾಪಣೆ ಕೇಳಬೇಕಾಯಿತಂತೆ.

    ಹಿಂದಿ ಚಿತ್ರರಂಗದ ಎಲ್ಲಾ ನಾಯಕಿಯರಿಗೂ ಹಾಡು

    ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ. ಐವತ್ತರ ದಶಕದಲ್ಲಿ ಮೇಲೇರಿದ ಅವರ ಕೀರ್ತಿ ಪತಾಕೆ ಕೆಳಕ್ಕೆ ಇಳಿಯಲೇ ಇಲ್ಲ. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ … ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು “ಲತಾ ದೀದಿ” ಎಂದೇ ಕರೆಯುತ್ತಾರೆ. ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ. ಆಶಾ ಮತ್ತು ಲತಾ, ಉಷಾ ಮತ್ತು ಲತಾ, ಮೀನಾ ಮತ್ತು ಲತಾ ಹಾಡಿರುವ ಕೆಲವು ಯುಗಳಗೀತೆಗಳೂ ಪ್ರಸಿದ್ಧವಾಗಿವೆ. ತಮ್ಮ ಹೃದಯನಾಥ್ ಮಂಗೇಷ್ಕರ್ ಸಂಗೀತ ನಿರ್ದೇಶನದಲ್ಲಿ ಲತಾ ಅನೇಕ ಗೀತೆಗಳನ್ನು ಹಾಡಿದ್ದಾರೆ – ಉದಾ. ಮೀರಾ ಭಜನೆಗಳು. ಲತಾ ಅವರು “ಲೇಕಿನ್” ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದರು.

    ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒಂದು ವಿಶೇಷಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು 1963 ಜನವರಿ 27ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. “ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ … ” ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ “ನೀನು ನನ್ನನ್ನು ಅಳಿಸಿಬಿಟ್ಟೆ,” ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು ನವದೆಹಲಿಯಲ್ಲಿ ಪ್ರತಿ ಜನವರಿ 26ರ ಸಮಾರಂಭದಲ್ಲಿ ಕೇಳಬಹುದು.

    ಆಕೆಯ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. “ಪುಲೆ ವೇಚಿತಾ”- ಲತಾರವರ ಆತ್ಮಚರಿತ್ರೆ.

    ಪ್ರಧಾನಿ ಸಂತಾಪ

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಲತಾಜೀ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    Republic Day parade 2022 :ಗಣರಾಜ್ಯೋತ್ಸವ ಪಥ ಸಂಚಲನ ಕರ್ನಾಟಕದ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ

    New Delhi Feb 4

    ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರರ್ದಶಿತವಾದ ಕರ್ನಾಟಕದ ಸ್ತಬ್ಧಚಿತ್ರ ಕರ್ನಾಟಕ ಕರಕುಶಲ ಕಲಾ ವೈಭವ ದ್ವಿತೀಯ ಬಹುಮಾನವನ್ನು ಗಳಿಸಿದೆ.

    ಕಾಶಿ ವಿಶ್ವನಾಥ ದೇವಾಲಯದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿದ್ದ ಉತ್ತರ ಪ್ರದೇಶ ಮೊದಲ ಬಹುಮಾನ ಪಡೆದಿದೆ. ಮೂರನೇ ಬಹುಮಾನ ಮೇಘಾಲಯದ ಪಾಲಾಗಿದೆ.

    ಪಥ ಸಂಚಲನದಲ್ಲಿ ನೌಕಪಡೆಯ ತಂಡ ಮೊದಲ ಸ್ಥಾನ ಪಡೆದಿದೆ. ಸಾರ್ವಜನಿಕರ ಮತದ ಆಧಾರದಲ್ಲಿ ನೀಡಲಾಗುವ popular choiceನಲ್ಲಿ ವಾಯು ಪಡೆ ತಂಡ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸ್ತಬ್ಧ ಚಿತ್ರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಗಳಿಸಿದೆ.

    Path-breaking genomics-based joint research :ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪತ್ತೆ

    BENGALURU FEB 4

    ಬೆಂಗಳೂರಿನಲ್ಲಿರವು ಸರ್ಕಾರದ ಐಬ್ಯಾಬ್ ಸಂಸ್ಥೆಯು ಎಚ್.ಸಿ.ಜಿ. ವೈದ್ಯತಜ್ಞರ ಸಹಯೋಗದಲ್ಲಿ ಮಹತ್ವದ ಸಂಶೋಧನೆ ನಡೆಸಿ ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳನ್ನು ಪತ್ತೆಹಚ್ಚಿದ್ದಾರೆ. ಇದರಿಂದ ಬಾಧಿತರು ಬದುಕುಳಿಯುವ ಸಾಧ್ಯತೆಯನ್ನು ಶೇ 90ರಷ್ಟು ನಿಖರತೆಯೊಂದಿಗೆ ಊಹಿಸುವ ಜೊತೆಗೆ ಪರಿಣಾಮಕಾರಿ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲಿದೆ.

    ವಿಶ್ವ ಕ್ಯಾನ್ಸರ್ ಜಾಗೃತಿ ದಿನವಾದ ಶುಕ್ರವಾರ ವಿಧಾನಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಜಿನೋಮಿಕ್ಸ್ (ವಂಶವಾಹಿನಿ ಅನುಕ್ರಮಣಿಕೆ ವಿಶ್ಲೇಷಣೆ) ಆಧಾರಿತವಾಗಿ ನಡೆದಿರುವ ಈ ಸಂಶೋಧನೆಯು ಬಾಯಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹೊಸ ಆಶಾಕಿರಣಗಳನ್ನು ಮೂಡಿಸಿದೆ ಎಂದರು.

    ಐಟಿ/ಬಿಟಿ ಇಲಾಖೆಯಿಂದ ಸ್ಥಾಪಿತವಾಗಿರುವ ‘ಐಬ್ಯಾಬ್’ನಲ್ಲಿರುವ (IBAB-ಇನ್ಸ್ ಟಿಟ್ಯೂಟ್ ಆಫ್ ಬಯೋಇನ್ಫರ್ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೋಟೆಕ್ನಾಲಜಿ- ಜೈವಿಕ ಚಹರೆಗಳು ಮತ್ತು ಆನ್ವಯಿಕ ಜೈವಿತ ತಂತ್ರಜ್ಞಾನ ಸಂಸ್ಥೆ) ಅತ್ಯಾಧುನಿಕ ಜೀನೋಮಿಕ್ಸ್ ವ್ಯವಸ್ಥೆ ಬಳಸಿ ನಡೆಸಿದ ಸಂಶೋಧನೆ ಇದಾಗಿದೆ. ಇದರ ಜೊತೆಗೆ ಸುಧಾರಿತ ಮಷೀನ್ ಲರ್ನಿಂಗ್ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಉಪಯೋಗಿಸಿಕೊಂಡು ಈ ಅಧ್ಯಯನ ನಡೆದಿದೆ ಎಂದು ಸಚಿವರು ವಿವರಿಸಿದರು.

    ನಮ್ಮ ದೇಶದಲ್ಲಿ ಬಾಯಿಯ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದ್ದರೂ ( ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40ರಷ್ಟು) ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡು ನಡೆಸಲಾಗಿರುವ ಮೊತ್ತಮೊದಲ ವಿಸ್ತೃತ ಅಧ್ಯಯನ ಇದಾಗಿದೆ. ಇದೇ ವೇಳೆ, ಈ ಅಧ್ಯಯನದ ದತ್ತಾಂಶಗಳನ್ನು ಪಾಶ್ಚಿಮಾತ್ಯ ವಂಶವಾಹಿ ಅಧ್ಯಯನಗಳ ಜೊತೆ ತುಲನೆ ಮಾಡಿ ವಿಶ್ಲೇಷಿಸಲಾಗಿದೆ. ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಸಂಶೋಧನೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿವೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಗೊಂಡಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

    ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪೈಕಿ 35 ರೂಪಾಂತರಗಳು ಆಂಕೋಜೀನ್ ಗಳಾದರೆ, 11 ಟ್ಯೂಮರ್ ಸಪ್ರೆಸರ್ ಗಳಾಗಿದ್ದು, 2 ಡಿಎನ್ಎ ದುರಸ್ತಿ ವಂಶವಾಹಿನಿಗಳಾಗಿವೆ ಎಂಬುದನ್ನು ಗುರುತಿಸಲಾಗಿದೆ. ಈ ಅಧ್ಯಯನದಲ್ಲಿ ಕ್ಯಾನ್ಸರ್ ಬಾಧೆಯಿಂದ ಬದುಕುಳಿಯುವ ಸಾಧ್ಯತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ವಂಶವಾಹಿನಿಗಳನ್ನು ಕೂಡ ಗುರುತಿಸಲಾಗಿದೆ ಎಂದರು.

    ಈ ಸಂಶೋಧನೆಯಲ್ಲಿ IRAK1 ವಂಶವಾಹಿನಿಯ ಹೊಸ ರೂಪಾಂತರವನ್ನು ಪತ್ತೆಹಚ್ಚಲಾಗಿದೆ. ಇದು ಪರಿಣಾಮಕಾರಿಯಾದ ನಿರ್ದಿಷ್ಟ ಜೀವಕೋಶ ಕೇಂದ್ರಿತ ಚಿಕಿತ್ಸೆಗೆ ಅನುವು ಮಾಡಿಕೊಡಲಿದೆ. ಇದಕ್ಕಾಗಿ ಔಷಧ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಆಲೋಚನೆಗಳು ನಡೆದಿವೆ. ಇದು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಕರ್ನಾಟಕ ರಾಜ್ಯದ ಮಹತ್ವದ ಕೊಡುಗೆಗೆ ಕಾರಣವಾಗುವ ಸಾಧ್ಯತೆಗಳಿವೆ. ಕ್ಯಾನ್ಸರ್ ವಂಶವಾಹಿನಿ ಅನುಕ್ರಮಣಿಕೆಗೆ ಕುರಿತಾದ ರಹಸ್ಯವನ್ನು ಬೇಧಿಸುವ ಮೂಲಕ ಜನರ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದರು.

    ಎಚ್.ಸಿ.ಜಿ. ಕ್ಯಾನ್ಸರ್ ಕೇಂದ್ರದ ಡೀನ್ ಡಾ.ವಿಶಾಲ್ ರಾವ್ ಅವರು ಮಾತನಾಡಿ, ಸರ್ಕಾರದ ನೆರವು ಇಲ್ಲದೆ ಕೇವಲ ಖಾಸಗಿ ಆಸ್ಪತ್ರೆಗಳು ಮಾತ್ರವೇ ಇಂತಹ ದೊಡ್ಡಮಟ್ಟದ ಸಂಶೋಧನೆಯನ್ನು ನಡೆಸಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರವು ಐಬ್ಯಾಬ್ ಮೂಲಕ ಚಿಕಿತ್ಸಕರು ಹಾಗೂ ಸಂಶೋಧಕರು ಒಂದೆಡೆ ಸೇರಿ ಅಧ್ಯಯನದಲ್ಲಿ ಪಾಲ್ಗೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರಿಂದ ಈ ಮಹತ್ವದ ಸಂಶೋಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

    ಇದುವರೆಗೆ ಬಾಯಿ ಕ್ಯಾನ್ಸರ್ ಗೆ ಎಷ್ಟೇ ಉತ್ತಮ ಚಿಕಿತ್ಸೆ ಕೊಟ್ಟರೂ ಶೇ 50ರಷ್ಟು ಪ್ರಕರಣಗಳಲ್ಲಿ ರೋಗ ಮರುಕಳಿಸುತ್ತಿತ್ತು. ಆದರೆ ಈ ಸಂಶೋಧನೆಯು ರೋಗ ಮರುಕಳಿಸಿದಂತೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಐಬ್ಯಾಬ್ ನ ಪ್ರೊಫೆಸರ್ ವಿಭಾ ಚೌಧರಿ ಹೇಳಿದರು.

    ಎಚ್.ಸಿ.ಜಿ.ಯ ಡಾ.ಆನಂದ್ ಸುಭಾಷ್, ವಂಶವಾಹಿನಿ ಅಧ್ಯಯನ ತಜ್ಞ ಡಾ.ಸತೀಶ್ ಕುಣಿಗಲ್, ಸಮಾಲೋಚಕ ಬಾಲಸುಬ್ರಮಣ್ಯಂ, ಡಾ.ಸಾಗರ್ , ಐಟಿ/ಬಿಟಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಡಾ.ಕೃಪಾಲಿನಿ ಮತ್ತಿತರರು ಹಾಜರಿದ್ದರು.

    error: Content is protected !!