33.2 C
Karnataka
Saturday, April 19, 2025
    Home Blog Page 8

    ದುಷ್ಟರನ್ನು ಕಂಡರೆ ದೂರ ಇರುವುದು ಲೇಸು

    ಸುಮಾ ವೀಣಾ

    ಕರುಬರಿದ್ದೂರಿಂದೆ   ಕಾಡೊಳ್ಳಿತು- ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತದ’  ‘ಚಂದ್ರಹಾಸನ ಬಾಲ್ಯ’ದಲ್ಲಿ ಬರುವ    ನೀತಿಯುಕ್ತ ಮಾತಿದು.

    ರಾಜನಾಗಬಹುದು ಎನ್ನುವ ಉದ್ದೇಶದಿಂದ  ಚಂದ್ರಹಾಸನ ಮೇಲೆ ಇನ್ನಿಲ್ಲದ ಹಾಗೆ ಸಾಧಿಸಿದವನು ದುಷ್ಟಬುದ್ಧಿ ಎಂಬ ಮಂತ್ರಿ.  ಆ ಬಾಲಕನನ್ನು ಕೊಂದು ಗುರುತು ತೋರಿಸುವಂತೆ   ತನ್ನ ಭಟರಿಗೆ ಆಜ್ಞಾಪಿಸಿರುತ್ತಾನೆ.  ಚಂದ್ರಹಾಸನ ಮುಗ್ಧ ರೂಪವನ್ನು ಕಂಡು ಕೊಲ್ಲಲು ಮನಸ್ಸು ಬಾರದೆ   ಬಾಲಕನ ಕಾಲಿನ ಕಿರುಬೆರಳನ್ನು ಕತ್ತರಿಸಿ  ಕೊಂದೆವೆಂದು ಸುಳ್ಳು ಹೇಳುತ್ತಾರೆ.

    ಚಿತ್ರ ಸೌಜನ್ಯ ವಿಕಿಪಿಡಿಯಾ

    ರಕ್ತ ಒಸರಿಸಿಕೊಂಡು  ಚೀತ್ಕರಿಸುತ್ತಿದ್ದ ಬಾಲಕ ಚಂದ್ರಹಾಸನನ್ನು  ಕಂಡು  ಕಾಡಿನ ಮೃಗಾದಿ ಪಕ್ಷಿಗಳು  ಮರುಗುತ್ತವೆ,ಸಂತೈಸುತ್ತವೆ . ಆದರೆ ದುಷ್ಟಬುದ್ಧಿ  ಮತ್ಸರದಿಂದ ಮಗುವಿನ ಮೇಲೆ ಮಾಡಬಾರದ್ದನ್ನು ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಕವಿ ಇಂಥ ಮನುಷ್ಯರೊಂದಿಗೆ ಇರುವುದಕ್ಕಿಂತ  ಕಾಡಿನ ಜೀವನ ಮೇಲು ಎಡನ್ನುತ್ತಾನೆ. 

    ಮನುಷ್ಯ ಒಳ್ಳೆಯ ಗುಣವನ್ನು ಹೊಂದಿರುವಂತೆ ಕೆಟ್ಟಗುಣಗಳನ್ನು ಹೊಂದಿರುತ್ತಾನೆ. ಅದರಲ್ಲಿ ಈರ್ಷ್ಯೆ ಕೂಡ ಒಂದು. ತನ್ನನ್ನು ಬಿಟ್ಟು  ಯಾರೂ ಏಳಿಗೆ ಹೊಂದಿದರೂ ಸಹಿಸದ  ಮನಸ್ಥಿತಿಗಳು. ಎಷ್ಟು ಎಂದರೆ ಒಡಹುಟ್ಟಿದವರ ಅಭಿವೃದ್ಧಿಯನ್ನೂ ಸಹಿಸದ ಸಂಕುಚಿತ ಮನಸ್ಸುಗಳು  ದಿನೇ ದಿನೇ ಹೆಚ್ಚಾಗುತ್ತಿವೆ. ಇದೊಂದು  ಅನುಭವಿಸಲಾರದ ಇತರರಲ್ಲಿ ಹಂಚಿಕೊಳ್ಳಲಾರದ   ಉಭಯ ಸಂಕಟ.  ಹಿತಶತ್ರುಗಳ ಕಿರಿ ಕಿರಿ  ಸಹಿಸಲಸಾಧ್ಯವಾದಾಗ  ಇಂಥ  ಅಸೂಯಾ ಮನಸ್ಸುಗಳ ನಡುವೆ ಇರುವುದಕ್ಕಿಂತ ಕಾಡಿನ ವಾಸ ಅರ್ಥಾತ್ ಪರಿಚಯವೇ ಇಲ್ಲದವರ  ನಡುವೆ  ಜೀವನ ಸಾಗಿಸುವುದು  ಉತ್ತಮ  ಅನ್ನುವ ಅರ್ಥದಲ್ಲಿ  ದುಷ್ಟರನ್ನು ಕಂಡರೆ ದೂರ ಇರುವುದು ಲೇಸು   ಭಾವನೆಯನ್ನು “ಕರುಬರಿದ್ದೂರಿಂದೆ   ಕಾಡೊಳ್ಳಿತು” ಎಂಬ ಮಾತು ಸಂಕೇತಿಸುತ್ತದೆ.    ಹೊಟ್ಟೆ ಕಿಚ್ಚಿಗೆ ಕಣ್ಣೀರ್ ಸುರಿಸು ಎನ್ನುವಂತೆ ದುಷ್ಟ ಬುದ್ಧಿಗೆ ಕಡೆಗೆ ತನ್ನ ತಪ್ಪಿನ ಅರಿವಾಗುತ್ತದೆ.

    ಮನುಷ್ಯನ ಮಾನಸಿಕ ಸ್ವಾಸ್ಥವನ್ನು ಹಾಳುಮಾಡುವ ಪರಿಭಾಷೆ ಎಂದರೆ    ‘ಅಸೂಯೆ’. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಇರುವುದು. ತನ್ನ ಜೀವನದ ಎಡರು ತೊಡರುಗಳಿಗೆ   ಅಸಂಬಂದ್ಧ ಕಾರಣಗಳನ್ನು   ಇನ್ಯಾರನ್ನೋ  ಆರೋಪಿಸಿ ಬದುಕುವ ಅತೃಪ್ತ ಮನಸ್ಸುಗಳು ಹೀಗೆ  ವರ್ತಿಸುವುದು.    ಕೋಪ ತಾನು ಹುಟ್ಟಿದ ಸ್ಥಳವನ್ನು ಮೊದಲು ನಿರ್ನಾಮ ಮಾಡುವಂತೆ ಅಸೂಯೆ  ವ್ಯಕ್ತಿಯನ್ನು ಹಾಳು ಮಾಡುತ್ತದೆ. ಇದುವೆ  ಇನ್ನೂ ಕೆಟ್ಟಗುಣಗಳನ್ನು ಸಂಚಯಿಸಿಕೊಳ್ಳಲು ಕಾರಣವಾಗಬಹುದು ಮನಸ್ಸಿನ ನೆಮ್ಮದಿಯನ್ನು ಕಸಿಯಬಹುದು. ( ಚಾಡಿ,ಕುತಂತ್ರ,   ಆರೋಪ ಹೊರಿಸುವುದು, ತೇಜೋವಧೆ, ಗುಂಪುಗಾರಿಕೆ….)  ವಿಘ್ನ ಸಂತೋಷಿಯಾಗದೆ ಎಲ್ಲರ  ಏಳಿಗೆಯನ್ನು  ಸಂಭ್ರಮಿಸುವುದು ಒಳ್ಳೆಯದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market:ಬದಲಾದ ಪರಿಸ್ಥಿತಿಯಲ್ಲಿ ಷೇರುಪೇಟೆಯಲ್ಲಿ  ಹೂಡಿಕೆ ಹೇಗೆ?

    ಷೇರುಪೇಟೆಯಲ್ಲಿ ದಿನನಿತ್ಯ ಸುಮಾರು 50 ಸಾವಿರದಿಂದ 80 ಸಾವಿರ ಹೊಸ ಹೂಡಿಕೆದಾರರು ಪ್ರವೇಶಿಸುತ್ತಿದ್ದಾರೆ.   ಈ ವರ್ಷ ಕರ್ನಾಟಕದ ರಾಜ್ಯದಲ್ಲಿ ಸುಮಾರು ಶೇಕಡ 32ರಷ್ಟು ಹೊಸಬರು ಷೇರುಪೇಟೆಯ ಚಟುವಟಿಕೆಗೆ ನೋಂದಾಯಿಸಿಕೊಂಡಿದ್ದಾರೆ.  ಒಂದು ವರ್ಷದ ಹಿಂದೆ ಸುಮಾರು 8.50 ಕೋಟಿ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದರು,  ಅದು ಈ ವರ್ಷ ದ 31 ನೇ ಅಕ್ಟೋಬರ್‌ನ ಅಂಕಿ ಅಂಶಗಳ ಪ್ರಕಾರ 11.72 ಕೋಟಿಗೆ ಏರಿಕೆಯಾಗಿದೆ.  

    ಅಂದರೆ ಈ ಪ್ರಮಾಣದ ಏರಿಕೆಯ ಹಿಂದೆ ಅನೇಕರ ಭಾವನೆ ಏನೆಂದರೆ ಷೇರುಪೇಟೆಯಲ್ಲಿ ಅತಿ ಸುಲಭವಾಗಿ ಹಣ ಗಳಿಸಬಹುದೆಂಬುದಾಗಿದೆ.   ಪೇಟೆಯಲ್ಲಿ ಷೇರುಗಳ  ಚಲನೆಗೆ ಕಾರಣಗಳ ಅನ್ವೇಷಣೆಗೆ ತೊಡಗುತ್ತಾರೆ, ನಂತರ ಚಟುವಟಿಕೆಗೆ ಮುಂದಾಗುತ್ತಾರೆ,  ಆದರೆ ಆ ಅಂಶಗಳನ್ನು ಪೇಟೆ ಮೊದಲೇ ಪರಿಗಣಿಸಿ ಏರಿಕೆ ಕಾಣುವ ವಿಸ್ಮಯಕಾರಿ ಗುಣಗಳನ್ನು ಅರಿತಿರುವುದಿಲ್ಲ.

    ಷೇರುಪೇಟೆಯ ಹೂಡಿಕೆದಾರರ ಸಂಖ್ಯೆ  ಎರಡು ವರ್ಷಗಳಲ್ಲಿ ದ್ವಿಗುಣವಾಗಿದೆ,  ಸಂವೇದಿ ಸೂಚ್ಯಂಕವೂ ಮಾರ್ಚ್‌2020 ರ ಸಂಖ್ಯೆಗಿಂತ ದ್ವಿಗುಣಗೊಂಡಿದೆ ಹಾಗೆಯೇ ಬಂಡವಾಳೀಕರಣ ಮೌಲ್ಯವೂ ಸಹ ಮಾರ್ಚ್‌2020 ರ ಅಂಕಿ ಅಂಶವೂ ದ್ವಿಗುಣಗೊಂಡಿದೆ.  ಇವೆಲ್ಲಾ ಈ ರೀತಿ ಹೆಚ್ಚಾದರೂ ಅದಕ್ಕನುಗುಣವಾಗಿ ಲಿಸ್ಟಿಂಗ್‌ಆದ ಕಂಪನಿಗಳ ಸಂಖ್ಯೆಯು ಹೆಚ್ಚಾಗಿಲ್ಲ.  ಇದು ಒಂದು ರೀತಿಯ ಹೂಡಿಕೆದಾರರ ದಟ್ಟಣೆಯಾಗಿರುವ ವಾತಾವರಣ ನಿರ್ಮಿತವಾಗಿದೆ.  ಹಾಗಾಗಿ ಷೇರುಪೇಟೆಯಲ್ಲಿ ಹೆಚ್ಚು ಅನಿಶ್ಚಿಯತೆಗೆ ಕಾರಣವಾಗಿದೆ.  ಈ ಸಂದರ್ಭದಲ್ಲಿ ಸುಲಭವಾದ  ಸಮೀಕರಣವೆಂದರೆ ಸೂಕ್ತ ಚಿಂತನೆ, ವಿವೇಚನೆ, ಮಾರ್ಗದರ್ಶನದೊಂದಿಗೆ VALUE PICK – PROFIT BOOK ರೀತಿಯ ಚಟುವಟಿಕೆಯೇ ರಾಮಬಾಣವಾಗಿದೆ ಎನ್ನಬಹುದು.   ಜವಾಬ್ದಾರಿಯುತವಾದ  ಆರ್ಥಿಕ ಸಾಕ್ಷರತೆಯೊಂದಿಗೆ ಆರ್ಥಿಕ ನಿರ್ವಹಣೆಯ ಕೌಶಲ್ಯವನ್ನು  ರೂಢಿಸಿಕೊಳ್ಳುವುದೊಂದೇ ಉತ್ತಮ ದಾರಿಯಾಗಿದೆ.  

    ಹೆಚ್ಚಿನ ಹೊಸ ಹೂಡಿಕೆದಾರರು ಗ್ರಾಮೀಣ ಮತ್ತು ನಗರ ಪ್ರದೇಶದವರಾಗಿರುವ ಕಾರಣ ಅವರ ಅರಿವಿಗೆ ಬರಬಹುದಾದ ರೀತಿಯಲ್ಲಿ, ಕನ್ನಡ ಭಾಷೆಯಲ್ಲಿ ಪೇಟೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವು ಎಲ್ಲಾ ಮಾಧ್ಯಮಗಳು ಪ್ರಯತ್ನಿಸಿದಲ್ಲಿ, ಉತ್ತಮ ಸ್ಫಂದನೆ ದೊರೆಯಬಹುದಾಗಿದೆ.  ಈ ಹೊಸ ಹೂಡಿಕೆದಾರರಿಗೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನವನ್ನು ಕನ್ನಡದಲ್ಲಿಯೇ ಒದಗಿಸಿದರೆ, ಅವರ ಪ್ರಯತ್ನಗಳು ಸ್ವಲ್ಪಮಟ್ಟಿಗಾದರೂ ಸುರಕ್ಷತೆ ಕಾಣಬಹುದಾಗಿದೆ ಎಂಬುದು ನನ್ನ ಅನುಭವದ ಅರಿವು.  ಈ ದಿಶೆಯಲ್ಲಿ ಮಾಧ್ಯಮಗಳು, ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ   ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುವುದು ಅತ್ಯಗತ್ಯ.  ಈ ಮೂಲಕ ಆರ್ಥಿಕ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಸಾಧ್ಯ.  

    ಷೇರುಪೇಟೆಯ ವಿಸ್ಮಯಕಾರಿ ಗುಣವೆಂದರೆ, ಭವಿಷ್ಯದ ಘಟನೆಗಳನ್ನು  ವರ್ತಮಾನಕ್ಕೆ  ಭಟ್ಟಿ  ಇಳಿಸಿ  ಅದಕ್ಕೆ ಮೌಲೀಕರಣ ಮಾಡುವ ತಾಣವೇ ಷೇರು ವಿನಿಮಯ ಕೇಂದ್ರವೆಂಬುದು.  ಅಂದರೆ ಪ್ರಸ್ತುತ ತೇಲಿ ಬಂದಿರುವ ಸುದ್ಧಿಯನ್ನು ಪೇಟೆ ಆಗಲೇ ಕಡೆಗಣಿಸಿರುತ್ತದೆ.  ಹಾಗಾಗಿ ಒಂದು ಕಂಪನಿಯು ಪ್ರಕಟಿಸಿದ ಅಂಕಿ ಅಂಶಗಳು ಎಷ್ಟೇ ಆಕರ್ಷಣೀಯವಾಗಿದ್ದರೂ ಆ ಷೇರಿನ ಬೆಲೆ ಇಳಿಕೆಯತ್ತ ಸಾಗುತ್ತದೆ, ಎಷ್ಟೇ ಕಳಪೆಯಾಗಿದ್ದರೂ ಷೇರಿನ ಬೆಲೆ ಇಳಿಯುವುದಿಲ್ಲ ಕಾರಣ ಅದು ಆಗಲೇ ಪೇಟೆಯು ನಿರೀಕ್ಷಿಸಿದ್ದುದಾಗಿರುತ್ತದೆ.

    ಹಾಗೆಯೇ ಒಂದು ಷೇರಿನ ಬೆಲೆ ಇಳಿಕೆ ಕಂಡಾಗ ಮೌಲ್ಯಾಧಾರಿತ ಖರೀದಿಗೆ ಯೋಗ್ಯವೇ, ಏರಿಕೆ ಕಂಡಾಗ ಲಾಭದ ನಗದೀಕರಣದ ಸಮಯವೇ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಸಣ್ಣ ಹೂಡಿಕೆದಾರರಲ್ಲಿ ಬೆಳೆಸುವ ಪ್ರಯತ್ನವನ್ನು ಮಾಧ್ಯಮಗಳು ನಮ್ಮ ಆಡು ಭಾಷೆಯಲ್ಲಿ ತಿಳಿಸಿದರೆ ಭಾಷೆಯೂ ಬೆಳೆಯುತ್ತದೆ, ಭಾಷಾಭಿಮಾನವೂ ಹೆಚ್ಚುತ್ತದೆ ಜೊತೆಗೆ ಮಾಧ್ಯಮದ ಘನತೆಯೂ ಉನ್ನತಿ ಹೊಂದುವುದರಲ್ಲಿ ಸಂಶಯವಿಲ್ಲ. ಎಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರಲ್ಲಿ ಆರ್ಥಿಕ ಸಾಕ್ಷರತಾ ಮಟ್ಟವು ಹೆಚ್ಚಾಗಿ ಅವರ ಬಾಳಲ್ಲಿ ನೆಮ್ಮದಿ ಮೂಡಿಸಿದ ಸಾಮಾಜಿಕ ಬದ್ಧತೆಯನ್ನು ನಿರ್ವಹಿಸಿದಂತಾಗುತ್ತದೆಯಲ್ಲವೇ?

    ಜಾಗೃತ ಹೂಡಿಕೆದಾರ- ಜಾಗತಿಕ ಸರ್ಧಾರ, ಎಂಬಂತೆ ನಮ್ಮ ಅಪಾರ ಜನಸ್ತೋಮವು ಆರ್ಥಿಕ ಸಾಕ್ಷರತೆಯಿಂದ ಜಾಗೃತಗೊಂಡಲ್ಲಿ ನಾವು ಅವಲಂಬಿತರಾಗಿರುವ ವಿದೇಶೀ ವಿತ್ತೀಯ ಸಂಸ್ಥೆಗಳ ಪ್ರಭಾವವನ್ನು ನಿಯಂತ್ರಿಸಬಹುದು. ಒಂದು ರೀತಿ ವ್ಯಾಘ್ರನ ಭೇಟೆಗೆ ಶ್ವಾನ ಬಿಟ್ಟಂತೆ ಎಂಬ ಪರಿಸ್ಥಿತಿಯುಂಟಾಗಿ, ಆಂತರಿಕ ಬಲದಿಂದ ಸದೃಢರಾಗಲೂ ಸಾಧ್ಯವಿದೆಯಲ್ಲವೇ?

    ಅರ್ಥವನ್ನು ಅರ್ಥವತ್ತಾಗಿ ನಿರ್ವಹಿಸದಿದ್ದರೆ ಜೀವನ ಅರ್ಥಹೀನ.  ಎಂಬಂತೆ ಹಣಕಾಸು ಬಳಕೆಯನ್ನು, ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ ಜೀವನವು ಹಳಿತಪ್ಪಿದ ರೈಲಿನ ತರಹ ಕಲ್ಪನಾತೀತ ಹಂತದಲ್ಲಿರುತ್ತದೆ.  ಈಗಿನ ಜೀವನ ಶೈಲಿಯು ಹೆಚ್ಚಾಗಿ ಪಾರ್ಶ್ವ ಚಿಂತನೆಗಳಿಂದ ಕೂಡಿದ್ದು,  ಸಮಯದ ಅಭಾವವೋ, ಚಿಂತನೆಯ ಕೊರತೆಯೋ ಇದಕ್ಕೆ ಪೂರಕವಾಗಿ ಸಾಗುವಂತೆ ಮಾಡುತ್ತಿದೆ.  ಹೆಚ್ಚಿನ ಜಾಹಿರಾತುಗಳು ಇದನ್ನು ದೃಢೀಕರಿಸುತ್ತವೆ.

    ಈಗಿನ ಜೀವನ ಶೈಲಿಗಳು ಎಷ್ಠು ಒತ್ತಡಮಯವಾಗಿರುತ್ತವೆ ಎಂದರೆ ನಾವು ಕೇವಲ ಅಕ್ಷರ ಸಾಕ್ಷರತೆಯ ಕಡೆಯೇ ಹೆಚ್ಚು ಒತ್ತು ನೀಡುತ್ತೇವೆ  ಮತ್ತು ಅತ್ಯವಶ್ಯವಿರುವ ಆರ್ಥಿಕ ಸಾಕ್ಷರತೆಯನ್ನು ಕಡೆಗಣಿಸಿ, ಗುಣಮಟ್ಟ ಲೆಕ್ಕಿಸದೆ ಕೇವಲ ರಿಯಾಯಿತಿ, ಡಿಸ್ಕೌಂಟ್, ಆಫರ್,  ಕ್ಯಾಶ್ ಬ್ಯಾಕ್ ನಂತಹ ತಂತ್ರಗಾರಿಕೆಗೆ ಮರುಳಾಗಿ ಚಿಂತನಾ ಸಾಮರ್ಥ್ಯವನ್ನು ಕ್ಷೀಣಿಸಿಕೊಳ್ಳುತ್ತಿದ್ದೇವೆ.

    ಬ್ಯಾಂಕಿಂಗ್ ಮತ್ತು ನಾನ್‌ಬ್ಯಾಂಕಿಂಗ್  ಸಂಸ್ಥೆಗಳ ವೈಖರಿಯೇ ಬೇರೆ,  ಅವರ ಪ್ರಚಾರ ಹೇಗಿರುತ್ತೆಂದರೆ, ಅಭಿನಂದನೆಗಳು,  ನೀವು 5 ಲಕ್ಷ ರೂಪಾಯಿಗಳ ಪ್ರಿ-ಅಪ್ರೂವ್ಡ್  ಲೋನ್ ಗೆ  ಅರ್ಹರಾಗಿದ್ದೀರಿ, ಎಂದು ಬಹಳಷ್ಟು ಜನರಿಗೆ ಆಸೆಯ ಜಾಲಕ್ಕೆ ತಳ್ಳುತ್ತಾರೆ.  ಸಾಲಕ್ಕೆ ಅರ್ಜಿ ಸಲ್ಲಿಸದೆ, ವಿವಿರಗಳನ್ನೊದಗಿಸದೆ ಸಾಲ ನೀಡಲು ಹೇಗೆ ಸಾಧ್ಯ.   ಕೇವಲ ಪ್ರೇರೇಪಿಸುವ ಕೃತ್ಯವಷ್ಟೆ.  ಈ  ಪ್ರಿಅಪ್ರೂವ್ಡ್  ಆಶ್ವಾಸನೆಯನ್ನು ನಂಬಿ ಅರ್ಜಿ ಸಲ್ಲಿಸಿದ ನಂತರ, ಅದಕ್ಕೆ ಪ್ರೊಸೆಸಿಂಗ್‌ಫೀಸ್ ‌ಕಟ್ಟಿಸಿಕೊಳ್ಳುವರು.  ಫೀಸ್  ಕಟ್ಟಿದ್ದಕ್ಕೆ  ಸಾಲ ಸಿಕ್ಕಿತೆಂಬ ನಂಬಿಕೆ ಬೇಡ.  ಅವರು ನಂತರ ಅರ್ಜಿ ಪರಿಶೀಲಿಸಿ ನೀವು, ನಿಮ್ಮ ಆದಾಯ, ಸಿಬಿಲ್ ಸ್ಕೋರ್, ವೃತ್ತಿಯಾಧರಿಸಿ ಸಾಲ ಪಡೆಯಲು ಅರ್ಹರೇ, ಇಲ್ಲವೇ ಎಂಬದನ್ನು ನಿರ್ಧರಿಸುವರು.  ಒಂದೊಮ್ಮೆ ಅರ್ಹರಲ್ಲವೆಂದರೆ ನೀವು ಕಟ್ಟಿದ ಪ್ರೊಸೆಸಿಂಗ್‌ಫೀಸ್  ಹಿಂದಿರುಗಿಸಲಾಗದು.  ಈ ಪ್ರಿ-ಅಪ್ರೂವ್ಡ್ ಎಂಬುದು ಕೇವಲ ಪ್ರಚಾರಿಕ, ಮೋಹಕ ತಂತ್ರವಷ್ಟೆ.

    ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ನಾವುಗಳು ಹೆಚ್ಚಿನ ಗೊಂದಲಮಯ, ಸಂಕಷ್ಠಮಯ ಪರಿಸ್ಥಿತಿಗೊಳಗಾಗಿದ್ದೇವೆ.   ಹೆಚ್ಚು ಹೆಚ್ಚು ಆದ್ಯತೆಗಳು ಸವಲತ್ತುಗಳನ್ನು ಪಡೆಯುವತ್ತಲೇ  ಗಮನ ಹರಿಸುತ್ತೇವೆ.   ಇದಕ್ಕಾಗಿ ʼ ಇ ಎಂ ಐ ʼ ಮೂಲಕ  ಕಂತಿನಲ್ಲಿ ಹಣಪಾವತಿಯನ್ನು ಆಯ್ಕೆ ಮಾಡಿಕೊಂಡು  ಬಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗುತ್ತೇವೆ.  ಈಗಿನ ಅಸ್ಥಿರತೆಯ ಸನ್ನಿವೇಶದಲ್ಲಿ  ಈ   ʼ ಇ ಎಂ ಐ ʼ ಬಾಧ್ಯತೆಗಳು ಮುಂದಿನ ದಿನಗಳಲ್ಲಿ ಎಂತಹ ತೊಂದರೆಗಳನ್ನು ಉಂಟುಮಾಡಬಹುದು ಎಂಬುದನ್ನು ಆರ್ಥಿಕ  ಹಿಂಜರಿತಗಳ ಸಮಯದಲ್ಲಿ ಕಂಡಿದ್ದೇವೆ.  ಈಗಿನ ಸನ್ನಿವೇಶದಲ್ಲಿ ʼ ಇ ಎಂ ಐ ʼ ಕಡಿಮೆ ಇದ್ದಷ್ಟು ಜೀವನದಲ್ಲಿ ನೆಮ್ಮದಿ, ಸಂತೋಷಗಳನ್ನು ಕಾಣಬಹುದಾಗಿದೆ.

    ಹೂಡಿಕೆಗೆ ನಿರ್ಧರಿಸುವಾಗ ಹೆಚ್ಚಿನವರು, ಪ್ರಚಾರದಲ್ಲಿರುವ ಕಂಪನಿಗಳತ್ತ,  ಆಕರ್ಷಣೀಯ ಮಟ್ಟದ ಫಲಿತಾಂಶ,  ಶೇಕಡಾವಾರು ಲಾಭಾಂಶ, ಮಲ್ಟಿಬ್ಯಾಗರ್‌, ಮಲ್ಟಿ ಇಯರ್‌ ಗ್ರೌತ್‌ ಮುಂತಾದವುಗಳನ್ನಾಧರಿಸಿ ಚಟುವಟಿಕೆ ನಡೆಸುವ ಮುನ್ನ ಆಕಂಪನಿಗಳು ಯಾವ ಶ್ರೇಣಿಯಲ್ಲಿವೆ, ಅಗ್ರಮಾನ್ಯ ಕಂಪನಿಯೇ, ಬೃಹತ್‌ ಬಂಡವಾಳವಿರುವ ಕಂಪನಿಯೇ,  ಎಂಬುದರ ಅರಿವಿನಿಂದ ಅರ್ಹತೆಯನ್ನು ಮಾಪನ ಮಾಡಬೇಕು.  ಅಗ್ರಮಾನ್ಯ ಕಂಪನಿಯಾಗಲಿ, ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಕಂಪನಿಯಾಗಲಿ ಅದರ ಹಿಂದಿನ ಸಾಧನೆ, ಭವಿಷ್ಯದಲ್ಲಿ ಆ ಕಂಪನಿಗಿರಬಹುದಾದ ಅವಕಾಶಗಳು,  ಕಂಪನಿಯ ಆಡಳಿತ ಮಂಡಳಿಯವರ ಗೌರವ, ಘನತೆ, ಪ್ರತಿಷ್ಠೆಗಳು ಮತ್ತು ಹೂಡಿಕೆದಾರ ಸ್ನೇಹಿ ಗುಣದ ಬಗ್ಗೆ ಮಾಪನಮಾಡಿ ನಿರ್ಧರಿಸಬೇಕು.  ವಿಶೇಷವಾಗಿ ಹೊಸ ಕಂಪನಿಗಳು ತೇಲಿ ಬಿಟ್ಟಾಗ ಅಂತಹ ಕಂಪನಿಗಳಿಗೆ ಕೆಲವು ವರ್ಷ ತಮ್ಮ ಸಾಮರ್ಥ್ಯವನ್ನು ಪ್ರದರ್ಶೊಸಲು ಸಮಯಾವಕಾಶ ನೀಡಬೇಕು ನಂತರ ಯೋಗ್ಯವೆನಿಸಿದಲ್ಲಿ ಹೂಡಿಕೆಯನ್ನು ಪರಿಶೀಲಿಸಬಹುದು.  ಹೂಡಿಕೆ ಮಾಡಿದ ಷೇರುದಾರರ ಬಂಡವಾಳವನ್ನು ಕರಗಿಸಿದ ಅನೇಕ ಕಂಪನಿಗಳಿವೆ. ಏರಿಳಿತಗಳ ಪ್ರಭಾವವು ಅನೇಕ ಅವಕಾಶಗಳನ್ನು ಸೃಷ್ಠಿಮಾಡಿಕೊಟ್ಟರೂ ಅವು ಕಾಲ್ಪನಿಕವಾಗಿರುತ್ತವೆ.

    1995 ರಲ್ಲಿ  ಬೆಂಗಳೂರು ಷೇರು ವಿನಿಮಯ ಕೇಂದ್ರದಲ್ಲಿ ಉತ್ತಮ ಸಂಖ್ಯಾ ಗಾತ್ರದೊಂದಿಗೆ ವಹಿವಾಟಾಗುತ್ತಿದ್ದ ಷೇರುಗಳು , ಅವುಗಳ ದರಗಳು ಮತ್ತು ವಹಿವಾಟಾಗುತ್ತಿದ್ದ ಸಂಖ್ಯಾಗಾತ್ರದ ಪಟ್ಟಿಯನ್ನು ಓದುಗರ ಅವಗಾಹನೆಗೆ ಇಲ್ಲಿ ನೀಡುತ್ತಿದ್ದೇವೆ.

    ಈ ಪಟ್ಟಿಯಲ್ಲಿ ಆಗ ಮಿಂಚಿನಂತೆ ಬಂದು ಮಾಯಾವಾದ ಅನೇಕ ಷೇರುಗಳಿವೆ. ಅದರ ಜೊತೆಗೆ ಈಗಲೂ ಬಲವಾಗಿ ನಿಂತಿರುವ ಅನೇಕ ಷೇರುಗಳೂ ಇವೆ. ಹೀಗಾಗಿ ವಹಿವಾಟು ಮಾಡುವಾಗ ಎಚ್ಚರದಿಂದ ಮಾಡುವುದು ಉತ್ತಮ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಉತ್ಥಾನದ್ವಾದಶಿ-ತುಳಸಿ ಹಬ್ಬ

    ಎಂ.ವಿ.ಶಂಕರಾನಂದ

    ಕಾರ್ತೀಕ ಶುದ್ಧ ದ್ವಾದಶಿಯಂದು ತುಳಸೀ ಪೂಜೆಯನ್ನು ಸ್ತ್ರೀಯರು ನಿಯಮದಿಂದ ಮಾಡುತ್ತಾರೆ. ದೇವರಿಗೆ ತುಳಸೀ ಅರ್ಚನೆ ಮಾಡಿಸುತ್ತಾರೆ. ಉತ್ಧಾನದ್ವಾದಶಿಯಂದು ವಿಶೇಷ ಪೂಜೆ ನಡೆಸುತ್ತಾರೆ. ವಿಷ್ಣು ಪುರಾಣದ ಪ್ರಕಾರ ಆ ದಿನ ಕ್ಷೀರಪಥದಲ್ಲಿ ಗಗನ ನೀಲಿಮೆಯ ಭಿತ್ತಿಯಲ್ಲಿ ನಕ್ಷತ್ರಗಳ ಚಿತ್ರ ವಿಸ್ತಾರದಲ್ಲಿ ಶಯನ ವಿಷ್ಣುವಿನ ಆಕಾರವನ್ನು ಕಾಣಬಹುದು; ಅನಂತನ ಭೋಗತಲ್ಪದಲ್ಲಿ ಶಯನನಾಗಿದ್ದವನು ಅಂದು ಮೇಲಕ್ಕೇಳುತ್ತಾನೆಂಬ ವಾಡಿಕೆ. ಇದಕ್ಕಾಗಿ ಈ ದಿನವನ್ನು ಉತ್ಥಾನ ದ್ವಾದಶಿಯೆಂದು ಹೇಳುವುದುಂಟು.

    ತುಳಸಿಯ ಮಹಿಮೆ ಹಿರಿದಾಗಿದೆ. ತುಳಸಿಯ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ, ನಮಸ್ಕಾರದಿಂದ ರೋಗಪರಿಹಾರ, ಪ್ರೋಕ್ಷಿಸಿಕೊಂಡರೆ ಆಯುರ್ವೃದ್ಧಿ, ಸಸಿ ನೆಡುವುದರಿಂದ ಶ್ರೀಕೃಷ್ಣನ ಸಾನಿಧ್ಯ ಪ್ರಾಪ್ತಿ, ಅರ್ಚಿಸಿದರೆ ಮೋಕ್ಷಪ್ರಾಪ್ತಿಯೆಂಬುದು ಸನಾತನ ಸಂಪ್ರದಾಯ. ಇದು ಕೇವಲ ಮಡಿವಂತರ ಅತ್ಯುಕ್ತಿಮಾತ್ರವಲ್ಲ; ಪುರಾಣಗಳಲ್ಲಿ, ಆಯುರ್ವೇದ ಶಾಸ್ತ್ರಗಳಲ್ಲಿ ತುಳಸಿಯ ಮಹಿಮೆ ಹೇಳಲ್ಪಟ್ಟಿದೆ.

    ವಿಷ್ಣು ಪುರಾಣದ ಪ್ರಕಾರ ಹಿಂದೆ ಜಲಂಧರನೆಂಬ ಪ್ರಬಲ ರಾಕ್ಷಸನಿದ್ದನು. ಆತನ ಹೆಂಡತಿ ವೃಂದೆ. ಈಕೆ ಪರಮ ಪತಿವ್ರತೆ. ಈಕೆಯ ಪಾತಿವ್ರತ್ಯ ಬಲದಿಂದ ಯಾವ ಯುದ್ಧದಲ್ಲಿಯೂ ಪತಿಗೆ ಸೋಲು ಸಂಭವಿಸಿರಲಿಲ್ಲ. ಆದರೆ ಈ ವಿಜಯೋನ್ಮತ್ತತೆಯಲ್ಲಿ ಅವನು ದೇವತೆಗಳನ್ನೂ ಸೋಲಿಸುತ್ತಾ ಬಂದನು. ಆಗ ದೇವಲೋಕದವರೆಲ್ಲ ವಿಷ್ಣುವಿನ ಮೊರೆಹೊಕ್ಕರು.

    ವೃಂದೆಯ ಪಾತಿವ್ರತ್ಯ ಪ್ರಭಾವವನ್ನು ತಿಳಿದಿದ್ದ ವಿಷ್ಣು, ಅದರ ಭಂಗಕ್ಕೆಂದು ಕಪಟೋಪಾಯವನ್ನು ಯತ್ನಿಸಿದನು. ಜಲಂಧರ-ದೇವತೆಗಳೊಂದಿಗೆ ಯುದ್ಧ ಮಾಡುತ್ತಿದ್ದಾಗ ವಿಷ್ಣು ತಾನೇ ಜಲಂಧರನ ವೇಷಧರಿಸಿ, ಬೇರ್ಪಟ್ಟ ರುಂಡ-ಮುಂಡಗಳ ವಿಕೃತ ರೂಪದಲ್ಲಿ ಕಾಣಿಸಿಕೊಂಡನು. ಸತಿ ವೃಂದೆಯು ಪತಿಯನ್ನು ಕಳೆದುಕೊಂಡೆನೆಂದು ಶೋಕಿಸಿದಳು. ಅಷ್ಟರಲ್ಲಿ ವಿಷ್ಣು ಸಾಧುವೇಶದಿಂದ ಪುನಃ ಕಾಣಿಸಿಕೊಂಡು ಸಂಜೀವಿನಿ ವಿದ್ಯೆಯಿಂದ ಆ ಬೇರ್ಪಟ್ಟ ರುಂಡ-ಮುಂಡವನ್ನು ಕೂಡಿಸಿದನು. ವೃಂದೆಯು ಸಂತೋಷದಿಂದ ಪತಿಯನ್ನಪ್ಪಿದಳು! ಆದರೆ ವಾಸ್ತವವಾಗಿ ವ್ರತಭಂಗವಾಯಿತು. ವೃಂದೆ ಮೋಸದಿಂದ ಜಾರಿದಳು. ಅತ್ತ ಜಲಂಧರ ಮೃತನಾದನು. ಸತ್ಯಸಂಗತಿ ತಿಳಿದ ಮೇಲಂತೂ ಉದ್ವೇಗಗೊಂಡ ವೃಂದೆಯು, ವಿಷ್ಣುವಿಗೆ – ʼನಿನಗೆ ಪತ್ನಿ ವಿಯೋಗ ಒದಗಲಿʼ ಎಂದು ಶಪಿಸಿದಳು. ಆನಂತರ ಚಿತೆಯನ್ನೇರಿದಳು. ಇದೇ ತ್ರೇತಾಯುಗದಲ್ಲಿ ಶ್ರೀರಾಮನಿಗೆ ಆದ ಸೀತಾವಿಯೋಗ.
    ಪಾರ್ವತಿಯು ವೃಂದೆಗಾಗಿ ಚಿತೆಯ ಸುತ್ತಲೂ ವೃಂದಾವನ ನಿರ್ಮಿಸಿದಳು. ಅಲ್ಲಿ ಬೆಳೆದ ತುಳಸಿಯನ್ನು ವಿಷ್ಣು ಹೃತ್ಪೂರ್ವಕವಾಗಿ ಸ್ವೀಕರಿಸಿ ಧರಿಸಿದನು. ವೃಂದೆಯ ವನ – ವೃಂದಾವನವಾಯಿತು.

    ಉತ್ಥಾನದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ ಗಂಧಾಕ್ಷತೆಗಳಿಂದ ವಿಶೇಷ ಪೂಜೆ ಮಾಡುವರು. ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹು ಪವಿತ್ರವಾದವುಗಳು. ತ್ರಿಮೂರ್ತ್ಯಾತ್ಮಕವಾದವುಗಳು. ಆದ್ದರಿಂದ ಇವುಗಳನ್ನು ಈ ದಿನ ಪೂಜೆಗೆ ಅಗತ್ಯವಾಗಿ ಉಪಯೋಗಿಸುವರು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು, ತ್ರಿಮೂರ್ತಿಗಳೂ, ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರ ದೇವತೆಗಳೂ ಅಲ್ಲಿ ಸೇರುತ್ತಾರೆಂದು ʼತುಳಸಿʼ ಮಹಾತ್ಮೆಯಲ್ಲಿ ಹೇಳಿದೆ. ಈ ದಿನ ಕಾರ್ತೀಕ ದಾಮೋದರ ಸ್ವಾಮಿಯನ್ನು ಷೋಡಶೋಪಚಾರಗಳಿಂದ ಪೂಜಿಸಿ, ಶಂಖದಲ್ಲಿ ಹಾಲೆರೆದು ʼಉತ್ತಿಷ್ಠೋತ್ತಿಷ್ಠ ಗೋವಿಂದ, ಉತ್ತಿಷ್ಠ ಗರುಡಧ್ವಜ, ಉತ್ತಿಷ್ಠಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರುʼ ಎಂದು ಪ್ರಾರ್ಥಿಸುವ ಪದ್ಧತಿಯಿದೆ.ತುಳಸಿಪೂಜೆಯಿಂದ ಸಕಲ ಅಭೀಷ್ಠ ಸಿದ್ಧಿಯೆಂದು ಪದ್ಮಪುರಾಣದಲ್ಲಿ ಹೇಳಿದೆ.
    ತುಳಸಿಯು ಮನೆ ಮನೆಯ ಕಲ್ಪವೃಕ್ಷ
    ಶಿವನಿಗೆ ಬಿಲ್ವಪತ್ರೆಯು ಪ್ರಿಯವಾದಂತೆ, ವಿಷ್ಣುವಿಗೆ ತುಳಸಿಯು ಪ್ರಿಯವಾದುದು. ಅನೇಕರು ತುಳಸಿಯ ತೀರ್ಥ ತೆಗೆದುಕೊಳ್ಳದೆ ಊಟಮಾಡುವುದಿಲ್ಲ. ತುಳಸಿಯಲ್ಲಿ ಬಿಳಿ ತುಳಸಿ, ಕಪ್ಪು ತುಳಸಿ, ಅರಣ್ಯ ತುಳಸಿ, ಬಿಲ್ವ-ಗಂಧ ತುಳಸಿ, ವಿಶ್ವಗಂಧ ತುಳಸಿ ಎಂಬ ಅನೇಕ ವಿಧಗಳುಂಟು. ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿಲ್ಲ. ಅಂಟುರೋಗಗಳ ಬಾಧೆಯಿಲ್ಲ. ಮಕ್ಕಳ ಕೆಮ್ಮು, ನೆಗಡಿಗೆ ಇದು ಹತ್ತಿರ ವೈದ್ಯ. ಚರ್ಮವ್ಯಾಧಿಗಳಿಗೂ ಉತ್ತಮ ಪರಿಹಾರ. ಪಾಶ್ಚಾತ್ಯರೂ ಸಹ ತುಳಸಿಯ ವೈದ್ಯಕೀಯ ಗುಣವನ್ನು ಕಂಡು ಮೆಚ್ಚಿದ್ದಾರೆ. ಜಪಾನ್‌ ನಲ್ಲಿ ಮನೆಗಳ ಮುಂದೆ ತುಳಸೀ ತೋಟಗಳುಂಟು.

    ಈ ಬಾರಿಯ ತುಳಸಿ ಪೂಜೆಯನ್ನು 5ನೇ ನವೆಂಬರ್‌ 2022 ಶನಿವಾರ ಆಚರಿಸಲಾಗುತ್ತದೆ.
    ದ್ವಾದಶಿ ತಿಥಿ ಸಮಯ: ನವೆಂಬರ್ 04, ಸಂಜೆ 6:08 ರಿಂದ ನವೆಂಬರ್ 05, ಸಂಜೆ 5:07 ರವರೆಗೆ.ತುಳಸಿ ಪೂಜೆಯನ್ನು ಭಾರತದಾದ್ಯಂತ ವಿವಾಹಿತ ಮಹಿಳೆಯರು ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ. 2022 ನೇ ಸಾಲಿನ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

    ಮಳೆ; ಜೆಡಿಎಸ್ ಪಂಚರತ್ನ ರಥಯಾತ್ರೆ ಒಂದು ವಾರ ಮುಂದಕ್ಕೆ

    MULBAGILU NOV 1
    ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದ್ದು, ಇಂದಿನಿಂದ ಆರಂಭವಾದ ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.

    ಇಂದಿಲ್ಲಿ ಈ ವಿಷಯ ತಿಳಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು; ಮಳೆ ಬಿಡುವು ಕೊಟ್ಟ ಕೂಡಲೇ ರಥಯಾತ್ರೆಯನ್ನು ಕೂಡಲೇ ಆರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.

    ಬೆಳಗ್ಗೆಯೇ ಇತಿಹಾಸ ಪ್ರಸಿದ್ಧ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ, ಹೋಮ ನೆರವೇರಿಸಿದ ನಂತರ ರಥಯಾತ್ರೆಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಹಾಗೂ ನಾನು ಚಾಲನೆ ನೀಡಿದೆವು. ಆದರೆ, ಮಳೆ ಹೆಚ್ಚಾದ ಕಾರಣಕ್ಕೆ ಬೃಹತ್ ಸಮಾವೇಶ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯವನ್ನು ಒಂದು ವಾರ ಮುಂದಕ್ಕೆ ಹಾಕಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

    ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು;

    ಇವತ್ತಿನ ಕಾರ್ಯಕ್ರಮಕ್ಕೆ ವರುಣನ ಸಿಂಚನ ಆಗಿದೆ. ರಭಸವಾಗಿ ಸುರಿದ ಕಾರಣ ಬಹಿರಂಗ ಸಭೆ, ರಥಯಾತ್ರೆ, ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ.

    ಬೆಳಗ್ಗೆಯಿಂದ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಆಯಿತು. ದೇವರ ಪ್ರಸಾದ ಕೂಡ ಆಯಿತು. ಆದರೆ ಮಳೆ ಕಾರಣಕ್ಕೆ ಎಲ್ಲರ ಸಲಹೆ ಪಡೆದು ರಥಯಾತ್ರೆ ಮುಂದೂಡಿದ್ದೇವೆ. ಒಂದು ವಾರದ ನಂತರ ಮುಳಬಾಗಿಲು ಪಟ್ಟಣದಿಂದಲೇ ಯಾತ್ರೆ ಶುರು ಮಾಡುತ್ತೇವೆ.

    ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನಗಳು ಮಳೆ ಬರಲಿದೆ ಎಂದಿದೆ. ಹೀಗಾಗಿ ಜನರಿಗೆ ತೊಂದರೆ ಆಗದಂತೆ ಮುಂದಕ್ಕೆ ಹಾಕಿದ್ದೇವೆ.

    ಇವತ್ತು ಬಹಳ ದೊಡ್ಡ ಮಟ್ಟದಲ್ಲಿ ಜನತೆ ಬೆಂಬಲ ನೀಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸುವುದು ಕಷ್ಟವಾಗಿದೆ.

    ಮಳೆಯ ಸೂಚನೆ ನೋಡಿಕೊಂಡು ಕಾರ್ಯಕ್ರಮ ಮಾಡಲಾಗುವುದು. ಎರಡು ದಿನಗಳಲ್ಲಿ ದಿನಾಂಕವನ್ನು ತಿಳಿಸಲಾಗುವುದು.

    ಬೃಹತ್ ಸಮಾವೇಶದಲ್ಲಿ ಮುಂದಿನ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿ, ಅವರಿಗೆ ಪಕ್ಷ ನಿಷ್ಠೆಯ ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮ ಇತ್ತು. ಆದರೆ, ವಾರದ ನಂತರದ ಸಮಾವೇಶದಲ್ಲಿ ಪಟ್ಟಿ ಘೋಷಣೆ, ಪ್ರಮಾಣ ವಚನ ಬೋಧನೆ ಎರಡನ್ನೂ ಮಾಡಲಾಗುವುದು.

    ಈಗಾಗಲೇ ಅಭ್ಯರ್ಥಿಗಳಿಗೆ ಸೂಚನೆ ಕೊಡಲಾಗಿದ್ದು, ಅವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷವೇ ಅವರಿಗೆ ಸೂಚನೆ ನೀಡಲಾಗಿದೆ ಸಂಭವನೀಯ ಎಲ್ಲಾ ಅಭ್ಯರ್ಥಿಗಳನ್ನು ಮುಳಬಾಗಿಲಿಗೆ ಕರೆಯಲಾಗಿತ್ತು.

    ಕೆಸಿಆರ್ ಅವರ ಪ್ರತಿನಿಧಿ ಹಾಜರು:

    ರಥಯಾತ್ರೆ ಚಾಲನೆ ಹಾಗೂ ಬೃಹತ್ ಸಮಾವೇಶಕ್ಕೇ ತೆಲಂಗಾಣ ಮುಖ್ಯಮಂತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್ ಅವರು ಶಾಸಕ ರಾಜೇಂದರ್ ರೆಡ್ಡಿ ಅವರನ್ನು ಕಳಿಸಿದ್ದಾರೆ. ಅವರ ಆಗಮನ ನಮಗೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಬಿಜೆಪಿ ವಿರುದ್ಧ ವಾಗ್ದಾಳಿ:

    ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಆಗಿದೆ. ಬಿಜೆಪಿ ನಡವಳಿಕೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶಾಸಕರನ್ನು ಖರೀದಿ ಮಾಡಿ ಸರಕಾರ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುವ ಕಾಲ ಹತ್ತಿರದಲ್ಲೇ ಇದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

    ಮನುಷ್ಯ ಬದಲಾಗಲೇಬೇಕು…


    ಹೆಸರಾಂತ ಕತೆಗಾರ ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ ಮನುಷ್ಯರು ಬದಲಾಗುವರೆ?’ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿರುವ 15 ಕತೆಗಳು ಬದುಕಿನ ಭಿನ್ನ ನೆಲೆಗಳನ್ನು ದರ್ಶಿಸುತ್ತವೆ.


    ಕತೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವುದರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಈ ಜಗತ್ತಿಗೆ ಬರುತ್ತದಷ್ಟೆ.. (ಒಂದು ಭೋಜನ ಮೀಮಾಂಸೆ) ಎಂಬ ನಂಬಿಕೆಯಿಂದ ಬರೆಯುತ್ತಿರುವ ಕತೆಗಾರ ಕೆ. ಸತ್ಯನಾರಾಯಣ ಅವರಮನುಷ್ಯರು ಬದಲಾಗುವರೆ?’ ಕಥಾಸಂಕಲನ ಮನುಷ್ಯ ಜಗತ್ತಿನ ಹಲವು ಸೂಕ್ಷ್ಮ ಸುಳಿಹುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.

    ಕತೆಗಾರನ ಮುಂದೆ ವಿಶಾಲವಾದ, ವಿಚಿತ್ರವಾದ ಜಗತ್ತಿದೆ. ಅವರವರ ನೋಟಕ್ಕೆ ತಕ್ಕಂತೆ ಅದು ಅವರಿಗೆ ದಕ್ಕುತ್ತದೆ. ಹಾಗೆ ದಕ್ಕಿಸಿಕೊಳ್ಳುವಾಗ ಅವರಿಗೆ ಜವಾಬ್ದಾರಿಯೂ ಇರುತ್ತದೆ. ಅದನ್ನೇ ಅವರು ಈ ಮೇಲೆ ಹೇಳಿದ ಕತೆಯ ಒಂದು ಪಾತ್ರ, ಪ್ರಸಿದ್ಧ ವಿಮರ್ಶಕ ರಾಜಶೇಖರ ಅವರ ಮಾತುಗಳಲ್ಲಿ ಹೀಗೆ ಹೇಳಿಸುತ್ತಾರೆ.. “ನಾವೆಲ್ಲರೂ ನಾಡಿನ ಪಳಗಿದ ಕಥನಕಾರರು. ಕತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು, ಎಲ್ಲಿಗೆ ನಿಲ್ಲಿಸಬೇಕು, ಯಾವ ವಿಚಾರ, ಯಾವ ಭಾವ, ಯಾವ ತಿರುವು, ಯಾವ ಭೇದಭಾವಕ್ಕೆ ಎಷ್ಟೆಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ನಿಮಗೆ ಬಿಟ್ಟಿದ್ದು. ಆದರೆ ಏನನ್ನೂ ಬಿಡಬೇಡಿ, ಯಾವುದನ್ನೂ ಬಿಡಬೇಡಿ, ಯಾವೊಂದು ನೆಲೆಗೂ ಮೋಸ ಮಾಡಬೇಡಿ ಎಂದು ಮಾತ್ರ ಕೇಳಿಕೊಳ್ಳುತ್ತೇನೆ.”

    ನಿಜ, ಒಂದು ಭೋಜನ ಮೀಮಾಂಸೆ ಎಂಬ ಕತೆಯಲ್ಲಿ ಕಥನ ಸಾಹಿತ್ಯದ, ಒಟ್ಟಾರೆ ಸಾಹಿತ್ಯದ ಮೀಮಾಂಸೆಯೂ ಇದೆ. ಇದು ಕೇವಲ ಇದೊಂದೇ ಕತೆಯಲ್ಲಿ ಅಲ್ಲ, ಇನ್ನೂ ಕೆಲವು ಕತೆಗಳಲ್ಲಿ ಇಂಥ ಕಥನ ಮೀಮಾಂಸೆ ಬರುತ್ತದೆ. ಬರೆದವರೇ ಬರವಣಿಗೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಹೋಗಬಾರದು…. `ಒಂದೇ ಬರವಣಿಗೆ ಬರೆದವರಿಗೂ ಸೇರಿದಂತೆ ಸಕಲರಿಗೂ ಬೇರೆ ಬೇರೆಯಾಗಿ ಕಾಣುತ್ತದೆ. ನಮ್ಮ ಬರವಣಿಗೆ ಹೀಗೇ ಕಾಣುತ್ತಿರಬೇಕು ಎಂದು ನಮ್ಮ ಆಸೆ…” ಎಂಬ ಮಾತುಹನಿ ಟ್ರಾಪ್‌’ ಕತೆಯ ರಾಮ್‌ ಸಿಂಗ್‌ ಮೂಲಕ ಹೇಳಿಸುತ್ತಾರೆ.

    ಹಾಗೆಯೇ ಜೀವನ ಮೀಮಾಂಸೆಯೂ ಇಲ್ಲಿಯ ಕತೆಗಳಲ್ಲಿದೆ. ಮೊದಲನೆಯ ಕತೆ, ವಾಷಿಂಗ್‌ಟನ್‌ ಮೆಮೋರಿಯಲ್‌ ಮುಂದೆ, ಇದರಲ್ಲಿ, ವಕೀಲನಾಗಿ ವಿಫಲನಾದ ವ್ಯಕ್ತಿ ಗುಡಿಬಂಡೆ ದಿವಾಕರ ಅಮೆರಿಕದಲ್ಲಿ ಹೇಗೆ ಫ್ಯಾಮಿಲಿ ಕೌನ್ಸೆಲರ್ ಆಗಿ ಯಶಸ್ವಿಯಾದ ಎಂಬುದನ್ನು ಹೇಳುತ್ತದೆ. ಇವನ ಜೀವನ ಸಿದ್ಧಾಂತ ಹೀಗಿದೆ, ಜೀವನ ನೇರವಾಗಿದೆ, ಸರಳವಾಗಿದೆ, ಅನಗತ್ಯವಾಗಿ ಸಂಕೀರ್ಣ ಮಾಡಿಕೊಳ್ಳಬೇಡಿ. ಜೀವನ ಸಂಕೀರ್ಣವಾಗೋಕ್ಕೆ ಕಾರಣ ಸಮಸ್ಯೆಯ ಸಂಕೀರ್ಣತೆಯಲ್ಲ, ನಮ್ಮ ನಮ್ಮ ಅಹಂಕಾರ. ಇದು ಗಂಡು-ಹೆಣ್ಣಿನ ಸಂಬಂಧಕ್ಕೂ ಅನ್ವಯಿಸುತ್ತದೆ. ದೇಶ-ದೇಶಗಳ ನಡುವಿನ ಸಂಬಂಧಕ್ಕೂ ಕೂಡ ಅನ್ವಯಿಸುತ್ತದೆ…” ಹಾಗೆಯೇ ಇನ್ನೊಂದು ಕಡೆ ಆತನೇ, ಹೇಳುವ ಈ ಮಾತನ್ನು ಗಮನಿಸಿ,ಯಾವ ಮದುವೆನೂ ಶೇಕಡ 51ಕ್ಕಿಂತ ಹೆಚ್ಚು ಯಶಸ್ವಿಯಾಗೋಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಸಂಸ್ಕೃತಿಯಲ್ಲೂ ದಾಂಪತ್ಯ ಜೀವನದ ಪೀಕ್‌ ಪರ್ಫಾರ್ಮನ್ಸ್ ಅಷ್ಟೇ. ಮನುಷ್ಯನ ಜಾಣತನ ಎಲ್ಲಿದೆ ಅಂದರೆ, ಅದು ಯಾವತ್ತೂ ಶೇಕಡ 49ಕ್ಕಿಂತ ಕಡಿಮೆ ಆಗದಂತೆ ನೋಡಿಕೊಳ್ಳೋದು.” ಇದನ್ನೇ ಆತ ದಾಂಪತ್ಯದ ಆಚೆಗೂ ಗೆಳೆತನಕ್ಕೆ, ಮನುಷ್ಯರ, ದೇಶಗಳ ಎಲ್ಲ ಸಂಬಂಧಕ್ಕೂ ಕೂಡ ಅನ್ವಯಿಸುತ್ತೆ ಎಂದು ಹೇಳುತ್ತಾನೆ.

    `ಹನುಮಂತಾಚಾರ್‌ ಉಯಿಲು’ ಕತೆಯಲ್ಲಿ ಸಾವು ಮತ್ತು ಬದುಕಿನ ಜಿಜ್ಞಾಸೆ ಬರುತ್ತದೆ. “ಬದುಕುವುದು, ನಿತ್ಯವೂ ಬದುಕುವುದು, ಬದುಕುತ್ತಾ ಹೋಗುವುದೇ ಸಹಜವಾದದ್ದು. ಮನುಷ್ಯ ಹುಟ್ಟುವುದೇ ಬದುಕುವುದಕ್ಕೆ, ಬದುಕುತ್ತಾ ಹೋಗುವುದಕ್ಕೆ. ಸಾವೆನ್ನುವುದು Disruption, Source of disturbance. ಬದುಕು ಇಷ್ಟವಾಗದವರು, ಬದುಕಿನ ಬಗ್ಗೆ ಅಸೂಯೆ ಪಡುವವರು ನೀಡುವ ಶಾಪ……” ಎಂದು ಹೇಳುವ ಹನುಮಂತಾಚಾರ್‌ ಸಾವಿನ ಸಂದರ್ಭದಲ್ಲಿ ಊರುಬಿಟ್ಟು ಓಡಿಹೋಗಿ ನಂತರ ಮರಳುವವರು. ಕಾರಣ ಏನೆಂದರೆ, ಸಾವಿನ ಸಂದರ್ಭದಲ್ಲಿ ಬಳಸುವ ಕೃತ ಭಾಷೆ, ಯಾಂತ್ರಿಕವಾದ ಭಾವ ವ್ಯಕ್ತಪಡಿಸಸುವುದು ಇವೆಲ್ಲ ಅವರಿಗೆ ಇಷ್ಟವಾಗದಿರುವುದು. ಇದರಲ್ಲಿ ಮಾಧ್ಯಮದ ನಿವಿರಾದ ಲೇವಡಿಯೂ ಇದೆ.

    ಹಾಗೆಯೇ `ಕಾಮತರ ಪಂಜಾಬಿ ಸೊಸೆ’ ಕತೆಯಲ್ಲಿಯ ಸೊಸೆ ಸ್ವರೂಪ ಧಿಲ್ಲಾನ್‌ ತನ್ನ ಒಳಗುದಿಯನ್ನೆಲ್ಲ ತೋಡಿಕೊಂಡ ಬಳಿಕ ಹೇಳುವ, “ಇದನ್ನೆಲ್ಲ ನಾನು ಹೇಳಿದ್ದು, ಯಾರಲ್ಲಾದರೂ ತೋಡಿಕೊಳ್ಳಬೇಕು ಎಂದಲ್ಲ. ನನ್ನ ನಿರ್ಧಾರ ಗಟ್ಟಿಯಾಗಲೆಂದು. ಒಳ್ಳೆಯ ಮಾತುಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದರಿಂದ ನಾವು ಆ ಮಾತುಗಳಿಗೆ ಬದ್ಧರಾಗುತ್ತೇವೆ. ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನು ಆಡುತ್ತಿರಬೇಕು….” ಹೀಗೆ ಬದುಕಿನ ಒಂದು ಗಾಢವಾದ ಸತ್ಯವನ್ನು ಹೃದಯಕ್ಕೆ ತಟ್ಟುವ ಒಂದು ಸನ್ನಿವೇಶವನ್ನು ಸೃಷ್ಟಿಸಿ ಪಾತ್ರವೊಂದರ ಮೂಲಕ ಹೇಳಿಸುವುದು ಸತ್ಯನಾರಾಯಣ ಅವರ ವಿಶಿಷ್ಟ ಕಲೆ.

    ಐಎಎಸ್‌ ಅಧಿಕಾರಿಯಾಗಿದ್ದ ಶಿವಗಾಮಿ ನಂತರ ತನ್ನ ನೌಕರಿಗೆ ರಾಜಿನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಿದ್ದು, ಸೋತಿದ್ದು, ಐಎಎಸ್‌ ಪರೀಕ್ಷೆಗೆ ಕುಳಿತವರಿಗೆ ತರಬೇತಿ ನೀಡುವುದು, ನಂತರ ಸುಪ್ರೀಂ ಕೋರ್ಟಿನ ವಕೀಲೆಯಾಗಿದ್ದು ಇವೆಲ್ಲ ಮನುಷ್ಯನೊಬ್ಬ ಬದುಕಿನಲ್ಲಿ ಬದಲಾದ ಹಂತಗಳನ್ನು ಹೇಳುತ್ತದೆ. ಮನುಷ್ಯ ಬದಲಾಗುವುದು ಒಂದು ಸಹಜ ಪ್ರಕ್ರಿಯೆ. ಆದರೆ ಹೀಗೆ ಬದಲಾಗುವಾಗ ತಮ್ಮ ವ್ಯಕ್ತಿತ್ವದ ಸಮಗ್ರತೆಯನ್ನು ಹೇಗೆ ಶಿವಗಾಮಿ ಕಾಯ್ದುಕೊಂಡಳು ಎಂಬುದನ್ನು `ಶಿವಗಾಮಿ ಬದಲಾದಳೆ(ರೆ)?’ ಕತೆ ಹೇಳುತ್ತದೆ. ವ್ಯಕ್ತಿಯ ಮತ್ತು ಜೊತೆಜೊತೆಗೆ ಸಮಾಜದ ತಂತಿಯ ಮೇಲಿನ ನಡಿಗೆಯನ್ನು ಕತೆ ಸೊಗಸಾಗಿ ನಿರೂಪಿಸುತ್ತದೆ.

    ಸಾರ್ವಜನಿಕ ಬದುಕು ಮತ್ತು ಕೌಟುಂಬಿಕ ಬದುಕಿನ ದ್ವಿಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಸಂಧ್ಯಾ ಪ್ರಾಶಾಂತರ ಬದುಕು ಕದ್ದು(!) ಕೇಳಿಸಿಕೊಂಡ ಕಥೆ’ಯಲ್ಲಿ ಸರಳವಾಗಿ ಮೂಡಿಬಂದಿದೆ. ಅವರದು ಬೂಟಾಟಿಕೆಯ ಬದುಕು ಎನಿಸಿದರೂ ಈ ಜಗತ್ತು ಇರುವುದೇ ಹೀಗೆ ಅಲ್ಲವೆ ಅನ್ನಿಸಿ ಅವರ ಬಗ್ಗೆ ಸಾಫ್ಟ್‌ಕಾರ್ನ್‌ರ್‌ ತಾಳಿಬಿಡುತ್ತೇವೆ. ಹಾಗೆಯೇನಾಲ್ವಡಿಯವರ ವಿವೇಚನೆ’ ಎಂಬ ಕತೆ ಇತಿಹಾಸದ ಯಾವುದೋ ಕಳೆದುಹೋದ ಪುಟದ ದಾಖಲೆಯಂತಿದೆ. ಒಬ್ಬ ಪ್ರಜಾನುರಾಗಿ ದೊರೆ ತನ್ನ ಅಧಿಕಾರಿಗಳನ್ನು ನೇಮಿಸಿಕೊಳ್ಳುವಾಗ ಎಷ್ಟೊಂದು ಸೂಕ್ಷ್ಮವಾಗಿ ಇರಬಹುದು ಎಂಬುದನ್ನು ಇದು ಹೇಳುತ್ತದೆ.

    ಕತೆಗಾರ ಸತ್ಯನಾರಾಯಣರು ತಮ್ಮ ಮಾಗಿದ ವಯಸ್ಸಿನಲ್ಲಿ ಬರೆದಿರುವ ಇಲ್ಲಿಯ 15 ಕತೆಗಳು ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಡುತ್ತವೆ. ಆ ಮೂಲಕ ತಾವು ಬದುಕಿನ ಅಂಚಿನಲ್ಲಿದ್ದೇವೆ ಎಂಬ ಹತಾಶೆಯಲ್ಲಿದ್ದವರಿಗೆ ಜೀವನೋತ್ಸಾಹವನ್ನು ತುಂಬುತ್ತವೆ. ಮನುಷ್ಯರು ಬದಲಾಗುತ್ತಾರೆ. ಈ ಬದಲಾಗುವಿಕೆಯೇ ನಿಜವಾದ ಜೀವನ. ಬದಲಾಗುವಿಕೆ ಇಲ್ಲದಿದ್ದರೆ ಬದುಕು ಹರಿವ ನೀರಾಗದೆ ಮಲೆತ ಕೊಚ್ಚೆಗುಂಡಿಯಾಗುತ್ತದೆ. ಇದನ್ನು ಸಂವಹನಗೊಳಿಸುವಲ್ಲಿ ಈ ಕತೆಗಳ ಮೂಲಕ ಸತ್ಯನಾರಾಯಣ ಅವರು ಯಶಸ್ವಿಯಾಗಿದ್ದಾರೆ.

    ನಗುವಿನ ಒಡೆಯನಿಗೆ ಕರ್ನಾಟಕ ರತ್ನ; ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ

    Bengaluru Nov 1

    ಕನ್ನಡ ಚಲನಚಿತ್ರ ನಟ ದಿ. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರದ ನೀಡಿರುವ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ದಿ. ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರದಾನ ಮಾಡಿದರು.

    ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ಸುರಿವ ಮಳೆಯ ನಡುವೆಯೇ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ದಿ.ಪುನೀತ್ ರಾಜ್ ಕುಮಾರ್ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಕಣ್ತುಂಬಿಕೊಂಡರು. 

    ಮುಖ್ಯ ಅತಿಥಿಯಾಗಿ ಆಗಮಿಸಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನೀಕಾಂತ್, ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಆತ ಅಪಾರವಾದದ್ದನ್ನು ಸಾಧಿಸಿದ್ದಾರೆ. ಎನ್ ಟಿಅರ್, ಎಂಜಿಆರ್, ಶಿವಾಜಿಗಣೇಶನ್, ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20  ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು. 

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೂ. ಎನ್ ಟಿಆರ್, ಒಬ್ಬ ವ್ಯಕ್ತಿಗೆ ಉಪನಾಮ ಎಂಬುದು ಪರಂಪರೆಯಿಂದ ಬರುತ್ತದೆ ಆದರೆ ವ್ಯಕ್ತಿತ್ವ ಸ್ವಂತ ಸಂಪಾದನೆಯಾಗಿರುತ್ತದೆ. ಸ್ವಂತ ವ್ಯಕ್ತಿತ್ವದಿಂದ ನಗುವಿನಿಂದಲೇ ಒಂದು ರಾಜ್ಯ ಗೆದ್ದ ರಾಜ ಪುನೀತ್ ರಾಜ್ ಕುಮಾರ್, ಅವರು ಎಲ್ಲಕ್ಕೂ ಮಿಗಿಲಾಗಿ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು ಎಂದರು. ಸಿಎಂ ಬೊಮ್ಮಾಯಿ, ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು “ನನ್ನ ಪುಣ್ಯ ಭಾಗ್ಯ, ಸರ್ಕಾರದ ಪುಣ್ಯಭಾಗ್ಯ, ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು.

    ಮೂರ್ತಿ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ, ಸಚಿವರಾದ ಆರ್. ಅಶೋಕ್, ಸುನಿಲ್ ಕುಮಾರ್,ಡಾ. ಸುಧಾಕರ್, ವಿ. ಸೋಮಣ್ಣ, ಬೈರತಿ ಬಸವರಾಜ್, ಬಿ.ಸಿ. ನಾಗೇಶ್, ಚಲನಚಿತ್ರ ನಟ ಶಿವರಾಜಕುಮಾರ್ ಹಾಗೂ ಮತ್ತಿತರ ಗಣ್ಯರು ಇದ್ದರು.

    ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂನಿಯರ್ ಎನ್. ಟಿ. ಆರ್. ಅವರನ್ನು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸನ್ಮಾನಿಸಿದರು. ರಜನೀಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿದ್ದರು.

    DEEPAVALI: ದೀಪದಿಂದ ದೀಪ ಬೆಳಗುವ ದೀಪಾವಳಿ

    ಎಂ.ವಿ.ಶಂಕರಾನಂದ

    ಪಾವಳಿ- ಶಬ್ದವು ದೀಪ ಮತ್ತು ಅವಳಿ ಹೀಗೆ ರೂಪಿತಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗುತ್ತದೆ. ಮನೆಯ ತುಂಬಾ ದೀಪಗಳನ್ನು ಹಚ್ಚಿ, ಅದರ ನಗುವಿನ ಬೆಳಕಲ್ಲಿ ನಾವು ನಗುತ್ತಾ ಸಂಭ್ರಮಿಸುವುದೇ ದೀಪಾವಳಿ ಹಬ್ಬ.

    ದೀಪಯತಿ ಸ್ವಯಂ ಪರ ಚ ಇತಿ ದೀಪಃ’’ ಅಂದರೆ ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.ತಮಸೋಮಾ ಜ್ಯೋತಿರ್ಗಮಯ’’ ಎಂಬ ಮಾತಿನಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ.

    ಈ ದೀಪಗಳನ್ನು ಬೆಳಗಿಸುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಯಾವ ಮನೆಯಲ್ಲಿ ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ ಸುಖಸಂಪತ್ತು ಸಮೃದ್ಧವಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ.

    ದೀಪೇನ ಲೋಕಾನ್ ಯಜತಿ ದೀಪಸ್ತೇಜೋಮಯಃ ಸ್ಮೃತಃI
    ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರಿಯೇII

    ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ, ಮೋಕ್ಷ ರೂಪವಾದ ನಾಲ್ಕು ವರ್ಗಪ್ರದವಾಗಿದೆ. ಅಂತಹ ದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ತಿಳಿಸುತ್ತದೆ.

    ದೀಪಾವಳಿ ಆರಂಭ ಎಂದಿನಿಂದ ?

    ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ, ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಯಿತು ಎನ್ನುತ್ತಾರೆ.

    ದೀಪಾವಳಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ, ಥಾಯ್ಲೆಂಡ್‌ಗಳಲ್ಲಿ ಸಹ ಆಚರಿಸುತ್ತಾರೆ. ಇದು ಜೈನರ 24ನೇ ತೀರ್ಥಂಕರರಾದ ಮಹಾವೀರರು ನಿರ್ವಾಣ ಹೊಂದಿದ ದಿನವಾದ್ದರಿಂದ ಜೈನರು ಇದರ ಅಮಾವಾಸ್ಯೆಯನ್ನು ಹೊಸವರ್ಷದ ಆರಂಭವಾಗಿ ಆಚರಿಸುತ್ತಾರೆ. ಈ ದಿನದಂದೇ ಅಶೋಕ ಚಕ್ರವರ್ತಿ ಬೌದ್ದ ಧರ್ಮಕ್ಕೆ ಪರಿವರ್ತನೆಯಾದನು ಎಂಬ ಪ್ರತೀತಿ ಬೌದ್ಧರಲ್ಲಿದೆ. ಹೀಗಾಗಿ ಅವರು ದೀಪಾವಳಿಯನ್ನು ಅಶೋಕ ವಿಜಯದಶಮಿಯಾಗಿ ಆಚರಿಸುತ್ತಾರೆ. ಸಿಖ್ಖರ ೬ನೇ ಗುರು ಹರಗೋವಿಂದ ಸಿಂಗ್ ೧೬೧೯ರಂದು ಗ್ವಾಲೀಯಾರ್ ಕೋಟೆಯ ಸೆರೆಮನೆಯಿಂದ ಈ ದಿನವೇ ಬಿಡುಗಡೆ ಹೊಂದಿದ್ದರು. ಆದ್ದರಿಂದ ಗುರು ತಮ್ಮ ಬಾಳಿಗೆ ಬೆಳಕು ತಂದುದಕ್ಕಾಗಿ ಸಿಖ್ಖರು ದೀಪಾವಳಿಯನ್ನು ಬಂದಿಚಾರ್ ದಿನವಾಗಿ ಆಚರಿಸುತ್ತಾರೆ.

    ದೀಪಾವಳಿಯನ್ನು ಆಶ್ವಯುಜದ ಕೊನೆಯಲ್ಲಿನ ಕೃಷ್ಣ ತ್ರಯೋದಶಿ(ಧನ ತ್ರಯೋದಶಿ), ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀಪೂಜೆ) ಮತ್ತು ಕಾರ್ತೀಕ ಮಾಸದ ಆರಂಭದ ಶುಕ್ಲ ಪಾಡ್ಯ(ಬಲಿ ಪಾಡ್ಯಮಿ), ಯಮ ದ್ವಿತೀಯಗಳಂದು ಅದ್ಧೂರಿಯಾಗಿ ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಕವಾಗಿ ಆಚರಿಸುತ್ತೇವೆ.

    ಹಬ್ಬದ ಆಚರಣೆ

    ಆಶ್ವಯುಜ ಬಹುಳ ತ್ರಯೋದಶಿಯಂದು ದೀಪಾವಳಿ ಹಬ್ಬವು ಆರಂಭವಾಗುತ್ತದೆ. ಆ ದಿನ ರಾತ್ರಿ ಎಳ್ಳೆಣ್ಣೆ ದೀಪ ಹಚ್ಚಿ, ಮನೆ ಮುಂದಿರುವ ಬಹು ಎತ್ತರವಾದ ಜಾಗದಲ್ಲಿ ದೀಪ ಇಡುವುದರಿಂದ ಅಪಮೃತ್ಯು’ ನಿವಾರಣೆಯಾಗುತ್ತದೆ. ಈ ದೀಪವನ್ನು ಯಮದೇವರ ಪ್ರೀತಿಗಾಗಿ, ಮೃತ್ಯು ನಿವಾರಣೆಗಾಗಿ ಇಡುತ್ತೇವೆ. ಹಾಗಾಗಿ ಈ ದೀಪವನ್ನುಯಮದೀಪ’ ಎನ್ನುತ್ತೇವೆ. ಅದೇ ದಿನದ ಸಂಜೆ ಹಂಡೆಯಲ್ಲಿ ನೀರು ತುಂಬಿಸುವ ಹಬ್ಬ ಎನ್ನುತ್ತೇವೆ. ಹಂಡೆಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಿ, ಸುಣ್ಣ ಮತ್ತು ಕೆಮ್ಮಣ್ಣಿನಿಂದ ರಂಗೋಲಿ ಬಿಡಿಸುತ್ತಾರೆ. ಹಂಡೆಗೆ ನೀರು ತುಂಬಿಸಿ ಎಲೆ ಅಡಿಕೆ, ಹೂವು, ನಾಣ್ಯ ಹಾಕಿ ಪೂಜಿಸುತ್ತಾರೆ. ಈ ದಿನವನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಈ ದಿನ ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.

    ಮಾರನೇ ದಿನವೇ ನರಕ ಚತುರ್ದರ್ಶಿ. ದೀಪಾವಳಿಯ ಪ್ರಮುಖ ದಿನ. ನರಕ ಎಂಬುವುದಕ್ಕೆ ಅಜ್ಞಾನ ಎಂದರ್ಥ. ಈ ಅಜ್ಞಾನವು ಚತುರ್ದಶಿಯ ದಿನವೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ಈ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಚತುರ್ದಶಿ ಎಂದರೆ ೧೪ ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಕಲ್ಪ, ಸಂಹಿತೆ, ಜ್ಯೋತಿಷ್ಯ, ಪುರಾಣ, ಸ್ಮೃತಿ, ವ್ಯಾಕರಣ, ಶೀಕ್ಷಾ, ನ್ಯಾಯ, ಛಂದಸ್ಸು, ಮೀಮಾಂಸೆ ಎಂಬ ೧೪ ವಿದ್ಯೆಗಳನ್ನು ಕಲಿಯಬೇಕೆಂದು ಶಾಸ್ತ್ರವು ತಿಳಿಸುತ್ತದೆ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ನಮ್ಮ ಧರ್ಮಶಾಸ್ತ್ರ ಹೇಳುತ್ತದೆ.

    ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುದರ್ಶಿ
    ಪ್ರಾತಃ ಸ್ನಾನಂ ತು ಯಃ ಕುರ್ಯಾದ್ಯಮಲೋಕಂ ನ ಪಶ್ಯತಿ


    ಎಣ್ಣೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ. ಎಣ್ಣೆ ಹಚ್ಚಿಸಿಕೊಂಡು ಹದವಾದ ಬಿಸಿನೀರಿನಲ್ಲಿ ಮಾಡುವ ಅಭ್ಯಂಗ ಸ್ನಾನದಿಂದ ಗಂಗಾ-ಲಕ್ಷ್ಮಿಯರ ಅನುಗ್ರಹವಾಗಿ ಆಯುರಾರೋಗ್ಯ ಭಾಗ್ಯವುಂಟಾಗಿ ನವಚೈತನ್ಯ ಮೂಡುತ್ತದೆ. ಹಾಗೆಯೇ ಅಜ್ಞಾನವೆಂಬ ಕತ್ತಲೆ ದೂರವಾಗಿ ಸುಜ್ಞಾನವೆಂಬ ಬೆಳಕು ಮಾನವನಿಗೆ ಲಭಿಸುತ್ತದೆ.

    ಪೌರಾಣಿಕ ಹಿನ್ನಲೆ

    ನರಕ ಚತುರ್ದಶಿಯ ಬಗ್ಗೆ ಒಂದು ಪೌರಾಣಿಕ ಹಿನ್ನಲೆಯಿದೆ. ಇಂದಿನ ಅಸ್ಸಾಂ ಹಿಂದೆ ಕಾಮರೂಪವೆಂಬ ಹೆಸರಿನ ರಾಜ್ಯವಾಗಿತ್ತು. ನರಕಾಸುರನೆಂಬ ರಾಕ್ಷಸರಾಜ ಅದನ್ನು ಆಳುತ್ತಿದ್ದ. ಅವನು ಭೂದೇವಿಯ ಮಗನಾಗಿದ್ದು, ಬಹಳ ದೊಡ್ಡ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿದ್ದ. ಎಲ್ಲ ದೇವತೆಗಳು, ಯಕ್ಷರನ್ನು, ಭೂಲೋಕದ ರಾಜರನ್ನು ಸೋಲಿಸಿ ಅಜೇಯನಾಗಿ, ಹದಿನಾರು ಸಾವಿರ ಕನ್ಯೆಯರನ್ನು ಸೆರೆಮನೆಯಲ್ಲಿ ಬಂದಿಸಿದ್ದ. ದೇವತೆಗಳ ಮಾತೆಯಾದ ಅದಿತಿಯ ಕರ್ಣಕುಂಡಲಗಳನ್ನು ಕಿತ್ತು ತಂದಿದ್ದ ಕ್ರೂರಿಯಾಗಿದ್ದ. ಎಲ್ಲಾ ದೇವತೆಗಳು ಸೇರಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಶ್ರೀಕೃಷ್ಣನು ಭೂದೇವಿ ಸ್ವರೂಪಿಯಾದ ಸತ್ಯಭಾಮೆಯೊಂದಿಗೆ ಆಶ್ವಯುಜ ಕೃಷ್ಣ ಚತುರ್ದಶಿಯ ಮಧ್ಯರಾತ್ರಿ ಸರಕಾಸುರನನ್ನು ಕೊಂದು ಹಾಕಿದ. ಆ ದಿನವನ್ನೇ ನರಕ ಚತುರ್ದಶಿಯೆಂದು ಲೋಕಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಆ ಪದ್ಧತಿಯಂತೆ ಇಂದಿಗೂ ಮನೆಯಲ್ಲಿನ ಮಕ್ಕಳಿಗೆ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.


    ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯ ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮಿಪೂಜೆಯನ್ನು ಮಾಡಿ ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಪ್ರಶಸ್ತವಾದ ದಿನ. ಹಿರಣ್ಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದ ಲಕ್ಷ್ಮಿಯನ್ನು ವಾದ್ಯಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡುವುದೇ-ಲಕ್ಷ್ಮೀಪೂಜೆ. ಈ ಅಮಾವಾಸ್ಯೆಯು ಕಲ್ಯಾಣಸ್ವರೂಪಿಯಾಗಿರುತ್ತದೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪಟ್ಟ ಪರಿಶ್ರಮದ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ. ಕೃಷಿಯಿಂದ ಉತ್ಪನ್ನವಾದ ಬೆಳೆಯೇ ನಿಜವಾದ ಲಕ್ಷ್ಮಿಯಾಗಿರುತ್ತದೆ. ಇಂದು ಮಹಾವಿಷ್ಣು ಮಹಾಲಕ್ಷ್ಮಿಯರ ವಾಷಿಕ ಪುನರ್ಮಿಲನ ದಿನ ಎನ್ನುತ್ತಾರೆ. ಅಮಾವಾಸ್ಯೆ ಕಗ್ಗತ್ತಲಾಗಿರುತ್ತದೆ. ದೀಪ ಬೆಳಗಿಸಿ ಕತ್ತಲನ್ನು ಓಡಿಸುವುದು ಜ್ಯೋತಿ ಸ್ವರೂಪಿಣಿಯಾದ ಮಹಾಲಕ್ಷ್ಮಿ. ಹಾಗಾಗಿ ಈ ದಿನ ಸಂಜೆ ಪ್ರಾಜ್ಞರಿಗೆ ದೀಪ ದಾನ ಮಾಡಿದರೆ ಸರ್ವ ಇಷ್ಟಾರ್ಥ ನೆರವೇರಿ, ಸಕಲ ಸಂಪತ್ತು ವೃದ್ಧಿಸುತ್ತದೆ. ಹಾಗೆಯೇ ಇದು ಶ್ರೀಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ, ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

    ನಾಲ್ಕನೇಯ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ. ಮಹಾವಿಷ್ಣುವು ವಾಮನಾವತಾರದಿಂದ ಬಲಿಚಕ್ರವರ್ತಿಯ ಅಹಂಕಾರವನ್ನು ತೊಲಗಿಸಿ, ಆತನನ್ನು ಪಾತಾಳಕ್ಕೆ ನೂಕಿದ ದಿನ. ಪ್ರತಿವರ್ಷ ಕಾರ್ತೀಕ ಮಾಸದ ಮೊದಲ ದಿನವಾದ ಇಂದು ಸಂಜೆ ಬಲಿ ಚಕ್ರವರ್ತಿಯು ತನ್ನ ಸಾಮ್ರಾಜ್ಯವನ್ನು ನೋಡಲೆಂದು ಭೂಮಿಗೆ ಬಂದು ಮೂರೂಮುಕ್ಕಾಲು ಘಳಿಗೆ ಇರುತ್ತಾನೆಂದೂ ನಂಬಿಕೆಯಿದೆ. ಹೀಗಾಗಿಯೇ ಅಂದು ಸಂಜೆ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ಹೊಲ ಗದ್ದೆ, ಮನೆಗಳಲ್ಲಿ ಬಲೀಂದ್ರನ ಸ್ವಾಗತಿಸಲೆಂದು ಸಾಲು ದೀಪಗಳನ್ನು ಹಚ್ಚಿಡುತ್ತಾರೆ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಈ ದಿನ ಗೋವಿನ ಪೂಜೆ ಮಾಡಿ ಅದಕ್ಕೆ ಅಕ್ಕಿ, ಬೆಲ್ಲ ನೀಡಿ ಪ್ರಾರ್ಥಿಸುವುದರಿಂದ ಮಾನವನಿಗೆ ಇಹದಲ್ಲಿ ಸೌಖ್ಯ, ಪರದಲ್ಲಿ ಮುಕ್ತಿವುಂಟಾಗುತ್ತದೆ ಎನ್ನುತ್ತಾರೆ.

    ಐದನೇಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಎಂದು ಆಚರಿಸುತ್ತಾರೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇದೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ. ಕಾರ್ತೀಕ ಪಾಡ್ಯದಿಂದ ಮನೆಬಾಗಿಲಲ್ಲಿ ಮತ್ತು ತುಳಸಿ ಕಟ್ಟೆಯ ಎದುರು ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ಮನೆಯೆದುರು ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಈ ರೀತಿ ದೀಪವನ್ನು ಹಚ್ಚಿಡುವ ದೀಪದ ಜ್ಯೋತಿಯು ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಬೆಳಕು ತೋರುತ್ತದೆ ಎಂಬುದು ನಂಬಿಕೆ.

    Indian Stock Market: ಹೊಸ ಸಂವತ್ಸರದಲ್ಲಿ ಅವಕಾಶದ ಲಾಭ ಪಡೆಯುವದೇ ಜಾಣತನ

    ನಾಳೆ 6.15 ರಿಂದ 7.15 ಮುಹೂರ್ತ ಟ್ರೇಡಿಂಗ್ -MUHURTH TRADING

    ಭೂಮಿ ಗುಂಡಾಗಿದೆ. ಚಕ್ರಾಕಾರದಲಿ ತಿರುಗುತ್ತಿದೆ ಎಂಬುದು ನಿರ್ವಿವಾದಿತ ಸತ್ಯ. ಹಾಗೆಯೇ ಇಂದಿನ ಚಟುವಟಿಕೆಗಳು, ವಿಶೇಷವಾಗಿ ಷೇರುಪೇಟೆಯಲ್ಲಿನ ವಹಿವಾಟು ಸಹ ಚಕ್ರಾಕಾರದಲ್ಲಿ ನಡೆಯುತ್ತಿದೆ. ಅಂದರೆ ಷೇರುವಿನಿಮಯ ಕೇಂದ್ರಗಳಲ್ಲಿ ಚಟುವಟಿಕೆಯು ಒಂದು ರೀತಿ ಮಂಡೂಕ ಚಲನೆ ತರಹ ಒಂದು ಕಂಪನಿಯಿಂದ ಒಂದು ಕಂಪನಿಗೆ ಜಿಗಿಯುತ್ತಿರುವಂತೆ ಕಾಣುತ್ತದೆ. ಹಾಗಾಗಿ ಈಚಿನ ದಿನಗಳಲ್ಲಿ ಕೇವಲ ಕೆಲವೇ ದಿನಗಳಲ್ಲಿ ಅಗ್ರಮಾನ್ಯ ಕಂಪನಿಯ ಷೇರುಗಳು ಭಾರಿ ಏರಿಳಿಕೆಯನ್ನು ಪ್ರದರ್ಶಿಸುತ್ತಿದ್ದು, ಅಲ್ಪಕಾಲೀನ ಹೂಡಿಕೆಯು ಆಕರ್ಷಣೀಯವಾದ ಲಾಭವನ್ನು ಒದಗಿಸುತ್ತಿದೆ.

    ಸಾಮಾನ್ಯವಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕಂಪನಿಗಳ ಏರಿಳಿತಗಳು ರಭಸವಾಗಿದ್ದು ಅವು ಡೆರಿವೇಟಿವ್ಸ್‌ ವಿಭಾಗದ ಮೇಲೆ ಪ್ರಭಾವಿಯಾಗಿರುತ್ತವೆ. ಉ ಳಿದಂತೆ ಇತರೆ ಕಂಪನಿ ಷೇರುಗಳು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಏರಿಳಿತಗಳನ್ನುಂಟುಮಾಡಿದದಲ್ಲಿ ಮಾತ್ರ ಷೇರುಪೇಟೆಯಲ್ಲಿ ಲಾಭ ಗಳಿಕೆ ಸಾಧ್ಯ ಎನ್ನುವ ಹಂತದಲ್ಲಿ ಸಧ್ಯದ ಪೇಟೆಗಳಿವೆ.

    ಇಂತಹ ಸಂದರ್ಭದಲ್ಲಿ ಪ್ರಮುಖ ಕಂಪನಿಗಳಾದ ಕಾಲ್ಗೇಟ್‌ ಪಾಲ್ಮೊಲೀವ್‌, ವೇದಾಂತ, ಇಂಡಿಯಾ ಸೀಮೆಂಟ್‌, ಡಾ.ಲಾಲ್‌ ಪತ್‌ ಲ್ಯಾಬ್‌, ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌, ಹೈಡಲ್‌ ಬರ್ಗ್‌ ಸೀಮೆಂಟ್‌, ಹಿಂದೂಸ್ಥಾನ್‌ ಏರೋನಾಟಿಕ್ಸ್‌, ಗುಜರಾತ್‌ ಗ್ಯಾಸ್‌, ರಾಜೇಶ್‌ ಎಕ್ಸ್‌ ಪೋರ್ಟ್ಸ್‌, ಕರ್ನಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬರ್ಜರ್‌ ಪೇಂಟ್ಸ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಇ ಕೆ ಐ ಎನರ್ಜಿ, ಕ್ಯಾನ್‌ ಫಿನ್‌ ಹೋಮ್ಸ್‌, ಟ್ರಾನ್ಸ್‌ ಪೋರ್ಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಎಂ ಅಂಡ್‌ ಎಂ ಫೈನಾನ್ಸ್‌, ಬಂದನ್‌ ಬ್ಯಾಂಕ್‌, ಲೌರಸ್‌ ಲ್ಯಾಬ್‌, ಟಾಟಾ ಎಲ್ಯಾಕ್ಸಿ, ಝೀ ಎಂಟರ್‌ ಟೇನ್‌ ಮೆಂಟ್‌ ನಂತಹ ಅನೇಕ ಕಂಪನಿಗಳು ಕೇವಲ ಕೆಲವೇ ದಿನಗಳಲ್ಲಿ ಅನಿರೀಕ್ಷಿತ ಮಟ್ಟದ ಏರಿಳಿತಗಳನ್ನು ಪ್ರದರ್ಶಿಸಿವೆ. ಏರಿಕೆ ಕಂಡರೆ ಮಾರಾಟದ ಒತ್ತಡದಿಂದ ಕುಸಿಯುವುದು, ಇಳಿಕೆ ಕಂಡಲ್ಲಿ ರಭಸದಿಂದ ಪುಟಿದೇಳುವುದು ಸಹಜ ಚಟುವಟಿಕೆಯಾಗಿದೆ. ಏಕೆ ಈ ರೀತಿಯ ಏರಿಳಿತಗಳು ಎಂದರೆ ಮುಖ್ಯವಾಗಿ ಪೇಟೆಗಳು ಗರಿಷ್ಠ ಮಟ್ಟದಲ್ಲಿ ತೇಲಾಡುತ್ತಿವೆ. ಮತ್ತೆ ಹೂಡಿಕೆದಾರರು, ಅವರು ರೀಟೇಲ್‌ ಹೂಡಿಕೆದಾರರಾಗಲಿ, ಸಾಹುಕಾರಿ ಹೂಡಿಕೆದಾರರಾಗಲಿ, ಮ್ಯುಚುಯಲ್‌ ಫಂಡ್‌ ಹೌಸ್‌ ಗಳಾಗಲಿ, ಇತರೆ ಸಾಂಸ್ಥಿಕ ಹೂಡಿಕೆದಾರರಾಗಲಿ ಹೆಚ್ಚು ಲಾಭ ಗಳಿಕೆಯತ್ತಲೇ ಗಮನಹರಿಸುವ ಶೈಲಿಯ ವಿಶ್ಲೇಷಣೆಗಳೇ ಹೆಚ್ಚು ಹೆಚ್ಚು ಪ್ರಚಾರದಲ್ಲಿವೆ.

    ಕಾಲ್ಗೇಟ್‌ ಪಾಲ್ಮೊಲೀವ್‌ ಕಂಪನಿ ಷೇರಿನ ಬೆಲೆಯು ಈ ತಿಂಗಳ ಆರಂಭದಲ್ಲಿ ರೂ.1,635 ರ ಸಮೀಪವಿತ್ತು. ನಂತರ ಈ ತಿಂಗಳ ಎರಡನೇ ವಾರದಲ್ಲಿ ರೂ.1,535 ರವರೆಗೂ ಕುಸಿಯಿತು. ಶುಕ್ರವಾರದಂದು ರೂ.1,625 ರವರೆಗೂ ಜಿಗಿಯಿತು. ಈ ಏರಿಕೆಗೆ ಕಂಪನಿಯು ಪ್ರಕಟಿಸಿದ ರೂ.18 ರ ಲಾಭಾಂಶ ಕಾರಣವಿರಬಹುದಾದರೂ ಪ್ರದರ್ಶಿಸಿದ ಏರಿಳಿತಗಳ ಪ್ರಮಾಣವು ಲಾಭಾಂಶಕ್ಕಿಂತ ಅತಿ ಹೆಚ್ಚಿರುವುದು ಗಮನಾರ್ಹ.

    ವೇದಾಂತ ಕಂಪನಿಯು ಸಹ ಏರಿಳಿತ ಪ್ರದರ್ಶಿಸಿದೆ. ಅಕ್ಟೋಬರ್‌ ತಿಂಗಳ ಆರಂಭದಲ್ಲಿ ರೂ.272 ರಲ್ಲಿದ್ದ ಷೇರಿನ ಬೆಲೆ, 11 ರಂದು ಸೋಮವಾರ ದಿನದ ಆರಂಭದಲ್ಲಿ ರೂ.305 ರವರೆಗೂ ಏರಿಕೆ ಕಂಡಿತು. ನಂತರ ಅಂದೇ ರೂ.286 ಕ್ಕೆ ಕುಸಿದು, 17 ರಂದು ರೂ.277 ಕ್ಕೆ ಹಿಂದಿರುಗಿದೆ.

    ಇಂಡಿಯಾ ಸೀಮೆಂಟ್‌ ಷೇರಿನ ಬೆಲೆ ಜೂನ್‌ 20 ರಂದು ರೂ.145 ರಲ್ಲಿತ್ತು, ಸೆಪ್ಟೆಂಬರ್‌ 20 ರಂದು ವಾರ್ಷಿಕ ಗರಿಷ್ಟ ರೂ.298 ಕ್ಕೆ ತಲುಪಿ ಈ ತಿಂಗಳ 17 ರಂದು ರೂ.226 ತಲುಪಿದೆ. ಈಗ ರೂ.236 ರ ಸಮೀಪದಲ್ಲಿದೆ.

    ಡಾಕ್ಟರ್‌ ಲಾಲ್‌ ಪತ್‌ ಲ್ಯಾಬ್‌ ಷೇರಿನ ಬೆಲೆ ಸೆಪ್ಟೆಂಬರ್‌ 29 ರಂದು ರೂ.2,719 ರಲ್ಲಿತ್ತು. ಈ ತಿಂಗಳ 11 ರಂದು ರೂ.2,260 ಕ್ಕೆ ಕುಸಿಯಿತು. 21 ಕ್ಕೆ ರೂ.2,575 ರವರೆಗೂ ಚೇತರಿಸಿಕೊಂಡಿತು.

    ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌ ಷೇರಿನ ಬೆಲೆ ಆಗಷ್ಟ್‌ ಅಂತ್ಯದಲ್ಲಿ ರೂ.585 ರ ವಾರ್ಷಿಕ ಗರಿಷ್ಢ ತಲುಪಿತು. ನಂತರ ಸೆಪ್ಟೆಂಬರ್‌ 26 ರ ಸಮಯದಲ್ಲಿ ರೂ.478 ರ ವರೆಗೂ ಜಾರಿತು. ಅಲ್ಲಿಂದ ಈ ತಿಂಗಳ 7 ರಂದು ರೂ.562 ರವರೆಗೂ ಪುಟಿದೆದ್ದಿತು. 12 ರಂದು ರೂ.499 ರ ಸಮೀಪಕ್ಕೆ ಹಿಂದಿರುಗಿತು. ಸಧ್ಯ ರೂ.517 ರ ಸಮೀಪ ವಹಿವಾಟಾಗುತ್ತಿದೆ.

    ಹೈಡಲ್‌ ಬರ್ಗ್‌ ಸೀಮೆಂಟ್‌ ಕಂಪನಿಯ ಷೇರಿನ ಬೆಲೆ ಸೆಪ್ಟೆಂಬರ್‌ 28 ರಂದು ರೂ.183 ರಲ್ಲಿದ್ದು ಅಕ್ಟೋಬರ್‌ 11 ಕ್ಕೆ ರೂ.214 ಕ್ಕೆ ಜಿಗಿಯಿತು. ಶುಕ್ರವಾರ 21 ರಂದು ರೂ.184 ರ ಸಮೀಪ ಕೊನೆಗೊಂಡಿದೆ.

    ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಸೆಪ್ಟೆಂಬರ್‌ 28 ರಂದು ರೂ.2,245 ರಲ್ಲಿದ್ದು ಈ ತಿಂಗಳ 7 ರಂದು ರೂ.2,499 ರವರೆಗೂ ಚೇತರಿಸಿಕೊಂಡಿತು. ನಂತರ 14 ರಂದು ರೂ.2,332 ರವರೆಗೂ ಕುಸಿದು, 19 ರಂದು ರೂ.2,555 ರವರೆಗೂ ಪುಟಿದೆದ್ದಿತು, ಶುಕ್ರವಾರ 2,401 ರ ಸಮೀಪ ಕೊನೆಗೊಂಡಿದೆ.

    ಇ ಕೆ ಐ ಎನರ್ಜಿ ಕಂಪನಿ ಷೇರಿನ ಬೆಲೆ ಸೆಪ್ಟೆಂಬರ್‌ 15 ರಂದು ರೂ.1,720 ರ ಸಮೀಪವಿತ್ತು, ನಂತರ ಈ ತಿಂಗಳ 3 ರಂದು ರೂ.1,300 ರವರೆಗೂ ಕುಸಿಯಿತು. 11 ರಂದು ರೂ.2,100 ಕ್ಕೆ ಪುಟಿದೆದ್ದಿತು. ಶುಕ್ರವಾರ 21 ರಂದು ರೂ.1,676 ರವರೆಗೂ ತಲುಪಿ ರೂ.1,722 ರ ಸಮೀಪ ಕೊನೆಗೊಂಡಿದೆ.

    ಹೀಗೆ ಅಸಹಜ ರೀತಿಯ ಏರಿಳಿತಗಳನ್ನು ಪ್ರದರ್ಶಿಸುವ ಷೇರುಪೇಟೆಯ ಚಟುವಟಿಕೆಯು ಹೆಚ್ಚು ವ್ಯವಹಾರಿಕತೆಯಿಂದ ಕೂಡಿದ್ದಾಗಿದೆ. ಈ ಸಂದರ್ಭದಲ್ಲಿ ದೀರ್ಘಕಾಲೀನ ಹೂಡಿಕೆಯ ಚಿಂತನೆಗಿಂತ ಅವಕಾಶದ ಲಾಭ ಪಡೆಯುವುದೇ ಸರಿ ಎನಿಸುತ್ತದೆ. ಈ ಏರಿಳಿತಗಳ ಹಿಂದೆ ಅಡಕವಾಗಿರುವ ಕಾರಣಗಳಿಗಿಂತ ಪೇಟೆಯ ದರಗಳನ್ನಾಧರಿಸಿ ಚಟುವಟಿಕೆಯೇ ಸೂಕ್ತವಲ್ಲವೇ?

    ಮುಹೂರ್ತ್ ಟ್ರೇಡಿಂಗ್

    ನಾಳೆ ದೀಪಾವಳಿಯ ಶುಭ ಅವಸರ. ಷೇರು ಪೇಟೆಯಲ್ಲಿ ಹೊಸ ಸಂವತ್ಸರದ ಆರಂಭ. ಸಂಜೆ 6.15 ರಿಂದ 7.15ರವರೆಗೆ ಮುಹೂರ್ತ ವಹಿವಾಟು. ಈ ದೀಪಾವಳಿ ಎಲ್ಲಾ ಹೂಡಿಕೆದಾರರಿಗೆ ಸಂತಸ ತರಲಿ. ಹೂಡಿಕೆ ಇಮ್ಮಡಿಸಲಿ ಎಂಬ ಶುಭ ಹಾರೈಕೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕಲಾವಿದ ಶ್ರೀ ಜಯದೇವ ಕುಂಚದಲ್ಲಿ ಅರಳಿದ ಸೌಂದರ್ಯ ಲಹರಿ ಮತ್ತು ಉಪನಿಷತ್ ದರ್ಶನ

    ಬಳಕೂರು ವಿ ಎಸ್ ನಾಯಕ

    ವೇದ ಪುರಾಣ ಉಪನಿಷತ್ ಗಳಂತಹ ವಿಷಯ ಗಳು ನಮ್ಮನ್ನು ಯಾವುದೋ ಒಂದು ಲೋಕಕ್ಕೆ ಕರೆದೋಯುತ್ತದೆ. ಆಗ ನಮ್ಮ ಮನಸ್ಸು ಶಾಂತತೆ . ನೆಮ್ಮದಿಯಿಂದ ಕೂಡಿರುತ್ತದೆ. ಆ ಸಂದರ್ಭದಲ್ಲಿ ಒಂದು ಕ್ಷಣ ಮನಸ್ಸು ಹಗುರವಾಗಿ ಏನನ್ನೋ ಗಳಿಸಿದ ಅನುಭವ ಅದು ಅವರ್ಣನೀಯ.

    ಅದೇ ರೀತಿ ಒಬ್ಬ ಕಲಾವಿದನ ಕೂಡ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿದಾಗ ಅದರಲ್ಲಿರುವ ವಿಷಯಗಳನ್ನು ತೆಗೆದುಕೊಂಡಾಗ ಅವನ ಮನಸ್ಸಿನಲ್ಲಿ ಆವಿರ್ಭವಿಸಿದ ವಿಚಾರಗಳನ್ನು ಕಲಾ ಸರಣಿಯ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸುವ ಕೆಲಸ ಮಾಡುತ್ತಾನೆ. ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸೌಂದರ್ಯ ಲಹರಿ ಹಿಡಿದು ನಂತರ ಉಪನಿಷತ್ತುಗಳಲ್ಲಿ ಇರುವ ಹಲವಾರು ಸಾರವನ್ನು ಚಿತ್ರಗಳ ಮೂಲಕ ಕಲಾ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಮಾಡಿದವರು ಮೈಸೂರಿನ ಪ್ರಖ್ಯಾತ ಕಲಾವಿದ ಜಯದೇವ ಎಸ್.
    ಸಾಮಾನ್ಯವಾಗಿ ಚಿತ್ರಕಲಾವಿದರು ಚಿತ್ರಗಳನ್ನು ರಚಿಸುವಾಗ ಬೇರೆ ಬೇರೆ ವಿಷಯಗಳನ್ನು ಕೇಂದ್ರೀಕರಿಸಿ ಮಾಡುತ್ತಾರೆ. ಆದರೆ ಕಲಾವಿದ ಜಯದೇವ ರವರು ಶಂಕರಾಚಾರ್ಯರ ಸೌಂದರ್ಯ ಲಹರಿ ಪುಸ್ತಕದಿಂದ ಪ್ರೇರೇಪಿತರಾಗಿ ಯಾರು ಊಹಿಸಲಾಗದ ಅದ್ಭುತ ಚಿತ್ರ ಸರಣಿ ಮಾಲಿಕೆಯನ್ನು ವಿಶೇಷವಾಗಿ ತಮ್ಮ ಕುಂಚದಲ್ಲಿ ಚಿತ್ರಿ ಸಿ ಒಂದು ವಿಸ್ಮಯಕಾರಿ ಕಲಾಲೋಕಕ್ಕೆ ನಮ್ಮನ್ನೆಲ್ಲ ಆಹ್ವಾನಿ ಸುತ್ತಿದ್ದಾರೆ.

    ನಗರದ ಉತ್ತರಹಳ್ಳಿ ವಿಷ್ಣುವರ್ಧನ್ ರಸ್ತೆಯಲ್ಲಿರುವ ಶ್ರೀನಿವಾಸಪುರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯ ಕಲಾ ಗ್ಯಾಲರಿಯಲ್ಲಿ ಶನಿವಾರ ಮುಕ್ತಾಯಗೊಂಡ ಆಧ್ಯಾತ್ಮಿಕ ಚಿತ್ರ ಸರಣಿ ಕಲಾಸಕ್ತರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಯಿತು. ಜಯದೇವ ರವರು ಕೆಂದ್ರಿಯ ಮಹಾವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಲವಾರು ಮಕ್ಕಳ ಜೀವನದಲ್ಲಿ ಕಲಾ ಶಿಕ್ಷಣವನ್ನು ನೀಡುವುದರ ಮೂಲಕವಾಗಿ ಕಲಾಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು ನೂರಕ್ಕಿಂತಲೂ ಹೆಚ್ಚು ಕಲಾಕೃತಿಗಳು ಜನರ ಕಣ್ಮನ ಸೆಳೆಯುವ ಯಶಸ್ವಿಯಾಗುತ್ತದೆ.

    ಕಲಾವಿದ ಜಯದೇವ ರವರ ವರ್ಣಚಿತ್ರಗಳು ಆಧ್ಯಾತ್ಮಿಕ ಭಾಷೆಯ ಸಂಕೇತಗಳಾಗಿ ರೂಪಗೊಂಡಿದೆ. ಒಬ್ಬ ಕಲಾವಿದನಾದವನು ಏನನ್ನು ದ್ರಶ್ಯ ಕರಿಸುತ್ತಾನೆಯೋ, ಕಲ್ಪಿಸಿಕೊಳ್ಳುತ್ತಾನೆ ಅದರ ಮೂಲಕ ಅನುಭವಿಸುತ್ತಾನೆ ಇದರ ಹಿನ್ನೆಲೆಯಲ್ಲಿ ಅದ್ಭುತವಾದ ಚಿತ್ರಗಳು ಹೊರಹೊಮ್ಮುತ್ತವೆ. ಸಾಮಾನ್ಯವಾಗಿ ಇವರ ವರ್ಣಚಿತ್ರಗಳು ಆಧ್ಯಾತ್ಮಿಕ ಸೂಕ್ಷ್ಮ ವ್ಯತ್ಯಾಸಗಳು, ಕಲಾವಿದನ ತಿಳುವಳಿಕೆಯನ್ನು ಪ್ರತಿನಿಧಿಸುತ್ತದೆ.

    ಜಯದೇವ ರವರ ಕಲಾಕೃತಿಗಳಲ್ಲಿ ಉಪನಿಷತ್ತಿನ ಸರಣಿ, ಆನಂದಲಹರಿ ಹೀಗೆ ವಿಭಿನ್ನ ಕಲಾಕೃತಿಗಳನ್ನು ಬೇರೆಬೇರೆ ರೀತಿಯಲ್ಲಿ ವಿಂಗಡಿಸಬಹುದು. ಇವರು ಶ್ರೀ ಚಕ್ರದ ಭಾಗವಾಗಿ ಯೋಗ ಚಕ್ರಗಳ ನಡುವಿನ ಪ್ರಸ್ತುತತೆಯನ್ನು ಹೊರ ತರುವ ಪ್ರಯತ್ನವನ್ನು ಕಲಾಕೃತಿಗಳಲ್ಲಿ ಮಾಡಿದ್ದಾರೆ.

    ಸೌಂದರ್ಯಲಹರಿಯ ಪ್ರಥಮ ಖಂಡ ಮತ್ತು ಆನಂದಲಹರಿ ಸ್ತೋತ್ರದ 41 ಶ್ಲೋಕಗಳನ್ನು ಆಧರಿಸಿದ ಚಿತ್ರ ಸರಣಿ ನಿಜವಾಗಿಯೂ ಕೂಡ ಕಲಾಸಕ್ತರ ಗಮನಸೆಳೆಯುತ್ತದೆ ವಿಶೇಷವೇನೆಂದರೆ ಪ್ರತಿಯೊಂದು ಶ್ಲೋಕಕ್ಕೂ ಒಂದು ವರ್ಣ ಚಿತ್ರ ರಚನೆ ಅದರ ವಿವರಣೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರುವುದು ಬಹಳ ಸೂಕ್ತ ಎನಿಸುತ್ತದೆ. ಹೀಗೆ ಒಂದಕ್ಕೊಂದು ವಿಭಿನ್ನ ಚಿತ್ರಗಳ ಕಲಾ ಸರಣಿಯ ಈ ಪ್ರದರ್ಶನ ವಿನೂತನ ಅನುಭವವನ್ನು ನೀಡಿತು.

    ಸಚಿವ ಸಂಪುಟ ವಿಸ್ತರಣೆ- ಸಧ್ಯದಲ್ಲಿಯೇ ನವದೆಹಲಿಗೆ ಭೇಟಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BELAGAAVI OCT 15

    ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿಯೇ ನವದೆಹಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದರು.

    ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

    ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಳಗಾವಿಗೆ ಶುಭ ಸುದ್ದಿ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಿರ್ಣಯ ಕೈಗೊಂಡಾಗ ಎಲ್ಲರಿಗೂ ತಿಳಿಸಲಾಗುವುದು ಎಂದು ತಿಳಿಸಿದರು.

    ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು :

    ಕೊಲ್ಲಾಪುರದ ಕನೇರಿ ಮಠದಲ್ಲಿ ಕನ್ನಡ ಭವನ ಕಟ್ಟಲು ಶಿವಸೇನೆಯವರು ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಈಗಾಗಲೇ ಮಹಾರಾಷ್ಟ್ರದಲ್ಲಿ ಹತ್ತು ಹಲವಾರು ಸಂಘಗಳ ಕನ್ನಡ ಭವನಗಳು ಇವೆ.ಹಲವಾರು ದೇವಸ್ಥಾನಗಳು, ಯಾತ್ರಿನಿವಾಸಗಳೂ ಇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು ಎಂಬುದು ನನ್ನ ಅನಿಸಿಕೆ ಎಂದರು.

    error: Content is protected !!