25.1 C
Karnataka
Saturday, April 19, 2025
    Home Blog Page 7

    Indian Stock Market :ಲಾಭದ ನಗದೀಕರಣವೇ ಸೂಕ್ತ

    ಸಾಮಾನ್ಯವಾಗಿ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವವರ ಚಿಂತನೆ ಎಂದರೆ ಧೀರ್ಘಕಾಲೀನ ಹೂಡಿಕೆ.  ಹಿಂದೆ ಹೂಡಿಕೆ ಮಾಡಿದವರು ವಿವರಿಸುವ ಸಂಪತ್ತಿನ ಸೃಷ್ಠಿ ಬಗ್ಗೆ ಹೆಚ್ಚು ಪ್ರಭಾವಿತರಾಗಿ ಹೂಡಿಕೆ ಮುಂದಾಗುವುದು ಹೆಚ್ಚು.  ಇಲ್ಲಿ ಗಮನದಲ್ಲಿರಸಲೇಬೇಕಾದ ಅಂಶವೆಂದರೆ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತವಾಗಿಸಿಕೊಂಡು ಬೆಳೆಸುವ ಪ್ರಕ್ರಿಯೆ.  ಅಂದರೆ ಹೂಡಿಕೆ ಮಾಡ ಬೇಕೆಂದಿರುವ ಕಂಪನಿ ಬಗ್ಗೆ ಸವಿವರವಾದ  ಅಧ್ಯಯನ, ಮಾಹಿತಿ ಮುಂತಾದವುಗಳನ್ನು ಅರಿತು ನಿರ್ಧರಿಸುವುದು ಅತ್ಯಗತ್ಯ.   ಒಂದು ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡುವಾಗ ಸಾಮಾನ್ಯವಾಗಿ  E P S  ಅಂಶವನ್ನು ಪರಿಗಣಿಸಿ ನಿರ್ಧರಿಸುವುದು ಸಹಜ.  ಆದರೆ ಬದಲಾದ ಪರಿಸ್ಥಿತಿಯಲ್ಲಿ E P S ಎಂದರೆ ಕೇವಲ  Earning Per Share  ಒಂದೇ ಅಲ್ಲ Errosion Per Share  ಅಂಶವನ್ನೂ  ಸಹ  ಪರಿಶೀಲಿಸಿ  ನಿರ್ಧರಿಸಬೇಕಾಗಿದೆ.

    ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ಸದ್ಯ  ರೂ.282 ಲಕ್ಷ ಕೋಟಿ ದಾಟಿದೆ.  ಅಲ್ಲದೆ ನೋಂದಾಯಿತ ಹೂಡಿಕೆದಾರರ ಸಂಖ್ಯೆ ಅಪಾರವಾಗಿ ಬೆಳೆಯುತ್ತಿದೆ.  ಕಳೆದ ಕೆಲವು ತಿಂಗಳುಗಳಿಂದ ಷೇರುಪೇಟೆ ಆಸಕ್ತಿ ಬೆಳೆಸಿಕೊಂಡು  ಹೊಸದಾಗಿ ಪೇಟೆ ಪ್ರವೇಶಿಸುತ್ತಿರುವವರ ಸಂಖ್ಯೆ ತಿಂಗಳಿಗೆ ಸುಮಾರು ಎರಡು ಲಕ್ಷದಷ್ಠಿದೆ.  ಆದರೆ  ಈ ರೀತಿ ಹೆಚ್ಚುತ್ತಿರುವ ಹೂಡಿಕೆದಾರರ ಸಂಖ್ಯೆಗನುಗುಣವಾಗಿ ಲಭ್ಯವಿರುವ ಕಂಪನಿಗಳ ಸಂಖ್ಯೆ ಹೆಚ್ಚುತ್ತಿಲ್ಲ.  ಇದು ಒಂದು ರೀತಿ ಬೇಡಿಕೆಯಾಧಾರಿತ ಏರಿಕೆ ಹೆಚ್ಚಿಸುತ್ತಿದೆ.   

    ಹೂಡಿಕೆಯಾಧಾರಿತ ಚಟುವಟಿಕೆ ನಡೆಸುವವರಿಗೆ ಕೇವಲ ತಮಗೆ ಬೇಕಾದವರು, ಆಪ್ತರು, ಸ್ನೇಹಿತರು, ಯು ಟ್ಯೂಬ್‌, ಇನ್ಸ್ಟಾಗ್ರಾಂ, ಟೆಲಿಗ್ರಾಂ ನಲ್ಲಿ ನ ಮಾಹಿತಿ ಆಧರಿಸಿದರೆ ಸಾಲದು.  ದಿನ ನಿತ್ಯ, ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ವಾತಾವರಣವನ್ನು ಷೇರಿನ ಬೆಲೆಯನ್ನಾಧರಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳಿತು.  ವಿಶೇಷವಾಗಿ ಗಜಗಾತ್ರದ ವಹಿವಾಟುಗಳು ಮತ್ತು ಹಿತಾಸಕ್ತ ಚಟುವಟಿಕೆಗಳ ಬಗ್ಗೆ ಗಮನಹರಿಸಿ ತುಲನಾತ್ಮಕ ನಿರ್ಧಾರ ಅಗತ್ಯ.

    ಕಾಲ್ಗೇಟ್‌ ಪಾಲ್ಮೊಲಿವ್‌ 1978 ರಲ್ಲಿ ಪ್ರತಿ ಷೇರಿಗೆ ರೂ.15 ರಂತೆ ವಿತರಿಸಿ 2000 ಇಸವಿಯೊಳಗೆ  ಹೂಡಿಕೆಯನ್ನ ಸುಮಾರು 50 ಪಟ್ಟು ವೃದ್ಧಿಸುವಂತಹ ಸಾಧನೆ ದಾಖಲಿಸಿತು.

    ಇನ್ಫೋಸಿಸ್‌ ಕಂಪನಿ1993 ರಲ್ಲಿ ವಿತರಿಸಿದ 100 ಷೇರು ಇಂದಿಗೆ 55,000 ಗಳಿಗೂ ಹೆಚ್ಚುವಂತಹ ಸಾಧನೆ ತೋರಿತು. ಅಲ್ಲದೆ ಆ ಷೇರುದಾರರು, ಮಾರಾಟಮಾಡದೆ ಇದ್ದವರು,  ಪ್ರತಿ ವರ್ಷ ಸಧ್ಯ ಸುಮಾರು ರೂ.20 ಲಕ್ಷದಷ್ಟು ಲಾಭಾಂಶವನ್ನು ಪಡೆದುಕೊಳ್ಳುತ್ತಿದಾರೆ.   ಷೇರುಗಳೂ ವೃದ್ಧಿಸುತ್ತಿವೆ, ಷೇರಿನ ದರವೂ ಹೆಚ್ಚಿದೆ ಮತ್ತು ಲಾಭಾಂಶಗಳ ಮೂಲಕ ಷೇರುದಾರರನ್ನು ವಿಧೇಯ (LOYAL) ರನ್ನಾಗಿಸಿದೆ.

    ಆದರೆ ಪೇಟೆಗಳು, ಚಟುವಟಿಕೆದಾರರು, ವಿತ್ತೀಯ ಸಂಸ್ಥೆಗಳು, ವಿದೇಶೀ ವಿತ್ತೀಯ ಸಂಸ್ಠೆಗಳು ಬೆಳೆದಂತೆಲ್ಲಾ ಷೇರುಪೇಟೆಯ ಚಟುವಟಿಕೆ ಸಮೀಕರಣಗಳು, ಚಿಂತನೆಗಳು, ವಿಶ್ಲೇಷಣೆಗಳು ಬದಲಾಗುತ್ತಿವೆ.  ಹಾಗಾಗಿ ಷೇರಿನ ಬೆಲೆಗಳು ಅತಿಯಾದ ವೇಗದ ಚಲನೆ ಪ್ರದರ್ಶಿಸುತ್ತಿವೆ.  ವೇಗಕ್ಕನುಗುಣವಾಗಿ ಅಸ್ಥಿರತೆಗಳನ್ನೂ ಸಹ ಜೊತೆಗೂಡಿಸಿಕೊಂಡಿವೆ.

    ಕೆಲವು ವಿಸ್ಮಯಕಾರಿ ಅಂಶಗಳನ್ನು ಗಮನಿಸೋಣ:

    ಆಲ್‌ ಸ್ಟೋನ್‌ ಟೆಕ್ಸ್‌ ಟೈಲ್ಸ್‌ ( ಇಂಡಿಯಾ) ಲಿಮಿಟೆಡ್:‌  

    ಈ ಕಂಪನಿ  ಪ್ರತಿ ಷೇರಿಗೆ 9 ಷೇರು ಬೋನಸ್‌ ಆಗಿ ವಿತರಿಸುವುದರೊಂದಿಗೆ ಷೇರಿನ ಮುಖಬೆಲೆಯನ್ನು ಪ್ರಸ್ತುತ ರೂ.10 ರಿಂದ ರೂ.1 ಕ್ಕೆ ಸೀಳಲು ಡಿಸೆಂಬರ್‌ 14 ನ್ನು ನಿಗದಿತ ದಿನವನ್ನಾಗಿಸಿದೆ.  ಇದಕ್ಕಾಗಿ ಡಿಸೆಂಬರ್‌ 6 ರಂದು ವಿಶೇಷ ಸಾಮಾನ್ಯ ಸಭೆ ಕರೆದಿದೆ.

    ಈ ಕಂಪನಿಯು 1985 ರಲ್ಲಿ ಶಾಲಿನಿ ಹೋಲ್ಡಿಂಗ್ಸ್‌ ಲಿಮಿಟೆಡ್‌ ಹೆಸರಿನಲ್ಲಿ ಪ್ರಾರಂಭವಾಗಿತ್ತು.  2015 ರಲ್ಲಿ ತನ್ನ ಹೆಸರನ್ನು ಈಗಿನ ಹೆಸರಿಗೆ ಬದಲಿಸಿಕೊಂಡಿದೆ.   2020 ರಲ್ಲಿ ಈ ಕಂಪನಿಯು ಸ್ಟಾಕ್‌ ಎಕ್ಸ್‌ ಚೇಂಜ್‌ ನ ಲೀಸ್ಟಿಂಗ್‌ ಶುಲ್ಕವನ್ನು ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಷೇರನ್ನು ಟ್ರೇಡ್‌ ಟು ಟ್ರೇಡ್‌ ಸಮೂಹಕ್ಕೆ ವರ್ಗಾಯಿಸಿತ್ತು.

    ಕಳೆದ ಆಗಸ್ಟ್‌ 2022 ರ 24 ರಂದು ಷೇರಿನ ಬೆಲೆ ರೂ.15 ರಲ್ಲಿದ್ದು 18 ನೇ ನವೆಂಬರ್‌ 2022 ರಂದು ಷೇರಿನ ಬೆಲೆ ರೂ.300  ರ ವಾರ್ಷಿಕ ಗರಿಷ್ಟದ ದಾಖಲೆ ನಿರ್ಮಿಸಿದೆ.  ಈಗಲೂ ಟಿ ಗುಂಪಿನಲ್ಲಿ ವಹಿವಾಟಾಗುತ್ತಿರುವ ಈ ಷೇರಿನಲ್ಲಿ  ಕೆಲವು‌ ಖಾಸಗಿ ಉದ್ಯಮಗಳು ಹೂಡಿಕೆ ಮಾಡಿವೆ. 

    *  ಪಶ್ಚಿಮ್ ಫೈನಾನ್ಸ್‌ ಅಂಡ್‌ ಚಿಟ್‌ ಫಂಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸೆಪ್ಟೆಂಬರ್‌ 2022 ಅಂತ್ಯದಲ್ಲಿ 22.59% ರಷ್ಟು ಭಾಗಿತ್ವವನ್ನು ಹೊಂದಿತ್ತು.   ಅಕ್ಟೋಬರ್‌ 2022 ರಿಂದ 18 ನೇ ನವೆಂಬರ್‌ ವರೆಗೂ ಸುಮಾರು 7.27 ಲಕ್ಷ ಷೇರುಗಳನ್ನು ವಿವಿಧ ಬೆಲೆಗಳಲ್ಲಿ ಮಾರಾಟ ಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಂಡಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಮಾರ್ಚ್‌ ಅಂತ್ಯದಲ್ಲಿ ಈ ಸಂಸ್ಥೆಯು ಆಲ್‌ ಸ್ಟೋನ್‌ ಟೆಕ್ಸ್‌ ಟೈಲ್ಸ್‌ ( ಇಂಡಿಯಾ) ಲಿಮಿಟೆಡ್ ನಲ್ಲಿ  3,86,350 ಷೇರುಗಳನ್ನು  ಅಂದರೆ 3.12% ರ ಭಾಗಿತ್ವವನ್ನು ಹೊಂದಿತ್ತು.

    * ವಿಕ್ಟರಿ ಸಾಫ್ಟ್‌ ವೇರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು  ಸೆಪ್ಟೆಂಬರ್‌ 2022 ರ ಅಂತ್ಯದಲ್ಲಿ 20.31% ರ ಭಾಗಿತ್ವವನ್ನು ಹೊಂದಿತ್ತು.  ಅಕ್ಟೋಬರ್‌ 2022 ರಿಂದ 18 ನೇ ನವೆಂಬರ್‌ ವರೆಗೂ  9.44 ಲಕ್ಷ ಷೇರು ಮಾರಾಟಮಾಡಿಕೊಂಡು ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಾರೆ.

    * ಉತ್ಸವ್‌ ಸೆಕ್ಯುರಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಸೆಪ್ಟೆಂಬರ್‌ 2022 ರ ಅಂತ್ಯದಲ್ಲಿ ಶೇ.2.35% ರ ಭಾಗಿತ್ವ ಹೊಂದಿತ್ತು. ಅಂದರೆ 3 ಲಕ್ಷ ಷೇರುಗಳು ಅದರಲ್ಲಿ ಅಕ್ಟೋಬರ್‌ 2022 ರಿಂದ ಈಚೆಗೆ 2,39,900 ಷೇರಿಗಳನ್ನು ಮಾರಾಟಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಂಡಿದೆ.  ಸೋಜಿಗವೆಂದರೆ ಮಾರ್ಚ್‌ 2022 ರ ಅಂತ್ಯದ ವರ್ಷದಲ್ಲಿ ಆಲ್‌ ಸ್ಟೋನ್‌ ಟೆಕ್ಸ್‌ ಟೈಲ್ಸ್‌ ( ಇಂಡಿಯಾ) ಲಿಮಿಟೆಡ್ ಕಂಪನಿಯು ಉತ್ಸವ್‌ ಸೆಕ್ಯುರಿಟೀಸ್‌ ಪ್ರೈವೇಟ್‌ ಲಿಮಿಟೆಡ್‌ ನಿಂದ  ಪಡೆದ ಸಾಲ ರೂ.5.50 ಲಕ್ಷ ದಿಂದ ರೂ.13.73 ಲಕ್ಷ ಸಾಲ ಬೆಳೆದಿದೆ. 

    ವಿಶಾಲ್‌ ತಿಲೋಕ್‌ ಚಂದ್‌ ಕೊಥಾರಿ ಯವರು ಸೆಪ್ಟೆಂಬರ್‌ 2022 ರ ಅಂತ್ಯದಲ್ಲಿ ಶೇ.3.10% ರ ಭಾಗಿತ್ವ ಹೊಂದಿದ್ದರು.  ಅಂದರೆ 3,95,500 ಷೇರುಗಳು.  ಅದರಲ್ಲಿ ಅಕ್ಟೋಬರ್‌ 2022 ರಿಂದೀಚೆಗೆ 3 ಲಕ್ಷ ಷೇರುಗಳನ್ನು ಮಾರಾಟ ಮಾಡಿ ಪೇಟೆ ಒದಗಿಸಿದ ಅವಕಾಶಗಳ ಲಾಭ ಪಡೆದುಕೊಂಡಿದ್ದಾರೆ.

    ಹೀಗಿರುವಾಗ ಸಣ್ಣ ಹೂಡಿಕೆದಾರರು ಕೇವಲ ಬೋನಸ್‌ ಷೇರು ಮತ್ತು ಮುಖಬೆಲೆ ಸೀಳಿಕೆಗಳಿಂದ ಪ್ರೇರಿತರಾಗಿ  ಷೇರಿನ ಬೆಲೆ ಗರಿಷ್ಟದಲ್ಲಿರುವಾಗ ಹೂಡಿಕೆ ಮಾಡುವುದು ಎಷ್ಟರ ಮಟ್ಟಿಗೆ ಸುರಕ್ಷಿತ? ಪರ್ಯಾಯವಾಗಿ ಲಾಭದ ನಗದೀಕರಣವು ಸೂಕ್ತವಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    2025ರ ಜೂನ್‌ ಹೊತ್ತಿಗೆ 175 ಕಿ.ಮೀ. ಮೆಟ್ರೋ ಮಾರ್ಗ

    BENGALURU NOV 18

    ಮೆಟ್ರೋ ರೈಲು ವ್ಯವಸ್ಥೆಯು ಸುಗಮ ಸಂಚಾರವನ್ನು ಸಾಧ್ಯವಾಗಿಸುತ್ತಿದ್ದು, 2025ರ ಜೂನ್‌ ಹೊತ್ತಿಗೆ ‘ನಮ್ಮ ಮೆಟ್ರೋ’ ಜಾಲದಲ್ಲಿ 175 ಕಿ.ಮೀ. ಉದ್ದದ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ತಿಳಿಸಿದ್ದಾರೆ.
    ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಅವರು ಶುಕ್ರವಾರ ‘ಸಂಚಾರ ವ್ಯವಸ್ಥೆಯ ಭವಿಷ್ಯ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

    ನಮ್ಮ ಮೆಟ್ರೋದ 2 ಮತ್ತು 3ನೇ ಹಂತದ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದರೆ, ನಗರದಲ್ಲಿ 2041ರ ಹೊತ್ತಿಗೆ ಒಟ್ಟು 314 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಸಿದ್ಧವಾಗಲಿದೆ. ಸದ್ಯಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯ ಕಡೆಗೆ ಜನರನ್ನು ಕರೆತರುವುದೇ ದೊಡ್ಡ ಸವಾಲಾಗಿದೆ ಎಂದು ಅವರು ಪ್ರತಿಪಾದಿಸಿದರು.

    1990ರವರಗೂ ದೇಶದಲ್ಲಿ ನಗರ ಪ್ರದೇಶಗಳ ಕಡೆಗೆ ಗಮನವನ್ನೇ ಕೊಡುತ್ತಿರಲಿಲ್ಲ. ಹೀಗಾಗಿ ನಮ್ಮ ನಗರಾಭಿವೃದ್ಧಿ ಯೋಜನೆಗಳು ಬಹುಕಾಲ ವೈಜ್ಞಾನಿಕವಾಗಿರಲಿಲ್ಲ. ಈಗ ನವೋದ್ಯಮಗಳಿಂದ ಮೆಟ್ರೋ ವ್ಯವಸ್ಥೆಗೆ ಸಾಕಷ್ಟು ಅನುಕೂಲಗಳು ಸಿಗುತ್ತಿವೆ. ಹೀಗಾಗಿ ಜನರು ಮೆಟ್ರೋ ರೈಲುಗಳ ಮೂಲಕ ತಮ್ಮ ಕಾರ್ಯಸ್ಥಳಗಳನ್ನು ತಲುಪುವಂತೆ ಮಾಡಲು ಹಲವು ನವೋದ್ಯಮಗಳೊಂದಿಗೆ ಬಿಎಂಆರ್‍‌ಸಿಎಲ್‌ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.

    ಮೆಟ್ರೋ ನಿಲ್ದಾಣಗಳಲ್ಲೇ ಬಸ್‌ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವಂತೆ ಬಿಎಂಟಿಸಿ ಜತೆ ಮಾತುಕತೆ ಪ್ರಗತಿಯಲ್ಲಿದೆ. ಇದರಿಂದ ಆ ಸಂಸ್ಥೆಗೂ ಲಾಭವಾಗಲಿದೆ. ಇದರ ಜತೆಗೆ ಕಾರ್‍‌ ಮತ್ತು ಬೈಕ್‌ ಪೂಲಿಂಗ್‌ ವ್ಯವಸ್ಥೆಯನ್ನು ಉತ್ತೇಜಿಸಬೇಕು. ಅಲ್ಲದೆ, ಮೆಟ್ರೋ ನಿಲ್ದಾಣಗಳ ಒಳಗೆ ಮತ್ತು ಹೊರಗೆ ಸಾರ್ವಜನಿಕರಿಗೆ ಪ್ರತಿಯೊಂದೂ ಸಿಗುವಂತಿರಬೇಕು. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಯೋಚಿಸುತ್ತಿದೆ ಎಂದು ಪರ್ವೇಜ್‌ ನುಡಿದರು.

    ಅಂತರರಾಷ್ಟ್ರೀಯ ಸಾರಿಗೆ ಕೌನ್ಸಿಲ್‌ನ ಅಮಿತ್‌ ಭಟ್‌ ಮಾತನಾಡಿ, “ಪಾಶ್ಚಾತ್ಯ ಜಗತ್ತಿನಲ್ಲಿ ಶೇಕಡ 85ರಷ್ಟು ನಗರೀಕರಣವಾಗಿದ್ದು, ಭಾರತದಲ್ಲಿ ಈ ಪ್ರಮಾಣ ಶೇಕಡ 33ರಷ್ಟಿದೆ. ಆದರೆ ನಮ್ಮಲ್ಲಿ ಇನ್ನೂ ಶೇಕಡ 66ರಷ್ಟು ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಏಕೆಂದರೆ, ನಮ್ಮಲ್ಲಿ ಹೊಸದಾಗಿ ಹಲವು ನಗರಗಳು ತಲೆ ಎತ್ತುತ್ತಿವೆ” ಎಂದರು.
    ಸುಗಮ ಮತ್ತು ಅತ್ಯಾಧುನಿಕ ಸಾರಿಗೆ ಸೌಲಭ್ಯವನ್ನು ಒದಗಿಸುವಾಗ ಇಂಗಾಲದ ಉತ್ಪಾದನೆ ಇಲ್ಲದಂತೆ ನೋಡಿಕೊಳ್ಳುವುದು, ಎಲ್ಲರನ್ನೂ ಒಳಗೊಳ್ಳುವುದು ಮತ್ತು ಯಾವುದೇ ಅಪಘಾತಗಳಿಗೆ ಆಸ್ಪದವಿಲ್ಲದಂತೆ ಖಾತ್ರಿಪಡಿಸುವುದು ಬಹಳ ದೊಡ್ಡ ಸವಾಲುಗಳಾಗಿವೆ ಎಂದು ಅವರು ಪ್ರತಿಪಾದಿಸಿದರು.

    ಬಾಶ್‌ ಕಂಪನಿಯ ಉಪಾಧ್ಯಕ್ಷ ವಾದಿರಾಜ್‌ ಕೃಷ್ಣಮೂರ್ತಿ, ಚಲೋ ಕಂಪನಿಯ ಸಹ ಸಂಸ್ಥಾಪಕ ವಿನಾಯಕ್‌ ಭಾವ್ನಾನಿ ಅವರು ಕೂಡ ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.

    ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಪೆಷಲಿಸ್ಟ್ ಅಧಿಕಾರಿಗಳ ಹುದ್ದೆಗಳಿಗೆ ಅಧಿಸೂಚನೆ

    ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ(ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್‌ ಪರ್ಸೋನಲ್ ಸೆಲೆಕ್ಷನ್- ಐಬಿಪಿಎಸ್) ಸ್ಪೇಶಲಿಸ್ಟ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ (ಸಿಆರ್‌ಪಿ) ಅರ್ಜಿ ಆಹ್ವಾನಿಸಿದ್ದು, ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳು ಪಾಲ್ಗೊಳ್ಳುತ್ತಿವೆ.

    ಯಾವ್ಯಾವ ಹುದ್ದೆಗಳು?

    ಐಟಿ ಆಫೀಸರ್ -44

    ಅಗ್ರಿಕಲ್ಬರಲ್ ಫೀಲ್ಡ್ ಆಫೀಸರ್ -516

    ರಾಜ್ಭಾಷಾ ಅಧಿಕಾರಿ -25

    ಲಾ ಆಫೀಸರ್ -10

    ಎಚ್ಆರ್/ಪರ್ಸನಲ್ ಆಫೀಸರ್ – 15

    ಮಾರ್ಕೆಟಿಂಗ್ ಆಫೀಸರ್ -100

    ಯಾವ್ಯಾವ ಬ್ಯಾಂಕ್ಗಳಲ್ಲಿ ಹುದ್ದೆ?

    • ಬ್ಯಾಂಕ್ ಆಫ್ ಬರೋಡ
    • ಬ್ಯಾಂಕ್ ಆಫ್ ಮಹಾರಾಷ್ಟ್ರ,
    • ಬ್ಯಾಂಕ್ ಆಫ ಇಂಡಿಯಾ
    • ಕೆನರಾಬ್ಯಾಂಕ್
    • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
    • ಇಂಡಿಯನ್ ಬ್ಯಾಂಕ್
    • ಇಂಡಿಯನ್ ಒವರಸೀಸ್ ಬ್ಯಾಂಕ್
    • ಪಂಜಾಬ್ ನ್ಯಾಷನಲ್ ಬ್ಯಾಂಕ್
    • ಪಂಜಾಬ್ ಆ್ಯಂಡ್ ಸಿಂದ್ ಬ್ಯಾಂಕ್
    • ಯುಕೋ ಬ್ಯಾಂಕ್
    • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

    ಅರ್ಜಿ ಶುಲ್ಕ:

    ಸಾಮಾನ್ಯ, ಒಬಿಸಿ  ಹಾಗೂ ಇತರ ಅಭ್ಯರ್ಥಿಗಳಿಗೆ: 850 ರೂ.

    ಪ.ಜಾ, ಪ.ಪಂ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ,ಹಾಗೂ ಮಾಜಿ ಯೋಧರಿಗೆ 175 ರೂ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಸಲ್ಲಿಕೆ ವಿಧಾನ:

    ಆನ್ ಲೈನ್ ನಲ್ಲಿ ಮಾತ್ರ.

    ಪ್ರಮುಖ ದಿನಾಂಕಗಳು:

    ನವೆಂಬರ್ 1 ರಿಂದ  ನವೆಂಬರ್ 21, 2022 ರವರೆಗೆ.

    ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳೆಲ್ಲಿ:

    ಪೂರ್ವಭಾವಿ ಪರೀಕ್ಷೆ(ಪ್ರಿಲಿಮ್ಸ್)

    ಬೆಳಗಾವಿ, ಬೆಂಗಳೂರು, ಬೀದರ್, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

    ಮುಖ್ಯ ಪರೀಕ್ಷೆ:

    ಬೆಂಗಳೂರು ಮತ್ತು ಹುಬ್ಬಳ್ಳಿ

    ವಯೋಮಿತಿ:

    01.11.2022 ಕ್ಕೆ ಕನಿಷ್ಠ 20 ವರ್ಷ  ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 02.11.1992 ಕ್ಕಿಂತ ಮುಂಚಿತವಾಗಿ ಮತ್ತು 01.11.2002 ನಂತರ ಜನಿಸಿರಬಾರದು.

    ವಯೋಮಿತಿ ಸಡಿಲಿಕೆ:

    .ಜಾ, .ಪಂ ಅಭ್ಯರ್ಥಿಗಳು: 5 ವರ್ಷಗಳು

    ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು

    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ

    ಡಿಸೆಂಬರ್ 24 / 31,2022 ರಂದು.

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ

    ಜನೇವರಿ 29,2023.

    ಮೂರನೇ ಹಂತ:ಸಂದರ್ಶನ

    ಪೆಬ್ರವರಿಮಾರ್ಚ್ 2023.

    * ಪ್ರಾತಿನಿಧಿಕ ಹಂಚಿಕೆ: ಏಪ್ರಿಲ್ 2023

    ನೇಮಕಾತಿ ಹೇಗೆ?

    ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇರಲಿದೆ.

    ಆನ್‌ಲೈನ್‌ನಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್ ಮಾಡಲಾಗುವುದು. ಅವರು ಮುಖ್ಯ ಪರೀಕ್ಷೆಗೆ  ಹಾಜರಾಗಬೇಕು, ನಂತರ ಅಲ್ಲಿ ಪಡೆದ ಅಂಕೆಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನವಿದೆ. ಪರೀಕ್ಷೆಗಳು ಇಂಗ್ಲಿಷ್/ ಹಿಂದಿ ಭಾಷೆಯಲ್ಲಿರಲಿದೆ.ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.

    ಶೈಕ್ಷಣಿಕ ಅರ್ಹತೆಗಳೇನು?

    ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯ/ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.

    1.) ಐಟಿ ಆಫೀಸರ್ ಹುದ್ದೆಗೆ(ಸ್ಕೇಲ್-1): ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್/ ಇನ್ಫಾ‌ರ್ಮೇಷನ್‌ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್/ /ಎಲೆಕ್ಟ್ರಾನಿಕ್ಸ್ ಆ್ಯಂಡ್  ಟೆಲಿ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್  ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ ಸ್ಟ್ರುಮೆಂಟೇಷನ್‌ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಅಥವಾ ಟೆಕ್ನಾಲಜಿ ಪದವಿ ಅಥವಾ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟುಮೆಂಟೇಶನ್/ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಶನ್ ಟೆಕ್ನಾಲಜಿ/ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

    2.)ಅಗ್ನಿಕಲ್ಟರ್ರ್ ಫೀಲ್ಡ್ ಆಫೀಸರ್: (ಸ್ಕೇಲ್-1):ಕೃಷಿತೋಟಗಾರಿಕೆ / ಪಶುಸಂಗೋಪನೆ,/ ಪಶು ವಿಜ್ಞಾನ/ ಡೇರಿ ಸೈನ್ಸ್/ ಅಗ್ರಿಎಂಜಿನಿಯರಿಂಗ್  ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ, ಅಗ್ರಿ ಮಾರ್ಕೆಟಿಂಗ್ ಆ್ಯಂಡ್ ಕೋ ಆಪರೇಷನ್ ಕೋ ಆಪರೇಷನ್ ಆ್ಯಂಡ್ ಬ್ಯಾಂಕಿಂಗ್ / ಅಗ್ರೊ ಫಾರೆಸ್ಟ್ರಿಯಲ್ಲಿ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು.

    3.) ಲಾ ಆಫೀಸರ್ ಹುದ್ದೆಗೆ:(ಸ್ಕೇಲ್-1): ಎಲ್ ಎಲ್ ಬಿ ಪದವಿ ಪಡೆದಿರಬೇಕು ಮತ್ತು ಬಾರ್ ಕೌನ್ಸಿಲ್‌ನ ಸದಸ್ಯತ್ವ ಪಡೆದಿರಬೇಕು.

    4.) ರಾಜ್ಯ ಭಾಷಾ ಅಧಿಕಾರಿ ಹುದ್ದೆಗೆ:(ಸ್ಕೇಲ್-1): ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ – ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು.

    5.) ಎಚ್ ಆರ್ / ಪರ್ಸನಲ್ ಆಫೀಸರ್:(ಸ್ಕೇಲ್-1):

    ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್‌ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್ ಎಚ್‌ಆರ್/ ಎಚ್‌ಆರ್‌ಡಿ/ ಸೋಷಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರಥವಾ ಡಿಪ್ಲೊಮಾ ಮಾಡಿರಬೇಕು.

    6.) ಮಾರ್ಕೆಟಿಂಗ್ ಆಫೀಸರ್: (ಸ್ಕೇಲ್-1): ಪದವೀಧರರಾಗಿರಬೇಕು ಮತ್ತು ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್) ಎಂಬಿಎ (ಮಾರ್ಕೆಟಿಂಗ್)/ಪಿಜಿಡಿಬಿಎ ಮಾಡಿರಬೇಕು.

    ನೇಮಕ ಹೇಗೆ?

    ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ  40 ನಿಮಿಷಗಳಂತೆ  ಒಟ್ಟಾರೆ 120 ನಿಮಿಷಗಳು) 125 ಅಂಕಗಳಿಗೆ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಇಂಗ್ಲೀಷ್ ಲಾಂಗ್ವೇಜ್‌ ಗೆ 50, ಕ್ವಾಂಟಿಟೇಟಿವ್  ಅಪ್ಟಿಟ್ಯೂಡ್ ಗೆ 50 ಹಾಗೂ ರೀಸನಿಂಗ್ ಎಬಿಲಿಟಿಯ 50 ಪ್ರಶ್ನೆಗಳಿರಲಿವೆ.( ಇದು ರಾಜ್‌ಭಾಷಾ ಅಧಿಕಾರಿ ಹಾಗೂ ಲಾ ಆಫೀಸರ್ ಹುದ್ದೆಗಳಿಗೆ  ಹೊರತಾಗಿ.ಇವೆರಡೂ ಹುದ್ದೆಗಳಿಗೆ ಕ್ವಾಂಟಿಟೇಟಿವ್  ಅಪ್ಟಿಟ್ಯೂಡ್ ಪರೀಕ್ಷೆ ಬದಲಾಗಿ General Awareness with Special Reference to Banking Industry 50 ಪ್ರಶ್ನೆಗಳಿರಲಿವೆ.)

    ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.(ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ)

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು ಹಾಗೂ ಹುಬ್ಬಳ್ಳಿ ಯಲ್ಲಿ ಮಾತ್ರ ನಡೆಯಲಿದ್ದು, ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಲಿಖಿತ ಪರೀಕ್ಷೆ ನಡೆಯಲಿವೆ. ಮುಖ್ಯ ಪರೀಕ್ಷೆಯು ವೃತ್ತಿಪರ ಜ್ಞಾನ ಕ್ಕೆ ಸಂಭಂದಿಸಿದ್ದು 45 ನಿಮಿಷಗಳ ಕಾಲ ನಡೆಯಲಿದ್ದು, 60 ಪ್ರಶ್ನೆಗಳನ್ನು  60 ಅಂಕಗಳಿಗೆ ಕೇಳಲಾಗುತ್ತದೆ.(ರಾಜ ಭಾಷಾ ಅಧಿಕಾರಿಗಳ ಹುದ್ದೆಗಳಿಗೆ ಡಿಸ್ಕೃಪ್ಟಿವ್ ಟೆಸ್ಟ್ ಎರಡು ಹಂತಗಳಲ್ಲಿ ನಡೆಯಲಿದ್ದು  ವೃತ್ತಿಪರ ಜ್ಞಾನ ಕ್ಕೆ ಸಂಭಂದಿಸಿದ 45 ಪ್ರಶ್ನೆ ಒಬ್ಜೆಕ್ಟಿವ್ ಮಾದರಿಯಲ್ಲಿದ್ದು,ವ್ತತ್ತಿಪರ ಜ್ಞಾನ ಕ್ಕೆ ಸಂಬಂದಿಸಿದಂತೆ ಇನ್ನೊಂದು ಡಿಸ್ಕ್ರೆಪ್ಟಿವ್ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳಿರಲಿದ್ದು ಅವಧಿ ಎರಡೂ ಪರೀಕ್ಷೆಗೆ 30 ನಿಮಿಷಗಳಂತೆ ಒಟ್ಟಾರೆ ಒಂದು ಗಂಟೆಯ ಅವಧಿ ನೀಡಲಾಗಿದ್ದು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

    ಗಮನಿಸಿ: ಈ ಹಿಂದಿನಂತೆ ಇದ್ದ  ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಮಾಡಿದ್ದು ಈ ಸಲ ವೃತ್ತಿಪರ ಜ್ಞಾನ ದ ಪರೀಕ್ಷೆ ಬರೆಯಬೇಕು.(ಸ್ಪೇಶಲಿಸ್ಟ್ ಹುದ್ದೆಗಳಾಗಿ ರೋದರಿಂದ)

    ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು  ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.ಕನ್ನಡದಲ್ಲಿ ಪರೀಕ್ಷೆ ಇರುವುದಿಲ್ಲ.

    ಮುಖ್ಯ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ.

    ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಸಂದರ್ಶನ (100 ಅಂಕಗಳು)  ಬ್ಯಾಂಕ್ ನಡೆಸಲಿವೆ. ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿ ಕೊಂಡಿರುವ ಆದರೆ    (‘Non-Creamy layer’)’ಕೆನೆರಹಿತ ಪದರ’ ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. EWS ಎಂದು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸದಿದ್ದಲ್ಲಿ ಅಂತವರನ್ನು ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

    ಆಯ್ಕೆ ಪಟ್ಟಿ:

    ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ- II ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಮುಖ್ಯ ಪರೀಕ್ಷೆಯಲ್ಲಿ  ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಹಂತ-2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು (60 ಅಂಕಗಳನ್ನು 100 ಕ್ಕೆ ಪರಿವರ್ತನೆ ಮಾಡಿ) ಅದರ  80% ಅಂಕಗಳು ಮತ್ತು ಅಭ್ಯರ್ಥಿಗಳ ಹಂತ-3 ರಲ್ಲಿ ಪಡೆದ ಅಂಕಗಳನ್ನು (100 ಅಂಕಗಳಲ್ಲಿ)  ಅದರ 20% ಅಂಕಗಳನ್ನು ಸೇರಿಸಿ(100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ವೆಬ್ ಲಿಂಕ್: ಹಾಗೂ ಅಧಿಸೂಚನೆಗೆ:

    https://bit.ly/3frUh70 ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ www.ibps.in

    ಗಮನಿಸಿ:

    ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣವಾಗಿ ಅಧಿಸೂಚನೆಯನ್ನು ಓದಿಕೊಳ್ಳಬೇಕು. ನೇಮಕ ಸಂಬಂಧ ಎಲ್ಲಾ ಮಾಹಿತಿಯನ್ನು IBPS ತನ್ನ ವೆಬ್‌ಸೈಟ್‌ನಲ್ಲೇ ಪ್ರಕಟಿಸುತ್ತದೆ.

    ಕನಸು ಕಾಣೋದು ತಪ್ಪಲ್ಲ, ಕನಸಲ್ಲೇ ಇರೋದು ತಪ್ಪು; ಇತಿ ಮಿತಿ ಅರಿತು ಬದುಕಿದರೆ ಬಾಳು ಸುಂದರ


    ಜಾತಕದಲ್ಲಿನ ಮೂವತ್ತನಾಲ್ಕು ಗುಣಗಳು ಸೇರಿದರೂ ಒಂದೇ ವರ್ಷಕ್ಕೆ ಮುರಿದು ಬೀಳುವ ಮದುವೆಗಳು. ಪ್ರೀತಿಸಿ ಮದುವೆಯಾದರು ವರ್ಷದೊಪ್ಪತ್ತಿನಲ್ಲಿ ನಾನೆೊಂದು ತೀರ ನೀನೊಂದು ತೀರ ಎಂದು ಸಾಗುವ ಜೋಡಿಗಳು. ಇಂಥ ಘಟನೆಗಳೇ ಅಧಿಕವಾಗುತ್ತಿರುವ ಈ ದಿನಮಾನದಲ್ಲಿ ಸುದೀರ್ಘ ವೈವಾಹಿಕ ಜೀವನಗಳು ಅನೇಕರಿಗೆ ಸ್ಫೂರ್ತಿ ತರುವಂಥವು. ನಮ್ಮ ಅಂಕಣಕಾರ ಮತ್ತು ಚಿಂತಕ ಮಂಜುನಾಥ ಬೊಮ್ಮಘಟ್ಟ ಮೊನ್ನೆ ತಮ್ಮ ವೈವಾಹಿಕ ಜೀವನದ 26 ವಸಂತಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಇಷ್ಟು ವರ್ಷಗಳ ವೈವಾಹಿಕ ಜೀನನದ ನೆನಪುಗಳನ್ನು ಓದುಗರ ಮುಂದೆ ಇಲ್ಲಿ ತೆರೆದಿಟ್ಟಿದ್ದಾರೆ.


    ಇದು ಮೂಲಾ ನಕ್ಷತ್ರದ ಜಾತಕ. ನಿಂದು ಭರಣಿ ನಕ್ಷತ್ರ…ಇವೆರಡೂ ಕೂಡೋಕೆ ಸಾಧ್ಯವೇ ಇಲ್ಲ …ಈ ಹುಡುಗಿಯನ್ನು ಮದುವೆ ಆಗುವ ಆಸೆ ಇದ್ರೆ ಈಗಲೇ ತಲೆಯಿಂದ ಹೊರಗೆ ಹಾಕು ಅಂತ ಅಪ್ಪಣೆ ಮಾಡಿಬಿಟ್ರು ಅಪ್ಪನ ಬಾಲ್ಯ ಸ್ನೇಹಿತರೂ, ಹುಟ್ಟಿನಿಂದಲೇ ನನ್ನ ಜಾತಕ ಬರೆದವರು, ನೀನೇನೇ ಪ್ರಯತ್ನಿಸಿದರೂ ಡಾಕ್ಟರ್ ಆಗೋ ಯೋಗ ಇಲ್ಲ…ನೀನಾಗೋದೇ ಎಂಜಿನಿಯರ್ ಅಂತ ಹೇಳಿದ್ದ ನಮ್ಮೂರ ಹಿರೇಮಠದ ಗುರುಮೂರ್ತಿ ಸ್ವಾಮಿಗಳು!.

    ನಾನು ಅವರನ್ನ ಕರೆದದ್ದೇ ಚಿಕ್ಕಪ್ಪ ಅಂತ…ಅಪ್ಪನಿಗಿಂತ ಕೆಲವು ತಿಂಗಳಿಗೆ ಚಿಕ್ಕವರಿದ್ದ ಕಾರಣಕ್ಕೆ…ಅವರೂ ವೃತ್ತಿಯಿಂದ ಅಪ್ಪನ ಹಾಗೆ ಶಾಲಾ ಶಿಕ್ಷಕರು. ಪಂಚಾಂಗ ನೋಡೋದು, ಶುಭ ಕಾರ್ಯಗಳಿಗೆ ಮುಹೂರ್ತ ಇಡುವುದು, ಜಾತಕ ಬರೆಯುವುದು, ಮದುವೆಗೆ ಜಾತಕ ಪರಿಶೀಲಿಸುವುದು ಅವರ ಮನೆಯಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದ ವೃತ್ತಿಯನ್ನು ಇವರು ಮುಂದುವರೆಸಿಕೊಂಡು ಬಂದಿದ್ದರು.

    ಅಪ್ಪನಿಗಿಂತ ತುಸು ಹೆಚ್ಚೇ ನನ್ನ ಮದುವೆಗೆ ಉತ್ಸಾಹ ತೋರಿದ್ದವರು ಹೀಗೆಂದಾಗ ನನಗೆ ಸಿಟ್ಟು ಬಂದುಬಿಟ್ಟಿತ್ತು! ನಿನಗೆ ನನ್ನ ಮದುವೆ ಮಾಡೋ ಆಸೆ ಇದ್ದರೆ ಈ ಜಾತಕದ ಹುಡುಗಿಯನ್ನ ಮಾಡಿಸು, ಇಲ್ಲವಾದ್ರೆ ನಿನ್ನ,ಅಪ್ಪನ ಮಾತು ಮೀರಿ ನಾನು ಮದುವೆ ಆಗಬೇಕಾಗುತ್ತದೆ ಅಂದು ಬಿಟ್ಟೆ. ಅಪ್ಪನಿಗೆ ಜಾತಕದ ಮೇಲೆ ವಿಪರೀತ ನಂಬಿಕೆ. ಅಪ್ಪ ಇವರ ಒಪ್ಪಿಗೆಗೆ ನನ್ನ ಮದುವೆಗೆ ಅಂತ ಬರ್ತಿದ್ದ ಎಲ್ಲಾ ಹುಡುಗಿಯರ ಜಾತಕ ತೋರಿಸುತ್ತಿದ್ದರು. ಇವಳದ್ದು ಮೂಲಾ ನಕ್ಷತ್ರ ಅಂತ ಹೇಳಿಯೇ ನನ್ನ ಅತ್ತೆ ಜಾತಕ ಕೊಟ್ಟಿದ್ದರು. ಹಾಗಾಗಿ ಸೀದಾ ಹತ್ತಿರದ ರಾಮದುರ್ಗದಲ್ಲಿದ್ದ ಇವರ ಹತ್ತಿರ ಜಾತಕ ತೆಗೆದುಕೊಂಡು ಬಂದಿದ್ದೆ.

    ಬೇರೆ ಏನಾದ್ರು ಹೇಳು ಕೇಳ್ತೀನಿ…ನಿಮ್ಮಪ್ಪ ಇದೇ ಜಾತಕ ತಂದು ತೋರಿಸಿದ್ರೆ ನಾನು ಹೀಗೆಯೇ ಹೇಳುತ್ತೇನೆ…ಈ ವಿಷಯದಲ್ಲಿ ನಾನು ಇದುವರೆಗೂ ಯಾರಿಗೂ ಸುಳ್ಳು ಹೇಳಿಲ್ಲ…ಅದರಲ್ಲೂ ನಿನ್ನ ಅಪ್ಪನಿಗೆ ಸುಳ್ಳು ಹೇಳೋದು ಸಾಧ್ಯವೇ ಇಲ್ಲ…ಈ ಜಾತಕದ ಹುಡುಗಿಗೆ ಮಾವ ಇರದ ಮನೆ ಬೇಕು ಅಂದುಬಿಟ್ರು!

    ಒಂದು ಕ್ಷಣ ದಂಗಾದೆನಾದ್ರೂ ಹಠ ಬಿಡಲಿಲ್ಲ…ಎಲ್ಲದಕ್ಕೂ ಪರಿಹಾರ ಇರುತ್ತೆ ಅಂತಿರಲ್ಲ, ಇದಕ್ಕೆ ಪರಿಹಾರ ಹೇಳಿ…ನಾನು ಇವಳನ್ನೇ ಮದುವೆ ಆಗೋದು ಅಂದೆ. ಜಾತಕವೇ ಇಲ್ಲದಿದ್ದರೆ ಏನು ಮಾಡುತ್ತಿದ್ದಿರಿ ಅಂತ ಬಹಳ ವಾದ ಮಾಡಿದ ಮೇಲೆ, ಒಂದು ಕೆಲಸ ಮಾಡು, ಹುಡುಗಿ ಮನೆಯವರು ಹುಡುಗಿ ಜಾತಕ ಇಲ್ಲ ಅಂತಿದ್ದಾರೆ, ಹೆಸರಿನ ಮೇಲೆಯೇ ಮದುವೆ ನಿಶ್ಚಯಿಸೋಣ ಅಂತ ಹೇಳ್ತೀನಿ ಅಂದ್ರು. ಸರಿ ಅಂದೆ…ಆರಾಧನಾ ಅಂತ ಇದ್ದ ಇವಳ ಹೆಸರು ನನ್ನ ಮನೆಯಲ್ಲಿ ಮಾನಸ ಅಂತ ಆಯ್ತು!

    ಮದುವೆಯಾದ ಹೊಸ ಜೋಡಿಯನ್ನು ಕುಳ್ಳಿರಿಸಿ ತಿರುಪತಿಯ ವೆಂಕಟರಮಣನ ಸನ್ನಿಧಿಯಲ್ಲಿ ಕಲ್ಯಾಣೋತ್ಸವ ಸೇವೆಗೆ ನನ್ನ ಅತ್ತೆ ಏರ್ಪಾಟು ಮಾಡಿಸಿದ್ದರು. ಪ್ರಥಮವಾಗಿ ತಿರುಪತಿಗೆ ಭೇಟಿ ನೀಡಿದ್ದ ನನಗೆ ದರ್ಶನದ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲೋದು ಅಸಹನೀಯವಾಗಿ ಸಾಲಿನ ಮುಂದಿದ್ದ ನನ್ನವಳಿಗೆ ಇಷ್ಟೊಂದು ಬ್ಯುಸಿ ಇರೋ ದೇವರ ಅಪಾಯಿಂಟ್ಮೆಂಟ್ ಇನ್ಮೇಲೆ ತೊಗೋಬೇಡ ಅಂತ ನಿನ್ನ ಅಮ್ಮನಿಗೆ ಹೇಳು ಅಂತ ಹೇಳೋದನ್ನ ಕೇಳಿದ್ದ ನನ್ನ ಹಿಂದೆಯೇ ಇದ್ದ ಅತ್ತೆಗೆ ಸಿಟ್ಟು ಬಂದು ಬಿಟ್ಟಿತ್ತು! ಕಾಕತಾಳಿಯವೋ ಏನೋ ಮದುವೆ ಆಗಿ ಮೂರು ವರ್ಷ ನಮಗೆ ಮಕ್ಕಳಾಗಲಿಲ್ಲ. ನನ್ನ ಅತ್ತೆದು ಒಂದೇ ಒರಸೆ….ನಿನ್ನ ಗಂಡ ತಿರುಪತಿಯಲ್ಲಿ ದೇವರಿಗೆ ಅವಮಾನ ಮಾಡಿದ್ದಾನೆ, ಪ್ರಾಯಶ್ಚಿತ್ತಕ್ಕೆ, ಮತ್ತೆ ಬರ್ತೀನಿ ಅಂತ ಹರಕೆ ಹೊರ್ತೀನಿ, ಹೋಗಿ ಬರೋಣ…..ಹೆಂಡತಿಯೊಡಗಿನ ಸರಸದ ಮಾತಿಗೂ ಅವಮಾನದ ಮಾತಿಗೂ ಅರ್ಥ ಗೊತ್ತಿಲ್ಲದ ದೇವರ ಗೊಡವೆ ನನಗೆ ಬೇಡ ಅಂತ ನಾನು….

    ಒಂದಲ್ಲ ಎರಡು ಗಂಡು ಮಕ್ಕಳಾದರು ನಮಗೆ….ಅಪ್ಪ,ಅಮ್ಮ ನಮ್ಮ ಮದುವೆ ಆಗಿ 24 ವರ್ಷ ಬದುಕಿದ್ದರು….ಅತ್ತೆ ಕೋವಿಡ್ ಸಮಯದಲ್ಲಿ ಹೋದ್ರು, ಮಾವನಿಗೆ ಡಯಬೇಟಿಕ್…ಹಾಗಾಗಿ 2007ರಲ್ಲೇ ಹೋದ್ರು….

    ನಂದು ಇವಳದ್ದು ಬರೀ ಜಾತಕ ಅಲ್ಲ, ಏನೇನೂ ಇವತ್ತಿಗೂ ಹೊಂದಿಲ್ಲ! ಅವಳು ಶಾಂತಿಯ ಪ್ರತಿಮೆಯೇನೋ ಎಂಬಂತಹ ಹಸು….ನಾನು ರಾಕ್ಷಸ. ಅವಳು ಬಲು ಸಾಧ್ವಿ ಮತ್ತು ಅವಳ ಆಹಾರವೂ ಅಂತಹುದೇ…ಉಪ್ಪಿಲ್ಲ,ಖಾರ ಇಲ್ಲ….ಮೀನು,ಮಾಂಸ,ಮೊಟ್ಟೆ ಬಲು ದೂರ….ನನಗೋ ಇದೆಲ್ಲಾ ಇರಲೇಬೇಕು!

    ಇವಳ ಪೂಜೆ,ವ್ರತ, ಉಪವಾಸದ ಬಗ್ಗೆ ಬರೆದ್ರೆ ಅದೇ ಒಂದು ಕಥನ ಆಗುತ್ತೆ. ದಿನಕ್ಕೆ ಮೂರು ಗಂಟೆ ಪೂಜೆ ಮಾಡ್ತಿದ್ದ ನನ್ನ ಅಪ್ಪನೂ ಇಷ್ಟೊಂದು ಉಪವಾಸ ಒಳ್ಳೆಯದಲ್ಲಮ್ಮ ಅಂತಿದ್ರು….ನನಗಂತೂ ಹೇಳಿದ್ದನ್ನ ಹೇಳೋದು ಅಭ್ಯಾಸವೇ ಇಲ್ಲ….ಇವಳು ವ್ರತ ಮಾಡಿ ಉಪವಾಸ ಇದ್ದ ದಿನವೇ ನನಗೆ ಮಾಂಸ ಬೇಕು. ನನಗೆ ಬೇಕಾದ್ದನ್ನು ನನಗೆ ಮಾಡಿಕೊಟ್ಟು ತನ್ನ ಪೂಜೆ ವ್ರತ ಮಾಡಿಕೊಂಡಿದ್ದಾಳೆ….ಹಾಗಾಗಿ ಅವಳ ದಾರಿಗೆ ನಾನು,ನನ್ನ ದಾರಿಗೆ ಅವಳು ಎಂದೂ ಅಡ್ಡಿ ಆದದ್ದು ಇಲ್ಲ.

    ಇವತ್ತಿಗೂ ಅವಳ ಈಡೇರದ ಒಂದು ಆಸೆ ಇದೆ. ಅದೇನಂದ್ರೆ ಅವಳು ಬಾಯಿಬಿಟ್ಟು ಹೇಳದೇ, ನಾನೇ ಅವಳ ಮನಸ್ಸಲ್ಲಿದ್ದದ್ದು ಅರ್ಥಮಾಡಿಕೊಂಡು ವರ್ತಿಸಬೇಕು ಅನ್ನೋದು…ಅದು ಈ ಜನ್ಮದಲ್ಲಿ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಕಿವಿಹಿಂಡಿ, ಬೆನ್ನಿಗೆ ಗುದ್ದಿ ಹೇಳಿದ್ದು ತಿಳಿತಾ ಅಂತ ಕೇಳ್ತಿದ್ದ ಮೇಷ್ಟ್ರಗಳ ಶಿಷ್ಯರು ನಾವುಗಳು!

    ಮದುವೆ ಆಗೋಣ ಅಂತ ನಿಶ್ಚಯಿಸಿದ ದಿನದಿಂದ ನಾವಿಬ್ಬರೂ ಯಾವುದೇ ತರಹದ ಹುಸಿಗೌರವಗಳಿಗೆ ಮಣೆ ಹಾಕೋದನ್ನ ಇಬ್ಬರೂ ಸಮ್ಮತಿಸಿಲ್ಲ. ಎಷ್ಟಿರುತ್ತೋ ಅಷ್ಟರಲ್ಲೇ ನಮ್ಮೂರ ದೇವಸ್ಥಾನದಲ್ಲಿ ಮದುವೆ ಆದ ನಾವು ನಮ್ಮ ಹಿರಿಯರಿಗೂ ಹೊರೆ ಮಾಡಲಿಲ್ಲ. ಮೊದಲ ದಿನದಿಂದಲೇ ಅವಳ ಮನೆಯ ಸಮಸ್ಯೆ ನನ್ನದು ಅಂತಲೂ, ನನ್ನ ಮನೆಯ ಸಮಸ್ಯೆ ಅವಳದ್ದು ಅಂತಲೂ ಅಂದುಕೊಂಡು ಇವತ್ತಿಗೂ ಸ್ಪಂದಿಸುತ್ತಿದ್ದೇವೆ. ಅವಳ ಮನೆಯ ಎಲ್ಲಾ ಸಮಸ್ಯೆಗಳು ಮುಗಿದು ನಾನು ಫ್ರೀ ಆಗಿದ್ದೇನೆ, ಆದರೆ ನನ್ನ ಮನೆಯ ಸಮಸ್ಯೆಗಳಿಗೆ ಇಂದಿಗೂ ಅವಳೇ ಸ್ಪಂದಿಸುತ್ತಿದ್ದಾಳೆ, ಭಯಂಕರ ಕಿರಿಕ್ ಮನುಷ್ಯನಾದ ನನ್ನನ್ನೂ ಸಂಭಾಳಿಸಿಕೊಂಡು!

    ಸಲಹಾ ಸಿವಿಲ್ ಎಂಜಿನಿಯರ್ ವೃತ್ತಿಯನ್ನು ಬಳ್ಳಾರಿಯಲ್ಲಿ ಶುರು ಮಾಡಿದ್ದ ನಾನು ಅಷ್ಟು ಬೇಗ ಬೇರೆ ಊರುಗಳಿಗೆ ನನ್ನ ವೃತ್ತಿಯನ್ನು ಬದಲಾಯಿಸೋದು ಅಸಾಧ್ಯವಾದ ಮಾತಾಗಿತ್ತು ಆಗ. ಕಂಪ್ಯೂಟರ್ ಎಂಜಿನೀಯರ್ ಆಗಿದ್ದ ಇವಳಿಗೆ ನನಗಿಂತಲೂ ಹೆಚ್ಚಿನ ವೃತ್ತಿ ಅವಕಾಶಗಳು ಇದ್ದವು. ಆಗಿದ್ದಾಗ್ಯೂ ದುಡಿಮೆ,ಹಣದ ನೆಪಕ್ಕೆ ನಾವಿಬ್ಬರೂ ಒಂದೊಂದು ಊರಲ್ಲಿ ಇರೋದು ಬೇಡ ಅಂತ ಇಬ್ಬರೂ ತೀರ್ಮಾನಿಸಿದ್ದೆವು. ಬಳ್ಳಾರಿಯಲ್ಲಿಯೇ ಇರಲು ನಿರ್ಧರಿಸಿದ ಅವಳು ಉನ್ನತ ವ್ಯಾಸಂಗ ಮುಗಿಸಿ ಡಾಕ್ಟರೇಟ್ ಪಡೆದು ಸ್ಥಳೀಯ ಎಂಜಿನೀರಿಂಗ್ ಕಾಲೇಜ್ ನಲ್ಲಿ ಪ್ರಾಧ್ಯಾಪಕಳಾಗಿದ್ದಾಳೆ. ನಾನೇ ಮಾತು ಮೀರಿ ಊರೂರು ಅಲೆಯುತ್ತಿದ್ದೇನೆ.

    ಅವಳ ಮನೆಗೆ ಹೋಲಿಸಿದರೆ ನಾನು, ನನ್ನ ಮನೆಯವರು ಈ evolution process ಅಂತಾರಲ್ಲ, ಅದರಲ್ಲಿ ಹಿಂದೆ ಇದ್ದೇವೆ. ಹಾಗಾಗಿ ನನ್ನ ಇಬ್ಬರು ಗಂಡು ಮಕ್ಕಳು ಅವಳ ನೆರಳಲ್ಲೇ ಹೆಚ್ಚಾಗಿ ಬೆಳೆಯಲಿ ಅಂತ ನಾನೇ ನಿರ್ಧರಿಸಿದ್ದೇನೆ. ದಣಿದು ಬಂದು ಮಲಗಿದ್ದ ನನ್ನ ನಿದ್ದೆಗೆ ಭಂಗ ಆಗಬಾರದು ಅಂತ ಯಾವತ್ತು ನಡುರಾತ್ರಿಯಲ್ಲಿ ಆಳುತ್ತಿದ್ದ ನನ್ನ ಚಿಕ್ಕ ಮಕ್ಕಳನ್ನು ಬೇರೆ ಕೋಣೆಗೆ ಎತ್ತಿಕೊಂಡು ಹೋದಳೋ ಅವತ್ತೇ ನಿರ್ಧರಿಸಿದ್ದೆ, ನನ್ನ ಮಕ್ಕಳಿಗೆ ಇವಳ ನೆರಳೇ ಒಳ್ಳೆಯದು ಅಂತ!

    ಒಂದು ದಿನಕ್ಕೂ ನನ್ನನ್ನು ಯಾವುದಕ್ಕೂ ಪೀಡಿಸಿಲ್ಲ… ಒಡವೆ, ಸೀರೆ ಕೊಡಿಸು ಅಂತಾಗಲಿ, ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣ ಅಂತಾಗಲೀ ಅಂದವಳೇ ಅಲ್ಲ….ಅವಳೇ ದುಡಿದ ಹಣವನ್ನ ಯಾವುದಕ್ಕೇ ಖರ್ಚು ಮಾಡಬೇಕಾದರೂ ನನ್ನನ್ನ ಕೇಳ್ತಾಳೆ…ಹಣದಲ್ಲಿ ನನ್ನದು, ಅವಳದ್ದು ಅಂತ ಎಂದಿಗೂ ಬಂದಿಲ್ಲ….ಇಂದು ನಾವಿರುವ ಮನೆ,ಜೀವನವನ್ನ ಇಬ್ಬರೂ ಸೇರಿಯೇ ರೂಪಿಸಿಕೊಂಡಿರೋದು…ಇದರಲ್ಲಿ ಯಾರ ಹೆಚ್ಚುಗಾರಿಕೆಯೂ ಇಲ್ಲ…ಯಾಕಂದ್ರೆ ಇದು ನಮ್ಮಿಬ್ಬರ ಜೀವನ!

    ಎದೆ ನಡುಗಿಸುವಂಥಹ, ಇಲ್ಲಿ ಹೇಳಿಕೊಳ್ಳಲು ಆಗದಂಥಹ ಬರಸಿಡಿಲೊಂದು 2002 ರಲ್ಲಿ, ಮನೆ ಕಟ್ಟಿ ಸುಧಾರಿಸಿಕೊಳ್ಳುವಾಗ ಬಂದೆರಗಿತ್ತು….ನನ್ನಂತಹ ರಾಕ್ಷಸನೇ ಅಲುಗಾಡಿಬಿಟ್ಟಿದ್ದೆ…ಆದ್ರೆ ಶಾಂತ ಮೂರ್ತಿ ಅಂದುಕೊಂಡಿದ್ದ ಇವಳು ತೋರಿದ್ದ ಧೈರ್ಯಕ್ಕೆ, ನನ್ನ ಬೆನ್ನ ಹಿಂದೆ ನಿಂತ ಆಚಲತೆಗೆ, ಮನೆ ಮಗನನ್ನು ನೋಡಿಕೊಂಡ ಬಗೆಗೆ ಬೆರಗಾಗಿ ಹೋಗಿದ್ದೆ!

    ಎಲ್ಲರೂ ಹೇಳುವಂಥಹ ಹೊಂದಿಕೊಳ್ಳುವ ಯಾವ ವಿಷಯಗಳೂ ನಮ್ಮಿಬ್ಬರಲ್ಲಿ ಇಲ್ಲ ಅಂತ ಮಾತ್ರ ಖಡಾಖಂಡಿತವಾಗಿ ಹೇಳುತ್ತೇನೆ…ಆದರೂ ಸಂತೋಷದಿಂದ ಇಪ್ಪತ್ತಾರು ವರ್ಷಗಳನ್ನು ಬಂದ ಹಾಗೆ ಸ್ವೀಕರಿಸಿ ದ್ದೇವೆ. ನಮ್ಮಿಬ್ಬರ ಮಧ್ಯೆ ಅಹಂ ಇಲ್ಲ…ನನಗೆ ಸಿಟ್ಟು ಬಂದಾಗ ಒದರುತ್ತೇನೆ…ಅವಳಿಗೆ ಸಿಟ್ಟು ಬಂದಾಗ ಮೌನಿಯಾಗಿ ಬಿಡುತ್ತಾಳೆ…ಅವಳ ಮೌನ ನನ್ನ ಒದರುವಿಕೆ ಗಿಂತಲೂ strong ಅಂತ ಮಾತ್ರ ಹೇಳಬಲ್ಲೆ. ಹೊಂದಿಕೊಳ್ಳೋದು ನನ್ನ ಗುಣ ಅಲ್ಲ…ಆದ್ರೆ ಅವ್ಳಿಗೆ ಅದು ಹುಟ್ಟು ಗುಣ! ಕೆಲಸಕ್ಕೆ ಬಾರದ ವಿಷಯಗಳಿಗೆ ಇಬ್ಬರೂ ತಲೆ ಕೆಡಿಸಿಕೊಳ್ಳಲ್ಲ. ಬಹು ಮುಖ್ಯವಾದ ವಿಷಯ ಅಂದ್ರೆ ನಾವು ನಮಗೆ ಬದುಕುತ್ತಿದ್ದೇವೆ ಬಿಟ್ಟರೆ ಬೇರೆ ಯಾರಿಗೂ ಅಲ್ಲ. ಸ್ವಾರ್ಥಿಗಳು ಅಂತೀರಾ ನಮಗೆ ಏನೂ ಬೇಸರ ಇಲ್ಲ.

    ದೀಪಾವಳಿ ಆದ 3ನೇ ದಿನಕ್ಕೆ ನಮ್ಮ ಮದುವೆ ಆಗಿತ್ತು. ಮಧುಚಂದ್ರಕ್ಕೆ ಹೋಗುವ ಅಂತ 20 ಸಾವಿರ ಇಟ್ಟುಕೊಂಡಿದ್ದೆ. ಊರಲ್ಲಿಯ ಎಲ್ಲಾ ಅಂಗಡಿಯ ಪಟಾಕಿ, ಪಕ್ಕದೂರಿನ ದಾರೂ ದುಕಾನಿನ ಮಾಲು ನಮ್ಮ ಮೆರವಣಿಗೆಯ ಕುಣಿತಕ್ಕೆ ಖಾಲಿ ಆಗಿ 18 ಸಾವಿರ ಬಿಲ್ ತಂದಿದ್ದರು ನನ್ನ ಸ್ನೇಹಿತರು. ಹಾಗಾಗಿ ಇನ್ನೂ ನಮ್ಮ honey moon ಆಗಿಲ್ಲ! ಇದಕ್ಕಾಗಿ ಅವಳಾಗಲಿ, ನಾನಾಗಲಿ ಒಂದು ದಿನಕ್ಕೂ ಬೇಸರಿಸಿಲ್ಲ.

    ಮೊದಲ ದಿನದಿಂದಲೇ ಅವಳ ಮನೆಯ ಕಾಳಜಿ ನನಗೆ, ನನ್ನ ಮನೆಯ ಕಾಳಜಿ ಅವಳಿಗೆ ವಿನಿಮಯ ಮಾಡಿಕೊಂಡಿದ್ದರಿಂದ ಬಹುತೇಕ ಸಮಸ್ಯೆಗಳು ನಮ್ಮಿಬ್ಬರ ಮಧ್ಯೆ ಹುಟ್ಟುವ ಮೊದಲೇ ಸತ್ತು ಬಿಡುತ್ತಿದ್ದವು. ಬಂದ ಎಂತಹುದೇ ಕಷ್ಟಗಳನ್ನು ಇಬ್ಬರೇ ಹಂಚಿಕೊಡಿದ್ದೇವೆ ಬಿಟ್ಟರೆ ಅವಳ ಮನೆಯವರಿಗಾಗಲಿ, ನನ್ನ ಮನೆಯವರಿಗಾಗಲೀ ಹೊರೆ ಮಾಡಲಿಲ್ಲ. ಕಷ್ಟಗಳೇ ನಮ್ಮನ್ನು ಹತ್ತಿರ ತಂದವೇನೋ?!

    ಅವಳನ್ನ ನಾನಾಗಲೀ, ನನ್ನನ್ನ ಅವಳಾಗಲೀ ಎಂದೂ ಬದಲಿಸಲು ಪ್ರಯತ್ನಿಸಿಲ್ಲ…ಅದು ಅಸಿಂಧು ಅಂತಾನೇ ಇಬ್ಬರೂ ಇವತ್ತಿನ ತನಕ ಭಾವಿಸಿದ್ದೇವೆ. ಬದಲಿಗೆ ಇರುವ ಹಾಗೇ ಸ್ವೀಕರಿಸಿದರೆ ರಗಳೆಯೇ ಇರಲ್ಲ. ಎಂಜಿನಿಯರ್ ಸೊಸೆ ಹೇಗಿರ್ತಾಳೋ ಅನ್ನೋ ಅಪ್ಪನ ಆತಂಕ ಅರಿತ ನಾನು ಇವಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೆ ಆಗಿ ಇರು ಊರಲ್ಲಿ ಅಂತ ಹೇಳಿದ್ದನ್ನು ಅಕ್ಷರಶಃ ಇಂದಿಗೂ ಪಾಲಿಸಿಬಿಟ್ಟಿದ್ದಾಳೆ. ಅವಳ ತವರಲ್ಲಿ ನನ್ನ maintain ಮಾಡೋದು, ನನ್ನ ಮನೆಯಲ್ಲಿ ಅವಳನ್ನ maintain ಮಾಡೋದು ಅಂತ ಮೊದಲಿನಿಂದಲೂ ಇಲ್ಲ…ಒಬ್ಬರಿಗೊಬ್ಬರು no maintenance!!

    ಮನೆ,ಸಂಸಾರ, ಮಕ್ಕಳು, ಕುಟುಂಬ ಅಂತ ಬಂದಾಗ ನನ್ನ ಪಾತ್ರ ಗೌಣ, ದೊಡ್ಡ ಮಗನಾಗಿದ್ದರೂ! ಎಲ್ಲವನ್ನೂ ಅವಳೇ ನಿಭಾಯಿಸಿದ್ದಾಳೆ. ಇಪ್ಪತ್ತಾರು ವರ್ಷ ಮುಗಿಸುತ್ತಿರುವ ಈ ಸಂದರ್ಭದಲ್ಲಿ ಅವಳಿಗೆ ನನ್ನ ಕೃತಜ್ಞತೆಯನ್ನು ಈ ಅಕ್ಷರಗಳ ಮೂಲಕ ಸಲ್ಲಿಸುವ ಮನಸ್ಸಾಯ್ತು….ನಿಮ್ಮಲ್ಲಿ ಹಂಚಿಕೊಂಡೆ. ಕನಸು ಕಾಣೋದು ತಪ್ಪಲ್ಲ, ಕನಸಲ್ಲೇ ಇರೋದು ತಪ್ಪು. ಇತಿ ಮಿತಿ ಅರಿತು ಬದುಕಿದರೆ ಬಾಳು ನಿಜವಾಗಲೂ ಸುಂದರವಾಗುತ್ತದೆ….ಒಟ್ಟಾರೆ ನನ್ನನ್ನು ಮಹಾರಾಜನ ಹಾಗೆ ನೋಡಿಕೊಂಡು ತಾನು ಮಹಾರಾಣಿಯಾಗಿದ್ದಾಳೆ ನನ್ನ ಹೆಂಡತಿ!!

    ತೆಲುಗು ಸೂಪರ್ ಸ್ಟಾರ್ ನಟ ಕೃಷ್ಣ ಇನ್ನಿಲ್ಲ

    HYDERABAD NOV 15

    ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಕೃಷ್ಣ ಘಟ್ಟಮನೇನಿ (80) ಅವರು ಮಂಗಳವಾರ ವಿಧಿವಶರಾಗಿದ್ದಾರೆ.

    ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ನಟ ಕೃಷ್ಣ ಅವರನ್ನು ನಿನ್ನೆ ಹೈದರಾಬಾದ್’ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4 ಗಂಟೆಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

    ಕೃಷ್ಣ ತೆಲುಗು ಸ್ಟಾರ್‌ ನಟ ಮಹೇಶ್‌ ಬಾಬು ಅವರ ತಂದೆ ಹಾಗೂ ಟಿಡಿಪಿ ನಾಯಕ ಜಯ್‌ ಗಲ್ಲಾ ಅವರ ಮಾವ ಕೂಡ ಆಗಿದ್ದಾರೆ. 1980ರ ದಶಕದಲ್ಲಿ ಅವರು ಕಾಂಗ್ರೆಸ್‌ ಪಕ್ಷ ಸೇರಿ ಸಂಸದರು ಆಗಿದ್ದರು.

    1965ರಿಂದ ನಟನೆ ಆರಂಭಿಸಿದ್ದ ಕೃಷ್ಣ ಅವರು, ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್​ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.

    ಸೆಪ್ಟೆಂಬರ್​ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್​ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.

    Milk Price:ಹಾಲಿನ ದರ ಪರಿಷ್ಕರಣೆ: ನ. 20 ರ ನಂತರ ತೀರ್ಮಾನ – ಸಿಎಂ ಬೊಮ್ಮಾಯಿ

    ಕಲಬುರಗಿ (ಸೇಡಂ) ನವೆಂಬರ್ 14:
    ಹಾಲಿನ ದರ ಏರಿಕೆ ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

    ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸುತ್ತಾ, ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು

    Statue of Prosperity: ಆಕರ್ಷಕ ಪ್ರವಾಸಿ ತಾಣವಾಗುತ್ತಿರುವ ಕೆಂಪೇಗೌಡರ ಪ್ರತಿಮೆ

    BENGALURU NOV 14

    ಉದ್ಘಾಟನೆಯಾದ ಬೆನ್ನಲ್ಲೇ ಆಕರ್ಷಕ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ವೀಕ್ಷಿಸಲು ಹೆಚ್ಚಿನ ಜನರು ಬರುತ್ತಿದ್ದು ಅವರಿಗೆ ಸೂಕ್ತ‌ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಖುದ್ದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್ ದೀಪ್ ಇದ್ದರು.

    ಸದ್ಯಕ್ಕೆ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಐಓಸಿ ಪೆಟ್ರೋಲ್ ಬಂಕ್ ಕಡೆಯಿಂದ ಪ್ರವಾಸಿಗರು ಪ್ರತಿಮೆಯನ್ನು ತಲುಪಿ ವೀಕ್ಷಿಸಲು ಅನುಕೂಲ ಮಾಡಿಕೊಡಲು ಸಚಿವರು ಸೂಚಿಸಿದರು.

    ಇದರ ಜೊತೆಗೆ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಗರಿಷ್ಠ 80 ವಾಹನಗಳಿಗೆ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗುವುದು. ಈ ಅನುಕೂಲವು ಒಂದು ವಾರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಮೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳು ಗರಿಷ್ಠ ಅರ್ಧ ಗಂಟೆ ನಿಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಕಳೆದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ 108 ಅಡಿ ಎತ್ತರದ ಈ ಕಂಚಿನ ಪ್ರತಿಮೆ ಉದ್ಘಾಟಿಸಿದ ನಂತರ ಮಧ್ಯರಾತ್ರಿ ಒಂದು ಗಂಟೆಯಾದರೂ ಸಹಸ್ರಾರು ಆಸಕ್ತರು ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ. ಬಂದವರಿಗೆ ನಿರಾಸೆ ಆಗಬಾರದು ಎನ್ನುವುದು ಸರಕಾರದ ಬಯಕೆಯಾಗಿದೆ. ಪ್ರತಿಮೆಯು ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಲು ರಾತ್ರಿ ವೇಳೆ ಬೆಳಕಿನ ಅಲಂಕಾರಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

    ಥೀಮ್ ಪಾರ್ಕ್ ಕಾಮಗಾರಿ ಮುಗಿದ ಮೇಲೆ ಪ್ರತಿಮೆ ವೀಕ್ಷಣೆಗೆ ಮತ್ತಷ್ಟು ವ್ಯವಸ್ಥಿತ ಸೌಲಭ್ಯ ಮಾಡಲಾಗುವುದು. ಅಲ್ಲಿಯವರೆಗೆ ಇದು ತಾತ್ಕಾಲಿಕ ವ್ಯವಸ್ಥೆ ಆಗಿರುತ್ತದೆ. ಪ್ರತಿಮೆ ವೀಕ್ಷಣೆ ಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಅವರು ನುಡಿದರು.

    ಅಂಕೆಗಳ  ಅಂಕೆಯನ್ನು ಮೀರಿಸೋಣ

    ಸುಮಾ ವೀಣಾ

    ಮಗುವನ್ನು ಬುದ್ಧಿವಂತ ಎಂದು ತೀರ್ಮಾನಿಸುವ ಮಾನದಂಡ  ಅಂಕಗಳು.  ಮಕ್ಕಳನ್ನು ಅಂಕಗಳು ಅನ್ನುವ ಅಂಕುಶವನ್ನು ಒಡ್ಡಿ ಬಂಧಿಸುವ ಕ್ರಮ  ಸರಿಯೇ ಎನ್ನುವುದೊಂದು ಪ್ರಶ್ನೆ. ಅದಕ್ಕೆ ಗ್ರೇಡ್ ಹಾಕುವ ಪದ್ಧತಿ ಅಲ್ಲಿಯೂ  A+,A++ A1,A2  ಇತ್ಯಾದಿಗಳು ಬಂದಿವೆ.ಪ್ರಾಚೀನ ಗುರುಕುಲ ಪದ್ಧತಿ  ಮೂಲಕ ಗುರುತಿಸಿಕೊಂಡ ನಮ್ಮ ದೇಶದಲ್ಲಿ  ಈ ಮಟ್ಟಿಗಿನ ಅಂಕೆಗಳ ಸವಾಲು ಬೇಕೇ?ಒಂದು ಕಾಲದಲ್ಲಿ ಅಂಕಗಳು ಎಷ್ಟು ಬಂದಿವೆ ಎನ್ನುತ್ತಿದ್ದ ಕಾಲ ಈಗ ಅಂಕಗಳು ಎಲ್ಲಿ  ಕಳೆದು ಹೋಗಿವೆ ಅನ್ನುವ  ಭಾವವಿದೆ.

    ತಕ್ಷಶಿಕ, ನಲಂದ ವಿಶ್ವ ವಿದ್ಯಾಲಯಗಳು  ಇದ್ದ ದೇಶ ನಮ್ಮದು. ನಮ್ಮ  ಗುರುಕುಲಗಳು  ಅಂಕಗಳ ಅಂಕೆಯನ್ನು ಎಂದಿಗೂ ಹಾಕೊಕೊಂಡಿದ್ದಿಲ್ಲ. ವಿದ್ಯಾರ್ಥಿ ಕಲಿಯುವವರೆಗೆ ಕಲಿಸುತ್ತಿದ್ದುರು  ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಸ್ಪಂದಿಸುತ್ತಿದ್ದರು.  ಮಕ್ಕಳಿಗೆ ಬೌದ್ಧಿಕ ಒತ್ತಡವನ್ನು ಪಾಲಕರು ಗುರುಗಳಾದಿಯಾಗಿ ಹೇರುವ ಮನೋಭಾವ ಅತ್ಯಂತ ಅಪಾಯಕಾರಿ ಅನ್ನಿಸುತ್ತದೆ .ಅಂಕಗಳು ಮುಖ್ಯ ನೀವು ಕಲಿಸುವ ವಿಷಯದಲ್ಲಿ ಎಷ್ಟು ಮಕ್ಕಳಿಗೆ ಪೂರ್ಣಾಂಕಗಳು ಬಂದಿವೆ ಎಂದು ಕೇಳಿದಾಗ  ಶಿಕ್ಷಕರು ಅದೇ ಕಡೆಗೆ ವಾಲುತ್ತಾರೆ. ಅಂಕಗಳನ್ನು ಉತ್ತರ ಬರೆಯುವ ಕ್ರಮಕ್ಕನುಗುಣವಗಿ ವಿಭಾಗಿಸಿಕೊಂಡಂತೆ  ಮಕ್ಕಳ ಮನಸ್ಸನ್ನು    ಭಾಗಗಳನ್ನಾಗಿ ಮಾಡಲು ಸಾಧ್ಯವಿಲ್ಲ.

    ಭಾಷಾವಿಷಯಗಳಿಗೂ ಪೂರ್ಣಾಂಕ ಕೊಡುವ  ಈ ಕಾಲ  ಇದು ಎಷ್ಟು ಸಮಂಜಸ  ಅನ್ನಿಸುತ್ತದೆ.ಪಠ್ಯ ಕ್ರಮವೇ ಬಂದಿರುವುದಿಲ್ಲ  ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್ ಕೊಡಿ ಎನ್ನುವ ಮಕ್ಕಳು ಇದ್ದಾರೆ.  ಕಲಿಕೆ ಎನ್ನುವುದು ಸಹಜವಾಗಿರಬೇಕು ಅಂಕಗಳ ಶಂಕೆಯಲ್ಲಿಯೇ ಕಳೆದು ಹೋಗುವ ವಿದ್ಯಾರ್ಥಿ ಪೀಳಿಗೆ ಇಂದಿನ ದಿನಮಾನದ್ದು.

    ಹರಿಯುವ ನೀರಿಗೆ   ದಾರಿ ಹೇಳಿಕೊಡಬೇಕಿಲ್ಲ ಹಾಗೆ ಹರಿಯುವುದಕ್ಕೆ ಅವಕಾಶ ಕೊಡಬೇಕು ಅಷ್ಟೇ… , ಹಾಗೆ ಮಕ್ಕಳನ್ನು ಕಲಿಕೆಗೆ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು.  ಕಲಿಕೆಗೆ ಪ್ರಾಯೋಗಿಕ ಹಿನ್ನೆಲೆ ಬೇಕು  ಅನುಭವ ಜನ್ಯ ಪಾಠ ಬೇಕು. ಪೋಷಕರು   ಬರಿಸಿದ ಶಾಲಾ ಶುಲ್ಕವನ್ನೆ ಬಂಡವಾಳ ಎಂದು ತಿಳಿದು  ಅದಕ್ಕೆ ಅಂಕಗಳು ಉತ್ಪತ್ತಿ ಎಂದಾಗಬಾರದು.   ಹೀಗೆ ಅಂಕಗಳ ಮೀತಿ ಹೇರುವುದರಿಂದ  ಮಕ್ಕಳು ಬೌದ್ಧಿಕ ದಾಸ್ಯಕ್ಕೆ ಒಳಗಾಗುತ್ತಾರೆ. ಸ್ವತಂತ್ರವಾಗಿ ಆಲೋಚಿಸಲು ಬಿಡಲಾಗದ ಅಂಕಗಳಲ್ಲೂ ಗ್ರೇಸ್ ಕೃಪಾಂಕ , ಧನಾತ್ಮಕ  ಋಣಾತ್ಮಕ ಅಂಕಗಳು  ಎನ್ನುವ ಪರಿಪ್ರೇಕ್ಷಗಳು  ಮಕ್ಕಳ ಮನೋಸಂಚನೆಗೆ  ಕಾರಣವಾಗಿವೆ. ಅಂಕಗಳ ಗಳಿಕೆ ಅತೀ ಆತ್ಮವಿಶ್ವಾಸಿಗಳನ್ನಾಗಿಸಬಹುದು ಇದು ಮಕ್ಕಳ ಬೆಳವಣಿಗೆಗೆ ಮಾರಕ.

     ಅಂಕ ಅನ್ನುವುದು ಅಖಾಡ ಅನ್ನುವ  ಹಾಗಾಗಿದೆ. .ನೂರು ಅಂಕಗಳಿಗೆ ಪರೀಕ್ಷೆ  ಬರೆಯುವುದಾದರೂ ಪ್ರಶ್ನೆ ಪತ್ರಿಕೆ 155 ಅಂಕಗಳಿಗೆ ರಚನೆಯಾಗಿರುತ್ತದೆ. ಅಂಕಗಳ ಅಣಕವಾಡು ಇದು ಅಂಕಗಳು  ಶಂಕೆ ಮಕ್ಕಳ ಮನೋಬಲವನ್ನು ಕಸಿತುತ್ತದೆ.  ಅಂಕಗಳಷ್ಟೆ ಜೀವನವಲ್ಲ.ಮಕ್ಕಳ ಅರಿವಿನ ಪ್ರಪಂಚವನ್ನು ಹಿಗ್ಗಿಸಬೇಕು. ಕಂಠ  ಪಾಠ ಬೇಡ , ಕಂಠ ಪತ್ರದ ಉಲುಹು ಕೆಟ್ಟರೆ ಹೋಯಿತು ಬರೆದು ಅಭ್ಯಾಸ ಮಾಡಿಸಿ ,  ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ನೀಡಿ ಮಕ್ಕಳನ್ನು ಅಂಕಗಳು  ಅನ್ನುವ ಪಾಶದಲ್ಲಿ ಸಿಕ್ಕಿಸುವುದು ಬೇಡ.

     ಶಿಕ್ಕರು ಮೌಲ್ಯಮಾಪನದ ಜೊತೆಗೆ ಸಹ ಮೌಲ್ಯಮಾಪನವನ್ನು ಮಕ್ಕಳಿಗೆ ಬಿಡಬೇಕು  ಆಗ ಮಕ್ಕಳಿಗೆ ತಾವು ಎಡವಿದ ಸ್ಥಳಗಳ ಕುರಿತು ಮಾಹಿತಿ ಇರುತ್ತದೆ.    ದೇಶದ ಬದಲಾವಣೆಗೆ ಅಲ್ಲಿನ ಶಿಕ್ಷಣ ಪದ್ಧತಿ ಕೂಡ ಕಾರಣವಾಗುತ್ತದೆ.  ನಮ್ಮಲ್ಲಿ ಶಾಲೆಗೆ ಹೋಗುವ ವಯಸ್ಸು  ಅತ್ಯಂತ ಬೇಗ ಅನ್ನಿಸುತ್ತಿದೆ . ಕೊಠಡಿಯೊಳಗಿನ ಶಿಕ್ಷಣಕ್ಕೆ ಪ್ರೋತ್ಸಾಹ  ಇದೆ  ಆದರೆ ಬಯಲ ಶಿಕ್ಷಣ ಸಾಮಾಜಿಕ ಶಿಕ್ಷಣಕ್ಕೆ ಆದ್ಯತೆ ಇಲ್ಲ.  ಗ್ರಾಮೀಣ ಭಾಗದಲ್ಲಿ ಅಂಗನವಾಡಿಗೆ ಹೋಗುವ ಮಕ್ಕಳು ಇದ್ದರೆ ನಗರ ಪ್ರದೇಶದಲ್ಲಿ   ಆ್ಯಪ್ ಆಧಾರಿತ ಶಿಕ್ಷಣ ಇದೆ ವಿದ್ಯಾಭ್ಯಾಸದಲ್ಲಿ ಸಮಾನತೆ ಇರಬೇಕು   12 ನೆ ವಯಸ್ಸಿನ ವರೆಗೂ  ಮಾರ್ಕ್ಸ್  ಕಾರ್ಡ್ ಕೊಡುವ ಪದ್ಧತಿ ತೆಗೆಯಬೇಕು. ಹೋಂ ವರ್ಕ್  ಮಕ್ಕಳಿಗೆ ಬೇಕು ಅನ್ನಿಸಿದರೆ ಮಕ್ಕಳಿಗೆ ಇಷ್ಟವಾಗುವ ವಿಷಯದಲ್ಲಿ  ಬರೆಯಲು  ಆದ್ಯತೆ ನೀಡಬೇಕು.ಆದಷ್ಟು ಮಕ್ಕಳನ್ನು ಅಂಕೆಯಲ್ಲಿ ಬಂಧಿಸುವುದಕ್ಕಿಂತ ಸಂತೋಷವಾಗಿಸಿದರೆ ಮಕ್ಕಳ ಬೌದ್ಧಿಕ ವಿಕಾಸವಾಗುತ್ತದೆ.

    ಕುವೆಂಪುರವರು ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೆ ವಿನಃ ಬತ್ತ ತುಂಬುವ ಚೀಲಗಳಾಗಬಾರದು   ಎಂದಿದ್ದಾರೆ ಆದರೆ ಇಂದಿನ ಮಕ್ಕಳು ಬತ್ತಿ ಬಾಯಾರಿದ  ಹೂಕುಂಡಗಳಂತೆ  ಅಷ್ಟಕ್ಕೇ  ಸೀಮಿತವಾಗಿ ಕುದುರೆಗೆ ಜೀನು ಕಟ್ಟಿದಂತೆ ಆಗಿದ್ದಾರೆ.  ಅಂಕೆಗಳ ಅಂಕೆಯನ್ನು ಮೀರಿ  ಬಹುತ್ವದ ಕಡೆಗೆ  ಅವರ  ಆಲೋಚನಾಲಹರಿ  ಪ್ರವಹಿಸಬೇಕು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ

    ಸುಮಾ ವೀಣಾ

    ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ–  ಇದು ಸರ್ವಜ್ಞನ ವಚನದ ಸಾಲು. ಲೋಕ ನೀತಿಯನ್ನು ಹೇಳುವ ಸಂದರ್ಭದಲ್ಲಿ ಕವಿ ಈ ಮಾತುಗಳನ್ನು ಉದ್ಗರಿಸಿದ್ದಾನೆ. 

    ಸರ್ವಜ್ಞ   ಅರ್ಥವತ್ತಾದ ಹೋಲಿಕೆಗಳನ್ನು ನೀಡುವ ಸಾರ್ವಕಾಲಿಕ   ತ್ರಿಪದಿಗಳಿಂದಲೇ ಹೆಸರಾಗಿರುವವನು.  ಜ್ಞಾನಿ ಎಂದರೆ ಈತನ ಪ್ರಕಾರ ಮಹಾತ್ಮನೇ ಸರಿ ಹಾಗಾಗಿ ಈತ ಲೋಕದ ಪಾಲಿಗೆ ಕನ್ನಡಿಯಂತೆ ಇರುವವನು. 

    ಕನ್ನಡಿಯನ್ನು ನೋಡಿಕೊಂಡು  ನಾವು ಅಲಂಕಾರ ಮಾಡಿಕೊಂಡು ಸುಂದರವಾಗಿ ಕಾಣಿಸುತ್ತೇವೆ. ಕನ್ನಡಿಯನ್ನು ನೋಡಿಕೊಂಡಾಗಲೆ ನಮ್ಮ ಓರೆಕೋರೆಗಳು ತಿಳಿಯುತ್ತವೆ.  ವಿಶಿಷ್ಟ ಮಾರ್ಗದಾಳು ಈ  ಕನ್ನಡಿ. ಹಾಗೆಯೇ ನಮ್ಮ ಮನಸ್ಸಿನ ವ್ಯಕ್ತಿತ್ವದ ಓರೆಕೋರೆಗಳು  ತಿಳಿಯಬೇಕೆಂದರೆ ‘ಜ್ಞಾನಿ’ ಎಂಬ ‘ಕನ್ನಡಿ’ಯ ಬಳಿಗೆ ಹೋಗಬೇಕು ಅವನ ಮಾರ್ಗದರ್ಶನದಲ್ಲಿ  ನಮ್ಮನ್ನು ತಿದ್ದಿಕೊಳ್ಳಬೇಕು ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.

    ‘ಕನ್ನಡಿ’ ಯಾರ ಬಳಿಗೂ ಹೋಗಿ ‘‘ನಿಮ್ಮಲ್ಲಿ ಲೋಪವಿದೆ ಸರಿಮಾಡಿಕೊಳ್ಳಿ! ಅಲಂಕಾರ ಮಾಡಿಕೊಳ್ಳಿ’’ ಎಂದು  ಬೆನ್ನು ಹತ್ತುವುದಿಲ್ಲ. ಹಾಗೆ ಗುರುವಾದವನು  ಶಿಷ್ಯರನ್ನು ಹುಡುಕಿಕೊಂಡು ಹೋಗುವುದಿಲ್ಲ.  ಶಿಷ್ಯರೆ ಗುರುವಿನ ಬಳಿಗೆ ಹೋಗಬೇಕು.  ನಮ್ಮ ದೈಹಿಕ ಕಲ್ಮಷಗಳನ್ನು ತೊಳೆದುಕೊಳ್ಳಲು  ಸ್ನಾನಕ್ಕೆ ನೀರನ್ನರಸಿ ಹೋಗುವಂತೆ  ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ  ಆವರಿಸಿಕೊಂಡಿರುವ ಸಂಚನೆಗಳನ್ನು ಕಳೆಯಲು   ಸನ್ಮಾರ್ಗದಲ್ಲಿ ನಡೆಯಲು ಜ್ಞಾನಿಗಳ ಹಿರಿಯರ , ಅನುಭವಿಗಳ  ಮಾರ್ಗದರ್ಶನ ಬೇಕು.

    ‘ಜ್ಞಾನಿಯಾದವನು ಅರಿವಿನ ಸಾಗರ’ವಿದ್ದಂತೆ.   ‘ತಿಳಿವಳಿಕೆ ಎಂಬ ಜ್ಞಾನ ಸರೋವರ’ದ  ತಂಪನ್ನು ಕಂಪನ್ನು ಅನುಭವಿಸಬೇಕಾದರೆ ಸರೋವರದ ಬಳಿಗೆ ನಾವು ತೆರಳಲೆಬೇಕು. ಅಲ್ಲಿ  ನಾವುಗಳು ಹಮ್ಮು ಬಿಮ್ಮುಗಳನ್ನು ಪ್ರತಿಷ್ಠೆಗಳನ್ನು ತೊರೆದು ಸ್ವಚ್ಛಂದ ಮನಸ್ಸಿನಲ್ಲಿ ವಿಹರಿಸಬೇಕು.  ಲೋಪಗಳನ್ನು ಅಲ್ಲಿಯೇ ಮೌನವಾಗಿ ವಿಸರ್ಜಿಸಿಬಿಡಬೇಕು ಹಾಗಾದಾಗ  ಯಾವುದೇ ಶೇಷಗಳು ಉಳಿಯದೆ  ನಮ್ಮ ವ್ಯಕ್ತಿತ್ವಕ್ಕೆ ವಿಶೇಷ  ಹೊಳಹು ಲಭ್ಯವಾಗುತ್ತದೆ. 

     ‘ತುಂಬಿದ ಕೊಡ ತುಳುಕುವುದಿಲ್ಲ’  ಎಂಬಂತೆ ಜ್ಞಾನಿಯಾದವನು ತನ್ನ  ತಿಳಿವಿನ ಪ್ರದರ್ಶನ ಮಾಡುವುದಿಲ್ಲ . ನಿಧಿಯನ್ನು ಹುಡುಕಿ ಹೊರಡುವ  ದ್ರವ್ಯ ನಿರೀಕ್ಷರಂತೆ   ಜ್ಞಾನಾಪೇಕ್ಷಿಗಳು  ಜ್ಞಾನವೆಂಬ ಸ್ವಯಂಪ್ರಕಾಶವನ್ನು ಹುಡುಕಿ ಹೊರಟು ಅದರ ಪ್ರಭೆಯಿಂದ  ಅಜ್ಞಾನವನ್ನು ನೀಗಿಕೊಳ್ಳಬೇಕಿದೆ.  ಕನ್ನಡಿ  ದೈಹಿಕ ಸೌಂದರ್ಯವನ್ನು  ಹೆಚ್ಚಿಸಿಕೊಳ್ಳಲು  ಸಹಾಯ ಮಾಡುವಂತೆ   ಜ್ಞಾನಿಯ  ಸಂಗಾತ ನಮ್ಮ   ತಿಳಿವಳಿಕೆಯನ್ನು ಸುಸೂಕ್ಷ್ಮಗೊಳಿಸುತ್ತದೆ ಪರಿಪೂರ್ಣತೆಗೆ ಹಣತೆಯಾಗುತ್ತದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಜಯ ಕರ್ನಾಟಕ, ಜಯ ಕರ್ನಾಟಕ, ಜಯ ಕರ್ನಾಟಕ ಮಾತೆ
    ಹೂಡಿಕೆದಾರರೆಲ್ಲಾ ಕೂಡಿ, ಅಧ್ಯಯನ ಮಾಡಿ, ಪಡೆವೆವು ವಿತ್ತೀಯ  ಸಾಕ್ಷರತೆ.


    ನಾಡಿನೆಲ್ಲೆಡೆ ರಾಜ್ಯೋತ್ಸವ ಮಾಸದ ಸಂಭ್ರಮ. ಈ ಮಾಸದ ಮೆರಗನ್ನು ಹೆಚ್ಚಿಸಲು ಪ್ರತಿವಾರದ ಷೇರು ವಿಶ್ಲೇಷಣೆಯನ್ನು ಹೆಸರಾಂತ ಷೇರು ತಜ್ಞ ಕೆ ಜಿ ಕೃಪಾಲ್ ಇಲ್ಲಿ ಕಾವ್ಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ.



    ಇಂದಿನ ವ್ಯವಹಾರಗಳ ಶೈಲಿ

    ಅಯೋಮಯವಾಗಿದೆ ಇಂದಿನ ವಹಿವಾಟಿನ ರೀತಿ
    ಪರಿಶೀಲಿಸದಿದ್ದರೆ ಆಗುವುದು ಫಜೀತಿ.
    ಸರ್ಕಾರಿ – ಖಾಸಗಿಗಳು ವ್ಯವಹಾರದಲ್ಲಿ ಎಲ್ಲಾ ಒಂದೇ 
    ಗುರಿಮಾತ್ರ ಲಾಭಗಳಿಕೆಯೊಂದೇ 

    ವ್ಯವಹಾರದ ಯಶಸ್ಸಿಗೆ ಇರಲೇಬೇಕು ಡಿಸ್ಕೌಂಟ್ 
    ಪ್ರಮಾಣ ಹೆಚ್ಚಿದಂತೆ ವೃದ್ಧಿಸುವುದು ವ್ಯವಹಾರ,  ಹೆಚ್ಚು ಪರ್ಸೆಂಟ್
    ಸರಿಯಾಗಿಡದಿದ್ದರೆ ಅಕೌಂಟ್
    ಅಗೋಚರವಾಗಿ ಕರಗುವುದು ಗಂಟು

    ಈಗಿನ ವ್ಯವಹಾರಿಕತೆಯ ಚಲನೆ ಹೇಗಿದೆ ಎಂದರೆ:

    ಚಕ್ರಾಕಾರದಲಿ ಚಲಿಸುತಿದೆ ಚಲಾರ್ಥ,
    ಸರ್ಕಾರಗಳು ಹಂಚುವುವು ಸವಲತ್ತು,
    ಅರಿಯದೆ ದುಡಿಮೆಯ ಕಿಮ್ಮತ್ತು,
    ವ್ಯಯಿಸುವರು ಗುಂಡೇರಿಸಿ ಪಡೆಯಲು ‘ಮತ್ತು’,
    ಗುಂಡು ಖರೀದಿಯಲ್ಲಿ ಕೈಲಿದ್ದ ಹಣ ಸರ್ಕಾರವ ಸೇರಿತು,
    ಎಂಬಲ್ಲಿಗೆ ಕರೆನ್ಸಿಯ ಚಕ್ರಾ ಚಾಲನೆ ಮುಗಿದಿತ್ತು.  
    ( ಚಲಾರ್ಥ =ಕರೆನ್ಸಿ)


    ಆಫರ್ ಡಿಸ್ಕೌಂಟ್  ಬೈ ಬ್ಯಾಕ್ ಕೊಡುಗೆಗಳಿಲ್ಲದ  ವ್ಯವಹಾರವಿಲ್ಲ
    ಗುಣಮಟ್ಟ ಲೆಕ್ಕಿಸದೆ ಕೊಡುಗೆಗಳಿಗೆ  ಹೆಚ್ಚಿನ ಮನ್ನಣೆ ಇದೆಯಲ್ಲಾ
    ಅಸೆ ಆಮಿಷಗಳೊಡ್ಡುವ   ಶೈಲಿಗೆ ಮಿತಿಯಿಲ್ಲ
    ಗ್ರಾಹಕರ ಸೆಳೆಯುವತ್ತಲೇ ಗಮನವೆಲ್ಲಾ


    ಷೇರುಪೇಟೆಯ ಚಟುವಟಿಕೆ ಬದಲಾದ ಪರಿಸ್ಥಿತಿ:

    ಹೋದೆಯ ದೂರ ಓ ಹೂಡಿಕೆದಾರ
    ನೀನೇ ಎನ್ನಯ ಸರದಾರ,
    ತಲ್ಲಣಿಸದೆ, ತಳಮಳಿಸದೆ  ತಗೋ ನಿರ್ಧಾರ
    ತೂಕಡಿಸಿ ತೂರಾಡಿ ತೃಪ್ತಿಪಡುವ ಈಗಿನ ಸಂತೆಗೆ ನೀನೇ  ಆಧಾರ


    ಎನ್ನುವ ದಿನಗಳಿದ್ದವು ಹಿಂದೆ
    ಈಗ ಹೂಡಿಕೆಯಗಿಹುದು ಒಂದು ದಂದೆ
    ಆಗಿರು ತುಂಬಾ ಅಲರ್ಟ್
    ಸಮಯ ಬಂದಾಗ ಕೆಲವು ಷೇರುಗಳಿಂದ ಗೆಟ್ ಔಟ್


    ವಿದೇಶಿ ವಿತ್ತೀಯ ಸಂಸ್ಥೆಗಳ ಕಾರ್ಯ ವಿಧಾನ:

    ವಿದೇಶಿ ಹೂಡಿಕೆದಾರ
    ನೀನೇಕೆ ಇಷ್ಟು ಕ್ರೂರ

    ನೀ ಬಂದೆ ಆಪದ್ಭಾನ್ಧವನಂತೆ
    ನಿನ್ನಯ ವೇಗಕೆ ತತ್ತರಿಸುತ್ತಿದೆ ಈ ಸಂತೆ
    ನೀ ಕೊಂಡ ಷೇರಿಗೆ ಗೋಲ್ಡನ್ ಟಚ್
    ನೀ ಮಾರ ಹತ್ತಿದರೆ ಹಚ್ಚಿದಂತೆ ಟಾರ್ಚ್

    ದಿನೇ ದಿನೇ ಹೆಚ್ಚುತ್ತಿದೆ ನಿನ್ನಯ ಪ್ರಭಾವ
    ನೀನಿಲ್ಲದಿದ್ದರೆ ವಹಿವಾಟಿನ ಅಭಾವ
    ನಿನ್ನಯ ಚಟುವಟಿಕೆಯಿಂದ   ಈ ಸಂತೆ ಅಸ್ಥಿರ
    ಹೂಡಿಕೆದಾರರಿಗಾಗುತ್ತಿರುವ ನಷ್ಟ ಅಪಾರ

    ಮಿತಗೊಳಿಸು ನಿನ್ನಯ ವೇಗ
    ನಡೆಸು ಮೌಲ್ಯಾಧಾರಿತ ವ್ಯವಹಾರದ ಪ್ರಯೋಗ
    ಜನಮಾಡಲಿ ನೀನಾಗಿರುವ ಭಕ್ಷಕ
    ಬದಲಾಯಿಸಿ ನಿನ್ನಯ ಕಾರ್ಯ ವೈಖರಿ ಆಗು ರಕ್ಷಕ

    ನಿಡುವೆವೆ ಹೈ ರೇಟಿಂಗ್ ನಿನ್ನಯ ಚಟುವಟಿಕೆ ಗಮನಿಸಿ
    ಅಳವಡಿಸಿಕೊಂಡರೆ ಲಿವ್ ಅಂಡ್ ಲೆಟ್ ಲಿವ್ ಪಾಲಿಸಿ.

    ಸಧ್ಯದ ಪರಿಸ್ಥಿತಿ ಹೇಗಿದೆ ಎಂದರೆ:

    ಹೆಚ್ಚುತ್ತಿದೆ ಸಾಕ್ಷರತಾ ಸಮೂಹ  
    ಆದರೂ ಕ್ಷೀಣಿಸುತ್ತಿಲ್ಲ  ಡಿಸ್ಕೌಂಟ್ ವ್ಯಾಮೋಹ 
    ಇತ್ತು ಆರ್ಥಿಕ ಸಾಕ್ಷರತಾ ಮಟ್ಟ ಶೇ.35 % ದಶಕದ ಹಿಂದೆ
    ಇಂದು ಶೇ.28% ರಲ್ಲಿ ಉಳಿದಿಹೆವು ಹಿಂದೆ 

    ಬಿ ಎಸ್ ಇ – ಎನ್ ಎಸ್ ಇ ಗಳೆರಡೂ ಪ್ರಮುಖ 
    ಬಿ ಎಸ್ ಇ ಶತಮಾನದ ಮೇಲೆ  ಕಂಡಿದೆ ನಾಲ್ಕುವರೆ ದಶಕ
    ಎನ್ ಎಸ್ ಇ ಗೆ ಈಗ ಮೂರು ದಶಕ
    ಆದರೂ ಸಾಂಸ್ಥಿಕ ಚಟುವಟಿಕೆಯಿಂದ ವಹಿವಾಟು ಗಾತ್ರ  ತಕತಕ 

    ಮೂಡಿಬರುತ್ತಿವೆ ವಿಶ್ಲೇಷಣೆಗಳು ಅಪಾರ
    ಸದಾ ಮನದಲ್ಲಿರಲಿ ಇದೊಂದು ವ್ಯಾಪಾರ
    ಬಂಡವಾಳ ಸುರಕ್ಷತೆಗೆ ಆಧ್ಯತೆ
    ಒದಗಿಸುವುದು ಲಾಭಗಳಿಕೆಯ ಸಾಧ್ಯತೆ.

    ವಾರದ ವರದಿ

    ವಿಶ್ಲೇಷಣೆಗೆ ತುತ್ತಾಗಿ  ಗಾಡ್ರೇಜ್‌ ಪ್ರಾಪರ್ಟೀಸ್ 9 ರಂದು ಕರಗಿ
    ಜಾರಿತು ನೂರಿಪ್ಪತ್ತು ರೂಪಾಯಿಗಳಷ್ಟು ಸುಸ್ತಾಗಿ
    10, 11 ರಂದು ಸಮಜಾಯಿಶಿಯ ನೆಪದಲ್ಲಿ ಪುಟಿದೆದ್ದಿತು ಪಠಿಸುತ್ತಾ ಮಗ್ಗಿ
    ಆದರೂ ಕಲ್ಪಿಸಿತು ಬೇರ್‌ ಮತ್ತು ಬುಲ್‌ ಗಳಿಗೆ ಸುಗ್ಗಿ

    ದೊಪ್ಪನೆ ಕುಸಿಯಿತು ನೈಕಾ ಅನ್‌ ಲಾಕ್‌ ಷೇರುಗಳ ನೆಪದಿಂದ
    ಕಂಪನಿ ಪ್ರಕಟಿಸಿತು ಒಂದಕ್ಕೆ ಐದು ಬೋನಸ್‌ ಷೇರುದಾರರ ಹಿತದಿಂದ
    ಆರಂಭವಾಯಿತು ಎಕ್ಸ್‌ ಬೋನಸ್‌ ಭಾರಿ  ಕುಸಿತದಿಂದ
    ಗಜಗಾತ್ರದ ವಹಿವಾಟು ಪ್ರೇರೇಪಿಸಿತು ಖರೀದಿಸಲು ಸಂತಸದಿಂದ

    ಎಲ್‌ ಐ ಸಿ ಷೇರಿನ ಬೆಲೆ ಸತತ ಜಾರುತಲಿತ್ತು ಆಳದ ಅರಿವಿಲ್ಲದೆ,
    ಸಣ್ಣ ಹೂಡಿಕೆದಾರರು ಹೆದರಿ ಮಾರಾಟ ಮಾಡುತಲಿದ್ದರು ದಾರಿ ಅರಿಯದೆ,
    ಘೋಷಿಸಿದೆ ಎಲ್‌ ಐ ಸಿ ಉತ್ಕೃಷ್ಠ ಸಾಧನೆಯ ಅಂಕಿ ಅಂಶ
    ಪ್ರೇರೇಪಿಸಬಹುದು ಹೆಚ್ಚಿನವರಲಿ ಧೀರ್ಘಕಾಲೀನ ಚಿಂತನೆ, ಈ ಫಲಿತಾಂಶ

    ಆಯಿಲ್‌,  ಕೋಲ್‌, ಹೆಚ್‌ ಎ ಎಲ್‌ , ಇಂಗರ್‌ ಸಾಲ್‌ ಘೋಷಿಸಿದವು ಉತ್ತಮ ಲಾಭಾಂಶ
    ಅಸ್ಟ್ರಾಲ್‌,   ಎಂ ಆರ್‌ ಎಫ್‌ ಪ್ರಕಟಿಸಿದವು ಕಳೆಪೆ ಲಾಭಾಂಶ
    ಬಂದರೂ ಬಲರಾಂಪುರ್‌, ಕೇರ್‌ ರೇಟಿಂಗ್ಸ್‌ ಗಳ ಬೈಬ್ಯಾಕ್
    ನೀರಸಮಯದಲ್ಲಿದ್ದವು ಈ ಸ್ಟಾಕ್


    ನಿಯಂತ್ರಣ ವ್ಯವಸ್ಥೆ:

    ಷೇರುಪೇಟೆ ವಹಿವಾಟು ನಿಯಮ ಬಲು ಬಿಗಿ
    ಆದರೂ ನೈತಿಕಮಟ್ಟ ಕುಗ್ಗಿ
    ಹಿತಾಸಕ್ತರಿಗೆ ಉಂಟಾಗಿ ಸುಗ್ಗಿ
    ನಡೆಯಾದಾಗಬಹುದು ಯಾವುದೇ ಮಗ್ಗಿ

    ಸಧ್ಯದ ಪರಿಸ್ಥಿತಿಗೆ ಪರಿಹಾರವೇನು?
    ಷೇರುಪೇಟೆಯೊಂದೇ ಇಂದಿನ ಉತ್ತಮ ಹೂಡಿಕೆ
    ಅರಿಯದೆ ನಡೆಸಿದರೆ ಚಟುವಟಿಕೆ  ಬಂಡವಾಳ ಹೊಡೆವುದು ಗೊರಕೆ
    ಹೆಚ್ಚಿಸಿ ಕೊಳ್ಳಲು ಸಂಪನ್ಮೂಲ 
    ವ್ಯಾಲ್ಯೂ ಪಿಕ್ ಪ್ರಾಫಿಟ್ ಬುಕ್ ಚಟುವಟಿಕೆಯೇ   ಮೂಲ 


    ಬೇಕೆನಿಸದಾಕ್ಷಣ ಮಾರಾಟ ಮಾಡಿ ಹೊರಬರಬಹುದಾದ ಏಕೈಕ ಸ್ವತ್ತು,
    ಹೆಚ್ಚಿನ ಬಾರಿ ಅನಿರೀಕ್ಷಿತ ಲಾಭವ ತರುವ ಸವಲತ್ತು 
    ಹಿಡಿಯಬೇಕು ಸಿಕ್ಕಾಗ ‘ ಲಾಭ ಮತ್ತು ಕಳ್ಳ’  
    ಬಿಟ್ಟರೆ ಸೇರುವುದು ಹಳ್ಳಸದಾ ಹಸಿರಾದ ಸುರಕ್ಷಿತ ಚಿಂತನೆ:

    ಅಧ್ಯಯನದಿಂದ ಅರಿವು,
    ಅನುಭವದಿಂದ ತಿಳಿವು
    ಚಿಂತನೆಯಿಂದ ಸುಳಿವು
    ಅರಿವು, ತಿಳಿವು ಸುಳಿವುಗಳಿಂದ ಉಳಿವು.

    error: Content is protected !!